Friday, April 12, 2013

ಮೈ ನೇಮ್ ಇಸ್ ರಾಜ್ ರಾಜ್ ರಾಜ್! - ಶಂಕರ್ ರಾಜ್ ಗುರು (2013)

ನಿನ್ನೆ ಯುಗಾದಿ ಹಬ್ಬದ ದಿನ ಏನೋ ಆಟವಾಡುತಿದ್ದ  ಮಗಳು ಎರಡು ಕಣ್ಣರಳಿಸಿ "ಅಪ್ಪಾ!" ಎಂದು ಕಿರುಚಿ ಕಣ್ಣು ಹೊಡೆದು ನಕ್ಕಳು.  ಮನಮಡದಿ "ಅದೆಷ್ಟು ಸಲ ಬಂದ್ರು  ಬಾಯಿ ಬಿಟ್ಕೊಂಡು ನೋಡ್ತೀರಾ" ಅಂದ್ಲು. ನನ್ನ ಅಭಿರುಚಿ ಗೊತ್ತಿದ್ದ ಮಗಳು  ಟಿ.ವಿ ಯ ಸೌಂಡ್ ಸ್ವಲ್ಪ ಹೆಚ್ಚಾಗಿಯೇ ಕೊಟ್ಟಳು.

ಕಲಶಂ ಪ್ರತಿಷ್ಟಾಪನ ಮಹೂರ್ತ ಆರಂಭಂ . ಎನ್ನುವಂತೆ ಲೆಕ್ಕವಿಲ್ಲದಷ್ಟು ಭಾರಿ ನೋಡಿದರು ಮತ್ತೊಮ್ಮೆ ನೋಡಲು ಸಿದ್ಧವಾಗಿ ಕೂತೆವು. ನಿನ್ನೆ ಯುಗಾದಿ ಹಬ್ಬದ ದಿನ ಉದಯ ಮೂವೀಸ್ ನಲ್ಲಿ ಅಣ್ಣಾವ್ರ ಶಂಕರ್ ಗುರು ಸಿನಿಮಾ ಬಿತ್ತರಗೊಂಡಿತು.

ನನ್ನ ಮಗಳಿಗೂ ರಾಜ್ ಚಿತ್ರ ಗಳು ಎಂದರೆ ಖುಷಿಯಾಗುತ್ತಿದೆ ಎಂದರೆ ಈ ಕಲಾವಿದ ಎಲ್ಲಾ ತಲೆಮಾರುಗಳಿಗೂ ಸಲ್ಲುವ ಕಲಾವಿದ ಎನ್ನುವುದಕ್ಕೆ ಇದು ಉದಾಹರಣೆ..

ಈ ಲೇಖನವನ್ನು ಇಬ್ಬರೂ "ರಾಜ"ರಿಗೆ ಸಮರ್ಪಿಸುತ್ತಿದ್ದೇನೆ. ಒಂದು ರಾಜಣ್ಣ (ಅಣ್ಣಾವ್ರು)   ..ಇನ್ನೊಂದು ನನ್ನ ಸೋದರ ಮಾವ ರಾಜ (ಇವನ ಹೆಸರೂ - ಶ್ರೀಕಾಂತ್)  (ಇವ ನಮ್ಮನ್ನು ಅಗಲಿ ೫ ವರ್ಷಗಳು ಕಳೆದಿವೆ).

ಶ್ರೀಕಾಂತ್ & ಶ್ರೀಕಾಂತ್!
ನನ್ನ ಸೋದರಮಾವ ರಾಜನ ಸಿನಿಮಾ ಹುಚ್ಚು ಅದರ ಬಗ್ಗೆ ಇನ್ನೊಂದು ಸುಧೀರ್ಘ ಮಾಲಿಕೆಯೇ ಬರೆಯಬೇಕು. ಇವನಿಗೆ "ಶಂಕರ್ ಗುರು" ಸಿನಿಮಾ ಎಷ್ಟು ಹುಚ್ಚು ಹಿಡಿಸಿತ್ತು ಎಂದರೆ.. ಕಳೆದ ಹದಿನೈದು ವರ್ಷಗಳಲ್ಲಿ ಶಂಕರ್ ಗುರು ಚಿತ್ರ ಬೆಂಗಳೂರಿನಲ್ಲಿ ಬಿಡುಗಡೆ ಕಂಡ ಕಡೆಯಲ್ಲೆಲ್ಲಾ ನೋಡಿ ಬಂದಿದ್ದೇವೆ. ಒಂದು ಫೋನ್ "ಶ್ರೀಕಾಂತು.....  ಶಂಕರ್ ಗುರು... ಬೇಗ ಬಂದು ಬಿಡು" ಇಷ್ಟೇ ಅವನು ಹೇಳ್ತಾ ಇದ್ದದ್ದು. ನಾನು ಬಿಟ್ಟ ಕೆಲಸ ಬಿಟ್ಟು ಓಡಿ ಬಿಡುತಿದ್ದೆ.

ತ್ರಿಪಾತ್ರದಲ್ಲಿ ಅಮೋಘ ಅಭಿನಯ! 
ಇನ್ನು ಶಂಕರ್ ಗುರು ಸಿನಿಮಾ... ಪಕ್ಕ ವ್ಯಾಪಾರಿ ಚಿತ್ರವಾದರೂ, ಒಂದು ಜೀವನದಲ್ಲಿ ಇರಬೇಕಾದ ಶಿಸ್ತು, ನೆಡತೆ,       ಮಾತಾ-ಪಿತೃಗಳ ಬಗ್ಗೆ ಗೌರವ, ಪ್ರೀತಿ ಪ್ರೇಮ, ಹಿರಿಯರ ಮೇಲಿನ ಗೌರವ, ಮನಕಲಕುವ ಸಂಭಾಷಣೆಗಳು, ಸಾಹಸ ದೃಶ್ಯಗಳು, ಸುಮಧುರ ಹಾಡುಗಳು ಈ ಚಿತ್ರದಲ್ಲಿದೆ.
  • "ಈಗ ನನ್ನ ಚಾನ್ಸ್" ಎನ್ನುತ್ತಾ ಕುಂಕುಮದ ಭರಣಿ ತೆಗೆದು ಮಡದಿಗೆ ಸಿಂಧೂರ ಇಡುವ ಪರಿ
  • ಕೆಲವೊಮ್ಮೆ ದೇಹಕ್ಕೆ ಈ ರೀತಿಯ ದಂಡನೆ ಅನಿವಾರ್ಯ ಎನ್ನುವ ಮಾತು.. 
  • ರೆಸ್ಟ್ ಬೇಕಾಗಿರೋದು ದೇಹಕ್ಕಲ್ಲ ಮನಸ್ಸಿಗೆ ... ಮನಸ್ಸಿಗೆ.. ಎನ್ನುವ ಸಂಭಾಷಣೆ  
  • ಫೋನ್ ನಲ್ಲಿ "ಜಿಂಕೆಯ ಕಣ್ಣೆ  ಚೆನ್ನಾ ಎನ್ನುತ್ತಾ ಹಾಗೆಯೇ ಅಳುತ್ತಾ ಕುಸಿದು ಕೂರುವ ದೃಶ್ಯ... "ಅಬ್ಬಬ್ಬಾ ಇಷ್ಟು ವರ್ಷಗಳಾದ ಇಂತಹ ಆನಂದ" ಎನ್ನುವಾಗ ಅವರ ಅಭಿನಯ!  
  • "ಅಡ್ರೆಸ್ ಕೇಳ್ತಾ ಇದ್ರೂ.. ನಾನು ಕೊಟ್ಟಿದ್ದೇನೆ.. ನೀವು ಮಿಕ್ಕಿದ್ದು ಕೊಡಿ"
  • "ಓಹ್ ಶಂಕರ್.. ನಾನು ಗೈಡ್ ಮಾಡ್ತೀನಿ ಅಂದೇ... ಕೇಳಲಿಲ್ಲ.. ಯಾರೋ ಮಿಸ್-ಗೈಡ್ ಮಾಡಿದ್ದಾರೆ"
  • "ಮೊದಲು ನಾನು ಹೇಳುವ ಮಾತು ಕೇಳೋ ಕ್ರಿಮಿನಲ್" ಎನ್ನುವ ಗುರು 
  • "ಕಾಶ್ಮೀರದ ಹೆಣ್ಣಿನ ಅಹಂಕಾರ ಇಳಿಸಿ.. ಕನ್ನಡ ನಾಡಿಗೆ ಕರೆತರದಿದ್ದರೆ ನನ್ನ ಹೆಸರು ಗುರು ಅಲ್ಲಾ" ಎಂದು ಎದೆ ತಟ್ಟಿ  ಕೊಳ್ಳುವ ಶೈಲಿ 
  • "ತಾತ.. ಹೀಗೆ ನನ್ನ ಇನ್ನೊಮ್ಮೆ ಹಿಡಿದುಕೊಂಡರೆ ನಾನು ಗೋತಾ"
  • ಸುಮಧುರ ಹಾಡುಗಳು, ಸುಂದರ ಪ್ರದೇಶಗಳಲ್ಲಿ ಚಿತ್ರಿಕರನವಾದ ಸಾಹಸ ದೃಶ್ಯಗಳು, ಮೂರು ಪಾತ್ರಗಳನ್ನೂ ಮಾಡಿದ್ದರೂ ಒಂದು ಪಾತ್ರದ ಛಾಯೆ ಇನ್ನೊಂದು ಪಾತ್ರದ ಮೇಲೆ ಮೂಡದಿರುವುದು.. ಇವೆಲ್ಲ ಕೇವಲ ಅಣ್ಣಾವ್ರಿಗೆ ಮಾತ್ರ ಸಾಧ್ಯ ಎನ್ನಿಸುತ್ತದೆ. ಧ್ವನಿಯಲ್ಲಿ ಏರಿಳಿತ, ಪಾತ್ರಕ್ಕೆ ತಕ್ಕ ಆಂಗಿಕ ಅಭಿನಯ. 
  • ತಾಂತ್ರಿಕವಾಗಿಯೂ ಶ್ರೀಮಂತವಾಗಿದ್ದ ಚಿತ್ರದ ಹೈ ಲೈಟ್ ಎಂದರೆ.. ಅಣ್ಣಾವ್ರ ಪಾತ್ರಗಳು ಒಬ್ಬರನ್ನು ಒಬ್ಬರು ಸಂಧಿಸಿದಾಗ ಭ್ರಮೆಯಲ್ಲ ನಿಜ ಅನ್ನುವಂತೆ ಮೂಡಿಬರುವ ಪಾತ್ರಧಾರಿಗಳ ಜೋಡಣೆ, ಮತ್ತು ಅಭಿನಯ. (ಮಧು ಅವರ ಛಾಯ ಚಿತ್ರಣ)
  • ಶಂಕರ್ ಪಾತ್ರ ಕೋಮಲವಾದ ಬಳ್ಳಿಯ ತರಹ ಇದ್ದರೇ, ಗುರುವಿನ ಪಾತ್ರ ಪಕ್ಕ ತರಲೆ, ನಗು ಬುಗ್ಗೆ ಉಕ್ಕಿಸುವ ಪಾತ್ರ, ಇನ್ನು ಇದಕ್ಕೆಲ್ಲ ಕಳಶಪ್ರಾಯ ಎನ್ನುವಂತೆ ಗಂಭೀರ ರಾಜ್ ಶೇಖರ್ ಪಾತ್ರ
  • ಈ ಚಿತ್ರದ ಬಗ್ಗೆ ಒಂದು ಬೇರೆಯೇ ಲೇಖನ ಬರೆಯುವ ಆಸೆ ಇದೆ.. ಕಾರಣ ನಾನು ತುಂಬಾ ಇಷ್ಟ ಪಟ್ಟು ಪದೇ ಪದೇ  ನೋಡಿದ ಹಲವಾರು ಚಿತ್ರಗಳಲ್ಲಿ ಇದೂ ಒಂದು. 
ಒಂದು ಕ್ಲಾಸಿಕ್ ದೃಶ್ಯ!
ಇಷ್ಟೆಲ್ಲಾ  ಮಾತುಗಳು ಏಕೆ ಅಂದ್ರೆ ಇನ್ನೂರು ಚಿಲ್ಲರೆ ಚಿತ್ರಗಳಲ್ಲಿ ಅಭಿನಯಿಸಿದರೂ, ಹಿರಿಯ ಕಿರಿಯ ಕಲಾವಿದರ ಜೊತೆ ಅಭಿನಯ, ಪಾತ್ರಕ್ಕೆ ಅಗತ್ಯವಿದ್ದಾಗ ಹಿರಿಯ ಕಿರಿಯಕಲಾವಿದ ಎಂದು ನೋಡದೆ.. ಕಾಲು ಮುಟ್ಟಿ  ನಮಸ್ಕರಿಸುವುದು, ಆಲಂಗಿಸಿಕೊಳ್ಳುವುದು, ಇದೆಲ್ಲ ತಲೆಯನ್ನು  ಭುಜದ ಮೇಲೆ ಸದಾ ಹೊತ್ತಿರೋರಿಗೆ ಮಾತ್ರ ಸಾಧ್ಯ. ನಿರ್ದೇಶಕರ, ನಿರ್ಮಾಪಕರ ನಟರಾಗಿದ್ದ ಇವರು ಒಂದು ರತ್ನವೇ...   ಅಂತಹ ಒಂದು ರತ್ನ ನಮ್ಮ ಅಣ್ಣಾವ್ರು. ಕಲಾವಿದ ರಾಜ್ ಎಂದಿಗೂ ಅಮರ! 

ಅವರ ಎಲ್ಲ ಚಿತ್ರಗಳನ್ನು ನೋಡಿ, ಪ್ರತಿಯೊಂದು ಚಿತ್ರದ ಬಗ್ಗೆ ನನಗನಿಸಿದ ಮಾತುಗಳನ್ನು ಬರೆಯುವ ಆಸೆ ಇದೆ. ಇದು  ಅಣ್ಣಾವ್ರಿಗೆ ತೋರುವ ಗೌರವ ಅಷ್ಟೇ ಅಲ್ಲಾ ... ಸಿನಿಮಾ ಹುಚ್ಚನ್ನು ನನಗೂ ದಾಟಿಸಿ, ಸಿನೆಮಾಗಳಲ್ಲಿ ಬರುವ ಒಳ್ಳೆಯ ವಿಚಾರಗಳನ್ನು ಕಲಿಸಿ, ತಿಳಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡಿದ ನನ್ನ ಪ್ರೀತಿಯ ಸೋದರಮಾವ ರಾಜನಿಗೂ ಇದು ಒಂದು ನುಡಿ ನಮನವಾಗುತ್ತೆ ಎನ್ನುವ ಒಂದು ಹಂಬಲ .  

ನನ್ನ ಹೃದಯವನ್ನು ಮುಟ್ಟಿದ ಇಬ್ಬರು ಅನಭಿಷಿಕ್ತ "ರಾಜ"ರಿಗೆ ನನ್ನ ಅಕ್ಷರಗಳಲ್ಲಿ ನಮನ ಸಲ್ಲಿಸುವ ಒಂದು ಸಣ್ಣ ಪ್ರಯತ್ನ! 

ಅಣ್ಣಾವ್ರ ಪುಣ್ಯ ತಿಥಿಯ ಈ ಸಮಯದಲ್ಲಿ.. ಸದಾ ನೆನಪಲ್ಲಿ ಇರುವ ಕಲಾವಿದನನ್ನು ಒಮ್ಮೆ ಕಣ್ಣ ಮುಂದೆ ತಂದು                         ನಿಲ್ಲಿಸಿಕೊಳ್ಳುವ ಒಂದು ಪುಟ್ಟ ಪ್ರಯತ್ನ!

8 comments:

  1. ಹೌದು ರಾಜಣ್ಣನ ಚಿತ್ರಗಳ ಧಾಟಿಯೇ ಅಂಥದ್ದು ... ಕಾಲಾತೀತವಾಗಿ ನಿಲ್ಲುವ ಅವರ ಅದೆಷ್ಟೋ ಚಿತ್ರಗಳನ್ನು ಉದಾಹರಣೆಯಾಗಿ ನೀಡಬಹುದು .
    ಇಬ್ಬರು ಅನಭಿಷಿಕ್ತ "ರಾಜ"ರಿಗೆ ನೀವು ಕೊಡುವ ಅಕ್ಷರ ನಮನ ಗಮನಸೆಳೆಯುತ್ತದೆ...
    ಹುಸೇನ್

    ReplyDelete
    Replies
    1. ಸುಂದರ ಪ್ರತಿಕ್ರಿಯೆಗೆ ಧನ್ಯವಾದ ಹುಸೇನ್. ಅಣ್ಣಾವ್ರ ಚಿತ್ರಗಳು ಸಾರ್ವಕಾಲಿಕ.

      Delete
  2. ತುಂಟಾ ನೆಚ್ಚಿಗೆಯಾಯಿತು ಅಪರೂಪದ ಶ್ರೀಕಾಂತ್ & ಶ್ರೀಕಾಂತ್ ಜೋಡಿ ಇದೆ. ಶಂಕರ್ ಗುರು ಯಾವ ಕಾಲಕ್ಕೂ ಕಲೇಕ್ಷನ್ ಗೆಲ್ಲುವ ಚಿತ್ರ. ನನಗೆ ನೆನಪಿದ್ದಂತೆ ಎಲ್ಲೋ ಓಡಿದಂತೆ ವಜ್ರೇಶ್ವರೀ ಸಂಸ್ಥೆ ತನ್ನ ಹಂಚಿಕೆಯನ್ನು ತಾನೇ ಮಾಡಿಕೊಳ್ಳಲು ಆರಂಭಿಸಿದ ಚಿತ್ರವಿದು.

    ತಾವು ಪಟ್ಟಿ ಮಾಡಿಕೊಟ್ಟ ಗುಣಗಳ ಬಹುಶಃ ನಿಜವಾದ ಕರ್ತೃ ವರದಪ್ಪನವರೇ ಇರಬಹುದೇನೋ?

    ಏ‌ಎಮ್ದ ಹಾಗೆ ಕಳಶವಿಟ್ಟಂತೆ ಈ ಚಿತ್ರಕ್ಕೆ ಅಮೋಘ ಮಾಸ್ಕ್ ಛಾಯಾಗ್ರಹಣ ಆರ್. ಮಧುಸೂಧನ್.

    ReplyDelete
    Replies
    1. ಹ ಹ ಹ ಧನ್ಯವಾದಗಳು ಬದರಿ ಸರ್. ಶಂಕರ್ ಗುರು ಪಕ್ಕ ಮಸಾಲೆ ಚಿತ್ರವಾದರೂ ತನ್ನ ಗುಣಗಳನ್ನು ಕಳೆದು ಕೊಳ್ಳದ ಚಿತ್ರ. ಪ್ರತಿಸಲ ನೋಡುವಾಗಲು ಹೊಸತನ ಕೊಡುವ ಚಿತ್ರ. ನೀವು ಹೇಳಿದಂತೆ ಅರ್ ಮಧು ಅವರ ಛಾಯಾಗ್ರಹಣ ಸೂಪರ್. ಮತ್ತು ವಜ್ರೇಶ್ವರಿ ತನ್ನ ಕಾಲಮೇಲೆ ನಿಂತುಕೊಳ್ಳಲು ಸಹಾಯ ಮಾಡಿದ ಚಿತ್ರ ಕೂಡ ಹೌದು. ರಾಜ್ ಎಂಬ ಶಿಲ್ಪದ ಹಿಂದೆ ವರದಪ್ಪ ಅವರ ದೊಡ್ಡ ಕೊಡುಗೆಯೇ ಇದೆ.

      Delete
  3. ನಂಗೂ ಶಂಕರ್ ಗುರು ಇಷ್ಟ...ಮತ್ತೆ ಬಂದಾಗ ನಿಮ್ಮ ಮಾತುಗಳನ್ನ
    ಗಮನದಲ್ಲಿಟ್ಟುಕೊಂಡು ನೋಡ್ತೇನೆ :)

    ReplyDelete
    Replies
    1. ಎಷ್ಟು ಬಾರಿ ನೋಡಿದರು ತಣಿಯದ ಅನೇಕ ಚಿತ್ರಗಳಲ್ಲಿ ಇದು ಒಂದು. ಪ್ರತಿಕ್ರಿಯೆಗೆ ಧನ್ಯವಾದ ಸಹೋದರಿ

      Delete
  4. well said :). Shankar guru is one of my favourites too. The dialogues, the acting, the story, the expression and ofcourse the music. At some parts even though I know logically it is not quite probable, I still sit in front of the screen like a small kid with wide open eyes and see the movie like am seeing it for the first time. That was the magic of Raj

    ReplyDelete
    Replies
    1. ನಿವೇದಿತ! ಪ್ರತಿ ರಾಜ್ ಚಿತ್ರಗಳು ವ್ಯಾಪಾರಿ ದೃಷ್ಟಿಯಿಂದ ಗೆಲುವು ಸೋಲು ಎರಡು ಇದ್ದರೂ ಚಿತ್ರಗಳಲ್ಲಿನ ಮೌಲ್ಯಗಳು ಎಂದು ಕಡಿಮೆ ಇರಲಿಲ್ಲ. ಹಾಗಾಗಿ ಸೋತ ಚಿತ್ರಗಳಲ್ಲೂ ಗಮನ ಸೆಳೆಯುವ ಹಾಡುಗಳು ದೃಶ್ಯಗಳು ಇದ್ದವು. ಮತ್ತು ಅಣ್ಣಾವ್ರ ಅಭಿನಯ ಅದರ ಬಗ್ಗೆ ಮಾತಾಡುವುದೇ ಬೇಡ ಬಿಡಿ. ಅಣ್ಣಾವ್ರು ಯಾವಾಗಲೂ ನಂಬರ್ ಒನ್. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು

      Delete