Friday, December 22, 2023

ಎಲ್ಲಾ ಶಿವನ ದಯೆ .. ಶಿವರಾತ್ರಿ ಮಹಾತ್ಮೆ (1964 (ಅಣ್ಣಾವ್ರ ಚಿತ್ರ ೪೯/೨೦೭)

ಕಂಬದ ಮೇಲಿನ ದೀಪ ಸ್ವಲ್ಪ ಅಲುಗಾಡಿದರೂ ಕತ್ತಲೆಯೇ ಮತ್ತೆ.. 


ಮಕ್ಕಳಿಲ್ಲದ ರಾಜಮನೆತನ.. ರಾಜ ರಾಣಿ ಗುರುವಿನ ಆಜ್ಞೆಯ ಮೂಲಕ ತಪಸ್ಸು ಆಚರಿಸಲು ಆಶ್ರಮಕ್ಕೆ ಹೋಗುತ್ತಾರೆ.. ರಾಜನು ನಿರ್ಮಲ ಮನಸ್ಸಿನಿಂದ ತಪಸ್ಸಿಗೆ ಕೂತರೆ, ರಾಣಿಯು ಆಶ್ರಮದಲ್ಲಿ ಇದ್ದುಕೊಂಡು ಆಶ್ರಮದ ಕೆಲಸ ಕಾರ್ಯಗಳಿಗೆ ನೆರವಾಗುತ್ತಾರೆ. 

ಆದರೆ ಶಿವನ ಮಾಯೆ ಕಂಡವರಾರು.. ಭಕ್ತನನ್ನು ಪರೀಕ್ಷಿಸಲು ಮಾಯೆಯನ್ನು ಸೃಷ್ಟಿಸಿದಾಗ, ಆ ಮಾಯಾಜಾಲಕ್ಕೆ ಸಿಲುಕಿ ತಪೋನಿರತನ ಮನಸ್ಸು ಚಂಚಲವಾಗುತ್ತದೆ.. ಆದರೆ ಅದು ಮಾಯೆ ಎಂದು ಅರಿವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ.. ಪುತ್ರ ಸಂತಾನವಾದರೂ ಆ ಮಗು ಬೆಳದಂತೆ ದೇವರಲ್ಲಿ ಭಯವಿಲ್ಲ, ದುಷ್ಟನಾಗುತ್ತಾನೆಮ್ ಚಟಗಳಿಗೆ ದಾಸನಾಗುತ್ತಾನೆ ಎಂದು ಶಿವನ ಆಶೀರ್ವಚನ ಹೇಳಿದರೂ, ಕೂಡ ಪುತ್ರ ಮಮತೆ ರಾಜ ರಾಣಿ ಸಂತಾನ ಭಾಗ್ಯಕ್ಕೆ ಒಳಗಾಗುತ್ತಾರೆ. 

ಮಕ್ಕಳಿಲ್ಲದ ರಾಣಿ ಬಹುಕಾಲದ ನಂತರ ಜನಿಸಿದ ಮಗುವನ್ನು ಅಪಾರವಾಗಿ ಪ್ರೀತಿಸಿ, ಮುದ್ದಿಸಿ ಬೆಳಸಿದ ಪರಿಣಾಮ ಮಗ ದಾರಿತಪ್ಪಿದ ಮಗನಾಗುತ್ತಾನೆ.. ಹಿರಿಕಿರಿಯರೆಂಬ ಗೌರವವಿಲ್ಲದೆ, ಕುತಂತ್ರಿ ಸೇನಾಪತಿಯ ಮಗನ ಸಂಗಡ ಸೇರಿಕೊಂಡು ಚಟಕ್ಕೆ ದಾಸನಾಗುತ್ತಾನೆ.. 

ಮದುವೆಯಾದರೆ ಸರಿಹೋಗಬಹುದು ಎಂಬ ಮಾಮೂಲಿ ಕಾರಣಗಳಿಂದ ಸರಿಯಾಗಬಹುದು ಎಂಬ ನಂಬಿಕೆ ರಾಜರಾಣಿಯರಿಗೆ ಹುಸಿಯಾಗುತ್ತದೆ.. ಮಾಯೆಗೆ ಮುಸುಕಿಗೆ ಮನಸೋತ್ತಿದ್ದರ ಪರಿಣಾಮ ಮಗ ದಾರಿ ಬಿಟ್ಟಾಗಿರುತ್ತದೆ. ತಂದೆ ತಾಯಿಯರನ್ನು ಛೀಮಾರಿ ಹಾಕಿ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು, ಅವರನ್ನು ಅರಮನೆಯ ಕೋಣೆಯಲ್ಲಿಯೇ ಸೆರೆಯಾಗಿಸುತ್ತಾನೆ. ಇತ್ತ ತನ್ನ ಮಡದಿ ಏನೇ ಹೇಳಿದರೂ ಏನೇ ಮಾಡಿದರೂ ಅದರಲ್ಲಿ ತಪ್ಪು ಕಂಡುಹಿಡಿಯುತ್ತಾ ಕಡೆಗೆ ಆಕೆಯೂ ಕೂಡ ಅರಮನೆ ಬಿಡುವಂತೆ ಮಾಡುತ್ತಾನೆ.. 

ಇತ್ತ ರಾಜನರ್ತಕಿಯ ಜೊತೆ ಸೇರಿಕೊಂಡು, ಸೇನಾನಿಯ ಮಗ ಷಡ್ಯಂತ್ರ ರಚಿಸಿ, ರಾಜ್ಯ ಕಬಳಿಸಲು ಉಪಾಯಮಾಡಿದಾಗ,  ಅದು ಶಿವನ ಆಶೀರ್ವಾದದಿಂದ ನೆರವೇರದೆ ಕಡೆಗೆ ತನ್ನ ತಪ್ಪನ್ನು ಒಪ್ಪಿಕೊಂಡು, ಮತ್ತೆ ಶಿವನ ಭಕ್ತನ ಸ್ಥಾನಕ್ಕೆ ಬಂದು ನಿಲ್ಲುತ್ತಾನೆ.. 

ಈ ಪುಟ್ಟ ಕಥೆಯನ್ನು ಮಾರ್ಮಿಕವಾಗಿ ಚಿತ್ರಿಸಿ, ಕಥಾನಕವನ್ನು ಎಲ್ಲೂ ಬೋರ್ ಹೊಡೆಸದೆ ಚಿತ್ರಮಾಡಿದ ಕೀರ್ತಿ ಪಿ ಆರ್ ಕೌಂಡಿಣ್ಯ ಅವರದ್ದು. ಇದೊಂದು ರೀತಿ ಕೌಂಡಿಣ್ಯಮಯ ಸಿನಿಮಾ ಅನ್ನಬಹದು, 

ನಿರ್ದೇಶನ ಕೌಂಡಿಣ್ಯ ಅವರದ್ದು, ಕಥೆ ಚಿತ್ರಕಥೆಯನ್ನು ಚಿ ಸದಾಶಿವಯ್ಯನವರ ಜೊತೆ, ನಿರ್ಮಾಣವನ್ನು ಎಸ್ ಎಸ್ ರಾಜು ಅವರ ಜೊತೆ ಸೇರಿ ದುಡಿದಿದ್ದಾರೆ. ಸಂಭಾಷಣೆ - ಹಾಡುಗಳನ್ನು ಅಪ್ಪಮಗ ಜೋಡಿ ಚಿ ಸದಾಶಿವಯ್ಯ, ಹಾಗೂ ಚಿ ಉದಯಶಂಕರ್ ರಚಿಸಿದ್ದಾರೆ, ಮಾಧುರ್ ಅವರ ಛಾಯಾಗ್ರಹಣ, ಶಿವಪ್ರಸಾದ್ ಅವರ ಸಂಗೀತ .. ಹಾಡುಗಳನ್ನು ಪಿ ಬಿ ಶ್ರೀನಿವಾಸ್, ನಾಗೇಂದ್ರ, ಮಾಧವಪೆದ್ದಿ ಸತ್ಯಂ, ಎಸ್ ಜಾನಕಿ ಹಾಗೂ ಸ್ವರ್ಣಲತಾ ಹಾಡಿದ್ದಾರೆ. 

ಈ ಚಿತ್ರದ ನಾಯಕ ಅಥವ ಖಳನಾಯಕ ಅನ್ನಬೇಕೋ ಗೊಂದಲವಾಗುತ್ತದೆ. ಕಾರಣ ಆ ಪಾತ್ರಕ್ಕೆ ಬೇಕಾದ ಅಭಿನಯ ಹಾಗಿದೆ. ಹಿರಿಯರನ್ನು, ಗುರುಗಳನ್ನು, ತಂದೆ ತಾಯಿಯರನ್ನು ಏಕವಚನದಲ್ಲಿ ಮಾತಾಡುತ್ತ, ಗೌರವ ತೋರದೆ, ದೇವರ ಭಯ ಇಲ್ಲದೆ, ಗುಡಿಯ ಅರ್ಚಕರನ್ನು ಹೀನ ಮಾನವಾಗಿ ಬಯ್ಯುವ ನಾಯಕ, ಮದುವೆಮಾಡಿಕೊಂಡ ಪತ್ನಿಯನ್ನು ಕಣ್ಣೀರಿನ ಕಡಲಲ್ಲಿ ಕೈತೊಳೆಸುತ್ತಾ, ರಾಜನರ್ತಕಿಯ ಸಹವಾಸ, ಮದಿರಾ ಪಾನ, ಮತ್ತಲ್ಲಿಯೇ ಬಯ್ಯುವುದು ಈ ರೀತಿಯ ಪಾತ್ರಗಳಲ್ಲಿ ರಾಜಕುಮಾರ್ ಅವರನ್ನು ಕಾಣೋದು ಬಹಳ ಬಹಳ ಅಪರೂಪ ಆ ರೀತಿಯ ಒಂದು ಪಾತ್ರ ಕರುಣೆಯೇ ಕುಟುಂಬದ ಕಣ್ಣು ಚಿತ್ರದಲ್ಲಿತ್ತು.. ಅದೇ ಹಾದಿಯ ಒಂದು ಪಾತ್ರವಿದು. ಅಬ್ಬಬ್ಬಾ ಇವರೇನಾ ಹಿಂದಿನ ಚಿತ್ರಗಳಲಲ್ಲಿ ಮಿಂದು ಬಂದು ಗೆದ್ದವರು ಎನ್ನುವ ಹಾಗೆ ಇದೆ ಅವರ ಅಭಿನಯ. ಹಾವ ಭಾವ, ಅಭಿನಯ, ಆ ಕ್ರೂರತೆ, ಕಡೆಗೆ ಎಲ್ಲವನ್ನೂ ಕಳೆದುಕೊಂಡು ಸ್ವಾಧೀನ ಕಳೆದುಕೊಂಡು ಹೆಳವನ ರೀತಿಯಲ್ಲಿಯೇ ಶಿವಪೂಜೆ ಮಾಡಿ, ಶಿವನ ಕೃಪೆಗೆ ಕಾರಣವಾಗಿ ಮತ್ತೆ ಮರಳಿ ರೂಪಕ್ಕೆ ಬಂದು, ತನ್ನ ರಾಜ್ಯವನ್ನು ದುಷ್ಟ ಸೇನಾಧಿಪತಿಯಿಂದ ಕೈಯಿಂದ ಬಿಡಿಸಿಕೊಂಡು ನಿಲ್ಲುವ ಪಾತ್ರದಲ್ಲಿ ಅಕ್ಷರಶಃ ಪರಕಾಯ ಪ್ರವೇಶವೇ.. ನಾಯಕನ ವಿರುದ್ಧ ಮನಸ್ಥಿತಿಯ ಪಾತ್ರವಾದರೂ ಅದನ್ನು ಒಪ್ಪಿಕೊಂಡು ಲೀಲಾಜಾಲವಾಗಿ ಅಭಿನಯಿಸಿದ ಪರಿಗೆ ಶಭಾಹ್ ಎನ್ನಲೇ ಬೇಕು. ಕಲಾವಿದ ಪಾತ್ರದ ಬಂಧಿಯಾಗಿರಬೇಕು ಎನ್ನುವ ಮಾತು ನಿಜವಾಗುತ್ತದೆ. 

ಉಳಿದಂತೆ ಅಶ್ವಥ್, ಜಯಶ್ರೀ ಅಭಿನಯ ಸಮಪರ್ಕವಾಗಿದೆ. ಇವರ ಸೊಸೆಯ ಪಾತ್ರದಲ್ಲಿ ನಾಯಕನ ಜೊತೆಗಿಂತ, ರಾಜರಾಣಿಯರ ಜೊತೆಯೇ ಅಧಿಕ ದೃಶ್ಯವಿರುವ ಪಾತ್ರದಲ್ಲಿ ಲೀಲಾವತಿ ಮಿಂಚುತ್ತಾರೆ. 
ಚಿತ್ರದ ಓಘಕ್ಕೆ ಹಾಸ್ಯವಿರಲಿ ಎನ್ನುವಂತೆ ನರಸಿಂಹರಾಜು ಅವರ ಪಾತ್ರ ಪೋಷಣೆ ಮತ್ತು ಕಥಾವಿಸ್ತರಣೆ ಸೊಗಸಾಗಿದೆ. 

ಹಿಂದಿನ ಚಿತ್ರ ಚಂದವಳ್ಳಿ ತೋಟ ಚಿತ್ರದಲ್ಲಿ ಅಣು ಅಣುವಾಗಿ ಕಾಡಿದ ಮನೆಮುರುಕ ಪಾತ್ರದ ಅಶ್ವಥ್ ನಾರಾಯಣ ಈ ಚಿತ್ರದಲ್ಲಿ ಅರಮನೆಯನ್ನು ರಕ್ಷಿಸುವ ಒಂದು ಪುಟ್ಟ ಪಾತ್ರದಲ್ಲಿ

 ಆರಂಭದಲ್ಲಿ ಬ್ರಹ್ಮ ವಿಷ್ಣುವಿನ ಯುದ್ಧ ಮನೆಸೆಳೆಯುತ್ತದೆ. 



ಸಿನಿಮಾ ಹೆಸರು ತೋರಿಸುವಾಗ ರುದ್ರಾಭಿಷೇಕ ಮಾಡುತ್ತಾ ರುದ್ರವನ್ನು ಕೇಳುವುದೇ ಒಂದು ಖುಷಿ. ಹಾಡುಗಳು ಸಿನಿಮಾ ಕಥೆಗೆ ತಕ್ಕಂತೆ ಮೂಡಿಬಂದಿದೆ. 

ಸುಂದರ ಚಂದಿರ ರಾಜಕುಮಾರ್ 

ಒಂದು ಸರಳ ಕೆಥಾನಕ.. ಕಥೆಗೆ ಚ್ಯುತಿ ಬಾರದಂತೆ, ಕಥೆ ಎಲ್ಲಿಯೂ ಆ ಕಡೆ ಈ ಕಡೆ ಹೋಗದಂತೆ ನಿಭಾಯಿಸಿ ಉತ್ತಮ ನೋಡಿದ್ದರ ಸಮಾಧಾನ ಆಗುವಂತೆ ಚಿತ್ರವನ್ನು ಬಿಂಬಿಸಿದ್ದಾರೆ. 

ಅಶ್ವಥ್ ಜಯಶ್ರೀ ಜೋಡಿ 

 ಹಿಂದಿನ ಚಿತ್ರ ಚಂದಾವಲ್ಲಿ ತೋಟದಲ್ಲಿ ಕಾಡಿದ
 ಅಶ್ವಥ್ ನಾರಾಯಣ 

ಬ್ರಹ್ಮ ವಿಷ್ಣು ಮಹೇಶ್ವರ ಜೊತೆ ನಾರದ 

 ನಾಯಕಿ ಲೀಲಾವತಿ 

ಖಾಯಂ ಜೋಡಿ ರಾಜ್ ಮತ್ತು ರಾಜು 

ತೆಲುಗು ಚಿತ್ರನಟ ಶೋಭನ್ ಬಾಬು 

 

1 comment:

  1. ಅರ್ಥಪೂರ್ಣ ವಿಮರ್ಶೆ ಶ್ರೀಕಾಂತ್ ❤❤🥰😍 loved it 👌👌😊

    ReplyDelete