Sunday, April 24, 2022

ಗಾನ ಗಂಧರ್ವ ಗಂಧರ್ವ ಸಂಗೀತ ನಿರ್ದೇಶಕರ ಬಗ್ಗೆ ಮಾತುಗಳು ... ಅಣ್ಣಾವ್ರ ಜನುಮದಿನ (2022)

 ಶ್ರೀ ಏನಪ್ಪಾ ಆಗಲೇ ಅರ್ಧ  ದಿನ ಕಳೆದು ಹೋಯ್ತು ಏನೂ ಇಲ್ಲಾ?

ಅಣ್ಣಾವ್ರೇ ನಾ ಕಟ್ಟಿದ ಅಲೆಮಾರಿಗಳು ತಂಡ ಚಟುವಟಿಕೆಯಿಲ್ಲದೆ ಸೊರಗಿತ್ತು ಅದಕ್ಕೆ  ಮತ್ತೆ ಜೀವ ಕೊಡೋಣ ಅಂತ  ಕಬ್ಬನ್ ಪಾರ್ಕಿನಲ್ಲಿ ಸಿಗೋಣ ಅಂತ ಹೋಗಿದ್ದೆ ...ಬಂದು ಮತ್ತೆ ದಿನ ನಿತ್ಯದ ಕೆಲಸ ಮುಗಿಸಿ ಈಗ ಕೂತೆ.. ಇನ್ನೇನು ಕೆಲವು ನಿಮಿಷಗಳು ಅಣ್ಣ ಬರುತ್ತೆ... 




ಶ್ರೀ ನನಗೆ ಗೊತ್ತು ನೀ ಬಿಲ್ಡ್ ಅಪ್ ತಗೋಳೋಲ್ಲ ಅಂತ ಗೊತ್ತು.. ಇನ್ನೂ ಬರಲಿಲ್ಲವಲ್ಲ ಅಂತ ಕೇಳಿದೆ ಅಷ್ಟೇ.. 

ಗೊತ್ತು ಅಣ್ಣಾ.. ನಿಮ್ಮ ಬಗ್ಗೆ ಬರೆಯೋದು ಬೇಕಾದಷ್ಟಿದೆ.. ಇನ್ನೂ ನೋಡಿ ಬರೆಯಬೇಕಾದ ಬೇಕಾದಷ್ಟು ಚಿತ್ರಗಳಿವೆ.. ಈ ವರ್ಷ ಶತಕ ಬಾರಿಸಲೇ ಬೇಕು ಅಂತ ನಿರ್ಧಾರ ಮಾಡಿದ್ದೀನಿ.. ನಿಮ್ಮ ಆಶೀರ್ವಾದ ಇರಲಿ ಸದಾ.. 

ಶ್ರೀ ಶುಭವಾಗಲಿ.... ಇವತ್ತಿನ ಲೇಖನ ಓದೋಕೆ ಕಾತುರದಿಂದ ಕಾಯುತ್ತಾ ಇದ್ದೀನಿ.. !!!

ಸರಿ ಅಣ್ಣಾ.. !

                                                                             *****

ಕರುನಾಡಿನಲ್ಲಿ ಚಿತ್ರರಸಿಕರ ಮನದಲ್ಲಿ ಅಣ್ಣಾವ್ರ ಹಾಡುಗಳು ಅಣ್ಣಾವ್ರ ಗಾಯನ ಧ್ವನಿ ಬಗ್ಗೆ ಕೇಳೋದೇ ಬೇಡಾ.. ಅವರ ಪ್ರತಿ ಹಾಡುಗಳು ಅವರ ಸಂಭಾಷಣೆ ಬಾಯಿ ಪಾಠವಾಗಿ ಹೋಗಿದೆ.. ಅವರ ಗಾಯನಕ್ಕೆ ಹೊಳಪು ಕೊಟ್ಟ ಅನೇಕಾನೇಕ ಸಂಗೀತ ನಿರ್ದೇಶಕರ ಬಗ್ಗೆ ಅಣ್ಣಾವ್ರ ಹೇಳಿರುವ ಕೆಲವು ಮಾತುಗಳು..




ಜಿ ಕೆ ವೆಂಕಟೇಶ್: 



ಶ್ರೀ ಇಡೀ ನಾಡು ನನ್ನನ್ನು ಅಣ್ಣ ಅಂತ ಪ್ರೀತಿಯಿಂದ ಕರೆದರೆ.. ಇವರು ಮಾತ್ರ ನನ್ನನ್ನು ತಮ್ಮಯ್ಯ ಅಂತ ಕರೀತಾ ಇದ್ರು.. ಓಹಿಲೇಶ್ವರ ಚಿತ್ರದಲ್ಲಿ  ನಾ ಬೇಡವೆಂದರೂ ಬಿಡದೆ ಹಾಡಿಸಿದರು.. ನಂತರ ಮಹಿಷಾಸುರ ಮರ್ದಿನಿ ಚಿತ್ರದಲ್ಲಿ ಇನ್ನೊಂದು ಹಾಡು ಹಾಡಿಸಿದರು.. 

ಈತ ಅದ್ಭುತ ಪ್ರತಿಭೆಯಿದ್ದ ಮನುಷ್ಯ.. ಆದರೂ ಪ್ರತಿಭೆಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತಿದ್ದರು.. ಸನಾದಿ ಅಪ್ಪಣ್ಣ ಚಿತ್ರದಲ್ಲಿ ಶಹನಾಯಿ ಮಹಾರಾಜ್ ಶ್ರೀ ಬಿಸ್ಮಿಲ್ಲಾ ಖಾನ್ ಸಾಹೇಬರ ಜೊತೆಯಲ್ಲಿ ನಾ ಕಳೆದ ಕ್ಷಣ ಅದ್ಭುತ.. ಈ ವೆಂಕಟೇಶ್ ಖಾನ್ ಸಾಹೇಬರು ಹೇಗೆ ಹೇಳಿದ್ದರೋ, ಹಾಗೆ ಮತ್ತೆ ಅದಕ್ಕಿಂತ ತುಸು ಹೆಚ್ಚಾಗಿಯೇ ಅವರನ್ನು  ಸಂತೈಸಿ ಅದ್ಭುತ ಹಾಡುಗಳನ್ನು ಕೊಟ್ಟರು.. ಅದೇ ರೀತಿಯಲ್ಲಿ ಸಂಧ್ಯಾರಾಗ ಚಿತ್ರದ ರಾಗಾಧಾರಿತ ಹಾಡುಗಳು, ಹಾಲು ಜೇನಿನ ಸುಶ್ರಾವ್ಯ ಹಾಡುಗಳು... ಇವೆಲ್ಲಾ ಒಂದು ಕಡೆಯಾದರೆ. ಅವರ ಪ್ರಯೋಗ ಶೀಲತೆಯಿಂದ ಕಳೆಕಟ್ಟಿದ ಹಾಡುಗಳು ಬಾಂಡ್ ಶೈಲಿಯ ಚಿತ್ರದಲ್ಲಿ ಅಪಾರ ಯಶಸ್ಸು ಕಂಡಿತು.. ನನಗೆ ತುಂಬಾ ಇಷ್ಟವಾಗಿದ್ದು.. ದಾರಿ ತಪ್ಪಿದ ಮಗ ಚಿತ್ರದಲ್ಲಿ ಹಡಗಿನಲ್ಲಿ ನೆಡೆಯುವ ಹೊಡೆದಾಟಕ್ಕೆ ಇಂಗ್ಲಿಷ್ ಚಿತ್ರಗಳ ಮಾದರಿಯಲ್ಲಿ ಹಿನ್ನೆಲೆ ಸಂಗೀತ ಕೊಟ್ಟಿದ್ದು.. 

ನನಗೆ ಬಲು ಪ್ರೀತಿಯ  ನಿರ್ದೇಶಕರು ಜಿ ಕೆ ವೆಂಕಟೇಶ್.. 

ರಾಜನ್ ನಾಗೇಂದ್ರ 


ಪಗಡೆಯಾಟದಲ್ಲಿ ಬೇಕಾದ ಗರಗಳು ಬೀಳುವಂತೆ ಶಕುನಿಗೆ ವರವಿತ್ತಂತೆ.. ಈ ಸಂಗೀತ ನಿರ್ದೇಶಕ ಜೋಡಿ ಮುಟ್ಟಿದ್ದೆಲ್ಲ ಅದ್ಭುತ ಯಶಸ್ವೀ ಹಾಡುಗಳೇ.. ಚಿತ್ರಗಳಲ್ಲಿ ಒಂದು ಎರಡು ಹಾಡುಗಳು ಯಶಸ್ವೀ ಆಗೋದು ಸಾಮಾನ್ಯ.. ಆದರೆ ಇವರ ಎರಡು ಕನಸು ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್.. ಬರಿ ಸಾಮಾಜಿಕ ಚಿತ್ರಗಳು ಮಾತ್ರ ಅಂದು ಕೊಂಡರೆ.. ಊಒ ಹೂಂ.. ಶ್ರೀನಿವಾಸ ಕಲ್ಯಾಣ ಚಿತ್ರದ ಹಾಡುಗಳು, ಹಿನ್ನೆಲೆ ಸಂಗೀತ ಕೇಳಿದ್ದೀರಿ..  ಕರುನಾಡಿನ ನಾಡಗೀತೆಯ ಆಗಿರುವ ನಾವಾಡುವ ನುಡಿಯೇ ಕನ್ನಡ ಹಾಡನ್ನು ಯಾರು ಮರೆತಾರು..  ನನ್ನ ಚಿತ್ರಗಳಿಗೆ ಸಂಗೀತ ಕೊಟ್ಟಿದ್ದು ಕಡಿಮೆ ಆದರೆ ಕೊಟ್ಟಿದ್ದೆಲ್ಲಾ ವಿಶಿಷ್ಟ ಹಾಗೂ ಯಶಸ್ವೀ ಹಾಡುಗಳೇ.  

ಸರಳ ಸಂಗೀತವೆನಿಸಿದರೂ, ಗಾಯನಕ್ಕೆ ನಿಂತಾಗಲೇ ಅರಿವಾಗುತ್ತಿತ್ತು ಎಷ್ಟು ಕಷ್ಟ ಈ ಹಾಡುಗಳು ಅಂತ.. 

ದಿನಕ್ಕೆ ಬರುವ ಹತ್ತು ಹಾಡುಗಳಲ್ಲಿ ಕಡೆ ಪಕ್ಷ ನಾಲ್ಕು ಹಾಡುಗಳು ಇವರ ಸಂಗೀತ ನಿರ್ದೇಶನದ್ದಾಗಿರುತ್ತದೆ.. 

ಉಪೇಂದ್ರ ಕುಮಾರ್ 


ಸಂಗೀತಕ್ಕೆ ಭಾಷೆಯೇ ಇಲ್ಲ ಅನ್ನೋದನ್ನ ಇವರು ನಿರೂಪಿಸಿದರು.. ಒರಿಸ್ಸಾ ಮೂಲದವರಾಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಇವರ ಸಾಧನೆ ಅಪಾರ.. ನಮ್ಮ ನಿರ್ಮಾಣದ ಚಿತ್ರಗಳಲ್ಲಿ ಇವರೇ ಆಸ್ಥಾನದ ಸಂಗೀತಗಾರರು ಅಂದರೆ ತಪ್ಪಿಲ್ಲ.. ನನ್ನ ಹಾಗೂ ನನ್ನ ಮಕ್ಕಳ ಚಿತ್ರಗಳಿಗೆ ಯಶಸ್ವೀ ಹಾಡುಗಳನ್ನು ಕೊಟ್ಟಿರೋದು ಇವರ ವಿಶೇಷ.. 

ರಾಗಗಳನ್ನು ಉಪಯೋಗಿಸಿಕೊಂಡು ಇವರು ಮೂಡಿಸುತ್ತಿದ್ದ ಚಿತ್ರಗೀತೆಗಳು ಬಲು ಸುಂದರ.. ಭಕ್ತಿಗೀತೆಗಳು ಕೂಡ ಇವರ ಸಂಗೀತದಲ್ಲಿ ಭಕ್ತಿರಸ ತುಂಬಿ ತುಳುಕುತ್ತಿದ್ದು ಇಂದಿಗೂ ಜನಮಾನಸದಲ್ಲಿ ನೆಲೆಸಿದೆ.. 

ಎಂ ರಂಗರಾವ್ 



ವೀಣೆ ರಾವ್ ಅಂತ ಹೆಸರಾಗಿದ್ದವರು ಇವರು.. ಚೆಲುವೆಯೇ ನಿನ್ನ ನೋಡಲು ಈ ಹಾಡಿನಲ್ಲಿ ವೀಣೆಯ ಸಂಗೀತ ಬಲು ಇಷ್ಟ.. ಕವಿರತ್ನ ಕಾಳಿದಾಸ ಚಿತ್ರಗೀತೆಗಳು ಅದರ ಹಿನ್ನೆಲೆ ಸಂಗೀತ ಬಲು ಇಷ್ಟ.. ಸಂಸ್ಕೃತ ಶ್ಲೋಕಕ್ಕೆ ಅವರು ನೀಡಿರುವ ಸಂಗೀತ.. ಜೊತೆಯಲ್ಲಿ ಆ ಶಬ್ದಗಳನ್ನು ಉಚ್ಚರಿಸಲು ನನಗೆ ಪ್ರೋತ್ಸಾಹ ನೀಡಿದ್ದು ಎಲ್ಲವೂ ಹಸಿರಾಗಿದೆ.. 

ಕಣ್ಣೀರ ಧಾರೆ ಈ ಹಾಡಲ್ಲಿ ಅವರು ಉಪಯೋಗಿಸಿರುವ ವಾದ್ಯ ಸಂಯೋಜನೆ ಬಲು ಇಷ್ಟ.. 

ರಂಗರಾವ್ ಅಪಾರ ಪ್ರತಿಭೆ ಇರುವ ಸಂಗೀತ ನಿರ್ದೇಶಕ

ವಿಜಯಭಾಸ್ಕರ್

ಇವರನ್ನು ನೋಡಿದಾಗೆಲ್ಲಾ ಸಂಗೀತದ ಮೇಷ್ಟ್ರು ಆಂತಾಲೇ ನನ್ನ ಕಣ್ಣ ಮುಂದೆ ಬರುತ್ತೆ.. ಆ ಎತ್ತರದ ನಿಲುವು.. ಅವರ ಸಂಗೀತ ಸಂಯೋಜನೆ ಬಲು ಶಾಸ್ತ್ರೀಯ ರೀತಿ.. ಓರೇ ಕೋರೆಗಳನ್ನು ಕಗ್ಗಂಟು ಅನಿಸಿದ್ದನ್ನು ಅವರು ಬಿಡಿಸಿ ನಮ್ಮ ಮುಂದೆ ಇಡುತ್ತಿದ್ದದ್ದು ಬಲು ಸೊಗಸು ಇವರ ನಿರ್ದೇಶನದಲ್ಲಿ ಹಾಡುವ ಸೌಭಾಗ್ಯ ಸಿಗಲಿಲ್ಲ.. ನಾ ಹಾಡಿದ್ದು ನೆನಪಿಲ್ಲ.. ಏನಾದರೂ ಹಾಡಿದ್ದಾರೆ ಮುಂದೆ ನಿನಗೆ ಹೇಳುತ್ತೇನೆ.. 

ಆದರೆ ನನ್ನ ಶಾರೀರ ಪಿ ಬಿ ಶ್ರೀನಿವಾಸ್ ಅವರ ಗಾನ ಸುಧೆಯಲ್ಲಿ ಅಪಾರವಾದ ಹಾಡುಗಳಲ್ಲಿ ಇವರ ಸಂಗೀತ ಬಲು ಸೊಗಸು.. 

ಇನ್ನೊಂದು ವಿಶೇಷ ಅಂದರೆ.. ಇವರ ಮತ್ತು ಪುಟ್ಟಣ್ಣ ಕಣಗಾಲ್ ಅವರ ಜುಗಲ್ ಬಂದಿ ಚಿತ್ರಗಳು.. ಪುಟ್ಟಣ್ಣ ಅವರ ತಲೆಯಲ್ಲಿ ಹೇಗೆ ಸಂಗೀತ ಇರಬೇಕು ಅನಿಸುತ್ತಿತ್ತೋ ಹಾಗೆ  ಇವರ ಸಂಗೀತ ಇರುತ್ತಿತ್ತು.. ಪುಟ್ಟಣ್ಣ ಅವರು ಕಟ್ಟಿ ಕೊಡುತ್ತಿದ್ದ ದೃಶ್ಯಗಳಿಗೆ ಪೂರಕವಾಗಿರುತ್ತಿತ್ತು ಇವರ ಸಂಗೀತ ಮೋಡಿ.. 

ಟಿ ಜಿ ಲಿಂಗಪ್ಪ



ಪದ್ಮಿನಿ ಪಿಕ್ಚರ್ಸ್ ಆಸ್ಥಾನದ ಸಂಗೀತ  ಅರಸರು ಇವರು.. ನನ್ನ ನೆಚ್ಚಿನ ಗುರುಗಳು ಬಿ ಆರ್ ಪಂತುಲು ಅವರ ಎಲ್ಲಾ ಚಿತ್ರಗಳಿಗೆ ಇವರದ್ದೇ ಸಂಗೀತ.. ತಾಯಿಗೆ ತಕ್ಕ ಮಗ ಚಿತ್ರದ ಎಂಥ ಸೊಗಸು ಮಗುವಿನ ಮನಸ್ಸು.. ಹಾಡಿಗೆ ಸಂಗೀತ ಬಲು ಸೊಗಸಾಗಿತ್ತು.. ಬಭೃವಾಹನ, ಭಕ್ತ ಪ್ರಹ್ಲಾದ ಚಿತ್ರಗಳ ಸಂಗೀತದ ಬಗ್ಗೆ ನಿಮಗೆ ಗೊತ್ತೇ ಇದೆ.. ಬಲು ಕಷ್ಟಕರವಾದ "ಆರಾಧಿಸುವೆ ಮದನಾರಿ" ಹಾಡಿಗೆ ನನಗೆ ಉತ್ತೇಜಿಸಿ ಹಾಡಿಸಿದ್ದು  ಇನ್ನೂ ನೆನಪಿದೆ.... ಹುಣುಸೂರು ಕೃಷ್ಣಮೂರ್ತಿಗಳ ರಚಿಸಿದ ಕಂದ ಪದ್ಯ 'ಯಾರು ತಿಳಿಯರು ನಿನ್ನ" ಕರುನಾಡಿನ ಪ್ರತಿ ಸಂಭ್ರಮಕ್ಕೂ ಬೇಕೇ ಬೇಕು.. 

ಶ್ರುತಿ ಸೇರಿದಾಗ ಚಿತ್ರದಲ್ಲಿ ಜಾನಕಿಯಮ್ಮ ಹಾಡಿರುವ ಕನಸಲ್ಲಿ ಬಂದವನಾರೇ ನನ್ನಿಷ್ಟದ ಗೀತೆ.. ಅದನ್ನು ನಾನೂ ಹಾಡಬೇಕೆಂಬ ಹಂಬಲ ಇತ್ತು.. ಅದು ಅವರಿಗೆ ತಿಳಿಯಿತೋ ಏನೋ.. ಒಟ್ಟಿನಲ್ಲಿ ಒಂದು ಪುಟ್ಟ ತುಣುಕನ್ನು ಹಾಡುವ ಅವಕಾಶ ಸಿಕ್ಕಿತು.. 

ಸತ್ಯಂ 


ಕಪ್ಪು ಬಿಳುಪು ಚಿತ್ರಗಳಿಗೆ ಇವರ ಸಂಗೀತ ನಿರ್ದೇಶನದಲ್ಲಿ ಪಿ ಬಿ ಎಸ್ ಅವರು ಹಾಡಿದ್ದರು.. ಇವರ ಸಂಗೀತದಲ್ಲಿ ನನಗೆ ಹಾಡುವ ಅವಕಾಶ ಸಿಕ್ಕಿದ್ದು ಕೆರಳಿದ ಸಿಂಹ ಚಿತ್ರದಲ್ಲಿ.. ಈ ಚಿತ್ರದ ಎಲ್ಲಾ ಹಾಡುಗಳು ಬಲು ಇಷ್ಟ.. ನನ್ನ ಅಭಿಮಾನಿಗಳು ಅನೇಕರು ಹೇಳಿದ್ದು.. ಇಂಗ್ಲಿಷ್ ಹಾಡಿನ ಸಂಗೀತದಂತಿದ್ದ ಏನೋ ಮೋಹ ಹಾಡು ನಿಮ್ಮ ಚಿತ್ರಗಳಲ್ಲಿಯೇ ವಿಶೇಷವಾದದ್ದು ಅಂತ.. ನಿಜ ಆ ರೀತಿಯ ಸಂಗೀತ ನನ್ನ ಚಿತ್ರಗಳಲ್ಲಿ ಬಂದದ್ದು ಕಡಿಮೆಯೇ.. 

ಅಮ್ಮ ನೀನು ನನಗಾಗಿ ಹಾಡಿನ ಸಂಗೀತವೂ ಬಲು ಸೊಗಸು. . 

ಇಳಯರಾಜ

ನಮ್ಮ ಜಿ ಕೆ ವೆಂಕಟೇಶ್ ಅವರ ಗರಡಿಯಲ್ಲಿ ಶಿಷ್ಯವೃತ್ತಿ ಆರಂಭಿಸಿದ್ದ ಇಳಯರಾಜ ತಮಿಳು, ತೆಲುಗು, ಮತ್ತು ಕೆಲವು ಕನ್ನಡ ಚಿತ್ರಗಳಲ್ಲಿ  ಜಾದೂ ಮಾಡಿದ್ದರು .. ಅವರ ನಿರ್ದೇಶನದಲ್ಲಿ ಹಾಡುವ ಅವಕಾಶ ನನಗೆ ಸಿಕ್ಕಿದ್ದು ನೀ ನನ್ನ ಗೆಲ್ಲಲಾರೆ.. ಚಿತ್ರದ ಫಲಿತಾಂಶ ಏನೇ ಆಗಿರಲಿ.. ಆ ಚಿತ್ರದ ಹಾಡುಗಳು ಇಂದಿಗೂ ಎಲ್ಲರ ಬಾಯಲ್ಲಿ ನಲಿಯುತ್ತಿದೆ.. ಅವರ ಸಂಗೀತದ ಜಾದೂ ನಿಜಕ್ಕೂ ಅದ್ಭುತ.. ಆ ಚಿತ್ರದಲ್ಲಿ ಮೂಡಿದ ಪ್ರತಿ ಹಾಡಿಗೂ ವಿಭಿನ್ನವಾಗಿ ಸಂಗೀತ ನೀಡಿದ್ದಾರೆ.. ಈ ಕಡೆ ಪಾಶ್ಚಾತ್ಯ, ಈ ಕಡೆ ಪೂರ್ವಾತ್ಯ.. ಜೊತೆಗೆ ನಮ್ಮ ನಾಡಿನ ವಾದ್ಯಗಳ ಕುಸುರಿ ಬೆರೆಸಿ ಅವರು ಬಡಿಸಿದ ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಸಂಗೀತ ಸೂಪರ್.. 


ಎಲ್ ವೈದ್ಯನಾಥನ್



ಜಿ ಕೆ ವೆಂಕಟೇಶ್ ಅವರ ಇನ್ನೊಬ್ಬ ಶಿಷ್ಯನ ಸಂಗೀತ ಸಂಯೋಜನೆಯಲ್ಲಿ ನಟಿಸಿ ಹಾಡಿದ ಅನುಭವ ನನ್ನದು. ಒಂದು ಮುತ್ತಿನ ಕತೆಯಲ್ಲಿ ಜಾನಪದ ಛಾಯೆ ಜೊತೆಯಲ್ಲಿ ನಾಡಿನ ವಾದ್ಯಗಳನ್ನು ಉಪಯೋಗಿಸಿಕೊಂಡು ಸಿದ್ಧಪಡಿಸಿದ ಹಾಡುಗಳು, ಅದರ ಹಿನ್ನೆಲೆ ಸಂಗೀತ ಇಷ್ಟವಾಗುತ್ತೆ ನನಗೆ. 

******
 
ಅಣ್ಣಾವ್ರೇ ನಿಮ್ಮ ಅನೇಕಾನೇಕ ಚಿತ್ರಗಳಲ್ಲಿ ನಿಮ್ಮ ಗಾಯನ ಪ್ರತಿಭೆಗೆ ಸಾಣೆ ಹಿಡಿದ ಅನೇಕ ಸಂಗೀತ ನಿರ್ದೇಶಕರಿದ್ದಾರೆ.  ನೀವು  ಗಾಯನ ಶುರು  ಮಾಡಿದ ಮೇಲೆ, ನಿಮ್ಮ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದವರ ಬಗ್ಗೆ ನನಗೆ ತಿಳಿದಷ್ಟು ಮಾತುಗಳನ್ನು ಹೇಳುವ ಪ್ರಯತ್ನ ಮಾಡಿದ್ದೇನೆ.. 

ಶ್ರೀ ಬೇಕಾದಷ್ಟು ಇದೆ.. ಮನದಾಳದ ಮಾತುಗಳು ಹಾಗೆ ಮೂಡಿ ಬಂದಿರುವುದು ಹಾಗಾಗಿ ಇಷ್ಟವಾಗುತ್ತೆ 

ಅಣ್ಣಾವ್ರೇ ಪ್ರತಿ ದಿನವೂ, ಪ್ರತಿ ಕ್ಷಣವೂ ನಿಮ್ಮ ಬಗ್ಗೆ ನಿಮ್ಮ ಸಿನಿಮಾಗಳ ಬಗ್ಗೆ ಮಾಡುತ್ತಿದ್ದರೂ ವರ್ಷಕ್ಕೆ ಎರಡು ಬಾರಿ ಒಂದೇ ತಿಂಗಳಲ್ಲಿ ಲೇಖನ ಬರೆಯುವುದು ಓಹ್ ಕ್ಷಮಿಸಿ ನೀವು ನನ್ನಿಂದ ಲೇಖನ ಬರೆಸುವುದು ಇಷ್ಟವಾಗುತ್ತದೆ..  ಏನೇ ಆಗಲಿ ನಿಮ್ಮ ಚಿತ್ರಗಳು ವಿಶ್ವವಿದ್ಯಾಲಯವಿದ್ದಂತೆ.. ಮೊಗೆದಷ್ಟು ಮರಳಿ ಮರಳಿ ಬರುವ ವಿಷಯಗಳು ಸ್ಫೂರ್ತಿಗಳು ಅಪಾರ.. 

ನಿಮ್ಮ ಜನುಮದಿನಕ್ಕೆ ಅಕ್ಷರ, ಪದಗಳ, ವಾಕ್ಯಗಳ ಸಮರ್ಪಣೆ ಅಣ್ಣಾವ್ರೇ... 

ಶ್ರೀ ಧನ್ಯವಾದಗಳು ರಾಜ್ ಜೈತ್ರ ಯಾತ್ರೆ ಮುಂದುವರೆಸಪ್ಪ... ಶುಭವಾಗಲಿ.. !

Friday, April 15, 2022

ಕನ್ನಡ ಗುಡ್ ಫಿಲ್ಮ್ - ಕೆ.ಜಿ.ಎಫ್ II (2022)

 ಪಡುವಾರಹಳ್ಳಿ ಪಾಂಡವರು ಕನ್ನಡ ಒಂದು ಉತ್ತಮ ರೆಬೆಲ್ ಚಿತ್ರ.. ಅವ್ಯವಸ್ಥೆಯ ವಿರುದ್ಧವಾಗಿ ಹೋರಾಡುವ ಚಿತ್ರಕತೆ ಹೊಂದಿತ್ತು.. ಅದರಲ್ಲಿ ಐದು ಮಂದಿ ಸಂತ್ರಸ್ತರು ಸಾಹುಕಾರನ ದಬ್ಬಾಳಿಕೆಯಿಂದ ಬೇಸತ್ತು ನಿಂತಿದ್ದಾಗ, ಐದು ಮಂದಿಯಲ್ಲಿ ಒಬ್ಬರಾದ ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಪಾತ್ರ ಕರಿಯನನ್ನು ಹಳ್ಳಿಯಿಂದ ಬಹಿಷ್ಕಾರ ಹಾಕಿದ್ದಾರೆ ಅಂತ ತಮಟೆ ಬಾರಿಸಿಕೊಂಡು ಕುಲ್ವಾಡಿಯುವ ಬರುತ್ತಾನೆ.. ಅದನ್ನು ಕಿತ್ತುಕೊಂಡು ರಾಮಕೃಷ್ಣ ಪಾತ್ರದಾರಿ ರಾಮಣ್ಣ, ಐದು ಜನರನ್ನು ಒಂದೂಗೂಡಿಸಿಕೊಂಡು ಸಾಹುಕಾರನ ಮುಂದೆ ತಮಟೆ ಬಾರಿಸುತ್ತಾ ಬಹಿಷ್ಕಾರವನ್ನು ಪ್ರತಿಭಟಿಸುತ್ತಾರೆ.. 

ಆಗ ಸಾಹುಕಾರನ ಪರಮಾಪ್ತ ಸ್ನೇಹಿತ ಕಾಳಪ್ಪ ಅರ್ಥಾತ್ ಕನಕ್ಸನ್ ಕಾಳಪ್ಪ - ಮುಸುರಿ ಕೃಷ್ಣಮೂರ್ತಿಯವರು "ನಮ್ಮ ಸಾಹುಕಾರರು ಅಂದರೆ ಯಾರು, ಅವರ ಹಿಂದೆ ಯಾರ್ಯಾರು ಇದ್ದಾರೆ, ಎಂತೆಂತವರು ಅವ್ರೆ, ಎಲ್ಲೆಲ್ಲಿ ಅವ್ರೆ, ಹೆಂಗೆಂಗೆ ಅವ್ರೆ, ಅಂತ ವಿಸ್ಯ ನಿಮಗೇನು ಗೊತ್ತಿದೇಯೇನ್ರೋಲೇ ... ತಡಕಾಲಂಟಿ ತಮಟೆ ತಕ್ಕೊಂಡು ಟ ಟ ಟ ಟ ಅಂತ ಬಂದ್ಬಿಟ್ರು.. ನಮ್ ತಾವ  ಬಾರಿ ದೊಡ್ಡ ನಗಾರಿ ಐತಲೇ.. ಒಂದು ಸಾರಿ ಬಾರಿಸಿದರೆ ಚಂಡಮಾರುತ ಬೀಸಿದಂಗೆ.. ಅದರಲ್ಲಿ ನಿಮ್ಮಂತ ತರಗೆಲೆಗಳು ತೂರಿ ಹೋಗ್ತಾವೆ.. "

ಹೌದು ಈ ಚಿತ್ರದ ಸಂಭಾಷಣೆಯಂತೆ.. ಕನ್ನಡ ಚಿತ್ರಗಳು ವಿಜೃಂಬಿಸಿದ ಕಾಲವೊಂದಿತ್ತು.. ನಂತರ ಅನೇಕ ದೊಡ್ಡ ಹೆಸರಾಂತ ನಿರ್ದೇಶಕರು, ಕಲಾವಿದರು, ಸಂಗೀತ, ಸಾಹಿತ್ಯ, ಸಹಕಲಾವಿದರ ತಂಡದ ಸದಸ್ಯರು ಒಬ್ಬೊಬ್ಬರಾಗಿ ಜಗದಿಂದ ಜಾಗ ಖಾಲಿ ಮಾಡಿದರು, ಇಲ್ಲವೇ ನೇಪಥ್ಯಕ್ಕೆ ಸರಿದಿದ್ದರು.. ಕನ್ನಡ ಚಿತ್ರಗಳು ಕೂಡ ಆಹಾ ಒಹೋ ಅನ್ನುವಂತಹ ಚಿತ್ರಗಳ ಸಂಖ್ಯೆ ಕಡಿಮೆಯಾಗಿದ್ದು ಸುಳ್ಳಲ್ಲ.. ಆದರೆ ಮತ್ತೆ ನಗಾರಿ ಬಾರಿಸೋಕೆ ಶುರುವಾದವು.. ಹೊಸ ತಲೆಮಾರಿನ ತಂತ್ರಜ್ಞರು, ಕಲಾವಿದರು, ನಿರ್ದೇಶಕರು ಚಿತ್ರರಂಗಕ್ಕೆ ಬಂದು ತಮ್ಮದೇ ವಿಭಿನ್ನ ದೃಷ್ಟಿಕೋನದಿಂದ ಚಿತ್ರಿಸಿದ ಸಿನೆಮಾಗಳು ವಿಭಿನ್ನವಾಗಿ ಕಾಣತೊಡಗಿದವು.. 

ಈ ದೃಷ್ಟಿಯಿಂದ ಬಂದ ಒಂದು ಚಿತ್ರ ಕೆ ಜಿ ಎಫ್ ೨೦೧೮ ರಲ್ಲಿ ತೆರೆಗೆ ಅಪ್ಪಳಿಸಿ ಅಪಾರ ಸದ್ದು ಮಾಡಿತು.. ಅದರ ಬಗ್ಗೆ ನನಗೆ ತಿಳಿದದ್ದು ಬರೆದಿದ್ದೆ.. KGF Chapter 1 ಈಗ ನಾಲ್ಕು ವರ್ಷಗಳ ಪರಿಶ್ರಮದ ನಂತರ ಎರಡನೇ ಅಧ್ಯಾಯ ಚಂಡಮಾರುತವಾಗಿ ಅಪ್ಪಳಿಸಿದೆ... 

ಕೋಟ್ಯಂತರ ವೀಕ್ಷಕರು ಈ ಚಿತ್ರಕ್ಕೆ ಕಾಯುತ್ತಿದ್ದದ್ದು ಎಲ್ಲರಿಗೂ ಗೊತ್ತಿದೆ.. ಸಿನಿಮಾ ತಂಡವೂ ಕೂಡ ಪ್ರಚಾರಕ್ಕೆ, ಕುತೂಹಲದ ಮಟ್ಟ ಏರುವಂತೆ ಅನೇಕಾನೇಕ ಪ್ರೋಮೋಗಳು, ಸ್ಟಿಲ್ಲುಗಳು, ಅದರ ಬಗ್ಗೆ ಫೇಸ್ಬುಕ್, ವಾಟ್ಸಪ್ಪ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹೀಗೆ ಸಿಗಬಹುದಾದ ಎಲ್ಲಾ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ತಾಪಮಾನವನ್ನು ಏರಿಸಿದ್ದರು.. ಬಿಡುಗಡೆ ದಿನ ನಿಗದಿಯಾದಂತೆ, ಚಿತ್ರಮಂದಿರಗಳ ಸೀಟುಗಳು ಭರ್ತಿಯಾಗತೊಡಗಿತ್ತು... 

ಅಪ್ಪ ಕೆ ಜಿ ಎಫ್ ಹೋಗೋಣ್ವಾ.. ಮಗಳು ಕೇಳಿದಾಗ.. ಮೊದಲ ವಾರ ಬೇಡಾ.. ಸಿಕ್ಕಾಪಟ್ಟೆ ಹೆಚ್ಚಿರುತ್ತದೆ ಟಿಕೆಟ್ ದುಡ್ಡು.. ಒಂದು ವಾರ ಕಳೆಯಲಿ ನಂತರ ಹೋಗೋಣ ಅಂದಿದ್ದೆ.. ಆದ್ರೆ ಅವಳ ಬಾಡಿದ ಮೊಗ ನೋಡಿದಾಗ.. ಜೀವನದಲ್ಲಿ ರಗಳೆ ಇದ್ದದ್ದೇ, ಚಿಕ್ಕ ಪುಟ್ಟ ಆಸೆಗಳನ್ನು ಈಡೇರಿಸಿಕೊಂಡು ಬದುಕೋದೇ ಜೀವನ ಅನ್ನಿಸಿ, ಒಂದಷ್ಟು  ಜಾಲಾಡಿದ ಮೇಲೆ, ಆದಷ್ಟು ಕಡಿಮೆ ದರ ಇರುವ ಟಾಕೀಸು ಆರಿಸಿಕೊಂಡು ಚಿತ್ರ ನೋಡಲು ಹೋದೆವು..


 ಇತ್ತೀಚಿಗೆ ನಮ್ಮನ್ನೆಲ್ಲ ಬಿಟ್ಟು ಹೋದ ಪುನೀತ್ ರಾಜ್ ಕುಮಾರ್ ಅವರ ಹೆಸರು, ಅವರ ಕೆಲವು ಚಿತ್ರಗಳು ತೆರೆಯ ಮೇಲೆ ಮೂಡಿ ಬಂದಾಗ ಶಿಳ್ಳೆಗಳು ಕೂಗಾಟ ಜೈಕಾರ... ಕಿವಿಗಡಚಿಕ್ಕುವಂತೆ ಸದ್ದು.. ನಂತರ ಶುರುವಾದದ್ದೇ ಚಂಡಮಾರುತದ ಆಗಮನ.. 

ಮುಂದಿನ ಎರಡೂವರೆ ಘಂಟೆಗಳು ನೆಡೆದದ್ದು ಇತಿಹಾಸ.. ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ಅನ್ನುವ ಪದಗಳು ಕೆಲವು ಪುಟ್ಟಣ್ಣ ಕಣಗಾಲ್ ಚಿತ್ರದಲ್ಲಿ, ನಂತರ ರವಿಮಾಮನ ಚಿತ್ರಗಳಲ್ಲಿ.. ಕೋಟಿ ರಾಮು ಚಿತ್ರಗಳಲ್ಲಿ  ಹರಿದಾಡಿದ್ದುಕೇಳಿದ್ದೆ ..ನೋಡಿದ್ದೇ.. ಆದರೆ ಇಲ್ಲಿ ಅಕ್ಷರಶಃ ಪ್ರತಿ ಫ್ರೇಮಿನಲ್ಲೂ ಅದ್ದೂರಿತನ ಎದ್ದು ಕಾಣುತ್ತಿತ್ತು..





 ಯಶ್ ನಾಯಕನಾಗಿ ಈ ಚಿತ್ರವನ್ನು ಆವರಿಸಿಕೊಂಡಿರುವ ರೀತಿ ಇಷ್ಟವಾಗುತ್ತದೆ.. ಅನೇಕಾನೇಕ ಬಿಲ್ಡ್ ಅಪ್ ದೃಶ್ಯಗಳು ಇವೆ.. ಆದರೆ ಅವೆಲ್ಲವೂ ಈ ಚಿತ್ರಕ್ಕೆ, ಕತೆಗೆ ಬೇಕಾದಂತೆಯೇ ಇದೆ.. ಆ ಕಾಲದ ದಿರುಸುಗಳಲ್ಲಿ ಅವರನ್ನು ನೋಡೋದು ಇಷ್ಟವಾಗುತ್ತದೆ.. ಕೇಶವಿನ್ಯಾಸ, ಆ ಗಡ್ಡ, ಇರಿಯುವಂತಹ ನೋಟ.. ಚಿಕ್ಕ ಚೊಕ್ಕ ಇಂಗ್ಲಿಷ್ ಪದಗಳು, ತನ್ನ ತಾಯಿಯ ಆಸೆಯನ್ನು ಈಡೇರಿಸಬೇಕು ಎನ್ನುವಾಗ ಅವರ ಅಭಿನಯ.. ಜಗತ್ತಿಗೆ ಎದುರಾಗಿ ನಿಲ್ಲುತ್ತೇನೆ ಎನ್ನುವಾಗ ಕಣ್ಣಿನ ಹೊಳಪು.. ಎಲ್ಲವೂ ಸೊಗಸಾಗಿದೆ.. 

ಅಕ್ಷರಶಃ ರಾಕಿ ಪಾತ್ರದಲ್ಲಿ ಬೇರೆ ಯಾವ ಕಲಾವಿದರನ್ನೂ ಕಲ್ಪಿಸಿಕೊಳ್ಳಲು ಆಗದಷ್ಟು ಪರಕಾಯ ಪ್ರವೇಶ ಮಾಡಿದ್ದಾರೆ.. ಪಾಂಡವರಹಳ್ಳಿ ಪಾಂಡವರು ಚಿತ್ರದಲ್ಲಿ ಹೇಳಿದಂತೆ ಸಾಹುಕಾರರು ಅಂದರೆ ಪಡುವಾರಹಳ್ಳಿ, ಪಡುವಾರಹಳ್ಳಿ ಅಂದ್ರೆ ಸಾಹುಕಾರರು.. ಅನ್ನುವ ಹಾಗೆ ರಾಕಿ ಅಂದ್ರೆ ಯಶ್.. ಯಶ್ ಅಂದ್ರೆ ರಾಕಿ ಆಗಿ ಬಿಟ್ಟಿದ್ದಾರೆ.. 

ಪ್ರತಿ ಫ್ರೇಮಿನಲ್ಲೂ ಅವರ ಅಬ್ಬರ.. ಅಭಿನಯ.. ಆ ಬಣ್ಣಗಳ ಸಮುದ್ರದಲ್ಲಿ ಅವರು ಮೂಡಿರುವುದು ಅದ್ಭುತ ಎನಿಸುತ್ತದೆ.. 

ತನ್ನ ಪ್ರೇಮಿಯನ್ನು ರಮಿಸುವ ಶೈಲಿ ಕೂಡ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.. ಅದನ್ನು ತೆರೆಯ ಮೇಲೆ ತೋರಿಸಿರುವ ರೀತಿ ಕೂಡ ಯಶ್ ಗೆ ಮಾತ್ರ ಸಾಧ್ಯವೇನೋ ಅನಿಸುವಂತಿದೆ.. ಮತ್ತೆ ಇದು ಹೀಗೆ ಇರಬೇಕು ರಾಕಿಯ ಹಾವಭಾವಕ್ಕೆ ಎನ್ನುವಂತಿದೆ. 

ಈ ಸಿನೆಮಾಗಾಗಿಯೇ ಐದಾರು ವರ್ಷಗಳಿಂದ ಗಡ್ಡ ಮೀಸೆ ತಲೆಗೂದಲನ್ನು ಹುಲುಸಾಗಿ ಬೆಳೆಸಿಕೊಂಡು, ಆ ಪಾತ್ರವೇ ತಾವಾಗಿರುವುದು ಕಲಾವಿದನ ಶ್ರದ್ಧೆಯನ್ನು ತೋರಿಸುತ್ತದೆ... ನಿಜ ಅದಕ್ಕೆ ಬೇಕಾದ ಸಂಭಾವನೆ ಪಡೆದಿರುತ್ತಾರೆ.. ಆದರೆ ಆ ಮಟ್ಟದ ಶ್ರದ್ಧೆ, ತಾಳ್ಮೆ ಅವರನ್ನು ಈ ವೃತ್ತಿಯಲ್ಲಿ ಮೇಲೇರಿಸುತ್ತಿದೆ ಎಂದರೆ ತಪ್ಪಿಲ್ಲ.. 




ನಾಯಕಿ ಶ್ರೀನಿಧಿ ಶೆಟ್ಟಿ ಮೊದಲ ಭಾಗದಲ್ಲಿ ಸ್ಕ್ರೀನ್ ಸಮಯ ಅಷ್ಟೊಂದು ಇರಲಿಲ್ಲ.. ಆದರೆ ಈ ಭಾಗದಲ್ಲಿ ಹಲವಾರು ದೃಶ್ಯಗಳಿವೆ.. ಮತ್ತೆ ಅಷ್ಟೇ ಮುದ್ದಾಗಿ ಕಾಣುತ್ತಾರೆ.. ಅಭಿನಯಕ್ಕೆ ಅಷ್ಟೊಂದು ಅವಕಾಶವಿಲ್ಲದಿದ್ದರೂ, ಸಿಕ್ಕ ಅವಕಾಶದಲ್ಲಿ ಆಹಾ ಮತ್ತೊಮ್ಮೆ ನೋಡಬೇಕು ಅನಿಸುತ್ತದೆ. ಮುದ್ದು ಮುದ್ದಾಗಿ ಕಾಣುವ ಅವರ ಮೊಗವನ್ನು ನೋಡುವುದೇ ಕುಶಿ.. ನಾಯಕನ್ನು ದ್ವೇಷಿಸುವಾಗಲಿ, ಅಥವ ಪ್ರೀತಿ ವ್ಯಕ್ತಪಡಿಸುವಾಗಲಿ ಅವರ ಅಭಿನಯ ನೋಡಲು ಚೆನ್ನಾ.. ಆ ಮುಗ್ಧ ಕಣ್ಣುಗಳಲ್ಲಿನ ಅವರ ಸೌಂದರ್ಯವನ್ನು ತೆರೆಯ ಮೇಲೆ ನೋಡಲು ಖುಷಿಯಾಗುತ್ತದೆ.. 







ನನ್ನ ನೆಚ್ಚಿನ ರವೀನಾ ಟಂಡನ್.. ಅರೆ ಇದೆ ಪಾತ್ರವನ್ನು ಅವರ ಯೌವ್ವನ ಕಾಲದಲ್ಲಿ ಮಾಡಿದಿದ್ದರೆ ಎಷ್ಟು ಚೆನ್ನಾ ಅನಿಸಿತ್ತು.. ಸಿಕ್ಕ ಅವಕಾಶವನ್ನು ಸೊಗಸಾಗಿ ಉಪಯೋಗಿಸಿಕೊಂಡಿದ್ದಾರೆ.. ಆ ದೃಶ್ಯಗಳಿಗೆ ಬೇಕಾಗುವ  ಮುಖಾಭಿನಯ ನೋಡಲು ಚೆನ್ನಾ.. ಅವರ ವೇಷಭೂಷಣಗಳು ಮುದ್ದಾಗಿ ಕಾಣಲು ಸಹಕಾರಿಯಾಗಿದೆ .. 

ಸಂಜಯ್ ದತ್ ಅವರ ಅಭಿನಯದ ಅಬ್ಬರತೆಯನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು.. 





ಮಾಳವಿಕಾ ಮೊದಲ ಭಾಗದ ಮುಗ್ಧತೆ, ಸೌಂದರ್ಯ, ಭಾಷಾ ಶುದ್ದತೆ ಎಲ್ಲವನ್ನೂ ಉಳಿಸಿಕೊಂಡಿದ್ದಾರೆ.. ಇಡೀ ಚಿತ್ರದ ನಿರೂಪಣೆಯನ್ನು... ತಿರುವುಗಳ ಬಗ್ಗೆ ಇರುವ ಸುಳಿವನ್ನು, ಅಗತ್ಯವಾದಾಗ ಚಿತ್ರಕ್ಕೆ ನೀಡಬಹುದಾದ ವೇಗವನ್ನು ಕೊಡುವ ಪಾತ್ರದಲ್ಲಿ ಲೀಲಾಜಾಲವಾದ ಅಭಿನಯ ಅವರದ್ದು.. ಭಾಷೆಯನ್ನ ಎಷ್ಟು ಸೊಗಸಾಗಿ ಉಚ್ಚರಿಸುತ್ತಾರೆ.. ಹಾಗೆ ಆ ಜೇನು ಧ್ವನಿ.. ಬಹಳ ಇಷ್ಟವಾಗುತ್ತದೆ.. 

ನಾಗಾಭರಣ ಯತೋಚಿತವಾಗಿ ಅಭಿನಯಿಸಿದ್ದಾರೆ.. ಪ್ರಕಾಶ್ ರೈ ಚಿತ್ರಕ್ಕೆ ಬೇಕಾದ ನಿಟ್ಟಿನಲ್ಲಿ ಅಭಿನಯಿಸಿದ್ದಾರೆ... ಟೀ ಕಾಫೀ ಕೊಡುವ ಪಾತ್ರದಾರಿ ಅರಿವಿಲ್ಲದೆ ಇಷ್ಟವಾಗುತ್ತಾರೆ. .. ತಿರುವು ಕೊಡುವ ಪಾತ್ರದಲ್ಲಿ ಅಚ್ಯುತ್ ಕುಮಾರ್ ಬೊಂಬಾಟ್.. ಅವರ ಸಹಚರರು.. ಅವರ ವೇಷಭೂಷಣ ಎಲ್ಲವೂ ೧೦೦ ಕ್ಕೆ ೧೦೦ ಅಂಕಗಳು.. 



ಉಳಿದ ಸಹಕಲಾವಿದರು ಚಿತ್ರಕ್ಕೆ, ತಮ್ಮ ಪಾತ್ರಕ್ಕೆ ತಕ್ಕಂತೆ ಅಭಿನಯ ನೀಡಿದ್ದಾರೆ.. 

ಇಲ್ಲಿ ಎದ್ದು ಕಾಣುವುದು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕ್ರಮಬದ್ಧವಾದ ಪರಿಶ್ರಮ.. ತರ್ಕಬದ್ಧವಾದ ಕತೆ, ಅದರ ನಿರೂಪಣೆ.. ಎಲ್ಲಾ ಪರಿಕರಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಿರುವ ರೀತಿ.. ರವಿಯವರ ತಾಪಮಾನ ಇರುವಂತಹ ಹಿನ್ನೆಲೆ ಸಂಗೀತ, ಭುವನ್ ಅವರ ಅದ್ಭುತ ಛಾಯಾಗ್ರಹಣ... ಕ್ಯಾಮೆರಾ ಎಲ್ಲೆಲ್ಲಿ ಇಟ್ಟಿದರಪ್ಪ ಅಂತ  ಹುಡುಕುವ ಹಾಗೆ ಕ್ಯಾಮೆರಾ ಕೈ ಚಳಕ... ಬೆಳಕನ್ನು ಅದ್ಭುತವಾಗಿ ಉಪಯೋಗಿಸಿರುವ ರೀತಿ.. ನಮ್ಮ ಕನ್ನಡ ಚಿತ್ರರಂಗ ಯಾವುದಕ್ಕೂ ಕಮ್ಮಿ ಇಲ್ಲ ಅಂತ ಜಗತ್ತಿಗೆ ತೋರಿಸಿದ ಚಿತ್ರತಂಡದ ಪರಿಶ್ರಮವಿದು.. 




ಪಕ್ಷಿನೋಟ ಕೊಡುವ ದೃಶ್ಯಗಳು.. ಅದರ ವರ್ಣ ವಿನ್ಯಾಸ, ಆ ಸೈನೈಡ್ ಗುಡ್ಡವನ್ನು ಉಪಯೋಗಿಸಿಕೊಂಡಿರುವ ರೀತಿ.. ಪಂಜಿನ ಬೆಳಕಲ್ಲಿ ಚಿತ್ರೀಕರಿಸುವ ಹಲವಾರು ದೃಶ್ಯಗಳು ಕಣ್ಣಿಗೆ ಹಬ್ಬ ಮಾಡುತ್ತವೆ.. 

ಹೋಳಿ ಸಂಭ್ರಮ.. ದೀಪಾವಳಿಯ ಬೆಳಕು ಎರಡೂ ಒಮ್ಮೆಲೇ ನೋಡಬೇಕೆ.. ಇಲ್ಲಿದೆ ಹೋಗಿ ನೋಡಿ ಬನ್ನಿ.. ಬೆಳ್ಳಿ ಪರದೆಯ ಮೇಲೆ ನೋಡುವ ಅನುಭವ ಮನೆಯಲ್ಲಿ ಟಿವಿಯಲ್ಲಿ ಇಲ್ಲವೇ ಮೊಬೈಲಿನಲ್ಲಿ ಕಾಣಸಿಗುವುದಿಲ್ಲ.. 

(ಇಲ್ಲಿ ಹಾಕಿರುವ ಎಲ್ಲಾ ಚಿತ್ರಗಳು ಗೂಗಲೇಶ್ವರ ದಯಪಾಲಿಸಿದ್ದು)

ಕನ್ನಡ ಚಿತ್ರಗಳನ್ನು ನೋಡೋಣ.. ಬೆಳೆಸೋಣ.. ಗೆಲ್ಲಿಸೋಣ.. !!!

ಹಿಂದಿಯ ಚಿತ್ರಗಳ ನಟಿ ಈ ಚಿತ್ರವನ್ನು ಯಶಸ್ವೀ
ಮಾಡಲು ಹೊರಟಿದ್ದಾರೆ ನಾವು ಹೊರಡೋಣ ಅಲ್ವೇ!!!

Tuesday, April 12, 2022

ಅಣ್ಣಾವ್ರು .. ಹಾಡುಗಳ ಜುಗಲ್ ಬಂದಿ ... ಪುಣ್ಯ ದಿನ - 2022


ಶ್ರೀ 
"ವಿಧಿಯಾಟವೇನೆಂದು ಬಲ್ಲವರು  
ಯಾರು ಮುಂದೇನು ಎಂದು ಹೇಳುವರು ಯಾರು.. 
ಬರುವುದು ಬರಲೆಂದು 
ನಸುನಗುತ್ತಾ ಬಾಳದೆ 
ನಿರಾಸೆ ವಿಷಾದ ಇದೇಕೆ ಇದೇಕೆ"  (ಹೊಸಬೆಳಕು.. ಕಣ್ಣೆರ ಧಾರೆ ಇದೇಕೆ)

ಅಣ್ಣಾವ್ರು 
"ನಗುನಗುತಾ ನಲಿ ನಲಿ ಏನೇ ಆಗಲಿ 
ಎಲ್ಲಾ ದೇವನ ಕಲೆ ಎಂದೇ ನೀ ತಿಳಿ 
ಅದರಿಂದ ನೀ ಕಲಿ" (ಬಂಗಾರದ ಮನುಷ್ಯ .. ನಗು ನಗುತಾ ನಲಿ)

ಶ್ರೀ 
"ಏನೆಂದು ನಾ ಹೇಳಲಿ 
ಮಾನವನಾಸೆಗೆ ಕೊನೆಯೆಲ್ಲಿ 
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ 
ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ 
ಯಾರನ್ನೂ ಪ್ರೀತಿಸನು ಮನದಲ್ಲಿ 
ಏನೊಂದು ಬಾಳಿಸನು ಜಗದಲ್ಲಿ " (ಗಿರಿ ಕನ್ಯೆ .. ಏನೆಂದು ನಾ ಹೇಳಲಿ)

ಅಣ್ಣಾವ್ರು 
"ಬದುಕು ಒಂದು ಹೂವಿನ ಹಾಗೆ 
ನಗುವೇ ಆ ಸುಮದ ಪರಿಮಳವು" (ಅದೇ ಕಣ್ಣು .. ನಿನ್ನೀ ನಗುವೇ ಅರುಣೋದಯವೂ ಈ ಮನೆಗೆ)

ಶ್ರೀ 
"ಈ ದೇಹದಿಂದ ದೂರನಾದೆ ಏಕೆ ಆತ್ಮನೇ 
ಈ ಸಾವು ನ್ಯಾಯವೇ.. 
ಆಧಾರ ನೀನೆಂದು ಈ ಲೋಕ ನಂಬಿದೆ 
ಈ ದೇಹದಿಂದ ದೂರನಾದೆ ಏಕೆ ಆತ್ಮನೇ" (ಓಹಿಲೇಶ್ವರ.. ಈ ದೇಹದಿಂದ ದೂರನಾದೆ)

ಅಣ್ಣಾವ್ರು 
"ಯಾರೇ ಕೂಗಾಡಲಿ 
ಊರೇ ಹೋರಾಡಲಿ 
ನಿನ್ನ ನೆಮ್ಮದಿ ಭಂಗವಿಲ್ಲ
ಎಮ್ಮೆ ನಿನಗೆ ಸಾಟಿಯಿಲ್ಲ ಬಿಸಿಲು ಮಳೆಗೆ ಚಳಿಗೆ ಬಿಸಿಲಿಗೆ 
ಹೆದರದೆ ಮುಂದೆ ಸಾಗು ನೀ ಅರೆ ಹುಯ್ ಅರೆ ಹುಯ್ ಟುರ್ರ್ರಾ ಆ ಆ ಆ" (ಸಂಪತ್ತಿಗೆ ಸವಾಲ್.. ಯಾರೇ ಕೂಗಾಡಲಿ)

ಶ್ರೀ 
"ನಗುವುದೋ ಅಳುವುದೋ ನೀವೇ ಹೇಳಿ 
ಇರುವುದೋ ಬಿಡುವುದು ಈ ಊರಿನಲ್ಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ 
ಅಳುವುದೋ ನಗುವುದೋ ಈಗ ಏನು ಮಾಡಲಿ" (ಸಂಪತ್ತಿಗೆ ಸವಾಲ್ .. ನಗುವುದೋ ಅಳುವುದೋ)

ಅಣ್ಣಾವ್ರು 
"ಹಿಂದಿನ ಸಾಲ ತೀರಿಸಲೆಂದು 
ಬಂದಿಹೆವಯ್ಯ ಜನ್ಮವ ತಳೆದು 
ಮುಂದಿನ ಬದುಕು ಬಂಧುರವೆನಿಸೋ ಗುರಿ ಸಾಧಿಸೋ ಕಂದಾ" (ಭಕ್ತ ಕುಂಬಾರ .. ನಾನೂ ನೀನು ನೆಂಟರಯ್ಯ)

ಶ್ರೀ 
"ನನ್ನ ನೀನು ಗೆಲ್ಲಲಾರೆ 
ತಿಳಿದು ತಿಳಿದು ಛಲವೇತಕೆ" (ನೀ ನನ್ನ ಗೆಲ್ಲಲಾರೆ .. ನನ್ನ ನೀನು ಗೆಲ್ಲಲಾರೆ)

ಶ್ರೀ 
ಸುಖದಲಿ ಎಂದೂ ಮನದಲ್ಲಿ ನಿನ್ನ ನೆನೆದವನಂತೂ ನಾನಲ್ಲ 
ಕಡು ಕಷ್ಟದ ಬೇಗೆಯು ಸುಡುತಿರುವಾಗ ಮೂಡಿತು ನಿನ್ನ ನೆನಪು ಸುಳ್ಳಲ್ಲ 
ಕೊರಗುತ ಕರೆಯುತ ಬಂದೆ ಕರುಣೆಯೇ ಇಲ್ಲವೇ ಎಂದೇ 
ಇನ್ನೂ ನೀನು ಬಾರದೆ ಹೋದರೆ ಸುಮ್ಮನಿರುವವ ನಾನಲ್ಲ.. 

ಶಕ್ತಿಯು ದೇಹದಿ ತುಂಬಿರುವಾಗ ಮಂತ್ರಾಲಯಕೆ ಬರಲಿಲ್ಲ 
ಗುರು ಭಕ್ತರನೆಂದು ಕನಸಲ್ಲಾಗಲಿ ಸೇರಿಸಿದಂತೆ ನೆನಪಿಲ್ಲ 
ಭಕ್ತನು ನಾನೇನಲ್ಲ ಭಕ್ತಿಯ ಅರಿವೆನಗಿಲ್ಲ 
ಅಭಯವ ನೀನು ನೀಡುವ ತನಕ ಪಾದವ ಬಿಡುವವ ನಾನಲ್ಲ.. (ಮಂತ್ರಾಲಯದ ಭಕ್ತಿ ಗೀತೆಗಳು)

ಅಣ್ಣಾವ್ರು 
ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ  (ಮಂತ್ರಾಲಯದ ಭಕ್ತಿ ಗೀತೆಗಳು - ದೇವತಾ ಮನುಷ್ಯ .. ಹಾಲಲ್ಲಾದರೂ ಹಾಕು)

ಶ್ರೀ 
ಆಸೆಯೂ ಕೈಗೂಡಿತು 
ಆಸರೆ ದೊರೆತಾಯಿತು 
ಚಿಂತೆ ದೂರವಾಯಿತು 
ಮನಸು ಹಗುರವಾಯಿತು  (ನಾನೊಬ್ಬ ಕಳ್ಳ -- ಆಸೆಯೂ ಕೈ ಗೂಡಿತು)
 
********

ಅಣ್ಣಾವ್ರು ಗಂಧರ್ವ ಲೋಕ ಸೇರಿದ ದಿನವಿದು.. ಏನಾದರೂ ಬರೆಯಲೇ ಬೇಕು.. ಏನು ಬರೆಯುವುದು.. ಏನಂಥ ಬರೆಯುವುದು..ಕೆಲಸದ ಒತ್ತಡ ಗೊಬ್ಬರ ಗೂಡಾದ ಮನಸ್ಸು.. ಸ್ಪೂರ್ತಿಯ ಸೆಲೆಗಾಗಿ ಹುಡುಕಾಡುತಿತ್ತು.. ಶ್ರೀ ಕೃಷ್ಣ ಅರ್ಜುನನಿಗೆ ಮಾರ್ಗದರ್ಶನ ನೀಡಿದ ಹಾಗೆ.. ಸಂಜೆ ಆಫೀಸಿನಿಂದ ಮೆಟ್ರೋದಲ್ಲಿ ಬರುವಾಗ ನನ್ನ ನೆಚ್ಚಿನ ಗೆಳೆಯ ಅಖಿಲ್ ಜೊತೆ ಮಾತಾಡುತ್ತಾ ಬಂದೆ.. ಸಂಜೆ ಕೊಂಚ ಹೊತ್ತು ದೇಹ ದಂಡಿಸಿ ಬಂದೆ ಶ್ರೀಕಾಂತ್.. ಈಗ ಮನಸ್ಸು ಹಗುರಾಗಿದೆ ಎಂದರು.. 

ಅಚಾನಕ್ ಬಾಯಿಗೆ ಬಂತು.. ಅಣ್ಣಾವ್ರು ಶಂಕರ್ ಗುರು ಚಿತ್ರದಲ್ಲಿ ಚಾವಟಿಯಲ್ಲಿ ಹೊಡೆಸಿಕೊಳ್ಳುತ್ತಿರುತ್ತಾರೆ... ಆಗ ಆತನ ಸಾಕು ಮಗಳು ಜಯಮಾಲಾ ಬಂದು ಯಾಕೆ ಅಂಕಲ್ ಅಂದಾಗ.. ಅವರು ಹೇಳುವ ಮಾತು.. ಆತ್ಮ ಶುದ್ಧಿಗೋಸ್ಕರ ಈ ದೇಹಕ್ಕೆ ಪ್ರಾಯಶ್ಚಿತ್ತ ಆಗಾಗ ಅನಿವಾರ್ಯ... 
 
ಅದೇ ರೀತಿ ಕಾಮನಬಿಲ್ಲು ಚಿತ್ರದಲ್ಲಿ ಸರಿತಾ ಯೋಗದ ಬಗ್ಗೆ ಕೇಳಿದಾಗ ಅವರು ಹೇಳುವುದು "ದೇಹಕ್ಕೆ ಸ್ವಲ್ಪ ದಂಡನೆ ಕೊಡಬೇಕು.. ನೋಯಿಸಬೇಕು.. ಹಿಂಸೆ ಕೊಡಬೇಕು.. ಆವಾಗ ಶಾಂತಿ ಸಹನೆ ತನ್ನ ಪಾಡಿಗೆ ತಾನೇ ಸಿಗುತ್ತೆ.. "

ಇದೆ ಮಾತುಗಳು ಮೆಟ್ರೋದಲ್ಲಿ ಮನೆ ತನಕ ಬರೋ ತನಕ ಸೈಕಲ್ ಹೊಡಿತಾ ಇತ್ತು.. ಇತ್ತೀಚಿಗೆ ಬದುಕಲ್ಲಿ ನೆಡೆದ ಕೆಲವು ವಿದ್ಯಮಾನಗಳು ಮನಸ್ಸನ್ನು ಘಾಸಿಗೊಳಿಸಿದ್ದವು.. ಹಿಂಸೆ ಮಾಡಿದ್ದವು.. ಏನು ಮಾಡೋದು.. ಹೇಗೆ ಮುಂದುವರೆಯೋದು ಎನ್ನುವ ಗೊಂದಲ ನನ್ನ ಮನದಲ್ಲಿ ಮನೆಕಟ್ಟಿ ಗೃಹಪ್ರವೇಶ ಮಾಡಿತ್ತು.. . ಎಲ್ಲಿ ಹೆಜ್ಜೆ ಇಟ್ಟರೂ ಕೆಸರಿನ ನೆಲವೇ.. ಕಾಲು ಜಾರಿ ಹೋಗುತ್ತಿತ್ತು.. ಇವತ್ತಿಗೋಸ್ಕರ ಮನಸ್ಸು ಕಾಯುತ್ತಿತ್ತೋ ಏನೋ.. ಅಣ್ಣಾವ್ರ ಅಭಿಮಾನ ಪೂರ್ವಕ ಹಾಡುಗಳು ಮನಸ್ಸಿನಲ್ಲಿ ಕಟ್ಟಿದ್ದ ಜೇಡರಬಲೆಯನ್ನು ಕಿತ್ತೊಗೆಯಿತು.. ಮನಸ್ಸು ಹಕ್ಕಿಯಾಯಿತು.. ಈ ಲೇಖನ ಸೃಷ್ಟಿಯಾಯಿತು. 

******
ಅಣ್ಣಾವ್ರು, ರಾಜ್, ಮುತ್ತು ರಾಜ್.. ಇವೆಲ್ಲಾ ನೂರೆಂಟು ಹೆಸರುಗಳು ಇರಬಹುದು.. ಅವರ ಪ್ರತಿ ಚಿತ್ರಗಳು ಒಂದು ತರಗತಿ ಇದ್ದ ಹಾಗೆ.. ಅಣ್ಣಾವ್ರು ನನ್ನ ತಲೆಯ ಮೇಲೆ ಮೆಲ್ಲಗೆ ಮೊಟಕಿ.. 

"ಶ್ರೀ ನಲವತ್ತು ಮೂರು ಚಿತ್ರಗಳಿಗೆ ನಿಂತು ಬಿಟ್ಟಿದ್ದೀಯ.. ಮುಂದುವರೆಸಪ್ಪ.. ನಾನು ಕಾಯ್ಥ ಇದ್ದೀನಿ.. ಪಾರ್ವತೀ ಪ್ರತಿ ದಿನ ಕೇಳ್ತಾನೆ ಇರ್ತಾಳೆ.. ಇತ್ತೀಚಿಗಷ್ಟೇ ಬಂದ ಅಪ್ಪು ಕೂಡ.. ಅಪ್ಪಾಜಿ ಈ ಶ್ರೀ ಬರಿ ಕತೆ ಹೇಳ್ತಾನೆ.. ನಿಮ್ಮ ಶೈಲಿಯಲ್ಲಿ ಒಂದು ಧಮ್ಕಿ ಹಾಕಿ ಬನ್ನಿ.. ಇನ್ನೂ ನೂರಾ ಅರವತ್ತೆರಡು ಚಿತ್ರಗಳಿವೆ.. ಓದಬೇಕು.. ಶ್ರೀ ಮತ್ತೆ ಅವನ ಹಾದಿಗೆ ಮರಳಬೇಕು.. ಹೋಗಿ ಬನ್ನಿ ಅಪ್ಪಾಜಿ ಅಂತ ಇವತ್ತು ನನ್ನ ಕಳಿಸಿದ.. ಅದಕ್ಕೆ ನೀನು ಎಂದಿಗೂ ದುಃಖ ಪಡುವ ಮನುಷ್ಯನಲ್ಲ.. ಆದರೆ ನೀ ಈ ಲೇಖನ ಶುರು ಮಾಡಿದ ರೀತಿ ನನಗೆ ಬೇಸರವಾಯಿತು.. ನಿನ್ನ ದುಃಖಭರಿತ ಗೀತೆಗಳಿಗೆ ನಾ ಸ್ಫೂರ್ತಿ ಕೊಡುವ ಗೀತೆಗಳನ್ನು ಹೇಳುತ್ತಾ ಬಂದೆ.. ಕೊನೆಯಲ್ಲಿ ಮತ್ತೆ ನಿನ್ನ ಶೈಲಿಗೆ ಮರಳಿದ್ದು ಖುಷಿಯಾಯಿತು.. ಶ್ರೀ ನಾ ಇದ್ದೇನೆ ನಿನ್ನ ಜೊತೆಯಲ್ಲಿ.. ಆಂಜನೇಯ ಸಂಜೀವಿನಿ ಪರ್ವತ ಎತ್ತಿ ಹಿಡಿದಂತೆ ನಿನ್ನ ಬೀಳದಂತೆ ನನ್ನ ಕೈಯಲ್ಲಿ ಹಿಡಿದಿಟ್ಟು ಕೊಂಡಿರುತ್ತೇನೆ.. ಬರಲಿ ನಿನ್ನ ಲೇಖನ ಮಾಲೆಗಳು, ಪುಟ್ಟಣ್ಣ ಕಣಗಾಲ್ ಚಿತ್ರ ಸರಣಿ ಆಯ್ತು, ಬಾಲಣ್ಣ ಚಿತ್ರ ಸರಣಿ ಮುಂದುವರೆಸು.. ಅಶ್ವಥ್ ಅವರ ಚಿತ್ರ ಮಾಲೆ, ರಾಜಾನಂದ್ ಅವರ ಚಿತ್ರ ಮಾಲೆ ಶುರುವಾಗಲಿ ..ಶುಭವಾಗಲಿ ಶ್ರೀ.. ಶುಭವೇ ಆಗುತ್ತದೆ ಶ್ರೀ.. ಸರೀನಾ.. " 

ಇದು ಶ್ರೀ.. ಈ ನಗು ನಿನ್ನ ಮೊಗದಲ್ಲಿ ಸದಾ ಇರಬೇಕು.. ಸದಾ ಇರುತ್ತೆ... ನಿನ್ನ ಜಗತ್ತಿಗೆ ಮತ್ತೆ ಮರಳಿದ ನಿನಗೆ ಶುಭವಾಗಲಿ ಶ್ರೀ ... ! 



ಕಣ್ಣು ಬಿಟ್ಟೆ.. ಮನೆಯ ಗೋಡೆಯಲ್ಲಿ ಇದ್ದ ಅಣ್ಣಾವ್ರ ಚಿತ್ರ ...ಅದು ನನ್ನ ಶ್ರೀ ಎನ್ನುತ್ತಾ ಒಮ್ಮೆ ಕಣ್ಣು ಮಿಟುಕಿಸಿ ನಕ್ಕಿತು.. 

ನನ್ನ ಮನದಲ್ಲಿ ಸ್ಪೂರ್ತಿಯ ಸೆಲೆ ಉಕ್ಕಿತು !!!!!