Saturday, December 22, 2018

ಕನ್ನಡ ಗುಡ್ ಫಿಲ್ಮ್ - ಕೆ.ಜಿ.ಎಫ್ (2018)

ಯಾವುದೇ ಆಟವಿರಲಿ, ಸವಾಲಿರಲಿ, ಕಾಳಗವಿರಲಿ, ಯುದ್ಧವಿರಲಿ.. ಸರಿಯಾದ ವಿವರಗಳನ್ನು ಇಟ್ಟುಕೊಂಡು, ಬಲಾಬಲಗಳನ್ನು ಅಳೆದು, ತಮ್ಮ ಬಳಿ ಇರುವ ಸರಕು ಸಾಮಗ್ರಿಗಳನ್ನು ಜೋಪಾನವಾಗಿ ನೋಡಿಕೊಂಡು ಮುನ್ನುಗ್ಗಿದ್ದಾಗ ಯಶಸ್ಸು ಅಂಗೈಯಲ್ಲಿ ಅನ್ನುತ್ತದೆ ಜನಜನಿತ ಮಾತು..

ಸುಮಾರು ವಾರಗಳಿಂದ ಮಾಧ್ಯಮಗಳಲ್ಲಿ ಕೇಳಿಬರುತ್ತಿದ್ದ ಒಂದೇ ಪದ ಕೆಜಿಎಫ್.. ನನ್ನ ಮಗಳು ಅಪ್ಪ ಆ ಮೂವಿಗೆ ಹೋಗೋಣ ಅಂದಿದ್ದಳು.. ಜೀವನದಲ್ಲಿ ಪುಟ್ಟ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳೋಕೆ ಮ್ಯಾನೇಜ್ಮೆಂಟ್ ಕೋರ್ಸ್ ಬೇಕಾಗಿಲ್ಲ ಅಲ್ಲವೇ..

ಮನೆ ಹತ್ತಿರವೇ ಥೀಯೇಟರ್.. ಸ್ವರ್ಗಕ್ಕೆ ಮೂರೇ ಗೇಣು ಅನ್ನುವ ಹಾಗಾಯ್ತು.. .ಚಿತ್ರ ಬಿಡುಗಡೆಯಾದ ಮೊದಲ ದಿನ.. ಸಂಜೆ ಆಟಕ್ಕೆ ಟಿಕೆಟ್ ಕೊಳ್ಳೋಣ ಅಂತ ಹೋದ್ರೆ.. ಟಿಕೆಟ್ ಇಲ್ಲ.. ಸಂಜೆ ಆಟಕ್ಕೆ ಸಿಗುತ್ತೆ.. ಅಂದ್ರು.. ಟಾಕೀಸಿನವರು.. ಸರಿ ನಿಗದಿತ ಸಮಯಕ್ಕೆ ಹೋದರೆ... ಟಿಕೆಟ್ ಎಲ್ಲಾ ಮುಗಿದಿದೆ ಆನ್ಲೈನ್ ನೋಡಿ ಅಂದ್ರು.. ಆನ್ಲೈನ್ ಟಿಕೆಟ್ ಇಲ್ಲ ಅಂತ ನೋಟಿಫಿಕೇಶನ್ ತೋರಿಸ್ತಾ ಇತ್ತು.. ಸರಿ ರಾತ್ರಿ ಆಟಕ್ಕೆ ನೋಡೋಣ ಅಂತ ಸರತಿಯಲ್ಲಿ ನಿಂತಿದ್ರೆ ಅಲ್ಲೂ ನಿರಾಶೆ.. ಟಿಕೆಟುಗಳು ಬೇಗನೆ ಬಿಸಿ ದೋಸೆಯಂತೆ ಖಾಲಿ..

ಅರೆ ಕನ್ನಡ ಸಿನಿಮಾಗಳಿಗೆ ಈ ಪಾಟಿ ಕ್ರೇಜ್ ಕಳೆದ ಸುಮಾರು ವರ್ಷಗಳಲ್ಲಿ ಇರಲಿಲ್ಲ ಅನ್ನುವ ಮಾತು ಕಷ್ಟವಾದರೂ ಅರಗಿಸಿಕೊಳ್ಳಲು ಬೇಕಿತ್ತು.. ಕನ್ನಡ ಸಿನೆಮಾಗಳ ಅಭಿಮಾನಿಯಾಗಿ.. ಅಣ್ಣಾವ್ರ ಚಿತ್ರಗಳ ಸಮಯದಲ್ಲಿ.. ವಿಷ್ಣುದಾದ ಚಿತ್ರಗಳು, ಅಂಬಿ ಸಿನೆಮಾಗಳು ಆ ಎಂಭತ್ತರ ದಶಕದಲ್ಲಿ ಹುಟ್ಟಿಸಿದ್ದ ಕ್ರೇಜ್ ನೋಡಿದ್ದರಿಂದ.. ಆ ರೀತಿಯ ಹಬ್ಬದ ವಾತಾವರಣ ನೋಡಬೇಕಿತ್ತು ಎಂದು ಮನಸ್ಸು ಬಯಸಿದ್ದು ಸುಳ್ಳಲ್ಲ..

ಸರಿ.. ಎರಡನೇ ದಿನದ ಆಟಕ್ಕೆ ಬುಕ್ ಮಾಡಿದ್ದರಿಂದ.. ನಿರಾಳವಾಗಿತ್ತು.. ಟಾಕೀಸಿನ ಮುಂದೆ ಆಗಲೇ ಜನಸಂದಣಿ.. ಟಾಕೀಸಿನ ಒಳಗೆ.. ತಮ್ಮ ತಮ್ಮ ಸೀಟಿನಲ್ಲಿ ಆಸೀನರಾಗಿದ್ದ ಜನತೆ.. ತಂತ್ರಜ್ಞಾನ ಎಷ್ಟೇ ಮುಂದುವರೆದಿರಲಿ.. ಟಾಕೀಸಿನಲ್ಲಿ ಆ ಕೂಗಾಟ, ಚೀರಾಟ, ಶಿಳ್ಳೆ, ಚಪ್ಪಾಳೆಗಳ ನಡುವೆ... ಅಭಿಮಾನ ಹುಟ್ಟಿಸುವ ಅಭಿಮಾನಿಗಳ ಜೊತೆಯಲ್ಲಿ ಸಿನಿಮಾಗಳನ್ನು ನೋಡುವ ಖುಷಿಯೇ ಖುಷಿ..

ಕೆಜಿಎಫ್ ಎಂಬ ಫಲಕ ಬೆಳ್ಳಿ ಪರದೆಯ ಮೇಲೆ ಬಂದ ಕೂಡಲೇ.. ಹೋ ಅಂತ ಕೂಗಾಟ, ಚೀರಾಟ.. ಸೊಗಸಾಗಿತ್ತು.. ರೆಬೆಲ್ ಸ್ಟಾರ್ ಅಂಬಿಗೆ ಶ್ರದ್ದಾಂಜಲಿ ಸಲ್ಲಿಸಿದ್ದು.. ಶಿಳ್ಳೆಗಳು ಇನ್ನಷ್ಟು ಹೆಚ್ಚಾಗಲು ಕಾರಣವಾಗಿತ್ತು..

ಸಿನಿಮಾಗಳನ್ನು ಮಾಡುವುದು ಸುಲಭವಲ್ಲ.. ಅದರಲ್ಲೂ ಒಂದು ನಾಲ್ಕು ಐದು ದಶಕಗಳ ಹಿಂದಕ್ಕೆ ಹೋಗಿ ಅಲ್ಲಿದ್ದ ವಾತಾವರಣ ಸೃಷ್ಟಿಮಾಡುವುದು ಸುಲಭದ ಮಾತಲ್ಲ.. ಇಂದಿನ ಪೀಳಿಗೆಯ ನಟರಿಗೆ, ನಿರ್ದೇಶಕರಿಗೆ, ಸಂಗೀತ, ಛಾಯಾಗ್ರಹಣ ಮಾಡುವವರಿಗೆ ತಂತ್ರಜ್ಞಾನ ವರವಾಗಿದೆ.. ಅಂದುಕೊಂಡಿದ್ದನ್ನು ಹಾಗೆಯೇ ತೆರೆಯ ಮೇಲೆ ಮೂಡಿಸೋದುಆಗುತ್ತದೆ ..


ನಿರ್ದೇಶಕ ಪ್ರಶಾಂತ್ ನೀಲ್ ತುಂಬಾ ಹೋಂ ವರ್ಕ್ ಮಾಡಿ ಈ ಚಿತ್ರ ಸಿದ್ಧ ಮಾಡಿದ್ದಾರೆ.. ಮೊದಲನೇ ಚಾಪ್ಟರ್ ಎನ್ನುವ ಟ್ಯಾಗ್ ಲೈನ್ ಇರೋದರಿಂದ.. ಕುತೂಹಲ ಹುಟ್ಟಿಸುವ ಹಾಗೆ ಚಿತ್ರಕಥೆ ಮಾಡಿದ್ದಾರೆ.. ಚಿತ್ರ ನೋಡಿ ಹೊರಗೆ ಬಂದಾಗ.. ಯಶ್ ಮತ್ತು ಪ್ರಶಾಂತ್ ನೀಲ್ ಜೊತೆ ಮಾತಾಡಿಸಬೇಕು ಅನ್ನಿಸಿತು..

ಇಬ್ಬರೂ Virtual ಆಗಿ ಸಿಕ್ಕರು..

ಅವರ ಜೊತೆ ಮಾತುಕತೆ"

ಶ್ರೀ : ಯಶ್ ಅವರೇ ಇಡೀ ಚಿತ್ರದಲ್ಲಿ ನೀವು ಎದ್ದು ಕಾಣುತ್ತೀರಾ.. ನಿಮ್ಮ ಕೇಶ ವಿನ್ಯಾಸ, ಬಟ್ಟೆಗಳು, ಇರಿಯುವಂಥಹ ನೋಟ.. ಮಾತುಗಳು.. ನಿಮ್ಮ ಹೆಜ್ಜೆ ಇಡುವ ಶೈಲಿ ಎಲ್ಲವೂ ಸೊಗಸಾಗಿದೆ.. ಇದಕ್ಕೆ ನಿಮ್ಮ ತಯಾರಿ ಹೇಗಿತ್ತು..

ಯಶ್ : ಅಣ್ತಮ್ಮ.. ಪ್ರಶಾಂತ್ ಈ ಚಿತ್ರದ ಕತೆ ಹೇಳಿದಾಗ ಮನದೊಳಗೆ ಒಂದು ಸ್ಪಷ್ಟ ರೂಪ ತಾಳುವಂತೆ ಅವರು ಹೇಳಿದ್ದು.. ನಾ ರಾಕಿ ಪಾತ್ರದೊಳಗೆ ನುಗ್ಗುವಂತೆ ಮಾಡಿತು.. ರಾಕಿ ಪಾತ್ರಕ್ಕೂ ನನಗೂ ತುಂಬಾ ಸಾಮ್ಯತೆ ಇದ್ದದ್ದು ಅನುಕೂಲವಾಯಿತು..

ಪ್ರಶಾಂತ್ : ನೋಡಿ ಶ್ರೀ ಜೊತೆಗೆ. ನನಗನ್ನಿಸಿದ್ದು.. ಈ ಚಿತ್ರಕಥೆ ಮಾಡುವಾಗ.. ಅರಿವಿಲ್ಲದೆ ಯಶ್ ಅವರು ಈ ನನ್ನ ಕತೆಯೊಳಗೆ ಬಂದುಬಿಟ್ಟಿದ್ದರು.. ಹಾಗಾಗಿ ಬರೆದದ್ದೆಲ್ಲ ಅವರನ್ನು ಮನದೊಳಗೆ ಇಟ್ಟುಕೊಂಡು ಬರೆದೆನೋ.. ಅಥವಾ ಅವರು ಕತೆಯೊಳಗೆ ಹೋಗಿ.. ನನಗೆ ಹೀಗೆ ಅಂತ ಹೇಳಿದರೂ ಗೊತ್ತಿಲ್ಲ.. ಇದೊಂತರ.. ಕುಂಬಳ ಕಾಯಿ ನಮ್ಮದೇ.. ಮಚ್ಚು ನಮ್ಮದೇ.. ಅಡ್ಡವಾದರೂ ಸರಿ ಉದ್ದವಾದರೂ ಸರಿ.. ಕುಂಬಳ ಕಾಯಿ ಕತ್ತರಿಸೋದು ಬೇಕಿತ್ತು.. ಅದೇ ರೀತಿ ಇಲ್ಲೂ ಆಗಿದ್ದು... ನನಗೆ ನಾಯಕ ಹೇಗೆ ಬೇಕಿತ್ತೂ ಹಾಗೆ ಯಶ್ ಸಿಕ್ಕಿದರು.. ಯಶ್ ಅವರಿಗೆ ಅವರಿಗೆ ಚಿತ್ರದ ನಾಯಕ ಹೇಗೆ ಇರಬೇಕಿತ್ತೋ ಅವರು ಪರಕಾಯ ಪ್ರವೇಶ ಮಾಡಿದರು.. ಅದರ ಪರಿಣಾಮ ಈ ಚಿತ್ರ ನಿಮ್ಮ ಮುಂದೆ..

ಶ್ರೀ : ನಿಮ್ಮ ಸೆಟ್ ಡಿಸೈನ್, ಮೇಕಿಂಗ್, ಫೋಟೋಗ್ರಫಿ, ಸಂಗೀತ, ಬಿಜಿಎಂ ಎಲ್ಲವೂ ಹೊಂದಿಕೊಂಡು ಸಾಗಿದೆ.. ಅಷ್ಟೊಂದು ಕಲಾವಿದರು, ಅಷ್ಟು ದೊಡ್ಡ ಕ್ಯಾನವಾಸ್ ಇದನ್ನೆಲ್ಲಾ ಹೇಗೆ ನಿಭಾಯಿಸಿದಿರಿ..

ಪ್ರಶಾಂತ್ : ನಿರ್ಮಾಪಕರಿಗೆ ಕತೆ ಹೇಳಿದೆ.. ಇಷ್ಟು ಬಡ್ಜೆಟ್ ಆಗಬಹುದು ಎಂದು ಹೇಳಿದ್ದೆ.. ವಿಜಯ್ ಕಿರಗಂದೂರು ಒಪ್ಪಿ ನಮ್ಮ ಕಲ್ಪನೆಗೆ ಒಂದು ಚೂರು ಕಮ್ಮಿಯೆಯಾಗದಂತೆ ಎಲ್ಲಾ ಸಿದ್ಧತೆ ಮಾಡಿದರು.. ಭುವನ್ ಗೌಡ ಅವರು ಇಡೀ ಚಿತ್ರವನ್ನು ದೃಶ್ಯಕಾವ್ಯವಾಗಿ ಮಾಡಿದ್ದಾರೆ.. ರವಿ ಬಸ್ರೂರ್ ಅವರ ಸಂಗೀತ ಈ ಚಿತ್ರಕ್ಕೆ ತೂಕಬದ್ಧವಾಗಿ ನೀಡಿದ್ದಾರೆ..

ಯಶ್ : ಅಣ್ತಮ್ಮ.. ಇದೊಂತರಹ ಜೇನುಗೂಡು ಕಟ್ಟಿದ ಹಾಗೆ.. ಪ್ರತಿಯೊಬ್ಬರ ಶ್ರಮ ಇದರ ಹಿಂದೆ ಇದೆ.. ನಾವಿಕನ ಯೋಜನೆ ಸರಿಯಾಗಿದ್ದಾಗ ಹಡಗು ಸಮುದ್ರದಲ್ಲಿ ಸಲೀಸಾಗಿ ಸಾಗುತ್ತದೆ ಎನ್ನುತ್ತಾರೆ ಅಲ್ವೇ.. ಈ ಚಿತ್ರವೂ ಹಾಗೆ

ಶ್ರೀ : ಯಶ್ ಅವರೇ ಮತ್ತು ಪ್ರಶಾಂತ್ ಅವರೇ.. ನೀವು ಬ್ಯುಸಿ ಇದ್ದೀರಾ ಅಂತ ಗೊತ್ತು.. ಕನ್ನಡ ನಾಡಿನ ಚಿತ್ರ ಭಾಷಾ ಗಡಿಯನ್ನು ತೊರೆದು ಇಡೀ ಚಿತ್ರಜಗತ್ತಿನಲ್ಲಿಯೇ ಸುದ್ದಿ ಮಾಡುತ್ತಿರುವುದು ಚಿತ್ರಪ್ರೇಮಿಯಾಗಿ ನನಗೆ.. ಹಾಗೂ ಕನ್ನಡಾಭಿಮಾನಿಯಾಗಿ ನನಗೆ ಖುಷಿ ಕೊಟ್ಟಿದೆ..

ಪ್ರಶಾಂತ್ ಮತ್ತು ಯಶ್ : ಶ್ರೀ ಧನ್ಯವಾದಗಳು.. ಚಿತ್ರ ಯಶಸ್ವಿಯಾಗಿ ಚಿತ್ರಾಭಿಮಾನಿಗಳ ಹೃದಯ ಗೆದ್ದರೆ ಎಲ್ಲರೂ ಗೆದ್ದ ಹಾಗೆ.. ಜೊತೆಯಲ್ಲಿ ನಮ್ಮ ಇಡೀ ಚಿತ್ರ ತಂಡದ ಸುಮಾರು ಎರಡು ವರ್ಷದ ಪರಿಶ್ರಮ ಸಾರ್ಥಕ ಅನ್ನಿಸುತ್ತದೆ.. ನಮಸ್ಕಾರ.. ಶ್ರೀ ... ಎನ್ನುತ್ತಾ ತಮ್ಮ ಕಾರು ಹತ್ತಿ ಹೊರಟೆ ಬಿಟ್ಟರು..



                                                                   ****

ಈ ಸಿನಿಮಾ ಮೂಡಿ ಬಂದ ರೀತಿ ಸೊಗಸಾಗಿದೆ.. ಕನ್ನಡ ಚಿತ್ರರಂಗವನ್ನು ಅನೇಕ ಚಿತ್ರ ರತ್ನಗಳು ನಾನಾ ಕಾರಣಗಳಿಂದ ಬೆಳಗಿವೆ .. ಈ ಸಿನೆಮಾವೂ ಹಾಗೆ.. ಪ್ರತಿಯೊಂದು ವಿಭಾಗದಲ್ಲಿಯೂ ನುರಿತ ತಂತ್ರಜ್ಞರು ಪರಿಶ್ರಮ ವಹಿಸಿದ್ದಾರೆ..

  • ಯಶ್ ಅವರು ಇಷ್ಟವಾಗದೇ ಇರೋಕೆ ಸಾಧ್ಯವೇ ಇಲ್ಲ ಅನ್ನುವ ಮಟ್ಟಿಗೆ ಚಿತ್ರದಲ್ಲಿ ಆವರಿಸಿಕೊಂಡಿದ್ದಾರೆ.. 
  • ಇಡೀ ಚಿತ್ರವನ್ನು ತಮ್ಮ ಭುಜದ ಮೇಲೆ ಹೊತ್ತಿಕೊಂಡಿರುವುದು ಸ್ಪಷ್ಟವಾಗುತ್ತದೆ ಮತ್ತು ಅದರಲ್ಲಿ ಗೆದ್ದಿದ್ದಾರೆ
  • ಹೊಡೆದಾಟದ ದೃಶ್ಯಗಳು, ಅದಕ್ಕೇ ಉಪಯೋಗಿಸಿರುವ ಬಣ್ಣ, ಅದರ ಹಿನ್ನೆಲೆ ಮನಸೆಳೆಯುತ್ತದೆ.. 
  • ಸಂಗೀತ ಅಬ್ಬರಿಸುತ್ತದೆ.. 
  • ಆ ಗಣಿ ದೃಶ್ಯಗಳು, ಅದನ್ನೂ ನಾಜೂಕಾಗಿ ತೆರೆದಿಟ್ಟಿರುವ ಪರಿ ಅಬ್ಬಬ್ಬಾ ಅನಿಸುತ್ತದೆ
  • ಆ ಗಣಿಯಲ್ಲಿ ಹಾಕಿರುವ ಸೆಟ್ ನಯನ ಮನೋಹರ
  • ಗಣಿಗಳಲ್ಲಿ ಕೆಲಸ ಮಾಡುವವರ ನೋವುಗಳನ್ನು ಬೋರ್ ಆಗದಂತೆ ಹಿಡಿದಿಟ್ಟಿರುವ ಪರಿ..  
  • ಸಂಕಲನಕಾರನ ಚಾಕಚಕ್ಯತೆ ಈ ಚಿತ್ರದ ಹೈ ಲೈಟ್ 
  • ಅಪಾರ ಕಲಾವಿದರನ್ನು ಹಿಡಿದಿಟ್ಟುಕೊಂಡು ಚಿತ್ರಕ್ಕೆ ಬೇಕಾದ ರೀತಿಯಲ್ಲಿ ಉಪಯೋಗಿಸಿರುವುದು ನಿರ್ದೇಶಕ ಜಾಣ್ಮೆ 
  • ಮುದ್ದಾಗಿ ಕಾಣುವ ಅನಂತ್ ನಾಗ್..ಅವರ ನಿರೂಪಣೆ, ಅವರ ಧ್ವನಿ, ಭಾಷಾ ಶುದ್ಧತೆ ಇಷ್ಟವಾಗುತ್ತದೆ 
  • ಅಷ್ಟೇ ಮುದ್ದಾಗಿ ಮಾಳವಿಕಾ..ಅವರ ಧ್ವನಿ ಸ್ಪಷ್ಟ ಕನ್ನಡ ಮಾತುಗಳು ಇಷ್ಟವಾಗುತ್ತದೆ . 
  • ಒಂದು ಕಾಲದಲ್ಲಿ ಕನ್ನಡ ಚಿತ್ರಗಳ ಕಡೆಗೆ ಇಡೀ ಭಾರತ ಚಿತ್ರರಂಗ ಕಣ್ಣು ತಿರುಗಿಸುತಿತ್ತು.. ಇಂತಹ ಚಿತ್ರಗಳ ಬಂದಷ್ಟು ಮತ್ತೆ ಆ ದಿನಗಳು ದೂರವಿಲ್ಲ ಅನ್ನಿಸುತ್ತದೆ.. 
  • ಆ ಭಾಷೆ ಚಿತ್ರ. .ಈ ಭಾಷೆ ಚಿತ್ರ ಅಂತ ಅಂತ ಸುದ್ದಿ ಕೇಳಿ ಕೇಳಿ ಬೇಸತ್ತಿದ್ದ ಕಿವಿಗಳು.. ಕನ್ನಡ ಸಿನಿಮಾ ಈ ಪಾಟಿ ಸುದ್ದಿ ಮಾಡುತ್ತಿರುವುದು.. ಕರುನಾಡಿನ ಪ್ರತಿಯೊಬ್ಬ ಸಿನಿಪ್ರಿಯನಿಗೂ ಇದು ಯುಗಾದಿ ಹಬ್ಬವೆಂದರೆ ತಪ್ಪಿಲ್ಲ ಅಲ್ವೇ.. !!!




ಎರಡನೇ ಚಾಪ್ಟರ್ ಬೇಗನೆ ತೆರೆಯ ಮೇಲೆ ಅಪ್ಪಳಿಸಲಿ.. ಶುಭವಾಗಲಿ ಕೆಜಿಎಫ್ ತಂಡಕ್ಕೆ!!!