Saturday, January 20, 2024

ಕಂಡ ಕನಸ್ಸನ್ನು ಮಾಡಿದ ಪ್ರತಿಜ್ಞೆಯನ್ನು ನೆನಪಿಸುವ ಪ್ರತಿಜ್ಞೆ (1964 (ಅಣ್ಣಾವ್ರ ಚಿತ್ರ ೫೪/೨೦೭)


ಎಲ್ಲರ ಬದುಕಲ್ಲೂ ನೆಡೆಯುವ ಘಟನೆಗಳೇ ಸಿನೆಮಾವಾಗುತ್ತವೆಯೋ, ಅಥವ ಸಿನಿಮಾದ ದೃಶ್ಯಗಳು ನಮ್ಮ ಬದುಕಲ್ಲಿ ಬರುತ್ತವೆಯೋ.. ಇದೊಂದು ರೀತಿ ಬೀಜ ವೃಕ್ಷ, ಕೋಳಿ ಮೊಟ್ಟೆ ಕಥೆ ಇದ್ದ ಹಾಗೆ. ಯಾವುದು ಮೊದಲು ಯಾವುದು ನಂತರ ಯಾರಿಗೂ ಅರಿವಿಗೆ ಬರುವುದಿಲ್ಲ, ಬರಿ ಚರ್ಚೆಗಷ್ಟೇ ಸೀಮಿತವಾಗಿರುತ್ತದೆ. 

ಬಾಲ್ಯದಲ್ಲಿ ಕಂಡ ಒಂದು ಕನಸು, ಒಂದು ಆಸೆ.. ಬಡವರಿಗೆ ಉಚಿತ ಖಚಿತ ವೈದ್ಯಕೀಯ ಸೌಲಭ್ಯ ಸಿಗುವಂತೆ ಮಾಡಬೇಕು ಎನ್ನುವ ಹಂಬಲ ಹೊತ್ತ ಬಾಲಕ.. ತನ್ನ ತಂದೆಯರ ಅಪರಿಮಿತ ನಿಸ್ವಾರ್ಥ ಕೃಪಾಚಾಯೆಯಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಗೆದ್ದು ವೈದ್ಯನಾಗುತ್ತಾನೆ. 




ಆದರೆ ನಗರದ ವ್ಯಾಮೋಹ, ಓದುವಾಗ ನೆಡೆಯುವ ಕೆಲವು ಕೀಟಲೆ ಪ್ರಸಂಗಗಳು, ಆತನನ್ನು ಒಬ್ಬ ಸಿರಿವಂತ ಹುಡುಗಿಗೆ ಪರಿಚಯ ಮಾಡಿಕೊಳ್ಳುವ ಸಂದರ್ಭ ಒದಗಿಬರುತ್ತದೆ, ನಂತರ ಈತನ ಪ್ರತಿಭೆಯನ್ನು ಅರಿತ ಆ ಸಿರಿವಂತ ಮನೆಯ ಯಜಮಾನಿ, ತನ್ನ ಮಗಳನ್ನು ಆತನಿಗೆ ಕಟ್ಟಿ, ವೈದ್ಯಕೀಯ ವೃತ್ತಿಯಲ್ಲಿ ಬೆಳೆಯುವಂತೆ ಮಾಡುವುದೇ ಅಷ್ಟೇ ಅಲ್ಲದೆ, ಆತನ ತಂದೆಯ ತಾಯಿಯರು ಈತನನ್ನು ಭೇಟಿ ಮಾಡುವ ಅಥವ ಯೋಗಕ್ಷೇಮ ತಿಳಿಸುವ ಎಲ್ಲಾ ಮಾಹಿತಿಗಳಿಂದ ದೂರವಿಡುತ್ತಾಳೆ. ಮತ್ತೆ ಆತನಿಗೆ ತನ್ನ ತಂದೆ ತಾಯಿಯರು ಹೇಳದೆ ಕೇಳದೆ ತಾನು ಮದುವೆ ಮಾಡಿಕೊಂಡದ್ದು ಕೋಪತರಿಸಿದೆ, ಹಾಗಾಗಿ ಬೇಸರವಾಗಿ ತೀರ್ಥಯಾತ್ರೆಗೆ ಹೋಗಿದ್ದೇವೇ ಅಂತ ಸುಳ್ಳು ಸುಳ್ಳು ತಂತಿ ಕೊಟ್ಟು..  ಒಂದು ರೀತಿಯಲ್ಲಿ ಶಾಶ್ವತ ಬಿರುಕು ತಂದಿಡುತ್ತಾಳೆ. ಅದನ್ನೇ ನಂಬಿಕೊಂಡ ಈತ, ಪೂರ್ಣ ನಗರ ಜೀವನದ ಆಡಂಬರಕ್ಕೆ ಮರುಳಾಗಿ ತನ್ನ ಹೆತ್ತರವರನ್ನು ನೋಡಲು ಹೋಗೋದೇ ಇಲ್ಲ .. ಆದರೆ ಅವರ ವಾತ್ಸಲ್ಯ, ಅವರ ಅಪರಿಮಿತ ಪ್ರಯತ್ನದಿಂದ ತಾನು ವೈದ್ಯನಾದೆ ಎನ್ನುವುದನ್ನು, ಬಾಲ್ಯದ ಅಚ್ಚಳಿಯದ ನೆನಪುಗಳನ್ನು ಪದೇ ಪದೇ ಮೆಲುಕು ಹಾಕುತ್ತ ತನ್ನ ಮಡದಿಗೆ ಹೇಳುತ್ತಿರುತ್ತಾನೆ. 

ಮಗನ ಅರಿವಿಲ್ಲದ ತಿರಸ್ಕಾರದ ಘಟನೆಗಳಿಂದ ನೊಂದ ಅಪ್ಪ ಅಸು ನೀಗುತ್ತಾನೆ.. ಗಂಡನಿಲ್ಲದ ಮಡದಿ, ತನ್ನ ಮಗನ ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವ ಆಯಾ ಆಗಿ ಕೆಲಸಕ್ಕೆ ಸೇರಿಕೊಂಡು, ಕಡೆ ಪಕ್ಷ ತನ್ನ ಮೊಮ್ಮಗುವನ್ನಾದರೂ ಲಾಲನೆ ಪಾಲನೆ ಮಾಡುವ ಅವಕಾಶ ಪಡೆಯುತ್ತಾಳೆ. 


ಪರಿಸ್ಥಿತಿ, ಈಕೆಯ ತನ್ನ ತಾಯಿ ಎಂದು ತಿಳಿದು, ಜೀವನದಲ್ಲಿ ನೆಡೆದ ಘಟನೆಗಳು ಹೇಗೆ ತನ್ನನ್ನು ಕುರುಡನ್ನಾಗಿ ಮಾಡಿತ್ತು ಎಂದು ಹಳಿಹಳಿಯುತ್ತ ಮತ್ತೆ ತನ್ನ ಬಾಲ್ಯದ ಪ್ರತಿಜ್ಞೆ ನೆನಪಿಸಿಕೊಂಡು, ಮರಳಿ ತನ್ನ ಹಳ್ಳಿಯ ಬದುಕಿಗೆ ಹಿಂದಿರುಗುತ್ತಾನೆ, ಜೊತೆಗೆ ಆತನ ಮಡದಿ, ಹಾಗು ಆಕೆಯ ಸಿರಿವಂತ ತಾಯಿಯೂ ಬದಲಾಗುತ್ತಾರೆ. 

ಇದು ಕಥಾ ಹಂದರ. 


ತಂದೆ ತಾಯಿಯರ ಪಾತ್ರದಲ್ಲಿ ಅಶ್ವಥ್ ಹಾಗೂ ಪಂಡರಿಬಾಯಿಯವರ ಅಭಿನಯ ಅದ್ಭುತವಾಗಿದೆ. ಆ ಸಂತಸ, ಸಿಟ್ಟು, ಬೇಸರ, ಮಮತೆ, ಪ್ರೀತಿ ಎಲ್ಲವನ್ನೂ ಸಂಭಾಷಣೆ ಹೇಳುವಲ್ಲಿ, ಹಾಗೂ ಅದನ್ನು ಅಭಿನಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಶ್ವಥ್, ತನ್ನ ಮಗನ ವಿದ್ಯಾಭ್ಯಾಸಕ್ಕೆ ದುಡ್ಡು ಹೊಂದಿಸುವ ಪ್ರಯತ್ನದಲ್ಲಿ ರಾತ್ರಿ ಹೆಚ್ಚುವರಿ ಕೆಲಸ ಮಾಡುವಾಗ ತೋರುವ  ಸುಸ್ತು, ಮತ್ತೆ ತಡರಾತ್ರಿ ಮರದ ಬೊಂಬೆಗಳನ್ನು ಮಾಡುವ ಕೆಲ್ಸದಲ್ಲಿ ತೋರುವ ತಾದ್ಯಾತ್ಮತೆ, ಅದೇ ರೀತಿ ಮಗ ತಮ್ಮನ್ನು ಕಡೆಗಣಿಸಿ, ಬರಿ ದುಡ್ಡು ದುಡ್ಡು ಕಳಿಸಿ ಅಂತ ಕೇಳುವ ಪತ್ರ ಓದುತ್ತಾ ಸಿಟ್ಟು ಮಾಡಿಕೊಳ್ಳೋದು, ನಂತರ ಹೆಂಡತಿಗೆ ಹೇಳದೆ, ರಾತಿ ಕೆಲಸ ಮಾಡಲು ಹೋಗುವುದು.. ಮಗನ ಮನೆಯ ಕಾವಲುಗಾರ ಕುತ್ತಿಗೆ ಹಿಡಿದು ದಬ್ಬಿಸಿಕೊಳ್ಳುವಾಗ ದಬ್ ಅಂತ ಗೇಟಿನ ಹೊರಗೆ ಬೀಳುವ ಪಾತ್ರದ ಅಭಿನಯ ಬಹಳ ನೈಜತೆಯಿಂದ ಕೂಡಿದೆ

ಅಶ್ವಥ್ ಅವರಿಗೆ ತಕ್ಕಂತೆ ಪಂಡರಿಬಾಯಿ ಮಮತಾಮಯಿ. ಆ ಪ್ರೀತಿ, ಮಮತೆ, ಮಗ ತಮ್ಮನ್ನು ಅಲಕ್ಷ್ಯಮಾಡಿದ್ದಾನೆ ಎನ್ನುವುದನ್ನು ಕೆಲವು ಪ್ರಸಂಗಗಳಿಂದ ಅರಿತುಕೊಂಡರೂ, ತಾಯಿ ಕರುಳು ಮಗನ ಪ್ರೀತಿಗೆ ಅವನ ಏಳಿಗೆಗೆ ಹಂಬಲಿಸುತ್ತದೆ. ಆ ಪಾತ್ರದಲ್ಲಿ ಅಕ್ಷರಶಃ ತಾಯಿಯೇ ಆಗಿದ್ದರೆ. 


ಜಯಂತಿ, ಅತಿ ಮುದ್ದಾಗಿ ಕಾಣುತ್ತಾರೆ.  ಸುಂದರ ಅಭಿನಯ

ನರಸಿಂಹರಾಜು ನಾಯಕನನ್ನು ನಗರವ್ಯಾಮೋಹಕ್ಕೆ ಒಗ್ಗಿಕೊಳ್ಳುವಂತೆ ಮಾಡುವ ಪಾತ್ರದಲ್ಲಿ ಅಭಿನಯ ಸುಂದರವಾಗಿದೆ. ಹೆಚ್ಚಿನ ಹಾಸ್ಯ ದೃಶ್ಯಗಳಿಗೆ ಅವಕಾಶವಿಲ್ಲವಾದರೂ, ಇರುವ ದೃಶ್ಯಗಳಲ್ಲಿಯೇ ಅವರ ಅಭಿನಯ ಚಿತ್ರಕ್ಕೆ ತಕ್ಕ ಹಾಗೆ ಇದೆ. 


ಜಯ ನರಸಿಂಹರಾಜುವಿನ ಗೆಳತೀ, ಮಡದಿಯಾಗಿ ಸಲೀಸಾದ ಅಭಿನಯ 

ರಮಾದೇವಿ ಕರುನಾಡಿನ ಗಯ್ಯಾಳಿ ಅತ್ತೆ, ಅಮ್ಮನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. 


ಗಣಪತಿ ಭಟ್, ನಾಯಕನ ಮನೆಯ ಹಿತಚಿಂತಕನಾಗಿ ಸಣ್ಣ ಪಾತ್ರವಾದರೂ ಆರಂಭದಲ್ಲಿ ಮತ್ತು ಕೊನೆಯಲ್ಲಿ ಅವರ ಅಭಿನಯ ಸೊಗಸು. 


ಇನ್ನೂ ಕಥಾನಾಯಕ ರಾಜಕುಮಾರ್.  ಈ ರೀತಿಯ ಪಾತ್ರಗಳಲ್ಲಿಯೂ ತಾನು ಅಭಿನಯಸಬಲ್ಲೆ ಎನ್ನುವುದನ್ನು ಶ್ರದ್ದೆಯಿಂದ ಕೂಡಿದ ಅಭಿನಯದಲ್ಲಿ ಮೂಡಿಸಿದ್ದಾರೆ. ಮೆಲ್ಲಗೆ ಉತ್ತುಂಗಕ್ಕೆ ಏರುತ್ತಿರುವ ವಾರ ಸಿನೆಮಾಯಾನದಲ್ಲಿ ಈ ರೀತಿಯ ಪಾತ್ರ ಕೊಂಚ ಖಳಛಾಯೆ ಇರುವ ಪಾತ್ರ ಅಂದರೆ ಪರಿಸ್ಥಿತಿಯ ಕೈಗೊಂಬೆಯಾಗಿ ತನ್ನ ಹೆತ್ತರವರಿಂದ  ದೂರವಾಗುವ, ಅವರ ಕಷ್ಟದಲ್ಲಿ ತಾನು ಭಾಗಿಯಾಗದೆ, ಅವರ ಉಪಕಾರ ಮಾತ್ರ ನೆನೆಯುತ್ತ, ಅವರ ಯೋಗಕ್ಷೇಮ ನೋಡಿಕೊಳ್ಳಲು ಆಗದ ಪಾತ್ರ. ಸಾಮಾನ್ಯ ರಾಜಕುಮಾರ್ ಅವರ ಸಿನೆಮಾಗಳ ಕಥಾವಸ್ತುವಿನಲ್ಲಿ ಈ ರೀತಿಯ ನಾಯಕನ ಧೋರಣೆ ಇರುವುದು ಕಡಿಮೆ, ಆದರೆ ಅದನ್ನು ಅಭಿನಯಿಸುವಾಗ ಅವರು ತೋರುವ ಶ್ರದ್ಧೆ ಅನನ್ಯ. ಹಳ್ಳಿ ಉಡುಪಿನಲ್ಲಿ ಎಷ್ಟು ಮುದ್ದಾಗಿ ಕಾಣುತ್ತಾರೆಯೋ ಅಷ್ಟೇ ಚೆಲುವಾಂತ ಚೆನ್ನಿಗನಾಗಿ ಪಟ್ಟಣದ ದಿರುಸಿನಲ್ಲಿಯೂ ಮಿಂಚುತ್ತಾರೆ. ಅವರ ಸಂಭಾಷಣೆ ವೈಖರಿ, ಆ ನಸು ನಗು ಎಲ್ಲವೂ ಸೊಗಸು. 


\ಇದೊಂದು ಉತ್ತಮಚಿತ್ರವಾಗಿದೆ. ಆದರೆ ತಂತ್ರಜಾನದ ಇತಿಮಿತಿ ಸುಮಾರು ದೃಶ್ಯಗಳನ್ನು ನುಂಗಿಹಾಕಿದೆ. ಜಾಲತಾಣದಲ್ಲಿ ಸಿಗುವ ಚಿತ್ರ, ಸಿಡಿಯೂ ಕೂಡ ಅದೇ ಆಗಿದೆ. ಕಥೆಗೆ ಕೆಲವೊಮ್ಮೆ ಲಿಂಕ್ ಸಿಗುವುದು ಕಷ್ಟ ಎನಿಸುತ್ತದೆ. ಆದ್ರೆ ಪ್ರಖ್ಯಾತ ನಿರ್ಮಾಪಕ ನಿರ್ದೇಶಕ ವಿಕ್ರಂ ಪ್ರೊಡಕ್ಷನ್ಸ್ ಮಾಲೀಕ ಬಿಸ್ ಎಸ್ ರಂಗ ಚಿತ್ರವಾಗಿರುವುದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿರುತ್ತದೆ. ಆದರೆ ತುಂಡಾದ ದೃಶ್ಯಗಳು ಕತೆಯನ್ನು ಒಟ್ಟುಗೂಡಿಸಲು ಕೊಂಚ ಒದ್ದಾಡುತ್ತದೆ. 

ಶ್ರೀಮತಿ ಶಾಮಲಾದೇವಿ ಅವರ ಕಥೆಯನ್ನು ಚಿತ್ರಕ್ಕೆ ಸಂಭಾಷಣೆ ಹಾಡುಗಳನ್ನು ಕೊಟ್ಟು ಸಿದ್ಧಪಡಿಸಲು ನೆರವಾಗಿರೋದು ಚಿ. ಸದಾಶಿವಯ್ಯ. ಸಂಗೀತ ಎಸ್ ಹನುಮಂತಾಚಾರ್. ಗಾಯಕರ ದಂಡೇ ಈ ಚಿತ್ರದ ಹಾಡುಗಳಲ್ಲಿ ಇದೆ. ಛಾಯಾಗ್ರಹಣದ ಹೊಣೆ ಬಿ ಎಸ್ ರಂಗ ಅವರದ್ದು. 

ಆಸ್ಪತ್ರೆಯ ದೃಶ್ಯಗಳನ್ನು ನೈಜವಾಗಿ ತೋರಿಸುವಲ್ಲಿ ಸಹಕರಿಸಿದ ತಂಡಕ್ಕೆ ಕೃತಜ್ಞತೆ ಸಲ್ಲಿಸಿರುವುದು ಗಮನ ಸೆಳೆಯುತ್ತದೆ. ಹಾಗೆ ಮಾಹಿತಿಗಳ ಪ್ರಕಾರ ರಾಜಕುಮಾರ್ ಅವರು ಮೊತ್ತ ಮೊದಲ ಬಾರಿಗೆ ವೈದ್ಯನ ಪಾತ್ರದಲ್ಲಿ ಅಭಿನಯಿಸಿದ್ದಾರೆ. 


ಬೆಳೆದು ಬಂದ ಹಾದಿಯನ್ನು ಎಷ್ಟೇ ಕಷ್ಟಬಂದರೂ ಮರೆಯಬಾರದು ಎಂದು ನಿರೂಪಿಸುವ ಚಿತ್ರ ಪ್ರತಿಜ್ಞೆ. 

Sunday, January 14, 2024

ಎಲ್ಲೆಡೆ ಇರುವ ಶಿವನ ಮಹಿಮೆ ಸಾರುವ ಶಿವಗಂಗೆ ಮಹಾತ್ಮೆ (1964 (ಅಣ್ಣಾವ್ರ ಚಿತ್ರ ೫೩/೨೦೭)

ಅನೇಕ ಬಾರಿ ಹೀಗಾಗುತ್ತದೆ. ತಯಾರು ಮಾಡಿದ ಅಡಿಗೆ, ಪ್ರಯತ್ನ ಸೊಗಸಾಗಿರುತ್ತದೆ.. ಆದರೆ ಅದು ಆಸಕ್ತರ ಕೈ ಸೇರುವ ಹೊತ್ತಿಗೆ ಮೊಟಕಾಗಿ ರುಚಿಸದೆ ಹೋಗಬಹುದು ಅಥವ ಇನ್ನೂ ಬೇಕು ಅನಿಸುವಾಗಲೇ ಖಾಲಿ ಕೂಡ ಆಗಿರಬಹುದು. 

ಶಿವಗಂಗೆ ಮಹಾತ್ಮೆ ಚಿತ್ರ ಭಕ್ತಿರಸ ಆಧಾರಿತ ಚಿತ್ರ. ಶಿವಗಂಗೆಯ ಸ್ಥಳ ಪುರಾಣ, ಅದರ ವಿಶೇಷತೆ, ಶಿವ ಸಾನಿಧ್ಯವಾದ ಸ್ಥಳ ಹೀಗೆ ಹತ್ತಾರು ವಿಶೇಷಣಗಳ ವಿಚಾರಗಳ ಕಥಾ ಹಂದರ ಹಿನ್ನೆಲೆಯಲ್ಲಿ ತಯಾರಾದ ಚಿತ್ರವಿದು. 

ಸೋರಟ್ ಅಶ್ವಥ್ ಅವರ ಕಥೆ ಸಂಭಾಷಣೆ ಹಾಡುಗಳು 

ಜಿ ಕೆ ರಘು ಅವರ ಸಂಗೀತ 

ಎಸ್ ಮಣಿ ಅವರ ಛಾಯಾಗ್ರಹಣ 

ತಿಮ್ಮರಾಯಪ್ಪ ಅವರ ನಿರ್ಮಾಣದಲ್ಲಿ 

ಗೋವಿಂದಯ್ಯ ನಿರ್ದೇಶಿಸಿದ ಚಿತ್ರವಿದು. 


ರಾಜಕುಮಾರ್,  ಹರಿಣಿ, ಉದಯಕುಮಾರ್, ಅಶ್ವಥ್, ಜಯಶ್ರೇ, ಬಾಲಕೃಷ್ಣ, ಜಯ, ರತ್ನಾಕರ್, ರಾಜಶ್ರೀ  ಅವರ ತಾರಾಗಣದಲ್ಲಿ ತಯಾರಾದ ಚಿತ್ರದ ಹೂರಣವಿಶ್ಟೆ. 








ರಾಜಮನೆತನದವರಾದರೂ ರಾಜಕುಮಾರ್ ಗುಡಿಸಿಲಿನಲ್ಲಿ ಬೆಳೆಯುತ್ತಾರೆ. ತಾಯಿ ಜಯಶ್ರೀ ಅವರಿಗೆ ಕಣ್ಣುಗಳು ಕಾಣದಾಗಿರುತ್ತದೆ. ಅಪ್ಪನಾದ ಅಶ್ವಥ್ ಕಾರಣಾಂತರಗಳಿಂದ ಎರಡನೇ ಮದುವೆಯಾಗಿದ್ದರೋ ಆಕೆಯ ಮಡದಿ ರಾಜ್ಯವನ್ನು ಕಬಳಿಸಬೇಕು ಎಂಬ ಕುಟಿಲನೀತಿಯ ಕುತಂತ್ರಿ ಸೇನಾಪತಿ ಉದಯಕುಮಾರ್ ಜೊತೆಗೂಡಿ ವಿಷವ್ಯೂಹ ರಚಿಸಿರುತ್ತಾಳೆ. 

ರಾಜನನ್ನು ಮುಗಿಸಿ, ರಾಜ್ಯವನ್ನು ಸೇನಾಪತಿಯ ಜೊತೆ ಅನುಭವಿಸಬೇಕು ಎನ್ನುವ ಅವಳ ಯೋಜನೆಗೆ ಅಡ್ಡಿಯಾಗಿರೋದು ಮಂತ್ರಿಯ ನಿಷ್ಠೆ ಹಾಗೂ ಆತನ ಮುಂದಾಲೋಚನೆ. ಕುತಂತ್ರ ಮಾಡಿ ಮಹಾರಾಜನನ್ನೇ ಕೊಂದಿದ್ದಾನೆ ಎನ್ನುವ ಸುಳ್ಳು ಆರೋಪ ಹೊರಿಸಿ ಮಂತ್ರಿಯನ್ನು ಕಾರಾಗೃಹಕ್ಕೆ ಕಳಿಸುತ್ತಾರೆ. ಇತ್ತ ಮಹಾರಾಜನನ್ನೂ ಕೂಡ ಸತ್ತಿದ್ದಾನೆ ಎಂದು ಪ್ರಜೆಗಳಿಗೆ ನಂಬಿಸಿ, ಆತನನ್ನು ಬಂಧನದಲ್ಲಿಟ್ಟಿರುತ್ತಾರೆ. 

ಇತ್ತ ರಾಜಕುಮಾರ್ ಪಾತ್ರ ತನ್ನ ತಾಯಿಗೆ ಅಂಧತ್ವವನ್ನು ನಿವಾರಣೆಮಾಡುವ ತೀರ್ಥ ಶಿವಗಂಗೆಯಲ್ಲಿ ಸಿಗುತ್ತದೆ ಎನ್ನುವ ಗುರುವಿನ ಮಾತಿನ ಮೂಲಕ ಶಿವಗಂಗೆಗೆ ತೆರಳುತ್ತಾನೆ. 

ಇತ್ತ ಸೇನಾಪತಿಯು ಮಂತ್ರಿಯ ಮಗಳು ಹರಿಣಿಯನ್ನು ಹೆದರಿಸಿ, ಜೊತೆಗೆ ಅವಳ ಮನೆಗೆ ಬೆಂಕಿ ಹಚ್ಚಿಸಿ ಅವಳನ್ನು ಕಾಡುಪಾಲಾಗುವಂತೆ ಮಾಡುತ್ತಾನೆ. ಇತ್ತ ರಾಜಕುಮಾರ್ ಅವರ ಅಮ್ಮ ಜಯಶ್ರೀ ಇರುವ ಗುಡಿಸಲಿಗೂ ಬೆಂಕಿ ಹಚ್ಚಿಸಿ ಆಕೆಯನ್ನು ಕಾಡುಪಾಲಾಗುವಂತೆ ಮಾಡುತ್ತಾನೆ. 

ಸೇನಾಪತಿಯ ಬಲಗೈ ಬಾಲಕೃಷ್ಣ ಉಪಾಯಮಾಡಿ ಮಂತ್ರಿಯನ್ನು ಸೆರೆಯಿಂದ ಬಿಡಿಸುತ್ತಾನೆ ಮಂತ್ರಿಯು ಮಹಾರಾಜನು ಇರುವ ಜಾಗವನ್ನು ಪತ್ತೆ ಮಾಡಿ ಆತನನ್ನು ಬಿಡಿಸುತ್ತಾನೆ. ಆದರೆ ಮತಿಕಳೆದುಕೊಂಡ ಮಹಾರಾಜ ಕಾಡಿನಲ್ಲಿ ಅಲೆಯುತ್ತಾ ಜಯಶ್ರೀ ಮತ್ತು ಹರಿಣಿಯು ಇರುವ ಸ್ಥಳಕ್ಕೆ ಬರುತ್ತಾರೆ. 

ಇತ್ತ ಬಹು ಸಾಹಸಮಾಡಿ, ಶಿವಗಂಗೆಯಿಂದ ಪುಣ್ಯ ತೀರ್ಥವನ್ನು ತಂದು, ಅದರ ಶಕ್ತಿಯಿಂದ ಜಯಶ್ರೀ ಅವರಿಗೆ ಅಂಧತ್ವ ನಿವಾರಣೆಯಾಗುತ್ತದೆ ಮತ್ತು ಮಹಾರಾಜನಿಗೆ ಸ್ಮೃತಿ ಬರುತ್ತದೆ. ತನ್ನ ಹೆಂಡತಿಯನ್ನು ಮಗನನ್ನು ಗುರುತು ಹಿಡಿಯುತ್ತಾರೆ.  ಜೊತೆಗೆ ರಾಜಕುಮಾರ್ ಸೇನಾಪತಿ ಉದಯಕುಮಾರ್ ಜೊತೆ ಹೋರಾಡಿ ಮಂತ್ರಿಯನ್ನು ರಕ್ಷಿಸಿ, ಆತನ ಮಗಳು ಹರಿಣಿಯನ್ನು ವರಿಸುತ್ತಾನೆ, 

ಆದರೆ ತಂತ್ರಜ್ಞಾನದ ಕಸಿವಿಯಿಂದ ಅನೇಕ ದೃಶ್ಯಗಳು ತುಂಡಾಗಿವೆ, ಕತೆ ಪೂರ್ಣಪ್ರಮಾಣವಾಗಿ ಬಿತ್ತರವಾಗುವ ಹಾಗೆ ಕಾಣಿಸೋಲ್ಲ. ಮಧ್ಯೆ ಮಧ್ಯೆ ದೃಶ್ಯಗಳು ತುಂಡಾಗಿರುವುದರಿಂದ ಕಥೆಯ ಓಘಕ್ಕೆ ಅಡ್ಡಿ ಅನಿಸುತ್ತದೆ. ಪೂರ್ಣ ಚಿತ್ರವನ್ನು ನೋಡಿದ ಮೇಲೆ ಕಥಾಹಂದರ ಅರ್ಥವಾಗುತ್ತದೆ. 

ರಾಜಕುಮಾರ್ ಅವರ ಪಾತ್ರ ಇಪ್ಪತ್ತು ನಿಮಿಷಗಳಿಗೂ ಹೆಚ್ಚಿಲ್ಲ. ಸುಮಾರು ೧೨೬ ನಿಮಿಷಗಳ ಚಿತ್ರದಲ್ಲಿ ಅರ್ಧಘಂಟೆಗೂ ಕಡಿಮೆ ರಾಜಕುಮಾರ್ ಅವರ ಪಾತ್ರವನ್ನು ನೋಡಬಹುದು. ಆದರೆ ಅವರಿಗೆ ತಿಳಿದಿತ್ತೋ ಇಲ್ಲವೇ ಗೊತ್ತಿಲ್ಲ. ಅವರ ದೃಶ್ಯಗಳಲ್ಲಿ ಅವರ ಅಭಿನಯಕ್ಕೆ ಪೂರ್ಣ ಅಂಕ ಸಿಗುತ್ತದೆ. ಕಥಾವಸ್ತು ಅವರ ಅಭಿನಯವನ್ನು ಪೂರ್ಣಪ್ರಮಾಣದಲ್ಲಿ ಹಿಡಿದಿಡಲು ಸಹಕಾರಿಯಾಗಿಲ್ಲವಾದರೂ, ಚೆಲುವಿನ ಮುಖ, ಆ ಸಂಭಾಷಣೆ ಹೇಳುವ ವೈಖರಿ, ಹಿರಿಕಿರಿಯರ ಜೊತೆ ಸಲೀಸಾದ ಅಭಿನಯ ಈ ಚಿತ್ರದ ಪ್ಲಶ್ ಪಾಯಿಂಟ್. 

ಕೆಲವೇ ದೃಶ್ಯಗಳಾದರೂ ಅಶ್ವಥ್, ಜಯಶ್ರೀ ಅಭಿನಯ ಸೊಗಸಾಗಿದೆ

ಉದಯಕುಮಾರ್ ಈ ಚಿತ್ರದಲ್ಲಿ ವಿಜೃಂಭಿಸಿದ್ದಾರೆ. ಸಾಧುವಿನ ದೃಶ್ಯದಲ್ಲಿ ತುಂಬಾ ಸೊಗಸಾಗಿ ಕಾಣುತ್ತಾರೆ ಉಳಿದಂತೆ ಹರಿಣಿ, ರತ್ನಕರ್, ಬಾಲಕೃಷ್ಣ, ಜಯ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ 

ಹಾಡುಗಳಿಗೆ ಪಿಬಿಶ್ರೀನಿವಾಸ್, ಎಸ್ ಜಾನಕಿ, ಎಲ್ ಆರ್ ಈಶ್ವರಿ, ಜಿಕೆವೆಂಕಟೇಶ್, ಪೀಠಾಪುರಂ ನಾಗೇಶ್ವರರಾವ್ ದನಿ ನೀಡಿದ್ದಾರೆ. 

ರಾಜಕುಮಾರ್ ಅವರ ಚಿತ್ರಗಳ ವಿಶೇಷತೇ ಅವರ ದಣಿವರಿಯದ ಅಭಿನಯ.. 

Sunday, January 7, 2024

ಮನ ತುಂಬಿದ ಅಭಿನಯ.. ಮನಸ್ಸು ತುಂಬುವ ಸಿನಿಮಾ..... ತುಂಬಿದ ಕೊಡ (1964 (ಅಣ್ಣಾವ್ರ ಚಿತ್ರ ೫೨/೨೦೭)

ಎಲ್ಲರ ಮೂದಲಿಕೆ, ಎಲ್ಲರ ತೆಗಳಿಕೆ.. ಎಲ್ಲಾ ಪಾತ್ರಗಳು ವಿರುದ್ಧ ನಿಂತು ಮಾತಾಡುವುದು.. ಸ್ನೇಹಿತ ಎಂದವನು ಕೂಡ ಉಲ್ಟಾ ಮಾತಾಡುವುದು.. ಮನೆಯಲ್ಲಿನ ಸದಸ್ಯರೂ ಕೂಡ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಸತಾಯಿಸುವುದು.. ನದಿಯ ಎರಡು ತೀರದಲ್ಲಿರುವವರು ಭೇಟಿ ಮಾಡಲು ಹೊರಟಾಗ ಸಂಧಿಸಲಾಗದೆ ಮತ್ತೆ ಎರಡು ದಡದ ಅಂಚಿನಲ್ಲಿ ನಿಲ್ಲುವುದು.. ಮತ್ತೆ ಪರಿಸ್ಥಿತಿ ಇನ್ನೇನೂ ಪರಿಹಾರ ಕಂಡುಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ವಿಚಿತ್ರ ಸನ್ನಿವೇಶ ಸೃಷ್ಟಿ.. ಇದೆಲ್ಲಾ ವಿಧಿಯ ಕೈವಾಡ ಎನ್ನುವುದೋ ಅಥವ ಕಾಲನ ಪ್ರಹಾರ ಎನ್ನಬಹುದೋ ಅರಿವಾಗದೇ ಒದ್ದಾಡುತ್ತದೆ ತುಂಬಿದ ಕೊಡ.. ಮೋಸ, ವಂಚನೆ, ದ್ರೋಹ ಇದು ಯಾವುದು ಮನದಲ್ಲಿ ಇಲ್ಲದೆ ಹೋದರೂ, ಈ ವಿಧಿಯ ಆಟ  ಗಂಭೀರವಾದ ಮನವನ್ನೂ ಕೂಡ ತಲ್ಲಣಗೊಳಿಸಿ ಏನು ಮಾಡುವುದು ಎಂಬ ಯೋಚನೆಗೆ ಕಡಿವಾಣ ಹಾಕಿ ಏನೂ ಮಾಡಲಾಗದೆ ಒದ್ದಾಡುವಂತೆ ಮಾಡಿ ಆನಂದಪಡುತ್ತದೆಯಾ ವಿಧಿ ಅನ್ನಿಸುತ್ತೆ. 

ಕನ್ನಡ ಚಿತ್ರಗಳ ಕೊಂಚ ಪರ್ವಕಾಲ ಎನ್ನಬಹುದು, ರಾಜಕುಮಾರ್ ಅವರ ಅನೇಕ ಚಿತ್ರಗಳು ೧೯೬೩ ೧೯೬೪ ರಲ್ಲಿ ಬಿಡುಗಡೆಯಾದವು.  ಪ್ರತಿಚಿತ್ರವೂ ಭಿನ್ನ ವಿಭಿನ್ನ. ಅವರ ಅಭಿನಯ ಸಾಮರ್ಥ್ಯವನ್ನು ಪ್ರಚುರಪಡಿಸುತ್ತಲೇ ಸಾಗುವ ಚಿತ್ರಗಳು.

ಸಂಗೀತದಲ್ಲಿ ಅಪಾರ ಹೆಸರು ಮಾಡಿದ್ದ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ತಮ್ಮ ಮಿತ್ರರ ಜೊತೆಗೂಡಿ ನಿರ್ಮಿಸಿದ ಚಿತ್ರ ಶ್ರೀ ವೆಂಕಟೇಶ ಚಿತ್ರ ಲಾಂಛನದಲ್ಲಿ ತೆರೆಗೆ ಬಂದ ಚಿತ್ರ "ತುಂಬಿದ ಕೊಡ"

ಹಾಸ್ಯಕಲಾವಿದರೂ ಸಾಕಷ್ಟು ಇದ್ದರೂ, ಹಾಸ್ಯಕ್ಕೆ ಅಷ್ಟು ಒತ್ತು ಕೊಡದೆ ಮೂರು ಕುಟುಂಬಗಳ ಸುತ್ತಾ ಹೆಣೆದ ಕಥಾ ಹಂದರವಿರುವ ಚಿತ್ರವಿದು. ನರಸಿಂಹರಾಜು, ಅಶ್ವಥ್ ನಾರಾಯಣ, ಬಾಲಕೃಷ್ಣ, ಬೆಂಗಳೂರು ನಾಗೇಶ್ ಸಾಮಾನ್ಯ ಇರುವ ಚಿತ್ರಗಳು ಹಾಸ್ಯದ ರಸದಲ್ಲಿ ಮಿಂದು ಬರುವ ಚಿತ್ರ. ಆದರೆ ಇಲ್ಲಿ ಹಾಸ್ಯವನ್ನು ಗುಪ್ತಗಾಮಿನಿಯ ಹಾಗೆ ಸಾಗುತ್ತದೆ. 

ಪಾಪಮ್ಮ ಮತ್ತು ಲೀಲಾವತಿ ಅವರ ಬಡ ಕುಟುಂಬ. ತಂದೆಯು ಮಗಳ ಭವಿಷ್ಯಕ್ಕೆ ಮಾಡಿಸಿದ ಇನ್ಶೂರೆನ್ಸ್ ಹಣದಿಂದ, ತನ್ನ ಕನಸು ವೈದ್ಯೆಯಾಗಿ ಬಡ ಜನತೆಗೆ ಉಚಿತ ಚಿಕಿತ್ಸೆ ಮತ್ತು ವೈದ್ಯಕೀಯ ಸೌಲಭ್ಯ ಕೊಡಬೇಕು ಎಂದು ಆಶಾ ಗೋಪುರ ಕಟ್ಟಿಕೊಂಡ ಕುಟುಂಬವಿದು. 


ಬಾಲಕೃಷ್ಣ ತಾನು ಇಂಕಂ ಟ್ಯಾಕ್ಸ್ ಅಧಿಕಾರಿಯಾಗಿದ್ದರೂ, ಲಂಚಕ್ಕೆ ಆಸೆ ಪಡದೆ, ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವ ಕುಟುಂಬದಲ್ಲಿ, ತಾನು ಹಾಕಿದ ಗೆರೆಯನ್ನು ದಾಟದ ಮಗ ರಾಜಕುಮಾರ್ , ಹೇಳಿದಂತೆ ಕೇಳುವ ಮಡದಿ ಜಯಶ್ರೀ ... ತಲೆಹರಟೆಯಾದರೂ ಒಳ್ಳೆಯ ಮನಸ್ಸಿನ ಮಗಳು ಚಿಂದೋಡಿ ಲೀಲಾ ಮತ್ತು ಕೊನೆಯ ಮಗ ತುಂಟ ತರಲೆ. 



ಸಮಾಜಸೇವೆಯೇ ಮುಖ್ಯ ಎನ್ನುವ ಭಾವ ತುಂಬಿದ ಕುಟುಂಬ ಅಶ್ವಥ್ ಅವರದ್ದು. ಸಮಾಜದಲ್ಲಿ ಸಿರಿವಂತನಾಗಿದ್ದರೂ, ಬಡವರಿಗೆ ಅಂತ ಆಸ್ಪತ್ರೆ ಕಟ್ಟಿಸಿ, ಅಗತ್ಯವಾದ ವೈದ್ಯಕೀಯ ನೆರವು ಅಗತ್ಯವಿರುವ ಬಡವರಿಗೆ ಸಿಗುವಂತೆ ಆಗಬೇಕು ಎಂದು ಶ್ರಮಿಸುವ ತಂದೆಯ ಮಾತ್ರ. ಮಗಳು  ಜಯಂತಿಯನ್ನು ನರ್ಸಿಂಗ್ ಕೋರ್ಸ್ ಓದಿಸಿ, ತನ್ನ ಆಸ್ಪತ್ರೆಯಲ್ಲಿಯೇ ಸೇವೆ ಮಾಡಬೇಕೆಂದು ಬಯಸುವ ಅಪ್ಪನ ಪಾತ್ರ


ಈ ಮೂರು ಕುಟುಂಬ ಸುತ್ತಾ ಸಾಗುವ ಕತೆ.  ಬಡತನ ಸಿರಿತನಗಳು ಅಡ್ಡ ಬಂದರೂ ಸಿನೆಮಾದ ಓಘಕ್ಕೆ ತೊಂದರೆ ಮಾಡುವುದಿಲ್ಲ. ಕಾಲೇಜಿನಲ್ಲಿ ಅಕಸ್ಮಾತ್ ಶುರುವಾಗುವ ಜಗಳದಿಂದ ಪ್ರೀತಿ ಶುರುವಾಗುವುದು ರಾಜಕುಮಾರ್ ಮತ್ತು ಲೀಲಾವತಿ ಪಾತ್ರಗಳ ಬೆಳವಣಿಗೆ ನಿಧಾನವಾಗಿ ಚಿತ್ರವನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. 

ರಾಜಕುಮಾರ್ ಅವರ ಹದಭರಿತ ಅಭಿನಯ ಈ ಚಿತ್ರದ ಮುಖ್ಯ ಅಂಶ. ಎಲ್ಲರಿಂದಲೂ  ಮೂದಲಿಕೆ, ಬೈಗುಳ ಇಲ್ಲವೇ ಕೋಪವನ್ನು ಎದುರಿಸುವ ಪಾತ್ರದಲ್ಲಿ ಅಕ್ಷರಶಃ ಕಾಡುತ್ತಾರೆ. ಏನು ಮಾಡುವುದು, ಹೇಗೆ ನಿಭಾಯಿಸುವುದು ಎನ್ನುವ ಗೊಂದಲಗಳ ದೃಶ್ಯದಲ್ಲಿ ನಿಜಕ್ಕೂ ಅವರ ಅಭಿನಯಕ್ಕೆ  ಸರಿಸಾಟಿಯಿಲ್ಲ. ಕ್ಲಿಷ್ಟವಾದ ಪಾತ್ರವಿದು, ಆದರೆ ಅರಿವಾಗೋದಿಲ್ಲ. ಆಗಲೇ ಸುಮಾರು ಐವತ್ತು ಸಿನಿಮಾಗಳನ್ನು ಪೂರೈಸಿದ್ದರೂ ಈ ರೀತಿಯ ಗುಪ್ತಗಾಮಿನಿಯ ಹಾಗೆ ಒದ್ದಾಡುವ ಪಾತ್ರದಲ್ಲಿ ಜೈ ಅನಿಸುತ್ತಾರೆ. 

ಚಿತ್ರದುದ್ದಕ್ಕೂ ಸಾಗುವ ಲೀಲಾವತಿ ಪಾತ್ರ ಮನಸಲ್ಲಿ ಉಳಿಯುತ್ತದೆ. ಆ ಸ್ನಿಗ್ದ ಚೆಲುವು, ಅಭಿನಯ ಇಷ್ಟವಾಗುತ್ತದೆ. 

ಬಾಲಕೃಷ್ಣ ಕರೆಕ್ಟ್ ಕರೆಕ್ಟ್ ಎನ್ನುತ್ತಲೇ ಎಲ್ಲವನ್ನೂ ಕರೆಕ್ಟ್ ಮಾಡಿಕೊಂಡು ಸಾಗುವ, ಸಂಭಾಷಣೆ ಹೇಳುವ ಶೈಲಿ, ಆ ಅಂಗೀಕಾ ಅಭಿನಯ ಇಷ್ಟವಾಗುತ್ತದೆ. 

ಅಶ್ವಥ್ ಗಾಂಭೀರ್ಯ ತುಂಬಿದ ಪಾತ್ರ. ತನ್ನ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯ ಹಣಕ್ಕಾಗಿ ಕೈ ಚಾಚುವಾಗ, ಅವರ ಜೊತೆ ಸಂಯಮದಿಂದ ಮಾತಾಡುವ ಶೈಲಿ ಸೂಪರ್. 

ಸಣ್ಣ ಪಾತ್ರಗಳು ಆದರೆ ಇಷ್ಟವಾಗುವ ಪಾತ್ರಗಳಲ್ಲಿ ಜಯಶ್ರೀ, ಚಿಂದೋಡಿ ಲೀಲಾ, ಪಾಪಮ್ಮ, ನೆರೆಹೊರೆಯಾಕಿ, ಕಮೆಡಿಯನ್ ಗುಗ್ಗು ನರಸಿಂಹರಾಜು, ಅವರ ಸಹಪಾಠಿಗಳು, ಬೆಂಗಳೂರು ನಾಗೇಶ್.. ಎಲ್ಲರೂ ಅಗತ್ಯಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. 




ಈ ಚಿತ್ರದ ಅತ್ಯುತ್ತಮ ಅಂಶ ಎಂದರೆ, ಜಿ ಕೆ ವೆಂಕಟೇಶ್ ಅವರು ನಿರ್ಮಾಪಕರಾಗಿ ಕನ್ನಡತನವನ್ನು ಉಳಿಸುವ ಸಾಹಸ ಮಾಡುವುದು. ಮತ್ತೆ ಚಿತ್ರದ ಕತೆಗೆ ಅಗತ್ಯವಿರುವ ಸನ್ನಿವೇಶದಲ್ಲಿ ಕನ್ನಡದ ಕಾದಂಬರಿ ಸಾರ್ವಭೌಮ ಶ್ರೀ ಅ ನ ಕೃಷ್ಣರಾಯರನ್ನು, ಮತ್ತು ಸುಗಮ ಸಂಗೀತ ಚಕ್ರವರ್ತಿ ಶ್ರೀ ಕಾಳಿಂಗರಾಯರನ್ನು  ತೆರೆಯ ಮೇಲೆ ತೋರಿಸುವುದು. 

ಶ್ರೀ ಅ ನಾ ಕೃ 

ಶ್ರೀ ಕಾಳಿಂಗರಾಯರು 

ಅಪಾರ ಜನಪ್ರಿಯತೆ ಹೊಂದಿರುವ "ಅಂತಿಂಥ ಹೆಣ್ಣು ನೀನಲ್ಲ" ಹಾಡನ್ನು ಶ್ರೀ ಕಾಳಿಂಗರಾಯರಿಂದ ಹಾಡಿಸಿ, ಹಾಗೆಯೇ ಅವರನ್ನು ತೆರೆಯ ಮೇಲೆ ತೋರಿಸುವುದು ವಿಶೇಷ. ಶ್ರೀ ಅ ನ ಕೃ ಅವರ ಮಾತುಗಳು ಇಷ್ಟವಾಗುತ್ತವೆ. 

ಒಟ್ಟಿನಲ್ಲಿ ಒಂದೊಂದು ಸದಭಿರುಚಿಯ ಪಾತ್ರಗಳು ಅದ್ಬುತ ಅಭಿನಯ ನೀಡು ಎನ್ ಸಿ ರಾಜನ್ ಅವರ ನಿರ್ದೇಶನದ ಶ್ರಮವನ್ನು ಸಾರ್ಥಕ ಪಡಿಸಿರುವುದು, ಹಾಗೆಯೇ ಕು ರ ಸೀತಾರಾಮಶಾಸ್ತ್ರಿ ಅವರ ಚಿತ್ರಕತೆ ಸಂಭಾಷಣೆ ಚುರುಕಾಗಿದೆ. ಕವಿಗಳಾದ ಶ್ರೀ ಕೆ ಎಸ್ ನರಸಿಂಹಸ್ವಾಮಿ ಅವರ ಕವನವನ್ನು ಸಂಗೀತಕ್ಕೆ ಅಳವಡಿಸಿರುವುದು, ಜೊತೆಗೆ ಕು ರ ಸೀ ಅವರ ಕೆಲವು ಗೀತೆಗಳು ಈ ಚಿತ್ರದ ಸುಂದರತೆಯನ್ನು ಹೆಚ್ಚಿಸಿರುವುದು ಕಾಣುತ್ತದೆ. ಅಣ್ಣಯ್ಯ ಅವರ ಛಾಯಾಗ್ರಹಣದಲ್ಲಿ ಕ್ಲೋಸ್ ಅಪ್ ಶಾಟ್ಸ್ ಇಷ್ಟವಾಗುತ್ತದೆ. 

ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಮೋತಿ, ಲತಾ, ಜಿ ಕೆ ವೆಂಕಟೇಶ್, ಪದ್ಮ ಮತ್ತು ಕಾಳಿಂಗರಾಯರು ಚಿತ್ರದ ಸಂಗೀತಕ್ಕೆ ವಿಶೇಷ ಮೆರುಗು ನೀಡಿದ್ದಾರೆ. 

ಒಟ್ಟಿನಲ್ಲಿ ಸದಭಿರುಚಿಯ ಚಿತ್ರ ನೋಡಿದ ಖುಷಿ ನನ್ನದು. ಜೊತೆಗೆ ನಿರ್ಧಾರಗಳನ್ನು ತಡಮಾಡದೆ ತೆಗೆದುಕೊಳ್ಳದೆ ಹೋದರೆ ಅದು ನಮ್ಮ ಬದುಕನ್ನು ಬೆಳಗುವ ರೀತಿ, ಹಾಗೆ ಯೋಚಿಸದೆ ತೆಗೆದುಕೊಳ್ಳುವ ನಿರ್ಧಾರಗಳು ಕೆಲವೊಮ್ಮೆ ಪರಿಹಾರಗಳು ಅಂಗೈಯಲ್ಲಿಯೇ ಇದ್ದರೂ, ತಲೆಗೆ ಬಾರದೆ ಒದ್ದಾಡುವಂತೆ ಮಾಡುತ್ತದೆ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ. 

Monday, January 1, 2024

ಸಮಯಮದ ತೂಕ ಅಪಾರವಿರುವ ಸಂತ ತುಕಾರಾಂ (1964 (ಅಣ್ಣಾವ್ರ ಚಿತ್ರ ೫೧/೨೦೭)

ಕೆಲವು  ಬಾರಿ ಅಭಿನಯಿಸುವುದು ಹಾಗಿರಲಿ ಆ ಪಾತ್ರದ  ಬಗ್ಗೆ ಯೋಚಿಸುವುದು ಕೂಡ  ಸವಾಲಿನ ಕೆಲಸ.. ಅತೀ ಸಂಯಮದ ಪಾತ್ರ ಒಂದು ಕಡೆ.. ಅತೀ ಕ್ರೂರತನದ ಪಾತ್ರ ಇನ್ನೊಂದು ಕಡೆ.. ಇದು  ಎರಡೂ ಸವಾಲಿನ ಪಾತ್ರಗಳೇ. ಸತಿ ಶಕ್ತಿ ಚಿತ್ರದಲ್ಲಿ ಈ ರೀತಿಯ ಪಾತ್ರದಲ್ಲಿ ಯಶಸ್ವಿಯಾಗಿದ್ದರು ರಾಜಕುಮಾರ್ ಅವರು. 


ಈ ಚಿತ್ರದ ತುಕಾರಾಂ ಪಾತ್ರವೂ ಹಾಗೆ... ಸಮಾಜದ  ದೃಷ್ಟಿ.. ಪ್ರತಿಭೆಯ ಬಗ್ಗೆ ಅಸೂಯೆ .. ಹೆಸರು ಪ್ರಚಾರ ಸಿಕ್ಕಿದ್ದಿಕ್ಕೆ ಹೊಟ್ಟೆ ಉರಿ, ಇತ್ತ ಸಂಸಾರದಲ್ಲಿ ಹೆಂಡತಿ ಮಕ್ಕಳು ಉಪವಾಸ ಊಟ ಬಟ್ಟೆಗೆ ತೊಂದರೆ, ಹಣಕಾಸಿನ ಮುಗ್ಗಟ್ಟು ಇದರೊಳಗೆ ವಿಠಲನ ಮೇಲಿನ ಭಕ್ತಿಗೆ ಸಿಡಿ ಸಿಡಿ ಎನ್ನುವ ಮಡದಿ.. ಆತನ ಜ್ಞಾನಾರ್ಜನೆಗೆ, ಆತನ ಭಕ್ತಿಯ ಸಮಯಕ್ಕೆ ಅಡ್ಡಿಮಾಡದಿದ್ದರೂ, ಸಂಸಾರದ ಬವಣೆಗೆ ಹತಾಶೆಗೆಟ್ಟು ಸದಾ ವಿಠಲನಿಗೆ ಕಡಪ ಎಂದೋ, ಕಲ್ಲು ಬೊಂಬೆ ಎಂದೋ, ಉಪಯೋಗಕ್ಕೆ ಬಾರದ ನಾಮಸ್ಮರಣೆಯೆಂದೋ ಸದಾ ದೂರುವ ಮಡದಿಯ ಪ್ರತಿಮಾತುಗಳು ಗದಾ ಪ್ರಹಾರವಾದರೂ, ಅದರಿಂದ ವಿಚಲಿತನಾಗದೆ ತನ್ನ ಗುರಿಯತ್ತ ಹೆಜ್ಜೆ ಹಾಕುವ ಪಾತ್ರದಲ್ಲಿ ರಾಜಕುಮಾರ್ ಅವರು ನಿಜಕ್ಕೂಅದ್ಭುತ ಪರಕಾಯ ಪ್ರವೇಶವೇ ಮಾಡಿದ್ದಾರೆ.. ಸಂಯಮದ ಮುಖ, ನಿಧಾನವಾಗಿ ಗಮನಸೆಳೆಯುವಂತೆ ಮಾತಾಡುವ ಶೈಲಿ, ಆ ಭಕ್ತಿ ಪ್ರಧಾನ ಮುಖ ಭಾವ.. ಪ್ರತಿಯೊಂದು ಅದ್ಭುತ. ಈ ಪಾತ್ರ ಮಾಡಲಿಕ್ಕೆ ರಾಜಕುಮಾರ್ ಆಗಿ ಹುಟ್ಟಿದ್ದಾರೇನೋ ಅನಿಸುತ್ತೆ.. ಅವರ ಇದುವರೆಗಿನ ಚಿತ್ರ ಬದುಕಿನಲ್ಲಿ ಇದೊಂದು ವಿಭಿನ್ನ ಪಾತ್ರ.  ಅವರ ಅಭಿನಯ ನಿಜಕ್ಕೂ ಬಹಳ ಪರಿಣಾಮಕಾರಿಯಾಗಿದೆ. ತಲೆಯ ಮೇಲೆ ಪಗಡಿ, ಹಣೆಯಲ್ಲಿ ನಾಮ, ದಪ್ಪ ಮೀಸೆ ಮಂದಹಾಸ, ತಣ್ಣನೆಯ ಮಾತುಗಳು ಅಬ್ಬಬ್ಬಾ ನೈಜತೆ ಎಂದರೆ ಇದೆ ಅನಿಸುವಂತೆ ರಾಜಕುಮಾರ್ ಅವರ ಸಂತ ತುಕಾರಾಮ ಆಗಿದ್ದಾರೆ.. ತಾನು ರಚಿಸಿದ ಕೃತಿಗಳನ್ನು ಸಮಾಜದ ದೋಷಾರೋಪಣೆಯ ಮೇಲೆ ಅನುಭವಿಸಬೇಕಾದ ಶಿಕ್ಷೆಯ ಒಂದು ಭಾಗವಾಗಿ ಆ ಬರಹಗಳನ್ನು ನೀರಿಗೆ ಹಾಕುವಾಗಿನ ಅವರ ತನ್ಮಯತೆ ಅನುಕರಣೀಯ.  


ತುಕಾರಾಂ ಅವರ ಮಡದಿಯ ಪಾತ್ರದಲ್ಲಿ ಸಂಸಾರವನ್ನು ನಿಭಾಯಿಸುತ್ತಾ, ತುಕಾರಾಂ ಧಾನ್ಯಗಳನ್ನು, ಆಹಾರ ಸಾಮಗ್ರಿಯನ್ನು ತರುವ ಆದರೆ ಬಡಬಗ್ಗರಿಗೆ ಹಂಚಿ ಉಳಿದದ್ದನ್ನು ಮನೆಗೆ ತಂದಾಗ ಅಥವ ಮನೆಯಲ್ಲಿದ್ದದ್ದನ್ನು ದಾನ ಮಾಡುವಾಗ ಅವರ ಮನದಾಳದ ಮಾತುಗಳು, ಸಂಸಾರವನ್ನು ನೋಡಿಕೊಳ್ಳಬೇಕಾದ ಮನೆಯೊಡತಿಯ ಭಾವ, ಅಭಿನಯ ಹಾಗೆ ನೈಜತೆಯಿಂದ ಕೂಡಿದೆ. ತನ್ನ ಪತಿ ರಚಿಸಿದ ಸಾಹಿತ್ಯವನ್ನು ನದಿಗೆ ಬಿಡಬೇಕಾಗಿ ಬಂದಿದೆ ಎಂದು ಅರಿವಾದಾಗ, ತಾನು ನಿಮ್ಮ ಭಕ್ತಿಗೆ ಅಡ್ಡಿ ಬರುವುದಿಲ್ಲ, ಕಷ್ಟಪಟ್ಟು, ಮನೆಯ ದೀಪಕ್ಕೆ ಬೇಕಾಗಿದ್ದ ಎಣ್ಣೆಯನ್ನು ಬರೆಯುವಾಗ ಬೇಕಾದ ಬೆಳಕಿಗೆ ಉಪಯೋಗಿಸಿದ್ದಾರೆ ಎಂದು ಕುಪಿತಗೊಳ್ಳದೆ, ಇನ್ನೂ ತಾನು ಈ ವಿಚಾರದ ಬಗ್ಗೆ ಆಕ್ಷೇಪ ಮಾಡೋಲ್ಲ, ನಾನು ನೀವು ಹೇಳಿದಾಗೆಲ್ಲಾ ವಿಠಲ ವಿಠಲ ಎಂದು ಕುಣಿಯುತ್ತೇನೆ ಎಂದು ಕುಣಿಯುವ ಅಭಿನಯ ಇಷ್ಟವಾಗುತ್ತದೆ.  ಕಡೆಯಲ್ಲಿ ನಾ ವೈಕುಂಠಕ್ಕೆ ಹೋಗಿ ಬರುತ್ತೇನೆ, ನಮ್ಮ ಮಕ್ಕಳನ್ನು ಮನೆಯನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿದಾಗ ಅದರ ವಾಸ್ತವತೆ ಅರಿಯದೆ, ಹಾ ಸರಿ ಹೋಗಿ ಬನ್ನಿ ಬೇಗ ಬಂದುಬಿಡಿ.. ಎಂದು ಮತ್ತೆ ಮನೆಗೆ ಹೋಗಿ ತನ್ನ ಮನೆಕೆಲಸದಲ್ಲಿ ತಲ್ಲೀನೆ ಆಗುವ ಅಭಿನಯ ಸೂಪರ್ ಲೀಲಾವತಿಯವರದ್ದು. ಬಡ ಬಡ ಮಾತಾಡುತ್ತ, ಹೊಟ್ಟೆಯಲ್ಲಿ ಏನೂ ಇಟ್ಟುಕೊಳ್ಳದೆ ಪಾತ್ರವಾಗುವ ಪರಿ ಸೂಪರ್ ಎನಿಸುತ್ತದೆ. 

ಪ್ರಮುಖ ಪಾತ್ರಧಾರಿ ತುಕಾರಾಂ ಅವರಿಗೆ ಕೊಡಬಾರದ ಕೋಟಲೆ ಕೊಡುವ ಪಾತ್ರದಲ್ಲಿ ಬಾಲಕೃಷ್ಣ ಅಂಕ ಗಿಟ್ಟಿಸುತ್ತಾರೆ, ತನ್ನ ಉಪಾಯಗಳೆಲ್ಲ ಫಲಕಾಣದಾದಾಗ, ಕಡೆಯಲ್ಲಿ ಧಾರ್ಮಿಕ ಗುರುಗಳ ಬಳಿ ದೂರನ್ನು ಹೇಳಿ ಶಿಕ್ಷಿಸುವಲ್ಲಿ ಯಶಸ್ವಿ ಯಾಗುವ ಮುಂಬಾಜಿ ಪಾತ್ರದಲ್ಲಿ ಬಾಲಕೃಷ್ಣ ತುಂಬಾ ಸೊಗಸಾಗಿ ಅಭಿನಯಿಸಿದ್ದಾರೆ, ಆ ಪಾತ್ರಕ್ಕೆ ಬೇಕಾಗುವ ಕುಠಿಲತೆ, ನಿಷ್ಟೂರತೆ, ತನ್ನ ಬೆಳವಣಿಗೆ ಅಷ್ಟೇ ಮುಖ್ಯ ಎನಿಸುವ ಸ್ವಾರ್ಥತೆ ಎಲ್ಲವನ್ನೂ ಕಲಸಿ ಕುಡಿದಿದ್ದಾರೆ ಈ ಪಾತ್ರದಲ್ಲಿ.. 

ಸಣ್ಣ ಪಾತ್ರದಲ್ಲಿ  ಬರುವ ಅಶ್ವಥ್ಅ ಅವರು ಧಾರ್ಮಿಕ ಗುರುಗಳ ಪಾತ್ರದಲ್ಲಿ ಸುಂದರ ಅಭಿನಯ. ಭಾಷಾ ಶುದ್ಧತೆ , ಅಭಿನಯ , ಮುಖ ಭಾವ ಸೊಗಸಾಗಿದೆ, 




ಉಳಿದ ಪಾತ್ರಗಳಲ್ಲಿ ಬಾಲಕೃಷ್ಣ ಅವರ ಶಿಷ್ಯರ ಪಾತ್ರದಲ್ಲಿ ವಾದಿರಾಜ್ ಮತ್ತು ಶಿವಶಂಕರ್ ನಗೆಯುಕ್ಕಿಸುತ್ತಾರೆ.


ಛತ್ರಪತಿ ಶಿವಾಜಿ ಪಾತ್ರದಲ್ಲಿ ಉದಯಕುಮಾರ್, ಮತ್ತು ಆತನ ಪತ್ನಿಯ ಪಾತ್ರದಲ್ಲಿ ಪಂಡರೀಭಾಯಿ ಅವರ ಪುಟ್ಟ ಪಾತ್ರಗಳಾದರೂ, ಅಭಿನಯ ಕಳೆಗಟ್ಟಿದೆ, 





ಚಿ ಸದಾಶಿವಯ್ಯ ಅವರ ಹಾಡುಗಳಿಗೆ ವಿಜಯಭಾಸ್ಕರ್ ಸಂಗೀತ ನೀಡಿದ್ದಾರೆ. ಸಂಭಾಷಣೆ ಚಿ ಉದಯಶಂಕರ್ ಅವರದ್ದು ಛಾಯಾಗ್ರಹಣ ಡಿ ವಿ ರಾಜಾರಾಮ್ ಅವರದ್ದು, 

ಬಿ ರಾಧಾಕೃಷ್ಣ ಅವಸರು ಶ್ರೀ ಗಣೇಶ ಪ್ರಸಾದ್ ಮೂವೀಸ್ ಲಾಂಛನದಲ್ಲಿ ನಿರ್ಮಾಣ ಪಾಡಿದ ಚಿತ್ರವನ್ನು ಸುಂದರರಾವ್ ನಾಡಕರ್ಣಿ ಉಪಯೋಚಿತವಾಗಿ ತೆರೆಗೆ ತಂದಿದ್ದಾರೆ. 

ಭಕ್ತಿ ಮುಕ್ತಿ ಸಂಭಾಷಣೆ ಹಾಡುಗಳು ತುಂಬಿರುವ ಈ ಚಿತ್ರದ ಹಾಡುಗಳ ಗಾಯಕರು ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಎಲ್ ಆರ್ ಈಶ್ವರಿ, ಪೀಠಾಪುರಂ, ಬಿ ರಾಮದಾಸ್, ಮತ್ತು ಭೋಜರಾವ್ ಅವರುಗಳು ಭಕ್ತಿಪೂರಿತವಾಗಿ ಹಾಡಿದ್ದಾರೆ.