Sunday, June 5, 2016

ಪುಟ್ಟಣ್ಣ ಕಣಗಾಲ್ - ಇಲ್ಲದ ೩೧ ಸಂವತ್ಸರಗಳು - 2016

ಮಾಂತ್ರಿಕತೆ ಎಂದರೆ ಏನು.. ಮೈದಾಸ ಟಚ್ ಅಂದರೆ ಏನು.. ಹೀಗೆಲ್ಲಾ ಶಾಲಾ ದಿನಗಳಲ್ಲಿ ಅದು ಬಾಲ್ಯದ ದಿನಗಳಲ್ಲಿ ಮನದಲ್ಲಿ ಏಳುತ್ತಿದ್ದ ಪ್ರಶ್ನೆಗಳು. 

ಉತ್ತರ ಅಸ್ಪಷ್ಟವಾಗಿ ಅಲ್ಲಿ ಇಲ್ಲಿ ಸಿಕ್ಕಿದ್ದರೂ, ಒಂದು ಪರಿಪೂರ್ಣ ಉತ್ತರ ಸಿಗುವುದಕ್ಕೆ ಕಷ್ಟವಾಗಿತ್ತು. ಕನ್ನಡ ಹಳೆಯ ಚಿತ್ರಗಳು ನೋಡಿದಾಗ, ಟಂಗ್ ಅಂತಾ ಮಾಯಾ ಆಗೋದು, ಮತ್ತೆ ದಿಡೀರ್ ಪ್ರತ್ಯಕ್ಷ ಆಗೋದು ಇವೆನ್ನೆಲ್ಲಾ ಮ್ಯಾಜಿಕ್ ಅಥವಾ ಮಾಂತ್ರಿಕತೆ ಎಂದು ತಿಳಿದಿದ್ದ ದಿನಗಳು. ಹಾಗೆಯೇ ಒಂದು ಮಂತ್ರ ದಂಡದಲ್ಲಿ ಮುಟ್ಟಿದ ತಕ್ಷಣ ಮನುಷ್ಯ ಪಾರಿವಾಳ, ಕಲ್ಲು ಇಲ್ಲವೇ ಬೂದಿಯಾಗೋದು ಅಥವಾ ಮುಟ್ಟಿದ್ದು ಚಿನ್ನವಾಗೋದು ಇವೆನ್ನೆಲ್ಲ ನೋಡಿ ನೋಡಿ ಇದೆ ಮೈದಾಸ್ ಟಚ್ ಇರಬಹುದು ಎಂದುಕೊಂಡಿದ್ದು ಉಂಟು. 

ಆದರೆ ಕಾಲವನ್ನು ತಡೆದೋರು ಯಾರೂ ಇಲ್ಲಾ ಹಾಗೆಯೇ ಬರುವಂಥಹ ಜ್ಞಾನವನ್ನು ಅಡ್ಡಗಟ್ಟಿದವರು ಯಾರೂ ಇಲ್ಲ ಅಲ್ಲವೇ.. 

ಚಲನ ಚಿತ್ರ ನೋಡಿ ನೋಡಿ, ಅದರೊಳಗಿನ ಸಂದೇಶಗಳನ್ನೂ ನೀತಿ ಪಾಠಗಳನ್ನೂ ಕಲಿಯುತ್ತಾ, ಪುಸ್ತಕ ಕೊಡುತ್ತಿದ್ದ ಜ್ಞಾನಕ್ಕೆ ಸೆಡ್ಡು ಹೊಡೆದು ಈ ದೃಶ್ಯ ಮಾಧ್ಯಮ ನೀಡುತ್ತಿದ್ದ ಜ್ಞಾನಕ್ಕೆ ಶರಣಾದ  ಆ ಪರ್ವಕಾಲದಲ್ಲಿ ಸಿಕ್ಕಿದ್ದು ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಮತ್ತು ಅನೇಕ ಉತ್ತಮ ಕನ್ನಡ ಚಿತ್ರಗಳು. 

ಇಂದು ನಾ ಯೋಚಿಸುವ ಪರಿ, ಜೀವನವನ್ನು ನೋಡುವ ಪರಿ ಏನಾದರೂ ಅರ್ಥ ಕೊಡಬೇಕೆಂದರೆ ಅಥವಾ ಅದನ್ನು ವಿವರಿಸಬೇಕೆಂದರೆ ಅದಕ್ಕೆ ಮೂಲ ಪ್ರೇರಕಗಳು ಚಲನಚಿತ್ರಗಳು. 

ಹಾಗಾಗಿಯೇ ಈ ಬ್ಲಾಗ್ ಮತ್ತು ಬ್ಲಾಗ್ ನಲ್ಲಿ ಮೂಡುವ ಲೇಖನಗಳು. 

ಪುಟ್ಟಣ್ಣ ಕಣಗಾಲ್ ಈ ಚಿತ್ರ ಜಗತ್ತನ್ನು ಅಗಲಿ ೩೧ ಸಂವತ್ಸರಗಳು ಕಳೆದವು.  ಆದರೆ ಇಂದಿಗೂ ನಿರ್ದೇಶಕ ಎನ್ನುವ ಮಾತು ಈ ಭಾರತೀಯ ಚಿತ್ರರಂಗದಲ್ಲಿ ಬಂದಾಗ, ಕರುನಾಡಿನ ಈ ನಿರ್ದೇಶಕನ ಹೆಸರು ಆ ಪಟ್ಟಿಯಲ್ಲಿ ಇದ್ದೆ ಇರುತ್ತದೆ. ಅಂಥಹ ಅದ್ಭುತ ನಿರ್ದೇಶಕ, ತಾಂತ್ರಿಕ ಹಾಗೂ ತನ್ನ ಮನದಲ್ಲಿ ಇದ್ದಂತೆ ಚಿತ್ರ ಬರಬೇಕು ಎಂದು ಯಾವ ಮುಲಾಜಿಗೂ ಜಗ್ಗದೆ, ಚಿತ್ರಗಳನ್ನು ಕೊಡುತ್ತಿದ್ದ ಪ್ರತಿಭಾವಂತ. 

ಅವರ ನಿರ್ದೇಶನದಲ್ಲಿ ಮೂಡಿ ಬಂದ ಅಷ್ಟೂ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನ, ಒಂದು ಚಿತ್ರದ ವಿಷಯ ಇನ್ನೊಂದರಲ್ಲಿ ಬರುತ್ತಿರಲಿಲ್ಲ. ಹಾಗೆಯೇ ಕರುನಾಡಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಿಸಿ, ಒಂದು ರೀತಿಯಲ್ಲಿ ಪ್ರವಾಸ ಉದ್ಯಮಕ್ಕೂ ನೆರವಾಗಿದ್ದು ಅವರ ಚಿತ್ರಗಳು ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ. 

ಈ ಕೆಳಗಿನ ಎಲ್ಲಾ ಚಿತ್ರಗಳನ್ನು ನೋಡಿ, ನನಗೆ ಈ ಚಿತ್ರಗಳು ತಾಕಿದ ಬಗೆ ಒಂದಷ್ಟು ಅಕ್ಷರಗಳಲ್ಲಿ ನನ್ನ ಅಭಿಪ್ರಾಯ ಬರೆದಿದ್ದೇನೆ. ಇದು ಕಾಣದ ಗುರುಗಳ ಸ್ಥಾನದಲ್ಲಿ ಕೂತಿರುವ ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಶ್ರದ್ಧಾಂಜಲಿ ಮತ್ತು ಗೌರವ ಪೂರ್ವಕ ನುಡಿ ನಮನಗಳು. 
ಸಾವಿರ ಮೆಟ್ಟಿಲು (2006) 

ಪೂಜ್ಯ ಗುರುಗಳೇ ನಿಮ್ಮ ಚಿತ್ರಗಳು ಸದಾ ನಮ್ಮ ಮನದಲ್ಲಿ ಜೀವಂತ. ನೀವು ಕರುನಾಡಿಗೆ ಮತ್ತು ಚಿತ್ರ ಜಗತ್ತಿಗೆ ಇತ್ತ ಅಷ್ಟೂ ಚಿತ್ರಗಳು ಮಾಣಿಕ್ಯವೇ. ಪ್ರತಿ ಚಿತ್ರವೂ ಕಲಿಕೆ ಒಂದು ವಿಶ್ವವಿದ್ಯಾಲಯದ ಪಾಠಗಳಿದ್ದಂತೆ.  ನಿಮ್ಮ ಚಿತ್ರಗಳಿಂದ ಕಲಿತಿದ್ದು ಕಲಿಯಬೇಕಿದ್ದು ಬೇಕಾದಷ್ಟು ಇವೆ.

ನಿಮ್ಮದೇ ಚಿತ್ರಗಳಿಂದ ನಿಮಗೆ ನುಡಿ ನಮನಗಳು.. ಈ ಚಿತ್ರಗಳನ್ನು ನೀಡಿದ ನಿಮಗೆ ಮತ್ತು ನಿಮ್ಮ ಪ್ರತಿಭೆಗೆ ಒಂದು ಸಲಾಂ. 

ಮನಸ್ಸಿನ ಬಣ್ಣ ಮತ್ತು ಅದರ ಅನಾವರಣ - ಗೋಧಿ ಬಣ್ಣ ಸಾಧಾರಣ ಮೈಕಟ್ಟು (2016)

ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್ ಒಂದು ಸಂದರ್ಶನದಲ್ಲಿ ಹೇಳಿದ್ದರು.. "ಒಂದು ಚಿತ್ರ ಹಾಗೆಯೇ ಜನರ ಮನಸ್ಸನ್ನು ಸೆಳೆಯಬೇಕು.. ನಾನು ಒಂದು ಚಿತ್ರವನ್ನು ಮಾಡಿ ಥಿಯೇಟರ್ ಬಾಗಿಲ ಬಳಿ ನಿಲ್ಲುತ್ತೇನೆ.. ಎದೆಉಬ್ಬಿಸಿಕೊಂಡು.. ಇದು ನಾ ಮಾಡಿದ ಚಿತ್ರ.." ಇದು ಒಬ್ಬ ಚಿತ್ರ ತಯಾರಕರಿಗೆ  ಇರಬೇಕಾದ ಆತ್ಮವಿಶ್ವಾಸದ ಮಾತುಗಳು...

ನಾ ಚಿತ್ರ ನೋಡಬೇಕೆಂದರೆ ಅದು ಸಹಜವಾಗಿ ಕುತೂಹಲ ಬೆಳೆಸಬೇಕು.. ನಾ ನೋಡಲೇ ಬೇಕು ಎಂದು ಅನ್ನಿಸುವ ಚಿತ್ರಗಳನ್ನು ಮಾತ್ರ ನಾ ನೋಡುತ್ತೇನೆ.

"ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಎಂಭತ್ತರ ದೂರದರ್ಶನ ಜಮಾನ ಹಾಗೂ ವಿವಿಧ ಭಾರತಿ ಆಕಾಶವಾಣಿ ಕೇಂದ್ರದ ವಾಣಿಜ್ಯ  ವಿಭಾಗ..  ಈ ಎರಡು ಅದ್ಭುತ ಮಾಧ್ಯಮಗಳಲ್ಲಿ ಪ್ರತಿ ದಿನವೂ ಕೇಳುತ್ತಿದ್ದ ಮಾತುಗಳು... ಸಹಜವಾಗಿಯೇ ಚಿತ್ರದ ಹೆಸರು, ಮತ್ತು ಚಿತ್ರದ ಮುಖ್ಯ ಪಾತ್ರಧಾರಿ ಇಬ್ಬರೂ ಮನಸ್ಸನ್ನು ಸೆಳೆದರು ಈ ಚಿತ್ರವನ್ನು ನೋಡಲಿಕ್ಕೆ.
ಚಿತ್ರ ಕೃಪೆ - ಗೂಗಲ್ 

ನನ್ನ ಅನಿಸಿಕೆ ಪ್ರಪಂಚದಲ್ಲಿ ಈ ನಟನನ್ನು ಅನುಕರಿಸಲು ಸಾಧ್ಯವೇ ಇಲ್ಲ ಅಥವಾ ಅನುಕರಿಸಿದವರನ್ನು ನೋಡಿಯೇ ಇಲ್ಲ. ಅನಂತ್ ನಾಗ್ ಅಂಥಹ ವರ ಪಡೆದ ನಟ.

ಚಿತ್ರ ಶುರುವಾಯಿತು.. ಬಿಂದುವಾಗಿ ಶುರುವಾದ ಅವರ ಪಾತ್ರ, ನೀರಿನಲ್ಲಿ ಒಂದು ಸಣ್ಣ ಕಲ್ಲು ಉಂಗುರಗಳನ್ನು ಸೃಷ್ಟಿಸಿ, ಅದು ಹಿಗ್ಗುತ್ತಾ ಹಿಗ್ಗುತ್ತಾ ಹೋಗುವಂತೆ, ಇಡಿ ಚಿತ್ರದ ತುಂಬಾ ಆವರಿಸಿಕೊಳ್ಳುತ್ತಾರೆ.  ಅವರ ಅಭಿನಯ ನೀರಿನಂತೆ, ಯಾವುದೇ ಪಾತ್ರೆಗೆ ಹೋದರು ಅದಕ್ಕೆ ಒಗ್ಗಿಕೊಳ್ಳುವಂತೆ, ಈ ಪಾತ್ರ ಅವರಿಗಾಗಿಯೇ ಮಾಡಿದ್ದು ಅನ್ನಿಸಿಬಿಡುತ್ತದೆ ಮೊದಲ ದೃಶ್ಯದಲ್ಲಿಯೇ.

ಮುಖದಲ್ಲಿ ಅಭಿನಯ, ಆಂಗೀಕ ಅಭಿನಯ, ಆ ಮುಗ್ಧತೆ, ಕಣ್ಣುಗಳಲ್ಲೇ ಕಾಡುವ ಸಂಭಾಷಣೆ, ಮಾತುಗಳು ಕೆಲವೇ ಇದ್ದರೂ ಅದನ್ನು ಹೇಳುವಾಗ, ಆ ರೋಗದ ಲಕ್ಷಣ ಇರುವ ವ್ಯಕ್ತಿ ಯಾವ ರೀತಿಯಲ್ಲಿ ಮಾತಾಡಬಹುದೋ ಅದೇ ರೀತಿಯಲ್ಲಿನ ಸಂಭಾಷಣಾ ವೈಖರಿ ಇಷ್ಟವಾಗುತ್ತದೆ, ತೊದಲು ತೊದಲು ಮಾತಾಡುವಾಗ ಬಾಯಿಯನ್ನು ದಪ್ಪಗೆ ಮಾತಾಡಿಕೊಂಡು ಮಾತಾಡುವ ಪ್ರಯತ್ನ. ಅದ್ಭುತ

ಇಡಿ ಚಿತ್ರ ಶಿವ ಪಾತ್ರಧಾರಿ ಹೇಳುವ ಒಂದು ಸಂಭಾಷಣೆಯ ಮೇಲೆ ನಿಂತಿದೆ ಅನ್ನಿಸಿತು
"ಅಣ್ಣನಿಗೆ ಮರೆವಿನ ರೋಗ ಬಂದಿದೆ.. ಆದರೆ ಮರೆತು ಹೋಗಿದ್ದು ನಾನು"

ಕರುನಾಡಿನ ಕೆಲವು ಪ್ರದೇಶಗಳಲ್ಲಿ ಅಪ್ಪನನ್ನು "ಅಣ್ಣ" ಎಂದು ಕರೆಯುವುದು. ಈ ಚಿತ್ರ ಮೊದಲು ನನಗೆ ತಾಕಿದ್ದು ಅಲ್ಲಿಂದ.. ಯಾಕೆಂದರೆ ನಾನು ಕೂಡ ಅಪ್ಪನನ್ನು ಅಣ್ಣಾ ಎಂದೇ ಕರೆಯುವುದು.

ಅನಂತ್ ನಾಗ್ ಅವರು ವೆಂಕೋಬ ರಾವ್ ಆಗಿಬಿಟ್ಟಿದ್ದಾರೆ.

"ಎಲ್ಲರ ಮನಸ್ಸಲ್ಲಿಯೂ ಎರಡು ಜಾತಿಯ ನಾಯಿಗಳು ಇರುತ್ತವೆ, ಸುಳ್ಳು, ದ್ವೇಷ, ಮೋಸ ಎನ್ನುವ ಕರಿ ನಾಯಿ ಮತ್ತು ಸತ್ಯ, ಶಾಂತಿ, ನೆಮ್ಮದಿ  ಎನ್ನುವ ಬಿಳಿ ನಾಯಿ. ಎರಡಕ್ಕೂ ಯಾವಾಗಲೂ ಜಗಳ ನಡೆಯುತ್ತಲೇ ಇರುತ್ತದೆ.. ಯಾವುದಕ್ಕೆ ಹೆಚ್ಚು ಬಿಸ್ಕತ್ತು ಹಾಕುತ್ತೇವೆಯೋ ಅದು ಗೆಲ್ಲುತ್ತದೆ"

ಈ ಸಂಭಾಷಣೆ ಹೇಳುವಾಗ ಅವರ ಮನಸ್ಸಿನ ಶಾಂತತೆ, ಮುಗ್ಧತೆ ಮತ್ತು ಮುಖಾಭಿನಯ ವಾಹ್ ಎನ್ನಿಸಿತು.

ಮನುಜ ಪ್ರಾಣಿಗಳಿಗಿಂತ ಭಿನ್ನ ಏಕೆಂದರೆ .. ಅವನು ಕಿವಿಯ ಮೂಲಕ ಮೆದುಳಿಗೆ ಹೋಗಿ ಅಲ್ಲಿಂದ ಹೃದಯದಲ್ಲಿ
ತೂರಿಬರುವ ಪದಗಳೆಂಬ ಶಬ್ಧಗಳನ್ನು ಅಲ್ಲಿಯೇ ಮಂಥನ ನಡೆಸಿ ನಂತರ ಒಂದು ನಿರ್ಧಾರಕ್ಕೆ ಬರುತ್ತಾನೆ.

ಈ ಸಂಭಾಷಣೆಗೆ ನನಗೆ ಅರಿವಿಲ್ಲದೆ ಜೋರಾಗಿ ಚಪ್ಪಾಳೆ ತಟ್ಟಿ ಬಿಟ್ಟೆ.. ಪ್ರಾಯಶಃ ಚಲನಚಿತ್ರ ಒಂದು ರೀಲ್ ಮಾಧ್ಯಮ, ಅಲ್ಲಿ ತೋರಿಸಿವುದು ಹುಸಿ ಎಂದು ಅರಿವಿದ್ದರೂ, ಆ ಪಾತ್ರದೊಳಗೆ ನಮ್ಮನ್ನು ಕರೆದೊಯ್ಯುವ ಮಾತುಗಳು, ಅಭಿನಯಗಳು ಈಚಿನ ಚಿತ್ರಗಳಲ್ಲಿ ಬಲು ದುರ್ಲಭ... ಅಂಥಹ ಅವಕಾಶ ಸಿಕ್ಕಿತು.

ಇಡಿ ಚಿತ್ರದೊಳಗೆ ಅನಂತನಾಗ್ ಸರ್ ಜೊತೆಯಲ್ಲಿ ನಾನೂ ನಿಂತಿದ್ದೆನೇನೋ ಅನ್ನುವಷ್ಟು ಮನಸ್ಸಿನ ಆಳಕ್ಕೆ ಇಳಿಯಿತು ಈ ಚಿತ್ರ.

ತನ್ನ ಮತ್ತು ತನ್ನ ಹೆಂಡತಿಯ ಪ್ರೀತಿಯ ಘಟನೆಯನ್ನು ಹೇಳುವಾಗ ಅವರ ಮುಖದ ಭಾವಗಳು ಮುಗ್ಧತೆ, ಪ್ರೀತಿ, ಸಂತೋಷ, ಕೋಪ, ಮತ್ತು ಗೆದ್ದೇ ಎಂಬ ಹೆಮ್ಮೆ ಎಲ್ಲವನ್ನು ಆ ಎರಡು ಮೂರು ನಿಮಿಷಗಳ ಸಂಭಾಷಣೆಯಲ್ಲಿ ವಿವರಿಸುವಾಗ ಥೀಯೇಟರ್ ನಲ್ಲಿ ಶಿಳ್ಳೆಗಳ ಮೊರೆತ. ಸೂಪರ್ ಸೂಪರ್.

ಅನಂತ್ ನಾಗ್ ಸರ್ ಅವರ ಜಾದೂವಿನನಂಥಹ ಅಭಿನಯದ ಜೊತೆಯಲ್ಲಿ ಇನ್ನೊಬ್ಬ ಪಾತ್ರಧಾರಿ ಗಮನ ಸೆಳೆಯುತ್ತಾರೆ.
ಶ್ರುತಿ ಹರಿಹರನ್ "ಸಹನಾ" ಪಾತ್ರದಲ್ಲಿ. ಮುದ್ದು ಮುಖ, ನೀಳ ನಾಸಿಕ, ಪುಟಾಣಿ ಬಿಂದಿ, ಹೊಳೆಯುವ ಕಣ್ಣುಗಳು.. ಮಾತಿನಲ್ಲಿನ ನಿಖರತೆ.. ಇದರ ಜೊತೆಯಲ್ಲಿ "ವೆಂಕೋಬ ರಾವ್" ಪಾತ್ರದ ಬಗ್ಗೆ ಅವರು ತೋರುವ ಕಾಳಜಿ.. ಕೋಪಗೊಂಡರೂ, ಶಾಂತತೆಯಿಂದ ಉತ್ತರ ಕೊಡುವ ಶೈಲಿ, ಅರೆ ನೆರೆ ಮನೆ ಹುಡುಗಿ ಎನ್ನುವ ಮಾತು ಇಂಥಹ ಪಾತ್ರಗಳಿಂದಲೇ ಹುಟ್ಟಿತೋ ಏನೋ ಅನಿಸುತ್ತದೆ. ಸರಳ ಅಭಿನಯ ಈ ಹುಡುಗಿಯದು.

ಚಿತ್ರ ಕೃಪೆ - ಗೂಗಲ್ 

ಹಾಲಿನ ಕೆನೆ ಪದರ ತುಸು ಗಟ್ಟಿ, ಮತ್ತು ತುಸು ಒರಟು ಎನಿಸಿದರೂ, ಆ ಕೆನೆಯನ್ನು ಕೊಂಚ ತಳ್ಳಿದರೆ ಸ್ವಾಧಿಷ್ಟ ಹಾಲು ಸಿಗುತ್ತದೆ. ಅಚ್ಯುತ್ ಕುಮಾರ್ ಅವರ ಪಾತ್ರವೂ ಹಾಗೆ. ತೆರೆಯ ಬಂದ ಕೂಡಲೇ ಮ್ಯಾಜಿಕ್ ಶುರುವಾಗುತ್ತದೆ. ಭರ ಭರ ಮಾತು, ತಡಬಡಾಯಿಸುತ್ತಾ, ನಗುವ, ಕೋಪ ತೋರಿಸುವ, ಪ್ರೀತಿ ತೋರಿಸುವ ಪಾತ್ರದಲ್ಲಿ ಎರಕ ಹುಯ್ದಂತೆ ನಿಲ್ಲುತ್ತಾರೆ.
"ಸಿಗರೆಟ್ ಎರಡು.. ಬೇಡ ಅಂದ್ರೆ ಬಿಡಿ ಸರ್" ಎಂದು ತಣ್ಣಗೆ ಹೇಳುವ ಮಾತು ಅವರ ಅಭಿನಯದ ಶಕ್ತಿಯನ್ನು ಸಾರಿ ಸಾರಿ ಹೇಳುತ್ತದೆ.
ಚಿತ್ರ ಕೃಪೆ - ಗೂಗಲ್ 

ಅರುಣ ಮೇಡಂ.. ಮಧ್ಯಮ ವರ್ಗದ ಗೃಹಿಣಿಯ ತಳಮಳವನ್ನು ಅನಾಮತ್ತಾಗಿ ತಂದಿಡುತ್ತಾರೆ. "ಮೊದಲು ಅಲ್ಲಿ ಹೋಗಿ ಹೇಳಿ, ಅಯ್ಯೋ ರಾಮ ರಾಮ" ಎನ್ನುವಾಗ ಅಯ್ಯೋ ಅನಿಸುತ್ತದೆ. ಸಹಜವಾಗಿ ಮಾತಾಡುತ್ತಲೇ ಹೃದಯದ ಭಾವವನ್ನು ಸೂಸುವ ಅಭಿನಯ ಇಷ್ಟವಾಗುತ್ತದೆ.

ಗುಪ್ತಗಾಮಿನಿಯಂತೆ ಹರಿದಿರುವ ಪಾತ್ರ ರಕ್ಷಿತ್ ಶೆಟ್ಟಿ ಅವರದು. ಸುಲಭವಾಗಿ ಅಭಿನಯ ನೀಡುತ್ತಾ, ತನ್ನ ಅಣ್ಣ (ತಂದೆಯ) ಬಗ್ಗೆ ಹೇಳುವಾಗ ಮೊಗದಲ್ಲಿ ತೋರುವ ಭಾವನೆ ಆಪ್ತವೆನಿಸುತ್ತದೆ. "ರೋಗಬಂದಿದ್ದು ಅಣ್ಣನಿಗೆ ಆದರೆ ನಾನೇ ಮರೆತು ಬಿಟ್ಟೆ" ಈ ಮಾತುಗಳು ಅವರು ಬರಿ ಬಾಯಿಂದ ಹೇಳುವುದಿಲ್ಲ ಹೃದಯದ ಬಡಿತ ಆ  ಮಾತುಗಳನ್ನು ಹೊರ ಹಾಕುತ್ತದೆ. ಕೋಪಗೊಳ್ಳುವುದು, ಶಾಂತತೆ, ಮತ್ತೆ ಸಿಡಿಮಿಡಿಗೊಳ್ಳುವುದು, ನಿಧಾನಕ್ಕೆ ಮರಳಿ ಬರುವುದು.. ಮತ್ತು " ಅಣ್ಣ" ಎನ್ನುವಾಗ ಅವರ ಧ್ವನಿ ಇಷ್ಟವಾಗುತ್ತದೆ (ಈಚಿನ ಚಿತ್ರಗಳಲ್ಲಿ ಅಪ್ಪನಿಗೆ "ಅಣ್ಣ" ಎನ್ನುವ ಮಾತೆ ಬಂದಿಲ್ಲ.. .) ಬಾಲ್ಯದ ನೆನಪನ್ನು ಹಂಚಿಕೊಳ್ಳುವಾಗ ಅವರ ಮುಗ್ಧತೆ ಪೂರ್ಣ ಅಂಕಗಳು ಸಿಗುತ್ತವೆ.
ಚಿತ್ರ ಕೃಪೆ - ಗೂಗಲ್ 
ಇನ್ನೂ ಪುಟ್ಟ ಪುಟ್ಟ ಪಾತ್ರಗಳಲ್ಲಿ ಬರುವ ತ್ರಿವೇಣಿ, ದತ್ತಾತ್ರೇಯ, ಮತ್ತು ಇಬ್ಬರು ಅಭ್ಯಾಗತರು ಒಬ್ಬರು ರಂಗಣ್ಣನ ಪಾತ್ರಧಾರಿ ವಸಿಷ್ಠ - ಎಂಥಹ ಅದ್ಭುತ ಧ್ವನಿ,  ಕಂಡರೂ ಕಾಣದ ಪುಟ್ಟ ನಗೆ, ಕಣ್ಣಲ್ಲಿ ಕ್ರೌರ್ಯ ಸೂಸುತ್ತಲೇ, ತುಸು ತುಸುವೇ ಮಾತಾಡುವ ಪಾತ್ರ..  ಸೂಪರ್ ಸೂಪರ್.. , ಇನ್ನೊಬ್ಬ ತುಂಟತನದಿಂದಲೇ ಇಷ್ಟವಾಗುವ ಮಂಜಣ್ಣ ಪಾತ್ರ ಎಲ್ಲರೂ ಇಷ್ಟವಾಗುತ್ತಾರೆ.

"ಸಚಿನ್ ಆಟ ನಿಲ್ಲಿಸಿದ ಮೇಲೆ ನೀವಿಬ್ಬರೂ ಹೇಗೆ ಇರುತ್ತೀರೋ, ಏನು ಮಾತಾಡುತ್ತೀರೋ" ಒಂದು ಮನೆಯ ವಾತಾವರಣ ಹೇಗೆ ಇರುತ್ತದೆ.. ಮನಸ್ಸುಗಳ ನಡುವೆ ಹೇಗೆ ಸೇತುವೆ ಬದಲು ಗೋಡೆ ಏಳುತ್ತದೆ ಎನ್ನುವುದನ್ನು ತೀಕ್ಷ್ಣವಾಗಿ ಹೇಳುತ್ತದೆ ದೃಶ್ಯ ಮತ್ತು ಮಾತು.

ಇದು ನಿಜವಾಗಿಯೂ ಒಬ್ಬ ಹಿರಿಯ ನಾಗರೀಕನ ಬಗೆಗಿನ ಚಿತ್ರ ಎಂದು ಮೇಲ್ನೋಟಕ್ಕೆ ಅನಿಸಿದರೂ, ಪ್ರತಿಯೊಬ್ಬರ ಅಂತರಂಗವನ್ನು ಬಡಿದು, ಬಡಿದು ಹಳೆಯ ನೆನಪುಗಳನ್ನು,   ಹಣ್ಣೆಲೆಗಳನ್ನು ತಾವಾಗಿಯೇ ಉದುರಿ ಹೋಗುವ ತನಕ ಜತನ ಕಾಪಾಡಿಕೊಳ್ಳಬೇಕು ಎನ್ನುತ್ತಲೇ.. ಆಧುನಿಕ ಯುಗದಲ್ಲಿಯೂ, ಈ ಯಂತ್ರ ಯುಗದಲ್ಲಿಯೂ ಕೂಡ ಮಾನವನ ಭಾವ ಸೆಲೆ ಇಂಗುವುದಿಲ್ಲ, ಮತ್ತು ಇಂಗುವುದಕ್ಕೆ ಸಾಧ್ಯವೇ ಇಲ್ಲ.. ಅದಕ್ಕೆ ಬೇಕಾಗಿರುವುದು ಕಣ್ಣಿನ ಮತ್ತು ಮನಸ್ಸಿನ ಮೇಲೆ ಬಿದ್ದಿರುವ ತುಸು ಧೂಳನ್ನು ಕೊಡವಿಕೊಳ್ಳುವ ಮಾರ್ಗ. ಅಷ್ಟೇ ಎಂದು ನವಿರಾಗಿ ತೋರಿಸುವ ಉತ್ತಮ ಪ್ರಯತ್ನ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ.

ಈ ಚಿತ್ರ ಕಾಡುತ್ತದೆ.. ಆವರಿಸಿಕೊಳ್ಳುತ್ತದೆ.. ಮತ್ತು ನಮ್ಮೊಳಗೇ ಮಂಥನ ನಡೆಸುತ್ತದೆ.

ಇಡಿ ಚಿತ್ರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತಾಂತ್ರಿಕತೆ, ಛಾಯಚಿತ್ರಣ, ಹಿನ್ನೆಲೆ ಸಂಗೀತ, ಸಂಭಾಷಣೆ ಎಲ್ಲವೂ ಹಾಲಿನಲ್ಲಿ ಜೇನು ಮತ್ತು ಸಕ್ಕರೆ ಬರೆಸಿದಷ್ಟೇ ಹಿತವಾಗಿ ಸೇರಿಕೊಂಡಿದೆ.  ನಿರ್ದೇಶಕ ಎಲ್ಲೂ ಕೂಡ ತಮ್ಮ ಎಳೆಯಿಂದ ಹೊರಗೆ ಹೋಗದೆ, ಒಂದು ನೀಟಾದ ಚಿತ್ರವನ್ನು ನಮ್ಮ ಮುಂದೆ ತಂದು ನಿಲ್ಲಿಸಿದ್ದಾರೆ.
ಚಿತ್ರ ಕೃಪೆ - ಗೂಗಲ್ 

ಒಂದು ಒಳ್ಳೆಯ ಚಿತ್ರ ನೋಡಿದ ಅನುಭವ.. ನನಗೆ ಆದದ್ದು ಖುಷಿಯಾಯಿತು, ಮನಸ್ಸಿಗೆ ನಿರಾಳತೆ ಕೊಟ್ಟಿತು.
*************

ಈ ಚಿತ್ರವನ್ನು ನೋಡಲು ಮೂರು ಮುಖ್ಯ ಕಾರಣಗಳು ಇದ್ದವು.

೧) ಧೈರ್ಯ ಲಕ್ಷ್ಮಿ ಎನ್ನುವ ಚಿತ್ರ ನೋಡಿದಾಗಿಂದಲೂ ಅನಂತ್ ನಾಗ್ ಅವರು ನನಗೆ ಬಲು ಇಷ್ಟ, ಅವರ ಬೆಳದಿಂಗಳ ಬಾಲೆ ಚಿತ್ರ ಮನಸ್ಸಿಗೆ ತಂಪೆರೆಯುವ ಚಿತ್ರ. ಇಂಥಹ ಮೇರು ನಟ,ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ  ನನ್ನ ಹುಟ್ಟು ಹಬ್ಬಕ್ಕೆ ತಮ್ಮ ಹಸ್ತಾಕ್ಷರ ಸಹಿತ ಶುಭಾಶಯಗಳನ್ನು ಕೊಟ್ಟಿದ್ದು ಸಂತಸಕ್ಕೆ ಪಾರವೇ ಇಲ್ಲವಾಗಿತ್ತು.  ಇವರ ಈ ಚಿತ್ರವನ್ನು ನೋಡಲೇಬೇಕು, ಹೀಗೆ ಅವರ ಶುಭಾಶಯಗಳಿಗೆ ಗೌರವ ಸೂಚಿಸಿದ ಹಾಗೂ ಆಯಿತು ಜೊತೆಯಲ್ಲಿ ಒಂದು ಒಳ್ಳೆಯ ಕನ್ನಡ ಚಿತ್ರವನ್ನು ನೋಡಿದ ಹಾಗೆ ಆಯಿತು ಎನ್ನುವುದು ಮೊದಲ ಕಾರಣ.
ಕೃಪೆ - ಶುಭಾಶಯಗಳನ್ನೂ ಬರೆದು ಕೊಟ್ಟ
 ಅನಂತ್ ನಾಗ್ ಸರ್ ಮತ್ತು
ಅದನ್ನು ನನಗೆ ತಲುಪಿಸಿದ ನಿವೇದಿತ ಚಿರಂತನ್ 

೨) ನನ್ನ ಆಪ್ತ ಗೆಳೆಯ ಚಿರಂತನ್ ವಸಿಷ್ಠ ಮತ್ತು ನಿವೇದಿತ ಚಿರಂತನ್ ಅವರ ಪುತ್ರ ಅದ್ವೈತ್ ಈ ಚಿತ್ರದಲ್ಲಿ ಒಂದು ಪುಟ್ಟ ಪಾತ್ರ ಮಾಡಿದ್ದ. ಚಿತ್ರದಲ್ಲಿ ಅಚ್ಯುತ್ ಮತ್ತು ಅರುಣ ಅವರ ಮಗನ ಪಾತ್ರ. ಚಿತ್ರದ ಅಗತ್ಯತೆಗೆ ಪಾತ್ರದ ಉದ್ದ ಕಡಿಮೆ ಮಾಡಿದ್ದಾರೆ, ಆದರೂ ಈ ಮುದ್ದು ಪ್ರತಿಭೆ ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಬಂದದ್ದು, ಮತ್ತು ಅವನನ್ನು ನೋಡಬೇಕೆಂಬುದು ಎರಡನೇ ಕಾರಣ.

೩) ಶ್ರೀ ನಿಮ್ಮ ಹುಟ್ಟು ಹಬ್ಬಕ್ಕೆ ಒಂದು ಸರ್ಪ್ರೈಸ್ ಎಂದು ಹೇಳಿ ಅನಂತ್ ನಾಗ್ ಅವರಿಂದ ಶುಭಾಷಯ ಪತ್ರವನ್ನು ನನಗಾಗಿ ಕೊಟ್ಟಿದ್ದು ನಿವೇದಿತ ಚಿರಂತನ್. ಇದು ನನ್ನ ಸೌಭಾಗ್ಯ ಎನ್ನಲೇ ಬೇಕು. ಕಾರಣಾ ಅದ್ಭುತ ಬರಹಗಾರ್ತಿ, ಛಾಯಗ್ರಾಹಕಿ ಮತ್ತು ಅತ್ಯುತ್ತಮ ವಿಶ್ಲೇಷಕಿ ಇವರು. ಇವರು ಪ್ರೀತಿಯಿಂದ ಕೊಟ್ಟ ಕಾಣಿಕೆಗೆ ಬೆಲೆ ಕಟ್ಟಲು ಸಾದ್ಯವೇ ಇಲ್ಲ. ಅನಂತ್ ನಾಗ್, ಮುದ್ದು ಆದಿ, ಗೆಳೆಯ ಚಿರಂತನ್ ಮತ್ತು ನಿವೇದಿತ ಅವರು ನನ್ನ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಗಾಗಿ ಈ ಚಿತ್ರ ನೋಡಲೇಬೇಕು ಎನ್ನುವ ಕಾರಣ ಮೂರನೆಯದು.

ಒಟ್ಟಿನಲ್ಲಿ ಕಾರಣಗಳು  ಏನೇ ಇದ್ದರೂ, ಕರುನಾಡಿನ ಚಿತ್ರ ಪ್ರೇಮಿಗಳು ನೋಡಲೇಬೇಕಾದ ಒಂದು  ಚಿತ್ರ.. ಚಿತ್ರಮಂದಿರದಲ್ಲಿ ನೋಡಿ, ಪ್ರೋತ್ಸಾಹಿಸಿ, ಮತ್ತು ಇಂಥಹ ಉತ್ತಮ ಪ್ರಯತ್ನಗಳಿಗೆ ಬೆನ್ನು ತಟ್ಟಿದಾಗ ಮಾತ್ರ ಕರುನಾಡು ಮತ್ತೆ ಸುವರ್ಣ ಯುಗಕ್ಕೆ ಹಿಂತಿರುಗಲು ಸಾಧ್ಯ ಅಲ್ಲವೇ!!!