Sunday, December 1, 2013

ಪುಟ್ಟಣ್ಣ - ಎಂಭತ್ತು ವಸಂತಗಳ ಒಂದು ಚೌಕಟ್ಟು

ಪುಟ್ಟಣ್ಣ ಕಣಗಾಲ್ ಯಾಕೆ ಇಷ್ಟವಾಗುತ್ತಾರೆ.. ಅವರ ಬಗ್ಗೆ ಏನು ಅಂಥಹ ವಿಶೇಷತೆ.. ಎಲ್ಲಾ ನಿರ್ದೇಶಕರ ತರಹ ಅವರು ಒಬ್ಬರು.. ಇದೆಲ್ಲ ನಿಜವೇ ಸುಳ್ಳೇ.. ಈ  ರೀತಿಯ ಪ್ರಶ್ನೆಗಳು ಸದಾ ಉದ್ಭವವಾಗಿರುತ್ತವೆ ಅವರ ಚಿತ್ರಗಳನ್ನು ನೋಡದ ಅಥವಾ ಆರಾಧಿಸದ ಇತ್ತೀಚಿನ ಪೀಳಿಗೆಗೆ..

ಅವರ ಪ್ರತಿಚಿತ್ರದಲ್ಲೂ ವಿಭಿನ್ನ ಕಥಾ ವಸ್ತುವನ್ನು ಒಳಗೊಂಡಿತ್ತು.. ಒಂದು ಸಂದರ್ಶನದಲ್ಲಿ ಅವರೆ ಗುರುತಿಸಿದ ಪ್ರತಿಭೆ ಅಂಬರೀಶ್ ಹೇಳಿದ್ದು "ಗುರುಗಳು ಮಾಡಿದ ಚಿತ್ರಗಳೆಲ್ಲ ನಮ್ಮ ಸಂಸೃತಿಗೆ  ವಿಭಿನ್ನವಾದದ್ದು ಆದರೂ ಅಂಥಹ ಕಥಾ ವಸ್ತುವನ್ನು ಎಲ್ಲರೂ ಒಪ್ಪುವ ರೀತಿಯಲ್ಲಿ ಕಟ್ಟಿಕೊಡುತ್ತಿದ್ದರು" ಪ್ರಾಯಶಃ ಇದು ಅವರ ಚಿತ್ರ ನಿರ್ದೇಶನಕ್ಕೆ ಹಾಗೆಯೇ ಅವರ ವ್ಯಕ್ತಿತ್ವಕ್ಕೆ ಒಂದು ಉತ್ತಮ ಮಾತುಗಳು...

ಇಂದು ಅವರ ಜನುಮ ದಿನ .. ಜನುಮ ದಿನ ಅಂದಾಗ ಅವರ ವ್ಯಕ್ತಿ ವಿಶೇಷಣ ಅಥವಾ ಗುಣಗಳನ್ನು ಹೊಗಳಿ ಹಾಡುವ ಪರಂಪರೆ ಸಾಮಾನ್ಯ.. ಇಂದೇಕೋ ಅವರ ಚಿತ್ರಗಳ ಹಾಡು ನೆನಪಿಗೆ ಬರುತ್ತಿದೆ.. ಅವರನ್ನು ಅವರದೇ ಚಿತ್ರಗೀತೆಗಳ ಮೂಲಕ ಕಟ್ಟಿ ಕೊಡೋಣ ಎನ್ನುವ ವಿಭಿನ್ನ ಚಪಲ ಕಾಡುತ್ತಿದೆ.. ತಗೊಳ್ಳಿ ಇದೋ ಬಂತು ನಿಮ್ಮ ಮುಂದೆ.. ನನಗೆ ಅನ್ನಿಸಿದ ಅವರ ನಿರ್ದೇಶನ ಹತ್ತು ಗೀತೆಗಳು ನಿಮ್ಮ ಮುಂದೆ.. ಇದು ಯಾವುದೇ ಕ್ರಮದಲ್ಲಿ ಇಲ್ಲ.. ನೆನಪಿಗೆ ಬಂದ ನನ್ನ ಮನಸ್ಸಿಗೆ (ಹುಚ್ಚು)ಹಿಡಿಸಿದ ಸಾಹಿತ್ಯ, ಸಂಗೀತ, ಚಿತ್ರೀಕರಣ ಅಷ್ಟೇಯ.. ಸರಿ ನಡೆಯಿರಿ ಹೋಗೋಣ

೧.
ಪ್ರೇಮದಲ್ಲಿ ಸ್ನೇಹದಲ್ಲಿ ಈ ಹಾಡು ರಂಗನಾಯಕಿ ಚಿತ್ರದ್ದು.. ಅದರ ಸಾಹಿತ್ಯ ತುಂಬಾ ವಿಭಿನ್ನ ಆ ಕಾಲದ ಅತ್ಯುತ್ತಮ ಮಸಾಲ ಚಿತ್ರಗೀತೆಯಿಂದೆ ಹೆಸರುವಾಸಿಯಾಗಿತ್ತು.. ಸಾಹಿತ್ಯ ವಿಭಿನ್ನ ಹಾಗೆಯೇ ಮಧುರ ಗೀತೆಗಳಿಗೆ ಹೆಸರಾಗಿದ್ದ ಸಂಗೀತ ನಿರ್ದೇಶಕ ಎಂ ರಂಗರಾವ್ ಈ ಗೀತೆಗೆ ಪಕ್ಕ ಮಸಾಲ ಸಂಗೀತ ನೀಡಿದ್ದಲ್ಲದೆ ಡ್ರಮ್ ಸಂಗೀತವನ್ನು ಅತಿ ಉತ್ತಮವಾಗಿ ಬಳಸಿಕೊಂಡಿದ್ದಾರೆ.. "ಮೈ ಡಿಯರ್" ಎನ್ನುವ ಪದವಾದ ಮೇಲೆ ಬರುವ ಡ್ರಮ್ ಬೀಟ್ಸ್ ಕೇಳಿ.. ಎಸ್ ಪಿ ಬಾಲಸುಬ್ರಮಣ್ಯಂ ಹಾಡಿದ ಈ ಹಾಡು ನಿಜಕ್ಕೂ ಈಗಿನ ಕಾಲದ ಫುಟ್ ಟ್ಯಾಪಿಂಗ್ ಅಂತಾರಲ್ಲ ಅದಕ್ಕಿಂತ ಸೂಪರ್.. ನಮ್ಮ ಕನ್ನಡ ಚಿತ್ರರಂಗದ ಮೊದಲ ಪ್ಲೇಬಾಯ್ ಎನಿಸುವ ಸ್ಪುರದ್ರೂಪಿ ರಾಮಕೃಷ್ಣ ಅವರ ನೃತ್ಯ ಎಲ್ಲವು ಸೊಗಸು.. ಪುಟ್ಟಣ್ಣ ಅವರ ತಾಕತ್ ಇದು. ಒಂದು ಮಸಾಲ ಚಿತ್ರಗೀತೆಯನ್ನು ಅಶ್ಲೀಲ ಎನಿಸದೆ ಚಿತ್ರೀಕರಿಸಿದ್ದು

೨.

ಮಹೇಶ್ ಪಾತ್ರಧಾರಿ ರಾಜ್ ಸಾಕ್ಷಾತ್ಕಾರದಲ್ಲಿ ಒಲವು ಒಲವು ಎನ್ನುತ್ತಾ ಎಲ್ಲರನ್ನು ಒಂದಾಗಿಸುವ ಪ್ರಯತ್ನದಲ್ಲಿ ಸುಳ್ಳು ಕೊಲೆ ಆಪಾದನೆ ಮೇಲೆ ಜೈಲು ಸೇರಿರುತ್ತಾರೆ.. ಅವರಿಗಾಗಿ ಕಾಯುತ್ತಿದ್ದ ಉಮ ಪಾತ್ರಧಾರಿ ಜಮುನ ಕಾದು ಕಾದು ಬೆಂದಿದ್ದಾಗ... ಬಿಡುಗಡೆಗೊಂಡ  ರಾಜ್ ಬರುವುದನ್ನು ಕಂಡು ಜಮುನ ಓಡೋಡಿ ಬರುತ್ತಾರೆ.. ಆಗ ಶುರುವಾಗುವ ಹಾಡು "ಒಲವೆ ಜೀವನ ಸಾಕ್ಷಾತ್ಕಾರ" ಪಿ ಬಿ ಎಸ್ ಮತ್ತು ಪಿ ಸುಶೀಲ ಹಾಡಿದ ಸುಮಧುರ ಹಾಡು... ಪಿ ಸುಶೀಲ ಹೇಳಿದ್ದನ್ನೇ ಪಿ ಬಿ ಎಸ್ ಹಾಡುವ ರೀತಿಯಲ್ಲಿ ಚಿತ್ರೀಕರಣಗೊಂಡಿದೆ.. ಇಲ್ಲಿ ಗಮನಿಸಬೇಕಾದ ಅಂಶ.
ಛಾಯಾಗ್ರಹಣ.. ಮತ್ತು ಕ್ಯಾಮರ ಓಡಾಟ.. ಹತ್ತಿರ ಬರುತ್ತದೆ ದೂರ ಹೋಗುತ್ತದೆ.. ಒಂದು ವಿಚಿತ್ರ ಅನುಭವ ಕೊಡುವ ಶೈಲಿ. ಒಲವು ಒಲವು ಎಂದು ಒದ್ದಾಡಿದರು ಅದರ ಸಾಪಲ್ಯ ಪಡೆಯದೇ.. ಸಿಕ್ಕಿತು ಆದ್ರೆ ದೂರವಾಯಿತು ಎನ್ನುವ ಅನುಭವ ಕೊಡುವ ಚಿತ್ರ ಇದು.. ಮತ್ತು ಇಬ್ಬರು ಹಾಡಿರುವ ಈ ಗೀತೆ ಪ್ರತಿಧ್ವನಿ ಅಥವಾ ಎಕೋ ಎಫೆಕ್ಟ್.. ಈ ಗೀತೆಯ ನಿಜವಾದ ಶಕ್ತಿ.. ಮತ್ತು ಅದುವೇ ಪುಟ್ಟಣ್ಣ ಅವರ ಶೈಲಿ

೩.

"ಗುರುಗಳೇ ನಾನೆ ಒಂದು ಹಾಡು ಕಟ್ಟಿದ್ದೇನೆ.. ಅದನ್ನು ಹಾಡಲೇ" ಶಾರದ ಪಾತ್ರಧಾರಿ ಆರತಿ ತಮ್ಮ ಗುರುಗಳು ಸೀತಾರಾಮ್ (ಮುಂದೆ ಉಪಾಸನೆ ಸೀತಾರಾಮ್ ಎಂದೇ ಪ್ರಖ್ಯಾತಿ ಹೊಂದಿದರು) ಅವರಿಗೆ ಕೇಳುತ್ತಾರೆ.. ಹಾಡು ತಾಯಿ ಅಂದಾಗ ಶುರುವಾಗುವುದು "ಭಾರತ ಭೂಶಿರ ಮಂದಿರ ಸುಂದರಿ".. ಈ ಗೀತೆಯಲ್ಲಿ ಆರತಿ ಅವರ ಮುಖ.. ಭಾವಾಭಿನಯ.. ಮತ್ತು ಅವರ ಮುಖದ ಮೇಲೆ ಬೀರುವ ಬೆಳಕು ಮತ್ತು ಸ್ವಲ್ಪವು ಕದಲದ ಕ್ಯಾಮರ ಕೈಚಳಕ.. ಪ್ರತಿ ಪದವನ್ನು ಅನುಭವಿಸಿ ಅಭಿನಯಿಸಿರುವ ಆರತಿ.. ಪ್ರತಿ ಪದಕ್ಕೂ ಜೀವ ತುಂಬಿ ಹಾಡಿರುವ ಎಸ್ ಜಾನಕಿ.. ಹಾಡುಗಾರಿಕೆಯಿಂದ ಸಂತಸಗೊಂಡು ಮಧ್ಯದಲ್ಲಿ ಬರುವ ಸಂಗೀತ ವಿಧ್ವಾಂಸ ಪಾತ್ರಧಾರಿ ರಾಮಚಂದ್ರ ಶಾಸ್ತ್ರಿ ಹೇಳುವ ಮಾತು "ನಿನ್ನ ಕರುಳು ಹಿಂಡುವ ಸಂಗೀತ ಅದ್ಭುತ ತಾಯಿ ನಿನಗೆ ಸಂಗೀತ ಶಾರದೆ ಸಂಪೂರ್ಣ ಒಲಿದಿದ್ದಾಳೆ ಎನ್ನುವಾಗ ಆರತಿ ಮುಖದಲ್ಲಿ ತೋರುವ ಭಕ್ತಿ ಭಾವ..
ನನಗೆ ತಿಳಿದಂತೆ ಈ ಚಿತ್ರದಲ್ಲಿ ಬಿಟ್ಟು ಕನ್ಯಾಕುಮಾರಿ ತಾಣದಲ್ಲಿ ಬೇರೆ ಯಾವ ಚಿತ್ರಗೀತೆಯು ಕಂಡಿಲ್ಲ. (ತಪ್ಪಿದ್ದರೆ ದಯವಿಟ್ಟು ತಿದ್ದಿ)..


೪.

"ಮುನಿತಾಯಿ ಪ್ರಸಂಗ" ಇದು ಚಿತ್ರರಂಗದ ಇತಿಹಾಸದಲ್ಲಿ ಒಂದು ಅಭೂತಪೂರ್ವ ಪ್ರಯೋಗ. ಒಂದೇ ಚಿತ್ರದಲ್ಲಿ ಮೂರು ಕಥೆಗಳನ್ನು ಹಾಗೂ ಒಂದಕ್ಕೊಂದು ಸಂಬಂಧವಿಲ್ಲದ ಮೂರು ಕಥಾವಸ್ತುವನ್ನು ತೆರೆಗೆ ತಂದ "ಕಥಾ ಸಂಗಮ ಚಿತ್ರದ ಒಂದು ಕಥೆ. ಕಣ್ಣು ಕಾಣದ ಆರತಿ ಮುನಿತಾಯಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರೆ.. "ಓ ದ್ಯಾವ್ರೆ ನಿನ್ನ ಅಂದ ಚಂದವೇನೋ ಒಂದು ನಾ ಕಾಣೆ.. ನಿನ್ನ ನೆನೆದು ಹಿಗ್ಗಿ ಹಿಗ್ಗಿ ಕುಣಿವೆ ನಿನ್ನಾಣೆ" ಕಸ್ತೂರಿ ಶಂಕರ್ ಸುಮಧುರ ಹಾಡುಗಾರಿಕೆಯಲ್ಲಿ.. ಅಷ್ಟೇ ಚಂದದ ಸಾಹಿತ್ಯದಲ್ಲಿ ಕಪ್ಪು ಬಿಳುಪಿನ ವರ್ಣದಲ್ಲಿ ಚಿತ್ರೀಕರಿಸುವ ಹಾಡು. ಆರತಿ ಅಭಿನಯ, ಜೊತೆಯಲ್ಲಿ ಒಂದು ವಸ್ತು ಇಲ್ಲದಿದ್ದರೂ ಅದಕ್ಕೆ ಸಡ್ಡು ಹೊಡೆದು ಇನ್ನೊಂದು ಬಗೆಯ ವಿಭಿನ್ನ ಅನುಭವ ಪಡೆಯಬಹುದು ಎನ್ನುವ ಒಂದು ಸುಂದರ ಪ್ರಯತ್ನ.. ನನಗೆ ಬಲು ಮೆಚುಗೆಯಾದ ಸಾಹಿತ್ಯ ಮತ್ತು ಸಂಗೀತ ಜೊತೆಯಲ್ಲಿ ನನ್ನ ನೆಚ್ಚಿನ ನಟಿ ಆರತಿಯ ಮುದ್ದಾದ ಅಭಿನಯ..

೫.
ಬೆಂಕಿ ಚಂಡು ಹೇಗೆ ಇರುತ್ತದೆ ಎನ್ನುವುದನ್ನು ನೋಡಬೇಕೆ.. ನೋಡಿ ನಾಗರಹಾವು ಚಿತ್ರದ "ಹಾವಿನ ದ್ವೇಷ ಹನ್ನೆರಡು ವರುಷ" ಕನ್ನಡ ಬೆಳ್ಳಿ ತೆರೆಗೆ ಒಂದು ಉಲ್ಕೆ ಅಪ್ಪಳಿಸಿದ ಚಿತ್ರವಿದು. ವಿಷ್ಣು ಎಂಬ ಒಬ್ಬ ಸುರಸುಂದರ ನಾಯಕನಾಗಿ ಬೆಳಗಿದ ಚಿತ್ರ. ಕೋಪ ರೋಷ ದ್ವೇಷ ಛಲ ತ್ಯಾಗ ಹೀಗೆ ಎಲ್ಲವನ್ನು ಹೆಗಲ ಮೇಲೆ ಹೊತ್ತು ಆರ್ಭಟಿಸಿದ ಚಿತ್ರವಿದು. ಈ ಹಾಡಿನಲ್ಲಿ "ನಾ ಇಟ್ಟರೆ ಶಾಪ ಕೊಟ್ಟರೆ ವರ ನೀತಿಯ ಮೀರೋಲ್ಲ" ಎನ್ನುವಾಗ ವಿಷ್ಣುವಿನ ಅಭಿನಯ ನೋಡಿಯೇ ಸವಿಯಬೇಕು.. ಕಲ್ಲು ಬಂಡೆ, ಉರಿ ಬಿಸಿಲು, ಒರಟು ವ್ಯಕ್ತಿತ್ವ ಎಲ್ಲವನ್ನು ಒಂದೇ ಪ್ಯಾಕೇಜ್ ನಲ್ಲಿ ಹೊತ್ತು ತಂದ ಹಾಡು. ಒಲವಿನ ಗೆಳೆಯ ವಿಜಯಭಾಸ್ಕರ್ ಸಂಗೀತ, ಜೊತೆಯಲ್ಲಿ ವಿಷ್ಣುವಿಗೆ ಇನ್ನೊಂದು ಧ್ವನಿ ಎಂದೇ ಹೆಸರಾದ ಎಸ್ ಪಿ ಬಾಲಸುಬ್ರಮಣ್ಯಂ ಹಾಡುಗಾರಿಕೆ, ರೋಷ ಉಕ್ಕಿಸುವ ಸಾಹಿತ್ಯ  ಒಂದಕ್ಕೊಂದು ಮೇಳೈಸಿದೆ...

೬.  "ಅಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ" ದಿಲ್ಲಿಯಿಂದ ಬಂದ ಹೆಣ್ಣಿನ ಬದಲಿಗೆ ಅವಳ ಹಾಗೆಯೇ ಕಾಣುವ ಹಳ್ಳಿಯ ಮುಗ್ಧೆ ಹಾಡುವ ಹಾಡು.. ಉತ್ಕೃಷ್ಟ ಸಾಹಿತ್ಯ. ಕಲ್ಪನಾ ತನ್ನ ಅಭಿನಯದ ಇನ್ನೊಂದು ಮಜಲನ್ನು ಹೊರಗೆ ಹಾಕಿದ ಚಿತ್ರ. ಹಾಡುತ್ತಾ ಹಾಡುತ್ತ ತನ್ನೊಳಗೆ ಮುಳುಗಿಹೋಗುತ್ತಾರೆ. ಅರ್ ರತ್ನ ಅವರ ಉತ್ತಮ ಸಂಗೀತ, ಸಾಹಿತ್ಯ ಹೊಂದಿದ ಈ ಗೀತೆಯ ಪರಾಕಾಷ್ಟೆ "ಅರಿಶಿನ ಕುಂಕುಮ ನಗುನಗುತಿರಲಿ" ಎನ್ನುವಾಗ ಅತೀವ ಭಾವನಾತ್ಮಕ ರೂಪವನ್ನು ಹೊರಹೊಮ್ಮಿಸುವ ಆದವಾನಿ ಲಕ್ಷ್ಮೀದೇವಿಯವರ ಹೊಳೆಯುವ ಮೂಗುತಿ, ಕಣ್ಣುಗಳು, ಮತ್ತು ಆನಂದದಿಂದ ಆನಂದ ಭಾಷ್ಪವನ್ನು ಒರೆಸಿಕೊಳ್ಳುವ ಅಮೋಘ ದೃಶ್ಯ. ಮತ್ತು ಹಾಡಿನ ನಂತರ ಬಾಲಣ್ಣ ಹೇಳುವ "ಹೆಣ್ಣು ಮಕ್ಕಳು ಮನೆಯ ವಾತಾವರಣವನ್ನೇ ಅವಲಂಬಿಸಿರುತ್ತಾರೆ" ಎನ್ನುವ ಅಮೋಘ ಸಂದೇಶ ಹೊತ್ತು ಸಾರುವ ಮಾತುಗಳು..

೭.

 "ಹಿಂದುಸ್ಥಾನವೂ ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ" ಬೆಳ್ಳಿ ತೆರೆಗೆ ವರದ ಹಳ್ಳಿ ಅಥವಾ ಶ್ರೀಧರ ಸ್ವಾಮಿಗಳ ಪುಣ್ಯ ಸ್ಥಳವನ್ನು ಪರಿಚಯಿಸಿದ ಚಿತ್ರ ಅಮೃತಘಳಿಗೆ ಚಿತ್ರದ ಸುಂದರ ಹಾಡು. ಈ ಹಾಡಿನಲ್ಲಿ ಭಾರತದ ಹೆಮ್ಮೆಯನ್ನು ಹೇಳುತ್ತಲೇ.. ಕರುನಾಡಿನ ಅಮೋಘ ಚೆಲುವನ್ನು ಒಲವನ್ನು ಕವಿಗಳ ಲೇಖಕರ ಸಂಗಮವನ್ನು ತೋರುವ ಅಭಿಮಾನವನ್ನು ಉಕ್ಕಿಸುವ ಹಾಡು. ಜಯಚಂದ್ರನ್ ಕನ್ನಡ ಚಿತ್ರಗಳಲ್ಲಿ ಹಾಡಿರುವ ಹಾಡೆಲ್ಲ ಸೂಪರ್ ಹಿಟ್ ಗೀತೆಗಳೇ. ಅದರಲ್ಲಿ ಇದು ಮೊಟ್ಟ ಮೊದಲು ನಿಲ್ಲುತ್ತದೆ. ಶ್ರೀಧರ್ ಅವರಿಂದ ಹದಭರಿತ ಅಭಿನಯ ತೆಗೆದ ಪುಟ್ಟಣ್ಣ.. "ಧಮನಿ ಧಮನಿಯಲಿ ತುಂಬಿರಲಿ" ಎನ್ನುವಾಗ ಮುಷ್ಟಿಯಿಂದ ಎದೆಯನ್ನು ತಟ್ಟಿ ಕೊಳ್ಳುವ ದೃಶ್ಯ.. ಹಾಗೆಯೇ "ಭವ್ಯ ಶಾಸನ ಬರೆಯಿಸಲಿ" ಎನ್ನುವಾಗ ಕೈಯಲ್ಲೇ ಬರೆಯುವ ಅಭಿನಯ ತೋರುವ ದೃಶ್ಯ.. ಮತ್ತು ವಿಹಂಗಮ ಶ್ರೀಧರ ತೀರ್ಥದ ದೃಶ್ಯಗಳು ಮನಸ್ಸೆಳೆಯುತ್ತದೆ.

೮. ಕನ್ನಡ ಚಿತ್ರಗೀತೆಗಳಲ್ಲಿ ಶ್ಲೋಕ, ಮಂತ್ರಗಳು ನುಸುಳಿದ್ದು ಅನೇಕ ಚಿತ್ರಗಳಲಿದ್ದರೂ ಶರಪಂಜರದ ಚಿತ್ರದ ಕೊಡಗಿನ ಕಾವೇರಿ ಹಾಡಿನ ಮುಂಚೆ ಬರುವ "ತುಲಮಾಸೇತು ಕಾವೇರಿ" ಶ್ಲೋಕ, ಹಾಗೆಯೇ ಸಾಕ್ಶತ್ಕಾರ ಚಿತ್ರದಲ್ಲಿ "ಫಲಿಸಿತು ಒಲವಿನ  ಪೂಜಾಫಲ" ಹಾಡಿನಲ್ಲಿ ಮದುವೆ ಸನ್ನಿವೇಶದಲ್ಲಿ ಬರುವ ಕ್ರಮಬದ್ಧ ಮಂತ್ರಗಳನ್ನು ಹಾಗೆಯೇ ಹಾಡಿಸಿದ್ದು ಇವೆಲ್ಲ ಅವರ ಸಂಸ್ಕೃತಿಯ ಬಗೆಗಿನ ಅವರ ಅಭಿಮಾನ ಅದನ್ನು ಎಲ್ಲರೆಡೆಯೂ ಪಸರಿಸಲು ಆಯ್ದುಕೊಂಡ ಮಾಧ್ಯಮ ಎಲ್ಲವು ಮನಸ್ಸಿಗೆ ಹಿಡಿಸುತ್ತದೆ. ಕೊಡಗಿನ ಕಾವೇರಿ ಚಿತ್ರದಲ್ಲಿ ಪಿ ಸುಶೀಲ ಒಂದು ರೀತಿಯಲ್ಲಿ ಹಾಡಿದರೆ.. ಪಿ ಬಿ ಶ್ರೀನಿವಾಸ್ ಪ್ರತಿ ಸಾಲಿನಲ್ಲೂ "ಕಾವೇರಿ" ಎನ್ನುವ ಪದವನ್ನು ಉಚ್ಚರಿಸುವ ರೀತಿ ಭಲೇ ಎನ್ನಿಸುತ್ತದೆ.

೯.
"ವಿರಹ ನೂರು ನೂರು ತರಹ" ಪ್ರೇಮಿಗಳ ವಿರಹವನ್ನು ಬಗೆ ಬಗೆಯಾಗಿ ಸಾರುವ ಒಂದು ಉತ್ತಮ ಗೀತೆ. ಜಯಂತಿ ಅವರ ಮಾಗುತ್ತಿರುವ ಸೌಂದರ್ಯವನ್ನು ಅಷ್ಟೇ ಸುಂದರವಾಗಿ ತೆರೆಯ ಮೇಲೆ ತೋರಿಸಿದ್ದು ಹಾಗೆಯೇ ಸಂಜೆಯ ಇಳೀ ಹೊತ್ತಿನಲ್ಲೇ ಹಠ ಮಾಡಿ ಚಿತ್ರೀಕರಿಸಿದ್ದು ಈ ಹಾಡಿನ ತಾಕತ್.  ಪಿ ಸುಶೀಲ ಅವರ ಅಮೋಘ ಕಂಠ ಸಿರಿ, ಅದಕ್ಕೆ ಒಪ್ಪುವ ಸಂಗೀತ, ಸಾಹಿತ್ಯ ಎಲ್ಲವೂ ಅಮೋಘವಾಗಿ ಮೂಡಿ ಬಂದಿದೆ. ಜಯಂತಿ ಬರಿ ಉತ್ತಮ ಅಭಿನಯ ಮಾತ್ರವಲ್ಲ ಅಮೋಘವಾಗಿಯೂ ಕಾಣಬಲ್ಲರು ಎಂಬುದನ್ನೂ ತೋರಿಸಿದ್ದಾರೆ. ಒಂದು ಈ ಹಾಡಿನ ಒಂದು ದೃಶ್ಯದಲ್ಲಿ ಜಯಂತಿಯ ಜೊತೆಯಲ್ಲಿಯೇ ಕ್ಯಾಮರ ಚಾಲನೆಯಲ್ಲಿರುತ್ತದೆ. ಪ್ರತಿ ಫ್ರೇಮ್ ಕೂಡ ನಿಧಾನವಾಗಿ ಚಲಿಸಿರುತ್ತದೆ ಆದರೆ ಜಯಂತಿ ಅವರ ನಡೆಯುತ್ತಿರುವ ಜಾಗ ಮತ್ತು ಫ್ರೇಮ್ ನಲ್ಲಿ ತೋರಿಸುವ ಚೌಕಟ್ಟು ಮಾತ್ರ ಸಮಾನವಾಗಿ ಕಾಣುತ್ತದೆ. ಈ ದೃಶ್ಯ ನನ್ನ ಮೆಚ್ಚುಗೆಯಾಗಿ ಮನದಲ್ಲೇ ನಿಂತಿರುವ ದೃಶ್ಯ

೧೦.

"ಓ ಗುಣವಂತ ನಿನ್ನ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ" ನಿಜಕ್ಕೂ ಈ ಹಾಡು ಪುಟ್ಟಣ್ಣ ಅವರಿಗಾಗಿ ಬರೆದ ಹಾಡು ಅನ್ನಿಸುತ್ತದೆ. ಯಾಕೆಂದರೆ ಒಬ್ಬ ಸೃಜನಶೀಲ ನಿರ್ದೇಶಕ ಸಾಹಿತ್ಯ ಭಂಡಾರವನ್ನು ಹೇಗೆ ಉಪಯೋಗಿಸಬೇಕು, ಕನ್ನಡ ಕಂಪನ್ನು ಹೇಗೆ ವಿಸ್ತರಿಸಬೇಕು ಎನ್ನುವುದನ್ನು ಎತ್ತಿ ತೋರಿಸಿದ ಅಮೋಘ ಪ್ರತಿಭೆ ನಮ್ಮ ಪುಟ್ಟಣ್ಣ ಕಣಗಾಲ್. ಈ ಹಾಡಿನಲ್ಲಿ ಅತಿ ಸುಂದರವಾಗಿ ಕಾಣುವ ವಿಜಯಲಕ್ಷ್ಮಿ ಸಿಂಗ್, ಮುದ್ದಾಗಿ ಕಾಣುವ ಅಂಬರೀಶ್ ಜೊತೆಯಲ್ಲಿ ಬೆಂಗಳೂರು ಅರಮನೆ ಸುತ್ತ ಮುತ್ತಲೇ ಚಿತ್ರೀಕರಿಸಿದ ಸುಂದರ ಗೀತೆ. ಎಸ್ ಜಾನಕಿ ಹಾಡಿರುವ ರೀತಿ, ತನ್ನ ಪ್ರೀತಿಯನ್ನು ಅಥವಾ ತನ್ನ ಅಭಿಮಾನವನ್ನು ಪ್ರಸ್ತುತ ಪಡಿಸುವ ರೀತಿ ಎಲ್ಲವೂ ಅತ್ಯತ್ತಮ. ವಿಜಯನಾರಸಿಂಹ ಅವರ ಸಾಹಿತ್ಯ ಅಷ್ಟೇ ಸುಂದರವಾದ ವಿಜಯಭಾಸ್ಕರ್ ಅವರ ಸಂಗೀತ ಬೆಳ್ಳಿ ಚಿತ್ರಕ್ಕೆ ಸುವರ್ಣ ಚೌಕಟ್ಟು ಒದಗಿಸಿದೆ.

ಇಂಥಹ ಮಹೋನ್ನತ ನಿರ್ದೇಶಕ ಹುಟ್ಟಿದ ಮಣ್ಣಲ್ಲಿ ನಾವು ಹುಟ್ಟಿದ್ದು ನಮ್ಮ ಭಾಗ್ಯ. ಹಾಗೆಯೇ ಅವರ ಚಿತ್ರಗಳಿಂದ ಕಲಿತ ಕಲಿಯಬಹುದಾದ ಉತ್ತಮ ಸಂದೇಶಗಳು ಅವರ ನಿರ್ದೇಶನದ ಎಲ್ಲಾ ಚಿತ್ರಗಳಲ್ಲೂ ಕಾಣಬರುತ್ತದೆ. ಅವರ ಪ್ರತಿ ಚಿತ್ರಗಳು ಒಂದು ವಿಶ್ವ ವಿದ್ಯಾಲಯ ಇದ್ದ ಹಾಗೆ. ಅವರ ಜನುಮದಿನವನ್ನೂ ವಿಭಿನ್ನವಾಗಿ ಕಟ್ಟಿ ಕೊಡೋಣ ಅನ್ನುವ ನನ್ನ ತವಕಕ್ಕೆ ನೀರು ಎರೆದಿದ್ದು ಅವರ ಚಿತ್ರಗೀತೆಗಳು ಮತ್ತು ಗೀತೆಗಳನ್ನೂ ವಿಭಿನ್ನವಾಗಿ ಚಿತ್ರಿಸಿ ಅಷ್ಟೇ ಸುಮಧುರ ಸಂದೇಶ ಹೊತ್ತು ಸಾರುತ್ತಿದ್ದ ಅವರ ಎಲ್ಲಾ ಚಿತ್ರಗಳ ಅವರ ಶೈಲಿ.

ಪುಟ್ಟಣ್ಣ ನೀವು ಹೃದಯದಿಂದ ಚಿತ್ರೀಕರಿಸಿದ ಎಲ್ಲಾ ಚಿತ್ರಗಳನ್ನು ನೋಡಿ ಅದರ ಬಗ್ಗೆ ನನಗನ್ನಿಸಿದ ಮಾತುಗಳನ್ನು ಹೇಳುವ ನನ್ನ ಬಯಕೆ ಈಡೇರಬೇಕು ಅದಕ್ಕೆ ನಿಮ್ಮ ಆಶೀರ್ವಾದವೂ ಇರಬೇಕು.. ಹುಟ್ಟು ಹಬ್ಬದ ಸುಂದರ ಶುಭಾಶಯಗಳು ನಮ್ಮ ಜೊತೆಯಲ್ಲೇ ಇರುವ ನಿಮ್ಮ ಮಹಾನ್ ಚೇತನಕ್ಕೆ!!!

(ಸಿಕ್ಕ ವೀಡಿಯೊ ತುಣುಕುಗಳನ್ನು ಹಾಕಲು ಪ್ರಯತ್ನ ಪಟ್ಟಿದ್ದೇನೆ.. ಕೆಲವು ಸಿಕ್ಕವು ಕೆಲವು ಸಿಕ್ಕಲಿಲ್ಲ... ಯು ಟ್ಯೂಬ್ ನಲ್ಲಿ ಸಿಕ್ಕ ಕೆಲವು ತುಣುಕುಗಳನ್ನು ತುರುಕುತ್ತಿದ್ದೇನೆ.. ಎಲ್ಲಾದರೂ ಈ ತುಣುಕುಗಳು ಬೇಡದ ವಿಷಯಗಳನ್ನು ಬಿತ್ತಿರಿಸಿದರೆ ದಯಮಾಡಿ ಸಂದೇಶ ಕಳಿಸಿ.. ಕಿತ್ತು ಹಾಕುತ್ತೇನೆ)