Saturday, April 27, 2024

ಹುತ್ತದ ಒಳಗೆ ಇರುವ ನಾಗರಾಜನಿಗೆ ಪೂಜೆ ..ಸಿಕ್ಕಾಗ 1965 (ಅಣ್ಣಾವ್ರ ಚಿತ್ರ ೫೩/೨೦೭)

 ಗೆದ್ದಲು ಹುತ್ತ ಕಟ್ಟುತ್ತವೆ ಆದರೆ ಆದರೆ ಅಲ್ಲಿ ಹಾವುಗಳು ವಾಸ ಮಾಡುತ್ತವೆ ,, ನಿರ್ಮಾಪಕರು, ನಿರ್ದೇಶಕರು,  ನಟ ನಟಿಯರು, ತಂತ್ರಜ್ಞರು, ಕಲಾವಿದರು, ಸಹಾಯಕರು ಹೀಗೆ ಹತ್ತಾರು ನೂರಾರು ಕೈಗಳ ಪರಿಶ್ರಮ ಒಂದು ಸಿನಿಮಾ ಸಿದ್ಧವಾಗುತ್ತದೆ.. ಆ 

ಆದರೆ ನೆಗೆಟಿವ್ ಸುಟ್ಟು ಹೋಗಿಯೋ, ಡಿಜಿಟಲೀಕರಣ ಮಾಡುವ ಮುಂಚೆಯೇ ನೆಗೆಟಿವ್ ಪ್ರತಿಗೆ ಬೂಸ್ಟು ಹಿಡಿದುಮ್ ಅಥವ ನೆಗೇಟಿವ್ಸ್ ಮತ್ತೆ ಸರಿ ಮಾಡಲಿಕ್ಕೆ ಆಗದಷ್ಟು ಹಾಳಾಗಿರುವುದು ಹೀಗೆ ಹತ್ತಾರು ಕಾರಣಗಳಿಂದ ಮತ್ತೆ ಆ ಸಿನೆಮಾವನ್ನು ವರ್ಷಗಳ ನಂತರ ನೋಡಲಿಕ್ಕೆ ಸಾಧ್ಯವಾಗದ ಪರಿಸ್ಥಿತಿ ಇರಬಹುದು.. ಅಂತಹ ಹತ್ತಾರು ಚಿತ್ರಗಳು ನಮ್ಮ ಕಣ್ಣಿಗೆ, ಮನಸ್ಸಿಗೆ ಇಳಿಯಲಿಕ್ಕೆ ನಕಾರ ಧೋರಣೆ ತೋರುತ್ತವೆ ಅಂತಹ ಒಂದು ಚಿತ್ರ ನಾಗಪೂಜಾ.. 

೧೯೬೫ರಲ್ಲಿ ತೆರೆಗೆ ಬಂದ ಚಿತ್ರ 


ಎ ಎಸ್ ಭಕ್ತವತ್ಸಲಂ ಮತ್ತು ಎನ್ ಗೀತಾದೇವಿ ನಿರ್ಮಾಪಕರಾಗಿ, ಡಿ ಎಸ್ ರಾಜಗೋಪಾಲ್ ಅವರು ಗೀತಪ್ರಿಯ ಅವರ ಚಿತ್ರಕಥೆಯನ್ನು ಆಧಾರವಾಗಿಟ್ಟುಕೊಂಡು ಜಾನಕಿರಾಮ್ ಅವರ ಛಾಯಾಗ್ರಹಣದಲ್ಲಿ ಟಿ ಜಿ ಲಿಂಗಪ್ಪನವರ ಸಂಗೀತ ನಿರ್ದೇಶನದಲ್ಲಿ ತೆರೆಗೆ ತಂದ ಚಿತ್ರವೇ ಈ ನಾಗ ಪೂಜ.. 

ರಾಜಕುಮಾರ್, ರಾಘವೇಂದ್ರ ರಾವ್, ಹನುಮಂತ ರಾವ್ ಲೀಲಾವತಿ, ಪಾಪಮ್ಮ, ರಾಜಶ್ರೀ ಮುಂತಾದವರು ಅಭಿನಯಿಸಿದ ಚಿತ್ರ.. 

ಎಲ್ಲೆಡೆ ಹುಡುಕಿದರೂ ಕಾಣದ ಚಿತ್ರವನ್ನು ಬಿಟ್ಟು ಮುಂದುವರೆಯಲು ಇಷ್ಟ ಪಡದೆ, ಸುಮಾರು ಒಂದು ತಿಂಗಳಿನ ಹುಡುಕಾಟದಲ್ಲಿ ಕೂಡ ಕಾಣದ ಚಿತ್ರವಾಯ್ತು ಈ ಸಿನಿಮಾ.. ಇರಲಿ ಹುಡುಕಾಟ ಮುಂದುವರೆಯುತ್ತದೆ. ಯು ಟ್ಯೂಬಿನಲ್ಲಿ ಬರಿ ಹಾಡುಗಳ ಲಿಂಕ್ ಇದೆ. ಹಾಗಾಗಿ ಅದನ್ನು ಮತ್ತೆ ಇಲ್ಲಿಗೆ ಹಾಕಲು ಇಷ್ಟ ಪಡದೆ.. ಬರಿ ಚಿತ್ರದ ಪೋಸ್ಟರ್ ಹಾಕಿದ್ದೀನಿ.. 

ಸಿನಿಮಾ ನೋಡಲು ಸಿಕ್ಕರೆ, ಖಂಡಿತ ಅದರ ಬಗ್ಗೆ ಒಂದಷ್ಟು ಬರೆಯುತ್ತ, ಆ ಚಿತ್ರದ ನೀತಿ ಪಾಠಗಳನ್ನು ಅಳವಡಿಸಿಕೊಳ್ಳಲು ಯತ್ನ ಮಾಡುವೆ.. 

ಮತ್ತೊಂದು ಚಿತ್ರದ ಮೂಲಕ ಮತ್ತೆ ಸಿಗೋಣ!






Wednesday, April 24, 2024

ಸಕಲ ಪಾಠಗಳು ಅಣ್ಣಾವ್ರ ಸಿನೆಮಾಗಳಲ್ಲಿ - ಅಣ್ಣಾವ್ರ ಜನುಮದಿನ (2024)

ಅಣ್ಣಾವ್ರ ಮೆಚ್ಚಿನ ನಟ, ಸ್ನೇಹಿತ, ಗುರು ಎಲ್ಲವೂ ಆಗಿದ್ದ ಬಾಲಣ್ಣನ ಹತ್ತಿರ ಒಂದು ಪ್ರಶ್ನೆ ಕೇಳಿದೆ

ಇದು ಬಾಲಣ್ಣ ಮತ್ತು ರಾಜಣ್ಣ ಅವರ ಪ್ರೀತಿ 

"ಬಾಲಣ್ಣ ನನಗೆ ನಿಮ್ಮ ಛಲ ಇಷ್ಟ, ನಿಮ್ಮ ಪ್ರತಿಭೆ ಇಷ್ಟ, ಅನಾನೂಕೂಲತೆಗಳ ಮಧ್ಯೆ ಕೂಡ ಅದನ್ನು ಮೆಟ್ಟಿ ನಿಂತು ಬದುಕುವ ರೀತಿ ತೋರಿಸಿದೀರಿ.. ಅದೇ ರೀತಿಯಲ್ಲಿ ನನಗೆ ಇನ್ನೊಂದು ಉದಾಹರಣೆ ಕೊಡಿ.. "

"ಏನಪ್ಪಾ.. ಕಳ್ಳ ನೀನು . ಎಲ್ಲಾ ತಿಳಿದು ನನ್ನನ್ನೇ ಕೇಳ್ತಾ ಇದ್ದೀಯ.. ಕಳ್ಳ ನೀನು ಅದೇನು ಬಾಯಿ ಬಿಟ್ಟು ಹೇಳಬಾರದೇ.. "

"ಇಲ್ಲ ಬಾಲಣ್ಣ.. ಹೇಳಿ ಪ್ಲೀಸ್"

"ನೋಡಪ್ಪ ಕಾಮನಬಿಲ್ಲು ಚಿತ್ರದಲ್ಲಿ ಇದೆ ರೀತಿಯ ಸಂಭಾಷಣೆ ಇದೆ.. ಆ ಸೂರಪ್ಪ ಹಳ್ಳಿಯ ಜನಕ್ಕೆ ಉಪಯೋಗವಾಗಲೆಂದು ನನ್ನ ತೋಟದಲ್ಲಿದ್ದ ಸಿಹಿ ನೀರಿನ ಬಾವಿಯನ್ನು ಹಳ್ಳಿಗರಿಗೆ ಬಿಟ್ಟು ಕೊಡೋಕೆ ಇದೆ ರೀತಿಯ ತಂತ್ರ ಮಾಡುತ್ತಾನೆ.. ಇಲ್ಲಿ ನೀನು ಹಾಗೆ ಶುರು ಮಾಡ್ತಾ ಇದ್ದೀಯ.. ಕಳ್ಳ ನೀನು.. ಅಲ್ಲಿ ಹೇಳಿದಂತೆ.. ಇಲ್ಲೂ ಹೇಳುತ್ತೇನೆ.. ಹೇಳಪ್ಪ ನಿನಗೇನು ಬೇಕು"

"ಬಾಲಣ್ಣ ಗೀತಾಚಾರ್ಯ ಹೇಳಿದ ಭಗವದ್ಗೀತೆ ಇದೆ.. ಅದರಲ್ಲಿ ಎಲ್ಲವೂ ಅಡಗಿದೆ.. ಪ್ರಶ್ನೆಗಳು ಅದಕ್ಕೆ ಉತ್ತರಗಳು ಪರಿಹಾರಗಳು ಎಲ್ಲವೂ ಇದೆ.. ಹಾಗೆ ಡಿವಿಜಿ ಅಜ್ಜ ಬರೆದ ಮಂಕುತಿಮ್ಮನ ಕಗ್ಗಗಳು ಅದರಲ್ಲಿ ಕೂಡ ಸಕಲ ವಿಷಯಗಳನ್ನು ಅಡಗಿಸಿಕೊಂಡು ಇಂದಿಗೂ ಅದೊಂದು ಶ್ರೇಷ್ಠ ಕೃತಿ ಎಂದು ಅನೇಕಾನೇಕ ಮಹನೀಯರು ಅದರ ಬಗ್ಗೆ ಬರೆದಿದ್ದಾರೆ, ಬರೆಯುತ್ತಲೇ ಇದ್ದಾರೆ. ನಾನು ಕೂಡ ಸಣ್ಣ ಪ್ರಯತ್ನ ಮಾಡಲು ಕೈ ಹಾಕಿದ್ದೀನಿ.. ಅದೇ ರೀತಿ ನಿಮ್ಮ ಸಹನಟ ರಾಜಾನಂದ್ ಬರೆದ ಚುಟುಕಗಳು ಎಲ್ಲರ ಬಳಿ ಇಲ್ಲದಿದ್ದರೂ ಅದೂ ಕೂಡ ಅನೇಕರ ಕೈಪಿಡಿಯಾಗಿದೆ.. ಪುಟ್ಟಣ್ಣ ಅವರ ಚಿತ್ರಗಳು ಎಲ್ಲರಿಗೂ ಗೊತ್ತು.. ನಿಮ್ಮ ಪರಿಶ್ರಮ, ನಿಮ್ಮ ಛಲ ಅದೂ ಕೂಡ ಕರುನಾಡಿನಲ್ಲಿ ಜನಜನಿತವಾಗಿದೆ.. ಅದೇ ರೀತಿ ನಿಮ್ಮ ಅತ್ಯುತ್ತಮ ಸ್ನೇಹಿತ, ಶಿಷ್ಯ ರಾಜಕುಮಾರ್ ನಮಗೆಲ್ಲ ಅಣ್ಣಾವ್ರು ಅವರ ಬಗ್ಗೆ ಹೇಳಿ.. "

"ಊಒ ಇದಕ್ಕೆ ಇಷ್ಟೊಂದು ಪೀಠಿಕೆಯ.. ಇರಲಿ ಇರಲಿ.. ನಿಮಗೆಲ್ಲ ರಾಜಕುಮಾರ, ಅಣ್ಣಾವ್ರು, ಅಣ್ಣ, ರಾಜಣ್ಣ.. ಆದರೆ ನನಗೆ ಮಾತ್ರ ಮುತ್ತುರಾಜ.. ಅವನ ಬಗ್ಗೆ ನಾನು ಹೇಳಲಿ.. ದೈವದತ್ತ ಪ್ರತಿಭೆ.. ನನ್ನ ಪುಣ್ಯ ಆತನ ಜೊತೆಯಲ್ಲಿ ಅನೇಕಾನೇಕ ಚಿತ್ರಗಳಲ್ಲಿ ಅಭಿನಯಿಸುವ ಪುಣ್ಯ ಸಿಕ್ಕಿತು.. ಆತನ ಜೊತೆ ನನ್ನ ಕೆಲವು ಚಿತ್ರಗಳು ನನಗೆ ಇಷ್ಟ.. 

ಕಣ್ತೆರೆದು ನೋಡು .. 

ಈ ಚಿತ್ರದ ಬಗ್ಗೆ ಏನು ಹೇಳಲಿ.. ಇವತ್ತಿಗೂ ಆ ಚಿತ್ರ ನೋಡಿದಾಗ ನಗು ಬರುತ್ತದೆ.. ಅದೆಷ್ಟು ಕಾದಿದ್ದೆ ನಿನ್ನ ಅಣ್ಣಾವ್ರನ್ನು.. ಆಗಿನ್ನೂ ರಾಜಕುಮಾರ ಆಗಿದ್ದ.. ಆದರೆ ಅದರ ಪ್ರತಿ ದೃಶ್ಯಗಳಲ್ಲಿ ಆತ ತೋರುತ್ತಿದ್ದ ಶ್ರದ್ದೆ ಇಷ್ಟವಾಗುತ್ತಿತ್ತು.. ಚಿತ್ರೀಕರಣ ಮುಗಿದ ಮೇಲೆ ನಾವಿಬ್ಬರೇ ಅದನ್ನು ನೆನೆದು ನೆನೆದು ನಗುತ್ತಿದ್ದೆವು.. ಅದರಲ್ಲೂ ನನ್ನ ಒಂದು ಸಂಭಾಷಣೆ ... ಪೇಪರ್ ಅಂಗಡಿಯವ "ಏನೂ ನನ್ನ ಹೆಣ ಅವರಿಗೆ ದಾನ" ಅಂದಾಗ ನಾ ಹೇಳೋದು "ಹೋಗೋ ನಿನ್ನ ಹೆಣ ಸುಡುಗಾಡಿಗೆ ದಾನ " ಇದನ್ನು ಮುತ್ತುರಾಜ ನೆನೆಸಿಕೊಂಡು ನೆನೆಸಿಕೊಂಡು ನಗುತ್ತಲೇ ಇರುತ್ತಾನೆ.. 

ಬಂಗಾರದ ಮನುಷ್ಯ 

ರಾಚೂಟಪ್ಪನ ಪಾತ್ರದಲ್ಲಿ ನಾ ಸಿನೆಮಾದ ಅಂತಿಮ ದೃಶ್ಯದಲ್ಲಿ ಹೇಳೋದು "ರಾಜೀವಪ್ಪ ನೀವು ನನ್ನ ಸ್ನೇಹ ಕಳೆದುಕೊಳ್ಳೋಲ್ಲ ಅಂತ ಹೇಳಿದ್ರಿ.. ಇವತ್ತು ನಾನು ನಿಮ್ಮ ಸ್ನೇಹ ಕಳೆದುಕೊಂಡೆನೋ.. ಅಥವ ನೀವು ನನ್ನ ಸ್ನೇಹ ಕಳೆದುಕೊಂಡಿರೋ ಗೊತ್ತಿಲ್ಲ.. ಆದರೆ ಎಲ್ಲೇ ಇರಿ ಹೇಗೆ ಇರಿ ಈ ಊರು ಚೆನ್ನಾಗಿರಲಿ ಅಂತ ಹರಸಿ ನಿಮ್ಮಂಥವರ ಹಾರೈಕೆ ಇಂದಿಗೂ ಸುಳ್ಳಾಗೋಲ್ಲ.. ನಿಮ್ಮ ಆಶೀರ್ವಾದದ ಅಡಿಯಲ್ಲಿ ಈ ಹಳ್ಳಿ ಸುಭಿಕ್ಷವಾಗಿರುತ್ತೆ.. .. ಇದಕ್ಕೆ ಮುತ್ತುರಾಜ ಹೇಳ್ತಾ ಇದ್ದಾ.. ಬಾಲಣ್ಣ ಇಡೀ ಚಿತ್ರದ ಸಾರಾಂಶವನ್ನು ಆ ಕಡೆ ದೃಶ್ಯದಲ್ಲಿ ಎಷ್ಟು ಗಾಢವಾಗಿ ಹೇಳಿದ್ದೀರ.. ಇಡೀ ಚಿತ್ರದ ಸತ್ವವನ್ನು ಆ ಸಂಭಾಷಣೆಯಲ್ಲಿ ಅರೆದು ಕುಡಿದಿದ್ದೀರಿ.. ಇದಲ್ಲವೇ ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನಿಗೆ ಕೊಡುವ ಗೌರವ

ಭಾಗ್ಯದ ಲಕ್ಷ್ಮಿ ಬಾರಮ್ಮ 

 ತರಲೆ ತಮ್ಮಯ್ಯ ಅಂತಾನೆ ಪ್ರಸಿದ್ಧಿ ಈ ಸಿನಿಮಾದಲ್ಲಿ.. ಒಂದು ಸಂಭಾಷಣೆ "ಪಾಂಡು ಪಾಂಡು ನಿನ್ನ ತರಹನೇ ಇನ್ನೊಬ್ಬನನ್ನು ನೋಡಿದೆ.. ಇದೆ ಮುಖ, ಇದೆ ನಗು, ಇದೆ ಮೂಗು.. ಇದೆ ಮೈ ಕಟ್ಟು .. " ಅಂಥ.. ಆದರೆ ನಾ ಹೇಳೋದು.. ಇನ್ನೊಬ್ಬ ಮುತ್ತುರಾಜ ಬರೋಕೆ ಸಾಧ್ಯವೇ ಇಲ್ಲ.. ಭಗವಂತ ಶತಮಾನಗಳ ಕಾಲ ತಪಸ್ಸು ಮಾಡಿ ಸೃಷ್ಟಿಸಿರುವ ಅನರ್ಘ್ಯ ರತ್ನ ನಮ್ಮ ಮುತ್ತುರಾಜ.. ಈ ಚಿತ್ರದ ಒಂದು ಇನ್ನೊಂದು ಸಂಭಾಷಣೆ ಅವನಿಗೆ ಬಲು ಇಷ್ಟ "ಪಾಂಡು ದಾಸನ, ಪುರಂದರ ರಂಗನಾ" ಅಂತ ನಾನು ನಿಂತಲ್ಲೇ ನೃತ್ಯ ಮಾಡೋದು.. ಎಷ್ಟು ಸೊಗಸಾಗಿ ಅಭಿನಯಿಸುತ್ತೀರಾ ಬಾಲಣ್ಣ ಅಂತ ಬೆನ್ನು ತಟ್ಟುತ್ತಲೇ ಇರುತ್ತಿದ್ದ.. . 

ಹೀಗೆ ಹತ್ತಾರು ಸಿನಿಮಾಗಳು ಪಟ್ಟಿ ಮಾಡುತ್ತಾ ಹೋದರೆ ಮುಗಿಯದ ಕತೆಯದು.. ನೀನು ಹೇಳಿದ ಹಾಗೆ ಭಗವದ್ಗೀತೆ, ಮಂಕುತಿಮ್ಮನ ಕಗ್ಗದ ಹಾಗೆ ಮುತ್ತುರಾಜನ ಸಿನಿಮಾಗಳು ಕೂಡ ಕಲಿಯುವ ಅನೇಕಾನೇಕ ಪಾಠಗಳು, ಪಾತ್ರಗಳು ಇವೆ.. ಮುತ್ತುರಾಜನ ಪ್ರತಿಯೊಂದು ಚಿತ್ರವೂ ಒಂದೊಂದು ಕಲಿಕಾ ಪಾಠವಿದ್ದಂತೆ ಕಣಪ್ಪ.. 

ಬಾಲಣ್ಣ ಒಂದಷ್ಟು ಚಿತ್ರಗಳಿಂದ ಆಯ್ದ ಸಂಭಾಷಣೆಗಳಿಂದ.. ಎಷ್ಟು ಸುಂದರವಾಗಿ ಅಣ್ಣಾವ್ರ ಬಗ್ಗೆ ಹೇಳಿದ್ದೀರಿ ಅದ್ಭುತವಾಗಿದೆ.. ನಿಮ್ಮ ಮಾತುಗಳು.. 

ಮುತ್ತುರಾಜನೂ ಕೂಡ ಶತಮಾನದ ಅದ್ಭುತ ಕಣಪ್ಪ.. ಇವತ್ತು ಅವನ ಜನುಮದಿನ ನಮ್ಮೆಲ್ಲರ ಪ್ರೀತಿಯ ಮುತ್ತುರಾಜನಿಗೆ ಒಂದು ಶುಭಾಶಯ ಹೇಳೋಣ ಅಲ್ವೇನಪ್ಪಾ.. 

ಹೌದು ಬಾಲಣ್ಣ.. ಅಣ್ಣಾವ್ರಿಗೆ ಜನುಮದಿನದ ಶುಭಾಶಯಗಳು ಹಾಗೆ ನಿಮಗೆ ಧನ್ಯವಾದಗಳು 


Tuesday, April 23, 2024

ತಡವಾಯ್ತೆ.. ಇಲ್ಲವೇ ... ನಾದಮಯವೇ... ಪುಣ್ಯ ದಿನ - 2024

ಅಣ್ಣಾವ್ರು ಯಾಕೋ ತ್ರಾಸದಾಯಕ ಶತಪಥ ಹೆಜ್ಜೆ ಹಾಕುತ್ತಿದ್ದರು.. ಯಾಕೋ ಅರಿವಿಲ್ಲ ಮನಸ್ಸು ತುಮುಲದಿಂದ ಕೂಡಿತ್ತು.. ಅದನ್ನು ಗಮನಿಸಿದ ಅವರ ಮಡದಿ ಬನ್ನಿ ಆ ಮರದ ಹತ್ತಿರ ಕೂತು ಮಾತಾಡೋಣ ಎಂದು ಬಲವಂತವಾಗಿ ಅಣ್ಣಾವ್ರನ್ನು ಆಲದ ಮರದ ಬಳಿ ಕರೆದೊಯ್ದರು.. 

ನೋಡಿ ನೀವು ಸಾವಿರಾರು ಗೀತೆಗಳನ್ನು ಹಾಡಿದ್ದೀರಾ, ನಿಮಗೆ ಮೆಚ್ಚುಗೆಯಾದ ಕೆಲವು ಗೀತೆಗಳ ಬಗ್ಗೆ ಹೇಳಿ.. ಅದನ್ನು ನೀವು ಹಾಡಿರಬಹುದು, ಅಥವ ನಿಮಗೆ ಬೇರೆಯವರು ಹಾಡಿರಬಹುದು.. ಹೇಳಿ ಅದರ ಬಗ್ಗೆ

ಅಣ್ಣಾವ್ರ ಮುಖದ ಮೇಲಿದ್ದ ಗೆರೆಗಳು ಕೊಂಚ ಕಡಿಮೆಯಾದವು.. 

ಪಾರ್ವತೀ ಗಂಧದ ಗುಡಿಯ "ನಾವಾಡುವ ನುಡಿಯೇ" ಹಾಡು ನನ್ನ ಮನಸ್ಸಿಗೆ ಬಲು ಇಷ್ಟ.. ಕಾರಣ ಅದು ನನ್ನ ಮನಸ್ಸಿಗೆ ತುಂಬಾ ಇಷ್ಟವಾದ ಹಾಡೂ ಕೂಡ.. ಅದರಲ್ಲೂ ನನ್ನ ಶಾರೀರವೇ ಆಗಿರುವ ಪಿ ಬಿ ಶ್ರೀನಿವಾಸ್ ಅವರು ಎಂಥಹ ಸೊಗಸಾದ ಹಾಡುಗಾರಿಕೆ.. ನಮ್ಮ ಇಂಪಾದ ಸಂಗೀತದ ಪಿತಾಮಹ ರಾಜನ್ ನಾಗೇಂದ್ರ ಅವರ ಸರಳ ಸುಂದರ ಸಂಗೀತ.. ನಮ್ಮ ಉದಯಶಂಕರ್ ಅವರ ಅದ್ಭುತ ಸಾಹಿತ್ಯ ಮನಸ್ಸಿಗೆ ಬಲು ಇಷ್ಟ.. 

ಅದರಲ್ಲೂ "ಹಸಿರಿನ ಬನಸಿರಿಯೇ ಒಲಿದು" ಈ ಸಾಲುಗಳನ್ನು ಪಿ ಬಿ ಎಸ್ ಹಾಡಿರುವ ಶೈಲಿ ಎಷ್ಟು ಅದ್ಭುತವಾಗಿದೆ ಎಂದರೆ.. ನನಗೆ ಇಷ್ಟವಿರದಿದ್ದರೂ ನನ್ನಿಂದ ಹಾಡಿಸಿದ ಇದೆ ಹಾಡಿನಲ್ಲಿ ಆ ಮಟ್ಟಕ್ಕೆ ಹಾಡಲು ಸಾಧ್ಯವಾಗಲೇ ಇಲ್ಲ.. "ಸೌಂದರ್ಯ ಸರಸತಿ ಧರೆಗಿಳಿದು"... ಅಬ್ಬಬ್ಬಾ ಎಷ್ಟು ಅದ್ಭುತ ಸಾಲುಗಳು.. "ಈ ಕಂಗಳು ಮಾಡಿದ ಪುಣ್ಯವೋ" ನಮ್ಮ ಶ್ರೀನಿವಾಸ್ ಅವರಿಗೆ ಒಂದು ದೊಡ್ಡ ನಮಸ್ಕಾರಗಳು.. ಇಂತಹ ಸುಂದರ ಹಾಡು .. ನನಗೆ ಒದಗಿ ಬಂದಿದೆ ಎಂದರೆ ಅದು ನನ್ನ ಪುಣ್ಯವೇ ಹೌದು.. 

"ಕವಿ ನುಡಿ ಕೋಗಿಲೆ ಹಾಡಿದ ಹಾಗೆ
ಸವಿ ನುಡಿ ತಣ್ಣನೆ ಗಾಳಿಯ ಹಾಗೆ
ಒಲವಿನ ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು ಅರಳಿದ ಹಾಗೆ"

ಉದಯಶಂಕರ್ ಪದಗಳ ಜಾದೂ ನೋಡು.. ಅದ್ಭುತ ಅದ್ಭುತ ಮತ್ತೊಮ್ಮೆ ರಾಜನ್ ನಾಗೇಂದ್ರ ಬರುತ್ತಾರೆ.. ಆ ಮೃದಂಗ, ಕೊಳಲು, ತಬಲಾ ಇವುಗಳ ಸಮ್ಮಿಶ್ರಣ.. ಒಹೋ ಎನಿಸುವಂತೆ ಮಾಡುತ್ತದೆ ಪಾರ್ವತೀ.. ಅದರಲ್ಲೂ ಈ ನಿರ್ದೇಶಕರು ನನ್ನನ್ನು ಕರುನಾಡ ಭೂಪಟದಲ್ಲಿ ತೋರಿಸಿದ್ದು.. ಎಲ್ಲೋ ಒಮ್ಮೆ ಮಕ್ಕಳು ಟಿವಿ ನೋಡುತ್ತಿದ್ದಾಗ ನೋಡಿದ್ದ ನೆನಪು.. ಎಷ್ಟು ಸುಂದರ ಅನುಭವ.. ಕರುನಾಡಿನಲ್ಲಿ ನಾ ಹುಟ್ಟಿದ್ದೇ ಒಂದು ಪುಣ್ಯ.. ಅದರಲ್ಲಿ ಆ ಭೂಪಟದಲ್ಲಿ ನನ್ನನ್ನು ಸೇರಿಸಿ ತೋರಿಸಿದ್ದು.. ಧನ್ಯನಾದೆ ಅಂತ ಹೇಳಬಹುದು.. 

"ನಿನ್ನ ಕವಿತೆ ಎಂಥ ಕವಿತೆ ರಸಿಕರಾಡೋ ನುಡಿಗಳಂತೆ. 
ಕಂಗಳೆರಡೂ ದುಂಬಿಯಾಗಿ ಭ್ರಮರ ಗೀತೆ ಹಾಡಿದಂತೆ"

ಏನು ಹೇಳಲಿ ಇಂತಹ ಹಾಡುಗಳನ್ನು ಹಾಡಲು ನಾ ಪುಣ್ಯ ಮಾಡಿದ್ದೇನೋ ಅಥವ ಭಗವಂತನ ಲೀಲೆಯೋ  ಒಂದು ಅರ್ಥವಾಗುತ್ತಿಲ್ಲ..ಗಜಲ್ ರೂಪದ ಈ ಹಾಡನ್ನು ನನ್ನ ಬಳಿ ಹಾಡಿಸಿಯೇ ತೀರಬೇಕೆಂದು ಹಠ ಹಿಡಿದು ಹಾಡಿಸಿದ ನಮ್ಮ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಅವರಿಗೆ ಏನು ಹೇಳಲಿ.. ಅವರೇ ನಿರ್ದೇಶಕ ಅವರೇ ಸಂಗೀತ ನಿರ್ದೇಶಕ.. ನಮ್ಮ ಉದಯಶಂಕರ್ ಹೇಗೆ ಬರೆದರೂ ಸೊಗಸು.. 

ನಮ್ಮ ಪಂತುಲು ಇಲ್ಲವೇ ಅವರ ಆಸ್ಥಾನದ ಸಂಗೀತ ಗಾರುಡಿಗ ಟಿ ಜಿ ಲಿಂಗಪ್ಪ ಅವರು ಸಾಮಾನ್ಯ ವ್ಯಾಪಾರೀ ಚಿತ್ರಗಳಿಗೆ ಸಂಗೀತ ನೀಡಿದರು.. ನಮ್ಮ ಸಂಸ್ಥೆಯ ಚಿತ್ರವೊಂದಕ್ಕೆ "ಎಂಥ ಸೊಗಸು ಮಗುವಿನ ಮನಸ್ಸು" ಹಾಡಿಗೆ ಆರಂಭದ ಸಂಗೀತ ವಾದ್ಯ ಸಂಯೋಜನೆ ಬಲು ಇಷ್ಟ.. ಈ ರೀತಿಯ ಸಂಗೀತ ನನ್ನ ಚಿತ್ರಗಳಲ್ಲಿ ಬಲು ಅಪರೂಪ.. ಉದಯಶಂಕರ್ ಹೇಗೆ ಬರೆದರೂ ನನಗೆ ಇಷ್ಟವಾಗುವ ಹಾಗೆ ಬರೆಯುತ್ತಾರೋ ಅಥವ ಅವರು ಬರೆದದ್ದು ನನಗೆ ಇಷ್ಟವಾಗುತ್ತದೋ ಭಗವಂತನೇ ಬಲ್ಲ.. 

ಕರುನಾಡೇ ನನ್ನ ಅಣ್ಣ ಅಂದರೆ.. ನೋಡು ಇವನೊಬ್ಬ ಮಾತ್ರ ತಮ್ಮಯ್ಯ ಅಂತ ಕರೀತಿದ್ದ ನಮ್ಮ ಜಿ ಕಿ ವೆಂಕಟೇಶ್.. ಲೋ ತಮ್ಮಯ್ಯ  ನಿನಗೆ ಪಾಶ್ಚಾತ್ಯ ವಾದ್ಯಗಳ ಹಿಮ್ಮೇಳ ಸಂಗೀತ ಕೊಡುತ್ತೇನೆ.. ಹಾಡಿ ಬಿಡು.. ಅಂದ.. ಅದೇ ಜೋಶಿನಲ್ಲಿ ಹಾಡಿದ್ದು "ಇಫ್ ಯು ಕಮ್ ಟುಡೇ".."ಅಲ್ಲಿ ಇಲ್ಲಿ ನೋಡುವೆ ಏಕೆ" .. ಎಷ್ಟೊಂದು ವಾದ್ಯಗಳು.. ಅದರ ಹಾಡುಗಾರಿಕೆ.. ಬಲು ಇಷ್ಟವಾಯ್ತು..  

"ಹೇಗಿದೆ ಈಗ ನಿಮ್ಮ ಮನಸ್ಸು.. "

"ಪಾರ್ವತೀ ಸಂಗೀತ ಒಂದು ಮಾಂತ್ರಿಕ ದಂಡ.. ಅದೇ ನನ್ನ ಮನಸ್ಸು ಹಸಿರಾಗಿಸಿದ್ದು.. ನಿನಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಪಾರ್ವತೀ.. ನೀನು ಮಾತಾಡಿಸಿದೆ.. ನನ್ನ ಮನಸ್ಸು ಹಗುರಾಗಿಸಿತು.. "

"ಹೌದು ಕಣ್ರೀ.. ನೀವು ಭುವಿಯನ್ನು ಬಿಟ್ಟು ಬಂದ ದಿನ.. ಅದಕ್ಕೆ ಲೇಖನ ಓದಬೇಕಿತ್ತು.. ಆದರೆ ಯಾಕೋ ತಡವಾಯಿತು.. ಅದಕ್ಕೆ ನಿಮ್ಮನ್ನು ಮಾತಾಡಿಸುತ್ತಾ ಹಾಗೆ ಲೇಖನ ನಿಮಗೆ ಓದಿದೆ. "

"ನಾದಮಯ ಈ ಲೋಕವೆಲ್ಲಾ ನಾದಮಯ ಪಾರ್ವತೀ"




******