Wednesday, December 27, 2017

ಬಾಂಧವ್ಯದಲ್ಲಿ ಅಣ್ಣ ತಂಗಿಯರ ಮ್ಯಾಜಿಕ್ - ಅಣ್ಣ ತಂಗಿ (1958) (ಅಣ್ಣಾವ್ರ ಚಿತ್ರ ೧೦ / ೨೦೭)

"ಇವನಿಂದ ಯಾರಾದರೂ ಕಾಪಾಡ್ರಪ್ಪ.. ಭಾವ ಲಹರಿ ತುಂಬಿ ತುಂಬಿ ಓದುಗರನ್ನ ಅಳಿಸುತ್ತಿದ್ದಾನೆ .. " ಕನಸ್ಸಲ್ಲಿ ಯಾರೋ ಬೆನ್ನು ತಟ್ಟಿ ಎಬ್ಬಿಸಿದ ಅನುಭವ.. ಕಣ್ಣು ಬಿಟ್ಟೆ.. ಏನಪ್ಪಾ.. ನನ್ನ ಚಿತ್ರಗಳ ಬಗ್ಗೆ ಬರೀತೀನಿ ಅಂತ ಎಲ್ಲಾ ಮಾಸದಲ್ಲೂ ಹರಿಕಥೆ ಮಾಡಿದೆ.. ನನ್ನ ಎಲ್ಲೋ ನಿಲ್ಲಿಸಿಬಿಟ್ಟಿದ್ದೆಯ.. ಮುಂದುವರೆಸುತ್ತೀಯೋ ಅಥವಾ.. ಆರಂಭ ಶೂರತ್ವವೋ..ಆ ಆ"

"ಅಣ್ಣಾವ್ರೇ.. ಕ್ಷಮಿಸಿ.. ಎಲ್ಲೆಲ್ಲೋ ತಪ್ಪಿಸ್ಕೊಂಡು ಹೋಗಿಬಿಟ್ಟಿದ್ದೆ.. ಇರಿ ಹೇಗಾದರೂ ಮತ್ತೆ ನನ್ನ ಟ್ರಾಕಿಗೆ ಬರುತ್ತೇನೆ.. ನಿಮ್ಮನ್ನು ಒಂದೇ ಕಡೆ ನಿಲ್ಲಿಸುವುದೇ ಎಂಥಹ ಮಾತಾಡುತ್ತೀರಿ.. ನಿಮ್ಮ ಆಶೀರ್ವಾದದ ಹಸ್ತ ನನ್ನ ಮೇಲಿರಲಿ.. ನಿಮ್ಮ ಅನುಗ್ರಹವಿರಲಿ ಬಂದೆ ಬಿಡುತ್ತೇನೆ ೨೦೭ ಚಿತ್ರಗಳಿಗೆ.. "

"ಸರಿ.. ಅರ್ಥವಾಗುತ್ತೆ.. ಈಗ ಅಣ್ಣ ತಂಗಿ ಚಿತ್ರದ ಬಗ್ಗೆ ನಾ ಹೇಳುತ್ತೇನೆ.. ನೀ ಬರೆಯುತ್ತಾ ಹೋಗು.. ನಿನಗೂ ಸ್ವಲ್ಪ ಹಗುರವಾಗುತ್ತೆ.. ನಿನ್ನ ಗುರಿ ಮುಟ್ಟಲು ನಾನೂ ಅಳಿಲು ಸೇವೆ ಮಾಡಿದ ಹಾಗೆ ಆಗುತ್ತದೆ"

"ಯಪ್ಪೋ ಅಣ್ಣಾವ್ರೇ ಹೀಗೆಲ್ಲ ಹೇಳಬೇಡಿ.. ನನಗೆ ನಾಚಿಕೆ ಆಗುತ್ತದೆ.. ಸರಿ ನಿಮ್ಮ ೧೦ನೇ ಚಿತ್ರ ಅಣ್ಣ ತಂಗಿ ಚಿತ್ರ ಬಗ್ಗೆ ಹೇಳಿ.. ನಾ ಬರೆಯುತ್ತೇನೆ.. ."

"ಶ್ರೀಕಾಂತಾ.. ಈ ಚಿತ್ರ ೧೯೫೮ ರಲ್ಲಿ ತೆರೆಗೆ ಬಂತು.. ಕನ್ನಡ ಚಿತ್ರದ ಆರಂಭದ ದಿನಗಳ ಹೆಸರಾಂತ ಸಾಹಿತಿ ಕುರಾಸೀ ಎಂದೇ ಪ್ರಸಿದ್ಧರಾದ ಕು ರಾ ಸೀತಾರಾಮಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬಂತು.. ಬಿ ಎಸ್ ಕರಿಬಸಯ್ಯ ಈ ಚಿತ್ರದ ಮೂಲಕ ನಮಗೆ ಊಟ ಬಡಿಸಿದ ಅನ್ನದಾತರು.. ಗಿರಿಜಾ ಪ್ರೊಡಕ್ಷನ್ಸ್ ಲಾಂಛನ ಈ ಚಿತ್ರಕ್ಕೆ ಇತ್ತು.. "

"ಅಣ್ಣಾ.. ಈ ಚಿತ್ರಕ್ಕೆ ಕತೆ ಯಾರದ್ದು.. ಸಂಭಾಷಣೆ ಹಾಡುಗಳು ಯಾರವು.. ಈ ಚಿತ್ರ ನಿಮಗೆ ಹೇಗೆ ವಿಶೇಷ ಅನ್ನಿಸಿತು. ಅದನ್ನು ಒಸಿ ಹೇಳಿ.. "

ಹೂ ಕಣಪ್ಪ.. ಅದನ್ನು ಹೇಳುತ್ತೇನೆ.. ಸಂಭಾಷಣೆ, ಹಾಡುಗಳು ಕುರಾಸೀ ವಹಿಸಿಕೊಂಡಿದ್ದರು.. ಕಥೆಯನ್ನು ಬರೆದುಕೊಟ್ಟವರು ಎ. ಪಿ. ನಟರಾಜನ್.. ಇದೊಂದು ಬಹುತಾರಾಗಣದ ಚಿತ್ರ ಕಣಪ್ಪ.. ಎಲ್ಲ ಘಟಾನುಘಟಿಗಳು ಈ ಚಿತ್ರದಲ್ಲಿ ಇದ್ದರು.. ನಮ್ಮ ಬಾಲಣ್ಣ, ನರಸಿಂಹರಾಜು, ಅಶ್ವಥ್, ಗಣಪತಿ ಭಟ್ಟ, ವಿದ್ಯಾವತಿ, ಲಕ್ಷ್ಮಿ ದೇವಿ, ಪಾಪಮ್ಮ, ಬಿ ಜಯಮ್ಮ, ಸರೋಜಾದೇವಿ.. ಆರ್ ಎನ್ ಮಾಗಡಿ, ಕಮೆಡಿಯನ್ ಗುಗ್ಗು, ಗಿರಿಮಾಜಿ..  ಒಬ್ಬರ ಇಬ್ಬರ ಎಲ್ಲರೂ ಸೂಪರ್ ಅಭಿನಯ.., ಅವರ ಮುಂದೆ ನಾ ಅಭಿನಯ ಮಾಡೋಕೆ ನನಗೆ ನಾಚಿಕೆಯಾಗುತ್ತಿತ್ತು.. ಆದರೆ ಒಳ್ಳೆ ಅನುಭವ ಸಿಕ್ಕಿತು...

ಹಾಡುಗಳು ಸೊಗಸಾಗಿ ಇರಲು ಕಾರಣ ಕರ್ತರು ಪಿ ಕಾಳಿಂಗರಾಯರು, ಪಿ. ನಾಗೇಶ್ವರ ರಾವ್, ನನ್ನ ಶಾರೀರವೆಂದೇ ಹೆಸರಾದ ಪಿ ಬಿ ಶ್ರೀನಿವಾಸ್, ಸುಮಿತ್ರಾ, ಪಿ ಸುಶೀಲ, ಎಪಿ ಶ್ಯಾಮಲಾ, ರಾಜೇಶ್ವರಿ.. ಇವರೆಲ್ಲ ಸೇರಿ ಸಂಗೀತಮಯ ಮಾಡಿದ್ದರು.. ಇನ್ನೂ ನನ್ನನ್ನು ತಮ್ಮಯ್ಯ ಅಂತ ಕರೆಯುವ ಜಿ ಕೆ ವೆಂಕಟೇಶ್ ಸಂಗೀತ ಇದ್ದಾಗ ಸಂಗೀತಮಯವಾಗಲೇ ಬೇಕು ಅಲ್ಲವೇ..

ತಂತಿ ಬಂದಿರುತ್ತೆ.. ಅಂಚೆಯವ ಯಜಮಾನನಿಗೆ ರುಜು ಹಾಕಿ ತಂತಿ ತಗೊಳ್ಳಿ ಅಂದಾಗ "ನಾವು ಕೈಬರಹದವರಲ್ಲ. ಹಣೆಬರಹದವರು.. ಹೆಬ್ಬೆಟ್ಟು ತೋರಿಸು ಮುದ್ರೆ ಬಾಬತ್ತು.. "

"ಹಳ್ಳಿಯಲ್ಲಿ ಓದು ಬರಹ ಎಷ್ಟು ಹಿಂದಕ್ಕೆ ನಿಂತಿದೆ.. ಬರಿ ಹಣ ಅಂತಸ್ತು ಹೇಗೆ ಆಳುತ್ತದೆ ಎನ್ನುವುದನ್ನು ಸೂಕ್ಷಮವಾಗಿ ಒಂದು ಸಂಭಾಷಣೆಯಲ್ಲಿ ನಿಲ್ಲಿಸಿದ್ದಾರೆ.. ನನಗೆ ಬಹು ಇಷ್ಟವಾದ ಸಂಭಾಷಣೆ ಕಣಪ್ಪ.. "

 ಬಾಲಣ್ಣ ಹೇಳುವ ಒಂದು ಸಂಭಾಷಣೆ..

"ತ್ರಿಪುರ ಸುಂದರಿ ತಿಳಿತಿಳಿಯಾಗಿ ನಗ್ತಾಳೆ .. "
"ಏನು ಅಯ್ಯನೋರೇ ಈಗ ನಮ್ಮ ಗೌಡತಿ ಇದ್ದಿದ್ದರೇ.. " ಅಂತ ಯಜಮಾನ ಮಾತು ಮುಗಿಸುವ ಮುನ್ನವೇ "ಅಯ್ಯೋ ಬಿಡಿ ಈಗ ಅವರಿದ್ದರೆ ಈ ಆನಂದದಲ್ಲಿ ಪ್ರಾಣಾನೇ ಬಿಡ್ತಿದ್ದರು.. " ಒಂದು ಹಳ್ಳಿಯ ಮನೆಯ ವಾತಾವರಣವನ್ನು, ಆ ಭಾವವನ್ನು ಶುದ್ಧ ಹಾಸ್ಯದ ಧಾಟಿಯಲ್ಲಿ ಹೇಳುತ್ತಲೇ.. ತಮ್ಮ ವಿಷಾದವನ್ನು ಹೇಳುವ ಪರಿ ಸೊಗಸು...

"ಪಟ್ಟಣದವರು ಅಂದರೆ ಬೆರೆಕೆ ಇಂಗ್ಲೀಷಿಗೆ ಎತ್ತಿದ ಕೈ.. ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ಕಲಿತ ಕನ್ನಡ ಕೈಜಾರಿ ಕಳಚಿಕೊಂಡು ಬಿಡುತ್ತೆ.. " ಆಂಗ್ಲ ಭಾಷೆ ಪಟ್ಟಣ ಮತ್ತು ಹಳ್ಳಿಯ ಮಧ್ಯೆ ತರುತ್ತಿದ್ದ ಅಂತರವನ್ನು ಹೇಳುವ ನಾಜೂಕಿನ ಮಾತು..

"ಹಳ್ಳೀಲಿ ಹದವಾಗಿ ಹತ್ತು ದಿನ ಹಣ್ಣಾಗುವ ತನಕ ಈ ಅಂತೂ ಜಾಡ್ಯ ವಾಸಿಯಾಗಿ, ಹೆತ್ತ ತಾಯಿ ಹೆಸರು ಉಳಿಸೋ ಹದಿನಾರಾಣೆ ಕನ್ನಡಿಗರಾಗೋ ಹಾಗೆ ಇಲ್ಲ.. " ಆಂಗ್ಲ ಭಾಷಯ ವ್ಯಾಮೋಹದ ವ್ಯಾಧಿಗೆ ಮದ್ದು ಕೊಡುವ ರೀತಿ... ಚುರುಕು ಸಂಭಾಷಣೆ ಈ ಚಿತ್ರದ ತುಂಬಾ ಹರಡಿದೆ..

ಹಾಗೆಯೇ ಎಂ ಏನ್ ಲಕ್ಷ್ಮೀದೇವಿ ಮತ್ತು ನರಸಿಂಹ ರಾಜು ಅವರ ಸಂಭಾಷಣೆ..
ನರಸಿಂಹರಾಜು ಹೇಳುತ್ತಾರೆ "ಮರ್ವಾದೆ ಮೀರಿದರೆ ನಾ ಮನುಷ್ಯನಲ್ಲ.. "
ಅದಕ್ಕೆ ಲಕ್ಷ್ಮೀದೇವಿ ಕೊಡುವ ಉತ್ತರ.. "ಮಖ ನೋಡಿದರೆ ತಿಳಿಯೊಳ್ವ ಮನುಷ್ಯ ಹೌದು ಅಲ್ಲ ಅಂತ"

ಹಾಸ್ಯ ಸಂಭಾಷಣೆ ಅಂದ್ರೆ ಇದು ಕಣ್ಣಪ್ಪ.. ತಿಳಿಹಾಸ್ಯ..

"ಅಣ್ಣಾವ್ರೇ ಈ ಚಿತ್ರದ ಕಥಾ ತಿರುಳು ಹೇಳಿ.. "

"ಇದೊಂದು ಎಲ್ಲಾ ಮನೆಯಲ್ಲೂ, ಎಲ್ಲಾ ಹಳ್ಳಿಯಲ್ಲೂ ನೆಡೆಯುವ ಕಥೆ.. ಚಿಕ್ಕ ವ್ಯಾಜ್ಯ, ಆಸ್ತಿ ಆಸೆ.. ಬಂಧುಗಳನ್ನು ದೂರಮಾಡಿರುತ್ತದೆ.. ಆದರೆ ಒಳಗೆ ಕುಡಿಯುವ ಆಕ್ರೋಶ. ಭುಗಿಲೆದ್ದು ತೊಂದರೆ ಈಡು ಮಾಡುತ್ತಿರುತ್ತದೆ.. ಅಂತ ಒಂದು ಪಾತ್ರದಲ್ಲಿ ನಾನು ಅಭಿನಯ ಮಾಡುವ ಪ್ರಯತ್ನ ಮಾಡಿದ್ದೇನೆ.. "

"ನನ್ನ ತಂಗಿಯನ್ನು ಸರೀಕರೆದುರು ಚೆನ್ನಾಗಿ ಬೆಳೆಸಬೇಕು ಎಂದು ಕಷ್ಟ ಪಟ್ಟು ಆಕೆಯನ್ನು ಪಟ್ಟಣದಲ್ಲಿ ಓದೋಕೆ ಬಿಟ್ಟಿರುತ್ತೇನೆ.. ಇತ್ತ ಆ ಹಳ್ಳಿಯ ಗೌಡನ ಮಗನೂ ಕೂಡ ಓದುತ್ತಿರುತ್ತಾನೆ.. ಅವರಿಬ್ಬರಿಗೂ ತಮ್ಮ ಕುಟುಂಬಗಳ ಕಲಹ ಗೊತ್ತಿದ್ದರೂ ಅರಿಯದ ವಯಸ್ಸು.. ಪ್ರೀತಿಗೆ ಶರಣಾಗುತ್ತಾರೆ.. "

"ಇತ್ತ ಹಳ್ಳಿಯಲ್ಲಿ ನಮ್ಮ ಎರಡು ಕುಟುಂಬಗಳ ಮಧ್ಯೆ ಹಸಿ ಹುಲ್ಲು ಹಾಕಿದರೂ ಬಗ್ ಅಂತ ಬೆಂಕಿ ಹೊತ್ತಿಕೊಳ್ಳುವಷ್ಟು ದ್ವೇಷ ಇರುತ್ತೆ.. ಒಂದು ಸಣ್ಣ ಸಣ್ಣ ಕಾರಣವೂ ಸಾಕು ತಗಾದೆ ಮಾಡೋಕೆ.. ಅನ್ನುವಷ್ಟು ದ್ವೇಷ.. "

"ಓದು ಮುಗಿಸಿ ಬರುವ ಈ ಎರಡು ಜೋಡಿ.. ಬೇಕಂತಲೇ ಪರಿಚಯವಿರದ ರೀತಿ ತೋರಿಸಿಕೊಂಡರೂ.. ಜೊತೆಯಲ್ಲಿ ಮನೆಯಲ್ಲಿ ಭೋಧನೆ ಮಾಡಿದ ರೀತಿ ಇರಬೇಕೆಂದುಕೊಂಡರೂ..  ಅದು ಸಾಧ್ಯವಾಗದೆ.. ಈ  ಪ್ರೀತಿಯ ಬಗ್ಗೆ ಎರಡೂ ಮನೆಗೆ ಗೊತ್ತಾಗುತ್ತದೆ.. ಆ ಜಟಾಪಟಿಯಲ್ಲಿ ನಾನು ನನ್ನ ತಂಗಿಗೆ ಹೊಡೆದು ಬಯ್ದು.. ಅಮ್ಮನ ಬೈಗುಳ ತಿಂದು ಮನೆಯಿಂದ ಹೊರಗೆ ಬಂದು ವರ್ಷಗಳ ಕಾಲ ಹೋಗದ ಸೋದರ ಮಾವನ ಮನೆಗೆ ಬರುತ್ತೇನೆ.. "

"ಅಲ್ಲಿ ನೋಡಿದರೆ.. ಊರಿನಲ್ಲಿ ದಿನವೂ ಸಿಕ್ಕು ಜಗಳವಾಡುತ್ತಿದ್ದ ಹುಡುಗಿ ಸಿಗುತ್ತಾಳೆ.. ಆಗ ನೆಡೆಯುವ ಚುಟುಕು ಸಂಭಾಷಣೆ ನನ್ನ ಮತ್ತು ಅವಳನ್ನು ಹತ್ತಿರ ಮಾಡುತ್ತದೆ.. ಮುಂದೆ ಎಲ್ಲವೂ ಸುಖಾಂತ. ಎರಡು ಕುಟುಂಬಗಳು ಒಂದಾಗುತ್ತವೆ.. ಒಂದಷ್ಟು ಚಕಮಕಿ ಇದೆ.. ಆದರೆ ನಿಮ್ಮನ್ನು ಬೋರ್ ಹೊಡೆಸದೆ ಚಿತ್ರವನ್ನು ತಯಾರಿಸಿದ್ದಾರೆ ನಿರ್ದೇಶಕರು.. "

"ಅಣ್ಣಾವ್ರೇ ಪಾತ್ರಗಳ ಬಗ್ಗೆ ಹೇಳಿ"

"ಎಲ್ಲರೂ ಬಲು ಪಸಂದಾಗಿ ಅಭಿನಯ ನೀಡಿದ್ದಾರೆ.. ಬಿ ಸರೋಜಾದೇವಿ ಅಭಿನಯ ಸರಸ್ವತಿ... ಹಳ್ಳಿಯ ಭಾಷೆ.. ಆ ವಯ್ಯಾರ.  ಜೋರು, ನಾಜೂಕಿಲ್ಲದೆ ಸಂಭಾಷಣೆ.. ನಂತರ ನಾನು ಅವಳ ಮಾವನ ಮಗ ಎಂದು ಗೊತ್ತಾದಾಗ ಬದಲಾದ ಹಾವ ಭಾವ ಎಲ್ಲವೂ ಸೊಗಸಾಗಿದೆ.. .. ಗೌಡನ ಪಾತ್ರಧಾರಿ ಈಶ್ವರಪ್ಪ ಸೊಗಸಾಗಿ ಅಭಿನಯಿಸಿದ್ದಾರೆ.. ಅವರ ಧ್ವನಿ ನನಗೆ ಬಲು ಇಷ್ಟ.. ಹಿತಮಿತವಾದ ಅಭಿನಯ .. ಇನ್ನೂ ಬಿ ಜಯಮ್ಮ, ಲಕ್ಷ್ಮೀದೇವಿ, ನನ್ನ ತಂಗಿ ಪಾತ್ರಧಾರಿ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ.. ಮನಸ್ಸು ಸೆಳೆಯುವ ಅಂಶ ಎಂದರೆ.. ಡೈಲಾಗ್ ಕಿಂಗ್ ಅನ್ನಿಸುವ ಬಾಲಣ್ಣ.. ಅವರ ಭಾಷೆಯ ಹಿಡಿತ, ಹಾವಭಾವ, ಏರಿಳಿತ.. ಅವರಿಂದ ನಾ ಕಲಿಯುವ ಅಭಿನಯ.. ಕೊನೆಯೇ ಇಲ್ಲ..ಕರುನಾಡಿನ ಉತ್ತಮ ಕಲಾವಿದರು ಅವರು.. ಜೊತೆಯಲ್ಲಿ ಅಶ್ವತ್ ಅವರ ಆರಾಮಾಗಿ ನಟಿಸುವ ಶೈಲಿ.. ನರಸಿಂಹರಾಜು ಅವರ ಹಾಸ್ಯ.. ಈ ಚಿತ್ರವನ್ನು ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತದೆ.. ಯಾವುದೇ ಮಸಾಲೆ ಪದಾರ್ಥ ಹೆಚ್ಚು ಕಮ್ಮಿ ಹಾಕದೆ ಹದವಾದ ಅಡುಗೆ ಇದು.. "

"ಎಲ್ಲಾ ಹೇಳಿದಿರಿ ಅಣ್ಣಾವ್ರೇ.. ನಿಮ್ಮ ಪಾತ್ರದ ಬಗ್ಗೆ ಹೇಳಲಿಲ್ಲ"

"ನಮ್ಮ ಬೆನ್ನು ನಮಗೆ ಕಾಣುತ್ತದೆಯೇ... ನನ್ನ ಅಭಿನಯದ ಬಗ್ಗೆ ನಾನೇ ಹೇಳೋದೇ.. ಅಭಿನಯ ಅನ್ನುವ ಕಸರತ್ತು ಮಾಡಿದ್ದೇನೆ ಅಷ್ಟೇ.. ಕೆದರಿದ ಕೂದಲು.. ಒರಟು ಸಂಭಾಷಣೆ.. ಅಷ್ಟೇ ಕಣಪ್ಪ ನನಗೆ ಗೊತ್ತಿರೋದು.. ನಾ ಈ ಚಿತ್ರವನ್ನು ನೋಡಿಲ್ಲ.. ನೋಡಿದ್ದರೆ ಹಿಂಸೆ ಆಗುತ್ತಿತ್ತೇನೋ.. ಇನ್ನೂ ಚೆನ್ನಾಗಿ ಅಭಿನಯಿಸಿಬಹುದಿತ್ತು ಎನ್ನುವ ತವಕ ಹೆಚ್ಚಾಗುತ್ತದೆ.. ಅದಕ್ಕೆ ನಾ ನೋಡಿಲ್ಲ.. "

"ಅಣ್ಣಾವ್ರೇ.. ಈ ಚಿತ್ರದಲ್ಲಿ ನಿಮ್ಮ ಅಭಿನಯ ಹಿಂದಿನ ಚಿತ್ರಗಳ ಸಮಾಗಮ ಎನ್ನಬಹುದು.. ಕೋಪ, ಆಕ್ರೋಶ, ಉದ್ವೇಗ, ಪ್ರೀತಿ, ಒದ್ದಾಟ, ಹೊಡೆದಾಟ, ತಮ್ಮವರಿಗೆ ಮಿಡಿಯುವ ಅಂತಃಕರಣ, ಪ್ರತಿ ದೃಶ್ಯದಲ್ಲೂ ಎದ್ದು ಕಾಣುವ ಅಚ್ಚುಕಟ್ಟುತನ ಇದೆ ನಿಮ್ಮ ಅಭಿನಯದ ಹೂರಣ ಈ ಚಿತ್ರದಲ್ಲಿ.. ನೀರಿನ ಹಾಗೆ ನಿರ್ದೇಶಕರು ನಿಮ್ಮನ್ನು ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಸಾಗಿಸಿದ್ದಾರೆ.. ಜೊತೆಗೆ ಇದು ಬಿಡುಗಡೆಯಾದ ಹತ್ತನೇ ಚಿತ್ರ ಎನ್ನುವುದು ವಿಶೇಷ.. ಒಂದು ಮೈಲಿಗಲ್ಲು ದಾಟಿದ ಖುಷಿ ನಿಮಗೆ.. ಹಾಗೆಯೇ ನಿಮ್ಮ ಚಿತ್ರಗಳ ಬಗ್ಗೆ ಈ ಅಲ್ಪನಿಗೆ ತಿಳಿದಷ್ಟು ಬರೆಯುತ್ತಿರುವ ನನಗೂ ಒಂದು ಮೈಲಿಗಲ್ಲು.. ಎರಡಂಕಿಗೆ ಬಂದ ಖುಷಿ.. "


"ಏನೋಪ್ಪ.. ನಿನಗೆ ಏನೂ ಹೇಳೋದು.. ಏನೋ ಹೇಳಿದ್ದೀಯಾ.. ನಿನ್ನ ಅಭಿಮಾನಕ್ಕೆ ಧನ್ಯವಾದಗಳು.. ಮುಂದಿನ ಚಿತ್ರವನ್ನು ಬೇಗ ತೆರೆಕಾಣಿಸಪ್ಪಾ .. ಜೀವನದಲ್ಲಿ ಏಳು ಬೀಳುಗಳ ಸಹಜ.. ಗೊತ್ತಿಲ್ಲವೇ ನಿನಗೆ ಯೋಗಿ ಪಡೆದದ್ದು ಯೋಗಿಗೆ.. ಜೋಗಿ ಪಡೆದದ್ದು ಜೋಗಿಗೆ.. "

"ಹೌದು ಅಣ್ಣಾವ್ರೇ.. ನಿಮ್ಮ ಆಶೀರ್ವಾದ ಹೀಗೆ ಇರಲಿ.. ಬರುವೆ ನಿಮ್ಮ ಮತ್ತೊಂದು ಚಿತ್ರದ ಜೊತೆಗೆ.. "

'ಶುಭವಾಗಲಿ ಶ್ರೀಕಾಂತಾ.. "

Thursday, November 2, 2017

ಟಿ ಎನ್ ಬಾಲಕೃಷ್ಣ... ಕಣ್ತೆರೆದು ನೋಡಪ್ಪ ಎಂದರು (ಚಿತ್ರ - ೨)

"ಏನೋ ... ಏನಪ್ಪಾ ಕಾಂತಪ್ಪ.. ಹೇಗಿದ್ದೀಯಾ.. ನನ್ನ  ಚಿತ್ರಗಳ ಬಗ್ಗೆ ಬರೀತೀಯ ಅಂತ ಹೇಳಿದ್ದೆ.. ಬೂತಯ್ಯನ ಬುಂಡೇಕ್ಯಾತ ಆದ ಮೇಲೆ ಮತ್ತೆ ನೀ ನನಗೆ ಕಾಣಲಿಲ್ಲ.. ಶುರು ಮಾಡೋಣ ಮುಂದಿನ ಚಿತ್ರವನ್ನ... "

"ಬಾಲಣ್ಣ ಖಂಡಿತ.. ನಾನೂ ಯಾವುದೋ ಜಂಜಾಟದಲ್ಲಿ ಸಿಕ್ಕಿದ್ದೇ .. ಈಗ ಮತ್ತೆ ಚಾಲನೆ .. ಇನ್ನು ಮುಂದೆ ಇದು ಅವಿರತವಾಗಿ ನೆಡೆಯುವಂತೆ ಆಶೀರ್ವದಿಸಿ.. "

"ನಾ ಜೊತೆ ಇದ್ದೀನಪ್ಪಾ.. ಮುಂದುವರೆಸು .. ನಿನ್ನ  ಜೊತೆಯಲ್ಲಿ ಕೂತು ನನಗೂ ನನ್ನ  ಚಿತ್ರಗಳನ್ನ ಇನ್ನೊಮ್ಮೆ ನೋಡಿದ ಹಾಗೆ ಆಗುತ್ತದೆ.. ಅಂದ ಹಾಗೆ ಇವತ್ತು ಯಾವ ಚಿತ್ರದ ಬಗ್ಗೆ ಮಾತಾಡೋಣ.. "

"ಬಾಲಣ್ಣ .. ಖಳನಾಯಕರು ಅನೇಕರು ಚಿತ್ರರಂಗದಲ್ಲಿ ಬೆಳೆದಿದ್ದಾರೆ.. ಬೆಳೆಸಿದ್ದಾರೆ.. ಆದರೆ ಸದಾ ಕಾಡುವುದು ನಿಮ್ಮ ದಾಸಣ್ಣ ಪಾತ್ರ"

"ಓಹೋ ಕಣ್ತೆರದು  ನೋಡು ಅಂತೀಯಾ.. ." ತಮ್ಮ ಶೈಲಿಯಲ್ಲಿ ಗಹಗಹಸಿ ನಕ್ಕರು.. 

"ಹೇಳಿ ಬಾಲಣ್ಣ ಆ ಪಾತ್ರದ ಬಗ್ಗೆ ಮತ್ತು ಕೆಲವು ಪಂಚ್ ಸಂಭಾಷಣೆಗಳೊಂದಿಗೆ.. "

" ಮನುಷ್ಯ ಅವಕಾಶವಾದಿ ಸಮಯಕ್ಕೆ ಸಿಕ್ಕ ಅವಕಾಶವನ್ನು ತನ್ನ ಅವಶ್ಯಕತೆಗೆ ಬಳಸಿಕೊಳ್ಳುತ್ತಾ ಸಾಗುತ್ತಾನೆ.. ಅವನು ಆ ಹಾದಿಯಲ್ಲಿ ಸಾಗುವಾಗ ತಪ್ಪು ಒಪ್ಪುಗಳ ಪರಿವೆ ಇರೋಲ್ಲ.. ತಾ ಸಾಗಬೇಕು ಬಾಳಬೇಕು.. ಅದು  ಹೇಗಾದರೂ ಸರಿ.. ಅಂತಹ ತತ್ವವನ್ನು ನಂಬಿದ ಪಾತ್ರ ದಾಸಣ್ಣನದು.. 

ಈ ಚಿತ್ರದ ಪಾತ್ರದ ಬಗ್ಗೆ ಹೇಳಿದಾಗ ನನಗೆ ಕೊಂಚ ಅಳುಕಿತ್ತು... ಕುಂಟು ನೆಡೆಯ, ವಕ್ರ ಬುದ್ದಿಯ.. ಸದಾ ತಾನಾಡುತ್ತಿರುವ ಮಾತಿಗಿಂತ, ಇರುವ ಸನ್ನಿವೇಶವನ್ನು ದಾಟಿ ಯೋಚಿಸುವ ಪಾತ್ರ.. ನನಗೆ ಆಗುತ್ತದೆಯಾ ಈ ಪಾತ್ರ  ಎನ್ನುವ ಅಳುಕಿತ್ತು.. ಆದರೆ ಉಳಿಯಬೇಕು ಎಂದರೆ ಪಾತ್ರಗಳು ಬೇಕು ಎನ್ನುವಂತಿದ್ದ ಕಾಲಘಟ್ಟ ಅದು.. ಸರಿ ಆಗಿದ್ದಾಗಲಿ ಎಂದು ಒಪ್ಪಿಕೊಂಡೆ.. ಇನ್ನೊಂದು  ವಿಷಯ ಗೊತ್ತಾ ಕಾಂತಪ್ಪ... ಅಲ್ಲಿಯ ತನಕ ನಾ ಮಾಡುತ್ತಿದ್ದುದು ಸ್ವಲ್ಪ ವಿಚಿತ್ರವಾದ ಈ ರೀತಿಯ ಪಾತ್ರಗಳೇ.. ಆದರೆ ಈ ದಾಸಣ್ಣ ಪಾತ್ರ.. ಸೀಸದ ಕಡ್ಡಿ ಅದೇ ಗೊತ್ತಲ್ಲ ನಿಮ್ಮ ಭಾಷೆಯ ಪೆನ್ಸಿಲ್.. ಅದನ್ನು ಚೂಪು ಮಾಡಿದಂತೆ ಈ ಪಾತ್ರ ನನ್ನ ಅನೇಕ ಪಾತ್ರಗಳ ಸಾರವನ್ನು ಭಟ್ಟಿ ಇಳಿಸಿದಂತೆ ಸೃಷ್ಟಿಯಾಗಿತ್ತು.. ಸರಿ ಮಾಡಿಯೇ ಬಿಡೋಣ ಅಂತ ನಿರ್ಧಾರವಾಯಿತು.. ತಗೋ ಆ ಚಿತ್ರದ ಪಾತ್ರದ ಬಗ್ಗೆ ಮಾತಾಡೋಣ.. !



*****

ಗೋಪು ಪಾತ್ರ ರಾಜಣ್ಣ ಮಾಡಿದ್ದು.. ಬಾಲ್ಯದಲ್ಲಿ ಕುರುಡಾಗಿದ್ದ ಕಣ್ಣುಗಳನ್ನು ಸರಿ ಪಡಿಸಿಕೊಳ್ಳಲು ದೋಣಿಯಲ್ಲಿ ಬರುವಾಗ.. ಅಲೆಗಳಿಗೆ ಸಿಕ್ಕಿ ದೋಣಿ ಮಗುಚಿ.. ತಂದೆ ಕಾಲವಾಗುತ್ತಾರೆ.. ತಂಗಿ ಮತ್ತು ಗೋಪು ಬೇರೆಯಾಗುತ್ತಾರೆ.. ನದಿಯ ದಡದಲ್ಲಿದ್ದ ಗೋಪುವಿನ ಹತ್ತಿರ ಬರುವ ದಾಸಣ್ಣ.. ಮೊದಲು ಗೋಪು ಬದುಕಿದ್ದಾನೋ ಇಲ್ಲವೋ ಪರೀಕ್ಷಿಸಿ ನಂತರ.. 

"ಏಳೋ ಅಣ್ಣ.. ಏನಪ್ಪಾ ಇಲ್ಲಿ ಬಿದ್ದಿದೀಯ.. " ಎಂದು ಕೇಳುತ್ತಾ ಗೋಪುವನ್ನು ಎಬ್ಬಿಸುತ್ತಾನೆ.. ಅವನಿಗೆ ಕಣ್ಣು ಕಾಣುವುದಿಲ್ಲ ಎನ್ನುವ ಸತ್ಯವನ್ನು ಪರೀಕ್ಷಿಸಲು... ಅವನನ್ನು ನೆಡೆಯಲು ಬಿಟ್ಟು.. ತಾನು ಒಂದು ಬದಿಯಲ್ಲಿ ಎತ್ತರದಲ್ಲಿ ಕೂರುತ್ತಾನೆ.. ಎಡವಿ ಬೀಳುವ ಗೋಪುವನ್ನು ಮತ್ತೆ ಹಿಡಿದೆತ್ತಿ.. "ನಿಜ ಕಣೋ ಅಣ್ಣ..  ನಿನಗೆ ಸತ್ಯವಾಗಿ ಕಣ್ಣು ಕಾಣೋಲ್ಲ.. " ಎಂದು ಹೇಳುತ್ತಾ  ತನ್ನ ಮನೆಗೆ ಕರೆತರುತ್ತಾನೆ.. 

ಅಲ್ಲಿಂದ ಶುರು ದಾಸಣ್ಣನ ಅವತಾರ.. 

ಬೆಳಿಗ್ಗೆ  ಎದ್ದು ಕೂತಾಗ.. ಗೋಪು "ಏನಣ್ಣ ಇದೇನಾ ನಿನ್ನ ಮನೆ"

"ಹೌದಪ್ಪ ಇದೆ ನನ್ನ ಮನೆ.. ಆಡಳಿತ ಮಾತ್ರ ಒಂದು  ಪಿಶಾಚಿಯದು".. 

ಅಷ್ಟರಲ್ಲಿ ಮನೆಯ ಒಡತಿ ಬರುತ್ತಾಳೆ.. "ಮೊದಲು ಬಾಡಿಗೆ ಬಿಸಾಕು ಆಮೇಲೆ ಮುಂದಿನ  ಮಾತು" 

"ಏಯ್.. ಯಾರ ಹತ್ತಿರಾ ಮಾತಾಡುತ್ತಿದ್ದೀಯ.. ಹೆಚ್ಚಿಗೆ ಮಾತಾಡಿದರೆ ಈ ಮನೆನೇ ನಿನ್ನದಲ್ಲ ಎನ್ನಿಸಿ ಬಿಡುತ್ತೇನೆ ಹುಷಾರ್" ಎಂದಾಗ.. 

ಮತ್ತೆ ಗದರುತ್ತಾಳೆ "ಓಹ್ ಬಂದ್ಬುಟ್ಟಾ ಇಲ್ಲೊಬ್ಬ ಪೂಟಲಾಯರಿ.. ಇದ್ಯಾರಿದು.. " 

ಹೊಳೆದಡದಲ್ಲಿ ಬಿದ್ದಿದ್ದ.. ಕರ್ಕೊಂಡು ಬಂದೆ.. ಬೇಡ ಅಂದ್ರೆ ಹೇಳು.. ಕಳಿಸಿಬಿಡುತ್ತೇನೆ.. "

ಹೀಗೆ ಸಾಗುತ್ತದೆ ಸಂಭಾಷಣೆ ವೈಖರಿ.. 

ಮನೆಯ ಒಡತಿ ತಿನ್ನಲು ತಿಂಡಿ ತಂದುಕೊಡುತ್ತಾಳೆ 

ಗೋಪು "ಅಣ್ಣ ದೇವರ ಮನೆ ಎಲ್ಲಿದೆ  ಅಣ್ಣ  ಕೈ ಮುಗಿಯಬೇಕು.. ".. ನಾನಿರಕ್ಕೆ ಜಾಗವಿಲ್ಲ.. ಅದಕ್ಕೆ ದೇವರನ್ನು ಬಯಲಿಗೆ ಬಿಟ್ಟಿದ್ದೇನೆ.. " ಎಂಥಹ ಸಂಭಾಷಣೆ.. 

ಕಟ್ಟೆಯ ಗುಡಿಗೆ ಬಂದಾಗ .. ಗೋಪು ಹಾಡಲು ಶುರು ಮಾಡುತ್ತಾರೆ.. "ಕಲ್ಲು ಸಕ್ಕರೆ ಕೊಳ್ಳಿರೋ"  ಹಾಡುತ್ತಾ ಗೋಪು ತನ್ಮಯರಾಗಿದ್ದಾಗ ಅಲ್ಲಿ ಸೇರಿದ್ದ ಜನಸಾಗರವನ್ನು ಕಂಡು ದಾಸಣ್ಣನಿಗೆ ಯೋಚನೆ ಬರುತ್ತೆ ತಕ್ಷಣ ತಲೆಗೆ ಸುತ್ತಿದ್ದ ರುಮಾಲನ್ನು ತೆಗೆದು.. ಹಾಸಿ ತನ್ನ ಜೇಬಿನಲ್ಲಿದ್ದ ಪುಡಿಗಾಸನ್ನು ಹಾಕಿ ಮಿಕ್ಕವರ ಹತ್ತಿರ ಯಾಚಿಸುತ್ತಾನೆ.. ಎಲ್ಲರೂ ಪಾಪ ಎಂದುಕೊಂಡು ಕಾಸನ್ನು ಹಾಕುತ್ತಾರೆ.. 



"ಗೋಪಣ್ಣ ದಿನ ಇಂತಹ ಪದಗಳನ್ನು ಬಿಡ್ತಾ ಇರು.. ಚಿನ್ನದ ಮಳೆಯನ್ನೇ ಸುರಿಯುತ್ತದೆ.. " ಎಂದಾಗ ಗೋಪು "ಏನಣ್ಣ .. ಈ ರೀತಿ ಸಂಪಾದಿಸಬೇಕೇ .." ಎಂದು ಕುಪಿತ ಗೊಳ್ಳುತ್ತಾನೆ.. 

"ಏಯ್ ಏನು ಮಾತಾಡ್ತಾ ಇದ್ದೀಯ. ನಾನೇನು ಬುಡುಬುಡುಕೆ ಆಡತಾ ಇದ್ದೀನ.. ಕಾಸು ಕೊಡಬೇಕು ಅಂತ ಇದ್ದೀನೇನೇಯ್ಯ.. ನಿನಗೆ ಸಹಾಯ ಮಾಡೋಣ  ಅಂದರೆ ಹೀಗಾ ಮಾತಾಡೋದು.. " ಅಂತ ದಬಾಯಿಸುತ್ತಾನೆ.. ಶಾಂತವಾದ ಗೋಪುವಿನ ಜೊತೆ ಹೋಟೆಲಿಗೆ ಬಂದು .. "ಇರೋದು ಮೂರು ಮತ್ತೊಂದು ಕಾಸು.. ಅದೇನು ಹೊಟ್ಟೆ ತುಂಬಿಕೊಳ್ಳೋದೋ" ಅಂತ ನಾಟಕ ಮಾಡುತ್ತಾ..  ಮಾಣಿಗೆ ಒಂದು ಪ್ಲೇಟ್ ಇಡ್ಲಿ ಗೋಪುವಿಗೆ ಹೇಳಿ..ಬೆಣ್ಣೆ ಮಸಾಲೆ.. . ಬಾದಾಮಿ ಹಾಲು ನನಗೆ ಕೊಡು ಅಂತ ಮೆಲ್ಲಗೆ ಹೇಳುತ್ತಾನೆ"

ಅಲ್ಲಿಂದ ಬಟ್ಟೆ ಅಂಗಡಿಗೆ ಹೋಗಿ "ಗೋಪಣ್ಣ ನಿನ್ನ ಅಂಗಿ ಹರಿದು ಹೋಗಿದೆ.. ನನ್ನ ಅಂಗಿಯನ್ನೇ ಹಾಕಿಕೋ.. ಊರೆಲ್ಲ ಬಟ್ಟೆ ಅಂಗಡಿ .. ಬೆತ್ತಲೆ ಇರುವವರನ್ನು ಕೇಳೋರಿಲ್ಲ.. " ಅಂತ ನಾಟಕೀಯವಾಗಿ ಹೇಳುತ್ತಾನೆ 

ಹೀಗೆ ಸಾಗುತ್ತದೆ ದಾಸಣ್ಣನ ಅವತಾರ.. ಬೆಣ್ಣೆ ಮೇಲೆ ಕೂದಲು ತೆಗೆದ ಹಾಗೆ ಮಾತಾಡುತ್ತಾ ತನ್ನ ಭವಿಷ್ಯವನ್ನು ಅರಸುತ್ತಾ ಸಾಗುವ ದಾಸಣ್ಣ.. ಗೋಪುವಿನ ಹಾಡಿಗೆ ಜನ ಹಾಕುವ ಕಾಸನ್ನು ಲಪಟಾಯಿಸುತ್ತಾನೆ .. ಅದನ್ನು ನೋಡಿದ ಮನೆಯ ಒಡತಿ ದಾಸಣ್ಣನನ್ನು ಮನೆಯಿಂದ ಹೊರಗೆ ಹಾಕುತ್ತಲೇ.. ಅಲ್ಲಿಂದ ಒಂದು ಪೇಪರ್ ಮಾರುವ ಅಂಗಡಿಗೆ ಬಂದು.. ಮಾರ್ವಾಡಿಗೆ ಮೋಸ ಮಾಡಿ ಆ ಪೇಪರ್ ಮಾರುವ ಅಂಗಡಿಯನ್ನು ತನ್ನದು ಮಾಡಿಕೊಳ್ಳುತ್ತಾನೆ ..ಅಲ್ಲಿ ಬಂಡಲು ಗಟ್ಟಲೆ ಬಿದ್ದಿದ್ದ  ಗೋಪುವಿನ ಸಾಹಿತ್ಯದ ಹಾಳೆಗಳನ್ನು ತನ್ನದು ಎಂದು ಹೇಳಿಕೊಂಡು.. ಆ ಅಂಗಡಿಯನ್ನು ಬಿಟ್ಟು ಪುಸ್ತಕ ಪ್ರಿಂಟ್ ಮಾಡುವ ಸಾಹಸಕ್ಕೆ ಕೈಹಾಕುತ್ತಾನೆ.. 

ಹೀಗೆ ತನ್ನ ದಾರಿಯಲ್ಲಿ ಬಂದವರಿಗೆಲ್ಲಾ ನಾಮ ಹಾಕುತ್ತಾ.. ತನ್ನ ನಾಟಕೀಯ ಮಾತುಗಳಿಂದ ಮರುಳು ಮಾಡುತ್ತಾ ಸಾಗುವ ದಾಸಣ್ಣನ ಪಾತ್ರವನ್ನು ಅಚ್ಚುಕಟ್ಟಾಗಿ ಪೋಷಿಸಿದ್ದಾರೆ.. ಅವರ ಸಂಭಾಷಣೆಯ ವೈಖರಿಗೆ ತಲೆಬಾಗಲೇ ಬೇಕು.. 

ರಾಗವಾಗಿ ಮಾತಾಡುವ ಶೈಲಿ, ಕಣ್ಣಲ್ಲೇ ಮೋಸ ಮಾಡುವ ನೋಟ.. ವಕ್ರ ದೃಷ್ಟಿ.. ಕುಂಟು ನೆಡೆ... ಹೀಗೆ ವಿಚಿತ್ರ  ಅಭಿನಯ ಬಾಲಣ್ಣನದು.. 

"ನಮ್ದುಕೆ ಹೆಣ ನಿಮ್ದುಕೆ ದಾನ" ಅಂತ ಮಾರ್ವಾಡಿ ಹೇಳಿದಾಗ "ನಿನ್ನ ಹೆಣ ಸುಡುಗಾಡಿಗೆ ದಾನ"  ಎನ್ನುತ್ತಾರೆ ದಾಸಣ್ಣ 

"ಏಯ್  ನಿನಗ್ಯಾರು ಅಕ್ಕ ತಂಗಿ ಇಲ್ವಾ" ಅಂತ ಮನೆಯೊಡತಿ ಹೇಳಿದಾಗ "ನನ್ನಪ್ಪ ಮಾಡಿದ ತಪ್ಪಿಗೆ ನನ್ಯಾಕೆ ಬಯ್ತೀಯಾ"

"ಗೋಪು.... ಅಮೃತರಾಯರು ಊರಲ್ಲಿ ಇಲ್ವಂತೆ.. ಅವರಿದ್ದಿದ್ದರೆ ಬರಿ ಕೈಯಲ್ಲಿ ಕಣ್ಣು ಕಿತ್ತು ಕಣ್ಣನ್ನು ಇಟ್ಟುಬಿಡುತ್ತಿದ್ದರು.. ಮಿಕ್ಕ ಕೆಲವರು ಇದ್ದಾರೆ.. ಅಲ್ಪ ಸ್ವಲ್ಪ ಕಾಣುವ ಕಣ್ಣನ್ನು ಇಂಗಿಸಿ ಬಿಡುತ್ತಾರೆ.. ಬೇಕಾದರೆ ಹೋಗೋಣ ಬಾ"

"ನಿನಗೆ ಕಣ್ಣು ಬಂದು ನಾ ಮಾಡುವ ಸಹಾಯ ನೋಡಿದರೆ ನನ್ನನ್ನು  ಜನುಮ ಜನುಮಕ್ಕೂ ಮರೆಯೋದಿಲ್ಲ ಕಣಣ್ಣ"

"ಹೇಗೂ ಕೈಯಲ್ಲಿ ಪರಕೆ ಹಿಡಿದಿದ್ದೀಯ ಅಂಗೇ ಕಸ ಗುಡಿಸಿಬಿಡು"  ತನಗೆ ಹೊಡೆಯಲು ಪರಕೆ ಹಿಡಿದು ಬಂದ ಮನೆಯೊಡತಿಗೆ ಹೇಳುವ ಮಾತು.. 

ಹೀಗೆ ಇಡೀ ಚಿತ್ರದಲ್ಲಿ ಈ ರೀತಿಯ ಪಂಚಿಂಗ್ ಸಂಭಾಷಣೆ ಇದ್ದೆ ಇದೆ.. ರಾಜ್, ನರಸಿಂಹರಾಜು, ಲೀಲಾವತಿ ಮತ್ತು ರಾಜ್ ತಂಗಿಯನ್ನು ಇಡೀ ಚಿತ್ರದಲ್ಲಿ ಕಾಡುತ್ತಾರೆ.. ಕುಟಿಲ ಪಾತ್ರಧಾರಿ ಹೀಗೆ ಇರಬೇಕು ಎನ್ನುವಂತೆ ಅಭಿನಯಿಸಿದ್ದಾರೆ.. ಮಾಮೂಲಿ ಖಳನಾಯಕರಂತೆ ಕೂಗುತ್ತಾ, ಕಿರುಚುತ್ತಾ, ಕೈ ಸಿಕ್ಕಿದ್ದನ್ನು ಒಡೆಯುತ್ತಾ ಇರದೇ.. ತನ್ನದೇ ವಿಶಿಷ್ಟ ಶೈಲಿಯಲ್ಲಿ ಅಭಿನಯನೀಡಿದ್ದಾರೆ .. 

ಈ ಚಿತ್ರದ ಬಗ್ಗೆ ಬರೆದಷ್ಟು .. ಈ ಪಾತ್ರದ ಬಗ್ಗೆ ಬರೆದಷ್ಟು ಮುಗಿಯುವುದಿಲ್ಲ.. ಅದಕ್ಕೆ ಕಾರಣ ಬಾಲಣ್ಣ.. ಇಡೀ ಚಿತ್ರವನ್ನು ಅಕ್ಷರಶಃ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.. ಚಿತ್ರದ ನಾಯಕ ರಾಜ್ ಆಗಿದ್ದರೂ.. ಬಾಲಣ್ಣ ಅವರ ಅಭಿನಯಕ್ಕೆ, ಸಂಭಾಷಣೆಗಾಗಿ ಹಲವಾರು  ಬಾರಿ ನೋಡಿದ್ದೇನೆ.. ಆದರೂ ಪ್ರತಿಸಾರಿ ನೋಡಿದಾಗಲೂ ಬಾಲಣ್ಣ ಅವರ ಅಭಿನಯದ ವಿಭಿನ್ನ ಆಯಾಮ ಕಾಣುತ್ತದೆ.. ! 

ದಾಸಣ್ಣನ ಪಾತ್ರದ ಬಗ್ಗೆ ಎಷ್ಟು ಪರಿಣಾಮಕಾರಿಯಾಗಿದೆ ಅಂದರೆ ಇನ್ನೊಂದು ಚಿತ್ರದಲ್ಲಿ ಬಾಲಣ್ಣ  .. "ನನ್ನ ಬಗ್ಗೆ ನಿನಗೆ ಸರಿಯಾಗಿ ತಿಳಿಯಬೇಕೆಂದರೆ ಕಣ್ತೆರದು ನೋಡಬೇಕು ಅಣ್ಣ" ಎನ್ನುತ್ತಾರೆ.. 

ಆ ಮಟ್ಟಿಗೆ ಈ ಚಿತ್ರ ಮತ್ತು ಪಾತ್ರ ಯಶಸ್ವಿಯಾಗಿದೆ.. !

ಖಳಪಾತ್ರದಲ್ಲಿಯೂ ಹಾಸ್ಯ ಉಕ್ಕಿಸಬಹುದು ಎಂದು ತೋರಿಸಿದ ಈ ಪಾತ್ರವನ್ನು ಬಾಲಣ್ಣ ಬಿಟ್ಟರೆ ಮತ್ಯಾರು ಇಷ್ಟು ಪರಿಣಾಮಕಾರಿಯಾಗಿಸಲು ಸಾಧ್ಯವಿರಲಿಲ್ಲ .. 

ಬಾಲಣ್ಣ ನಿಮ್ಮ ಜನುಮದಿನಕ್ಕಿಂದು ಒಂದು ಸುಂದರ  ಶುಭಾಷಯ ಕೋರೋಣ ಅಂದುಕೊಂಡಾಗ ಮೂಡಿದ್ದು ಈ ಲೇಖನ!!!

ನೀವು  ಕರುನಾಡ ಚಿತ್ರ ರಸಿಕರ ಹೃದಯದ ಸಾಮ್ರಾಜ್ಯದಲ್ಲಿ ಅಜರಾಮರ.. !

Monday, April 24, 2017

ಅಣ್ಣಾವ್ರ ನಾಯಕತ್ವದಲ್ಲಿ ನಾಯಕಿಯರು - ಜನುಮದಿನ (೨೦೧೭)

ಬೆಂಗಳೂರಿನಲ್ಲಿ ದೂರದರ್ಶನದ ಆರಂಭದ ದಿನಗಳು.. ಆಗ ಮನೆಗೊಂಡು ದೂರದರ್ಶನ ಇರಲಿಲ್ಲ.. ಗಲ್ಲಿಗೊಂದು ಅಥವಾ ಬಡಾವಣೆಗೊಂದು ಇರುತ್ತಿತ್ತು... ನಮ್ಮ ಆಟಪಾಠಗಳ ಮದ್ಯೆ ಒಂದಷ್ಟು ದೂರದರ್ಶನ ವೀಕ್ಷಣೆ.. ಅಕ್ಕ ಪಕ್ಕ ಮನೆಯಲ್ಲಿ.. ಆಗೆಲ್ಲಾ  ಹಳೆಯ ಕನ್ನಡ ಚಿತ್ರಗಳನ್ನು ಬಿತ್ತರಿಸುತ್ತಿದ್ದರು.. ನಮಗೆ ಹೊಡೆದಾಟದ ಚಿತ್ರಗಳು ಇಷ್ಟವಾಗುತ್ತಿದ್ದವು, ಬಾಕ್ಸಿಂಗ್, ಫೈಟಿಂಗ್ ಇರಬೇಕು.. ಅಂಥಹ ಚಿತ್ರಗಳನ್ನು ನೋಡುತ್ತಿದ್ದೆವು..

ಗಣೇಶನ ಹಬ್ಬ, ಅಣ್ಣಮ್ಮ, ರಾಜ್ಯೋತ್ಸವ.. ಈ ಸಂದರ್ಭಗಳಲ್ಲಿ ರಸ್ತೆಯಲ್ಲಿ ಬಿಳಿ ಪರದೆ ಕಟ್ಟಿ ಕಪ್ಪು ಬಿಳುಪು ಚಿತ್ರಗಳನ್ನು ತೋರಿಸುತ್ತಿದ್ದರು.. ರತ್ನಗಿರಿ ರಹಸ್ಯ, ಶಿವರಾತ್ರಿ ಮಹಾತ್ಮೆ, ಧೂಮಕೇತು, ಕಾಸಿದ್ರೆ ಕೈಲಾಸ, ಸಿ ಐ ಡಿ ರಾಜಣ್ಣ ಹೀಗೆ ಅನೇಕ ಚಿತ್ರಗಳನ್ನು ರಸ್ತೆಯಲ್ಲಿ ಕೂತು ಇಲ್ಲವೇ ಮಲಗಿಕೊಂಡು ನೋಡುತ್ತಿದ್ದೆವು..

ಆಗೊಮ್ಮೆ ಈಗೊಮ್ಮೆ ನಮ್ಮ ಮನೆಯಿಂದ ಚಲನ ಚಿತ್ರಗಳಿಗೆ ಕರೆದೊಯ್ಯುತ್ತಿದ್ದರು, ಆಗ ನಾವು ತ್ಯಾಗರಾಜ ನಗರದಲ್ಲಿದ್ದೆವು.. ವಿದ್ಯಾಪೀಠ ಬಳಿಯ ಮಂಜುನಾಥ ಟೆಂಟ್, ಹನುಮಂತನಗರದ ರಾಜೇಶ್ವರಿ, ಗಿರಿನಗರದ ವೆಂಕಟೇಶ್ವರ, ತ್ಯಾಗರಾಜನಗರದ ನಂಜುಡೇಶ್ವರ ನಮ್ಮ ಮನೆಗೆ ಹತ್ತಿರವಿದ್ದ ಟೆಂಟ್ಗಳು.. ೧.೨೫ ಕೊಟ್ಟರೆ ನೆಲ, ೨.೫೦ ಕೊಟ್ಟರೆ ಖುರ್ಚಿಗೆ ಟಿಕೆಟ್ ಸಿಗುತ್ತಿತ್ತು.

ಈ ರೀತಿ ನಮಗೆ ಸಿನೆಮಾಗಳ ಹುಚ್ಚು ಹತ್ತಿತ್ತು.. ಬೀದಿ ಸಿನೆಮಾಗಳಲ್ಲಿ ಕಪ್ಪು ಬಿಳುಪಿನ ಚಿತ್ರಗಳಲ್ಲಿ ರಾಜ್ ಒಂದು ರೀತಿಯಲ್ಲಿ ಕಾಣುತ್ತಿದ್ದರು, ಟೆಂಟ್ ಸಿನೆಮಾಗಳಲ್ಲಿ ಬಣ್ಣ ಬಣ್ಣದ ಪೋಷಾಕುಗಳಲ್ಲಿ ಅಣ್ಣಾವ್ರು ಇನ್ನೊಂದು ಬಗೆ ಭಿನ್ನವಾಗಿ ಕಾಣುತ್ತಿದ್ದರು. ಚಲಿಸುವ ಮೋಡಗಳು, ಸಮಯದ ಗೊಂಬೆ, ಭಕ್ತ ಪ್ರಹ್ಲಾದ, ಹೊಸಬೆಳಕು, ಭಾಗ್ಯದ ಲಕ್ಷ್ಮಿ ಬಾರಮ್ಮ, ಹಾವಿನ ಹೆಡೆ, ನಾನೊಬ್ಬ ಕಳ್ಳ ಇವೆಲ್ಲಾ ನಾವೆಲ್ಲಾ ಕಣ್ಣು ಬಿಟ್ಟು ಪ್ರಪಂಚವನ್ನು ನಮ್ಮ ಕಣ್ಣಲ್ಲೇ ಕಾಣುವಾಗ ತೆರೆಕಂಡ ಚಿತ್ರಗಳು.. ಎಂಭತ್ತರ ದಶಕದ ಚಿತ್ರಗಳಲ್ಲಿ ಅಣ್ಣಾವ್ರು ವಿಭಿನ್ನವಾಗಿ ಕಾಣುತ್ತಿದ್ದರು. ಸಂಗೀತ, ಗಾಯನ, ಅಭಿನಯ, ಛಾಯಾಚಿತ್ರಣ, ನೃತ್ಯ, ಹೊಡೆದಾಟ ಎಲ್ಲವೂ ಬಣ್ಣ ಬಣ್ಣವಾಗಿ ಕಾಣುತ್ತಿದ್ದವು.

ಆಗ ಮನಸ್ಸು ತುಲನೆ ಮಾಡುತ್ತಿತ್ತು.. ಯಾವ ಕಾಲಘಟ್ಟದ ಅಣ್ಣಾವ್ರ ಚಿತ್ರಗಳು ಅದರಲ್ಲೂ ನಾಯಕಿಯರು ಇಷ್ಟವಾಗುತ್ತಾರೆ ಅಂತ.. ನಾವು ನೋಡಿದ ಬಹುಪಾಲು ಕಪ್ಪು ಬಿಳುಪು ಚಿತ್ರಗಳು ಬಿಳಿ ಪರದೆಯ ಮೇಲೆ ಕಪ್ಪು ಕಪ್ಪು ಗೆರೆಗಳು ಕಾಣಿಸುತ್ತಿದ್ದವು (ರೀಲ್ ನಲ್ಲಿ ಸಿನಿಮಾಗಳು ಇರುತ್ತಿದ್ದರಿಂದ ಹಾಗಾಗುತ್ತಿತ್ತು ಅಂತ ಪ್ರೊಜೆಕ್ಷರ್ ಆಪರೇಟರ್ ಗಳು ಹೇಳುತ್ತಿದ್ದರು).. ಆದರೆ ಬಣ್ಣ ಬಣ್ಣದ ಟೆಂಟ್ ಸಿನೆಮಾಗಳಲ್ಲಿ ಅಣ್ಣಾವ್ರು ಅಂದವಾಗಿ ಕಾಣುತ್ತಿದ್ದರು, ಅದರಲ್ಲೂ ನಾಯಕಿಯರು ಫಳ ಫಳ ಹೊಳೆಯುತ್ತಿದ್ದರು.. ನಾಯಕಿರನ್ನು ನೋಡಿದರೆ ಏನೋ ಒಂದು ರೀತಿಯಲ್ಲಿ ಸಂತೋಷ.. ಅಣ್ಣಾವ್ರ ವಯಸ್ಸು ೫೦ ವಸಂತಗಳನ್ನು ತಲುಪಿದ್ದರು, ಅದ್ಭುತ ದೇಹದಾರ್ಢ್ಯ.. ಮೇಕಪ್, ಅವರಿಗೆ ಹೊಂದುವಂಥ ಕೇಶ ವಿನ್ಯಾಸ, ಅಣ್ಣಾವ್ರು ಮುದ್ದಾಗಿ ಕಾಣುತ್ತಿದ್ದರು.

ಆ ಕಾಲ ಘಟ್ಟದ ನಾಯಕಿಯರನ್ನು ಪಟ್ಟಿ ಮಾಡುತ್ತಾ ಹೋಗಬೇಕು ಅನ್ನಿಸಿತು.. ಆಗ ಮೂಡಿ ಬಂದದ್ದು ಈ ಲೇಖನ.. ಇಂದು ಅಣ್ಣಾವ್ರ ಜನುಮ ದಿನ.. ಈ ಲೇಖನದ ಮೂಲಕ ಅವರಿಗೊಂದು ಶುಭಾಷಯ ನನ್ನ ಕಡೆಯಿಂದ ಮತ್ತು ನನ್ನ ಪ್ರೀತಿಯ ಓದುಗರ ಕಡೆಯಿಂದ.. !!!

ಅಂಬಿಕಾ
ಈಕೆಗೆ ಸುಮಾರು ೨೫ ವರ್ಷದ ಆಸು ಪಾಸು.. ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಅಪೂರ್ವ ಸಂಗಮ.. ವಾಹ್ ತೆರೆಯ ಮೇಲೆ ಈಕೆಯನ್ನು ಅಣ್ಣಾವ್ರ ಜೊತೆಯಲ್ಲಿ ನೋಡೋದೇ ಒಂದು ಆನಂದ.. ರೇಶೆಮೆಯಂತಹ ತಲೆಗೂದಲು, ಸದಾ ನೀಳವಾಗಿ ಇಳಿಬಿಟ್ಟ ಕೇಶರಾಶಿ, ನೃತ್ಯದಲ್ಲಿ ಎತ್ತಿದ ಕೈ.. ಅಣ್ಣಾವ್ರ ಕೆಲವು ನೃತ್ಯ ಹೆಜ್ಜೆಗಳಿಗೆ ತಕ್ಕ ಹಾಗೆ ಕುಣಿಯುತ್ತಿದ್ದ ಈಕೆ.. ಅದ್ಭುತವಾಗಿ ಕಾಣುತ್ತಿದ್ದರು.. ಬೇರೆ ನಾಯಕರ ಚಿತ್ರಗಳಲ್ಲಿ ಪಾಶ್ಚಾತ್ಯ ಉಡುಪು (ಸ್ಕರ್ಟ್, ಪ್ಯಾಂಟ್, ಚೂಡಿದಾರ್) ಇವೆಲ್ಲ ತೊಟ್ಟುಕೊಳ್ಳುತ್ತಿದ್ದ ಈಕೆ ಅಣ್ಣಾವ್ರ ಚಿತ್ರಗಳಲ್ಲಿ ಮಾತ್ರ ಸೀರೆಗಳಲ್ಲಿ ನಲಿಯುತ್ತಿದ್ದರು.

ಅಣ್ಣಾವ್ರ ದೇಹದಾರ್ಢ್ಯವನ್ನು ಕಂಡು ನಮಗೆ ಆಶ್ಚರ್ಯವಾಗುತ್ತಿತ್ತು, ತೆರೆಯ ಮೇಲಿನ ಪಾತ್ರಗಳಿಗೆ ವಯಸ್ಸು ಎಷ್ಟಿರಬಹುದು ಎನ್ನುವ ನನ್ನ ಊಹೆಗೆ ಅಥವಾ ಅನುಮಾನಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ..

ಚಲಿಸುವ ಮೋಡಗಳು ಆರಂಭದ ದೃಶ್ಯಗಳಲ್ಲಿ ಈ ಜೋಡಿಯನ್ನು ನೋಡುವುದೇ ಒಂದು ಹಬ್ಬ.. ಕರುನಾಡಿನ ಚಲನಚಿತ್ರದ ನಾಡಗೀತೆಯಾಗಿದ್ದ "ಜೇನಿನ ಹೊಳೆಯೋ, ಹಾಲಿನ ಮಳೆಯೋ " ಈ ಹಾಡಿನಲ್ಲಿ ಕಣ್ಣು ತಣಿಯುವಷ್ಟು ಸುಂದರವಾಗಿ ಕಾಣುತ್ತಿದ್ದರು. "ಕಾಣದಂತೆ ಮಾಯವಾದನು" ಈ ಹಾಡಿನಲ್ಲಿ ನೃತ್ಯ, ಓರೇ ಗಣ್ಣಿನಲ್ಲಿ ಇಬ್ಬರೂ ನೋಡುವುದು ಖುಷಿಕೊಡುತ್ತದೆ. ನನ್ನಿಷ್ಟವಾದ ಇನ್ನೊಂದು ಹಾಡು "ಮೈ ಲಾರ್ಡ್ ನನ್ನ ಮನವಿ" ಪ್ರಾಯಶಃ ಅಣ್ಣಾವ್ರ ಚಿತ್ರಗಳಲ್ಲಿ ನಾಯಕಿಯ ನೃತ್ಯ ಕಣ್ಣಿಗೆ ಕಟ್ಟುವುದು ಖುಷಿ ಕೊಟ್ಟಿತ್ತು. ಕಣ್ಣಿನ ನೋಟ, ನೃತ್ಯ, ಮುಖಾರವಿಂದ.. ಆಹ್ ಏನು ಹೇಳುವುದು..

ಹಾಗೆಯೇ ಅಪೂರ್ವ ಸಂಗಮ ಚಿತ್ರದಲ್ಲಿ.. ಪ್ರೇಮಯಾಚನೆ ದೃಶ್ಯದಲ್ಲಿ ಅಣ್ಣಾವ್ರು ಮತ್ತು ಅಂಬಿಕಾ..ಸೂಪರ್.. "ಅರಳಿದೆ ತಾನು ಮನ" ಅದ್ಭುತವಾದ ಹಾಡಿನಲ್ಲಿ ಅಷ್ಟೇ ನಯನ ಮನೋಹರವಾಗಿ ಕಾಣುತ್ತಿತ್ತು ಈ ಜೋಡಿ. "ವೈಯ್ಯಾರಿ ನನ್ನ ಬಂಗಾರಿ", ಎರಡು ನಕ್ಷತ್ರ ಚಿತ್ರದಲ್ಲಿ ಹಳ್ಳಿಯ ಧಿರಿಸಿನಲ್ಲಿ ಅಷ್ಟೇ ಆಕರ್ಶವಾಗಿತ್ತು ಈ ಜೋಡಿ "ಏಕೆ ಮಳ್ಳಿಯಂಗೆ ನನ್ನ ನೀನು ಕದ್ದು ಕದ್ದು ನೋಡುತ್ತೀಯೆ" .. ಭಕ್ತ ಪ್ರಹ್ಲಾದ ಚಿತ್ರದಲ್ಲಿ "ನಾ ಹೇಗೆ ಬಣ್ಣಿಸಲಿ" ಹಾಡಿಗೆ ಮಾತ್ರ ಬಂದು ಹೋಗಿದ್ದ ಈ ನಟಿಯ ಮುದ್ದಾದ ಮೊಗ ಆಕರ್ಷಕ..

ಸೂಪರ್ ಜೋಡಿ.. ಈ ಜೋಡಿಗೊಂದು ಸಲಾಂ

ಸರಿತಾ
ಅಣ್ಣಾವ್ರ ಚಿತ್ರಗಳಲ್ಲಿ ಕಥೆಯೇ ನಾಯಕ ನಾಯಕಿ.. ಭಾವ ಪೂರ್ಣ ಚಿತ್ರಗಳು ಬಂದಾಗ ಮೊದಲು ಹೆಸರು ಬರುತ್ತಿದ್ದದೇ ಸರಿತಾ ಹೆಸರು.. ಹೊಸಬೆಳಕು, ಕೆರಳಿದ ಸಿಂಹ, ಭಕ್ತ ಪ್ರಹ್ಲಾದ, ಕಾಮನಬಿಲ್ಲು, ಚಲಿಸುವ ಮೋಡಗಳು ಈ ಐದು ಚಿತ್ರಗಳಲ್ಲಿ ಅದ್ಭುತ ಅಭಿನಯಕ್ಕೆ ಹೆಸರಾಗಿದ್ದ ಈ ನಟಿ, ಅಣ್ಣಾವ್ರ ಅಭಿನಯಕ್ಕೆ ಸರಿಸಾಟಿಯಾಗಿ ನಿಂತಿದ್ದರು. ಕೆರಳಿದ ಸಿಂಹ ಚಿತ್ರದಲ್ಲಿ ಮುದ್ದಾಗಿ ಕಾಣುವ ಸರಿತಾ, ಮುಂದಿನ ಕೆಲ ಚಿತ್ರಗಳಲ್ಲಿ ದಪ್ಪಗಾಗಿದ್ದರೂ ಕೂಡ, ಅವರ ಅಭಿನಯ, ಕಣ್ಣಲ್ಲಿಯೇ ಅಳಿಸುವ ನಗಿಸುವ ಆ ಕಲೆಗಾರಿಕೆ ಸೂಪರ್ ಆಗಿತ್ತು.

ಕೆರಳಿದ ಸಿಂಹ ಚಿತ್ರದ ಇಂಗ್ಲಿಷ್ ಶೈಲಿಯ ಹಾಡು "ಏನೋ ಮೋಹ ಏಕೋ ದಾಹ" ಈ ಹಾಡಿನಲ್ಲಿ ತನ್ನ ನೀಳಗೂದಲನ್ನು ಹಿಂದಕ್ಕೆ ಬೀಸಿಕೊಂಡು ಮಹಡಿ ಹತ್ತಿ ಬರುವ ದೃಶ್ಯ.. ಅದೆಷ್ಟು ಬಾರಿ ನೋಡಿದ್ದೆನೋ ಅರಿವಿಲ್ಲ. (ಈ ಹಾಡಿನ ಬಗ್ಗೆ ಒಂದು ಲೇಖನವನ್ನೇ ಬರೆಯುತ್ತೇನೆ ಮುಂದೆ ಒಂದು ದಿನ).. ಭಾವಪೂರ್ಣ ಕಥೆಯುಳ್ಳ ಹೊಸಬೆಳಕು ಚಿತ್ರದಲ್ಲಿ ಈಕೆ ಮಾತಾಡಿದ್ದಕಿಂತ ಕಣ್ಣಲ್ಲೇ ಅಭಿನಯಿಸಿದ್ದು ಹೆಚ್ಚು..

ಹೊಸಬೆಳಕು ಚಿತ್ರದಲ್ಲಿ ಜ್ವರ ಬಂದು ಆಸ್ಪತ್ರೆಯಲ್ಲಿದ್ದ ದೃಶ್ಯದಲ್ಲಿ ಅಣ್ಣಾವ್ರು ಬಂದಾಗ ಗೆಲುವಾಗುತ್ತಾರೆ, ಮತ್ತೆ ನಾ ಊರಿಗೆ ಹೋಗುತ್ತೇನೆ ಅಂತ ಅಣ್ಣಾವ್ರು ಹೇಳಿದಾಗ, ಒಮ್ಮೆಲೇ ಕಣ್ಣೇ ಕಡಲಾಗುವ ಅಭಿನಯ ಸೂಪರ್..

ಭಕ್ತ ಪ್ರಹ್ಲಾದ ಇಡೀ ಚಿತ್ರದಲ್ಲಿ ಅಣ್ಣಾವ್ರು ಅಬ್ಬರಿಸಿದ್ದರೂ, ಸಂಯಮ ಪಾತ್ರದಲ್ಲಿ ಸರಿತಾ ಅಭಿನಯ ಬೊಂಬಾಟ್, ಒಂದು ಕಡೆ ಬೆಂಕಿ ಕಾರುವ ಅಭಿನಯದಲ್ಲಿ ಅಣ್ಣಾವ್ರು, ಈ ಕಡೆ ಅಣ್ಣಾವ್ರಿಗೆ ಕೋಪ ಬಾರಿಸುವ ಪಾತ್ರದಲ್ಲಿ ಪ್ರಹ್ಲಾದನಾಗಿ ಲೋಹಿತ್ (ಈಗಿನ ಪುನೀತ್), ಇವರಿಬ್ಬರ ಮದ್ಯೆ ಹದವರಿತ ಅಭಿನಯ..

ಚಲಿಸುವ ಮೋಡಗಳು ಚಿತ್ರದ ಪೂರ್ವಾರ್ಧದಲ್ಲಿ ತರಲೆ, ತುಂಟಿಯಾಗಿ ಅಭಿನಯಿಸಿರುವ, ಅಣ್ಣಾವ್ರನ್ನು ಹೋಗೋ ಬಾರೋ ಎನ್ನುತ್ತಾ ಲೀಲಾಜಾಲವಾಗಿ ಅಭಿನಯಿಸಿ, ಉತ್ತರಾರ್ಧದಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವಂತೆ ಹೋಗಿ ಬನ್ನಿ ಎನ್ನುತ್ತಾ ತನ್ನ ಗಂಡನೇ ತನ್ನ ಮಾಜಿ ಪ್ರೇಯಸಿಗೆ ಸಂಬಂಧ ಪಟ್ಟ ಕೊಲೆ ಮೊಕ್ಕದ್ದಮ್ಮೆಯನ್ನು ಕೈಗೆ ತೆಗೆದುಕೊಳ್ಳುವಾಗ ಪ್ರತಿಭಟನೆ ಮಾಡುವುದು, ನಂತರ ನಿಜ ತಿಳಿದು ಒಂದಾಗುವುದು.. ಕಣ್ಣು ಮತ್ತು ಧ್ವನಿಯಲ್ಲಿ ಇಷ್ಟವಾಗುತ್ತಾರೆ.

ಕಾಮನಬಿಲ್ಲು, ಈ ಚಿತ್ರದ ಬಗ್ಗೆ ಎಷ್ಟು ಬರೆಯಾದರೂ ಕಡಿಮೆಯೇ, ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಚಿತ್ರ.. ತಪ್ಪು ತಿಳುವಳಿಕೆಯಿಂದ ಸರಿಯಾದ ತೀರ್ಮಾನಕ್ಕೆ ಬರುವ ದೃಶ್ಯಗಳಲ್ಲಿ ಸರಿತಾ ಮನಮುಟ್ಟುತ್ತಾರೆ, ಕಡೆಯ ದೃಶ್ಯದಲ್ಲಿ ಅಣ್ಣಾವ್ರು ನೀನು ನನ್ನ ಸ್ನೇಹಿತನನ್ನು ಮದುವೆಯಾಗು ಎಂದು ಒಪ್ಪಿಸುವಾಗ, ಅದನ್ನು ತಿರಸ್ಕರಿಸುವ ದೃಶ್ಯದಲ್ಲಿ ಸರಿತಾ ಅಕ್ಷರಶಃ ಕಣ್ಣೀರು ತರಿಸುತ್ತಾರೆ. ಅತಿರೇಕದ ಅಭಿನಯವಿಲ್ಲದೆ, ಕಣ್ಣಲ್ಲೇ, ಧ್ವನಿಯ ಏರಿಳಿತದಲ್ಲಿ ಕಾಡುವ ಸರಿತಾ.. ನಿಜಕ್ಕೂ ಅಭಿನಯದಲ್ಲಿ "ಸರಿ"ನೇ

ಅಣ್ಣಾವ್ರ ಮತ್ತು ಸರಿತಾ ಅಭಿನಯ.. ಭಾವ ಪೂರ್ಣತೆಯಿಂದ ಕೂಡಿರುತ್ತೆ..

ಮಾಧವಿ
ಬೊಗಸೆಕಂಗಳ ಚೆಲುವೆ.. ಅಣ್ಣಾವ್ರ ಜೊತೆಯಲ್ಲಿ ಸುಮಾರು ಎರಡು ದಶಕಗಳ ಅಂತರದಲ್ಲಿ  ಹಾಲು ಜೇನು, ಭಾಗ್ಯದ ಲಕ್ಷ್ಮಿ ಬಾರಮ್ಮ, ಅನುರಾಗ ಅರಳಿತು, ಶೃತಿ ಸೇರಿದಾಗ, ಜೀವನ ಚೈತ್ರ, ಆಕಸ್ಮಿಕ, ಮತ್ತು ಒಡಹುಟ್ಟಿದವರು ಒಟ್ಟು ಎಂಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಕೆಯ ಅಸ್ತಿ ಸುಲಲಿತವಾದ ನೃತ್ಯ, ಕಣ್ಣುಗಳು.
ಸಾಂಸಾರಿಕ ಕಥೆಯ ಶೃತಿಸೇರಿದಾಗ ಚಿತ್ರದಲ್ಲಿ "ಬೊಂಬೆಯಾಟವಯ್ಯ" ಹಾಡಿನಲ್ಲಿ ಅಣ್ಣಾವ್ರನ್ನು ಸಿಕ್ಕಿಹಾಕಿಸುವ ಹಾಡಿನಲ್ಲಿ, "ರಾಗ ಜೀವನ ರಾಜ"   ಹಾಡು.. ಈ ಹಾಡಿನಲ್ಲಿ, ಮುದ್ದಾಗಿ  ಕಾಣುತ್ತಾರೆ..

ಹಾಲು ಜೇನು ಬಹುಶಃ ಈ ಚಿತ್ರದಲ್ಲಿ ಅಣ್ಣಾವ್ರ ಅಭಿನಯ ನೋಡಿ ಕಣ್ಣೀರಾಕದೆ ಇರುವವರು ಕಡಿಮೆ. ಆ ಅಭಿನಯಕ್ಕೆ ಹೊಂದುವಂತೆ ಮಾಧವಿ ಮಾಗಿದ್ದಾರೆ ಈ ಚಿತ್ರದಲ್ಲಿ. "ಆನೆಯ ಮೇಲೆ ಅಂಬಾರಿ ಕಂಡೆ" ಈ ಹಾಡಿನಲ್ಲಿ ಇವರಿಬ್ಬರ ನೃತ್ಯ ನನಗೆ ಇಷ್ಟ.. ರೋಸ್ ಬಣ್ಣದ ಸೀರೆಯಲ್ಲಿ ಆಅಹ್ ನೋಡುತ್ತಲೇ ಇರಬೇಕು ಅನ್ನಿಸುತ್ತದೆ.. ಪ್ರತಿ ಭಾವ ಪೂರ್ಣ ದೃಶ್ಯದಲ್ಲಿಯೂ ಕಣ್ಣಲ್ಲೇ ಕಾಡುವ ಈಕೆ ಅಣ್ಣಾವ್ರಿಗೆ ಸುಂದರ ಜೋಡಿ.

"ಅನುರಾಗ ಅರಳಿತು" ತನ್ನ ಸ್ನಿಗ್ಧ ಸೌಂದರ್ಯದಿಂದ ಕಾಡುತ್ತಾರೆ, ಅಣ್ಣಾವ್ರಿಗೆ ಪ್ರತಿಯಾಗಿ ನಿಲ್ಲುವ ಪಾತ್ರ, ಅಣ್ಣಾವ್ರ ಕೆನ್ನೆಗೆ ಬಾರಿಸುವ ದೃಶ್ಯದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ.. "ನೀ ನೆಡೆದರೆ ಸೊಗಸು" ಈ ಹಾಡಿನಲ್ಲಿ ಮಾತಿಲ್ಲದೆ ಬರಿ ಕಣ್ಣಲ್ಲೇ ಪ್ರೀತಿ ವ್ಯಕ್ತಪಡಿಸುವ ಮಾಧವಿ ಇಷ್ಟವಾಗುತ್ತಾರೆ.

ಮಾಗಿದ ಅಭಿನಯ ಕಂಡ ಜೀವನ ಚೈತ್ರ, ಆಕಸ್ಮಿಕ ಮತ್ತು ಒಡಹುಟ್ಟಿದವರು ಚಿತ್ರದಲ್ಲಿ ಮತ್ತೆ ಕೆಲವು ವರ್ಷಗಳ ಅಂತರದ ನಂತರ ಮತ್ತೆ ಅಣ್ಣಾವ್ರಿಗೆ ಜೋಡಿಯಾಗುತ್ತಾರೆ.

ಗೀತಾ 
ನನ್ನ  ನೆಚ್ಚಿನ ಹೆಸರು, ನನ್ನ ನೆಚ್ಚಿನ ನಾಯಕಿ, ಅಣ್ಣಾವ್ರ ಎತ್ತರಕ್ಕೆ ಸರಿಯಾದ ಜೋಡಿಯಾಗಿರುವ ಗೀತಾ ಧೃವತಾರೆ, ಅನುರಾಗ ಅರಳಿತು, ದೇವತಾ ಮನುಷ್ಯ, ಶೃತಿ ಸೇರಿದಾಗ, ಕಿರುಪಾತ್ರದಲ್ಲಿ ಶಿವ ಮೆಚ್ಚಿದ ಕಣ್ಣಪ್ಪ, ಮತ್ತೆ ಆಕಸ್ಮಿಕ ಚಿತ್ರಗಳಲ್ಲಿ ಅಣ್ಣಾವ್ರಿಗೆ ಸರಿಸಾಟಿಯಾದ ಅಭಿನಯ.. ಎಲ್ಲಾ ಚಿತ್ರಗಳಲ್ಲೂ ಸೀರೆಯಲ್ಲಿ (ಆಕಸ್ಮಿಕ ಚಿತ್ರದ ಕೆಲವು ದೃಶ್ಯಗಳನ್ನು ಬಿಟ್ಟು) ಕಾ
ಣಿಸಿಕೊಂಡ ಈ ಮುದ್ದಾದ ನಟಿಯನ್ನು ತೆರೆಯ ಮೇಲೆ ನೋಡುವುದೇ ಒಂದು ಖುಷಿ..

ಮುದ್ದಾದ ಮೊಗ, ಕಣ್ಣಿನ ಕೆಳಗೆ ಪುಟ್ಟ ಮಚ್ಚೆ, ಸುಂದರ ನಗು ಈಕೆಯನ್ನು ಅಣ್ಣಾವ್ರಿಗೆ ವಿಶಿಷ್ಟ ಜೋಡಿಯಾಗಿಸಿದೆ. ಹೋರಾಟದ ಪಾತ್ರದ  ಧೃವತಾರೆ..ಮನದಲ್ಲಿಯೇ ಇಷ್ಟಪಡುವ ಪಾತ್ರದಲ್ಲಿ ಅನುರಾಗ ಅರಳಿತು ಚಿತ್ರದಲ್ಲಿ ಅಣ್ಣಾವ್ರಿಗೆ ನೆರಳಾಗಿ ನಿಲ್ಲುವ ಗೀತಾ, ಇಷ್ಟ ಪಟ್ಟರೂ ಮನೆಯ ಸಮಸ್ಯೆಯಿಂದಾಗಿ ದೂರವೇ ನಿಲ್ಲುವ ಪಾತ್ರದಲ್ಲಿ ದೇವತಾ ಮನುಷ್ಯದಲ್ಲಿ, ಭಕ್ತಿ ಭಾವದ ಶಿವ ಮೆಚ್ಚಿದ ಕಣ್ಣಪ್ಪ, ಜೀವನದಲ್ಲಿ ನೊಂದಿದ್ದ ಪಾತ್ರದಲ್ಲಿ ನಾಯಕನಿಗೆ ಜೊತೆಯಾಗುವ ಆಕಸ್ಮಿಕ ಪಾತ್ರ, ಅನಾಥಳಾಗಿ ಬಂದು ಅಣ್ಣಾವ್ರ ಮನವನ್ನು, ಮನೆಯನ್ನು ಗೆಲ್ಲುವ ಪಾತ್ರದಲ್ಲಿ ಶೃತಿ ಸೇರಿದಾಗ ಚಿತ್ರ.. ಈಕೆಯನ್ನು ಅಣ್ಣಾವ್ರ ಚಿತ್ರಗಳ ನೆಚ್ಚಿನ   ನಾಯಕಿಯನ್ನಾಗಿಸಿದೆ..

ಅರೆ ಇದೇನಿದು.. ಅಣ್ಣಾವ್ರ ಬಗ್ಗೆ ಲೇಖನ  ಅಂತ ಹೇಳಿ, ಬರಿ ನಾಯಕಿಯ ಬಗ್ಗೆ ಮಾತ್ರ ಬರೆದಿದ್ದೇನೆ ಅಂತ ಹೇಳ್ತಾ ಇದ್ದೀರಾ, ಹೌದು ಅಣ್ಣಾವ್ರ ಚಿತ್ರಗಳಲ್ಲಿ ನಾಯಕಿ ಪಾತ್ರ ಸುಮ್ಮನೆ ಹಾಗೆ ಬಂದು ಹೀಗೆ ಹೋಗುವುದಲ್ಲ.. ಕೆಲವೊಮ್ಮೆ ಚಿತ್ರದ ಪೂರ್ತಿಭಾಗ ಇರದೇ ಇದ್ದರೂ, ಇರುವ ಭಾಗದಲ್ಲಿ ಅಣ್ಣಾವ್ರಿಗೆ ಸರಿಸಾಟಿಯಾಗಿ ಅಭಿನಯ ನೀಡಿದ್ದರು. ಕೆಲವೊಮ್ಮೆ ಅಣ್ಣಾವ್ರ ಪಾತ್ರದ ಮೇಲೆ ಕೂಗಾಡುವ, ಕಿರುಚಾಡುವ, ಅಥವಾ ಕೆಲವೊಮ್ಮೆ ಕೈ ಮಾಡುವ ದೃಶ್ಯಗಳಿದ್ದರೂ, ಧೈರ್ಯದಿಂದ ಅಭಿನಯಿಸಿದ್ದರು, ಹಾಡುಗಳಲ್ಲಿ ಗೌರವಪೂರ್ಣವಾಗಿ ಅಭಿನಯಿಸಿದ್ದು ಎಲ್ಲಾ ನಾಯಕಿಯರ ಹೆಗ್ಗಳಿಕೆ. ಇವರ ಅಭಿನಯದ ಇತರ ನಾಯಕರ ಚಿತ್ರಗಳು ಮತ್ತು ನಾ ಮೇಲೆ ಹೇಳಿದ ಚಿತ್ರಗಳನ್ನು ಒಮ್ಮೆ ಗಮನಿಸಿದರೆ ಅಣ್ಣಾವ್ರ ಪ್ರಭಾವದಲ್ಲಿದ್ದರೂ, ತಮ್ಮದೇ ಛಾಪನ್ನು ಒತ್ತಿ ಬಿಟ್ಟಿದ್ದಾರೆ ಈ ನಾಯಕಿಯರು..

ಹಾಗಾಗಿ ಒಂದು ವಿಶೇಷ ಲೇಖನ.. ಅಣ್ಣಾವ್ರ ನಾಯಕತ್ವದಲ್ಲಿ ನಾಯಕಿಯರು ಎಂದು ಬರೆಯಬೇಕು ಅನ್ನಿಸಿತು. ಇನ್ನೊಂದು ಅಂಶ ಗಮನಿಸಬೇಕು ಅಂದರೆ.. ಈ ಎಲ್ಲಾ ನಾಯಕಿಯರು ಅಣ್ಣಾವ್ರ ಜೊತೆಯಲ್ಲಿ ಅಭಿನಯಿಸಿದ್ದಾಗ ಅಣ್ಣಾವ್ರ ಅಭಿನಯ  ನಾಯಕಿಯರ ವಯಸ್ಸಿಗಿಂತ ಎರಡು ಪಟ್ಟು ಹೆಚ್ಚಿತ್ತು, ಅಂದರೆ ನಾಯಕಿಯರ ವಯಸ್ಸು ೨೫ ರ ಆಸುಪಾಸಿನಲ್ಲಿದ್ದರೆ, ಅಣ್ಣಾವ್ರ ವಯಸ್ಸು ೫೦ರ ಆಸುಪಾಸಿನಲ್ಲಿತ್ತು, ಆದರೂ ಎಲ್ಲೂ ಇದು ಗೊತ್ತಾಗುವುದೇ ಇಲ್ಲ.. ಅದು ಅಣ್ಣಾವ್ರ ಸ್ಪೆಷಾಲಿಟಿ..

ಯೋಗಾಸನ, ಆಹಾರ ಅಭ್ಯಾಸ, ಆರೋಗ್ಯಕ್ಕೆ ಹಾನಿಕಾರಕವಾದ ಅಭ್ಯಾಸಗಳು ಇಲ್ಲದೆ ಇದ್ದದ್ದು, ಮತ್ತೆ ಮಗುವಿನಂತಹ ಮನಸ್ಸು ಅಣ್ಣಾವ್ರನ್ನು ಸದಾ ಯೌವನಾವಸ್ಥೆಯಲ್ಲಿಯೇ ಇಟ್ಟಿತ್ತು... ಅವರ ಯಾವುದೇ ಚಿತ್ರ ನೋಡಿ, ಆ ಪಾತ್ರದ ವಯಸ್ಸನ್ನು ತೆರೆಯ ಮೇಲೆ ಅಂದಾಜಿಸುವುದು ಕಷ್ಟ..

ಅದು ಅಣ್ಣಾವ್ರು..

ಜನುಮದಿನಕ್ಕೆ ಒಂದು ಲೇಖನ ನಿಮ್ಮ ಚರಣ ಕಮಲಗಳಿಗೆ!!!

Wednesday, April 12, 2017

ಅಣ್ಣಾವ್ರ ಡೆಡ್ಲಿ ಎಂಟ್ರೀಸ್.. ಪುಣ್ಯ ದಿನ

ಭಾರತೀಯ ಚಿತ್ರಗಳಲ್ಲಿ ನಾಯಕನ ಅಥವಾ ಖಳನಾಯಕನ ಆರಂಭಿಕ ದೃಶ್ಯಗಳು ಚಿತ್ರದ ಯಾವುದೇ ಹಂತದಲ್ಲಿ ಮಜಾ
ಕೊಡುತ್ತದೆ.  ಮತ್ತೆ ಚಿತ್ರ ನಟ ನಟಿಯರನ್ನು ಆರಾಧಿಸುವ ನಮ್ಮ ದೇಶದಲ್ಲಿ ಕೆಲವೊಮ್ಮೆ ಇದು ತುಸು ಹೆಚ್ಚೇ ಮನಸ್ಸಿಗೆ ಹಿತಕೊಡುತ್ತದೆ. ಹಾಡಿನ ಮೂಲಕ, ಹಾಸ್ಯದ ದೃಶ್ಯದ ಮೂಲಕ, ಹೊಡೆದಾಟದ ಮೂಲಕ.. ಇಲ್ಲವೇ ತುಸು ಭಾಷಣ ಅಥವಾ ಹಿತವಚನ ನೀಡುವ ದೃಶ್ಯಗಳ ಮೂಲಕ ಅವರ ಆರಂಭದ ದೃಶ್ಯಗಳು ಮೂಡಿಬರುವುದು ಸಹಜವಾಗಿದೆ.

ಕರುನಾಡಿನ ಹೆಮ್ಮೆಯ ನಟ ಜೊತೆಗೆ ಚಿತ್ರಜಗತ್ತಿನಲ್ಲಿ ತನ್ನದೇ ಅಭಿನಯ, ಗಾಯನದಿಂದ ತಮ್ಮದೇ ಸ್ಥಾನಗಳಿಸಿ ತಾವೇ ಹೇಳುವ  ಅಭಿಮಾನಿ ದೇವರುಗಳ ಹೃದಯ ಸಿಂಹಾಸನದಲ್ಲಿ ಅನಭಿಷಿಕ್ತ ಚಕ್ರವರ್ತಿಯಾಗಿ ರಾರಾಜಿಸುತ್ತಿರುವ ಅಣ್ಣಾವ್ರ ಕೆಲವು ಚಿತ್ರಗಳ ಆರಂಭಿಕ ದೃಶ್ಯಗಳು ಪುಟ್ಟ ವಿವರ ನನ್ನ ಮನಸ್ಸಿಗೆ ಕಂಡಂತೆ ನಿಮ್ಮ ಮುಂದೆ:-

೧)  ಸಾಹಸಮಯ "ಶಂಕರ್ ಗುರು"
 ಚಿತ್ರಪ್ರೇಮಿಗಳ ಹೃದಯದಲ್ಲಿ ಹಸಿರಾಗಿ ಉಳಿದಿರುವ ಚಿತ್ರ.. ಇದರಲ್ಲಿ ಅಣ್ಣಾವ್ರು ಮೂರು ಪಾತ್ರಗಳು..
ಚಿತ್ರ ಕೃಪೆ : ಗೂಗಲೇಶ್ವರ 

ಮೊದಲನೇ ಪಾತ್ರ.. ಹೆಂಡತಿಯನ್ನು   ಬಹುವಾಗಿ ಪ್ರೀತಿಸುವ ರಾಜಶೇಖರ್.. ಹೆಂಡತಿ ರಚಿಸಿದ ಬಣ್ಣ ತುಂಬಿದ ಚಿತ್ರವನ್ನು ಕಂಡು ಖುಷಿ ಪಟ್ಟು.. ಈಗ ನನ್ನ ಚಾನ್ಸ್ ಎನ್ನುತ್ತಾ.. ಕುಂಕುಮದ ಭರಣಿ ತೆಗೆದು ಹಣೆಗೆ ಕುಂಕುಮ ಇಡುವ ದೃಶ್ಯ.. ಅದ್ಭುತವಾಗಿ ಮೂಡಿಬಂದಿದೆ.. ನಂತರ "ಚೆಲುವೆಯ ನೋಟ ಚೆನ್ನಾ" ಹಾಡು

ಎರಡನೇ ಪಾತ್ರ. ಸಂಯಮ ಸ್ವಭಾವದ ಶಂಕರ್.. ನಾಯಕಿ ಜಯಮಾಲಾ ಅವರನ್ನು ಪೋಕ್ರಿಗಳು ಛೇಡಿಸುತ್ತಿದ್ದಾಗ.. "ಅಡ್ರೆಸ್ಸ್ ಬೇಕಾ ನಾ ಕೊಡುತ್ತೇನೆ" ಎಂದು ಹೊಡೆದಾಡಿ ನಾಯಕಿಯನ್ನು ರಕ್ಷಿಸುತ್ತಾರೆ.. ಸೌಮ್ಯ ಸ್ವಭಾವದಲ್ಲಿ ಮಾತಾಡುತ್ತಲೇ, ಲೀಲಾಜಾಲವಾಗಿ ಹೊಡೆದಾಟದ ದೃಶ್ಯಕ್ಕೆ ನುಗ್ಗುವ ಅಣ್ಣಾವ್ರು ಇಷ್ಟವಾಗುತ್ತಾರೆ

ಅಣ್ಣಾವ್ರ ಈ ಹಾಸ್ಯ ತುಂಬಿದ ಪಾತ್ರ "ಗುರು" ಬಹುಶಃ ಯಾರೂ ಮಾಡಲಿಕ್ಕೆ ಆಗೋದಿಲ್ಲ ಅನ್ಸುತ್ತೆ.. ನಾಟಕದ ಪಾತ್ರದ ಅಭ್ಯಾಸ ಎಂದು ವಕೀಲ ಅಪ್ಪನ ಮುಂದೆ ಕೊಲೆಗಡುಕನಾಗಿ ಬರುವ ಪಾತ್ರ.. ಅದ್ಭುತವಾಗಿ ಮೂಡಿ ಬಂದಿದೆ.

೨) ಮನಸ್ಸನ್ನು ಸುಧಾರಿಸುವ ಗಿರಿ ಕನ್ಯೆ
ಗುಪ್ತಗಾಮಿನಿಯಾಗಿ ಮನುಜನ ದುರಾಸೆ, ಆಕ್ರಮಣ, ವಂಚನೆ ಇದನ್ನೆಲ್ಲಾ ಕೂಡಿಸಿಕೊಂಡು ಬರುವ ಹಾಡು "ಏನೆಂದು ನಾ ಹೇಳಲಿ.. ಮಾನವನಾಸೆಗೆ ಕೊನೆಯೆಲ್ಲಿ" ಚಿತ್ರೀಕರಣ, ಸಾಹಿತ್ಯ, ಸಂಗೀತ, ಹಾಡುಗಾರಿಕೆ ಮತ್ತೆ ಅಣ್ಣಾವ್ರ ಅಭಿನಯ ಸೊಗಸಾಗಿದೆ.
ಚಿತ್ರ ಕೃಪೆ : ಗೂಗಲೇಶ್ವರ 


೩) ಆಡುವ ಸಮಯದ ಗೊಂಬೆ
ನಮ್ಮ ಉಪಾಯಗಳು ಸಿದ್ಧತೆಗಳು ಏನೇ ಇದ್ದರೂ, ಮೇಲೆ ಕೂತಿರುವ ಆ ಮಾಯಗಾರನ ತಲೆಯಲ್ಲಿ ಏನು ಇರುತ್ತದೆಯೋ ಅದೇ ನೆಡೆಯುವುದು.. ಇದರ ಬುನಾದಿಯ ಮೇಲೆ ಬರುವ "ಚಿನ್ನದ ಗೊಂಬೆಯಲ್ಲ" ಹಾಡು ನಂತರ ಲಾರಿಯಲ್ಲಿ ಕುಳಿತು ತನ್ನ ಬಾಲ್ಯದ ನೆನಪನ್ನು ಮಾಡಿಕೊಳ್ಳುತ್ತಾ, ದಾರಿಯಲ್ಲಿ ಒಬ್ಬ ಹುಡುಗನನ್ನು ಕಳ್ಳರಿಂದ ರಕ್ಷಿಸಿ ಮನೆಗೆ ಬಂದಾಗ.. ತಾಯಿ ಕೇಳುತ್ತಾಳೆ ಯಾಕೆ ಗುರು ತಡವಾಯಿತು "ಏನು ಮಾಡೋದಮ್ಮ ದಾರಿಯಲ್ಲಿ ಸಿಗುವ ನಾಯಿಗಳು, ಎಮ್ಮೆಗಳು, ದನಗಳು ನನ್ನಂತೆ ಮನೆ ಬಿಟ್ಟು ಓಡಿ ಬಂದ ಅನಾಥ ಮಕ್ಕಳು ಇವರನ್ನೆಲ್ಲಾ ಮನೆಗೆ ಸೇರಿಸಿ ಮನೆಗೆ ಬರುವುದು ತಡವಾಯಿತು" ಸರಳ  ಮಾತುಗಳಲ್ಲಿ ಜೀವನದ ಸೂತ್ರವನ್ನು ಹೇಳುವ ಅಣ್ಣಾವ್ರು ಇಷ್ಟವಾಗುತ್ತಾರೆ.
ಚಿತ್ರ ಕೃಪೆ : ಗೂಗಲೇಶ್ವರ 

೪) ತಾಯಿಯ ಅನುರಾಗ.. ಅನುರಾಗ ಅರಳಿತು
ತಾಯಿ ಈ ಪಾತ್ರ ಅಣ್ಣಾವ್ರ ಚಿತ್ರದಲ್ಲಿ ಯಾವಾಗಲೂ ವಿಶೇಷ... ತನ್ನ ತಾಯಿಗೆ ಆರೋಗ್ಯದ ಸಮಸ್ಯೆಯನ್ನು ಶ್ರೀಕಂಠನ ಮುಂದೆ ಹೇಳಿಕೊಳ್ಳದೆ  ಬದಲಿಗೆ ಆ ಮಹಾದೇವನನ್ನು ಹೋಗುಳುತ್ತಾ "ಶ್ರೀಕಂಠ ವಿಷಕಂಠ" ಹಾಡಲ್ಲಿ ಅಣ್ಣಾವ್ರ ಅಭಿನಯ ಸೊಗಸು. ಅದರಲ್ಲೂ ಉರುಳು ಸೇವೆ ಮಾಡುತ್ತಾ ದೇವಸ್ಥಾನದ ಮುಂದೆ ಕುಳಿತಾಗ ಕಾಣುವ ಅವರ ಮುಖಭಾವ ಮತ್ತು ದೇಹ ಭಾಷೆ ನನಗೆ ಯಾವಾಗಲೂ ಇಷ್ಟ.. ಮಹಾದೇವನಿಗೆ ಅಭಿಷೇಕವಾಗುತ್ತಿರುವಾಗ ಅವರು ಹಾಡುವ ಆಲಾಪ ಭಕ್ತಿರಸ ಹೊಮ್ಮಿಸುತ್ತದೆ.
ಚಿತ್ರ ಕೃಪೆ : ಗೂಗಲೇಶ್ವರ 

೫) ಘರ್ಜಿಸುವ ಹಿರಣ್ಯ - ಭಕ್ತ ಪ್ರಹ್ಲಾದ 
ಏನೂ ಹೇಳಲಿ.. ಮನಸ್ಸು ತುಂಬಿ ಬರುತ್ತದೆ.. ತನ್ನ ಅಪ್ಪ ಮಾಡುತ್ತಿದ್ದ ಪೌರಾಣಿಕ ಪಾತ್ರಗಳನ್ನು ಕಂಡು ಅದನ್ನು ತಮ್ಮೊಳಗೆ ತುಂಬಿಕೊಂಡು ಅದಕ್ಕೆ ಒಂದು ಗೌರವ ತಂದು ಕೊಟ್ಟ ಅಭಿನಯ.. "ಪ್ರಿಯದಿಂ ಬಂದು ಚತುರ್ಮುಖನ್"   ಈ ಪುಟ್ಟ ಮಟ್ಟಿನ ಜೊತೆಯಲ್ಲಿ ಶುರುವಾಗುವ ದೃಶ್ಯ.. ಆ ದೈತ್ಯನ ಭವ್ಯತೆಯನ್ನು ಎತ್ತಿ ನಿಲ್ಲಿಸುತ್ತದೆ ಅಣ್ಣಾವ್ರ ಅಭಿನಯ.. ನಾವು                       ಹಿರಣ್ಯಕಶಿಪುವನ್ನು ನೋಡಿಲ್ಲ.. ಆದರೆ ಅಣ್ಣಾವ್ರನ್ನು ನೋಡಿದ ಮೇಲೆ.. ಸ್ವತಃ ಹಿರಣ್ಯಕಶಿಪು ಬಂದರೂ ಮಂಕಾಗುತ್ತಾರೇನೋ.. 
ಚಿತ್ರ ಕೃಪೆ : ಗೂಗಲೇಶ್ವರ 
ಹೀಗೆ ಅಣ್ಣಾವ್ರ ಹಲವಾರು ಚಿತ್ರಗಳ ಆರಂಭಿಕ ದೃಶ್ಯಗಳು, ಹಾಡುಗಳು ಜೀವನಕ್ಕೆ ಬೇಕಾಗುವ ಯಾವುದೋ ಒಂದು ಸೂತ್ರವನ್ನು ನೆನಪಿಸಿ ಕಳಿಸಿ ಕೊಡುವ ಪಠ್ಯ ಪುಸ್ತಕದಂತಿದೆ..

ಅಣ್ಣಾವ್ರ ಚಿತ್ರ ಪಾತ್ರಗಳನ್ನ ನೋಡುತ್ತಾ ಬೆಳೆದ ನನಗೆ.. ಜೀವನದ ಪರಿಸ್ಥಿತಿಯನ್ನು ಎದುರಿಸಲು ಗೊಂದಲವಾದಾಗ.. ಅವರ ಯಾವುದೋ ಒಂದು ಚಿತ್ರ ನೋಡಿದರೆ ಸಾಕು.. ಸಮಸ್ಯೆಗಳು ವಾಸುದೇವ ಶಿಶು ಕೃಷನನ್ನು ಬುಟ್ಟಿಯಲ್ಲಿ ತಲೆಯ ಮೇಲೆ ಇಟ್ಟುಕೊಂಡು ಬರುವಾಗ ಯಮುನಾ ನದಿ ದಾರಿ ಬಿಡುವಂತೆ.. ಸದ್ದಿಲ್ಲದೇ ಪಕ್ಕಕ್ಕೆ ಹೋಗಿ.. ಆ ಸಮಸ್ಯೆಗಳನ್ನು ನಿವಾರಿಸುವ ಉಪಾಯಗಳು ಹೊರ ಹೊಮ್ಮುತ್ತವೆ 

ಅಣ್ಣಾವ್ರ ಪುಣ್ಯ ದಿನವಿಂದು.. ಅವರ ನೆನಪಲ್ಲಿ ಒಂದು ಲೇಖನ ಅವರ ಕೋಟಿಗಟ್ಟಲೆ ಅಭಿಮಾನಿ ದೇವರುಗಳ ಮಡಿಲಿಗೆ:-)

Sunday, March 26, 2017

ಜಾದೂ ಮಾಡುವ ಗಾರುಡಿ ಶ್ರೀ ಕೃಷ್ಣಗಾರುಡಿ (1958) (ಅಣ್ಣಾವ್ರ ಚಿತ್ರ ೦೯ / ೨೦೭)

ಭಗವಂತ ಒಂದು ದೊಡ್ಡ ಕೃತಿಯನ್ನು ತಯಾರಿಸುವ ಮುನ್ನಾ ಒಂದು ಚಿಕ್ಕ ಅಣಕು ಮಾದರಿ ತಯಾರಿಸುತ್ತಾನೆ..

ನಂದಿ ಪಿಕ್ಚರ್ಸ್ ಲಾಂಛನದಲ್ಲಿ ಶ್ರೀ ಬೆಳ್ಳಾವಿ ನರಹರಿಶಾಸ್ತ್ರಿಗಳ ರಚಿಸಿದ ಕಥೆಯನ್ನು ಆಧರಿಸಿ ಪೆಂಡ್ಯಾಲ ಅವರ ಸಂಗೀತದ ಗಾರುಡಿಯಲ್ಲಿ ಮೂಡಿಬಂದ ಚಿತ್ರ ಶ್ರೀ ಕೃಷ್ಣಗಾರುಡಿ.  ಜಿ ದೊರೈ ಅವರ ಛಾಯಾಗ್ರಹಣ ಹೊಂದಿದ್ದ ಈ ಚಿತ್ರಕ್ಕೆ ಘಂಟಸಾಲ, ಪಿಬಿ ಶ್ರೀನಿವಾಸ್, ಸುಶೀಲ, ಜಕ್ಕಿ, ಕಾಣಾಕಿ, ರಾಣಿ ತಮ್ಮ ಗಾನ ಪ್ರತಿಭೆಯನ್ನು ತುಂಬಿದ್ದರು.

ಕರುನಾಡಿನ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಹುಣುಸೂರು ಕೃಷ್ಣಮೂರ್ತಿ ರಾಜಕುಮಾರ್ ಎಂಬ ರತ್ನಕ್ಕೆ ಇನ್ನಷ್ಟು ಹೊಳಪು ನೀಡಲು ಬಂದರು. ಚಿತ್ರಕಥೆ, ಸಂಭಾಷಣೆ, ಹಾಡುಗಳು ಮತ್ತು ನಿರ್ದೇಶನ ಹೀಗೆ ಉನ್ನತ ಹೊಣೆಗಾರಿಕೆ ಹೊತ್ತು ರೂಪಿಸಿದ ಚಿತ್ರವನ್ನು ಕೆ ಎಂ ನಾಗಣ್ಣ ನಿರ್ಮಿಸಿದ್ದಾರೆ.

ಮನುಜ ಸಾಹಸಪಟ್ಟು, ಸಾಧನೆಮಾಡಿ, ತನ್ನೊಳಗಿನ ಆಕ್ರೋಶ, ಸೇಡು, ಅನುಭವಿಸಿದ ಅವಮಾನ  ಇವುಗಳನ್ನು ಅಸ್ತ್ರಗಳನ್ನಾಗಿಸಿ, ಸರಿಯಾದ ಮಾರ್ಗದರ್ಶನದಲ್ಲಿ ಮುನ್ನೆಡೆದಾಗ ಜಯವು ಸಿಕ್ಕೇ ಸಿಗುತ್ತದೆ. ಆದರೆ ಆ ಗೆಲುವನ್ನು ಬರಿ ಹೃದಯದಲ್ಲಿ ಮಾತ್ರ ಇಟ್ಟುಳ್ಳದೇ ಅದನ್ನು ಇನ್ನೊಂದು ಅಡಿ ಮೇಲಕ್ಕೆ ಅಂದರೆ ತಲೆಗೆ ತಂದುಕೊಂಡರೆ ಎಂಥಹ ಪ್ರಮಾದ ಆಗಬಹುದು, ಎಂಥಹ ಅವಮಾನವಾಗಬಹುದು, ಮತ್ತೆ ಮಾಯೆಯ ಸುಳಿ ಚಕ್ರಕ್ಕೆ ಸಿಲುಕಿ ನರಳುವಂತೆ ಮಾಡುತ್ತದೆ ಎನ್ನುವ ಸಂದೇಶ ಹೊತ್ತ ಈ ಚಿತ್ರ, ಅಂತಿಮವಾಗಿ ಕಾಣದ ಶಕ್ತಿ, ಕಾಣುವ ಶಕ್ತಿ, ಪ್ರೇರಕ ಶಕ್ತಿ ಇವುಗಳನ್ನು ನೆನೆದು ಭಕ್ತಿ ಮಾರ್ಗದಲ್ಲಿ ಮಾತ್ರ ಜಯ...  ಶಕ್ತಿ ಮಾರ್ಗ ಕಷ್ಟಕ್ಕೆ ಆಗಿಬರೋಲ್ಲ ಎಂದು ನಿರೂಪಿಸುತ್ತದೆ.

ಕುಂತಿಮಕ್ಕಳಿಗೆ ರಾಜ್ಯವಿಲ್ಲ ಎನ್ನುವ ನಾಣ್ಣುಡಿಯಂತೆ ಸಣ್ಣ ವಯಸ್ಸಿನಿಂದ ಬರಿ ಕಷ್ಟ ಕೋಟಲೆಗಳಲ್ಲಿಯೇ ಬಳಲುವ ಪಾಂಡವರು, ಕೌರವರ ಮೋಸಕ್ಕೆ ಬಲಿಯಾಗಿ ರಾಜ್ಯ, ಅಧಿಕಾರ ಕಳೆದುಕೊಂಡು ಕಾಡು ಪಾಲಾಗಿ ಕಡೆಯಲ್ಲಿ ಶ್ರೀ ಕೃಷ್ಣನ ಅನುಗ್ರಹದ ಕವಚ ತೊಟ್ಟು, ಬಂಧು ಬಾಂಧವರನ್ನು ಬದಿಗೆ ಸರಿಸಿ ಜಯಶೀಲರಾಗುತ್ತಾರೆ. ಇಲ್ಲಿಂದ ಮುಂದಕ್ಕೆ ಈ ಚಿತ್ರ ಪ್ರಾರಂಭವಾಗುತ್ತದೆ.

ತನ್ನ ಮನದ ತೊಳಲಾಟವನ್ನು ಹೇಳಿಕೊಳ್ಳುತ್ತಲೇ ಧರ್ಮರಾಯ ತನ್ನ ಮನದ ಇಂಗಿತವನ್ನು ಹೊರಗೆಡುವುತ್ತಾ, ಜನರ ಹಿತ ದೃಷ್ಟಿಯಿಂದಾಗ ಅಧಿಕಾರವನ್ನು ವಹಿಸಿಕೊಳ್ಳುತ್ತೇನೆ ಎಂದು ಭರವಸೆ ಕೊಡುತ್ತಾನೆ. ಸಮರ್ಥ ರಾಜನಿಗೆ, ಸಮರ್ಥ ನಾಯಕನಿಗೆ, ಸಮರ್ಥ ಚಕ್ರವರ್ತಿಗೆ ಸರಿಯಾದ ಅನುಯಾಯಿಗಳು, ಸಲಹೆ ಕೊಡುವ ಮಂತ್ರಿಗಳು, ದಕ್ಷ ಆಡಳಿತಗಾರರು ಬೇಕು ಎಂದು ನಕುಲ ಸಹದೇವರಿಗೆ ಪ್ರಧಾನ ಹುದ್ದೆಗಳನ್ನು ನೀಡುತ್ತಾ, ಭೀಮಾರ್ಜುನರಿಗೆ ಕಡಿಮೆ ದರ್ಜೆಯ ಹುದ್ದೆಗಳನ್ನು ನೀಡುತ್ತಾನೆ ಶ್ರೀ ಕೃಷ್ಣ.

ತಮ್ಮಿಬ್ಬರಿಂದಲೇ ಕುರುಕ್ಷೇತ್ರ ಯುದ್ಧವನ್ನು ಗೆದ್ದಿದ್ದು ಎನ್ನುವ ಅಹಂ ತುಂಬಿಕೊಂಡಿದ್ದ ಭೀಮಾರ್ಜುನರಿಗೆ ತಮ್ಮ ತಪ್ಪಿನ ಅರಿವನ್ನು ಮೂಡಿಸುವ ಸಲುವಾಗಿ ಶ್ರೀ ಕೃಷ್ಣ ರೂಪಿಸಿದ ದೃಶ್ಯನಾಟಕವಿದು.  ತಮ್ಮಂಥಹ ವೀರರಿಗೆ ಮಾಡಿದ ಅವಮಾನ ಎಂದು ನಿರ್ಧರಿಸಿ, ಭೀಮಾರ್ಜುನರು ತಮ್ಮ ಭಾಗದ ರಾಜ್ಯಕ್ಕೆ ಹಠ ತೊಡುತ್ತಾರೆ, ಸಮಾಧಾನವಾಗಿ ಕೊಟ್ಟರೆ ಸರಿ, ಇಲ್ಲದೆ ಹೋದರೆ ಯುದ್ಧಕ್ಕೂ ಸಿದ್ಧ ಎನ್ನುವ ಮಾತ್ರನ್ನು ಧರ್ಮನಂದನನಿಗೆ ಹೇಳುತ್ತಾರೆ.

ಪಾಂಡವರ ಒಗ್ಗಟ್ಟನ್ನು ಮುರಿಯಬೇಡಿ ಎನ್ನುವ ಅವನ ಮಾತಿಗೆ ಮನ್ನಣೆ ಕೊಡೋಲ್ಲ, ಇಡೀ ಸಾಮ್ರಾಜ್ಯವನ್ನೇ ನಿಮಗೆ ಕೊಡುತ್ತೇನೆ ಎಂದರೂ ನಮಗೆ ಭಿಕ್ಷೆ ಬೇಡ ಎಂದು ನಿರಾಕರಿಸುತ್ತಾರೆ, ತಾಯಿ ಕುಂತೀಮಾತಿಗೂ ಬೆಲೆ ಕೊಡೋಲ್ಲ.
ಅಹಂ ತುಂಬಿಕೊಂಡ ರೋಷಾವೇಷದ ಸಹೋದರರು 
ಕುಂತಿ ಹಲುಬುತ್ತಾ
"ಸತ್ತ ಮಕ್ಕಳನ್ನು ಸ್ಮರಿಸುತ್ತಾ ಗಾಂಧಾರಿ ರೋಧಿಸುತ್ತಿದ್ದರೆ
ಈ ಬದುಕಿರುವ ಮಕ್ಕಳ ಅವಿವೇಕವನ್ನು ಕಂಡು ನಾನು ಅಳಬೇಕಿದೆ" ಎನ್ನುತ್ತಾಳೆ, ಅದ್ಭುತ ಸಂಭಾಷಣೆ ಇದು.

ಶ್ರೀ ಕೃಷ್ಣನಿಗೆ ಇದು ಅರಿವಾಗಿ ಗಾರುಡಿಯ ವೇಷದಲ್ಲಿ ನಾನಾ ಚಮತ್ಕಾರ ತೋರಿಸುತ್ತಾ, ಭೀಮಾರ್ಜುನರನ್ನು ಕೆಣುಕುತ್ತಾನೆ. ಮದ ತುಂಬಿದ್ದ ಇಬ್ಬರೂ ಗಾರುಡಿಯ ಸವಾಲನ್ನು ಸ್ವೀಕರಿಸುತ್ತಾರೆ.
ಗಾರುಡಿಯ ಜಾದೂ 
ಉರಗವನ್ನು ಎತ್ತಬೇಕು ಎನ್ನುವ ಸವಾಲಿಗೆ ಭೀಮ ಅಹಂಕಾರದಿಂದ ಆಗಬಹುದು ಎಂದು ಮೊದಲು ಕಾಲಿನಿಂದ ಹಾವಿನ ಬುಟ್ಟಿಯನ್ನು ಒದೆಯುತ್ತಾನೆ, ಮತ್ತೆ ತನ್ನ ಅಹಂಕಾರಕ್ಕೆ ತಕ್ಕ ಬೆಲೆಯನ್ನು ತೆರುತ್ತಾನೆ. ನಾಗಲೋಕದಲ್ಲಿ ಕಾರಾಗೃಹದಲ್ಲಿ ಸೆರೆಯಾಗಿ, ಚಿತ್ರಹಿಂಸೆ ಅನುಭವಿಸಿ, ರೋಧಿಸುತ್ತಾ ಶ್ರೀಕೃಷ್ಣನನ್ನು ನೆನೆಯುತ್ತಾನೆ. ಗಾರುಡಿಯ ಮಾಯಾಜಾಲದಿಂದ ಹೊರಬಂದು ಶ್ರೀ ಕೃಷ್ಣನಿಗೆ ಶರಣಾಗುತ್ತಾನೆ.

ಅರ್ಜುನ ಮಾಯಕುದುರೆಯನ್ನು ಏರಿ, ಅದರಿಂದ ಬಿದ್ದು ಗಾರುಡಿಯ ಮಾಯೆಯ ಮೋಹಿನಿಗೆ ಮನಸೋತು, ಅವಳು ಮೋಹಿನಿ ಎಂದು ಗೊತ್ತಾದ ಮೇಲೆ, ತಪ್ಪಿಸಿಕೊಂಡು ಓಡಿ ಬರುವ ಅರ್ಜುನನನ್ನು ಮತ್ತೆ ಕಾಪಾಡಲು ಶ್ರೀ ಕೃಷ್ಣನೇ ಬರಬೇಕಾಗುತ್ತದೆ.
ಮಾಯೆಯ ಮುಸುಕು 
ಅಹಂ ಎಂದೂ ಒಳ್ಳೆಯದಲ್ಲ, ಅದು ನಮ್ಮ ಬೆಳವಣಿಗೆಯನ್ನು ಕಡಿತಗೊಳಿಸುತ್ತದೆ ಎನ್ನುವ ತಿಳುವಳಿಕೆ ಹೇಳುತ್ತಾ, ಭಕ್ತಿ ಮಾರ್ಗದಿಂದ ಮಾತ್ರ ನಕುಲ ಸಹದೇವರು ಗಾರುಡಿಯ ಮಾಯೆಯನ್ನು ಮೆಟ್ಟಿ ನಿಲ್ಲುತ್ತಾರೆ ಮತ್ತು ಭೀಮಾರ್ಜುನರಿಗೆ ತಮ್ಮ ತಪ್ಪಿನ ಅರಿವನ್ನು ಮೂಡಿಸುತ್ತಾರೆ.

ಆರು ಹಾಡುಗಳಿರುವ ಈ ಚಿತ್ರದಲ್ಲಿ ಹುಣುಸೂರ್ ಕೃಷ್ಣಮೂರ್ತಿ ಇವರ ಸಂಭಾಷಣೆ ಮನಸ್ಸೆಳೆಯುತ್ತದೆ, ಮತ್ತು ಆ ಕಾಲಕ್ಕೆ ವಿಭಿನ್ನವಾದ ಸಾಹಿತ್ಯ ರಚಿಸಿ ಗಮನಸೆಳೆಯುತ್ತಾರೆ.

ರಾಜಕುಮಾರ್ ಇಲ್ಲಿ ಅರ್ಜುನನಾಗಿ ಮಿಂಚುತ್ತಾರೆ, ಇಡೀ ಚಿತ್ರ ಭೀಮ ಮತ್ತು ಅರ್ಜುನರ ಸುತ್ತಲೇ ಸುತ್ತುವುದರಿಂದ ಇತರ ಪಾತ್ರಗಳು ತಮ್ಮ ಅಳತೆಗೆ ತಕ್ಕಂತೆ ಅಭಿನಯ ನೀಡಿದ್ದಾರೆ. ಭೀಮನ ಪಾತ್ರಧಾರಿ ವೀರಣ್ಣ ಹೂಂಕರಿಸುತ್ತಲೇ ಮಾತಾಡುವ ಶೈಲಿ ಚೆನ್ನಾಗಿದೆ.
ರಾಜ್ ಎಂಟ್ರಿ 
ರಾಮಚಂದ್ರ ಶಾಸ್ತ್ರಿ ಧರ್ಮರಾಯನಾಗಿ, ರಮಾದೇವಿ ಕುಂತಿಯಾಗಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇಲ್ಲಿ ಗಮನಸೆಳೆಯುವ ಅಂಶ ಎಂದರೆ ಶ್ರೀ ಕೃಷ್ಣನ ಪಾತ್ರಧಾರಿಯ  ತುಂಟ ನಗೆ, ಸ್ಪಷ್ಟ ಮಾತುಗಳು, ಗಾರುಡಿಯ ಹಾವಭಾವ ನೃತ್ಯ, ಮಾತುಗಳು ಇಷ್ಟವಾಗುತ್ತವೆ, ಆತನ ಸ್ನೇಹಿತ ಮಕರಂದನಾಗಿ ನರಸಿಂಹರಾಜು ಅಭಿನಯ ಕುಶಲತೆಯನ್ನು ಮೆರೆದಿದ್ದಾರೆ.
ಗಾರುಡಿಯ ದೃಶ್ಯಕ್ಕೆ ಮುನ್ನುಡಿ 
ರಾಜಕುಮಾರ್ ಪೌರಾಣಿಕ ಪಾತ್ರದಲ್ಲಿ ವಿಜೃಂಭಿಸಿದ್ದಾರೆ. ಅರ್ಜುನನಾಗಿ ರೋಷ ವೇಷ, ಒಳಗಿನ ಆಕ್ರೋಶ, ಮೋಹಿನಿಯ ಜೊತೆಯಲ್ಲಿ ಮಾತಾಡುವಾಗ ಪ್ರೇಮನಿವೇದನೆ ಮಾಡಿಕೊಳ್ಳುವಾಗ ತೋರುವ ಆಂಗೀಕ ಅಭಿನಯ, ಸಂಭಾಷಣೆ ಶೈಲಿ ಇಷ್ಟವಾಗುತ್ತದೆ. ಸಂಭಾಷಣೆಯಲ್ಲಿನ ಸ್ಪಷ್ಟತೆ, ನಿಖರವಾದ ಉಚ್ಚಾರಣೆ ಅವರ ಅಭಿನಯದ ಮಾರ್ಗದ ಹರಿವು ವಿಸ್ತರಿಸುತ್ತಾ ಇರುವ ಸೂಚನೆ ನೀಡುತ್ತದೆ.

ಒಂದು ಸುಂದರ ಚಿತ್ರ..ಸುಂದರ ಅಭಿನಯ.. ಮುಖ್ಯ ವಾಹಿನಿಯಿಂದ ಎಲ್ಲಿಯೂ ಹಾದಿ ತಪ್ಪದಂತೆ ಚಿತ್ರವನ್ನು ರೂಪಿಸಿದ್ದಾರೆ.

ಮೊದಲ ವಾಕ್ಯವನ್ನು ಮತ್ತೊಮ್ಮೆ ಓದಿರಿ.. ನಂತರ ಹುಣುಸೂರು ಕೃಷ್ಣಮೂರ್ತಿ ಮತ್ತು ರಾಜಕುಮಾರ್ ಜೋಡಿಯ ಬಭೃವಾಹನ ಚಿತ್ರವನ್ನು ನೆನೆಪಿಸಿಕೊಳ್ಳಿ. ಆ ಚಿತ್ರದ ಸರತಿ ಬಂದಾಗ ಇನ್ನಷ್ಟು ಬರೆಯುವೆ..

ಇನ್ನೊಂದು ರಾಜ್ ಚಿತ್ರ ಮಾಣಿಕ್ಯವನ್ನು ಹಿಡಿದು ಸಧ್ಯದಲ್ಲಿ ಬರೋಣ ಅಲ್ಲವೇ 

Saturday, February 18, 2017

ಮನವನ್ನು ಹರನ ತಾಣವ ಮಾಡುವ ಭೂ ಕೈಲಾಸ (1958) (ಅಣ್ಣಾವ್ರ ಚಿತ್ರ ೦೮ / ೨೦೭)


ಅವಕಾಶಗಳು ಹೇಗೆ ಬರುತ್ತದೆಯೋ ಹಾಗೆ ನುಗ್ಗಬೇಕು. ಉಳಿವಿನ ಒತ್ತಡ ಒಂದು ಕಡೆ,  ಬಣ್ಣದ ಕನಸ್ಸು ಇನ್ನೊಂದೆಡೆ. ಈ ಹಾದಿಯಲ್ಲಿ ಸಿಕ್ಕ ಪಾತ್ರಗಳು ಚಿಕ್ಕದೇ ಇರಲಿ ದೊಡ್ಡದೇ ಇರಲಿ ಒಪ್ಪಿಕೊಂಡು ತಮಗೆ ಹೇಳಿದಷ್ಟು ಅಭಿನಯ ನೀಡುತ್ತಿದ್ದ ರಾಜ್ ಅವರಿಗೆ ಇನ್ನೊಂದು ಉತ್ತಮ ಅವಕಾಶ ಸಿಕ್ಕಿತು.. !

ಆ ಕಾಲದ ಉತ್ತಮ ತಾಂತ್ರಿಕತೆ - ಹಲವಾರು ರಾಜ್!
ಹಿಂದಿನ ಚಿತ್ರಗಳಲ್ಲಿನ ತಮ್ಮ ಅಭಿನಯದ ಮುದ್ರೆಯನ್ನು ಇನ್ನಷ್ಟು ಗಟ್ಟಿಯಾಗಿ ಒತ್ತಲು ಈ ಚಿತ್ರ ಸಹಾಯ ಮಾಡಿತು. ಪ್ರತಿಷ್ಠಿತ ಎ. ವಿ. ಎಂ  ಸಂಸ್ಥೆ ನಿರ್ಮಿಸಿದ ಈ ಚಿತ್ರವನ್ನ ನಿರ್ದೇಶಿಸಿದ್ದು ಕೆ. ಶಂಕರ್.

ಕು ರಾ ಸೀತಾರಾಮಶಾಸ್ತ್ರಿ ಅವರ ಸಾಹಿತ್ಯ ಸಂಭಾಷಣೆ ಇದ್ದ ಈ ಚಿತ್ರದಲ್ಲಿ ಸುಮಾರು ೧೮ ಹಾಡುಗಳಿದ್ದದು ವಿಶೇಷ.

ಒಂದು ಹಾಡಿನಲ್ಲಿ ಇಡೀ ರಾಮಾಯಣವನ್ನು ರಚಿಸಿದ್ದು. ದೃಶ್ಯದ ಮೂಲಕ ತೋರಿಸಿದ್ದಾರೆ.  ಸಂಗೀತ, ಗಾಯನ ಎಲ್ಲವೂ ಸುಂದರವಾಗಿದೆ. ಇಂದಿಗೂ "ರಾಮನ ಅವತಾರ ರಘುಕುಲ ಸೋಮನ ಅವತಾರ" ಅತ್ಯಂತ ಜನಪ್ರಿಯ ಕನ್ನಡ ಹಾಡುಗಳಲ್ಲಿ ಒಂದು.  ರಾಮನ ಜನನದಿಂದ ಪಟ್ಟಾಭಿಷೇಕದವರೆಗೆ ಸಮಗ್ರ ಕತೆಯನ್ನು ಚಿಕ್ಕ ಪುಟ್ಟ ದೃಶ್ಯದಲ್ಲಿ ಚಿತ್ರಿಸಿರುವುದು ನಿರ್ದೇಶಕರ ಕಲಾವಂತಿಕೆಗೆ ಸಾಕ್ಷಿ.

ಆ ತುಣುಕುಗಳು ನಿಮಗಾಗಿ..

ಶ್ರೀ ರಾಮ ಮತ್ತು ಅನುಜರ ಜನನ 
ಅಹಲ್ಯೆ ಶಾಪ ವಿಮೋಚನೆ 

ಶಿವ ಧನಸ್ಸು ಮತ್ತು ಶ್ರೀ ರಾಮ 

ಕೈಕೇಯಿ ಮತ್ತು ದಶರಥ ... ಶಾಪವಾದ ಕೊಟ್ಟ ಮಾತು 

ಭರತನ ಭ್ರಾತೃ ಪ್ರೇಮ... ರಾಮನ ಪಾದುಕೆ ಹೊತ್ತ ಭರತ
ಲಕ್ಶ್ಮಣ ರೇಖೆ



ಸೀತಾಪಹರಣ 

ಕನ್ನಡ ಕುಲ ಪುಂಗವ ಹನುಮ 

ರಾಮನ ಮುದ್ರಿಕೆ ಕಂಡ  ಸೀತೆ 

ಲಂಕಾದಹನ 

ಮರಳಿ ಆಯೋಧ್ಯೆಗೆ 

ರಾಜ್ ಕುಮಾರ್ ಅವರು ರಾವಣನಾಗಿ ಅಬ್ಬರಿಸಿದ ಈ ಚಿತ್ರದಲ್ಲಿ ಅವರ ಅಭಿನಯದ ಪ್ರಚಂಡ ಪ್ರತಿಭೆ ತೆರೆಯ ಮೇಲೆ ಬಂದಿದೆ. ಸಂಭಾಷಣೆ, ಉಚ್ಚಾರಣೆ, ಕಣ್ಣಲ್ಲಿ ಕಾರುವ ಕೋಪ, ಗಹಗಹಿಸಿ ನಗುವುದು, ಓರೇ ನೋಟ, ಆಕ್ರೋಶ, ಸಿಟ್ಟು, ದೇಹ ಭಾಷೆ ಎಲ್ಲವೂ ಸುಸೂತ್ರವಾಗಿ ಮೂಡಿ ಬಂದಿದೆ. ತೆರೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ.
ರಾವಣನಾಗಿ ರಾಜ್ 

 ಈ ಚಿತ್ರದ ಕಥೆ ಎಲ್ಲರಿಗೂ ಗೊತ್ತಿರುವುದೇ. ಲಂಕೇಶ್ವರ ರಾವಣ ತನ್ನ ತಾಯಿಯ ಮೇಲಿನ ಅಪರಿಮಿತ ಪ್ರೀತಿಯಿಂದಾಗಿ, ಅವಳ ನಿತ್ಯ ಪೂಜೆಗೆ ಶಿವನ ಆತ್ಮಲಿಂಗವನ್ನೇ ತರುವುದಾಗಿ ಉಗ್ರ ತಪಸ್ಸು ಮಾಡುತ್ತಾನೆ.
ರಾವಣನ ಮಾತೆ ಕೈಕಸಿಯ ಶಿವನ ಪೂಜೆ 
ಅವನ ತಪಸ್ಸಿನ ಭಕ್ತಿಗೆ ಮೆಚ್ಚಿದ ಪರಶಿವ ಪಾರ್ವತಿಯೊಂದಿಗೆ ಪ್ರಕಟವಾಗುತ್ತಾನೆ. ಅದಕ್ಕೆ ತುಸುಮುಂಚೆ ರಾವಣನ ತಪಸ್ಸಿನ ಇಂಗಿತವನ್ನು ತಿಳಿದ ಕಲಹಪ್ರಿಯ ಆದರೆ ಲೋಕಕಲ್ಯಾಣಕ್ಕಾಗಿ ಶ್ರಮಿಸುವ ನಾರದ, ಪಾರ್ವತಿಯನ್ನು ಹರಿಯ ಬಳಿ ಸಹಾಯ ಕೇಳುವಂತೆ ಮಾಡುತ್ತಾನೆ.  ಹರಿಯು ಮೋಹದ ಹೆಣ್ಣಿನ ರೂಪದಲ್ಲಿ ರಾವಣನ ಮನಸ್ಸನ್ನು ಸೇರಿಬಿಡುತ್ತಾನೆ.
ತಪಸ್ಸಿಗೆ ಹೊರಟ ರಾವಣ 

ಪರಶಿವ ಪಾರ್ವತಿ ಸಮೇತನಾಗಿ ಪ್ರಕಟವಾಗಿ ಬೇಡಿದ ವರ ಕೊಡುವೆ ಎಂದಾಗ, ಹರಿಯ ಮೋಹದ ಜಾಲದಲ್ಲಿ ಸಿಕ್ಕಿದ್ದ ರಾವಣ, ತಾಯಿ ಪಾರ್ವತಿಯ ಮೇಲೆಯೇ ಮೋಹವಶನಾಗಿ ಅವಳನ್ನೇ ಬೇಡುತ್ತಾನೆ. ಭಕ್ತರ ಇಷ್ಟ ನೆರವೇರಿಸುವ ಶಿವ, ಒಪ್ಪಿಗೆ ನೀಡಿ ಪಾರ್ವತಿಯನ್ನು ರಾವಣ ಜೊತೆಯಲ್ಲಿ ಕಳಿಸುತ್ತಾನೆ .
ಉಗ್ರರೂಪಿಯಾಗಿ ಪಾರ್ವತಿ 

ಮತ್ತೆ ನಾರದ ತನ್ನ ಕೈಚಳಕ ತೋರಿ, ರಾವಣನ  ಕಣ್ಣಿಗೆ ಪಾರ್ವತಿ ಉಗ್ರ ರೂಪಿಯಾಗಿ ಕಾಣುವ ಹಾಗೆ ಮಾಡುತ್ತಾನೆ.  ಕುಪಿತಗೊಂಡ ರಾವಣ, ಪಾರ್ವತಿಯನ್ನು  ಕೈಲಾಸಕ್ಕೆ ಬಿಟ್ಟು, ಶಿವನಿಗೆ  ಹರಿತವಾದ ಕುಪಿತ ಮಾತುಗಳನ್ನು ಹೇಳಿ ಹೊರಡುತ್ತಾನೆ.

ನಾರದ ರಾವಣನ ಉಗ್ರಮಾತುಗಳಿಗೆ ಸಮಾಧಾನ ಹೇಳುತ್ತಾ ಪಾರ್ವತಿಗಿಂತಲೂ ಸುಂದರಿ ಪಾತಾಳ ಲೋಕದ ದೊರೆ ಮಯನ ಮಗಳು ಮಂಡೋದರಿಯ ಜೊತೆ ಲಗ್ನವಾಗುವಂತೆ ಮಾಡುತ್ತಾನೆ. ಪಾರ್ವತಿಯ ಮೋಹ ಇನ್ನೂ ಇಳಿಯದ ಲಂಕೇಶ್ವರ ತನ್ನ ಅರಮನೆಗೆ ಬಂದು ತಾಯಿಯ ಆಶೀರ್ವಾದ ಬೇಡಿದಾಗ, ತಾಯಿ ಕೇಳುತ್ತಾಳೆ "ರಾವಣ ಆತ್ಮಲಿಂಗವೆಲ್ಲಿ"
ಮಂಡೋದರಿಯಾಗಿ ಜಮುನಾ 
 ತನ್ನ ತಪ್ಪಿನ ಅರಿವಾಗದ ರಾವಣ ಅಹಂನಲ್ಲಿ ಇನ್ನಷ್ಟು ಮಾತಾಡಿದಾಗ ನಾರದ ಹರಿಯ ಮೋಹರೂಪಿಯನ್ನು ರಾವಣನ ಮನದಿಂದ ದೂರವಾಗುವಂತೆ ಮಾಡಿದಾಗ, ರಾವಣನಿಗೆ ತನ್ನ ತಪ್ಪಿನ  ಅರಿವಾಗುತ್ತದ. ಮತ್ತೆ ಉಗ್ರತಪಸ್ಸಿಗೆ ಕೂರುತ್ತಾನೆ.

ಭಕ್ತರ ಭಕ್ತ ಮಹಾದೇವ ರಾವಣನಿಗೆ ತನ್ನ ಆತ್ಮ ಲಿಂಗವನ್ನು ಕೊಡುತ್ತಾ, ಇದರೊಳಗೆ ಅಡಗಿರುವ ಕಾಂತಿಗೆ, ಶಕ್ತಿಗೆ ಭೂ ಪ್ರಕೃತಿ ಸದಾ ಆಕರ್ಷಿಸಿರುತ್ತದೆ.. ನಿರ್ಧಾರಿತ ಸ್ಥಳ ಸೇರುವತನಕ ಇದು ಭೂಸ್ಪರ್ಶವಾಗದ ರೀತಿಯಲ್ಲಿ ನೋಡಿಕೋ ಎಂದು ಎಚ್ಚರಿಕೆಯ ಮಾತುಗಳನ್ನುಹೇಳುತ್ತಾನೆ.
ರಾವಣನಿಗೆ ಆತ್ಮಲಿಂಗ 
ಕರಾವಳಿಯ ಮಾರ್ಗದಲ್ಲಿ ಲಂಕೆಗೆ ಹೊರಟ ರಾವಣನ್ನು ಕಂಡು, ನಾರದ ಗಣಪತಿಗೆ ಹೇಳುತ್ತಾನೆ "ನಿನಗೆ ಆಗ್ರ ಪೂಜೆ ಮಾಡದೆ ತನ್ನ ಕಾರ್ಯ ಸಾಧಿಸಿದ್ದಾನೆ.. ಇನ್ನೂ ಆತ್ಮಲಿಂಗ ಲಂಕೆಗೆ ಸೇರಿದರೆ ಮುಗಿಯಿತು.. ನೀವೆಲ್ಲಾ ರಾವಣನ  ಊಳಿಗಕ್ಕೆ ಸಿದ್ಧವಾಗಿರಿ"
ಗಣಪನ  ಅಭಯ ಹಸ್ತ 

ಚತುರಮತಿ ಗಣಪತಿ ಗೋಪಾಲಕನಾಗಿ ರಾವಣನಿಗೆ ಕಾಣಿಸಿಕೊಂಡು, ಅರ್ಘ್ಯ ಕೊಡುವುದಕ್ಕಾಗಿ ರಾವಣ ಆತ್ಮಲಿಂಗವನ್ನು ತನ್ನ ಕೈಗೆ ನೀಡುವಂತೆ ಮಾಡುತ್ತಾನೆ. ಮೂರು ಬಾರಿ ಕರೆಯುತ್ತೇನೆ, ಅಷ್ಟರಲ್ಲಿ ನೀ ಬರದೇ ಹೋದರೆ ಕೆಳಗೆ ಇಟ್ಟು, ಅರ್ಘ್ಯ ನೀಡಲು ಹೋಗುತ್ತೇನೆ ಎನ್ನುತ್ತಾನೆ.
ಭೂಸ್ಪರ್ಶವಾದ ಆತ್ಮ ಲಿಂಗ 

ಗೋಪಾಲಕನನ್ನು ಥಳಿಸುವ ರಾವಣ 

ಗಣಪನ ಕುಚೋದ್ಯ 
ಪೂರ್ವನಿರ್ಧಾರಿತ ಯೋಜನೆಯಂತೆ ಮೂರು ಬಾರಿ ರಾವಣನ ಹೆಸರು ಕೂಗಿ, ರಾವಣ ಬರದೇ ಇರುವುದನ್ನು ನೋಡಿ ಭೂ ಸ್ಪರ್ಶ  ಮಾಡಿಸಿಯೇ ಬಿಡುತ್ತಾನೆ. ಕುಪಿತಗೊಂಡ ರಾವಣ ಆ ಗೋಪಾಲಕನಿಗೆ ಮನಬಂದಂತೆ ಬಯ್ದು, ಹೊಡೆದು.. ನಂತರ ಆ ಆತ್ಮಲಿಂಗವನ್ನು ಭೂ ತಾಣದಿಂದ ಹೊರ ತೆಗೆಯಲು  ಶ್ರಮಿಸಿ ಆಗದೆ ಹೋಗಿ ಕಡೆಗೆ ತನ್ನ  ಆತ್ಮಾರ್ಪಣೆ ಮಾಡಲು ಸಿದ್ಧವಾಗುತ್ತಾನೆ.

ಅವನ ಭಕ್ತಿಗೆ ಮೆಚ್ಚಿ, ಸದಾಶಿವ ಭೂ ಸ್ಪರ್ಶ ಮಾಡಿದ ಈ ತಾಣ ಭೂ ಕೈಲಾಸ ಎಂದು ಪ್ರಸಿದ್ಹಿಯಾಗಲಿ ಎಂದು
ಹರಸುತ್ತಾನೆ.
ಭೂಕೈಲಾಸ 
ಈ ಕಥೆಯನ್ನು ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿರುವ ರೀತಿ  ಸೊಗಸಾಗಿದೆ.  ಬರೋಬ್ಬರಿ ಹದಿನೆಂಟು ಹಾಡುಗಳು ಇದ್ದರೂ ಚಿತ್ರದ ಓಘಕ್ಕೆ ಅಡ್ಡಿಮಾಡದೆ ಚಿತ್ರದ ಕತೆಯನ್ನು  ಕೊಂಡೊಯ್ಯುತ್ತದೆ. "ರಾಮನ ಅವತಾರ" ಪ್ರಸಿದ್ಧವಾದ ಹಾಡಾಗಿದೆ.

ರಾವಣನಾಗಿ ರಾಜ್ ಕುಮಾರ್ ಅದ್ಭುತವಾಗಿ ನಟಿಸಿದ್ದಾರೆ..
ಭವಿಷ್ಯದ ತಾರಾ ಪಟ್ಟ - ರಾಜ್ 

ನಾರದನಾಗಿ  ತುಂಟನಗುವಿನ ಸರದಾರ ಕಲ್ಯಾಣ್ ಕುಮಾರ್ ಚಿತ್ರದುದ್ದಕ್ಕೂ ಕಾಣುತ್ತಾರೆ. ಸಂಭಾಷಣೆ, ಆ ಕುಟಿಲತೆ, ತರ್ಕಬದ್ಧವಾದ  ಮಾತುಗಳು.ಕುಚೋದ್ಯ ಎಲ್ಲದರಲ್ಲಿಯೂ ಮಿಂಚುತ್ತಾರೆ.
 ತುಂಟ ಕಲಹಪ್ರಿಯ ನಾರದನಾಗಿ ಕಲ್ಯಾಣ್ ಕುಮಾರ್ 
ಅಶ್ವಥ್ ರಾಜ್ ಚಿತ್ರಸರಣಿಯಲ್ಲಿ ಮೊದಲಬಾರಿಗೆ  ಸೇರಿಕೊಳ್ಳುತ್ತಾರೆ. ಶಿವನ ಪಾತ್ರದಲ್ಲಿ  ಹದವರಿತ ನಟನೆ. ಜೀವಂತ ಹಾವನ್ನು ಕೊರಳಿಗೆ ಸುತ್ತಿಕೊಂಡು  ಅಭಿನಯಿಸಿರುವುದು ವಿಶೇಷ.
ಪರಶಿವನಾಗಿ ಅಶ್ವತ್ 
ಮಂಡೋದರಿಯಾಗಿ ಜಮುನಾ ಅವರ ಅಭಿನಯ ಸೊಗಸಾಗಿದೆ.
ಶಿವನ ಸತಿ  ಪಾರ್ವತಿಯಾಗಿ ಬಿ ಸರೋಜಾದೇವಿ ಮುದ್ದಾಗಿ ಕಾಣುತ್ತಾರೆ.
ಕಪ್ಪುಬಿಳುಪಿನ ದೃಶ್ಯಗಳಲ್ಲಿ ನಟ ನಟಿಯರು ಮುದ್ದಾಗಿ ಕಾಣುತ್ತಾರೆ.  ಉಳಿದ ಪಾತ್ರವರ್ಗದಲ್ಲಿ ಚಿತ್ರಕತೆಗೆ ತಕ್ಕ ಅಭಿನಯ

ಪಾರ್ವತಿಯಾಗಿ ಬಿ ಸರೋಜಾದೇವಿ 
ಆರ್ ಸುದರ್ಶನಂ ಮತ್ತು ಆರ್ ಗೋವರ್ಧನಂ ಅವರ ಸಂಗೀತದಿಂದ ಬೆಳಗಿದ್ದ ಈ ಚಿತ್ರಕ್ಕೆ ಛಾಯಾಗ್ರಹಣ ಮಾಧವ ಬುಲ್ ಬುಲೆ ಅವರದ್ದು.  ಗಾಯಕರು  ಸಿ ಎಸ್ ಜಯರಾಮನ್, ಎಸ್ ಗೋವಿಂದರಾಜನ್, ಎಂ ಎಲ್ ವಸಂತಕುಮಾರಿ, ಪಿ ಸುಶೀಲ, ಟಿ ಎಸ್ ಭಗವತಿ ಮತ್ತು ಎ ವಿ ಕೋಮಲ.

ಗುರಿ ಕಣ್ಣ ಮುಂದೆ ಇದ್ದಾಗ ಅಡ್ಡಿ ಅಡಚಣೆಗಳು ಇರುತ್ತವೆ, ಗುರಿ ತಪ್ಪಿಸಲು ಹೊರಗಿನ ಶಕ್ತಿಗಳು  ತಡೆ ಹಾಕುತ್ತವೆ, ಆದರೆ ಅದನ್ನು ದಾಟಬೇಕು. ಗುರಿಯಲ್ಲಿ ಸೋತರು ಮತ್ತೊಮ್ಮೆ ಶಕ್ತಿ ಮೈಗೂಡಿಸಿಕೊಂಡು ಮುನ್ನುಗ್ಗಬೇಕು. ಇದೆಲ್ಲದರ ಜೊತೆಯಲ್ಲಿ  ಗುರಿ ಸಾತ್ವಿಕವಾಗಿದ್ದಾಗ ದೈವದ ಪ್ರೇರಣೆ ಇರುತ್ತದೆ, ಆದರೆ ಆ ಗುರಿಯಲ್ಲಿ ಹಾದಿ ತಪ್ಪಿದರೆ ದೈವವೇ ಕಾಡುವ ಭೂತವಾಗುತ್ತದೆ ಎನ್ನುವ ಸಂದೇಶ  ಸಿಗುತ್ತದೆ..

ರಾಜ್ ಕುಮಾರ್ ತಮಗೆ ಸಿಕ್ಕ ಪಾತ್ರ ದೊಡ್ಡದೇ ಇರಲಿ ಚಿಕ್ಕದೇ ಇರಲಿ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದದು ಅವರ ಹೆಗ್ಗಳಿಕೆ.. ಅಂತಹ ಇನ್ನೊಂದು  ಶ್ರದ್ಧೆಯಿಂದ ಕೂಡಿದ ಚಿತ್ರದ ಜೊತೆಯಲ್ಲಿ ಮತ್ತೊಮ್ಮೆ ಸೇರೋಣವೇ.. !