Friday, April 12, 2019

ಅಣ್ಣಾವ್ರ ಪುಣ್ಯ ದಿನ - 2019


.. ಎಲ್ಲರ ಗಮನ ಅಣ್ಣಾವ್ರ ಮನೆಯತ್ತ ನೆಟ್ಟಿತ್ತು.. ಅವರು ಬಾರದ ಲೋಕಕ್ಕೆ ಹೋಗಿ ಹಲವಾರು ವರ್ಷಗಳಾಗಿದ್ದರೂ.. ಅಭಿಮಾನ ಒಂದು ತುಸು ಗ್ರಾಮ್ ಕೂಡ ಕಡಿಮೆಯಾಗಿರಲಿಲ್ಲ.. 

ಅಣ್ಣಾವ್ರು ಸ್ವರ್ಗಲೋಕದಿಂದಲೇ.. ತಮ್ಮ ನೆಚ್ಚಿನ ಕರುನಾಡನ್ನು ನೋಡುತ್ತಿದ್ದರು.. ಬೆಳಗಿನ ಯೋಗಾಸನ ಮುಗಿದಿತ್ತು.. ವೃತ್ತ ಪತ್ರಿಕೆಯನ್ನು ಗಮನವಿಟ್ಟು ಓದುತ್ತಿದ್ದರು.. 

"ನಮಸ್ಕಾರ ಅಣ್ಣಾವ್ರೇ.. "

ಗಂಧರ್ವನೊಬ್ಬನ ಮಾತಿನಿಂದ ಆ ಕಡೆ ಗಮನ ನೀಡಿದರು.. 

"ಓ ಬನ್ನಿ ಬನ್ನಿ ಹೇಗಿದ್ದೀರಾ... ?"

"ಅಣ್ಣಾವ್ರೇ  ನೀವು ಇಲ್ಲಿ ಇರುವಾಗ ನಾವು ಸದಾ ಸೌಖ್ಯವೇ ಅಲ್ಲವೇ .. ಒಂದು ಮಾತು ಕೇಳಬೇಕಿತ್ತು.. !"

"ಕೇಳಿಪ್ಪಾ"

"ನಿಮ್ಮ ಬಹುತೇಕ ಚಿತ್ರಗಳಿಗೆ ಶ್ರೀ ಚಿ. ಉದಯಶಂಕರ್ ಅವರ ಸಾಹಿತ್ಯ, ಸಂಭಾಷಣೆ ಇರುತ್ತಿತ್ತು..ಹಾಗಾಗಿ ಸಂಭಾಷಣೆಗಳು ಹಾಡುಗಳು ಮನದಲ್ಲಿಯೇ ನಿಂತು ಬಿಡುತ್ತಿತ್ತು.. ನನ್ನ ಪ್ರಶ್ನೆ.. ಅಭಿನಯಕ್ಕೆ ನಿಮಗೆ ನೀವೇ ಸರಿ ಸಾಟಿ.. ಅದರ ಬಗ್ಗೆ ಮಾತಿಲ್ಲ.. ಭಾವಕ್ಕೆ ತಕ್ಕ ಹಾಗೆ ಬದಲಾಗುವ ನಿಮ್ಮ ಭಾವ ಭಂಗಿ, ಸಂಭಾಷಣೆಯ ಉಚ್ಚಾರ ಅದರ ಬಗ್ಗೆ ಏನೂ ಹೇಳುವ ಅಗತ್ಯವೇ ಇಲ್ಲ.. ನನ್ನ ಎರಡು ಪ್ರಶ್ನೆಗಳು

೧) "ನೀವು ಸಂಭಾಷಣೆ ಹೇಳುವ ಶೈಲಿ ಯಾರಿಗೆ ಆದರೂ ಇಷ್ಟವಾಗುತ್ತದೆ .. ಅಲ್ಪ ಪ್ರಾಣ, ಮಹಾಪ್ರಾಣ ಎಲ್ಲಿ ನಿಲ್ಲಿಸುವುದು.. ಎಲ್ಲಿಂದ ಆರಂಭಿಸೋದು..   ಇದೆಲ್ಲ ಸರಿ.. ಆದರೆ ಆ ಸಂಭಾಷಣೆಯಲ್ಲಿನ ಏರಿಳಿತ.. ಅದು ಹೇಗೆ ಕರಗತವಾಯಿತು?"

೨) "ಸಂಭಾಷಣೆಗೆ ಅಭಿನಯಿಸುವಾಗ.. ನಿಮ್ಮ ಮುಖಭಾವ.. ಆಂಗೀಕ ಅಭಿನಯ.. ಉದಾಹರಣೆಗೆ ಮಯೂರ ಚಿತ್ರದಲ್ಲಿ ನಿಮ್ಮ ಬಗ್ಗೆ ಹೇಳಿದಾಗ, ಆಸ್ಥಾನದಲ್ಲಿ ನೆಡೆವ ವಾಕ್ ಯುದ್ಧ, ಭಕ್ತ ಪ್ರಹ್ಲಾದ ಚಿತ್ರದ ಸುಮಾರು ಎರಡೂವರೆ ನಿಮಿಷದ ಸಂಭಾಷಣೆ.. ಹೀಗೆ ಹಲವಾರು ಚಿತ್ರಗಳಲ್ಲಿ ಮನದಲ್ಲಿ ಉಳಿಯುವ ದೃಶ್ಯಗಳು ಇದರ ಬಗ್ಗೆ ಹೇಳಿ.. !"

"ಏನೂ ಗಂಧರ್ವ ಮಹಾರಾಜರೇ... ಒಂದೇ ಮಾತು ಅಂತ ಇಡೀ ಭೂಮಂಡಲವನ್ನೇ ಹೊರವಂತಹ ಪ್ರಶ್ನೆ ಕೇಳಿದ್ದೀರಾ.. ಇರಲಿ ಈ ನಿಮ್ಮ ರಾಜಕುಮಾರನಿಗೆ ತಿಳಿದಷ್ಟು ಹೇಳುತ್ತೇನೆ.. "

ಮೊದಲ ಪ್ರಶ್ನೆ: ನಮ್ಮ ಸಹಾಯಕ ನಿರ್ದೇಶಕರು, ನಿರ್ದೇಶಕರು, ನಮ್ಮ ಸಾಹಿತಿಗಳು, ನನ್ನ ತಮ್ಮಾ ವರದಪ್ಪ ಇವರೆಲ್ಲ ಕತೆ, ಸಂಭಾಷಣೆಗೆ ಒತ್ತುಕೊಟ್ಟು... ಅದರ ಬಗ್ಗೆ ಚರ್ಚಿಸಿ ಚಿತ್ರೀಕರಣಕ್ಕೆ ಬರುವ ಹೊತ್ತಿಗೆ ದೃಶ್ಯಗಳು ನನ್ನ ತಲೆಯಲ್ಲಿ ಕೂರುವಷ್ಟು ಪ್ರಭಾವ ಬೀರುತ್ತಿದ್ದರು.. ಸೆಟ್ಟಿನಲ್ಲಿ ಆಕ್ಷನ್ ಅಂದಾಗ ನನಗೆ ಅದನ್ನು ಒಪ್ಪಿಸುವಷ್ಟೇ ತಲೆಯಲ್ಲಿ ಇರುತ್ತಿದ್ದದು.. ನಾಟಕದಲ್ಲಿ ಅಭಿನಯಿಸುತ್ತಿದ್ದರಿಂದ, ಮತ್ತು ನನ್ನ ಅಪ್ಪಾಜಿಯ ಕಲೆ ನನಗೂ ಒಂದು ಚೂರು ಬಂದದ್ದರಿಂದ.. ಸಂಭಾಷಣೆಯ ಏರಿಳಿತಗಳು.. ಮೇಲೆ ಹೇಳಿದ ನಮ್ಮ ಚಿತ್ರತಂಡದಲ್ಲಿದ್ದವರ ಸಹಾಯ ಸೂಚನೆಗಳಂತೆ ಅಭಿನಯಿಸುತ್ತಿದ್ದೆ.. ಅದರ ಶ್ರೇಯಸ್ಸು ಅವರಿಗೆ.. ಸಲ್ಲಬೇಕು 

ಇನ್ನೂ ಎರಡನೇ ಪ್ರಶ್ನೆ.. ಈ ಮಾತಿಗೆ, ಈ ಅಭಿನಯಕ್ಕೆ. ನೀವು ಹೀಗೆ ಮಾಡಿದರೆ ಚೆನ್ನಾ ಎಂದು ನಿರ್ದೇಶಕರು ಮನ ಮುಟ್ಟುವ ಹಾಗೆ ಹೇಳುತ್ತಿದ್ದರು.. ಅಪ್ಪಾಜಿಯವರ ಅನೇಕ ನಾಟಕದಲ್ಲಿನ ಅಭಿನಯದ ದೃಶ್ಯಗಳು ನನ್ನ ಕಣ್ಣ ಮುಂದೆ ಹಾಗೆ ಬಂದು ಬಿಡುತ್ತಿತ್ತು.. ಅಥವಾ ಅಪ್ಪಾಜಿಯವರೇ ನನ್ನೊಳಗೆ ನುಗ್ಗಿ ಬಿಡುತ್ತಿದ್ದರು .. ಹಾಗಾಗಿ ಒಳಗಿಂದ ಅವರು ಅಭಿನಯಿಸಿ ತೋರಿಸುತ್ತಿದ್ದದ್ದನ್ನು ನಾ ಹೊರಗೆ ಹಾಕುತ್ತಿದ್ದೆ.. ನನ್ನ ಅಭಿನಯ ನಿಮಗೆಲ್ಲ ಇಷ್ಟವಾಗಿದೆ ಅಂದರೆ ನನ್ನ ಅಪ್ಪಾಜಿ, ನನ್ನ ನಿರ್ದೇಶಕರು, ಚಿತ್ರ ತಂಡ ಕಾರಣ"


"ಅಣ್ಣಾವ್ರೇ ಕರುನಾಡಿನಲ್ಲಿಯೇ ಅಲ್ಲ, ಚಿತ್ರಜಗತ್ತಿನಲ್ಲಿಯೇ ನಿಮ್ಮ ಅಭಿನಯ, ನಿಮ್ಮ ವ್ಯಕ್ತಿತ್ವವನ್ನು ಮೀರಿಸುವ ಇನ್ನೊಬ್ಬ ಕಲಾವಿದ ಇಲ್ಲ ಅಂತ ಎಲ್ಲರೂ ಹೇಳುತ್ತಿದ್ದರು.. ನಿಮ್ಮಲ್ಲಿ ಅಹಂ ಕಾಣಲಿಲ್ಲ, ನಾನೇ ದೊಡ್ಡವ ಅನ್ನುವ ಭಾವ ಕಾಡಲಿಲ್ಲ.. ಸಂತರ ತರಹ ಇರಲು ನಿಮಗೆ ಹೇಗೆ ಸಹಾಯವಾಯಿತು. "

ಅವರ ಶೈಲಿಯಲ್ಲಿ ನಗುತ್ತ "ಅಲ್ಲಾ ರೀ ಒಂದೇ ಮಾತು ಅಂತ ಎರಡು ಪ್ರಶ್ನೆ ಆಯ್ತು.. ಈಗ ಮೂರನೇ ಪ್ರಶ್ನೆಯೇ.. ಇರಲಿ... ನೋಡಿ ನನಗೆ ಅಪ್ಪಾಜಿ ಹೇಳಿಕೊಟ್ಟ ಪಾಠದಲ್ಲಿ ಮೊದಲನೆಯದು.. ನಿನ್ನ ಭುಜದ ಮೇಲೆ ತಲೆ ಇರಬೇಕೆ ಹೊರತು.. ನಿನ್ನ ತಲೆ ಇಡೀ ಭುಜವನ್ನು ಹೊತ್ತಿದೆ ಎನ್ನುವ ಭಾವ ಯಾವತ್ತೂ ತಲೆಗೆ ಹೋಗಬಾರದು.. ಅದನ್ನು ನೋಡಿಕೊಂಡರೆ ಸಾಕು ಜಗತ್ತನ್ನು ಗೆದ್ದನಂತೆಯೇ"

ಗಂಧರ್ವನ ಬಾಯಿ ಕಟ್ಟಿ ಹಾಕಿದಾಗೆ ಆಯ್ತು.. ಮಾತಿಲ್ಲ.. ಬೇಕಾದ ಉತ್ತರಗಳ ರಾಶಿಯೇ ಅವರ ಮಡಿಲಲ್ಲಿ ಇತ್ತು.. ಅದಕೆ ಬೇಕಾದ ಪ್ರಶ್ನೆಗಳನ್ನು ಹೊಂದಿಸಬೇಕಿತ್ತು ಅಷ್ಟೇ.. 

ಇಬ್ಬರೂ ನಗುತ್ತ ತಮ್ಮ ತಮ್ಮ ದಾರಿ ಹಿಡಿದು ಸ್ವರ್ಗದಲ್ಲಿ ಹೆಜ್ಜೆ ಹಾಕುತ್ತಾ ಹೋದರು.. !!!

ಹೌದು ಅಣ್ಣಾವ್ರು ದೈಹಿಕವಾಗಿ ನಮ್ಮನ್ನು ಆಗಲಿ ಹಲವಾರು ವರ್ಷಗಳೇ ಕಳೆದರು.. ಅವರು ಇಂದಿಗೂ, ಎಂದಿಗೂ ಚಿತ್ರರಸಿಕರ ಮನದಲ್ಲಿ ಜೀವಂತ... !!

ಅಣ್ಣಾವ್ರ ಪುಣ್ಯ ದಿನದಂದು ಅವರಿಗೆ ಮತ್ತು ಅವರು ನಂಬಿಕೊಂಡು ಆಚರಿಸುತ್ತಿದ್ದ ಭಾವಗಳಿಗೆ ಒಂದು ನಮನ.. !!!




2 comments:

  1. ಅಣ್ಣವ್ರ ಬಗೆಗೆ ಹಳೆ ತಲಮಾರಿನ ತಂತ್ರಜ್ಞರು ಹೇಳುತ್ತಿದ್ದ ಕೆಲವು ಮಾತುಗಳು:
    ಛಾಯಾಗ್ರಾಹಕ ಎಲ್ಲೆಲ್ಲಿ lighting ಮಾಡಿದ್ದಾನೆ, ಕ್ಯಾಮರ ಕೋನ, lens ನಂಬರ್ ಹೇಗಿದೆ ಎಂಬುದನ್ನು ಕಣ್ಣಂಚಲೇ ಅರಿತುಕೊಂಡು body language ಒಗ್ಗಿಸಿಕೊಳ್ಳುತ್ತಿದ್ದರು.

    ಅಭಿನಯವೆಂದರೆ ದೇಹದ ಚಲನೆ, ಸಂಭಾಷಣೆಯ ಒಪ್ಪಿಸುವಿಕೆ ಅಷ್ಟೇ ಅಲ್ಲ ಅದು ಕಣ್ಣುಗಳ ಮೂಲಕವೂ ಸಹಜವಾಗಿ ಸೂಸಬೇಕು ಎಂಬುದನ್ನು ಸಾಧಿಸಿ ತೋರಿದವರು.

    Playback recordingನಲ್ಲಿ ಅದೆಷ್ಟೇ ಭಾವನೆಗಳನ್ನು ಪೇರಿಸಿ ಹಾಡಿದ್ದರೂ, ಹಾಡುಗಳನ್ನು ಅಭಿನಯಿಸುವಾಗ ತುಸು suppressed ಮುಖ ಭಾವವನ್ನು ತಂದುಕೊಳ್ಳುತಿದ್ದದ್ದು.

    ಭಗವಂತ, ಬರೆಯುತ್ತ ಹೋದರೆ...

    ಇರಲಿ, ಅಣ್ಣಾವ್ರು ಮನದಲ್ಲಿ ಚಿರಾಯು...

    ReplyDelete
    Replies
    1. ಧನ್ಯವಾದಗಳು ಬದರಿ ಸರ್.. ಅಣ್ಣಾವ್ರು ಅಕ್ಷಯ ಪಾತ್ರೆ .. ಮೊಗೆದಷ್ಟು ಬರುತ್ತಲೇ ಇರುತ್ತದೆ ಸುಂದರ
      ಪ್ರತಿಕ್ರಿಯೆ

      Delete