Wednesday, March 25, 2020

ನಾನಾ ಅವತಾರಗಳ ದಶಾವತಾರ (1960) (ಅಣ್ಣಾವ್ರ ಚಿತ್ರ ೧೮ / ೨೦೭)

ಈಗಿನ ಕಾಲದ ಬಫೆ ಊಟದಲ್ಲಿ ಹಲವಾರು ತಿಂಡಿ ತಿನಿಸುಗಳ ಖಾದ್ಯಗಳ ಆಹಾರ ಪದಾರ್ಥಗಳ ಮಿಶ್ರಣವಾಗಿರುತ್ತದೆ.. ನಮಗೆ ಬೇಕಾದ್ದು ಆಯ್ದುಕೊಂಡು ತಿಂದು ಸುಖಿಸಬೇಕು..

ಈ ಮಾತು ಯಾಕೆ ಬಂತು ಅಂದರೆ.. ದಶಾವತಾರ ಚಿತ್ರ ನೋಡಿದ ಮೇಲೆ ಅನಿಸಿತು... ವಿಷ್ಣುವಿನ ಹತ್ತು ಅವತಾರಗಳು.. ಪ್ರತಿಯೊಂದು ಅವತಾರವನ್ನೇ ಒಂದು ಸಿನಿಮಾ ಮಾಡಬಹುದು ಅಷ್ಟು ಬೃಹತ್ ಕಥಾನಕಗಳು.. ಆದರೆ ಹತ್ತು ಅವತಾರಗಳ ಕತೆಯನ್ನು ಎಲ್ಲೂ ಲೋಪ ಬಾರದಂತೆ, ಅವತಾರಗಳ ವಿಶೇಷತೆ ಮರೆಯಾಗದಂತೆ, ವೀಕ್ಷಕರಿಗೆ ಆ ಕಥೆಯ ಸಾರವನ್ನು ಮಾತ್ರ ಬಡಿಸಿ ಮಿಕ್ಕ ಕಥೆಯನ್ನು ಅವರಿಗೆ ಬಿಟ್ಟಿರುವ ಚಾಣಾಕ್ಷತನ ಚಿತ್ರನಾಟಕ ಬರೆದ ಜಿ ವಿ ಅಯ್ಯರ್ ಅವರಿಗೆ ಸಲ್ಲುತ್ತದೆ.. ಪ್ರತಿ ಪಾತ್ರದ ಸಂಭಾಷಣೆ ಮನ ಮುಟ್ಟುವಂತಿದೆ, ಅದರಲ್ಲೂ ರಾಕ್ಷಸ ಪಾತ್ರಧಾರಿಗಳ ವೈಭವೀಕೃತ ವೀರಾವೇಶ ಮಾತುಗಳು, ದೇವತೆಗಳ, ನಾರದನ, ವಿಷ್ಣುವಿನ ಅಷ್ಟೇ ಸಂಯಮ ಮಾತುಗಳು ಇಷ್ಟವಾಗುತ್ತದೆ.. ಜಿ ವಿ ಅಯ್ಯರ್ ಅವರಿಗೆ ಅಭಿನಂದನೆಗಳು ಸಲ್ಲಬೇಕು.. ಹಾಗೆಯೇ ಅನೇಕ ಹಾಡುಗಳಿರುವ ಈ ಸಿನಿಮಾದಲ್ಲಿ ಹಿಟ್ ಗೀತೆ ಅಂದರೆ "ವೈದೇಹಿ ಏನಾದಳು" ಪಿ ಬಿ ಶ್ರೀನಿವಾಸ್ ಅವರ ಮೆಚ್ಚಿನ ಗೀತೆಗಳಲ್ಲಿ ಇದು ಒಂದು, ಅದೇ ರೀತಿ ಶಬರಿ ಪಾತ್ರದಲ್ಲಿ ಹಾಡಿರುವ "ರಘುಪತಿ ರಾಘವ ರಾಜಾರಾಮ" ಇಷ್ಟವಾಗುತ್ತದೆ.  ಒಂದೇ ಬಳ್ಳಿಯ ಹೂಗಳು ಹಾಡಿನಲ್ಲೂ ಹಾಡುಗಾರಿಕೆ ಇಷ್ಟವಾಗುತ್ತದೆ. ಇದರ  ರಚನೆಕಾರರು ಮತ್ತೆ ಜಿ ವಿ ಅಯ್ಯರ್ ಅವರ ಹೆಸರು ಕೇಳಿಬರುತ್ತದೆ..

ಈ ಚಿತ್ರ ಒಂದು ರೀತಿಯಲ್ಲಿ ಜಿ ವಿ ಅಯ್ಯರ್ ಮಯ ಅನ್ನಬಹುದು.. ಚಿತ್ರನಾಟಕ, ಸಂಭಾಷಣೆ, ಗೀತೆಗಳು, ಮತ್ತು ಸಂಯುಕ್ತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ..

ಚಿತ್ರರಂಗದ ಧೀಮಂತ ಹೆಸರು ಬಿ ಎಸ್ ರಂಗ ಮತ್ತು ಅವರ ವಿಕ್ರಮ್  ಪ್ರೊಡಕ್ಷನ್ಸ್.. ಹೆಸರು ಮಾಡಿರುವ ಈ ಸಂಸ್ಥೆಯಿಂದ ಮೂಡಿಬಂದ ಈ ಚಿತ್ರ ರಾಜಕುಮಾರ್ ಅವರ ಅಭಿನಯಕ್ಕೆ ಸಾಣೆ ಹಿಡಿದಿದೆ..

ದೈತ್ಯ ಪಾತ್ರಗಳಾದ ಹಿರಣ್ಯಕಶಿಪು, ಶಿಶುಪಾಲ, ರಾವಣ ಪಾತ್ರಗಳಲ್ಲಿ ಮಿಂಚಿದ್ದಾರೆ. ಸಂಭಾಷಣೆ ವೈಖರಿ, ಆ ದರ್ಪ, ಆಂಗೀಕ ಅಭಿನಯ ಇಷ್ಟವಾಗುತ್ತದೆ.. ತಾನೊಬ್ಬ ಪರಿಪೂರ್ಣ ಕಲಾವಿದನಾಗುತಿದ್ದೇನೆ ಎನ್ನುವ ಕುರುಹನ್ನು ತೋರಿಸುತ್ತ ಹೋಗುತ್ತಾರೆ.  ಸುತ್ತಮುತ್ತಲ ಪಾತ್ರಗಳನ್ನೂ ಕಬಳಿಸಿ ಮುಗಿಸುವಷ್ಟು ಅವರ ಅಭಿನಯ ಸೊಗಸಾಗಿದೆ..

ಒಂದೇ ಚಿತ್ರದಲ್ಲಿ ಹಲವಾರು ಮಗ್ಗಲುಗಳ ಅಭಿನಯವನ್ನು ನೋಡಬಹುದು.. ರಾಜಕುಮಾರ್ ಇಷ್ಟವಾಗುತ್ತಾರೆ ಈ ಚಿತ್ರದಲ್ಲಿ..

ಉಳಿದಂತೆ ಹನುಮಂತನ ಪಾತ್ರದಲ್ಲಿ ಉದಯಕುಮಾರ್, ವಿಷ್ಣುವಿನ ಮೊದಲ ಅವತಾರ ಮತ್ಸ್ಯಾವತಾರದಲ್ಲಿನ ದೈತ್ಯನ ಪಾತ್ರದಲ್ಲಿ ಮಿಂಚುತ್ತಾರೆ.. ಅನೇಕ ಪಾತ್ರಗಳಲ್ಲಿ ಬರುವ ಹೆಚ್ ಆರ್ ರಾಮಚಂದ್ರಶಾಸ್ತ್ರಿ, ಲೀಲಾವತಿ, ಆದವಾನಿ ಲಕ್ಷ್ಮೀದೇವಿ, ನರಸಿಂಹರಾಜು, ಗಣಪತಿ ಭಟ್, ನಾರದನಾಗಿ ಪ್ರತಿಯೊಂದು ಅವತಾರದಲ್ಲಿಯೂ ಕಾಣುವ ಅಶ್ವಥ್ ಮತ್ತೆ ವಿಷುವಿನ ಪಾತ್ರದಲ್ಲಿ ಚಿರಪೂರ್ತಿ ಬರುವ ರಾಜಾಶಂಕರ್ ಇಷ್ಟವಾಗುತ್ತಾರೆ..

ಜಿ ಕೆ ವೆಂಕಟೇಶ್ ಅವರ ಸುಮಧುರ ಸಂಗೀತ ಚಿತ್ರದುದ್ದಕ್ಕೂ ಕಾಡುತ್ತದೆ. ಅದರಲ್ಲೂ ವೈದೇಹಿ ಏನಾದಳೂ ಹಾಡಿಗೆ ಮೂಡಿಸಿರುವ ಸಂಗೀತ ಮನಸೆಳೆಯುತ್ತದೆ..

ತಟ್ಟೆ ತುಂಬಾ ಊಟವಿರುವಾಗ ಅಗತ್ಯಕ್ಕೆ ತಕ್ಕಂತೆ ಬೇಕಾದ್ದು ಬಡಿಸಿಕೊಂಡು ಇಷ್ಟವಾಗುವ ಹಾಗೆ ತಿನ್ನುವ ಪಾಠವನ್ನು ಈ ಚಿತ್ರ ಒದಗಿಸುತ್ತದೆ..

ಇನ್ನೊಂದು ವಿಶೇಷತೆ ಎಂದರೆ.. ರಾಜ್ ಕುಮಾರ್ ಅವರ ಅನೇಕ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ ದೊರೈ ಭಗವಾನ್ ಜೋಡಿ .. ಈ ಚಿತ್ರದಲ್ಲಿ ಬಿಡಿ ಬಿಡಿಯಾಗಿ ಕೆಲಸ ಮಾಡಿದ್ದಾರೆ.. ಛಾಯಾಗ್ರಾಹಕರಾಗಿ ಬಿ ದೊರೈರಾಜ್ ಮಿಂಚಿದ್ದಾರೆ.. ಸಹಾಯಕ ನಿರ್ದೇಶಕನಾಗಿ ಎಸ್ ಕೆ ಭಗವಾನ್ ಕೆಲಸ ಮಾಡಿದ್ದಾರೆ..

ತಾಂತ್ರಿಕವಾಗಿಯೂ ಉತ್ತಮ ಎನಿಸುವ ಈ ಕಸುಬುದಾರಿಕೆ ಈ ಚಿತ್ರದಲ್ಲಿ ಕಾಣುತ್ತದೆ.. ರಾವಣನ ಹತ್ತೂ ತಲೆಗಳು ಒಂದೊಂದು ಬಾರಿ ಮಾತಾಡುವ ರೀತಿ ಚಿತ್ರದಲ್ಲಿ ತೋರಿಸಿದ್ದಾರೆ.. ಜೊತೆಯಲ್ಲಿ ರಾಮ ಪರಶುರಾಮ ಅವರ ದ್ವಿಪಾತ್ರ ಅಭಿನಯ ಚೂರು ಅನುಮಾನ ಬಾರದಂತೆ ತೋರಿಸಿದ್ದಾರೆ... ಉತ್ತಮ ತಂತ್ರಗಾರಿಕೆಯುಳ್ಳ ಈ ಸಿನೆಮಾವನ್ನು ಪಿ ಜಿ ಮೋಹನ್ ನಿರ್ದೇಶಿಸಿದ್ದಾರೆ..


ದಶಾವತಾರದ ಕಥೆ ಎಲ್ಲರಿಗೂ ತಿಳಿದಿದೆಯಾದ್ದರಿಂದ ಕಥೆಯನ್ನು ಹೇಳೋಕೆ ಹೋಗಿಲ್ಲ.. !

ಕೆಲವು ಚಿತ್ರಗಳು ನಿಮಗಾಗಿ!





























No comments:

Post a Comment