Wednesday, April 24, 2019

ಆರಂಭಿಕ ಹಾಡುಗಳಲ್ಲಿ ನೀತಿ ಪಾಠ - ಅಣ್ಣಾವ್ರ ಜನುಮದಿನ!

ದಿನಗಳು ಉರುಳುತ್ತಲೇ ಹೋಗುತ್ತವೆ.. ನೆನಪುಗಳು ಸದಾ ಅಮರ.. ಚಿತ್ರಗಳು ಅಂತ ನೆನೆದಾಗ ಆ ದೃಶ್ಯಗಳು, ಸಂಭಾಷಣೆಗಳು, ಹೊಡೆದಾಟ, ಭಾವುಕ ದೃಶ್ಯಗಳು, ನಾಯಕಿಯ ಸೌಂದರ್ಯ, ನಾಯಕನ ಅಭಿನಯ, ಸಹನಟರ ನಟನೆ, ಹೀಗೆ ನೂರಾರು ರೀತಿಯಲ್ಲಿ ಚಿತ್ರಗಳು ಮನಸ್ಸಿಗೆ ನಾಟುತ್ತವೆ... ಅದರಲ್ಲೂ ಹಾಡುಗಳು ಚಿರಕಾಲ ಮನದೊಳಗೆ ಉಳಿದುಬಿಡುತ್ತವೆ..

ಅಣ್ಣಾವ್ರ ಚಿತ್ರಗಳು ಎಂದ ಮೇಲೆ ಹಾಡಿಗೆ ವಿಶೇಷ ಸ್ಥಾನಮಾನ ಇದ್ದೆ ಇರುತ್ತಿದ್ದವು.. ಪ್ರತಿಯೊಂದು ಚಿತ್ರಗಳ ಹಾಡುಗಳು ಭಿನ್ನವಾಗಿರುತ್ತಿದ್ದವು.. ಹಾಡುಗಳು ಕಥೆಯನ್ನು ಮುಂದುವರೆಸಿಕೊಂಡು ಹೋಗಲು ಸಹಾಯ ಮಾಡುತ್ತಿದ್ದವು.. ಹಿಂದೊಮ್ಮೆ ಕೆಲವು ಹಾಡುಗಳಲ್ಲಿ ಅಣ್ಣಾವ್ರು ಎನ್ನುವ ಲೇಖನದಲ್ಲಿ ಒಂದೆರಡು ಹಾಡುಗಳ ಬಗ್ಗೆ ಬರೆದಿದ್ದೆ... ಇಂದು ಆರಂಭಿಕ ಸನ್ನಿವೇಶಗಳಲ್ಲಿ ಅಣ್ಣಾವ್ರು ಹಾಡಿಕೊಂಡು ತೆರೆ ಮೇಲೆ ಬರುವ ಕೆಲವಷ್ಟು ಹಾಡುಗಳ ಬಗ್ಗೆ ಬರಿ ಅಂತ ಅಣ್ಣಾವ್ರ ಅಪ್ಪಣೆ ಆಯ್ತು.. ಅದಕ್ಕಾಗಿ ಈ ಲೇಖನ.. ಇಂದು ಅವರ ಜನುಮದಿನ.. ಅವರೇ ಅಪ್ಪಣೆ ನೀಡಿದಂತೆ ಅವರದ್ದೇ ಕೆಲವು ಹಾಡುಗಳ ಗುಚ್ಛ.. ಅವರಿಗೆ ಶುಭ ಹಾರೈಕೆಗಳ ಹೂಮಾಲೆ ಅವರಿಗೆ ಹಾಕಿ ಬಿಡೋಣ ಅಲ್ಲವೇ.. ಸರಿ ಇನ್ನೇನು ಕಾಯೋದು.. ಹೊರಡೋಣ ನೆಡೆಯಿರಿ.. ರೈಲು ಬಂದೆ ಬಿಟ್ಟಿದೆ..

ನಗುತಾ ನಲಿ ನಲಿ ಏನೇ ಆಗಲಿ:

ಬಂಗಾರದ ಮನುಷ್ಯ ಚಿತ್ರದ ಸಾರ್ವಕಾಲಿಕ ಹಾಡಿದು.. ಜಿ ಕೆ ವೆಂಕಟೇಶ್ ಅವರ ಅದ್ಭುತ ಸಂಗೀತ.. ಅದರಲ್ಲೂ ಸುಮಾರು ಒಂದು ನಿಮಿಷ ಆರಂಭದ ಸಂಗೀತದ ತುಣುಕು ಬಹುಶಃ ಕರುನಾಡಿನ ಚಿತ್ರಗಳಲ್ಲಿ ಮೊದಲನೇ ಪ್ರಯೋಗ ಇರಬೇಕು.. ಓದು ಮುಗಿಸಿ ತನ್ನ ಅಕ್ಕ ಬಾವನ ಮನೆಗೆ ಬರುವ ಆರಂಭಿಕ ದೃಶ್ಯ.. ಈ ಹಾಡು ಶುರುವಾಗುತ್ತದೆ.. ಕೆಂಪು ಅಂಗಿಯಲ್ಲಿ ಕಂಗೊಳಿಸುವ ಅಣ್ಣಾವ್ರು.. ತಮ್ಮ ಬ್ಯಾಗ್ ಹಿಡಿದು ಊರೆಲ್ಲಾ ಸುತ್ತಿ ಬರುತ್ತಾರೆ.. ನನ್ನ ಮಡದಿ ಸವಿತಾಳ ತವರೂರು ಕಳಸಾಪುರದಲ್ಲಿ ಚಿತ್ರೀಕರಣವಾಗಿದ್ದು ಇನ್ನಷ್ಟು ಖುಷಿ ನೀಡಿತ್ತು.. ಸಮಯವಾದಾಗೆಲ್ಲ ಆ ಊರಿಗೆ ಭೇಟಿ ನೀಡಿದಾಗ.. ಅಣ್ಣಾವ್ರು ಇಲ್ಲೇ ಓಡಾಡಿದ್ದು.. ಅಲ್ಲಿಯೇ ನಿಂತದ್ದು.. ಶಾಲೆಯ ಬೆಲ್ ಇಲ್ಲೇ ಹೊಡೆದದ್ದು.. ತಾತನ ಜೊತೆ "ಏರು ಪೇರಿನ ಜೊತೆಯಲ್ಲಿ ಜೀವನ" ಅಂತ ಹಾಡುತ್ತಾ ಅಜ್ಜನಿಗೆ ಹಣ್ಣು ಕೊಟ್ಟಿದ್ದು ಇಲ್ಲೇ ಅಂತ ಮಗಳಿಗೆ ಜಾಗ ತೋರಿಸುವಾಗ ಏನೋ ಆನಂದ.. ಅಣ್ಣಾವ್ರು ಹೆಜ್ಜೆ ಇತ್ತ ಜಾಗದಲ್ಲಿ ನಾನು ನಿಂತಿದ್ದೇನೆ ಎನ್ನುವುದೇ ಖುಷಿಯ ಸಂಗತಿ..

ಜೀವನದ ಎಲ್ಲಾ ಮಗ್ಗುಲುಗಳನ್ನು ಪದಗಳಲ್ಲಿ ಹಿಡಿದಿಟ್ಟ ಶ್ರೀ ಹುಣುಸೂರು ಕೃಷ್ಣಮೂರ್ತಿಯವರ ಸಾಹಿತ್ಯ. ಅದಕ್ಕೆ ಒಪ್ಪುವ ಭವ್ಯ ಸಂಗೀತ.. ಶ್ರೀ ಸಿದ್ಧಲಿಂಗಯ್ಯವರ ಚಿತ್ರೀಕರಣ... ಇದಕ್ಕೆ ಕಳಶವಿಟ್ಟಂತೆ ಶ್ರೀ ಪಿಬಿಎಸ್ ಅವರ ಗಾಯನ.. ಅದ್ಭುತಗಳಲ್ಲಿ ಅದ್ಭುತ ಎನ್ನಬೇಕು..

ನಗು ನಗುತಾ ನಲಿ ನಲಿ 


ಏನೆಂದು ನಾ ಹೇಳಲಿ
ಜೀವನದ ತತ್ವ ಆದರ್ಶಗಳನ್ನು ಅಣ್ಣಾವ್ರ ಚಿತ್ರಗಳಲ್ಲಿ ಮತ್ತು ಹಾಡುಗಳಲ್ಲಿ ಯಥೇಚ್ಛವಾಗಿ ಕಾಣಸಿಗುತ್ತದೆ. ಮಾನವನ ಆಸೆ, ದುರಾಸೆ, ಚಟುವಟಿಕೆ, ದ್ವೇಷ, ಅಸೂಯೆ ಹೀಗೆ ಹಲವಾರು ರಾಗ ಭಾವಗಳನ್ನು ಗಿರಿಕನ್ಯೆ ಚಿತ್ರದಲ್ಲಿ ಶ್ರೀ ಚಿ ಉದಯಶಂಕರ್ ಸರಳ ಸಾಹಿತ್ಯದಲ್ಲಿ ಸೇರಿಸಿಟ್ಟಿದ್ದಾರೆ.. ಶ್ರೀ ರಾಜನ್ ನಾಗೇಂದ್ರ ಅವರ ಅದ್ಭುತ ಸಂಗೀತದ ಜೊತೆಗೆ ಅಣ್ಣಾವ್ರೇ ಹಾಡಿರೋದು ಸೊಗಸಾಗಿದೆ.. ಅರಣ್ಯ, ಜೇನು, ಪ್ರಾಣಿಗಳು, ಪಕ್ಷಿಗಳು, ಜ್ಯೋತಿಷ್ಯ ಹೀಗೆ ಎಲ್ಲದರ ಬಗ್ಗೆ ಹಾಡುತ್ತಾ ಬರುವ ಅಣ್ಣಾವ್ರು.. ಹಳ್ಳಿಯ ಸೊಗಡಿನ ವೇಷಭೂಷಣದಲ್ಲಿ ಸೊಗಸಾಗಿ ಕಾಣುತ್ತಾರೆ. ದೊರೈ ಭಗವಾನ್ ಅವರ ಹಾಡಿನ ಚಿತ್ರೀಕರಣ ಸೊಗಸಾಗಿದೆ.

ಏನೆಂದು ನಾ ಹೇಳಲಿ 


ಎಂದೂ ನಿನ್ನ ನೋಡುವೆ 
ಜೀವನದಲ್ಲಿ ಒಲವು, ಪ್ರೀತಿ, ಮಮಕಾರ ಬಹು ಮುಖ್ಯ. ಪ್ರೀತಿಗೆ ಮನಸ್ಸು ಬಾಗಿದಾಗ, ಆ ನೆನಪುಗಳಲ್ಲಿ ಲೋಕವು ಸುಂದರ, ಸುಮಧುರ, ಮಧುರ, ಮಧುರ, ಅಮರ ಅನಿಸುತ್ತದೆ.. ತನ್ನ ಪ್ರೇಯಸಿಯನ್ನು ನೆನೆಸಿಕೊಂಡು ಹಾಡುತ್ತಾ ಬರುವ ಅಣ್ಣಾವ್ರು ಈ ಚಿತ್ರದಲ್ಲಿ .. ಸ್ಕೂಟರ್ ಚಕ್ರವನ್ನು ತೋರಿಸುವಾಗಲೇ ಟಾಕೀಸಿನಲ್ಲಿ ಶಿಳ್ಳೆಗಳ ಸುರಿಮಳೆ.. ಅದನ್ನು ಕೇಳುವುದೇ ಒಂದು ಆನಂದ.. ತನ್ನ ಪ್ರೇಯಸಿಯನ್ನು ಎಲ್ಲೆಡೆ ಕಾಣುತ್ತ ಬರುವ ಈ ಹಾಡು ಇಷ್ಟವಾಗೋದು.. ಅಣ್ಣಾವ್ರ ಸರಳ ವೇಷಭೂಷಣ, ಈ ಹಾಡಿಗಾಗಿಯೇ ಸ್ಕೂಟರ್ ಕಲಿತದ್ದು, ಶ್ರೀ ಚಿ ಉದಯಶಂಕರ್ ಅವರ ಅರ್ಥಗರ್ಭಿತ ಸಾಹಿತ್ಯ, ಮತ್ತೊಮ್ಮೆ ಶ್ರೀ ರಾಜನ್ ನಾಗೇಂದ್ರ ಅವರ ಸರಳ ಸಂಗೀತ.. ಶ್ರೀ ದೊರೈ ಭಗವಾನ್ ಅವರ ಸುಂದರ ಚಿತ್ರೀಕರಣ ಈ ಹಾಡಿಗೆ ಮೆರುಗು ನೀಡಿತ್ತು.. ಇಂದಿಗೂ ಅದ್ಭುತ ಗೀತೆಗಳಲ್ಲಿ  ಈ ಹಾಡಿಗೂ ಸ್ಥಾನವಾಗಿದೆ..

ಎಂದೂ ನಿನ್ನ ನೋಡುವೆ 

ಚಿನ್ನದ ಗೊಂಬೆಯಲ್ಲ 

ನಾವೆಲ್ಲಾ ಸಮಯದ ಗೊಂಬೆಗಳು.. ಆ ವಿಧಾತನ ಚಿತ್ರಕತೆಯಲ್ಲಿ ನಮ್ಮ ಪಾತ್ರಗಳು ಹೇಗೆ ಬರೆದಿದೆಯೋ ಹಾಗೆ ನಮ್ಮ ಬದುಕು. ಈ ಹಂದರವನ್ನು ಇಟ್ಟುಕೊಂಡು ರಚಿತವಾದ ಕಾದಂಬರಿಯಾದಾರಿತ ಚಿತ್ರದ ಹಾಡು ಚಿನ್ನದ ಗೊಂಬೆಯಲ್ಲ ದಂತದ ಗೊಂಬೆಯಲ್ಲ ಹಾಡು.. ಲಾರಿ ಡ್ರೈವರ್ ಆಗಿ ತನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತ ಹಿನ್ನೆಲೆಯಲ್ಲಿ ಹಾಡಿಕೊಂಡು ಬರುವ ಈ ಹಾಡು.. ಮತ್ತೊಮ್ಮೆ ಶ್ರೀ ಚಿ ಉದಯಶಂಕರ್, ಶ್ರೀ ರಾಜನ್ ನಾಗೇಂದ್ರ ಮತ್ತು ಶ್ರೀ ದೊರೈ ಭಗವಾನ್ ಸಂಗಮದ ಚಿತ್ರವಿದು.

ಚಿನ್ನದ ಗೊಂಬೆಯಲ್ಲ 

ಶ್ರೀಕಂಠ ವಿಷಕಂಠ 

ಜಗತ್ತಿನಲ್ಲಿ ತಾಯಿ ದೇವರಿಗಿಂತ ಇನ್ನೊಬ್ಬ ದೇವರಿಲ್ಲ ಎನ್ನುವ ನೀತಿ ಪಾಠ ಅಣ್ಣಾವ್ರ ಹಲವಾರು ಚಿತ್ರಗಳಲ್ಲಿ ಕಾಣ ಸಿಗುತ್ತದೆ.. ಪೋಲಿಯೊ ಪೀಡಿತ ತಾಯಿಯ ಆರೋಗ್ಯಕ್ಕಾಗಿ ನಂಜನಗೂಡಿನ ಶ್ರೀಕಂಠೇಶ್ವರನನ್ನು ಹೊಗಳುತ್ತಾ ಆರಂಭವಾಗುವ ಹಾಡು.. ಭಕ್ತಿಭಾವದಲ್ಲಿ ಮನಸೆಳೆಯುವ ಅಭಿನಯ, ಶ್ರೀ ಚಿ ಉದಯಶಂಕರ್ ಅವರ ಸಾಹಿತ್ಯ, ಶ್ರೀ ಉಪೇಂದ್ರ ಕುಮಾರ್ ಅವರ ಸರಳ ಸಂಗೀತ.. ದೇವಸ್ಥಾನದಲ್ಲಿ ಚಿತ್ರೀಕರಣಗೊಂಡ ಬಗೆ, ಶ್ರೀ ರಾಜಶೇಖರ್ ಅವರ ನಿರ್ದೇಶನ ಈ ಹಾಡಿಗೆ ಹೊನ್ನ ಕಳಶವಿಟ್ಟಂತೆ ಇದೆ.. ಹಾಡಿನ ಮಧ್ಯಭಾಗದಲ್ಲಿ ಶಿವನಿಗೆ ಅಭಿಷೇಕ ಮಾಡುವಾಗ ಮೂಡಿಬರುವ ಮಂತ್ರ ಚಿತ್ರದಲ್ಲಿ ನೋಡುವಾಗ, ಕೇಳುವಾಗ ಸಂತಸ ಮೂಡುತ್ತದೆ

ಶ್ರೀಕಂಠ ವಿಷಕಂಠ 


ಹೀಗೆ ಹತ್ತು ಹಲವು ಹಾಡುಗಳು ಅಣ್ಣಾವ್ರ ಆರಂಭಿಕ ದೃಶ್ಯಗಳನ್ನು ಬೆಳೆಗಿಸಿದ್ದವೋ, ಅಥವಾ ಅಣ್ಣಾವ್ರು ಆ ಹಾಡುಗಳಿಗೆ ವಿಶೇಷ ಸ್ಥಾನಮಾನ ನೀಡಲು ಸಹಾಯ ಮಾಡಿದರೋ.. ಒಟ್ಟಿನಲ್ಲಿ ಅವರಿಂದ ಹಾಡುಗಳು.. ಹಾಡುಗಳಿಂದ ಅವರು ಎನ್ನುವ ಹಾಗೆ ಅದ್ಭುತ ಹಾಡುಗಳ ಮೂಲಕ ಉತ್ತಮ ಸಂದೇಶಗಳನ್ನು ದೃಶ್ಯಗಳ ಮೂಲಕ ರವಾನಿಸುವ ಕೆಲಸ ಮಾಡುತ್ತಿದ್ದ ಈ ಹಾಡಿನ ತುಣುಕುಗಳ ಮೂಲಕ ಅಣ್ಣಾವ್ರಿಗೆ ಜನುಮದಿನದ ಶುಭ ಹಾರೈಕೆಗಳನ್ನು ಸಲ್ಲಿಸೋಣ ಅಲ್ಲವೇ..

ಇನ್ನೂ ಬೇಕಾದಷ್ಟು ಹಾಡುಗಳಿಗೆ, ದೃಶ್ಯಗಳಿವೆ ಬರೆಯೋಕೆ.. ಅಣ್ಣಾವ್ರ ಬಗ್ಗೆ ಬರೆಯೋದು ಅಂದರೆ ಸಾಗದ ನೀರನ್ನು ಹಿಡಿದಂತೆ.. ಅಸಾಧ್ಯವೂ ಹೌದು, ಅಗಾಧವೂ ಹೌದು..

ಅಣ್ಣಾವ್ರೇ ಜನುಮದಿನದ ಶುಭಾಶಯಗಳು ನಿಮಗೆ... ನೀವು ನಮ್ಮ ಮನದಲ್ಲಿ ಸದಾ ಸದಾ.. !!!

2 comments:

  1. ಕನ್ನಡದ ಕಣ್ಮಣಿಗೆ ಜನುಮ ದಿನದ ಶುಭಾಶಯಗಳು.
    ತಾವು ಆರಿಸಿಕೊಂಡ ವಿಷಯವು ವಿಭಿನ್ನವಾಗಿದ್ದು ಖುಷಿಕೊಟ್ಟಿತ್ತು.
    'ಎಂದೂ ನಿನ್ನ ನೋಡುವೆ' ನನ್ನ ನೆಚ್ಚಿನ ಗೀತೆ ಶ್ರೀಮಾನ್.

    ReplyDelete
  2. ಶ್ರೀ, ನಮ್ಮ ಅಣ್ಣೋವ್ರು ನಮ್ಮ ಹೆಮ್ಮೆ. ನನ್ನ ಬಹಳ ಇಷ್ಟದ ಹಾಡುಗಳೆಲ್ಲ ನಿಮ್ಮ ಈ ಬ್ಲಾಗ ಬರಹದಲ್ಲಿದೆ. ನನ್ನ ಜನ್ಮದಲ್ಲಿ ನಾ ಕಂಡ ಅತ್ಯದ್ಭುತ ನಟ ಡಾ. ರಾಜ್. ಅದೆಷ್ಟೋ ಸಲ / ಸಂದರ್ಭಗಳಲ್ಲಿ ಈ ಹಾಡ್ಗಳ ಸಾಲುಗಳನ್ನ ನೆನೆಸಿಕೂಂಡಿದ್ದು ಇದೆ. ಹೀಗೆ ನೆನೆಸಿಕೊಳ್ಳುವ ಹಾಡುಗಳ ಸಾಲಿನಲ್ಲಿ :
    * ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
    * ಬೊಂಬೆಯಾಟವಯ್ಯ
    * ಬಾಳುವಂತ ಹೂವೆ ಬಾಡುವಾಸೆ ಏಕೆ
    * ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ
    * ವಿಧಿ ಬರಹ ಎಂಥ ಘೋರ
    ಹೀಗೆ ಹೇಳ್ತಾ ಹೋದ್ರೆ ಅದೆಷ್ಟೋ ಹಾಡುಗಳು!! ಕನ್ನಡಕ್ಕೆ ಒಬ್ಬರೇ ವರನಟ - ಬೇರೆ ಮಾತಿಲ್ಲ!!! ಹ್ಯಾಪಿ ಬರ್ತಡೇ ಅಣ್ಣೋವ್ರಿಗೆ!!

    ReplyDelete