Friday, March 27, 2020

ಮನುಜಕುಲಕ್ಕೆ ಅನೇಕ ಎಚ್ಚರಿಕೆ ನೀಡುವ ಭಕ್ತ ಕನಕದಾಸ (1960) (ಅಣ್ಣಾವ್ರ ಚಿತ್ರ ೧೯ / ೨೦೭)

 ಮ್ಯಾರಥಾನ್ ಓಟವಿರುತ್ತದೆ... ಕಡಿಮೆ ದೂರದ  ಹೆಚ್ಚು ದೂರದ ಓಟವಿರುತ್ತದೆ , ರಿಲೇ ಓಟವಿರುತ್ತದೆ.. ಆದರೆ ನೂರು ಮೀಟರ್ ಓಟ  ಎಲ್ಲದಕ್ಕಿಂತ ಭಿನ್ನ.. 

ಬೇಡರ ಕಣ್ಣಪ್ಪ ಆದ ಮೇಲೆ ಒಂದೇ ಪಾತ್ರದ ಸುತ್ತಾ ಸುತ್ತುವ  ರಾಜ್ ಕುಮಾರ್ ಅವರ ಚಿತ್ರಗಳು ಬಂದದ್ದು ಕಡಿಮೆ..  ಮಹಾನ್ ಘಟಾನುಘಟಿಗಳ ಮಧ್ಯೆ  ತಮ್ಮದೇ ಛಾಪು ಮೂಡಿಸುವ ಚಿತ್ರಗಳಲ್ಲಿ ಅಭಿನಯಿಸುತ್ತಾ ಬಂದಿದ್ದರು.. 

ಈ ಭಕ್ತ ಕನಕದಾಸ ಚಿತ್ರ ಒಂದು ರೀತಿಯಲ್ಲಿ ತಡೆ ಹಿಡಿದಿದ್ದ ನೀರನ್ನು ನಿಯಂತ್ರಣವುಳ್ಳ ಅಣೆಕಟ್ಟಿನ ಬಾಗಿಲನ್ನು ತೆರೆದಂತೆ  ಅಭಿನಯವಿದೆ.. ಸಂಯಮ ಪಾತ್ರ, ಪಾತ್ರಕ್ಕೆ ತಕ್ಕ ಅಭಿನಯ. .. ಕಡೆದು ನಿಲ್ಲಿಸಿದಂತಹ ಮೈಕಟ್ಟು.. ಮುದ್ದಾಗಿ ಕಾಣುವ ರಾಜ್ ಕುಮಾರ್ ತಮ್ಮ  ಅಮೋಘ ಪ್ರತಿಭೆಯನ್ನು ಧಾರೆಯೆರೆದಿದ್ದಾರೆ.. 

ಪ್ರತಿ ಚೌಕಟ್ಟಿನಲ್ಲಿಯೂ, ಪ್ರತಿ ದೃಶ್ಯದಲ್ಲಿಯೂ ಇಷ್ಟವಾಗುವಂತೆ ಅಭಿನಯ ನೀಡಿದ್ದಾರೆ.. ಅವಕಾಶಗಳು  ಆಗ ನನ್ನ ಛಾಪು ತೋರಿಸುತ್ತೇನೆ ಎನ್ನುವ ಅವರ ತಾಳ್ಮೆಯ ಗುಣ ಈ ಚಿತ್ರದಲ್ಲಿ ಕಾಣುತ್ತದೆ.  ಎಲ್ಲದಕ್ಕೂ ಸಮಯ ಬರಬೇಕು ಅದಕ್ಕೆ ಕಾಯಬೇಕು ಜೊತೆಯಲ್ಲಿ ಮಾಡುವ  ಪ್ರಯತ್ನ ಸದಾ ಇರಲೇ ಬೇಕು.. ಅವಕಾಶಗಳು ಬಂದಾಗ ಎರಡೂ ಕೈಯಲ್ಲಿ ಹಿಡಿದುಕೊಳ್ಳಬೇಕು ಎನ್ನುವ ನೀತಿ ಪಾಠ ರಾಜ್ ಕುಮಾರ್ ಅವರ ಈ ಚಿತ್ರ ಹೇಳುತ್ತದೆ.. 

ಶಾಮ್ ಪ್ರಸಾದ್ ಮೂವೀಸ್ ಲಾಂಛನದಲ್ಲಿ ಡಿ ಆರ್ ನಾಯ್ಡು ಅವರು ವೈ ಆರ್ ಸ್ವಾಮೀ ಅವರ  ನಿರ್ದೇಶನದಲ್ಲಿ ಈ ಚಿತ್ರ ನಿರ್ಮಿಸಿದ್ದಾರೆ.. 

ಜನಜನಿತವಾಗಿರುವ ಕನಕದಾಸರ ಇತಿಹಾಸವನ್ನು ಸಿನಿಮಾಕ್ಕೆ ಒಗ್ಗುವ ರೀತಿಯಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ.. ಕನಕದಾಸ ವಿರಚಿತ ನೂರಾರು ಪದಗಳಲ್ಲಿ ಕೆಲವನ್ನು ಈ ಚಿತ್ರಕ್ಕೆ ಬಳಸಿಕೊಂಡಿದ್ದಾರೆ ಹಾಗೆ ಚಿತ್ರಕ್ಕೆ ಅನುಕೂಲವಾಗುವಂತೆ ಕೆಲವು ಹಾಡುಗಳಿಗೆ  ಒದಗಿಸಿದ್ದಾರೆ ಹುಣುಸೂರ್ ಕೃಷ್ಣಮೂರ್ತಿ ಅವರು..  

ಟ್ರಿಕ್ ಶಾಟ್ ಈ ಚಿತ್ರಗಳಲ್ಲಿ ಅನೇಕ ಕಡೆ ಉಪಯೋಗಿಸಿದ್ದಾರೆ ಅದಕ್ಕೆ ಈ ಚಿತ್ರಕ್ಕೆ ಆರ್ ಮಧುಸೂಧನ್ ಅವರ ಛಾಯಾಗ್ರಹಣದ ಕೈಚಳಕವಿದೆ.. ಈ ಚಿತ್ರದ ಯಶಸ್ಸಿಗೆ ಇನ್ನೊಂದು ಕಾರಣ ಎಂ ವೈಕುಂಠರಾಜು ಅವರ ಸುಮಧುರ ಸಂಗೀತ. ಅವರ ಸಂಗೀತ ನಿರ್ದೇಶನದಲ್ಲಿ ಹಲವಾರು ಚಿತ್ರಗಳು ಬರದೇ ಇದ್ದರೂ, ಈ ಚಿತ್ರ ಅವರ ಜೀವನದ ಮೈಲಿಗಲ್ಲಾಯಿತು 
 

ತಿಮ್ಮ ನಾಯಕನಾಗಿ  ತಿರುಪತಿ ತಿಮ್ಮಪ್ಪನ ವರಪ್ರಸಾದದಿಂದ ಜನಿಸುವ ಮಗು..  ಪಾಳೇಗಾರರ ವಂಶದಲ್ಲಿ ಬೆಳೆದರೂ ಆ ದರ್ಪ ತೋರಿಸದೆ, ಇತ್ತ ಕಡೆ ವಿಧ್ಯಾಭ್ಯಾಸದ ಕಡೆಗೂ ಗಮನ ಕೊಡದೆ, ತನ್ನದೇ ರೀತಿಯಲ್ಲಿ ಬೆಳೆಯುವ ತಿಮ್ಮಪ್ಪ ನಾಯಕ, ಲಚ್ಚಿ ಎನ್ನುವ ಇವರ ವಂಶವನ್ನೇ ದ್ವೇಷ ಮಾಡುವ ಮಲ್ಲನಾಯಕನ ಮಗಳನ್ನು ಇಷ್ಟ ಪಡುತ್ತಾನೆ.. 


ಆದರೆ ದೈವ ಸಂಕಲ್ಪದ ಮುಂದೆ ಯಾವುದು ನೆಡೆಯುತ್ತದೆ.. ಭಗವಂತ  ಕನಸಲ್ಲಿ ಬಂದು, ಕಾಗಿನೆಲೆಯಲ್ಲಿ ನಾ ಅವತರಿಸುತ್ತೇನೆ ಎಂದು ಹೇಳಿ, ಅಲ್ಲಿಯೇ ನನಗೆ ಗುಡಿ  ಕಟ್ಟಬೇಕು ಎನ್ನುವ ಅಣತಿಯಂತೆ ನೆಲವನ್ನು ಅಗೆಯುವಾಗ ಮೂರ್ತಿ ಜೊತೆಯಲ್ಲಿ ಏಳು ಕೊಪ್ಪರಿಗೆ  ಕನಕ ಸಿಕ್ಕಿದ್ದರಿಂದ ತಿಮ್ಮನಾಯಕ ಕನಕನಾಯಕನಾಗುತ್ತಾನೆ.. 



ಭಗವಂತ ಕಣ್ಣ ಮುಂದೆ ಬಂದು, ಆಧ್ಯಾತ್ಮದ ಕಡೆ ಗಮನ ಕೊಡು, ನನ್ನ ದಾಸನಾಗು ಎನ್ನುವ ಅಪ್ಪಣೆಯಂತೆ ಗುರುಗಳು ವ್ಯಾಸರಾಯರ ಹತ್ತಿರ ಬಂದು, ಅವರ ಶಿಷ್ಯರ ಅನೇಕ ಕಷ್ಟಕೋಟಲೆಗಳನ್ನು ಎದುರಿಸಿ, ಭಗವಂತನ ಲೀಲೆಯಿಂದ ಅದನ್ನೆಲ್ಲ ದಾಟುತ್ತಾ, ಗುರುಗಳ ಮಾತಿನಂತೆ ಉಡುಪಿ ಮಠಕ್ಕೆ ಬರುವ ಕನಕ, ತನ್ನ ಭಕ್ತಿಗೆ ಸೋತ ಶ್ರೀ ಕೃಷ್ಣ ತನ್ನ ಇರುವ ದಿಕ್ಕನ್ನೇ ಬದಲಿಸಿಕೊಂಡು ಹಿಂದು ಮುಂದಾಗಿ ಕನಕನಿಗೆ ದರ್ಶನ ಕೊಟ್ಟು ಪುನೀತನನ್ನಾಗಿ ಮಾಡುತ್ತಾನೆ .. 


ಅಲ್ಲಿಗೆ ಕನಕನ ಬದುಕಿನ ಹಂತ ಮುಗಿಯುತ್ತದೆ.. ಮುಂದೆ ಶ್ರೀ ಕೃಷ್ಣನ ಆಶೀರ್ವಾದ ಬಲದಿಂದ ಅನೇಕ ಕೃತಿಗಳನ್ನು ರಚಿಸುತ್ತಾ ಕಾಲ ಕಳೆದು, ತನ್ನ ಸಮಯ ಬಂದಿದೆ ಎಂದಾಗ ಭಗವಂತನಲ್ಲಿ ಲೀನವಾಗುತ್ತಾನೆ ..

ಇಡೀ ಚಿತ್ರದಲ್ಲಿ ರಾಜ್ ಕುಮಾರ್ ಅಕ್ಷರಶಃ ಕನಕದಾಸರ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ .. ಆರಂಭದ ದೃಶಗಳಲ್ಲಿ ಆರಾಮಾಗಿ ನಟಿಸುತ್ತಾ, ಹರಿದಾಸನಾದ ಮೇಲೆ ಅತ್ಯಂತ ಉತ್ತಮ ಅಭಿನಯ ನೀಡಿದ್ದಾರೆ.. ಬಾಗಿಲನು ತೆರೆದು ಹಾಡಿನಲ್ಲಿ ಅವರ ಅಭಿನಯ ಮನಮುಟ್ಟುತ್ತದೆ.. ಅವರ ಮೈಕಟ್ಟು ಅದ್ಭುತವಾಗಿದೆ.. 

ಲಚ್ಚಿಯಾಗಿ ಕೃಷ್ಣ ಕುಮಾರಿ ಮುದ್ದಾಗಿ  ಕಾಣುತ್ತಾರೆ.. ಮಲ್ಲನಾಯಕನಾಗಿ ಅಬ್ಬರಿಸುವ ಉದಯಕುಮಾರ್ , ತಿಮ್ಮಪ್ಪನಾಯಕನ ತಾಯಿಯಾಗಿ ಜಯಶ್ರೀ,  ಗುರುವಾಗಿ ಸೋರಟ್ ಅಶ್ವಥ್, ವ್ಯಾಸಗುರುಗಳಾಗಿ ಎಚ್ ಆರ್ ರಾಮಚಂದ್ರಶಾಸ್ತ್ರಿ, ಅವರ ಶಿಷ್ಯಕೋಟಿಗಳಲ್ಲಿ ಕನಕನಿಗೆ ಕಾಟ ಕೊಡುವ ಹನುಮಂತ ಚಾರ್, ರತ್ನಾಕರ್ ಹಾಗೂ ಇತರರು ಅಭಿನಯ ಚಿತ್ರಕ್ಕೆ ಬೇಕಾದ ಹಾಗೆ ಇದೆ 
ಒಂದೆರಡು ದೃಶ್ಯಗಳಲ್ಲಿ ಬರುವ ಅಶ್ವತ್ ಇಷ್ಟವಾಗುತ್ತಾರೆ. 





ಹಾಡುಗಳು ಇಷ್ಟವಾಗುವ ಈ ಚಿತ್ರಕ್ಕೆ ತಮ್ಮ ಗಾನ ಪ್ರಭೆಯನ್ನು  ಹರಿಸಿರುವುದು ಪಿ ಬಿ ಶ್ರೀನಿವಾಸ್ ಜೊತೆಯಲ್ಲಿ ಎಸ್ ಜಾನಕೀ ಮತ್ತು ಪಿ ಜಿ ಕೃಷ್ಣವೇಣಿ. 


ರಾಜ್ ಕುಮಾರ್ ಹಂತ ಹಂತವಾಗಿ ಬೆಳೆಯುವ ಹಂತಕ್ಕೆ ಈ ಚಿತ್ರ ಸಾಕ್ಷಿ.. 

No comments:

Post a Comment