Saturday, December 27, 2025

ಸರ್ವರಿಗೂ ಮಂಗಳ ಬಯಸಿದ ಸರ್ವಮಂಗಳ 1968 (ಅಣ್ಣಾವ್ರ ಚಿತ್ರ ೯೬/೨೦೭)

ಇದೊಂದು ಚಿತ್ರವೋ ಅಥವ ಕಾದಂಬರಿಯನ್ನು ದೃಶ್ಯ ಕಾವ್ಯದಲ್ಲಿ ಮೂಡಿಸಿದ್ದೋ ಅದೇ ಅಚ್ಚರಿಯ ಮಾತಾಗುತ್ತದೆ. 

ನಿಜ ಕಥೆಗಾರರೇ ಅದಕ್ಕೆ ಚಿತ್ರಕಥೆ ಬರೆದು, ಸಂಭಾಷಣೆಯನ್ನು ತಮ್ಮ  ಕಾದಂಬರಿಯ ಪುಟಗಳಿಂದ ತೆಗೆದು  ಅದಕ್ಕೆ ಇನ್ನಷ್ಟು ಹೊಳಪು ನೀಡಿ ನಿರ್ದೇಶನ ಮಾಡಿದರೆ ತಮ್ಮ ಮಗುವನ್ನು ತಾವೇ ಸಿಂಗರಿಸಿದಂತೆ. 

ಸಾಹಿತಿ ಚದುರಂಗ ಅವರು ತಮ್ಮದೇ ಕಾದಂಬರಿ ಸರ್ವಮಂಗಳ ಅದೇ ಹೆಸರಿನ ಚಿತ್ರವನ್ನಾಗಿಸಿದ್ದಾರೆ.



ಇದೊಂದು ಸ್ವಾತಂತ್ರ್ಯ ಪೂರ್ವ ಕಥೆ.. ಸ್ವಾತಂತ್ರಕ್ಕೆ ಹೋರಾಟ.. ಜೈಲುವಾಸ, ಪೊಲೀಸ್ ದೌರ್ಜನ್ಯ ಇದರ ಹಿನ್ನೆಲೆಯಲ್ಲಿ ಒಂದು ಗ್ರಾಮೀಣ ಹೆಣ್ಣುಮಗಳ ಕಥೆ.. 

ಈಕೆ ಹಳ್ಳಿಯಲ್ಲಿ ಬೆಳೆದ ಮಗಳು.. ಅಪ್ಪನ ದುಡ್ಡಿನ ದುರಾಸೆ.. ಆದರೆ ಸೋದರಮಾವನ ಒಡನಾಟ.. ಅದಕ್ಕೆ ತನ್ನ ತಾಯಿಯ ಒತ್ತಾಸೆ.. ಆದರೆ ವಿಧಿ ಅವರಿಬ್ಬರನ್ನು ಬೇರೆ ಬೇರೆ ಮಾಡಿ ಎರಡು ಕುಟುಂಬಗಳಾಗುತ್ತವೆ. 

ಆದರೆ ಆ ಹೆಣ್ಣು ಮಗಳು ಮತ್ತು ಸೋದರಮಾವ ತಮ್ಮ ಪೂರ್ವ ಸ್ನೇಹವನ್ನು ಮರೆಯಲಾರದೆ ತೊಳಲಾಡುತ್ತಾ.. ವಿಧಿಯ ಅಟ್ಟಹಾಸದಿಂದ ಅರ್ಧ ಬದುಕಿನಲ್ಲಿಯೇ ಅಸು ನೀಗುತ್ತಾರೆ.

ಇದರ ಮಧ್ಯೆ ಅವರ ಬಂಧು ಬಾಂಧವರು ಕೊಡುವ ಕಾಟ, ಕುಹಕಗಳು,  ಬಿರು ನುಡಿಗಳು, ಮನ ನೋಯಿಸುವ ಘಟನೆಗಳು ಚಿತ್ರದ ಓಟಕ್ಕೆ ಸಾಥ್ ನೀಡುತ್ತವೆ. 

ಯಾರೂ ಏನೂ ಮಾಡದ ಪರಿಸ್ಥಿತಿ ಆದರೆ ಎಲ್ಲರಿಗೂ ಅದನ್ನು ಮೆಟ್ಟಿ ನಿಲ್ಲುವ ಅವಕಾಶವಿದ್ದರೂ ವಿಧಿಯ ಆಟ ಸಂಸಾರದ ಚಿತ್ರಣವನ್ನೇ ಬದಲಿಸುತ್ತದೆ.. 

ರಾಜಕುಮಾರ್ ಬಳಲುವ ಪ್ರೇಮಿಯಾಗಿ, ಪರಿತಪಿಸುವ ಪತಿಯಾಗಿ, ಸ್ವತಂತ್ರ ಹೋರಾಟಗಾರನಾಗಿ ಎಲ್ಲಾ ವಿಭಾಗಗಳಲ್ಲೂ ಗೆಲ್ಲುತ್ತಾರೆ. ನರಸಿಂಹಸ್ವಾಮಿ ಅವರ ನನ್ನವಳು ನನ್ನೆದೆಯ ಹೊನ್ನಾಡ ನಾಳುವಳು ಈ ಗೀತೆಯಲ್ಲಿ ಅಭಿನಯ ಸೊಗಸಾಗಿದೆ. 

ಕಲ್ಪನಾ ಹೆಜ್ಜೆ ಹೆಜ್ಜೆಗೂ ತ್ಯಾಗದ ಕರುಣಾಮಯಿಯಾಗಿ ಗೆಲ್ಲುತ್ತಾರೆ 

ಅಶ್ವಥ್ ಭಿನ್ನ ರೂಪ.. ಜೊತೆಗೆ ಅವರ ಆರಂಭಿಕ ಹಿನ್ನೆಲೆ ಮಾತುಗಳು.. ಮತ್ತೆ ಅವರ ಅಕ್ಕನ ಮೇಲೆ ಸಿಡಿದೇಳುವ.. ದೃಶ್ಯಗಳು ಸೊಗಸಾಗಿವೆ.. 

ಉಳಿದಂತೆ ಧನದಾಹಿ ಪಾತ್ರದಲ್ಲಿ ಸಂಪತ್, ಮಮತಾಮಯಿ ತಾಯಿಯಾಗಿ ಜಯಶ್ರೀ, ಕುಟುಕಿ ಪಾತ್ರದಲ್ಲಿ ಪಾಪಮ್ಮ, ಎಮ್ ಎನ್ ಲಕ್ಷೀದೇವಿ, ಪಾತ್ರೋಚಿತ ಅಭಿನಯ

ಪಿ ಬಿ ಶ್ರೀನಿವಾಸ್ ಅವರ ಜೊತೆಯಲ್ಲಿ ಎಸ್ ಜಾನಕೀ, ಪಿ ಸುಶೀಲ, ಎಲ್ ಆರ್ ಈಶ್ವರಿ ಇದ್ದಾರೆ 

ಸಂಗೀತ  ಸತ್ಯಂ ಅವರದ್ದು 

ಛಾಯಾಗ್ರಹಣ ವಿ ಮನೋಹರ್ 

ಉತ್ತಮ ಚಿತ್ರದಲ್ಲಿ ಎಲ್ಲರದ್ದೂ ಸಂಯಮದ ಅಭಿನಯ!













ಮನಸ್ಸಿಗಿಂತ ದೊಡ್ಡ ಸಾಕ್ಷಿ ಯಾವುದಿದೆ ... ಮನಸ್ಸಾಕ್ಷಿ 1968 (ಅಣ್ಣಾವ್ರ ಚಿತ್ರ ೯೫/೨೦೭)

ಸಿನಿಮಾ ಆರಂಭವಾದ ಸ್ವಲ್ಪ ಹೊತ್ತಿನಲ್ಲಿಯೇ ಮತ್ತೆ ಹಿಂದಕ್ಕೆ ಹೋಗಿ ಈ ಸಿನಿಮಾ  ರಾಜಕುಮಾರ್ ಅವರದ್ದ ಅಂತ ನೋಡಿದೆ.. ಮತ್ತೆ ಖಾತ್ರಿ ಪಡಿಸಿಕೊಂಡೆ ಅವರೇ ಚಿತ್ರದ ನಾಯಕರೇ ಅಂತ.. 

ನಿಜ ತೊಂಭತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಹೆಸರಾಂತ ನಾಯಕ ನಟ ಈ ಪಾತ್ರಕ್ಕೆ ಒಪ್ಪಿದ್ದಾದರೂ ಹೇಗೆ ಅಂತ.. ಆದರೆ ಚಿತ್ರದ ಎರಡನೇ ಭಾಗದಲ್ಲಿ ಅವರ ಅಭಿನಯ ಕಂಡು ಇಷ್ಟವಾಯಿತು.. 


ಮನಸ್ಸಿಗಿಂತ ಮಿಗಿಲಾದ ಸಾಕ್ಷಿ ಎಲ್ಲೂ ಸಿಗೋಲ್ಲ ಮನಸ್ಸೇ ದೊಡ್ಡ  ಶಕ್ತಿ ಅದನ್ನು ಸರಿ ದಾರಿಯಲ್ಲಿ ಉಪಯೋಗಿಸಿಕೊಂಡರೆ ಅದು ತೋರಿಸಿದ ಮಾರ್ಗದಲ್ಲಿ ನೆಡೆದಾಗ ಬದುಕಲ್ಲಿ ಎಂಥಹ ಸಂಭ್ರಮದ ಯಶಸ್ಸು ನೋಡಬಹುದು ಎನ್ನುವುದಕ್ಕೆ ಉದಾಹರಣೆ ಈ ಸಿನಿಮಾ. 

ಇದು ತಮಿಳು ಚಿತ್ರದ ಅವರತರಣಿಕೆಯಾದರೂ ಅಚ್ಚುಕಟ್ಟಾಗಿ ಮೂಡಿಸಿದ್ದಾರೆ ನಿರ್ದೇಶಕ ಎಸ್ ಕೆ ಎ ಚಾರಿ ಅವರು. 

ಎಂಪಿ ಶಂಕರ್ ಮತ್ತೊಮ್ಮೆ ಖಳನಾಯಕನಾಗಿ ವಿಜೃಂಭಿಸಿದ್ದಾರೆ.. ಅವರ ಹಾವಭಾವ, ಒಳ್ಳೆಯವನು ಎಂಬ ಸೋಗಲಾಡಿತನ, ಕುಹಕ ನಗೆ ಎಲ್ಲವೂ ಒಪ್ಪವಾಗಿದೆ. 

ಭಾರತಿ ನಾಯಕಿ ನಟಿಯಾಗಿ ಹಳ್ಳಿ ಹುಡುಗಿಯ ಮುಗ್ಧತೆ ಹಾಗೂ ಗಡುಸುತನ ಎರಡನ್ನೂ ಚೆನ್ನಾಗಿ ಅಭಿನಯದಲ್ಲಿ ತೋರಿಸಿದ್ದಾರೆ. 

ನರಸಿಂಹರಾಜು ಬಹುಶಃ ಬಿ ವಿ ರಾಧಾ ಅವರ ಸುತ್ತಲೇ ಸುತ್ತುವ ದೃಶ್ಯಗಳು ಹೆಚ್ಚು. ಇಬ್ಬರ ಜೋಡಿ ನಗಿಸುತ್ತದೆ, ಹಾಗೆ ಚಿತ್ರದ ಕಥೆಗೆ ಪೂರಕವಾಗಿದ್ದಾರೆ. 

ಜಯಶ್ರೀ ಹಾಗೂ ಶಾಂತಮ್ಮ ನಾಯಕಿ ಮತ್ತು ನಾಯಕನ ತಾಯಿಯಾಗಿ ಚೊಕ್ಕ ಅಭಿನಯ ನೀಡಿದ್ದಾರೆ 

ನಾಗಪ್ಪ ಹಾಗೂ ಸಹಚರರು ಖಳನಿಗೆ ಒತ್ತಾಸೆಯಾಗಿ ನಿಂತಿದ್ದಾರೆ 

ಶೈಲಶ್ರೀ ಮುಗ್ಧೆಯಾಗಿ, ಸುಂದರವಾಗಿ ಕಾಣುತ್ತಾರೆ. 

ರಂಗ, ಸಾವ್ಕಾರ್ಗು ಜಾನಕೀ, ಗುಗ್ಗು, ಎಚ್ ಆರ್ ಶಾಸ್ತ್ರೀ ಕೆಲವು ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. 

ನರೇಂದ್ರಬಾಬು ಅವರ ಸಂಭಾಷಣೆ 

ಜಿ ಕೆ ವೆಂಕಟೇಶ್ ಅವರ ಸಂಗೀತ 

ಕು ರಾ ಸೀತಾರಾಮಶಾಸ್ತ್ರಿ ಮ್ಮತ್ತು ಮತ್ತು ವಿಜಯನಾರಸಿಂಹ ಅವರ ಹಾಡುಗಳು 

ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಎಲ್ ಆರ್ ಈಶ್ವರಿ ಅವರ ಗಾಯನ 

ವಿ ಸೆಲ್ವರಾಜ್ ಅವರ  ಛಾಯಾಗ್ರಹಣ ಈ ಚಿತ್ರಕ್ಕಿದೆ. 

ಎ ಎಲ್ ಎಸ್ ಪ್ರೋಡ್ಯೂಕ್ಷನ್ಸ್ ಲಾಂಛನದಲ್ಲಿ ಎ ಎಲ್  ಶ್ರೀನಿವಾಸನ್ ಅವರು ನಿರ್ಮಿಸಿದ್ದಾರೆ. 

ರಾಜಕುಮಾರ್ ಇವರು ಈ ಚಿತ್ರದ ಶಕ್ತಿ. ಅಂತಹ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಜೇಬು ಕತ್ತರಿಸುವ ಕಳ್ಳನ ಪಾತ್ರದಲ್ಲಿ, ಮತ್ತೆ ಸಮಾಜ ಘಾತುಕರ ಜೊತೆ ಸೇರಿಕೊಂಡು ಮಾಡಬಾರದ ಕೆಲಸಕ್ಕೆ ಕೈ ಜೋಡಿಸುವ ಪಾತ್ರ ಒಪ್ಪಿಕೊಳ್ಳೋದು ಕಷ್ಟ . ಆದರೆ ಆ ನಾಟಕೀಯತನವನ್ನು, ತನ್ನ ಪಾಡು ನೆಡೆದರೆ ಸಾಕು  ಮಿಕ್ಕವರ ಪಾಡು ತನಗೇಕೆ ಎನ್ನುವ ಅಭಿನಯ ಅಬ್ಬಬ್ಬಾ ಎನಿಸುತ್ತದೆ.. ನಂತರ ತನ್ನ ಕೃತ್ಯ ತನ್ನ ಸ್ನೇಹಿತನ ಕುಟುಂಬವನ್ನೇ ನಾಶ  ಮಾಡಿತು ಎನ್ನುವುದು ತಿಳಿದಾಗ ಅವರ ಬದಲಾಗುವ ಅಭಿನಯದ ಧಾಟಿ.. ಅಬ್ಬಾ ಇವರು ಅದ್ಭುತ ಕಲಾವಿದರು ಅಂತ ತೋರಿಸುತ್ತದೆ.. 

ಮನಸ್ಸೇ ನಮ್ಮ ನಾಯಕ.. ಅವನೇ ದಾರಿ ತೋರಿಸುವ ಮಾರ್ಗದರ್ಶಿ ಎಂದು ತಿಳಿಸುವ ಚಿತ್ರವಿದು.













 



Friday, December 26, 2025

ಜಾಲತಾಣದ ಆಗಸದಿ ಕಾಣದ ಅರುಂಧತಿ ನಕ್ಷತ್ರ - ಮಹಾಸತಿ ಅರುಂಧತಿ 1968 (ಅಣ್ಣಾವ್ರ ಚಿತ್ರ ೯೪/೨೦೭)

ಆಗಸದಲ್ಲಿ  ಕಾಣುವ ನಕ್ಷತ್ರಗಳು ಲಕ್ಷ ಕೋಟಿ.. ಆದರೆ ಅದಕ್ಕೆ ರಾತ್ರಿಯೇ ಬರಬೇಕು.. ಅದರಲ್ಲಿಯೂ ಚಂದ್ರನ  ಬೆಳಕು ಇಲ್ಲದೆ ಹೋದರೆ ಅದೂ ಕೂಡ ಅಲಭ್ಯ... 

ರಾಜಕುಮಾರ್ ಅವರ ಅನೇಕಾನೇಕ ಚಿತ್ರಗಳು ಸಿಕ್ತಾ ಇಲ್ಲ.. ಅದರಲ್ಲಿ ಮಹಾಸತಿ ಅರುಂಧತಿ ಚಿತ್ರವೂ ಒಂದು. 

ರಾಜಕುಮಾರ್, ಕಲ್ಪನಾ, ಉದಯಕುಮಾರ್, ಅರುಣ್ ಕುಮಾರ್ ಮುಂತಾದವರು  ನಟಿಸಿರುವ ಈ ಚಿತ್ರ ಲಭ್ಯವಿಲ್ಲ. 

 ಆರೂರು ಪಟ್ಟಾಭಿ  ನಿರ್ದೇಶನ 

ಬಿ ವಿ ರೆಡ್ಡಿ ನಿರ್ಮಾಣ 

ಎಚ್ ಎಸ್ ವೇಣು ಛಾಯಾಗ್ರಹಣ 

ಕೆ ಎಸ್ ಅಶ್ವತ್ಥಾಮ ಸಂಗೀತ 

ಅದೃಷ್ಟವಶಾತ್ ಈ ಚಿತ್ರ ಸಿಕ್ಕರೆ .. ಈ ಬರಹವನ್ನು ಬೆಳೆಸೋಣ!






Thursday, December 25, 2025

ಮನಸ್ಸಿನ ನಗರಕ್ಕೆ ಲಗ್ಗೆ ಹಾಕುವ ಗಾಂಧಿ ನಗರ 1968 (ಅಣ್ಣಾವ್ರ ಚಿತ್ರ ೯೩/೨೦೭)

ಈ ಸಿನೆಮಾವನ್ನು ನನ್ನ ಮನಸ್ಸು ತುಂಬಾ ಗಲಭೆಯಿಂದ ಕೂಡಿದ್ದಾಗ ನೋಡಿದ್ದು..  ಬಹಳ ಮನಸ್ಸಿಗೆ ತಾಕಿತ್ತು.. ಅದರಲ್ಲೂ ರಾಜಕುಮಾರ್ ತಪ್ಪು ಮಾಡಿದ್ದೀನಿ ಕ್ಷಮಿಸಿ ಎಂದು ಫಲಕ ಹಾಕಿಕೊಂಡು ವಠಾರದ ಎಲ್ಲಾ ಮನೆಯ ಮುಂದೆ ನಿಂತು ಕೂಗಿದಾಗ ಮನೆಯವರು ಅವನನ್ನು ಮೂದಲಿಸಿ ಹೀಯಾಳಿಸಿದಾಗ ರಾಜಕುಮಾರ್ ಅವರ ಕಣ್ಣಲ್ಲಿ ನೀರು ತುಂಬಿರುತ್ತದೆ. .. ಮನಸ್ಸು ಬಹಳ ಕಲಕಿತ್ತು ಈ ದೃಶ್ಯ ನೋಡಿ.. ಮತ್ತೆ ಪ್ರತಿ ಬಾರಿ ಈ  ಸಿನಿಮಾ ನೋಡಿದಾಗಲೂ ಈ ದೃಶ್ಯಕ್ಕೆ ಅದೇ ಭಾವ ಮೂಡುತ್ತದೆ. 

ಒಂದು ಚಿಕ್ಕ ಚೊಕ್ಕ ಸಿನೆಮಾವನ್ನು  ಹೇಗೆ ತೆಗೆಯಬೇಕು ಎನ್ನುವುದಕ್ಕೆ ಉದಾಹರಣೆ.. ಒಂದು ವಠಾರ, ಒಂದು ಪಾರ್ಕ್, ಒಂದು ಸೆರೆ ಮನೆ, ಒಂದು ರಸ್ತೆ ಇಷ್ಟೇ ಈ ಚಿತ್ರದಲ್ಲಿ ಕಾಣೋದು.. ಆದರೆ ಚಿತ್ರಕಥೆ ಸೊಗಸಾಗಿದೆ.. ಅದಕ್ಕೆ ಉತ್ತಮ ಸಂಗೀತ,  ಸಂಭಾಷಣೆ ಮತ್ತು ನಿರ್ದೇಶನ ಚಿತ್ರಕ್ಕೆ ಮೆರುಗು ಕೊಟ್ಟಿದೆ. 

                                     

                                          


ಎಲ್ಲ ಕಲಾವಿದರು ಪಾತ್ರವೇ ಆಗಿಬಿಟ್ಟಿದ್ದಾರೆ.. ಹಾಗಾಗಿ ಅಭಿನಯಿಸುವ  ಗೋಜಿಗೆ ಹೋಗಿಲ್ಲ ಅನಿಸುತ್ತದೆ 


ವಠಾರದಲ್ಲಿ ಮೊದಲ ಮನೆ :
ಅಶ್ವಥ್ ಮತ್ತು ಅವರ ಸೇವಕ ರಾಘವೇಂದ್ರ ರಾವ್.. ವಠಾರದಲ್ಲಿ ನೆಡೆಯುವ ಪ್ರತಿ ಘಟನೆಗಳನ್ನು ನಿಭಾಯಿಸುವ ಹೊಣೆ ಹೊತ್ತವರು.. ಮತ್ತು ಅವರ ಮಾತಿಗೆ ಅಷ್ಟೇ ತೂಕ .. ರಹಸ್ಯಗಳನ್ನು ಒಳಗಿಟ್ಟುಕೊಂಡು ಏನೂ ಆಗಿಲ್ಲ ಅಂತ ಇರುವವರು 
                                    

                                    

                                    
ವಠಾರದಲ್ಲಿ ಎರಡನೇ ಮನೆ :
ಬಾಲಕೃಷ್ಣ, ಪಂಡರಿಬಾಯಿ, ಕಲ್ಪನಾ, ಮತ್ತೆರಡು ಮಕ್ಕಳು.. ಬಡತನವನ್ನೇ ಹೊತ್ತು ನೆಡೆಯುತ್ತಿರುವ ಕುಟುಂಬ.. ಮುಖ್ಯ ಕಥೆ ಇವರ ಕುಟುಂಬದ ಸುತ್ತಲೇ ಸುತ್ತುತ್ತದೆ. 

                                           


 
ವಠಾರದಲ್ಲಿ ಮೂರನೇ ಮನೆ :
ನರಸಿಂಹರಾಜು ಮತ್ತು ಆತನ ಮಡದಿ ..  ಆಂಗ್ಲ ಪದ್ಧತಿ ಅನುಸರಿಸುವ ಮತ್ತು ಯಾವುದೇ ಜಂಜಾಟದಲ್ಲಿ ಬೀಳೋದನ್ನು ತಪ್ಪಿಸಿಕೊಳ್ಳುವ ಕುಟುಂಬ 




ವಠಾರದಲ್ಲಿ ನಾಲ್ಕನೇ ಮನೆ :
ಗಣಪತಿ ಭಟ್ ಮತ್ತು ಸಹನಟಿ ವಠಾರದಲ್ಲಿ ಇದ್ದೀವಿ ಇದ್ದೀವಿ ಎನಿಸುವಂತಹ ಕುಟುಂಬ.. ಸಿನಿಮಾ ಹುಚ್ಚು ಆಕೆ ಪ್ರತಿ ಮಾತಿನಲ್ಲೂ ಒಂದೊಂದು ಸಿನಿಮಾದ ದೃಶ್ಯದ ಬಗ್ಗೆ ಹೇಳುತ್ತಾ ಇರುವುದು ವಿಶೇಷತೆ. 



ವಠಾರದಲ್ಲಿ ಐದನೇ ಮನೆ :
ರಮಾದೇವಿ ಗಡುಸು ಮಾತು, ಧೈರ್ಯ.. ಯಾರಿಗೂ ಹೆದರದ ಇವರನ್ನು ಅವರ ಪತಿರಾಯ ಇವರನ್ನು ಬಿಟ್ಟು ಹೋಗಿದ್ದಾರೆ.. ಎಮ್ಮೆಗಳನ್ನು ಸಾಕಿ, ಅದರ ಹಾಲನ್ನು ವಿಕ್ರಯಿಸಿ ಜೀವನ ಸಾಗಿಸುತ್ತಿರುತ್ತಾರೆ. ವಠಾರದ ಎಲ್ಲಾ ಸಮಸ್ಯೆಗಳಿಗೂ ಇವರು ತಲೆ ಕೊಡುತ್ತಿರುತ್ತಾರೆ.. 



ವಠಾರದಲ್ಲಿ ಆರನೇ ಮನೆ :
ದ್ವಾರಕೀಶ್.. ಜವಾಬ್ಧಾರಿ ಇಲ್ಲದ ಹುಡುಗ.. ತನ್ನ  ಮಗಳನ್ನು ಮದುವೆ ಮಾಡಿಕೊಂಡು ಆರಾಮಾಗಿ ಬದುಕುವ ಅಭಿಲಾಷೆ ಇಟ್ಟುಕೊಂಡಿರುವ.. ಬರಿ  ತರಲೆ ಮಾಡಿಕೊಂಡು ಜೀವನ ಕಳೆಯುವವ.. 


ವಠಾರದಲ್ಲಿ ಏಳನೇ ಮನೆ :
ಮರೆಗುಳಿ ಸ್ವಭಾವದ ಜಯಶ್ರೀ ಮತ್ತು ಎಲ್ಲದ್ದಕ್ಕೂ ಆಶ್ಚರ್ಯ ಸೂಚಿಸುವ ಕೃಷ್ಣ ಶಾಸ್ತ್ರೀ 




ವಠಾರದಲ್ಲಿ ಎಂಟನೇ ಮನೆ :
ರಾಜಕುಮಾರ್ ಅನಾಥ ಹುಡುಗ.. ಕಾಲೇಜು ಓದು, ಎಲ್ಲರ ಮನೆಯಲ್ಲಿ ವಾರಾನ್ನ ಮಾಡುವ ಬಡ ವಿದ್ಯಾರ್ಥಿ.. ಬರವಣಿಗೆ, ಕವಿತೆ ಜೊತೆಯಲ್ಲಿ ಮಾತು ಮಾತಿಗೂ ಸರ್ವಜ್ಞನ ವಚನಗಳನ್ನು  ಹೇಳುತ್ತಲೇ ಇರುವ.. ಜೊತೆಯಲ್ಲಿ  ತನ್ನದೇ ಶೈಲಿಯಲ್ಲಿ ವಚನಗಳನ್ನು ಕಟ್ಟಿ ಹೇಳುವ ನಿಪುಣ. ಮೃದು ಮಾತು, ಮೃದು ಸ್ವಭಾವ.. 




ಹೊರಗಡೆ ಮನೆ:
ನಾಗಪ್ಪ, ಪಾಪಮ್ಮ, ಬಿವಿ ರಾಧಾ ,, ನಾಗಪ್ಪನವರಿಗೆ ಲೇಖನಿಗಳನ್ನು ಸಂಗ್ರಹಿಸುವ ಹವ್ಯಾಸ , ಪಾಪಮ್ಮನ ಸ್ವಲ್ಪ ಘಟವಾಣಿ, ಅವರ  ಆಸೆ ಎಂದರೆ ತನ್ನ ತಮ್ಮನನ್ನು ತನ್ನ ಮಗಳಿಗೆ ಕೊಟ್ಟು ಮದುವೆ ಮಾಡಿ ಮನೆಯಳಿಯನನ್ನಾಗಿ ಮಾಡಿಕೊಂಡು ಇರೋದು.. ಬಿ ವಿ ರಾಧಾ ಹುಚ್ಚು ಕೋಡಿ ಮನಸ್ಸು.. ಕ್ಷಣ ಚಿತ್ತ ಕ್ಷಣ ಪಿತ್ತ ಅನ್ನುವಂತಹ ಸ್ವಭಾವ.. ಅದಕ್ಕೆ ಎಣ್ಣೆ ಹಾಕುವಂತೆ ದ್ವಾರಕೀಶ್ ಸ್ವಭಾವ.. 





ಈ ಒಂಭತ್ತು ಮನೆಯ ಕಥೆಯ ಸಂಗಮವೇ ಗಾಂಧಿನಗರ.. 

ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡು ಅದೇ ಕೊರಗಿನಲ್ಲಿ ತಂದೆಯನ್ನು ಕಳೆದುಕೊಳ್ಳುವ ಮಗು ಅವರ ಅಪ್ಪನ ಸ್ನೇಹಿತನ ವಠಾರದಲ್ಲಿ ಅನಾಥನಂತೆ ಬದುಕುತ್ತದೆ. ಅದಕ್ಕೆ ಕಾರಣ ಆ ಮಗುವಿನ ಜಾತಕಫಲ.. 

ಕಷ್ಟ ಕೋಟಲೆಗಳನ್ನು ದಾಟಿ ಮತ್ತೆ ಸುಖಾಂತ್ಯವಾಗುವ ಕಥಾನಕ.. 

ಎಲ್ಲರ ಅಭಿನಯ ಸೊಗಸು ..

ಚಿ ಉದಯಶಂಕರ್ ಅವರ ಸಂಭಾಷಣೆ ಗೀತೆಗಳು 
ಸಂಗೀತ ಸತ್ಯಂ 
ಛಾಯಾಗ್ರಹಣ ಕೆ ಜಾನಕಿರಾಮ್ 
ಗಾಯನ ಪಿ ಬಿ ಶ್ರೀನಿವಾಸ್, ಬಾಲಸುಬ್ರಮಣ್ಯಂ, ಬಿ ಗೋಪಾಲ್, ಪಿ ಸುಶೀಲ, ಎಸ್ ಜಾನಕೀ, ಎಲ್ ಆರ್ ಈಶ್ವರಿ,
ಸಹನಿರ್ದೇಶನ ಸಿದ್ಧಲಿಂಗಯ್ಯ 
ನಿರ್ಮಾಪಕ ಸಿ ವೆಂಕು ರೆಡ್ಡಿ 
ಕಥೆ ಜಿವಿಜಿ ಅವರ ಕಿರುಕಥಾನಕ 
ಚಿತ್ರಕಥೆ ಎಸ್ ಭಾವನಾರಾಯಣ 
ನಿರ್ದೇಶನ ಕೆ ಎಸ್ ಎಲ್ ಸ್ವಾಮಿ 
ಲಾಂಛನ ವಿಜಯವರ್ಧನ ಮೂವೀಸ್ 

ಹೃದಯಕ್ಕೆ ಹತ್ತಿರವಾದ ಚಿತ್ರವಿದು  

ಏನಪ್ಪಾ ಶ್ರೀಕಾಂತಪ್ಪ ಎಲ್ಲರ ಬಗ್ಗೆ ಬರೆದೆ ನನ್ನ ಬಗ್ಗೆ ಏನೂ ಇಲ್ವೇ .. ಬಾಲಣ್ಣ ಕೈ ಕೆರೆದುಕೊಳ್ಳುತ್ತಾ ಬಂದರು.. 

ನೋಡಿ ಬಾಲಣ್ಣ ನಿಮ್ಮ ಅದ್ಭುತ ಸಂಭಾಷಣೆಗಳ ತುಣುಕನ್ನು ಬರೆದಿಟ್ಟುಕೊಂಡಿದೀನಿ 

೧. ಕಾರೊಂದು ಬಾಲಣ್ಣನಿಗೆ ಡಿಕ್ಕಿ ಹೊಡೆಯುವುದು ಸ್ವಲ್ಪದರಲ್ಲಿ ತಪ್ಪುತ್ತದೆ ಆಗ ಬಾಲಣ್ಣ "ಏನಪ್ಪಾ ಮೊದಲೇ ತಿಳಿಸಿದ್ದಾರೆ ತಿಳಿಸಿದ್ದರೇ ಮನೆಗೆ ಎಲ್ಲ ಖರ್ಚುಗಳನ್ನು ಹೊಂದಿಸಿಕೊಟ್ಟು ಬರುತ್ತಿದ್ದೆ 

೨. ಕದ್ದ ಪೆನ್ನನ್ನು ಬಾಲಣ್ಣನಿಗೆ ಮಾರಲು ಬರುತ್ತಾನೆ "ನೋಡಿ ಸರ್ ಪೆನ್ನು ಎಂಟೂ ಮುಕ್ಕಾಲು ರೂಪಾಯಿ. ಬಹಳ ಚೀಪು 
ಆಗ ಬಾ;ಬಾಲಣ್ಣ ಏನೂ ಎಂಟೂ ಮುಕ್ಕಾಲು ಚೀಪೋ 
ಹೌದು ಸರ್ ಜಪಾನಿನಲ್ಲಿ ಇದರ ಬೆಲೆ ಐವತ್ತು ರೂಪಾಯಿ 
ಓಹ್ .. ನಿಂದೆ ಕಥೆ ಈ ಊರಿನಲ್ಲೆಲ್ಲಾ ನೆಡಿತಿರೋದು 
೩. ನಿಮ್ಮ ಅಡ್ರೆಸ್ಸ್ ಕೊಡಿ ಸರ್ 
ನನ್ನ ಅಡ್ರೆಸ್ಸ್ ವಿಡ್ರೆಸ್ ಎಲ್ಲ ಒಂದೇ .. ಗಾಂಧಿ ನಗರ ಮೇಲೆ ಹನ್ನೊಂದು ಕೆಳಗೆ ಮೂರು 

ಹೀಗೆ ಹತ್ತಾರು ಸಂಭಾಷಣೆಗಳು ಬಾಲಣ್ಣ ಅವರ ಅದ್ಭುತ ಶೈಲಿಯಿಂದ ಇನ್ನಷ್ಟು ಸುಂದರವಾಗಿದೆ 

ಹಾ ಈಗ ಸರಿ ಹೋಯ್ತಪ್ಪ ಶ್ರೀಕಾಂತಪ್ಪ .. ಮತ್ತೆ ಸಿಗೋಣ ಎಂದು ಬಾಲಣ್ಣ ನೆಡೆಯುತ್ತಾ ಗಾಂಧಿನಗರದಿಂದ ಹೊರಟರು.