Sunday, November 25, 2018

ಅಜಾತಶತ್ರು .. ಸ್ನೇಹಮಯ ಅಂಬಿ ಅಜರಾಮರ

ಎಂಭತ್ತರ ದಶಕದ ಆರಂಭ.. ಆಗ ನಮ್ಮ ಮನೆ ತ್ಯಾಗರಾಜನಗರದದಲ್ಲಿ.. ನನ್ನ ಅಣ್ಣ ಇವರ  ದೊಡ್ಡ ಅಭಿಮಾನಿ.. ನಮಗೆ ಚಿತ್ರಗಳು ನೋಡುವುದೆಂದರೆ ಒಂದು ಹಬ್ಬ ಅನ್ನುವ ಪರಿಸ್ಥಿತಿ...

ಒಂದು ದಿನ ಅಣ್ಣ ಮನೆಗೆ ದೊಡ್ಡ ಪೇಪರ್ ತಂದು.. ಅದರಲ್ಲಿ ಇವರ ಅನೇಕ ಪುಟ್ಟ ಪುಟ್ಟ ಚಿತ್ರಗಳನ್ನು ತಂದು. ಅಂಟಿಸುತ್ತಿದ್ದ.. ಬಾಲ್ಯ ಸಹಜ ಕುತೂಹಲ.. ನಾವು ಕೈ ಹಾಕಿದೆವು.. ಜಾಕೆಟಿನಲ್ಲಿ, ಜರ್ಕಿನಲ್ಲಿ, ಜೀನ್ಸ್ ಪ್ಯಾಂಟ್, ಕಪ್ಪು ಕನ್ನಡಕ, ತಲೆಗೆ ಟೋಪಿ, ಗಜೇಂದ್ರ ಚಿತ್ರದ ಒಂದು ಪ್ಲಾಸ್ಟಿಕ್ ಬ್ಯಾರೆಲ್ ಎತ್ತಿ ಹಿಡಿದ ಚಿತ್ರ.. ಹೀಗೆ ತರಹಾವರಿ ಚಿತ್ರಗಳನ್ನು ಅಂಟಿಸಿದ ಒಂದು ಪೋಸ್ಟರ್ ಸಿದ್ಧಪಡಿಸಿದ ಅವನು ಮತ್ತು ಅವನ ಗೆಳೆಯರು.. ಆಮೇಲೆ ಒಂದು ಥೀಯೇಟರ್ ನಲ್ಲಿ ಹಾಕಿದರು ಎಂದು ಹೇಳಿದ..  ಅದು ಬೇರೆ ವಿಷಯ.. ಆದರೆ ಜನರನ್ನು ಅಭಿಮಾನಿಗಳನ್ನಾಗಿ ಮಾಡಿದ ನಟ ಇವರು ಎಂದು ಹೇಳಲು ಇಷ್ಟಪಡುತ್ತೇನೆ.. ಆರು

ಇಮೇಜ್,  ಸ್ಟಾರ್ ಗಿರಿ, ಹಿರಿತನ, ಪಾತ್ರ ದೊಡ್ಡದು ಚಿಕ್ಕದು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ, ತನಗೆ ತೋಚಿದಂತೆ ಪಾತ್ರಕ್ಕೆ ನ್ಯಾಯ ಸಲ್ಲಿಸಿ ರೆಬಲ್ ಸ್ಟಾರ್ ಎಂಬ ಬಿರುದು ಪಡೆದ ನಟ..

ಮಠ ಚಿತ್ರ.. ಸಾಧುಕೋಕಿಲ ನಿರ್ಮಾಪಕರಿಗೆ ಕತೆ ಹೇಳುತ್ತಿರುತ್ತಾರೆ.. ಮಹಾಭಾರತವನ್ನು ಈಗಿನ ಕಾಲಕ್ಕೆ ಹೊಂದಿಸುವ ಕತೆ.. ಪಾಂಡವರ, ಕೌರವರ ಪಾತ್ರಕ್ಕೆ ಈ ಈ ನಟರನ್ನು ಆಯ್ಕೆ ಮಾಡೋಣ ಅಂತ ಹೇಳುತ್ತಾರೆ.. ಆಗ ಅಲ್ಲಿದ್ದ ಒಬ್ಬ ಅಣ್ಣ ಕರ್ಣ ಪಾತ್ರ  ಯಾರು ಮಾಡುತ್ತಾರೆ ಎಂದಾಗ..

"ಅಯ್ಯೋ ನಿನ್ನ ಯೋಗ್ಯತೆಗೆ ಬೆಂಕಿ ಹಾಕ.. ಇಂಡಸ್ಟ್ರಿನಲ್ಲಿ ಎಷ್ಟು ವರ್ಷದಿಂದ ಇದ್ದೀಯ.. "ಕರ್ನಾಟಕದ ಕರ್ಣ ಯಾರು "ಅಂಬರೀಷ್"  ಎಂದು ಸಾಧುಕೋಕಿಲ ಹೇಳುತ್ತಾರೆ.. ಇದೊಂದು ಮಾತು ಅಂಬರೀಷ್  ಅವರ ಜೀವನದ ಸಾರ್ಥಕತೆಯನ್ನು ಹೇಳುತ್ತದೆ..

ಕಷ್ಟ ಎಂದು ಹೋದವರ್ಯಾರಿಗೂ ಬರಿಗೈಯಲ್ಲಿ ಕಳಿಸಿದ ಉದಾಹರಣೆ ಇಲ್ಲ ಎಂದು ಅವರಿಂದ ಸಹಾಯ ಪಡೆದ ನೂರಾರು ಮಂದಿ ಹೇಳುತ್ತಾರೆ.. ಯಾರಿಗೂ ತಿಳಿಯದೆ ಸಹಾಯ ಮಾಡಿರೋದು ಅವರಿಗೆ, ಸಹಾಯ ಪಡೆದವರಿಗೆ ಮತ್ತು ಆ ಭಗವಂತನಿಗೆ ಗೊತ್ತು..

ಪುಟ್ಟ ಹನಿ ಜಿನುಗಿ ಮುಂದೆ ಅದೇ ಹೊನಲಾಗಿ, ಝರಿಯಾಗಿ, ತೊರೆಯಾಗಿ, ನದಿಯಾಗಿ, ಸಾಗರವಾಗುವಂತೆ, ಮೈಲಿಗಲ್ಲು ಚಿತ್ರ ನಾಗರಹಾವು ಚಿತ್ರದ ಒಂದೆರಡು ದೃಶ್ಯಗಳಲ್ಲಿ ಬರುವ ಜಲೀಲ ಪಾತ್ರದಿಂದ ಬೆಳೆಯುತ್ತ ಹೋದ ಪರಿ ಅಚ್ಚರಿಯಾಗುತ್ತದೆ.

ಅವರ ಸ್ನೇಹಪರತೆ, ವಿಷ್ಣುವಿನ ಜೊತೆಯ ಅಗಾಧ ಗೆಳೆತನ, ಎಲ್ಲರೊಡನೆ ಬೆರೆಯುವ ಅವರ ಮನೋಭಾವ ಅವರ ಪಾತ್ರಗಳಿಗಿಂತ ಹೆಚ್ಚು ಕಾಡಿದ್ದು ಸುಳ್ಳಲ್ಲ.. ಅವರ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನನ್ನ ಕಾಡುವ ಹತ್ತು ಚಿತ್ರಗಳ ಬಗ್ಗೆ ಒಂದಷ್ಟು ಹೇಳುವೆ..

ನ್ಯೂ ಡೆಲ್ಲಿ
ಪತ್ರಕರ್ತ ತನಗಾದ ನೋವು, ಅವಮಾನ ಮತ್ತು ತನ್ನ ಗೆಳತಿಗಾದ ಅವಮಾನವನ್ನು ತಣ್ಣಗಿನ ಕ್ರೌರ್ಯದಿ ತಣಿಸಿಕೊಳ್ಳುವ ಪಾತ್ರದಲ್ಲಿ ನಿಜಕ್ಕೂ ಮನಕ್ಕೆ ಇಳಿಯುತ್ತಾರೆ.. ಎರಡನೇ ಭಾಗದಲ್ಲಿ ವಿಗ್ ಧರಿಸಿದ್ದರೂ ಮುದ್ದಾಗಿ ಕಾಣುವ ಅಂಬರೀಷ್ ಈ ಚಿತ್ರದ ಜೀವವಾಗಿದ್ದರೆ.  "ಚಂದ್ರಪ್ಪ" ಎನ್ನುವ ಅವರ ರಾಗವಾಗಿ ಹೇಳುವ ದನಿ ಬಲು ಇಷ್ಟ

ಶುಭಮಂಗಳ
ಈ ಶತಮಾನದ ಮಾದರಿ ಹೆಣ್ಣು ಎನ್ನುವ ಹಾಡಿನಲ್ಲಿ ಕುಣಿಯುವ ದೃಶ್ಯ,
ನಾಯಕಿ ಆರತಿಗೆ ಅವಮಾನವಾದಾಗ.. ನಾಯಕಿ ಅಂಬರೀಷ್ ಅವರಿಗೆ ಏನಾಯಿತು ಎಂದು ಮೂಕಭಾಷೆಯಲ್ಲಿ ಹೇಳಿದಾಗ ಅಂಬಿ ಅಭಿನಯ
ಮೂಕನಾದರೂ ಭಾವ ತುಂಬುವ ಆ ಪಾತ್ರ ಚಿತ್ರದುದ್ದಕ್ಕೂ ಕಾಡುತ್ತದೆ.

ಪಡುವಾರಹಳ್ಳಿ ಪಾಂಡವರು
"ಸಾಹುಕಾರ್ರೆ ನನಗೆ ದುಡ್ಡು ಕೊಡಿ.. ಒಂದು ಚಿನ್ನದ ಸರ ಮಾಡಿಸಿ ಮದುವೆ ಆಯ್ತು ಎನ್ನಿಸಿಬಿಡಿ.. ಸಾಯೊಗಂಟ ನಿಮ್ಮ ಮನೆಯಲ್ಲಿ ನಾನು ಚೆನ್ನೈ ಜೀತ ಮಾಡುತ್ತೀವಿ.. " ಎನ್ನುವಾಗ ಅವರ ಕಣ್ಣಿನಲ್ಲಿ ಕಾಣುವ ಧೈನ್ಯತೆ ಅಬ್ಬಾ.. !
"ನೀವು ಹೋಗದೆ ಇದ್ರೆ ..  ಸಾಹುಕಾರ ಕರಿಯ ಅವರಿಗೆ ಹೊಡಿ ಅಂತಾನೆ, ನಾ ಅವನ ಮನೆ ಉಪ್ಪು ತಿಂದಿದ್ದೀನಿ.. ಆಗೋಲ್ಲ ಅನ್ನೋಕಾಗಲ್ಲ.. ಒಂದೇ ಏಟು.. ಬೇಡಪ್ಪಾ.. ಹೋಗ್ರೋ, ಹೋಗ್ರಣ್ಣ ..." ಎನ್ನುವ ಕಾಳಜಿ..

ರಂಗನಾಯಕಿ
ಏನ್ ಅಪ್ಪಾಜಿ ಎಲ್ಲರೆದುರು ಕೈ ಇದೆ ಅಂತ ಪಟ ಪಟ ಅಂತ ಹೊಡೆದುಬಿಟ್ರಲ್ಲ. .ನಾ ಮಾಡಿದ್ದು ತಪ್ಪು ಅಂದ್ರೆ ಹೇಳಿ.. ಆ ಸಾಹುಕಾರನ ಕಾಲು ಮುಟ್ಟಿ ಕರೆದುಕೊಂಡು ಬರ್ತೀನಿ.. ಎನ್ನುತ್ತಾರೆ.. ಆಗ ರಾಜಾನಂದ್ "ಇಲ್ಲ ಕಣೋ ರಾಮಣ್ಣ ನಾಟಕ ಮಾಡುವವರಿಗೂ ಮರ್ಯಾದೆ ಇದೆ ಅಂತ ಹೇಳೋ ನಿನ್ನಂತ ಲಕ್ಷ ಲಕ್ಷ ರಾಮಣ್ಣ ಇರಬೇಕು ಕಣೋ" ಎಂದಾಗ ಅಂಬಿ ಮೊಗ.. ಸೂಪರ್

ಇಂದ್ರಜಿತ್  
ತನ್ನ ಮೇಲೆ ಆಪಾದನೆ ಹೊರಿಸಿದ ಸಾಕ್ಷಿಯನ್ನು ಕರೆತಂದು ಕಮಿಷನರ್ ಮುಂದೆ ತಳ್ಳಿ "ನನ್ನ ತಲೆಮೇಲೆ ಕೂರಿಸಲು ಪ್ರಯತ್ನ ಪಟ್ಟ ಗೊಂಬೆಯಿದು" ಎಂದು ಹೇಳುವ ಅಂಬರೀಷ್.. ಈ ಚಿತ್ರದುದ್ದಕ್ಕೂ ಸಂಭಾಷಣೆಯಲ್ಲಿ ಗಮನಸೆಳೆಯುತ್ತಾರೆ.. ಈ ಚಿತ್ರ ಅವರ ಚಿತ್ರಜೀವನದಲ್ಲಿ ಒಂದು ತಿರುವು ಕೂಡ.. ಯಶಸ್ಸು ಕಂಡ ಚಿತ್ರವಿದು..

ಮಸಣದ ಹೂವು 
ಯಾಕೆ ಈ ಪಾತ್ರ ಒಪ್ಪಿಕೊಂಡಿರಿ ಎಂದು ಈ ಚಿತ್ರ ನೋಡಿದ ಅಭಿಮಾನಿಗಳು ಕೇಳುವಷ್ಟು ವಿಚಿತ್ರ ಪಾತ್ರವಿದು.. ತಲೆಹಿಡುಕನ ಪಾತ್ರ.. ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾಗ ಈ ಚಿತ್ರ ಗುರುಗಳು ಪುಟ್ಟಣ್ಣನವರು ನೀಡಿದಾಗ ಮರು ಮಾತಿಲ್ಲದೆ ಒಪ್ಪಿಕೊಂಡು ಅಚ್ಚುಕಟ್ಟಾಗಿ ಅಭಿನಯಿಸಿದ್ದರು.. ಈ ಪಾತ್ರಕ್ಕೆ ಪೋಷಕ ಪಾತ್ರ ಪ್ರಶಸ್ತಿ ಸಿಕ್ಕಿತು. ಪುಟ್ಟಣ್ಣನವರು ಚಿತ್ರಿಸಿದ ಇಡೀ ಪಾತ್ರ ಸೊಗಸಾಗಿ ಮೂಡಿಬಂದಿದೆ..

ಅಂತ
ಕುತ್ತೆ ಕನ್ವರ್ ನಹಿ ಕನ್ವರ್ ಲಾಲ್ ಬೋಲೋ ಎನ್ನುವ ಈ ಸಂಭಾಷಣೆ ಪ್ರಸಿದ್ಧಿಯಾಗಿದ್ದು ಅವರು ಹೇಳುವ ಶೈಲಿ ಮತ್ತು ಸಿಗರೇಟಿನ ಹೊಗೆಯನ್ನು ಒಳಗೆ ಎಳೆದುಕೊಂಡು ಕೆಂಡ ಕಾರುವ ಕಣ್ಣುಗಳನ್ನು ದೊಡ್ಡದಾಗಿ ಬಿಡುವ ಆ ಅಭಿನಯ ಚಿತ್ರರಸಿಕರ ಮನದಲ್ಲಿ ಕೂತು ಬಿಟ್ಟಿದೆ.. ಹಿಂಸೆ ಮಾಡಿದಾಗ ಅವರು ಕಿರುಚುವ ಅಭಿನಯ.. ಒಬ್ಬೊಬ್ಬ ಖಳನನ್ನು ಮುಗಿಸುವಾಗ ಅವರ ಮಾತುಗಳು ಸೊಗಸಾಗಿದೆ.. ಈ ಚಿತ್ರ ಹಲವಾರು ಭಾಷೆಯಗಳಲ್ಲಿ ಬಂದರೂ ಅಂಬರೀಷ್ ಅಭಿನಯ ಮುಟ್ಟಲಾಗಿಲ್ಲ..

ಚಕ್ರವ್ಯೂಹ 
ಭಾರತ ಚಿತ್ರರಂಗದ ಮೊದಲ ರಾಜಕೀಯ ಚಿತ್ರವಿದು ಎಂದು ಬಾಲ್ಯದಲ್ಲಿ ಎಲ್ಲೋ ಓದಿದ ನೆನಪು.. ಈ ಚಿತ್ರದಿಂದ ಅವರ ಅಭಿಮಾನಿಗಳ ಬಳಗ ಇನ್ನಷ್ಟು ದೊಡ್ಡದಾಯಿತು.. ಮತ್ತು ಚಿತ್ರರಂಗದ ಒಂದು ಆಸ್ತಿಯಾದರು..

ಹೃದಯ ಹಾಡಿತು
ರೆಬೆಲ್ ಸ್ಟಾರ್ ಬರಿ ಹೊಡೆದಾಟ ಬಡಿದಾಟದ ಸಿನೆಮಾಗಳಲ್ಲಿ ಕಳೆದು ಹೋಗಿದ್ದಾರೆ ಅನ್ನಿಸುವಾಗ ಧುತ್ ಎಂದು ಬಂದ ಚಿತ್ರವಿದು.. ವಿಭಿನ್ನ ಮೇಕಪ್.. ಸುಂದರವಾಗಿ ಇವರನ್ನು ಸೆರೆಹಿಡಿದ ಛಾಯಾಗ್ರಾಹಕ ಗೌರಿಶಂಕರ್ ಇಷ್ಟವಾಗುತ್ತಾರೆ.. ಚಿತ್ರಕ್ಕೋಸ್ಕರ ಒಂದೇ ಒಂದು ಫೈಟ್ ಇದ್ದರೂ ಪೂರ್ತಿ ಕೌಟುಂಬಿಕ ಚಿತ್ರವಿದು..ಸಂಯಮದ ಅಭಿನಯದಲ್ಲಿ ಇಷ್ಟವಾಗುತ್ತಾರೆ..

ಏಳು ಸುತ್ತಿನ ಕೋಟೆ 
ಛಾಯಾಗ್ರಾಹಕ ಗೌರಿಶಂಕರ್ ನಿರ್ದೇಶಿಸಿದ ಈ ಚಿತ್ರ ಯಶಸ್ಸಾಗಲಿಲ್ಲ ಆದರೆ ಕತೆ, ಚಿತ್ರಕತೆ ಮತ್ತು ಅಂಬರೀಷ್ ಅಭಿನಯ ಅದ್ಭುತವಾಗಿದೆ.. ಕೋಪದ ಭರದಲ್ಲಿ ಮಾಡಿದ ಒಂದು ತಪ್ಪು ಅವರನ್ನು ಕಾಡುವ ಪರಿ ಜೊತೆಯಲ್ಲಿ ಅದನ್ನು ವ್ಯಕ್ತ ಪಡಿಸುವ ರೀತಿ ಅಮೋಘವಾಗಿದೆ.. ಹಾಡುಗಳು, ಅಭಿನಯ ಎಲ್ಲವೂ ಸೊಗಸು..

ಇಲ್ಲಿ ಪರಿಗಣಿಸದ ಚಿತ್ರಗಳು ನನ್ನ ಮನ ಮುಟ್ಟಿದ ಕೆಲವು ಚಿತ್ರಗಳು.. ಆದರೆ ಅವರು ಅಭಿನಯಿಸಿದ ಅಷ್ಟೂ ಚಿತ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅವರ ತಾಕತ್ತು ತೋರಿಸಿದ್ದಾರೆ.. ಯಾರಿಗೂ ಹೆದರದೆ, ಯಾರಿಗೂ ಬಗ್ಗದೆ,, ಆದರೆ ವಿನಯ ಬಿಟ್ಟು ಹೋಗದೆ, ಮಾತು ಬಿರುಸಾದರೂ ಹೃದಯವಂತ ಜೀವಿ ಅಂಬರೀಷ್..

ಅವರ ಮಿತಿ ಅವರಿಗೆ ಗೊತ್ತಿತ್ತು ಆದರೂ ಅಭಿನಯದಲ್ಲಿ ಆಹಾ ಎನ್ನಿಸುವಂತೆ ಅಭಿನಯಿಸಿದ್ದಷ್ಟೇ ಅಲ್ಲದೆ, ಎಲ್ಲರ ಸ್ನೇಹಿತನಾಗಿದ್ದರು.. ಇದಕ್ಕೆ ಸಾಕ್ಷಿ ಅಂಬಿ ೬೦:೪೦ ಕಾರ್ಯಕ್ರಮದಲ್ಲಿ ಭಾರತ ಚಿತ್ರರಂಗದ ದಿಗ್ಗಜರೆಲ್ಲಾ ವೇದಿಕೆಬಂದಿದ್ದು..

ಅವರ ನಿರ್ಮಾಪಕರಿಗೆ, ನಿರ್ದೇಶಕರಿಗೆ ಯಾವತ್ತೂ ತೊಂದರೆಯಾಗದಂತೆ ನೋಡಿಕೊಂಡ ಅಪರೂಪದ ನಟ ಇವರು.

ಎಲ್ಲರಿಗೂ ಒಂದು ಆಸೆ ಇರುತ್ತೆ.. ನಾವಿಲ್ಲದೆ ಇದ್ದಾಗ ನಮ್ಮ ಬಗ್ಗೆ ಜನರ ಅಭಿಪ್ರಾಯ ಹೇಗಿರುತ್ತೆ ಅಂತ.. ಇದು ನಿಜವಾಗಿದ್ದು ಕೆಲವು ವರ್ಷಗಳ ಹಿಂದೆ.. ಆರೋಗ್ಯ ಹದಗೆಟ್ಟಿದ್ದಾಗ ಚಿಕಿತ್ಸೆ ತೆಗೆದುಕೊಳ್ಳುವ ಸಮಯದಲ್ಲಿ ಕಾಲಯಮನೊಡನೆ ಹೋರಾಡಿ ಬಂಡ ಸಂಧರ್ಭ ದೃಶ್ಯ ಮಾಧ್ಯಮ, ಪತ್ರಿಕೆ ಎಲ್ಲದರಲ್ಲೂ ಅವರ ಬಗ್ಗೆ ಬಂದಿದ್ದನ್ನು ಅವರು ಹುಷಾರಾಗಿ ಬಂದ ಮೇಲೆ ಅವರೇ ಹೇಳಿದ್ದು "ನಾ ಹೋದ ಮೇಲೆ ನನ್ನ ಮೇಲಿನ ಅಭಿಮಾನ ಹೇಗಿರುತ್ತೆ ಅಂತ ಜೀವಂತವಾಗಿದ್ದಾಗಲೇ ನೋಡಿ ಮನತುಂಬಿ ಬಂತು"

ಅವರ ಕಾಲಘಟ್ಟದ ಎಲ್ಲಾ ನಂತರ ಜೊತೆ ಅಭಿನಯಿಸಿದ್ದ ನಟ.. ನಂತರ ಬದಲಾದ ಕಾಲಮಾನದಲ್ಲಿಯೂ ಕಿರಿಯ ನಟರ ಜೊತೆಯಲ್ಲಿಯೂ ಅದೇ ರೀತಿ ಅಭಿನಯಿಸಿ ಎಲ್ಲರೊಡನೆ ಒಂದಾಗಿದ್ದು ಅವರ ಹೆಗ್ಗಳಿಕೆ.. 

ನಟರಾಗಿ, ಸ್ನೇಹಿತನಾಗಿ, ಎಲ್ಲರ ಜೊತೆ ಬೆರೆಯುವ ಹಿರಿಯನಾಗಿ ಚಿತ್ರರಂಗಕ್ಕೆ ಒಂದು ಶಕ್ತಿಯಾಗಿದ್ದ ಅಂಬರೀಷ್ ಧ್ರುವತಾರೆಯಾಗಿದ್ದಾರೆ.. ಅವರ ಚಿತ್ರಗಳಲ್ಲಿ, ಅವರ ಅಭಿನಯದಲ್ಲಿ, ಅವರ ಮಾತುಗಳಲ್ಲಿ ಸದಾ ಅಮರ.. !!!

ಪುಟ್ಟಣ್ಣ ಕಣಗಾಲ್ ಕುಲುಮೆಯಲ್ಲಿ ಎದ್ದು ಬಂದ ಚಿನ್ನ ತಾಯಿ ಭುವನೇಶ್ವರಿ ಕೊರಳಿನಲ್ಲಿ ಆಭರಣವಾಗಿದ್ದರೆ!!!
ಅಜಾತಶತ್ರು .. ಸ್ನೇಹಮಯ ಅಂಬಿ ಅಜರಾಮರ


14 comments:

  1. ಉತ್ತಮ ಬರಹ...ಮಾತುಗಳು ಬರುತ್ತಿಲ್ಲ...ಶೂನ್ಯಭಾವ ಆವರಿಸಿದೆ...

    ReplyDelete
    Replies
    1. ಅಂಬಿ ಮರೆಯಲಾಗದ ಜೀವ.. ಸದಾ ಅಮರ

      Delete
  2. ಶ್ರೀ ಬಹಳ ಮನಮುಟ್ಟುವಂತಿದೆ ಅಂಬಿಗೆ ಬರೆದ ಶ್ರದ್ಧಾಂಜಲಿ...
    ಚಿತ್ರರಂಗ ಈಗ ಸೌಂಡ್ ಬಾಕ್ಸ್ ಇಲ್ಲದ ಥಿಯೇಟರ್‌ನ ಹಾಗೆ ಆಗಿಬಿಟ್ಟಿದೆ.

    ReplyDelete
    Replies
    1. ಅಂಬಿ ತಾಕತ್ತು ಅಂದ್ರೆ ಧೈರ್ಯ... ಆ ಜಾಗಕ್ಕೆ ಬರುವ ಸಾಧಕ ಆ ರೀತಿಯ ಗಟ್ಟಿ ಮನಸ್ಸು ಇರೋದು ಕಷ್ಟಸಾಧ್ಯ

      Delete
  3. ಹೌದು ಶ್ರೀ.. ನಿಜವಾಗಿಯೂ ತುಂಬಾಲಾರದ ನಷ್ಟ.ನಮ್ಮ ಚಿತ್ರ ರಂಗ ಹಳೆಯ ನಟರೇಲ್ಲಾರನ್ನೂ ಕಳೆದು ಕೊಳ್ಳುತ್ತಿದೆ.ಇನ್ನೂಬ್ಬ ರಾಜ್ ವಿಷ್ಣು ಅಂಬಿ ಬರಲು ಅಸಾಧ್ಯ....

    ReplyDelete
    Replies
    1. ಅಂಭಿಯಂತಹ ನಟ ಬರಬಹುದು ಆದರೆ ಆ ರೀತಿಯ ಸಹೃದಯ ಇರುವ ಮನುಷ್ಯ ಬರಲು ಅಸಾಧ್ಯ..

      ರಾಜ್ ವಿಷ್ಣು ಅಂಬಿ ಮಹಾನ್ ನಟರು.. ಕನ್ನಡ ಚಿತ್ರರಂಗದ ಆಧಾರ ಕಂಭಗಳಾಗಿದ್ದರು

      Delete
  4. ಸರಳ ಬರಹ ಬರವಣಿಗೆಯ ಬಗ್ಗೆ ಹೇಳಲು ಸಾಧ್ಯವಿಲ್ಲ
    ಕನ್ನಡ ಚಿತ್ರರಂಗಕ್ಕೆ ಬರಿಸಲಾಗದ ನಷ್ಟ ಅಂಬಿ ಅವರು ತಮ್ಮದೇ ಧಾಟಿಯಲ್ಲಿ ಬೆಳೆದು ನಿಂತರು ಅವರು ಇನ್ನಿಲ್ಲ ಎಂಬುದು ನಮ್ಮ ಕನ್ನಡ ಚಿತ್ರ ರಂಗಕ್ಕೆ ಬರಸಿಡಿಲು ಅಪ್ಪಳಿಸಿದ ಹಾಗಾಗಿದೆ ಬಡವಾಯ್ತ ಸ್ಯಾಂಡಲ್ ವುಂಡ್

    ReplyDelete
    Replies
    1. ಹೌದು ಕಣೋ. .. ಆರೋಗ್ಯದ ವಿವರಣೆ ಏನೇ ಇರಲಿ... ಅಂಬಿ ಇಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳೋದು ಕಷ್ಟ

      Delete
  5. ಕನ್ನಡ ಚಿತ್ರರಂಗದ ನಿಜವಾದ ಕರ್ಣ, ಚಿತ್ರರಂಗದ ಯಾವುದೇ ಸಮಸ್ಯೆಯನ್ನು ತನ್ನ ಮನೆಯ ಸಮಸ್ಯೆ ಎಂದು ತಿಳಿದು ಬಗೆಹರಿಸುತ್ತಿದ್ದ ನಟ, ಇರುವವರೆಗೂ ಯಾರಿಗೂ ಬಗ್ಗದೇ ಜಗ್ಗದೆ, ಅಂಜದೆ ,ಅಳುಕದೆ, ಕನ್ನಡ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿದ ನಟ ಅವರ ಅಗಲಿಕೆ ನಿಜಕ್ಕೂ ಬಹಳ ಬೇಸರದ ಸಂಗತಿ, ಅವರಿಂದ ತೆರೆಸಿದ ಶೂನ್ಯವನ್ನು ತುಂಬಲು ಸಾದ್ಯವಿಲ್ಲ, ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ. ಓಂ ಶಾಂತಿಃ ಶಾಂತಿಃ ಶಾಂತಿಃ.

    ReplyDelete
    Replies
    1. ಆನೆ ನೆಡದದ್ದೆ ದಾರಿ ಎನ್ನುವ ರೀತಿ ಬದುಕಿದ್ದ ಅಂಬಿ ನಮ್ಮ ಹೃದಯದಲ್ಲಿ ಸದಾ ಅಮರ

      Delete
  6. ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು ನಮ್ಮ ರೆಬೆಲ್��ಡಾ ||ಅಂಬರೀಶ್ ಅವರ ಅಗಲಿಕೆ ನಿಜವಾಗಿ ತುಂಬಲಾರದ ನಷ್ಟ ಆ ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ ಮತ್ತು ಅವರ ಶ್ರೀಮತಿ ಸುಮಲತಾ, ಪುತ್ರ ಅಭಿಶೇಕ್ ಗೆ ಈ ನೋವನ್ನು ಸಹಿಸುವ ಧೈರ್ಯ ಕೊಡಲಿ... ಇನ್ನೆಲ್ಲಿ ಕುಚಿಕು.

    ReplyDelete
    Replies
    1. ಸ್ನೇಹಕ್ಕೆ ಇನ್ನೊಂದು ಹೆಸರಾಗಿದ್ದ ನಟ.. ಪ್ರಪಂಚದ ಯಾವ ಮೂಲೆಯಲ್ಲಿ ಕೂಡ ಸ್ನೇಹಿತರ ಬಳಗ ಕಟ್ಟಿಕೊಂಡ ಮನುಷ್ಯ.. ಅಂಬಿ ಸದಾ ಅಮರ

      Delete
  7. Gurugale.. chenagi bardideera... nija.. thumbalarada nasta...

    ReplyDelete
    Replies
    1. ಅಂಬಿ ಬಗ್ಗೆ ಬರೆದಷ್ಟು ವಿಷಯಗಳು ಬರುತ್ತವೆ.. ಸಿನಿಮಾ, ರಾಜಕೀಯ, ಅವರ ನಿಸ್ವಾರ್ಥ ಸೇವೆ, ಸ್ನೇಹಪರ ಮನಸ್ಸು ಎಲ್ಲವೂ ನೆನಪುಗಳು

      Delete