Saturday, November 1, 2025

ಪೌರಾಣಿಕ ಕಥಾವಸ್ತುವನ್ನು ಸಾಮಾಜಿಕವಾಗಿ ಒಗ್ಗಿಸಿದ ಪರಿ ಗಂಗೆ ಗೌರಿ 1967 (ಅಣ್ಣಾವ್ರ ಚಿತ್ರ ೮೨/೨೦೭)

ಕಥಾವಸ್ತುವನ್ನು ಆಯ್ದುಕೊಂಡು ಅದಕ್ಕೊಂದು ಸಹನೀಯ ರೂಪ ಕೊಡುವಲ್ಲಿ ಪದ್ಮಿನಿ ಪಿಕ್ಚರ್ಸ್ ಎತ್ತಿದ ಕೈ. ಸಾಮಾಜಿಕ ಚಿತ್ರವೇ ಆಗಲಿ, ಪೌರಾಣಿಕವಾಗಲಿ, ಐತಿಹಾಸಿಕವಾಗಲಿ ಚಿತ್ರಕತೆಯೇ ಈ ಸಂಸ್ಥೆಯ ಶಕ್ತಿ ಮತ್ತು ಅದನ್ನು ಅಷ್ಟೇ ಪ್ರಾಮಾಣಿಕವಾಗಿ ಫಲಕದಲ್ಲಿ ತೋರಿಸುವುದು ಈ ಸಂಸ್ಥೆಯ ವಿಶೇಷ. 

ಜನಜನಿತವಾದ ಪಾರ್ವತಿ ಪರಮೇಶ್ವರರ ಕತೆಯನ್ನು ಅಚ್ಚುಕಟ್ಟಾದ ಚಿತ್ರಕತೆ ಮಾಡಿ ಕೆಲವೇ ಚಿತ್ರಗಳ ಹಿಂದೆ ಇದೆ ಕತೆಯನ್ನು ಆಧರಿಸಿದ ಪಾರ್ವತಿ ಕಲ್ಯಾಣ ಚಿತ್ರ ಒಂದು ಕಡೆ.. ಈ ಚಿತ್ರದ ಅದರ ಮುಂದುವರೆದ ಭಾಗ ಅಂತ ಅಲ್ಲದಿದ್ದರೂ ಅದೇ ಕತೆಯ ಅಂತ್ಯ ಈ ಚಿತ್ರದ ಆರಂಭ ಎನ್ನಬಹುದು. 

ರಾಜಕುಮಾರ್ ಇಲ್ಲಿ ಶಿವನ ಪಾತ್ರಧಾರಿ.. ಲೀಲಾವತಿ ಗೌರಿಯಾದರೆ, ಭಾರತಿ ಗಂಗೆ ಪಾತ್ರ. ಅಶ್ವಥ್ ನಾರದ, ರಾಜೇಶ್ ವಿಷ್ಣು, ಎಂಪಿ ಶಂಕರ್ ಯಥಾ ಪ್ರಕಾರ ಕಾಡುವ ಪಾತ್ರ ಇಲ್ಲಿ ಶನಿದೇವನಾಗಿ, ಉಳಿದಂತೆ ಕೆಲವು ಮುಖ್ಯ ಪಾತ್ರಗಳಲ್ಲಿ ನರಸಿಂಹರಾಜು, ಆರ್ ಟಿ ರಮಾ, ಕೃಷ್ಣಶಾಸ್ತ್ರಿ, ಪಾಪಮ್ಮ, ದಿನೇಶ್, ಮಚ್ಚೇರಿ ಅಭಿನಯಿಸಿದ್ದಾರೆ. 

ಇಲ್ಲಿನ ವಿಶೇಷತೆ ಅಂದ್ರೆ ರಾಜಕುಮಾರ್ ಮತ್ತೆ ಶಿವನಾಗಿ ನಂತರ ಭೂಲೋಕದಲ್ಲಿ ಮಾನವನಾಗಿ ನಟಿಸುವ ಪಾತ್ರ. ಒಂದು ದೈವಿ ಕಳೆ, ಇನ್ನೊಂದು ಪಾತ್ರದಲ್ಲಿ ಮಾನವತ್ವ. ಅವರ ಪರಕಾಯ ಪ್ರವೇಶ ಖುಷಿ ನೀಡುತ್ತದೆ. 

ಇಲ್ಲಿ ಗಂಗೆ ಗೌರಿ ಪಾತ್ರವೇ ಮುಖ್ಯವಾದರೂ, ಯಥಾಪ್ರಕಾರ ತಮ್ಮ ಪಾತ್ರದ ಪ್ರಾಮುಖ್ಯತೆ ಕಡೆಗೆ ಗಮನ ಕೊಡದೆ ತಮ್ಮ ಅಭಿನಯದ ಬಗ್ಗೆ ಪಾತ್ರ ತಲ್ಲೀನರಾಗಿರೋದು. ಆಗಲೇ ಎಂಭತ್ತು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಹಮ್ಮು ಬಿಮ್ಮು ಇಲ್ಲದೆ ಪಾತ್ರಗಳಲ್ಲಿ ತೊಡಗಿಸಿಕೊಳ್ಳೋದು ನೋಡಿದಾಗ ತುಂಬಿದ ಕೊಡ ಅನ್ನಿಸದೆ ಇರದು. 

ಪರಶಿವನಾಗಿ ಅಗತ್ಯವಾದ ಮಾತುಗಳಲ್ಲಿ ಮಿಂಚಿದ್ದಾರೆ. ಶಾಪ ಕೊಡೋದು, ಇಬ್ಬರು ಹೆಂಡತಿಯರ ಜೊತೆಯ ತಲ್ಲಣ, ಉಗ್ರರಾದ ದೃಶ್ಯಗಳು, ಮತ್ತೆ ಶಾಂತನಾಗುವ ಪರಿ, ಭೂಲೋಕದಲ್ಲಿ ಜನಿಸಿದಾಗ ಮಾನವರ ಕುಹಕದ ಮಾತುಗಳನ್ನು ಸಹಿಸಿಕೊಳ್ಳುವ ಪರಿ. ಅನೇಕಾನೇಕ ದೃಶ್ಯಗಳು ಅವರ ಅಭಿನಯ ಸಾಮರ್ಥ್ಯಕ್ಕೆ ಪುಷ್ಟಿ ನೀಡುತ್ತವೆ. 

ಲೀಲಾವತಿ ಭಾರತಿ ಅವರ ಜುಗಲ ಬಂಧಿ ಅಭಿನಯ.. ಮಾತಿಗೆ ಮಾತು ನಗುವಿಗೆ ನಗು.. ಕೋಪದ ಮಾತುಗಳಿಗೆ ಬಿರು ಮಾತುಗಳು ಖುಷಿ ನೀಡುತ್ತದೆ. 

ನರಸಿಂಹರಾಜು ಹಾಗೂ ಜಯ ಅವರ ಕಾವ್ಯತ್ಮಕ ಸಂಭಾಷಣೆ ನಗು ತರಿಸುತ್ತೆ 

ಪಾಪಮ್ಮ ಯಥಾಪ್ರಕಾರ ಘಟವಾಣಿ ಆದರೆ ಅಂತ್ಯದಲ್ಲಿ ಬದಲಾಗುವ ಪಾತ್ರ 

ಕೃಷ್ಣಶಾಸ್ತ್ರಿ ಅವರ ಪಾತ್ರ ನರಸಿಂಹರಾಜು ಅವರ ಜೊತೆ ಸಂಭಾಷಣೆಗೆ ಸೀಮಿತವಾದ ಪಾತ್ರ

ಹಿಂದಿನ ಚಿತ್ರಗಳಂತೆ ಇಲ್ಲಿ ಎಂ ಪಿ ಶಂಕರ್ ಶನಿದೇವನಾಗಿ ನಾರದ ಅಶ್ವಥ್ ಅವರನ್ನು ಕಾಡುವುದು, ಅವರನ್ನು ಕಾಡುತ್ತ ಅವರನ್ನು ಹುಡುಗಿಯಾಗಿ ಬದಲಾಯಿಸೋದು ಆ ಪಾತ್ರದಲ್ಲಿ ರಮಾ ಸೊಗಸಾಗಿ ಅಭಿನಯಿಸಿದ್ದಾರೆ ಹಾಗೆಯೇ ಶನಿದೇವನಾಗಿ  ಎಂಪಿ ಶಂಕರ್ ಪರಿಪರಿಯಾಗಿ ಗಂಗೆ ಗೌರಿ ಅವರಿಗೆ ಕಾಡುವುದು.. ಎಲ್ಲವೂ ಒಪ್ಪಿತವಾಗಿದೆ. 

ಎಲ್ಲಾ ಗ್ರಹಗಳನ್ನು ಪರಿಚಯಿಸುತ್ತ ಅದರ ವಿಶೇಷತೆ ಹೇಳುತ್ತಾ ನಾರದರು ಹಾಡಿನ ಮೂಲಕ ಬರುವುದು ವಿಶೇಷತೆ, ಮತ್ತು ಚಿತ್ರಸಾಹಿತಿಯ ಪ್ರತಿಭೆ ಅರಿವಾಗುತ್ತದೆ. 

ಪದ್ಮಿನಿ ಪಿಕ್ಚರ್ಸ್ ಅವರ ಲಾಂಛನದಲ್ಲಿ ಬಿ ಆರ್ ಪಂತುಲು ನಿರ್ಮಿಸಿ ನಿರ್ದೇಶಿಸಿದ ಚಿತ್ರಕ್ಕೆ ಎ ಎನ್ ನಾಗರಾಜ್ ಕತೆ ಒದಗಿಸಿದ್ದಾರೆ. ಪದ್ಮಿನಿ ಪಿಕ್ಚರ್ಸ್ ತಂಡ ಚಿತ್ರಕತೆ ರಚಿಸಿದೆ. ಆಸ್ಥಾನ ಸಂಗೀತ ನಿರ್ದೇಶಕ ಟಿ ಜಿ ಲಿಂಗಪ್ಪ., ಸಾಹಿತ್ಯ ಜಿ ವಿ ಅಯ್ಯರ್, ಛಾಯಾಗ್ರಹಣ ಪಿ ಎಲ್ ನಾಗಪ್ಪ ಇವರ ಜೊತೆಗೆ ಗಾಯನದಲ್ಲಿ ಪಿ ಬಿ ಶ್ರೀನಿವಾಸ್, ಬಾಲಮುರಳಿಕೃಷ್ಣ, ಎಸ್ ಜಾನಕೀ, ಲತಾ, ಪಿ ಲೀಲಾ ದನಿಗೂಡಿಸಿ ಈ ಚಿತ್ರವನ್ನು ಸ್ಮರಣೀಯವಾಗಿಸಿದ್ದಾರೆ. 

ಗೊತ್ತಿರುವ ಕತೆಯನ್ನು ಆತ್ಮೀಯವಾಗಿ ಸಹನೀಯವಾಗಿಸೋದು ನಿರ್ದೇಶಕರ ಶಕ್ತಿ.. ಪಂತುಲು ಅವರು ಇಲ್ಲಿ ಗೆದ್ದಿದ್ದಾರೆ. 



















Tuesday, October 21, 2025

ಲೋಕಕ್ಕೆ ಪಾಠ ಹೇಳಿಕೊಟ್ಟ ಸತೀ ಸುಕನ್ಯ 1967 (ಅಣ್ಣಾವ್ರ ಚಿತ್ರ ೮೧/೨೦೭)

ನಮ್ಮ ಬಳಿ ಯಾರ ಬಳಿಯೂ ಇರದ ಒಂದು ಉತ್ತಮವಾದ ವಸ್ತುವಿದ್ದರೆ ಸಾಕು.. ನಮ್ಮ ಅಹಂ ಮೆಲ್ಲನೆ ಏರುತ್ತಾ ಹೋಗುತ್ತದೆ.. ಅದನ್ನು ನಾವು ಎಷ್ಟು ಹೇಳಿದರೂ ಹೊಗಳಿಕೊಂಡರೂ ಸಾಲದು ಅನ್ನುವಷ್ಟು ಆ ವಸ್ತು ನಮ್ಮ ಮನಸ್ಸಿನ ಮೇಲೆ ಗ್ರಹಣ ಮಾಡಿರುತ್ತದೆ. 

ಸಿನೆಮಾಗಳ ನಿರ್ಮಾಣ ಅದರಲ್ಲೂ ಕನ್ನಡ ಚಿತ್ರಗಳ ಸೀಮಿತ ಮಾರುಕಟ್ಟೆಯಲ್ಲಿ ತಯಾರಾಗುತ್ತಿದ್ದ ಚಿತ್ರಗಳು ಕಡಿಮೆ.. ಅಂತ ಕಾಲಘಟ್ಟದಲ್ಲಿ ತಮ್ಮ ಪ್ರತಿಭೆಯಿಂದ, ನಿರ್ಮಾಪಕರ, ನಿರ್ದೇಶಕರ ಸಹಯೋಗದಿಂದ, ಸಹನಟರ ಆರೋಗ್ಯ ಪೂರ್ಣ ಸಹಕಾರಗಳಿಂದ ಆಗಲೇ ಎಂಭತ್ತು ಚಿತ್ರಗಳ ನಾಯಕ ನಟರಾಗಿದ್ದ ರಾಜಕುಮಾರ್ ಈ ಚಿತ್ರವನ್ನು ಆರಿಸಿಕೊಂಡಿದ್ದು, ಹಾಗೂ ಅದರ ಪಾತ್ರ ಪೋಷಣೆಯಲ್ಲಿ ಯಶಸ್ವಿಯಾಗಿದ್ದು ಅಚ್ಚರಿ ಎನಿಸಿದ್ದು ಸುಳ್ಳಲ್ಲ.. 

ನಿಜ, ಸತೀ ಸುಕನ್ಯ ಜನಜನಿತವಾಗಿದ್ದ ಪೌರಾಣಿಕ ಕಥಾನಕ.. ಅದಕ್ಕೆ ಒಂದಷ್ಟು ಹಾಸ್ಯ, ಕಲಿಯುಗದ ಜನರ ಅಸೂಯೆ ಸೇರಿಸಿ, ಸುಂದರ ಹಾಡುಗಳ ಮಿಲನ ಈ ಚಿತ್ರದಲ್ಲಿ ಮೂಡಿ ಬಂದಿದೆ.. 

ರಾಜಕುಮಾರ್ ಅವರ ಪಾತ್ರ ಚ್ಯವನ ಮಹರ್ಷಿ, ತಪಸ್ಸು ಮಾಡುತ್ತಿದ್ದಾಗ ಹುತ್ತ ಅಂದರೆ ವಲ್ಮೀಕ ಬೆಳೆದು ಬರಿ ಕಣ್ಣುಗಳು ಮಾತ್ರ ಕಾಣುತ್ತಿರುತ್ತದೆ.. ಕುತೂಹಲ ಮನಸ್ಸಿನ ರಾಜಕುಮಾರಿ ಸುಕನ್ಯ ಕಡ್ಡಿಯಿಂದ ಆ ಹುತ್ತದಿಂದ ಕಾಣುತ್ತಿದ್ದ ಕಣ್ಣುಗಳನ್ನು ಚುಚ್ಚಿದಾಗ ಹುತ್ತ ಒಡೆದು ಹೋಗಿ ಕಣ್ಣಿನಿಂದ ರಕ್ತ ಸುರಿಸಿಕೊಂಡು ನೋವಿನಿಂದ ನರಳುತ್ತಿದ್ದ ಮಹರ್ಷಿ ಹೊರಬರುತ್ತಾರೆ. 

ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು ಎಂಬ ನಿಲುವಿನ ಸುಕನ್ಯ ಮಾತನ್ನು ನಾರದರೂ ಅನುಮೋದಿಸಿದ್ದರಿಂದ ಸುಕನ್ಯಾ ವೃದ್ಧ ಹಾಗೂ ಅಂಧ ಚ್ಯವನ ಮಹರ್ಷಿಯನ್ನು ಮದುವೆಯಾಗಿ ಅವರ ದಿನ ನಿತ್ಯದ ಪೂಜಾ, ತಪಸ್ಸಿನ ಕಾರ್ಯಗಳಲ್ಲಿ ನೆರವಾಗುತ್ತಾರೆ.. 


ಕಾಲಾನಂತರ ನಾರದರ ಲೋಕಕಲ್ಯಾಣಾರ್ಥ ಘಟನೆಗಳಲ್ಲಿ ಚ್ಯವನ ಹಾಗೂ ಸುಕನ್ಯ ಅವರ ದಾಂಪತ್ಯದ ಒಲುಮೆ, ಪತಿ ಭಕ್ತಿ, ಪತಿ ಪತ್ನಿಯರ ಅನ್ಯೋನ್ಯತೆ ಇವುಗಳ ಸತ್ವ ಪರೀಕ್ಷೆ ನೆಡೆಯುತ್ತದೆ ಹಾಗೂ ಅಂತ್ಯದಲ್ಲಿ ಚ್ಯವನ ಮಹರ್ಷಿಗೆ ಯೌವನ ಮತ್ತು ದೃಷ್ಟಿ ಮರಳಿ ಬರುತ್ತದೆ.. 

ಈ ಕಥಾನಕವನ್ನು ಅಚ್ಚುಕಟ್ಟಾಗಿ ನಿರೂಪಿಸಿದವರು ನಿರ್ದೇಶಕ ವ್ಯೆ ಆರ್ ಸ್ವಾಮಿ.. ಶ್ರೀ ರಾಮಚಂದ್ರ ಅವರ ಕಥೆಗೆ ಸಂಭಾಷಣೆ ಒದಗಿಸಿದವರು ಸೋರಟ್ ಅಶ್ವಥ್, ಗೀತೆಗಳನ್ನು ಎಂ ಎನ್ ಆರಾಧ್ಯ.. ಇಂಪಾದ ಸಂಗೀತ ಒದಗಿಸಿದವರು ರಾಜನ್ ನಾಗೇಂದ್ರ ಜೋಡಿ. 

ಸುಶ್ರಾವ್ಯಗಾಗಿ ಹಾಡಿದವರು ಪಿ ಬಿ ಶ್ರೀನಿವಾಸ್, ಎಸ್ ಜಾನಕಿ, ಪಿ ಲೀಲಾ, ಎಲ್ ಆರ್ ಈಶ್ವರಿ, ಬಿ ಕೆ ಸುಮಿತ್ರಾ, ನಾಗೇಂದ್ರ, ರತ್ನಾಕರ್, ಹಾಗೂ ಪ್ರೇಮ. 

ಹಾಸ್ಯನಟ ರತ್ನಾಕರ್ ಇಲ್ಲಿ ಸಹನಿರ್ದೇಶನ ಕೂಡ ಮಾಡಿದ್ದಾರೆ. ಛಾಯಾಗ್ರಹಣ ಆರ್ ಮಧು. 

ವಿಶೇಷ ಎಂದರೆ ನಿರ್ಮಾಪಕರ ಹೆಸರಿನ ಜೊತೆ ಅವರ ವೃತ್ತಿಯನ್ನು ಗುರುತಿಸಿರುವುದು - ಶಿಲ್ಪಿ ಕಲಾವಿದ ಡಿ ಪುಟ್ಟಸ್ವಾಮಿ. 

ಸಿನೆಮಾದ ಮುಕ್ಕಾಲು ಭಾಗ ಅಂಧರಾಗಿ ರಾಜಕುಮಾರ್ ಅಭಿನಯಿಸಿದ್ದಾರೆ. ಹಿತವಾದ, ಹಿಡಿಯಾದ ಅಭಿನಯ. ಎಲ್ಲೂ ಕಡಿಮೆಯಾಗಿಲ್ಲ, ಆ ಪಾತ್ರಕ್ಕೆ ತಕ್ಕಂತೆ ಅಭಿನಯ. 

ನಿಜಕ್ಕೂ ಅಷ್ಟೊಂದು ಸಿನೆಮಾಗಳಲ್ಲಿ ನಟಿಸಿದ ನಟ, ಇಲ್ಲಿ ಅಂಧನಾಗಿ, ವೃದ್ಧನಾಗಿ ನಟಿಸುವುದರಲ್ಲಿ ಏನೂ ಮುಜುಗರ ಪಡದೆ ಅಭಿನಯಿಸಿರೋದು ಅವರ ವೃತ್ತಿಪರತೆಗೆ ಸಾಕ್ಷಿ

ಸಿನೆಮಾದ ಕಡೆಯ ಇಪ್ಪತ್ತು ನಿಮಿಷಗಳಲ್ಲಿ ಮರಳಿದ ಯೌವನ ಹಾಗೂ ದೃಷ್ಟಿಯಿಂದ ಮುದ್ದಾಗಿ ಕಾಣುವ ರಾಜಕುಮಾರ್ ಅವರನ್ನು ನೋಡೋದೇ ಒಂದು ಸಂಭ್ರಮ. 

ಮುಖ್ಯ ಪಾತ್ರದಲ್ಲಿ ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವ ಮುದ್ದಾದ ಹರಿಣಿ ಅಭಿನಯದಿಂದ ಇಷ್ಟವಾಗುತ್ತಾರೆ 


ಹಾಸ್ಯಕ್ಕೆ ಕೊಂಚ ದೃಶ್ಯಗಳು ನರಸಿಂಹರಾಜು, ರತ್ನಾಕರ್, ಬಾಲಕೃಷ್ಣ, ಬೆಂಗಳೂರು ನಾಗೇಶ್, ಆರ್ ಟಿ ರಮಾ ಜೊತೆಯಾಗಿದ್ದಾರೆ. 


ಉದಕುಮಾರ್ ಅವರ ಬಗ್ಗೆಯೂ ಒಂದು ಮಾತು.. ಆ ಕಾಲಘಟ್ಟದಲ್ಲಿ ರಾಜಕುಮಾರ್ ಅವರ ಸಮಕಾಲೀನರಾಗಿದ್ದರೂ ನಾಯಕ, ಖಳನಾಯಕ, ಪೋಷಕ ಪಾತ್ರಗಳು ಎಲ್ಲದರಲ್ಲೂ ಇಮೇಜ್ ಹಂಗಿಲ್ಲದೆ ನಟಿಸಿದ್ದಾರೆ. ಈ ಚಿತ್ರದಲ್ಲೂ ಕೂಡ ಸುಕನ್ಯ ಅವರ ತಂದೆಯಾಗಿ ಉತ್ತಮ ಅಭಿನಯ, ಹಾಗೆಯೇ ಜಯಶ್ರೀ ಅವರದ್ದು ತಾಯಿಯ ಅಭಿನಯ, 



ಕರುನಾಡಿನ ಚಿತ್ರಜಗತ್ತಿನ ನಾರದನ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಅಶ್ವಥ್. ಹಾಸ್ಯ ತುಂಟತನ ನಾಜೂಕಾಗಿ ಹೇಳಬೇಕಾದ ಮಾತುಗಳು.. ನಾಟಕೀಯತೆ ಎಲ್ಲವನ್ನೂ ಮೇಳೈಸಿಕೊಂಡು ಅಭಿನಯಿಸಿದ್ದಾರೆ. 


ರಾಜಕುಮಾರ್ ಅವರ ಆಗಿನ ಚಿತ್ರಗಳಲ್ಲಿ ಖಾಯಂ ಎನ್ನುವಂತಿದ್ದ ಎಂ ಪಿ ಶಂಕರ್ ಕಡೆಯ ದೃಶ್ಯಗಳಲ್ಲಿ ಬರುತ್ತಾರೆ,  ರಾಜಾಶಂಕರ್ ಇಂದ್ರನಾಗಿ ಕಂಗೊಳಿಸಿದರೆ, ವಿದ್ಯಾಸಾಗರ್ ಎಂಬ ಹೆಸರಿನಿಂದ ಚಿತ್ರಜೀವನ ಶುರು ಮಾಡಿದ ರಾಜೇಶ್ ಎಂದು ನಂತರ ಹೆಸರಾದವರು ಈ ಚಿತ್ರದಲ್ಲಿ ಇದ್ದಾರೆ. 



ನಾವು ಏನಾದರೂ ಆಗಿರಬಹುದು ಆದರೆ ಸಿಕ್ಕ ಅವಕಾಶಗಳನ್ನು ಸ್ವೀಕರಿಸಿ ಮುನ್ನುಗಿ ಸಾರ್ಥಕತೆ ಪಡೆಯಬೇಕು ಎನ್ನುವುದನ್ನು ಈ ಚಿತ್ರದಲ್ಲಿ ಅಭಿನಯಿಸಿರುವ ರಾಜಕುಮಾರ್ ಅವರ ಗುಣಗಳಿಂದ ಅರ್ಥ ಮಾಡಿಕೊಳ್ಳಬಹುದು!

ಮತ್ತೊಂದು ಚಿತ್ರದಲ್ಲಿ ಸಿಗೋಣ!

Saturday, October 11, 2025

ನಾರದನ ಲೋಕ ಕಲ್ಯಾಣದ ಭಾಗವೇ ಈ ಪಾರ್ವತಿ ಕಲ್ಯಾಣ 1967 (ಅಣ್ಣಾವ್ರ ಚಿತ್ರ ೮೦/೨೦೭)


ಸೀದಾ ಮಾಡಲು ಕೆಲವೊಮ್ಮೆ ಉಲ್ಟಾ ಮಾಡಬೇಕಂತೆ.. 
ಹೌದು.. ವೈರಸ್ ಬಂದು ಉಪಟಳ ಮಾಡಿದಾಗ ಅದಕ್ಕೆ ವಿರುದ್ಧವಾಗಿ ಔಷಧಿ ಕೂಡ ತಯಾರಾಗಬೇಕಾಗುತ್ತದೆ.. 

ಅಸುರರು ಭುವಿಯಲ್ಲಿ ಅಶಾಂತಿ ಹರಡಬೇಕು.. ತಮ್ಮ ಹಠ ಸಾಧಿಸಬೇಕು.. ಸುರರನ್ನು ಬಗ್ಗು ಬಡಿದು ಮೂಲೋಕದ ಒಡೆಯರಾಗಬೇಕು.. ಸದಾ ಇದೆ ಹಪಹಪಿಯಲ್ಲಿಯೇ ತಮ್ಮ ತಮ್ಮ ಶಕ್ತಿ ಸಾಮರ್ಥ್ಯವನ್ನು, ತಪಃ ಶಕ್ತಿಯನ್ನು ವ್ಯರ್ಥವಾಗಿ ಉಪಯೋಗಿಸಿಕೊಂಡು ಅಳಿದು ಹೋಗುತ್ತಾರೆ.. 

ಇದು ಆ ಕಾಲದಿಂದಲೂ ಈ ಕಾಲಕ್ಕೂ ನೆಡೆಯುತ್ತಾ ಬಂದಿರುವ ವಿಷಯ.. 

ಪೌರಾಣಿಕ ಕಥಾವಸ್ತುವನ್ನು ಅನೇಕ ಪ್ರಾಕಾರಗಳಲ್ಲಿ ಚಿತ್ರಕತೆಯನ್ನು ಮಾಡುತ್ತಲೇ ಬಂದಿದ್ದಾರೆ.  ಅನೇಕ ವೇಳೆ ಒಂದೇ ಕಥೆಯನ್ನು ಭಿನ್ನವಾಗಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬಂದಿರುವುದು ಉಂಟು.. 

ಅಂತಹ ಒಂದು ಕಥೆ ಜನಜನಿತವಾಗಿರುವ ದಕ್ಷ ಯಜ್ಞ, ದಾಕ್ಷಾಯಿಣಿಗೆ ಅವಮಾನ, ವೀರಭದ್ರನಿಂದ ದಕ್ಷನ ಸಂಹಾರ, ತಾರಕ ವೈಭವ, ಮನ್ಮಥ ದಹನ, ಪಾರ್ವತಿ ಕಲ್ಯಾಣ, ಕುಮಾರ ಸಂಭವ, ತಾರಕ ಸಂಹಾರ... 

ಯಶಸ್ವಿ ಬ್ಯಾನರ್ ವಿಕ್ರಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ ಎಸ್ ರಂಗ ನಿರ್ಮಿಸಿ ನಿರ್ದೇಶಿಸಿದ ಚಿತ್ರ ಪಾರ್ವತೀ ಕಲ್ಯಾಣ. 

ಚಿ ಸದಾಶಿವಯ್ಯನವರ ಸಾಹಿತ್ಯ ಜಿ ಕೆ ವೆಂಕಟೇಶ್ ಅವರ ಸಂಗೀತ ಬಿ ಎನ್ ಹರಿದಾಸ್ ಅವರ ಛಾಯಾಗ್ರಹಣ ಹಾಗೂ ಇನ್ನೂ ಅನೇಕಾನೇಕ ಪ್ರತಿಭಾವಂತರ ತಂಡದ ಶ್ರಮ ಈ ಚಿತ್ರದಲ್ಲಿ ಅಡಗಿದೆ!

ಸಾಹಿತ್ಯದಲ್ಲಿ ಚಮತ್ಕಾರ ಮಾಡಿರುವ ಸದಾಶಿವಯ್ಯನವರ ಅದ್ಭುತ ಪ್ರತಿಭೆ ಎಂದರೆ ಪಾರ್ವತಿ ಶಿವನ ಆರಾಧಕಿ, ನಾರದ ನಾರಾಯಣನ ಆರಾಧಕ. ಈ ಇಬ್ಬರ ಜುಗಲಬಂಧಿ 

ವನಮಾಲಿ ವೈಕುಂಠ ಪತೆಯೇ, 
ಘನಶೂಲೇ  ಕೈಲಾಸ ಪತಯೇ 

 ಇಡೀ ಹಾಡು ಹೀಗೆ ಇದೆ.. ಒಂದು ಸಾಲು ಹರಿಯ ಗುಣಗಾನವಾದರೆ, ಅದರ ಮುಂದಿನ ಸಾಲು ಹರನ ಗುಣಗಾನ.. ನಿಜಕ್ಕೂ ಅದ್ಭುತ ಪ್ರತಿಭೆ ಇದು.. 

ಗಂಗೆಯ ಧರಿಸಿದವನ 
ಚಂದಿರನ ಮುಡಿದವನ

ಈ ಹಾಡಿನಲ್ಲಿ ಶಿವನ ವರ್ಣನೆ ಸೊಗಸಾಗಿದೆ.. 

ಎಲ್ಲರಿಗೂ ಗೊತ್ತಿರುವ ಕಥಾನಕವನ್ನು ಯಶಸ್ವಿಯಾಗಿ ತೆರೆಯ ಮೇಲೆ ತರುವುದು ಸವಾಲಿನ ಕೆಲಸವೇ ಹೌದು.. ಅಲ್ಲೊಂದಷ್ಟು ಚಮತ್ಕಾರ ನೆಡೆಯಬೇಕಾಗುತ್ತದೆ.. 

ಆ ಚಮತ್ಕಾರವನ್ನು ನಿರ್ದೇಶಕರು ಮಾಡಿದ್ದಾರೆ.. ಅದಕ್ಕೆ ಸಹಯೋಗ ತಾರಾಗಣ ಕೊಟ್ಟಿದೆ ..

ಇವರು ಯಾರಿಗೆ ಗೊತ್ತಿಲ್ಲ ಅಲ್ಲವೇ 

ಶಿವನಾಗಿ ರಾಜಕುಮಾರ್ ಪರಕಾಯ ಪ್ರವೇಶವೇ ಹೌದು.. ಶಿವ ಎಂದರೆ ಹೀಗೆ ಇರಬೇಕು ಎನ್ನುವಷ್ಟು ತಾದ್ಯಾತ್ಮತೆಯಿಂದ ಅಭಿನಯಿಸಿದ್ದಾರೆ ಅಲ್ಲ ಅಲ್ಲ  ಶಿವನೇ ಆಗಿದ್ದಾರೆ. 
ದಾಕ್ಷಾಯಿಣಿಗೆ ದಕ್ಷನ ಮನೆಗೆ ಹೋಗಬೇಡ ಎಂದು ಹೇಳುವಲ್ಲಿ ತೋರಿಸುವ ಗೊಂದಲತೆ.. ನಂತರ ದಾಕ್ಷಿಯಿಣಿ ಆತ್ಮಹತ್ಯೆ ಮಾಡಿಕೊಂಡರು ಎಂಬ ವಿಷಯ ಗೊತ್ತಾದಾಗ ಕ್ಷುದ್ರರಾಗಿ ನಿಲ್ಲುವ ಅಭಿನಯ ವೀರಭದ್ರನನ್ನು ಕರೆದು ದಕ್ಷನನ್ನು ಸಂಹರಿಸು ಎಂದು ಹೇಳಿ ಕ್ಷುದ್ರರಾಗಿ ನಿಲ್ಲುವ ಪರಿ.. 
ನಂತರ ನಾರದನ ಮೂಲಕ ಪಾರ್ವತಿಯ ಬಗ್ಗೆ ಮಾತುಗಳನ್ನು ಕೇಳುತ್ತಾ ಅದಕ್ಕೆ ಅಭಿನಯಿಸುವ ರೀತಿ ಸೊಗಸಾಗಿದೆ. 
ಮನ್ಮಥ ದಹನವಾದ ಮೇಲೆ, ಮನಸ್ಸು ಚಂಚಲವಾದ ರೇಷ್ಮೆ ಬಟ್ಟೆಗಳನ್ನು ತಾ, ಚಂದನ ಲೇಪ ಬೇಕು, ಕೂದಲಿಗೆ ಸುವಾಸಿತ ಲೇಪ ಬೇಕು ಎನ್ನುತ್ತಾ ಅಭಿನಯಿಸುವ ... ಹಾಗೆ ಮತ್ತೆ ಯೋಗನಿದ್ರೆಯಲ್ಲಿ ಕೂರುವೆ ಎಂದು ಹೋಗುವಾಗ ಅವರ ನೆಡಿಗೆ.. ನಂತರ ಪಾರ್ವತಿಯನ್ನು ಪರೀಕ್ಷೆ ಮಾಡುತ್ತಾ ಕೀಟಲೆ ಮಾಡುವುದು.. ಎಲ್ಲವೂ ಅದ್ಭುತವಾಗಿ ಮೂಡಿಬಂದಿದೆ. 
ಮತ್ತೊಂದು ವಿಶೇಷತೆ ಎಂದರೆ ಮನ್ಮಥ ದಹನದ ದೃಶ್ಯದಲ್ಲಿ ಶಿವನಾಗಿ ರಾಜಕುಮಾರ್ ನಿಜವಾದ ಹಾವನ್ನೇ ಧರಿಸಿರುತ್ತಾರೆ. 
ನಿಜವಾದ ಹಾವಿನ ಜೊತೆಯಲ್ಲಿ 

ನಮ್ಮ ಕಣ್ಣ ಮುಂದೆ ಶಿವನನ್ನೇ ತಂದು ನಿಲ್ಲಿಸುವ ರಾಜಕುಮಾರ್ ಅವರ ಪ್ರತಿಭೆ ನಿಜಕ್ಕೂ ಅಮೋಘ!

ಚಂದ್ರಕಲಾ 

ದಾಕ್ಷಾಯಿಣಿಯಾಗಿ, ಪಾರ್ವತಿಯಾಗಿ ಚಂದ್ರಕಲಾ ಸೊಗಸಾದ ಅಭಿನಯವಿದೆ. ಮುದ್ದಾಗಿ ಕಾಣುವ ಅವರು ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡಲು ಪ್ರಯತ್ನ ಮಾಡುವಾಗ ಅವರ ಅಪ್ಪ ಅಮ್ಮ ಊಟ ಉಪಚಾರ, ನಿದ್ರೆ, ವಿಶ್ರಾಂತಿ ಇದನ್ನು ಹೇಳುತ್ತಾ ಬರುವಾಗ ಚಂದ್ರಕಲಾ ತೋರುವ ಅಭಿನಯ.. ಆ ಮಾತಿನಲ್ಲಿ ಇರುವ ಅಸಮಾಧಾನ ಚೆನ್ನಾಗಿದೆ 

ಎಂ ಪಿ ಶಂಕರ್ 

ತಾರಕನಾಗಿ ಎಂ ಪಿ ಶಂಕರ್ ಅಬ್ಬರಿಸುತ್ತಾರೆ.. ಬ್ರಹ್ಮದೇವನಿಗೆ ನಾನು ಕೇಳುವ ವರಗಳನ್ನು ಕೊಡಲು ಆಗದು ಎಂದರೆ.. ಇಲ್ಲಿಂದ ಹೊರಟು ಹೋಗು ಎನ್ನುವ ದೃಶ್ಯ ಮನಸ್ಸೆಳೆಯುತ್ತದೆ. ಚಿತ್ರದುದ್ದಕ್ಕೂ ಅವರ ಅಬ್ಬರದ ಅಭಿನಯ ಇಷ್ಟವಾಗುತ್ತದೆ 

ಉದಯ್ ಕುಮಾರ್ 


ಉದಕುಮಾರ್ ಪ್ರಾಯಶಃ ಹಿಂದಿನ ಅನೇಕ ಚಿತ್ರಗಳಲ್ಲಿನ ಅಭಿನಯ ದಾಟಿ ಇಲ್ಲಿ ನಾರದನಾಗಿ ಗಮನಸೆಳೆಯುತ್ತಾರೆ.. ಆ ತುಂಟತನ, ಕಿಲಾಡಿತನ, ಸೌಮ್ಯತೆ.. ಚೆನ್ನಾಗಿ ಮೇಳೈಸಿದೆ. 

ಉಳಿದ ಪಾತ್ರಗಳಲ್ಲಿ ತಾರಕನ ತಾಯಿ ಕಾಳಿಂದಿಯಾಗಿ ಪಂಡರಿಬಾಯಿ, ನಾಗರಾಜನಾಗಿ ಕುಪ್ಪುರಾಜ್, ಪಾರ್ವತಿಯ ತಾಯಿಯಾಗಿ ಜಯಶ್ರೀ, ತಂದೆಯಾಗಿ ರಾಘವೇಂದ್ರ ರಾವ್, ನಂದಿಯಾಗಿ ದಿನೇಶ್ ಹಾಗೂ ಉಳಿದವರು ಜೊತೆಯಾಗಿದ್ದಾರೆ. 

ದಿನೇಶ್ 

ಜಯಶ್ರೀ 

ಕುಪ್ಪುಸ್ವಾಮಿ 

ಮಚ್ಚೇರಿ 

ಪಂಡರಿಬಾಯಿ 

ರಾಘವೇಂದ್ರ ರಾವ್ 

ಆರ್ ಟಿ ರಮಾ 



ಒಂದು ಉತ್ತಮ ಚಿತ್ರ.. ಉತ್ತಮ ಅಭಿನಯ.. ಉತ್ತಮ ತಂಡ.. !

Monday, August 25, 2025

ಅಪೂರ್ವ ರಾಗ ಪೂರ್ವಿ ಕಲ್ಯಾಣಿಯ ಸಂಧ್ಯಾರಾಗ 1966 (ಅಣ್ಣಾವ್ರ ಚಿತ್ರ ೭೯/೨೦೭)

ಹಿಂದೆ ಮಲ್ಲಯುದ್ಧ ಕಾಳಗವನ್ನು ಘೋಷಿಸಿದರೆ ಅನೇಕಾನೇಕ ಜಗಜಟ್ಟಿಗಳು ಸೇರುತ್ತಿದ್ದರು.. ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳು.. 

ಈ ಸಿನಿಮಾ ಕೂಡ ಹಾಗೆಯೇ ಅದ್ಭುತ ಪ್ರತಿಭೆಗಳ ಸಂಗಮವೇ ಈ ಸಂಧ್ಯಾರಾಗ.. 

ಕಾದಂಬರಿ ಸಾರ್ವಭೌಮ ಎಂದೇ ಹೆಸರಾದ ಶ್ರೀಯುತ ಅ ನ ಕೃಷ್ಣರಾಯರು 

ಸಂಗೀತ ಸಾರ್ವಭೌಮ ಎಂದು ಅದ್ಭುತ ಸಂಗೀತ ನೀಡಿದ ಜಿ ಕೆ ವೆಂಕಟೇಶ್ 

ನಟಸಾರ್ವಭೌಮ ಎಂದು ಖ್ಯಾತರಾದ ರಾಜಕುಮಾರ್ 

ಕರುನಾಡಿನ ತಾಯಿ ಪಂಡರಿಬಾಯಿ 

ಪೋಷಕ ಪಾತ್ರಗಳ ಪಿತಾಮಹ ಅಶ್ವಥ್ 

ಹಾಸ್ಯ ಚಕ್ರವರ್ತಿ ಎಂದು ಬಿರುದಾಂಕಿತರಾದ ನರಸಿಂಹರಾಜು 

ಅಭಿನಯದ ಕುಶಲ ಕಲಾವಿದೆಯಾದ ಭಾರತಿ 

ಕಲಾಕೇಸರಿ ಉದಯಕುಮಾರ್ 

ಅದ್ಭುತ ಮುಖಭಾವ ತೋರುವ ರಾಘವೇಂದ್ರರಾವ್ 

ಪುಟ್ಟ ಪಾತ್ರಗಳನ್ನೂ ಸ್ಮರಣೀಯ ಮಾಡುತ್ತಿದ್ದ ಎಚ್ ಆರ್ ರಾಮಚಂದ್ರಶಾಸ್ತ್ರಿ 

ರಾಜಕುಮಾರ್ ಚಿತ್ರಗಳ ಖಾಯಂ ಕಲಾವಿದೆಯಾಗಿ ಬೆಳದ ಶಾಂತಮ್ಮ 

ಕರುನಾಡಿನ ಚಿತ್ರರಂಗದ ಆರಂಭದಿಂದಲೂ ಒಂದಲ್ಲ ಒಂದು ರೀತಿ ತೊಡಗಿಕೊಂಡಿದ್ದ ಜಿ ವಿ ಅಯ್ಯರ್ 

ಹಿಂದೂಸ್ತಾನಿ ಗಾಯನದ ಸಾರ್ವಭೌಮ ಶ್ರೀಯುತ ಭೀಮಸೇನ್ ಜೋಶಿ 

ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕ ಶ್ರೀಯುತ ಎಂ ಬಾಲಮುರಳಿಕೃಷ್ಣ 

ಗಾನ ಕೋಗಿಲೆ ಎಸ್ ಜಾನಕೀ 

ರಾಜಕುಮಾರ್ ಅವರಿಗೆ ಅದ್ಭುತವಾಗಿ ಹೊಂದುತ್ತಿದ್ದ ಗಾಯಕ ಪಿ ಬಿ ಶ್ರೀನಿವಾಸ್ 

ಮುಂದೆ ಅದ್ಭುತ ಚಿತ್ರಗಳನ್ನು ತೆರೆಗೆ ತಂದ ಜೋಡಿ ನಿರ್ದೇಶಕ ಭಗವಾನ್ ಮತ್ತು ಛಾಯಾಗ್ರಾಹಕ ಬಿ ದೊರೈರಾಜ್ 

ಎಂದಿಗೂ ಸಲ್ಲುವ ಅತ್ಯುತ್ತಮ ಸಾಹಿತಿ ಆರ್ ಎನ್ ಜಯಗೋಪಾಲ್ 

ಈ ಚಿತ್ರದ ನಂತರ ಮತ್ತೆ ಕಾಣದ ನಿರ್ದೇಶಕ (ನನ್ನ ಅನುಭವದ ಸೀಮೆಯಲ್ಲಿ) ಎ ಸಿ ನರಸಿಂಹಮೂರ್ತಿ

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯದ ಸಾಲಿದು.. 

ಈ ಚಿತ್ರದಲ್ಲಿ ಅನೇಕಾನೇಕ ಮೆಚ್ಚತಕ್ಕ ಅಂಶಗಳಿವೆ 

ಮೊದಲನೆಯದು "ಸಂಧ್ಯಾರಾಗ" ಕಾದಂಬರಿಯ ಕತೃ ಅ ನ ಕೃ ಅವರಿಗೆ ಗೌರವ ಸಲ್ಲಿಸುವ ನಾಮಫಲಕ.. 

ಕರ್ನಾಟಕ ಸಂಗೀತದ ಅನುಭವವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಅದರ ಕತೃ ಎಂ ಬಾಲಮುರಳಿಕೃಷ್ಣ ಅವರಿಗೆ ಗೌರವ ತೋರಿಸಿರುವುದು.. 

ಶೈಲಶ್ರೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಪಕ ಎ ಸಿ ನರಸಿಂಹಮೂರ್ತಿ ಮತ್ತು ಎ ಪ್ರಭಾಕರ್ ರಾವ್ ನಿರ್ಮಿಸಿದ ಚಿತ್ರವಿದು. 

ಕಾದಂಬರಿಯನ್ನು ಆಧರಿಸಿದ ಚಿತ್ರವೆಂದರೆ ಸಾಮಾನ್ಯವಾಗಿ ಕಾದಂಬರಿಯಲ್ಲಿ ಬಳಸಿದ ಅನೇಕ ಸಂಭಾಷಣೆಗಳನ್ನು ಕೆಲವು ಕಡೆ ಯಥಾವತ್ತಾಗಿ.. ಕೆಲವು ಕಡೆ ದೃಶ್ಯದ ಅನುಕೂಲಕ್ಕೆ ತಕ್ಕಂತೆ, ಸನ್ನಿವೇಶಕ್ಕೆ ತಕ್ಕಂತೆ ಸಂಭಾಷಣೆಗಳನ್ನು ಉತ್ತಮ ಪಡಿಸುವ ಕೆಲಸವೂ ನೆಡೆಯುತ್ತದೆ. 

ಹಾಗಾಗಿ ಸಂಭಾಷಣೆಯ ಶ್ರೇಯಸ್ಸು ಆನಕೃ ಅವರಿಗೂ ಸಲ್ಲಬೇಕು ಜೊತೆಗೆ ನರೇಂದ್ರಬಾಬು ಮತ್ತು ಭಗವಾನ್ ಅವರಿಗೂ ಕೂಡ. 

ಸಂಗೀತದಲ್ಲಿ ಜಾದೂ ಮಾಡಿರುವ ಜಿ ಕೆ ವೆಂಕಟೇಶ್ ಒಂದೇ ಹಾಡನ್ನು ಭಿನ್ನ ಭಿನ್ನವಾಗಿ ಸಂಯೋಜಿಸಿ ಮೂವರು ಗಾಯಕ ಶ್ರೇಷ್ಠರಿಂದ ಹಾಡಿಸಿರುವುದು ಅವರ ಅದ್ಭುತ ಪ್ರತಿಭೆಗೆ ಸಾಕ್ಷಿ. 

ನಂಬಿದೆ ನಿನ್ನ ನಾದ ದೇವತೆಯೇ - ಎಸ್ ಜಾನಕೀ, ಎಂ ಬಾಲಮುರಳಿಕೃಷ್ಣ ಹಾಗೂ ಭೀಮಸೇನ್ ಜೋಶಿ ಅವರಿಂದ ಹಾಡಿಸಿರುವುದು ಮತ್ತು ಅದರ ಚಿತ್ರೀಕರಣ ಕೂಡ. 

ಪಿ ಬಿ ಶ್ರೀನಿವಾಸ್ ಅವರ ದೀನ ನಾ ಬಂದಿರುವೇ .. ಶಿಷ್ಯ ವೃತ್ತಿಯ ಅಭಿಲಾಷೆಯಿಂದ ರಾಜಕುಮಾರ್ ಅವರು ತಂಜಾವೂರು ಕೃಷ್ಣನಯ್ಯರ್ ಅವರ ಬಳಿ ಬಂದಾಗ ಅವರು ನಿರಾಕರಿಸುತ್ತಾರೆ.. ಆಗ ಈ ಹಾಡು.. .. ಪಿ ಬಿ ಶ್ರೀನಿವಾಸ್ ಅವರ ಅದ್ಭುತ ಗಾಯನ.. ಅದಕ್ಕೆ ಅಷ್ಟೇ ಮನೋಜ್ಞ ಅಭಿನಯ ನೀಡಿರುವ ರಾಜಕುಮಾರ್.. 

ಹಾಡಿನ ಅದ್ಭುತ ಜಾದೂ.. ಓಡಾಡಲು ಶಕ್ತಿಯಿಲ್ಲದೆ ಮಲಗಿದ್ದ ಕೃಷ್ಣನಯ್ಯರ್ ಅವರು ಮೆಲ್ಲನೆ ಎದ್ದು ನೆಡೆಯುತ್ತ ಬಂದು ಹಾಡುತ್ತಿರುವ ರಾಜಕುಮಾರ್ ಅವರನ್ನು ಕಾಣಲು ಹೊರಗೆ ಬರುತ್ತಾರೆ.. ಅದನ್ನು ಕಂಡು ಸಂತಸದಿಂದ ರಾಜಕುಮಾರ್ತ ಹಾಡು ನಿಲ್ಲಿಸ ಹೊರಟಾಗ.. ತಮ್ಮ ಪತಿರಾಯರು ನೆಡೆಯುವುದನ್ನು ಕಂಡು.. ರಾಜಕುಮಾರ್ ಅವರಿಗೆ ನಿಲ್ಲಿಸಬೇಡ ಹಾಡಪ್ಪ ಎಂದು ಸನ್ನೆ ಮಾಡುತ್ತಾರೆ.. ಮುಗ್ಧತೆಯಿಂದ ಕಣ್ಣೀರನ್ನು ಒರೆಸಿಕೊಂಡು, ಆಗಲಿ ಎನ್ನುತ್ತಾ ತಲೆಯಾಡಿಸುವ ರಾಜಕುಮಾರ್ ಅವರ ಅಭಿನಯ ಮನದಾಳದಲ್ಲಿ ನಿಲ್ಲುತ್ತದೆ. 

ಈ ಚಿತ್ರ ಸಂಗೀತಗಾರನ ಸಂಗೀತದ ಅಭಿಮಾನ, ಪ್ರೀತಿ.. ಸಂಗೀತ ಬಿಟ್ಟರೆ ಪ್ರಪಂಚದಲ್ಲಿ ಬೇರೆ ಏನೂ ಇಲ್ಲ ಎಂದು ತನ್ನ ಬದುಕನ್ನೇ ಸಂಗೀತಕ್ಕೆ ಮೀಸಲಿಟ್ಟ ಅದ್ಭುತ ಗಾಯಕನ ಕಥೆಯಿದು. 

ಮುಳುಬಾಗಿಲ ಚನ್ನಪ್ಪ "ಈ ಪರಿಯ ಸೊಬಗು"  ಹಾಡಿನಲ್ಲಿ ಎಷ್ಟು ಚಂದ ಹಾಡ್ತೀಯಾ ಮಗ.. ಹಾಡೊಂದನ್ನು ಬಿಟ್ಟ ನನಗೆ ಹಾಡು ಹಾಡುವಷ್ಟು ಚೆನ್ನಾಗಿ ಹಾಡುತ್ತೀಯ ಎಂದು ಶಭಾಷ್ ಕೊಡುವ ದೃಶದಲ್ಲಿ ಕೂಡ ರಾಮಚಂದ್ರಶಾಸ್ತ್ರಿ ಮತ್ತು ರಾಜಕುಮಾರ್ ಅವರ ಅಭಿನಯ ಅದ್ಭುತ. 

ಜಿ ವಿ ಅಯ್ಯರ್ ಅವರ ರಚನೆ "ನಂಬಿದೆ ನಿನ್ನ ನಾದ ದೇವತೆಯೇ", ಕನ್ನಡತಿ ತಾಯೆ ಬಾ" 

ದಾಸ ಶ್ರೇಷ್ಠರು ಪುರಂದರದಾಸರ ರಚನೆ "ಈ ಪರಿಯ ಸೊಬಗು", "ತೇಲಿಸೊ ಇಲ್ಲ ಮುಳುಗಿಸೊ", "ಗುರುವಿನ ಗುಲಾಮನಾಗುವ ತನಕ" 

"ದೀನ ನಾ ಬಂದಿರುವೆ" ಆರ್ ಎನ್ ಜಯಗೋಪಾಲ್ ರಚನೆ 

ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದೆ.. 

ಭಾರತಿ ಮುಗ್ಧವಾಗಿ ನಟಿಸಿದ್ದಾರೆ.. ನೆರಳು ಬೆಳಕಿನ ಹಿನ್ನೆಲೆಯಲ್ಲಿ ಅವರ ಅದ್ಭುತ ಮುಗ್ಧ ಮೊಗವನ್ನು ಚಿತ್ರೀಕರಿಸುವುದು. 

ಅಬ್ಬರದ ಉದಯಕುಮಾರ್ ಚಿತ್ರಪೂರ್ತಿ ಖಳನಾಗಿಯೇ ಅಭಿನಯಿಸಿರುವುದು.. ಅವರ ಪತ್ನಿಯಾಗಿ ಶೈಲಶ್ರೀ ಅವರ ಮುಗ್ಧ ಮೊಗ, ಅಭಿನಯ ಇಷ್ಟವಾಗುತ್ತದೆ. ಆಕೆಯ ತಂದೆಯಾಗಿ ಕುಪ್ಪುರಾಜ್ ಅವರ ಪುಟ್ಟ ಪಾತ್ರವೂ ಕೂಡ ಮುಖ್ಯವಾಗುತ್ತದೆ. 

ಪಂಡರಿಬಾಯಿಯವರ ತಾಯಿ ಮಮತೆ 

ಅಶ್ವಥ್ ಅವರ ವಿಭಿನ್ನ ಕೇಶ ವಿನ್ಯಾಸ ಹಾಗೂ ಮೀಸೆಯಲ್ಲಿ ವಿಭಿನ್ನವಾಗಿ ಕಾಣುವುದು ಅಷ್ಟೇ ಅಲ್ಲದೆ ಅವರ ಅಭಿನಯ ಸೊಗಸಾಗಿದೆ 

ಅವರ ಗೆಳೆಯನಾಗಿ ರಾಘವೇಂದ್ರ ರಾವ್ ಅವರ ನಟನೆ ಇಷ್ಟವಾಗುತ್ತದೆ. 

ಆರಂಭಿಕ ದೃಶ್ಯಗಳಲ್ಲಿ ಹಾಸ್ಯ ಚೆಲ್ಲಿದರೂ ಚಿತ್ರ ಬೆಳೆದಂತೆ ಸಾಮಾಜಿಕ ಕಾಳಜಿಯಿಂದ ತನ್ನ ಪತ್ನಿಯ ಗಂಡನ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುವ ಪಾತ್ರದಲ್ಲಿ ನರಸಿಂಹರಾಜು ಮಿಂಚುತ್ತಾರೆ. 

ನರಸಿಂಹರಾಜು ಅವರ ಪಾತ್ರದ ಪತ್ನಿಯಾಗಿ ಶಾಂತಲಾ ಎಂಬ ನಟಿ ಅಭಿನಯಿಸಿದ್ದಾರೆ. 

ಹೌದು ಇದರ ಮುಖ್ಯ ಆಧಾರ ರಾಜಕುಮಾರ್ ಅವರ ಪಾತ್ರ.. ಸಂಗೀತದ ಮೇಲಿನ ಆಸಕ್ತಿ, ಅದನ್ನು ರೂಢಿಸಿಕೊಳ್ಳಲು ಅವರು ಪಡುವ ಪಾಡು.. ಪತ್ನಿಯ ಆಸಕ್ತಿಯಂತೆ ಮತ್ತು ಇಚ್ಚೆಯಂತೆ ಸಂಗೀತ ಕಲಿಯಲು ಅವರ ಅಭಿನಯ.. ಅದ್ಭುತ

ಪ್ರತಿ ದೃಶ್ಯವನ್ನು ತಮ್ಮ ಭುಜದ ಮೇಲೆ ಹೊತ್ತು ಚಿತ್ರದ ಭಾರವನ್ನು ತಮ್ಮ ಬೆನ್ನ ಮೇಲೆ ಹೊತ್ತು ನಿಭಾಯಿಸಿಕೊಂಡು ಅಭಿನಯಿಸಿರುವ ಅವರ ಪ್ರತಿಭೆಯನ್ನು ಎಷ್ಟು ಹೊಗಳಿದರೂ ಕಡಿಮೆಯೇ.. ಆ ಉಡುಪು, ತಲೆಗೂದಲು, ಮೀಸೆಯಿಲ್ಲದ ಮುಖ.. ಆದರೆ ಅಷ್ಟೇ ಮುಗ್ಧವಾಗಿ, ಮುದ್ದಾಗಿ ಕಾಣುವ ಅವರನ್ನು ಈ ಚಿತ್ರದಲ್ಲಿ ನೋಡುವುದೇ ಒಂದು ಖುಷಿ. 

ಇಮೇಜ್ ಅದೂ ಇದು ಎನ್ನುವ ಯಾವ ಹಂಗೂ ಇಲ್ಲದೆ ಪಾತ್ರಕ್ಕೆ ಒಗ್ಗಿಕೊಂಡು ಪಾತ್ರವೇ ತಾವಾಗಿರುವ ಈ ಚಿತ್ರ ..  ರಾಜಕುಮಾರ್ ಅವರ ಚಿತ್ರಜೀವನದ ಒಂದು ಮೈಲಿಗಲ್ಲು..