Tuesday, April 12, 2016

ಹಾಡುಗಳಲ್ಲಿ ನುಗ್ಗಿ ಬರುವ ಭಾವ ಲೋಕದಲ್ಲಿ ಅಣ್ಣಾವ್ರು

ಅಣ್ಣಾವ್ರ  ಚಿತ್ರಗಳಲ್ಲಿ ಹಾಡುಗಳು ಎಂದಿಗೂ ಜೀವ ತುಂಬಿ ಹರಿಯುವ ನದಿಯ ತರಹ, ಬೆಳದಿಂಗಳಲ್ಲಿ ಬರುವ ಮಳೆಯ  ಹಾಗೆ, ಚೈತ್ರ ಮಾಸದಲ್ಲಿ ಅರಳುವ ಹೂಗಳ ಹಾಗೆ ಇರುತ್ತಿದ್ದವು.. ಅದರಲ್ಲೂ ಅಣ್ಣಾವ್ರೆ ಹಾಡಲು ಶುರು ಮಾಡಿದ ಮೇಲೆ, ಅವರ ಎಲ್ಲಾ ಚಿತ್ರಗಳಲ್ಲಿ ಹಾಡುಗಳು ವಿಜೃಂಬಿಸಿದ್ದು ಒಂದು ದಂತ ಕಥೆ ಎನ್ನಬಹುದು.

ಅಣ್ಣಾವ್ರ ಗಾಯನದಲ್ಲಿ ನಾ ಮೆಚ್ಚುವ ಅನೇಕ ಅಂಶಗಳಲ್ಲಿ ಒಂದು, ಅವರು ಹಾಡಿನ ಮಧ್ಯೆ ಆಡುವ ಮಾತುಗಳು, ಇಲ್ಲವೇ ಪುಟ್ಟ ಪುಟ್ಟ ಧ್ವನಿಗಳು, ಸಂಗತಿಗಳು..

ಅವರ ನೂರಾರು ಹಾಡುಗಳ ಮಧ್ಯೆ ನನಗೆ ಇಷ್ಟವಾಗುವುದು, ಅವರು ಯುಗಳ ಗೀತೆಗಳಲ್ಲಿ, ಮಧ್ಯೆ ನುಗ್ಗುವ ಪರಿ. ಸಿನೆಮಾ ಟಾಕೀಸುಗಳಲ್ಲಿ ಅಣ್ಣಾವ್ರು ಯುಗಳ ಗೀತೆಯ ಮಧ್ಯೆ ಅಥವಾ ನಾಯಕಿ ಒಬ್ಬಳೇ ಹಾಡುತ್ತಿದ್ದಾಗ ನುಗ್ಗಿ ಬರುವ ಪರಿ, ಅದಕ್ಕೆ ಅವರ ಅಭಿಮಾನಿ ದೇವರುಗಳ ಸಂಭ್ರಮ ಅದರ ಬಗ್ಗೆ ಬರೆಯೋಣ ಅನ್ನಿಸಿತು. ಅದಕ್ಕಾಗಿ ಈ ಲೇಖನ.

ಈ ಹಾಡುಗಳಲ್ಲಿ ಸಾಂತ್ವನ ಹೇಳುವ ಹಾಡುಗಳು ಇವೆ, ಪ್ರಣಯವೂ ಇದೆ, ಗುಪ್ತಗಾಮಿನಿಯ ಹಾಗೆ ಹರಿಯುವ ಭಾವ ಪ್ರಶಾಂತತೆ ಇದೆ, ಹೀಗೆ ಹಲವಾರು ರಸಗಳ ಸಂಗಮ.. ಅಣ್ಣಾವ್ರು ಹಾಡುಗಳಲ್ಲಿ ಮಧ್ಯೆ ಎಂಟ್ರಿ ಆಗುವ ದೃಶ್ಯಗಳು.

*****

ನಾನೊಬ್ಬ ಕಳ್ಳ ಚಿತ್ರದಲ್ಲಿ, ಒಂದು ಬಗೆಯ ವಿಷಾದ ತುಂಬಿರುತ್ತದೆ, ಆಗ ಶುರುವಾಗುತ್ತದೆ "ಆಸೆಯು ಕೈಗೂಡಿತು". 
ನಾಯಕಿ ಲಕ್ಷ್ಮಿ ರಾಜ್ ರನ್ನು ಸಂತೈಸುತ್ತಲೇ ಶುರುವಾಗುವ ಹಾಡು, ಅಣ್ಣಾವ್ರು ಶುರು ಮಾಡುವ "ಕಂದ ನೊಂದು ಅತ್ತಾಗ, ಯಾರೂ ಕಾಣದಾದಾಗ ಸಂತೈಸಲೆಂದು ಓಡೋಡಿ ಬರುವ ತಾಯಂತೆ ನೀನು ಬಂದೆ.. ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ, ಆ ದೀಪದಲ್ಲಿ ನೀ ಜೀವವಾಗಿ ಹೊರಾಡಲೆಂದು ಬಂದೆ.. ಉಸಿರಾಡುವಾಸೆ ತಂದೆ"
ಈ ಪದಗಳಲ್ಲಿ  ಪ್ರೇಯಸಿಯ ಸಾಮಿಪ್ಯವನ್ನು, ನೊಂದ ಮಗುವನ್ನು ತಾಯಿ ರಮಿಸುವ ಹಾಗೆ ಹೋಲಿಸಿದ್ದಾರೆ. ಅದ್ಭುತ ಹಾಡು, ಲಕ್ಷ್ಮಿ ಹಾಗೂ ಅಣ್ಣಾವ್ರು ಅದ್ಭುತ ಅಭಿನಯ. ಚಿ ಉದಯಶಂಕರ್ ಜೀವ ತುಂಬಿ ಸಾಹಿತ್ಯ ಕೊಟ್ಟರೆ, ಅದಕ್ಕೆ ಬಂಗಾರದ ಚೌಕಟ್ಟು ಸಿಕ್ಕಿದ್ದು ರಾಜನ್ ನಾಗೇಂದ್ರ ಅವರ ಸುಲಲಿತ ಸಂಗೀತ. 



ಕೆರಳಿದ ಸಿಂಹ, ರಾಜ್ ಸಾಹಸಮಯ ಚಿತ್ರಗಳಲ್ಲಿ ಒಂದು. ಸಂದೇಹ, ಮತ್ತು ಪರಿಸ್ಥಿತಿಯ ಒತ್ತಡ, ನಾಯಕಿ ಮತ್ತು ನಾಯಕನನ್ನು ದೂರ ಮಾಡಿರುತ್ತದೆ. ಹೇಗಿದ್ದೆವು ಹೇಗಾದೆವು ಎಂದು ಯೋಚಿಸುತ್ತಾ ಕೂತಾಗ ಬರುವ " ಏನೋ ಮೋಹ ಏಕೋ ದಾಹ". ಅಣ್ಣಾವ್ರ ಚಿತ್ರಗಳಲ್ಲಿ ಈ ಹಾಡು ತುಂಬಾ ವಿಭಿನ್ನ ಅನ್ನಿಸುವ ಕಾರಣ ಅದರ ಸಾಹಿತ್ಯ ಮತ್ತು ಸಂಗೀತ. ಆಂಗ್ಲ ಶೈಲಿಯಲ್ಲಿ ಸತ್ಯಂ ಅವರು ಸಂಗೀತ ಸಂಯೋಜನೆ ಮಾಡಿದ್ದರೆ, ಪ್ರೇಮಿಗಳ ವಿರಹವನ್ನು ಪದಗಳಲ್ಲಿ ಕಟ್ಟಿ ಕೊಟ್ಟದ್ದು ಚಿ ಉದಯಶಂಕರ್. ಈ ಹಾಡಿನಲ್ಲಿ ಸರಿತಾ ಮನಮೋಹಕವಾಗಿ ಕಾಣುತ್ತಾರೆ, ಉದ್ದ ಕೂದಲು, ಕಣ್ಣುಗಳು ಭಾವನೆಗಳಿಂದ ಸರಿತಾ ಮುದ್ದಾಗಿಕಂಡರೆ , ಅಣ್ಣಾವ್ರು ಅಚ್ಚುಕಟ್ಟಾದಮೈಕಟ್ಟು , ವಸ್ತ್ರ ವಿನ್ಯಾಸ, ಬಲಗೈಗೆ ಚೈನ್ ವಾಚ್, ತುಂಬಾ ವಿಭಿನಾವಾಗಿ ಕಾಣುತ್ತಾರೆ. ವಾಣಿ ಜಯರಾಂ ಅವರ ಧ್ವನಿಯಲ್ಲಿ ಶುರುಮಾಡುವ ಹಾಡಿಗೆ, "ಏನೋ ಮೋಹ" ಎಂದು ಕೆಳಗಿಂದ ಮೇಲೆ ಎದ್ದು ನಿಲ್ಲುವ ಅಣ್ಣಾವ್ರ ಧ್ವನಿ ಮತ್ತು ಮೈಕಟ್ಟಿಗೆ ಟಾಕೀಸಿನಲ್ಲಿ ಶಿಳ್ಳೆಗಳ ಮೇಲೆ ಶಿಳ್ಳೆ.  ಒಂದು ಮಾದಕತೆ ತುಂಬಿರುವ ಪ್ರಣಯ ಗೀತೆಯನ್ನು ಅಶ್ಲೀಲವಾಗದಂತೆ ಚಿತ್ರಿಕರಿಸಿರುವುದು ಈ ಹಾಡಿನ ವಿಶೇಷ. 


ಹೊಸ ಬೆಳಕು ಚಿತ್ರದಲ್ಲಿ ತನಗೆ ಅರಿವಿಲ್ಲದ ಪ್ರೇಮಿಸುವ ನಾಯಕ ಒಂದು ಕಡೆ, ಪ್ರೀತಿ ತುಂಬಿದ್ದರೂ ತೋರಿಸಿಕೊಳ್ಳದೇ ಮೂಕ ರೋದನೆ ಪಡುವ ನಾಯಕಿ ಸರಿತಾ ಇನ್ನೊಂದು ಕಡೆ. ತನಗೆ ಇಚ್ಚೆ ಇರದ ಹುಡುಗನ ಜೊತೆ ಮೈಸೂರಿನ ಬೃಂದಾವನಕ್ಕೆ ಬರುವ ನಾಯಕಿ ಸರಿತಾ, ಆ ಹುಡುಗ ಹಾಡು ಬೇಕು ಹೇಳಿ.. ಎಂದು ಬಲವಂತ ಮಾಡಿದಾಗ "ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು" ಹಾಡಿನಲ್ಲಿ ತನ್ನ ಎಲ್ಲಾ ಭಾವನೆಗಳನ್ನು ದಿನಕರನಿಗೆ ಹೋಲಿಸಿ ತನ್ನ ನಾಯಕ "ರವಿ" ಪಾತ್ರಕ್ಕೆ ಒಪ್ಪುವ ಹಾಗೆ ಹಾಡುತ್ತಾ ಹೋಗುತ್ತಾಳೆ. ಎಸ್ ಜಾನಕಿ ಕಂಠ ಸಿರಿಯಲ್ಲಿ ಚಿ ಉದಯಶಂಕರ್ ಅವರ ಸಾಹಿತ್ಯ, ಎಂ ರಂಗರಾವ್ ಅವರಿಂದ ಬಂದ ಸಂಗೀತಕ್ಕೆ ರಾಜ್ ಮಧ್ಯೆ ನುಗ್ಗುತ್ತಾರೆ ಒಂದು ದೋಣಿಯಲ್ಲಿ "ಆಅ ಅಹ ಹಾ ಆಹಾ ಲ ಲಾ".. ಕಿವಿ ಕಿತ್ತುಹೋಗುವ ಹಾಗೆ ಶಿಳ್ಳೆ.  ನಾಯಕಿ ಯ ಭಾವಕ್ಕೆ ಭಾವ ಜೋಡಿಸಿ ಹೆಜ್ಜೆಗೆ ಹೆಜ್ಜೆ ಹಾಕಿ ನಲಿಯುವ ಈ ಹಾಡು, ನಾಯಕಿಗೆ ನಾ ಇದ್ದೇನೆ ನಿನ್ನ ಜೊತೆ ಎನ್ನುವ ಬಂಧವನ್ನು ದಯಪಾಲಿಸುತ್ತದೆ. 


ಅಣ್ಣ ತಂಗಿಯರ ಅಪ್ಪ ಅಮ್ಮನ ಬಾಂಧ್ಯವದ ಚಿತ್ರ "ಸಮಯದ ಗೊಂಬೆ", ವಿಧಿಯ ಆಟದಲ್ಲಿ ಹೇಗೆ ಮೂಕ ಪ್ರೇಕ್ಷಕರಾಗಿ ನಿಲ್ಲಬೇಕಾಗುತ್ತದೆ ಎನ್ನುವ ಸಂದೇಶ ಹೊತ್ತ ಚಿತ್ರದಲ್ಲಿ, ಹೇಗೂ ಪರಿಸ್ಥಿತಿಯ ಹಿಡಿತದಲ್ಲಿ ತನ್ನ ತಂಗಿ ಸಿಗುತ್ತಾಳೆ. ತಂಗಿ ಮಗುವಿನ ಹುಟ್ಟು ಹಬ್ಬದ ಸಂಭ್ರಮದಲ್ಲಿ ಆ ಮನೆಯಲ್ಲಿ ಚಾಲಕನ ಕೆಲಸ ನಿಭಾಯಿಸುವ ನಾಯಕ, ತಾನೇ ನಿನ್ನ ಅಣ್ಣ ಎಂದು ಹೇಳಿಕೊಳ್ಳಲಾಗದೆ ತೊಳಲಾಡುತ್ತಾ ನಿಂತಿರುವಾಗ.. ತಂಗಿ "ಕೋಗಿಲೆ ಹಾಡಿದೆ ಕೇಳಿದೆಯ" ಎಸ್ ಜಾನಕಿಯ ಮಂಜಿನ ಧ್ವನಿಯಲ್ಲಿ ಮೂಡಿಬರುತ್ತದೆ. ನಾಯಕನಿಗೆ ತನ್ನ ಬಾಲ್ಯದ ನೆನಪಾಗುತ್ತದೆ, ಮರಗುತ್ತಾ ಆ ಹಾಡನ್ನು ಹಾಗೆ ಕೇಳುತ್ತಾ ಕನಸಿನ ಲೋಕಕ್ಕೆ ಜಾರುತ್ತಾನೆ. ಕಾರಿನಿಂದ ಇಳಿಯುವ ದೃಶ್ಯದಲ್ಲಿ ಟಾಕೀಸಿನಲ್ಲಿ ಕೂಗು, ಶಿಳ್ಳೆ, ಚಪ್ಪಾಳೆಯ ಸುರಿಮಳೆ. ಹಾಡುತ್ತಾ ಬರುವ ಅಣ್ಣಾವ್ರು, ಅದ್ಭುತವಾಗಿ ಹಾಡಿ, ಚಿ ಉದಯಶಂಕರ್ ಅವರ ಸಾಹಿತ್ಯಕ್ಕೆ ಮೆರುಗು ನೀಡುತ್ತಲೇ, ರಾಜನ್ ನಾಗೇಂದ್ರ ಅವರ ಸಂಗೀತ ಜೊತೆಯಲ್ಲಿ ತಾವು ಮಂಜಿನ ಹೂವಾಗುತ್ತಾರೆ. 


ಹೀಗೆ ನಾ ಮೇಲೆ ಉಲ್ಲೇಖ ಮಾಡಿದ್ದು ಕೆಲವು ಹಾಡುಗಳನ್ನು ಮಾತ್ರ.. ಈ ತರಹ ಹಾಡುಗಳು ರಾಜ್ ಮತ್ತು ಪಿ ಬಿ ಎಸ್ ಜೋಡಿಯಲ್ಲಿ ಇನ್ನಷ್ಟು ಬೇಕಾದಷ್ಟು ಇವೆ. 

ಇಂದು ಅಣ್ಣಾವ್ರು  ಚಿತ್ರಗಳಲ್ಲಿ ಮಾತ್ರ ಅವರನ್ನು ಬಿಟ್ಟು ಆನಂದ ಲೋಕವನ್ನು ಸೇರಿದ ದಿನ. ಅವರ ನೆನಪು ಅಮರ ಮಧುರ. ಎಂದಿಗೂ ಅಳಿಸಲಾರದ ಬಂಧ ಅಣ್ಣಾವ್ರು, ಕರುನಾಡು ಮತ್ತು ಅವರ ಅದ್ಭುತ ಚಿತ್ರಗಳು.. 

ಅಣ್ಣಾವ್ರಿಗೆ ಒಂದು ಜೈ ಹೇಳುತ್ತಾ, ಅವರ ಸುಂದರ ಆತ್ಮಕ್ಕೆ ಒಂದು ನಮನ!!!

1 comment:

  1. ಅಣ್ಣಾವ್ರ ಹಾಡುಗಳನ್ನ ಕೇಳ್ತಾ ಹೋದ್ರೆ ಎಲ್ಲವು ಅಚ್ಚುಮೆಚ್ಚಿನ ಸಾಲಿಗೆ ಬರುತ್ತೆ. ಕಾರಲ್ಲಿ, ಮನೆಯಲ್ಲಿ, ಹೊರಗೆ ಸಹಿತ ಎಲ್ಲಿ ಅವರ ಹಾಡು ಕೇಳಿದ್ರು ಜೊತೆಗೆ ನಾವು ಗುನುಗುನಿಸುವುದು ಸಹಜ. ಇದೆಲ್ಲ ಹಾಡುಗಳು ನನ್ನ ಮೆಚ್ಚಿನ ಹಾಡುಗಳ ಪತ್ತಿಯಲ್ಲಿರುವುದೇ. ಇದರೊಂದಿಗೆ ನಾನು ದ್ರುವ ತಾರೆ ಹಾಡುಗಳು, ಬಭ್ರುವಾಹನ ಯುದ್ಧದ ಹಾಡನ್ನು ಸೇರಿಸುತ್ತಿದ್ದೆ. ಸೂಪರ್ ಕಲೆಕ್ಷನ್ :)

    ReplyDelete