Sunday, February 5, 2017

ಸಾಮಾಜಿಕ ಕಳಕಳಿ ತುಂಬಿಕೊಂಡು ಬಂದ ರಾಯರ ಸೊಸೆ (1957) (ಅಣ್ಣಾವ್ರ ಚಿತ್ರ ೦೭ / ೨೦೭)

ಶಾಲೆಯಲ್ಲಿ ಮಾಸ್ತರು ಒಮ್ಮೆ ಪಾಠದ ಮಧ್ಯೆ "ನಮಗೆ ಬೇಕಿದ್ದಕ್ಕಿಂತ ಒಂದು ಗ್ರಾಂ ಹೆಚ್ಚಿಗಿದ್ದರೂ ಅದು ಅನ್ಯ ಮಾರ್ಗದಲ್ಲಿ ಸಂಪಾದಿಸಿದ್ದು ಎನ್ನಬಹುದು" ಎಂದು ಹೇಳಿದ್ದರು.. ಆಗ ನಮಗೆ ಬರಿ ಪದಗಳು ಮಾತ್ರ ಅರ್ಥವಾಗಿತ್ತು, ಆದರೆ ಭಾವವಾಗಲಿ ಅಥವಾ ಪದಗಳ ಮಧ್ಯೆ ಬಚ್ಚಿಟ್ಟುಕೊಂಡಿದ್ದ ಅರ್ಥವಾಗಲಿ ಆಗಿರಲಿಲ್ಲ. ಕಾಲಾನುಕಾಲಕ್ಕೆ ಬುದ್ಧಿ ವಿಕಸನಗೊಂಡಹಾಗೆ (???????) ಮಾಸ್ತರು ಹೇಳಿದ್ದ ಆ ಪದಗಳ ಗೂಢಾರ್ಥ ಅರಿವಾಗತೊಡಗಿತ್ತು.

ತನ್ನ ಬಳಿಯೇ ಅಪಾರ ಸಂಪತ್ತಿದ್ದರೂ,  ಧನದಾಹಕ್ಕೆ ಮರುಳಾಗಿ ಸುಂದರ ನಂದನವನದಂತಹ ಸಂಸಾರವನ್ನು ನಿರಾಶೆಯ ಕಡಲಿನ ಕಡೆಗೆ ದಾಪುಗಾಲು ಹಾಕುತ್ತಾರೆ.. ಸಮಯಕ್ಕೆ ಸರಿಯಾಗಿ ಸಿಕ್ಕ ತಿಳುವಳಿಕೆಯ ಮಾರ್ಗದಿಂದ ಹೇಗೆ ಬದಲಾಗಬಹುದು ಎನ್ನುವ ಪುಟ್ಟ ಸಂದೇಶ ಹೊಂದಿದ್ದು ಈ ಚಿತ್ರದ ಹೆಗ್ಗಳಿಕೆ.

ಭಕ್ತಿರಸದಲ್ಲಿ ಮೀಯುತ್ತಿದ್ದ ರಾಜ್ ತಮ್ಮ ಏಳನೇ ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ಮೂಡಿಬಂದಿದ್ದಾರೆ.   ವರದಕ್ಷಿಣೆ ಪಿಡುಗು ಹೆಣ್ಣುಮಕ್ಕಳನ್ನು ಮದುವೆಗೆ ಮುಂಚೆ ಮತ್ತು ನಂತರವೂ ಕಾಡುವ ಭೂತ. ವಿಶೇಷ ಎಂದರೆ ಈ ಚಿತ್ರವನ್ನು ನಿರ್ಮಿಸಿದ್ದು ರಾಜ್ ಅವರ ಹಿಂದಿನ ಆರು ಚಿತ್ರಗಳಲ್ಲಿ ಐದು ಚಿತ್ರಗಳಿಗೆ ನಾಯಕಿಯಾಗಿದ್ದ ಕರುನಾಡಿನ ಅಮ್ಮ ಪಂಡರಿಬಾಯಿ ಅವರು.

ಶ್ರೀ ಪಾಂಡುರಂಗ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿತವಾದ ಈ ಚಿತ್ರವನ್ನು ಆರ್. ರಾಮಮೂರ್ತಿ ಮತ್ತು ಕೆ ಎಸ್ ಮೂರ್ತಿ ನಿರ್ದೇಶನ ಮಾಡಿದ್ದಾರೆ, ಅವರಿಗೆ ಕಥೆ ಸಂಭಾಷಣೆ ಕೊಟ್ಟವರು ಪಿ. ಗುಂಡೂರಾವ್. ಛಾಯಾಗ್ರಹಣಕ್ಕೆ ಕ್ಯಾಮೆರಾ ಹಿಡಿದವರು ಸಂಪತ್ ಮತ್ತು ಸಂಗೀತ ದಿವಾಕರ್ ಅವರದ್ದು.

ಕಲ್ಯಾಣ್ ಕುಮಾರ್ ಮತ್ತು ಮೈನಾವತಿ ದಾಂಪತ್ಯದಲ್ಲಿ ಕಲ್ಯಾಣ್ ಕುಮಾರ್ ಅವರ ಧನದಾಹಿ ಅಪ್ಪ ರಾಮಚಂದ್ರಶಾಸ್ತ್ರಿ ವರದಕ್ಷಿಣೆ ಬಾಕಿ ಬಾಬ್ತು ನೆಪದಲ್ಲಿ ತನ್ನ ಸೊಸೆಯನ್ನು ತವರಿಗೆ ಅಟ್ಟುತ್ತಾರೆ. ಅವರ ಮಡದಿ ಜಯಶ್ರೀ ಎಷ್ಟೇ ಗೋಗರೆದರು ಕೇಳದೆ ಸೊಸೆಯನ್ನು ತವರಿಗೆ ಹೋಗಿ ಬರಬೇಕಿದ್ದ ಹಣವನ್ನು ತಂದರೆ ನಿನಗೆ ಜಾಗ ಇಲ್ಲದೆ ಹೋದರೆ ಅಲ್ಲೇ ನೀನು ಇಲ್ಲೇ ಇವನು ಎಂದು ಕಠೋರವಾಗಿ ಹೇಳಿ ಶುಕ್ರವಾರ ಮುಸ್ಸಂಜೆ ತನ್ನ ಸೊಸೆಯನ್ನು ಹೊರಹಾಕುತ್ತಾರೆ.

ತವರು ಮನೆಯ ಪರಿಸ್ಥಿತಿ ಗೊತ್ತಿದ್ದ ಮೈನಾವತಿ, ಏನೂ ಮಾಡಲು ತೋಚದೆ ತವರು ಮನೆಯ ಹಾದಿ ಹಿಡಿಯುತ್ತಾರೆ. ಇದನ್ನೆಲ್ಲಾ ಸರಿ ಪಡಿಸಲು ಕಲ್ಯಾಣ್ ಕುಮಾರ್ ತನ್ನ ಮಿತ್ರ ರಾಜ್ ಕುಮಾರ್ ಸಹಾಯ ಕೋರುತ್ತಾರೆ. ಅಪರಿಮಿತವಾಗಿ ಪ್ರೀತಿಸುತ್ತಿದ್ದ ಕಲ್ಯಾಣ್ ಕುಮಾರ್ ತನ್ನ ಮಡದಿ ಮೈನಾವತಿಯನ್ನು ಬಿಟ್ಟಿರಲಾರದೆ, ರಾಜ್ ಕುಮಾರ್ ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಹೇಳಿ, ತಾನು ಅವಾಗವಾಗ ಅಲ್ಲಿಗೆ ಬರುತ್ತಿರುತ್ತಾರೆ.

ಬುದ್ದಿವಂತ ದಂಪತಿಗಳಾಗಿ ರಾಜ್ ಕುಮಾರ್ ಮತ್ತು ಪಂಡರಿಬಾಯಿ ಕೆಲವು ಉಪಾಯಗಳನ್ನು ಮಾಡಿ, ನೊಂದಿದ್ದ
ಸಂಸಾರವನ್ನು ಸರಿ ಪಡಿಸುತ್ತಾರೆ. ಇದರ ಮಧ್ಯೆ ಹಾದು ಬರುವ ಸನ್ನಿವೇಶಗಳು, ಹಾಡುಗಳು ಮತ್ತು ಸಂಭಾಷಣೆಗಳು ಈ ಚಿತ್ರವನ್ನು  ನೋಡುಗರ ಭಾವಕ್ಕೆ ಅನುಭವಿಸುವಂತೆ ಮಾಡಿದೆ.

****
ರಾಮಚಂದ್ರ ಶಾಸ್ತ್ರೀ ತಮ್ಮ ಮಗ ತಮ್ಮ ಮಾತಿಗೆ ವಿರುದ್ಧ ನೆಡೆದರೆ, ಮನೆಯಲ್ಲಿರುವ ರಮಾದೇವಿ ಅವರ ಪೆದ್ದು ಮಗ ನರಸಿಂಹರಾಜು ಅವರನ್ನೇ ದತ್ತುತೆಗೆದುಕೊಂಡು, ಇಡೀ ಆಸ್ತಿಯನ್ನು ಬರೆದುಬಿಡುತ್ತೇನೆ ಎಂದಾಗ.. ರಮಾದೇವಿ ಮತ್ತು ನರಸಿಂಹರಾಜು ಅವರ ನಡುವಿನ ಸಂಭಾಷಣೆ ಮಜಾ ಕೊಡುತ್ತೆ.


"ಅಮ್ಮ ಹಪ್ಪಳ ಕೊಡೆ.. ಸಪ್ಪಳ ಮಾಡದ ಹಾಗೆ ತಿಂದು ಬಿಡುತ್ತೇನೆ"

"ಗಣಪ ನಿನ್ನ ಅದೃಷ್ಟ ಆನೆ ಮೇಲೆ ಬರುತ್ತೆ ಕಣೋ.. "
"ಅಮ್ಮ ಆನೆ ಮೇಲೆ ಬೇಡ.. ಅದು ಎತ್ತರಕ್ಕೆ ಇರುತ್ತದೆ.. ಕತ್ತೆ ಮೇಲೆ ಬರೋಕೆ ಹೇಳು.. ಅದರ ಮೇಲೆ ನಾನೇ ಹತ್ತಿ ಬರುತ್ತೇನೆ"

"ನನ್ನನ್ನು ದತ್ತು ತೆಗೆದುಕೊಂಡರೆ, ಧಣಿಯ ಮಗನ ಹೆಂಡತಿ ನನ್ನ ಹೆಂಡತಿಯಾಗುತ್ತಾಳೆ" (ಆಹಾ ಎಂಥಹ ತರ್ಕ)
"ಹಣ ಕೊಡುತ್ತೇನೆ ಎಂದರೆ.. ಅವರ ಅಪ್ಪನಿಗೂ ದತ್ತುವಾಗುತ್ತೇನೆ"

****

ಹಣ ತರದ ಸೊಸೆಯ ಬದಲಿಗೆ, ತನ್ನ ಮಗನಿಗೆ ಯಥೇಚ್ಛ ಹಣ ಕೊಡುವ ಸಂಬಂಧ ಹುಡುಕುತ್ತಿರುವಾಗ, ಆ ಉದ್ದೇಶವನ್ನು ರಾಜ್ ಕುಮಾರ್ ವಿಫಲಗೊಳಿಸುತ್ತಾರೆ. ಆಗ ಆ ಸಂದರ್ಭವನ್ನು ರಮಾದೇವಿ ತನ್ನ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುವ ಸಲುವಾಗಿ ತನ್ನ ಪೆದ್ದು ಮಗ ನರಸಿಂಹರಾಜುವನ್ನು ಕರೆತಂದು..

"ಇವನೇ ಹುಡುಗ.. ಒಪ್ಪಿಸಿಕೊಳ್ಳಿ, ನೀವು ಹೇಳಿದಂತೆ ಕೇಳುತ್ತಾ, ಮನೆ ಅಳಿಯನಾಗಿ ನಿಮ್ಮ ಮನೆಯಲ್ಲಿಯೇ ಇದ್ದುಬಿಡುತ್ತಾನೆ, ಜೊತೆಯಲ್ಲಿ ನಾನು ಕೂಡ ಅದು ಇದು ಕೆಲಸ ಮಾಡುತ್ತಾ ನಿಮ್ಮ ಮನೆಯಲ್ಲಿಯೇ ಉಳಿದುಬಿಡುತ್ತೇನೆ, ನೆಡೆಯಿರಿ ನಮಗೂ ರೈಲ್ ಟಿಕೆಟ್ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡುತ್ತಾಳೆ"

"ಏನಪ್ಪಾ ಓದಿದ್ದೀಯ" ಅಂತ ಹುಡುಗಿಯ ತಂದೆ ಕೇಳಿದಾಗ

ನರಸಿಂಹರಾಜು "ನೋಡಿ ಪುಸ್ತಕ ಇರೋ ತನಕ ಓದಿದೆ.. ಆಮೇಲೆ ಮಾಡಿದೆ ನಿದ್ದೆ.. ನಮ್ಮಮ್ಮ ಗಣಪನ ಗುಡಿಗೆ ಹೋದಾಗ.. ದೇವರ ಬಲಗಡೆಯಿಂದ ಪ್ರಸಾದ ಬಿತ್ತು.. ಆಗ ಮಗ ಬುದ್ದಿವಂತನಾಗುತ್ತಾನೆ ಎಂದರು.. ಹೇಗೂ ನಾ ಬುದ್ದಿವಂತ ಆಗುತ್ತೇನೆ, ಇನ್ಯಾಕೆ ಓದಲಿ ಅಂತ ಓದು ಬಿಟ್ಟೆ.... ನಮ್ಮಪ್ಪ ಗಣಪತಿ ಗುಡಿಗೆ ಹೋದಾಗ ಎಡಗಡೆ ಪ್ರಸಾದ ಬಿತ್ತು ... ನಿಮ್ಮ ಮಗ ದಡ್ಡನಾಗುತ್ತಾನೆ ಎಂದರು.. ಹೇಗೂ ನಾನು ದಡ್ಡನಾಗುತ್ತೇನೆ, ಸುಮ್ನೆ ಯಾಕೆ ಓದೋದು ಅಂತ ಬಿಟ್ಟೆ"

ನರಸಿಂಹರಾಜು ಈ ಮಾತನ್ನು ಹೇಳುವಾಗ ಅವರ ಮುಖಭಾವ ನೋಡಲು ಚಂದ.. !!!

ಬಾಲಕೃಷ್ಣ ಈ ಚಿತ್ರದಿಂದ ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ಕಾಣತೊಡಗಿದರು. ರಾಜ್ ಕುಮಾರ್ ಅವರಿಗಿಂತ ಮೊದಲೇ ಚಿತ್ರರಂಗಕ್ಕೆ ಬಂದಿದ್ದರೂ.. ಆ ಕಾಲಕ್ಕೆ ತಯಾರಾಗುತ್ತಿದ್ದ ಚಿತ್ರಗಳು ಕಡಿಮೆಯೇ.. ಕಾಲಾನಂತರ ರಾಜ್ ಕುಮಾರ್ ಪ್ರಸಿದ್ಧರಾಗುತ್ತಾ ಬಂದ ಹಾಗೆ ಚಿತ್ರಗಳ ಸಂಖ್ಯೆಯೂ ಹೆಚ್ಚಿತು, ಜೊತೆಯಲ್ಲಿ ನರಸಿಂಹರಾಜು ಮತ್ತು ಬಾಲಕೃಷ್ಣ ಜೋಡಿಯೂ ಕೂಡ.

ಚಿಕ್ಕ ಚೊಕ್ಕ ಪಾತ್ರದಲ್ಲಿ ಬಾಲಕೃಷ್ಣ ತಮ್ಮ ಛಾಪನ್ನು ತೋರಿಸುತ್ತಾರೆ. ಸಂಭಾಷಣೆಯ ಶೈಲಿ, ಅಂಗೀಕಾ ಅಭಿನಯ ಇಷ್ಟವಾಗುತ್ತದೆ. ಚಿತ್ರದಲ್ಲಿ ಹೀಗೆ ಬಂದು ಹಾಗೆ ಹೋಗುವ ಒಂದೆರಡು ಚಿಕ್ಕ ಪುಟ್ಟ ಸನ್ನಿವೇಶಗಳು, ಅಷ್ಟರಲ್ಲಿಯೇ ತಮ್ಮ ಅಭಿನಯದ ಮಿಂಚನ್ನು ಹರಿಸುತ್ತಾರೆ.. !!!


ಈ ಚಿತ್ರದಲ್ಲಿ ವರದಕ್ಷಿಣೆ ಪಿಡುಗು ಹೇಗೆ ಹೆಣ್ಣು ಹೆತ್ತವರನ್ನು ಕಾಡುತ್ತದೆ  ಎಂದು ಸೂಚ್ಯವಾಗಿ ತೋರಿಸಿದ್ದಾರೆ.  ದಾಸನಾಗಿ, ಸಂತನಾಗಿ, ಭಕ್ತನಾಗಿ ಅಲ್ಲಿಯ ತನಕ ತೆರೆ ಮೇಲೆ ಕಂಡಿದ್ದ ರಾಜ್ ಕುಮಾರ್ ಇಲ್ಲಿ ಹಠಾತ್ ಸೂಟು ಬೂಟಿನಲ್ಲಿ ಕಂಗೊಳಿಸುತ್ತಾರೆ. ಕತ್ತರಿಸಿದ ಕೇಶರಾಶಿ, ಚಿಗುರು ಮೀಸೆ (ಅವರ ಕಡೆಯ ಚಿತ್ರದ ತನಕ ಚಿಗುರು ಮೀಸೆಯಲ್ಲಿಯೇ ಬಂದದ್ದು ಅವರ ವಿಶೇಷ).

ಡಾಕ್ಟರ್ ಪಾತ್ರದಲ್ಲಿ ಅದಕ್ಕೆ ಬೇಕಾದ ಆಯಾಮ ಒದಗಿಸಿದ್ದಾರೆ, ಹದವರಿತ ಮಾತು, ಉಚ್ಚಾರಣೆ, ಆಂಗ್ಲ ಭಾಷೆಯ ಪದಬಳಕೆ, ಎಲ್ಲವೂ ಲೀಲಾಜಾಲವಾಗಿ ಮೂಡಿಬಂದಿದೆ. ಹಿಂದಿನ ಚಿತ್ರಗಳಲ್ಲಿ ಭಕ್ತಿ ಭಾವ ಪೂರಿತ ಪಾತ್ರಗಳಿಂದ ಸಾಮಾಜಿಕ ಪಾತ್ರದಲ್ಲಿ ಅದರಲ್ಲೂ ಸುಶಿಕ್ಷಿತ ಡಾಕ್ಟರ್ ಪಾತ್ರದಲ್ಲಿ ಅಭಿನಯಿಸಿರುವ ರೀತಿ ತನ್ನೊಳಗೆ ಇರುವ ಕಲಾವಿದನ ಹಸಿವನ್ನು ತೋರಿಸಿದ್ದಾರೆ.

ಈ ಚಿತ್ರದಲ್ಲಿ ಪ್ರಮುಖ ಪಾತ್ರ ಎಂದರೆ ರಾಮಚಂದ್ರ ಶಾಸ್ತ್ರಿಯವರದ್ದು, ದುರಾಸೆಯ ಅಪ್ಪನಾಗಿ ಅವರ ಸಂಭಾಷಣೆ ವೈಖರಿ ಖುಷಿಯಾಗುತ್ತದೆ. ಮನೆಯ ಶಾಂತಿಗೆ, ನೆಮ್ಮದಿಗೆ ರುದ್ರದೇವರಿಗೆ ಜಲಾಭಿಷೇಕ, ವಿಷ್ಣುವಿಗೆ ಕ್ಷೀರಾಭಿಷೇಕ, ಆಂಜನೇಯನಿಗೆ ತೈಲಾಭಿಷೇಕ ಮಾಡಿಸಬೇಕು ಪುರೋಹಿತರು ಹೇಳಿದರೆ,  ಜಿಪುಣಾಗ್ರೇಸರ ಹೇಳುವ ಮಾತು

"ತಲೆಯ ಮೇಲೆ ಗಂಗೆಯನ್ನು ಹೊತ್ತ ಶಿವನಿಗೆ ಏಕೆ ಜಲಾಭಿಷೇಕ
ಕ್ಷೀರಸಾಗರದಲ್ಲಿಯೇ ಮಲಗಿರುವ ವಿಷ್ಣುವಿಗೆ ಒಂದು ತಂಬಿಗೆ ಹಾಲು ಏಕೆ ಬೇಕು
ಬಾಲ ಬ್ರಹ್ಮಚಾರಿ ಆಂಜನೇಯನಿಗೆ ಎಣ್ಣೆ ಸ್ನಾನ ಮಾಡಿಸೋರು ಯಾರು. . ಹೋಗ್ರಿ ಇವೆಲ್ಲ ದುಡ್ಡುಕೀಳುವ ತಂತ್ರ ಎಂದು ಬಯ್ದು ಅಟ್ಟುತ್ತಾರೆ..

ನಂತರ ".. ಗಿಣಿಯಂತೆ ಮಾತನಾಡಿ ಗುಡ್ ಬೈ ಹೇಳೋನು ನಾನು, ನನ್ನ ಹತ್ರ ದುಡ್ಡು ಕೇಳುತ್ತೀರಾ" ಎಂದು ಮೀಸೆ ತಿರುವುತ್ತಾರೆ. ಬಹುಶಃ ಅವರ ಚಿತ್ರ ಜೀವನದಲ್ಲಿ ಒಂದು ಚಿತ್ರದುದ್ದಕ್ಕೂ ಸಿಕ್ಕ ಪ್ರಮುಖ ಪಾತ್ರ ಇದಾಗಿತ್ತು ಅನ್ನಿಸುತ್ತದೆ.

ಪಂಡರಿಬಾಯಿ ಅವರು ಚಿತ್ರದ ನಿರ್ಮಾಪಕಿಯಾಗಿದ್ದರೂ ಕೂಡ ತಮ್ಮ ಪಾತ್ರಕ್ಕೆ ಅತಿ ಮಹತ್ವ ಕೊಡದೆ, ಕಥೆಯ ಜೊತೆಯಲ್ಲಿನ ಸಣ್ಣ ಪಾತ್ರವಾಗಿ ನಿಲ್ಲುವುದು ನಿಜಕ್ಕೂ ಅವರ ಮನಸ್ಸು ಎಂತಹದ್ದು ಎಂದು ತೋರಿಸುತ್ತದೆ.  ಮೈನಾವತಿ ಕೂಡ ಪಾತ್ರಕ್ಕೆ ಬೇಕಿದ್ದ ನಟನೆಯನ್ನು ತುಂಬಿಕೊಂಡು ಬಂದಿದ್ದಾರೆ.


ಮುದ್ದುಮುದ್ದಾಗಿ ಕಾಣುವ ಕಲ್ಯಾಣ್ ಕುಮಾರ್, ಪಂಡರಿಬಾಯಿ ನಂತರ ಮಮತಾಮಯಿ ತಾಯಿ ಪಾತ್ರದಲ್ಲಿ ಮಿಂಚುವ ಜಯಶ್ರೀ, ಘಟವಾಣಿಯಾಗಿ ರಮಾದೇವಿ, ಅವರ ಪೆದ್ದು ಮಗನಾಗಿ ನರಸಿಂಹರಾಜು ಸುಲಲಿತ ಅಭಿನಯ ನೀಡಿದ್ದಾರೆ.

ಇಲ್ಲಿ ರಾಜ್ ಕುಮಾರ್ ತುಂಬಾ ಮುದ್ದಾಗಿ ಕಾಣಲು ಕಾರಣ ಅವರ ಕತ್ತರಿಸಿದ ಕೇಶರಾಶಿ, ಚಿಗುರು ಮೀಸೆ, ಅಭಿನಯದಲ್ಲಿ ಪಳಗಿರುವ ಲಕ್ಷಣಗಳಿಂದ ಹಿತವಾಗಿದ್ದಾರೆ. ಶುದ್ಧ ಕನ್ನಡ ಭಾಷೆಯ ಉಚ್ಚಾರಣೆ ಅವರ ಮೊದಲ ಚಿತ್ರದಿಂದಲೂ ಇತ್ತು, ಆದರೆ ಈ ಚಿತ್ರದಲ್ಲಿ ಅಚ್ಚುಕಟ್ಟಾಗಿ ಆಂಗ್ಲ ಪದ ಬಳಕೆ, ಆ ಡಾಕ್ಟರ್ ವೃತ್ತಿಗೆ ಇರಬೇಕಾದ ಗಂಭೀರತೆ ತೋರುವುದು ಖುಷಿಕೊಡುತ್ತದೆ.


ಸಾಮಾಜಿಕ ಸಂದೇಶವಾಗಿ ಈ ಚಿತ್ರ ವರದಕ್ಷಿಣೆಯ ಪಿಡುಗನ್ನು ಗಮನದಲ್ಲಿಟ್ಟುಕೊಂಡು ಬೆಳ್ಳಿ ತೆರೆಯನ್ನು ಅಲಂಕರಿಸಿದ್ದು ೧೯೫೭ರಲ್ಲಿ.. ಇದು ರಾಜಕುಮಾರ್ ಅವರ ಬಿಡುಗಡೆಗೊಂಡ ಏಳನೇ ಮಣಿಯಾಗಿ  ತಾಯಿ ಭುವನೇಶ್ವರಿಯ ಮಾಲೆಯಲ್ಲಿ ಸೇರಿಕೊಂಡು ಬಿಟ್ಟಿತು. !!

ಮತ್ತೊಮ್ಮೆ ಇನ್ನೊಂದು ಚಿತ್ರರತ್ನದ ಜೊತೆಯಲ್ಲಿ!!!

2 comments:

  1. Veena Hs ChandrashekharFebruary 5, 2017 at 10:41 PM

    ಚಿತ್ರ ನಿರೂಪಣೆ ಚೆನ್ನಾಗಿ ಮೂಡಿ ಬಂದಿದೆ. ಹಾಸ್ಯ ಸನ್ನಿವೇಶಗಳು ಮನಸ್ಸೆಳೆಯಿತು
    ಶ್ರೀಕಾಂತನ ಛಾಪು ಎದ್ದು ಕಾಣುತ್ತಿತ್ತು... ಸೂಪರ್

    ReplyDelete
  2. ಒಂದೊಂದು ಚಿತ್ರದ ಬಗ್ಗೆ ಓದಿದಾಗಲೂ ರಾಜ್ ಅವರು ಹೇಗೆ ಮೊದಲ ಚಿತ್ರದಿಂದ ಹೇಗೆ ಬೆಳೆದರು ಎನ್ನುವ ಚಿತ್ರ ಮೂಡಿಬರ್ತಾ ಇದೆ. ಸೂಪರ್ :)

    ReplyDelete