Sunday, December 21, 2025

ನಂಬಿಕೆ.. ಔಷಧಿ.. ಮತ್ತು ಸಾಮಾಜಿಕ ಕಳಕಳಿ - ಬಂಗಾರದ ಹೂವು 1967 (ಅಣ್ಣಾವ್ರ ಚಿತ್ರ ೮೯/೨೦೭)

ರಾಜನ್ ನಾಗೇಂದ್ರ ಅವರ ಸಂಗೀತ ಇಂದಿಗೂ ಸುಮಧುರ 

ಡೂ ಡೂ ಬಸವಣ್ಣ - ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ 
ಆ ಮೊಗವು ಎಂಥ ಮೊಗವು - ಪಿ ಬಿ ಶ್ರೀನಿವಾಸ್ 
ಓಡುವ ನದಿ ಸಾಗರವ ಸೇರಲೇ ಬೇಕು - ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ 
ಮದುವೆ ಮದುವೆ - ಎಸ್ ಜಾನಕೀ 
ಓದಿ ಓದಿ ಮರುಳಾದ ಕೂಚುಭಟ್ಟ - ಎಸ್ ಜಾನಕೀ 
ನೀ ನೆಡೆವ ಹಾದಿಯಲ್ಲಿ - ಪಿ ಸುಶೀಲ 

ಎಲ್ಲಾ ಹಾಡುಗಳು ಸುಮಧುರವಾಗಿವೆ.. ಚಿತ್ರೀಕರಣವೂ ಮಧುರವಾಗಿದೆ. 

ಹಾಡುಗಳನ್ನು ರಚಿಸಿರುವ ಚಿ ಉದಯಶಂಕರ್ ಹಾಗೂ ವಿಜಯನಾರಸಿಂಹ ಅವರಿಗೆ ಹಾಡುಗಳ ಯಶಸ್ಸಿನ ಶ್ರೇಯಸ್ಸು ಸಂಗೀತ ನಿರ್ದೇಶಕ ಜೋಡಿಯ ಜೊತೆಗೆ ಸಲ್ಲುತ್ತದೆ. 

ಬಿ ಎನ್ ಹರಿದಾಸ್ ಅವರ ಛಾಯಾಗ್ರಹಣದಲ್ಲಿ ನಟ ನಟಿಯರು ಮುದ್ದಾಗಿ ಕಾಣುತ್ತಾರೆ. ನೆರಳು ಬೆಳಕಿನ ವ್ಯವಸ್ಥೆಯನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. 

ಅರ್ಥಪೂರ್ಣ ಸಂಭಾಷಣೆ ಚಿ ಉದಯಶಂಕರ್ ಅವರಿಂದ. 

ತಮ್ಮದೇ ಕಿರುನಾಟಕ "ಅಭಾಗಿನಿ"ಯನ್ನು ಕಥಾನಾಟಕ ರಚಿಸಿ ನಿರ್ಮಿಸಿ ನಿರ್ದೇಶಿಸಿರುವುದು ಬಿ ಎ ಅರಸ ಕುಮಾರ್.. ತಮ್ಮದೇ ರಚಿತವಾದ ಕಥಾವಸ್ತುವನ್ನು ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. 

ಚಿತ್ರದ ಆರಂಭದಲ್ಲಿ ತಮ್ಮ ಕೃತಜ್ಞತೆ ಅರ್ಪಿಸಿರುವುದು ವಿಶೇಷ, 

ಈ ಚಿತ್ರ ರಾಷ್ಟ್ರಪ್ರಶಸ್ತಿಗೂ ಭಾಜನವಾಗಿದ್ದು ವಿಶೇಷ. ಸಾಂಕ್ರಾಮಿಕ ರೋಗ, ಪೂರ್ವ ಜನ್ಮದ ಪಾಪದ ಫಲ, ಸಾಯಿಸೋಕೆ ಬಂದಿರುವ ಖಾಯಿಲೆ ಹೀಗೆ ಹತ್ತಾರು ನಂಬಿಕೆಗಳ ಮೂಲವಾದ ಕುಷ್ಠರೋಗದ ಬಗ್ಗೆ ಸಂದೇಶ ಇರುವ ಚಿತ್ರವಿದು. ಆರಂಭದಲ್ಲಿ ಗುರುತಿಸಿ ತಕ್ಕ ಚಿಕಿತ್ಸೆ ಪಡೆದರೆ ಖಂಡಿತ ಗುಣವಾಗುವ ಖಾಯಿಲೆ ಇದು. ಮತ್ತೆ ಇದನ್ನು ಸಾಂಕ್ರಾಮಿಕ ರೋಗವೆಂದು, ಇಂಥಹವರನ್ನು ಸಮಾಜದಿಂದ ದೂರ ಇರಿಸಬೇಕು ಎನ್ನುವ ಸಮಾಜದ ಒಂದು ವರ್ಗದ ನಂಬಿಕೆಯನ್ನು ಮುರಿದು, ಅವರಿಗೂ ಬದುಕಲು ಹಕ್ಕಿದೆ, ಅವರನ್ನು ಮಾನವೀಯತೆಯಿಂದ ನೋಡಿಕೊಂಡಾಗ ಗುಣಪಡಿಸಲು ಸಾಧ್ಯ ಮತ್ತೆ ರೋಗಿಗೆ ತಾನು ಬದುಕಬಲ್ಲೆ ಎಂಬ ಭರವಸೆಯನ್ನು ಕೊಡುವುದು ಅವರ ಸುತ್ತಲೂ ಇರುವವರ ಧರ್ಮ ಎಂದು ಸಾರುವ ಚಿತ್ರವಿದು. 

ರಾಜಕುಮಾರ್ ಸಾಮಾನ್ಯವಾಗಿ ತಾಯಿಯ ಪಾತ್ರದೆದುರು ಜೋರಾಗಿ ಮಾತನಾಡೋಲ್ಲ.. ಅವರ ಸಿನಿಮಾ ತಾಯಿ ಪಂಡರಿಬಾಯಿ ಇಂದಿಗೂ ಮಕ್ಕಳ ಆಶಯಕ್ಕೆ ವಿರುದ್ಧ ಮಾತಾಡೋಲ್ಲ ಅಂತ ಸಂಯಮ ಕಾಯ್ದುಕೊಂಡು ಬಂದಿರುವ ನಟ ನಟಿಯರು ಇವರಿಬ್ಬರು. ಆದರೆ ಈ ಚಿತ್ರದಲ್ಲಿ ಕೊಂಚ ಬದಲಾವಣೆ, ತನ್ನ ಅಣ್ಣನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹಠ ಮಾಡುವ ಪಾತ್ರ.. ತಾನು ಮಾತು ಕೊಟ್ಟ ಹುಡುಗಿಯ ಮನೆಯವರನ್ನು ಕಾಪಾಡುವ ಸಲುವಾಗಿ ತಾಯಿಯ ಇಚ್ಚೆಗೆ ವಿರುದ್ಧವಾಗಿ ಮಾತಾಡುವ ಪಾತ್ರ.. ಆದರೆ ಕಡೆಯಲ್ಲಿ ಇಬ್ಬರೂ ತಮ್ಮ ತಮ್ಮ ವಿಚಾರಗಳನ್ನು ಬದಲಿಸಿಕೊಳ್ಳುತ್ತಾರೆ ಮತ್ತೆ ಚಿತ್ರ ಸುಖಾಂತ್ಯವಾಗುತ್ತದೆ. 

ರಾಜಕುಮಾರ್ ಮತ್ತೊಮ್ಮೆ ಅಮೋಘ ಅಭಿನಯ ನೀಡಿದ್ದಾರೆ. ಇತ್ತ ಸ್ನೇಹಿತನ ಮನೆ, ಇಚ್ಛೆ ಪಟ್ಟ ಹುಡುಗಿ, ತನ್ನನ್ನು ಸಾಕಿ ಸಲಹಿದ ತಾಯಿ, ಜೊತೆಯಲ್ಲಿ ಬೆಳೆದ ತನ್ನ ಮಾವನ ಮಗಳ ಪ್ರೀತಿ ಹೀಗೆ ಎಲ್ಲವನ್ನೂ ಸಮಾಧಾನದಿಂದ ನಿಭಾಯಿಸುವ ಪರಿ ಇಷ್ಟವಾಗುತ್ತದೆ. 

ಸಂಯಮದ ಅಭಿನಯ.. ಕೆಲವು ದೃಶ್ಯಗಳಲ್ಲಿ ಮನಮಿಡಿಯುವಂತೆ ಅಭಿನಯಿಸಿದ್ದಾರೆ.. ಗೊಂದಲಗಳು, ತಾಕಲಾಟಗಳು ಇವುಗಳನ್ನು ಸಮರ್ಥವಾಗಿ ಅಭಿನಯಿಸಿರುವ ರಾಜಕುಮಾರ್ ಮಾಮೂಲಿನಂತೆ ಆ ಪಾತ್ರಕ್ಕಿ ತಾವಾಗಿದ್ದಾರೆ. 

ನಾಯಕಿಯಾಗಿ ಕಲ್ಪನಾ ಸಂಯಮದ ಅಭಿನಯ.. ನಾಯಕನಿಗೆ ತಾನು ಮದುವೆಯಾಗಲು ಸಿದ್ಧವಿಲ್ಲ ಎಂದು ಹೇಳುವಾಗಿನ ತಳಮಳವನ್ನು ಸೊಗಸಾಗಿ ಅಭಿನಯಿಸಿದ್ದಾರೆ. ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು ಹಾಡಿನ ಸಾಲಿನಲ್ಲಿ ಅವರ ಅವರ ಅಭಿನಯ ಸೊಗಸು. 

ಉದಕುಮಾರ್ ಅವರ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲವಾದರೂ, ನಾಯಕನ ಜೊತೆಯಲ್ಲಿನ ದೃಶ್ಯಗಳು ಮನಮುಟ್ಟುತ್ತವೆ. ತನ್ನ ತಂಗಿಗೆ ಬಂದ ಖಾಯಿಲೆಯನ್ನು ಕಡೆಗಣಿಸಿ ಜೊತೆಯಾಗುತ್ತೇನೆ ಎಂಬ ನಾಯಕನ ಮಾತಿಗೆ ಕಂಬನಿ ಮಿಡಿಯುವ ದೃಶ್ಯ ಇಷ್ಟವಾಗುತ್ತದೆ. 

ಪಂಡರಿಬಾಯಿ ಅವರದ್ದು ಮಾತೃ ಹೃದಯದ ಅಭಿನಯ.. 

ಶೈಲಶ್ರೀ ಇಲ್ಲಿ ಮಿಂಚುತ್ತಾರೆ.. ತಮ್ಮ ಆಸೆಗೆ ವಿರುದ್ಧವಾಗಿ ನೆಡೆಯುತ್ತಿದೆ ಎಂದು ಗೊತ್ತಾಗಿ ಅದರ ದುಃಖವನ್ನು ನುಂಗುತ್ತಾ, ನಾಯಕನಿಗೆ ಸಮಾಧಾನ ಪಡಿಸುವ ಹಾಗೂ ತನ್ನ ಅತ್ತೆಯನ್ನು ಒಪ್ಪಿಸುವ ಅಭಿನಯ ಸೊಗಸು. 

ಉಳಿದಂತೆ ಹಾಸ್ಯಕ್ಕಾಗಿ ಬಾಲಣ್ಣ ಮತ್ತು ನರಸಿಂಹರಾಜು ಇದ್ದಾರೆ. ಸಮಾಜದ ಒಂದು ವರ್ಗ ತಮ್ಮ ಅನುಕೂಲಕ್ಕಾಗಿ ತಮ್ಮ ಹಿತಕ್ಕಾಗಿ ವ್ಯಕ್ತಿಗಳ. ಮನೆಯ ಸಂತೋಷವನ್ನು, ನೆಮ್ಮದಿಯನ್ನು ಹೇಗೆ ಬಲಿ ಹಾಕುತ್ತಾರೆ ಎನ್ನುವುದು ಬಾಲಣ್ಣ ಅವರ ಅಭಿನಯದಲ್ಲಿ ತೋರುತ್ತಾರೆ. ಮಾತು ಮಾತಿಗೂ "ಇದಪ್ಪ ವರಸೆ" ಎಂದು ಹೇಳುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಪಾತ್ರ. 

ನರಸಿಂಹರಾಜು ಗುರುವಿಗೆ ತಿರು ಮಂತ್ರ ಹಾಕುವ ಮತ್ತು ಗುರುವಿನ ಆಶಯಕ್ಕೆ ವಿರುದ್ಧವಾಗಿ ನೆಡೆಯುವ ಪಾತ್ರ ಅಲ್ಲಲ್ಲಿ ನಗಿಸುತ್ತಾರೆ. 

ಹಿಂದಿನ ಕೆಲವು ಚಿತ್ರಗಳಲ್ಲಿ ಅಬ್ಬರಿಸಿದ್ದ ದಿನೇಶ್ ಇಲ್ಲಿ ಒಂದು ದೃಶ್ಯದಲ್ಲಿ ಬಂದು ಹೋಗುತ್ತಾರೆ. 

ಸಾಮಾಜಿಕ ಕಳಕಳಿಯ ಈ ಚಿತ್ರ ರಾಜಕುಮಾರ್ ಅವರ ಸಾಮಾಜಿಕ ಚಿಂತನೆಯ ಚಿತ್ರಗಳಲ್ಲಿ ಇದು ಒಂದು. 

















ಮನಸ್ಸಿಗಿಂತ ಶಕ್ತಿಶಾಲಿ ಆಯುಧ ಯಾವುದಿದೆ - ಮನಸ್ಸಿದ್ದರೆ ಮಾರ್ಗ 1967 (ಅಣ್ಣಾವ್ರ ಚಿತ್ರ ೮೮/೨೦೭)

ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಚೆನ್ನಾಗಿದ್ದ ಸಂಸಾರ ಒಡೆದು ನುಚ್ಚು ನೂರಾಗಿ ಬದುಕನ್ನು ಹೇಗೆ ನಿಭಾಯಿಸೋದು ಅಂತ ತಲೆ ಮೇಲೆ ಕೈ ಹೊತ್ತು ಕೂರದೆ ಅದಕ್ಕೊಂದು ಮಾರ್ಗ ಹುಡುಕಿ ಮತ್ತೆ ಚಿಗುರಿ ನಿಲ್ಲುವ ಸಾಧನೆ ತೋರುವ ಚಿತ್ರವಿದು. 


ಎಂ ಆರ್  ವಿಠ್ಠಲ್ ಅವರ ನಿರ್ದೇಶನದ  ಚಿತ್ರಗಳು ಸಂದೇಶ ಭರಿತ ಚಿತ್ರಗಳಾಗಿರುತ್ತವೆ. ಸಮಾಜಕ್ಕೆ ಉತ್ತಮ ಕಾಣಿಕೆ ನೀಡುವ ಉತ್ಸಾಹ ಇವರ ಚಿತ್ರಗಳು ತೋರುತ್ತವೆ. 

ಶ್ರೀಕಾಂತ್ ಅಂಡ್ ಶ್ರೀಕಾಂತ್ ಲಾಂಛನದಲ್ಲಿ ಶ್ರೀಕಾಂತ್ ನಹತ ಹಾಗೂ ಶ್ರೀಕಾಂತ್ ಪಟೇಲ್ ನಿರ್ಮಾಪಕರಾಗಿದ್ದಾರೆ. 

ಎಂ ರಂಗರಾವ್ ಅವರ ಸುಮಧುರ ಸಂಗೀತವಿದೆ. 

ಸದಾಶಿವ ಬ್ರಹ್ಮ ಅವರ ಚಿತ್ರಕಥೆಗೆ ಸಂಭಾಷಣೆ  ಒದಗಿಸಿದವರು ನರೇಂದ್ರಬಾಬು. 

ವಿಜಯನಾರಸಿಂಹ ಹಾಗೂ ನರೇಂದ್ರಬಾಬು  ಅವರು ಹಾಡುಗಳನ್ನು ಬರೆದಿದ್ದಾರೆ. 

ತಾರಾಗಣದಲ್ಲಿ ರಾಜಕುಮಾರ್, ಜಯಂತಿ,ರಾಜಾಶಂಕರ್, ನರಸಿಂಹರಾಜು,  ಅಶ್ವಥ್, ಉದಯಚಂದ್ರಿಕ, ಬಿ ವಿ ರಾಧಾ, ರಂಗ, ಶೈಲಶ್ರೀ ಹಾಗೂ ಖಳನಾಯಕರಾಗಿ ಎಂ ಪಿ ಶಂಕರ್ , ದಿನೇಶ್ ಇದ್ದಾರೆ.. ಚಿಕ್ಕಪತ್ರಗಳಲ್ಲಿ ರತ್ನಾಕರ್, ಗುಗ್ಗು ಇದ್ದಾರೆ. 

ರಾಜಕುಮಾರ್ ಮನೆಯ ಯಜಮಾನನಾಗಿ ತಮ್ಮ ಸಂಸಾರವಲ್ಲದೆ, ತಮ್ಮನ ಓದು ಬರಹವನ್ನು ನೋಡಬೇಕಾಗಿರುತ್ತದೆ. ಸಂಪಾದನೆಗೆ ಮಾರ್ಗ ಅರಿವಾಗದೇ ಸೈಕಲ್ ರಿಕ್ಷಾ ಓಡಿಸಲು ನಿರ್ಧರಿಸುತ್ತಾರೆ. ಶ್ರಮದ ಕೆಲಸ ಅಂತ ಮಡದಿ ಹೇಳಿದರೆ, ನೋಡಿದವರು ಏನು ಅನ್ನುತ್ತಾರೆ  ಎನ್ನುವ ಅಳುಕು ತಮ್ಮನಿಗೆ. 














ಆದರೆ ಇವರ  ಮಾತಿಗೆ ಗಮನ ಕೊಡದೆ ತಮ್ಮ ಸಂಸಾರವನ್ನು ಹಿಡಿದೆತ್ತಿ ನಿಲ್ಲಿಸಲು ಶ್ರಮಿಸುತ್ತಾರೆ. ತಮ್ಮನ ಪರೀಕ್ಷೆಗೆ ಹಣದ ತೊಂದರೆ ಬಂದಾಗ, ರೇಸ್ ನಲ್ಲಿ ಗೆದ್ದವರಿಗೆ ಬಹುಮಾನ ಸಿಗುತ್ತದೆ  ಎಂಬ ಸುದ್ದಿ ಕೇಳಿ ಕಾಲಿಗೆ ಗುಂಡೇಟಿನಿಂದ ಗಾಯವಾಗಿದ್ದರೂ ಕೂಡ ಲೆಕ್ಕಿಸದೆ ಪಾಲ್ಗೊಂಡು ಗೆದ್ದು ಬಹುಮಾನದ ಹಣವನ್ನು ತಮ್ಮನಿಗೆ ಕೊಡುತ್ತಾರೆ. ಪರೀಕ್ಷೆಯಲ್ಲಿ ತಮ್ಮ ಪಾಸಾಗಿದ್ದಾನೆ ಎಂಬ ಸಂತೋಷವನ್ನು ಹಂಚಿಕೊಳ್ಳುವ ರೀತಿ ಚೆನ್ನಾಗಿದೆ  

ಯಜಮಾನನ ಕರ್ತವ್ಯ, ಶ್ರದ್ಧೆ ಗುರಿಯತ್ತ ಗಮನವಿದ್ದಾಗ ಅಡತಡೆಗಳು ತೊಂದರೆ ಕೊಟ್ಟರೂ ಅದನ್ನು ಸಹಿಸಿಕೊಂಡು ವಿಧಿಯ ಆಟವನ್ನು ಗೆಲ್ಲುವುದು ಮತ್ತು ಮನಸ್ಸಿದ್ದರೆ ಮಾರ್ಗ ಎನ್ನುವ ಶೀರ್ಷಿಕೆಗೆ ಅರ್ಹ  ಅಭಿನಯ ನೀಡಿರುವುದು ಶ್ಲಾಘನೀಯ. 

ರಾಜಕುಮಾರ್ ಇಂತಹ ಪಾತ್ರಗಳಲ್ಲಿ ಮಿಂಚುವ ಪರಿ ಮತ್ತು ನೋಡುಗರಿಗೆ ಹೀಗೆ ಇರಬೇಕು ಎನ್ನಿಸುವ ಗುವವೇ ರಾಜಕುಮಾರ್ ಅವರನ್ನು ಕರುನಾಡ ಪ್ರೇಕ್ಷಕರ ಕಣ್ಮಣಿ ಮಾಡಿರುವುದು. 

ನಾಯಕಿ ಜಯಂತಿ ಕಷ್ಟಕೋಟಲೆಗಳ ಮಧ್ಯೆಯೂ ನಗು ನಗುತ್ತಾ ಚಿತ್ರದುದ್ದಕ್ಕೂ ಸಾಗಿ ಬರುವುದು, ಮನೆಯನ್ನು ಹಿಡಿದಿಟ್ಟು ಕೊಂಡು ಮನೆಯನ್ನು ಗೆಲ್ಲಿಸಲು ಶ್ರಮಿಸುವುದು ಹೀಗೆ ಉತ್ತಮ ಅಭಿನಯ ನೀಡಿದ್ದಾರೆ

ತಮ್ಮನಾಗಿ ರಾಜಾಶಂಕರ್ ಮುದ್ದಾಗಿ ಕಾಣಿಸುವುದಷ್ಟೇ ಅಲ್ಲದೆ ಮಾನವೀಯತೆಯನ್ನು ಇಟ್ಟುಕೊಂಡಿರುವ ಪಾತ್ರ. ತಾನು ಪೊಲೀಸ್ ಅಧಿಕಾರಿಯಾದರೂ ತನ್ನನ್ನು ಬೆಳೆಸಿದ ಅಣ್ಣನನ್ನು ಬಂಧಿಸುವ ಪ್ರಸಂಗದಲ್ಲೂ ಕೂಡ ಸಂಯಮ ಅಭಿನಯ.. ಜೊತೆಯಲ್ಲಿ ಅಣ್ಣನ ಬೆನ್ನ ಹಿಂದೆ  ಖಳರನ್ನು ಹಿಡಿಯಲು ಹೋರಾಟ ಮಾಡುವ ಪಾತ್ರದಲ್ಲಿ ಗೆಲ್ಲುತ್ತಾರೆ. 

ಅಶ್ವಥ್ ತಮ್ಮ ಮಗ ಖಳರೊಂದಿಗೆ ಸೇರಿ ಕೊಂಡಿದ್ದಾನೆ ಎಂದು  ಅರಿವಾದಾಗ  ಪಟ್ಟುಕೊಂಡರೂ ಕರ್ತವ್ಯ ಪ್ರಜ್ಞೆ ಮರೆಯದೆ ಮಗನನ್ನು  ಬಂಧಿಸಲು ಅಪ್ಪಣೆ ಮಾಡುವುದು, ತಮ್ಮ ಮಗಳು ಒಬ್ಬ ರಿಕ್ಷಾ ಎಳೆಯುವ ತಮ್ಮನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು, ಆತ ವಿದ್ಯಾವಂತ ಎಂದು ಅರಿತು, ಆತನಿಗೆ ಪೊಲೀಸ್ ಉದ್ಯೋಗ ಕೊಡಿಸುವುದು, ಮತ್ತೆ ಅವರಿಬ್ಬರಿಗೂ ಮದುವೆ ಮಾಡಿಸುವುದು .. ಈ ಪಾತ್ರದಲ್ಲಿ ಅಶ್ವಥ್ ಅವರ ಅಭಿನಯ ನೋಡುವುದೇ ಹಬ್ಬ. 

ರಂಗ, ಉದಯಚಂದ್ರಿಕಾ, ಶೈಲಶ್ರೀ, ನರಸಿಂಹರಾಜು, ಬಿವಿರಾಧ, ಗುಗ್ಗು, ರತ್ನಾಕರ್ ಎಂ ಪಿ ಶಂಕರ್ ದಿನೇಶ್ ಪಾತ್ರಕ್ಕೆ ತಕ್ಕ ಅಭಿನಯ

"ಈ ಜೀವನ ಬೇವು ಬೆಲ್ಲ.. " ಹಾಡು ಸ್ಪೂರ್ತಿದಾಯಕ. ಗೂಗಲ್ ಮಹಾತ್ಮೆ ಪ್ರಕಾರ ಕನ್ನಡ ಚಿತ್ರದಲ್ಲಿ ಪ್ರಥಮ ಬಾರಿಗೆ ಈ ಹಾಡಿನಲ್ಲಿ back projection technology.ಉಪಯೋಗಿಸಿದ್ದಾರೆ. 

ಮನಸ್ಸು ಗಟ್ಟಿ ಇದ್ದಾಗ, ಗುರಿಯ ಕಡೆಗೆ ಲಕ್ಷ್ಯವಿದ್ದಾಗ ಎಂಥಹ ಸಮಸ್ಯೆಯೂ ಕೂಡ ಕರಗುತ್ತದೆ ಎಂಬ ಸಂದೇಶ ಕೊಡುತ್ತದೆ. 


ಬೀದಿಯಲ್ಲಿದ್ದರೂ ದಾರಿ ಕೆಡದ ಬಸವಣ್ಣ ಎಂಬ ತಿರುಳಿನ ಬೀದಿ ಬಸವಣ್ಣ 1967 (ಅಣ್ಣಾವ್ರ ಚಿತ್ರ ೮೭/೨೦೭)

ಬದುಕಲ್ಲಿ ತಿರುವು ಕಾಣೋದು ಸಾಮಾನ್ಯ., ಆ ತಿರುವು ಬಡತನ ರೇಖೆಯನ್ನು ಅಳಿಸಬಹುದು ಅಥವ  ಗೆರೆಯನ್ನು ಉದ್ದ ಮಾಡಬಹುದು.. ಆದರೆ ಜವಾಬ್ಧಾರಿ ಒಮ್ಮೆ ಕೈಗೆತ್ತಿಕೊಂಡರೆ ಬೀದಿ ಬಸವಣ್ಣನಾಗಿದ್ದವರು ಶಿವನ ಗುಡಿಯ ಬಸವಣ್ಣ ಆಗಬಹುದು.  ಈ ಸೂತ್ರ ಇಟ್ಟುಕೊಂಡು ಹೆಣೆದ ಕಥೆ ಬೀದಿ ಬಸವಣ್ಣ ಚಿತ್ರದ್ದು. 



ಪದ್ಮಿನಿ ಪಿಕ್ಚರ್ಸ್ ಆ ಕಾಲದ ಒಂದು ಕಾರ್ಪೊರೇಟ್ ಮಾದರಿಯ ನಿರ್ಮಾಣ ಸಂಸ್ಥೆ.  ಸರಿಯಾದ ಕಥೆಯ ಎಳೆಯನ್ನು ಹಿಡಿದು ಅದಕ್ಕೆ ಒಪ್ಪುವ ಚಿತ್ರಕಥೆ.. ಆ ಕತೆಗೆ ತಕ್ಕಂತಹ ನಟ ನಟಿಯರನ್ನು ಆಯ್ದುಕೊಂಡು ಉತ್ತಮ ಸಹನೀಯ ಚಿತ್ರವನ್ನಾಗಿಸುವುದು ಬಿ ಆರ್ ಪಂತುಲು ಅವರಿಗೆ ವರವಾಗಿ ಬಂದ ಕಲೆ. 

ಕನ್ನಡದಲ್ಲಿ ಅನೇಕಾನೇಕ ಚಿತ್ರಗಳನ್ನು ತೆರೆಗೆ ತಂದ ಖ್ಯಾತಿ ಇವರದ್ದು. 

ಬೀದಿ ಬಸವಣ್ಣ ರಾಜಶ್ರೀ ಅವರ ಕಥೆಯನ್ನು ತಮ್ಮ ಪದ್ಮಿನಿ ಪಿಕ್ಚರ್ಸ್ ಕಥಾ ವಿಭಾಗ ಸಿದ್ಧಪಡಿಸಿದ ಚಿತ್ರಕಥೆಯನ್ನು ಆಧಾರವಾಗಿಸಿ ನಿರ್ಮಿಸಿ ನಿರ್ದೇಶಿಸಿದ ಬಿ ಆರ್ ಪಂತುಲು ಒಂದು  ಮುಖ್ಯ ಪಾತ್ರದಲ್ಲಿ  ತೆರೆಯ ಮೇಲಿದ್ದಾರೆ. 

ಹುಡುಗಾಟದ ಹುಡುಗನಾಗಿ ಆರಂಭಿಕ ದೃಶ್ಯಗಳಲ್ಲಿ ಕಾಣಿಸುವ ರಾಜಕುಮಾರ್ ಮುಂದೆ ತನ್ನ ಕುಟುಂಬಕ್ಕೆ ಆದ ಆಘಾತವನ್ನು, ಬಡತನವನ್ನು ತೊಡೆದುಹಾಕುವ ಪ್ರಯತ್ನದ ಪಾತ್ರದಲ್ಲಿ ಸೊಗಸಾಗಿ ಅಭಿನಯಿಸಿದ್ದಾರೆ . ತಮ್ಮ ಜವಾಬ್ಧಾರಿ ಮರೆತು ಮತ್ತೆ ಹುಡುಗಾಟಿಕೆಯ ಕಡೆಗೆ ಹೋದಾಗಲೆಲ್ಲ ಅವರನ್ನು ಮತ್ತೆ ಎಚ್ಚರಿಸಿ ಹೊರತರುವ ಪಾತ್ರದಲ್ಲಿ ನರಸಿಂಹರಾಜು ಇದ್ದಾರೆ. 

ಇದೊಂದು ಬಗೆಯ ಸಾಂಸಾರಿಕ ಚಿತ್ರವೂ ಹೌದು ಮತ್ತೆ ಪತ್ತೇದಾರಿ ಸಿನೆಮಾವೂ ಹೌದು. ಕಣ್ಣಿಗೆ ಕಾಣುವ ಕೇಡು ಸಂಗತಿಗಳು ಚಿತ್ರವನ್ನು ಮುನ್ನೆಡೆಸುತ್ತ ಸಾಗುತ್ತದೆ. 




ರಾಜಕುಮಾರ್ ಅವರ ಪಾತ್ರ ಪೋಷಣೆ ಉತ್ತಮವಾಗಿದೆ. ಅಷ್ಟೇ  ಮುದ್ದಾಗಿ ಕಾಣುವ, ಹದವಾದ ಅಭಿನಯ  ಅವರದ್ದು. ವೇಷಭೂಷಣ, ಮಾತಿನ ಧಾಟಿ, ಹಾಡುಗಳಲ್ಲಿ ನರ್ತನ ಎಲ್ಲವೂ ಉತ್ತಮವಾಗಿ ಸಂಗಮಿಸಿದೆ. 













ಭಾರತಿ ಮೊದ ಮೊದಲು ದರ್ಪದ ಪಾತ್ರಾಭಿನಯವಿದ್ದರೂ  ಮೆದುವಾಗಿ, ಪಾತ್ರಕ್ಕೆ ತಕ್ಕ  ಹಾಗೆ ಅಭಿನಯಿಸಿದ್ದಾರೆ. 

ಜವಾಬ್ದಾರಿಯುತ ಪಾತ್ರದಲ್ಲಿ ಸದಾ " ತುಪ್ಪದ ಆಂಜನೇಯ"  ಅನ್ನುವ ಅವರ ಅಭಿನಯ ಚಂದ. 

ಇಲ್ಲಿ ದಿನೇಶ್ ಪೂರ್ಣಪ್ರಮಾಣದಲ್ಲಿ ಖಳನಾಯಕರಾಗಿದ್ದಾರೆ. ಆಧ್ವನಿ ಇಷ್ಟವಾಗುತ್ತದೆ. 

ಸಂಗೀತ ಟಿ ಜಿ ಲಿಂಗಪ್ಪ ಅವರದ್ದು 

ಸಾಹಿತ್ಯ ಜಿ ವಿ ಅಯ್ಯರ್.. ಅದಕ್ಕೆ ದನಿಯಾಗಿ ಪಿ ಬಿ  ಶ್ರೀನಿವಾಸ್, ಎಸ್ ಜಾನಕೀ, ಬೆಂಗಳೂರು ಲತಾ, ನಾಗೇಶ್ವರರಾವ್ ಮತ್ತು  ಪೆದ್ದಿ ಸತ್ಯಂ ಇದ್ದಾರೆ. 



Saturday, December 20, 2025

ಶ್ರದ್ದೆ, ದೃಢವಾದ ನಂಬಿಕೆ ಇದ್ದಾಗ ದೇವರನ್ನು ಗೆಲ್ಲಬಹುದು .. ದೇವರ ಗೆದ್ದ ಮಾನವ 1967 (ಅಣ್ಣಾವ್ರ ಚಿತ್ರ ೮೬/೨೦೭)

ಈ ಚಿತ್ರ ನೋಡಿದಾಗ ನನಗನಿಸಿದ್ದು ರಾಜಕುಮಾರ್ ಅವರು ಒಂದು ಬಗೆಯ ಹೊಸತನಕ್ಕೋ, ಅಥವ ಏಕತಾನತೆಯನ್ನು ಮುರಿಯೋದಕ್ಕೆ ಈ ಸಿನಿಮಾ ಮಾಡಿರಬಹುದೇನೋ ಅಂತ.. ಕಾರಣ ಹಿಂದಿನ ಚಿತ್ರಗಳಲ್ಲಿ ಸಂಯಮವಾದ ಮಾತುಗಳು, ಕೆಲವು ಚಿತ್ರಗಳನ್ನು ಬಿಟ್ಟರೆ ದುರಭ್ಯಾಸ ಇಲ್ಲದಂತಹ ಪಾತ್ರಗಳು ಇವರ ಗರಿಮೆಯಾಗಿತ್ತು, 

ಈ ಚಿತ್ರದಲ್ಲಿ ಜೂಜಾಡುತ್ತಾರೆ, ಸೆರೆ ಕುಡಿಯುತ್ತಾರೆ.. ಜೋರಾದ ದನಿಯಲ್ಲಿ ಮಾತಾಡುತ್ತಾರೆ, ತಾನು ಮಾಡಿದ್ದು ಸರಿ ಎಂದು ತಕ್ಕ ಮಟ್ಟಿಗೆ ಮಾತಾಡುವ ಪಾತ್ರ, ಜೊತೆಯಲ್ಲಿ ಸ್ವರ್ಗ ಲೋಕಕ್ಕೆ ಹೋದರೂ ಒರಟು ಭಾಷೆಯಲ್ಲಿಯೇ ದೇವತೆಗಳನ್ನು ತರಾಟೆಗೆ ತೆಗೆದುಕೊಳ್ಳುವ ಶೈಲಿ, ತನ್ನ ಇಷ್ಟದೈವ ಶಿವನೆದುರಿಗೂ ಕೂಡ ದಬಾಯಿಸುವ ಪಾತ್ರ.  ಈ ರೀತಿಯ ಪಾತ್ರಗಳು ಬಹಳ ಕಡಿಮೆ ರಾಜಕುಮಾರ್ ಅವರು ಮಾಡಿದ್ದು. 

ಅದಕ್ಕೆ ಹೇಳಿದ್ದು ಏಕಾತಾನತೆಯನ್ನು ಮುರಿಯಲೆಂದೇ ಈ ಚಿತ್ರವನ್ನು ಮಾಡಿದರೇನೋ ಅಂತ. 


ಅವರ ಪಾತ್ರದ ತನ್ಮಯತೆ ಅದ್ಭುತ  ಅನಿಸುತ್ತದೆ. ಚಿತ್ರದಿಂದ ಚಿತ್ರಕ್ಕೆ ಅವರು ಏರುತ್ತಿರುವ ಬೆಳವಣಿಗೆಯ ಹಾದಿ, ಮಾಗುತ್ತಾ ಬರುತ್ತಿರುವ ಅವರ ಅಭಿನಯದ ಶೈಲಿ, ಪಾತ್ರಕ್ಕೆ ತಕ್ಕಂತೆ ತಮ್ಮನ್ನು ಒಗ್ಗಿಸಿಕೊಳ್ಳುವ ಅವರ ಶಿಸ್ತು, ಅದನ್ನೇ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ. 

ತಮ್ಮ ತಾಯಿಗೆ  ಅಪಾರ ಗೌರವ ಕೊಡುವ ಪಾತ್ರ.. ಅದಕ್ಕೆ ತಕ್ಕಂತೆ ಅಷ್ಟೇ ಗೌರವಯುತ ಪಾತ್ರದ ನಟನೆ ಜಯಶ್ರೀ ಅವರದು. 

ಅವರ ತಮ್ಮನ ಪಾತ್ರದಲ್ಲಿ ಸದಾ ನಗೆಯುಕ್ಕಿಸುವ ನರಸಿಂಹರಾಜು.. ಕ್ಷಣಕಾಲ ಅವರನ್ನು ಗೋಳುಹುಯ್ದು ಕೊಳ್ಳುವ ಪಾತ್ರದಲ್ಲಿ ರಮಾದೇವಿ ಹಾಗೂ ಸಹನಟಿ ವಿಜಯಲಲಿತಾ. 

ಈ ಚಿತ್ರವನ್ನು ಏಕ ಕಾಲಕ್ಕೆ  ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರೀಕರಣ ಮಾಡಿದ್ದರಿಂದ ಅನೇಕ ತೆಲುಗು ನಟರು ಕಾಣಿಸಿಕೊಳ್ಳುತ್ತಾರೆ. 

ಮಾಮೂಲಿನಂತೆ ಎಂ ಪಿ ಶಂಕರ್ ಇಲ್ಲಿ ಖಳನಾಯಕ.. ದೇವರಿಂದ ಸತ್ತು ಬದುಕಿದ ಮಾನವರಿಂದ ಮಾತ್ರ ತನಗೆ ಮರಣ ಎಂಬ ವರ ಪಡೆದು ಗರ್ವಿತನಾಗಿ ಮೆರೆಯುವ ಪಾತ್ರ. 

ಜಯಂತಿ ದೇವಲೋಕದ ರಂಬೆಯಾಗಿ, ಇಂದ್ರನಿಂದ ಶಪಿತನಾಗಿ ಭುವಿಯಲ್ಲಿ ಶಾಪ ಕಳೆದುಕೊಳ್ಳುವ ಪಾತ್ರ. ಸುಂದರ ಚಂದಿರನಾಗಿ ಕಂಗೊಳಿಸುತ್ತಾರೆ. 

ಕುಪ್ಪುರಾಜ್ ಅವರ ದನಿಯನ್ನು ಹೊತ್ತು ಇಂದ್ರನ ಪಾತ್ರ ಬೆಳಗುತ್ತದೆ. 

ಕೆಲವೇ ದೃಶ್ಯಗಳಲ್ಲಿ ಜೋಕರ್ ಶ್ಯಾಮ್ ಕಾಣಿಸಿಕೊಳ್ಳುತ್ತಾರೆ. 

ಇಂದ್ರಲೋಕದ ಸೆಟ್ಟುಗಳು, ಛಾಯಾಗ್ರಹಣ, ತಾಂತ್ರಿಕ ಅಂಶಗಳು ಚೆನ್ನಾಗಿ ಮೂಡಿ ಬಂದಿದೆ. 

ಮುದ್ದು ಮುದ್ದಾಗಿ ಕಾಣುವ ಶೈಲಶ್ರೀ ಗಂಧರ್ವ ಕನ್ಯೆಯಾಗಿದ್ದಾರೆ. 

ಎಸ್ ಭಾವನಾರಾಯಣ್ ಅವರು ಕಥೆ ಚಿತ್ರಕಥೆ ಮೂಡಿಸಿದ್ದಾರೆ. ಫಲಕದಲ್ಲಿ ಒಂದು ಹೊಸಪದ ಕಂಡೆ "ಚಿತ್ರಕತೆ" ಪದದ ಬದಲು ಸಿನಿಮಾನುಕರಣೆ ಎಂಬ ಪದ . 

ಸಂಭಾಷಣೆ, ಹಾಡುಗಳು ಮತ್ತು ನಿರ್ದೇಶನ ಹುಣುಸೂರು ಕೃಷ್ಣಮೂರ್ತಿಯವರದ್ದು. 

ವೈ. ವಿ ರಾವ್ ನಿರ್ಮಾಣ. 

ಸಂಗೀತ ರಾಜನ್ ನಾಗೇಂದ್ರ 

ಜಿ ಚಂದ್ರನ್ ಛಾಯಾಗ್ರಹಣದ ಉಸ್ತುವಾರಿ 

ಹಾಡುಗಳಿಗೆ ಪಿ ಬಿ, ಶ್ರೀನಿವಾಸ್ ಎಸ್ ಜಾನಕೀ ನಾಗೇಂದ್ರ ಎಲ್ ಆರ್ ಈಶ್ವರಿ ದನಿಯಾಗಿದ್ದಾರೆ. 

ಚಿಕ್ಕ ಚೊಕ್ಕ ಚಿತ್ರವಿದು, ರಾಜಕುಮಾರ್ ಅವರ ಅಪರೂಪದ ಅಭಿನಯ ಇದರಲ್ಲಿದೆ. 

ಒಂದು ದಿನಕ್ಕೆ ಸ್ವರ್ಗಾಧಿಪತಿಯಾಗಿ ವ್ಯವಸ್ಥೆಯನ್ನು ಬದಲಿಸುವಂಥಹ ಹತ್ತು ನಿಮಿಷದ ದೃಶ್ಯ ರಾಜಕುಮಾರ್ ಅವರ ನಿರರ್ಗಳ ಸಂಭಾಷಣೆಗಳಿಂದ ಕಳೆ ಕಟ್ಟಿದೆ, 

ಪ್ರಾಯಶಃ ಒಂದು ದಿನಕ್ಕೆ ಅಧಿಕಾರಿಯಾಗುವ ಪರಿಕಲ್ಪನೆ ಹೊತ್ತ ಚಿತ್ರಗಳಿಗೆ ಈ ಚಿತ್ರಕತೆ ಸ್ಪೂರ್ತಿಯಾಗಿರಬಹುದು.

ವಿಶೇಷತೆ ಎಂದರೆ ಸೆಫಿಯಾ ವರ್ಣದಲ್ಲಿ ಈ ಚಿತ್ರ ನೋಡುವುದು.