Sunday, April 20, 2025

ತೂಗುದೀಪ ಹೆಸರೇ ಹೇಳುವಂತೆ ತೂಗುವ ದೀಪ 1966 (ಅಣ್ಣಾವ್ರ ಚಿತ್ರ ೭೨/೨೦೭)

ತೂಗುದೀಪ ಹೆಸರೇ ಹೇಳುವಂತೆ ತೂಗುವ ದೀಪ.. ಬಂಗಾಳಿ ಭಾಷೆಯ ಪ್ರಸಿದ್ಧ ಲೇಖಕ ಬರಹಗಾರ ಶರತ್ ಚಂದ್ರ ಚಟರ್ಜೀ ಅವರ ಚಂದ್ರನಾಥ್ ಕಾದಂಬರಿ ಆಧಾರಿತ ಚಿತ್ರ.. 


ಕೆ ಎಸ್ ಎಲ್ ಸ್ವಾಮಿ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ರಾಜಕುಮಾರ್, ಲೀಲಾವತಿ, ನರಸಿಂಹರಾಜು, ಉದಯಕುಮಾರ್, ಬಿ ವಿ ರಾಧಾ, ಬಾಲಕೃಷ್ಣ ಮುಂತಾದವರ ಜೊತೆ ಚಿತ್ರ ತಯಾರಿಕೆ ಮಾಡಿದ್ದಾರೆ. 


ಶ್ರೀನಿವಾಸ್ ಅನ್ನುವ ನಟ ಈ ಚಿತ್ರದಲ್ಲಿ ಮೊದಲ ಬಾರಿಗೆ ತೆರೆಗೆ ಪರಿಚಯವಾಗಿ ಮುಂದೆ ತೂಗುದೀಪ ಶ್ರೀನಿವಾಸ್ ಅಂತಾನೆ ಪ್ರಸಿದ್ಧಿಯಾದರು. 

ಪಿ ಬಿ ಶ್ರೀನಿವಾಸ್ ಅವರು ಗಾಯಕರಾಗಿ ಪ್ರಸಿದ್ಧಿಯಾದವರು.. ಈ ಚಿತ್ರದಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ಹಾಡಿನ ಮೂಲಕ ಬಂದಿದ್ದಾರೆ.

ವಿಜಯಭಾಸ್ಕರ್ ಅವರ ಅದ್ಭುತ ಸಂಗೀತದಲ್ಲಿ ಎಂಟು ಸುಮಧರ ಸಂಗೀತ ನೀಡಿದ್ದಾರೆ.. 

ಆರ್ ಎನ್ ಜಯಗೋಪಾಲ್, ನಂಜರಾಜ್ ಅರಸ್, ಮತ್ತು ಕೆ ಎಸ್ ಎಲ್ ಸ್ವಾಮಿ ಅವರ ಸಾಹಿತ್ಯ ಸೊಗಸಾಗಿದೆ. 

ಈ ಸಾಹಿತ್ಯಕ್ಕೆ ದನಿಯಾಗಿ ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಮತ್ತು ಎಲ್ ಆರ್ ಈಶ್ವರಿ ಇದ್ದಾರೆ

ಇವರೆಲ್ಲರ ಶ್ರಮವನ್ನು ಆರ್ ಎನ್ ಕೃಷ್ಣಪ್ರಸಾದ್ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕರಾಗಿ!

ಆರ್ ಜಿ ಕೇಶವ್ ಮೂರ್ತಿ ಅವರು ನಿರ್ಮಾಪಕರಾಗಿ ಈ ಅದ್ಭುತ ಚಿತ್ರವನ್ನು ತಂದಿದ್ದಾರೆ.. ಆದರೆ ದುರದೃಷ್ಟವಶಾತ್ ಈ ಚಿತ್ರದ ಎಲ್ಲೂ ಸಿಗದ ಕಾರಣ.. ಈ ಚಿತ್ರವನ್ನು ನೋಡುವ ಸೌಭಾಗ್ಯದಿಂದ ವಂಚಿತರಾಗಿದ್ದೀವಿ.. ಹಾಡುಗಳು ಸಿಗ್ತಾ ಇಲ್ಲ ಆದರೆ ಧ್ವನಿ ಸುರಳಿ ಲಭ್ಯವಿರುವುದರಿಂದ ಅದನ್ನಾದರೂ ಕೇಳಿ ಕುಶಿ ಪಡೋಣ ಅಲ್ಲವೇ.. 


Audio songs of Thoogudeepa kannada movie


 

ಮಕ್ಕಳ ಕಾಲದಿಂದಲೂ ಕೇಳಿ ಬೆಳೆದ ಕಥೆ ಬಾಲನಾಗಮ್ಮ 1966 (ಅಣ್ಣಾವ್ರ ಚಿತ್ರ ೭೧/೨೦೭)

ಓಡಿ ಓಡಿ ಸುಸ್ತಾಗಿದ್ದಾಗ ಮತ್ತೆ ಸ್ವಲ್ಪ ಓಡಬೇಕು ಅಂತ ಅಪ್ಪಣೆ ಬಂದಾಗ.. ಮೊದಲಿದ್ದ ಉತ್ಸಾಹ ಇರುತ್ತದೆ.. ಆದರೆ ದೇಹ ಕೆಲವೊಮ್ಮೆ ಅಲ್ಪ ವಿರಾಮ ಕೇಳುತ್ತದೆ.. ಆಗ ಮುಂದೆ ಇರುವ ಬದಲು ಕೊಂಚ ಹಿಂದೆ ಬಂದು ಸಹಕಾರ ನೀಡಿ ನೆಡೆಯುತ್ತಿರುವ ಓಟದ ಕಾರ್ಯಕ್ರಮಕ್ಕೆ ಬಲ ನೀಡೋದು.. 

ಈ ನಾಲ್ಕು ವರ್ಷಗಳು ರಾಜಕುಮಾರ್ ಅವರ ಪಾಲಿಗೆ ಬಿಡುವಿಲ್ಲದ ವರ್ಷಗಳು ಸರಿ ಸುಮಾರು ೪೬ ಚಿತ್ರಗಳು.. ಅಬ್ಬೊ.. ಆದರೆ ಅಷ್ಟೊಂದು ಸಿನೆಮಾಗಳಲ್ಲಿ ಅಭಿನಯಿಸಿದರೂ ಅಭಿನಯದಲ್ಲಿ ಯಾವುದೇ ರಾಜಿಯಿಲ್ಲ.. ತನ್ನ ಪಾತ್ರ ಪ್ರಮುಖವೋ, ಪ್ರಾಮುಖ್ಯತೆ ಇಲ್ಲವೋ, ಹೆಚ್ಚು ದೃಶ್ಯಗಳು ಇಲ್ಲವೋ ಯೋಚಿಸಿದೆ ಸಿನೆಮಾರಂಗದ ಏಳಿಗೆಗೆ ತಮ್ಮದೇ ರೀತಿಯಲ್ಲಿ ಕಾಣಿಕೆ ಕೊಟ್ಟವರು ಅವರು. 

ಇಷ್ಟೇಕೆ ಪೀಠಿಕೆ ಅಂತೀರಾ.. ಈ ಸಿನಿಮಾದಲ್ಲಿ ಅವರ ಪಾತ್ರ ಬರೋದು ಸುಮಾರು  ಐವತ್ತ ನಾಲ್ಕು ನಿಮಿಷಗಳಾದ ಮೇಲೆ.. ಅಂದರೆ ಚಿತ್ರದ ಎರಡೂವರೆ ಘಂಟೆಯಲ್ಲಿ ಅರ್ಧಭಾಗ ಎನ್ನಬಹುದು.. ನಂತರವೂ ಕೂಡ ಸುಮಾರು ಒಂದು ಎಂಟು ಹತ್ತು ದೃಶ್ಯಗಳು ಇರಬಹುದು.. ಅದರಲ್ಲೂ ಸಹಕಲಾವಿದರ ಜೊತೆಯಲ್ಲಿಯೇ ಹೆಚ್ಚು.. ಏಕಾಂಗಿ ದೃಶ್ಯಗಳು ಇಲ್ಲವೇ ಇಲ್ಲ.. ಮೊದಲೇ ಈ ಕಥೆಯ ಹೆಸರಿನಂತೆ ಬಾಲನಾಗಮ್ಮನ ಪಾತ್ರದ ಸುತ್ತಲೇ ಸುತ್ತುವ ಕಥೆ.. ಆದ್ದರಿಂದ ರಾಜಕುಮಾರ್ ಅವರ ಪಾತ್ರ ಪೋಷಣೆಗೆ ಹೆಚ್ಚು ಅವಕಾಶವಿಲ್ಲ.. ಆದರೂ ಅವರ ಪಾತ್ರವನ್ನು ಕೊಂಚ ಬೆಳೆಸಿದ್ದಾರೆ.. ವಾಣಿಜ್ಯ ದೃಷ್ಟಿಯಿಂದ ಇರಬಹದು.  ಆದರೆ ನಮಗೆ ಆ ಕಾಲದ ಜಾನಪದ ಕಥೆಯನ್ನು ನೋಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯವೇ ಹೌದು..



 
ರಾಜಕುಮಾರ್ ರಾಜಕುಮಾರನಾಗಿಯೇ ಈ ಚಿತ್ರದಲ್ಲಿ ಇರುತ್ತಾರೆ.. ಸರಳವಾದ ಅಭಿನಯ.. ಮುದ್ದಾಗಿ ಕಾಣುವ ಅವರ ವೇಷಭೂಷಣ. ಮಾತಿನ ಧಾಟಿ.. ಎಲ್ಲವೂ ಅವರ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದೆ.. ರಾಜಕುಮಾರ್ ಇಲ್ಲದ ಸಿನೆಮಾವನ್ನು ಊಹಿಸಿಕೊಳ್ಳದ ಕಾಲ ಎಂದು ಆ ಕಾಲದ ಮಾಧ್ಯಮ ಹೇಳಿದ್ದು ಓದಿದ ನೆನಪು.. 

ಪೋಷಕ ಪಾತ್ರವಲ್ಲ ಆದರೆ ನಾಯಕ ಪಾತ್ರಕ್ಕೆ ಹೆಚ್ಚು ಅಭಿನಯ ಅವಕಾಶವಿಲ್ಲ.. ಆದರೂ ಅವರ ನಟನಾ ಹಸಿವು ಈ ಚಿತ್ರದಲ್ಲಿ ಮುಂದುವರೆದಿದೆ.. 


ಸಪ್ತಸಾಗರದಾಚೆ ದುರ್ಗಮ ಹಾದಿಯಲ್ಲಿ ದಟ್ಟ ಗೊಂಡಾರಣ್ಯದ ಮಧ್ಯೆ ಗವಿಯಲ್ಲಿ ಪಂಜರದ ಗಿಳಿಯಲ್ಲಿ ತನ್ನ ಪ್ರಾಣ ಇಟ್ಟು.. ತನ್ನ ಮಾಯಾವಿ ವಿದ್ಯೆಯಿಂದ ಜಗತ್ತನ್ನೇ ವಶಮಾಡಿಕೊಳ್ಳಲು ಹಂಬಲಿಸುವ ಮಾಯಾ ಮರಾಠಿ ಪಾತ್ರದಲ್ಲಿ ಉದಯಕುಮಾರ್ ಝಲ್ ಎನ್ನಿಸುತ್ತಾರೆ. ಆ ಅಭಿನಯ, ಗತ್ತು, ಧ್ವನಿ.. ಕಣ್ಣುಗಳು.. ಅವರ ವೇಷಭೂಷಣಕ್ಕೆ ಒಳ್ಳೆಯ ಸಾತ್ ಕೊಟ್ಟಿದೆ. 


ಗೊಂಬೆ ಎಂದರೆ ಗೊಂಬೆ ಅನ್ನಿಸುವ ರಾಜಶ್ರೀ ಈ ಚಿತ್ರದ ನಾಯಕಿ ಬಲನಾಗಮ್ಮನ ಪಾತ್ರಧಾರಿ. 


ಉಳಿದಂತೆ ಆರಂಭದಲ್ಲಿ ಕಾಣಿಸಿಕೊಳ್ಳುವ ಬಾಲಕೃಷ್ಣ, ಪಂಡರಿಬಾಯಿ, ಕಲ್ಪನಾ, ರಮಾದೇವಿ, ವಿ. ನಾಗಯ್ಯ, ಚಿತ್ರಕಥೆಗೆ ತಕ್ಕಂತೆ ಅಭಿನಯ ನೀಡಿದ್ದಾರೆ. 







ಸುಮಾರು ಚಿತ್ರದ ಅಂತ್ಯದ ವೇಳೆ ಬರುವ ಮಾಸ್ಟರ್ ಬಾಬು ಅರ್ಥಾತ್ ಬಾಲನಾಗಮ್ಮನ ಮಗನ ಪಾತ್ರಧಾರಿ ಬಾಲವರ್ದನ ಗಮನ ಸೆಳೆಯುತ್ತಾನೆ. ಮರಿ ರಾಜಕುಮಾರನಿಗಿರಬೇಕಾದ ಗತ್ತು, ಮಾತುಗಳು, ಚಾಕಚಕ್ಯತೆ, ಕಣ್ಣುಗಳು ಎಲ್ಲವೂ ಸೊಗಸಾಗಿ ಮೇಳೈಸಿದೆ. 


ನರಸಿಂಹರಾಜು ಅವರ ಪಾತ್ರ ಹಾಸ್ಯ ಉಕ್ಕಿಸುತ್ತದೆ.. ಎರಡು ಹೆಂಡಿರ ಗಂಡನಾಗಿ ಪಡುವ ಪಾಡು, ಇದರ ಜೊತೆಯಲ್ಲಿ ಜವಾಬ್ಧಾರಿ ಸ್ನೇಹಿತನಾಗಿ, ಕೋಟೆಯ ರಕ್ಷಣೆ ಜವಾಬ್ಧಾರಿ ಹೊತ್ತ ಪಾತ್ರದಲ್ಲಿ ಮಿಂಚುತ್ತಾರೆ. ಅನಿಸುತ್ತದೆ ನಾಯಕನಿಗಿಂತ ಇವರಿಗೆ ಕೊಂಚ ಹೆಚ್ಚು ದೃಶ್ಯಗಳಿವೆ ಅಂತ :-)

ತಮ್ಮ ಹಾದಿಯಲ್ಲಿ ಬಂದ ಪ್ರತಿಯೊಂದು ಹೂವನ್ನು ಮಾಲೆಗೆ ಸೇರಿಸಿಕೊಂಡು ಮಿಂಚುತ್ತಾ ನೆಡೆಯುತ್ತಿರುವ ರಾಜಕುಮಾರ್ ಅವರ ಮುಂದಿನ ಚಿತ್ರದಲ್ಲಿ ಸೇರೋಣ!

Saturday, April 19, 2025

ಸಾಮಾಜಿಕ ಕಥೆಗಳಿಗೂ ಒಗ್ಗಿಕೊಂಡು ಜಾದೂ ಮಾಡಿದ ಕಠಾರಿ ವೀರ 1966 (ಅಣ್ಣಾವ್ರ ಚಿತ್ರ ೭೦/೨೦೭)

ಕೆಲವು ಚಿತ್ರಗಳು ಅನೇಕ ಪ್ರಥಮಗಳಿಗೆ ಕಾರಣವಾಗುತ್ತದೆ.. ಹೌದು ಕಠಾರಿ ವೀರ ಈ ಚಿತ್ರ ಒಂದು ಜಾನಪದ ಕಥಾನಕ ಹೊಂದಿದ ಚಿತ್ರ.. ಭಕ್ತಿರಸಗಳ ಚಿತ್ರಗಳಲ್ಲಿ ಮಿಂದೆದಿದ್ದ ರಾಜಕುಮಾರ್ ಅವರು ಸ್ವಲ್ಪ ಬದಲಾವಣೆಯಿಂದ ಕೂಡಿದ ಚಿತ್ರವಿದು.. ಪ್ರಾಯಶಃ ಈ ಚಿತ್ರವಾದ ಮೇಲೆ ಅನೇಕಾನೇಕ ಸಾಮಾಜಿಕ ಕಥಾನಕ ವಸ್ತುಗಳ ಚಿತ್ರಗಳು ಬಂತು.. 


ಹೌದು ಮೊದಲೇ ಹೇಳಿದ್ದೆ ಈ ಚಿತ್ರ ಅನೇಕ ಪ್ರಥಮಗಳ ಚಿತ್ರ ಅಂತ.. ನಿಜ ಸಂಗೀತ  ನಿರ್ದೇಶಕರಾಗಿ ಉಪೇಂದ್ರಕುಮಾರ ಪಾದಾರ್ಪಣೆ ಮಾಡಿದರು.. 
ಆ ಕಾಲದ ಮೋಹಕ ನಟಿ ಎನಿಸಿದ್ದ ಉದಯಚಂದ್ರಿಕ ಅವರ ಮೊದಲ ಚಿತ್ರವಿದು.. 
ಖಳನಾಯಕನಾಗಿ ಮುಂದೆ ಹೆಸರು ಮಾಡಿದ ನಾಗಪ್ಪ ಈ ಚಿತ್ರಜೀವನ ಆರಂಭಿಸಿದ್ದು ಈ ಚಿತ್ರದಿಂದ!

ರಾಜಕುಮಾರ್ ಅವರ ಪಾತ್ರ ಒಂದು ಸಾಮ್ರಾಜ್ಯವನ್ನು ಕಾಪಾಡುವ ರಾಜಭಕ್ತಿಯಿಂದ ಕೂಡಿದ ವಂಶದ ಕುಡಿ.. ತನ್ನ ಅಪ್ಪನನ್ನು ರಾಜದ್ರೋಹಿ ಎಂದು ಪರಿಗಣಿಸಿದ ಒಂದು ದುಷ್ಟ ಸೇನಾಧಿಪತಿಯನ್ನು ಎದುರಿಸಿ ಅವನಿಂದ ಶೋಷಣೆಗೊಳಗಾದವರನ್ನು ಮತ್ತು ಸಾಮ್ರಾಜ್ಯವನ್ನು ರಕ್ಷಿಸುವ ಪಾತ್ರ, 

ಆ ಜಾನಪದ ಕಥಾವಸ್ತುವಿನ ನಾಯಕನ ವೇಷಭೂಷಣಗಳು ಒಪ್ಪವಾಗಿ ರಾಜಕುಮಾರ್ ಅವರು ಬಹಳ ಸುಂದರವಾಗಿ ಕಾಣುತ್ತಾರೆ. ಹೊಡೆದಾಟದ ದೃಶ್ಯಗಳಲ್ಲಿ, ಭಾವನಾತ್ಮಕವಾದ ಸನ್ನಿವೇಶಗಳು, ರಾಜಭಕ್ತಿಯನ್ನು ಪ್ರದರ್ಶಿಸುವಲ್ಲಿ.. ಹಾಗೆಯೇ ಹಾಸ್ಯದ ಸನ್ನಿವೇಶಗಳಲ್ಲಿ.. ಹಾಗೆಯೇ ವೇಷಮರೆಸಿಕೊಂಡು ಬಂದಿದ್ದ ನಾಯಕಿಯನ್ನು ಗುರುತಿಸಲಾಗದೆ ಆಕೆಯ ಜೊತೆಯಲ್ಲಿ ಮಾತಾಡುವ ದೃಶ್ಯಗಳು.. ನಂತರ ಅವಳೇ ತಾನು ಇಷ್ಟಪಡುವ ನಾಯಕಿ ಎಂದು ಅರಿವಾದಾಗ ತೋರುವ ಭಾವ.. ಚಿತ್ರಕ್ಕೆ ಒಪ್ಪವಾಗಿ ಮೂಡಿಬಂದಿದೆ. ಈ ರೀತಿಯ ಪಾತ್ರಗಳು ಅವರಿಗೆ ಒಂದು ರೀತಿಯ ಅಂಗೈನ ಗೆರೆಗಳಾಗಿ ಬಿಟ್ಟಿವೆ ಅನಿಸುತ್ತೆ. ಹಿಂದಿನ ಅನೇಕ ಚಿತ್ರಗಳಲ್ಲಿ ಈ ರೀತಿಯ ಪಾತ್ರಗಳು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಅವರ ಅಭಿನಯ ಮೂಡಿ ಬಂದಿರುವುದು ನಾವು ಕಾಣಬಹುದು. 

ಆದರೆ ಪ್ರತಿಯೊಂದು ಪಾತ್ರವೂ ವಿಭಿನ್ನವಾಗಿ ಮೂಡಿಬರಲು ಕಾರಣ.. ಮತ್ತೆ ಆ ಪಾತ್ರದ ಅಭಿನಯ ಈ ಪಾತ್ರದ ಮೇಲೆ ಪರಿಣಾಮ ಬೀರೋದು.. ಅಥವ ಅರೆ ಇದೆ ಅಭಿನಯ ಆ ಚಿತ್ರದಲ್ಲಿ ಅನ್ನುವ ಹಾಗೆಯೇ ಇಲ್ಲ.. ಪ್ರತಿಯೊಂದು ಚಿತ್ರದ ಪಾತ್ರವೂ ವಿಭಿನ್ನ.. ಅದು ಹೇಗೆ ಅಂದರೆ ಒಬ್ಬನೇ ಸೂರ್ಯ ಉದಯವಾಗೋದು.. ಅಸ್ತವಾಗೋದು.. ಆದರೆ ಪ್ರತಿಯೊಂದು ದಿನವೂ ವಿಭಿನ್ನವಾಗಿ ಕಾಣೋದು.. ರಾಜಕುಮಾರ್ ಅವರ ಅಭಿನಯದ ಹರವು ಕೂಡ ಹಾಗೆಯೇ!

ಖಳನಾಯಕ ಎಂದರೆ ಜೋರಾಗಿ ಅಬ್ಬರಿಸೋದು. ವಿಚಿತ್ರ ವೇಷಭೂಷಣ ಅನ್ನುವ ಹಾಗಿಲ್ಲದೆ.. ತಮ್ಮ ಅಭಿನಯದಿಂದಲೇ ಅಬ್ಬಬ್ಬಾ ಎಷ್ಟು ಕ್ರೂರಿ ಈತ ಅನಿಸುವಷ್ಟು ಪರಿಣಾಮಕಾರಿ ಅಭಿನಯ ನೀಡಿರೋದು ಉದಯಕುಮಾರ್.. ಗಂಭೀರವಾದ ಸಂಭಾಷಣೆ, ಅದಕ್ಕೆ ಬೇಕಾದ ನಾಟಕೀಯ ಸ್ಪರ್ಶ.. ಆ ಗತ್ತು ಎಲ್ಲವೂ ಸೂಪರ್.. 

ಹಾಸ್ಯದೃಶ್ಯಗಳು ಬಾಲಕೃಷ್ಣ ಮತ್ತು ನರಸಿಂಹರಾಜು ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಚುರುಕಾದ ಸಂಭಾಷಣೆಗಳು ಖುಷಿಕೊಡುತ್ತವೆ. 

ಉದಯಚಂದ್ರಿಕಾ ಆ ಕಪ್ಪು ಬಿಳುಪು ವರ್ಣಗಳಲ್ಲಿ ಅವರ ಸೌಂದರ್ಯ ಅದ್ಭುತವಾಗಿ ಕಾಣುತ್ತದೆ. ಕತ್ತಿಕಾಳಗದಲ್ಲಿ ಅವರು ತೋರುವ ಲವಲವಿಕೆ . ಭಾವನಾತ್ಮಕವಾದ ದೃಶ್ಯಗಳಲ್ಲಿ ಸೊಗಸಾದ ಅಭಿನಯ.. ಸೊಗಸು. 

ಉಳಿದಂತೆ ಪಾಪಮ್ಮ, ನಾಗಪ್ಪ ನಾ ಈಗ ಏನ್ ಮಾಡ್ಲಿ ಅಂತ ಸದಾ ಕೇಳುವ ರತ್ನಾಕರ್.. ಮುಂತಾದ ಸಹಕಲಾವಿದರ ಅಭಿನಯ ಚಿತ್ರದ ಓಘಕ್ಕೆ ಸಾಥ್ ಕೊಟ್ಟಿದೆ,








ಉಪೇಂದ್ರಕುಮಾರ್ ಅವರ ಸರಳ ಸಂಗೀತ.. 
ಸೋರಟ್ ಅಶ್ವಥ್ ಸಂಭಾಷಣೆ ಹಾಗೂ ಗೀತಗಳ ಜವಾಬ್ಧಾರಿ 
ಆರ್ ಮಧು ಅವರ ಸೊಗಸಾದ ಛಾಯಾಗ್ರಹಣ 
ಈ ಎಲ್ಲರ ಪರಿಶ್ರಮವನ್ನು ಮತ್ತು ನಿರ್ಮಾಪಕರು ಟಿ ವಾಸಣ್ಣ ಹಾಗೂ ಎಸ್ ಹೀರಾ ಅವರ ನಿರ್ಮಾಣವನ್ನು ಸದುಪಯೋಗ ಮಾಡಿಕೊಂಡಿರುವ ವೈ ವಿ ರಾವ್ ಅವರು ಚಿತ್ರಕಥೆಯೊಂದಿಗೆ ನಿರ್ದೇಶನ ಮಾಡಿದ್ದಾರೆ.. 

Saturday, April 12, 2025

ಮಂತ್ರ ಹಾಕಿದಂತೆ ಪರಕಾಯ ಪ್ರವೇಶ ಮಾಡಿದ ಮಂತ್ರಾಲಯ ಮಹಾತ್ಮೆ 1966 (ಅಣ್ಣಾವ್ರ ಚಿತ್ರ ೬೯/೨೦೭)

ಒಂದು ನಾನು ನಾನಾಗಿರಬಹುದು.. ಇಲ್ಲವೇ ನಾನು ಏನಾದರೂ ಆಗಬಹುದು.. ಇದು ಎರಡು ಬಿಟ್ಟು ಇನ್ನೊಂದು ಸಾಧ್ಯತೆ ಇದೆ.. ಅದಕ್ಕೆ ದೈವ ಅನುಗ್ರಹದ ಜೊತೆಗೆ ಆ ಶಕ್ತಿಗೆ ಶರಣಾಗಬೇಕು.. 

ರಾಜಕುಮಾರ್ ಅವರು ಈ ಚಿತ್ರದಲ್ಲಿ ಆ ಮೂರನೇ ಹಂತದಲ್ಲಿ ವಿಜೃಂಭಿಸಿದ್ದಾರೆ.. ಈ ರೀತಿಯ ಸಂಕೀರ್ಣ ಪಾತ್ರಗಳನ್ನ ಹಿಂದಿನ ಅನೇಕ ಚಿತ್ರ ಪಾತ್ರಗಳಲ್ಲಿ ಮಾಡಿಕೊಂಡು ಬಂದಿದ್ದರು.. ಆದರೆ ಇಲ್ಲಿನ ಪಾತ್ರ ವಿಶೇಷ ಮತ್ತು ಅನೇಕಾನೇಕ ಭಕ್ತಾದಿಗಳು ತಮ್ಮ ಅಂತರಂಗ ಶಕ್ತಿ ಎಂದೇ ನಂಬಿ ಶತಮಾನಗಳಿಂದಲೂ ಮತ್ತು ಮುಂದಿನ ಶತಮಾನಗಳಲ್ಲೂ ಅನುಸರಿಸುವ.. ಭಕ್ತಿಯಿಂದ ನೆಡೆದುಕೊಳ್ಳುವ ಮಂತ್ರಾಲಯದ ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರ.. 

ಇಲ್ಲಿ ರಾಜಕುಮಾರ್ ಅಭಿನಯಿಸಿಲ್ಲ ಬದಲಿಗೆ ಅನೇಕ ಪವಾಡಗಳನ್ನು ಮಾಡಿ ರಾಘವೇಂದ್ರ ಸ್ವಾಮಿಗಳು ಇಲ್ಲಿ ಇನ್ನೊಂದು ಪವಾಡವನ್ನು ಮಾಡಿ.. ರಾಜಕುಮಾರ್ ಅವರ ಅಭಿನಯದೊಳಗೆ ಸೇರಿಕೊಂಡುಬಿಟ್ಟಿದ್ದಾರೆ.. ರಾಜಕುಮಾರ್ ಅವರು ಪರಕಾಯ ಪ್ರವೇಶ ಮಾಡಿಲ್ಲ ಬದಲಿಗೆ ರಾಯರೇ ರಾಜಕುಮಾರ್ ಅವರ ಬೆನ್ನ ಹಿಂದೆ ನಿಂತು ಈ ಪಾತ್ರವನ್ನು ಅಭಿನಯ ಮಾಡುವಂತೆ ಶಕ್ತಿ ನೀಡಿದ್ದಾರೆ ಅಂದರೆ ಇದು ಅತಿಶಯೋಕ್ತಿ ಅನ್ನೋಕೆ ಆಗೋಲ್ಲ.. ಕಾರಣ ಕಟ್ಟು ನಿಟ್ಟಾದ ವ್ರತವನ್ನು ಅನುಸರಿಸಿ ಈ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

ಮಠದ ಜವಾಬ್ಧಾರಿಯನ್ನು ಹೊತ್ತು ನಿಭಾಯಿಸುವಾಗ ಬೇಕಾದ ಸಂಯಮ..  ಸ್ವಾಮಿಗಳಿಗೆ ಇರಬೇಕಾದ ತಾಳ್ಮೆ, ಅದಕ್ಕೆ ತಕ್ಕಂತೆ ತಮ್ಮ ಸಂಭಾಷಣೆಯ ಶೈಲಿಯನ್ನು ಒಗ್ಗಿಸಿಕೊಂಡಿರುವುದು.. ಅವರ ದೇಹದಾರ್ಢ್ಯ.. ಮುಖಭಾವ.. ಅದರಲ್ಲೂ ಯತಿಗಳಾದ ಮೇಲೆ ಗಡ್ಡಧಾರಿಯಾಗಿ ನೀಡಿದ ಅಭಿನಯ.. ಅಬ್ಬಬ್ಬಾ ಅನಿಸುತ್ತದೆ.. ರಾಯರನ್ನು ನೋಡಲೇ ಬೇಕಿಲ್ಲ.. ಈ ಸಿನೆಮಾವನ್ನು ಒಮ್ಮೆ ನೋಡಿದರೆ ಸಾಕು.. ಗುರು ರಾಘವೇಂದ್ರರೆ ಕಣ್ಣೆದುರು ನಿಂತಂತೆ ಭಾಸವಾಗುತ್ತದೆ. 

ನಮಗರಿವಿಲ್ಲದೆ ಮನಸ್ಸು ಕೈ ಮುಗಿಯುತ್ತದೆ. 

ಇಲ್ಲಿನ ಪ್ರತಿಯೊಂದು ಪಾತ್ರವೂ ಜೀವಿಸಿದೆ.. 

ಉದಯಕುಮಾರ್,ಆದವಾನಿ ಲಕ್ಷ್ಮಿದೇವಿ, ಕಲ್ಪನಾ, ಜಯಂತಿ ತಮ್ಮ ಪುಟ್ಟ ಪಾತ್ರಗಳಲ್ಲಿ ಸಲೀಸಾಗಿ ನಟಿಸಿದ್ದಾರೆ..

ಚಿತ್ರದ ಸುಮಾರು ದೃಶ್ಯಗಳಲ್ಲಿ ಬರುವ ಸುಧೀಂದ್ರ ತೀರ್ಥ ಪಾತ್ರದಲ್ಲಿ ಎಚ್ ರಾಮಚಂದ್ರ ಶಾಸ್ತ್ರೀ ಜೀವ ತುಂಬಿದ ಅಭಿನಯ ನೀಡಿದ್ದಾರೆ.. 

ಈ ಚಿತ್ರದ ಬಗ್ಗೆ ಬರೆದಷ್ಟು ಮುಗಿಯೋಲ್ಲ.. 

ಸುಶ್ರಾವ್ಯ ಸಂಗೀತ ನೀಡಿದ ರಾಜನ್ ನಾಗೇಂದ್ರ ಜೋಡಿ 

ಗೀತೆಗಳನ್ನು ರಚಿಸಿದ ಜಿ ವಿ ಅಯ್ಯರ್ 

ರಾಯರೇ ರಚಿಸಿದ ಇಂದು ಎನಗೆ ಗೋವಿಂದ ಹಾಡಿಗೆ ಸುಮಧುರ ಸಂಗೀತ ನೀಡಿದ್ದಾರೆ ಅಷ್ಟೇ ಸೊಗಸಾಗಿ ಪಿ ಬಿ ಶ್ರೀನಿವಾಸ್ ಅವರ ಗಾಯನ ಮನಸ್ಸೆಳೆಯುತ್ತದೆ. 

ಜಗಜ್ಯೋತಿ ಫಿಲಂಸ್ ಲಾಂಛನದಡಿ ತಯಾರಾದ ಚಿತ್ರಕ್ಕೆ 

ಹಾಡುಗಳಿಗೆ ಪಿ ಶ್ರೀನಿವಾಸ್, ಎಸ್ ಜಾನಕೀ, ಪಿ ಲೀಲಾ ಎಲ್ ಆರ್ ಈಶ್ವರಿ ಸಿ ಎಸ್ ಸರೋಜಿನಿ ಬೆಂಗಳೂರು ಲತಾ ಮತ್ತು ವೀರಮಣಿ ತಮ್ಮ ಧ್ವನಿ ನೀಡಿದ್ದಾರೆ. 

ಬಿ ದೊರೈರಾಜ್ ಛಾಯಾಗ್ರಹಣ ಮತ್ತು ಅವರ ಸ್ನೇಹಿತ ಭಗವಾನ್ ಸಹ ನಿರ್ದೇಶನ  ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. 

ಟಿ ವಿ ಸಿಂಗ್ ಠಾಕೂರ್ ಜೊತೆಗೆ ದೊರೈರಾಜ್ ಮತ್ತು ಭಗವಾನ್ ನಿರ್ಮಾಪಕರಾಗಿದ್ದಾರೆ. 

ನಿರ್ದೇಶನವನ್ನು ಟಿ ವಿ ಸಿಂಗ್ ಠಾಕೂರ್ ನೋಡಿಕೊಂಡಿದ್ದಾರೆ. 










ಸಹ ಕಲಾವಿದರ ಪ್ರತಿಭೆ ಅಣ್ಣಾವ್ರ ಮಾತುಗಳಲ್ಲಿ ... ಪುಣ್ಯ ದಿನ - 2025

ಇನ್ನೂ ಬೆಳಕು ಹರಿದಿರಲಿಲ್ಲ.. ಆದರೆ ಒಂದು ಪುಟ್ಟ ಬೆಳಕು ನನ್ನ ಮಲಗುವ ಕೋಣೆಯಲ್ಲಿ ಬೆಳಗಿನ ಜಾವ ನಸುಕು ನಸುಕು ಮಸುಕು ಮಸುಕು.. ಯಾರೋ ಬಾಗಿಲು ತಟ್ಟಿದ ಸದ್ದು.. ಕಾಲಿಂಗ್ ಬೆಲ್ ಬ್ಯಾಟರಿ ಹೋಗಿತ್ತು ಆದ್ದರಿಂದ ಬಾಗಿಲು ಬಡಿಯುತ್ತಿದ್ದರು.. 

ಕಣ್ಣುಜ್ಜಿಕೊಂಡೆ ಬಾಗಿಲು ತೆರೆದೆ ... ಪ್ರಕಾಶಮಾನವಾದ ಒಂದು ಜ್ಯೋತಿ ಮೆಲ್ಲಗೆ ಆಕೃತಿ ತಳೆಯುತಿತ್ತು...ಬಿಳಿ ಅಂಗಿ.. ಬಿಳಿ ಪಂಚೆ.. ಆ ನಸುಕಿನಲ್ಲೂ ಹುಣ್ಣಿಮೆಯಾಗಿದ್ದರಿಂದ ತೇಜೋಮಯವಾದ ಹೊಳೆಯುವ ಮುಖ ನೋಡಿದ ಕೂಡಲೇ ಗೊತ್ತಾಯ್ತು..

ನನ್ನ ಕಣ್ಣನ್ನು ನಾನೇ ನಂಬಲಿಲ್ಲ.. ಕಣ್ಣುಜ್ಜಿಕೊಂಡೆ.. ನನ್ನನ್ನು ತಳ್ಳಿಕೊಂಡೇ ಒಳಗೆ ಬಂದೆ ಬಿಟ್ಟರು.. ತಮ್ಮದೇ ಚಿತ್ರವನ್ನು ನನ್ನ ಮನೆಯಲ್ಲಿ ನೋಡಿ.. ಅರೆ ಈ ಫೋಟೋ ಇನ್ನೂ ಇದೆ ಇಲ್ಲಿ .. ಎಂದು ತಮ್ಮದೇ ಶೈಲಿಯಲ್ಲಿ ಬಂದು ಚಾಪೆ ಮೇಲೆ ಕೂತೆ ಬಿಟ್ಟರು.. 

ಇನ್ನೂ ನನಗೆ ಗಾಬರಿ, ಕುತೂಹಲ, ಕಂಪನ.. ಮಾತು ಹೊರಡುತ್ತಿಲ್ಲ.. ಅವರೇ ತಮ್ಮ ಬಳಿ ನನ್ನ ಕೂರಿಸಿಕೊಂಡು.. ನೋಡಪ್ಪ ಶ್ರೀ ನಿನ್ನ ಲ್ಯಾಪ್ಟಾಪ್ ನೋಡಿದೆ.. ನನ್ನ ಬಗ್ಗೆ ನೀನೇನೋ ಬರೀತೀಯ ಅಂತ ಗೊತ್ತು.. ಅದಕ್ಕೆ ಮೊದಲೇ ನಾ ಇಲ್ಲಿಗೆ ಬಂದೆ.. ನೋಡು ಇವತ್ತು ನನ್ನ ಹಾಡಿ ಹೊಗಳೋದು.. ಅಣ್ಣಾವ್ರು..ದೇವರು .. ನಟಸಾರ್ವಭೌಮ.. ಗಾನ ಗಂಧರ್ವ ಈ ಪಳೆಯುಳಿಕೆ ಮಾತುಗಳನ್ನು ಮತ್ತೆ ಬರೆಯಬಾರದು ಅಂತ ಮೊದಲೇ ಓಡಿ ಬಂದೆ.. 



ಅಣ್ಣಾವ್ರೇ ಸಂಧ್ಯಾರಾಗ ಚಿತ್ರದ ಹಾಡಿನಲ್ಲಿರುವಂತೆ "ದೀನ ನಾ ಬಂದಿರುವೆ" ಅಂತ "ಕೃಷ್ಣಾಲಯದಾಚೆ ನಿಂತ ಕನಕನ ಹಾಗೆ" ಎನ್ನುವಂತೆ ನಾ ನಿಮ್ಮ ಮುಂದೆ ಇರುವೆ.. ನೀವು ಹೇಳಿ ನಾ ಅದನ್ನು ಇಲ್ಲಿ ದಾಖಲಿಸುತ್ತೇನೆ ಅಷ್ಟೇ ಅಣ್ಣಾವ್ರೇ"

"ಶಭಾಷ್ ಜಮಾಯಿಸಿ ಬಿಡು ಹಾಗಾದರೆ ಶ್ರೀ.. ನೋಡು ಇಂದು ನಾ ಹೇಳ ಹೊರಟಿರುವುದು ನನ್ನ ಸಹಕಲಾವಿದರು ನನ್ನನ್ನು ಮೀರಿಸಿರೋದರ ಬಗ್ಗೆ.. .. ನಾ ಅವರ ಅಭಿನಯ ಮೆಚ್ಚಿಕೊಂಡಿರುವುದು .. ನನಗೆ ಇಷ್ಟವಾಗಿರೋದು.. ಅದರ ಬಗ್ಗೆ ಹೇಳುತ್ತೇನೆ.. 

ವಜ್ರಮುನಿ : ಅದೇನೋ ಒಂದು ಸೆಳೆತ  ಇವರ ಅಭಿನಯ ಕಂಡಾಗ.. ಮಲ್ಲಮ್ಮನ ಪವಾಡದಿಂದ ಆಕಸ್ಮಿಕ ಚಿತ್ರದ ತನಕ ನನ್ನ ಅವರ ಜುಗಲ್ ಬಂದಿ ನನಗೆ ಇಷ್ಟ.. 
ಅದರಲ್ಲೂ ಸಂಭಾಷಣೆಯೇ ಇಲ್ಲದೇ ಗಿರಿಕನ್ಯೆ ಚಿತ್ರದಲ್ಲಿ ಇಬ್ಬರೂ ನಗುತ್ತಿರುವುದು.. 
ಮಯೂರ ಚಿತ್ರದ ದರ್ಬಾರ್ ದೃಶ್ಯ.. 
ಶಂಕರ್ ಗುರು ಚಿತ್ರದಲ್ಲಿ ನನ್ನ ದ್ವಿಪಾತ್ರ ಅವರ ಹೆಗಲ ಮೇಲೆ ಕೈಯಿಟ್ಟು ಮಾತಾಡುವ ದೃಶ್ಯ..  
ದಾರಿ ತಪ್ಪಿದ ಮಗ ಚಿತ್ರದ ದರೋಡೆ ದೃಶ್ಯಗಳು.. 
ಪ್ರೇಮದ ಕಾಣಿಕೆ ಚಿತ್ರದಲ್ಲಿ ಮನೆಯಲ್ಲಿ ನಮ್ಮಿಬ್ಬರ ಹೊಡೆದಾಟಕ್ಕೆ ಮುಂಚಿನ ದೃಶ್ಯ..
ಬಡವರ ಬಂಧು ಚಿತ್ರದಲ್ಲಿ ನಮ್ಮಿಬ್ಬರ ಅನೇಕಾನೇಕ ದೃಶ್ಯಗಳು 
ಬಹದ್ದೂರ್ ಗಂಡು ಚಿತ್ರದ ಕತ್ತಿ ಕಾಳಗ 
ಸಂಪತ್ತಿಗೆ ಸವಾಲ್.. ನಿನ್ನ ಸಂಪತ್ತಿಗೆ ನನ್ನ ಸವಾಲ್  ದೃಶ್ಯ 
ಬಂಗಾರದ ಮನುಷ್ಯದಲ್ಲಿ ಮಾವ ನನಗೆ  ದುಡ್ಡು ಬೇಕು ಮಾತಿನ ದೃಶ್ಯ 
ಹೀಗೆ ಹತ್ತಾರು ಸಿನಿಮಾಗಳು ಹತ್ತಾರು ಸ್ಮರಣೀಯ ಅಭಿನಯ 

ತೂಗುದೀಪ ಶ್ರೀನಿವಾಸ್: ಇವರಿದ್ದಾಗಭಯವಾಗುತ್ತಿತ್ತು ನನಗೆ.. ನನ್ನ ಅಭಿನಯ ತಿಂದು ಬಿಡ್ತಾರೆ ಅಂತ.. 
ನೀ ನನ್ನ ಗೆಲ್ಲಲಾರೆ ಅಂತಿಮ ದೃಶ್ಯದಲ್ಲಿ ನಮ್ಮಿಬ್ಬರ ಮಾತುಗಳು 
ಶಂಕರ್ ಗುರು ಚಿತ್ರದಲ್ಲಿ ಓಕೆ ೫೦ : ೫೦ ಎಂದು ಹೇಳುವುದು 
ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಬಾಕ್ಸಿಂಗ್ ದೃಶ್ಯಗಳು 
ಅದೇ ಕಣ್ಣು ನನ್ನ ನೆರಳಾಗಿ ಕಾಪಾಡುವ ಹಾಗೂ ಕಾಣುವ ಅಭಿನಯ 
ಧ್ರುವತಾರೆ ಚಿತ್ರದ ಕೆಲವು ದೃಶ್ಯಗಳು 
ಜ್ವಾಲಾಮುಖಿಯಲ್ಲಿ ಮಟ್ಕಾ ಕಿಂಗ್ 
ಕೆರಳಿದ ಸಿಂಹದ ಅಂತಿಮ ದೃಶ್ಯಗಳು 
ಕಾಮನಬಿಲ್ಲು ಚಿತ್ರದ ಕಿರಿ ಗೌಡ 
ಇವರು ಖಳರಷ್ಟೇ ಅಲ್ಲದೆ ಅನೇಕ ಪೋಷಕಪಾತ್ರಗಳ ಅಭಿನಯ ನನಗೆ ಇಷ್ಟ 


ಬಾಲಣ್ಣ : ಇವರನ್ನು ಹೇಗೆ ಮರೆಯೋದು.. ನನಗೆ ಅಕ್ಷರ ಕಲಿಸಿದ ಗುರು ಇವರು.. ಆರಂಭದಲ್ಲಿ ಖಳರಾಗಿ ಮುರಿಯದ ಮನೆ, ಕಣ್ತೆರೆದು ನೋಡು, ಗಂಧದ ಗುಡಿ, ಬಡವರ ಬಂಧು, ತ್ರಿಮೂರ್ತಿ , ಕರುಣೆಯೇ ಕುಟುಂಬದ ಕಣ್ಣು, ಭಕ್ತ ಕುಂಬಾರ, ಸಂತ ತುಕಾರಾಂ, ಧ್ರುವತಾರೆ, ಸಂಪತ್ತಿಗೆ ಸವಾಲ್ ಹೀಗೆ ಹತ್ತಾರು ಚಿತ್ರಗಳು.. ಆದರೆ ನಂತರ ಪೋಷಕ ಪಾತ್ರಗಳಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ, ನಾ ನಿನ್ನ ಮರೆಯಲಾರೆ, ಕಾಮನಬಿಲ್ಲು, ಬಂಗಾರದ ಮನುಷ್ಯ, ಪ್ರೇಮದ ಕಾಣಿಕೆ, ಶಂಕರ್ ಗುರು, ತಾಯಿಗೆ ತಕ್ಕ ಮಗ ಮುಂತಾದ ಚಿತ್ರಗಳಲ್ಲಿ ಅಷ್ಟೇ ಮನೋಜ್ಞ ಅಭಿನಯ ನೀಡಿದ್ದರು 

ಇವರು ನನ್ನ ಚಿತ್ರಗಳಲ್ಲಿ ಖಾಯಂ ಖಳನಾಯಕರು.. ಇವರಲ್ಲದೆ  ಎಂ ಪಿ ಶಂಕರ್, ಪ್ರಭಾಕರ್, ನಾಗಪ್ಪ, ದಿನೇಶ್, ಸುದರ್ಶನ್, ಶ್ರೀನಾಥ್, ಉದಯಕುಮಾರ್, ಕಲ್ಯಾಣ್ ಕುಮಾರ್ ಹೀಗೆ ಇವರು ಒಂದು ಕಡೆ.. 

ನನ್ನ ಪಾತ್ರಕ್ಕೆ ಇನ್ನಷ್ಟು ತೂಕ ಕೊಡುತ್ತಿದ್ದರು ಸಹಕಲಾವಿದರು

ನನ್ನ ಎರಡನೇ ತಾಯಿ ಅಂತಲೇ ಹೆಸರಾಗಿದ್ದ ಪಂಡರಿಬಾಯಿ.. 
ಇವರ ನಂತರ ನನ್ನ ಇನ್ನೊಬ್ಬ ತಾಯಿ ಆದವಾನಿ ಲಕ್ಷ್ಮೀದೇವಿ 

ನನಗೆ ತಾಯಿ ಪ್ರೇಮವನ್ನು ಉಣಬಡಿಸಿದವರು 

ಆರಂಭದ ಚಿತ್ರಗಳಲ್ಲಿ ದುಷ್ಟ ಪಾತ್ರಗಳಲ್ಲಿ ನನಗೆ ಕಾಟ ಕೊಡುತ್ತಿದ್ದ ಪಾಪಮ್ಮ ನಂತರ ಕರುಣಾಮಯಿ ಪಾತ್ರಗಳಲ್ಲಿ ಮಿಂಚಿದರು.. 
ನನ್ನ ಕುಟುಂಬದ ಒಂದು ಭಾಗವೇ ಆಗಿದ್ದ ಶಾಂತಮ್ಮ 
ಸುಮಾರು ನಾಲ್ಕು ದಶಕಗಳು ನನ್ನ ಕುಟುಂಬದ ಅವಿಭಾಜ್ಯವಾಗಿದ್ದ ಹೊನ್ನವಳ್ಳಿ ಕೃಷ್ಣ

ಒಂದೇ ಎರಡೇ ಅನೇಕಾನೇಕ ಕಲಾವಿದರು ನನ್ನನ್ನು ಮುತ್ತುರಾಜನಿಂದ ರಾಜಕುಮಾರ್ ಮಾಡಿದ್ದಾರೆ, 

ಇಪ್ಪತ್ತನಾಲ್ಕನೆ ತಾರೀಕು ನನ್ನ ಇನ್ನೊಬ್ಬ ನೆಚ್ಚಿನ ಕಲಾವಿದನ ಬಗ್ಗೆ ನೀ ಬರೆಯಬೇಕು.. ನಿನಗೆ ಹನ್ನೆರಡು ದಿನಗಳ ಸಮಯ ಕೊಟ್ಟಿದ್ದೀನಿ.. ಇದರ ಜವಾಬ್ಧಾರಿ ನಿನದು.. 

ಆಗಲಿ ಅಣ್ಣಾವ್ರೇ.. ನೀವು ನನಗೆ ಕೆಲಸ ಕೊಡುವುದು.. ಅದನ್ನು ನಾ ಮಾಡುವುದು ಅದಕ್ಕಿಂತ ಈ ಬದುಕಿಗೆ ಇನ್ನೇನು ಬೇಕಾಗಿದೆ!

ಶುಭವಾಗಲಿ ಶ್ರೀ.. ನಿಮ್ಮಿಂದಲೇ ಮಣ್ಣಾಗಿ ಹತ್ತೊಂಬತ್ತು ವರ್ಷಗಳಾಯಿತು ಶ್ರೀ.. ನಂಬೋಕೆ ಆಗ್ತಿಲ್ಲ.. ಮಣ್ಣಾದೆ ಅಷ್ಟೇ ಆದರೆ ನಿಮ್ಮಗಳ ಹೃದಯದಲ್ಲಿ ಸದಾ ಈ ನಿಮ್ಮ ರಾಜಕುಮಾರ ಅಜರಾಮರ!