Saturday, October 11, 2025

ನಾರದನ ಲೋಕ ಕಲ್ಯಾಣದ ಭಾಗವೇ ಈ ಪಾರ್ವತಿ ಕಲ್ಯಾಣ 1967 (ಅಣ್ಣಾವ್ರ ಚಿತ್ರ ೮೦/೨೦೭)


ಸೀದಾ ಮಾಡಲು ಕೆಲವೊಮ್ಮೆ ಉಲ್ಟಾ ಮಾಡಬೇಕಂತೆ.. 
ಹೌದು.. ವೈರಸ್ ಬಂದು ಉಪಟಳ ಮಾಡಿದಾಗ ಅದಕ್ಕೆ ವಿರುದ್ಧವಾಗಿ ಔಷಧಿ ಕೂಡ ತಯಾರಾಗಬೇಕಾಗುತ್ತದೆ.. 

ಅಸುರರು ಭುವಿಯಲ್ಲಿ ಅಶಾಂತಿ ಹರಡಬೇಕು.. ತಮ್ಮ ಹಠ ಸಾಧಿಸಬೇಕು.. ಸುರರನ್ನು ಬಗ್ಗು ಬಡಿದು ಮೂಲೋಕದ ಒಡೆಯರಾಗಬೇಕು.. ಸದಾ ಇದೆ ಹಪಹಪಿಯಲ್ಲಿಯೇ ತಮ್ಮ ತಮ್ಮ ಶಕ್ತಿ ಸಾಮರ್ಥ್ಯವನ್ನು, ತಪಃ ಶಕ್ತಿಯನ್ನು ವ್ಯರ್ಥವಾಗಿ ಉಪಯೋಗಿಸಿಕೊಂಡು ಅಳಿದು ಹೋಗುತ್ತಾರೆ.. 

ಇದು ಆ ಕಾಲದಿಂದಲೂ ಈ ಕಾಲಕ್ಕೂ ನೆಡೆಯುತ್ತಾ ಬಂದಿರುವ ವಿಷಯ.. 

ಪೌರಾಣಿಕ ಕಥಾವಸ್ತುವನ್ನು ಅನೇಕ ಪ್ರಾಕಾರಗಳಲ್ಲಿ ಚಿತ್ರಕತೆಯನ್ನು ಮಾಡುತ್ತಲೇ ಬಂದಿದ್ದಾರೆ.  ಅನೇಕ ವೇಳೆ ಒಂದೇ ಕಥೆಯನ್ನು ಭಿನ್ನವಾಗಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬಂದಿರುವುದು ಉಂಟು.. 

ಅಂತಹ ಒಂದು ಕಥೆ ಜನಜನಿತವಾಗಿರುವ ದಕ್ಷ ಯಜ್ಞ, ದಾಕ್ಷಾಯಿಣಿಗೆ ಅವಮಾನ, ವೀರಭದ್ರನಿಂದ ದಕ್ಷನ ಸಂಹಾರ, ತಾರಕ ವೈಭವ, ಮನ್ಮಥ ದಹನ, ಪಾರ್ವತಿ ಕಲ್ಯಾಣ, ಕುಮಾರ ಸಂಭವ, ತಾರಕ ಸಂಹಾರ... 

ಯಶಸ್ವಿ ಬ್ಯಾನರ್ ವಿಕ್ರಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ ಎಸ್ ರಂಗ ನಿರ್ಮಿಸಿ ನಿರ್ದೇಶಿಸಿದ ಚಿತ್ರ ಪಾರ್ವತೀ ಕಲ್ಯಾಣ. 

ಚಿ ಸದಾಶಿವಯ್ಯನವರ ಸಾಹಿತ್ಯ ಜಿ ಕೆ ವೆಂಕಟೇಶ್ ಅವರ ಸಂಗೀತ ಬಿ ಎನ್ ಹರಿದಾಸ್ ಅವರ ಛಾಯಾಗ್ರಹಣ ಹಾಗೂ ಇನ್ನೂ ಅನೇಕಾನೇಕ ಪ್ರತಿಭಾವಂತರ ತಂಡದ ಶ್ರಮ ಈ ಚಿತ್ರದಲ್ಲಿ ಅಡಗಿದೆ!

ಸಾಹಿತ್ಯದಲ್ಲಿ ಚಮತ್ಕಾರ ಮಾಡಿರುವ ಸದಾಶಿವಯ್ಯನವರ ಅದ್ಭುತ ಪ್ರತಿಭೆ ಎಂದರೆ ಪಾರ್ವತಿ ಶಿವನ ಆರಾಧಕಿ, ನಾರದ ನಾರಾಯಣನ ಆರಾಧಕ. ಈ ಇಬ್ಬರ ಜುಗಲಬಂಧಿ 

ವನಮಾಲಿ ವೈಕುಂಠ ಪತೆಯೇ, 
ಘನಶೂಲೇ  ಕೈಲಾಸ ಪತಯೇ 

 ಇಡೀ ಹಾಡು ಹೀಗೆ ಇದೆ.. ಒಂದು ಸಾಲು ಹರಿಯ ಗುಣಗಾನವಾದರೆ, ಅದರ ಮುಂದಿನ ಸಾಲು ಹರನ ಗುಣಗಾನ.. ನಿಜಕ್ಕೂ ಅದ್ಭುತ ಪ್ರತಿಭೆ ಇದು.. 

ಗಂಗೆಯ ಧರಿಸಿದವನ 
ಚಂದಿರನ ಮುಡಿದವನ

ಈ ಹಾಡಿನಲ್ಲಿ ಶಿವನ ವರ್ಣನೆ ಸೊಗಸಾಗಿದೆ.. 

ಎಲ್ಲರಿಗೂ ಗೊತ್ತಿರುವ ಕಥಾನಕವನ್ನು ಯಶಸ್ವಿಯಾಗಿ ತೆರೆಯ ಮೇಲೆ ತರುವುದು ಸವಾಲಿನ ಕೆಲಸವೇ ಹೌದು.. ಅಲ್ಲೊಂದಷ್ಟು ಚಮತ್ಕಾರ ನೆಡೆಯಬೇಕಾಗುತ್ತದೆ.. 

ಆ ಚಮತ್ಕಾರವನ್ನು ನಿರ್ದೇಶಕರು ಮಾಡಿದ್ದಾರೆ.. ಅದಕ್ಕೆ ಸಹಯೋಗ ತಾರಾಗಣ ಕೊಟ್ಟಿದೆ ..

ಇವರು ಯಾರಿಗೆ ಗೊತ್ತಿಲ್ಲ ಅಲ್ಲವೇ 

ಶಿವನಾಗಿ ರಾಜಕುಮಾರ್ ಪರಕಾಯ ಪ್ರವೇಶವೇ ಹೌದು.. ಶಿವ ಎಂದರೆ ಹೀಗೆ ಇರಬೇಕು ಎನ್ನುವಷ್ಟು ತಾದ್ಯಾತ್ಮತೆಯಿಂದ ಅಭಿನಯಿಸಿದ್ದಾರೆ ಅಲ್ಲ ಅಲ್ಲ  ಶಿವನೇ ಆಗಿದ್ದಾರೆ. 
ದಾಕ್ಷಾಯಿಣಿಗೆ ದಕ್ಷನ ಮನೆಗೆ ಹೋಗಬೇಡ ಎಂದು ಹೇಳುವಲ್ಲಿ ತೋರಿಸುವ ಗೊಂದಲತೆ.. ನಂತರ ದಾಕ್ಷಿಯಿಣಿ ಆತ್ಮಹತ್ಯೆ ಮಾಡಿಕೊಂಡರು ಎಂಬ ವಿಷಯ ಗೊತ್ತಾದಾಗ ಕ್ಷುದ್ರರಾಗಿ ನಿಲ್ಲುವ ಅಭಿನಯ ವೀರಭದ್ರನನ್ನು ಕರೆದು ದಕ್ಷನನ್ನು ಸಂಹರಿಸು ಎಂದು ಹೇಳಿ ಕ್ಷುದ್ರರಾಗಿ ನಿಲ್ಲುವ ಪರಿ.. 
ನಂತರ ನಾರದನ ಮೂಲಕ ಪಾರ್ವತಿಯ ಬಗ್ಗೆ ಮಾತುಗಳನ್ನು ಕೇಳುತ್ತಾ ಅದಕ್ಕೆ ಅಭಿನಯಿಸುವ ರೀತಿ ಸೊಗಸಾಗಿದೆ. 
ಮನ್ಮಥ ದಹನವಾದ ಮೇಲೆ, ಮನಸ್ಸು ಚಂಚಲವಾದ ರೇಷ್ಮೆ ಬಟ್ಟೆಗಳನ್ನು ತಾ, ಚಂದನ ಲೇಪ ಬೇಕು, ಕೂದಲಿಗೆ ಸುವಾಸಿತ ಲೇಪ ಬೇಕು ಎನ್ನುತ್ತಾ ಅಭಿನಯಿಸುವ ... ಹಾಗೆ ಮತ್ತೆ ಯೋಗನಿದ್ರೆಯಲ್ಲಿ ಕೂರುವೆ ಎಂದು ಹೋಗುವಾಗ ಅವರ ನೆಡಿಗೆ.. ನಂತರ ಪಾರ್ವತಿಯನ್ನು ಪರೀಕ್ಷೆ ಮಾಡುತ್ತಾ ಕೀಟಲೆ ಮಾಡುವುದು.. ಎಲ್ಲವೂ ಅದ್ಭುತವಾಗಿ ಮೂಡಿಬಂದಿದೆ. 
ಮತ್ತೊಂದು ವಿಶೇಷತೆ ಎಂದರೆ ಮನ್ಮಥ ದಹನದ ದೃಶ್ಯದಲ್ಲಿ ಶಿವನಾಗಿ ರಾಜಕುಮಾರ್ ನಿಜವಾದ ಹಾವನ್ನೇ ಧರಿಸಿರುತ್ತಾರೆ. 
ನಿಜವಾದ ಹಾವಿನ ಜೊತೆಯಲ್ಲಿ 

ನಮ್ಮ ಕಣ್ಣ ಮುಂದೆ ಶಿವನನ್ನೇ ತಂದು ನಿಲ್ಲಿಸುವ ರಾಜಕುಮಾರ್ ಅವರ ಪ್ರತಿಭೆ ನಿಜಕ್ಕೂ ಅಮೋಘ!

ಚಂದ್ರಕಲಾ 

ದಾಕ್ಷಾಯಿಣಿಯಾಗಿ, ಪಾರ್ವತಿಯಾಗಿ ಚಂದ್ರಕಲಾ ಸೊಗಸಾದ ಅಭಿನಯವಿದೆ. ಮುದ್ದಾಗಿ ಕಾಣುವ ಅವರು ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡಲು ಪ್ರಯತ್ನ ಮಾಡುವಾಗ ಅವರ ಅಪ್ಪ ಅಮ್ಮ ಊಟ ಉಪಚಾರ, ನಿದ್ರೆ, ವಿಶ್ರಾಂತಿ ಇದನ್ನು ಹೇಳುತ್ತಾ ಬರುವಾಗ ಚಂದ್ರಕಲಾ ತೋರುವ ಅಭಿನಯ.. ಆ ಮಾತಿನಲ್ಲಿ ಇರುವ ಅಸಮಾಧಾನ ಚೆನ್ನಾಗಿದೆ 

ಎಂ ಪಿ ಶಂಕರ್ 

ತಾರಕನಾಗಿ ಎಂ ಪಿ ಶಂಕರ್ ಅಬ್ಬರಿಸುತ್ತಾರೆ.. ಬ್ರಹ್ಮದೇವನಿಗೆ ನಾನು ಕೇಳುವ ವರಗಳನ್ನು ಕೊಡಲು ಆಗದು ಎಂದರೆ.. ಇಲ್ಲಿಂದ ಹೊರಟು ಹೋಗು ಎನ್ನುವ ದೃಶ್ಯ ಮನಸ್ಸೆಳೆಯುತ್ತದೆ. ಚಿತ್ರದುದ್ದಕ್ಕೂ ಅವರ ಅಬ್ಬರದ ಅಭಿನಯ ಇಷ್ಟವಾಗುತ್ತದೆ 

ಉದಯ್ ಕುಮಾರ್ 


ಉದಕುಮಾರ್ ಪ್ರಾಯಶಃ ಹಿಂದಿನ ಅನೇಕ ಚಿತ್ರಗಳಲ್ಲಿನ ಅಭಿನಯ ದಾಟಿ ಇಲ್ಲಿ ನಾರದನಾಗಿ ಗಮನಸೆಳೆಯುತ್ತಾರೆ.. ಆ ತುಂಟತನ, ಕಿಲಾಡಿತನ, ಸೌಮ್ಯತೆ.. ಚೆನ್ನಾಗಿ ಮೇಳೈಸಿದೆ. 

ಉಳಿದ ಪಾತ್ರಗಳಲ್ಲಿ ತಾರಕನ ತಾಯಿ ಕಾಳಿಂದಿಯಾಗಿ ಪಂಡರಿಬಾಯಿ, ನಾಗರಾಜನಾಗಿ ಕುಪ್ಪುರಾಜ್, ಪಾರ್ವತಿಯ ತಾಯಿಯಾಗಿ ಜಯಶ್ರೀ, ತಂದೆಯಾಗಿ ರಾಘವೇಂದ್ರ ರಾವ್, ನಂದಿಯಾಗಿ ದಿನೇಶ್ ಹಾಗೂ ಉಳಿದವರು ಜೊತೆಯಾಗಿದ್ದಾರೆ. 

ದಿನೇಶ್ 

ಜಯಶ್ರೀ 

ಕುಪ್ಪುಸ್ವಾಮಿ 

ಮಚ್ಚೇರಿ 

ಪಂಡರಿಬಾಯಿ 

ರಾಘವೇಂದ್ರ ರಾವ್ 

ಆರ್ ಟಿ ರಮಾ 



ಒಂದು ಉತ್ತಮ ಚಿತ್ರ.. ಉತ್ತಮ ಅಭಿನಯ.. ಉತ್ತಮ ತಂಡ.. !

Monday, August 25, 2025

ಅಪೂರ್ವ ರಾಗ ಪೂರ್ವಿ ಕಲ್ಯಾಣಿಯ ಸಂಧ್ಯಾರಾಗ 1966 (ಅಣ್ಣಾವ್ರ ಚಿತ್ರ ೭೯/೨೦೭)

ಹಿಂದೆ ಮಲ್ಲಯುದ್ಧ ಕಾಳಗವನ್ನು ಘೋಷಿಸಿದರೆ ಅನೇಕಾನೇಕ ಜಗಜಟ್ಟಿಗಳು ಸೇರುತ್ತಿದ್ದರು.. ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳು.. 

ಈ ಸಿನಿಮಾ ಕೂಡ ಹಾಗೆಯೇ ಅದ್ಭುತ ಪ್ರತಿಭೆಗಳ ಸಂಗಮವೇ ಈ ಸಂಧ್ಯಾರಾಗ.. 

ಕಾದಂಬರಿ ಸಾರ್ವಭೌಮ ಎಂದೇ ಹೆಸರಾದ ಶ್ರೀಯುತ ಅ ನ ಕೃಷ್ಣರಾಯರು 

ಸಂಗೀತ ಸಾರ್ವಭೌಮ ಎಂದು ಅದ್ಭುತ ಸಂಗೀತ ನೀಡಿದ ಜಿ ಕೆ ವೆಂಕಟೇಶ್ 

ನಟಸಾರ್ವಭೌಮ ಎಂದು ಖ್ಯಾತರಾದ ರಾಜಕುಮಾರ್ 

ಕರುನಾಡಿನ ತಾಯಿ ಪಂಡರಿಬಾಯಿ 

ಪೋಷಕ ಪಾತ್ರಗಳ ಪಿತಾಮಹ ಅಶ್ವಥ್ 

ಹಾಸ್ಯ ಚಕ್ರವರ್ತಿ ಎಂದು ಬಿರುದಾಂಕಿತರಾದ ನರಸಿಂಹರಾಜು 

ಅಭಿನಯದ ಕುಶಲ ಕಲಾವಿದೆಯಾದ ಭಾರತಿ 

ಕಲಾಕೇಸರಿ ಉದಯಕುಮಾರ್ 

ಅದ್ಭುತ ಮುಖಭಾವ ತೋರುವ ರಾಘವೇಂದ್ರರಾವ್ 

ಪುಟ್ಟ ಪಾತ್ರಗಳನ್ನೂ ಸ್ಮರಣೀಯ ಮಾಡುತ್ತಿದ್ದ ಎಚ್ ಆರ್ ರಾಮಚಂದ್ರಶಾಸ್ತ್ರಿ 

ರಾಜಕುಮಾರ್ ಚಿತ್ರಗಳ ಖಾಯಂ ಕಲಾವಿದೆಯಾಗಿ ಬೆಳದ ಶಾಂತಮ್ಮ 

ಕರುನಾಡಿನ ಚಿತ್ರರಂಗದ ಆರಂಭದಿಂದಲೂ ಒಂದಲ್ಲ ಒಂದು ರೀತಿ ತೊಡಗಿಕೊಂಡಿದ್ದ ಜಿ ವಿ ಅಯ್ಯರ್ 

ಹಿಂದೂಸ್ತಾನಿ ಗಾಯನದ ಸಾರ್ವಭೌಮ ಶ್ರೀಯುತ ಭೀಮಸೇನ್ ಜೋಶಿ 

ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕ ಶ್ರೀಯುತ ಎಂ ಬಾಲಮುರಳಿಕೃಷ್ಣ 

ಗಾನ ಕೋಗಿಲೆ ಎಸ್ ಜಾನಕೀ 

ರಾಜಕುಮಾರ್ ಅವರಿಗೆ ಅದ್ಭುತವಾಗಿ ಹೊಂದುತ್ತಿದ್ದ ಗಾಯಕ ಪಿ ಬಿ ಶ್ರೀನಿವಾಸ್ 

ಮುಂದೆ ಅದ್ಭುತ ಚಿತ್ರಗಳನ್ನು ತೆರೆಗೆ ತಂದ ಜೋಡಿ ನಿರ್ದೇಶಕ ಭಗವಾನ್ ಮತ್ತು ಛಾಯಾಗ್ರಾಹಕ ಬಿ ದೊರೈರಾಜ್ 

ಎಂದಿಗೂ ಸಲ್ಲುವ ಅತ್ಯುತ್ತಮ ಸಾಹಿತಿ ಆರ್ ಎನ್ ಜಯಗೋಪಾಲ್ 

ಈ ಚಿತ್ರದ ನಂತರ ಮತ್ತೆ ಕಾಣದ ನಿರ್ದೇಶಕ (ನನ್ನ ಅನುಭವದ ಸೀಮೆಯಲ್ಲಿ) ಎ ಸಿ ನರಸಿಂಹಮೂರ್ತಿ

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯದ ಸಾಲಿದು.. 

ಈ ಚಿತ್ರದಲ್ಲಿ ಅನೇಕಾನೇಕ ಮೆಚ್ಚತಕ್ಕ ಅಂಶಗಳಿವೆ 

ಮೊದಲನೆಯದು "ಸಂಧ್ಯಾರಾಗ" ಕಾದಂಬರಿಯ ಕತೃ ಅ ನ ಕೃ ಅವರಿಗೆ ಗೌರವ ಸಲ್ಲಿಸುವ ನಾಮಫಲಕ.. 

ಕರ್ನಾಟಕ ಸಂಗೀತದ ಅನುಭವವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಅದರ ಕತೃ ಎಂ ಬಾಲಮುರಳಿಕೃಷ್ಣ ಅವರಿಗೆ ಗೌರವ ತೋರಿಸಿರುವುದು.. 

ಶೈಲಶ್ರೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಪಕ ಎ ಸಿ ನರಸಿಂಹಮೂರ್ತಿ ಮತ್ತು ಎ ಪ್ರಭಾಕರ್ ರಾವ್ ನಿರ್ಮಿಸಿದ ಚಿತ್ರವಿದು. 

ಕಾದಂಬರಿಯನ್ನು ಆಧರಿಸಿದ ಚಿತ್ರವೆಂದರೆ ಸಾಮಾನ್ಯವಾಗಿ ಕಾದಂಬರಿಯಲ್ಲಿ ಬಳಸಿದ ಅನೇಕ ಸಂಭಾಷಣೆಗಳನ್ನು ಕೆಲವು ಕಡೆ ಯಥಾವತ್ತಾಗಿ.. ಕೆಲವು ಕಡೆ ದೃಶ್ಯದ ಅನುಕೂಲಕ್ಕೆ ತಕ್ಕಂತೆ, ಸನ್ನಿವೇಶಕ್ಕೆ ತಕ್ಕಂತೆ ಸಂಭಾಷಣೆಗಳನ್ನು ಉತ್ತಮ ಪಡಿಸುವ ಕೆಲಸವೂ ನೆಡೆಯುತ್ತದೆ. 

ಹಾಗಾಗಿ ಸಂಭಾಷಣೆಯ ಶ್ರೇಯಸ್ಸು ಆನಕೃ ಅವರಿಗೂ ಸಲ್ಲಬೇಕು ಜೊತೆಗೆ ನರೇಂದ್ರಬಾಬು ಮತ್ತು ಭಗವಾನ್ ಅವರಿಗೂ ಕೂಡ. 

ಸಂಗೀತದಲ್ಲಿ ಜಾದೂ ಮಾಡಿರುವ ಜಿ ಕೆ ವೆಂಕಟೇಶ್ ಒಂದೇ ಹಾಡನ್ನು ಭಿನ್ನ ಭಿನ್ನವಾಗಿ ಸಂಯೋಜಿಸಿ ಮೂವರು ಗಾಯಕ ಶ್ರೇಷ್ಠರಿಂದ ಹಾಡಿಸಿರುವುದು ಅವರ ಅದ್ಭುತ ಪ್ರತಿಭೆಗೆ ಸಾಕ್ಷಿ. 

ನಂಬಿದೆ ನಿನ್ನ ನಾದ ದೇವತೆಯೇ - ಎಸ್ ಜಾನಕೀ, ಎಂ ಬಾಲಮುರಳಿಕೃಷ್ಣ ಹಾಗೂ ಭೀಮಸೇನ್ ಜೋಶಿ ಅವರಿಂದ ಹಾಡಿಸಿರುವುದು ಮತ್ತು ಅದರ ಚಿತ್ರೀಕರಣ ಕೂಡ. 

ಪಿ ಬಿ ಶ್ರೀನಿವಾಸ್ ಅವರ ದೀನ ನಾ ಬಂದಿರುವೇ .. ಶಿಷ್ಯ ವೃತ್ತಿಯ ಅಭಿಲಾಷೆಯಿಂದ ರಾಜಕುಮಾರ್ ಅವರು ತಂಜಾವೂರು ಕೃಷ್ಣನಯ್ಯರ್ ಅವರ ಬಳಿ ಬಂದಾಗ ಅವರು ನಿರಾಕರಿಸುತ್ತಾರೆ.. ಆಗ ಈ ಹಾಡು.. .. ಪಿ ಬಿ ಶ್ರೀನಿವಾಸ್ ಅವರ ಅದ್ಭುತ ಗಾಯನ.. ಅದಕ್ಕೆ ಅಷ್ಟೇ ಮನೋಜ್ಞ ಅಭಿನಯ ನೀಡಿರುವ ರಾಜಕುಮಾರ್.. 

ಹಾಡಿನ ಅದ್ಭುತ ಜಾದೂ.. ಓಡಾಡಲು ಶಕ್ತಿಯಿಲ್ಲದೆ ಮಲಗಿದ್ದ ಕೃಷ್ಣನಯ್ಯರ್ ಅವರು ಮೆಲ್ಲನೆ ಎದ್ದು ನೆಡೆಯುತ್ತ ಬಂದು ಹಾಡುತ್ತಿರುವ ರಾಜಕುಮಾರ್ ಅವರನ್ನು ಕಾಣಲು ಹೊರಗೆ ಬರುತ್ತಾರೆ.. ಅದನ್ನು ಕಂಡು ಸಂತಸದಿಂದ ರಾಜಕುಮಾರ್ತ ಹಾಡು ನಿಲ್ಲಿಸ ಹೊರಟಾಗ.. ತಮ್ಮ ಪತಿರಾಯರು ನೆಡೆಯುವುದನ್ನು ಕಂಡು.. ರಾಜಕುಮಾರ್ ಅವರಿಗೆ ನಿಲ್ಲಿಸಬೇಡ ಹಾಡಪ್ಪ ಎಂದು ಸನ್ನೆ ಮಾಡುತ್ತಾರೆ.. ಮುಗ್ಧತೆಯಿಂದ ಕಣ್ಣೀರನ್ನು ಒರೆಸಿಕೊಂಡು, ಆಗಲಿ ಎನ್ನುತ್ತಾ ತಲೆಯಾಡಿಸುವ ರಾಜಕುಮಾರ್ ಅವರ ಅಭಿನಯ ಮನದಾಳದಲ್ಲಿ ನಿಲ್ಲುತ್ತದೆ. 

ಈ ಚಿತ್ರ ಸಂಗೀತಗಾರನ ಸಂಗೀತದ ಅಭಿಮಾನ, ಪ್ರೀತಿ.. ಸಂಗೀತ ಬಿಟ್ಟರೆ ಪ್ರಪಂಚದಲ್ಲಿ ಬೇರೆ ಏನೂ ಇಲ್ಲ ಎಂದು ತನ್ನ ಬದುಕನ್ನೇ ಸಂಗೀತಕ್ಕೆ ಮೀಸಲಿಟ್ಟ ಅದ್ಭುತ ಗಾಯಕನ ಕಥೆಯಿದು. 

ಮುಳುಬಾಗಿಲ ಚನ್ನಪ್ಪ "ಈ ಪರಿಯ ಸೊಬಗು"  ಹಾಡಿನಲ್ಲಿ ಎಷ್ಟು ಚಂದ ಹಾಡ್ತೀಯಾ ಮಗ.. ಹಾಡೊಂದನ್ನು ಬಿಟ್ಟ ನನಗೆ ಹಾಡು ಹಾಡುವಷ್ಟು ಚೆನ್ನಾಗಿ ಹಾಡುತ್ತೀಯ ಎಂದು ಶಭಾಷ್ ಕೊಡುವ ದೃಶದಲ್ಲಿ ಕೂಡ ರಾಮಚಂದ್ರಶಾಸ್ತ್ರಿ ಮತ್ತು ರಾಜಕುಮಾರ್ ಅವರ ಅಭಿನಯ ಅದ್ಭುತ. 

ಜಿ ವಿ ಅಯ್ಯರ್ ಅವರ ರಚನೆ "ನಂಬಿದೆ ನಿನ್ನ ನಾದ ದೇವತೆಯೇ", ಕನ್ನಡತಿ ತಾಯೆ ಬಾ" 

ದಾಸ ಶ್ರೇಷ್ಠರು ಪುರಂದರದಾಸರ ರಚನೆ "ಈ ಪರಿಯ ಸೊಬಗು", "ತೇಲಿಸೊ ಇಲ್ಲ ಮುಳುಗಿಸೊ", "ಗುರುವಿನ ಗುಲಾಮನಾಗುವ ತನಕ" 

"ದೀನ ನಾ ಬಂದಿರುವೆ" ಆರ್ ಎನ್ ಜಯಗೋಪಾಲ್ ರಚನೆ 

ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದೆ.. 

ಭಾರತಿ ಮುಗ್ಧವಾಗಿ ನಟಿಸಿದ್ದಾರೆ.. ನೆರಳು ಬೆಳಕಿನ ಹಿನ್ನೆಲೆಯಲ್ಲಿ ಅವರ ಅದ್ಭುತ ಮುಗ್ಧ ಮೊಗವನ್ನು ಚಿತ್ರೀಕರಿಸುವುದು. 

ಅಬ್ಬರದ ಉದಯಕುಮಾರ್ ಚಿತ್ರಪೂರ್ತಿ ಖಳನಾಗಿಯೇ ಅಭಿನಯಿಸಿರುವುದು.. ಅವರ ಪತ್ನಿಯಾಗಿ ಶೈಲಶ್ರೀ ಅವರ ಮುಗ್ಧ ಮೊಗ, ಅಭಿನಯ ಇಷ್ಟವಾಗುತ್ತದೆ. ಆಕೆಯ ತಂದೆಯಾಗಿ ಕುಪ್ಪುರಾಜ್ ಅವರ ಪುಟ್ಟ ಪಾತ್ರವೂ ಕೂಡ ಮುಖ್ಯವಾಗುತ್ತದೆ. 

ಪಂಡರಿಬಾಯಿಯವರ ತಾಯಿ ಮಮತೆ 

ಅಶ್ವಥ್ ಅವರ ವಿಭಿನ್ನ ಕೇಶ ವಿನ್ಯಾಸ ಹಾಗೂ ಮೀಸೆಯಲ್ಲಿ ವಿಭಿನ್ನವಾಗಿ ಕಾಣುವುದು ಅಷ್ಟೇ ಅಲ್ಲದೆ ಅವರ ಅಭಿನಯ ಸೊಗಸಾಗಿದೆ 

ಅವರ ಗೆಳೆಯನಾಗಿ ರಾಘವೇಂದ್ರ ರಾವ್ ಅವರ ನಟನೆ ಇಷ್ಟವಾಗುತ್ತದೆ. 

ಆರಂಭಿಕ ದೃಶ್ಯಗಳಲ್ಲಿ ಹಾಸ್ಯ ಚೆಲ್ಲಿದರೂ ಚಿತ್ರ ಬೆಳೆದಂತೆ ಸಾಮಾಜಿಕ ಕಾಳಜಿಯಿಂದ ತನ್ನ ಪತ್ನಿಯ ಗಂಡನ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುವ ಪಾತ್ರದಲ್ಲಿ ನರಸಿಂಹರಾಜು ಮಿಂಚುತ್ತಾರೆ. 

ನರಸಿಂಹರಾಜು ಅವರ ಪಾತ್ರದ ಪತ್ನಿಯಾಗಿ ಶಾಂತಲಾ ಎಂಬ ನಟಿ ಅಭಿನಯಿಸಿದ್ದಾರೆ. 

ಹೌದು ಇದರ ಮುಖ್ಯ ಆಧಾರ ರಾಜಕುಮಾರ್ ಅವರ ಪಾತ್ರ.. ಸಂಗೀತದ ಮೇಲಿನ ಆಸಕ್ತಿ, ಅದನ್ನು ರೂಢಿಸಿಕೊಳ್ಳಲು ಅವರು ಪಡುವ ಪಾಡು.. ಪತ್ನಿಯ ಆಸಕ್ತಿಯಂತೆ ಮತ್ತು ಇಚ್ಚೆಯಂತೆ ಸಂಗೀತ ಕಲಿಯಲು ಅವರ ಅಭಿನಯ.. ಅದ್ಭುತ

ಪ್ರತಿ ದೃಶ್ಯವನ್ನು ತಮ್ಮ ಭುಜದ ಮೇಲೆ ಹೊತ್ತು ಚಿತ್ರದ ಭಾರವನ್ನು ತಮ್ಮ ಬೆನ್ನ ಮೇಲೆ ಹೊತ್ತು ನಿಭಾಯಿಸಿಕೊಂಡು ಅಭಿನಯಿಸಿರುವ ಅವರ ಪ್ರತಿಭೆಯನ್ನು ಎಷ್ಟು ಹೊಗಳಿದರೂ ಕಡಿಮೆಯೇ.. ಆ ಉಡುಪು, ತಲೆಗೂದಲು, ಮೀಸೆಯಿಲ್ಲದ ಮುಖ.. ಆದರೆ ಅಷ್ಟೇ ಮುಗ್ಧವಾಗಿ, ಮುದ್ದಾಗಿ ಕಾಣುವ ಅವರನ್ನು ಈ ಚಿತ್ರದಲ್ಲಿ ನೋಡುವುದೇ ಒಂದು ಖುಷಿ. 

ಇಮೇಜ್ ಅದೂ ಇದು ಎನ್ನುವ ಯಾವ ಹಂಗೂ ಇಲ್ಲದೆ ಪಾತ್ರಕ್ಕೆ ಒಗ್ಗಿಕೊಂಡು ಪಾತ್ರವೇ ತಾವಾಗಿರುವ ಈ ಚಿತ್ರ ..  ರಾಜಕುಮಾರ್ ಅವರ ಚಿತ್ರಜೀವನದ ಒಂದು ಮೈಲಿಗಲ್ಲು.. 




















Monday, August 18, 2025

ಅಬ್ಬರಿಸುವ ರಾಜಕುಮಾರ್ - ಶ್ರೀ ಕನ್ನಿಕಾಪರಮೇಶ್ವರಿ ಕಥೆ 1966 (ಅಣ್ಣಾವ್ರ ಚಿತ್ರ ೭೮/೨೦೭)

ಸತಿಶಕ್ತಿ, ಮಹಿಶಾಸುರ ಮರ್ಧಿನಿ, ದಶಾವತಾರ ಹೀಗೆ ಕೆಲವು ಚಿತ್ರಗಳಲ್ಲಿ ಅಬ್ಬರಿಸಿದ ರಾಜಕುಮಾರ್ ಮಿಕ್ಕ ಪಾತ್ರಗಳು ಬಹುತೇಕ ಸೌಮ್ಯ ಪಾತ್ರಗಳೇ ಆಗಿದ್ದವು.. ಅವರೊಂದು ಸಂದರ್ಶನದಲ್ಲಿ ಹೇಳಿದಂತೆ, ಖಳಪಾತ್ರಗಳಲ್ಲಿ ಅಂದರೆ ರಾಕ್ಷಸ ಪಾತ್ರಗಳಲ್ಲಿ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಬಹಳ ಪ್ರಸಿದ್ದರು.. ತಮಗೂ ಆ ರೀತಿಯ ಪಾತ್ರಗಳನ್ನೂ ಹೆಚ್ಚು ಮಾಡಬೇಕೆಂದು ಅಸೆ ಅಂತ.. ಆದರೆ ಕರುನಾಡಿನ ಚಿತ್ರಾಭಿಮಾನಿಗಳು ರಾಜಕುಮಾರ್ ಅವರನ್ನು ದೈವ ಸ್ವರೂಪಿಯಾಗಿ ನೋಡುತ್ತಾ ತಮ್ಮ ಮನೆಮಗನನ್ನು ನೋಡಿಕೊಂಡಂತೆ ನೋಡುತ್ತಿದ್ದರು ಹಾಗಾಗಿ ಸೌಮ್ಯ ಪಾತ್ರಗಳು, ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂಥ ಪಾತ್ರಗಳೇ ಹೆಚ್ಚಾಗಿ ಹುಡುಕಿ ಕೊಂಡು ಬಂದಿದ್ದು ಎಂದಿದ್ದರು.. 

ಆದರೂ ಅವರ ಒಳಗಿನ ಆಸೆಗೆ ತಕ್ಕಂತೆ ಅಲ್ಲೊಂದು ಮನಸ್ಸಿಗೆ ಹುಮ್ಮಸ್ಸು ತುಂಬುವ ಪಾತ್ರಗಳು ಸಿಗುತ್ತಿದ್ದವು.. ಆ ರೀತಿಯ ಒಂದು ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ಅದನ್ನು ಪೂರ್ಣವಾಗಿ ಉಪಯೋಗಿಸಿಕೊಂಡು ಅಬ್ಬರಿಸಿದ್ದಾರೆ. 

ಆರಂಭದ ದೃಶ್ಯದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ ಪ್ರಸನ್ನನಾದ ಪರಮೇಶ್ವರ ಗಂಧರ್ವ ಚಿತ್ರಕಂಠನಿಗೆ ಮಾಯಾ ವಿದ್ಯೆ ಕರುಣಿಸುತ್ತಾನೆ. ಅದರ ಮುಂದಿನ ದೃಶ್ಯವೇ ತನ್ನ ಕಣ್ಣಿಗೆ ಕಾಣುವ ಸುಂದರಿಯನ್ನು  ಮೋಹಿಸುವ ದೃಶ್ಯ.. ಜೊತೆಯಲ್ಲಿ ಆಕೆಯನ್ನು ಮದುವೆಯಾಗುವ ಆತನ ಪ್ರಿಯಕರನಿಗೆ ತನ್ನ ಮಾಯಾ ಶಕ್ತಿಯನ್ನು ಉಪಯೋಗಿಸುವ ದೃಶ್ಯದಲ್ಲಿ ಅದ್ಭುತ ಅಭಿನಯ.. 

ನಂತರ ರಾಜ ವಿಷ್ಣುವರ್ಧನನಾಗಿ ಸೌಮ್ಯವಾಗಿ ಅಭಿನಯಿಸುವ ರಾಜಕುಮಾರ್ ಮುಂದಿನ ದೃಶ್ಯದಲ್ಲಿ ತನ್ನ ರಾಜ್ಯದ ಪ್ರಜೆ ಪರನಾರಿಯ ಮೋಹಕ್ಕೆ ಬಿದ್ದು ತನ್ನ ಪತ್ನಿಗೆ ಮೋಸ ಮಾಡಿದ್ದಾನೆ ಎಂದು ಗೊತ್ತಾದ ಮೇಲೆ ಆ ಪ್ರಜೆಗೆ ಆತನ ಮಡದಿಯಿಂದ ಚಾವಟಿ ಏಟು ಕೊಡುವಂತೆ ಆಜ್ಞಾಪಿಸುವ ದೃಶ್ಯದಲ್ಲಿ ಅವರ ಅಭಿನಯ ಸೊಗಸು. 


ನಂತರ ತನ್ನ ಸಾಮಂತ ರಾಜ್ಯಕ್ಕೆ ಹೋಗಿ ಅಲ್ಲಿ ವಾಸವಿಯನ್ನು ಕಂಡು ಆತನ ಮೋಹ ಕೆರಳುತ್ತದೆ.. ಅಲ್ಲಿಂದ ಅವರ ಅಭಿನಯ ಆಹಾ.. ರಾಜಕುಮಾರ್ ಅವರ ಅಭಿನಯದ ಹಂತಗಳು ಅರಿವಾಗುತ್ತಾ ಹೋಗುತ್ತದೆ.. ಅದೇ ಅಭಿನಯದ ಗಟ್ಟಿತನ ಅಂತಿಮ ದೃಶ್ಯದ ತನಕ ಅವರ ಅಬ್ಬರದ ಅಭಿನಯ ಖುಷಿಕೊಡುತ್ತದೆ. 

ಪೌರಾಣಿಕ ಕಥೆ ಎನ್ನಿ, ದೇವತಾ ಕಥೆ ಎನ್ನಿ, ಯಾವುದೇ ಆದರೂ ಕಥೆಯನ್ನು ಗಟ್ಟಿಯಾಗಿ ಹೆಣೆದು, ಚಿತ್ರಕಥೆ, ಸಂಭಾಷಣೆ,ಹಾಡುಗಳು, ನಿರ್ಮಾಣ, ನಿರ್ದೇಶನ ಎಲ್ಲವನ್ನೂ ಅದ್ಭುತವಾಗಿ ನಿಭಾಯಿಸಿರುವ ಶ್ರೇಯಸ್ಸು ಹುಣಸೂರು ಕೃಷ್ಣಮೂರ್ತಿಯವರಿಗೆ ಸಲ್ಲಬೇಕು.. 

ಎವರ್ ಗ್ರೀನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ ಚಿತ್ರವನ್ನು ಅದ್ಭುತವಾಗಿ ತೆರೆಕಾಣಿಸಲು ರಾಜಾರಾಂ ಛಾಯಾಗ್ರಹಣ, ರಾಜನ್ ನಾಗೇಂದ್ರ ಸಂಗೀತ ಸಾತ್ ಕೊಟ್ಟಿದೆ. 

ನಾಗೇಂದ್ರ ರಾವ್ - ಜಯಶ್ರೀ ದಂಪತಿಗಳಾಗಿ ತೆರೆಯ ಮೇಲೆ ಸೊಗಸಾಗಿ ಅಭಿನಯ ನೀಡಿದ್ದಾರೆ. 

ಅವರ ಮಕ್ಕಳಾಗಿ ಕಲ್ಪನಾ ಮತ್ತು ಬಿ. ಎಂ ವೆಂಕಟೇಶ್ ಚಿತ್ರಕಥೆಗೆ ಬೇಕಾದಂತೆ ನಟಿಸಿದ್ದಾರೆ. ಕಲ್ಪನಾ ತಾನೆಂತ ಅದ್ಭುತ ನಟಿ ಎಂದು ಚಿತ್ರದ ಅಂತಿಮ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. 



ರಾಮಚಂದ್ರ ಶಾಸ್ತ್ರೀ ರಾಜ್ಯದ ಗುರುಗಳಾಗಿ ಸಮಚಿತ್ತ ಅಭಿನಯ ನೀಡಿದ್ದಾರೆ. ಚಿತ್ರದ ಅಂತಿಮ ಹಂತದಲ್ಲಿ ಅವರಾಡುವ ಗಟ್ಟಿತನದ ಮಾತುಗಳು ಚಿತ್ರದ ವಿಶೇಷ. 





ಬಹಳ ಚಿತ್ರಗಳ ನಂತರ ಪಂಡರೀಬಾಯಿಯವರು ರಾಜಕುಮಾರ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ, 


ಚಿತ್ರದಲ್ಲಿ ಸೇನಾಧಿಪತಿಯಾಗಿ ಎಂ ಪಿ ಶಂಕರ್ ಸೌಮ್ಯವಾಗಿ ನಟಿಸಿದ್ದಾರೆ. ಹಿಂದಿನ ಹಲವಾರು ಚಿತ್ರಗಳಲ್ಲಿ ಖಳನಾಗಿ ಅಬ್ಬರಿಸಿದ್ದ ಶಂಕರ್ ಈ ಚಿತ್ರದಲ್ಲಿ ಸಹ್ಯವಾಗಿ ನಟಿಸಿರುವುದು ವಿಶೇಷ. 

ಹಾಸ್ಯದ ದೃಶ್ಯಗಳಲ್ಲಿ ನರಸಿಂಹರಾಜು, ದ್ವಾರಕೀಶ್, ರಮಾ, ರಮಾದೇವಿ ಕೆಲವು ದೃಶ್ಯಗಳಲ್ಲಿ ಹಾಸ್ಯ ಉಕ್ಕಿಸುವ ನಟನೆ ಮಾಡಿದ್ದಾರೆ. 



ಚಿತ್ರದ ಆರಂಭದ ಹೆಸರು ತೋರಿಸುವ ದೃಶ್ಯದಲ್ಲಿ ರಾಷ್ಟ್ರಧ್ಯಕ್ಷರು ಡಾ. ರಾಧಾಕೃಷ್ಣನ್ ಹೆಸರು ಅವರಿಗೆ ಗೌರವದ ಸಂಕೇತವಾಗಿ ತೋರಿಸಿದ್ದಾರೆ. 

ಈ ಚಿತ್ರದಲ್ಲಿ ಅನೇಕ ಹಾಡುಗಳಿವೆ ಅದರಲ್ಲಿ "ಕುಂತಲ್ಲಿ ಅವಳು ನಿಂತಲ್ಲಿ ಅವಳು" ಪಿಬಿಶ್ರೀನಿವಾಸ್ ಅವರ ಕಂಠ ಸಿರಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ. 

ಹುಣಸೂರು ಕೃಷ್ಣಮೂರ್ತಿ ಅವರ ಗಟ್ಟಿತನ, ಪೌರಾಣಿಕ ಚಿತ್ರಗಳನ್ನು ತೆರೆಗೆ ತರುವಲ್ಲಿ ಅವರ ಜಾಣ್ಮೆ, ಶಕ್ತಿ ಎಲ್ಲವೂ ಈ ಚಿತ್ರದಲ್ಲಿ ಮೂಡಿಬಂದಿದೆ 

Friday, August 15, 2025

ಕಾಣದ ಕಡಲಿನ ಮುತ್ತು ಮೋಹಿನಿ ಭಸ್ಮಾಸುರ 1966 (ಅಣ್ಣಾವ್ರ ಚಿತ್ರ ೭೭/೨೦೭)

ಕಡಲಲ್ಲಿ ಮುತ್ತನ್ನು ಆರಿಸುವಾಗ ಅನೇಕ ಬಾರಿ ಕೈಯಲ್ಲಿ ಸಿಕ್ಕ ಮುತ್ತನ್ನು ಕಪ್ಪೆ ಚಿಪ್ಪು ಅಂತಲೋ ಅಥವ ಕಲ್ಲು ಅಂತಾನೋ ಬಿಸಾಡಿ ನಂತರ ಅರೆ ಅದೇ ಮುತ್ತಾಗಿತ್ತು ಅನಿಸುವಂತೆ ಮಾಡುತ್ತದೆ.. ಪೇಚಾಡಿದರೂ ಮತ್ತೆ ಸಿಗುವುದು ಕಷ್ಟ ಸಾಧ್ಯ.. 

ಹಾಗೆಯೇ ಈ ಸಿನಿಮಾ ಕೂಡ ಅನೇಕ ಪ್ರಯತ್ನಗಳ ಬಳಿಕ ವಿಷಯ ಗೊತ್ತಾಗಿದ್ದು ಈ ಚಿತ್ರದ ತುಣುಕಾಗಲಿ ಚಿತ್ರವಾಗಲಿ ಎಲ್ಲೂ ಲಭ್ಯವಿಲ್ಲ ಎಂದು.. ಕಾರಣಗಳು ಹತ್ತಾರು ಆದರೆ ಈ ಚಿತ್ರವನ್ನು ನೋಡುವ ಭಾಗ್ಯ ನಮಗಿಲ್ಲ ಎನ್ನುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ.. 

ಇರಲಿ ಕೆಲವೊಮ್ಮೆ ಹಾಗಿತ್ತು ಹೀಗಿತ್ತು ಅನ್ನುವ ಕಲ್ಪನೆ ವಾಸ್ತವಕ್ಕಿಂತ ಖುಷಿ ಕೊಡುವುದು ಸಹಜ.. ಹಾಗೆ ಈ ಚಿತ್ರವೂ ಕೂಡ.. 

ಅನೇಕ ಸಂದರ್ಶಗಳನ್ನು ಈ ಚಿತ್ರ ಬಗ್ಗೆ ಕೇಳಿದಾಗ ನೋಡಿದಾಗ ತಿಳಿದದ್ದು ರಾಜಕುಮಾರ್ ಅವರ ಈ ಪೌರಾಣಿಕ ಚಿತ್ರದ ಅಭಿನಯ ಅಮೋಘವಾಗಿದೆ ಎಂದು.. ಹಿಂದಿನ ಎರಡು ತಲೆಮಾರಿನವರು ನೋಡಿದವರು ಹೇಳುವ ಮಾತಿದು.. 

ಇರಲಿ ಸಿಕ್ಕಷ್ಟೇ ಭಾಗ್ಯ. ಕೇಳಿದ್ದಷ್ಟೇ ಪುಣ್ಯ ಅನ್ನುವ ಮಾತಿನಂತೆ.. ರಾಜಕುಮಾರ್ ಅವರ ಈ ಚಿತ್ರ ಮರೀಚಿಕೆಯಾದರೂ ಅಂತಹ ಕಾಲಘಟ್ಟದಲ್ಲಿ ನಾವಿದ್ದೆವು ಅನ್ನುವುದೇ ನಮ್ಮ ಪುಣ್ಯ ಅಲ್ಲವೇ.. 


 

ಎಸ್ ಎಸ್ ವರ್ಮಾ ನಿರ್ದೇಶನವಿದ್ದ ಈ ಚಿತ್ರವನ್ನು ಟಿ ಮಾದರ್ ಹಾಗೂ ವಿ ಎಂ ಕುಪ್ಪಯ್ಯ ಚೆಟ್ಟಿಯಾರ್ ನಿರ್ಮಿಸಿದ್ದರು.  .. 

ಟಿ ಛಲಪತಿ ರಾವ್ ಅವರ ಸಂಗೀತ ನಿರ್ದೇಶನವಿದ್ದ ಈ ಚಿತ್ರದಲ್ಲಿ ರಾಜಕುಮಾರ್, ಲೀಲಾವತಿ ಉದಯಕುಮಾರ್, ಬಾಲಕೃಷ್ಣ ಅಭಿನಯಿಸಿದ್ದರು.   

ರಾಜಕುಮಾರ್ ಅವರು ಭಸ್ಮಾಸುರನಾಗಿ ಅಮೋಘ ಅಭಿನಯ ನೀಡಿದ್ದಾರೆ ಅಂತ ಓದಿದ್ದೆ 

ಹಾಗೆಯೇ ಉದಯಕುಮಾರ್ ಅವರ ಶಿವನ ಪಾತ್ರಧಾರಿ ಕೂಡ.. ಉದಯಕುಮಾರ್ ಶಿವನ ಪಾತ್ರದಲ್ಲಿ ಪ್ರಾಯಶಃ ಮೊದಲ ಬಾರಿಗೆ ಅಂತ ನನ್ನ ಅನಿಸಿಕೆ 

ಹಾಗೆಯೇ ಬಾಲಕೃಷ್ಣ ನಾರದನ ಪಾತ್ರದಲ್ಲಿ. 

ಒಂದು ವಿಶೇಷ ಚಿತ್ರವಿದು .. ಆದರೆ ನೋಡುವ ಅವಕಾಶವಿಲ್ಲ.. ಅದೇ ಬೇಸರ ಇರಲಿ.. ಇರಲಿ .. ನೋಡೋಣ ನಮ್ಮ ಜೀವಿತ ಕಾಲದಲ್ಲಿ ಸಾಧ್ಯ ಸಾಧ್ಯತೆಯ ಬಗ್ಗೆ..   ಆಶಾವಾದಿಯಾಗಿರೋಣ.. 

ಓದಿಗೂ ವ್ಯಕ್ತಿತ್ವಕ್ಕೂ ಸಂಬಂಧವಿಲ್ಲ ಅಂತ ಹೇಳುವ ಎಮ್ಮೆ ತಮ್ಮಣ್ಣ 1966 (ಅಣ್ಣಾವ್ರ ಚಿತ್ರ ೭೬/೨೦೭)

 ಈ ರೀತಿಯ ಕಥೆ ಚಿತ್ರಕಥೆಯಲ್ಲಿ ರಾಜಕುಮಾರ್ ಅವರು ನೀರು ಕುಡಿದಷ್ಟು ಸಲೀಸಾಗಿ ಅಭಿನಯಿಸುವಷ್ಟು ಅವರ ಅಭಿನಯ ಪರಿಪೂರ್ಣವಾಗುತಿತ್ತು.. 

ಒಂದೇ ತರಹ ಏಳು ಜನ ಇರುತ್ತಾರೆ ಎನ್ನುತ್ತದೆ ನಾಣ್ಣುಡಿ ಹಾಗೆಯೇ ಎಮ್ಮೆ ತಮ್ಮಣ್ಣನನ್ನು ಹೋಲುವ ಅಥವ ಎಮ್ಮೆ ತಮ್ಮಣ್ಣನು ಇನ್ನೊಬನನ್ನು ಹೋಲುವ ಕಥಾವಳಿ ಈ ಚಿತ್ರದಲ್ಲಿದೆ. 


ಆರಂಭದಲ್ಲಿ ಹಳ್ಳಿಯ ಶೈಲಿಯ ಮಾತುಗಳನ್ನು ಆಡುತ್ತಾ.. ಕೆಲವೇ ದೃಶ್ಯಗಳಲ್ಲಿ ಪಟ್ಟಣದ ಶಿಸ್ತುಬದ್ಧ ನೆಡೆಯನ್ನು ತೋರುವ ರಾಜಕುಮಾರ್ ಪಾತ್ರ ಈ ಚಿತ್ರದ ವಿಶೇಷ.. ಪಟ್ಟಣದ ನಾಜೂಕತನ.. ಆ ವೇಷಭೂಷಣ, ಭಾಷ ಶೈಲಿ.. ಎಲ್ಲವನ್ನೂ ರೂಡಿಸಿಕೊಂಡು ಸಿದ್ಧವಾಗುವ ಇನ್ನೊಂದು ಪಾತ್ರವೂ ವಿಶೇಷ. 



ಹೀಗೆ ಒಂದೇ ಚಿತ್ರದಲ್ಲಿ ಇಬ್ಬರೂ ರಾಜಕುಮಾರ್ ಅವರನ್ನು ನೋಡುವ ಭಾಗ್ಯ ನಮ್ಮದು.. ಸತಿ ಶಕ್ತಿ ಚಿತ್ರದಲ್ಲಿ ದ್ವಿಪಾತ್ರ ಚಿತ್ರದುದ್ದಕ್ಕೂ ಇದೆ.. ಆದರೆ ಅದೊಂದು ಪೌರಾಣಿಕ ಹಿನ್ನೆಲೆಯ ಚಿತ್ರ.. ಮಲ್ಲಿ ಮದುವೆಯಲ್ಲಿ ಒಂದು ಅರೆ ಕ್ಷಣ ಬಂದು ಹೋಗುವ ಪಾತ್ರದೊಂದಿಗೆ ಅದು ದ್ವಿಪಾತ್ರದ ಚಿತ್ರ ಎನಿಸಿದರೂ, ಪೂರ್ಣ ಪ್ರಮಾಣದಲ್ಲಿ ದ್ವಿಪಾತ್ರದಲ್ಲಿ ಚಿತ್ರದುದ್ದಕ್ಕೂ ಆವರಿಸಿಕೊಂಡಿರುವುದು ಸಾಮಾಜಿಕ ಚಿತ್ರಗಳಲ್ಲಿ ಇದೆ ಮೊದಲು. 

ಪ್ರತಿಯೊಂದು ದೃಶ್ಯದಲ್ಲೂ ರಾಜಕುಮಾರ್ ಇದ್ದೆ ಇರುತ್ತಾರೆ ಅನ್ನುವಷ್ಟು ಶಕ್ತಿಶಾಲಿಯಾಗಿದೆ ಚಿತ್ರಕಥೆ. ಇದು ಎ ಕೆ ವೇಲನ್ ಅವರ ಕಥೆಯಾಧರಿಸಿ, ಪದ್ಮಿನಿ ಪಿಕ್ಟ್ಚರ್ಸ್ ಸಾಹಿತ್ಯ ವಿಭಾಗ ಹೆಣೆದ ಚಿತ್ರಕಥೆಯುಳ್ಳ ಈ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದು ಬಿ ಆರ್ ಪಂತುಲು. 

ಸಂಭಾಷಣೆ ಮತ್ತು ಗೀತೆಗಳ ಹೊಣೆ ಹೊತ್ತವರು ಜಿ ವಿ ಅಯ್ಯರ್ .. ಸಂಗೀತ ಟಿ ಜಿ ಲಿಂಗಪ್ಪ.. ಗಾಯನ ಪಿ ಬಿ ಶ್ರೀನಿವಾಸ್, ಎಸ್ ಜಾನಕಿ, ಬೆಂಗಳೂರು ಲತಾ, ಪಿ ನಾಗೇಶ್ವರ್ ರಾವ್ ಅವರದ್ದು.. ಛಾಯಾಗ್ರಹಣ ಪಿ ಎಲ್ ನಾಗಪ್ಪ .. 

ಉತ್ತಮ ತಾಂತ್ರಿಕತೆ ಹೊಂದಿದ ಈ ಚಿತ್ರ.. ದ್ವಿಪಾತ್ರಗಳ ದೃಶ್ಯಗಳನ್ನು ತಂತ್ರಜ್ಞಾನದ ಇತಿಮಿತಿಯಲ್ಲಿ ಸೊಗಸಾಗಿ ಚಿತ್ರೀಕರಿಸಿದ್ದಾರೆ 

> ನೀನಾರಿಗಾದೆಯೋ ಎಲೆ ಮಾನವ ಹರಿ ಹರಿ ಗೋವು ನಾನು 

> ಕೊಳಲನೂದಿ ಕುಣಿವ ಪ್ರಿಯನೇ ಬಾರೋ 

> ಎಮ್ಮೆ ಎಲ್ಲಾ ಎಲ್ಲಣ್ಣ ಎಮ್ಮೆ ತಮ್ಮಣ್ಣ 

> ಬೆಳ್ಳಿ ಹಕ್ಕಿ ಆಗುವ ಬೆಳ್ಳಿ ಮೋಡ ಏರುವ 

> ಕಣ್ಣೆರೆಡು ಕರೆಯುತಿದೆ 

> ಕತ್ತರಿಸು ಕತ್ತರಿಸು 

ಹೀಗೆ ಆರು ಹಾಡುಗಳಿವೆ.. ಮತ್ತು ಕಥೆಯನ್ನು ಮುಂದುವರೆಸುತ್ತವೆ 

ಮುಖ್ಯ ಖಳಪಾತ್ರದಲ್ಲಿ ಡಿಕ್ಕಿ ಮಾಧವರಾವ್ ಅದ್ಭುತ.. ಖಳನಾಯಕ ಎಂದರೆ ಕಿರುಚಾಡಬೇಕು.. ಹೋರಾಡಬೇಕು ಎನ್ನುವ ಯಾವುದೇ ಸೂತ್ರವೂ ಇಲ್ಲದೆ ಪಾತ್ರಕ್ಕೆ ಎಷ್ಟು ಕ್ರೌರ್ಯ ತುಂಬಾ ಬಹುದು ಎಂದು ತೋರಿಸಿದ್ದಾರೆ. 

ವಕೀಲನಾದರೇನು ಸಂಗೀತ ಪ್ರಿಯನೂ ಹಾಗೂ ಮಾನವೀಯತೆ ರೂಡಿಸಿಕೊಂಡು ಬರುತ್ತೇನೆ ಎನ್ನುವಂತಹ ವ್ಯಕ್ತಿತ್ವದ ಪಾತ್ರದಲ್ಲಿ ಬಿ ಆರ್ ಪಂತುಲು ನಟಿಸಿದ್ದಾರೆ. ಮನೆ ಆಧಾರವಾಗಿಟ್ಟು ಕೇಸಿನ ಫೀಸ್ ತಂದಿದ್ದೇನೆ ಎಂದಾಗ.. ಕಕ್ಷಿಧಾರನಿಗೆ ಬಯ್ದು ದುಡ್ಡು ಕೊಟ್ಟು ವಾಪಸ್ ಕಳಿಸುವ ದೃಶ್ಯ ಉತ್ತಮವಾಗಿದೆ. 


ಬರುವ ಕಕ್ಷಿಧಾರರಿಗೆ ಹೊಟ್ಟೆ ತುಂಬಾ ಊಟ ಬಡಿಸಿ ಕೋರ್ಟಿಗೆ ಹೋಗಿರಪ್ಪಾ ಎಂದು ಹೇಳುತ್ತಾ.. ಸಂಸಾರವನ್ನು ನೆಡೆಸುವ ಎಂ ವಿ ರಾಜಮ್ಮ .. ಜೊತೆಯಲ್ಲಿ ಭಾರತೀಯ ನಾರಿಯ ಸಂಸೃತಿ ಸಂಸ್ಕಾರವನ್ನು ಮಾತುಗಳಲ್ಲಿ ಹೇಳುವಷ್ಟು ಪರಿಣಾಮಕಾರಿಯಾಗಿ ಅವರ ಅಭಿನಯವೂ ಕೂಡ ಇದೆ. 


ನರಸಿಂಹರಾಜು ಚಿತ್ರದ ಅಗತ್ಯತೆಗೆ ಹಾಗೂ ಹಾಸ್ಯಕ್ಕೆ ಸೇತುವೆಯಾಗಿ ನಿಂತಿದ್ದಾರೆ


ಭಾರತಿ ಚಿತ್ರದ ಇನ್ನೊಂದು ಉತ್ತಮ ಅಂಶ.. ನಾಜೂಕಾಗಿ ಅಭಿನಯಿಸುತ್ತ ಸದಾ ಕ್ಯಾಮೆರಾ ಇಟ್ಟುಕೊಂಡು ಫೋಟೋ ತೆಗೆಯುವ ಪಾತ್ರ.. 


ಜಿ ವಿ ಲತಾದೇವಿ ಎರಡನೇ ನಾಯಕಿಯಾಗಿ ಮುದ್ದಾದ ಅಭಿನಯ ನೀಡಿದ್ದಾರೆ . 


ಉಳಿದ ಕೆಲವು ಪಾತ್ರಗಳಲ್ಲಿ ಸುಬ್ಬಣ್ಣ, ಕೃಷ್ಣಶಾಸ್ತ್ರಿ, ಕುಪ್ಪುಸ್ವಾಮಿ, ಅನಂತರಾಮ್ ಮಚ್ಚೇರಿ, ಗುಗ್ಗು, ಪಾಪಮ್ಮ ಜಯ ಕಥೆಯ ಮುಖ್ಯ ವಾಹಿನಿಯಲ್ಲಿ ತೇಲಿಬರುತ್ತಾರೆ. 






ಇದೊಂದು ಉತ್ತಮ ಸಾಮಾಜಿಕ ಚಿತ್ರ.. ರಾಜಕುಮಾರ್ ಅವರ ಅಭಿನಯ ಮಾಗುತ್ತಿದೆ ಮತ್ತೆ ಪಾತ್ರಕ್ಕೆ ತಕ್ಕ ಹಾಗೆ ತಮ್ಮನ್ನು ಒಗ್ಗಿಸಿಕೊಳ್ಳುವ ಕಲೆ ಪ್ರಬುದ್ಧವಾಗಿ ಬೆಳೆಯುತ್ತಿದೆ ಎಂದು ನಿರೂಪಿಸುವ ಚಿತ್ರವಿದು.