Sunday, July 12, 2020

ಆಶಾಪಾಶವೆಂಬ ವಲ್ಮೀಕದಲ್ಲಿ ಇರಬಾರದೆಂದು ಸಾರಿದ ವಾಲ್ಮೀಕಿ (1963) (ಅಣ್ಣಾವ್ರ ಚಿತ್ರ ೩೪ / ೨೦೭)

ರಾಮಾಯಣ ಮಹಾಭಾರತ ನಮ್ಮ ಪ್ರಪಂಚದ ಎರಡು ಅದ್ಭುತ ಕಾವ್ಯಗಳು..

ರಾಮಾಯಣ ಕಾವ್ಯವನ್ನು ರಚಿಸಿದ ಕಿರಾತನಾಗಿದ್ದ ವಾಲ್ಮೀಕಿಯ ಕುರಿತಾದ ಚಿತ್ರವಿದು.  ದೇವರ್ಷಿಯ ಶಾಪಗ್ರಸ್ತ ಮಗನಾಗಿದ್ದ ಈತ ಕಿರಾತನಾಗಿ ಭುವಿಯಲ್ಲಿ ಜನ್ಮ ತಾಳುತ್ತಾನೆ. ಕುಲಕಸುಬೆಂಬಂತೆ ದಾರಿ ಹೋಕರನ್ನು ಸುಲಿದು, ಕೊಂದು ದೋಚುವ ಗುಂಪಿನ ನಾಯಕ ಈತ.


ಒಮ್ಮೆ ಕಾಡಿನಲ್ಲಿ ಬರುತ್ತಿದ್ದ ರಾಜಕುಮಾರಿ ಮತ್ತು ಆಕೆಯ ಸಖಿಯರನ್ನು ದೋಚಿದಾಗ.. ಕಿರಾತನ ರೂಪಿಗೆ ಮಾರು ಹೋಗುತ್ತಾಳೆ.. ಅರಮನೆಯಲ್ಲಿ ದಾರಿಗಳ್ಳರಿಂದ ಕಿರಾತನೇ ರಕ್ಷಿಸಿದ್ದು ಎಂದು ಸುಳ್ಳು ಹೇಳಿ.. ಆತನಿಗೆ ಗೌರವ ಕೊಡಿಸುತ್ತಾಳೆ.. ಆದರೆ ಸೇನಾಧಿಪತಿ ಕಿರಾತನನ್ನು ಗುರುತು ಹಿಡಿದು.. ಇವನೇ ದಾರಿಗಳ್ಳ ಅಂತ ಗೊತ್ತಾದಾಗ ರಾಜ ಮರಣ ದಂಡನೆ ಶಿಕ್ಷೆ ವಿಧಿಸುತ್ತಾನೆ.


ಮೋಹಿತಳಾದ ರಾಜಕುಮಾರಿ ಕಿರಾತ ತಪ್ಪಿಸಿಕೊಂಡು ಹೋಗಲು ಸಹಾಯ ಮಾಡುತ್ತಾಳೆ.. ತಪ್ಪಿಸಿಕೊಳ್ಳುವ ಕಿರಾತ.. ಬೆಟ್ಟದಿಂದ ನೀರಿಗೆ ಧುಮುಕುತ್ತಾನೆ .. ಪೆಟ್ಟಾಗಿ ಬಿದ್ದ ಕಿರಾತನನ್ನು.. ಕಿರಾತ ಗುಂಪಿನ ಇನ್ನೊಬ್ಬಳು ರಕ್ಷಿಸುತ್ತಾಳೆ.. ಮತ್ತೆ ಅವನಲ್ಲಿ ಅನುರಕ್ತಳಾಗುತ್ತಾಳೆ..

ದೃಶ್ಯ ಜೋಡಣೆ ಚೆನ್ನಾಗಿದೆ 
ಇತ್ತ ರಾಜಕುಮಾರಿ ಕಿರಾತನನ್ನು ಹುಡುಕಿಕೊಂಡು ಕಾಡಿಗೆ ಬಂದಾಗ.. ಅವನು ಇನ್ನೊಬ್ಬಳಲ್ಲಿ ಅನುರಕ್ತವಾಗಿರುವ ವಿಷಯ ತಿಳಿದು ಬೇಸರಗೊಳ್ಳುತ್ತಾಳೆ.. ತನ್ನ ತಂದೆಯಲ್ಲಿ ತನ್ನ ಪ್ರೀತಿಯನ್ನು ಅರಿಕೆ ಮಾಡಿಕೊಂಡಾಗ ಆತ ಕಿರಾತನ ಕುಟುಂಬದ ಬಳಿ ಕೇಳಿಕೊಳ್ಳುತ್ತಾನೆ.. ಆದರೆ ಕಿರಾತ ತನ್ನನ್ನು ರಕ್ಷಿಸಿದವಳನ್ನು ಮದುವೆಯಾಗಿರುತ್ತಾನೆ..

ಆಗ ರಾಜಕುಮಾರಿ ನಾ  ವಿರಹ ವೇದನೆಯಿಂದ ಒದ್ದಾಡಿದ ಹಾಗೆ.. ನೀನು ವಿರಹವೇದನೆಯಿಂದ ನಶಿಸಿಹೋಗು ಎಂದು ಶಾಪ ಕೊಟ್ಟು ಮೃತಳಾಗುತ್ತಾಳೆ..

ಮುಂದೆ ಕಿರಾತ ಪ್ರೀತಿಯನ್ನು ತೋರಿಸುವ ಬರದಲ್ಲಿ ನಾಗರತ್ನ ಮಾಲೆ  ತಂದು ಕೊಡುತ್ತೇನೆ ಎಂದು ಮಾತು ಕೊಟ್ಟು.. ರತ್ನವನ್ನು ಸಂಗ್ರಹಿಸುವುದಕ್ಕಾಗಿ ಭುವಿಯ ಹಾವನ್ನೆಲ್ಲ ಕೊಂದರೂ ಸಿಗೋದಿಲ್ಲ.. ಹಾವುಗಳೆಲ್ಲ ನಶಿಸಿ ಹೋಗುತ್ತಿರುವುದನ್ನು ಕಂಡು ವಿಷ್ಣು.. ನಾರದನ ಮೂಲಕ ಕಿರಾತನಿಗೆ ಜ್ಞಾನೋದಯವಾಗಿಸಲು ಉಪಾಯ ಮಾಡುತ್ತಾನೆ..









ಮಹಾಲಕ್ಷ್ಮಿ ಮೂರ್ತಿಯಲ್ಲಿದ್ದ ನಾಗರತ್ನ ಮಾಲೆಯನ್ನು ಹೊತ್ತೊಯ್ಯುವಾಗ ನಾರದ ಅಡ್ಡಿ ಬಂದು..  ನಿನ್ನ ಪಾಪ ಪುಣ್ಯಗಳಲ್ಲಿ ನಿನ್ನ ತಂಡ ಪಾಲು ಪಡೆಯುತ್ತದೆಯಾ ಎಂದು ಕೇಳಲು ಹೇಳುತ್ತಾನೆ.. ಆಗ ಅವನ ತಂಡದವರು, ತನ್ನ ಹೆತ್ತವರು, ಕೈ ಹಿಡಿದ ಮಡದಿ ಎಲ್ಲರೂ ಪಾಪದಲ್ಲಿ ಪಾಲು ತೆಗೆದುಕೊಳ್ಳಲು ಹಿಂದೆ ಸರಿದಾಗ.. ಅವನಿಗೆ ಜ್ಞಾನೋದಯವಾಗಿ.. ನಾರದನ ಮಾತಿನಂತೆ ನಾರಾಯಣ ಧ್ಯಾನ ಮಾಡುತ್ತಾ ತಪಸ್ಸಿಗೆ ಕೂರುತ್ತಾನೆ.. ಅದನ್ನು ಕಂಡ ಆತನ ಮಡದಿ ಕೂಡ ಧ್ಯಾನ ಮಾಡುತ್ತಾ .. ವಿಷ್ಣುವಿನ ಆಶೀರ್ವಾದದಂತೆ ಭುವಿಯನ್ನು ತ್ಯಜಿಸಿ ಸ್ವರ್ಗಕ್ಕೆ ಹೋಗುತ್ತಾಳೆ..




ಇತ್ತ ಕಿರಾತ ವರ್ಷಾನುಗಟ್ಟಲೆ ನಾರಾಯಣ ಧ್ಯಾನ ಮಾಡುತ್ತಲೇ ಇರುತ್ತಾನೆ.. ಆಗ ನಾರದ ಮತ್ತೆ ಬಂದು ರಾಮ ಮಂತ್ರ ಜಪಿಸಲು ಉಪದೇಶಿಸುತ್ತಾನೆ....


ಶಿವನು ಪ್ರತ್ಯಕ್ಷನಾಗಿ ವಲ್ಮೀಕ ಅಂದರೆ ಹುತ್ತದಲ್ಲಿ ಇದ್ದವನಾಗಿದ್ದರಿಂದ ವಾಲ್ಮೀಕಿ ಎಂದು  ಹರಸುತ್ತಾನೆ.



ಒಮ್ಮೆ ಕಿರಾತನ ವೇಷದಲ್ಲಿ ವಿಷ್ಣು ಕ್ರೌ೦ಚ ಪಕ್ಷಿಗಳ ವೇಷದಲ್ಲಿದ್ದ ರಾಕ್ಷಸರನ್ನು ಸಂಹಾರ ಮಾಡುತ್ತಾನೆ.. ಇದನ್ನರಿಯದ ವಾಲ್ಮೀಕಿ ಆ ಪಕ್ಷಿಯ ಆರ್ತನಾದ ಕೇಳಲಾರದೆ.. ದುಃಖಪೂರಿತ ಶ್ಲೋಕ ಹೇಳುತ್ತಾನೆ.. ಅದೇ ರಾಮಾಯಣ ಕೃತಿಯ ರಚನೆಗೆ ಸ್ಪೂರ್ತಿಯಾಗುತ್ತದೆ..






ಇಷ್ಟು ಕತೆಯನ್ನು ಉತ್ತಮವಾಗಿ ನೋಡುವಂತೆ ಚಿತ್ರಿಸಿದವರು ನಿರ್ದೇಶಕ ಸಿ ಎಸ್ ರಾವ್..
ಜ್ಯೂಪಿಟರ್ ಪಿಕ್ಚರ್ಸ್ ಲಾಂಛನದಲ್ಲಿ ಎಸ್ ಕೆ ಹಬೀಬುಲ್ಲಾ ನಿರ್ಮಿಸಿದ್ದಾರೆ.

ಚಿತ್ರದ ಅಂತ್ಯದಲ್ಲಿ ಇಡೀ ರಾಮಾಯಣವನ್ನು ತೋರಿಸಿದ್ದಾರೆ..

ನಾಗರತ್ನ ಮಾಲೆ ತೆಗೆದುಕೊಳ್ಳುವ ದೃಶ್ಯ.. ಕಿರಾತನ ಇಬ್ಬರೂ ಪ್ರೇಯಸಿಯರನ್ನು ಬೇರೆ ಬೇರೆ ದೃಶ್ಯಗಳನ್ನು ಒಂದೇ ಫ್ರೇಮಿನಲ್ಲಿ ತೋರಿಸಿರುವುದು ಎಲ್ಲವೂ ಸೊಗಸು.

ಘಂಟಸಾಲ ಅವರ ಸಂಗೀತದಲ್ಲಿ ಜಲಲ ಜಲಲ ಜಲಧಾರೆ ಮತ್ತು ಮನಸೇ ಮಹಾ ಬಯಕೆ ಹಾಡುಗಳು  ಗಮನ ಸೆಳೆಯುತ್ತದೆ.. ಸಾಹಿತ್ಯ ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರದ್ದು..

ಘಂಟಸಾಲ, ಸುಶೀಲ, ಲೀಲಾ, ಜಾನಕೀ, ಕೋಮಲ =ಮ್ ರಾಘವುಲು, ಸತ್ಯಂ ಹಿನ್ನೆಲೆ ಗಾಯಕರಾಗಿದ್ದಾರೆ.

ಛಾಯಾಗ್ರಹಣ ಎಂ ಎ ರೆಹಮಾನ್ ಮತ್ತು ಪಿ ದತ್ತಾತ್ರೇಯ..

ಇನ್ನೊಂದು ವಿಶೇಷವೆಂದರೆ ಸಿದ್ದಲಿಂಗಯ್ಯನವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ರಾಜ್ ಕುಮಾರ್ ಅವರ ಅಭಿನಯ ಎತ್ತರಕ್ಕೆ ಏರುತ್ತಿರುವ ಹಂತವನ್ನು ಇಲ್ಲಿ ಗಮನಿಸಬಹುದು.. ದಾರಿಗಳ್ಳನಾಗಿ ಇರಬೇಕಾದ ಕೋಪ, ದರ್ಪ, ಪ್ರೇಮಿಯಾಗಿ ಇರಬೇಕಾದ ನವಿರು ಭಾವ, ಪತ್ನಿಯ ಆಸೆಯನ್ನು ಈಡೇರಿಸುವ ಪತಿಯಾಗಿ ಇರುವ ಅಹಂ..  ಮಾರ್ಪಾಡಾದ ಮೇಲೆ ತಾಳ್ಮೆಯ ಭಾವ, ತಪಸ್ವಿ ಮನಸ್ಸು ಎಲ್ಲದರಲ್ಲೂ ಮಿಂಚುತ್ತಾರೆ.. ಸಂಭಾಷಣೆಯನ್ನು ಕೇಳೋದೇ ಒಂದು ಖುಷಿ..
ಅವರಿರದ ಚಿತ್ರಗಳನ್ನು ಊಹಿಸಿಕೊಳ್ಳಲು ಕಷ್ಟವಾಗುತ್ತಿರುವ ಸನ್ನಿವೇಶ ಸೃಷ್ಟಿಯಾಗುತ್ತಿರುವ ಸೂಚನೆಗಳು ಕಾಣಿಸಲು ಶುರುವಾಗುತ್ತಿದೆ.. ಅಭಿನಯ, ನೃತ್ಯ, ಹೊಡೆದಾಟ, ಸಂಭಾಷಣೆ ಹೇಳು ಭಾವ ಎಲ್ಲದರಲ್ಲಿಯೂ ಗಮನ ಸೆಳೆಯುತ್ತಾರೆ ..



ಉಳಿದ ಪಾತ್ರಗಳಲ್ಲಿ ನಟಿಸಿರುವ ಲೀಲಾವತಿ, ನರಸಿಂಹರಾಜು, ಎಂ ಎನ್ ಲಕ್ಷ್ಮೀದೇವಿ, ಮತ್ತು ಇತರ ಸಹಕಲಾವಿದರ ಅಭಿನಯ ಚಿತ್ರಕ್ಕೆ ಪೂರಕವಾಗಿದೆ.





ಚಿತ್ರವೂ ಎಲ್ಲೂ ಬೋರ್ ಆಗದೆ ನೋಡಿಸಿಕೊಂಡು ಹೋಗುತ್ತದೆ..

ಮುಂದೆ ಇನ್ನೊಂದು ಚಿತ್ರ. ಇನ್ನೊಂದು ಬರಹ.. !

No comments:

Post a Comment