Tuesday, March 31, 2020

ಸ್ವತಂತ್ರ ಕಹಳೆ ಮೊಳಗಿಸಿದ ಕಿತ್ತೂರು ಚೆನ್ನಮ್ಮ (1961) (ಅಣ್ಣಾವ್ರ ಚಿತ್ರ ೨೧ / ೨೦೭)

ಕಡಲಲ್ಲಿ ಬರುವ ಅಲೆಗಳೆ ಆಗಲಿ.. ಬದುಕಲ್ಲಿ ಬರುವ ಅವಕಾಶಗಳೇ ಆಗಲಿ ಎಂದಿಗೂ ಒಂದೇ ತರಹ ಇರೋದಿಲ್ಲ.. ಬದಲಾಗುತ್ತಲೇ ಇರುತ್ತದೆ.. ಹಾವು ಏಣಿ ಆಟದಂತೆ ಮೇಲೆ ಕೆಳಗೆ ಓಡಾಡುತ್ತಲೇ ಇರಬೇಕಾಗುತ್ತದೆ.. 


ಹಿಂದಿನ ಚಿತ್ರದಲ್ಲಿ ವಿಜೃಂಭಿಸಿದ್ದ ರಾಜ್ ಕುಮಾರ್ ಈ ಚಿತ್ರದಲ್ಲಿ ಸಿನಿಮಾದ ಮಧ್ಯದಲ್ಲಿಯೇ ಮುಗಿಯುವ ಪಾತ್ರದಲ್ಲಿ ಅಭಿನಯಿಸಿದ್ದಾರೆ.  ಆದರೆ ಇಡೀ ಚಿತ್ರ ತನ್ನ ಹೆಗಲ ಮೇಲಿದೆಯೋ ಎನ್ನುವಂತಹ ಅಭಿನಯ.. ಕೊಂಚವೂ ಅವರ ಅಭಿನಯದಲ್ಲಿ  ಈ ಚಿತ್ರದಲ್ಲಿ ನನ್ನ ಪಾತ್ರ ಮುಖ್ಯವಲ್ಲ ಎನ್ನುವ ಒಂದಷ್ಟು ಲವಲೇಶವೂ  ಗೊತ್ತಾಗದಂತೆ  ಅಭಿನಯ ನೀಡಿದ್ದಾರೆ. 




ಮಲ್ಲಸರ್ಜ ದೇಸಾಯಿಯಾಗಿ ಚಿತ್ರದ ಆರಂಭದಲ್ಲಿ ಟಿಪ್ಪುವಿನ  ಜೊತೆಯಲ್ಲಿನ ಮಾತುಕತೆ, ವೀರ ಸಂಭಾಷಣೆ, ಆ ಗತ್ತು  ಎಲ್ಲವೂ ಸೊಗಸಾಗಿದೆ .. ವೀರ ಧೀರನ ನೆಡೆ.. ವೇಷಭೂಷಣ ಸಿಕ್ಕಿದ ಅವಕಾಶದಲ್ಲಿಯೇ ವಿಜೃಂಭಿಸಿದ್ದಾರೆ.. 

ರುದ್ರಾ೦ಬೆಯ ಪತಿರಾಯನಾಗಿ ಅರಮನೆ  ಮತ್ತು ರಾಜ್ಯವನ್ನು ನೋಡಿಕೊಳ್ಳುವ ಅರಸನಾಗಿ,ನಂತರ ಚೆನ್ನಮ್ಮನನ್ನು ರಾಜಕೀಯ ಪ್ರೇರಿತರಾಗಿ ಕಿತ್ತೂರನ್ನು ಬಲಪಡಿಸುವ ಕಾರಣಕ್ಕಾಗಿ ಮದುವೆಯಾಗಿ, ಚೆನ್ನಮ್ಮನ ರಾಜ್ಯಾಡಳಿತವನ್ನು ನೋಡಿಕೊಳ್ಳುವ ಗುಣಗಳನ್ನು ಮೆಚ್ಚುವ ಅರಸನಾಗಿ ನೀಡಿರುವ ಅಭಿನಯ ಇಷ್ಟವಾಗುತ್ತದೆ ... 


ತನ್ನ ಅಂತ್ಯ ಸಮೀಪಿಸುತ್ತಿದೆ ಎಂದು ಗೊತ್ತಾದಾಗ ತನ್ನ ತಾಯಿನಾಡಾದ ಕಿತ್ತೂರಿನ ದರ್ಶನ  ಪಡೆದು ಅಲ್ಲಿಯೇ ಮಣ್ಣಾಗಬೇಕು ಎನ್ನುವ ದೃಶ್ಯದಲ್ಲಿ ಅಭಿನಯ ಮನಮುಟ್ಟುತ್ತದೆ.. 

ರಾಜ್ ಕುಮಾರ್  ಪಾತ್ರಕ್ಕೆ ತಕ್ಕ ಅಭಿನಯ, ಸಂಭಾಷಣೆಯ ಚತುರತೆ, ಆ ಗಾಂಭೀರ್ಯ ಎಲ್ಲವನ್ನು ಹೊತ್ತು ಈ ಚಿತ್ರದಲ್ಲಿ  ಮಿಂಚಿದ್ದಾರೆ. 

 ಈ ಚಿತ್ರದ ನಾಯಕಿ ಬಿ ಸರೋಜಾದೇವಿ ಅವರ ಚಿತ್ರಜೀವದಲ್ಲಿ ಮೈಲುಗಲ್ಲಾದ ಚಿತ್ರವಿದು. ಆರಂಭದಲ್ಲಿ ತಾಳ್ಮೆಯ ಪ್ರತಿರೂಪವಾಗಿ ಮೂಡಿ ಬರುವ ಅವರ ಪಾತ್ರ ಬರು ಬರುತ್ತಾ ಸಮಸ್ಯೆಗಳು, ಒತ್ತಡಗಳನ್ನು ನಿಭಾಯಿಸುವ ದಕ್ಷ ಅಧಿಕಾರಿಣಿಯಾಗಿ ಮನಮುಟ್ಟುತ್ತದೆ ಅವರ ಅಭಿನಯ.  ಸಂಭಾಷಣೆ  ಹೇಳುವ ಶೈಲಿ, ಕಣ್ಣುಗಳಿಂದ ತೋರುವ ಮಮಕಾರ ಹಾಗೆಯೇ ಸಿಟ್ಟು,  ವಾಹ್ ಎನಿಸುತ್ತದೆ.  ವಿಶ್ವವಿಖ್ಯಾತವಾದ "ನಿಮಗೇಕೆ ಕೊಡಬೇಕು ಕಪ್ಪಾ" ಇದರಲ್ಲಿ ಅಕ್ಷರಶಃ ಬೆಂಕಿ ಕಾರುತ್ತಾರೆ..  ಚಿತ್ರದ ಅಂತ್ಯದಲ್ಲಿ ಕಿತ್ತೂರಿನ ಮಣ್ಣಿನಲ್ಲಿ ಆಂಗ್ಲ ಧ್ವಜ ಹಾರಾಡುವುದನ್ನು ಕಂಡು ಕೋಪದಿಂದ ಸಿಡಿಮಿಡಿಗೊಳ್ಳುತ್ತಾ ಹೇಳುವ ಸಂಭಾಷಣೆ  ನೆನಪಲ್ಲಿ  ಉಳಿಯುತ್ತದೆ. 





ರುದ್ರಾ೦ಬೆಯ ಎಂ ವಿ ರಾಜಮ್ಮ ಮಾತೃಹೃದಯಿಯಾಗಿ ಕಂಡರೆ, ಅವರ ಮಗನಾಗಿ ಶಿವಲಿಂಗ  ಪಾತ್ರದಲ್ಲಿ ಮುದ್ದುಮೊಗದ ರಾಜಾಶಂಕರ್, ಮತ್ತೆ ಗುರುಗಳಾಗಿ ಕೆ ಎಸ್ ಅಶ್ವಥ್ ತಮ್ಮ ಅಭಿನಯ ಸಾಮರ್ಥ್ಯ ತೋರುತ್ತಾರೆ. ಮಂತ್ರಿಯಾಗಿ ಈಶ್ವರಪ್ಪ ಪಾತ್ರದಲ್ಲಿ ಮುಳುಗಿದ್ದಾರೆ. 



ಇತಿಹಾಸದ ಚಿತ್ರ ಹೇಳುವಾಗ ಕೆಲವು ಸ್ವತಂತ್ರ ತೆಗೆದುಕೊಳ್ಳಬೇಕಾಗುತ್ತದೆ.. ಕೊಂಚ ಕಾಲ್ಪನಿಕ ಸನ್ನಿವೇಶಗಳನ್ನು ಹೇಳಬೇಕಾಗುತ್ತದೆ.. ಅದರಲ್ಲಿ ಭಾಗವಾಗಿ ಬರುವ ನರಸಿಂಹರಾಜು ಮತ್ತು ಬಾಲಕೃಷ್ಣ ಜೋಡಿ ಕತೆಯ ಓಟಕ್ಕೆ ಬೇಕಾಗುವ ಹಾಸ್ಯರಸವನ್ನು ತಂದಿದ್ದಾರೆ.. 




ಕಿತ್ತೂರು ಸಂಸ್ಥಾನ ಸ್ಮಶಾನವಾಗಲು ಕಾರಣರಾಗುವ ಮನೆಹಾಳರ ಪಾತ್ರಗಳು ವೆಂಕೋಬರಾವ್ ಮತ್ತು ಮಲ್ಲಪ್ಪ ಶೆಟ್ಟರು... ಈ ಪಾತ್ರಗಳಲ್ಲಿ ಹನುಮಂತಾಚಾರ್ ಮತ್ತು ಡಿಕ್ಕಿ ಮಾಧವರಾವ್ ಅವರಿಗೆ ಚೆನ್ನಾಗಿ ಬಯ್ಯುವಷ್ಟು ಖಳಪಾತ್ರಕ್ಕೆ ಜೀವ ತುಂಬಿದ್ದಾರೆ.. 




ಕಿತ್ತೂರು ಎಂದಾಗ ಸಂಗೊಳ್ಳಿ ರಾಯಣ್ಣನ ಹೆಸರು ಇಲ್ಲದೆ ಮುಗಿಯದು .. ಚೆನ್ನಮ್ಮನ ನೆಚ್ಚಿನ ಬಂಟನಾಗಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಾಯಣ್ಣ.. ಕಡೆಗೆ ರಾಯಣ್ಣನನ್ನು ಸೆರೆ ಹಿಡಿದಿದ್ದಾರೆ ಎನ್ನುವ ಸುದ್ದಿ ಚೆನ್ನಮ್ಮನಿಗೆ ಗೊತ್ತಾದಾಗ, ತನ್ನ ಆಶಾಕಿರಣ ಮುಗಿದುಹೋಯಿತು ಎನ್ನುವ ಮಾತಿನಲ್ಲಿ ರಾಯಣ್ಣನ ಪಾತ್ರದ ಆಳ ಗೊತ್ತಾಗುತ್ತದೆ.



ಎಂಥಹ ಸಂಸ್ಥಾನವೇ ಆಗಿರಲಿ ಅಥವ ದೊಡ್ಡ ಮನೆತನವೇ ಆಗಿರಲಿ... ಈ ರೀತಿಯ ಖಳಪಾತ್ರಗಳು ಯಾವ  ಮಟ್ಟಿಗೆ ವಿನಾಶದ ಅಂಚಿಗೆ ತಂದು ನಿಲ್ಲಿಸುತ್ತಾರೆ ಎನ್ನುವುದಕ್ಕೆ ಉದಾಹರಣೆ.. 

ಲೀಲಾವತಿ ಪಾತ್ರ ಚಿಕ್ಕದಾಗಿ ಚೊಕ್ಕವಾಗಿದೆ. ಚಿಂದೋಡಿ ಲೀಲಾ ಒಂದು ಸಣ್ಣ ಪಾತ್ರದಲ್ಲಿ ಕಾಣಿಸುತ್ತಾರೆ.. 

ಉಳಿದಂತೆ ಈ ಚಿತ್ರದ ಮೊದಲ ನಾಯಕ ಚಿತ್ರನಾಟಕ, ಸಂಭಾಷಣೆ, ಮತ್ತು ಹಾಡುಗಳನ್ನು ರಚಿಸಿರುವ ಜಿ ವಿ  ಅಯ್ಯರ್.. ಮಾತುಗಳು ಮೊನಚು,  ಹಾಗೆ ಕೆಲವು ಹಾಡುಗಳು ಮನಸ್ಸನು ಸೂರೆ ಮಾಡುತ್ತವೆ. 

ಸಂಗೀತ ನೀಡಿರುವವರು ಪದ್ಮಿನಿ ಪಿಕ್ಟರ್ಸ್ ಸಂಸ್ಥಾನದ ಆಸ್ಥಾನದ ಟಿ ಜಿ ಲಿಂಗಪ್ಪ.. ಅವರೇ ಹಾಡಿರುವ ಸ್ಕೂಲ್ ಮಾಸ್ಟರ್ ಚಿತ್ರದ ಸ್ವಾಮಿ ದೇವನೇ ಲೋಕ ಪಾಲನೆ ಹಾಡನ್ನು ಟೈಟಲ್ ಕಾರ್ಡ್ ನಲ್ಲಿ ಉಪಯೋಗಿಸಿದ್ದಾರೆ.. 

ನೀಟಾಗಿ ಎಲ್ಲರನ್ನು ಒಂದು ಗೂಡಿಸಿ, ಅದ್ಭುತ ಚಿತ್ರರತ್ನವನ್ನು ನಿರ್ಮಿಸಿ ನಿರ್ದೇಶಿಸಿರುವುದು ಬಿ ಆರ್ ಪಂತುಲು. 

ಆರಂಭದಲ್ಲಿ ಮತ್ತು ಕೊನೆಯಲ್ಲಿ ಕಿತ್ತೂರಿನ  ಬಗ್ಗೆ ಕತೆ ಹೇಳುವ ಶಾಲೆಯ ಮಾಸ್ತರಾಗಿ ಅಭಿನಯಿಸಿದ್ದಾರೆ.

ನಿಜಕ್ಕೂ ಅವರ  ಪರಿಶ್ರಮ ಎದ್ದು ಕಾಣುತ್ತದೆ.. ಪ್ರತಿ ದೃಶ್ಯವನ್ನು ಅಚ್ಚುಕಟ್ಟಾಗಿ ಚಿತ್ರಿಸಿರುವ ಮತ್ತು ಯುದ್ಧ ದೃಶ್ಯಗಳನ್ನು ಸೊಗಸಾಗಿ ಮೂಡಿಸಿರುವ ಇವರ ಪರಿಶ್ರಮಕ್ಕೆ ಸಾತ್ ನೀಡಿರುವ ಛಾಯಾಗ್ರಾಹಕ ಡಬ್ಲ್ಯೂ ಆರ್ ಸುಬ್ಬರಾವ್ ಮತ್ತು ಎಂ ಕರ್ಣನ್. 



ಈ ಚಿತ್ರದ ವಿಶೇಷತೆ ಅಂದರೆ.. ನಾಯ
ಕಿಯಾದ ಬಿ ಸರೋಜಾದೇವಿ ಹೆಸರನ್ನು ವಿಶೇಷವಾದ  ರೀತಿಯಲ್ಲಿ ತೋರಿಸಿರುವುದು. 

ನಿರ್ದೇಶಕನ ಸ್ಥಾನಕ್ಕೆ ಗೌರವ ಮತ್ತು ಘನತೆ ಜೊತೆಯಲ್ಲಿ ತಾರಾಮೌಲ್ಯ ತಂದುಕೊಟ್ಟ ಪುಟ್ಟಣ್ಣ ಕಣಗಾಲ್ ಅವರು ಸಹ ನಿರ್ದೇಶಕನಾಗಿಕೆಲಸಮಾಡಿರುವುದು .. 


ಎಲ್ಲರ ಪರಿಶ್ರಮ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ ಮತ್ತು ಕರುನಾಡಿಗೆ ಒಂದು ಅನರ್ಘ್ಯ ಚಿತ್ರ ಮಾಡಿಕೊಟ್ಟಿದ್ದಾರೆ.. 

ಕಿತ್ತೂರಿನ ಕತೆ ಯಾರಿಗೆ ಗೊತ್ತಿಲ್ಲ.. ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿರುವ ಈ  ಚಿತ್ರ ತಂಡಕ್ಕೆ ಅಭಿನಂದನೆಸಲ್ಲಿಸುತ್ತಾ ... ಮುಂದಿನ ಚಿತ್ರದಲ್ಲಿ  ಮತ್ತೆ ಸಿಗೋಣ..!

No comments:

Post a Comment