Thursday, January 22, 2026

ವಿವಾಹ ಎಂಬುವ ಬಂಧಕ್ಕೆ ಸಕ್ಸಸ್ ಫಾರ್ಮುಲಾ - ಗಂಡೊಂದು ಹೆಣ್ಣಾರು - 1969 (ಅಣ್ಣಾವ್ರ ಚಿತ್ರ ೧೦೭/೨೦೭)

ಬಿ ಆರ್ ಪಂತುಲು ಅದ್ಭುತ ಕಥೆ ಹೇಳುವ ಚತುರ ನಿರ್ದೇಶಕ.. ಅವರ ಚಿತ್ರದ ಕಥೆಗಳು ಸಾಮಾನ್ಯವಾಗಿರುತ್ತೆ ಆದರೆ ಅದಕ್ಕೆ ಕೊಡುವ ಅವರ ತರ್ಕ, ಅದನ್ನು ಬೆಳೆಸುವ ಪರಿ ವಿಭಿನ್ನ. ಅಂತಹ ಒಂದು ಚಿತ್ರರತ್ನ ಗಂಡೊಂದು ಹೆಣ್ಣಾರು.. 


ಈ ಚಿತ್ರದ ಹೆಸರನ್ನು ಮೂರು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು

೧) ಗಂಡೊಂದು ಹೆಣ್ಣಾರು?

ಗಂಡು ಒಂದು.. ಹೆಣ್ಣು ಯಾರು ಅಂತ 

೨) ಗಂಡೊಂದು ಹೆಣ್ಣಾರು

ಗಂಡು ಒಂದೇ ಆದರೆ ಹೆಣ್ಣುಗಳು ಆರು ಇದ್ದಾರೆ 

೩) ಗಂಡೊಂದು ಹೆಣ್ಣಾರು 

ಗಂಡು ಒಂದು..ಆರು ಗುಣಗಳಿರುವ ಹೆಣ್ಣು.. 

ಮೂರನೇ ಅರ್ಥವೇ ಈ ಚಿತ್ರದ ಮೂಲ ತಿರುಳು.. ಹೆಣ್ಣಿನಲ್ಲಿ ಆರು ಗುಣಗಳಿರಬೇಕು ಎನ್ನುವ ಸೂತ್ರದ ತಳಹದಿಯ ಮೇಲೆ ಈ ಚಿತ್ರದ ಚಿತ್ರಕತೆ ನಿಂತಿದೆ. 

ಸಿರಿವಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳೆದ ನಾಯಕನಿಗೆ ತನ್ನ ಸುತ್ತಲೂ ಹಣ ಹಣಕ್ಕೆ ಬಾಯಿ ಬಿಡುವ ಜನರನ್ನು ಕಂಡು ಬೇಸತ್ತು ದೂರದೂರಿಗೆ ಪಯಣ ಮಾಡಲು ನಿರ್ಧರಿಸುತ್ತಾನೆ. ದಾರಿಯಲ್ಲಿ ಕಾರು ನಿಂತು  ಹೋದಾಗ, ಅಲ್ಲಿಯೇ ಹತ್ತಿರದಲ್ಲಿದ್ದ ಗುಡಿಸಲಿನಲ್ಲಿ ಇಬ್ಬರು ವಯೋವೃದ್ಧ ದಂಪತಿಗಳು ಸಂತಸದಿಂದ ಇರುವುದನ್ನು ಕಂಡು.. ಇದಕ್ಕೆ ಕಾರಣವೇನು ಎಂದು ಕೇಳಿದಾಗ.. ಅವರು ಹೇಳುವ ಮಾತುಗಳೇ ಚಿತ್ರದ ಬುನಾದಿಯಾಗುತ್ತದೆ. 


ಹೆಣ್ಣಿಗೆ ಆರು ಗುಣಗಳಿರಬೇಕು.. ಆಗ ಮಾತ್ರ ಸಂಸಾರ ಸುಂದರವಾಗಲು ಸಾಧ್ಯ.. ಎಂದು ಹೇಳುತ್ತಾ ನಾಯಕನಿಗೆ ಆ ಆರು ಗುಣಗಳು ಯಾವುದು ಎಂದು ಹೇಳಿ, ಅದಕ್ಕೆ ಅರ್ಥ ವಿಸ್ತಾರ ಕೊಟ್ಟು, ಈ ರೀತಿಯ ಆರು ಗುಣಗಳಿರುವ ಹೆಣ್ಣನ್ನೇ ಮದುವೆಯಾಗಬೇಕು ಎಂದು ಹೇಳುತ್ತಾರೆ. ಸವಾಲಾಗಿತೆಗೆದುಕೊಂಡು ನಾಯಕ ಆ ಆರು ಗುಣಗಳಿರುವ ಹೆಣ್ಣಿನ ಹುಡುಕಾಟವೇ ಈ ಚಿತ್ರ. 

ಮಧ್ಯಂತರದಲ್ಲಿ ಕಥೆ ಆ ಕಡೆ ಈ ಕಡೆ ಓಡಾಡುತ್ತಿದೆ, ಎಲ್ಲೋ ಲಯ ತಪ್ಪುತ್ತಿದೆ ಎನಿಸುತ್ತದೆ, ಆದರೆ ಅಂತಿಮ ದೃಶ್ಯಗಳಲ್ಲಿ ಆ ಎಳೆಯನ್ನು ನವಿರಾಗಿ ಬಿಡಿಸಿ ಅದಕ್ಕೊಂದು ತಾರ್ಕಿಕ ಅಂತ್ಯ ಕೊಡುವ ನಿರ್ದೇಶಕರ ಜಾಣ್ಮೆ ಮೆಚ್ಚುವಂತದ್ದು. 

ಇಲ್ಲಿ ನಿರ್ಮಾಪಕ ನಿರ್ದೇಶಕ ಬಿ ಆರ್ ಪಂತುಲು ಗೆದ್ದಿದ್ದಾರೆ. 


ಅವರ ಆಸ್ಥಾನದ ಸಂಗೀತ ನಿರ್ದೇಶಕ ಟಿ ಜಿ ಲಿಂಗಪ್ಪ ಯಶಸ್ವಿಯಾಗಿ ಸಂಗೀತ ನೀಡಿದ್ದಾರೆ 

ಕಣಗಾಲ್ ಪ್ರಭಾಕರ್ ಶಾಸ್ತ್ರೀ ಮತ್ತು ಜಿ ವಿ ಅಯ್ಯರ್ ಅವರ ಉತ್ತಮ ಸಾಹಿತ್ಯ,

ಜಿ ವಿ ಅಯ್ಯರ್ ಅವರ ಅರ್ಥಗರ್ಭಿತ ಸಂಭಾಷಣೆಗಳು 

ಪಿ ಬಿ ಶ್ರೀನಿವಾಸ್, ಎಸ್ ಜಾನಕಿ, ಪಿ ಸುಶೀಲ, ಪಿ ಲೀಲಾ, ಪಿ ನಾಗೇಶ್ವರಾವ್, ಬೆಂಗಳೂರು ಲತಾ ಧ್ವನಿ ನೀಡಿದ್ದಾರೆ. 

ಉತ್ತಮ ತಾರಾಗಣವಿದೆ.. 

ನಾಯಕಿಯಾಗಿ ಭಾರತೀ..ಚಿತ್ರದ ಆರಂಭದಿಂದ ಅಂತ್ಯದವರೆಗೂ ತೆರೆಯನ್ನು ಆವರಿಸಿಕೊಂಡಿದ್ದಾರೆ. ಚಿತ್ರದ ಎರಡನೇ ಅರ್ಧದಲ್ಲಿ ಹಲವಾರು ವೇಷಭೂಷಣಗಳಲ್ಲಿನ ಅವರ ಅಭಿನಯ ಕಳೆಗಟ್ಟಿದೆ. ಕಥೆಯನ್ನು ನಿರ್ದಿಷ್ಟ ದಿಕ್ಕಿಗೆ ಒಯ್ಯುವುದರಲ್ಲಿ ಅವರ ಅಭಿನಯ ಸಹಕಾರಿಯಾಗಿದೆ. ಇವರ ಪಾತ್ರವೇ ಗೊಂದಲಮಯವಾದರೂ, ಅದನ್ನು ನಿವಾರಿಸುವ ನಿರ್ದೇಶಕರ ಜಾಣ್ಮೆಗೆ ಭಾರತಿ ಅಭಿನಯ ಒತ್ತು ನೀಡಿದೆ. 



ಬಾಲಕೃಷ್ಣ ಕಡಿಮೆ ದೃಶ್ಯಗಳಾದರೂ ಅವರೇ ಚಿತ್ರದ ತಿರುವಿಗೆ ನಿಂತಿದ್ದಾರೆ.


ಗಣಪತಿ ಭಟ್, ನಾಗಪ್ಪ, ಎಚ್ ರಾಮಚಂದ್ರಶಾಸ್ತ್ರಿ, ನರಸಿಂಹರಾಜು, ಹನುಮಂತಾಚಾರ್, ಮೈನಾವತಿ, ದಿನೇಶ್, ರಮಾದೇವಿ, ಗುಗ್ಗು. ಎಂ  ಪಿ ಶಂಕರ್ ಜೊತೆಯಾಗಿದ್ದಾರೆ. 











ಇವರನ್ನೆಲ್ಲ ತಮ್ಮ ಭುಜದ ಮೇಲೆ ಹೊತ್ತಂತೆ ರಾಜಕುಮಾರ್ ನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಆ ಸಿರಿವಂತಿಕೆಯ ದರ್ಪವಿಲ್ಲದ ಅಭಿನಯ, ಹಣದಿಂದ  ಬೇಸತ್ತ ಹೋದ ಅಭಿನಯ, ಹೊಸ ವಿಚಾರವನ್ನು ಕಲಿಯುವ ತವಕ, ಸ್ನೇಹಿತನಿಗೆ ಸಹಾಯ ಮಾಡುವ ಮನೋಗುಣ, ನಾಯಕಿಯನ್ನು ಕಂಡು ಅವರ ಮನೆಯ ವಿಚಾರ ಅರಿತು, ಅದಕ್ಕೆ ಬೆನ್ನೆಲುಬಾಗಿ ನಿಲ್ಲುವ ಚಾಣಾಕ್ಷತನ.. ಎಲ್ಲವೂ ಸೊಗಸಾಗಿ ಮೂಡಿ ಬಂದಿದೆ. 


ರಾಜಕುಮಾರ್ ಅವರು ಅಭಿನಯ ಮಾಡುತ್ತಾರೋ, ಪಾತ್ರವೇ ಅವರಾಗುತ್ತಾರೋ ಹೇಳುವುದು ಕಷ್ಟ.. ಅಷ್ಟರಮಟ್ಟಿಗೆ ಪರಕಾಯ ಪ್ರವೇಶದ ಶಕ್ತಿ ಅವರ ಅಭಿನಯಕ್ಕೆ ಇದೆ. 

ಈ ಚಿತ್ರದ ಸೂತ್ರಧಾರ ಬಿ ಆರ್ ಪಂತುಲು.. ಒಂದು ಮುಖ್ಯ ಪಾತ್ರದಲ್ಲಿ ವಿಜ್ಞಾನಿಯಾಗಿ ಕಾಣಿಸಿಕೊಳ್ಳುವ ಅವರ ಅಭಿನಯ ಸ್ಮರಣೀಯ... K2+SO4+CR2 ಅಂತ ಚಿತ್ರದುದ್ದಕ್ಕೂ ಹೇಳುತ್ತಲೇ ಇರುವ ಪಾತ್ರ. 


ಒಂದು ವಿಭಿನ್ನ ಚಿತ್ರ ಗಮನ ಸೆಳೆಯುತ್ತದೆ. ರಾಜಕುಮಾರ್ ಚಿತ್ರವನ್ನು ತೂಗಿಸಿಕೊಂಡು ಹೋಗಿರುವುದು ಎದ್ದು ಕಾಣುತ್ತದೆ. 


ಛಾಯಾಗ್ರಹಣ ವಿಭಾಗದಲ್ಲಿ  ಟ್ರಿಕ್ ಶಾಟ್ಸ್ ಚೆನ್ನಾಗಿ ಉಪಯೋಗಿಸಿದ್ದಾರೆ. 





Sunday, January 18, 2026

ಬದುಕಿಗೆ ಮಾರ್ಗ ತೋರುವ ಮಾರ್ಗದರ್ಶಿ - 1969 (ಅಣ್ಣಾವ್ರ ಚಿತ್ರ ೧೦೬/೨೦೭)

ಕೆಲವು ಚಿತ್ರಗಳು ಅದರ ಹೃದಯದಲ್ಲಿರುವ ಅಂಶವನ್ನು ತೋರುವ ವಿಭಿನ್ನ ಪ್ರಯತ್ನ ಮಾಡುತ್ತದೆ. ಚಿತ್ರದ ಆಶಯ ಅದರ ಸಾರವನ್ನು ಅರಿತುಕೊಳ್ಳುವುದು.. ಅದರಲ್ಲಿ ಹೇಳಿದ ಚಿತ್ರದಲ್ಲಿ ನೆಡೆಯದೆ ಇರಬಹುದು.. ಆದರೆ ಅದಕ್ಕೆ ಅನುಸರಿಸಬೇಕಾದ ಪ್ರಯತ್ನ, ಹಾದಿ, ಸಂಕಷ್ಟಗಳನ್ನು ದಾಟಿ ಮುನ್ನೆಡೆಯುವ ಧೈರ್ಯ ಇದು ಚಿತ್ರದ ಆಶಯವಾಗಿರುತ್ತೆ.. 

ಮಾರ್ಗದರ್ಶಿ ಇದು ಹೆಸರಾಂತ ಕಾದಂಬರಿಕಾರ ಶ್ರೀ ತ ರಾ ಸು ಅವರ ಅದೇ ಹೆಸರಿನ ಕಾದಂಬರಿಯಾಧಾರಿತ.. ಸಾಮಾನ್ಯ ತ ರಾ ಸು ಅವರ ಕಾದಂಬರಿಗಳು ದುಃಖಾಂತ್ಯ ಹೊಂದುತ್ತದೆ.. ಆದರೆ ಇಲ್ಲಿ ಕಥೆ ಓಡುತ್ತಾ ಓಡುತ್ತಾ ಅದಕ್ಕೆ ಸಂಬಂಧಪಟ್ಟವರಲ್ಲಿನ ಬದಲಾವಣೆಗಳನ್ನು ಹೊರತರುತ್ತದೆ.. ಚಿತ್ರದಲ್ಲಿಯೂ ಕೂಡ ಇದೆ ಆಶಯದ ಪ್ರಯತ್ನವನ್ನು ಬಿಂಬಿಸಿದ್ದಾರೆ. 

ಚಿಕ್ಕಮನಲ್ಲಿ ತಾಯಿಯನ್ನು ಕಾಣುವ  ನಾಯಕ, ಆದರೆ ಆಕೆ ಹಿಂದಿನ ಮತ್ಸರದ ಹಾದಿಯಲ್ಲಿಯೇ ನೆಡೆದು ನಾಯಕನನ್ನು ತೃಣ ಸಮಾನವಾಗಿ ಕಾಣುವುದು.. ನಂತರ ಆಕೆಯ ಅಣ್ಣ ಆಕೆಗೆ ಮಾನವೀಯತೆಯ ಬಗ್ಗೆ ಹೇಳಿ ಆಕೆಯ ಬದಲಾವಣೆಗೆ ಕಾರಣವಾಗುತ್ತಾನೆ. 

ನಂತರದ ಸರದಿ ಚಿಕ್ಕಪ್ಪನದು.. ಹಣ ಹಣ ಹಣ  ಅದರ ಹಿಂದೆ ಸಾಗಿ ಮಾಡಬಾರದ ಅನ್ಯಾಯಗಳನ್ನು ಮಾಡುವುದು, ಜೊತೆಗೆ ತನ್ನ ಅಣ್ಣನ ಆಸ್ತಿಯನ್ನು ಕಬಳಿಸಿ,  ಚಿಕ್ಕಪ್ಪ ಎಂದು ಪ್ರೀತಿಗೆ ಮರುಗುವ ನಾಯಕನನ್ನು ಹೀನಾಮಾನವಾಗಿ ಬಯ್ದು, ಹೀಯಾಳಿಸಿ ಅವಮಾನ ಮಾಡುವಾತ ತನ್ನ ಹೆಂಡತಿಯ ಬುದ್ದಿಯ ಮಾತಿಗೆ ಸೋತು ತನ್ನ ಗುಣವನ್ನು ಬದಲಿಸಿಕೊಳ್ಳುವುದು. 

ಊರಿನ ಶಾನುಭೋಗ ಬರೀ ತನ್ನ ಸ್ವಾರ್ಥಕ್ಕೆ ಓಡಾಡುತ್ತಿದ್ದವ, ನಾಯಕನ ಆದರ್ಶ ಗುಣಗಳಿಗೆ ಮಾರು ಹೋಗಿ ಊರಿನ ಹಿತವೇ ತನ್ನ ಧ್ಯೇಯ  ಎನ್ನುವ ನಾಯಕನ ಕೈ ಜೋಡಿಸುವುದು. 

ನಾಯಕನನ್ನು ತನ್ನ ಮಗನಿಗಿಂತ ಹೆಚ್ಚು ಎನ್ನುವ ತನ್ನ ತಂದೆಯ ಸಮಕಾಲೀನನ ಮನೆಯವರ ರಕ್ಷಣೆಗಾಗಿ ತನ್ನ ಚಿಕ್ಕಪ್ಪ ಚಿಕ್ಕಮ್ಮನನ್ನು ಊರಿನವರನ್ನು  ಹಾಕಿಕೊಳ್ಳೋದು, ನಂತರ ಊರಿನವರು ಎಲ್ಲರೂ ನಾಯಕನ ಮಾರ್ಗದರ್ಶನದಲ್ಲಿ ನೆಡೆಯುವ ನಿರ್ಧಾರದೊಂದಿಗೆ ಚಿತ್ರ ಮುಗಿಯುತ್ತದೆ. 



ಇದುವರೆಗೂ ಬಂದ ಚಿತ್ರಗಳಲ್ಲಿ ಕೊಂಚ ವಿಭಿನ್ನ.. ಇಲ್ಲಿ ನಾಯಕ ವಿಜೃಂಭಿಸದೇ ಒಬ್ಬ ಸಾಮಾನ್ಯ ನಾಗರೀಕನಾಗಿ ತೊಳಲಾಟ, ಸಂಕಟ, ವಿಷಾದ, ಸೋಲು, ಗೆಲುವು, ಪ್ರೀತಿಯ ಹಂಬಲಿಕೆ ಇದರ ಜೊತೆಯಲ್ಲಿ ಗೆದ್ದೇ ಗೆಲ್ಲುವೆ ಎಂಬ ದೃಢನಿರ್ಧಾರ, ಅದರ ಹಾದಿಯಲ್ಲಿ ಬರುವ ಎಡರು ತೊಡರುಗಳನ್ನು ನಿವಾರಿಸಿಕೊಂಡು ತನ್ನ ಕಾರ್ಯ ಸಾಧಿಸುವ ಚಾಣಾಕ್ಷತೆ ಎಲ್ಲವನ್ನೂ ಮೇಳೈಸಿಕೊಂಡಿರುವ ನಾಯಕ.. ಈ ಪಾತ್ರದಲ್ಲಿ ರಾಜಕುಮಾರ್ ಮನೋಜ್ಞ ಅಭಿನಯ ನೀಡಿದ್ದಾರೆ. ಚಿತ್ರದ ಅರ್ಧಭಾಗದ ತನಕ ಸಿನಿಮಾದ ಆಶಯ, ಸಿನಿಮಾದ ಕಥೆಯೇನು ಎನ್ನುವ ತವಕದಲ್ಲಿದ್ದರೂ ನಾಯಕನ ಪಾತ್ರ ಪೋಷಣೆ ಮತ್ತು ಅಭಿನಯ ಗೆಲ್ಲುತ್ತದೆ. ರಾಜಕುಮಾರ್ ಸದಾ ಗೆಲ್ಲುವುದು ಈ ರೀತಿಯ ಪಾತ್ರಗಳಲ್ಲಿ. ವೀಕ್ಷಕರು ಆ ಪಾತ್ರವನ್ನು ತಮಗೆ ಹೋಲಿಸಿಕೊಂಡು ತಾವೇ ಆ ಪಾತ್ರ, ಆ ನಿರ್ಧಾರ ಕೂಡ ಹೀಗೆ ನಿರ್ಧಾರ ಮಾಡುತ್ತೇವೆ ಎನ್ನುವ ಪರಿಗೆ ಸಾಗುವಂತೆ ಮಾಡುತ್ತದೆ ರಾಜಕುಮಾರ್ ಅವರ ಪಾತ್ರ. 

ಬಾಲಣ್ಣ  ನಿಜವಾದ ಖಳ ಕಿರುಚಾಡೋ ಅವಶ್ಯಕತೆ ಇಲ್ಲ ಅಂತ ತೋರಿಸಿದ್ದಾರೆ. ಅವರ ಮುಖಾಭಿನಯ, ಧ್ವನಿ, ಆ ಭಾವಭಂಗಿ ಆಹಾ... 

ಬಾಲಣ್ಣ ಅವರ ಅದ್ಭುತ ಪರಿಶ್ರಮ ಅಭಿಮಾನ್ ಸ್ಟುಡಿಯೋ ಅವರ ಜೀವನದ ಕನಸು. ಆ ತಾಣದಲ್ಲಿ ಈ  ಚಿತ್ರಕ್ಕೆ ಮೊದಲ ಬಾರಿಗೆ ಸೆಟ್ ಹಾಕಿದ್ದರು ಅಂತ ವಿಕಿಪೀಡಿಯ ಹೇಳುತ್ತೆ.. ಮತ್ತೆ ಹೆಸರಿನ ಫಲಕಗಳಲ್ಲೂ ಅದನ್ನು ತೋರಿಸುತ್ತೆ. 

ಜಯಶ್ರೀ ಮೊದಲಾರ್ಧದಲ್ಲಿ ಮತ್ಸರ ತೋರಿದರೂ ನಂತರ ಪಾತ್ರಪೋಷಣೆ ಸೊಗಸಾಗಿದೆ. ಸಾಮಾನ್ಯ ಸೌಮ್ಯ ಸ್ವಭಾವದ ಪಾತ್ರದಲ್ಲಿ ಕಾಣುವ ಜಯಶ್ರೀ ಆರಂಭದ ದೃಶ್ಯದಲ್ಲಿಯೇ ನಾಯಕನನ್ನು ತಾತ್ಸಾರವಾಗಿ ನೋಡುವುದು  ನಾ ಆಶ್ಚರ್ಯ ಪಟ್ಟೆ.. ಅರೆ  ಇದೇನಿದು ಅಂತ.. ಚಿತ್ರ  ಮುಂದುವರೆದಂತೆ ಅವರ ತೊಳಲಾಟ ಅದ್ಭುತವಾಗಿದೆ. 


ನಾಯಕಿಯಾಗಿ ಚಂದ್ರಕಲಾ ಅವರಿಗೆ ಸೀಮಿತ ಪಾತ್ರ. 

ಚಿತ್ರಕ್ಕೆ ನಿಜವಾಗಿ ತಿರುವು ಕೊಡುವುದು ರಾಘವೇಂದ್ರ ರಾವ್. ನಾಯಕನ ಮೇಲೆ ಆತನ ಚಿಕ್ಕಪ್ಪ ಚಿಕ್ಕಮ್ಮ ಆತ ಮಾಡಿದ ಒಳ್ಳೆಯ ಕೆಲಸವನ್ನು ಗುರುತಿಸದೆ ನಾಯಕನನ್ನು ಬಯ್ದದ್ದು ಕಂಡು ತನ್ನ ತಂಗಿಯ ಮೇಲೆ ಕಿಡಿಕಾರಿ ಬುದ್ದಿ ಹೇಳುವ ದೃಶ್ಯ ಸಿನೆಮಾಕ್ಕೆ ತಿರುವು ಕೊಡುತ್ತದೆ. ಉತ್ತಮ ಅಭಿನಯ ರಾಘವೇಂದ್ರ  ರಾವ್ ಅವರದ್ದು. 

ಉಳಿದಂತೆ ಪಾಪಮ್ಮ ಊರಿನ ವಯೋವೃದ್ಧೆಯಾಗಿ, ಶಾನುಭೋಗನಾಗಿ ನರಸಿಂಹರಾಜು, ಕೇಡಿಯಾಗಿ ಎಂ ಪಿ ಶಂಕರ್, ಚೇತನ್ ರಾಮರಾವ್, ನಾಗಪ್ಪ, ಸಂಪತ್ ಅವರುಗಳ ಅಭಿನಯ ಚಿತ್ರಕ್ಕೆ ಹುರುಪು ನೀಡುತ್ತದೆ. 








ಹಿಂದಿ ಚಿತ್ರಗಳ ಪ್ರಖ್ಯಾತ ಹಿನ್ನೆಲೆ ಗಾಯಕ ಮನ್ನಾಡೆ ರಾಜಕುಮಾರ್ ಅವರಿಗೆ ಒಂದು ಹಾಡಿನಲ್ಲಿ ಧ್ವನಿ ನೀಡಿದ್ದಾರೆ. ಉಳಿದಂತೆ ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಪಿ ಸುಶೀಲ ಗಾಯನಕ್ಕೆ ಜೊತೆಯಾಗಿದ್ದಾರೆ. 

ಕುವೆಂಪು ಅವರ ನೆಡೆಮುಂದೆ ನೆಡೆಮುಂದೆ ನುಗ್ಗಿ ನೆಡೆಮುಂದೆ ಕವಿತೆಯನ್ನು ಅಳವಡಿಸಿಕೊಂಡಿದ್ದಾರೆ.. ಮಿಕ್ಕ ಹಾಡುಗಳನ್ನು ವಿಜಯನಾರಸಿಂಹ ರಚಿಸಿದ್ದಾರೆ. 

ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್ಪ್ರೈಸಸ್ ಅವರಿಗೆ ಎಂ ರಂಗರಾವ್ ನೆಚ್ಚಿನ ಸಂಗೀತ ನಿರ್ದೇಶಕರು. ಆ ಸರಣಿ ಇಲ್ಲೂ ಮುಂದುವರೆದಿದೆ. 

"ಮಾನವನ ಮನ ನೊಂದೀತೆಂದು ಸತ್ಯಕ್ಕೆ ಅವಮಾನ ಮಾಡಬೇಡ" ಒಂದು ಅತ್ಯುತ್ತಮ ಸೂಕ್ತಿ, ಆ ವಾಕ್ಯವನ್ನು ಹಲವಾರು ಬಾರಿ ಚಿತ್ರದಲ್ಲಿ ಬಳಸಿದ್ದಾರೆ. 

ಒಂದು ಉತ್ತಮ ಮಾನವನ ಸಂಘರ್ಷ ಜೊತೆ ಜೊತೆಗೆ ಸ್ಫೂರ್ತಿ ತುಂಬುವ ಚಿತ್ರವಿದು. 

Saturday, January 17, 2026

ಹಳ್ಳಿಯ ಬದುಕನ್ನು ತೋರಿಸುತ್ತಾ ಸಂದೇಶ ಕೊಡುವ ಮಣ್ಣಿನ ಮಗ - 1968 (ಅಣ್ಣಾವ್ರ ಚಿತ್ರ ೧೦೫/೨೦೭)

ಹಳ್ಳಿಯ ಜೀವನ.. ಅಲ್ಲಿನ ಮುಗ್ಧತೆ, ಕ್ರೌರ್ಯ, ಮೌಢ್ಯ, ದ್ವೇಷ, ಜಾಣತನ, ಪ್ರೀತಿಯನ್ನು ದುರುಪಯೋಗಪಡಿಸಿಕೊಳ್ಳುವ ಕ್ರೂರತೆ.. ಹಳ್ಳಿಯಲ್ಲಿ ಮುಗ್ಧ ಜನರನ್ನು ದಾರಿ ತಪ್ಪಿಸುವವರು, ಅದೇ ಜನಗಳನ್ನು ಸರಿದಾರಿಗೆ ತರುವ ಸಾಹಸ.. ಸಾಧಿಸಿ ಗುರಿ ಮುಟ್ಟುವ ಛಲ ಮತ್ತು ಅದನ್ನು ಮೆಟ್ಟಿ ನಿಲ್ಲುವ ಸಾಹಸೀ ಯಶಸ್ವೀ ಪ್ರಯತ್ನ. ಈ ರೀತಿಯ ಎಲ್ಲಾ ವಿಶೇಷಣಗಳನ್ನು ಅಳವಡಿಸಿಕೊಂಡು ಕಥೆ ಚಿತ್ರಕಥೆ ಸಂಭಾಷಣೆ ಹಾಡುಗಳು ಮತ್ತು ನಿರ್ದೇಶನ ಮಾಡಿರುವವರು ಗೀತಪ್ರಿಯ ಎಂಬ ನಾಮಾಂಕಿತರಾದ ಲಕ್ಷ್ಮಣರಾವ್ ಮೋಹಿತೆ. 

ಸುದರ್ಶನ್ ಮೂವೀಸ್ ಲಾಂಛನದಲ್ಲಿ ಎಂ ವಿ ವೆಂಕಟಾಚಲಂ ಮತ್ತು ಅಲೆಕ್ಸಾಂಡರ್ ನಿರ್ಮಾಣ.. 

ವಿ ಮನೋಹರ್ ಛಾಯಾಗ್ರಹಣ ಮತ್ತು ವಿಜಯಭಾಸ್ಕರ್ ಸಂಗೀತ. 

ಈ ಚಿತ್ರದ ಆರಂಭದಲ್ಲಿ,  ತಾರಾಗಣ, ತಾಂತ್ರಿಕ ವರ್ಗದ ಹೆಸರು ತೋರಿಸುತ್ತಾ  ಹಿನ್ನೆಲೆಯಲ್ಲಿ ಹಳ್ಳಿಯ ಗ್ರಾಮೀಣ ದೃಶ್ಯ ತೋರಿಸಿರುತ್ತಾರೆ.. ಹೆಸರು ಮುಗಿದ ಮೇಲೆ ಆ ದೃಶ್ಯದಿಂದಲೇ ಸಿನಿಮಾ ಆರಂಭವಾಗುತ್ತದೆ.. ನಾಯಕನ ಪ್ರವೇಶವಾಗುತ್ತದೆ. ಸಾಮಾನ್ಯವಾಗಿ ಇದುವರೆಗಿನ ಚಿತ್ರಗಳಲ್ಲಿ ಹಾಗೆ ಇರಲಿಲ್ಲ. ಇದೊಂದು ವಿಶೇಷ!

ಇದೇನು ಸಭ್ಯತೆ ಇದೇನು ಸಂಸ್ಕೃತಿ ಈ ಹಾಡಿನಲ್ಲಿ ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ ಅಂತ  ಹಾಡಿದ ಮೇಲೆ ಸುಮಾರು ೨-೩ ಸೆಕೆಂಡುಗಳ ನಿಶ್ಯಬ್ಧ ಈ   ಹಾಡನ್ನು ಮೇಲೆತ್ತುತ್ತದೆ. ಪಿ ಸುಶೀಲ ಮೇಲಿನ ಸ್ಥಾಯಿಯಲ್ಲಿ ಹಾಡಿರುವ ಕೆಲವು ಸಾಲುಗಳು ಈ ಹಾಡಿಗೆ ಹೆಚ್ಚಿನ ಯಶಸ್ಸು ಕೊಡಲು ಸಹಕಾರಿಯಾಗುತ್ತದೆ. 

ಬದುಕುವ ಮಾರ್ಗವನ್ನು ತುಸು ಜೋರಾಗಿಯೇ ಹೇಳುವ "ಭಗವಂತ ಕೈಕೊಟ್ಟ" ಹಾಡು ಪಿ ಬಿ ಶ್ರೀನಿವಾಸ್ ಅವರ ಧ್ವನಿಯಲ್ಲಿ ಅಮರವಾಗಿದೆ. 

ಉಳಿದ ಕೆಲವು ಹಾಡುಗಳಿಗೆ ಎಸ್ ಜಾನಕೀ ಧ್ವನಿ ನೀಡಿದ್ದಾರೆ. 

ಹಳ್ಳಿಯಲ್ಲಿನ ಮುಗ್ಧತೆ, ನಾಜೂಕುತನವಿಲ್ಲದ ಪಾತ್ರಗಳು ನಾಗರೀಕರಣದಲ್ಲಿ ಮುಳುಗಿದ ಪಾತ್ರಗಳ ಜೊತೆ ಮಾತಾಡುವಾಗಲೂ ಅದೇ ತನ ಇದು ಈ ಚಿತ್ರದ ಸಂಭಾಷಣೆಗಳ ವಿಶೇಷತೆ. 

ಖಳನಾಯಕ ಕೇಡು ಮಾಡುತ್ತಲೇ ಇದ್ದರೂ, ಅಬ್ಬರವಿಲ್ಲ. ನರಿಯ ಹಾಗೆ ಚಾಣಕ್ಷತನ ತೋರುತ್ತಾನೆ.. ಅಬ್ಬರವಿಲ್ಲದೆಯೋ ಖಳನ ಪಾತ್ರ ಮಾಡಿಸಬಹುದು .. ಮತ್ತು ಖಳ ಈ ಚಿತ್ರದ ನಾಯಕನಿಗೆ  ಸಂಬಂಧಿಯಾಗಿದ್ದರಿಂದ ಕ್ರೂರತನವನ್ನು ಕಡಿಮೆ ಮಾಡಿ ಬರೀ ಮೆಲ್ಲನೆ ಬರಿ ದ್ವೇಷ ಹೆಚ್ಚುವ ಕೆಲಸ ಮಾಡುತ್ತಾನೆ. 

ನಾಯಕಿ ಮೃದುವಾಗಿ ಮಾತಾಡುತ್ತಾ ಜನರನ್ನು ಪ್ರಗತಿಯತ್ತ ಹೆಜ್ಜೆ ಹಾಕಿಸುವುದು.. ನಾಯಕನಿಗೂ ಸಹಕರಿಸುತ್ತ, ಊರಿನ ಮಂದಿಗೆ ಸರಿ ದಾರಿ ತೋರುವ, ತನ್ನ ಆಪ್ತ ಗೆಳತಿಯರು ನಗರೀಕರಣದತ್ತ ಮುಖ ಮಾಡಿದ್ದರೂ ಹಳ್ಳಿಯ ಕಡೆಗೆ ತನ್ನ ಗಮನ ಹರಿಸುವ ಪಾತ್ರದಲ್ಲಿ ಕಲ್ಪನಾ ಮೆಚ್ಚುಗೆಳಿಸುತ್ತಾರೆ.

ಶಾಂತಮ್ಮ, ಜಯ, ಅಶ್ವಥನಾರಾಯಣ್, ಹೆಚ್ ರಾಮಚಂದ್ರಶಾಸ್ತ್ರಿ, ಇಂದಿರಾದೇವಿ, ರೇಣುಕಾ , ಎಂ ಪಿ ಶಂಕರ್ ಮುಂತಾದ ಸಹನಟರ ಅಭಿನಯವಿದೆ. 

ನಾಯಕ ರಾಜಕುಮಾರ್ ಅವರಿಗೆ ನೀರು ಕುಡಿದಷ್ಟೇ  ಸಲೀಸು ಅಭಿನಯ. ಹಳ್ಳಿಜನರ ಮುಗ್ಧತೆ ಮೈಗೂಡಿಸಿಕೊಂಡು ಪಟ್ಟಣದ ಸಹವಾಸ ಕಂಡರೂ ಅದರ ಆಕರ್ಷಣೆಗೆ ಬೆರಗಾಗದೆ ಮತ್ತೆ ಹಳ್ಳಿಗೆ ಬಂದು, ಶ್ರಮವಹಿಸಿಕೊಂಡು ಮಾದರಿ ರೈತನಾಗುವ ಅಭಿನಯದಲ್ಲಿ ತಾವೇ ತಾವಾಗಿದ್ದಾರೆ. ಮಲ್ಲಣ್ಣ ಮೋಸ ಮಾಡುತ್ತಿದ್ದಾನೆ ಎಂದಾಗ ರೌದ್ರರೂಪ ತಾಳುವ ರಾಜಕುಮಾರ್ ನಾಯಕಿಯ ಜೊತೆ, ನಾಯಕಿಯ ಸಂಗಡಿಗರ ಜೊತೆ ಮಾತಾಡುವಾಗ ನಗೆಬುಗ್ಗೆ ಉಕ್ಕಿಸುತ್ತಾರೆ. ಈ ಚಿತ್ರದ ವಿಶೇಷತೆ ಬಾವಿ ತೊಡುವ ದೃಶ್ಯ.. ರಾಜಕುಮಾರ್ ಅವರು ಗಂಗವ್ವ ಬಂದ್ಲು ಗಂಗವ್ವ ಬಂದ್ಲು ಎನ್ನುವಾಗಿನ ಅವರ ಅಭಿನಯ ಅದ್ಭುತ. 


















Thursday, January 15, 2026

ಸುಳಿವಿನ ಎಳೆಯ ಹಿಡಿದು ಹೊರಟವರು ಯಾರು,ಎಲ್ಲಿಗೆ .. ಉತ್ತರ ಕೊಡುವ ಗೋವಾದಲ್ಲಿ ಸಿ ಐ ಡಿ 999 - 1968 (ಅಣ್ಣಾವ್ರ ಚಿತ್ರ ೧೦೪/೨೦೭)

ಶಿಲ್ಪಿ ಮೂರ್ತಿಯನ್ನು ಕೆತ್ತುವುದಕ್ಕೆ ಮೊದಲು ಶಿಲೆಯನ್ನು ಪರೀಕ್ಷೆ ಮಾಡುತ್ತಾರೆ.. ಅದೇ ರೀತಿ ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರದ ದಿಣ್ಣನ ಪಾತ್ರವನ್ನು ನೋಡಿದವರು ಈ ರೀತಿಯ ದೇಸಿಯ ಗೂಢಚಾರ ಅನೇಕಾನೇಕ ಉಪಕರಣಗಳನ್ನು ಆರಾಮಾಗಿ ಉಪಯೋಗಿಸುವ ಪಾತ್ರದಲ್ಲಿ ಬೆಳಗುತ್ತಾರೆ ಎಂದು ಊಹಿಸಿರಲಿಲ್ಲ.. ಆದರೆ ರಾಜಕುಮಾರ್ ಎಂಬ ಮೂರ್ತಿ ಆ ಶಿಲೆಯಲ್ಲಿ ಇತ್ತು.. ಅದನ್ನು ಅನೇಕ ನಿರ್ದೇಶಕರು ನಟರು ತಂತ್ರಜ್ಞರು ಆ ಮಹಾ ಯಜ್ಞದಲ್ಲಿ ಭಾಗಿಗಳಾಗಿದ್ದರು. 

ಜೇಡರಬಲೆಯ ಮುಂದಿನ ಗೂಢಚಾರ ಕಥಾನಕದ ಸರಣಿ ಗೋವಾದಲ್ಲಿ ಸಿ ಐ ಡಿ ೯೯೯ ಮುಂದುವರೆಯುತ್ತದೆ. ಮತ್ತೊಂದು ಎಳೆಯನ್ನು ಹಿಡಿದು ದೇಶದ್ರೋಹಿಗಳನ್ನು ಹಿಡಿದು ಸದೆಬಡಿಯುವುದು ಇಲ್ಲಿನ ಕಥಾನಕ. 


ರಾಜಕುಮಾರ್ ಅವರ ಅದ್ಭುತ ಪರಕಾಯ ಪ್ರವೇಶ ನೋಡೋದೇ ಒಂದು ಖುಷಿ. ಆರಂಭದ ದೃಶ್ಯದಲ್ಲಿ ಒಂದು ಗುಂಡಿ ಒತ್ತಿದರೆ ಸಾಕು ಓಡಾಡುವ ಮಂಚ, ತೆರೆದುಕೊಳ್ಳುವ ಬಾಗಿಲು, ಅದರಿಂದ ಒಳಬರುವ ಅವರ ಆಪ್ತ ಸಹಾಯಕರು, ಅತಿಥಿಗೆ ಕೂತುಕೊಳ್ಳಲು ಬರುವ ಕುರ್ಚಿ, ದೂರವಾಣಿ, ಪಿಸ್ತೂಲು, ಚಾಕು ಹೀಗೆ ಹತ್ತಾರು ಇಲೆಕ್ಟ್ರಾನಿಕ್ ಉಪಕರಣಗಳ ತೋರಿಸುವ ಚಿತ್ರದಲ್ಲಿ ರಾಜಕುಮಾರ್ ತಮ್ಮದೇ ರೀತಿಯ ಛಾಪು ಮೂಡಿಸುತ್ತಾರೆ. 

ಆ ಗತ್ತು, ಗಾಂಭೀರ್ಯ,ಆಂಗ್ಲ ಸಂಭಾಷಣೆಗಳನ್ನು ಹೇಳುವಾಗ ಇರಬೇಕಾದ ಭಾವ, ಆ ನಾಜೂಕುತನ, ಹೊಡೆದಾಟದಲ್ಲಿ ತೋರುವ ಚಾಕಚಕ್ಯತೆ ದೇಸಿ ಗೂಢಚಾರ ಇದ್ದರೇ ಹೀಗೆ ಇರುತ್ತಾರೆ ಎನ್ನುವಷ್ಟು ನಿಖರವಾಗಿದೆ ಅವರ ಅಭಿನಯ. 

ನವನಟಿಯಾಗಿ ಲಕ್ಷ್ಮಿ ಪಾತ್ರಕ್ಕೆ ಕೊಂಚ ಅವಕಾಶ ಕಡಿಮೆ, ಆದರೆ ಚಿತ್ರಕ್ಕೆ ಮುಖ್ಯವಾದ ಸುಳಿವು, ಹಾಗೂ ಅಂತಿಮ ದೃಶ್ಯಕ್ಕೆ ಅವರೇ ಮುಖ್ಯವಾದ ಕೊಂಡಿ. 

 ನರಸಿಂಹರಾಜು ಅವರ ಪಾತ್ರ ಮುಖ್ಯಪಾತ್ರಕ್ಕೆ ಸಹಕಾರ ನೀಡುವುದು 

ಶಕ್ತಿಪ್ರಸಾದ್ ಮತ್ತು ರಾಘವೇಂದ್ರರಾವ್ ಮುಖ್ಯ ಪಾತ್ರಗಳಾಗಿದ್ದಾರೆ. 

ಇಲ್ಲಿ ಕಥೆಯೇ ಸಿನೆಮಾವನ್ನು ತೂಗಿಸಿಕೊಂಡು ಹೋಗುವುದರಿಂದ ಪಾತ್ರಗಳು ಬರುತ್ತಲೇ ಇರುತ್ತವೆ.. ಕುತೂಹಲ ಮೂಡಿಸಿಕೊಂಡು ಸಾಗುವ ಚಿತ್ರವನ್ನು ರಾಜಕುಮಾರ್ ತಮ್ಮ ಹೆಗಲ ಮೇಲೆ ಹೊತ್ತು ಮೆರೆದಿದ್ದಾರೆ. 

ಅನುಪಂ ಮೂವೀಸ್ ಅವರ ತಯಾರಿಕೆಯಲ್ಲಿ ಬಿ ದೊರೈರಾಜ್ ಎಸ್ ಕೆ ಭಗವಾನ್ ಜೋಡಿ ಕಥೆ ಚಿತ್ರಕಥೆ ನಿರ್ಮಾಣ ನಿರ್ದೇಶನ ಮಾಡಿದ್ದಾರೆ. 

ಹಾಡುಗಳು ಆರ್ ಎನ್ ಜಯಗೋಪಾಲ್ 

ಛಾಯಾಗ್ರಹಣ ಬಿ ದೊರೈರಾಜ್ 

ಚಿತ್ರವನ್ನು ಆವರಿಸಿಕೊಂಡಿರುವುದು ರಾಜಕುಮಾರ್ ಅಭಿನಯ ಮತ್ತೊಂದು ಜಿ ಕೆ ವೆಂಕಟೇಶ್ ಅವರ ಸಂಗೀತ. 

ಬಾಂಡ್ ಮಾದರಿಯ ಸಂಗೀತವನ್ನು ಅಳವಡಿಸಿಕೊಂಡು ಅದ್ಭುತವಾಗಿ ಸಂಗೀತ ನೀಡಿದ್ದಾರೆ. ಗಿಟಾರ್ ನಾದವನ್ನು ಅವರು ಬಳಸಿರುವ ರೀತಿ ಅದ್ಭುತ.