Sunday, July 19, 2020

ಸಾಕಿದ ಗಿಡದ ಹಾಗೆ ಸಾಕಿದ ಮಗಳು ಎಂದಿಗೂ ನೆರಳು ನೀಡುವುದು - ಸಾಕುಮಗಳು (1963) (ಅಣ್ಣಾವ್ರ ಚಿತ್ರ ೩೫ / ೨೦೭)

ಮೊದಲ ಒಂದು ಘಂಟೆ ಚಿತ್ರ ನೋಡಿದಾಗ ಅಬ್ಬಬ್ಬಾ ರಾಜಕುಮಾರ್ ಈ ರೀತಿಯ ಪಾತ್ರದಲ್ಲೂ ಮಿಂಚುತ್ತಾರೆ ಅನ್ನಿಸಿತು.. ಬೇಜವಾಬ್ಧಾರಿ ಹುಡುಗನಾಗಿ, ದುರಾಸೆಯ ಅಪ್ಪನ ಜೊತೆ ಸೇರಿ ದುಡ್ಡು ಬರುವ ಕುಸ್ತಿ, ರೇಸು, ಇಸ್ಪೀಟು ಆಡುತ್ತಾ, ದುಡ್ಡು ಬೇಕೆನಿಸಿದರೆ, ಮನೆಯ ಪದಾರ್ಥಗಳನ್ನು ಮಾರುವ ಪಾತ್ರ..

ಎಷ್ಟು ಕರಾರುವಕ್ಕಾಗಿ ನಟಿಸಿದ್ದಾರೆ ಅಂದರೆ, ಹಿಂದಿನ ಚಿತ್ರಗಳಲ್ಲಿ ಇವರೇನಾ ಅಭಿನಯಿಸಿದ್ದು ಅನಿಸುವ ಹಾಗೆ.. ಕಾಯಿಲೆಯಿಂದ ತಾಯಿ ನರಳುತ್ತಿದ್ದರು, ಅದರ ಕಡೆಗೆ ಗಮನ ಕೊಡದೆ, ಮನೆಯಲ್ಲಿ ಹಸಿವೆಯಿಂದ ಪರದಾಡುತ್ತಿದ್ದರು, ತಮ್ಮ ಮೋಜಿಗೆ ತಮ್ಮಲಿರುವ ದುಡ್ಡನ್ನು ಉಪಯೋಗಿಸುವಷ್ಟು ಉಡಾಫೆಯ ಪಾತ್ರ.. ತನ್ನ ತಂಗಿ ಶಾಲೆಯಿಂದ ತಂದಿದ್ದ ಉತ್ತರ ಪತ್ರಿಕೆಗಳನ್ನು ರೇಸು ಆಡುವುದಕ್ಕಾಗಿ ಮಾರಿ, ಅದು ತಮ್ಮ ತಪ್ಪಲ್ಲ ಎಂದು ಸಾಧಿಸಿ ಜೈಲಿಗೆ ಹೋಗುವ ಪಾತ್ರ..


ಪ್ರತಿ ದೃಶ್ಯದಲ್ಲಿಯೂ ಅವರ ಅಭಿನಯ ಮನಸೆಳೆಯುತ್ತದೆ..


ತನ್ನ ತಂಗಿ ತನ್ನನ್ನು ಮತ್ತು ದುರಾಸೆಯ ಅಪ್ಪನನ್ನು ಜೈಲಿಂದ ಬಿಡಿಸಲು, ಆಸ್ತಿವಂತ ಮುದುಕನನ್ನು ಮದುವೆಯಾಗಲು ಸಿದ್ಧವಾಗುವ ವಿಚಾರ ತಿಳಿದು, ಬದಲಾಗುತ್ತಾರೆ.. ಪರಿಶ್ರಮ ಪಟ್ಟು ದುಡಿಯಲು ಶುರುಮಾಡುತ್ತಾರೆ.. ಮತ್ತೆ ತನ್ನ ತಂಗಿ ಒಬ್ಬ ವಿದ್ಯಾವಂತನನ್ನು ಮದುವೆಯಾದದ್ದು ತಿಳಿದು ಸಂತೋಷ ಪಡುತ್ತಾರೆ..


ಆದರೆ ವಿಧಿಲಿಖಿತ.. ಅವರ ಮೊದಲ ಬೇಜವಾಬ್ಧಾರಿ ನಡತೆಯಿಂದ.. ತಂಗಿಯ ಗಂಡನ ಮನೆಯವರು ಈತನನ್ನು ತಪ್ಪಿತಸ್ಥನಾಗಿ ನೋಡುತ್ತಾರೆ.. ನಂತರ ತನ್ನ ತಪ್ಪನ್ನು ತಿದ್ದಿಕೊಳ್ಳಲು, ಅಪಘಾತದಿಂದ ತನ್ನ ಕಣ್ಣು ಕಳೆದುಕೊಳ್ಳುವಳನ್ನು ಮದುವೆಯಾದರೂ.. ಅದು ಸರಿಯಾಗದೆ.. ಹೆಂಡತಿಯ ಕೈಲಿ ಬೈಸಿಕೊಂಡು ಮನೆಯಿಂದ ಹೊರಗೆ ಹೋಗುತ್ತಾರೆ.. ನಂತರ ವಿರಾಗಿ ಜೀವನ ಮಾಡುತ್ತಾ.. ಮತ್ತೆ ವಿಧಿಯ ಆಟದಂತೆ, ತನ್ನ ಹೆಂಡತಿಗೆ ಸೇವೆ ಮಾಡುತ್ತಾ.. ಅವಳಿಗೆ ಕಣ್ಣು ಬಂದಾಗ ಖುಷಿ ಪಡುವ ಪಾತ್ರದಲ್ಲಿ ರಾಜ್ ಕುಮಾರ್ ಅವರ ಅಭಿನಯ ಮನಸೆಳೆಯುತ್ತದೆ..

ಪ್ರತಿ ಮಾತುಗಳು, ಭಾವಾಭಿನಯದಲ್ಲಿ ಮನಗೆಲ್ಲುತ್ತಾರೆ..

ಸಾಕುಮಗಳಾಗಿ ಕಲ್ಪನಾ ಮೊದಲ ಚಿತ್ರದಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ.. ಬೇಜವಾಬ್ಧಾರಿ ಅಣ್ಣ, ಅಪ್ಪನನ್ನು ಸಾಕುತ್ತಾ, ರೋಗಿಷ್ಟೆ ತಾಯಿಯನ್ನು ಸಲುವುವ ಪಾತ್ರ, ಮತ್ತೆ ಮದುವೆಯಾಗಿ ಗಂಡನ ಮನೆಯಲ್ಲಿದ್ದಾಗಿಯೂ... ತನ್ನ ಅಪ್ಪ ಮಾಡುವ ಅಪರಾಧವನ್ನು ಮುಚ್ಚಲು ಹೋಗಿ ಸಿಕ್ಕಿಹಾಕಿಕೊಂಡು ಮನೆಯಿಂದ ಹೊರಬೀಳುವ ಸೊಸೆಯಾಗಿ, ನಂತರ ಮಗುವಿಗೆ ಜನ್ಮ ಕೊಟ್ಟು ಯಾರೋ ಕೊಟ್ಟ ಆಶ್ರಯದಲ್ಲಿ ಬೆಳೆದು, ಕೊನೆಯಲ್ಲಿ ಸುಖಾಂತ್ಯ ಹೊಂದುವ ಸಂಸಾರದ ಸೂತ್ರಧಾರಿಯಾಗಿ ಅವರ ಅಭಿನಯ ಸೂಪರ್..


ಬೇಜವಾಬ್ಧಾರಿ ಅಪ್ಪನಾಗಿ ಡಿಕ್ಕಿ ಮಾಧವರಾವ್ ಅದ್ಭುತ ಅಭಿನಯ.. ನಾಚಿಕೆ ಏನೂ ಇಲ್ಲದೆ ಕಳ್ಳತನ ಮಾಡುವ ಅವರ ಪಾತ್ರ ಸೊಗಸಾಗಿ ಚಿತ್ರಿಸಿದ್ದಾರೆ.. ಗಮನ ಸೆಳೆಯುತ್ತಾರೆ..


ಥ್ರಿಲ್ ರೋಮಾಂಚನ ಎನ್ನುವ ಬಾಲಕೃಷ್ಣ.. ಪ್ರತಿ ದೃಶ್ಯದಲ್ಲಿಯೂ ನಗೆ ಉಕ್ಕಿಸುತ್ತಾರೆ  ಸಂಸಾರವನ್ನು ತೊಗಿಸುವ ಬರದಲ್ಲಿಯೂ ತಮ್ಮ ಪತ್ತೆಧಾರಿ ಸ್ವಭಾವದಿಂದ ಪೇಚಿಗೆ ಸಿಲುಕುವ.. ತನ್ನ ಘಟವಾಣಿ ಹೆಂಡತಿಯನ್ನು ಬದಲಾಯಿಸುವ ಪಾತ್ರದಲ್ಲಿ ಬಾಲಣ್ಣ ಸೂಪರ್..


ಬಜಾರಿ ಎನ್ನುವಂಥಹ ಸ್ವಭಾವ ಅಲ್ಲದಿದ್ದರೂ ಹಠವಾದಿಯಾಗಿ ಸಾಹುಕಾರ್ ಜಾನಕೀ ಗಮನ ಸೆಳೆಯುವ ಅಭಿನಯ.. ಕಣ್ಣು ಕುರುಡಾದರೂ ಛಲ ಬಿಡದೆ ಗಂಡನನ್ನು, ಮನೆಯವರನ್ನು ದಬಾಯಿಸುವ ಪಾತ್ರ, ತನ್ನ ಗಂಡನ ಸೇವೆಯಿಂದ ಮನಕರಗುವ ಅಭಿನಯ ಇಷ್ಟವಾಗುತ್ತದೆ.


ಪಾತ್ರ ಚಿಕ್ಕದಾದರೂ ಚಿತ್ರಕ್ಕೆ ಬೇಕಾದ ತಿರುವು ಕೊಡುವ ಪಾತ್ರದಲ್ಲಿ ರಾಜಾಶಂಕರ್ ಇಷ್ಟವಾಗುತ್ತಾರೆ..

ಎಂದಿನಂತೆ ಘಟವಾಣಿ ಅಂದರೆ ರಮಾದೇವಿ ಎನ್ನವ ಹೆಸರನ್ನು ಮತ್ತೆ ನಿಜ ಮಾಡುತ್ತಾರೆ.

ಸಣ್ಣ ಪಾತ್ರ ಆದರೆ ಸುಮಾರು ಚಿತ್ರದುದ್ದಕ್ಕೂ ಇರುವ ನರಸಿಂಹರಾಜು ಅವರು ಈ ಚಿತ್ರದಲ್ಲಿ ಇದ್ದಾರೆ.


ಕಷ್ಟಕ್ಕೆ ಆಗುವವರು ರಕ್ತ ಸಂಬಂಧಿಗಳೇ ಆಗಬೇಕೆಂದಿಲ್ಲ.. ಮನ ಕರಗುವವರು ಆಗುತ್ತಾರೆ ಎಂಬ ಮಾತನ್ನು ಈ ಚಿತ್ರದಲ್ಲಿ ತಳಹದಿಯಾಗಿ ಉಪಯೋಗಿಸಿದ್ದಾರೆ. ಈರ ಷಣ್ಮುಗಂ ಅವರ ಕತೆಗೆ ಇದೆ ಬುನಾದಿ.

ಚಿನಕುರಳಿಯಂತಹ ಸಂಭಾಷಣೆ ಜಿ ವಿ ಅಯ್ಯರ್ ಅವರದ್ದು.

ಸಹ ನಿರ್ದೇಶಕರಾಗಿ ಪುಟ್ಟಣ್ಣ ಕಣಗಾಲ್ ಹಾಗೂ ಕೆ ಸಿಂಗಮುತ್ತು ಕೆಲಸ ಮಾಡಿದ್ದಾರೆ

ಈ ಚಿತ್ರದ ಟೈಟಲ್ ಕಾರ್ಡ್ ಸ್ವಲ್ಪ ವಿಭಿನ್ನವಾಗಿ ತೋರಿಸಿದ್ದಾರೆ.. ಮಗುಚಿ ಹಾಕುವ ಮ್ಯಾಗಜಿನ್ ತೋರಿಸುತ್ತಾ.. ಬದಲಾಗುವ ಪ್ರಪಂಚ.. ಬದಲಾಗುವ ಮನುಜನ ಬದುಕು ಹೀಗೆ ಅನೇಕ ಮಜಲುಗಳನ್ನು ತೋರಿಸುತ್ತಾ ಹೋಗುತ್ತಾರೆ.

ಪದ್ಮಿನಿ ಪಿಕ್ಚರ್ಸ್ ಲಾಂಛನದ ಈ ಸಿನಿಮಾ ನಿರ್ಮಿಸಿ ನಿರ್ದೇಶಿಸಿದ್ದು ಬಿ ಆರ್ ಪಂತುಲು..



ಅವರ ಆಸ್ಥಾನದ ಸಂಗೀತ ವಿದ್ವಾಂಸ ಟಿ ಜಿ ಲಿಂಗಪ್ಪ ಅವರ ಸಂಗೀತವಿರುವ ಈ ಚಿತ್ರದಲ್ಲಿ ಪಿ ಬಿ ಶ್ರೀನಿವಾಸ್, ಘಂಟಸಾಲ, ಪಿ ಸುಶೀಲ, ಎಸ್ ಜಾನಕೀ, ಪಿ  ಲೀಲಾ ಕಣಗಾಲ್ ಪ್ರಭಾಕರ್ ಶಾಸ್ತ್ರೀ ಅವರ ಸಾಹಿತ್ಯವನ್ನು ಹಾಡಿದ್ದಾರೆ.

ಹೇಳಿದ ಮಾತ ಕೇಳಿ.. ಅಪ್ಪ ಮಗನ ಗುಣಗಳನ್ನು ಪರಿಚಯಿಸುವ ಹಾಡಾಗಿದೆ
ಜೀವನ ರಾಗ ಈ ಅನುರಾಗ .. ಪ್ರಣಯಗೀತೆ ಇಷ್ಟವಾಗುತ್ತದೆ
ಒಂದೇ ಒಂದು ಹೊಸ ಹಾಡು.. ಇಂದಿಗೂ ಮನಸೆಳೆಯುವ ಹಾಡು
ಬಾ ಬೇಗ ಮನಮೋಹನ ನೃತ್ಯಕ್ಕೆ ಹಾಡಾಗಿದೆ
ನಾನು ಅಂಧಳಾದೆ ನೀನು ಮೂಗನಾದೆ.. ಪತಿ ಪತ್ನಿಯ ನಡುವಿನ ಭಾವನಾತ್ಮಕ ಗೀತೆಯಾಗಿದೆ
ಎಲ್ಲಿ ಹೊಂಬೆಳಕೆಲ್ಲಿ .. ವಿಷಾದ ಗೀತೆಯಾಗಿದೆ

ಸೊಗಸಾದ ಸಾಮಾಜಿಕ ಚಿತ್ರವಾಗಿದೆ.. ಇಷ್ಟವಾಗುತ್ತದೆ..

ಮುಂದೊಂದು ಚಿತ್ರ ಹೊತ್ತು ಬರುವೆ.. ಜೊತೆಯಲ್ಲಿ ಇರ್ತೀರ ಅಲ್ಲವೇ.. !

2 comments:

  1. Waah sri !!! Fantastic job, feel as though im seeing the movie on screen 👌👌👍🤘 ty soo much !!!

    ReplyDelete
    Replies
    1. ಧನ್ಯವಾದಗಳು ಗುರುಗಳೆ...

      Delete