Monday, April 23, 2012

ಅಣ್ಣಾವ್ರೆ ನಿಮಗೆ ಜನುಮ ದಿನದ ಶುಭಾಶಯಗಳು (2012)

ಕರುನಾಡು ಕನ್ನಡಮ್ಮನ ದೇವಾಲಯ
ಆ ದೇವಾಲಯದ ಅರ್ಚಕರು ಅನೇಕ
ಪ್ರತಿ ಅರ್ಚಕರು ತಮ್ಮ ತನು ಮನಗಳಿಂದ ಆ ದೇವಿಯನ್ನು ಅರ್ಚಿಸಿ
ಕೆಲವರು ನಟವರರಾದರು..!!!!!
ಕೆಲವರು ನಟಿಯರಿಗೆ ವರರಾದರು!!!
ಆದರೆ ನಮ್ಮ ಅಣ್ಣ ರಾಜಣ್ಣ ವರ ಪಡೆದ ನಟರಾಗಿ ವರನಟರಾದರು!!!
ಎಲ್ಲಕಡೆ ಕೂಗು..ಅಣ್ಣ ಮತ್ತೊಮ್ಮೆ ಹುಟ್ಟಿ ಬನ್ನಿ ಅಂತ ಹೇಳುತ್ತಾರೆ..
ಆದ್ರೆ ನನ್ನ ಕೂಗು..ಅಣ್ಣ ಹೋಗಿದ್ದರಲ್ಲವೇ ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಹೇಳುವುದು 
ಅವರು ನಮ್ಮ ಹೃದಯ ಸಿಂಹಾಸನಧೀಶರಾಗಿ ಅಜರಾಮರ
ಆವರ ಪಾತ್ರಗಳು, ಸಂಭಾಷಣೆ, ಅಭಿನಯ, ಹಾಡುಗಾರಿಕೆ ಇವನ್ನು ನಾವು ನೂರು ಜನ್ಮ ಎತ್ತಿದರು ಮರೆಯಲು ಸಾಧ್ಯವಿಲ್ಲ..ಅಂಥಹ ಪಾತ್ರಗಳ ಪಿತಾಮಹ ನಮ್ಮ ರಾಜಣ್ಣ
ಕೆಲವರು ಇರುವಾಗಲೇ ಮರೆಯಾಗುತ್ತಾರೆ...ಕೆಲವರು ಮರೆಯಾದಮೇಲೆ ಇರುತ್ತಾರೆ ಆದರೆ ನಮ್ಮ ಅಣ್ಣ..ಸದಾ ಕಣ್ಣ ಮುಂದೆಯೇ ಇರುತ್ತಾರೆ ನಮ್ಮ ದಿನ ನಿತ್ಯದ ಜೀವನದ ಹಾದಿಯಲ್ಲಿ..
ನಿಮ್ಮ ಪಾತ್ರದ ಹರವು ನಮ್ಮ ಕಾವೇರಿ ನದಿಯ ಹರವಿಗಿಂತ ಮಿಗಿಲು..
ಅಣ್ಣಾವ್ರೆ ನಿಮಗೆ ಜನುಮ ದಿನದ ಶುಭಾಶಯಗಳು..

Saturday, April 14, 2012

ದಶಮುಖ ಒಂದು ವಿಭಿನ್ನ ಚಿತ್ರ (2012)

 ದಶಮುಖ ಸಿನಿಮಾದ ಜಾಹಿರಾತು, ಕೆಲವು ತುಣುಕುಗಳನ್ನ ನೋಡಿದಾಗ..ಮನಸು ಯಾಕೋ ಈ ಸಿನೆಮಾನಾ ನೋಡ್ಬೇಕು ಅಂತ ಅನ್ನಿಸ್ತು...ಶನಿವಾರ ಸಂಜೆ ಹೀಗೆ ಟಿ.ವಿ. ನೋಡುತ್ತಾ ಕುಳಿತ್ತಿದ್ದಾಗ..ದಿಗ್ಗನೆ ಎದ್ದು ಮನೆಯ ಹತ್ತಿರ ಇರುವ ವೀರೇಶ್ ಸಿನೆಮಾಸ್ ಗೆ ನನ್ನ ಪತ್ನಿಯ ಜೊತೆಗೆ ಹೋದೆ...
ಜನ ಗಣ ಮನದಿಂದ ಶುರುವಾಯಿತು...


ನಂತರ ಚಿತ್ರ ಶುರುವಾಯಿತು...


ಏನೋ ಗೊಂದಲ ಮೊದಲ ದೃಶ್ಯದಲ್ಲೇ..ಅದೇ ಗೊಂದಲ ನ್ಯಾಯಾಧೀಶ ಕೂಡ ತೋರುತ್ತಾರೆ...ಸರಿ ಮುಂದೆ ಶುರುವಾಗುತ್ತೆ ನಿಜಾವಾದ ಸಿನಿಮಾ...


ಇದು ನಿಜಕ್ಕೂ ಒಂದು ಭಿನ್ನ ಪ್ರಯತ್ನ..ಮಾಡಿದ ಎಲ್ಲ ಕಲಾವಿದರಿಗೂ ಒಂದು ತರಹ ಹೊಸ ತರಹದ ಪಾತ್ರಗಳು..
ಆದ್ರೆ ನಿಜವಾದ ಹೀರೋ...ಕೆ.ವಿ.ರಾಜು ಅವರ ಚಿತ್ರಕಥೆ...ನೀರಿನಷ್ಟೇ ಸುಲಭ...ಆದ್ರೆ ಅಷ್ಟೇ ಸುಲಲಿತ ಸಂಭಾಷಣೆ...
ನಂತರದ ನಾಯಕ...ನಮ್ಮ ರವಿ ಮಾಮ..(ರವಿಚಂದ್ರನ್)...ನಿಜಕ್ಕೋ ಅವರಿಗೆ ಒಪ್ಪುವ ಪಾತ್ರ...ಈ ಚಿತ್ರ ನೋಡಿದ ಮೇಲೆ ನಿಜಕ್ಕೋ ಕಾಡುವುದು ಮೂರು...

ಒಂದು ರವಿ, ಎರಡು ಮುದ್ದಾದ  ಮಾಳವಿಕ, ಮೂರು ಅನಂತ್ ನಾಗ್ ಅವರ ಕೊನೆಯ ದೃಶ್ಯದ ಅದ್ಭುತ ಅಭಿನಯ..

ಈ ತರಹದ ಚಿತ್ರಕತೆಯನ್ನ ಸುಮಾರು ಎರಡು ವರೆ ತಾಸು ಹಿಡಿದಿಡುವುದು ಸುಲಭದ ಮಾತಲ್ಲ..ಇದಕ್ಕೆ ಒಳ್ಳೆ ನಟರು, ಸಂಭಾಷಣೆ...ಚೌಕಟ್ಟು ಎಲ್ಲವು ಬೇಕು...ಅದು ಈ ಚಿತ್ರಕ್ಕೆ ಇದೆ...ಪಾತ್ರ ಮಾಡಿದ ಎಲ್ಲ ಕಲಾವಿದರು ನ್ಯಾಯ ಒದಗಿಸಿದ್ದಾರೆ...


ಮಾನವನಿಗೆ  ಹತ್ತು ಹಲವು ಭಾವನೆಗಳು ಇರುತ್ತವೆ..ಆದ್ರೆ ಅದನ್ನು ಒರೆ ಹಚ್ಚಿ ನೋಡುವ ಸಾಮರ್ಥ್ಯ, ತಾಳ್ಮೆ ಇರಬೇಕು ಇದು ಚಿತ್ರದ ಮೂಲ ಆಶಯ..


ಕೆಲವು ಪಾತ್ರಗಳು ಇನ್ನಷ್ಟು ಪೋಷಿಸಬೇಕಿತ್ತು ಅನ್ನಿಸುತ್ತೆ..ಮತ್ತು ಅಂತ್ಯಕ್ಕೆ ಇನ್ನಷ್ಟು ತಾರ್ಕಿಕತೆ ಬೇಕಿತ್ತು ಅನ್ನಿಸುತ್ತೆ..ಆದ್ರೆ ಹೊಡಿ ಬಡಿ, ಹುಚ್ಚು ಪ್ರೇಮದ ಅಮಲಿನ ಚಿತ್ರಗಳಿಗಿಂತ ತುಂಬಾ ಭಿನ್ನವಾಗಿ ನಿಲ್ಲುತ್ತೆ..

ಕಥೆ ಬಹಳ ಸರಳ, ಅದಕ್ಕೆ ಸಿಕ್ಕಿರುವ ಪ್ರಯತ್ನ ಚಪ್ಪಾಳೆ ಗಿಟ್ಟಿಸುತ್ತೆ
.
ರವಿಯಾ ನಟನೆ...ಎಲ್ಲವನ್ನು ಕೂಲಂಕುಶವಾಗಿ ನೋಡುವ ರೀತಿ 


ಅನಂತ್ ಅಭಿನಯ, ತಮ್ಮ ಜೀವನದ ಕಹಿ ಪ್ರಪಂಚದಲ್ಲಿ ಎಲ್ಲ ಕಡೆ ಎಂದು ಹೇಳುವ  ಪಾತ್ರ 


ಅವಿನಾಶ್ ಶ್ರೀಮಂತನ ಸೋಗಲಾಡಿ ಪಾತ್ರದಲ್ಲಿ ಸಂಭಾಷಣೆ ಹೇಳುವ ಶೈಲಿ..ತನ್ನ ನಿರ್ಧಾರವೇ ಸರಿ..ಬೇರೆಲ್ಲರೂ ಉಪಯೋಗವಿಲ್ಲ..ಅಂತ ನಿಲ್ಲುವ ತಪ್ಪು ನಿರ್ಧಾರಗಳು..ಚೆನ್ನಾಗಿ ಅಭಿನಯಿಸಿದ್ದಾರೆ..


ಮಾಳವಿಕಾ..ತನ್ನ ಮುದ್ದಾದ ಮೊಗವನ್ನು ತೋರುತ್ತ..ನಿರ್ಧಾರಗಳು ಭಾವನೆಗಳಿಗೆ ತಕ್ಕಂತೆ ಹೇಗೆ ಏರು-ಪೇರಾಗುತ್ತದೆ ಎಂದು ತೋರಿಸುವ ತವಕ


ಸರಿತಾ (ಬಹಳ ವರುಷಗಳ ನಂತರ ಮತ್ತೆ ಕನ್ನಡ ಚಿತ್ರದಲ್ಲಿ ಕಾಣಿಸಿದ್ದಾರೆ...ಅವರು ಮಾಗಿದ್ದಾರೆ ಆದ್ರೆ ಅವರ ಅಭಿನಯ ಒಂಚೂರು ಬದಲಾಗಿಲ್ಲ..ಅದ್ಭುತ ಕಲಾವಿದೆ) ಮನವೊಂದು ಕಡೆ, ದೇಹವೊಂದು ಕಡೆ, ಒಳಗೆ ಒಂದು ಕಸಿವಿಸಿ..ಹೊರಗೆ ಹೇಗೋ ಕೆಲಸ ಮುಗಿಸೋಣ ಅನ್ನುವ ಅನ್ಯಮನಸ್ಕ ಜೀವನ ..


ದತ್ತಣ್ಣ ಹಿರಿಯರು ತಮ್ಮ ಪೂರ್ವಗ್ರಹ ಪೀಡಿತ ದೃಷ್ಟಿ ಕೋನ ತಪ್ಪು ಎಂದು ತೋರಿಸುವ ಪರಿ..


ದೇವರಾಜ್ ನಾನೇ ಸರಿ ಎಲ್ಲರು ತಪ್ಪು ಎಂದು ತೋರಲು ಒದ್ದಾಡುವುದು 


ರವಿ ಕಾಳೆ (ಇನ್ನಷ್ಟು ಪೋಷಣೆ ಬೇಕಿತ್ತು)...ಎರಡು ಕಡೆ ವಾದ ವಿವಾದಗಳನ್ನು ತೂಗುತ್ತ ..ಕಡೆಗೆ ತನ್ನ ನಿರ್ಧಾರ ತಪ್ಪು ಎಂದು ತೋರುವುದು..


ಅಚ್ಯುತ ಕುಮಾರ್ ಧಾರಾವಾಹಿಗಳಲ್ಲಿನ ನಟನೆ ಬರಿ ಆಕಸ್ಮಿಕವಲ್ಲ ನಾನು ಉತ್ತಮ ನಟ ಅಂತ ತೋರಿಸಿದ್ದಾರೆ..ಸಂಭಾಷಣೆ ಪರಿ ಇಷ್ಟವಾಗುತ್ತೆ..ಬೇರೆಯವರು ತುಳಿಯಲು ಪ್ರಯತ್ನ ಮಾಡುತ್ತಾರೆ..ಆದ್ರೆ ಗಟ್ಟಿ ನೆಲ ಹಾಗು ನೆಲೆ ಸಿಕ್ಕಾಗ ಹೇಗೆ ಅದನ್ನು ಉಪಯೋಗಿಸಿಕೊಂಡು ಮೇಲೆ ಬರಬೇಕು ಎಂದು ಸೊಗಸಾಗಿ ತೋರಿದ್ದಾರೆ..


ಹೊಸ ನಟ (ನನ್ನ ಪ್ರಕಾರ - ಇನ್ನಷ್ಟು ಪೋಷಣೆ ಬೇಕಿತ್ತು)...ಉತ್ತಮ ಅಭಿನಯ ಮಾಡಿದ್ದಾರೆ..ತನ್ನ ಪೂರ್ವಾಶ್ರಮದ ಪಲುಕುಗಳು..ನಿರ್ಧಾರಗಳಿಗೆ ಹೇಗೆ ಸಹಾಯ ಮಾಡುತ್ತದೆ ಎಂದು ಚೆನ್ನಾಗಿ ವಿವರಿಸಿದ್ದಾರೆ..


ನಮ್ಮ ನಿರ್ಧಾರಗಳು ಪೂರ್ವಗ್ರಹ ಪೀಡಿತವಾದಾಗ ನಮ್ಮ ನಮ್ಭಿಕೆಗಳು ನಮ್ಮನ್ನ ದಾರಿ ತಪ್ಪಿಸುತ್ತವೆ..ಯೋಚನಾಲಹರಿಯನ್ನ ತುಂಡು ಮಾಡುತ್ತವೆ..ನಾವು ಕೇಳಿದ್ದೆ ಸತ್ಯ, ನೋಡಿದ್ದೇ ಸತ್ಯ, ಆಡಿದ್ದೆ ಸತ್ಯ ಅನ್ನ್ನುವ ಒಂದು ಭ್ರಮಾಲೋಕವನ್ನ ಸೃಷ್ಟಿ ಮಾಡುತ್ತದೆ..


ನಾವು ನಮ್ಮ ಪರಿಧಿಯಿಂದ ಹೊರಗೆ ಬಂದು ನಿಂತಾಗ, ಯೋಚನೆ ಮಾಡಿದಾಗ, ಹಾಗು ತಾರ್ಕಿಕ ಲಹರಿಯನ್ನ ಮುಂದಿಟ್ಟಾಗ ಮಾತ್ರ ನಿಜ ಅರಿಯುವ ಜಾಣ್ಮೆ, ತಾಳ್ಮೆ ಬರುತ್ತದೆ..


ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು ಅನ್ನುವ ಗಾದೆ ಆಧಾರಿತ ಕತೆ ಚೆನ್ನಾಗಿ ಮೂಡಿ ಬಂದಿದೆ...


ಚಿತ್ರ ಮುಗಿದಾಗ ಇನ್ನೂ ಏನು ಬೇಕು ಅನ್ನಿಸುತ್ತದೆ..ಅದಕ್ಕೆ ಕಾರಣ ಕಥೆ ಹಾಗು ಚಿತ್ರಕಥೆ ಒಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ಮಾತ್ರ ಸಾಗುತ್ತದೆ...ಇನ್ನು ಉತ್ತಮ ಪಡಿಸಬಹುದಿತ್ತು ಅನ್ನುವುದು ಸರಿ ಅಂತ ನನ್ನ ಭಾವನೆ..ಆದ್ರೆ ಇದು ಒಂದು ಉತ್ತಮ ಪ್ರಯತ್ನ ಹಾಗು ಉತ್ತಮ ಚಿತ್ರ ಎನ್ನುವುದು ಮಾತ್ರ ಸೂರ್ಯ ಚಂದ್ರ ಇರುವಷ್ಟೇ ಸತ್ಯ...


ದಯವಿಟ್ಟು ಒಳ್ಳೆಯ ಕನ್ನಡ ಚಿತ್ರಗಳನ್ನ ಬೆಂಬಲಿಸಿ, ನೋಡಿ ಒಂದು ಉತ್ತಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ..

ಕಡೆ ಮಾತು : ರವಿಚಂದ್ರನ್ ಈ ರೀತಿಯ ಪಾತ್ರಗಳು ಜೀವಂತಿಕೆ ಕೂಡಿರುತ್ತದೆ..ಸ್ವಲ್ಪ ಸಣ್ಣ ಆಗಿ, ಈ ರೀತಿ ತೀಕ್ಷ್ನ ಪಾತ್ರಗಳನ್ನೂ ಮಾಡಿದರೆ..ಅವರು ಮತ್ತೆ ಕನಸುಗಾರನ ಹಾದಿಯಲ್ಲಿ ಕನ್ನಡ ಪ್ರೇಮಿಗಳಿಗೆ ಕನಸುಗಳನ್ನು ಉಣಬಡಿಸಬಹುದು...

Wednesday, April 11, 2012

ಅಣ್ಣಾವ್ರನ್ನ ಬರವಣಿಗೆಯಲ್ಲಿ ನೆನಪಿಸಿಕೊಳ್ಳುವ ಪ್ರಯತ್ನ (2012)

ಅಣ್ಣಾ ನೀವು ನಮಗಾಗಿ...
ಇನ್ನೂರು ಚಿಲ್ರೆ ಸಿನೆಮಗಾಗಿ
ಇಲ್ಲೇ ಇರ್ತೀರಾ ಕರುನಾಡ ಹಸಿರಾಗಿ...

ರಾಜಕುಮಾರ್ ಅವರು ನಿರ್ವಹಿಸದ ಪಾತ್ರ ಬಹುಶಃ ಈ ಪ್ರಪಂಚದಲ್ಲಿ ಯಾವುದು ಇಲ್ಲ!!!!!


ನಮ್ಮ ಕರುನಾಡಿನಲ್ಲಿ ಯಾವುದೇ ದೇವರ ಪಾತ್ರ ಇರಬಹುದು, ಐತಿಹಾಸಿಕ ಅರಸರ ಪಾತ್ರ ಇರಬಹುದು, ಪತ್ತೆದಾರ ಇರಬಹುದು, ಸಂತ-ಭಕ್ತ ಇರಬಹುದು...ರಾಜ್ ಮುಖವೇ ನಮ್ಮ ಕಣ್ಣ ಮುಂದೆ ಬರುತ್ತದೆ...

ಈ ಪಾತ್ರಗಳಲ್ಲಿ ಎಷ್ಟು ಘನ-ಗಂಭೀರ ಚರ್ಯೆ, ಹಾವ-ಭಾವಗಳಲ್ಲಿ ಇರುತಿದ್ದರೂ..ಅಷ್ಟೇ ಮಿಂಚಿನ, ತುಂಟ ಪಾತ್ರಗಳಲ್ಲೂ ತನ್ಮಯತೆಯಿಂದ ಪಾತ್ರವಹಿಸುತ್ತಿದ್ದರು..

ಕೆಲವು ಪಾತ್ರಗಳು...
ಶಂಕರ್ ಗುರು : ಈ ಚಿತ್ರದಲ್ಲಿ ಗುರುವಿನ ಪಾತ್ರ ಕೇವಲ ಅಣ್ಣಾವ್ರು ಮಾತ್ರ ಮಾಡಲು ಸಾಧ್ಯ...ಆ ತರಲೆ, ತುಂಟತನ, ಹಾಸ್ಯ, ರೇಗಿಸುವ ಭಂಗಿ, ಆ ಉಡುಪು ವಯ್ಯಾರಗಳು ಕೇವಲ ಅಣ್ಣಾ ಅವರಿಂದ ಮಾತ್ರ ಸಾಧ್ಯ
ಗುರು ಪಾತ್ರದ ಮೊದಲ ದೃಶ್ಯದಲ್ಲಿ ಬಾಲಣ್ಣನನ್ನು ಗೋಳು ಹುಯ್ಕೊಳೋ ದೃಶ್ಯ ಸೊಗಸು 
"ಈ ಹುಡುಗಿಯ ಕೊಬ್ಬನ್ನು ಇಳಿಸಿ...ಕಾಶ್ಮೀರದಿಂದ ಕರ್ನಾಟಕಕ್ಕೆ ಕರೆದುಕೊಂಡು ಬರದಿದ್ದರೆ ನಾನು ಗುರುವೇ ಅಲ್ಲ" ಎಂದು ಹೇಳುತ್ತಾ ಎದೆ ತಟ್ಟಿಕೊಳ್ಳುವ ಶೈಲಿ ಸೀಟಿ ಹೊಡೆಸುತ್ತ್ತೆ..ಇ ಸಿನೆಮಾವನ್ನು ಬೆಂಗಳೂರಿನಲ್ಲಿ ಬಿಡುಗಡೆ ಯಾದಗೆಲ್ಲ ನೋಡಿದ್ದೇನೆ..ಪ್ರತಿ ಭಾರಿಯೂ ಅದೇ ಶೀಟಿ, ಚಪ್ಪಾಳೆ ಗಿಟ್ಟಿಸುತ್ತೆ ಈ ಸನ್ನಿವೇಶ 

"ಡ್ಯಾಡಿ ಕೀಪ್ ಟು ಲ್ಯಾಕ್ಸ್ ರೆಡಿ"  ಇನ್ನೊಂದು ಸೊಗಸಾದ ಸಂಭಾಷಣೆ..



ತ್ರಿಮೂರ್ತಿ: ಈ ಸಿನಿಮಾ...ಮೂರು ಭಿನ್ನ ಪಾತ್ರಗಳಿಂದ ಕೂಡಿದೆ..ಇದರಲ್ಲಿ ಎರಡನೇ ಪಾತ್ರ "ಶೇಖರ್" ಎಂಬ ಹಿಪ್ಪಿ ಪಾತ್ರದಲ್ಲಿ ಬಾಲಣ್ಣನ ಕಾಡುವ ದೃಶ್ಯಗಳು ನಗೆ ಬುಗ್ಗೆ ಉಕ್ಕಿಸುತ್ತದೆ.."ಬಿಸಾಕೋ ದುಡ್ಡನ್ನ..ನಿನ್ನ ಹೆಂಡತಿ ಮಕ್ಕಳಿಗೆ ನಾನು ಕೊಟ್ಯಾದೀಶ ಅಂತ ತೋರಿಸ್ಕೊಬೇಕು ಕಣೋ" ಅಂತ ಬಾಲಣ್ಣ ಅವರಿಗೆ ಹೇಳುವ ಭಾವಾಭಿನಯ ಸುಂದರ...

ಹೀಗೆ ಅನೇಕ ಚಿತ್ರಗಳಲ್ಲಿ ತೂಗುದೀಪ ಶ್ರೀನಿವಾಸ್, ವಜ್ರಮುನಿ, ಬಾಲಣ್ಣ, ದ್ವಾರಕೀಶ್ ಮುಂತಾದ ಅನೇಕ ಕಲಾವಿದರ ಜೊತೆ ಹಾಸ್ಯ ದೃಶ್ಯಗಳು, ಸಂಭಾಷಣೆ ನಿಜಕ್ಕೂ  ಇದೆ ಅಣ್ಣಾವ್ರ ಅನೇಕ ಗಂಭೀರ ಪಾತ್ರಗಳನ್ನ ಮಾಡಿದ್ದು ಅನ್ನುವ ಸಂದೇಹ ಕಾಡುತ್ತದೆ..

ಸಂಪತ್ತಿಗೆ ಸವಾಲ್ ನಲ್ಲಿ ಬಾಲಣ್ಣನ, ಮಂಜುಳಾ ಜೊತೆ, 
ಮಯೂರದಲ್ಲಿ ವಜ್ರಮುನಿ, 
ಭಾಗ್ಯದ ಲಕ್ಷ್ಮಿ ಬಾರಮ್ಮ - ವಜ್ರಮುನಿ
ಕಣ್ತೆರೆದು ನೋಡು - ಬಾಲಣ್ಣ
ಮೇಯರ್ ಮುತ್ತಣ್ಣ - ದ್ವಾರಕೀಶ್
ಶ್ರುತಿ ಸೇರಿದಾಗ - ಎಂ. ಎಸ್. ಉಮೇಶ್
ಶಂಕರ್ ಗುರು - ತೂಗುದೀಪ ಶ್ರೀನಿವಾಸ್, ವಜ್ರಮುನಿ
ಅನೇಕ ಚಿತ್ರಗಳಲ್ಲಿ - ನರಸಿಂಹ ರಾಜು
ಇನ್ನೂ ಅನೇಕ ಚಿತ್ರಗಳಲ್ಲಿ..ಅವರ ಹಾಸ್ಯ ಪ್ರಜ್ಞೆ ಅನಾವರಣಗೊಂಡಿದೆ 


ಅವರ ಹಾಸ್ಯ ಪ್ರಜ್ಞೆ, ಸಮಯೋಚಿತ ಸಂಭಾಷಣೆ ಹೇಳುವ ಶೈಲಿ ಬಹಳ ಸೊಗಸು..

ಅಣ್ಣಾವ್ರು ತುಂಟ ಪಾತ್ರಗಳನ್ನೂ ಕೂಡ ಲೀಲಾಜಾಲಾವಾಗಿ ಮಾಡುತಿದ್ದರು..ನಡಿಗೆ, ನಾಟ್ಯ, ವೇಷ ಭೂಷಣ..ಎಲ್ಲವು ಸೊಗಸು...ಮಗುವಿನ ಹಾಗೆ...


ಅದಕ್ಕೆ ಅಲ್ಲವೇ ಅವರು ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಹಾಡಿದ್ದು..



ಎಂಥ ಸೊಗಸು ಮಗುವಿನ ಮನಸು...