Monday, March 30, 2020

ದೃಢ ನಿಲುವು ಹೊಂದಿದ್ದರೂ ವಿಧಿಯ ಕೈಚಳಕ - ಶ್ರೀ ಶೈಲ ಮಹಾತ್ಮೆ (1961) (ಅಣ್ಣಾವ್ರ ಚಿತ್ರ ೨೦ / ೨೦೭)

ನಮ್ಮ ಪಾಡಿಗೆ  ನಾವು ಇದ್ದರೂ ಕೆಲವೊಮ್ಮೆ ಕಾಣದ ವಿಧಿಯ ಕೈವಾಡ ಜೀವನದಲ್ಲಿ ಅಲೆಗಳನ್ನು ಎಬ್ಬಿಸುತ್ತದೆ... ಅಂತಹ ಒಂದು ಕಥೆಯಾಧಾರಿತ ಶ್ರೀ ಶೈಲ ಕ್ಷೇತ್ರದ ಮಹಿಮೆ ಸಾರುವ ಚಿತ್ರ.

ರಾಜ ಚಂದ್ರಗುಪ್ತನ ಹಿಂದಿನ ಜನ್ಮದಲ್ಲಿ ಋಷಿಕುಮಾರನಾಗಿರುತ್ತಾನೆ..  ಅವನನ್ನು ಮೋಹಿಸುವ ಯಕ್ಷಕನ್ಯೆಯ ಪ್ರೀತಿಯನ್ನು ನಿರಾಕರಿಸುತ್ತಾನೆ.. ಕುಪಿತಗೊಂಡ ಕನ್ಯೆ .. ನಿನ್ನ ಮಗಳನ್ನೇ ಮೋಹಿಸುವ ಮತ್ತು ಮೋಹದ ಮಾಯೆಯಿಂದ ಹುಚ್ಚನಾಗಿ ಅಲೆಯುವಂತೆ ಶಾಪ ಕೊಡುತ್ತಾಳೆ..

ಇತ್ತಾ ನಾರದ ಲೋಕ ಕಲ್ಯಾಣಕ್ಕಾಗಿ ದೂರ್ವಾಸ ಮುನಿಯನ್ನು ಬಲವಂತವಾಗಿ ಕೈಲಾಸಕ್ಕೆ ಶಿವ ಪಾರ್ವತಿಯ ಪ್ರಣಯ ನೃತ್ಯವನ್ನು ನೋಡಲು ಕರೆದುಕೊಂಡು ಹೋಗುತ್ತಾನೆ.. ಶಿವ ಶಿವೆಯ ಅಂತರಂಗವಿಲಾಸದ ಸಮಯದಲ್ಲಿ ದೂರ್ವಾಸನನ್ನು ಕಂಡು ಪಾರ್ವತಿ ಕುಪಿತಗೊಂಡು ಭೂಲೋಕದಲ್ಲಿ ನೋವು, ನಲಿವು ಕಾಣುವ ಸಾಮಾನ್ಯ ಮನುಷ್ಯನಾಗಿರುವಂತೆ ಶಪಿಸುತ್ತಾಳೆ.. ತನ್ನ ಭಕ್ತನನ್ನು ಶಪಿಸಿದ್ದಕ್ಕೆ ಕೋಪಗೊಂಡ ಶಿವ.. ಕಾಮಾದಿ ಬಯಕೆಗಳಿಂದ ಹೀಗೆ ಮಾಡಿದೆ.. ಭೂಲೋಕದಲ್ಲಿ ಕಾಮಾದಿ ಬಯಕೆಗಳಿಂದ ದೂರವಾಗಿ ನರಳುವ ಹೆಣ್ಣಾಗಿ ಜನಿಸುವಂತೆ ಶಪಿಸುತ್ತಾನೆ.. !

ನಾರದ ಇದಕ್ಕೆ ಪರಿಹಾರ ಕೊಡುತ್ತಾ ಪಾರ್ವತಿಗೆ ಶಿಶುವಾಗಿ ಭುವಿಯಲ್ಲಿ ಜನಿಸುವಂತೆ ಹೇಳುತ್ತಾನೆ ..
ಶಿವಾಲಯದಲ್ಲಿ ಮಕ್ಕಳಿಲ್ಲದ ಚಂದ್ರಗುಪ್ತ ರಾಜನಿಗೆ ಈ ಶಿಶು ಸಂತೋಷ ಕೊಡುತ್ತದೆ..

ಇನ್ನೊಬ್ಬ ಭಕ್ತ ತನ್ನ ಶಿವ ಭಕ್ತಿಯ ವರಪ್ರಸಾದದಿಂದ  ನಂದಿ ಮತ್ತು ಪರ್ವತ ಎನ್ನುವ ಗಂಡು ಮಕ್ಕಳನ್ನು ಪಡೆದಿರುತ್ತಾನೆ..  ಆ ಮಕ್ಕಳಿಗೆ ಶಿವನ ಮೇಲೆ ಅಪಾರ ಪ್ರೀತಿ ಅವನನ್ನು ಸಾಕ್ಷಾತ್ಕರಿಸಿಕೊಳ್ಳಲು ತಪಸ್ಸು ಮಾಡಲು ಅಪ್ಪನ ಅನುಮತಿ ಕೋರಿ ಶೈಲ ಗುಡ್ಡದಲ್ಲಿ ತಪಸ್ಸಿಗೆ ಕೂರುತ್ತಾರೆ..

ಹೀಗೆ ಈ ನಾಲ್ಕು ಘಟನೆಗಳನ್ನು ಒಂದಕ್ಕೊಂದು ಕೊಂಡಿ ಹಾಕಿ ಹೆಣೆದ ಕಥೆ  ಇದು.. ಶ್ರೀ ಕ್ಷೇತ್ರದ ಮಹಿಮೆಯನ್ನು ಸಾರುವ ಈ ಕಥೆಯಲ್ಲಿ ರಾಜ್ ಕುಮಾರ್ ಅವರ ಬಹುಮುಖದ ಪ್ರತಿಭೆಯನ್ನು  ಪರಿಚಯಿಸುವ ಚಿತ್ರವಿದಾಗಿದೆ..
ಸೌಮ್ಯ ರಾಜನಾಗಿ, ಪತ್ನಿಯನ್ನು ಪ್ರೀತಿಸುತ್ತಾ, ರಾಜ್ಯವನ್ನು ಪಾಲಿಸುತ್ತಾ, ಗುರು ಹಿರಿಯರಿಗೆ ಗೌರವ ಸಲ್ಲಿಸುವ ಪಾತ್ರ ಆರಂಭದಲ್ಲಿ ಸಿಕ್ಕಿದರೆ, ಶತ್ರು ರಾಜರನ್ನು ಮಟ್ಟ ಹಾಕುವ ವೀರ ಯೋಧನಾಗಿಕಾಣುತ್ತಾರೆ .. ನಂತರ ಹದಿನಾರು ವರ್ಷ ಯುದ್ಧ ಮುಗಿಸಿ, ಮತ್ತೆ ತನ್ನ ರಾಜ್ಯಕ್ಕೆ ಬರುವಾಗ, ಅನುಪಮಾ ಸುಂದರಿಯನ್ನು ಕಂಡು ಮೋಹಿಸುತ್ತಾನೆ, ಆ ದೃಶ್ಯದಲ್ಲಿ ಪ್ರಣಯ ಪರಿತಾಪ ಪಡುವ ಅಭಿನಯ ಸೊಗಸಾಗಿದೆ.. ನಂತರ ಆ ಸುಂದರಿ ತನ್ನ ಮಗಳೇ ಎಂದು ಗೊತ್ತಾದಾಗ ಆ ಅಭಿನಯ ಸೊಗಸು.. ಯಕ್ಷ ಕನ್ಯೆಯ ಮಾಯೆಯಲ್ಲಿ ತಾನು ಜನ್ಮ ಕೊಟ್ಟ ಮಗಳಲ್ಲ  ಹಾಗಾಗಿ ಇವಳನ್ನು ಮದುವೆಯಾದರೆ ತಪ್ಪಿಲ್ಲ ಎನ್ನುವ ದರ್ಪದ ಅಭಿನಯ.. ನಂತರ ಹುಚ್ಚನಾಗಿ ಅಳೆಯುವ ಪಾತ್ರ.. ಅದ್ಭುತವಾಗಿದೆ..



ಡಿಕ್ಕಿ ಮಾಧವರಾವ್ ಅದ್ಭುತ  ರಂಗನಟ.. ಈ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರೆಯಲ್ಲಿ ಕಾಣುವ ಅವಕಾಶವಿದೆ..  ಸಂಭಾಷಣೆ ಹೇಳುವ ಶೈಲಿ. ಆ ಕಣ್ಣುಗಳು, ಆಂಗೀಕ ಅಭಿನಯ., ಪಾತ್ರದ ಅಭಿನಯದಲ್ಲಿ ಏರಿಳಿತ.. ಎಲ್ಲವೂ ಅದ್ಭುತವಾಗಿದೆ.. ಗುರುವಾಗಿ ಅವರ ಅಭಿನಯ ಇಷ್ಟವಾಗುತ್ತದೆ..


ಜಯಲಲಿತ ಈ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದು ವಿಶೇಷ .. ಆಕೆಯ ತಾಯಿ ಸಂಧ್ಯಾ ಈ ಚಿತ್ರದ ಒಬ್ಬ ನಾಯಕಿ.. ಇಬ್ಬರದೂ ಸೊಗಸಾದ ಅಭಿನಯ..



ಹಾಸ್ಯ ಎನ್ನುವುದು ಚಿತ್ರಗಳಲ್ಲಿ ಅರಳುತಿದ್ದ ಕಾಲವದು..ಬಾಲಕೃಷ್ಣ, ಹನುಮಂತಾಚಾರ್,
ಎಂ ಎನ್ ಲಕ್ಷ್ಮೀದೇವಿ ಇವರ ಅಭಿನಯ ಹಾಸ್ಯದ  ಹೂರಣವನ್ನು ಹರಡುತ್ತದೆ.. ವಿಶೇಷತೆ ಎಂದರೆ ಹಾಸ್ಯದೃಶ್ಯಗಳಿಗೆ ಸಂಭಾಷಣೆಯನ್ನು ಬರೆಯುವ  ಬಾಲಕೃಷ್ಣ ಅವರಿಗೆ ಸಿಕ್ಕಿರುವುದು.. ಅವರ ಚುರುಕು ಸಂಭಾಷಣೆ ಸಂತಸ ಕೊಡುತ್ತದೆ..



ನಾಯಕಿ ಕೃಷ್ಣಕುಮಾರಿ..  ಕಪ್ಪು ಬಿಳುಪು ವರ್ಣದಲ್ಲಿ ಅವರ ಸೌಂದರ್ಯ ಇಷ್ಟವಾಗುತ್ತದೆ.. ಅವರು ಸಾಮಾನ್ಯ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವುದು ರಾಜ್ ಕುಮಾರ್ ಚಿತ್ರಗಳಲ್ಲಿ ಹೆಚ್ಚು ಮತ್ತು ಎಲ್ಲವೂ ಪೌರಾಣಿಕ, ದೇವರ ಕಥೆಯಾಧಾರಿತ ಚಿತ್ರಗಳೇ ಹೆಚ್ಚು..


 ಚಿತ್ರವನ್ನು ಚಿತ್ರಕಥೆ ಬರೆದು ನಿರ್ದೇಶಿಸಿರುವುದು ಆರೂರು ಪಟ್ಟಾಭಿ, ನಿರ್ಮಾಪಕರು ನೀರ್ಲಹಳ್ಳಿ ತಾಳಿಕೇರಪ್ಪ ಶ್ರೀ ಶೈಲಾ ಪಿಕ್ಚರ್ ಲಾಂಛನದಲ್ಲಿ..

 ಸಂಭಾಷಣೆ ಸೋರಟ್ ಅಶ್ವತ್ ಅವರದ್ದು.. ಅನೇಕಾನೇಕ ಹಾಡುಗಳಿರುವ ಈ ಚಿತ್ರದಲ್ಲಿ ಸಾಹಿತ್ಯ ಒದಗಿಸಿರುವವರು ಹುಣಸೂರು ಕೃಷ್ಣಮೂರ್ತಿ,ವಿಜಯನಾರಸಿಂಹ, ರತ್ನಾಕರ್, ನರೇಂದ್ರಬಾಬು.

 ಸಂಗೀತ ಟಿ ಕೆ ಕಲ್ಯಾಣವರ್ ಮತ್ತು ಛಾಯಾಗ್ರಹಣ ಕೆ ಜಾನಕಿರಾಮ್..

ಗಾನಸುಧೆ ಹರಿಸಿರುವವರು ಪಿ ಬಿ  ಶ್ರೀನಿವಾಸ್, ಮಂಗುಪತಿ,ಸಿ ಎಸ್ ಸರೋಜಿನಿ, ಟಿ ಎಸ್ ಭಗವತಿ, ರುಕ್ಮಿಣಿ, ಗಜಲಕ್ಷ್ಮಿ..

ವಿಶೇಷತೆ ಎಂದರೆ ದೇವಾಲಯದ ಹೊರಾಂಗಣ ಮತ್ತು ಸುತ್ತ  ಪ್ರದೇಶದ  ಚಿತ್ರೀಕರಣ ಶ್ರೀ ಶೈಲದಲ್ಲಿ ನೆಡೆದಿರುವುದು.


ಮತ್ತೊಂದು ಚಿತ್ರದ ಜೊತೆಯಲ್ಲ ಬರೋಣ ..ನೀವು ಬರುತ್ತೀರಾ ಅಲ್ಲವೇ.. !

No comments:

Post a Comment