Friday, January 2, 2026

ನೂರನೇ ಬಾಗಿಲು ಅದುವೇ ಭಾಗ್ಯದ ಬಾಗಿಲು 1968 (ಅಣ್ಣಾವ್ರ ಚಿತ್ರ ೧೦೦/೨೦೭)

ಕೆಲವೊಮ್ಮೆ ಆಗಿ ಬಿಡುತ್ತದೆ.. 

ಕೆಲವೊಂದನ್ನು ಮೊದಲೇ ಊಹಿಸಲಾಗದು 

ಕೆಲವು ಪೂರ್ವ ನಿರ್ಧರಿತವಾಗಿದ್ದರೂ ಕೈಗೂಡೂದಿಲ್ಲ 

ರಾಜಕುಮಾರ್ ಚರಿತ್ರಾರ್ಹ ನಟನಾಗಿದ್ದು ಕರುನಾಡ ಚಿತ್ರರಸಿಕರ ಪ್ರಪಂಚದಲ್ಲಿ ನೆಡೆದ ಒಂದು ವಿಸ್ಮಯ. ಬೇಡರ ಕಣ್ಣಪ್ಪ ಚಿತ್ರದಲ್ಲಿ ಆಯ್ಕೆಗೊಂಡಾಗ ಅವರಿಗೆ ನಂಬಿಕೆ ಇರಲಿಲ್ಲ ಚಿತ್ರರಂಗದಲ್ಲಿ ತಾನು ಇಷ್ಟು ದೂರ ಬರಬಹುದು ಎಂದು.. 

ಶತ ಚಿತ್ರಗಳ ನಾಯಕ ನಟ ಎಂಬ ಬಿರುದು ಹೊತ್ತ ರಾಜಕುಮಾರ್ ಅವರ ನೂರನೇ ಚಿತ್ರವೇ ಈ ಭಾಗ್ಯದ ಬಾಗಿಲು.. 

ಈ ಚಿತ್ರ ಅವರ ಹಿಂದಿನ ೯೯ ಚಿತ್ರಗಳಿಗಿಂತ ಭಿನ್ನವಾಗಿ ಆರಂಭವಾಗುತ್ತದೆ. ಇಲ್ಲಿ ಗಮನಿಸಬೇಕಾದ್ದು ತಾನು ಅಷ್ಟೊಂದು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ ಎಂಬ ಭಾವ ಕೊಂಚವೂ ಕಾಣ ಸಿಗದು.. ಹುಚ್ಚನಾಗಿ ಅಭಿನಯಿಸುವ ಆರಂಭದ ದೃಶ್ಯಗಳು.. ಮತ್ತೆ ಸಿನೆಮಾದ ಅಂತಿಮ ಹಂತದಲ್ಲಿ  ಎಲ್ಲವೂ ಬಿಡಿಬಿಡಿಯಾಗಿ ನಂತರ ಸುಖಾಂತ್ಯವಾಗೋದು ಈ ಚಿತ್ರದ ವಿಶೇಷತೆ.. 

ಹೌದು ಹಲವಾರು ಬಾರಿ ತುಂಬಾ ನಿರೀಕ್ಷಿತ ಚಿತ್ರಕಥೆಗಳು ದೃಶ್ಯ ಮಾಧ್ಯಮದಲ್ಲಿ ಹಾಗೆಯೆ ಮೂಡಿ ಬರಲು ಸಾಹಸ ಮಾಡುವುದುಂಟು.. 

ಈ ಚಿತ್ರ ನೋಡಿದಾಗ ಇದೆ ನೂರನೇ ಚಿತ್ರವಾಗಬೇಕಿತ್ತೇ ಅನಿಸೋದು ಸಹಜ.. ಆದರೆ ರಾಜಕುಮಾರ್ ಅವರ ತನ್ಮಯತೆ, ತನ್ನ ಕೆಲಸದ ಮೇಲೆ ತಾವಿಟ್ಟಿರುವ ಶ್ರದ್ಧೆ, ತಮ್ಮ ಮೇಲೆ ತಮಗಿರುವ ನಂಬಿಕೆ, ತನ್ನ ಕೆಲಸ ಅಭಿನಯಿಸೋದು.. ನಿರ್ದೇಶಕನೇ ಚಿತ್ರಗಳ ಕಪ್ತಾನ ಎನ್ನುವ ಅವರ ಸಿದ್ಧಾಂತ.. ಎಲ್ಲವೂ ಕಾಣಸಿಗುತ್ತದೆ. 

ಅಭಿನಯ, ಅಭಿನಯ, ಅಭಿನಯ.. ಇಷ್ಟೇ ಅವರ ಕಾರ್ಯ ಕ್ಷೇತ್ರ ಅನ್ನಿಸುವಂತೆ ಅವರ ಅಭಿನಯದ ಶಕ್ತಿ ಖುಷಿಕೊಡುತ್ತದೆ.. 

ದೊರೆ ಅವರ ಕಥೆಯನ್ನು ಚಿತ್ರಕತೆ ರಚಿಸಿ ನಿರ್ದೇಶಿಸುವ ಭಾಗ್ಯ ಒದಗಿದ್ದು ಕೆ ಎಸ್ ಎಲ್ ಸ್ವಾಮಿ ಅಥವ ರವಿ ಅವರಿಗೆ. 

ಬಿ ಎಚ್ ಜಯಣ್ಣ ನಿರ್ಮಾತೃ 

ಎಸ್ ಜೆ ಕೆ ಪ್ರೊಡಕ್ಷನ್ಸ್ ಲಾಂಛನ 

ಕೆ ಜಾನಕಿರಾಮ್ ಅವರ ಛಾಯಾಗ್ರಹಣ 

ವಿಜಯಭಾಸ್ಕರ್ ಅವರ ಸಂಗೀತ 

ಪಿ ಬಿ ಶ್ರೀನಿವಾಸ್, ಬಾಲಸುಬ್ರಹ್ಮಣ್ಯಂ , ಎಸ್ ಜಾನಕೀ ಅವರ ಗಾಯನ ಸುಧೆ 

ಈ ಮೈಲಿಗಲ್ಲಿನ ಸಿನಿಮಾದಲ್ಲಿ ರಾಜಕುಮಾರ್ ಅವರ ಜೊತೆಯಲ್ಲಿ ಬಾಲಕೃಷ್ಣ, ದ್ವಾರಕೀಶ್, ಅಶ್ವಥ್, ಬಿ ವಿಜಯಲಕ್ಷ್ಮಿ, ಬಿ ವಿ ರಾಧಾ, ಬಿ ಜಯ, ಜಯಶ್ರೀ, ಪಾಪಮ್ಮ, ತೂಗುದೀಪ ಶ್ರೀನಿವಾಸ್ ಮುಂತಾದವರಿದ್ದಾರೆ. 

ಹೆಸರಾಂತ  ನಾಯಕಿ ನಟಿ ಇಲ್ಲ.. ಹಿಂದೆ ತಮ್ಮ ಜೊತೆ ಅಭಿನಯಿಸಿದ ನಾಯಕಿಯರು ಇಲ್ಲ.. ಆದರೂ ಇದು ಅವರ ನೂರನೇ ಚಿತ್ರ ಎನ್ನುವ ಆಕರ್ಷಣೆಯೇ ಮುಖ್ಯವಾಗಿ ಮಿಕ್ಕ ವಿಷಯಗಳು ಗೌಣವಾಗಿವೆ.. 

ನಾಯಕನನ್ನು ವಿಜೃಂಭಿಸುವ "ನಾನೇ ರಾಜಕುಮಾರ.. " ಈ ಚಿತ್ರದ ಮುಖ್ಯ ಆಕರ್ಷಣೆ. 

ಆಗಿನ ಕಾಲದ ಬೆಂಗಳೂರನ್ನು ನೋಡುವ ಸೌಭಾಗ್ಯ ಸಿಗುತ್ತದೆ.. ಈಗ ನೆನಪಾಗಿ ಉಳಿದಿರುವ ಭಾರತ್, ನಂದ, ಮಿನರ್ವ ಮೊದಲಾದ ಟಾಕೀಸುಗಳು ಕಾಣುತ್ತವೆ.. 

ರಾಜಕುಮಾರ್ ಅವರು ತಮ್ಮದೇ  ಚಿತ್ರದ ಪೋಸ್ಟರುಗಳನ್ನು ಅಂಟಿಸುವ, ತಮ್ಮದೇ ಹಿಂದಿನ ಚಿತ್ರಕ್ಕೆ ಟಿಕೇಟು ಪಡೆಯುವ ಸಲುವಾಗಿ ಸರತಿ ಸಾಲಿನಲ್ಲಿ ನಿಲ್ಲುವ  ದೃಶ್ಯಗಳು ವಿಶೇಷ.. 

ಒಳ್ಳೆಯವರಿಗೆ ಅಣ್ಣ ರೌಡಿ ರಂಗಣ್ಣ 1968 (ಅಣ್ಣಾವ್ರ ಚಿತ್ರ ೯೯/೨೦೭)

ಶ್ರೀ ರಾಮ ಎಂಟರ್ಪ್ರೈಸಸ್ ಅವರ ರೌಡಿ ರಂಗಣ್ಣ.. ಇದೊಂದು  ಹಳ್ಳಿಯಲ್ಲಿ ನೆಡೆಯುವ ಕಥೆ. 

ಹಣವಂತರು ಬಡವರ ಮೇಲೆ ತೋರುವ ದರ್ಪ.. ಸಿಡಿದೆದ್ದು ಬೀಳುವ ಬಡವನ ಕೋಪ.. ಅದರ ಪರಿಣಾಮ, ನಂತರ ಸಿರಿವಂತರ ಸೋಲು.. ಸುಖಾಂತ್ಯ ಇಲ್ಲವೇ ಆಘಾತದ ಅಂತ್ಯ.. ಈ ಸಮೀಕರಣವನ್ನು ಒಳಗೊಂಡ ಚಿತ್ರವಿದು.. 

ಮತ್ತೊಮ್ಮೆ ರಾಜಕುಮಾರ್ ವಿಭಿನ್ನ ಪಾತ್ರದಲ್ಲಿ ಮಿಂಚುತ್ತಾರೆ.. ತಂಗಿಯ ಮೇಲಿನ ಪ್ರೀತಿ ಆತನನ್ನು ಯಾವುದೇ ಕಠಿಣ ನಿರ್ಧಾರಕ್ಕೆ ಒಳಪಡಿಸುತ್ತದೆ.. 

ರೈತನಾಗಿದ್ದವ ಬೆಳೆ ಬೆಳೆದು ಬಂದ ಹಣದಿಂದ.. ಸಾಹುಕಾರನ ಸಾಲ ತೀರಿಸು ಎಂದು ಹೇಳಿದ ತಂಗಿಯ ಮಾತನ್ನು ಬೇಡ ಎಂದು ಹೇಳಿ, ನಿನ್ನ ಮದುವೆ ಮುಖ್ಯ, ಸಾಲವನ್ನು ಇಂದು ನಾಳೆ ತೀರಿಸಬಹುದು, ಆದರೆ ಉತ್ತಮ ಬಾಳು ಮತ್ತೆ ಬಾರದು ಎಂದು ಉತ್ತಮ ಕುಟುಂಬದ ಜೊತೆ ಮದುವೆ ನಿಶ್ಚಯವಾಗಿ ಮದುವೆಯೂ ಆಗುವ ವೇಳೆಯಲ್ಲಿ ಆ ಸಿರಿವಂತ ತನ್ನ ದರ್ಪವನ್ನು ಚಲಾಯಿಸಿ ಮದುವೆ ಮುರಿಯುವುದು ಅಷ್ಟೇ ಅಲ್ಲದೆ, ಅಣ್ಣ ಸೆರೆವಾಸ ಅನುಭವಿಸಲು ಕಾರಣವಾಗುತ್ತಾನೆ.. 

ಇದರಿಂದ ಸಿಟ್ಟಾದವ ಸೆರೆಮನೆಯಿಂದ ಬಂದ ಮೇಲೆ ಸೇಡು ತೀರಿಸಿಕೊಳ್ಳಲು ಬಂದಾಗ, ಆತನ ತಂಗಿಯ ಜೀವನದಲ್ಲಿ ನೆಡೆದ ಅಚಾನಕ್ ತಿರುವುಗಳಿಂದ ಆ ಸಿರಿವಂತನ ಸೊಸೆಯಾಗಿರುತ್ತಾಳೆ.. ಆದರೆ ಇಲ್ಲಿ ನೆಡೆಯುವ ಒಂದು ಘಟನೆಯಿಂದ, ಆತನ ತಂಗಿ ಗಂಡನ ಮನೆಯಿಂದ ಹೊರಹೋಗುವಂತೆ ಆಗುತ್ತದೆ.. ಮತ್ತೆ ನಾಯಕನ ಹೋರಾಟ.. ತನ್ನ ತಂಗಿ ನಿರಪರಾಧಿ ಎಂದು ನಿರೂಪಿಸಿ, ತನ್ನ ಬಾಳಿಗೂ ಒಬ್ಬ ನಾಯಕಿ ಸಿಗುವುದರ ದೃಶ್ಯದಲ್ಲಿ ಚಿತ್ರ ಅಂತ್ಯ ಕಾಣುತ್ತದೆ.. 

ಇಲ್ಲಿ ರಾಜಕುಮಾರ್ ಅವರ ಬಗ್ಗೆ ಹೊಗಳಿಕೆ ಏನೆಂದರೆ.. ಅಷ್ಟೊಂದು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ತನ್ನ ಪಾತ್ರದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಚಿತ್ರ  ನಿರ್ಮಾಪಕರ ಹಿತ ಕಾಯುವುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ... 

ರಾಜಾಶಂಕರ್ ಮತ್ತು ಚಂದ್ರಕಲಾ ಅವರ ಪಾತ್ರವೇ ಪ್ರಧಾನ.. 

ಬಾಲಕೃಷ್ಣ ಮತ್ತು ರಮಾದೇವಿ ಚಿತ್ರದುದ್ದಕ್ಕೂ ಆವರಿಸಿಕೊಂಡಿದ್ದಾರೆ 

ಮನೆಯಾಳು ಪಾತ್ರದಲ್ಲಿ ರತ್ನಾಕರ್ ಚಿತ್ರದುದ್ದಕ್ಕೂ ಇರುತ್ತಾರೆ 

ಆದರೆ ರಾಜಕುಮಾರ್ ಪಾತ್ರ ಆರಂಭದ ಕೆಲವು ದೃಶ್ಯಗಳು ಮತ್ತೆ ಅವರ ಸೆರೆವಾಸ ಮತ್ತೆ ಅವರು ಬರೋದು ಸಿನಿಮಾದ ಸುಮಾರು ಅಂತಿಮ ದೃಶ್ಯಗಳಲ್ಲಿ.. ಆದರೆ ಅವರಿಗೆ ಸಿಗುವ ದೃಶ್ಯಗಳಲ್ಲಿ ರೋಷ, ಆಕ್ರೋಶ, ಸೇಡು, ಸಿಟ್ಟು, ದುಡುಕುತನ, ತಾಳ್ಮೆ, ಹಾಸ್ಯ, ಸಂಯಮ, ಕಿಲಾಡಿತನ ಎಲ್ಲವನ್ನೂ ತೋರಿಸುತ್ತಾರೆ.. 

ಅವರ ಅಭಿನಯದ ಸೊಗಸು ನೋಡುವುದೇ ಒಂದು ಅನುಭವ.. ತನ್ನ ಪಾತ್ರದ ಬಗ್ಗೆ ಯೋಚನೆ ಮಾಡುತ್ತಾ, ತನ್ನ ಪಾತ್ರವನ್ನು ಹೇಗೆ ಉತ್ತಮ ಪಡಿಸುವುದು, ಹಿಂದಿನ ಚಿತ್ರಗಳ ಅನುಭವ ಹೇಗೆ ತನ್ನನ್ನು ಉತ್ತಮ ನಟನನ್ನಾಗಿ ಮಾಡಲು ಸಹಕರಿಸುತ್ತಿದೆ.. ಅವರ ಅಭಿನಯದಲ್ಲಿ ಕಾಣುವುದು ಈ ತುಡಿತವೇ.. 

ಚಿತ್ರದ  ಉತ್ತರಾರ್ಧದಲ್ಲಿ ಮುದ್ದಾಗಿ ಸೂಟು ಬೂಟುಗಳಲ್ಲಿ ಕಾಣುವ ರಾಜಕುಮಾರ್ ಕಣ್ಣಿಗೆ ಹಬ್ಬ ಮೂಡಿಸುತ್ತಾರೆ .. 

ಇಲ್ಲಿ ಮತ್ತೆ ಬಾಲಣ್ಣ ಪಂಚಿಂಗ್ ಸಂಭಾಷಣೆಗಳಿಂದ ಮನಸೆಳೆಯುತ್ತಾರೆ.. ಸಾಧಾರಣ ಸಂಭಾಷಣೆಗೆ ಚಿನ್ನದ ಮೆರುಗು ಕೊಡುವ ಅವರ ಪ್ರತಿಭೆ ಮತ್ತೊಮ್ಮೆ ಅನಾವರಣಗೊಂಡಿದೆ 

"ನನಗೊತ್ತು ನೀನು ಹೇಗೆ ಹೇಳ್ತೀಯ ಅಂತ"

"ಮದುವೆಯಲ್ಲಿ ಹೆಣ್ಣನ್ನು ನೋಡೋಣ ಎಂದರೆ.. ಪುರೋಹಿತ ಅರ್ಜೆಂಟ್ ಮಾಡುತಿದ್ದ, ಒರೆಗಣ್ಣಲ್ಲಿ ನೋಡೋಣ ಎಂದರೆ ಹೋಮದ ಹೊಗೆ.. ಮಗು  ಹುಟ್ಟಿದ ಮೇಲೆಯೇ ನಿಮ್ಮಮ್ಮನ ಮುಖ ನೋಡಿದ್ದು"

"ಏ ರಂಗನ ತಂಗಿ"

"ಅಯ್ಯೋ ನಿನ್ನ ಮನೆ ಹಾಳಾಗ"

ಈ ರೀತಿಯ ಅನೇಕಾನೇಕ ಸಂಭಾಷಣೆಗಳು ನೋಡುಗರಲ್ಲಿ ಸೀಟಿ ಹೊಡೆಸುತ್ತದೆ. 

ಗಣಪತಿ ಭಟ್, ಈಶ್ವರಪ್ಪ, ಎಚ್ ಆರ್ ಶಾಸ್ತ್ರೀ, ಗುಗ್ಗು,ರತ್ನಾಕರ್, ರಮಾದೇವಿ ಇವರೆಲ್ಲಾ ಕಥೆಗೆ ಸಾತ್ ನೀಡಿದ್ದಾರೆ.. 

ಜಯಂತಿ ಇತ್ತ ನಾಯಕಿಯೂ ಅಲ್ಲ ಅತ್ತ ಅತಿಥಿ ನಟಿಯೂ ಅಲ್ಲ ಅನ್ನೋ ಹಾಗೆ ಇರುವ ಪಾತ್ರಕ್ಕೆ ಜೀವ  ತುಂಬಿದ್ದಾರೆ.. ಆ ಚೆಲುವು, ಆ ಸೊಬಗು, ಆ ಮಾತುಗಳು, ಜೇನು ದನಿ.. ಬಲು ಇಷ್ಟವಾಗುತ್ತದೆ.. 

ನರಸಿಂಹರಾಜು ಒಂದು ಪುಟ್ಟ ಪಾತ್ರದಲ್ಲಿ ಬಂದು ಹೋಗುತ್ತಾರೆ 

ಪಂಡರಿಬಾಯಿ ಧರಣಿಗೆ ಗಿರಿ ಭಾರವೇ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ 

ದಿನೇಶ್ ಪುಟ್ಟ ಖಳನ ಪಾತ್ರದಲ್ಲಿ ಆದರೆ ಚಿತ್ರಕ್ಕೆ ತಿರುವು ಕೊಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ 

ಅಂತಿಮ ದೃಶ್ಯದಲ್ಲಿ ಭಗವಾನ್ ಕಾಣಿಸಿಕೊಳ್ಳುತ್ತಾರೆ 

ಜೋಕರ್  ಶ್ಯಾಮ್, ಅಯ್ಯಂಗಾರ್, ಇಂದಿರಾ ಜಾರ್ಜ್, ಎಂ ಎನ್ ಲಕ್ಷ್ಮೀದೇವಿ ಪುಟ್ಟ ಪಾತ್ರಗಳಲ್ಲಿ ಬರುತ್ತಾರೆ. 

ಎ ಕೆ ವೇಲನ್ ಅವರ ಕಥೆಯನ್ನು ಬಿ ದೊರೈರಾಜ್ ಅವರ ಛಾಯಾಗ್ರಹಣ, ಸತ್ಯಂ ಅವರ ಸಂಗೀತ, ಚಿ ಉದಯಶಂಕರ್ ಅವರ ಸಂಭಾಷಣೆ ಮತ್ತು ಹಾಡುಗಳ ಸಹಕಾರದಿಂದ ಆರ್ ರಾಮಮೂರ್ತಿಯವರು ನಿರ್ದೇಶಿಸಿದ್ದಾರೆ. 

ಗಾಯನ ಪಡೆಯಲ್ಲಿ  ಪಿ ಬಿ ಶ್ರೀನಿವಾಸ್, ಬಾಲಸುಬ್ರಹ್ಮಣ್ಯಂ, ಪಿ ಸುಶೀಲ, ಎಸ್ ಜಾನಕೀ ಇದ್ದಾರೆ. 

ಬದಲಾವಣೆ ಜಗದ ನಿಯಮ ಸಂದೇಶ ಸಾರುವ ಹಣ್ಣೆಲೆ ಚಿಗುರಿದಾಗ 1968 (ಅಣ್ಣಾವ್ರ ಚಿತ್ರ ೯೮/೨೦೭)

ಬದಲಾವಣೆ ಆಗುತ್ತಲೇ ಇರುತ್ತದೆ .. ಅದಕ್ಕೆ ಹೊಂದಿಕೊಂಡವರು ಮುಂದಕ್ಕೆ.. ಆಗದಿದ್ದವರು ಹಿಂದಕ್ಕೆ ಎನ್ನುವ ಸಂದೇಶ ಇಟ್ಟುಕೊಂಡು ಬಂದ ಕಾದಂಬರಿ  ಶ್ರೀಮತಿ ತ್ರಿವೇಣಿ ಅವರ ಹಣ್ಣೆಲೆ ಚಿಗುರಿದಾಗ.. 

ಈ ಕಥಾವಸ್ತುವಿಗೆ ಒಬ್ಬ ಹಿರಿಯ ನಟ ಎಂದಾಗ ನೆಡೆದು ಬಂದದ್ದು ಭೀಷ್ಮ ಎನಿಸಿಕೊಂಡ ಆರ್ ಎನ್ ನಾಗೇಂದ್ರ ರಾವ್ ಅವರು.. 

ಈ ಚಿತ್ರದ ಕಥಾವಸ್ತುವಿಗೆ ನಿಜವಾದ  ನಾಯಕರು ಅವರೇ... 

ಮರೆಗುಳಿ, ಹಠಮಾರಿ, ನಾಜೂಕುತನವಿಲ್ಲದ ನೇರವಾದ ಮಾತು, ಮಕ್ಕಳ ಜೊತೆ ನೆಡೆದುಕೊಳ್ಳುವ ರೀತಿ.. ಪ್ರೀತಿಸಿದವರನ್ನೂ ಕೂಡ ತನ್ನ ಸಿದ್ಧಾಂತಗಳಿಗೆ  ವಿರುದ್ಧವಾದಾಗ ಬಿಟ್ಟು ಬಿಡುವ ತನ.. ತನ್ನ ಮಡದಿಯೇ ತಪ್ಪು ಮಾಡಿದರೂ ಕೂಡ ಕ್ಷಮಿಸದ ಗುಣ.. ಮೊಮ್ಮಕ್ಕಳನ್ನು ಕಂಡರೆ, ಸೊಸೆಯಂದಿರನ್ನು ಕಂಡರೆ ಅಪಾರ ಪ್ರೀತಿ .. ಹೀಗೆ ಅನೇಕ  ಗುಣಗಳ ಸಮ್ಮಿಶ್ರಣ ಪಾತ್ರಕ್ಕೆ ಸರಿಯಾದ ಆಯ್ಕೆ ನಾಗೇಂದ್ರರಾಯರು.. 

ಅವರೇ ಪಾತ್ರವಾಗಿದ್ದಾರೋ, ಪಾತ್ರವೇ ಅವರನ್ನು ಆವರಿಸಿಕೊಂಡಿದ್ದೀಯೋ ಅನ್ನುವಷ್ಟರ ಮಟ್ಟಿಗೆ ಪರಕಾಯ ಪ್ರವೇಶ ಮಾಡಿದ್ದಾರೆ. 

ನೂರಕ್ಕೆ ಇನ್ನೂರು ಅಂಕ ಅವರಿಗೆ.. 

ಪಾಪಮ್ಮ ಸಾಮಾನ್ಯವಾಗಿ ಮನೆಹಾಳಿ, ಗಟ್ಟಿ ಗಿತ್ತಿ, ಬಜಾರಿತನ ಈ ಪಾತ್ರಗಳಲ್ಲೇ ಬಂದಿದ್ದ ಅವರು ಈ ಚಿತ್ರದಲ್ಲಿ ಅಂತಃಕರಣವೆತ್ತ ಪಾತ್ರ..ಮರೆಗುಳಿ ಹಠಮಾರಿತನದ ಪತಿರಾಯನನ್ನು ಸಂಭಾಳಿಸುತ್ತಾ, ತುಂಬು ಸಂಸಾರವನ್ನು ತೂಗಿಸಿಕೊಂಡು ಹೋಗುವ ಅಭಿನಯ ಸೊಗಸಾಗಿದೆ. 

ದಿನೇಶ್, ರಂಗ ತಂದೆಗೆ ಎದುರು ಮಾತಾಡಲೂ ಸಂಕೋಚಪಟ್ಟರೂ, ಹೇಳಬೇಕಾದ ಮಾತುಗಳನ್ನೂ ನಿರ್ಧಾರಗಳನ್ನು ಹೇಳುವ ಗುಣ ಇವರಿಬ್ಬರ ಪಾತ್ರದ ತಳಹದಿ. ತಂಗಿಯನ್ನು ಬಿಟ್ಟುಕೊಡದೆ, ಅವಳನ್ನು ರಕ್ಷಿಸಲು ಅಪ್ಪನನ್ನೇ ಎದುರುಹಾಕಿಕೊಂಡರು  ಸರಿ ಎನ್ನುವ ಅವರಿಬ್ಬರ ನಟನೆ ಉತ್ತಮವಾಗಿದೆ. 

ತಾನು ಮಾತು ಕೊಟ್ಟ ಹೆಣ್ಣಿಗೆ ಮೋಸ ಮಾಡಬಾರದು ಎಂದು ಅಪ್ಪನನ್ನೇ ಎದುರುಹಾಕಿಕೊಂಡು ಆಸ್ತಿಯೂ ಬೇಡ ಏನೂ ಬೇಡ ಅಂತ ಮನೆ ಬಿಟ್ಟು , ತಾನು ಮಾತು ಕೊಟ್ಟ ಹುಡುಗಿಯನ್ನು ಮದುವೆಯಾಗಿ ಮನೆಯಿಂದ ಹೊರಗೆ ಹೋದರೂ ಕೂಡ, ತಂಗಿಯನ್ನು ಮರೆಯದ ಅಣ್ಣನಾಗಿ ಅರುಣಕುಮಾರ್ ಅಭಿನಯಿಸಿದ್ದಾರೆ. 

ಜಯಶ್ರೀ ಮತ್ತು ಸಹನಟಿ ಇಂದಿರಾ ಜಾರ್ಜ್ ಸೊಸೆಯಾಗಿ ಇಬ್ಬರ ಅಭಿನಯ ಮತ್ತು ತಮ್ಮ ನಾದಿನಿಯನ್ನು ಕಣ್ಣಿನಲ್ಲಿ ಇಟ್ಟುಕೊಂಡು ನೋಡಿಕೊಳ್ಳುವ ಪಾತ್ರದಲ್ಲಿ ಮಿಂಚುತ್ತಾರೆ. 

ಇನ್ನೊಬ್ಬ ನಟಿ ಪ್ರೇಮಲತ ಅರುಣ್ ಕುಮಾರ್ ಅವರ ಜೋಡಿಯಾಗಿ ಅಭಿನಯಿಸಿದ್ದಾರೆ. 

ಮೃದು ಮಾತು, ಸನ್ನಿವೇಶಗಳನ್ನು ಅರ್ಥ ಮಾಡಿಕೊಂಡು ತನ್ನನ್ನು ಪ್ರೀತಿಸುವ ಅಪ್ಪನಿಗೆ ಯಾವುದೇ ಕಾರಣದಿಂದ  ನೋವಾಗಬಾರದು, ತನ್ನ ಬದುಕು ಏನಾದರೂ ಸರಿ,ಆದರೆ ಅಪ್ಪನ ನೆಮ್ಮದಿ ಮುಖ್ಯ ಎನ್ನುವ ಸಿದ್ಧಾಂತದ ಕಲ್ಪನ ಪಾತ್ರ ಈ ಚಿತ್ರದ ಹೈ ಲೈಟ್. 

ಪ್ರತಿ ದೃಶ್ಯದಲ್ಲೂ ಅಳೆದು ತೂಗುವ ಮಾತುಗಳು, ಕಣ್ಣೋಟ, ಆ ಭಾವನೆಗಳು ಎಲ್ಲವೂ ತ್ರಿವೇಣಿಯವರು ಕಾದಂಬರಿಯಲ್ಲಿ ಚಿತ್ರಿಸಿದಂತೆ ಇದ್ದಾರೆ ಅನ್ನುವ ಮಾತು ದೃಢವಾಗುತ್ತದೆ. 

ನಾಯಕನೊಡನೆ ಮಾತಾಡುವಾಗಲೂ  ಆ ಪಾತ್ರದ  ಮಿತಿಯಲ್ಲಿಯೇ ಅಭಿನಯಿಸುವುದು ನಾಯಕಿ  ಪಾತ್ರದ ಪೋಷಣೆಯತ್ತ ನೋಡಿದಾಗ ಶ್ಲಾಘನೀಯವೆನಿಸುತ್ತದೆ

ರಾಜಕುಮಾರ್.. ಇವರ ಬಗ್ಗೆ ಏನು ಹೇಳೋದು.. ಮುದ್ದಾಗಿ ಕಾಣುವ ಈ ವರನಟ, ಅಭಿನಯಿಸುತ್ತಾರೋ, ಪ್ರತಿ ಚಿತ್ರದಲ್ಲಿ ತಾವೇ ಪಾತ್ರವಾಗಿ ಬಿಡುತ್ತಾರೋ. .ಹೇಳೋದು ಬಹಳ ಕಷ್ಟ.. ತೊಂಬತ್ತೇಳು ಚಿತ್ರಗಳನ್ನು ನೋಡಿ ಕೊಂಡು ಬರುವಾಗ, ಅರೆ ಒಂದು ಚಿತ್ರದ ಅಭಿನಯಕ್ಕೂ ಇನ್ನೊಂದು ಚಿತ್ರದ ಅಭಿನಯಕ್ಕೂ ಎಳ್ಳಷ್ಟೂ ಹೋಲಿಕೆಯಿಲ್ಲ ಎಂದು ಅರಿವಾಗುತ್ತದೆ. 

ಸೂಟುಬೂಟುಧಾರಿಯಾಗಿ  ಅಷ್ಟೇ ಚಮತ್ಕಾರಿಕವಾಗಿ ಮಾತಾಡುವ ಇವರು, ತಮ್ಮ ಬದುಕಿನಲ್ಲಿ ಆದ ಘಟನೆಯಿಂದ ಜರ್ಜಿತರಾದರೂ, ಸಮಯಮ ಬಿಡದೆ ಪಾತ್ರದಲ್ಲಿ ಅದ್ಭುತ ಇವರು. 

ಮಗುವನ್ನು ಲಾಲಿಸುವಾಗ, ಪತ್ನಿಯಾದ ಬಿ ವಿ ರಾಧಾ ಅವರನ್ನು ಪ್ರೀತಿಯ ಮಾತುಗಳಲ್ಲಿ ಮಣಿಸುವಾಗ, ತಮ್ಮನ್ನು ಸಾಕಿ ಸಲುಹಿದ ಅಕ್ಕನ ಬಳಿ ಮಾತಾಡುವಾಗ, ಬದುಕು ಕೊಟ್ಟ ಮನೆಯ ಹಿರಿಯ ನಾಗೇಂದ್ರರಾಯರ ಬಳಿ ಮಾತಾಡುವಾಗ,ಅಷ್ಟೇಕೆ ಸಿನೆಮಾದ ಎರಡನೇ ಭಾಗದಲ್ಲಿ ತಮ್ಮ ಪತ್ನಿ ಮೃತರಾದ ಮೇಲೆ, ಮಗುವನ್ನು  ಸಂಭಾಳಿಸುವುದು ಕಷ್ಟವೆನಿಸಿದಾಗ, ಕಲ್ಪನಾ ಅವರ ಬಳಿ ತಮ್ಮ್ ಕಷ್ಟಗಳನ್ನು ಹೇಳಿಕೊಳ್ಳುವಾಗ.. ರಾಜಕುಮಾರ್  ಅಭಿನಯ ಕಣ್ಣಲ್ಲಿ ನೀರು  ತರಿಸುತ್ತದೆ. 

ತಮ್ಮ ಪಾತ್ರದ ಪ್ರಾಮುಖ್ಯತೆ ಇರಲಿ ಬಿಡಲಿ, ಉತ್ತಮ ಚಿತ್ರದೊಂದಿಗೆ, ನಟನಟಿಯರ ಜೊತೆ ಅಭಿನಯಿಸುವ ಅವರ ಗುಣವೇ ಅವರನ್ನು ಕರುನಾಡ ಚಿತ್ರರಂಗದಲ್ಲಿ ಇಲ್ಲಿಯ ತನಕ ಕರೆದುಕೊಂಡು ಬಂದಿದೆ. 

ಉಳಿದ ಸಹಕಲಾವಿದರ ಅಭಿನಯ ಕಣ್ಣು ತುಂಬಿಸುತ್ತದೆ. 

ಆರ್ ಎನ್ ಜಯಗೋಪಾಲ್ ವಿರಚಿತ  ಹಾಡುಗಳು ಅರ್ಥಗರ್ಭಿತವಾಗಿದೆ 

ಎಂ ರಂಗರಾವ್  ಅವರ ಸಂಗೀತ ಮಧುರವಾಗಿದೆ.. 

ಶ್ರೀಕಾಂತ್ ಮತ್ತು ಶ್ರೀಕಾಂತ್ ಎಂಟರ್ಪ್ರೈಸಸ್  ಅವರ ಮತ್ತೊಂದು ಕಾಣಿಕೆಯಿದು.. ಶ್ರೀಕಾಂತ್ ನಹತ ಹಾಗೂ ಶ್ರೀಕಾಂತ್ ಪಟೇಲ್ ನಿರ್ಮಾಪಕರು. 

ಪಿ ಬಿ ಶ್ರೀನಿವಾಸ್, ಎಲ್ ಆರ್ ಈಶ್ವರಿ, ಪಿ ಸುಶೀಲ ಮತ್ತು ಎಂ ಬಾಲಮುರಳಿ ಕೃಷ್ಣ ಅವರ ಗಾಯನ ಸೊಗಸಾಗಿದೆ 

ಶ್ರೀಕಾಂತ್ ಮತ್ತು ಕುಮಾರ್ ಅವರ ಛಾಯಾಗ್ರಹಣ ಉತ್ತಮ

ಎಂ ಆರ್ ವಿಠ್ಠಲ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. 

ಓಡುತ್ತಲೇ ಇರುವ ಬೆಂಗಳೂರು ಮೈಲ್ 1968 (ಅಣ್ಣಾವ್ರ ಚಿತ್ರ ೯೭/೨೦೭)

ಕೆಲವೊಂದು ಚಿತ್ರಗಳಿಗೆ ಚಿತ್ರಕತೆಯೇ ನಾಯಕನಾಗಿರುತ್ತದೆ.. ಅಂತಹ ಚಿತ್ರವಿದು ಬೆಂಗಳೂರು ಮೈಲ್.. 

ಖಳರ ಗುಂಪೊಂದು ವ್ಯವಸ್ಥಿತವಾಗಿ ತನ್ನ ಹೋಟೆಲಿನಲ್ಲಿ ಉಳಿಯುವವರ ವಿವರವನ್ನು ತಿಳಿದುಕೊಂಡು, ಅವರನ್ನು ಕೊಳ್ಳೆಹೊಡೆದು, ಕೊಳ್ಳುವ ತಂಡವಿದು.. 

ಹೀಗೆ ಒಂದು ಪಯಣದಲ್ಲಿ ನರಸಿಂಹರಾಜು ಹತ್ತಿದ ರೈಲು ಡಬ್ಬಿಯಲ್ಲಿ ಕೊಲೆಯಾಗುತ್ತದೆ.. ಆದರೆ ನರಸಿಂಹರಾಜುವನ್ನು ದಿಕ್ಕು ತಪ್ಪಿಸಲು ಬರುವ ಹೆಣ್ಣಿನ ದೆಸೆಯಿಂದ ಕೊಲೆಯ ಆರೋಪ ಅವರ ಸುತ್ತಾ ಸುತ್ತಿಕೊಳ್ಳುತ್ತದೆ.. ಆ ಗೋಜಲನ್ನು ಪರಿಹರಿಸಲು ರಾಜಕುಮಾರ್ ನೇಮಕಗೊಳ್ಳುತ್ತಾರೆ. 

ಬೇಡರಕಣ್ಣಪ್ಪ ಸಿನೆಮಾದಿಂದ ರಾಜಕುಮಾರ್ ಅವರ ಪಯಣ ಅಚ್ಚರಿಗೊಳಿಸುತ್ತದೆ.. ಆ ದಿಣ್ಣಪ್ಪನೆಲ್ಲಿ, ಇಲ್ಲಿ ಸೂಟುಬೂಟು ಧರಿಸಿ ಕೊಲೆಗಾರರ ತಂಡವನ್ನು ಬೆನ್ನಟ್ಟುವ ರಾಜಕುಮಾರ್ ಎಲ್ಲಿ.. ಅವರ ಪಯಣ ಅದ್ಭುತ.. 

ಈ ಚಿತ್ರದಲ್ಲಿ ಅವರ ಮೊದಲ ದೃಶ್ಯ ಸಿನಿಮಾ ಶುರುವಾಗಿ ಸುಮಾರು ಇಪ್ಪತ್ತು ನಿಮಿಷಗಳಾದ ಮೇಲೆ ಬಂದರೂ  ಉಳಿದ ಅಷ್ಟು ಕ್ಷಣಗಳು ಪ್ರತಿ ದೃಶ್ಯದಲ್ಲೂ ಕಾಣಿಸಿಕೊಳ್ಳುತ್ತಾರೆ.. ಠಾಕುಠೀಕಾದ ನೆಡೆ ನುಡಿ, ಹೊಡೆದಾಟ, ಹಾಡು, ನೃತ್ಯ ಎಲ್ಲದಕ್ಕೂ ಸೈ.. 

ಆ ದೃಶ್ಯಗಳಲ್ಲಿ ಅವರನ್ನು ನೋಡುವುದೇ ಒಂದು ಹಬ್ಬ.. 

ನರಸಿಂಹರಾಜು ಅವರ ಜೊತೆ ಸೇರಿಕೊಂಡು ಆ ರಹಸ್ಯವನ್ನು ಭೇದಿಸುವ ಅವರ ಶೈಲಿ ಸೊಗಸಾಗಿದೆ.. ಕೆಲವೊಮ್ಮೆ ಅನಿಸುತ್ತದೆ ಇಲ್ಲಿ ನರಸಿಂಹರಾಜು ಅವರ ಪಾತ್ರವೇ ಕೊಂಚ ಹಿರೀದು ಅಂತ ಆದರೂ ನಾಯಕ ನಾಯಕನೇ ಅಲ್ಲವೇ.. ಅವರ ಸುತ್ತ ಹೆಣೆದ ಕಥೆಗೆ ರಾಜಕುಮಾರ್ ಅದ್ಭುತ ನ್ಯಾಯ ಒದಗಿಸಿದ್ದಾರೆ.  ಆ ಪಾತ್ರಕ್ಕೆ ಬೇಕಾದ ಸ್ಟೈಲ್, ಗತ್ತು, ಸಂಭಾಷಣೆ ಹೇಳುವಾಗ, ಗದರಿಸುವಾಗ ಆ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ.. 

ಪ್ರೀತಿಸಿದ ಹೆಣ್ಣನ್ನು ಮದುವೆಯಾಗಬೇಕು ಅಂತ ಹಠ ಹಿಡಿದಾಗ.. ಅದನ್ನು ದಿಕ್ಕರಿಸುವ ತಂದೆ.. ಇಲ್ಲಿ ಹಣ ಅಂತಸ್ತು ಅಡ್ಡಿ ಬರೋಲ್ಲ ಅಂತ ಅಪ್ಪ ಸ್ಪಷ್ಟವಾಗಿ ಹೇಳಿ.. ಬರೀ ಆಚಾರ ವಿಚಾರಗಳು ಮಾತ್ರ ಅಡ್ಡಿ ಬರುತ್ತದೆ ಅಂತ ಹೇಳುವ ಅಪ್ಪನ ಪಾತ್ರದಲ್ಲಿ ಅಶ್ವಥ್.. ಹಾಗೆಯೇ ಅದನ್ನು ನಾಯಕಿ ಜಯಂತಿಗೆ ವಿವರಿಸುವಾಗ ಕೂಡ ಸಂಯಮದ ಅಭಿನಯ ಸೊಗಸು.. 

ಅಪ್ಪ ಮಗನ ಜುಗಲಬಂಧಿ ಸಂಭಾಷಣೆ ಎಲ್ಲೇ ಮೀರೋಲ್ಲ, ಕಿರುಚಾಟವಿಲ್ಲಾ,  ಇಬ್ಬರೂ ಕೂಡ ಒಬ್ಬರ ಅಭಿಪ್ರಾಯವನ್ನು ಗೌರವಿಸುತ್ತಲೇ ತಮ್ಮ ತಮ್ಮ ವಿಚಾರಗಳನ್ನು ಒಪ್ಪಿಸುವ ಪರಿ ಸೂಪರ್ ಇದೆ. 

ಅಶ್ವಥ್ ಅವರ ಅಭಿನಯ ಬಹಳ ನಾಟುತ್ತದೆ. 

ಜಯಂತಿ ಚಿಕ್ಕ ಚೊಕ್ಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಚೆಲುವು, ವಯ್ಯಾರ ಸೊಗಸಾಗಿದೆ. 

ನರಸಿಂಹರಾಜು ಚಿತ್ರದ್ದುದ್ದಕ್ಕೂ ಆವರಿಸಿಕೊಂಡಿದ್ದಾರೆ. ಪ್ರತಿ ಹೆಜ್ಜೆಯಲ್ಲೂ ನಾಯಕನಿಗೆ ಸಹಕರಿಸುತ್ತಾ  ಖಳರನ್ನು ಹಿಡಿದುಕೊಡುವಲ್ಲಿ ಸಹಕರಿಸುವ ಪಾತ್ರದಲ್ಲಿ ಮಿಂಚುತ್ತಾರೆ. 

ಉಳಿದಂತೆ.. ಬಿವಿ ರಾಧಾ,  ಕೊಟ್ಟಾರಕ್ಕರ್ ಶ್ರೀಧರ್ ನಾಯರ್ ಖಳನ ಪಾತ್ರದಲ್ಲಿ ಮಿಂಚುತ್ತಾರೆ. 

ಎಸ್ ಕೆ ಭಗವಾನ್ ಹೋಟೆಲಿನ ಮ್ಯಾನೇಜರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. 

ಕಾಮಿಡಿಯನ್ ಗುಗ್ಗು, ಶನಿಮಹಾದೇವಪ್ಪ, ಕುಪ್ಪುರಾಜ್ ಸಮಯೋಚಿತ ಅಭಿನಯ.. 

ಸಂಭಾಷಣೆ ಹಾಡುಗಳು ಚಿ ಉದಯಶಂಕರ್.. ಅವರ ಹೆಸರೇ ಮೊದಲು ಬರೋದು ವಿಶೇಷ.. 

ಸಂಗೀತ ಸತ್ಯಂ 

ಛಾಯಾಗ್ರಹಣ ಆರ್ ಮಧು 

ಗಾಯನ ಪಿ ಬಿ ಶ್ರೀನಿವಾಸ್, ಎಸ್ ಪಿ ಬಾಲಸುಬ್ರಮಣ್ಯಂ, ಪಿ ಸುಶೀಲ, ಎಸ್ ಜಾನಕೀ ಸುಮಿತ್ರಾ 

ನಿರ್ದೇಶನ ಎಲ್ ಎಸ್ ನಾರಾಯಣ.. 

ನಿರ್ಮಾಣ ವೈ ವಿ ರಾವ್ 

ಗೌರಿ ಆರ್ಟ್ಸ್ ಫಿಲಂಸ್ 

ಇದೊಂದು ವೇಗವಾಗಿ ಓಡುವ ಸಿನಿಮಾ .. ರಾಜಕುಮಾರ್ ಈ ಚಿತ್ರದ ಮುಖ್ಯ ಭಾಗವಾಗಿದ್ದಾರೆ

ಈ ಚಿತ್ರ ಮಲೆಯಾಳಂ ಚಿತ್ರದ ಅವತರಣಿಕೆಯಾದರೂ ಎಲ್ಲೂ ಕೂಡ ಪರಭಾಷೆಯ ನೆರಳು ಕಾಣದ ಹಾಗೆ ಚಿತ್ರಿಸಿದ್ದಾರೆ.