Friday, January 27, 2017

ಕಾಣದೆ ಹೋದ ಸತಿ ನಳಾಯಿನಿ (1956) (ಅಣ್ಣಾವ್ರ ಚಿತ್ರ ೦೬ / ೨೦೭)

ದೂರದರ್ಶನದ ಆರಂಭದ ದಿನಗಳು..

ಮನೆಯಲ್ಲಿ ಟಿವಿ ಇದೆ ಎನ್ನುವುದೇ ಅವರ ಠೀವಿಗೆ ಇನ್ನೊಂದು ಕಾರಣವಾಗುತ್ತಿತ್ತು.. ಆ ಪೆಟ್ಟಿಗೆಯ ಹೊರಮೈಯಲ್ಲಿ ಕಾಣುವ ಗಾಜಿನ ತಟ್ಟೆಯ ಹಿಂದೆ ಮೂಡುತ್ತಿದ್ದ ಚಿತ್ರಗಳು ನಿಜವೇನೋ ಎನ್ನುವ ಭ್ರಮೆ ನಮಗೆ.. ಮುಟ್ಟೋಣ ಎಂದರೆ.. ಮುಟ್ಟುವುದಿರಲಿ, ಟಿವಿ ನೋಡಲು ನಮ್ಮನ್ನು ಒಳಗೆ ಸೇರಿಸುತ್ತಿದ್ದದ್ದೇ ಒಂದು ದೊಡ್ಡ ಸಾಹಸ.. ಇನ್ನೂ ಅದನ್ನು ಮುಟ್ಟುವುದು ಅಂದರೆ ದೇವರೇ ಗತಿ.. ಅದರಲ್ಲೂ ಪೆಟ್ಟಿಗೆಯೊಳಗೆ ಕೂತ ಟಿವಿಯನ್ನು .. ಅದರ ಬಾಗಿಲು ಸರಿಸಿ...  ಸ್ವಿಚ್ ಹಾಕಿ.. ಟಿವಿಯನ್ನು ಆನ್ ಮಾಡುವುದು ಗೌರವದ ಕೆಲಸ ಮತ್ತು ದರ್ಪವೂ ಇರುತ್ತಿತ್ತು.. ನನಗೆ ಗೊತ್ತು ಎಲ್ಲಾ ಎನ್ನುವ ಅಹಂ.. 

ಸರಿ.. ಟಿವಿ ಆನ್ ಮಾಡಿದರು.. ಕಾರ್ಯಕ್ರಮ ಶುರುವಾಯಿತು.. ಆಗಿನ ಕಾಲದಲ್ಲಿ ಜಾಹಿರಾತುಗಳು ಕಡಿಮೆ.. ಆದರೂ ನಮಗೆ ಟಿವಿ ನೋಡುವ ಚಪಲ.. ವಾರ್ತೆಗಳು, ಗೀತಾ ಚಿತ್ರ, ಚಿತ್ರಮಂಜರಿ.. ಕುಡಿತದ ಕೆಡುಕುಗಳು ಇದರ ಫಲಕ.. ಯಾವುದನ್ನು ಬಿಡುತ್ತಿರಲಿಲ್ಲ.. ಇದೆಲ್ಲದರ ಮಧ್ಯೆ ವಿದ್ಯುತ್ ಹೋಯಿತು ಅಂದರೆ.. ಕೆ ಇ ಬಿ ಗೆ ಹಿಡಿಶಾಪ.. ಕರೆಂಟ್ ಇಲ್ಲದ ಬೋರ್ಡ್ ಅಂತ ಹಾಸ್ಯ ಬೇರೆ.. 

ಸರಿ ಹೋಗಿದ್ದ ಕರೆಂಟ್ ಬಂತು.. ಕಾರ್ಯಕ್ರಮ ಮುಂದೆ ಓಡಿ ಹೋಗಿತ್ತು.. ಆದರೂ ನೋಡುವ ಚಪಲ ಕಡಿಮೆಯಾಗಿರುತ್ತಿರಲಿಲ್ಲ.. ಅರ್ಥವಾದಷ್ಟು ನಮಗೆ ಎನ್ನುವ ಚಪಲ.. ಇದೆಲ್ಲದರ ಮಧ್ಯೆ ಶುರುವಾಗುತ್ತಿತ್ತು.. ಆಂಟೆನಾ ಭರಾಟೆ.. ಗಾಳಿಗೆ, ಕಾಗೆಯ ಮಂಗಾಟಕ್ಕೆ, ಮಂಗಗಳ ಕಾದಾಟಕ್ಕೆ, ಬಿಸಿಲಿಗೆ.. ಚಿತ್ರಗಳು ಸರಿಯಾಗಿ ಮೂಡುತ್ತಿರಲಿಲ್ಲ.. ಆದರೂ ಹಠ ಬಿಡದ ವಿಶ್ವಾಮಿತ್ರನ ರೀತಿ  ಟಿವಿ ಪರದೆಯ ಮೇಲೆ ನಮ್ಮ ನೋಟ.. ಮನೆಯ ಮೇಲೆ ಯಾರೋ ದೊಡ್ಡವರು ಹತ್ತಿ ಅಂಟೆನಾವನ್ನು ಆ ಕಡೆ ಈ ಕಡೆ ಸರಿ ಮಾಡುತ್ತಾ.. ಬಂತಾ ಬಂತಾ ಎಂದು ಕೇಳುವುದು.. ನಾವು ಹುಮ್ಮಸ್ಸಿನಿಂದ ಬರ್ತಿಯಾ ಇದೆ, ಆ ಸ್ವಲ್ಪ.. ಇನ್ನೊಂದು ಚೂರು... ಆ ಆ ಇವಾಗ ಬಂತು.. ಅಯ್ಯೋ ಸರಿಯಾಗಿ ತಿರುಗಿಸಿ.. ಮತ್ತೆ ಇನ್ನೊಂದು ಚೂರು.. ಆ ಇವಾಗ ಸಕತ್.. ಸೌಂಡ್ ಕೊಡಿ.. ಹೀಗೆ ನಮ್ಮ ಕಾಮೆಂಟರಿ ಓಡುತ್ತಲಿತ್ತು.. ಕಡೆಗೆ ಟಿವಿ ಪರದೆಯ ಮೇಲೆ ಚಿತ್ರ ಸರಿಯಾಗಿ ಮೂಡುತ್ತಿದೆ ಎಂದಾಗ.. ನಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.. ಜೊತೆಯಲ್ಲಿ ಎದುರು ಮನೆಯವರು, ಪಕ್ಕದ ಮನೆಯವರು..ನಮ್ಮನ್ನೆಲ್ಲ ಹೊಗಳಿದರು ಎಂದರೆ.. ನಾವು ಕೊಂಬು ಹೊತ್ತ ಮಹಿಷಾಸುರಗಳಾಗಿ ಬಿಡುತ್ತಿದ್ದೆವು.. 

ಇದೇನು ರಾಜ್ ಅವರ ಚಿತ್ರದ ಬಗ್ಗೆ ಅಂತ ಹೇಳಿ.. ಇನ್ನೇನೂ ಕೊರೀತಾ ಇದ್ದೀನಿ ಅಂದು ಕೊಂಡ್ರಾ.. ಇರಿ.. ವಿಷಯಕ್ಕೆ ಬರುತ್ತೇನೆ.. 

ಸರಿ ಟಿವಿ ಚಿತ್ರಗಳು ಸರಿಹೋಯಿತು.. ಇನ್ನೇನು ಎಲ್ಲವೂ ಸರಿಹೋಗಿದೆ.. ಎಂದು ಕೊಂಡಾಗ ಶುರುವಾಗುತ್ತಿತ್ತು.. "ಅಡಚಣೆಗಾಗಿ ಕ್ಷಮಿಸಿ.. "

ಈ ಫಲಕವನ್ನೇ ನೋಡುತ್ತಾ ಕೂರುತ್ತಿದ್ದೆವು.. ಮನೆಯವರು.. "ಲೋ. .. ಕಾರ್ಯಕ್ರಮ ಶುರುವಾದಮೇಲೆ.. ಹೇಳ್ರೋ ಅಂತ ಹೊರಗೆ ಕೂತಿರೋರು.. ನಾವು ಯಾವಾಗ ಸರಿಹೋಗುತ್ತೆ ಅಂತ ಜಾತಕ ಪಕ್ಷಿಯ ಹಾಗೆ ನೋಡುತ್ತಲೇ ಕೂರುತ್ತಿದ್ದೆವು.. 

ರಾಜ್ ಅವರ ಐದು ಚಿತ್ರಗಳು ಸರಾಗವಾಗಿ ನೋಡಲು ಅನುಕೂಲವಾಯಿತು.. ನನಗೆ ಅರಿವಿಗೆ ಬಂದ ವಿಷಯಗಳನ್ನು ಬರೆದು ಆಯಿತ್ತು.. ಮುಂದಡಿ ಇಡೋಣ ಅಂತ ಸಾಗಿದರೆ.. ಕಂಡಿದ್ದು "ಅಡಚಣೆಗಾಗಿ ಕ್ಷಮಿಸಿ" ಫಲಕ.. 

ಗೂಗಲೇಶ್ವರ.. ಅಂಗಡಿಯೇಶ್ವರ, ಆನ್-ಲೈನೇಶ್ವರ, ಟೋಟಲ್-ಕನ್ನಡ ಡಾಟ್ ಕಾಮೇಶ್ವರ, ಯು ಟ್ಯುಬೇಶ್ವರ...  ಹೀಗೆ ದ್ವಾದಶ ಲಿಂಗೇಶ್ವರಗಳ ದರ್ಶನ ಮಾಡಿದರೂ.. ರಾಜ್ ಅವರ ಆರನೇ ಚಿತ್ರ ಸತಿ ನಳಾಯಿನಿ ಚಿತ್ರದ ಪ್ರತಿ ಎಲ್ಲೂ ಸಿಗುತ್ತಿಲ್ಲ.. ಎಲ್ಲರ ಉತ್ತರೇಶ್ವರ ಒಂದೇ.. ಆ ಚಿತ್ರದ ಪ್ರತಿ ಸಿಗೋಲ್ಲ ಎಂದು.. 

೧೯೫೭ರಲ್ಲಿ ಟಿ ಆರ್ ಎಸ್ ಗೋಪು ನಿರ್ದೇಶನದಲ್ಲಿ, ಕಾಮಧೇನು ಫಿಲಂಸ್ ಲಾಂಛನದಲ್ಲಿ ತಯಾರಾದ ಈ ಚಿತ್ರದಲ್ಲಿ ರಾಜ ಕುಮಾರ್ ಮತ್ತು ಪಂಡರೀಬಾಯಿ ಅವರ ಅಭಿನಯವಿತ್ತು. ಸಂಗೀತ ಟಿ ಕೆ ಕುಮಾರ್ ಅವರದ್ದು, ಛಾಯಾಗ್ರಹಣ ಸಿ ಜೆ ಮೋಹನ್ ಅವರದ್ದು. 

ಒಂದೊಮ್ಮೆ ಈ ಚಿತ್ರದ ಪ್ರತಿ ಸಿಕ್ಕರೆ.. ಅದರಲ್ಲಿ  ಸಿಕ್ಕ ಅನುಭವದ ಅಕ್ಷರ ರೂಪವನ್ನು ಖಂಡಿತಾ ನಿಮ್ಮ ಮುಂದೆ ಇಡುತ್ತೇನೆ.. 

ಮತ್ತೊಂದು ರಾಜ್ ಅವರ ಮಾಣಿಕ್ಯ ಮಣಿಯ ಜೊತೆ ಬರುತ್ತೇನೆ.... !

Wednesday, January 18, 2017

ದೇಹದೊಳಗಿನ ಆತ್ಮಕ್ಕೆ ಕಣ್ಣು ಕೊಡುವ ಓಹಿಲೇಶ್ವರ (1956) (ಅಣ್ಣಾವ್ರ ಚಿತ್ರ ೦೫ / ೨೦೭)

ಕ್ಯಾಲೆಂಡರ್ ಮಗುಚಿದೆ.. ಇನ್ನೊಂದು ವರ್ಷ ಶುರುವಾಯಿತು ಅನ್ನೋದು ಗೊತ್ತಾಯಿತು.. ಕಾರಣ ಜನವರಿ ತಿಂಗಳು ಅಂತ ಕಿರುಚುತಿತ್ತು ಕ್ಯಾಲೆಂಡರ್. ಓಹೋ ಆಗಲೇ ಹದಿನೆಂಟು ದಿನಗಳು ಕಳೆದುಹೋಗಿವೆ.. ಇನ್ನು ಏನೂ ಬರೆದಿಲ್ಲ.. ಸರಿ ಹೆಂಗೆ ಶುರುಮಾಡೋದು ಅನ್ನೋದು ಅನ್ನಿಸಿದಾಗ ನನ್ನ ಅದ್ಭುತ ಗೆಳತೀ ಹೇಳಿದರು.. ಸುಮ್ಮನೆ ನೆಡೆಯುತ್ತಾ ಹೋಗಿ.. ಗುರು ನಿಮ್ಮ ಹಿಂದೆ ಇರಲಿ ಗುರಿ ನಿಮ್ಮ ಮುಂದೆ ಇರಲಿ.. ಮೈಲಿಗಲ್ಲುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.

ಅದ್ಭುತ ಮಾತು!!!

ಅಣ್ಣಾವ್ರ ಫೋಟೋ ಕಡೆ ತಿರುಗಿದೆ.. "ಓಹಿಲೇಶ್ವರ"ನಾಗಿ ಬರುತ್ತಿದ್ದೇನೆ ಎಂದರು.


ವಿಶ್ವಕಲಾ  ಚಿತ್ರ ಲಾಂಛನದಲ್ಲಿ ೧೯೫೬ ರಲ್ಲಿ ತಯಾರಾದ ಈ ಚಿತ್ರದ ರಾಜ್ ಅವರ ಐದನೇ ಚಿತ್ರ. ಈ ಚಿತ್ರದ ಒಂದೇ ಒಂದು ನೆನಪು "ಈ ದೇಹದಿಂದ ದೂರನಾದೆ ಏಕೆ ಆತ್ಮನೇ" ಹಾಡು. ಘಂಟಸಾಲ ಮತ್ತು ಜಿ ಕೆ ವೆಂಕಟೇಶ್ ಅವರ ಅದ್ಭುತ ಜೋಡಿಯಲ್ಲಿ ಬಂದ ಈ ಗೀತೆ ತನ್ನ ಸಾಹಿತ್ಯದಿಂದ, ಹಾಡುಗಾರಿಕೆಯಿಂದ ಮನಸ್ಸೆಳೆದಿತ್ತು. ಸರಿ ನೋಡಲು ಶುರುಮಾಡಿದೆ.

ಈ ಚಿತ್ರ ವನ್ನು ನೋಡಿ ಮುಗಿಸಿದಾಗ ಮನದೊಳಗೆ ಅಡಗಿದ್ದ ಮಾತುಗಳೇ ಈ ಲೇಖನವಾಗಿ ಹೊರಬಂದಿದೆ..

ಗಿಡದ ಬೆಳವಣಿಗೆ ಮೊಳಕೆಯಲ್ಲಿ ಕಾಣಬಹುದು. ಮರ ಆಗಬೇಕು ಎಂದರೆ ಮರಗಟ್ಟಬೇಕು ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದೇಶ ಸಾರುವ ಚಿತ್ರ ಇದು.

ವಿಧಿಯಾಟದ ಮುಂದೆ ನಾವೆಲ್ಲರೂ ಕೈಗೊಂಬೆಗಳು. ಪೂರ್ವನಿರ್ಧಾರಿತ ಬರಹದಂತೆ ನಮ್ಮ ಜೀವನ. ಮುದ್ದುಕುವರನಾಗಿ ಜನಿಸುವ ಈ ಕಂದನಿಗೆ, ರಾಜ ಮನೆತನದ ಗತ್ತು ಗೈರತ್ತು ಏನೂ ಇರುವುದಿಲ್ಲ. ಒಂದು ದಿನ ತನ್ನ ತಂದೆಯೊಡನೆ ಪ್ರಯಾಣ ಮಾಡುತ್ತಿದ್ದಾಗ ಜೀವನದ ಮಗ್ಗಲುಗಳ ದರ್ಶನವಾಗುತ್ತದೆ. ಕಡುಬಡವನ ಹಪಾಹಪಿ, ಕುರುಡು ಮಗುವಿನ ಆಕ್ರಂಧನ, ಇವರೆಡು ದೃಶ್ಯಗಳು ಯುವರಾಜನ ಮಾನಸ ಸರೋವರವನ್ನು ಅಲುಗಾಡಿಸುತ್ತದೆ.

ಜೀವನ ಎಂದರೆ ಇಷ್ಟೆಯೇ.. ಬಡತನ, ಕುರುಡುತನ, ಯಾಕೆ ದೇವರ ಸೃಷ್ಟಿ ಏತಕ್ಕೆ ಹೀಗೆ.. ಈ ರೀತಿಯ ನಾನಾ ಪ್ರಶ್ನೆಗಳು ಆ ಮುಗ್ಧ ಮನದಲ್ಲಿ ಹುಟ್ಟಿದಾಗ, ಅವನ ತಂದೆ ಸಮಂಜಸ ಉತ್ತರ ಕೊಡದೆ, ನಾ ಬಡತನವನ್ನ ನಿರ್ಮೂಲನೆ ಮಾಡುತ್ತೇನೆ ಎಂದು ಒಂದಷ್ಟು ಕಾಸು ಕೊಡುತ್ತೇನೆ ಎಂದು ಭರವಸೆ ಕೊಡುತ್ತಾನೆ. ಆದರೆ ಬಡವರಿಗೆ ಸ್ವಾಭಿಮಾನ ದೊಡ್ಡದಾಗಿರುತ್ತದೆ.
ಆ ಬಾಲಕನ ಮನದಲ್ಲಿನ ಗೊಂದಲಗಳು ಇನ್ನಷ್ಟು ಜಟಿಲವಾಗುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ಬೆಳೆದಂತೆ ಅವು ದೊಡ್ಡದಾಗುತ್ತದೆ. ರಾಜಭೋಗಗಳು ಇದ್ದರೂ ದೇವರ ಕಡೆ ಇದ್ದ ಮನಸ್ಸು ಐಹಿಕ ಭೋಗಗಳಿಗೆ ಬಲಿಯಾಗುವುದಿಲ್ಲ.

ವಿಧಿಯಾಟದಂತೆ ಅಪ್ಪ ಅಮ್ಮ ಸಾವಿನ ಸುಖವನ್ನು ಅಪ್ಪಿಕೊಂಡಾಗ, ಮಾರುವೇಷದಲ್ಲಿ ಬರುವ ಈಶ್ವರ, "ನಿನಗೆ ಲೌಕಿಕ ಜ್ಞಾನಕ್ಕಿಂತ ಪಾರಮಾರ್ಥಿಕ ಜ್ಞಾನ ಹೆಚ್ಚು ಸುಖಕೊಡುತ್ತದೆ. ರೊಟ್ಟಿ ತಿನ್ನುವನೊಬ್ಬ, ನೀರು ಕುಡಿಯುವವ ಒಬ್ಬ ಎನ್ನುವಂತೆ ಆದರೆ ಉಪಯೋಗವಿಲ್ಲ. ಕಾಯಕವೇ ಕೈಲಾಸ ಎಂಬ ನುಡಿಯಂತೆ ನೆಡೆದುಕೋ" ಎನ್ನುವ ಮಾತನ್ನು ಹೇಳಿದಾಗ, ತಂದೆ ತಾಯಿಯ ಅಂತ್ಯ ಸಂಸ್ಕಾರವನ್ನು ಮಾಡದೆ, ಕಪಟಿ ರಾಜಗುರುವಿನ ಕೋಪಕ್ಕೆ ಗುರಿಯಾಗುತ್ತಾನೆ.

ಅನೇಕ ಭಾವನೆಗಳನ್ನು ಎದುರಿಸಿದರು, ಕುಗ್ಗದೆ, ಹಿಗ್ಗದೇ, ಕಷ್ಟಗಳನ್ನು ಎದುರಿಸಿ ಕಡೆಗೂ ಶಿವನ ಒಲುಮೆಯಿಂದ ಓಹಿಲೇಶ್ವರನಾಗಿ ಮುಕ್ತಿ ಹೊಂದುತ್ತಾನೆ.


ಈ ಸರಳಕಥೆಯನ್ನು ಅಚ್ಚುಕಟ್ಟಾಗಿ, ಅನೇಕ ಹಾಡುಗಳು, ಮತ್ತು ಹಿತ ಮಿತ ಸಂಭಾಷಣೆಯ ಜಲಕದಲ್ಲಿ ನಿಲ್ಲಿಸಿದ್ದಾರೆ ಟಿ ವಿ ಸಿಂಗ್ ಠಾಕೂರ್ ಅವರು.  ಜಿಕೆ ವೆಂಕಟೇಶ್ ಅವರ ಉತ್ತಮ ಸಂಗೀತವಿದ್ದ ಈ ಚಿತ್ರದಲ್ಲಿ ರಾಜ್ ಅವರ ಹಾಡುಗಾರಿಕೆಯ ಪ್ರತಿಭೆ ಅಲ್ಲಲ್ಲಿ ಕೇಳಸಿಗುತ್ತದೆ. ಕೆಲವು ಶ್ಲೋಕಗಳನ್ನು, ವಚನದ ರೂಪದಲ್ಲಿರುವ ಕೆಲವು ಮಾತುಗಳನ್ನು ಹಾಡಿನ ರೂಪದಲ್ಲಿ ತಂದಿರುವ ಈ ಚಿತ್ರ ಬಹುಶಃ ರಾಜ್ ಅವರ ಗಾಯನ ಪ್ರತಿಭೆಯ ಒಂದು ಪ್ರಭೆ ಕಂಡು ಬರುತ್ತದೆ.

ಜಿ ವಿ ಅಯ್ಯರ್ ಮತ್ತೆ ದುಷ್ಟನ ಪಾತ್ರದಲ್ಲಿ ಮಿಂಚುತ್ತಾರೆ. ಅವರಿಗೆ ತೊಡರುಗಾಲು ಕೊಡುವ ಪಾತ್ರದಲ್ಲಿ ಶುಖನಾಗಿ ನರಸಿಂಹರಾಜು ನಿಂತಿದ್ದಾರೆ.


ನರಸಿಂಹರಾಜು ಪಿಶಾಚಿಯ ಕಾಟದಿಂದ ಪೇಚಾಡುತ್ತಿದ್ದಾಗ ಬರುವ ಒಂದು ಪುಟ್ಟ ಸಂಭಾಷಣೆ ನಗೆ ತರಿಸುತ್ತದೆ.
ಭೂತಾಕಾರವಾಗಿ ನಿಂತು ಗಹಗಹಿಸುವ ಪಿಶಾಚಿ
"ನಾನು ಒಬ್ಬರಿಗೂ ಹಿಂಸೆ ಕೊಡೋಲ್ಲ"
ಅದಕ್ಕೆ ನರಸಿಂಹರಾಜು ಅವರ ಉತ್ತರ
"ದರ್ಶನ ಕೊಟ್ಟರೆ ಸಾಕು ಹಿಂಸೆ ಬೇರೆ ಕೊಡಬೇಕೇ"
ನಾನು ಯಾರ ಪ್ರಾಣವನ್ನು ತೆಗೆಯುವುದಿಲ್ಲ"
"ಅದೇ ಹೋಗುತ್ತೆ.. ನಿನ್ನ ನೋಡಿದ ತಕ್ಷಣ"


ಚುಟುಕು ಸಂಭಾಷಣೆ ಖುಷಿ ಕೊಡುತ್ತದೆ.

ಉಳಿದ ಪಾತ್ರಗಳಲ್ಲಿ ಅರ್ಧಂಬರ್ಧ ಬುದ್ಧಿವಂತಿಕೆಯ ಪಾತ್ರದಲ್ಲಿ ಮಹಾರಾಜನಾಗಿ ಕಲ್ಯಾಣ್ ಕುಮಾರ್ ಇದ್ದರೇ, ಓಹಿಲೇಶ್ವರನ ತಂದೆಯಾಗಿ ಎಚ್ ಎಲ್ ರಾಮಚಂದ್ರಶಾಸ್ತ್ರಿ ಬರುತ್ತಾರೆ. ಮಿಕ್ಕ ಕೆಲವು ಪಾತ್ರಗಳಲ್ಲಿ ಬರುವ ನಟರು ನಟಿಯರು ತಮ್ಮ ತಮ್ಮ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ನಟನೆಯನ್ನು ನೀಡಿದ್ದಾರೆ.

ಈ ಚಿತ್ರದ ಉತ್ತಮ ಅಂಶ ಎಂದರೆ ಕೆಲವು ನೆನಪಲ್ಲಿ ಉಳಿಯುವ ಸಂಭಾಷಣೆಗಳು.

ಮೇಲೆ ಹೇಳಿದ ಸಂಭಾಷಣೆಯ ಜೊತೆಯಲ್ಲಿ ಇನ್ನೊಂದಿಷ್ಟು
"ನಿಮ್ಮ ರಾಜ್ಯಕ್ಕೆ  ನೀವು ಹೋಗಿ
ನನ್ನ ರಾಜ್ಯಕ್ಕೆ ನಾನು ಹೋಗುತ್ತೇನೆ"  ಓಹಿಲೇಶ್ವರನಿಗೆ ಪ್ರಜೆಗಳು ರಾಜ್ಯ ನೋಡಿಕೊಳ್ಳಿ ಧಣಿ ಎಂದಾಗ ಹೇಳುವ ಮಾತಿದು.

"ಸಾವಿಲ್ಲದ ಮನೆಯಿಂದ ಬೂದಿ ಕೊಡಪ್ಪ" ಎಂದಾಗ ಹಳ್ಳಿಯವ "ಅಯ್ಯೋ ಸಿಹಿಯಾದ ಬೇವಿನ ಗಿಡ ತಂದು ಕೊಡಿ" ಎನ್ನುತ್ತಾನೆ. ಇಂತಹ ಮಾರ್ಮಿಕ ಮಾತಿದು.

ಇಬ್ಬರು ರಾಜಭಟರು ಬಂದು "ದೇವರು ಕರೆಯುತ್ತಿದ್ದಾನೆ ಬಾ" ಎಂದಾಗ ನರಸಿಂಹರಾಜು ಹೇಳುವ ಮಾತು
"ದೇವರು ಕರೆದರೆ ನಾಲ್ಕು ಜನದ ಜೊತೆ ಹೋಗಬೇಕು ನೀವು ಇಬ್ಬರೇ ಬಂದಿದ್ದೀರಲ್ಲೋ".. ನಗು ಬರುತ್ತದೆ ಹಾಗೆಯೇ ಅದರೊಳಗಿನ ಸಂದೇಶ  ಭರಿತ ಮಾತು ಸೂಪರ್.

ರಾಜ್ ತಮ್ಮದೇ ಪರಿಧಿಯಲ್ಲಿ ಈ ಚಿತ್ರದಲ್ಲಿ ಕಾಡುತ್ತಾರೆ. ಉತ್ತಮ ಚಿತ್ರ.. ಉತ್ತಮ ಗೀತೆಗಳು.. ಉತ್ತಮ ಅಭಿನಯ ಈ ಚಿತ್ರದ ತಾಕತ್ತು. ಬಸವಣ್ಣ, ಅಕ್ಕ ಮಹಾದೇವಿ ಹೀಗೆ ವಚನಕಾರರ ಮಾತುಗಳನ್ನು ಸೋಮನಾಥ ಎಂಬ ಅಂಕಿತನಾಮದಲ್ಲಿ ಉಪಯೋಗಿಸಿದ್ದೇವೆ ಎಂಬ ಫಲಕ ಆರಂಭದಲ್ಲಿ ತೋರಿಸುವುದು ನಿರ್ದೇಶಕರ ಜಾಣ್ಮೆ ಮತ್ತು ಆ ಮಹಾನ್ ವಚನಕಾರರ ಪದ ಸಂಪತ್ತನ್ನು ಗೌರವ ಪೂರಿತವಾಗಿ ಉಪಯೋಗಿಸುವ  ರೀತಿ ಇಷ್ಟವಾಗುತ್ತದೆ.


ಜೀವನ ಆರಂಭವಾದಾಗ ನಮ್ಮ ಜೀವನ ಹೇಗಿರುತ್ತದೆ ಎನ್ನುವ ಒಂದು ಚಿಕ್ಕ ಟ್ರೈಲರ್ ನಮಗೆ ಸಿಗುತ್ತದೆ, ಅದರ ಜಾಡು ಹಿಡಿದು ಹೊರಟರೆ.. ಜೀವನ ಸಾಕ್ಷಾತ್ಕಾರ ಎನ್ನುವ ಸಂದೇಶವನ್ನು ಹೊತ್ತು ತಂದ ಈ ಚಿತ್ರ ಒಂದು ರತ್ನವಾಗಿ ನಮ್ಮ ಮುಂದೆ ನಿಲ್ಲುತ್ತದೆ.

ಮತ್ತೊಂದು ಚಿತ್ರ ರತ್ನದ ಜೊತೆಯಲ್ಲಿ ರಾಜ್ ಬರುತ್ತಾರೆ.. !!!