Sunday, May 10, 2020

ದೇವಸುಂದರಿ ಅದೃಶ್ಯಳಾಗಿದ್ದಾಳೆ ಹುಡುಕುವೆ.. ಸಿಕ್ಕಾಗ ಬರೆಯುವೆ (1962) (ಅಣ್ಣಾವ್ರ ಚಿತ್ರ ೨೯ / ೨೦೭)

ಕೆಲವೊಂದು ಚಿತ್ರಗಳು ಸಿಗೋಲ್ಲ .. ಸಿಕ್ಕರೂ ಪ್ರಿಂಟ್ ಚೆನ್ನಾಗಿರೊಲ್ಲ.. ಕಾರಣಗಳು ಹತ್ತಾರು.. ನೆಗೇಟಿವ್ಸ್ ಸುಟ್ಟುಹೋಗಿರಬಹುದು, ಹಾಳಾಗಿರಬಹುದು, ಸರಿಯಾಗಿ ಸಂರಕ್ಷಣೆ  ಮಾಡದೆ ಹಾಳಾಗಿರಬಹುದು.. ಕಳೆದುಹೋಗಿರಬಹುದು, ಅಥವ ಸರಿಯಾದ ಲೇಬಲ್ ಇಲ್ಲದೆ ಗುರುತಿಸಲಾಗದ ನೆಗೇಟಿವ್ಸ್ ಅಂತ ಒಂದು ಮೂಲೆಯಲ್ಲಿ ಅಳುತ್ತಾ ಕೂತಿರಬಹುದು... ಹಲವಾರು ಸಾಧ್ಯತೆಗಳಿರುತ್ತವೆ..

ಅಂತಹ ಒಂದು ಚಿತ್ರ ೧೯೬೨ ಇಸವಿಯಲ್ಲಿ ತೆರೆಕಂಡ ದೇವಸುಂದರಿ ಚಿತ್ರ..  ಸಿ ವಿ ರಾಜು ನಿರ್ದೇಶಿಸಿದ ಈ ಚಿತ್ರವನ್ನು ಎಂ ಎಚ್ ಎಂ ಮುನಾಸ್ ನಿರ್ಮಿಸಿದ್ದರು. ಸಿ ಎನ್ ಪಾಂಡುರಂಗ ಅವರ ಸಂಗೀತವಿದ್ದ ಈ ಚಿತ್ರದಲ್ಲಿ ರಾಜಕುಮಾರ್, ಬಿ ಸರೋಜಾದೇವಿ, ನರಸಿಂಹರಾಜು, ಕಲ್ಯಾಣ್  ಕುಮಾರ್ ಮತ್ತಿರರು ನಟಿಸಿದ್ದರು. ಡಿ ಎಸ್ ಖೋಟ್ನಿಸ್ ಛಾಯಾಗ್ರಹಣವಿದ್ದ ಈ ಚಿತ್ರದ ಪ್ರತಿ ಎಲ್ಲೂ ಸಿಗುತ್ತಿಲ್ಲ..  ಆದರೂ ಹುಡುಕುವ ಪ್ರಯತ್ನ ಮಾಡಿ ಮುಂದೊಂದು ದಿನ ಸಿಕ್ಕಾಗ ಈ ಚಿತ್ರದ  ಬಗ್ಗೆ ಬರೆಯುವೆ.

ವಿಕಿಪೀಡಿಯದ ಒಂದು ತುಣುಕು.. 

ಮುಂದಿನ ಚಿತ್ರದಲ್ಲಿ  ಸಿಗೋಣ ಅಲ್ಲವೇ.. 

Saturday, May 9, 2020

ಪತ್ನಿಯ ಭಕ್ತಿಯ ಮುಂದೆ ಯಾವ ಶಕ್ತಿಯೂ ಇಲ್ಲ ಎಂದು ಹೇಳಿಕೊಡುವ ಸ್ವರ್ಣಗೌರಿ (1962) (ಅಣ್ಣಾವ್ರ ಚಿತ್ರ ೨೮ / ೨೦೭)

ಚಲನ ಚಿತ್ರ ಎಂದರೆ ಚಲಿಸುವ ಚಿತ್ರ ಎಂದು ಅರ್ಥ.. ಹಿಂದಿನ ಸಿನಿಮಾಗಳಲ್ಲಿ ಹೇಗಾದರೂ ವಿಜೃಂಭಿಸಬಹುದು.. ಆದರೆ ಮುಂದಿನ ಚಿತ್ರ ಅದು ಹೇಗೆ ಬೇಡುತ್ತದೆ.. ಅದರ ಕಥೆ ಹೇಗಿರುತ್ತದೆ ಅಭಿನಯಿಸದ ಮೇಲೆ ಗೊತ್ತಾಗೋದು..


ಹಿಂದಿನ ಸಿನಿಮಾ ಭೂದಾನ ಚಿತ್ರದುದ್ದಕ್ಕೂ ಮಿಂಚಿದ್ದ ಉದಯಕುಮಾರ್.. ಇಲ್ಲಿ ಒಂದು ಅತಿಥಿ ನಟ ಎನ್ನುವಂತಹ ಪಾತ್ರದಲ್ಲಿದ್ದಾರೆ.. ಹಿಂದಿನ ಚಿತ್ರದಲ್ಲಿ ರಾಜ್ ಕುಮಾರ್ ಮಗನಾಗಿದ್ದ ಉದಯಕುಮಾರ್, ಈ ಚಿತ್ರದಲ್ಲಿ ರಾಜ್ ಕುಮಾರ್ ಅವರಿಗೆ ಅಪ್ಪನಾಗಿದ್ದಾರೆ..

ಶ್ಯಾಮ್ ಪ್ರಸಾದ್ ಮೂವೀಸ್ ಲಾಂಛನದಲ್ಲಿ ಡಿ ಆರ್ ನಾಯ್ಡು ನಿರ್ಮಿಸಿ ವೈ ಆರ್ ಸ್ವಾಮಿ ನಿರ್ದೇಶಿಸಿದ ಈ ಚಿತ್ರದಲ್ಲಿ ರಾಜ್ ಕುಮಾರ್, ಉದಯಕುಮಾರ್, ಕೃಷ್ಣಕುಮಾರಿ, ನರಸಿಂಹರಾಜು, ಅಶ್ವಥ್, ಸಂಧ್ಯಾ, ರಾಜಶ್ರೀ, ಲಕ್ಷ್ಮೀದೇವಿ, ರಮಾದೇವಿ, ಜಯಶ್ರೀ, ರಾಮಚಂದ್ರಶಾಸ್ತ್ರಿ, ವಾದಿರಾಜ್, ಗಣಪತಿ ಭಟ್, ಸಾರೋಟ್ ಅಶ್ವಥ್, ಪಾಪಮ್ಮ ಮುಂತಾದವರಿದ್ದಾರೆ..

ಕರೀಂಖಾನ್ ಅವರೇ ಈ ಚಿತ್ರದ ನಿಜವಾದ ಹೀರೊ. ಕಥೆ, ಸಂಭಾಷಣೆ, ಹಾಡುಗಳನ್ನು ರಚಿಸಿದ್ದಾರೆ. ಹಾಡುಗಳು ಸೊಗಸಾಗಿವೆ. ಸಂಭಾಷಣೆ ಚುರುಕಾಗಿದೆ. ಈ ಚಿತ್ರದ ಬಹುತೇಕ ಹಾಡುಗಳು ಇಂದಿಗೂ ಜನಮಾನಸದಲ್ಲಿದೆ.

ಎಂ ವೆಂಕಟರಾಜು ಅವರ ಸಂಗೀತ, ಅದ್ಭುತ ಛಾಯಾಗ್ರಾಹಕ ಆರ್ ಮಧು ಅವರ ತಾಂತ್ರಿಕ ನೈಪುಣ್ಯ ಈ ಚಿತ್ರಕ್ಕಿದೆ..


ಶಿವ ಪಾರ್ವತಿ ಪಗಡೆ ಆಡುತ್ತಿದ್ದಾಗ... ಒಂದು ಆಟದಲ್ಲಿ ಶಿವ ಸೋತು ಹೋಗುತ್ತಾನೆ.. ಇದನ್ನು ಶಿವನ ತಲೆಯ ಮೇಲೆ ಸ್ಥಾನ ಪಡೆದಿದ್ದ ಕಾಳಿಂಗ ನೋಡುತ್ತಾನೆ.. ಅರಿವಿಲ್ಲದೆ ನಂದೀಶ್ವರನಿಗೆ ಕಾಳಿಂಗ ಈ ವಿಷಯವನ್ನು ಹೇಳಿದ್ದನ್ನು ಮಾಲಿನಿ ಎನ್ನುವ ಯಕ್ಷ ಕನ್ಯೆ ಕೇಳಿಸಿಕೊಳ್ಳುತ್ತಾಳೆ.. ಕಾಳಿಂಗ ಮಾಲಿನಿಯ ಪ್ರೇಮಯಾಚನೆಯನ್ನು ತಿರಸ್ಕರಿಸಿದ್ದರಿಂದ ಕೋಪಗೊಂಡಿದ್ದ ಅವಳು, ಶಿವ ಪಗಡೆಯಲ್ಲಿ ಸೋತಿದ್ದನ್ನು ಇಡೀ ಕೈಲಾಸಕ್ಕೆ ಹೇಳಿಬಿಡುತ್ತಾಳೆ..

ಇಲ್ಲಿ ವಿಶೇಷ ಅಂದರೆ ಶಿವ ಪಾತ್ರಧಾರಿ ನಿಜವಾದ ಹಾವನ್ನೇ ಧರಿಸಿರುವುದು .. !


ವಿಷಯ ತಿಳಿದ ಶಿವ ಕುಪಿತಗೊಂಡು ವಿಚಾರಿಸಿದಾಗ ಗೊತ್ತಾದ ವಿಷಯ ಅಂದರೆ, ಅಂತರಂಗ ವಿಲಾಸದಲ್ಲಿ ನೆಡೆದ ವಿಷಯ ಕಾಳಿಂಗನಿಗೆ ಮಾತ್ರ ಗೊತ್ತಿರುತ್ತೆ, ಅದು ಎಲ್ಲರಿಗೂ ಗೊತ್ತಾಗಿದೆ ಅಂದರೆ ಇದಕ್ಕೆ ಕಾರಣ ಕಾಳಿಂಗ ಎಂದು ತಿಳಿದು ಶಿವ ಕುಪಿತಗೊಂಡು ಭೂಲೋಕದಲ್ಲಿ ಸಾಮಾನ್ಯ ಜೀವಿಯಾಗಿ ಹುಟ್ಟಲು ಶಾಪಕೊಡುತ್ತಾನೆ..

ಕಾಳಿಂಗ ಈ ಶಾಪದ ಉಪಸಂಹಾರ ಕೇಳಿದಾಗ, ೨೫ನೇ ವಯಸ್ಸಿಗೆ ಕೈಲಾಸಕ್ಕೆ ಬರುವಂತೆ ಹೇಳುತ್ತಾನೆ. ಅಂದರೆ ಈತ ಅಲ್ಪಾಯು..

ಇದೆ ಕತೆ ಮುಂದುವರಿದು, ರಾಣಿ ಪ್ರಿಯಂವಧೆಗೆ ಹೆಣ್ಣು ಮಗು ಜನನವಾಗುತ್ತದೆ.. ಆಕೆಯಲ್ಲಿ ಕಾಳಿಂಗನ ಭೂಲೋಕದ ಅವತಾರ ಅನುರಕ್ತಳಾಗುತ್ತಾನೆ.. ಅವಳಿಗೆ ಧೀರ್ಘ ಸುಮಂಗಲಿ ಆಶೀರ್ವಾದ ಪಾರ್ವತಿಯಿಂದ ಸಿಗುತ್ತದೆ..

ಶಿವನ ಪ್ರಕಾರ ಕಾಳಿಂಗ ಅಲ್ಪಾಯು, ಆದರೆ ಅವನ ಪತ್ನಿ ದೀರ್ಘ ಸುಮಂಗಲಿ.. ಈ ಗೊಂದಲ, ಸಮಸ್ಯೆಯನ್ನು ಪರಿಹಾರ ಮಾಡುವುದೇ ಈ ಸಿನಿಮಾದ ಕಥಾವಸ್ತು.  ಸ್ವರ್ಣಗೌರಿ ಕಥೆ ಎಂದೇ ಪ್ರಸಿದ್ಧವಾಗುತ್ತದೆ.

ಕಾಳಿಂಗನನ್ನು ಮಾಲಿನಿ ಭೂಲೋಕದಲ್ಲಿಯೂ ಕಾಡುತ್ತಾಳೆ.. ಆತನ ಪತ್ನಿಯ ಮೇಲೆ ಅವನ ಅಪ್ಪ್ಪ ಅಮ್ಮನಿಗೆ ಅನುಮಾನ ಬರುವಂತೆ ಮಾಡುತ್ತಲೇ. ಅವಳನ್ನು ಅರಮನೆಯಿಂದ ಹೊರ ಹೋಗುವಂತೆ ಮಾಡುತ್ತಾಳೆ. ಇತ್ತ ಕಾಳಿಂಗನನ್ನು ನಾಯಿಯನ್ನಾಗಿ ಮಾಡಿ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾಳೆ.. ಕಥೆ ಹೀಗೆ ಮುಂದುವರಿದು, ಕಾಳಿಂಗನ ಸ್ನೇಹಿತನ ಮೂಲಕ ನಾಯಿ ರೂಪ ಹೋಗಿ, ನಿಜವಾದ ವಿಷಯ ತಿಳಿದು, ತನ್ನ ಪತ್ನಿಯನ್ನು ಹುಡುಕಲು ಶುರುಮಾಡುತ್ತಾನೆ.


ಇತ್ತ ಮಾಲಿನಿಯ ಕೋಟಲೆಯಿಂದ, ಕಾಳಿಂಗನ ಅಪ್ಪ ಅಮ್ಮನಿಗೆ ಕುರುಡು ಪ್ರಾಪ್ತವಾಗುತ್ತದೆ. ಇತ್ತ ಶಿವ ಕಾಳಿಂಗನ ಆಯಸ್ಸು ಮುಗಿಯುತ್ತಿದೆ ಎಂದು ಅರಿವಾಗಿ, ಕಿಂಕರರ ಮೂಲಕ ಅವನ ಆಯಸ್ಸನ್ನು ಮುಗಿಸಲು ಪ್ರಯತ್ನ ಪಟ್ಟಾಗ.. ತನ್ನ ಮಾಂಗಲ್ಯದ ಬಲಕ್ಕೆ ತಪಸ್ಸು ಮಾಡುತ್ತಿದ್ದ ಅವನ ಪತ್ನಿಯ ಭಕ್ತಿಗೆ ಮೆಚ್ಚಿ, ಪಾರ್ವತೀ ಕಾಳಿಂಗನನ್ನು ನುಂಗಿ ಬಿಡುತ್ತಾಳೆ.


ಶಿವ ಶಿವೆಯಲ್ಲಿ ಈ ಘಟನೆ ಸಂಬಂಧ ವಾಗ್ವಾದವಾದಾಗ ನಾರದ ಅದನ್ನು ಬಗೆ ಹರಿಸುತ್ತಾನೆ.. ಶಿವ ಕೊಟ್ಟ ಶಾಪದ ಪ್ರಕಾರ, ಕಾಳಿಂಗ ಸಶರೀರನಾಗಿ ತನ್ನ ಇಪ್ಪತೈದನೇ ವಯಸ್ಸಿಗೆ ಕೈಲಾಸಕ್ಕೆ ಬರುತ್ತಾನೆ. ಪಾರ್ವತಿ ಹೊಟ್ಟೆಯನ್ನು ಸೇರಿ ಹೊರಬಂದ ಕಾರಣ ಮರು ಜನುಮವಾಗುತ್ತದೆ. ಜೊತೆಯಲ್ಲಿ ಸಾವಿಲ್ಲದೆ ಹೋಗಿದ್ದರಿಂದ ಆತನ ಪತ್ನಿಯ ತಾಳಿ ಭಾಗ್ಯ ಅಭಾದಿತವಾಗಿದೆ.. ಹಾಗಾಗಿ ಎಲ್ಲರೂ ಗೆದ್ದಂತೆ ಎಂದು ವಿವರಿಸಿ, ಶಿವನ ಅನುಗ್ರಹದಿಂದ ಕಾಳಿಂಗನ ಅಪ್ಪ ಅಮ್ಮನಿಗೆ ದೃಷ್ಟಿ ಬರುತ್ತದೆ.


ಈ ಕತೆಯು ಸ್ವರ್ಣಗೌರಿ ಕಥೆಯಾಗಲಿ ಎಂದು ಹಾರೈಕೆಯೊಂದಿಗೆ ಚಿತ್ರ ಮುಗಿಯುತ್ತದೆ..

ಮೊದಲೇ ಹೇಳಿದಂತೆ, ಈ ಚಿತ್ರದ ನಾಯಕ ಕತೆ.. ಹಾಗಾಗಿ ರಾಜಕುಮಾರ್ ಆದಿಯಾಗಿ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕಥೆಗೆ ಪೂರಕವಾದ ಸಂಭಾಷಣೆ, ಹಾಡುಗಳು, ನರಸಿಂಹರಾಜು, ಲಕ್ಷ್ಮೀದೇವಿ, ರಮಾದೇವಿಯವರ ಹಾಸ್ಯ ದೃಶ್ಯಗಳು ಚಿತ್ರದ ಓಘಕ್ಕೆ ತೊಂದರೆ ಕೊಡದೆ ತಿಳಿಹಾಸ್ಯ ಗಮನಸೆಳೆಯುತ್ತದೆ.


ಎಲ್ಲರಿಗೂ ಅಭಿನಯಿಸುವ ಅವಕಾಶ ಇರೋದರಿಂದ ಎಲ್ಲರ ಅಭಿನಯವೂ ಇಷ್ಟವಾಗುತ್ತದೆ. ಸತಿಶಕ್ತಿಯ ಮುಂದೆ ಭಗವಂತನೂ ತಲೆ ಬಾಗುತ್ತಾನೆ.. ಆ ಶಕ್ತಿಯ ಮುಂದೆ ಎಲ್ಲವೂ ಗೌಣ ಎನ್ನುವುದು ಸಾಬೀತಾಗುತ್ತದೆ..


ರಾಜಕುಮಾರ್ ಅವರ ಅಭಿನಯ ಸೊಗಸಾಗಿದೆ.. ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.. ಸಂಭಾಷಣೆ ವೈಖರಿ, ಆಂಗೀಕ ಅಭಿನಯ, ಆ ಪಾತ್ರಕ್ಕೆ ತಕ್ಕನಾದ ವೇಷಭೂಷಣ..





ಉಳಿದ ಕಲಾವಿದರು ರಾಜಕುಮಾರ್ ಅವರ ಅಪ್ಪ ಅಮ್ಮನಾಗಿ ಉದಯಕುಮಾರ್ ಮತ್ತು ಜಯಶ್ರೀ .. ನಾರದನಾಗಿ ಅಶ್ವಥ್, ರಾಜಕುಮಾರ್ ಅವರ ಆಪ್ತನಾಗಿ ನರಸಿಂಹರಾಜು, ನಾಯಕಿಯ ಪಾತ್ರದಲ್ಲಿ ಸುಂದರಿ ಕೃಷ್ಣಕುಮಾರಿ.. ನರಸಿಂಹರಾಜುವನ್ನು ಗೋಳುಹುಯ್ಕೊಳ್ಳೋಕೆ ಎಂ ಏನ್ ಲಕ್ಷ್ಮೀದೇವಿ, ವಾದಿರಾಜ್ ಮತ್ತು ರಮಾದೇವಿ ಇದ್ದಾರೆ..

ಒಂದು ಸರಳ ಸುಂದರ ಚಿತ್ರ ನೋಡಿದ ಅನುಭವ ನನ್ನದು.. ಮತ್ತೊಂದು ಚಿತ್ರದೊಂದಿಗೆ ಸಿಗೋಣ.. !