Wednesday, December 27, 2017

ಬಾಂಧವ್ಯದಲ್ಲಿ ಅಣ್ಣ ತಂಗಿಯರ ಮ್ಯಾಜಿಕ್ - ಅಣ್ಣ ತಂಗಿ (1958) (ಅಣ್ಣಾವ್ರ ಚಿತ್ರ ೧೦ / ೨೦೭)

"ಇವನಿಂದ ಯಾರಾದರೂ ಕಾಪಾಡ್ರಪ್ಪ.. ಭಾವ ಲಹರಿ ತುಂಬಿ ತುಂಬಿ ಓದುಗರನ್ನ ಅಳಿಸುತ್ತಿದ್ದಾನೆ .. " ಕನಸ್ಸಲ್ಲಿ ಯಾರೋ ಬೆನ್ನು ತಟ್ಟಿ ಎಬ್ಬಿಸಿದ ಅನುಭವ.. ಕಣ್ಣು ಬಿಟ್ಟೆ.. ಏನಪ್ಪಾ.. ನನ್ನ ಚಿತ್ರಗಳ ಬಗ್ಗೆ ಬರೀತೀನಿ ಅಂತ ಎಲ್ಲಾ ಮಾಸದಲ್ಲೂ ಹರಿಕಥೆ ಮಾಡಿದೆ.. ನನ್ನ ಎಲ್ಲೋ ನಿಲ್ಲಿಸಿಬಿಟ್ಟಿದ್ದೆಯ.. ಮುಂದುವರೆಸುತ್ತೀಯೋ ಅಥವಾ.. ಆರಂಭ ಶೂರತ್ವವೋ..ಆ ಆ"

"ಅಣ್ಣಾವ್ರೇ.. ಕ್ಷಮಿಸಿ.. ಎಲ್ಲೆಲ್ಲೋ ತಪ್ಪಿಸ್ಕೊಂಡು ಹೋಗಿಬಿಟ್ಟಿದ್ದೆ.. ಇರಿ ಹೇಗಾದರೂ ಮತ್ತೆ ನನ್ನ ಟ್ರಾಕಿಗೆ ಬರುತ್ತೇನೆ.. ನಿಮ್ಮನ್ನು ಒಂದೇ ಕಡೆ ನಿಲ್ಲಿಸುವುದೇ ಎಂಥಹ ಮಾತಾಡುತ್ತೀರಿ.. ನಿಮ್ಮ ಆಶೀರ್ವಾದದ ಹಸ್ತ ನನ್ನ ಮೇಲಿರಲಿ.. ನಿಮ್ಮ ಅನುಗ್ರಹವಿರಲಿ ಬಂದೆ ಬಿಡುತ್ತೇನೆ ೨೦೭ ಚಿತ್ರಗಳಿಗೆ.. "

"ಸರಿ.. ಅರ್ಥವಾಗುತ್ತೆ.. ಈಗ ಅಣ್ಣ ತಂಗಿ ಚಿತ್ರದ ಬಗ್ಗೆ ನಾ ಹೇಳುತ್ತೇನೆ.. ನೀ ಬರೆಯುತ್ತಾ ಹೋಗು.. ನಿನಗೂ ಸ್ವಲ್ಪ ಹಗುರವಾಗುತ್ತೆ.. ನಿನ್ನ ಗುರಿ ಮುಟ್ಟಲು ನಾನೂ ಅಳಿಲು ಸೇವೆ ಮಾಡಿದ ಹಾಗೆ ಆಗುತ್ತದೆ"

"ಯಪ್ಪೋ ಅಣ್ಣಾವ್ರೇ ಹೀಗೆಲ್ಲ ಹೇಳಬೇಡಿ.. ನನಗೆ ನಾಚಿಕೆ ಆಗುತ್ತದೆ.. ಸರಿ ನಿಮ್ಮ ೧೦ನೇ ಚಿತ್ರ ಅಣ್ಣ ತಂಗಿ ಚಿತ್ರ ಬಗ್ಗೆ ಹೇಳಿ.. ನಾ ಬರೆಯುತ್ತೇನೆ.. ."

"ಶ್ರೀಕಾಂತಾ.. ಈ ಚಿತ್ರ ೧೯೫೮ ರಲ್ಲಿ ತೆರೆಗೆ ಬಂತು.. ಕನ್ನಡ ಚಿತ್ರದ ಆರಂಭದ ದಿನಗಳ ಹೆಸರಾಂತ ಸಾಹಿತಿ ಕುರಾಸೀ ಎಂದೇ ಪ್ರಸಿದ್ಧರಾದ ಕು ರಾ ಸೀತಾರಾಮಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬಂತು.. ಬಿ ಎಸ್ ಕರಿಬಸಯ್ಯ ಈ ಚಿತ್ರದ ಮೂಲಕ ನಮಗೆ ಊಟ ಬಡಿಸಿದ ಅನ್ನದಾತರು.. ಗಿರಿಜಾ ಪ್ರೊಡಕ್ಷನ್ಸ್ ಲಾಂಛನ ಈ ಚಿತ್ರಕ್ಕೆ ಇತ್ತು.. "

"ಅಣ್ಣಾ.. ಈ ಚಿತ್ರಕ್ಕೆ ಕತೆ ಯಾರದ್ದು.. ಸಂಭಾಷಣೆ ಹಾಡುಗಳು ಯಾರವು.. ಈ ಚಿತ್ರ ನಿಮಗೆ ಹೇಗೆ ವಿಶೇಷ ಅನ್ನಿಸಿತು. ಅದನ್ನು ಒಸಿ ಹೇಳಿ.. "

ಹೂ ಕಣಪ್ಪ.. ಅದನ್ನು ಹೇಳುತ್ತೇನೆ.. ಸಂಭಾಷಣೆ, ಹಾಡುಗಳು ಕುರಾಸೀ ವಹಿಸಿಕೊಂಡಿದ್ದರು.. ಕಥೆಯನ್ನು ಬರೆದುಕೊಟ್ಟವರು ಎ. ಪಿ. ನಟರಾಜನ್.. ಇದೊಂದು ಬಹುತಾರಾಗಣದ ಚಿತ್ರ ಕಣಪ್ಪ.. ಎಲ್ಲ ಘಟಾನುಘಟಿಗಳು ಈ ಚಿತ್ರದಲ್ಲಿ ಇದ್ದರು.. ನಮ್ಮ ಬಾಲಣ್ಣ, ನರಸಿಂಹರಾಜು, ಅಶ್ವಥ್, ಗಣಪತಿ ಭಟ್ಟ, ವಿದ್ಯಾವತಿ, ಲಕ್ಷ್ಮಿ ದೇವಿ, ಪಾಪಮ್ಮ, ಬಿ ಜಯಮ್ಮ, ಸರೋಜಾದೇವಿ.. ಆರ್ ಎನ್ ಮಾಗಡಿ, ಕಮೆಡಿಯನ್ ಗುಗ್ಗು, ಗಿರಿಮಾಜಿ..  ಒಬ್ಬರ ಇಬ್ಬರ ಎಲ್ಲರೂ ಸೂಪರ್ ಅಭಿನಯ.., ಅವರ ಮುಂದೆ ನಾ ಅಭಿನಯ ಮಾಡೋಕೆ ನನಗೆ ನಾಚಿಕೆಯಾಗುತ್ತಿತ್ತು.. ಆದರೆ ಒಳ್ಳೆ ಅನುಭವ ಸಿಕ್ಕಿತು...

ಹಾಡುಗಳು ಸೊಗಸಾಗಿ ಇರಲು ಕಾರಣ ಕರ್ತರು ಪಿ ಕಾಳಿಂಗರಾಯರು, ಪಿ. ನಾಗೇಶ್ವರ ರಾವ್, ನನ್ನ ಶಾರೀರವೆಂದೇ ಹೆಸರಾದ ಪಿ ಬಿ ಶ್ರೀನಿವಾಸ್, ಸುಮಿತ್ರಾ, ಪಿ ಸುಶೀಲ, ಎಪಿ ಶ್ಯಾಮಲಾ, ರಾಜೇಶ್ವರಿ.. ಇವರೆಲ್ಲ ಸೇರಿ ಸಂಗೀತಮಯ ಮಾಡಿದ್ದರು.. ಇನ್ನೂ ನನ್ನನ್ನು ತಮ್ಮಯ್ಯ ಅಂತ ಕರೆಯುವ ಜಿ ಕೆ ವೆಂಕಟೇಶ್ ಸಂಗೀತ ಇದ್ದಾಗ ಸಂಗೀತಮಯವಾಗಲೇ ಬೇಕು ಅಲ್ಲವೇ..

ತಂತಿ ಬಂದಿರುತ್ತೆ.. ಅಂಚೆಯವ ಯಜಮಾನನಿಗೆ ರುಜು ಹಾಕಿ ತಂತಿ ತಗೊಳ್ಳಿ ಅಂದಾಗ "ನಾವು ಕೈಬರಹದವರಲ್ಲ. ಹಣೆಬರಹದವರು.. ಹೆಬ್ಬೆಟ್ಟು ತೋರಿಸು ಮುದ್ರೆ ಬಾಬತ್ತು.. "

"ಹಳ್ಳಿಯಲ್ಲಿ ಓದು ಬರಹ ಎಷ್ಟು ಹಿಂದಕ್ಕೆ ನಿಂತಿದೆ.. ಬರಿ ಹಣ ಅಂತಸ್ತು ಹೇಗೆ ಆಳುತ್ತದೆ ಎನ್ನುವುದನ್ನು ಸೂಕ್ಷಮವಾಗಿ ಒಂದು ಸಂಭಾಷಣೆಯಲ್ಲಿ ನಿಲ್ಲಿಸಿದ್ದಾರೆ.. ನನಗೆ ಬಹು ಇಷ್ಟವಾದ ಸಂಭಾಷಣೆ ಕಣಪ್ಪ.. "

 ಬಾಲಣ್ಣ ಹೇಳುವ ಒಂದು ಸಂಭಾಷಣೆ..

"ತ್ರಿಪುರ ಸುಂದರಿ ತಿಳಿತಿಳಿಯಾಗಿ ನಗ್ತಾಳೆ .. "
"ಏನು ಅಯ್ಯನೋರೇ ಈಗ ನಮ್ಮ ಗೌಡತಿ ಇದ್ದಿದ್ದರೇ.. " ಅಂತ ಯಜಮಾನ ಮಾತು ಮುಗಿಸುವ ಮುನ್ನವೇ "ಅಯ್ಯೋ ಬಿಡಿ ಈಗ ಅವರಿದ್ದರೆ ಈ ಆನಂದದಲ್ಲಿ ಪ್ರಾಣಾನೇ ಬಿಡ್ತಿದ್ದರು.. " ಒಂದು ಹಳ್ಳಿಯ ಮನೆಯ ವಾತಾವರಣವನ್ನು, ಆ ಭಾವವನ್ನು ಶುದ್ಧ ಹಾಸ್ಯದ ಧಾಟಿಯಲ್ಲಿ ಹೇಳುತ್ತಲೇ.. ತಮ್ಮ ವಿಷಾದವನ್ನು ಹೇಳುವ ಪರಿ ಸೊಗಸು...

"ಪಟ್ಟಣದವರು ಅಂದರೆ ಬೆರೆಕೆ ಇಂಗ್ಲೀಷಿಗೆ ಎತ್ತಿದ ಕೈ.. ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ಕಲಿತ ಕನ್ನಡ ಕೈಜಾರಿ ಕಳಚಿಕೊಂಡು ಬಿಡುತ್ತೆ.. " ಆಂಗ್ಲ ಭಾಷೆ ಪಟ್ಟಣ ಮತ್ತು ಹಳ್ಳಿಯ ಮಧ್ಯೆ ತರುತ್ತಿದ್ದ ಅಂತರವನ್ನು ಹೇಳುವ ನಾಜೂಕಿನ ಮಾತು..

"ಹಳ್ಳೀಲಿ ಹದವಾಗಿ ಹತ್ತು ದಿನ ಹಣ್ಣಾಗುವ ತನಕ ಈ ಅಂತೂ ಜಾಡ್ಯ ವಾಸಿಯಾಗಿ, ಹೆತ್ತ ತಾಯಿ ಹೆಸರು ಉಳಿಸೋ ಹದಿನಾರಾಣೆ ಕನ್ನಡಿಗರಾಗೋ ಹಾಗೆ ಇಲ್ಲ.. " ಆಂಗ್ಲ ಭಾಷಯ ವ್ಯಾಮೋಹದ ವ್ಯಾಧಿಗೆ ಮದ್ದು ಕೊಡುವ ರೀತಿ... ಚುರುಕು ಸಂಭಾಷಣೆ ಈ ಚಿತ್ರದ ತುಂಬಾ ಹರಡಿದೆ..

ಹಾಗೆಯೇ ಎಂ ಏನ್ ಲಕ್ಷ್ಮೀದೇವಿ ಮತ್ತು ನರಸಿಂಹ ರಾಜು ಅವರ ಸಂಭಾಷಣೆ..
ನರಸಿಂಹರಾಜು ಹೇಳುತ್ತಾರೆ "ಮರ್ವಾದೆ ಮೀರಿದರೆ ನಾ ಮನುಷ್ಯನಲ್ಲ.. "
ಅದಕ್ಕೆ ಲಕ್ಷ್ಮೀದೇವಿ ಕೊಡುವ ಉತ್ತರ.. "ಮಖ ನೋಡಿದರೆ ತಿಳಿಯೊಳ್ವ ಮನುಷ್ಯ ಹೌದು ಅಲ್ಲ ಅಂತ"

ಹಾಸ್ಯ ಸಂಭಾಷಣೆ ಅಂದ್ರೆ ಇದು ಕಣ್ಣಪ್ಪ.. ತಿಳಿಹಾಸ್ಯ..

"ಅಣ್ಣಾವ್ರೇ ಈ ಚಿತ್ರದ ಕಥಾ ತಿರುಳು ಹೇಳಿ.. "

"ಇದೊಂದು ಎಲ್ಲಾ ಮನೆಯಲ್ಲೂ, ಎಲ್ಲಾ ಹಳ್ಳಿಯಲ್ಲೂ ನೆಡೆಯುವ ಕಥೆ.. ಚಿಕ್ಕ ವ್ಯಾಜ್ಯ, ಆಸ್ತಿ ಆಸೆ.. ಬಂಧುಗಳನ್ನು ದೂರಮಾಡಿರುತ್ತದೆ.. ಆದರೆ ಒಳಗೆ ಕುಡಿಯುವ ಆಕ್ರೋಶ. ಭುಗಿಲೆದ್ದು ತೊಂದರೆ ಈಡು ಮಾಡುತ್ತಿರುತ್ತದೆ.. ಅಂತ ಒಂದು ಪಾತ್ರದಲ್ಲಿ ನಾನು ಅಭಿನಯ ಮಾಡುವ ಪ್ರಯತ್ನ ಮಾಡಿದ್ದೇನೆ.. "

"ನನ್ನ ತಂಗಿಯನ್ನು ಸರೀಕರೆದುರು ಚೆನ್ನಾಗಿ ಬೆಳೆಸಬೇಕು ಎಂದು ಕಷ್ಟ ಪಟ್ಟು ಆಕೆಯನ್ನು ಪಟ್ಟಣದಲ್ಲಿ ಓದೋಕೆ ಬಿಟ್ಟಿರುತ್ತೇನೆ.. ಇತ್ತ ಆ ಹಳ್ಳಿಯ ಗೌಡನ ಮಗನೂ ಕೂಡ ಓದುತ್ತಿರುತ್ತಾನೆ.. ಅವರಿಬ್ಬರಿಗೂ ತಮ್ಮ ಕುಟುಂಬಗಳ ಕಲಹ ಗೊತ್ತಿದ್ದರೂ ಅರಿಯದ ವಯಸ್ಸು.. ಪ್ರೀತಿಗೆ ಶರಣಾಗುತ್ತಾರೆ.. "

"ಇತ್ತ ಹಳ್ಳಿಯಲ್ಲಿ ನಮ್ಮ ಎರಡು ಕುಟುಂಬಗಳ ಮಧ್ಯೆ ಹಸಿ ಹುಲ್ಲು ಹಾಕಿದರೂ ಬಗ್ ಅಂತ ಬೆಂಕಿ ಹೊತ್ತಿಕೊಳ್ಳುವಷ್ಟು ದ್ವೇಷ ಇರುತ್ತೆ.. ಒಂದು ಸಣ್ಣ ಸಣ್ಣ ಕಾರಣವೂ ಸಾಕು ತಗಾದೆ ಮಾಡೋಕೆ.. ಅನ್ನುವಷ್ಟು ದ್ವೇಷ.. "

"ಓದು ಮುಗಿಸಿ ಬರುವ ಈ ಎರಡು ಜೋಡಿ.. ಬೇಕಂತಲೇ ಪರಿಚಯವಿರದ ರೀತಿ ತೋರಿಸಿಕೊಂಡರೂ.. ಜೊತೆಯಲ್ಲಿ ಮನೆಯಲ್ಲಿ ಭೋಧನೆ ಮಾಡಿದ ರೀತಿ ಇರಬೇಕೆಂದುಕೊಂಡರೂ..  ಅದು ಸಾಧ್ಯವಾಗದೆ.. ಈ  ಪ್ರೀತಿಯ ಬಗ್ಗೆ ಎರಡೂ ಮನೆಗೆ ಗೊತ್ತಾಗುತ್ತದೆ.. ಆ ಜಟಾಪಟಿಯಲ್ಲಿ ನಾನು ನನ್ನ ತಂಗಿಗೆ ಹೊಡೆದು ಬಯ್ದು.. ಅಮ್ಮನ ಬೈಗುಳ ತಿಂದು ಮನೆಯಿಂದ ಹೊರಗೆ ಬಂದು ವರ್ಷಗಳ ಕಾಲ ಹೋಗದ ಸೋದರ ಮಾವನ ಮನೆಗೆ ಬರುತ್ತೇನೆ.. "

"ಅಲ್ಲಿ ನೋಡಿದರೆ.. ಊರಿನಲ್ಲಿ ದಿನವೂ ಸಿಕ್ಕು ಜಗಳವಾಡುತ್ತಿದ್ದ ಹುಡುಗಿ ಸಿಗುತ್ತಾಳೆ.. ಆಗ ನೆಡೆಯುವ ಚುಟುಕು ಸಂಭಾಷಣೆ ನನ್ನ ಮತ್ತು ಅವಳನ್ನು ಹತ್ತಿರ ಮಾಡುತ್ತದೆ.. ಮುಂದೆ ಎಲ್ಲವೂ ಸುಖಾಂತ. ಎರಡು ಕುಟುಂಬಗಳು ಒಂದಾಗುತ್ತವೆ.. ಒಂದಷ್ಟು ಚಕಮಕಿ ಇದೆ.. ಆದರೆ ನಿಮ್ಮನ್ನು ಬೋರ್ ಹೊಡೆಸದೆ ಚಿತ್ರವನ್ನು ತಯಾರಿಸಿದ್ದಾರೆ ನಿರ್ದೇಶಕರು.. "

"ಅಣ್ಣಾವ್ರೇ ಪಾತ್ರಗಳ ಬಗ್ಗೆ ಹೇಳಿ"

"ಎಲ್ಲರೂ ಬಲು ಪಸಂದಾಗಿ ಅಭಿನಯ ನೀಡಿದ್ದಾರೆ.. ಬಿ ಸರೋಜಾದೇವಿ ಅಭಿನಯ ಸರಸ್ವತಿ... ಹಳ್ಳಿಯ ಭಾಷೆ.. ಆ ವಯ್ಯಾರ.  ಜೋರು, ನಾಜೂಕಿಲ್ಲದೆ ಸಂಭಾಷಣೆ.. ನಂತರ ನಾನು ಅವಳ ಮಾವನ ಮಗ ಎಂದು ಗೊತ್ತಾದಾಗ ಬದಲಾದ ಹಾವ ಭಾವ ಎಲ್ಲವೂ ಸೊಗಸಾಗಿದೆ.. .. ಗೌಡನ ಪಾತ್ರಧಾರಿ ಈಶ್ವರಪ್ಪ ಸೊಗಸಾಗಿ ಅಭಿನಯಿಸಿದ್ದಾರೆ.. ಅವರ ಧ್ವನಿ ನನಗೆ ಬಲು ಇಷ್ಟ.. ಹಿತಮಿತವಾದ ಅಭಿನಯ .. ಇನ್ನೂ ಬಿ ಜಯಮ್ಮ, ಲಕ್ಷ್ಮೀದೇವಿ, ನನ್ನ ತಂಗಿ ಪಾತ್ರಧಾರಿ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ.. ಮನಸ್ಸು ಸೆಳೆಯುವ ಅಂಶ ಎಂದರೆ.. ಡೈಲಾಗ್ ಕಿಂಗ್ ಅನ್ನಿಸುವ ಬಾಲಣ್ಣ.. ಅವರ ಭಾಷೆಯ ಹಿಡಿತ, ಹಾವಭಾವ, ಏರಿಳಿತ.. ಅವರಿಂದ ನಾ ಕಲಿಯುವ ಅಭಿನಯ.. ಕೊನೆಯೇ ಇಲ್ಲ..ಕರುನಾಡಿನ ಉತ್ತಮ ಕಲಾವಿದರು ಅವರು.. ಜೊತೆಯಲ್ಲಿ ಅಶ್ವತ್ ಅವರ ಆರಾಮಾಗಿ ನಟಿಸುವ ಶೈಲಿ.. ನರಸಿಂಹರಾಜು ಅವರ ಹಾಸ್ಯ.. ಈ ಚಿತ್ರವನ್ನು ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತದೆ.. ಯಾವುದೇ ಮಸಾಲೆ ಪದಾರ್ಥ ಹೆಚ್ಚು ಕಮ್ಮಿ ಹಾಕದೆ ಹದವಾದ ಅಡುಗೆ ಇದು.. "

"ಎಲ್ಲಾ ಹೇಳಿದಿರಿ ಅಣ್ಣಾವ್ರೇ.. ನಿಮ್ಮ ಪಾತ್ರದ ಬಗ್ಗೆ ಹೇಳಲಿಲ್ಲ"

"ನಮ್ಮ ಬೆನ್ನು ನಮಗೆ ಕಾಣುತ್ತದೆಯೇ... ನನ್ನ ಅಭಿನಯದ ಬಗ್ಗೆ ನಾನೇ ಹೇಳೋದೇ.. ಅಭಿನಯ ಅನ್ನುವ ಕಸರತ್ತು ಮಾಡಿದ್ದೇನೆ ಅಷ್ಟೇ.. ಕೆದರಿದ ಕೂದಲು.. ಒರಟು ಸಂಭಾಷಣೆ.. ಅಷ್ಟೇ ಕಣಪ್ಪ ನನಗೆ ಗೊತ್ತಿರೋದು.. ನಾ ಈ ಚಿತ್ರವನ್ನು ನೋಡಿಲ್ಲ.. ನೋಡಿದ್ದರೆ ಹಿಂಸೆ ಆಗುತ್ತಿತ್ತೇನೋ.. ಇನ್ನೂ ಚೆನ್ನಾಗಿ ಅಭಿನಯಿಸಿಬಹುದಿತ್ತು ಎನ್ನುವ ತವಕ ಹೆಚ್ಚಾಗುತ್ತದೆ.. ಅದಕ್ಕೆ ನಾ ನೋಡಿಲ್ಲ.. "

"ಅಣ್ಣಾವ್ರೇ.. ಈ ಚಿತ್ರದಲ್ಲಿ ನಿಮ್ಮ ಅಭಿನಯ ಹಿಂದಿನ ಚಿತ್ರಗಳ ಸಮಾಗಮ ಎನ್ನಬಹುದು.. ಕೋಪ, ಆಕ್ರೋಶ, ಉದ್ವೇಗ, ಪ್ರೀತಿ, ಒದ್ದಾಟ, ಹೊಡೆದಾಟ, ತಮ್ಮವರಿಗೆ ಮಿಡಿಯುವ ಅಂತಃಕರಣ, ಪ್ರತಿ ದೃಶ್ಯದಲ್ಲೂ ಎದ್ದು ಕಾಣುವ ಅಚ್ಚುಕಟ್ಟುತನ ಇದೆ ನಿಮ್ಮ ಅಭಿನಯದ ಹೂರಣ ಈ ಚಿತ್ರದಲ್ಲಿ.. ನೀರಿನ ಹಾಗೆ ನಿರ್ದೇಶಕರು ನಿಮ್ಮನ್ನು ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಸಾಗಿಸಿದ್ದಾರೆ.. ಜೊತೆಗೆ ಇದು ಬಿಡುಗಡೆಯಾದ ಹತ್ತನೇ ಚಿತ್ರ ಎನ್ನುವುದು ವಿಶೇಷ.. ಒಂದು ಮೈಲಿಗಲ್ಲು ದಾಟಿದ ಖುಷಿ ನಿಮಗೆ.. ಹಾಗೆಯೇ ನಿಮ್ಮ ಚಿತ್ರಗಳ ಬಗ್ಗೆ ಈ ಅಲ್ಪನಿಗೆ ತಿಳಿದಷ್ಟು ಬರೆಯುತ್ತಿರುವ ನನಗೂ ಒಂದು ಮೈಲಿಗಲ್ಲು.. ಎರಡಂಕಿಗೆ ಬಂದ ಖುಷಿ.. "


"ಏನೋಪ್ಪ.. ನಿನಗೆ ಏನೂ ಹೇಳೋದು.. ಏನೋ ಹೇಳಿದ್ದೀಯಾ.. ನಿನ್ನ ಅಭಿಮಾನಕ್ಕೆ ಧನ್ಯವಾದಗಳು.. ಮುಂದಿನ ಚಿತ್ರವನ್ನು ಬೇಗ ತೆರೆಕಾಣಿಸಪ್ಪಾ .. ಜೀವನದಲ್ಲಿ ಏಳು ಬೀಳುಗಳ ಸಹಜ.. ಗೊತ್ತಿಲ್ಲವೇ ನಿನಗೆ ಯೋಗಿ ಪಡೆದದ್ದು ಯೋಗಿಗೆ.. ಜೋಗಿ ಪಡೆದದ್ದು ಜೋಗಿಗೆ.. "

"ಹೌದು ಅಣ್ಣಾವ್ರೇ.. ನಿಮ್ಮ ಆಶೀರ್ವಾದ ಹೀಗೆ ಇರಲಿ.. ಬರುವೆ ನಿಮ್ಮ ಮತ್ತೊಂದು ಚಿತ್ರದ ಜೊತೆಗೆ.. "

'ಶುಭವಾಗಲಿ ಶ್ರೀಕಾಂತಾ.. "