Saturday, July 21, 2018

ವಿಭಿನ್ನ ಅನುಭವ - ನಾಗರಹಾವು

ಮತ್ತೆ ನಾಗರಹಾವು ಬರುತ್ತಿದೆ ಎಂದು ತಿಳಿದಾಗ ಖುಷಿಯಾಯಿತು... ಇದರಲ್ಲಿ ಮತ್ತೆ ಏನೂ ಮಾಡ್ತಾರೆ ಅಂತ ಯು ಟ್ಯೂಬ್ ನಲ್ಲಿ ಟ್ರೈಲರ್ /ಟೀಸರ್ ನೋಡಿದಾಗ ನೋಡಲೇ ಬೇಕು ಎನ್ನುವ ಹಠ ಹುಟ್ಟಿತು.. ಆದದ್ದು ಆಗಲಿ.. ನೋಡಿಯೇ ಬಿಡೋಣ ಅಂತ ಹೋಗಲು ತೀರ್ಮಾನಿಸಿದಾಗ.. ನನ್ನ ಅಣ್ಣ ಹೋಗೋಣ ನೆಡಿ ಅಂತ ಇಡೀ ಪರಿವಾರ ಮೈನಸ್ ಮುರಳಿ ಆದಿತ್ಯ ಹೊರಟೆವು..

ಥೀಯೇಟರ್ ಮುಂದೆ ಒಂದು ಸೆಲ್ಫಿ .. ಈ ಸಿನಿಮಾದ ಹುಚ್ಚನ್ನು ಹೆಚ್ಚು ಮಾಡಿತು.. ಮನೆಯ ಹತ್ತಿರವೇ ಟಾಕೀಸು ಇದ್ದದರಿಂದ ಆರಾಮಾಗಿ ಹೋದೆವು.. ರೂರಲ್ ಪ್ರದೇಶ.. ಪಟ್ಟಣದ ಗಿಜಿ ಗಿಜಿ ಇರಲಿಲ್ಲ.. ಸಿನೆಮಾವನ್ನು ಅನುಭವಿಸಿ ನೋಡಬಹುದಿತ್ತು.. ಆದರೆ ಪಟ್ಟಣದಲ್ಲಿ ಸಿಗುವ ಶಿಳ್ಳೆ .. ಚಪ್ಪಾಳೆ..ಪರದೆಗೆ ವಿಷ್ಣು ಬಂದಾಗ ಕರ್ಪೂರದ ಆರತಿ.. ಕೂಗಾಟ. .ಜೈಕಾರ.. ಇವುಗಳು ಇರಲಿಲ್ಲ ಅಂತಲ್ಲ.. ಆದರೆ ಪ್ರಮಾಣ ಕಮ್ಮಿ ಇದ್ದವು. ... ಹಾಗಾಗಿ ಸಿನೆಮಾವನ್ನು ಸಿನೆಮವನ್ನಾಗಿ ನೋಡಲು ಸಾಧ್ಯವಾಯಿತು..
ಪರಿವಾರ @ ನಾಗರಹಾವು 

ಇಡೀ ಚಿತ್ರ ಮೊದಲೇ ಅದ್ಧೂರಿಯಾಗಿ ಅಂದಿನ ಕಾಲಕ್ಕೆ ತಕ್ಕನಾಗೆ ನಿರ್ಮಿಸಿದ್ದರು.. ಪ್ರಸಿದ್ಧ ನಿರ್ಮಾಪಕ ಶ್ರೀ ವೀರಾಸ್ವಾಮಿ ಅವರು... ಈ ಮರುಸೃಷ್ಟಿ ಕೂಡ ಅಷ್ಟೇ ಅದ್ಧೂರಿಯಾಗಿ ಮಾಡಿದ್ದಾರೆ.. ಆಧುನಿಕ ವರ್ಣ ಸ್ಪರ್ಶ.. ಸಂಗೀತದ ಪುನರ್ ನಿರ್ಮಾಣ.. ಹಳೆಯದನ್ನು ಉಳಿಸಿಕೊಂಡು ಅದಕ್ಕೆ ಅಲ್ಲಲ್ಲಿ ಸ್ಪರ್ಶ ನೀಡಿದ್ದಾರೆ.. ಆದರೂ ಒಮ್ಮೆ ಅನ್ನಿಸಿತು ಹಳೆಯ ಸಂಗೀತವನ್ನೇ ಇಟ್ಟುಕೊಂಡು ವರ್ಣ ಸ್ಪರ್ಶ.. ಮತ್ತೆ ೭೦ಎಂಎಂಗೆ ಮಾಡಿದ್ದಾರೆ ಚೆನ್ನ ಅಂತ.. ಆದರೆ ಇದು ನೆಗೆಟಿವ್ ಸಿಕ್ಕಿದ್ದು.. ಅದರ ಹಿಂದೆ ಪಟ್ಟ ಬವಣೆ.. ಹೊಸ ತಂತ್ರಜ್ಞಾನಕ್ಕೆ ಒಗ್ಗಿಸುವಲ್ಲಿ ಇರುವ ಮಿತಿ.. ಇದನ್ನು ದಾಟಿ ಅದ್ಭುತವಾಗಿ ಮಾಡಿದ್ದಾರೆ..

ಒಂದು ತಲೆಮಾರನ್ನು ದಾಟಿ ಅದರ ಮುಂದಿನ ತಲೆಮಾರಿನ ಜನತೆ ನೋಡುತ್ತಿರುವುದರಿಂದ ಈ ತಲೆಮಾರಿಗೆ ಖಂಡಿತಾ ಇಷ್ಟವಾಗುತ್ತದೆ ಅನ್ನುವ ಭರವಸೇ ನನ್ನದು..

ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಕನ್ನಡ ಚಿತ್ರಗಳ ಬಗ್ಗೆ ಬರೆಯುವಾಗ ನನ್ನ ಅನುಭವಕ್ಕೆ ತಲುಪಿದ ರೀತಿಯನ್ನು ಬರೆದಿದ್ದೆ.. ಅದರ ಕೊಂಡಿ ಇಲ್ಲಿದೆ.. ಸ್ಪೆಷಾಲಿಟಿ... ಪುಟ್ಟಣ್ಣ ಸ್ಪೆಷಾಲಿಟಿ - ನಾಗರಹಾವು (1972)  ಹಾಗಾಗಿ ಮತ್ತೆ ಅದೇ ವಿಷಯ ಹೇಳಿ ನಿಮಗೆ ಬೋರ್ ಹೊಡೆಸೋಲ್ಲ :-)

ಏನೋ ಒಂದು ಸೆಳೆತ ಇದೆ ಈ ಚಿತ್ರದಲ್ಲಿ.. ಅಂದುಕೊಂಡಿದ್ದು ಏನೂ ಸಾಗೊಲ್ಲ... ದುರಂತದಲ್ಲಿ ಕೊನೆಗಾಣುತ್ತದೆ.. ಒಂದು ಬದುಕು ಸುಂದರವನವಲ್ಲ ... ಅಲ್ಲಿ ನೂರಾರು ತಾಕಲಾಟಗಳು ಸುತ್ತುತ್ತವೆ.. ಪ್ರೀತಿ ಪ್ರೇಮ .. ಜಾತಿ.. ಧರ್ಮ.. ಆಸ್ತಿ.. ಅಂತಸ್ತು..    ಭಿನ್ನಾಭಿಪ್ರಾಯ.. ಸಂಬಂಧದ ಬಗ್ಗೆ ಒಡುಕು ಮೂಡಿಸೋದು.. ಹೊಟ್ಟೆ ಉರಿಗೆ ಬೆಂಕಿ ಹಚ್ಹೋದು ಎಲ್ಲವೂ ಇದೆ..
ಗುರು ಶಿಷ್ಯ 

ಈ ದೃಶ್ಯದ ಸಂಗೀತ.. ಸೂಪರ್ 

ನಿರ್ಮಾಪಕರು - ವೀರಾಸ್ವಾಮಿ 

ಆಚಾರ್.. ಅಯ್ಯಂಗಾರ್.. ಸ್ಮಾರ್ಥ ಈ ಮೂರು ಪಂಗಡಗಳ  ಘರ್ಷಣೆ ಒಂದು ಕಡೆ.. ಕ್ರಿಶ್ಚಿಯನ್.. ಮತ್ತು ಇಸ್ಲಾಮ್ ಧರ್ಮ ಪಾತ್ರಗಳು ತರುವ ಬಿಕ್ಕಟ್ಟು .. ಇಡೀ ಚಿತ್ರದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತೆ..

ಜಲೀಲ ಅಲಮೇಲುವನ್ನು ರೇಗಿಸದಿದ್ದರೆ.. ರಾಮಾಚಾರಿಗೂ ಅಲಮೇಲುಗೂ ಪ್ರೀತಿ ಬೆಳೆಯುತ್ತಿರಲಿಲ್ಲ.. ಮಾರ್ಗರೇಟ್ ಪಾತ್ರ ಬರದೇ ಇದ್ದಿದ್ದರೆ ಅಂತ್ಯ ಹೀಗಿರುತ್ತಿತ್ತಾ... ಅನ್ನಿಸುತ್ತದೆ..

ಈ ಚಿತ್ರ ನೋಡುತ್ತಾ ಹೋದ ಹಾಗೆ.. ಈ ಚಿತ್ರದ ಅನೇಕ ಪಾತ್ರಗಳ ನಟ ನಟಿಯರು ಈಗಿಲ್ಲ ಎನ್ನುವ ಅಂಶ ಬೇಸರ ತರಿಸುತ್ತದೆ..

೧) ಚಿತ್ರದ ನಿರ್ದೇಶಕ - ಪುಟ್ಟಣ್ಣ ಕಣಗಾಲ್
೨) ನಿರ್ಮಾಪಕ - ವೀರಾಸ್ವಾಮಿ
೩) ಚಾಮಯ್ಯ ಮೇಷ್ಟ್ರು - ಅಶ್ವಥ್
೪) ರಾಮಾಚಾರಿ - ವಿಷ್ಣುವರ್ಧನ್
೫) ತುಕಾರಾಂ - ಧೀರೇಂದ್ರ ಗೋಪಾಲ್
೬) ನಾಯ್ಡು ಅಂಕಲ್ - ಶಕ್ತಿ ಪ್ರಸಾದ್
೭) ಸಾಹಿತಿಗಳು - ಆರ್ ಏನ್ ಜಯಗೋಪಾಲ್
೮) ಸಾಹಿತಿಗಳು - ವಿಜಯನಾರಸಿಂಹ
೯) ಸಾಹಿತಿಗಳು - ಚಿ ಉದಯಶಂಕರ್
೧೦) ಸಂಗೀತ - ವಿಜಯಭಾಸ್ಕರ್
೧೧) ಕಾದಂಬರಿಕಾರರು - ತ ರಾ ಸುಬ್ಬರಾಯರು
೧೨) ಲಕ್ಷಮು - ವಜ್ರಮುನಿ
೧೩) ಮಂಡಿ ಸಾಹುಕಾರರು - ರಂಗ
೧೪) ಪೈಲ್ವಾನ್ - ಎಂ ಪಿ ಶಂಕರ್
೧೫) ರಾಮಾಚಾರಿ ಅಪ್ಪ - ರಾಘವೇಂದ್ರ ರಾವ್
೧೬) ರಾಮಚಾರಿ ಅಮ್ಮ - ಜಯಶ್ರೀ
೧೭) ಅಲಮೇಲು ಅಪ್ಪ - ರಾಮಚಂದ್ರ ಶಾಸ್ತ್ರೀ

ಇದು ತೆರೆಯ ಮೇಲೆ ಹೆಸರಾಗಿದ್ದ ನಟ ನಟಿಯರು ಮತ್ತು ಕೆಲವು ತಂತ್ರಜ್ಞರು.. ಇದರ ಹಿಂದೆ ಶಕ್ತಿ ಮೀರಿ ದುಡಿದ್ದಿದ್ದ ಅನೇಕಾನೇಕ ತಂತ್ರಜ್ಞರು.. ಯೂನಿಟ್ ಕೆಲಸಗಾರರು.. ಮರೆಯಾಗಿದ್ದರು ಅವರೆಲ್ಲರ ಅನುಭವದ ಶ್ರಮ ಈ ಚಿತ್ರ..

ಪುಟ್ಟಣ್ಣ ಕಣಗಾಲ್ ಎನ್ನುವ ಮಾಂತ್ರಿಕ ನಿರ್ದೇಶಕ.. ತರಾಸು ಎನ್ನುವ ಅದ್ಭುತ ಕತೆಗಾರರ ಕಾದಂಬರಿಯ ಒಳ ನೋಟವನ್ನು ಅನುಭವಿಸಿ ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಿ ಅವರಿಂದ ಚಿತ್ರಕ್ಕೆ ಬೇಕಾದ ರೀತಿಯಲ್ಲಿ ಅಭಿನಯ ತೆಗೆದು.. ಇದನ್ನೊಂದು ಅದ್ಭುತ ಕಲಾಕೃತಿ ನಿರ್ಮಿಸಿದ ವೀರಾಸ್ವಾಮಿ ಎಲ್ಲರೂ ಸ್ವರ್ಗದಲ್ಲಿಯೇ ಈ ಚಿತ್ರದ ಬಗೆಗಿನ ಹೊಸ ತಂತ್ರಜ್ಞಾನದ ಲೇಪದೊಂದಿಗೆ ಬೆಳ್ಳಿತೆರೆಯನ್ನು ಬೆಳೆಗುತ್ತಿರುವ ಯಶಸ್ಸನ್ನು ಕಂಡು ಕರುನಾಡ ಚಿತ್ರರಂಗವನ್ನು ಆಶೀರ್ವದಿಸುತ್ತಿದ್ದರೆ ಎನ್ನುವ ನಂಬಿಕೆ ನನ್ನದು..

ಈಶ್ವರಿ ಸಂಸ್ಥೆಯ ಈ ಪರಿಶ್ರಮ ಸೋದರ ಬಾಲಜಿಯ ಜೊತೆಯಲ್ಲಿ ನಿಂತು ರವಿಚಂದ್ರನ್ ಕುಟುಂಬ ಮಾಡಿದ ಈ ಸಾಹಸ ಮೆಚ್ಚುವಂತದ್ದು..

ಮೇಷ್ಟ್ರೇ ನಾನು ಬರುತ್ತಿದ್ದೇನೆ ಆದರೆ ಮಾರ್ಗರೆಟ್ ಜೊತೆಯಲ್ಲಿ ಈ ಸಂಭಾಷಣೆ ಥೀಯೇಟರ್ ಹೊರಗೆ ಬಂದ ಮೇಲೂ ಗುಯ್ ಅನ್ನುತ್ತಿರುತ್ತದೆ..

ಎಲ್ಲರೂ ನೋಡಿ.. ಈ ಪರಿಶ್ರಮವನ್ನು ಗುರುತಿಸಿ.. ನೋಡಿ.. ಮತ್ತು ಬೆಂಬಲಿಸಿ.. !