Monday, May 6, 2019

ಧೈರ್ಯವೆಂದರೆ ರಣಧೀರ.. ಎನಿಸುವ ರಣಧೀರ ಕಂಠೀರವ (1960) (ಅಣ್ಣಾವ್ರ ಚಿತ್ರ ೧೫ / ೨೦೭)

ಸ್ಪ್ರಿಂಗನ್ನು ಒತ್ತಿ ಹಿಡಿದಷ್ಟು ಅದು ಮತ್ತೆ ಚಿಮ್ಮುವ ಸಾಧ್ಯತೆಗಳು ಹೆಚ್ಚು.. ೫೦ರ ದಶಕದ ಅಂತ್ಯದಲ್ಲಿ ಕರುನಾಡ ಚಿತ್ರರಂಗಕ್ಕೆ ಕೊಂಚ  ಬರಗಾಲ ಅಟಕಾಯಿಸಿಕೊಂಡಿತ್ತು..  ಚಿತ್ರಗಳ ತಯಾರಿಕೆ ಕೊಂಚ ಕಡಿಮೆಯಾದ ಕಾರಣ.. ಅಂದಿನ ಚಿತ್ರಕಲಾವಿದರು ನಂಬಿಕೊಂಡಿದ್ದು ಚಿತ್ರರಂಗವನ್ನೇ.. ಅವಶ್ಯಕತೆ ಅನ್ವೇಷಣೆಯ ತಾಯಿ ಎನ್ನುತ್ತಾರೆ.. ರಾಜಕುಮಾರ್, ನರಸಿಂಹರಾಜು,  ಜಿ.ವಿ. ಅಯ್ಯರ್, ಮತ್ತು ಬಾಲಕೃಷ್ಣ ಈ ನಾಲ್ವರು ಚಿತ್ರರಂಗದಲ್ಲಿ ಅರಳುತ್ತಿದ್ದ ಸಮಯ.. ಆಗಿನ ಚಿತ್ರಗಳಲ್ಲಿ ಬಹುತೇಕ ಈ ನಾಲ್ವರಲ್ಲಿ ಒಬ್ಬರಾದರು  ಇದ್ದೆ ಇರುತ್ತಿದ್ದರು..


ಬದುಕೋಕೆ ಹಣ ಬೇಕು.. ಹಣ ಬರಬೇಕಾದರೆ ಚಿತ್ರಗಳು ಬರಬೇಕಿತ್ತು .. ಚಿತ್ರಗಳನ್ನು ನಿರ್ಮಿಸುವವರಿಗೆ ಸಂಕಷ್ಟ ಕಾಲ.. ಆಗ ಜನ್ಮ ತಾಳಿದ್ದು ಕನ್ನಡ ಚಲನಚಿತ್ರ ಕಲಾವಿದರ ಸಂಘ. ೧೯೬೦ರಲ್ಲಿಯೇ ರಾಜಕುಮಾರ್ ನಿರ್ಮಾಪಕರಾದರು.



ರಾಜಕುಮಾರ್, ನರಸಿಂಹರಾಜು, ಬಾಲಕೃಷ್ಣ ಮತ್ತು ಜಿ. ವಿ. ಅಯ್ಯರ್ ನಿರ್ಮಾಣದ ಹೊಣೆಗಾರಿಕೆಯಲ್ಲಿ  ರಚಿತವಾದ ಈ ಚಿತ್ರಕ್ಕೆ ಅಪಾರ ಪರಿಶ್ರಮದಿಂದ ಇತಿಹಾಸ ಭಂಡಾರವನ್ನು ಓದಿ, ಗ್ರಹಿಸಿ ಸಾಹಿತ್ಯ, ಸಹ  ನಿರ್ದೇಶನ ಮತ್ತು ನಿರ್ಮಾಣ ನಿರ್ವಹಣೆ ಹೊತ್ತಿದ್ದು ಜಿ ವಿ ಅಯ್ಯರ್.  ಸಂಕಲನ ಮತ್ತು ನಿರ್ದೇಶನ ಎನ್ ಸಿ ರಾಜನ್.  ಸಂಗೀತಕ್ಕೆ ಜಿ ಕೆ ವೆಂಕಟೇಶ್ ಬಂದರು. ಈ ಚಿತ್ರದಲ್ಲಿ ಜೊತೆಯಾಗಿದ್ದ ಛಾಯಾಗ್ರಾಹಕ ದೊರೈರಾಜ್ ಮತ್ತು ಸಹನಿರ್ದೇಶಕ ಭಗವಾನ್ ಮುಂದೆ ಅನೇಕ ಸ್ಮರಣೀಯ  ಚಿತ್ರಗಳಿಗೆ ಕಾರಣಕರ್ತರಾಗುತ್ತಾರೆ ಎನ್ನುವ ಸೂಚನೆ ಇರಲಿಲ್ಲ. 

ಆ ದಿನಗಳ ಪ್ರಖ್ಯಾತ ಕಲಾವಿದರ ಸಂಗಮವೇ ಇತ್ತು. ರಮಾದೇವಿ, ಶಾಂತಮ್ಮ, ಲೀಲಾವತಿ, ಉದಯಕುಮಾರ್, ಅಶ್ವತ್, ಈಶ್ವರಪ್ಪ, ವೀರಭದ್ರಪ್ಪ ಜೊತೆಯಲ್ಲಿ ಅತಿಥಿ ಕಲಾವಿದರಾಗಿ ಆರ್. ನಾಗೇಂದ್ರರಾಯರು ಸರ್ವಾಧಿಕಾರಿಯ ಪಾತ್ರದಲ್ಲಿ ವಿಜೃಂಭಿಸಿದ್ದರು.











ಕಥೆ ಎಲ್ಲರಿಗೂ ಗೊತ್ತಿದ್ದೇ ಆದರೂ, ಇತಿಹಾಸ ಪುಟಗಳನ್ನೂ ಶೋಧಿಸಿ, ಅಗತ್ಯ ಮತ್ತು ಧೃಡೀಕರಿಸಿದ ಮಾಹಿತಿಯನ್ನು ಮಾತ್ರ ಹೆಕ್ಕಿಕೊಂಡು ಚಿತ್ರಕತೆ ಮೂಡಿಸಿದರು ಅಯ್ಯರ್.  ಶೀರ್ಷಿಕೆಯಲ್ಲಿ ಆಧರಿಸಿದ್ಧ ಎಲ್ಲ ಮಾಹಿತಿಗಳನ್ನು ನೆನೆಪಿಸಿಕೊಂಡದ್ದು ವಿಶೇಷ . 

ಮೊದಲ ಹದಿನಾಲ್ಕ ಚಿತ್ರಗಳಲ್ಲಿ ಸಲೀಸಾಗಿ ಅಭಿನಯಿಸಿದ್ದ ರಾಜಕುಮಾರ್ ಒಂದು ರೀತಿಯ ಅಣೆಕಟ್ಟಿನಲ್ಲಿ ಹಿಡಿದಿಟ್ಟಿದ್ದ ನೀರಿನಂತಿದ್ದರು.. ಈ ಚಿತ್ರದಲ್ಲಿ ಎಲ್ಲಾ ಬಾಗಿಲುಗಳನ್ನು ತೆಗೆದಾಗ ಹಿಡಿದಿಟ್ಟಿದ್ದ ನೀರು ಧುಮ್ಮಿಕ್ಕಿ ಜಲಧಾರೆ ಸೃಷ್ಟಿಸುವಂತಹ ಅಬ್ಬರದ ಅಭಿನಯ.

ಕುಸ್ತಿಪಟುವೂ, ಉತ್ತಮ ಆಡಳಿತಗಾರ, ಸಂಗೀತ ಆರಾಧಕ, ವಸ್ತುನಿಷ್ಠ ಅಭಿಪ್ರಾಯ ಕೊಡುವವರು, ಮಾತೃ ಪ್ರೇಮ, ಭ್ರಾತೃ ಪ್ರೇಮ, ಉತ್ತಮ ಪತಿ.. ಹೀಗೆ ಹಲವಾರು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.. ಆ ಗಿರಿಜಾ ಮೀಸೆ, ಅದಕ್ಕೊಪ್ಪುವ ಹಾವಭಾವ, ಸಂಭಾಷಣೆ ಹೇಳುವ ವೈಖರಿ.. ಆಹಾ ಸೂಪರ್ ಗೆ ಸೂಪರ್..

ಈ ಚಿತ್ರದಲ್ಲಿ ಬಂದ ಕ್ಷಣದಿಂದ ಕಡೆಯ ದೃಶ್ಯದ ತನಕ ಇಡೀ ಚಿತ್ರದಲ್ಲಿ ಹರಡಿಕೊಂಡಿರುವ ಅವರ ಅಭಿನಯ.. ಮುಂದಿನ ಚಿತ್ರಗಳಿಗೆ ನಾಂದಿ ಹಾಡಿತ್ತು ಎನ್ನುವ ಅಭಿಪ್ರಾಯ ನನದು.





ಜನಜನಿತವಾಗಿದ್ದ ಕಥೆಯನ್ನು ಉತ್ತಮ ರೀತಿಯಲ್ಲಿ ನಿರ್ದೇಶಿಸಿದ ಕೀರ್ತಿ ನಿರ್ದೇಶಕ ಎನ್ ಸಿ ರಾಜನ್ ಅವರಿಗೆ ಸಲ್ಲಬೇಕು.. ಚಿತ್ರ ಬೋರ್ ಆಗದ ಹಾಗೆ, ಕಥೆಗೆ ಅವಶ್ಯಕತೇ ಇರುವಂತೆ ಬಾಲಕೃಷ್ಣ ಮತ್ತು ನರಸಿಂಹರಾಜು ಅವರ ಹಾಸ್ಯ ಸಂಭಾಷಣೆ, ಜೊತೆಯಲ್ಲಿ ಜಿವಿ ಅಯ್ಯರ್ ಅವರ ಆ ಕಾಲದ ಸಂಸ್ಕೃತ ಮಿಶ್ರಣ ಮಾತುಗಳು ಚಿತ್ರದ ಓಘಕ್ಕೆ ಸಾತ್ ನೀಡುತ್ತದೆ.

ಚಿತ್ರದ ಆರಂಭಿಕ ದೃಶ್ಯಗಳಲ್ಲಿ ಸರ್ವಾಧಿಕಾರಿ ವಿಕ್ರಮರಾಯನ ಪಾತ್ರದಲ್ಲಿ ಚಿತ್ರರಂಗದ ಭೀಷ್ಮ ಎಂದೇ ಹೆಸರಾಗಿದ್ದ ಆರ್ ನಾಗೇಂದ್ರರಾಯರ ಅಭಿನಯ ಅಬ್ಬಬ್ಬಾ ಅನಿಸುತ್ತದೆ. ಕ್ರೌರ್ಯ, ಕೋಪ, ಸಿಟ್ಟು.. ಎಲ್ಲವನ್ನು ಸಂಭಾಷಣೆ ಸಲ್ಲಿಸುವ ಮತ್ತು ಮುಖಾಭಿನಯದಿಂದ ಅದ್ಭುತ ಎನಿಸುತ್ತಾರೆ. ಪಾತ್ರ ಅಲ್ಪಕಾಲದ್ದೆ ಆದರೂ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೊಡ್ಡಿ ಪಾತ್ರದಲ್ಲಿ ಲೀಲಾವತಿ ಲೀಲಾಜಾಲವಾದ ಅಭಿನಯ, ಅವರ ಸಂಗೀತ ಗುರುವಾಗಿ ಉದಯ ಕುಮಾರ್ ಮುದ್ದಾಗಿ ಕಾಣುತ್ತಾರೆ. ಚಿತ್ರದ ಮಧ್ಯದಲ್ಲಿ ಬಂದರೂ, ಕಡೆಯ ತನಕ ಇರುವ ಉದಯಕುಮಾರ್ ಅಭಿನಯ ಸೊಗಸಾಗಿದೆ.

ಇನ್ನು ಮಿಕ್ಕ ಪಾತ್ರಗಳು ಕತೆಗೆ ತಕ್ಕಂತೆ ಸಾತ್ ನೀಡುತ್ತಾ, ತಮ್ಮ ತಮ್ಮ ಪಾತ್ರಗಳನ್ನ ತೂಗಿಸಿಕೊಂಡು ಹೋಗಿದ್ದಾರೆ.

ಐತಿಹಾಸಿಕ ಚಿತ್ರಮಾಡುವಾಗ ಪ್ರತಿಯೊಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳುವ ಪರಿ ಈ ಚಿತ್ರದಲ್ಲಿ ಕಾಣುತ್ತದೆ, ಆ ಕಾಲದ ಉಡುಗೆತೊಡುಗೆಗಳು, ಸಂಭಾಷಣೆ ಶೈಲಿ, ಅರಮನೆ ಸೆಟ್ಟುಗಳು, ಹೊಡೆದಾಟದ ವೈಖರಿ, ನೃತ್ಯ ಪ್ರಕಾರ ಎಲ್ಲವನ್ನು ಆ ಕಾಲಘಟ್ಟಕ್ಕೆ ಹೊಂದುವಂತೆ ಮೂಡಿಸುವಲ್ಲಿ ಇಡೀ ಚಿತ್ರತಂಡ ಯಶಸ್ವಿಯಾಗಿದೆ.

ಅಂತಿಮ ದೃಶ್ಯದ ಹೊಡೆದಾಟದಲ್ಲಿ "ಒಂದು ಸಿಂಹವನ್ನು ಹಿಡಿಯಲು ನೂರು ಕುರಿಗಳು" ಎನ್ನುವ ಸಂಭಾಷಣೆ ಶಿಳ್ಳೆ ಗಿಟ್ಟಿಸುವುದು ಖಾತ್ರಿ.

ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಮುನ್ನುಗ್ಗಿ ತಮ್ಮದೇ ಹಾದಿಯನ್ನು ಕಂಡು ಕೊಳ್ಳಬೇಕು ಎನ್ನುವ ತತ್ವವನ್ನು ಸಿನಿಮಾ ಮಾಡಿದವರು ಹಾಗೆಯೇ ಚಿತ್ರದ ಕಥಾನಾಯಕ ರಣಧೀರ ಕಂಠೀರವ ಪಾತ್ರ ಸಾಬೀತು ಮಾಡುತ್ತಾರೆ.  ಚಿತ್ರರಂಗದಲ್ಲಿ ಉಳಿಯಬೇಕಾದ ಪರಿಸ್ಥಿತಿ ಚಿತ್ರ ಕಲಾವಿದರದ್ದಾಗಿದ್ದರೆ, ತಮ್ಮ ಪ್ರಾಂತ್ಯವನ್ನು ಹೊರಗಿನ ಮತ್ತು ಒಳಗಿನ ಶತ್ರುಗಳಿಂದ ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆ ರಣಧೀರ ಕಂಠೀರವ ಅವರಿಗೆ ಇತ್ತು. ಎರಡೂ ಕಡೆ ಜಯದ ಅಂಶವನ್ನು ಕಾಣುತ್ತಾರೆ ಎನ್ನುವುದು ಈ ಚಿತ್ರ ನೋಡಿದವರಿಗೆ ಅರಿವಾಗುತ್ತದೆ.

ರಾಜಕುಮಾರ್ ಅವರ ಅಭಿನಯದ ಬಗ್ಗೆ ಮಾತಿಲ್ಲ.. ಒಬ್ಬ ಸಮರ್ಥ ನಾಯಕ ದಾಪುಗಾಲು ಹಾಕುವಲ್ಲಿ ಯಶಸ್ವೀಯಾಗಿದ್ದಾರೆ ಎನ್ನುವ ಕುರುಹು ಈ ಚಿತ್ರದಲ್ಲಿ ಸಿಗುತ್ತದೆ.

ಕಥೆ ಐತಿಹಾಸಿಕವಾಗಿದ್ದರಿಂದ, ಚಿತ್ರ ಕಥೆಯನ್ನು ಹೇಳದೆ, ಈ ಚಿತ್ರದ ವಿಶೇಷತೆಯನ್ನು ಮಾತ್ರ ಹೇಳಿದ್ದೇನೆ.

ಮತ್ತೊಂದು ರಾಜಕುಮಾರ್ ಅವರ ಚಿತ್ರದ ಜೊತೆ ಬರುವೆ..!