Sunday, April 24, 2016

ಈ (ಕೀಲಿ ಮಣೆ) ಕಂಗಳು ಮಾಡಿದ ಪುಣ್ಯವೋ!!!

ವಿಶ್ವಾಮಿತ್ರರು ಮತ್ತೆ ಸುದ್ದಿಯಾದರು.  ಮೇನಕೆಯಿಂದ ತಪೋಭಂಗವಾದ ಮೇಲೆ ಮತ್ತೊಮ್ಮೆ ತಪಸ್ಸಿಗೆ ಕೂರುವ ಮುನ್ನ, ಯಾಕೋ ಸ್ವರ್ಗಲೋಕಕ್ಕೆ ಹೋಗಿಬರೋಣ ಎಂದುಕೊಂಡು ಅಲ್ಲಿಗೆ ಬಂದರು.

ಯಥಾ ಪ್ರಕಾರ ಇಂದ್ರನ ಆಸ್ಥಾನದಲ್ಲಿ ಸಭೆ ನಡೆಯುತ್ತಿತ್ತು, ನೃತ್ಯ ಗಾಯನದ ನಂತರ, ವಸಿಷ್ಠರು ಇಂದು  ಒಂದು ವಿಚಾರ ಚರ್ಚೆ ಮಾಡೋಣ. ಇಂದಿನ ವಿಷಯ ಕಲಾವಿದರು ಮತ್ತು ಅವರ ಅಭಿಮಾನಿಗಳು.

ವಿಶ್ವಾಮಿತ್ರ ಇಂಥಹ ಸುದ್ದಿಗಳಿಗಾಗಿಯೇ ಕಾಯುತ್ತಿರುವವರು.. ಕಮಂಡಲದ ತೀರ್ಥವನ್ನು ಪರೀಕ್ಷಿಸಿದರು. ಸಾಕಷ್ಟು ಇತ್ತು.

ಚರ್ಚೆ ಶುರುವಾಯಿತು.. ತಾರಕಕ್ಕೆ ಹೋಯಿತು.. ಹೊಡೆದಾಟ ಬಡಿದಾಟ ಕೈ ಮೀರಿತ್ತು.. ಯಾರೊಬ್ಬರು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.. ಅವರಿಗೆ ಬೇಕಿದ್ದು ತಮ್ಮ ಮಾತನ್ನು ಪುಷ್ಠಿಕರಿಸುವುದಷ್ಟೇ ಆಗಿತ್ತು. ಯಾರಿಗೂ ನಿಜಾಂಶ ಬೇಕಿರಲಿಲ್ಲವಾಗಿತ್ತು.

ವಸಿಷ್ಠರಿಗೆ ಈ ತರಹ ವಾದ ವಾಗ್ವಾದಗಳು ಹೊಸತೆನಲ್ಲ.. ಸುಮ್ಮನೆ ಎಲ್ಲರ ಮಾತನ್ನು ಕೇಳುತ್ತಾ ಕೂತಿದ್ದರು. ಇಂದ್ರನಿಗೆ ಸಾಕಾಗಿ ಹೋಗಿತ್ತು... ಒಂದು ದಿನ ಸಂಭ್ರಮದಲ್ಲಿ ಕಳೆಯೋಣ ಅಂದರೆ ಇವರು ಒಂದು ವಿಷಯವನ್ನು ಕಡೆದು ಕಡೆದು ಆನಂದವನ್ನು ಹಾಳು ಮಾಡುತ್ತಿದ್ದಾರೆ .. ಮನದಲ್ಲಿಯೇ ಜಪ ಮಾಡಿದ.

ಮಂಜಿನ ಗಾಳಿ ಎಲ್ಲರ ಮೊಗಕ್ಕೆ ತಾಗಿ, ಬಿಸಿಯಾಗಿದ್ದ ಮನಸ್ಸು ದೇಹ ಹಾಯ್ ಎನ್ನುವಂತೆ ಮಾಡಿತು.

"ಅಭಿಮಾನಿ ದೇವರುಗಳಿಗೆ ನಮಸ್ಕಾರ.. ಯಾಕೆ ಇಷ್ಟೊಂದು ಬಿಸಿ ಬಿಸಿ ಚರ್ಚೆ... " ಶ್ವೇತ ವಸ್ತ್ರದಾರಿಯ ಮಾತು ಕೇಳಿ ಎಲ್ಲರೂ ಮಂತ್ರಕ್ಕೆ ಒಳಗಾದವರಂತೆ ತಣ್ಣಗಾದರು.

ಅಭಿಮಾನಿ ದೇವರುಗಳೇ.. ನಿಮ್ಮ ಮನೆಯ ಮಗುವನ್ನು ನೀವೇ ಮುದ್ದು ಮಾಡಿ, ಅದಕ್ಕೆ ಬೇಕಾದ ಪೋಷಾಕುಗಳನ್ನು ಹಾಕಿದಿರಿ. ಒಮ್ಮೆ ಕೃಷ್ಣದೇವರಾಯ ಎಂದಿರಿ, ಇನ್ನೊಮ್ಮೆ ಮಯೂರ ಎಂದಿರಿ, ಕುಂಬಾರ ಎಂದಿರಿ, ಜೇಮ್ಸ್ ಬಾಂಡ್, ದಾಸರು ಎಂದರಿ... ನಿಮ್ಮ ಅಭಿಮಾನಕ್ಕೆ ನಾ ಚಿರಋಣಿ. ನಿಮ್ಮ ಮಗು ಬಗ್ಗೆ ನೀವು ಹೆಮ್ಮೆ ಪಡುವುದು ನಿಮ್ಮ ಪ್ರೀತಿಯ ಸಂಕೇತ. ನೀವು ಪ್ರೀತಿ ತೋರಿಸಿದಿರಿ, ಅದು ನಾ ಈ ಮಟ್ಟಿಗೆ ಬೆಳೆಯಲು ಅನುಕೂಲ ಮಾಡಿಕೊಟ್ಟಿತು. ಚಂದ್ರ ಯಾವಾಗಲೂ ಪೂರ್ಣ ನಾಗಿಯೆ ಇರುವುದಿಲ್ಲ ಅಲ್ಲವೇ, ಹಾಗೆಯೇ ಶುಕ್ಲ ಪಕ್ಷದ ಚಂದ್ರ ಗೆರೆಯಿಂದ ಪೂರ್ಣ ಸ್ವರೂಪ ತೆಗೆದುಕೊಂಡ ಹಾಗೆ, ನಿಮ್ಮ ಅಭಿಮಾನದ ಬೆಳಕಲ್ಲಿ, ಈ ಸಣ್ಣ ಬಿಂಧು ಅಥವಾ ಈ ಸಣ್ಣ ಕಣ ಪೂರ್ಣ ಚಂದ್ರವಾಯಿತು. ಅದರ ಬೆಳಕು ಕರುನಾಡಿನ ಭುವನೇಶ್ವರಿಯ ಮಡಿಲು ಸೇರಿ ಇನ್ನಷ್ಟು ಹೊಳಪು ಖಂಡಿತು.

ನನ್ನನ್ನು ಅಣ್ಣ, ಅಣ್ಣಾವ್ರು, ಅಪ್ಪಾವ್ರು, ಅಪ್ಪಾಜಿ, ಸರ್ ಹೀಗೆ ನೂರಾರು ಹೆಸರಿಂದ, ಅಭಿಮಾನದ ಭಾವದಿಂದ ಗುರುತಿಸಿದಿರಿ. ಒಂದೇ ಅಕ್ಕಿಯಿಂದ ತಯಾರಾದ ಖಾದ್ಯ, ಬೇರೆ ಬೇರೆ ಹೆಸರು ಪಡೆದುಕೊಳ್ಳುತ್ತದೆ, ಬರಿ ಅನ್ನವಾಗುತ್ತದೆ, ಚಿತ್ರಾನ್ನ ಆಗುತ್ತದೆ, ಬಿಸಿಬೇಳೆ ಬಾತ್ ಆಗುತ್ತದೆ, ಪುಳಿಯೋಗರೆ, ಬಿರ್ಯಾನಿ ಹೀಗೆ ಅನೇಕ ಹೆಸರು ಬಂದು ಬಿಡುತ್ತದೆ, ಅದರಂತೆ ನೀವು ಏನೇ ಕರೆದರೂ ಅಥವಾ ನನ್ನನ್ನು ಹೇಗೆ ಗೌರವಿಸಿದರೂ ಅದು ಮೂಲ ಸ್ವರೂಪದಲ್ಲಿಯೇ ಇರುವ ಅಕ್ಕಿಯಂತೆ ಬೆಂದು ಬಗೆ ಬಗೆಯ ಭಕ್ಷ್ಯವಾಗುವಂತೆ, ನಿಮ್ಮ ಅಭಿಮಾನದ ಹೊಳೆಯಲ್ಲಿ ಮಿಂದು ನಾ ನಿಮ್ಮ ರಾಜಕುಮಾರನಾಗಿದ್ದೇನೆ.

ಒಂದು ಮಗುವಿಗೆ ಅಣ್ಣ ಎಂದು ಹೆಸರಿಟ್ಟರೆ, ಆ ಮಗು ಚಿಕ್ಕದಾಗಿದ್ದಾಗಲೂ ಅಣ್ಣನೆ, ವಯಸ್ಸಿಗೆ ಬಂದಾಗಲೂ ಅಣ್ಣನೆ, ಮುಪ್ಪಿಗೆ ಬಂದಾಗಲೂ ಅಣ್ಣನೆ, ಇದಕ್ಕೆ ಅಪವಾದವೆ ಇಲ್ಲ ಅಲ್ಲವೇ. ಅದು ಹೆಸರಿನ ತಪ್ಪಲ್ಲ, ಅದು ಆ ಮಗುವನ್ನು ಆದರಿಸುವ ಪರಿ.

ನಾನು ಕರುನಾಡಿನ, ಕನ್ನಡ ಭಾಷ ಚಿತ್ರರಂಗಕ್ಕೆ ಅಣ್ಣ ಎನಿಸಿದರೂ, ನನಗಿಂತ ಅಪಾರ ಕೀರ್ತಿ ಪಡೆದ, ನನಗಿಂತಲೂ ಪ್ರತಿಭಾವಂತರನ್ನು ಕೂಡ ಅಣ್ಣ ಎಂದರೆ ಕರೆಯುತ್ತಿದ್ದೀರಿ. ಶಂಕ್ರಣ್ಣ, ಪುಟ್ಟಣ್ಣ, ದೊಡ್ಡಣ್ಣ, ಅಂಬಿಯಣ್ಣ, ವಿಷ್ಣುದಾದ ಹೀಗೆ ಕಲಾವಿದರು ನಮಗೆ ಹೇಗೆ ಹತ್ತಿರವಾಗುತ್ತಾರೆಯೋ ಹಾಗೆ ಅವರು ಅಣ್ಣ, ಅಣ್ಣಾವ್ರು, ಅಪ್ಪಾವ್ರು, ಅಪ್ಪಾಜಿ ಹೀಗೆ ರೂಪ ಪಡೆದುಕೊಳ್ಳುತ್ತಾರೆ. ಪಕ್ಕದ ಚಿತ್ರರಂಗದಲ್ಲಿ ಎಮ್. ಜಿ ಆರ್, ಶಿವಾಜಿ ಗಣೇಶನ್, ರಜನಿಕಾಂತ್, ಕಮಲ್, ಹಿಂದಿಯ ಬಚ್ಚನ್ ಅವರನ್ನು ತಮ್ಮ ಕುಟುಂಬದ ಸದಸ್ಯರಿಗಿಂತ ತುಸು ಹೆಚ್ಚಾಗಿಯೇ ಪ್ರೀತಿಸುತ್ತಾರೆ, ಅಂದ ಮಾತ್ರಕ್ಕೆ ತಮ್ಮ ಮಕ್ಕಳನ್ನು ಬೀದಿಗೆ ಬಿಡೋಲ್ಲ.

ಕಲಾಭಿಮಾನಿಗಳು ನನ್ನ ಹಾಗೆ ಕರೆದರೆ ಅದು ಅವರ ಮಗುವನ್ನು "ಚಿನ್ನಾ, ಮುದ್ದು, ಪುಟ್ಟಿ" ಎಂದು ಕರೆಯುವ ಹಾಗಿರುತ್ತೆಯೇ ಹೊರತು ಅದಕ್ಕೆ ಪದ ಅರ್ಥ ಹುಡುಕಿ ಗೊಂದಲ ಮಾಡಿಕೊಳ್ಳಬಾರದು.

ಇಂದ್ರನ ಸಭೆಯಲ್ಲಿ.. ಸೂಜಿ ಬಿದ್ದರೂ ಕೇಳಿಸುವಂಥಹ ನಿಶ್ಯಬ್ಧ.. ವಸಿಷ್ಠರಿಗೆ ಜೋರಾಗಿ ಚಪ್ಪಾಳೆ ಹಾಕಿ "ಅಣ್ಣಾವ್ರಿಗೆ, ಮತ್ತು ಮುತ್ತಿನಂಥಹ ಮಾತುಗಳಿಗೆ ಜೈ" ಅನ್ನಬೇಕು ಅನ್ನಿಸಿತು, ಆದರೆ ಸ್ವಲ್ಪ ಹೊತ್ತು ಸುಮ್ಮನಿದ್ದರು.

ಅಣ್ಣಾವ್ರು ಹೇಳಿದ್ದು ಒಬ್ಬೊಬ್ಬರ ಮನಸ್ಸಿಗೆ ಇಳಿಯುತ್ತಾ ಹೋಯಿತು.. ಇಂದ್ರ ಸಭೆಯೇ ಕಿತ್ತು ಹೋಗುವಷ್ಟು ಜೋರಾದ ಚಪ್ಪಾಳೆ, ಜೊತೆಯಲ್ಲಿ "ಅಣ್ಣಾವ್ರಿಗೆ ಜೈ" ಎಂಬ ಜೈಕಾರ..

ಪಕ್ಕದಲ್ಲಿಯೇ ದೈವ ಧೂತ.. ಅಣ್ಣಾವ್ರೆ ಯಾಕೆ ಕಣ್ಣೀರು ಎಂದು ಕೇಳಿದ

ಅಣ್ಣಾವ್ರು "ಇದು ಕಣ್ಣೀರಲ್ಲ ಪನ್ನೀರು ಪನ್ನೀರು"... ಚಿನ್ನದಂಥ ಅಭಿಮಾನಿಗಳು ಇರುವಾಗ ಕಣ್ಣೀರೆತೆಕೆ, ಮನಸನು ಅರಿತು ನೆಡೆಯುತಲಿರಲು ಚಿಂತೆಯ ಮಾತೇಕೆ.. ಅಭಿಮಾನಿಗಳು  ನಗುತಿರಲು ನಮ್ಮೀ ಕರುನಾಡಿಗೆ ಆ ಸ್ವರ್ಗವೇ ಜಾರಿದಂತೆ.. "

ಇಷ್ಟು ಕೇಳಿ, ಆ ಧೂತ ಅಣ್ಣಾವ್ರ ಕಾಲಿಗೆ ಎರಗುತ್ತಾ "ಅಣ್ಣಾವ್ರಿಗೆ ಜೈ ಅಣ್ಣಾವ್ರಿಗೆ ಜೈ.. ಅಣ್ಣಾವ್ರಿಗೆ ಹುಟ್ಟು ಹಬ್ಬದ ಶುಭಾಶಯಗಳು.. ." ಎಂದು ಜೈ ಕಾರ ಹಾಕಿದ..

ಸಭೆಯಲ್ಲಿದ್ದ ಎಲ್ಲರೂ ಎದ್ದು ಕರತಾಡನ ಮಾಡಿ.. ಒಬ್ಬರ ಮುಖ ಒಬ್ಬರು ನೋಡಿಕೊಂಡರು.. ಎಲ್ಲರ ಮನಸ್ಸು, ಮೊಗ ತೊಳೆದ ಪಾತ್ರೆಯಂತೆ ಲಕ ಲಕ ಹೊಳೆಯುತ್ತಿತ್ತು..

ಆ ಕ್ಷಣದಲ್ಲಿ ಗಾಳಿಯಲ್ಲಿ ತೇಲಿಬಂದ ಒಂದು ಕರ ಪತ್ರದಲ್ಲಿ ಮೂಡಿ ಬಂದ ದೃಶ್ಯ ನೋಡಿ ಎಲ್ಲರೂ ಹೋ ಹೋ ಅಣ್ಣಾವ್ರಿಗೆ ಜೈ ಎಂದು ಕೂಗಿ

ಅಣ್ಣಾವ್ರೆ ನಿಮ್ಮ ಜೊತೆಯಲ್ಲಿಯೇ ಈ ಚಿತ್ರವನ್ನು ನೋಡೋಣ ನಡೆಯಿರಿ ಎಂದು ರಥವನ್ನು ಹತ್ತಿಸಿದರು...
ಇಂದ್ರಸಭೆಯ ಪಕ್ಕದಲ್ಲಿಯೇ ಇದ್ದ ಮಲ್ಟಿಪ್ಲೆಕ್ಸ್ ನಲ್ಲಿ ಆಗಲೇ ಶುರುವಾಗಿತ್ತು .. ಎಲ್ಲರೂ ದಡ ದಡ ಒಳಗೆ ನುಗ್ಗಿದರು.. ಆಗ ಹಾಡು ಬರುತ್ತಿತ್ತು..




"ನಾವಾಡುವ ನುಡಿಯೇ ಕನ್ನಡ ನುಡಿ..
ನಾವಿರುವ ತಾಣವೇ ಗಂಧದ ಗುಡಿ ಅಂದದ ಗುಡಿ ಚಂದದ ಗುಡಿ ಶ್ರೀ ಗಂಧದ ಗುಡಿ"

ಅಣ್ಣಾವ್ರೆ ನನ್ನ ಕೆಲವು ಗೊಂದಲಗಳಿಗೆ ನಿಮ್ಮ ಮಾತುಗಳು ಬೇಕಿತ್ತು.. ನೀವು ಹೀಗೆಯೇ ಉತ್ತರಿಸಬಹುದು ಎಂದು ಅಂದುಕೊಂಡು ಈ ಲೇಖನವನ್ನು ನಿಮ್ಮ ಹುಟ್ಟು ಹಬ್ಬಕ್ಕೆ ಸಮರ್ಪಿಸುತ್ತಿದ್ದೇನೆ.

ಕರುನಾಡು ಕಂಡ ಅದ್ಭುತ ಕಲಾವಿದ ನೀವು.. ನಿಮಗೆ ಹುಟ್ಟು ಹಬ್ಬದ ಶುಭ ಕೋರುವುದು ನಾ ಮಾಡಿದ ಪುಣ್ಯದ ಫಲ ಎನ್ನಬಹುದು..

ನನ್ನ ಮನಸ್ಸು ಹೇಳುತ್ತಿದೆ "ಇದು ಯಾರ ತಪಸಿನ ಫಲವೋ.. ಈ (ಕೀಲಿ ಮಣೆ) ಕಂಗಳು ಮಾಡಿದ ಪುಣ್ಯವೋ"

ಅಣ್ಣಾವ್ರೆ ಹುಟ್ಟು ಹಬ್ಬದ ಶುಭಾಶಯಗಳು!!!

4 comments:

  1. ಅಣ್ಣಾವ್ರಿಗೆ ಅಭಿಮಾನಿಯ ಪದ ನಮನ...ಸೂಪರ್ ಸರ್ಜಿ...:) :)

    ReplyDelete
    Replies
    1. ಧನ್ಯವಾದಗಳು ಸರ್ಜಿ.. ಅಣ್ಣಾವ್ರು ಬಗ್ಗೆ ಬರೀಬೇಕು ಅಂದರೆ ವಿಷಯಗಳು ಹಾಗೆ ಹುಟ್ಟುಕೊಳ್ತಾವೆ

      Delete
  2. ಸಾವಿರ ಬ್ಲಾಗ್ ಬರಹಗಳನು ತುಂಬು ಶಕ್ತಿಯಿದೆ ಅಣ್ಣಾವ್ರ ಚೆರಿತೆಯಲಿ ಅಲ್ಲವೇ ಶ್ರೀಮಾನ್.
    ಪಾತ್ರ ವೈವಿದ್ಯತೆ, ಬದುಕು ಸರಳತೆ ಮತ್ತು ಮೇರು ಗಾತ್ರಕ್ಕೆ ರಾಜಣ್ಣನಿಗಿಲ್ಲ ಸಾಟಿ, ಅವರು ನಭೂತೋ ನ ಭವಿಷ್ಯತಿ ಕಾರಣ ಜನ್ಮ.
    ಜನುಮ ದಿನಕೆ ಉತ್ತಮ ನುಡಿ ನಮನವಿದು ಸಾರ್.

    ReplyDelete
    Replies
    1. ಅವರು ಅವರ ಚಿತ್ರ ಬದುಕು ಮತ್ತು ಸರಳ ವಿರಳ ವ್ಯಕ್ತಿತ್ವ ಒಂದು ಅಕ್ಷಯಪಾತ್ರೆ ಮೊಗೆದಷ್ಟು ಬರುತ್ತಲೇ ಇರುತ್ತದೆ
      ಧನ್ಯವಾದಗಳು ಉತ್ತಮ ಪ್ರತಿಕ್ರಿಯೆಗೆ

      Delete