Saturday, April 15, 2023

ಅಣ್ಣಾವ್ರು .. ಅಣ್ಣಾವ್ರ ಎಂಟ್ರಿ ಬಗ್ಗೆ ಅವರದೇ ಮಾತುಗಳು ... ಪುಣ್ಯ ದಿನ - 2023

ಬದುಕು ಒಂದು ಭ್ರಮೆಯೋ... ಬದುಕು ಒಂದು ಕನಸೋ... ಗೊತ್ತಾಗುತ್ತಿಲ್ಲ.. ಕಂಡಿದ್ದು ಕಾಣದಾಗುತ್ತದೆ.. ಸಿಕ್ಕಿದ್ದು ಕೈಜಾರಿ ಹೋಗುತ್ತದೆ.. ನೀರಿನ ಹನಿಗಳನ್ನು ಬೊಗಸೆಯಲ್ಲಿ ಹಿಡಿದರೆ ಬೆರಳುಗಳ ಸಂಧಿಯಿಂದ ಹೊರ ಹೋಗುತ್ತದೆ.. ಮರಳಿನ ಕಣಗಳನ್ನು ಕೈಯಲ್ಲಿ ಬಿಗಿಯಾಗಿ ಹಿಡಿದರೆ ಕೈಯಲ್ಲಿ ಏನೂ ಉಳಿಯದೆ ಎಲ್ಲವೂ ಜಾರಿ ಹೋಗುತ್ತದೆ.. ಹೋಗುತ್ತಿದೆ.. 

ಸುಮ್ಮನೆ ಅಣ್ಣಾವ್ರ ಫೋಟೋ ನೋಡುತ್ತಿದ್ದೆ... ಅದೇ ಮಾಸದ ನಗು.. ಅದೇ ನಗುಮೊಗ.. ಮತ್ತೊಮ್ಮೆ  ನನ್ನ ಹತ್ತಿರ ಮಾತಾಡಲು ಬಂದೆ ಬಿಟ್ಟರು ಅಣ್ಣಾವ್ರು.. 

ಶ್ರೀ ಹನ್ನೆರಡನೇ ತಾರೀಕು ಆಗಿ ಮೂರು ದಿನ ಆಯಿತು.. ಸುಮಾರು ಹತ್ತು ವರ್ಷಗಳಿಂದ ವರ್ಷದಲ್ಲಿ ನನ್ನ ಎರಡು  ದಿನದ ಬಗ್ಗೆ ಬರೆಯುತ್ತಿದ್ದೆ. ನಾನು ಕಾದು ಕಾದು ಸಾಕಾಯಿತು .. ದಿನ ಲ್ಯಾಪ್ಟಾಪ್ ತೆಗೆಯೋದು ನಿನ್ನ ಬ್ಲಾಗ್ ಬಂದಿದೆಯಾ ನೋಡೋದು..  ಅಪ್ಪು ಬಂದ ಮೇಲೆ ಅವನು ತಂದಿರೋ ಆಪಲ್ ವಾಚು ಕೈಯಲ್ಲಿಯೇ ಪ್ರಪಂಚ ತೋರಿಸುತ್ತೆ.. ಆದರೂ ಲ್ಯಾಪ್ಟಾಪ್ ನೋಡೋದು ಬಿಡಲಿಲ್ಲ.. ನನ್ನ ಚಿತ್ರಗಳ ಬಗ್ಗೆ ನಿನ್ನ ಲೇಖನ ನಿಂತ ನೀರಾಗಿದೆ.. ಮುಂದಕ್ಕೆ ಹೋಗಿಲ್ಲ.. ಶುರು ಮಾಡಪ್ಪ.. ನಿನಗೆ ಟಾರ್ಗೆಟ್ ಈ ವರ್ಷದ ಕೊನೆಗೆ ನನ್ನ ನೂರನೇ ಚಿತ್ರ ಭಾಗ್ಯದ ಬಾಗಿಲು ಬಗ್ಗೆ ನೀ ಬರೆಯಬೇಕು ಅಷ್ಟೇ.. ಇಲ್ಲ ಅಂದರೆ ಮತ್ತೆ ನಿನ್ನ ಮಾತಾಡಿಸಲ್ಲ.. 

ಅಯ್ಯೋ ಅಣ್ಣಾವ್ರೇ ಅದ್ಯಾಕೆ ಅಷ್ಟು ದೊಡ್ಡ ಮಾತು... ಸ್ವಲ್ಪ ಒತ್ತಡ ಜಾಸ್ತಿಯಾಗಿತ್ತು.. ತಲೆ ಓಡುತ್ತಿರಲಿಲ್ಲ ಹಾಗಾಗಿ ನಾನೇ ಸ್ವಲ್ಪ ವಿರಾಮ ತೆಗೆದುಕೊಂಡಿದ್ದೆ.. ಒಂದು ವರ್ಷದಿಂದ ನಿಂತಿದ್ದ ಸರಣಿ ಮತ್ತೆ ಶುರುವಾಗುತ್ತೆ .. ಹಾ  ಕೊಟ್ಟ ಗುರಿಯನ್ನು ಖಂಡಿತ ತಲುಪುತ್ತೇನೆ.. ೨೦೨೪ ರಲ್ಲಿ  ನಿಮ್ಮ ಜನುಮದಿನಕ್ಕೆ ನಿಮ್ಮ ಚಿತ್ರಗಳ ಸರಣಿಯ ಮೊದಲ ನೂರು ಚಿತ್ರಗಳ ಬಗ್ಗೆ ಒಂದು ಪುಸ್ತಕ ಮಾಡಿಯೇ ಬಿಡುತ್ತೇನೆ.. ನಿಮ್ಮ ಆಶೀರ್ವಾದವಿರಲಿ.. 

ಅದು ಮಾತು ಅಂದರೆ... ಶುಭವಾಗಲಿ ಶ್ರೀ.. ಹಾಗೆ ಒಂದು ಲೇಖನ ಬರೆದು ಹಾಕಿ ಬಿಡಪ್ಪ !!!

ಆಗಲಿ ಅಣ್ಣಾವ್ರೇ ಆದರೆ ಇದಕ್ಕೆ ನಿಮ್ಮ ಮಾತುಗಳೇ ಬೇಕು.. 

ಹಾ ಶ್ರೀ ನಾ ನಿನ್ನ ಜೊತೆ ಇರುವೆ ಸದಾ.. ಶುರು ಹಚ್ಚಿಕೋ.. 

ಅಣ್ಣಾವ್ರೇ ನಿಮ್ಮ ಚಿತ್ರಗಳಲ್ಲಿ ನಿಮಗೆ ಇಷ್ಟವಾದ ಆರಂಭಿಕ ದೃಶ್ಯಗಳ ಬಗ್ಗೆ  ಹೇಳಿ ಅದನ್ನೇ ಗೀಚಿ ಬಿಡುತ್ತೇನೆ.. 

ಶ್ರೀ ನನಗೆ ಗಂಟು ಬಿದ್ದೆಯ.. ಸರಿ ಬರ್ಕೊ.. !!!!

******

ಶಂಕರ್ ಗುರು ಚಿತ್ರದಲ್ಲಿ ರಾಜಶೇಖರ್ ಪಾತ್ರ.. ಮೊದಲ ಹತ್ತು ಹದಿನೈದು ನಿಮಿಷಗಳಾದ ಮೇಲೆ ಹೆಸರು ತೋರಿಸಿದ ಮೇಲೆ ಚಾವಟಿಯಿಂದ ಹೊಡೆಸಿಕೊಳ್ಳುವ ದೃಶ್ಯ.. 

ಇದರಲ್ಲಿ ಗಮನಿಸುವಂತದ್ದು ಹುರಿಗಟ್ಟಿದ ದೇಹದ ಮೇಲೆ  ಆಪ್ತ ಸೇವಕ ಚಾವಟಿಯಿಂದ ಬಾಸುಂಡೆ ಬರುವ ಹಾಗೆ ಬಾರಿಸುತ್ತಾ ಇರುತ್ತಾನೆ.. ನೋವಿದ್ದರೂ.. ನೋವಾಗುತ್ತಿದ್ದರು ಹಲ್ಲು ಕಚ್ಚಿ ಸಹಿಸಿಕೊಳ್ಳುವ ದೃಶ್ಯ.. ನನಗೆ  ಬಲು ಇಷ್ಟ.. ಕಾರಣ.. ಮನಸ್ಸು ಗಟ್ಟಿಯಾಗಿದ್ದಾಗ ದೇಹವನ್ನು ತುಸು ದಂಡಿಸಿದಾಗ ದೇಹ ಮತ್ತು ಮನಸ್ಸು ಎರಡೂ ನಮ್ಮ ತಹಬದಿಗೆ ಬರುತ್ತದೆ.. 

ಬಂಗಾರದ ಮನುಷ್ಯ ನಾಯಕ  ರಾಜೀವ ರೈಲಿನಲ್ಲಿ ಬರುತ್ತಾನೆ ಅವನನ್ನು ಕಾಲಿನಿಂದ ತೋರಿಸುತ್ತಾರೆ ಕಾರಣ ಮನುಷ್ಯ ತನ್ನ ಕಾಲ ಮೇಲೆ ತಾನು ನಿಂತಾಗ ಪ್ರಪಂಚದ ಯಾವುದೇ ಶಕ್ತಿ ಅವನ ಮುಂದೆ ಸೋಲುತ್ತದೆ ಎನ್ನುವ ಸಂದೇಶವದು. .. ಹಾಗೆ ಹಾಡುತ್ತಾ ನಗು ನಗುತಾ ನಲಿ ಎಂದು  ಜೀವನದ ಎಲ್ಲಾ ಮಗ್ಗುಲುಗಳನ್ನು  ಬರುತ್ತಾನೆ.. ಬಾಲ್ಯ, ಶಾಲಾ ದಿನಗಳು, ಯೌವನ, ಮದುವೆ.. ಮುಪ್ಪು, ಮೊಮ್ಮಕ್ಕಳ ಜೊತೆ ಆಟ .. ಕಡೆಗೆ ಇಹಲೋಕ ತ್ಯಜಿಸುವ ದೃಶ್ಯ.. ಆ ಹತ್ತು ನಿಮಿಷಗಳಲ್ಲಿ ಇಡೀ ಜೀವನದ ಚಿತ್ರಣ ಮಾಡಿದ್ದಾರೆ.. ನನಗೆ ಬಲು ಇಷ್ಟ ಅದು.. 


ಭಕ್ತ ಕುಂಬಾರ ವಿಠಲ ಎನ್ನುತ್ತಾ ಮಡಿಕೆ ಮಾಡುವ ಚಕ್ರವನ್ನು ತಿರುಗಿಸುತ್ತಾ... ಚಕ್ರದ ಮೇಲೆ ಮೂಡಿದ ಮಣ್ಣಿನ ಪಾತ್ರೆಯನ್ನು ನಿಧಾನಕ್ಕೆ ತೆಗೆಯುತ್ತಾ.. ಆಗಸದಿ ನೋಡುತ್ತಾ ವಿಠಲನನ್ನು ಧ್ಯಾನಿಸುವ ದೃಶ್ಯ.. 

ಜೀವನವೊಂದು ಚಕ್ರದಂತೆ.. ಅದನ್ನು ತಿರುಗಿಸುವವ ಆ ಮಹಾಮಹಿಮ.. ನಾವು ಮಣ್ಣಿನ ಮುದ್ದೆಯಂತೆ ಆ ಚಕ್ರದ ಮೇಲೆ ಕೂತಿರುತ್ತೇವೆ.. ನಮ್ಮನ್ನು ಒಂದು ನಿರ್ಧಿಷ್ಟ ಆಕಾರಕ್ಕೆ ಅವನು ತರುತ್ತಾನೆ.. ಭಕ್ತಿ ಜ್ಞಾನ ಕೊಡುತ್ತಾನೆ.. ಪಕ್ವವಾದ ಮೇಲೆ ಚಕ್ರದಿಂದ ತೆಗೆದು ಸುಟ್ಟು ಹದ ಮಾಡುತ್ತಾನೆ..  ಇದು ಜೀವನ.. 



ಸಮಯದ ಗೊಂಬೆ ಸೈಕಲ್ ತುಳಿಯುತ್ತಾ ಸೂತ್ರಧಾರನ ಬಗ್ಗೆ ಹೇಳುತ್ತಾ ಜೀವನದ ಪಯಣ ಹೇಗಿರುತ್ತೆ ಅಂತ ಹಾಡುತ್ತಾ ಬರುತ್ತಾನೆ ನಾಯಕ.. ನಮ್ಮ ಜೀವನದ ಸೈಕಲನ್ನು ನಾವೇ ತುಳಿಯುತ್ತಾ ಮುಂದೆ ಸಾಗಬೇಕು..  ಶ್ರಮ ಪಟ್ಟಾಗಲೇ  ಸೈಕಲ್ ಮುಂದೆ ಹೋಗುವಂತೆ ಶ್ರದ್ದೆಯುಳ್ಳ ಪರಿಶ್ರಮ ಬದುಕನ್ನು ಯಶಸ್ವೀಗೊಳಿಸುತ್ತದೆ.. 

ಈ ಹಾಡಿನಲ್ಲಿ ಪಯಣ ಮಾಡುವಾಗ ದಾರಿ ಹೋಕನಾಗಿ ಒಬ್ಬ ವೃದ್ಧನ ಜೊತೆ ಮಾತಾಡುತ್ತಾ ಅವನ ಅನುಭವ ಕೇಳುತ್ತಾ ಮುಂದೆ ಬಂದಾಗ ಪ್ರೀತಿಯಿಂದ ನೆಡೆದು ಹೋಗುತ್ತಿರುವ ದಂಪತಿ ಜೋಡಿ .. ಹಾಗೆ ಮುಂದುವರೆಯುತ್ತಾ ಸೈಕಲ್ ಇಂದ ಲಾರಿಗೆ ಭಡ್ತಿ ಅಂದರೆ ಪರಿಶ್ರಮವಿದ್ದಾಗ ಯಶಸ್ಸು ಗಟ್ಟಿ ಅಂತ ತೋರಿಸುವ ಹಾಡಿನ ದೃಶ್ಯವಿದು.. 

ಸಾಕಲ್ವ ಶ್ರೀ.. 

ಅಣ್ಣಾವ್ರೇ ಒಂದು ಕೈ ಬೆರಳುಗಳು.. ಇಂದ್ರಿಯಗಳು, ಸೃಷ್ಟಿಯಲ್ಲಿ ತತ್ವಗಳು.. ಇವೆಲ್ಲ ಎಷ್ಟು ... ಐದು ಅಲ್ಲವೇ.. ಇನ್ನಷ್ಟು ಕೇಳುವ ಆಸೆ ಆದರೆ.. ನನಗೆ ಗೊತ್ತು ಕಷ್ಟ  ಸಾಧ್ಯ ಅಂತ/. ಹಾಗಾಗಿ ಇನ್ನೊಂದು ಚಿತ್ರದ ಎಂಟ್ರಿ ಬಗ್ಗೆ ಹೇಳಿ.. 

ಒಳ್ಳೆ ಪಜೀತಿ ಕಣಪ್ಪ ನಿಂದು ಆಗಲಿ.. 

ಕಾಮನಬಿಲ್ಲು ಚಿತ್ರದಲ್ಲಿ ಆರಂಭಿಕ ದೃಶ್ಯಗಳಲ್ಲಿ ಯೋಗಾಸನಗಳಾದ ಮೇಲೆ ಮೇಷ್ಟ್ರ ಮನೆಗೆ ಬರುತ್ತಾನೆ.. ಆಗ ಮೇಷ್ಟು ಸೂರ್ಯೋದಯ ಆಯಿತು ಕಣೆ ಅಂತ ಕೂಗುತ್ತಾರೆ.. ಈ ಜಗತ್ತಿನಲ್ಲಿ ಮಾನವ ಸಂಘ ಜೀವಿ ... ಒಬ್ಬನೇ ಗೂಬೆಯ ತರಹ ಇದ್ದು ಏನೂ ಸಾಧಿಸೋಕೆ ಆಗಲ್ಲ.. ಎಲ್ಲರೊಡನೆ ಒಂದಾಗು ಮಂಕುತಿಮ್ಮ ಅಂತ  ಕಗ್ಗದ ಅಜ್ಜ ಹೇಳಿದಂಗೆ ಆ ಹಳ್ಳಿಯಲ್ಲಿ ಎಲ್ಲರ  ಮನೆಗೆ ಬೆಳಿಗ್ಗೆ ಭೇಟಿ ನೀಡಿ ಅವರೊಡನೆ ಮಾತಾಡಿ ಕಾಫಿ ಕುಡಿದು ಬರುವ ದೃಶ್ಯ.. ಜಗತ್ತಿನ ಜೊತೆ ನೀ ನಕ್ಕಾಗ  ಜಗತ್ತು ನಿನ್ನ ಜೊತೆ ನಗುತ್ತದೆ.. ನೀ ಅಳುತ್ತಾ ಕೂತರೆ ನೀ ಒಬ್ಬನೇ ಕೂರಬೇಕು ಎನ್ನುವ ತತ್ವ ತರುವ ದೃಶ್ಯವದು.. 

ಅಣ್ಣಾವ್ರೇ ಸೂಪರ್ ಸೂಪರ್ .. ನೋಡಿ ಎಷ್ಟು ಬರೆದರೆ ಏನು .... ನೀವು ಹೇಳಿದ ಮಾತುಗಳು ಬೊಂಬಾಟ್.. ಈ ಮಾತುಗಳು ಜೀವನಕ್ಕೆ ಬಲು ದೊಡ್ಡ ಅಡಿಪಾಯ ಹಾಕಿಕೊಡುತ್ತದೆ. ಧನ್ಯವಾದಗಳು ಅಣ್ಣಾವ್ರೇ.. 

ನೀ ಕಿಲಾಡಿ ಕಣಪ್ಪ.. ನೀ ಬರೀ ಅಂದ್ರೆ ನನಗೆ ಕೆಲಸ ಕೊಟ್ಟು ಕೆಲಸ ಮುಗಿಸಿದೆ.. 

ಅಣ್ಣಾವ್ರೇ ಹೇಗೋ ಒಂದು ಲೇಖನ ನಿಮ್ಮಿಂದ ಬರೆಯುವ ಹಾಗೆ ಆಯಿತು.. ನಿಮ್ಮೊಲವೇ ನನಗೆ ಶ್ರೀ ರಕ್ಷೆ.. 

ಸರಿ ಶ್ರೀ.. ಪಾರ್ವತೀ ಅಪ್ಪು ಕಾಯ್ತಾ ಇರ್ತಾರೆ ಅವರಿಗೆ ಈ ಲೇಖನ  ತೋರಿಸುತ್ತೇನೆ... ಬರ್ಲಾ ಶ್ರೀ 

ಶ್ರೀ ಅಣ್ಣಾವ್ರೇ .. ನಿಮ್ಮ ಆಶೀರ್ವಾದ ಸದಾ ಇರಲಿ ... !

***********

ಅಣ್ಣಾವ್ರ ಇನ್ನೊಂದು ಪುಣ್ಯ ದಿನ ಬಂದಿದೆ.. ಅಣ್ಣಾವ್ರ ನೆನಪು ಸದಾ ಹಸಿರು .. ಕರುನಾಡ ಜನತೆ ಇರೋ ತನಕ ಅಣ್ಣಾವ್ರು ಸದಾ ಚಿರಾಯು. 

6 comments:

  1. waaah ! sooper write up, sri !!

    ReplyDelete
  2. ಅಣ್ಣಾವ್ರ ಎಂಟ್ರಿ ದೃಶ್ಯಗಳ ಬಗೆಗಿನ ಈ‌ ಲೇಖನ ಮೊದಲ ಭಾಗ ಎಂದುಕೊಳ್ಳಿರಿ.
    ಉಳಿದ ಲೇಖನಗಳು ಬೇಗ ಬರಲಿ ಸಾರ್.
    ಕೆಲವೊಮ್ಮೆ ಕಣ್ಣಿನಲ್ಲೇ ನಟಿಸಬಲ್ಲ ಅವರ ತಾಕತ್ತಿಗೆ ನಮ್ಮ ಶರಣು.

    ReplyDelete
    Replies
    1. ಧನ್ಯವಾದಗಳು ಬದರಿ‌ ಸರ್..ಚಿತ್ರ ಸರಣಿ ಮುಂದುವರೆಯುತ್ತದೆ...

      Delete
  3. ಬದುಕು ಒಂದು ಭ್ರಮೆಯೋ... ಬದುಕು ಒಂದು ಕನಸೋ... ಗೊತ್ತಾಗುತ್ತಿಲ್ಲ.. ಕಂಡಿದ್ದು ಕಾಣದಾಗುತ್ತದೆ.. ಸಿಕ್ಕಿದ್ದು ಕೈಜಾರಿ ಹೋಗುತ್ತದೆ.. ನೀರಿನ ಹನಿಗಳನ್ನು ಬೊಗಸೆಯಲ್ಲಿ ಹಿಡಿದರೆ ಬೆರಳುಗಳ ಸಂಧಿಯಿಂದ ಹೊರ ಹೋಗುತ್ತದೆ.. ಮರಳಿನ ಕಣಗಳನ್ನು ಕೈಯಲ್ಲಿ ಬಿಗಿಯಾಗಿ ಹಿಡಿದರೆ ಕೈಯಲ್ಲಿ ಏನೂ ಉಳಿಯದೆ ಎಲ್ಲವೂ ಜಾರಿ ಹೋಗುತ್ತದೆ.. ಹೋಗುತ್ತಿದೆ..
    Very true...Great thought..
    Very nice honey

    ReplyDelete
    Replies
    1. ಹ ಹ ಹ ನಿಜ...ಸಕಲವೂ ಅಡಕವಾಗಿರುವ ಅಣ್ಣಾವ್ರ ಚಿತ್ರಗಳೇ ಜೀವನಕ್ಕೆ ಮಾರ್ಗದರ್ಶನ ಕೊಡುತ್ತದೆ...ಸೀಮು...ಧನ್ಯವಾದಗಳು

      Delete