Monday, April 24, 2023

ಇವರು ಯಾಕೆ ಮೇಲಿಂದ ಕೆಳಗೆ ಬಂದರು - ಅಣ್ಣಾವ್ರ ಜನುಮದಿನ (2023)

"ಶ್ರೀ ಇವತ್ತು ನನ್ನ ಸಿನಿಮಾಗಳು.. ಹಾಡುಗಳು.. ಸಂಭಾಷಣೆ.. ಯಾವುದರ ಬಗ್ಗೆಯೂ ಬೇಡ.. ಏನಾದರೂ ಬೇರೆ ಬರಿ.. "

ಅಲಾರಾಂ ಹೊಡೆಯುತ್ತಿತ್ತು... ತಕ್ಷಣ ಎಚ್ಚರವಾಯ್ತು.. :ಕಣ್ಣು ಬಿಟ್ಟೆ.. ಹಣೆಗೆ ಕುಂಕುಮವಿಟ್ಟು ಹಾರ ಹಾಕಿಕೊಂಡು ನಗುತ್ತಿದ್ದ ಅಣ್ಣಾವ್ರ ಚಿತ್ರ.. ಅದೇ ಮಾಸದ ನಗುಮೊಗ.. 

"ಅಣ್ಣಾವ್ರೇ ನೀವು ಹೇಗೆ ಹೇಳುತ್ತೀರೋ ಹಾಗೆ.. ಇದು ನಿಮ್ಮ ದಿನ... ನೀವು ಹೇಗೆ ಹೇಳ್ತೀರೋ ಹಾಗೆ.. "

"ಹಾ ಶ್ರೀ .. ಅದು ಮಾತು ಅಂದ್ರೆ.. ಅದು ೨೦೦೬ ರ ಸಮಯ.... ಸಾಕು ಅನ್ನಿಸಿ ಹೊರಟಿದ್ದೆ.. ಅಭಿಮಾನಿ ದೇವರುಗಳು.. ನನ್ನನ್ನು ಭುವಿಗೆ ಸೇರಿಸಿದ್ದರು.. ಕರುನಾಡಿನಲ್ಲಿ ಅಷ್ಟೇ ಅಲ್ಲಾ ಇಡೀ ಸಿನಿ ಜಗತ್ತಿನಲ್ಲಿಯೇ ಒಂದು ರೀತಿಯ ವಿಷಾದದ ಛಾಯೆ.. ಎಲ್ಲರ ಮನಸ್ಸು ಭಾರವಾಗಿತ್ತು.. 

ನನ್ನ ಆತ್ಮ.. ಮೇಲಕ್ಕೆ ಹೊರಟಿತ್ತು.... ಸ್ವರ್ಗದ ಬಾಗಿಲಲ್ಲಿ ನಿಂತಿದ್ದ ದೇವತೆಗಳು.. "ಅರೆ ಇವ ಯಾಕೆ ಕೆಳಗಿಂದ ಮೇಲೆ ಬಂದ"  ನಾ ಸುಮ್ಮನೆ ನಕ್ಕೆ.. ಅಲ್ಲಿಯೇ ಓಡಾಡುತ್ತಿದ್ದ ನನ್ನವ್ವ, ಅಪ್ಪಾಜಿ, ವರದಪ್ಪ, ಶಾರದಾ, ಎಲ್ಲರೂ ನನ್ನ ಬರಮಾಡಿಕೊಂಡರು.. ಆಗ ಅಲ್ಲಿ ನಿಂತಿದ್ದ ದೇವತೆಗಳು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು... 

ಇಂದ್ರ ಬಂದು.. ಅಣ್ಣಾವ್ರೇ ನೀವು ಭಕ್ತಪ್ರಹ್ಲಾದದಲ್ಲಿ ಸ್ವರ್ಗ ಲೋಕಕ್ಕೆ ದಾಳಿ ಮಾಡಿ.. ನನ್ನ ಪದವಿಯನ್ನು ಕಿತ್ತು ಕೊಂಡಿದ್ದು.. ಆ ನಟನೆಯೇ ನನಗೆ ಕಂಪನ ತರಿಸಿತ್ತು.. ಈಗ ನೀವು ಇಲ್ಲಿಗೆ ಬಂದಿದ್ದೀರಿ.. ಸ್ವಲ್ಪ ಭಯವಾಯಿತು.. ಹಾಗಾಗಿ ನನ್ನ ಪರಿವಾರದವರು ಸ್ವಲ್ಪ ಭಯಭೀತರಾಗಿದ್ದಾರೆ ಅಷ್ಟೇ.. 

ಅರೆ ಮಹೇಂದ್ರ.. ಅದು ಪೌರಾಣಿಕ ಕತೆ.. ಪಾತ್ರ.. ಅಭಿನಯ.. ಅಷ್ಟೇ.. ಈಗ ನಿಮ್ಮ ಪದವಿ ಕಸಿದುಕೊಳ್ಳೋಕೆ ಆಗುತ್ತದೆಯೇ.. ಮತ್ತೆ ನಿಮ್ಮ ಸಿಂಹಾಸನದಲ್ಲಿ ಕೂರುವ ಆಸೆಯೂ ಇಲ್ಲ.. ಹಾಗೆ ಯೋಗ್ಯತೆಯೂ ಇಲ್ಲ.... 

ಅಣ್ಣಾವ್ರೇ.. ನೀವು ಕರುನಾಡ ಚಿತ್ರರಸಿಕರ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದೀರಾ.... ಅದಕ್ಕಿಂತ ದೊಡ್ಡ ಪದವಿ ಎಲ್ಲಿದೆ ಹೇಳಿ.. 

ಅದು ಸರಿ ಸ್ವರ್ಗಾಧಿಪತಿ.. ಅವರ ಅಭಿಮಾನದ ಹೊರೆ ನಾ ಎಷ್ಟು ಜನ್ಮ ಎತ್ತಿದರೂ ತೀರಿಸೋಕೆ ಸಾಧ್ಯವೇ.. ಖಂಡಿತ ಇಲ್ಲ.. ಅವರ ಪ್ರೀತಿ ಅಭಿಮಾನ ನನ್ನನ್ನು ಅಷ್ಟು ವರ್ಷ ಅಭಿನಯಿಸುವಂತೆ ಮಾಡಿತು.. ಅವರಿಗಾಗಿ ಅವರಿಗೋಸ್ಕರ ಅನೇಕಾನೇಕ ಪಾತ್ರ ಮಾಡಿಸಿದರು.. ಮಗುವನ್ನು ವಿವಿಧ ವೇಷಭೂಷಣಗಳಲ್ಲಿ ನೋಡಿ ನಲಿವಂತೆ.. ನನ್ನನ್ನು ಬೆಳೆಸಿದರು...ಅಷ್ಟೇ.. .!

ಅದು ನಿಜ ಅಣ್ಣಾವ್ರೇ ನೀವು ಬರಿ ವರನಟ ಮಾತ್ರವಲ್ಲ.. .ನಮ್ಮ ಬ್ರಹ್ಮರ್ಷಿ ವಸಿಷ್ಠರು ಹೇಳುತ್ತಿದ್ದರು.. ಕರುನಾಡಿನ ರಾಜಕುಮಾರ ಅವರು ಶಾಪಗ್ರಸ್ತ ಗಂಧರ್ವರು.. ಈ ಸ್ವರ್ಗದಿಂದ ಶಾಪಗ್ರಸ್ತರಾಗಿ ಭುವಿಗೆ ಜಾರಿ ತಮ್ಮ ಶಾಪವಿಮೋಚನೆಗಾಗಿ ಅಭಿನಯಿಸಿ... ಎಲ್ಲರ ಹೃದಯ ಗೆದ್ದು ಮತ್ತೆ ಗಂಧರ್ವರಾಗಿ ಇಲ್ಲಿಗೆ ಬಂದಿದ್ದಾರೆ ಅಂತ.. ಎಷ್ಟು ನಿಜ ಅನ್ನಿಸುತ್ತೆ ಅಣ್ಣಾವ್ರೇ.. 

ಸುರಾಧಿಪತಿ.. ಅದೇನೋ ನನಗೆ ಗೊತ್ತಿಲ್ಲ.. ಎಲ್ಲಾ ನಿಮ್ಮ ಅಭಿಮಾನವಷ್ಟೇ.. ಒಂದು ತಮಾಷೆ ಅಂದರೆ.. ನಾ ಬೇಡರ ಕಣ್ಣಪ್ಪ ಸಿನೆಮಾಗೆ ಮೇಕಪ್ ಮಾಡಿಕೊಳ್ಳುತ್ತಿದ್ದಾಗ.. ಆ ಪ್ರಸಾಧನ ಕೋಣೆಯ ಹೊರಗೆ ನಿಂತಿದ್ದ ಒಬ್ಬ.. ಇವರೆಲ್ಲಾ ಯಾಕೆ ಮೇಲಿಂದ  ಕೆಳಗೆ ಬಂದರು.. ಇಂತಹ ಅದ್ಭುತ ಅಭಿನಯ ನೀಡುವ ಇವರು ಹತ್ತಾರು ಚಿತ್ರಗಳಲ್ಲಿ ಯಶಸ್ವಿಯಾಗುತ್ತಾರೆ..  ಚಿತ್ರರಂಗದ ಧ್ರುವತಾರೆಯಾಗುತ್ತಾರೆ.. ಈ ಮಾತನ್ನು ಹೇಳಿದ್ದು.. ಅತಿಶಯ ಎನಿಸಿದರೂ.. ಬೇಡರ ಕಣ್ಣಪ್ಪ ಚಿತ್ರದಲ್ಲಿ ಮೊದಲ ದೃಶ್ಯ ಗಂಧರ್ವರ ವೇಷಧಾರಿಯಾಗಿ ಮೆಟ್ಟಿಲು ಹತ್ತಿ ಬರುವುದಾಗಿತ್ತು.. ಅದೇನು ಅವರು ಹೇಳಿದ್ದು ನಿಜವಾಯ್ತೋ.. ಅಥವ ನನ್ನ ಹಣೆಯಲ್ಲಿ ಬರೆದಿತ್ತೋ ಗೊತ್ತಿಲ್ಲ.. ಅಂತೂ ಇಂತೂ ಒಂದಷ್ಟು ಅಭಿನಯ ಎನ್ನಿಸುವಂತಹ ಕೆಲಸ ಮಾಡಿದೆ.. ನನಗೆ ತೃಪ್ತಿ ಸಿಗಲೇ ಇಲ್ಲ.. ಅಲ್ಲೊಂದು ಇಲ್ಲೊಂದು ಪಾತ್ರಗಳು ಖುಷಿ ಕೊಟ್ಟಿತ್ತು.. ಮಂತ್ರಾಲಯದ ಗುರುಗಳ ಪಾತ್ರ.. ಸಂಗೀತ ಆಸಕ್ತಿಯ ಅಪ್ಪಣ್ಣ, ಕಾಳಿದಾಸ.. ಹೀಗೆ ಒಂದು ನಾಲ್ಕೈದು ಪಾತ್ರಗಳು.. ಆದರೂ ಏನೂ ಅಲ್ಲದ ನನ್ನನ್ನು ಎಲ್ಲಾ ನಾನೇ ಅನಿಸುತ್ವಂತೆ ಬೆಳೆಸಿದ್ದು. .. ನನ್ನ ಅಭಿಮಾನಿ ದೇವರುಗಳು.... ಏನಂತೀಯಾ ಶ್ರೀ.. 

ಅಲ್ಲಿಯ ತನಕ ದೇವೇಂದ್ರ.. ಅಣ್ಣಾವ್ರ ಮಾತುಗಳನ್ನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ನನಗೆ ಅಚ್ಚರಿ.. ಅರೆ ಅಣ್ಣಾವ್ರು ನನ್ನನ್ನು ಮಾತಾಡಿಸುತ್ತಿದ್ದಾರೆ..  

ಹೌದು ಅಣ್ಣಾವ್ರೇ.. ಅಂದ್ರೆ.. 

ಅಣ್ಣ ಅಲ್ಲ ಅದು ಹನ್ನಾ.. ಆಫೀಸಿಗೆ ಹೋಗೋಲ್ವ ಹನ್ಯಾ ಎದ್ದೇಳಿ.. ಹೊರಡಿ..... 

ಆಗ ಅರಿವಾಯಿತು.. ಅಣ್ಣಾವ್ರ  ಜನುಮದಿನದಂದು ನಾ ಕಂಡ ಸುಂದರ ಕನಸ್ಸು ಎಂದು.. 

ಕನಸೇ ಇರಲಿ... ನನಸೇ ಇರಲಿ.. ಇವರು ಯಾಕೆ ಮೇಲಿಂದ ಬಂದರು ಎನ್ನುವ ಪ್ರಶ್ನೆಗೆ ಉತ್ತರ ಅಣ್ಣಾವ್ರು ಗಂಧರ್ವರು.. ನಮ್ಮನ್ನು ಅಭಿನಯ ಸಾಗರದಲ್ಲಿ ಮುಳುಗಿ ತೇಲಿಸಲು ಬಂದಿದ್ದರು ಎನ್ನುವುದಂತೂ ಸತ್ಯವಾದ ಮಾತು.. !!

ಅಣ್ಣಾವ್ರೇ ಜನುಮದಿನದ ಶುಭಾಶಯಗಳು.. !!!

Saturday, April 15, 2023

ಅಣ್ಣಾವ್ರು .. ಅಣ್ಣಾವ್ರ ಎಂಟ್ರಿ ಬಗ್ಗೆ ಅವರದೇ ಮಾತುಗಳು ... ಪುಣ್ಯ ದಿನ - 2023

ಬದುಕು ಒಂದು ಭ್ರಮೆಯೋ... ಬದುಕು ಒಂದು ಕನಸೋ... ಗೊತ್ತಾಗುತ್ತಿಲ್ಲ.. ಕಂಡಿದ್ದು ಕಾಣದಾಗುತ್ತದೆ.. ಸಿಕ್ಕಿದ್ದು ಕೈಜಾರಿ ಹೋಗುತ್ತದೆ.. ನೀರಿನ ಹನಿಗಳನ್ನು ಬೊಗಸೆಯಲ್ಲಿ ಹಿಡಿದರೆ ಬೆರಳುಗಳ ಸಂಧಿಯಿಂದ ಹೊರ ಹೋಗುತ್ತದೆ.. ಮರಳಿನ ಕಣಗಳನ್ನು ಕೈಯಲ್ಲಿ ಬಿಗಿಯಾಗಿ ಹಿಡಿದರೆ ಕೈಯಲ್ಲಿ ಏನೂ ಉಳಿಯದೆ ಎಲ್ಲವೂ ಜಾರಿ ಹೋಗುತ್ತದೆ.. ಹೋಗುತ್ತಿದೆ.. 

ಸುಮ್ಮನೆ ಅಣ್ಣಾವ್ರ ಫೋಟೋ ನೋಡುತ್ತಿದ್ದೆ... ಅದೇ ಮಾಸದ ನಗು.. ಅದೇ ನಗುಮೊಗ.. ಮತ್ತೊಮ್ಮೆ  ನನ್ನ ಹತ್ತಿರ ಮಾತಾಡಲು ಬಂದೆ ಬಿಟ್ಟರು ಅಣ್ಣಾವ್ರು.. 

ಶ್ರೀ ಹನ್ನೆರಡನೇ ತಾರೀಕು ಆಗಿ ಮೂರು ದಿನ ಆಯಿತು.. ಸುಮಾರು ಹತ್ತು ವರ್ಷಗಳಿಂದ ವರ್ಷದಲ್ಲಿ ನನ್ನ ಎರಡು  ದಿನದ ಬಗ್ಗೆ ಬರೆಯುತ್ತಿದ್ದೆ. ನಾನು ಕಾದು ಕಾದು ಸಾಕಾಯಿತು .. ದಿನ ಲ್ಯಾಪ್ಟಾಪ್ ತೆಗೆಯೋದು ನಿನ್ನ ಬ್ಲಾಗ್ ಬಂದಿದೆಯಾ ನೋಡೋದು..  ಅಪ್ಪು ಬಂದ ಮೇಲೆ ಅವನು ತಂದಿರೋ ಆಪಲ್ ವಾಚು ಕೈಯಲ್ಲಿಯೇ ಪ್ರಪಂಚ ತೋರಿಸುತ್ತೆ.. ಆದರೂ ಲ್ಯಾಪ್ಟಾಪ್ ನೋಡೋದು ಬಿಡಲಿಲ್ಲ.. ನನ್ನ ಚಿತ್ರಗಳ ಬಗ್ಗೆ ನಿನ್ನ ಲೇಖನ ನಿಂತ ನೀರಾಗಿದೆ.. ಮುಂದಕ್ಕೆ ಹೋಗಿಲ್ಲ.. ಶುರು ಮಾಡಪ್ಪ.. ನಿನಗೆ ಟಾರ್ಗೆಟ್ ಈ ವರ್ಷದ ಕೊನೆಗೆ ನನ್ನ ನೂರನೇ ಚಿತ್ರ ಭಾಗ್ಯದ ಬಾಗಿಲು ಬಗ್ಗೆ ನೀ ಬರೆಯಬೇಕು ಅಷ್ಟೇ.. ಇಲ್ಲ ಅಂದರೆ ಮತ್ತೆ ನಿನ್ನ ಮಾತಾಡಿಸಲ್ಲ.. 

ಅಯ್ಯೋ ಅಣ್ಣಾವ್ರೇ ಅದ್ಯಾಕೆ ಅಷ್ಟು ದೊಡ್ಡ ಮಾತು... ಸ್ವಲ್ಪ ಒತ್ತಡ ಜಾಸ್ತಿಯಾಗಿತ್ತು.. ತಲೆ ಓಡುತ್ತಿರಲಿಲ್ಲ ಹಾಗಾಗಿ ನಾನೇ ಸ್ವಲ್ಪ ವಿರಾಮ ತೆಗೆದುಕೊಂಡಿದ್ದೆ.. ಒಂದು ವರ್ಷದಿಂದ ನಿಂತಿದ್ದ ಸರಣಿ ಮತ್ತೆ ಶುರುವಾಗುತ್ತೆ .. ಹಾ  ಕೊಟ್ಟ ಗುರಿಯನ್ನು ಖಂಡಿತ ತಲುಪುತ್ತೇನೆ.. ೨೦೨೪ ರಲ್ಲಿ  ನಿಮ್ಮ ಜನುಮದಿನಕ್ಕೆ ನಿಮ್ಮ ಚಿತ್ರಗಳ ಸರಣಿಯ ಮೊದಲ ನೂರು ಚಿತ್ರಗಳ ಬಗ್ಗೆ ಒಂದು ಪುಸ್ತಕ ಮಾಡಿಯೇ ಬಿಡುತ್ತೇನೆ.. ನಿಮ್ಮ ಆಶೀರ್ವಾದವಿರಲಿ.. 

ಅದು ಮಾತು ಅಂದರೆ... ಶುಭವಾಗಲಿ ಶ್ರೀ.. ಹಾಗೆ ಒಂದು ಲೇಖನ ಬರೆದು ಹಾಕಿ ಬಿಡಪ್ಪ !!!

ಆಗಲಿ ಅಣ್ಣಾವ್ರೇ ಆದರೆ ಇದಕ್ಕೆ ನಿಮ್ಮ ಮಾತುಗಳೇ ಬೇಕು.. 

ಹಾ ಶ್ರೀ ನಾ ನಿನ್ನ ಜೊತೆ ಇರುವೆ ಸದಾ.. ಶುರು ಹಚ್ಚಿಕೋ.. 

ಅಣ್ಣಾವ್ರೇ ನಿಮ್ಮ ಚಿತ್ರಗಳಲ್ಲಿ ನಿಮಗೆ ಇಷ್ಟವಾದ ಆರಂಭಿಕ ದೃಶ್ಯಗಳ ಬಗ್ಗೆ  ಹೇಳಿ ಅದನ್ನೇ ಗೀಚಿ ಬಿಡುತ್ತೇನೆ.. 

ಶ್ರೀ ನನಗೆ ಗಂಟು ಬಿದ್ದೆಯ.. ಸರಿ ಬರ್ಕೊ.. !!!!

******

ಶಂಕರ್ ಗುರು ಚಿತ್ರದಲ್ಲಿ ರಾಜಶೇಖರ್ ಪಾತ್ರ.. ಮೊದಲ ಹತ್ತು ಹದಿನೈದು ನಿಮಿಷಗಳಾದ ಮೇಲೆ ಹೆಸರು ತೋರಿಸಿದ ಮೇಲೆ ಚಾವಟಿಯಿಂದ ಹೊಡೆಸಿಕೊಳ್ಳುವ ದೃಶ್ಯ.. 

ಇದರಲ್ಲಿ ಗಮನಿಸುವಂತದ್ದು ಹುರಿಗಟ್ಟಿದ ದೇಹದ ಮೇಲೆ  ಆಪ್ತ ಸೇವಕ ಚಾವಟಿಯಿಂದ ಬಾಸುಂಡೆ ಬರುವ ಹಾಗೆ ಬಾರಿಸುತ್ತಾ ಇರುತ್ತಾನೆ.. ನೋವಿದ್ದರೂ.. ನೋವಾಗುತ್ತಿದ್ದರು ಹಲ್ಲು ಕಚ್ಚಿ ಸಹಿಸಿಕೊಳ್ಳುವ ದೃಶ್ಯ.. ನನಗೆ  ಬಲು ಇಷ್ಟ.. ಕಾರಣ.. ಮನಸ್ಸು ಗಟ್ಟಿಯಾಗಿದ್ದಾಗ ದೇಹವನ್ನು ತುಸು ದಂಡಿಸಿದಾಗ ದೇಹ ಮತ್ತು ಮನಸ್ಸು ಎರಡೂ ನಮ್ಮ ತಹಬದಿಗೆ ಬರುತ್ತದೆ.. 

ಬಂಗಾರದ ಮನುಷ್ಯ ನಾಯಕ  ರಾಜೀವ ರೈಲಿನಲ್ಲಿ ಬರುತ್ತಾನೆ ಅವನನ್ನು ಕಾಲಿನಿಂದ ತೋರಿಸುತ್ತಾರೆ ಕಾರಣ ಮನುಷ್ಯ ತನ್ನ ಕಾಲ ಮೇಲೆ ತಾನು ನಿಂತಾಗ ಪ್ರಪಂಚದ ಯಾವುದೇ ಶಕ್ತಿ ಅವನ ಮುಂದೆ ಸೋಲುತ್ತದೆ ಎನ್ನುವ ಸಂದೇಶವದು. .. ಹಾಗೆ ಹಾಡುತ್ತಾ ನಗು ನಗುತಾ ನಲಿ ಎಂದು  ಜೀವನದ ಎಲ್ಲಾ ಮಗ್ಗುಲುಗಳನ್ನು  ಬರುತ್ತಾನೆ.. ಬಾಲ್ಯ, ಶಾಲಾ ದಿನಗಳು, ಯೌವನ, ಮದುವೆ.. ಮುಪ್ಪು, ಮೊಮ್ಮಕ್ಕಳ ಜೊತೆ ಆಟ .. ಕಡೆಗೆ ಇಹಲೋಕ ತ್ಯಜಿಸುವ ದೃಶ್ಯ.. ಆ ಹತ್ತು ನಿಮಿಷಗಳಲ್ಲಿ ಇಡೀ ಜೀವನದ ಚಿತ್ರಣ ಮಾಡಿದ್ದಾರೆ.. ನನಗೆ ಬಲು ಇಷ್ಟ ಅದು.. 


ಭಕ್ತ ಕುಂಬಾರ ವಿಠಲ ಎನ್ನುತ್ತಾ ಮಡಿಕೆ ಮಾಡುವ ಚಕ್ರವನ್ನು ತಿರುಗಿಸುತ್ತಾ... ಚಕ್ರದ ಮೇಲೆ ಮೂಡಿದ ಮಣ್ಣಿನ ಪಾತ್ರೆಯನ್ನು ನಿಧಾನಕ್ಕೆ ತೆಗೆಯುತ್ತಾ.. ಆಗಸದಿ ನೋಡುತ್ತಾ ವಿಠಲನನ್ನು ಧ್ಯಾನಿಸುವ ದೃಶ್ಯ.. 

ಜೀವನವೊಂದು ಚಕ್ರದಂತೆ.. ಅದನ್ನು ತಿರುಗಿಸುವವ ಆ ಮಹಾಮಹಿಮ.. ನಾವು ಮಣ್ಣಿನ ಮುದ್ದೆಯಂತೆ ಆ ಚಕ್ರದ ಮೇಲೆ ಕೂತಿರುತ್ತೇವೆ.. ನಮ್ಮನ್ನು ಒಂದು ನಿರ್ಧಿಷ್ಟ ಆಕಾರಕ್ಕೆ ಅವನು ತರುತ್ತಾನೆ.. ಭಕ್ತಿ ಜ್ಞಾನ ಕೊಡುತ್ತಾನೆ.. ಪಕ್ವವಾದ ಮೇಲೆ ಚಕ್ರದಿಂದ ತೆಗೆದು ಸುಟ್ಟು ಹದ ಮಾಡುತ್ತಾನೆ..  ಇದು ಜೀವನ.. 



ಸಮಯದ ಗೊಂಬೆ ಸೈಕಲ್ ತುಳಿಯುತ್ತಾ ಸೂತ್ರಧಾರನ ಬಗ್ಗೆ ಹೇಳುತ್ತಾ ಜೀವನದ ಪಯಣ ಹೇಗಿರುತ್ತೆ ಅಂತ ಹಾಡುತ್ತಾ ಬರುತ್ತಾನೆ ನಾಯಕ.. ನಮ್ಮ ಜೀವನದ ಸೈಕಲನ್ನು ನಾವೇ ತುಳಿಯುತ್ತಾ ಮುಂದೆ ಸಾಗಬೇಕು..  ಶ್ರಮ ಪಟ್ಟಾಗಲೇ  ಸೈಕಲ್ ಮುಂದೆ ಹೋಗುವಂತೆ ಶ್ರದ್ದೆಯುಳ್ಳ ಪರಿಶ್ರಮ ಬದುಕನ್ನು ಯಶಸ್ವೀಗೊಳಿಸುತ್ತದೆ.. 

ಈ ಹಾಡಿನಲ್ಲಿ ಪಯಣ ಮಾಡುವಾಗ ದಾರಿ ಹೋಕನಾಗಿ ಒಬ್ಬ ವೃದ್ಧನ ಜೊತೆ ಮಾತಾಡುತ್ತಾ ಅವನ ಅನುಭವ ಕೇಳುತ್ತಾ ಮುಂದೆ ಬಂದಾಗ ಪ್ರೀತಿಯಿಂದ ನೆಡೆದು ಹೋಗುತ್ತಿರುವ ದಂಪತಿ ಜೋಡಿ .. ಹಾಗೆ ಮುಂದುವರೆಯುತ್ತಾ ಸೈಕಲ್ ಇಂದ ಲಾರಿಗೆ ಭಡ್ತಿ ಅಂದರೆ ಪರಿಶ್ರಮವಿದ್ದಾಗ ಯಶಸ್ಸು ಗಟ್ಟಿ ಅಂತ ತೋರಿಸುವ ಹಾಡಿನ ದೃಶ್ಯವಿದು.. 

ಸಾಕಲ್ವ ಶ್ರೀ.. 

ಅಣ್ಣಾವ್ರೇ ಒಂದು ಕೈ ಬೆರಳುಗಳು.. ಇಂದ್ರಿಯಗಳು, ಸೃಷ್ಟಿಯಲ್ಲಿ ತತ್ವಗಳು.. ಇವೆಲ್ಲ ಎಷ್ಟು ... ಐದು ಅಲ್ಲವೇ.. ಇನ್ನಷ್ಟು ಕೇಳುವ ಆಸೆ ಆದರೆ.. ನನಗೆ ಗೊತ್ತು ಕಷ್ಟ  ಸಾಧ್ಯ ಅಂತ/. ಹಾಗಾಗಿ ಇನ್ನೊಂದು ಚಿತ್ರದ ಎಂಟ್ರಿ ಬಗ್ಗೆ ಹೇಳಿ.. 

ಒಳ್ಳೆ ಪಜೀತಿ ಕಣಪ್ಪ ನಿಂದು ಆಗಲಿ.. 

ಕಾಮನಬಿಲ್ಲು ಚಿತ್ರದಲ್ಲಿ ಆರಂಭಿಕ ದೃಶ್ಯಗಳಲ್ಲಿ ಯೋಗಾಸನಗಳಾದ ಮೇಲೆ ಮೇಷ್ಟ್ರ ಮನೆಗೆ ಬರುತ್ತಾನೆ.. ಆಗ ಮೇಷ್ಟು ಸೂರ್ಯೋದಯ ಆಯಿತು ಕಣೆ ಅಂತ ಕೂಗುತ್ತಾರೆ.. ಈ ಜಗತ್ತಿನಲ್ಲಿ ಮಾನವ ಸಂಘ ಜೀವಿ ... ಒಬ್ಬನೇ ಗೂಬೆಯ ತರಹ ಇದ್ದು ಏನೂ ಸಾಧಿಸೋಕೆ ಆಗಲ್ಲ.. ಎಲ್ಲರೊಡನೆ ಒಂದಾಗು ಮಂಕುತಿಮ್ಮ ಅಂತ  ಕಗ್ಗದ ಅಜ್ಜ ಹೇಳಿದಂಗೆ ಆ ಹಳ್ಳಿಯಲ್ಲಿ ಎಲ್ಲರ  ಮನೆಗೆ ಬೆಳಿಗ್ಗೆ ಭೇಟಿ ನೀಡಿ ಅವರೊಡನೆ ಮಾತಾಡಿ ಕಾಫಿ ಕುಡಿದು ಬರುವ ದೃಶ್ಯ.. ಜಗತ್ತಿನ ಜೊತೆ ನೀ ನಕ್ಕಾಗ  ಜಗತ್ತು ನಿನ್ನ ಜೊತೆ ನಗುತ್ತದೆ.. ನೀ ಅಳುತ್ತಾ ಕೂತರೆ ನೀ ಒಬ್ಬನೇ ಕೂರಬೇಕು ಎನ್ನುವ ತತ್ವ ತರುವ ದೃಶ್ಯವದು.. 

ಅಣ್ಣಾವ್ರೇ ಸೂಪರ್ ಸೂಪರ್ .. ನೋಡಿ ಎಷ್ಟು ಬರೆದರೆ ಏನು .... ನೀವು ಹೇಳಿದ ಮಾತುಗಳು ಬೊಂಬಾಟ್.. ಈ ಮಾತುಗಳು ಜೀವನಕ್ಕೆ ಬಲು ದೊಡ್ಡ ಅಡಿಪಾಯ ಹಾಕಿಕೊಡುತ್ತದೆ. ಧನ್ಯವಾದಗಳು ಅಣ್ಣಾವ್ರೇ.. 

ನೀ ಕಿಲಾಡಿ ಕಣಪ್ಪ.. ನೀ ಬರೀ ಅಂದ್ರೆ ನನಗೆ ಕೆಲಸ ಕೊಟ್ಟು ಕೆಲಸ ಮುಗಿಸಿದೆ.. 

ಅಣ್ಣಾವ್ರೇ ಹೇಗೋ ಒಂದು ಲೇಖನ ನಿಮ್ಮಿಂದ ಬರೆಯುವ ಹಾಗೆ ಆಯಿತು.. ನಿಮ್ಮೊಲವೇ ನನಗೆ ಶ್ರೀ ರಕ್ಷೆ.. 

ಸರಿ ಶ್ರೀ.. ಪಾರ್ವತೀ ಅಪ್ಪು ಕಾಯ್ತಾ ಇರ್ತಾರೆ ಅವರಿಗೆ ಈ ಲೇಖನ  ತೋರಿಸುತ್ತೇನೆ... ಬರ್ಲಾ ಶ್ರೀ 

ಶ್ರೀ ಅಣ್ಣಾವ್ರೇ .. ನಿಮ್ಮ ಆಶೀರ್ವಾದ ಸದಾ ಇರಲಿ ... !

***********

ಅಣ್ಣಾವ್ರ ಇನ್ನೊಂದು ಪುಣ್ಯ ದಿನ ಬಂದಿದೆ.. ಅಣ್ಣಾವ್ರ ನೆನಪು ಸದಾ ಹಸಿರು .. ಕರುನಾಡ ಜನತೆ ಇರೋ ತನಕ ಅಣ್ಣಾವ್ರು ಸದಾ ಚಿರಾಯು.