Wednesday, December 17, 2025

ಹಾಸ್ಯ ಪತ್ರಿಕೆ ಅಲ್ಲ ಅಲ್ಲ ಇದು ಲಗ್ನಪತ್ರಿಕೆ 1967 (ಅಣ್ಣಾವ್ರ ಚಿತ್ರ ೮೪/೨೦೭)

ಚಿತ್ರದ ನಿರ್ದೇಶಕ ಕೆ ಎಸ್ ಎಲ್ ಸ್ವಾಮಿ 
ಸಂಗೀತ ವಿಜಯಭಾಸ್ಕರ್ 
ಛಾಯಾಗ್ರಹಣ ಕೆ ಜಾನಕಿರಾಮ್ 
ಭಾವ ಫಿಲ್ಮ್ಸ್ ಲಾಂಛನ 
ಎ ಎಂ ಸಮೀವುಲ್ಲಾ ನಿರ್ಮಾಪಕರು 
ಸಹನಿರ್ದೇಶನ ಸಿದ್ಧಲಿಂಗಯ್ಯ ಹಾಗೂ ತಿಪಟೂರು ರಘು 


ಗಾಯಕರು ಪಿ ಬಿ  ಶ್ರೀನಿವಾಸ್, ಬೆಂಗಳೂರು ಲತಾ, ಎಲ್ ಆರ್ ಈಶ್ವರಿ, ಎ ಎಲ್ ರಾಘವನ್, ಮೈಸೂರು ಗುಪ್ತ, ಎಸ್ ಜಾನಕೀ 

ತಾರಾಗಣದಲ್ಲಿ ರಾಜಕುಮಾರ್, ನರಸಿಂಹರಾಜು, ದ್ವಾರಕೀಶ್, ಹನುಮಂತಾಚಾರ್, ಬಿವಿರಾಧ, ಚಿ, ಉದಯಶಂಕರ್ ಶಿವರಾಂ, ಜಯಶ್ರೀ, ಜಯಂತಿ,, ಜೊತೆಯಲ್ಲಿ ನಾರಾಯಣಸ್ವಾಮಿ ಅಲಿಯಾಸ್ ಶ್ರೀನಾಥ್ ಹಾಗೂ ಗಂಗಾಧರ್. 

ಹಾಡುಗಳು 

ನಿನ್ನಿಂದ ನಾನಿಂದು ಹಂಬಲಿಸಿ 
ಅಳುಕು ಮೋರೆ ಹೆಣ್ಣಿಗೆ 
ಬಲು ಅಪರೂಪ  ನಮ್ ಜೋಡಿ 
ಬ್ರಹ್ಮಚಾರಿ ಶರಣಾದ 
ಮೇಲಿನ ಹಾಡುಗಳು ಹಾಗೂ ಇತರ ಹಾಡುಗಳು ಮನಸೆಳೆಯುತ್ತವೆ 

ಬ್ರಹ್ಮಚಾರಿ ಮನಸ್ಸು ಶತಮರ್ಕಟ ಮನಸ್ಸು ಅಂತಾರೆ ... ಇಲ್ಲಿ ರಾಜಕುಮಾರ್ ಬ್ರಹ್ಮಚಾರಿ ಪಾತ್ರದಲ್ಲಿ ನರಸಿಂಹರಾಜು ಮತ್ತು ದ್ವಾರಕೀಶ್ ಜೊತೆಯಲ್ಲಿ ಸಂಘ ಕಟ್ಟಿ.. ಅದರಲ್ಲಿ ಒಂದೇ ಮನಸ್ಸಿನ ಹುಡುಗರನ್ನು ಸದಸ್ಯರನ್ನಾಗಿ ಮಾಡಿಕೊಂಡು ಬ್ರಹ್ಮಚಾರಿಯಾಗಿರಲು ನಿರ್ಧರಿಸುತ್ತಾರೆ  ಮತ್ತೆ ಅದರಂತೆ ನೆಡೆದುಕೊಳ್ಳುತ್ತಿರುತ್ತಾರೆ.. ಆದರೆ ಆತನ ಸಹಚಾರಿಗಳು ಅಂದರೆ ದ್ವಾರಕೀಶ್ ಮತ್ತು ನರಸಿಂಹರಾಜು ತಮಗಿಷ್ಟವಾದ ಜೋಡಿಯನ್ನು ಪ್ರೀತಿ ಮಾಡುತ್ತಾ ರಾಜಕುಮಾರ್ ಪಾತ್ರ ಒಂದಲ್ಲ ಒಂದು ದಿನ ರಾಜಕುಮಾರ್ ಬದಲಾಗುತ್ತಾರೆ  ಎನ್ನುವ ವಿಶ್ವಾಸದಿಂದ ಮುಂದುವರೆಸಿರುತ್ತಾರೆ

ಈ ಪ್ರಸಂಗ ಹಾಸ್ಯಮಯವಾಗಿದೆ .. 

ಸ್ನೇಹಿತನ ಮದುವೆಗೆ ಹೋಗುವಾಗ ರೈಲಿನಲ್ಲಿ ಸಿಗುವ ಕನ್ಯಾಮಣಿಯ ಜೊತೆ ಹುಸಿ ಮುನಿಸಿನ ಪ್ರೀತಿ ಮೆಲ್ಲಗೆ ಶುರುವಾಗುತ್ತದೆ.. ನಂತರ ಸ್ನೇಹಿತನ ಮದುವೆಯ ಸಂದರ್ಭ.. ಅವರಿಬ್ಬರನ್ನು ಹತ್ತಿರ ಮಾಡುತ್ತದೆ.. ನಂತರ ತನ್ನ ಸಿದ್ಧಾಂತ, ತನ್ನ ಗುರಿ ಎಲ್ಲವನ್ನೂ ಹಿಂದಕ್ಕೆ ಹಾಕಿ ಸುಖಾಂತ್ಯ ಹೊಂದುತ್ತದೆ. 

ಈ ಸರಳ ಕತೆಯನ್ನು ನೋಡುವಂತೆ ಮಾಡುವಲ್ಲಿ ನಿರ್ದೇಶಕರ ಪಾತ್ರ ಹಿರಿದು... 

ಈ  ಚಿತ್ರದಲ್ಲಿ ಎಲ್ಲವೂ ಅಡಕವಾಗಿದೆ.. ನವಿರಾದ ಹಾಸ್ಯ, ಮಧುರ ಗೀತೆಗಳು, ನೆನಪಲ್ಲಿ ಉಳಿಯುವ ಸಂಭಾಷಣೆ.. ಎಲ್ಲರ ಅಭಿನಯ.. ಚಿತ್ರಕ್ಕೆ ಕಳೆ ಕಟ್ಟಿದೆ. 

ಚಿತ್ರದ ಕಾಲು ಭಾಗ ರೈಲಿನಲ್ಲಿಯೇ ನೆಡೆಯುವುದು ವಿಶೇಷ.. ಸೆಟ್ಟಿಂಗ್ ಇಷ್ಟವಾಗುತ್ತದೆ. ರೈಲಿನ ಶಬ್ದ  ಹಿನ್ನೆಲೆಯಲ್ಲಿ ಕೇಳುತ್ತಲೇ ಇರುತ್ತದೆ.. 












ರಾಜಕುಮಾರ್ ಮತ್ತೆ ಮುದ್ದಾಗಿ ಕಾಣುತ್ತಾರೆ. ಸಂಭಾಷಣೆ, ಅದರ ವೈಖರಿ, ಮುಖಭಾವ ಎಲ್ಲವೂ ಇಷ್ಟವಾಗುತ್ತದೆ. ಕಥೆಯ ಆಯ್ಕೆ ಅದಕ್ಕೆ ಪೂರಕವಾದ ಅವರ ಅಭಿನಯ ಸೊಗಸು. 

ಜಯಂತಿ ಸುಂದರಿಯೇ ಹೌದು..  ಮೃದು ಮಾತು, ನಾಜೂಕುತನ, ವಯ್ಯಾರ .. 

ನರಸಿಂಹರಾಜು ಮತ್ತು ದ್ವಾರಕೀಶ್ ಹಾಸ್ಯ ಉಕ್ಕಿಸುವಲ್ಲಿ  ಅವರ ಸಂಭಾಷಣೆಗಳಿಂದ ಮನೆಸೆಳೆಯುತ್ತಾರೆ. 

ಉಳಿದಂತೆ ರಾಧಾ, ಹನುಮಂತಾಚಾರ್ ಜಯಶ್ರೀ, ಶ್ರೀನಿವಾಸ್ ಗಮನಸೆಳೆಯುತ್ತಾರೆ

ಈ ಚಿತ್ರದ ನಿಜವಾದ ನಾಯಕ ಚಿ ಉದಯಶಂಕರ್. ಪ್ರಾಯಶಃ  ಮೊದಲಬಾರಿಗೆ ಸಂಪೂರ್ಣ  ಚಿತ್ರವನ್ನು ರಚಿಸಲು ಸಿಕ್ಕಿರುವ ಅವಕಾಶವನ್ನು ಸೊಗಸಾಗಿ ಕೈಗೆ ಎತ್ತಿಕೊಂಡಿದ್ದಾರೆ. ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಎಲ್ಲವೂ ಅವರದ್ದೇ. 

ಇದರ ಜೊತೆಯಲ್ಲಿ ಸೀನು ಸುಬ್ಬು ಎಂಬ ಜೋಡಿಯನ್ನು ಸೃಷ್ಟಿಸಿ ಬಲು ಅಪರೂಪ ನಮ ಜೋಡಿ ಹಾಡಿನಲ್ಲಿ ಸಾಹಿತ್ಯವೂ ಹಾಸ್ಯಮಯ ಹಾಗೂ ಅವರ ಮತ್ತು ಶಿವರಾಂ ಅವರ ನೃತ್ಯವೂ ಕೂಡ. 

ನಾ ಕನ್ನಡ ಚಿತ್ರಗಳನ್ನು ಅನುಸರಿಸಿಕೊಂಡು ಬಂದಂತೆ ನನಗೆ ಅನಿಸಿದ್ದು ಇದೊಂದು ಮೊದಲ ಸಂಪೂರ್ಣ ಹಾಸ್ಯಮಯ ಚಿತ್ರ. 

ಇನ್ನೊಂದು ವಿಶೇಷತೆ ಎಂದರೆ ರಾಜಕುಮಾರ್ ಅವರ ಹೆಸರಿಗೆ ಬಿರುದು ಸೇರಿಸಿ ವರನಟ ರಾಜಕುಮಾರ್ ಅಂತ ತೋರಿಸಿರೋದು. 

No comments:

Post a Comment