Wednesday, November 21, 2018

ಮನದ ಮೊಂಡು ಕೋಣವನ್ನು ಅಡಗಿಸುವ ಮಹಿಷಾಸುರ ಮರ್ಧಿನಿ (1959) (ಅಣ್ಣಾವ್ರ ಚಿತ್ರ ೧೩ / ೨೦೭)

ಜೀವನದಲ್ಲಿ ಏನೇನೂ ಆಗಿ ಹೋಗುತ್ತದೆ.. ಅತೀವೃಷ್ಟಿಯೂ ಹೌದು ಅನಾವೃಷ್ಟಿಯೂ ಹೌದು.. ಇದ್ಯಾಕೆ ಹೀಗೆ ಹೇಳುತ್ತಿದ್ದೀನಿ ಅಂದ್ರ.. ಕಡೆಯಲ್ಲಿ ಹೇಳುತ್ತೇನೆ.. !

ಪೌರಾಣಿಕ ಸಿನಿಮಾ ಮಾಡುವುದು ಒಂದು ಅದ್ಭುತ ಅನುಭವ.. ಅಣ್ಣಾವ್ರ ಹದಿಮೂರನೇ ಸಿನಿಮಾ ಇದು.. ಇದರಲ್ಲಿ ಸಿಂಹಪಾಲು ಪೌರಾಣಿಕ ಅಥವಾ ಐತಿಹಾಸಿಕ ಚಿತ್ರಗಳೇ ತುಂಬಿಕೊಂಡಿವೆ..

ಕರುನಾಡಿನಲ್ಲಿ ಮಹಿಷಾಸುರ ಅಂದ ಕೂಡಲೇ ಎಲ್ಲರ ಕಣ್ಣು ಓಡುವುದು ಚಾಮುಂಡಿ ಬೆಟ್ಟದಲ್ಲಿರುವ ಆ ಮೂರ್ತಿಯ ಕಡೆಗೆ. ಹೌದು ಅಲ್ಲಿಂದಲೇ ನಮ್ಮ ಬಾಲ್ಯದ ನೆನಪು ಶುರುವಾಗೋದು.. ಅನೇಕ ಬಾರಿ ನೋಡಿದರೂ, ಏನೋ ಒಂದು ರೀತಿಯ ಅವ್ಯಕ್ತ ಸಂತೋಷ ಪ್ರತಿ ಬಾರಿ ನೋಡಿದಾಗಿಯೂ ಅರಿವಾಗುವಂತೆ, ಈ ಚಿತ್ರದ ಕಥೆ ಹೊಸದೇನಲ್ಲ.. ಗೊತ್ತಿರುವುದೇ ಆದರೂ, ಅದನ್ನು ತೆರೆಯ ಮೇಲೆ ತಂದ ವಿಕ್ರಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅನರ್ಘ್ಯ ರತ್ನ ಎಂದೇ ಹೆಸರಾದ ನಿರ್ದೇಶಕ ಶ್ರೀ ಬಿ ಎಸ್ ರಂಗ ಅವರು ಚಿತ್ರಕಥೆ ಬರೆದು, ನಿರ್ಮಿಸಿ, ಛಾಯಾಗ್ರಹಣದ ಹೊಣೆ ಹೊತ್ತು ನಿರ್ದೇಶಿಸಿರುವ ಚಿತ್ರವಿದು.

ಈ ಚಿತ್ರ ಗಮನ ಸೆಳೆಯುವುದು ಚಿತ್ರಕಥೆಯಲ್ಲಿ. ಎಲ್ಲರಿಗೂ ಗೊತ್ತಿರುವ ಕಥೆಯಲ್ಲಿ ನರಸಿಂಹರಾಜು, ರಮಾದೇವಿ, ಎಂ ಏನ್ ಲಕ್ಷ್ಮೀದೇವಿ ಇವರ ಕಥೆಯನ್ನು ಸೇರಿಸಿ, ಹಾಸ್ಯ ಬಡಿಸುವ ಅದ್ಭುತ ಕಲೆಗಾರಿಕೆ ತುಂಬಿದೆ.. ರಾಕ್ಷಸ ಕುಲದ ವೇಷಭೂಷಣಗಳಿದ್ದರೂ ಹಾಸ್ಯಕ್ಕೆ ಕೊರತೆಯಿಲ್ಲ ಎನ್ನುವುದು ಈ ಮೂರು ಕಲಾವಿದರ ಅಭಿನಯ ಮತ್ತು ಸಂಭಾಷಣೆಯಲ್ಲಿ ಅಡಕವಾಗಿದೆ..

ಚುರುಕಾದ, ಚುಟುಕಾದ ಸಂಭಾಷಣೆ ಬರೆದಿರುವ ಶ್ರೀ ಚಿ ಸದಾಶಿವಯ್ಯನವರ ಜಾದೂ ಈ ಚಿತ್ರದ ತುಂಬಾ ಹರಡಿಕೊಂಡಿದೆ.  ಹಾಡುಗಳು ಈ ಚಿತ್ರದ ತುಂಬಾ ಹರಡಿಕೊಂಡಿದ್ದರೂ ಗಮನ ಸೆಳೆಯುವುದು
"ನಾರಾಯಣ ವನಮಾಲಿ" ನಾರದ ಹಾಡಿಕೊಂಡಿ ಬರುವ ಹಾಡು 
"ತುಂಬಿತು ಮನವ" ಯುಗಳ ಗೀತೆ.. ಇದರ ವಿಶೇಷತೆ ಏನೂ ಅಂದರೆ ರಾಜ್ ಹಿನ್ನೆಲೆ ಗಾಯನದ ಎರಡನೇ ಚಿತ್ರವಿದು. ಮೊದಲನೆಯ ಚಿತ್ರ ಓಹಿಲೇಶ್ವರದ "ಶರಣು ಶಂಭೋ". ಈ ಗೀತೆಯ ಸಂಗೀತ ನಿರ್ದೇಶಕರೂ ಕೂಡ ಶ್ರೀ ಜಿ ಕೆ ವೆಂಕಟೇಶ್ ಅವರು."

ಕಥೆ ಸರಳ.. ರಕ್ಕಸ ಕುಲದ ರಂಭೇಶ ಸೋದರರ ಕುಲ ಸಂತಾನವಿಲ್ಲದೆ ಕೊರಗುತ್ತಿರುವಾಗ, ರಾಕ್ಷಸರ ಗುರು ಶುಕ್ರಾಚಾರ್ಯರ ಅಣತಿಯಂತೆ, ವರುಣ ದೇವನನ್ನು ತಪಸ್ಸು ಮಾಡುವಾಗ, ಕಪಟಿ ಇಂದ್ರ ಮೊಸಳೆಯನ್ನು ಕಳಿಸಿ ರಂಭೇಶ ಅಗ್ರಜನನ್ನು ಸಾಯಿಸುತ್ತೆ, ನಂತರ ಪಣ ತೊಟ್ಟು ನಾಗಲೋಕಕ್ಕೆ ಹೋಗಿ ಸಂತಾನ ಫಲವ ತಂದು, ಗುರುವಿನ ಅಣತಿಯಂತೆ ಮದುವೆಗೆ ಸಿದ್ಧನಾಗುತ್ತಾನೆ. ಯಥಾಪ್ರಕಾರ ಇಂದ್ರ, ಮಹಿಷ ಗುಂಪನ್ನು ಹೆಣ್ಣುಗಳನ್ನಾಗಿ ಮಾಡಿ,  ರಂಭೇಶ ಒಂದು  ಸುಂದರಿಗೆ ಮನಸೋಲುವಂತೆ ಮಾಡುತ್ತಾನೆ.

ಮದುವೆಯಾದ ಮರುಕ್ಷಣವೇ ತನ್ನ ಮಾಯಾಜಾಲದಿಂದ ಸುಂದರಿಯನ್ನು ಮಹಿಷನನ್ನಾಗಿ ಮಾಡುತ್ತಾನೆ., ಇದನ್ನು ಅರಿತ ಶುಕ್ರಾಚಾರ್ಯರು ತಮ್ಮ ತಪಶಕ್ತಿ ಧಾರೆಯೆರೆದು ಹೆಣ್ಣಿನ ರೂಪವನ್ನು ಸ್ಥಿರಗೊಳಿಸುತ್ತಾರೆ. ಮುಂದೆ ಮಗುವಾಗುವ ಮುನ್ನವೇ, ಇಂದ್ರ ಕುತಂತ್ರದಿಂದ ರಂಭೇಶನ ಅವಸಾನವಾಗುತ್ತದೆ, ಮತ್ತು ಆತನ ಪತ್ನಿಯೂ ಕೊನೆಯುಸಿರೆಳೆಯುತ್ತಾಳೆ. ಮಗು ಬೆಳೆದು ದೊಡ್ಡವನಗಾಗುವ ತನಕ ಅದರ ತಂದೆ ತಾಯಿ ಮತ್ತು ಆತನ ದೊಡ್ಡಪ್ಪನ ಅಂತ್ಯದ ಕಾರಣ ಹೇಳದೆ, ನಂತರ ಹೇಳಿದಾಗ, ಮಹಿಷ ಕುಪಿತನಾಗಿ, ಉಗ್ರ ತಪಸ್ಸು ಮಾಡಿ, ಬ್ರಹ್ಮನಿಂದ ಯಾವ ಗಂಡಿನಿಂದಲೂ, ಪ್ರಾಣಿ ಪಕ್ಷಿಗಳಿಂದಲೂ ಮರಣಬಾರದಂತೆ ವರ ಪಡೆದು, ಉನ್ಮತ್ತನಾಗಿ ಇಂದ್ರನ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಿ, ಬಂಧಿಸಿ, ಶಚೀದೇವಿಯನ್ನು ಮೋಹಿಸುತ್ತಾನೆ. ಅಹಂಕಾರ ತುಂಬಿಕೊಂಡು, ತಾನೇ ಸರ್ವೇಶ್ವರ ಎಂದು ಘೋಷಿಸಿಕೊಂಡು, ಎಲ್ಲರೂ ತನ್ನ ಪ್ರತಿಮೆಯನ್ನೇ ಪೂಜಿಸಬೇಕೆಂದು ತಾಕೀತು ಮಾಡಿ ಮೆರೆದಾಡುತ್ತಾನೆ. ನಂತರ ಎಲ್ಲರಿಗೂ ಅರಿವಿರುವಂತೆ, ತಾಯಿ ಸರ್ವಮಂಗಳೇ ದೇವತೆಗಳು ಕೊಟ್ಟ ಅಸ್ತ್ರಗಳ ಸಹಾಯದಿಂದ ಮದೋನ್ಮತ್ತ ಮಹಿಷನನ್ನು ಸಂಹರಿಸುತ್ತಾಳೆ ಮಹಿಷಾಸುರ ಮರ್ಧಿನಿಯಾಗುತ್ತಾಳೆ.. !

ಈ ಚಿತ್ರದಲ್ಲಿ ರಾಜ್ ಅಭಿನಯ ಸೊಗಸು.. ಅವರ ಆರಂಭಿಕ ದೃಶ್ಯದಲ್ಲಿಯೇ ಈ ಚಿತ್ರದಲ್ಲಿ ಘರ್ಜಿಸುವ ಕುರುಹು ತೋರುತ್ತಾರೆ. ಅಭಿನಯ, ಭಾಷ ಶುದ್ಧತೆ, ಆ ಪಾತ್ರಕ್ಕೆ ಬೇಕಾದ ಹಾವಭಾವ, ಗತ್ತು ಎಲ್ಲವೂ ಸೊಗಸಾಗಿ ಮೂಡಿಬಂದಿದೆ. ಈ ಚಿತ್ರ ಅವರ ಮುಂದಿನ ಭಕ್ತ ಪ್ರಹ್ಲಾದದ ಹಿರಣ್ಯಕಶಿಪು ಪಾತ್ರಕ್ಕೆ ಟ್ರೈಲರ್ ತರಹ ಮೂಡಿ ಬಂದಿದೆ.. ಸೊಗಸಾದ ಯುಗಳ ಗೀತೆಯನ್ನು ಹಾಡಿರುವ ಈ ಚಿತ್ರದಲ್ಲಿ ಸೊಗಸಾದ ಅಭಿನಯವಷ್ಟೇ ಅಲ್ಲದೆ, ಆರಂಭಿಕ ದೃಶ್ಯಗಳಲ್ಲಿ ಮುದ್ದಾಗಿ ಕಾಣುತ್ತಾರೆ, ನಂತರ ಆರ್ಭಟ ಮಾಡುವ ಪಾತ್ರದಲ್ಲಿ ರಾಜ್ ಗಮನ ಸೆಳೆಯುತ್ತಾರೆ.

ಉದಯಕುಮಾರ್ ರಂಭೇಶನ ಪಾತ್ರದಿ ಗಮನಸೆಳೆಯುತ್ತಾರೆ. ಈ ಗಿರಿಜಾ ಮೀಸೆಯಲ್ಲಿ ಜುಮ್ ಎನಿಸುವಂತೆ ಕಾಣುವ ಇವರು, ಆರಂಭಿಕ ದೃಶ್ಯಗಳಲ್ಲಿ ಅಭಿನಯ ಸೊಗಸಾಗಿದೆ. ನಾರದನ ಪಾತ್ರ ಮಾಡಿರುವ ಅಶ್ವಥ್, ನಾರದ ಹೀಗೆ ಇದ್ದರೇನೊ ಅನ್ನಿಸುವಷ್ಟು ಸಹಜ ನಟನೆ. ನರಸಿಂಹರಾಜು ಹಾಸ್ಯದೃಶ್ಯದಲ್ಲಿ ನಗಿಸುತ್ತಾರೆ, ಅವರನ್ನು ಗೋಳುಹುಯ್ದುಕೊಳ್ಳುವ ರಮಾದೇವಿ, ಮತ್ತು ಲಕ್ಷ್ಮೀದೇವಿಯವರ ದೃಶ್ಯಗಳು ನಗೆ ತರಿಸುತ್ತದೆ..

ಶುಕ್ರಾಚಾರ್ಯರಾಗಿ ವಿ ನಾಗಯ್ಯನವರ ಧ್ವನಿ ಇಷ್ಟವಾಗುತ್ತದೆ. ಆ ಕಪ್ಪು ಬಿಳುಪಿನ ಕಾಲದ ಚಿತ್ರದಲ್ಲಿ ಅಚ್ಚುಕಟ್ಟಾಗಿ ಕಾಣುವ ಇವರು ಪೋಷಕ ಪಾತ್ರಧಾರಿಯಾಗಿ ಹಲವಾರು ಪೌರಾಣಿಕ ಚಿತ್ರಗಳಲ್ಲಿ ವಿಜೃಂಭಿಸಿದ್ದಾರೆ.

ದೇವನು ಏನೂ ಇಲ್ಲದ ಕಾಲದಲ್ಲಿ ಒಂದೊಂದಾಗಿ ಕೊಡುತ್ತಾ ಹೋಗುತ್ತಾನೆ, ಅದನ್ನು ಪಡೆದು ಜೀವನದಲ್ಲಿ ಅನ್ಯ ಮಾರ್ಗತುಳಿಯದೆ, ಧರ್ಮ ಮಾರ್ಗದಿ ಸಾಗುತ್ತಾ ಹೋದಾಗ ಆ ಮಹಾಮಹಿಮನು ಎಂದಿಗೂ ಕೈಬಿಡದೆ, ಬೇಕಾದ ಅನುಕೂಲಗಳನ್ನು ಮಾಡಿಕೊಡುತ್ತಾನೆ. ಆದರೆ ಧರ್ಮ ಮಾರ್ಗ ತ್ಯಜಿಸಿ, ವರಗರ್ವಿತನಾಗಿ, ಅಹಂಕಾರ ತುಂಬಿಕೊಂಡು ಪಾಪದ ಕೊಡ ತುಂಬಿಕೊಳ್ಳುತ್ತಾ ಸಾಗಿದಾಗ ಪವಾಡ ನೆಡೆಯುವಂತೆ, ಅನಿರೀಕ್ಷಿತ ಘಟನೆಗಳು ತೀರಾ ಸಾಮಾನ್ಯ ಅನ್ನುವಂತೆ ನೆಡೆದು ಅಂತ್ಯಕಾಣಿಸುತ್ತದೆ..
 
ಇದೆ ಅಲ್ಲವೇ ಜೀವನ.. ರಾಜ್ ಅವರ ಚಿತ್ರದ ಜೈತ್ರಯಾತ್ರೆ ಮುಂದುವರೆಸುತ್ತಾ.. ಈ ಚಿತ್ರದ ಕೆಲವು ದೃಶ್ಯಗಳನ್ನು ನಿಮಗಾಗಿ ಲಗತ್ತಿಸುತ್ತಿದ್ದೇನೆ..

ಜಾನಕೀ ಮುಂದೆ ಸಾಹುಕಾರ್ ಜಾನಕೀ ಎಂದೇ ಹೆಸರಾದ ನಾಯಕಿ 

ಹಾಸ್ಯ ಜೋಡಿ ನರಸಿಂಹರಾಜು ಮತ್ತು ಲಕ್ಷ್ಮೀದೇವಿ 

ಇವಳೇ ನನ್ನ ಗಂಡತಿ ಎನ್ನುವ ನರಸಿಂಹರಾಜು ಮತ್ತು ರಮಾದೇವಿ 


ಯುಗಳ ಗೀತೆ..ತುಂಬಿತು ಮನವ 

ಗಾಯಕ ಮತ್ತು ಗಾಯಕಿಯರ ಪಟ್ಟಿಯಲ್ಲಿ ರಾಜ್!

ರಾಜ್ ಮೊದಲ ದೃಶ್ಯದಲ್ಲಿ ಕಾಣುವುದು ಹೀಗೆ 

ಶ್ರೀ ವಿ. ನಾಗಯ್ಯ ಶುಕ್ರಾಚಾರ್ಯರಾಗಿ 

ನಾರದನಾಗಿ ಅಶ್ವತ್ 

ಸುಂದರ ಉದಯಕುಮಾರ್ 

ನೋಡ್ರಪ್ಪಾ ಅಣ್ಣಾವ್ರ ಅಭಿನಯ 

ಮುಂದಿನ ಚಿತ್ರದೊಂದಿಗೆ ಮತ್ತೆ ಬರುವ, ನೋಡುವ, ಓದುವ ಖುಷಿಪಡುವ.. ಏನಂತೀರಾ.. !!!

8 comments:

  1. ಒಂದು ಉತ್ತಮ ಚಿತ್ರ ಎನಿಸಿಕೊಳ್ಳಲು ಅದು ತನ್ನೊಳಗೆ ಎಲ್ಲ ವಿಭಾಗಗಳನ್ನೂ ಸಮನಾಗಿ ಸಮಯೋಚಿತವಾಗಿ ಮೇಳೈಸಿಕೊಂಡಿರಬೇಕು. ಆ ಚಲನಚಿತ್ರ ಸುವರ್ಣ ಯುಗದಲ್ಲಿ ಎಲ್ಲಾ ಭಾಷೆಗಳ ಚಲನಚಿತ್ರಗಳೂ ಆಣಿಮುತ್ಯಗಳೇ ಅಲ್ಲವೇ ಶ್ರೀಮಾನ್?

    ಬಿ.ಎಸ್. ರಂಗ ಅವರನ್ನು ಕನ್ನಡ ಚಿತ್ರೋಧ್ಯಮ ಬಹುವಾಗೇ ಕಡೆಗಣಿಸಿತು. ಅವರ ಸಂಸ್ಕರಣ ಶಾಲೆಯನ್ನು ನಮ್ಮವರು ಸರಿಯಾಗಿ ಬಳಸಿಕೊಳ್ಳಲೇ ಇಲ್ಲ!

    ಡಾ. ರಾಜ್ ಅದೆಷ್ಟು ಮುದ್ದಾಗಿ ಕಾಣ್ತಿದ್ದಾರೆ ಈ ಚಿತ್ರದಲ್ಲಿ.

    ಸರಳ ಭಾಷಾ ಪ್ರಯೋಗ ನಿಮಗೆ ವರವಾಗಿ ಬಂದಿದೆ. ಅಂತೆಯೇ ಅಭಿರುಚಿಯೂ ಸಹ.

    ReplyDelete
    Replies
    1. ಬಹುಕಾಲದ ನಂತರ ಬದರಿ ಸರ್ ನಿಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯಿತು
      ಸುಂದರವಾಗಿ ವಿಶ್ಲೇಷಣೆ ಮಾಡಿ.. ಹಾಗೆ ಶ್ರೀ ಬಿ ಎಎಸ್ ರಂಗ ಅವರ ಬಗ್ಗೆ ಮಾಹಿತಿ ನೀಡಿರುವುದು ನಿಮ್ಮ ಜ್ಞಾನ ಕಡಲನ್ನು ತೋರಿಸುತ್ತದೆ..

      ಧನ್ಯೋಸ್ಮಿ ಬದರಿ ಸರ್

      Delete
  2. As always, wonderful presentation of a good movie... :)

    ReplyDelete
  3. ವಾವ್ ಸುಂದರವಾದ ಬರವಣಿಗೆ ಶ್ರೀ
    ಚಲನ ಚಿತ್ರ ನೋಡಿದಂತೆ ಆಯಿತು ಚಿತ್ರದ ವಿಶ್ಲೇಷಣೆ ಬಹಳ ಸೊಗಸಾಗಿ ಬರೆದಿರುವೆ ಸುಂದರ ಹಾಗೂ ಸೊಗಸಾದ ಚಿತ್ರಗಳು ಹೌದು ಈ ಚಲನ ಚಿತ್ರದಲ್ಲಿ ಎಲ್ಲಾ ಹಿರಿಯ ನಟ-ನಟಿಯರೂ ಬಹಳ ಸೊಗಸಾಗಿ ನಟಿಸಿದ್ದಾರೆ ಅವರ ಚಿತ್ರಗಳು ಸೊಗಸಾಗಿ ಮೂಡಿದೆ ಎಂದಿನಂತೆ ಬಹಳ ಸರಳವಾಗಿ ಸೊಗಸಾಗಿ ಬರೆದಿರುವೆ ನಿನ್ನ ಬರವಣಿಗೆ ಹೀಗೆ ಸಾಗಲಿ ಎಂದು ಆಶಿಸುವೆ ಶ್ರೀ ಧನ್ಯವಾದಗಳು ಶುಭವಾಗಲಿ

    ReplyDelete