Sunday, May 4, 2025

ಮಮಕಾರ ಹೆಚ್ಚಿಸುವ ಪ್ರೇಮಮಯಿ 1966 (ಅಣ್ಣಾವ್ರ ಚಿತ್ರ ೭೩/೨೦೭)

ಅರೆ ಇದೇನಿದು.. ಹೀಗೆ.. ನಾ ಮತ್ತೆ ಕರುಣೆಯೇ ಕುಟುಂಬದ ಕಣ್ಣು ಚಿತ್ರ ನೋಡುತ್ತಿದ್ದೇನೆಯೇ ಅನ್ನಿಸಿತು.. ರಾಜಕುಮಾರ್ ಅವರು ಚಿತ್ರದ ಪರದೆಯಿಂದ ಹೊರಗೆ ಬಂದು... ಶ್ರೀ ಇಲ್ಲಪ್ಪ ಮುಂದೆ ನೋಡು.. ಎರಡು ಮೂರು ದೃಶ್ಯಗಳನ್ನು ನೋಡಿಯೇ ತೀರ್ಮಾನಕ್ಕೆ ಬರಬೇಡ.. ಇನ್ನೂ ಸ್ವಲ್ಪ ದೃಶ್ಯಗಳನ್ನು ನೋಡು ಆಮೇಲೆ ನಿನ್ನ ನಿರ್ಧಾರ ಹೇಳುವಂತೆ.. 

ಮೊದಲ ಕೆಲವು ದೃಶ್ಯಗಳು ನೋಡಿದಾಗ ಅಯ್ಯೋ ರಾಜಕುಮಾರ್ ಅವರು ಈ ಚಿತ್ರವನ್ನು ಏಕೆ ಒಪ್ಪಿಕೊಂಡರು ಅನಿಸುತ್ತದೆ.. ಕಾರಣ ಕುಟುಂಬ ಜೀವನ.. ಎಲ್ಲರೂ ನಮ್ಮವರು ಎಲ್ಲರೂ ನನ್ನವರು ಅನ್ನುವ ಭಾವನೆ ಅವರ ಎಲ್ಲಾ ಚಿತ್ರಗಳಲ್ಲಿಯೂ ಇದ್ದವು.. ಕೆಲವೊಂದು ಚಿತ್ರಗಳು ಉಲ್ಟಾ ಗುಣಗಳನ್ನು ತೋರಿದರೂ ನಂತರ ಉತ್ತರಾರ್ಧದಲ್ಲಿ ಬದಲಾದ ಚಿತ್ರಕಥೆ ಅವರ ಚಿತ್ರಗಳ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸುತಿತ್ತು.. 


ಕೆಲವು ದುಷ್ಟ ಸಹವಾಸಗಳಿಂದ, ಅದಕ್ಕೆ ಬೇಕಾದ ಹಣದ ಮುಗ್ಗಟ್ಟು.. ತನ್ನ ಸ್ನೇಹಿತರ ದಾರಿ ತಪ್ಪಿಸುವ ಮಾತುಗಳಿಂದ ತನ್ನ ಅಣ್ಣನನ್ನು ಆಸ್ತಿಯ ಪಾಲು ಕೇಳಿದಾಗ ಅಯ್ಯೋ ಅನಿಸಿತು.. ಆದರೆ ತನ್ನ ಅತಿಗ್ಗೆಯ ಮಧುರ ಮಾತುಗಳು.. ಹಾಗೂ ಆ ಸಮಯದಲ್ಲಿ ಜನಿಸಿದ ತನ್ನ ಅಣ್ಣನ ಮಗುವಿನ ಮೇಲಿನ ಮಮತೆಯಿಂದ ಮತ್ತೆ ಮನೆಗೆ ಮರಳಿ ಮೊದಲಿಗಿಂತ ಮನೆಯನ್ನು, ಮನೆಯವರನ್ನು ಪ್ರೀತಿಸಲು ತೊಡಗುತ್ತಾರೆ.. ಆಗ ನನಗೆ ನಿರಾಳವಾಯಿತು.. ಅಬ್ಬಾ ರಾಜಕುಮಾರ್ ಅವರ ಚಿತ್ರಗಳು ಅಂದರೆ ಹೀಗೆ ಇರಬೇಕು ಎನ್ನುವ ಒಂದು ಚೌಕಟ್ಟಿಗೆ ಮತ್ತೆ ಚಿತ್ರ ಬಂದು ನಿಂತಿತು. 

ಅಣ್ಣ ನಮ್ಮವನು ಆದರೆ ಅತ್ತಿಗೆ ನಮ್ಮವಳಲ್ಲ.. ಇದು ಸಾಮಾನ್ಯವಾದ ಮಾತು.. ಮತ್ತೆ ಅನೇಕ ಕಡೆ ನೆಡೆಯುವುದು ಹೀಗೆ.. ಅದನ್ನೇ ಸಾರಾಂಶ ಮಾಡಿಕೊಂಡು ಈ ಚಿತ್ರದ ಕಥೆಯನ್ನು ಹೆಣೆದಿದ್ದಾರೆ.. ಅರ್ಥಾತ್ ಮಲಯಾಳಂ ಚಿತ್ರದ ತಿರುಳನ್ನು ಕನ್ನಡಕ್ಕೆ ಒಗ್ಗಿಸಿ ಕಥೆ ಮಾಡಿದ್ದಾರೆ.. 

ರಾಜಕುಮಾರ್ ಮತ್ತು ಅಶ್ವಥ್ ಅವರು ಅಣ್ಣ ತಮ್ಮಂದಿರು.. ರಾಮ ಲಕ್ಶ್ಮಣ ಇದ್ದಂತೆ ಇರುತ್ತಾರೆ.. ಅಣ್ಣನ ಮಡದಿ ಲೀಲಾವತಿ  ಸಂಸಾರವನ್ನು ಎತ್ತಿ ಹಿಡಿದು ನಿಂತಿರುತ್ತಾರೆ.. ಆದರೆ  ಯಥಾಪ್ರಕಾರ ಕಥೆ ಚೆನ್ನಾಗಿಓಡುತ್ತಿದ್ದಾಗ ಏನಾದರೂ ಕಿರಿಕಿರಿ ಆಗಲೇ ಬೇಕು ಅಲ್ಲವೇ.. ಆತನ ತಂಗಿ ಜಯ ಇವರ ಅನ್ನ್ಯೋನ್ಯತೆಯನ್ನು ಕಂಡು ಉಲ್ಟಾ ಪುಲ್ಟಾ ಮಾತಾಡುತ್ತಿರುತ್ತಾರೆ . ಅದೇ ರೀತಿ ಆತನ ತಾಯಿ ಬಿ ಜಯಮ್ಮ ಕೂಡ ಅತ್ತೆ ತಾನು ಎನ್ನುವ ದರ್ಪವನ್ನು ಎತ್ತಿ ತೋರಿಸುತ್ತಾರೆ

ಆದರೆ ಲೀಲಾವತಿ ತಮ್ಮ ಪ್ರೇಮಮಯಿ ಮಾತುಗಳಿಂದ ತನ್ನ ಅತ್ತೆಯನ್ನು ಅಮ್ಮ ಎಂದು ಕರೆದು. ತಾ ಮಾಡುತ್ತಿರುವ ಕೆಲಸ, ಮಾತುಗಳು ಬದುಕಿಗೆ ಮುಖ್ಯ ಎಂದು ಮನವರಿಕೆ ಮಾಡಿಕೊಟ್ಟಾಗ ತನ್ನತಪ್ಪನ್ನು ಅರ್ಥ ಮಾಡಿಕೊಳ್ಳುತ್ತಾರೆ. 

ಕಾಲಾನಂತರ ತಾಯಿ ಮರಣಿಸುತ್ತಾರೆ..  ಅದಕ್ಕೆ ಮುಂಚೆ ರಾಜಕುಮಾರ್ ಅವರಿಗೆ ಮಡದಿಯಾಗಿ ಜಯಂತಿ ಬರುತ್ತಾರೆ..  ತನ್ನದೇ ನೆಡೆಯಬೇಕು.. ಅಂತ ಜಯಂತಿ ಹಠ ಮಾಡಿದಾಗ.. ಲೀಲಾವತಿ ಅಶ್ವಥ್ ಎಲ್ಲ ಆಸ್ತಿಯನ್ನು ರಾಜಕುಮಾರ್ ಕುಟುಂಬಕ್ಕೆ ಬಿಟ್ಟು.. ತಾವು ಹೊರ ನೆಡೆಯುತ್ತಾರೆ.. 

ಆದರೆ ತುಂಬು ಗರ್ಭಿಣಿಯಾದ ಜಯಂತಿಗೆ ರಕ್ತದ ಅವಶ್ಯಕತೆ ಇದೆ ಎಂದು ತಿಳಿದಾಗ ಲೀಲಾವತಿ ತಮ್ಮ ರಕ್ತ ಕೊಟ್ಟು ಜಯಂತಿಯನ್ನು ಕಾಪಾಡುತ್ತಾರೆ.. ಆದರೆ ಚಿಕಿತ್ಸೆ ಸಮಯದಲ್ಲಿ ಮಳೆ ಬಂದು ವಿದ್ಯುತ್ ವ್ಯತ್ಯಯವಾಗಿ ಲೀಲಾವತಿ ದೇಹದಿಂದ ಬರುತ್ತಿದ್ದ ರಕ್ತದ ಪೈಪು ತುಂಡಾಗಿ.. ಆಕೆಯ ರಕ್ತವೆಲ್ಲಾ ಹರಿದು ಹೋಗಿ ಮರಣಿಸುತ್ತಾರೆ. 

ಜಯಂತಿಗೆ ತನ್ನ ತಪ್ಪಿನ ಅರಿವಾಗಿ.. ಲೀಲಾವತಿಯ ಮಗುವನ್ನು ತನ್ನ ಇನ್ನೊಂದು ಮಗು ಎಂದು ಒಪ್ಪಿಕೊಳ್ಳುವಲ್ಲಿಗೆ ಚಿತ್ರ ಮುಗಿಯುತ್ತದೆ.. ಲೀಲಾವತಿ ಕುಟುಂಬಕ್ಕಾಗಿ ಪ್ರೇಮಮಯಿಯಾಗಿ ನಿಂತು ತಮ್ಮ ಪ್ರಾಣವನ್ನು ಅರ್ಪಿಸಿರುತ್ತಾರೆ. 

ಸುಂದರ ಕಥೆಯನ್ನುಏರು ಪೇರಿಲ್ಲದೆ ಸರಳವಾಗಿ ಚಿತ್ರಿಸಿದ್ದಾರೆ.  

ರಾಜಕುಮಾರ್ ಮನೋಜ್ಞ ಅಭಿನಯ ನೀಡಿದ್ದಾರೆ.. ಅದರಲ್ಲೂ ತನ್ನ ಅಣ್ಣ ಅಶ್ವಥ್ ಅವರ ಜೊತೆ ಪಾಲು ಕೇಳುವಾಗ ಅವರ ಕ್ರೋಧ.. ತನ್ನ ಅತ್ತಿಗೆಯನ್ನು ಬಯ್ದು ಹೀಯಾಳಿಯಿಸುವಾಗ.. ಜಯಂತಿ ಜೊತೆಯಲ್ಲಿ ಪ್ರೇಮದ ಮಾತನಾಡುವಾಗ.. ತನ್ನ ಅಣ್ಣನ ಮಗು ಚಿಕ್ಕಪ್ಪ ಎಂದು ಹತ್ತಿರ ಬಂದಾಗ.. ಆ ಮಗುವನ್ನು ಮುದ್ದು ಮಾಡುವುದು.. ಪ್ರತಿ ದೃಶ್ಯದಲ್ಲೂ ಅವರ ನಟನಾ ಸಾಮರ್ಥ್ಯವನ್ನು ತೋರಿದ್ದಾರೆ. ಆರಂಭದ ಆರ್ಭಟದ ಅಭಿನಯ.. ಚಿತ್ರ ಮುಂದುವರೆದಂತೆ ಪ್ರಬುದ್ಧತೆ ಎದ್ದು ಕಾಣುತ್ತದೆ. 

ಅಶ್ವಥ್ ಆರಂಭದಲ್ಲಿ ಹಠಮಾರಿಯಾಗಿ ತನ್ನ ಅಸ್ತಿ ಕರಗಿದರೂ ಸರಿ ತನ್ನ ಪ್ರತಿಷ್ಠೆಯೇ ಮುಖ್ಯ ಎಂದು ತಮ್ಮ ಆಸ್ತಿಯನ್ನು ಒತ್ತೆ ಇತ್ತು ಹಣಪಡೆಯುವ ಮಾತುಗಳು.. ನಂತರ ತನ್ನ ಮಡದಿಯ ಮಾತುಗಳ ಒಳಾರ್ಥ,  ದೂರದೃಷ್ಟಿಯ ಮಾತುಗಳು ಅವರ ಮನಸ್ಸನ್ನು ಬದಲಿಸಿ ಮನೆಯ ಬಗ್ಗೆ ಯೋಚಿಸುವ ಅಭಿನಯ ಇಷ್ಟವಾಗುತ್ತದೆ. ಹಾಗೆಯೆ ತನ್ನ ತಮ್ಮನಿಗಾಗಿ ಮಿಡಿಯುವ ಮನಸ್ಸಿನ ಅಣ್ಣನಾಗಿ ಗಮನ ಸೆಳೆಯುತ್ತಾರೆ. 

ಈ ಕಥೆಯ ಮುಖ್ಯ ಪಾತ್ರ ಲೀಲಾವತಿ.. ಮಾತಿನ ಧಾಟಿ.. ಮನೆಯ ದೃಢತೆ ಮುಖ್ಯ ಎಂದು ಪ್ರತಿ ದೃಶ್ಯದಲ್ಲೂ ಎತ್ತಿ ತೋರುವ ಅವರ ನಟನೆ.. ಆ ಮೃದು ಮಾತು.. ತನ್ನ ಓರಗಿತ್ತಿಯನ್ನು ನೋಡಿಕೊಳ್ಳುವ.. ಆಕೆಯ ಚುಚ್ಚು ಮಾತುಗಳನ್ನು ಸಹಿಸಿಕೊಂಡು ಆಕೆಗೆ ಪ್ರೀತಿಯನ್ನೇ ಧಾರೆಯೆರೆಯುವ ಪಾತ್ರದಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.. 

ಜಯಂತಿ ಈ ಚಿತ್ರಕ್ಕೆ ಬೇಕಾಗುವ ತಿರುವಿನ ಪಾತ್ರ ಪೋಷಣೆ ಮಾಡಿದ್ದಾರೆ.. ಗುಣ ಬಂಗಾರ.. ಕಿವಿ ಹಿತ್ತಾಳೆ ಎನ್ನುವ ಗಾದೆಯಂತೆ ಅನ್ಯರ ಮಾತುಗಳನ್ನು ಕೇಳಿ.. ತನ್ನ ತುಂಬು ಕುಟುಂಬವನ್ನು ಒಡೆದು.. ಮನೆಯ ಅವನತಿಗೆ ಕಾರಣವಾಗುವ ಪಾತ್ರ.. ಆದರೆ ಲೀಲಾವತಿಯವರ ಪಾತ್ರದ ಗಟ್ಟಿತನದಿಂದ ಮನೆ ಒಡೆಯುವುದು ತಪ್ಪಿದರೂ, ಅದಕ್ಕೆ ತೆರುವ ಬೆಲೆ ಲೀಲಾವತಿಯ ಪ್ರಾಣ ಎಂದು ಅರಿವಾದಾಗ ಜಯಂತಿಯ ಅಭಿನಯ ಇಷ್ಟವಾಗುತ್ತದೆ. 

ಅತ್ತೆಯ ಪಾತ್ರದಲ್ಲಿ ರಂಗಭೂಮಿಯ ದೈತ್ಯ ಪ್ರತಿಭೆ ಬಿ ಜಯಮ್ಮ.. ಅವರ ಧ್ವನಿ ಕೇಳುವುದೇ ಚಂದ.. ಆಕೆಯ ಮಗಳಾಗಿ ಬಿ ಜಯ.. ಅಳಿಯ ಅರುಣ್ ಕುಮಾರ್.. ಡಿಕ್ಕಿ ಮಾಧವರಾವ್, ಬಿ ರಾಘವೇಂದ್ರ ರಾವ್, ಆರ್ ಟಿ ರಮಾ..  ರಂಗ, ಕುಪ್ಪುರಾಜು ಅವರೆಯೋಲ್ಲರ ಪಾತ್ರ ಪೋಷಣೆ ಉತ್ತಮವಾಗಿದೆ. 

ಆರ್ ಸುದರ್ಶನಂ ಅವರ ಸಂಗೀತ ಈ ಚಿತ್ರದ ಭಾಗವಾಗಿದೆ... ಜೆ ಏಸುದಾಸ್ ಅಥವ ಕೆ ಜೇಸುದಾಸ್ ರಾಜಕುಮಾರ್ ಅವರಿಗೆ ಧ್ವನಿ ಮಾಡಿದ ಏಕೈಕ ಹಾಡು ಈ ಚಿತ್ರದಲ್ಲಿದೆ. "ಟೂ ಟೂ ಬೇಡಪ್ಪ ಓಡಿ ಬಂದು ನನ್ನ ಸಂಗ ಕಟ್ಟಪ್ಪ". 

ಉಳಿದಂತೆ ಹಾಡುಗಳಿಗೆ ಸಾಹಿತ್ಯ ಒದಗಿಸಿರುವ ವಿಜಯನಾರಸಿಂಹ, ನರೇಂದ್ರ ಬಾಬು.. ಛಾಯಾಗ್ರಹಣ ಶ್ರೀಕಾಂತ್, ಕಥೆ ಕೆ ಜಿ ಸೇತುನಾಥ್, ನಿರ್ದೇಶಕರಾಗಿ ಎಂ ಆರ್ ವಿಠ್ಠಲ್, ನಿರ್ಮಾಪಕರಾಗಿ ಶ್ರೀಕಾಂತ್ ನಹತ ಮತ್ತು ಶ್ರೀಕಾಂತ್ ಪಟೇಲ್ ಈ ಚಿತ್ರ ತೆರೆಕಾಣುವಲ್ಲಿ ಸಹಕರಿಸಿದ್ದಾರೆ. 







Thursday, April 24, 2025

ಸಹ ಕಲಾವಿದರ ಪ್ರತಿಭೆ ಅಣ್ಣಾವ್ರ ಮಾತುಗಳಲ್ಲಿ - ಅಣ್ಣಾವ್ರ ಜನುಮದಿನ (2025)

ಇಪ್ಪತ್ತನಾಲ್ಕನೆ ತಾರೀಕು ನನ್ನ ಇನ್ನೊಬ್ಬ ನೆಚ್ಚಿನ ಕಲಾವಿದನ ಬಗ್ಗೆ ನೀ ಬರೆಯಬೇಕು.. ನಿನಗೆ ಹನ್ನೆರಡು ದಿನಗಳ ಸಮಯ ಕೊಟ್ಟಿದ್ದೀನಿ.. ಇದರ ಜವಾಬ್ಧಾರಿ ನಿನದು..

ಆಗಲಿ ಅಣ್ಣಾವ್ರೇ.. ನೀವು ನನಗೆ ಕೆಲಸ ಕೊಡುವುದು.. ಅದನ್ನು ನಾ ಮಾಡುವುದು ಅದಕ್ಕಿಂತ ಈ ಬದುಕಿಗೆ ಇನ್ನೇನು ಬೇಕಾಗಿದೆ!

ಶುಭವಾಗಲಿ ಶ್ರೀ.. ನಿಮ್ಮಿಂದಲೇ ಮಣ್ಣಾಗಿ ಹತ್ತೊಂಬತ್ತು ವರ್ಷಗಳಾಯಿತು ಶ್ರೀ.. ನಂಬೋಕೆ ಆಗ್ತಿಲ್ಲ.. ಮಣ್ಣಾದೆ ಅಷ್ಟೇ ಆದರೆ ನಿಮ್ಮಗಳ ಹೃದಯದಲ್ಲಿ ಸದಾ ಈ ನಿಮ್ಮ ರಾಜಕುಮಾರ ಅಜರಾಮರ!

ಇದು ಅಣ್ಣಾವ್ರ ಪುಣ್ಯದಿನದಂದು ಅಣ್ಣಾವ್ರು ಹೇಳಿದ ಮಾತುಗಳು.. ಅದೇ ಈ ಲೇಖನದ ಆರಂಭಕ್ಕೆ ಮುನ್ನುಡಿಯಾಯಿತು.. 

ಬೆಳಿಗ್ಗೆ ಕಣ್ಣುಜ್ಜಿಕೊಂಡು ಕರಾಗ್ರೇ ಹೇಳಿದೆ.. ಇಷ್ಟ ದೇವರಾದ ಗಣಪನಿಗೆ ಕೈಮುಗಿದು ಬಂದಾಗ ಎದುರಿಗೆ ಕಂಡದ್ದು ಮನೆಯಲ್ಲಿರುವ ಅಣ್ಣಾವ್ರ ಭಾವಚಿತ್ರ..ಅಣ್ಣಾ ಎಂದೇ.. ಶ್ರೀ ಎಂದು ನನ್ನ ತಲೆ ಸವರಿದರು.. ತಿರುಗಿ ನೋಡಿದೆ.. ಅದೇ ಬಿಳಿ ವಸ್ತ್ರ.. ನಗು ಮೊಗ.. ಹೊಳೆಯುವ ತ್ವಚ್ಛೆ.. ಕೈ ಬೆರಳಲ್ಲಿ ನೀಲಿಯ ಹರಳುಳ್ಳ ಉಂಗುರ.. ಅವರ ಅನೇಕ ಚಿತ್ರಗಳಲ್ಲಿ ಅವರ ಪೋಷಾಕಿನ ಒಂದು ಭಾಗವಾಗಿತ್ತು 

ಅಣ್ಣ ನಿಮ್ಮ ಸಹಕಲಾವಿದರೊಬ್ಬರ ಬಗ್ಗೆ ಬರೆಯಿರಿ ಎಂದಿದ್ದೀರಿ.. ನಿಮ್ಮ ಚಿತ್ರಜೀವನದ ಕಡಲಿನಲ್ಲಿ ನಿಮ್ಮ ಜೊತೆ ನಟಿಸಿದ ಕಲಾವಿದರೆಲ್ಲರೂ ಮುತ್ತಿನ ಮಣಿಗಳೇ ಹೌದು.. ಯಾರ ಬಗ್ಗೆ ಬರೆಯಬೇಕು ಹೇಳಿ ಅಣ್ಣಾವ್ರೇ.. 

ಎಲ್ಲಾ ಬಡವ.. ನಾ ನಿನಗೆ ಕೆಲಸ ಕೊಟ್ಟರೆ.. ನನಗೆ ಕೆಲಸ ಕೊಡುತ್ತೀಯಾ.. ನನ್ನ ಚಿತ್ರಗಳ ಜೈತ್ರ ಯಾತ್ರೆ ಶುರು ಮಾಡಿದ್ದೀಯಾ/.. ಆಗಲೇ ೭೨ ಚಿತ್ರಗಳು ಮುಗಿದಿವೆ.. ನೀನೆ ಹೇಳು ನೋಡೋಣ.. ಎನ್ನುತ್ತಾ ತಮ್ಮ ಕೈಲಿದ್ದ ಡಮರುಗವನ್ನು ತೆಗೆದುಕೊಂಡು ಡಮಡಮ ಅಂತ ಸದ್ದು ಮಾಡಿದರು.. 

ನನಗೆ ಅರಿವಿದ್ದದ್ದು ಮರೆತುಹೋಯಿತು.. ಹಾಗೆ ಮೆಲ್ಲನೆ ಅಣ್ಣಾವ್ರ ೨೦೭ ಚಿತ್ರಗಳ ದೃಶ್ಯಗಳು ರಪ್ಪನೆ ಕಣ್ಣು ಮುಂದೆ ಬರತೊಡಗಿತು.. 

ಅಣ್ಣಾವ್ರೇ.. ಆ ಚಿತ್ರದಲ್ಲಿ ಎರಡು ಅದ್ಭುತ ದೃಶ್ಯಗಳಿವೆ ಒಂದು ನೀವು ಕುರುಬರ ಪಿಳ್ಳೆ ಪಾತ್ರದಿಂದ ಕಾಳಿದಾಸನಾಗುವುದು.. ಆ ಪರಿವರ್ತನೆ ಅಳೆಯಲು ಯಾವುದೇ ಮಾನದಂಡವಿಲ್ಲ.. 

ಶ್ರೀ ಇದರ ಬಗ್ಗೆ ಆಗಲೇ ಬರೆದಿದ್ದೀಯ.. ಸುಮ್ಮನೆ ಸತಾಯಿಸಬೇಡ.. ಮುಂದಕ್ಕೆ ಹೇಳು.. 

ಅಣ್ಣ ಇನ್ನೊಂದು ಡಿಂಡಿಮ ಕವಿ.. "ಕಮಲೇ ಕಮಲೋತ್ಪತ್ತಿ: ಶ್ರೂಯತೇ ನ ಚ ದೃಶ್ಯತೇ | ಬಾಲೇ ತವ ಮುಖಾಂಭೋಜೇ ದೃಷ್ಟಮಿನ್ದೀವರದ್ವಯಂ"

ಸೂಪರ್ bulls eye ಶ್ರೀ ... ಅಬ್ಬಬ್ಬಾ ಅದೇನು ಅದ್ಭುತ ಅಭಿನಯ ಆತನದು.. ಈ ದೃಶ್ಯದಲ್ಲಿ ನಾನಿಲ್ಲವಲ್ಲ ಎಂದು ಇಂದಿಗೂ ನನಗೆ ಕೊರಗಿದೆ.. ಈ ದೃಶ್ಯದ ಚಿತ್ರೀಕರಣವಾದ ಮೇಲೆ.. ರಷಸ್ ನೋಡಿದಾಗ ನಾನೇ ಬೆಕ್ಕಸ ಬೆರಗಾದೆ.. 

ರಾಜನ್ ಕೊಟ್ಟಿದ್ದ ಘಳಿಗೆ ಮುಗಿದು ಇಟ್ಟಿದ್ದ ಘಳಿಗೆ ಬಂದಾಯ್ತು.. 
ಕಟ್ಟಕಡೆಗಾದರೂ ಬಾಯ್ಬಿಟ್ಟರೆ ನಿನ್ನ ಈ ಭಂಟ್ಟಂಗಿ ಕವಿಗಳು.. 

ಕವಿಗಳೇ ನಮ್ಮ ರಾಜ್ಯದ ಓರ್ವ ವೇಶ್ಯೆ ಪೂರೈಸಿದ್ದಾಳೆ ನಿಮ್ಮ ಈ ಸಮಸ್ಯೆಯನ್ನು ಅಂತ ಮಂತ್ರಿಗಳು ಹೇಳಿದಾಗ.. 


"ಶರೀರವನ್ನು ವಿಕ್ರಯಿಸುವ ಓರ್ವ ವೇಶ್ಯೆ ನನ್ನ ಸಮಸ್ಯೆಯನ್ನು ಪೂರೈಸಿದ್ದಾಳೆ ಎಂದರೆ ನನ್ನ ಸರಸ್ವತಿಯನ್ನು" ಅಂತ ಡಮರುಗವನ್ನು ನೋಡುತ್ತಾ ..ಹೇಳಿದಾಗ ಆ ವೇಶ್ಯೆ ಪ್ರತಿಯಾಗಿ ನನಗೆ ಅರ್ಧ ರಾಜ್ಯ ಸಿಗುವುದು ಎಂದು ಇಷ್ಟು ಮತ್ಸರವೇ ಎನ್ನುತ್ತಾಳೆ.. ಆಗ  ಅಲ್ಲಿಂದ ಇವರ ಪ್ರತಾಪ ಶುರು 

"ರಾಜನ್ ಗಂಗೆ ಹರಿಯ ಚರಣದಿಂದ ಉದ್ಭವಿಸುವದೇ ಹೊರತು ನರನ ಪಾದದಿಂದಲ್ಲ 
ರತ್ನ ಸರ್ಪದ ಶಿರಸ್ಸಿನಲ್ಲಿ ಇರುತ್ತದೆಯೇ ಹೊರತು ಆಮೆಯ ತಲೆಯ ಮೇಲಲ್ಲ 
ಕವಿತಾ ಪ್ರೌಢಿಮೆ ವಾಗ್ದೇವಿಯ ಭಂಡಾರದ  ಬೀಗ ಮುದ್ರೆಯನ್ನು ತಲೆಯಿಂದ ಕುಟ್ಟಿ ಕೆಡವಿದವರಿಗೆ ಲಭ್ಯವಾಗುವುದೇ ಹೊರತು ಪರ್ಯಂಕದಲ್ಲಿ ಪವಡಿಸಿ ಸುಖಿಸುವವರಿಗಲ್ಲ."





https://www.youtube.com/watch?v=ierfiryJLug

ಈ ದೃಶ್ಯವನ್ನು ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ ಹಾಗೆಯೇ ಈ ದೃಶ್ಯದ ಪೂರ್ಣ ಅಂಕ ಈ ಕಲಾವಿದನಿಗೆ ಅರ್ಪಣೆ.. ಈ ದೃಶ್ಯ ಚಿತ್ರೀಕರಣವಾದ ಮೇಲೆ.. ರಷಸ್ ನೋಡಿ ಶಭಾಷ್ ಹೇಳಿದಾಗ ಆತ.. "ಅಣ್ಣಾವ್ರೇ ಈ ದೃಶ್ಯದಲ್ಲಿ ನೀವಿಲ್ಲ ಅದೇ ನನಗೆ ಬೇಸರ.. ನಿಮ್ಮ ಜೊತೆಯಲ್ಲಿ ಈ ದೃಶ್ಯ ಇರಬೇಕಿತ್ತು ಅನಿಸುತ್ತದೆ.. ಆದರೆ ಈ ದೃಶ್ಯದಿಂದಾಗಿಯೇ ನೀವು ಮತ್ತೆ ಸಿಕ್ಕಿದ್ದು ಈ ಚಿತ್ರದಲ್ಲಿ.. ಅಲ್ಲವೇ.. ಆದರೆ ಕಡೆ ದೃಶ್ಯದಲ್ಲಿ ನೀವು ಭೋಜರಾಜನಿಗೆ ಹೇಳುತ್ತಾ "ನಮ್ಮಿಬ್ಬರ ಮಿಲನಕ್ಕೆ ಇವರೇ ಕಾರಣ" ಅಂತ ನನ್ನನ್ನು ಆಲಂಗಿಸಿದಾಗ.. ಜಗತ್ತನ್ನೇ ಗೆದ್ದಷ್ಟು ಸಂಭ್ರಮ.. 

ಗೊತ್ತಾಯಿತೇ ಆ ಕಲಾವಿದ ಯಾರು ಅಂತ ಶ್ರೀ

ಅಣ್ಣಾವ್ರೇ ನಿಮ್ಮ ಬದುಕಿನುದ್ದಕ್ಕೂ ಸುಮಾರು ನಲವತ್ತು ದಶಕಗಳು ನಿಮ್ಮ ಜೊತೆಯಲ್ಲಿ ಬದುಕಿದ ಕಲಾವಿದ.. ಶನಿಮಹಾದೇವಪ್ಪ.. ನಿಮ್ಮ ಅನೇಕಾನೇಕ ಚಿತ್ರಗಳಲ್ಲಿ ನಿಮ್ಮ ಜೊತೆ ಅಭಿನಯಿಸಿರುವ ಇವರನ್ನು ಮರೆಯೋದುಂಟೆ.. 

ಬಂಗಾರದ ಮನುಷ್ಯದ ಚಿತ್ರದ ಚಾಮಯ್ಯ
ಬಡವರ ಬಂಧು ಚಿತ್ರದ "ಪರಚಿಂತೆ ನಮಗೇಕಯ್ಯ" ಅಂತ ಮೋಸ ಮಾಡುವ ಕಪಟ ಸನ್ಯಾಸಿ 
ದಾರಿ ತಪ್ಪಿದ ಮಗ ಚಿತ್ರದ ಪೊಲೀಸ್ ಕಮಿಷನರ್ 
ಶಂಕರ್ ಗುರು ಚಿತ್ರದ ಸತೀಶ್ ಪಾತ್ರದ ಬಿಸಿನೆಸ್ ಪಾರ್ಟ್ನರ್ 
ಕಾಮನಬಿಲ್ಲು ಚಿತ್ರದ ಹಿರಿಗೌಡರ ಮನೆಯಾಳು 
ಕೆರಳಿದ ಸಿಂಹ ಚಿತ್ರದ ಮುಖ್ಯ ಖಳನಾಯಕನ  ಬಲಗೈ ಭಂಟ 
ಭಕ್ತ ಕುಂಬಾರ ಚಿತ್ರದ ಜ್ಞಾನದೇವ 
ಅನುರಾಗ ಅರಳಿತು ಚಿತ್ರದ ರಾಮಲಿಂಗಂ ಜಂಬುಲಿಂಗಂ ಜೋಡಿ 
ಅದೇ ಕಣ್ಣು ಚಿತ್ರದಲ್ಲಿ ಮನೆಯಾಳು 
ಯಾರಿವನು ಚಿತ್ರದ ಮನೆಯಾಳು 
ಸಮಯದ ಗೊಂಬೆಯ ಲಾರಿ ಡ್ರೈವರ್ 
ಭಕ್ತ ಪ್ರಹ್ಲಾದದಲ್ಲಿ ಬ್ರಹ್ಮ 
ಚಲಿಸುವ ಮೋಡಗಳು ಚಿತ್ರದ ಪ್ರವಾಸಿ ಬಂಗಲೆಯ ಮೇಲ್ವಿಚಾರಕ 
ಹೊಸ ಬೆಳಕು ಸಿನೆಮಾದ ಮಾರ್ವಾಡಿ ಪಾತ್ರ 
ತ್ರಿಮೂರ್ತಿ ಚಿತ್ರದಲ್ಲಿ ಸಂಪತ್ ಅವರ ಮನೆಯಾಳು 
ಮಯೂರ ಚಿತ್ರದಲ್ಲಿ ಸಹಪಾಠಿ 
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ವಜ್ರಮುನಿಯ ಸೇವಕ 
ಎರಡು ಕನಸು ಚಿತ್ರದಲ್ಲಿ ರಾಜ್ ಊರಿನವ 
ಬಂಗಾರದ ಪಂಜರದ ಅಡಿಗೆಯವ 

ಒಂದೇ ಎರಡೇ ನಿಮ್ಮ ಅನೇಕ ಚಿತ್ರಗಳಲ್ಲಿ ನೆರಳಾಗಿ ಹಿಂಬಾಲಿಸಿದ ಶನಿಮಹಾದೇವಪ್ಪ ಅವರ ಮೂಲ ಹೆಸರು ಶಿವಪ್ರಕಾಶ್ ಅಂತ.. ಅವರು ಒಂದು ನಾಟಕದಲ್ಲಿ ಶನಿ ಪಾತ್ರ ಮಾಡಿ ಬಹಳ ಹೆಸರು ಮಾಡಿದರು.. ಆಗಿನಿಂದ ಅವರ ಹೆಸರು ಶನಿಮಹಾದೇವಪ್ಪ ಅಂತಾನೆ ಹೆಸರು.. 

ಹೌದು ಶ್ರೀ ಸರಿಯಾಗಿ ಹೇಳಿದೆ ... ಪಾರ್ವತೀ ಯಾವಾಗಲೂ ಹೇಳುತ್ತಿದ್ದಳು ನೋಡಿ ನಮ್ಮ ಸಂಸ್ಥೆಯ ಯಾವುದೇ ಚಿತ್ರವಾದರೂ ಸರಿ.. ಅದರಲ್ಲಿ ಇವರಿಗೆ ಒಂದು ಪಾತ್ರ ಕೊಡಲೇ ಬೇಕು.. " ಅಂತ.. ಅದೇ ಪದ್ಧತಿ ನೆಡೆದು ಬಂತು.. ನನ್ನ ಚಿತ್ರದಲ್ಲಿ ಮಾತ್ರವಲ್ಲ.. ನನ್ನ ಮಕ್ಕಳ ಅನೇಕ ಚಿತ್ರಗಳಲ್ಲಿ ಇವರಿಗೆ ಹೊಂದುವಂತಹ ಪಾತ್ರವನ್ನು ಕೊಡುತ್ತಲೇ ಬಂದಿದ್ದರು.. 

ಅಣ್ಣಾವ್ರೇ ನಲವತ್ತಕ್ಕೂ ಹೆಚ್ಚು ವರ್ಷ ನಿಮ್ಮ ಜೊತೆಯಲ್ಲಿ ಅಭಿನಯ ಮಾಡುತ್ತಿದ್ದರು.. ಈಗ ಐದು ವರ್ಷಗಳಿಂದ ನಿಮ್ಮ ಜೊತೆಯಲ್ಲಿಯೇ ಇದ್ದಾರೆ.. ..

ಹೌದು ಶ್ರೀ ನನಗೆ ಅವರನ್ನು ಒಂದು ಪ್ರಶ್ನೆ ಕೇಳಬೇಕಿತ್ತು.. 
ಅದಕ್ಕೇನಂತೆ ಕೇಳಿ ಅಣ್ಣ.. ಹೇಗೂ ನಿಮ್ಮ ಜೊತೆಯಲ್ಲಿ ಸ್ವರ್ಗದಲ್ಲಿದ್ದಾರೆ.. ತಾನೇ ಒಂದು ಕರೆ ನಿಮ್ಮ ಮುಂದೆ ಓಡಿ ಬರುತ್ತಾರೆ.. ಭುವಿಯಲ್ಲಿದ್ದಾಗ ನಿಮ್ಮ ಚಿತ್ರದ ಮುಹೂರ್ತ ಎಂದರೆ ಸಿದ್ಧವಾಗಿ ಬರುತ್ತಿದ್ದರು.. ನೀವು ಕೂಡ ನಿಮ್ಮ ಚಿತ್ರಗಳಲ್ಲಿ ಒಂದು ಸಣ್ಣದೋ ದೊಡ್ಡದೋ ಪಾತ್ರಗಳನ್ನು ಕೊಡುತ್ತಲೇ ಬಂದಿದ್ರಿ.. ಒಂದು ಕರೆ ಮಾಡಿ ಅಣ್ಣ"

ಅಣ್ಣಾವ್ರು ತಮ್ಮ ಮಡದಿ ಹತ್ತಿರ ಮೊಬೈಲ್ ತೆಗೆದುಕೊಂಡು ಕರೆ ಮಾಡಿ.. ಇನ್ನೂ ಮುಗಿಸಿರಲಿಲ್ಲ ಅಷ್ಟರಲ್ಲಿಯೇ ಶನಿಮಹಾದೇವಪ್ಪ ಡಿಂಡಿಮ ಕವಿಯ ವೇಷದಲ್ಲಿ ಬಂದೆ ಬಿಟ್ಟರು.. 

"ಅರೆ ಹೀಗೆ ಬಂದು ಬಿಟ್ಟಿರಾ.. ನಿಮ್ಮಲ್ಲಿ ಒಂದು ಪ್ರಶ್ನೆ"
"ಅಯ್ಯೋ ಅಣ್ಣಾವ್ರೇ ನೀವು ನನ್ನ ಕೇಳೋದಾ.. ಆರ್ಡರ್ ಮಾಡಿ ಅಣ್ಣ"
"ಇಲ್ಲ ಹಾಗಲ್ಲ.. ಆ ಪ್ರಶ್ನೆ ಎಂದರೆ.. ಡಿಂಡಿಮ ಕವಿಯ ಪಾತ್ರವನ್ನು ಅದೆಷ್ಟು ಅದ್ಭುತವಾಗಿ ನಟಿಸಿದಿರಿ.. ಡಿಂಡಿಮ ಕವಿಯೇ ಭುವಿಗೆ ಬಂದರೂ ಒಮ್ಮೆ ಆತ ನಿಮ್ಮನ್ನು ನೋಡಿ ಅಭಿನಯ ಕಲಿಯಬೇಕು ಅನ್ನಿಸುವಷ್ಟರ ಮಟ್ಟಿಗೆ  ಅದ್ಭುತವಾಗಿ ನಟಿಸಿದ್ದೀರಾ ಆ ದೃಶ್ಯದಲ್ಲಿ ನಾನಿಲ್ಲವಲ್ಲ ಎಂಬುದೇ ಕೊರಗು. ಅದಿರಲಿ.. ಅದೇಗೆ ಅಷ್ಟು ಅದ್ಭುತವಾಗಿ ನಟಿಸಲು ಸಾಧ್ಯವಾಯಿತು .. ?"

"ಅಣ್ಣ ಅವರೇ ನಿಮ್ಮ ಕುರುಬರ ಪಿಳ್ಳೆಯಿಂದ ಕಾಳಿದಾಸನಾಗಿ ಬದಲಾಗುವ ದೃಶ್ಯವನ್ನು ತುಂಬಾ ಆಸಕ್ತಿಯಿಂದ ಗಮನಿಸಿದೆ.. ಡಿಂಡಿಮ ಕವಿಯ ದೃಶ್ಯದ ಚಿತ್ರೀಕರಣವಾಗುವ ದಿನ.. ಒಂದಷ್ಟು ಹೊತ್ತು ನಿಮ್ಮ ಆ ಪರಕಾಯ ಪ್ರವೇಶದ ದೃಶ್ಯವನ್ನು ನೆನೆಸಿಕೊಂಡು ಕುಳಿತಿದ್ದೆ.. ಅದೆಂಗೋ ಗೊತ್ತಿಲ್ಲ ಆ ನಿಮ್ಮ ಅಭಿನಯದ ಸ್ಫೂರ್ತಿಯೇ ನನಗೆ ಆ ಪಾತ್ರ ಮಾಡಲು ಶಕ್ತಿ ಕೊಟ್ಟಿದ್ದು.. ಒಂದು ವೇಳೆ ನೀವು ಆ ದೃಶ್ಯದಲ್ಲಿದ್ದರೆ ನನಗೆ ಬಲು ಕಷ್ಟವಾಗುತಿತ್ತು.. "

"ಹಾಗೇನು ಇಲ್ಲ ಶನಿಮಹಾದೇವಪ್ಪನವರೇ.. ನಾನೇ ಒಂದು ಕ್ಷಣ ದಂಗಾಗಿ ಬಿಟ್ಟಿದ್ದೆ.. ಅಷ್ಟು ಅದ್ಭುತವಾಗಿ ಮೂಡಿಬಂದಿದೆ.. ಸಾಮಾನ್ಯ ನನ್ನ ಅಭಿನಯದ ಚಿತ್ರಗಳಲ್ಲಿ ನನ್ನ ಪಾತ್ರದ ಸುತ್ತಲೇ ಸುತ್ತುತ್ತದೆ.. ಮತ್ತೆ ಉಳಿದ ಕಲಾವಿದರೂ .. ಉಳಿದ ಕಲಾವಿದರು ವಿಜೃಂಭಿಸಿದ್ದು ಉಂಟು.. ಆದ್ರೆ ಅಕ್ಷರಶಃ ನನ್ನಷ್ಟೇ ತಿಂದು ಬಿಟ್ಟಿದ್ದೀರಾ ಈ ದೃಶ್ಯದಲ್ಲಿ ಹಾಗಾಗಿ ಟಿವಿಯಲ್ಲಿ ಈ ಸಿನಿಮಾದ ಬಂದಾಗೆಲ್ಲ ಈ ದೃಶ್ಯವನ್ನು ಅದೆಷ್ಟು ಆಸಕ್ತಿಯಿಂದ ನೋಡುತ್ತೇನೋ ನನಗೆ ಗೊತ್ತಿಲ್ಲ.. ಒಂದು ವೇಳೆ ನಾನೇನಾದರೂ ಆ ದೃಶ್ಯ ನೋಡುವ ಹೊತ್ತಿಗೆ ಬೇರೆ ಏನಾದರೂ ಕೆಲಸವೋ.. ಸಂದರ್ಶನವೋ ಇದ್ದರೂ ಕೂಡ.. ಮನೆಯವರು ಈ ದೃಶ್ಯವನ್ನು ನೋಡಲು ನನಗೆ ಅನುಕೂಲ ಮಾಡಿಕೊಡುತ್ತಾರೆ.. ಅದು ನಿಮ್ಮ ಶಕ್ತಿ.. "

ಅಣ್ಣಾವ್ರೇ ನಿಮ್ಮಿಂದ ಈ ಮಾತುಗಳು ಧನ್ಯೋಸ್ಮಿ..ನಿಮ್ಮ ಜನುಮದಿನಕ್ಕೆ ನಿಮಗೆ ಶುಭಾಶಯ ಹೇಳಬೇಕು.. ಉಡುಗೊರೆ ಕೊಡಬೇಕು.. ಆದರೆ ನೀವೇ ನನಗೆ ಹೊರಲಾರದಷ್ಟು ದೊಡ್ಡ ಅಭಿಮಾನದ ಶ್ರೀ ರಕ್ಷೆ ಕೊಟ್ಟು ಹರಸಿದ್ದೀರಾ.. ಇದಕ್ಕಿಂತ ಇನ್ನೇನು ಬೇಕು.. ಧನ್ಯೋಸ್ಮಿ ಅಣ್ಣ.. ಎನ್ನುತ್ತಾ ಅಣ್ಣಾವ್ರಿಗೆ ನಮಸ್ಕರಿಸಿ ಹೊರತು ಬಿಟ್ಟರು.. 

ನಾನು ಅಣ್ಣಾವ್ರ ಕಡೆಗೆ ನೋಡಿದೆ.. 

ಶಭಾಷ್ ಜಮಾಯಿಸಿ ಬಿಟ್ರಿ.. ಸೂಪರ್ ಎನ್ನುತ್ತಾ ಹೆಬ್ಬೆರಳನ್ನು ಮೇಲಕ್ಕೆ ಎತ್ತಿ ತೋರಿದರು.. 

ಅಣ್ಣಾವ್ರೇ ಜನುಮದಿನದ ಶುಭಾಶಯಗಳು!

Sunday, April 20, 2025

ತೂಗುದೀಪ ಹೆಸರೇ ಹೇಳುವಂತೆ ತೂಗುವ ದೀಪ 1966 (ಅಣ್ಣಾವ್ರ ಚಿತ್ರ ೭೨/೨೦೭)

ತೂಗುದೀಪ ಹೆಸರೇ ಹೇಳುವಂತೆ ತೂಗುವ ದೀಪ.. ಬಂಗಾಳಿ ಭಾಷೆಯ ಪ್ರಸಿದ್ಧ ಲೇಖಕ ಬರಹಗಾರ ಶರತ್ ಚಂದ್ರ ಚಟರ್ಜೀ ಅವರ ಚಂದ್ರನಾಥ್ ಕಾದಂಬರಿ ಆಧಾರಿತ ಚಿತ್ರ.. 


ಕೆ ಎಸ್ ಎಲ್ ಸ್ವಾಮಿ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ರಾಜಕುಮಾರ್, ಲೀಲಾವತಿ, ನರಸಿಂಹರಾಜು, ಉದಯಕುಮಾರ್, ಬಿ ವಿ ರಾಧಾ, ಬಾಲಕೃಷ್ಣ ಮುಂತಾದವರ ಜೊತೆ ಚಿತ್ರ ತಯಾರಿಕೆ ಮಾಡಿದ್ದಾರೆ. 


ಶ್ರೀನಿವಾಸ್ ಅನ್ನುವ ನಟ ಈ ಚಿತ್ರದಲ್ಲಿ ಮೊದಲ ಬಾರಿಗೆ ತೆರೆಗೆ ಪರಿಚಯವಾಗಿ ಮುಂದೆ ತೂಗುದೀಪ ಶ್ರೀನಿವಾಸ್ ಅಂತಾನೆ ಪ್ರಸಿದ್ಧಿಯಾದರು. 

ಪಿ ಬಿ ಶ್ರೀನಿವಾಸ್ ಅವರು ಗಾಯಕರಾಗಿ ಪ್ರಸಿದ್ಧಿಯಾದವರು.. ಈ ಚಿತ್ರದಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ಹಾಡಿನ ಮೂಲಕ ಬಂದಿದ್ದಾರೆ.

ವಿಜಯಭಾಸ್ಕರ್ ಅವರ ಅದ್ಭುತ ಸಂಗೀತದಲ್ಲಿ ಎಂಟು ಸುಮಧರ ಸಂಗೀತ ನೀಡಿದ್ದಾರೆ.. 

ಆರ್ ಎನ್ ಜಯಗೋಪಾಲ್, ನಂಜರಾಜ್ ಅರಸ್, ಮತ್ತು ಕೆ ಎಸ್ ಎಲ್ ಸ್ವಾಮಿ ಅವರ ಸಾಹಿತ್ಯ ಸೊಗಸಾಗಿದೆ. 

ಈ ಸಾಹಿತ್ಯಕ್ಕೆ ದನಿಯಾಗಿ ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಮತ್ತು ಎಲ್ ಆರ್ ಈಶ್ವರಿ ಇದ್ದಾರೆ

ಇವರೆಲ್ಲರ ಶ್ರಮವನ್ನು ಆರ್ ಎನ್ ಕೃಷ್ಣಪ್ರಸಾದ್ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕರಾಗಿ!

ಆರ್ ಜಿ ಕೇಶವ್ ಮೂರ್ತಿ ಅವರು ನಿರ್ಮಾಪಕರಾಗಿ ಈ ಅದ್ಭುತ ಚಿತ್ರವನ್ನು ತಂದಿದ್ದಾರೆ.. ಆದರೆ ದುರದೃಷ್ಟವಶಾತ್ ಈ ಚಿತ್ರದ ಎಲ್ಲೂ ಸಿಗದ ಕಾರಣ.. ಈ ಚಿತ್ರವನ್ನು ನೋಡುವ ಸೌಭಾಗ್ಯದಿಂದ ವಂಚಿತರಾಗಿದ್ದೀವಿ.. ಹಾಡುಗಳು ಸಿಗ್ತಾ ಇಲ್ಲ ಆದರೆ ಧ್ವನಿ ಸುರಳಿ ಲಭ್ಯವಿರುವುದರಿಂದ ಅದನ್ನಾದರೂ ಕೇಳಿ ಕುಶಿ ಪಡೋಣ ಅಲ್ಲವೇ.. 


Audio songs of Thoogudeepa kannada movie


 

ಮಕ್ಕಳ ಕಾಲದಿಂದಲೂ ಕೇಳಿ ಬೆಳೆದ ಕಥೆ ಬಾಲನಾಗಮ್ಮ 1966 (ಅಣ್ಣಾವ್ರ ಚಿತ್ರ ೭೧/೨೦೭)

ಓಡಿ ಓಡಿ ಸುಸ್ತಾಗಿದ್ದಾಗ ಮತ್ತೆ ಸ್ವಲ್ಪ ಓಡಬೇಕು ಅಂತ ಅಪ್ಪಣೆ ಬಂದಾಗ.. ಮೊದಲಿದ್ದ ಉತ್ಸಾಹ ಇರುತ್ತದೆ.. ಆದರೆ ದೇಹ ಕೆಲವೊಮ್ಮೆ ಅಲ್ಪ ವಿರಾಮ ಕೇಳುತ್ತದೆ.. ಆಗ ಮುಂದೆ ಇರುವ ಬದಲು ಕೊಂಚ ಹಿಂದೆ ಬಂದು ಸಹಕಾರ ನೀಡಿ ನೆಡೆಯುತ್ತಿರುವ ಓಟದ ಕಾರ್ಯಕ್ರಮಕ್ಕೆ ಬಲ ನೀಡೋದು.. 

ಈ ನಾಲ್ಕು ವರ್ಷಗಳು ರಾಜಕುಮಾರ್ ಅವರ ಪಾಲಿಗೆ ಬಿಡುವಿಲ್ಲದ ವರ್ಷಗಳು ಸರಿ ಸುಮಾರು ೪೬ ಚಿತ್ರಗಳು.. ಅಬ್ಬೊ.. ಆದರೆ ಅಷ್ಟೊಂದು ಸಿನೆಮಾಗಳಲ್ಲಿ ಅಭಿನಯಿಸಿದರೂ ಅಭಿನಯದಲ್ಲಿ ಯಾವುದೇ ರಾಜಿಯಿಲ್ಲ.. ತನ್ನ ಪಾತ್ರ ಪ್ರಮುಖವೋ, ಪ್ರಾಮುಖ್ಯತೆ ಇಲ್ಲವೋ, ಹೆಚ್ಚು ದೃಶ್ಯಗಳು ಇಲ್ಲವೋ ಯೋಚಿಸಿದೆ ಸಿನೆಮಾರಂಗದ ಏಳಿಗೆಗೆ ತಮ್ಮದೇ ರೀತಿಯಲ್ಲಿ ಕಾಣಿಕೆ ಕೊಟ್ಟವರು ಅವರು. 

ಇಷ್ಟೇಕೆ ಪೀಠಿಕೆ ಅಂತೀರಾ.. ಈ ಸಿನಿಮಾದಲ್ಲಿ ಅವರ ಪಾತ್ರ ಬರೋದು ಸುಮಾರು  ಐವತ್ತ ನಾಲ್ಕು ನಿಮಿಷಗಳಾದ ಮೇಲೆ.. ಅಂದರೆ ಚಿತ್ರದ ಎರಡೂವರೆ ಘಂಟೆಯಲ್ಲಿ ಅರ್ಧಭಾಗ ಎನ್ನಬಹುದು.. ನಂತರವೂ ಕೂಡ ಸುಮಾರು ಒಂದು ಎಂಟು ಹತ್ತು ದೃಶ್ಯಗಳು ಇರಬಹುದು.. ಅದರಲ್ಲೂ ಸಹಕಲಾವಿದರ ಜೊತೆಯಲ್ಲಿಯೇ ಹೆಚ್ಚು.. ಏಕಾಂಗಿ ದೃಶ್ಯಗಳು ಇಲ್ಲವೇ ಇಲ್ಲ.. ಮೊದಲೇ ಈ ಕಥೆಯ ಹೆಸರಿನಂತೆ ಬಾಲನಾಗಮ್ಮನ ಪಾತ್ರದ ಸುತ್ತಲೇ ಸುತ್ತುವ ಕಥೆ.. ಆದ್ದರಿಂದ ರಾಜಕುಮಾರ್ ಅವರ ಪಾತ್ರ ಪೋಷಣೆಗೆ ಹೆಚ್ಚು ಅವಕಾಶವಿಲ್ಲ.. ಆದರೂ ಅವರ ಪಾತ್ರವನ್ನು ಕೊಂಚ ಬೆಳೆಸಿದ್ದಾರೆ.. ವಾಣಿಜ್ಯ ದೃಷ್ಟಿಯಿಂದ ಇರಬಹದು.  ಆದರೆ ನಮಗೆ ಆ ಕಾಲದ ಜಾನಪದ ಕಥೆಯನ್ನು ನೋಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯವೇ ಹೌದು..



 
ರಾಜಕುಮಾರ್ ರಾಜಕುಮಾರನಾಗಿಯೇ ಈ ಚಿತ್ರದಲ್ಲಿ ಇರುತ್ತಾರೆ.. ಸರಳವಾದ ಅಭಿನಯ.. ಮುದ್ದಾಗಿ ಕಾಣುವ ಅವರ ವೇಷಭೂಷಣ. ಮಾತಿನ ಧಾಟಿ.. ಎಲ್ಲವೂ ಅವರ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದೆ.. ರಾಜಕುಮಾರ್ ಇಲ್ಲದ ಸಿನೆಮಾವನ್ನು ಊಹಿಸಿಕೊಳ್ಳದ ಕಾಲ ಎಂದು ಆ ಕಾಲದ ಮಾಧ್ಯಮ ಹೇಳಿದ್ದು ಓದಿದ ನೆನಪು.. 

ಪೋಷಕ ಪಾತ್ರವಲ್ಲ ಆದರೆ ನಾಯಕ ಪಾತ್ರಕ್ಕೆ ಹೆಚ್ಚು ಅಭಿನಯ ಅವಕಾಶವಿಲ್ಲ.. ಆದರೂ ಅವರ ನಟನಾ ಹಸಿವು ಈ ಚಿತ್ರದಲ್ಲಿ ಮುಂದುವರೆದಿದೆ.. 


ಸಪ್ತಸಾಗರದಾಚೆ ದುರ್ಗಮ ಹಾದಿಯಲ್ಲಿ ದಟ್ಟ ಗೊಂಡಾರಣ್ಯದ ಮಧ್ಯೆ ಗವಿಯಲ್ಲಿ ಪಂಜರದ ಗಿಳಿಯಲ್ಲಿ ತನ್ನ ಪ್ರಾಣ ಇಟ್ಟು.. ತನ್ನ ಮಾಯಾವಿ ವಿದ್ಯೆಯಿಂದ ಜಗತ್ತನ್ನೇ ವಶಮಾಡಿಕೊಳ್ಳಲು ಹಂಬಲಿಸುವ ಮಾಯಾ ಮರಾಠಿ ಪಾತ್ರದಲ್ಲಿ ಉದಯಕುಮಾರ್ ಝಲ್ ಎನ್ನಿಸುತ್ತಾರೆ. ಆ ಅಭಿನಯ, ಗತ್ತು, ಧ್ವನಿ.. ಕಣ್ಣುಗಳು.. ಅವರ ವೇಷಭೂಷಣಕ್ಕೆ ಒಳ್ಳೆಯ ಸಾತ್ ಕೊಟ್ಟಿದೆ. 


ಗೊಂಬೆ ಎಂದರೆ ಗೊಂಬೆ ಅನ್ನಿಸುವ ರಾಜಶ್ರೀ ಈ ಚಿತ್ರದ ನಾಯಕಿ ಬಲನಾಗಮ್ಮನ ಪಾತ್ರಧಾರಿ. 


ಉಳಿದಂತೆ ಆರಂಭದಲ್ಲಿ ಕಾಣಿಸಿಕೊಳ್ಳುವ ಬಾಲಕೃಷ್ಣ, ಪಂಡರಿಬಾಯಿ, ಕಲ್ಪನಾ, ರಮಾದೇವಿ, ವಿ. ನಾಗಯ್ಯ, ಚಿತ್ರಕಥೆಗೆ ತಕ್ಕಂತೆ ಅಭಿನಯ ನೀಡಿದ್ದಾರೆ. 







ಸುಮಾರು ಚಿತ್ರದ ಅಂತ್ಯದ ವೇಳೆ ಬರುವ ಮಾಸ್ಟರ್ ಬಾಬು ಅರ್ಥಾತ್ ಬಾಲನಾಗಮ್ಮನ ಮಗನ ಪಾತ್ರಧಾರಿ ಬಾಲವರ್ದನ ಗಮನ ಸೆಳೆಯುತ್ತಾನೆ. ಮರಿ ರಾಜಕುಮಾರನಿಗಿರಬೇಕಾದ ಗತ್ತು, ಮಾತುಗಳು, ಚಾಕಚಕ್ಯತೆ, ಕಣ್ಣುಗಳು ಎಲ್ಲವೂ ಸೊಗಸಾಗಿ ಮೇಳೈಸಿದೆ. 


ನರಸಿಂಹರಾಜು ಅವರ ಪಾತ್ರ ಹಾಸ್ಯ ಉಕ್ಕಿಸುತ್ತದೆ.. ಎರಡು ಹೆಂಡಿರ ಗಂಡನಾಗಿ ಪಡುವ ಪಾಡು, ಇದರ ಜೊತೆಯಲ್ಲಿ ಜವಾಬ್ಧಾರಿ ಸ್ನೇಹಿತನಾಗಿ, ಕೋಟೆಯ ರಕ್ಷಣೆ ಜವಾಬ್ಧಾರಿ ಹೊತ್ತ ಪಾತ್ರದಲ್ಲಿ ಮಿಂಚುತ್ತಾರೆ. ಅನಿಸುತ್ತದೆ ನಾಯಕನಿಗಿಂತ ಇವರಿಗೆ ಕೊಂಚ ಹೆಚ್ಚು ದೃಶ್ಯಗಳಿವೆ ಅಂತ :-)

ತಮ್ಮ ಹಾದಿಯಲ್ಲಿ ಬಂದ ಪ್ರತಿಯೊಂದು ಹೂವನ್ನು ಮಾಲೆಗೆ ಸೇರಿಸಿಕೊಂಡು ಮಿಂಚುತ್ತಾ ನೆಡೆಯುತ್ತಿರುವ ರಾಜಕುಮಾರ್ ಅವರ ಮುಂದಿನ ಚಿತ್ರದಲ್ಲಿ ಸೇರೋಣ!

Saturday, April 19, 2025

ಸಾಮಾಜಿಕ ಕಥೆಗಳಿಗೂ ಒಗ್ಗಿಕೊಂಡು ಜಾದೂ ಮಾಡಿದ ಕಠಾರಿ ವೀರ 1966 (ಅಣ್ಣಾವ್ರ ಚಿತ್ರ ೭೦/೨೦೭)

ಕೆಲವು ಚಿತ್ರಗಳು ಅನೇಕ ಪ್ರಥಮಗಳಿಗೆ ಕಾರಣವಾಗುತ್ತದೆ.. ಹೌದು ಕಠಾರಿ ವೀರ ಈ ಚಿತ್ರ ಒಂದು ಜಾನಪದ ಕಥಾನಕ ಹೊಂದಿದ ಚಿತ್ರ.. ಭಕ್ತಿರಸಗಳ ಚಿತ್ರಗಳಲ್ಲಿ ಮಿಂದೆದಿದ್ದ ರಾಜಕುಮಾರ್ ಅವರು ಸ್ವಲ್ಪ ಬದಲಾವಣೆಯಿಂದ ಕೂಡಿದ ಚಿತ್ರವಿದು.. ಪ್ರಾಯಶಃ ಈ ಚಿತ್ರವಾದ ಮೇಲೆ ಅನೇಕಾನೇಕ ಸಾಮಾಜಿಕ ಕಥಾನಕ ವಸ್ತುಗಳ ಚಿತ್ರಗಳು ಬಂತು.. 


ಹೌದು ಮೊದಲೇ ಹೇಳಿದ್ದೆ ಈ ಚಿತ್ರ ಅನೇಕ ಪ್ರಥಮಗಳ ಚಿತ್ರ ಅಂತ.. ನಿಜ ಸಂಗೀತ  ನಿರ್ದೇಶಕರಾಗಿ ಉಪೇಂದ್ರಕುಮಾರ ಪಾದಾರ್ಪಣೆ ಮಾಡಿದರು.. 
ಆ ಕಾಲದ ಮೋಹಕ ನಟಿ ಎನಿಸಿದ್ದ ಉದಯಚಂದ್ರಿಕ ಅವರ ಮೊದಲ ಚಿತ್ರವಿದು.. 
ಖಳನಾಯಕನಾಗಿ ಮುಂದೆ ಹೆಸರು ಮಾಡಿದ ನಾಗಪ್ಪ ಈ ಚಿತ್ರಜೀವನ ಆರಂಭಿಸಿದ್ದು ಈ ಚಿತ್ರದಿಂದ!

ರಾಜಕುಮಾರ್ ಅವರ ಪಾತ್ರ ಒಂದು ಸಾಮ್ರಾಜ್ಯವನ್ನು ಕಾಪಾಡುವ ರಾಜಭಕ್ತಿಯಿಂದ ಕೂಡಿದ ವಂಶದ ಕುಡಿ.. ತನ್ನ ಅಪ್ಪನನ್ನು ರಾಜದ್ರೋಹಿ ಎಂದು ಪರಿಗಣಿಸಿದ ಒಂದು ದುಷ್ಟ ಸೇನಾಧಿಪತಿಯನ್ನು ಎದುರಿಸಿ ಅವನಿಂದ ಶೋಷಣೆಗೊಳಗಾದವರನ್ನು ಮತ್ತು ಸಾಮ್ರಾಜ್ಯವನ್ನು ರಕ್ಷಿಸುವ ಪಾತ್ರ, 

ಆ ಜಾನಪದ ಕಥಾವಸ್ತುವಿನ ನಾಯಕನ ವೇಷಭೂಷಣಗಳು ಒಪ್ಪವಾಗಿ ರಾಜಕುಮಾರ್ ಅವರು ಬಹಳ ಸುಂದರವಾಗಿ ಕಾಣುತ್ತಾರೆ. ಹೊಡೆದಾಟದ ದೃಶ್ಯಗಳಲ್ಲಿ, ಭಾವನಾತ್ಮಕವಾದ ಸನ್ನಿವೇಶಗಳು, ರಾಜಭಕ್ತಿಯನ್ನು ಪ್ರದರ್ಶಿಸುವಲ್ಲಿ.. ಹಾಗೆಯೇ ಹಾಸ್ಯದ ಸನ್ನಿವೇಶಗಳಲ್ಲಿ.. ಹಾಗೆಯೇ ವೇಷಮರೆಸಿಕೊಂಡು ಬಂದಿದ್ದ ನಾಯಕಿಯನ್ನು ಗುರುತಿಸಲಾಗದೆ ಆಕೆಯ ಜೊತೆಯಲ್ಲಿ ಮಾತಾಡುವ ದೃಶ್ಯಗಳು.. ನಂತರ ಅವಳೇ ತಾನು ಇಷ್ಟಪಡುವ ನಾಯಕಿ ಎಂದು ಅರಿವಾದಾಗ ತೋರುವ ಭಾವ.. ಚಿತ್ರಕ್ಕೆ ಒಪ್ಪವಾಗಿ ಮೂಡಿಬಂದಿದೆ. ಈ ರೀತಿಯ ಪಾತ್ರಗಳು ಅವರಿಗೆ ಒಂದು ರೀತಿಯ ಅಂಗೈನ ಗೆರೆಗಳಾಗಿ ಬಿಟ್ಟಿವೆ ಅನಿಸುತ್ತೆ. ಹಿಂದಿನ ಅನೇಕ ಚಿತ್ರಗಳಲ್ಲಿ ಈ ರೀತಿಯ ಪಾತ್ರಗಳು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಅವರ ಅಭಿನಯ ಮೂಡಿ ಬಂದಿರುವುದು ನಾವು ಕಾಣಬಹುದು. 

ಆದರೆ ಪ್ರತಿಯೊಂದು ಪಾತ್ರವೂ ವಿಭಿನ್ನವಾಗಿ ಮೂಡಿಬರಲು ಕಾರಣ.. ಮತ್ತೆ ಆ ಪಾತ್ರದ ಅಭಿನಯ ಈ ಪಾತ್ರದ ಮೇಲೆ ಪರಿಣಾಮ ಬೀರೋದು.. ಅಥವ ಅರೆ ಇದೆ ಅಭಿನಯ ಆ ಚಿತ್ರದಲ್ಲಿ ಅನ್ನುವ ಹಾಗೆಯೇ ಇಲ್ಲ.. ಪ್ರತಿಯೊಂದು ಚಿತ್ರದ ಪಾತ್ರವೂ ವಿಭಿನ್ನ.. ಅದು ಹೇಗೆ ಅಂದರೆ ಒಬ್ಬನೇ ಸೂರ್ಯ ಉದಯವಾಗೋದು.. ಅಸ್ತವಾಗೋದು.. ಆದರೆ ಪ್ರತಿಯೊಂದು ದಿನವೂ ವಿಭಿನ್ನವಾಗಿ ಕಾಣೋದು.. ರಾಜಕುಮಾರ್ ಅವರ ಅಭಿನಯದ ಹರವು ಕೂಡ ಹಾಗೆಯೇ!

ಖಳನಾಯಕ ಎಂದರೆ ಜೋರಾಗಿ ಅಬ್ಬರಿಸೋದು. ವಿಚಿತ್ರ ವೇಷಭೂಷಣ ಅನ್ನುವ ಹಾಗಿಲ್ಲದೆ.. ತಮ್ಮ ಅಭಿನಯದಿಂದಲೇ ಅಬ್ಬಬ್ಬಾ ಎಷ್ಟು ಕ್ರೂರಿ ಈತ ಅನಿಸುವಷ್ಟು ಪರಿಣಾಮಕಾರಿ ಅಭಿನಯ ನೀಡಿರೋದು ಉದಯಕುಮಾರ್.. ಗಂಭೀರವಾದ ಸಂಭಾಷಣೆ, ಅದಕ್ಕೆ ಬೇಕಾದ ನಾಟಕೀಯ ಸ್ಪರ್ಶ.. ಆ ಗತ್ತು ಎಲ್ಲವೂ ಸೂಪರ್.. 

ಹಾಸ್ಯದೃಶ್ಯಗಳು ಬಾಲಕೃಷ್ಣ ಮತ್ತು ನರಸಿಂಹರಾಜು ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಚುರುಕಾದ ಸಂಭಾಷಣೆಗಳು ಖುಷಿಕೊಡುತ್ತವೆ. 

ಉದಯಚಂದ್ರಿಕಾ ಆ ಕಪ್ಪು ಬಿಳುಪು ವರ್ಣಗಳಲ್ಲಿ ಅವರ ಸೌಂದರ್ಯ ಅದ್ಭುತವಾಗಿ ಕಾಣುತ್ತದೆ. ಕತ್ತಿಕಾಳಗದಲ್ಲಿ ಅವರು ತೋರುವ ಲವಲವಿಕೆ . ಭಾವನಾತ್ಮಕವಾದ ದೃಶ್ಯಗಳಲ್ಲಿ ಸೊಗಸಾದ ಅಭಿನಯ.. ಸೊಗಸು. 

ಉಳಿದಂತೆ ಪಾಪಮ್ಮ, ನಾಗಪ್ಪ ನಾ ಈಗ ಏನ್ ಮಾಡ್ಲಿ ಅಂತ ಸದಾ ಕೇಳುವ ರತ್ನಾಕರ್.. ಮುಂತಾದ ಸಹಕಲಾವಿದರ ಅಭಿನಯ ಚಿತ್ರದ ಓಘಕ್ಕೆ ಸಾಥ್ ಕೊಟ್ಟಿದೆ,








ಉಪೇಂದ್ರಕುಮಾರ್ ಅವರ ಸರಳ ಸಂಗೀತ.. 
ಸೋರಟ್ ಅಶ್ವಥ್ ಸಂಭಾಷಣೆ ಹಾಗೂ ಗೀತಗಳ ಜವಾಬ್ಧಾರಿ 
ಆರ್ ಮಧು ಅವರ ಸೊಗಸಾದ ಛಾಯಾಗ್ರಹಣ 
ಈ ಎಲ್ಲರ ಪರಿಶ್ರಮವನ್ನು ಮತ್ತು ನಿರ್ಮಾಪಕರು ಟಿ ವಾಸಣ್ಣ ಹಾಗೂ ಎಸ್ ಹೀರಾ ಅವರ ನಿರ್ಮಾಣವನ್ನು ಸದುಪಯೋಗ ಮಾಡಿಕೊಂಡಿರುವ ವೈ ವಿ ರಾವ್ ಅವರು ಚಿತ್ರಕಥೆಯೊಂದಿಗೆ ನಿರ್ದೇಶನ ಮಾಡಿದ್ದಾರೆ.. 

Saturday, April 12, 2025

ಮಂತ್ರ ಹಾಕಿದಂತೆ ಪರಕಾಯ ಪ್ರವೇಶ ಮಾಡಿದ ಮಂತ್ರಾಲಯ ಮಹಾತ್ಮೆ 1966 (ಅಣ್ಣಾವ್ರ ಚಿತ್ರ ೬೯/೨೦೭)

ಒಂದು ನಾನು ನಾನಾಗಿರಬಹುದು.. ಇಲ್ಲವೇ ನಾನು ಏನಾದರೂ ಆಗಬಹುದು.. ಇದು ಎರಡು ಬಿಟ್ಟು ಇನ್ನೊಂದು ಸಾಧ್ಯತೆ ಇದೆ.. ಅದಕ್ಕೆ ದೈವ ಅನುಗ್ರಹದ ಜೊತೆಗೆ ಆ ಶಕ್ತಿಗೆ ಶರಣಾಗಬೇಕು.. 

ರಾಜಕುಮಾರ್ ಅವರು ಈ ಚಿತ್ರದಲ್ಲಿ ಆ ಮೂರನೇ ಹಂತದಲ್ಲಿ ವಿಜೃಂಭಿಸಿದ್ದಾರೆ.. ಈ ರೀತಿಯ ಸಂಕೀರ್ಣ ಪಾತ್ರಗಳನ್ನ ಹಿಂದಿನ ಅನೇಕ ಚಿತ್ರ ಪಾತ್ರಗಳಲ್ಲಿ ಮಾಡಿಕೊಂಡು ಬಂದಿದ್ದರು.. ಆದರೆ ಇಲ್ಲಿನ ಪಾತ್ರ ವಿಶೇಷ ಮತ್ತು ಅನೇಕಾನೇಕ ಭಕ್ತಾದಿಗಳು ತಮ್ಮ ಅಂತರಂಗ ಶಕ್ತಿ ಎಂದೇ ನಂಬಿ ಶತಮಾನಗಳಿಂದಲೂ ಮತ್ತು ಮುಂದಿನ ಶತಮಾನಗಳಲ್ಲೂ ಅನುಸರಿಸುವ.. ಭಕ್ತಿಯಿಂದ ನೆಡೆದುಕೊಳ್ಳುವ ಮಂತ್ರಾಲಯದ ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರ.. 

ಇಲ್ಲಿ ರಾಜಕುಮಾರ್ ಅಭಿನಯಿಸಿಲ್ಲ ಬದಲಿಗೆ ಅನೇಕ ಪವಾಡಗಳನ್ನು ಮಾಡಿ ರಾಘವೇಂದ್ರ ಸ್ವಾಮಿಗಳು ಇಲ್ಲಿ ಇನ್ನೊಂದು ಪವಾಡವನ್ನು ಮಾಡಿ.. ರಾಜಕುಮಾರ್ ಅವರ ಅಭಿನಯದೊಳಗೆ ಸೇರಿಕೊಂಡುಬಿಟ್ಟಿದ್ದಾರೆ.. ರಾಜಕುಮಾರ್ ಅವರು ಪರಕಾಯ ಪ್ರವೇಶ ಮಾಡಿಲ್ಲ ಬದಲಿಗೆ ರಾಯರೇ ರಾಜಕುಮಾರ್ ಅವರ ಬೆನ್ನ ಹಿಂದೆ ನಿಂತು ಈ ಪಾತ್ರವನ್ನು ಅಭಿನಯ ಮಾಡುವಂತೆ ಶಕ್ತಿ ನೀಡಿದ್ದಾರೆ ಅಂದರೆ ಇದು ಅತಿಶಯೋಕ್ತಿ ಅನ್ನೋಕೆ ಆಗೋಲ್ಲ.. ಕಾರಣ ಕಟ್ಟು ನಿಟ್ಟಾದ ವ್ರತವನ್ನು ಅನುಸರಿಸಿ ಈ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

ಮಠದ ಜವಾಬ್ಧಾರಿಯನ್ನು ಹೊತ್ತು ನಿಭಾಯಿಸುವಾಗ ಬೇಕಾದ ಸಂಯಮ..  ಸ್ವಾಮಿಗಳಿಗೆ ಇರಬೇಕಾದ ತಾಳ್ಮೆ, ಅದಕ್ಕೆ ತಕ್ಕಂತೆ ತಮ್ಮ ಸಂಭಾಷಣೆಯ ಶೈಲಿಯನ್ನು ಒಗ್ಗಿಸಿಕೊಂಡಿರುವುದು.. ಅವರ ದೇಹದಾರ್ಢ್ಯ.. ಮುಖಭಾವ.. ಅದರಲ್ಲೂ ಯತಿಗಳಾದ ಮೇಲೆ ಗಡ್ಡಧಾರಿಯಾಗಿ ನೀಡಿದ ಅಭಿನಯ.. ಅಬ್ಬಬ್ಬಾ ಅನಿಸುತ್ತದೆ.. ರಾಯರನ್ನು ನೋಡಲೇ ಬೇಕಿಲ್ಲ.. ಈ ಸಿನೆಮಾವನ್ನು ಒಮ್ಮೆ ನೋಡಿದರೆ ಸಾಕು.. ಗುರು ರಾಘವೇಂದ್ರರೆ ಕಣ್ಣೆದುರು ನಿಂತಂತೆ ಭಾಸವಾಗುತ್ತದೆ. 

ನಮಗರಿವಿಲ್ಲದೆ ಮನಸ್ಸು ಕೈ ಮುಗಿಯುತ್ತದೆ. 

ಇಲ್ಲಿನ ಪ್ರತಿಯೊಂದು ಪಾತ್ರವೂ ಜೀವಿಸಿದೆ.. 

ಉದಯಕುಮಾರ್,ಆದವಾನಿ ಲಕ್ಷ್ಮಿದೇವಿ, ಕಲ್ಪನಾ, ಜಯಂತಿ ತಮ್ಮ ಪುಟ್ಟ ಪಾತ್ರಗಳಲ್ಲಿ ಸಲೀಸಾಗಿ ನಟಿಸಿದ್ದಾರೆ..

ಚಿತ್ರದ ಸುಮಾರು ದೃಶ್ಯಗಳಲ್ಲಿ ಬರುವ ಸುಧೀಂದ್ರ ತೀರ್ಥ ಪಾತ್ರದಲ್ಲಿ ಎಚ್ ರಾಮಚಂದ್ರ ಶಾಸ್ತ್ರೀ ಜೀವ ತುಂಬಿದ ಅಭಿನಯ ನೀಡಿದ್ದಾರೆ.. 

ಈ ಚಿತ್ರದ ಬಗ್ಗೆ ಬರೆದಷ್ಟು ಮುಗಿಯೋಲ್ಲ.. 

ಸುಶ್ರಾವ್ಯ ಸಂಗೀತ ನೀಡಿದ ರಾಜನ್ ನಾಗೇಂದ್ರ ಜೋಡಿ 

ಗೀತೆಗಳನ್ನು ರಚಿಸಿದ ಜಿ ವಿ ಅಯ್ಯರ್ 

ರಾಯರೇ ರಚಿಸಿದ ಇಂದು ಎನಗೆ ಗೋವಿಂದ ಹಾಡಿಗೆ ಸುಮಧುರ ಸಂಗೀತ ನೀಡಿದ್ದಾರೆ ಅಷ್ಟೇ ಸೊಗಸಾಗಿ ಪಿ ಬಿ ಶ್ರೀನಿವಾಸ್ ಅವರ ಗಾಯನ ಮನಸ್ಸೆಳೆಯುತ್ತದೆ. 

ಜಗಜ್ಯೋತಿ ಫಿಲಂಸ್ ಲಾಂಛನದಡಿ ತಯಾರಾದ ಚಿತ್ರಕ್ಕೆ 

ಹಾಡುಗಳಿಗೆ ಪಿ ಶ್ರೀನಿವಾಸ್, ಎಸ್ ಜಾನಕೀ, ಪಿ ಲೀಲಾ ಎಲ್ ಆರ್ ಈಶ್ವರಿ ಸಿ ಎಸ್ ಸರೋಜಿನಿ ಬೆಂಗಳೂರು ಲತಾ ಮತ್ತು ವೀರಮಣಿ ತಮ್ಮ ಧ್ವನಿ ನೀಡಿದ್ದಾರೆ. 

ಬಿ ದೊರೈರಾಜ್ ಛಾಯಾಗ್ರಹಣ ಮತ್ತು ಅವರ ಸ್ನೇಹಿತ ಭಗವಾನ್ ಸಹ ನಿರ್ದೇಶನ  ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. 

ಟಿ ವಿ ಸಿಂಗ್ ಠಾಕೂರ್ ಜೊತೆಗೆ ದೊರೈರಾಜ್ ಮತ್ತು ಭಗವಾನ್ ನಿರ್ಮಾಪಕರಾಗಿದ್ದಾರೆ. 

ನಿರ್ದೇಶನವನ್ನು ಟಿ ವಿ ಸಿಂಗ್ ಠಾಕೂರ್ ನೋಡಿಕೊಂಡಿದ್ದಾರೆ. 










ಸಹ ಕಲಾವಿದರ ಪ್ರತಿಭೆ ಅಣ್ಣಾವ್ರ ಮಾತುಗಳಲ್ಲಿ ... ಪುಣ್ಯ ದಿನ - 2025

ಇನ್ನೂ ಬೆಳಕು ಹರಿದಿರಲಿಲ್ಲ.. ಆದರೆ ಒಂದು ಪುಟ್ಟ ಬೆಳಕು ನನ್ನ ಮಲಗುವ ಕೋಣೆಯಲ್ಲಿ ಬೆಳಗಿನ ಜಾವ ನಸುಕು ನಸುಕು ಮಸುಕು ಮಸುಕು.. ಯಾರೋ ಬಾಗಿಲು ತಟ್ಟಿದ ಸದ್ದು.. ಕಾಲಿಂಗ್ ಬೆಲ್ ಬ್ಯಾಟರಿ ಹೋಗಿತ್ತು ಆದ್ದರಿಂದ ಬಾಗಿಲು ಬಡಿಯುತ್ತಿದ್ದರು.. 

ಕಣ್ಣುಜ್ಜಿಕೊಂಡೆ ಬಾಗಿಲು ತೆರೆದೆ ... ಪ್ರಕಾಶಮಾನವಾದ ಒಂದು ಜ್ಯೋತಿ ಮೆಲ್ಲಗೆ ಆಕೃತಿ ತಳೆಯುತಿತ್ತು...ಬಿಳಿ ಅಂಗಿ.. ಬಿಳಿ ಪಂಚೆ.. ಆ ನಸುಕಿನಲ್ಲೂ ಹುಣ್ಣಿಮೆಯಾಗಿದ್ದರಿಂದ ತೇಜೋಮಯವಾದ ಹೊಳೆಯುವ ಮುಖ ನೋಡಿದ ಕೂಡಲೇ ಗೊತ್ತಾಯ್ತು..

ನನ್ನ ಕಣ್ಣನ್ನು ನಾನೇ ನಂಬಲಿಲ್ಲ.. ಕಣ್ಣುಜ್ಜಿಕೊಂಡೆ.. ನನ್ನನ್ನು ತಳ್ಳಿಕೊಂಡೇ ಒಳಗೆ ಬಂದೆ ಬಿಟ್ಟರು.. ತಮ್ಮದೇ ಚಿತ್ರವನ್ನು ನನ್ನ ಮನೆಯಲ್ಲಿ ನೋಡಿ.. ಅರೆ ಈ ಫೋಟೋ ಇನ್ನೂ ಇದೆ ಇಲ್ಲಿ .. ಎಂದು ತಮ್ಮದೇ ಶೈಲಿಯಲ್ಲಿ ಬಂದು ಚಾಪೆ ಮೇಲೆ ಕೂತೆ ಬಿಟ್ಟರು.. 

ಇನ್ನೂ ನನಗೆ ಗಾಬರಿ, ಕುತೂಹಲ, ಕಂಪನ.. ಮಾತು ಹೊರಡುತ್ತಿಲ್ಲ.. ಅವರೇ ತಮ್ಮ ಬಳಿ ನನ್ನ ಕೂರಿಸಿಕೊಂಡು.. ನೋಡಪ್ಪ ಶ್ರೀ ನಿನ್ನ ಲ್ಯಾಪ್ಟಾಪ್ ನೋಡಿದೆ.. ನನ್ನ ಬಗ್ಗೆ ನೀನೇನೋ ಬರೀತೀಯ ಅಂತ ಗೊತ್ತು.. ಅದಕ್ಕೆ ಮೊದಲೇ ನಾ ಇಲ್ಲಿಗೆ ಬಂದೆ.. ನೋಡು ಇವತ್ತು ನನ್ನ ಹಾಡಿ ಹೊಗಳೋದು.. ಅಣ್ಣಾವ್ರು..ದೇವರು .. ನಟಸಾರ್ವಭೌಮ.. ಗಾನ ಗಂಧರ್ವ ಈ ಪಳೆಯುಳಿಕೆ ಮಾತುಗಳನ್ನು ಮತ್ತೆ ಬರೆಯಬಾರದು ಅಂತ ಮೊದಲೇ ಓಡಿ ಬಂದೆ.. 



ಅಣ್ಣಾವ್ರೇ ಸಂಧ್ಯಾರಾಗ ಚಿತ್ರದ ಹಾಡಿನಲ್ಲಿರುವಂತೆ "ದೀನ ನಾ ಬಂದಿರುವೆ" ಅಂತ "ಕೃಷ್ಣಾಲಯದಾಚೆ ನಿಂತ ಕನಕನ ಹಾಗೆ" ಎನ್ನುವಂತೆ ನಾ ನಿಮ್ಮ ಮುಂದೆ ಇರುವೆ.. ನೀವು ಹೇಳಿ ನಾ ಅದನ್ನು ಇಲ್ಲಿ ದಾಖಲಿಸುತ್ತೇನೆ ಅಷ್ಟೇ ಅಣ್ಣಾವ್ರೇ"

"ಶಭಾಷ್ ಜಮಾಯಿಸಿ ಬಿಡು ಹಾಗಾದರೆ ಶ್ರೀ.. ನೋಡು ಇಂದು ನಾ ಹೇಳ ಹೊರಟಿರುವುದು ನನ್ನ ಸಹಕಲಾವಿದರು ನನ್ನನ್ನು ಮೀರಿಸಿರೋದರ ಬಗ್ಗೆ.. .. ನಾ ಅವರ ಅಭಿನಯ ಮೆಚ್ಚಿಕೊಂಡಿರುವುದು .. ನನಗೆ ಇಷ್ಟವಾಗಿರೋದು.. ಅದರ ಬಗ್ಗೆ ಹೇಳುತ್ತೇನೆ.. 

ವಜ್ರಮುನಿ : ಅದೇನೋ ಒಂದು ಸೆಳೆತ  ಇವರ ಅಭಿನಯ ಕಂಡಾಗ.. ಮಲ್ಲಮ್ಮನ ಪವಾಡದಿಂದ ಆಕಸ್ಮಿಕ ಚಿತ್ರದ ತನಕ ನನ್ನ ಅವರ ಜುಗಲ್ ಬಂದಿ ನನಗೆ ಇಷ್ಟ.. 
ಅದರಲ್ಲೂ ಸಂಭಾಷಣೆಯೇ ಇಲ್ಲದೇ ಗಿರಿಕನ್ಯೆ ಚಿತ್ರದಲ್ಲಿ ಇಬ್ಬರೂ ನಗುತ್ತಿರುವುದು.. 
ಮಯೂರ ಚಿತ್ರದ ದರ್ಬಾರ್ ದೃಶ್ಯ.. 
ಶಂಕರ್ ಗುರು ಚಿತ್ರದಲ್ಲಿ ನನ್ನ ದ್ವಿಪಾತ್ರ ಅವರ ಹೆಗಲ ಮೇಲೆ ಕೈಯಿಟ್ಟು ಮಾತಾಡುವ ದೃಶ್ಯ..  
ದಾರಿ ತಪ್ಪಿದ ಮಗ ಚಿತ್ರದ ದರೋಡೆ ದೃಶ್ಯಗಳು.. 
ಪ್ರೇಮದ ಕಾಣಿಕೆ ಚಿತ್ರದಲ್ಲಿ ಮನೆಯಲ್ಲಿ ನಮ್ಮಿಬ್ಬರ ಹೊಡೆದಾಟಕ್ಕೆ ಮುಂಚಿನ ದೃಶ್ಯ..
ಬಡವರ ಬಂಧು ಚಿತ್ರದಲ್ಲಿ ನಮ್ಮಿಬ್ಬರ ಅನೇಕಾನೇಕ ದೃಶ್ಯಗಳು 
ಬಹದ್ದೂರ್ ಗಂಡು ಚಿತ್ರದ ಕತ್ತಿ ಕಾಳಗ 
ಸಂಪತ್ತಿಗೆ ಸವಾಲ್.. ನಿನ್ನ ಸಂಪತ್ತಿಗೆ ನನ್ನ ಸವಾಲ್  ದೃಶ್ಯ 
ಬಂಗಾರದ ಮನುಷ್ಯದಲ್ಲಿ ಮಾವ ನನಗೆ  ದುಡ್ಡು ಬೇಕು ಮಾತಿನ ದೃಶ್ಯ 
ಹೀಗೆ ಹತ್ತಾರು ಸಿನಿಮಾಗಳು ಹತ್ತಾರು ಸ್ಮರಣೀಯ ಅಭಿನಯ 

ತೂಗುದೀಪ ಶ್ರೀನಿವಾಸ್: ಇವರಿದ್ದಾಗಭಯವಾಗುತ್ತಿತ್ತು ನನಗೆ.. ನನ್ನ ಅಭಿನಯ ತಿಂದು ಬಿಡ್ತಾರೆ ಅಂತ.. 
ನೀ ನನ್ನ ಗೆಲ್ಲಲಾರೆ ಅಂತಿಮ ದೃಶ್ಯದಲ್ಲಿ ನಮ್ಮಿಬ್ಬರ ಮಾತುಗಳು 
ಶಂಕರ್ ಗುರು ಚಿತ್ರದಲ್ಲಿ ಓಕೆ ೫೦ : ೫೦ ಎಂದು ಹೇಳುವುದು 
ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಬಾಕ್ಸಿಂಗ್ ದೃಶ್ಯಗಳು 
ಅದೇ ಕಣ್ಣು ನನ್ನ ನೆರಳಾಗಿ ಕಾಪಾಡುವ ಹಾಗೂ ಕಾಣುವ ಅಭಿನಯ 
ಧ್ರುವತಾರೆ ಚಿತ್ರದ ಕೆಲವು ದೃಶ್ಯಗಳು 
ಜ್ವಾಲಾಮುಖಿಯಲ್ಲಿ ಮಟ್ಕಾ ಕಿಂಗ್ 
ಕೆರಳಿದ ಸಿಂಹದ ಅಂತಿಮ ದೃಶ್ಯಗಳು 
ಕಾಮನಬಿಲ್ಲು ಚಿತ್ರದ ಕಿರಿ ಗೌಡ 
ಇವರು ಖಳರಷ್ಟೇ ಅಲ್ಲದೆ ಅನೇಕ ಪೋಷಕಪಾತ್ರಗಳ ಅಭಿನಯ ನನಗೆ ಇಷ್ಟ 


ಬಾಲಣ್ಣ : ಇವರನ್ನು ಹೇಗೆ ಮರೆಯೋದು.. ನನಗೆ ಅಕ್ಷರ ಕಲಿಸಿದ ಗುರು ಇವರು.. ಆರಂಭದಲ್ಲಿ ಖಳರಾಗಿ ಮುರಿಯದ ಮನೆ, ಕಣ್ತೆರೆದು ನೋಡು, ಗಂಧದ ಗುಡಿ, ಬಡವರ ಬಂಧು, ತ್ರಿಮೂರ್ತಿ , ಕರುಣೆಯೇ ಕುಟುಂಬದ ಕಣ್ಣು, ಭಕ್ತ ಕುಂಬಾರ, ಸಂತ ತುಕಾರಾಂ, ಧ್ರುವತಾರೆ, ಸಂಪತ್ತಿಗೆ ಸವಾಲ್ ಹೀಗೆ ಹತ್ತಾರು ಚಿತ್ರಗಳು.. ಆದರೆ ನಂತರ ಪೋಷಕ ಪಾತ್ರಗಳಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ, ನಾ ನಿನ್ನ ಮರೆಯಲಾರೆ, ಕಾಮನಬಿಲ್ಲು, ಬಂಗಾರದ ಮನುಷ್ಯ, ಪ್ರೇಮದ ಕಾಣಿಕೆ, ಶಂಕರ್ ಗುರು, ತಾಯಿಗೆ ತಕ್ಕ ಮಗ ಮುಂತಾದ ಚಿತ್ರಗಳಲ್ಲಿ ಅಷ್ಟೇ ಮನೋಜ್ಞ ಅಭಿನಯ ನೀಡಿದ್ದರು 

ಇವರು ನನ್ನ ಚಿತ್ರಗಳಲ್ಲಿ ಖಾಯಂ ಖಳನಾಯಕರು.. ಇವರಲ್ಲದೆ  ಎಂ ಪಿ ಶಂಕರ್, ಪ್ರಭಾಕರ್, ನಾಗಪ್ಪ, ದಿನೇಶ್, ಸುದರ್ಶನ್, ಶ್ರೀನಾಥ್, ಉದಯಕುಮಾರ್, ಕಲ್ಯಾಣ್ ಕುಮಾರ್ ಹೀಗೆ ಇವರು ಒಂದು ಕಡೆ.. 

ನನ್ನ ಪಾತ್ರಕ್ಕೆ ಇನ್ನಷ್ಟು ತೂಕ ಕೊಡುತ್ತಿದ್ದರು ಸಹಕಲಾವಿದರು

ನನ್ನ ಎರಡನೇ ತಾಯಿ ಅಂತಲೇ ಹೆಸರಾಗಿದ್ದ ಪಂಡರಿಬಾಯಿ.. 
ಇವರ ನಂತರ ನನ್ನ ಇನ್ನೊಬ್ಬ ತಾಯಿ ಆದವಾನಿ ಲಕ್ಷ್ಮೀದೇವಿ 

ನನಗೆ ತಾಯಿ ಪ್ರೇಮವನ್ನು ಉಣಬಡಿಸಿದವರು 

ಆರಂಭದ ಚಿತ್ರಗಳಲ್ಲಿ ದುಷ್ಟ ಪಾತ್ರಗಳಲ್ಲಿ ನನಗೆ ಕಾಟ ಕೊಡುತ್ತಿದ್ದ ಪಾಪಮ್ಮ ನಂತರ ಕರುಣಾಮಯಿ ಪಾತ್ರಗಳಲ್ಲಿ ಮಿಂಚಿದರು.. 
ನನ್ನ ಕುಟುಂಬದ ಒಂದು ಭಾಗವೇ ಆಗಿದ್ದ ಶಾಂತಮ್ಮ 
ಸುಮಾರು ನಾಲ್ಕು ದಶಕಗಳು ನನ್ನ ಕುಟುಂಬದ ಅವಿಭಾಜ್ಯವಾಗಿದ್ದ ಹೊನ್ನವಳ್ಳಿ ಕೃಷ್ಣ

ಒಂದೇ ಎರಡೇ ಅನೇಕಾನೇಕ ಕಲಾವಿದರು ನನ್ನನ್ನು ಮುತ್ತುರಾಜನಿಂದ ರಾಜಕುಮಾರ್ ಮಾಡಿದ್ದಾರೆ, 

ಇಪ್ಪತ್ತನಾಲ್ಕನೆ ತಾರೀಕು ನನ್ನ ಇನ್ನೊಬ್ಬ ನೆಚ್ಚಿನ ಕಲಾವಿದನ ಬಗ್ಗೆ ನೀ ಬರೆಯಬೇಕು.. ನಿನಗೆ ಹನ್ನೆರಡು ದಿನಗಳ ಸಮಯ ಕೊಟ್ಟಿದ್ದೀನಿ.. ಇದರ ಜವಾಬ್ಧಾರಿ ನಿನದು.. 

ಆಗಲಿ ಅಣ್ಣಾವ್ರೇ.. ನೀವು ನನಗೆ ಕೆಲಸ ಕೊಡುವುದು.. ಅದನ್ನು ನಾ ಮಾಡುವುದು ಅದಕ್ಕಿಂತ ಈ ಬದುಕಿಗೆ ಇನ್ನೇನು ಬೇಕಾಗಿದೆ!

ಶುಭವಾಗಲಿ ಶ್ರೀ.. ನಿಮ್ಮಿಂದಲೇ ಮಣ್ಣಾಗಿ ಹತ್ತೊಂಬತ್ತು ವರ್ಷಗಳಾಯಿತು ಶ್ರೀ.. ನಂಬೋಕೆ ಆಗ್ತಿಲ್ಲ.. ಮಣ್ಣಾದೆ ಅಷ್ಟೇ ಆದರೆ ನಿಮ್ಮಗಳ ಹೃದಯದಲ್ಲಿ ಸದಾ ಈ ನಿಮ್ಮ ರಾಜಕುಮಾರ ಅಜರಾಮರ!

Sunday, March 23, 2025

ಮೀಡಿಯಾದಲ್ಲಿ ಕಾಣದ ಚಿತ್ರ ಪತಿವ್ರತ 1965 (ಅಣ್ಣಾವ್ರ ಚಿತ್ರ ೬೮/೨೦೭)

ಬದಲಾದ ಕಾಲದಲ್ಲಿ ಕೆಲವು ಅನರ್ಘ್ಯ ರತ್ನಗಳು ಹೊಳಪು ಕಳೆದುಕೊಂಡರೂ ಪರವಾಗಿಲ್ಲ ಆದರೆ ಕಾಣದೆ ಹೋದರೆ ಬೇಸರವಾಗುತ್ತದೆ ..

೧೯೬೫ ಇಸವಿ ರಾಜಕುಮಾರ್  ಅವರ ಚಿತ್ರಜೀವನದ ಒಂದು ಪರ್ವಕಾಲ..  ಈ ವರ್ಷದಲ್ಲಿ ಅವರ ಹಲವಾರು ಚಿತ್ರಗಳು ವಿಭಿನ್ನವಾಗಿದ್ದವು ಮತ್ತು ವಿಶೇಷವಾಗಿದ್ದವು. 

ಆ ವರ್ಷದಲ್ಲಿ ಬಂದ  ಇನ್ನೊಂದು ಸಿನಿಮಾ ಪತಿವ್ರತ.. ಆದರೆ ಸಿನಿಮಾದ ಪ್ರಿಂಟ್ ಯು ಟ್ಯೂಬ್, ಸಾಮಾಜಿಕ ತಾಣ, ಸಿಡಿಗಳು ಯಾವುದು ಸಿಗದ ಕಾರಣ.. ಸಿಕ್ಕ ಮೇಲೆ ನೋಡಿ ಬರೆಯುವ ಕಾರ್ಯ ನೋಡುವೆನು. 

ಸುಮಾರು ಆರು ವರ್ಷಗಳಲ್ಲಿ ಚಿತ್ರೀಕರಣಗೊಂಡ ಚಿತ್ರ.. ಅಂದರೆ ೧೯೫೯ರಲ್ಲಿ ಶುರುವಾದ ಚಿತ್ರ ಮುಗಿದಿದ್ದು ೧೯೬೫ ರಲ್ಲಿ.. 

ಪಿ ಎಸ್ ಮೂರ್ತಿ ಅವರ ನಿರ್ದೇಶನದಲ್ಲಿ ಎಮ್ ಎನ್ ಶ್ರೀನಿವಾಸ್ ಅವರ ನಿರ್ಮಾಣದಲ್ಲಿ ಮೂಡಿಬಂದ ಚಿತ್ರ. 

ಸಂಗೀತ ಟಿ ಎ ಮೋತಿ ಮತ್ತು ಛಾಯಾಗ್ರಹಣ ಟಿ ಎಲ್ಲಪ್ಪನ್. 

ರಾಜಕುಮಾರ್ ಅವರ ಜೊತೆ ಉದಯಕುಮಾರ್, ಹರಿಣಿ ಮುಂತಾದವರು ಇದ್ದಾರೆ. ಚಿತ್ರದ ಪೂರ್ಣ  ವಿವರ ಸಿಗುತ್ತಿಲ್ಲ ಸಿಗುವುದು ಕಷ್ಟ ಸಾಧ್ಯ ಎನ್ನುತ್ತಾರೆ ಸಿಕ್ಕ ವಿವರಗಳು 

ಇರಲಿ ಕೆಲವು ಚಿತ್ರಗಳು ಮರು ಬಿಡುಗಡೆ ಭಾಗ್ಯ ಕಾಣದಿರುವುದು ಇದಕ್ಕೆ ಕಾರಣ ಅನ್ನಬಹುದು. 

ಮತ್ತೆ ಮುಂದಿನ ಚಿತ್ರದಲ್ಲಿ ಸಿಗೋಣ..  





 

Saturday, March 22, 2025

ಕುಟುಂಬದ ಹುಚ್ಚಿಡಿಸುವ ಸಮಸ್ಯೆಯನ್ನು ಹುಚ್ಚು ಹಿಡಿಸಿಕೊಂಡು ಬಿಡಿಸಿಕೊಳ್ಳುವ ಮದುವೆ ಮಾಡಿ ನೋಡು 1965 (ಅಣ್ಣಾವ್ರ ಚಿತ್ರ ೬೭/೨೦೭)

ಸುಮಾರು ಐವತ್ತು ನಿಮಿಷಗಳಾದ ಮೇಲೆ ತೆರೆಯ ಮೇಲೆ ಬರುವ ನಾಯಕ - ರಾಜಕುಮಾರ್ 

ನಾಯಕಿಯ ಹಿತಮಿತವಾದ ದೃಶ್ಯಗಳುಗೊಳೋ ಎಂದು ಅಳಬಹುದಾದ ದೃಶ್ಯಗಳ ಅನೇಕ ಸಾಧ್ಯತೆಗಳಿದ್ದರೂ  ಅದು ಇಲ್ಲ  - ಲೀಲಾವತಿ  

ಹಾಸ್ಯ ನಟರ ಗುಂಪು ಇದೆ ಆದರೆ ಹಾಸ್ಯ ಉಕ್ಕಿಸುವಷ್ಟು ದೃಶ್ಯಗಳಿಲ್ಲ - ದ್ವಾರಕೀಶ್, ರತ್ನಾಕರ್, ಗಣಪತಿ ಭಟ್, ನರಸಿಂಹರಾಜು

ಆ ಹೊತ್ತಿನ ಸಿನೆಮಾಗಳಲ್ಲಿ ಖಳ ಪಾತ್ರಗಳಿಗೆ ಹೆಸರಾದ ನಟರಿದ್ದರೂ ಆ ರೀತಿಯ ದೃಶ್ಯಗಳಿಲ್ಲ - ಉದಯಕುಮಾರ್ 

ಸಂಯಮ ನಟನೆಗೆ ಹೆಸರಾಗಿದ್ದ ನಟ ಕಟುವಾಗಿ ಮಾತಾಡುವ ದೃಶ್ಯಗಳಿದ್ದರೂ ಕೋಪ ತರಿಸುವಷ್ಟು ಕ್ಷುದ್ರತೆ ಇಲ್ಲ - ಆರ್ ನಾಗೇಂದ್ರರಾವ್ 

ಸ್ವಲ್ಪ ವಿಚಿತ್ರ ಆಂಗೀಕ ಅಭಿನಯ ತೋರುವ ಪೋಷಕ ನಟ ಇಡೀ ಚಿತ್ರದಲ್ಲಿ ಹರಡಿಕೊಂಡು ಚಿತ್ರಕ್ಕೆ ಅಗತ್ಯವಿರುವ ತಿರುವುದು ನೀಡುತ್ತಾರೆ - ಅಶ್ವಥ್ 

ತಾಯಿ ಪಾತ್ರದಲ್ಲಿ ಯಾವಾಗಲೂ ಅಮೋಘ ಅಭಿನಯ ನೀಡುವ ನಟಿ ಇಲ್ಲೂ ಕೂಡ ಸಮಯಮದ ಅಭಿನಯ - ಜಯಶ್ರೀ 

ಚಿತ್ರದ ಮೊದಲ ಅರ್ಧದಲ್ಲಿ ಚಟ್ ಪಟಾ ಮಾತಾಡುವ ಬಾಲ ಕಲಾವಿದ - ಮಾಸ್ಟರ್ ಬಸವರಾಜು 

ಸಣ್ಣ ಪಾತ್ರವಾದರೂ ಸುಮಾರು ದೃಶ್ಯಗಳಲ್ಲಿ ಎರಡೇ ಎರಡೇ ಸಾಲುಗಳು ಹೇಳುವ ಪಾತ್ರ - ರಮಾ  

ಘಟವಾಣಿ ಪಾತ್ರದಲ್ಲಿ ಯಾವಾಗಲೂ ವಿಜೃಂಭಿಸುವ ಪಾತ್ರ ತಾನು ಇರುವ  ದೃಶ್ಯಗಳನ್ನು ಅಲುಗಾಡಿಸಿವರು - ರಮಾದೇವಿ 

ಚುರುಕು ಸಂಭಾಷಣೆ ಮತ್ತುಗೀತೆಗಳು ಜೊತೆಯಲ್ಲಿ ನಿರ್ದೇಶನ - ಹುಣಸೂರ್ ಕೃಷ್ಣಮೂರ್ತಿ 

ಚಿತ್ರಕತೆ ಕೊಟ್ಟಿರುವ ಸಹ ನಿರ್ಮಾಪಕರಲ್ಲಿ ಒಬ್ಬರು - ನಾಗಿರೆಡ್ಡಿ 

ಉತ್ತಮ ಸಂಸ್ಥೆಯಿಂದ ಮೂಡಿ ಬಂದ ಚಿತ್ರ - ವಿಜಯ ಪ್ರೊಡಕ್ಷನ್ಸ್ 

ನಿರ್ಮಾಪಕರ ಜೋಡಿ - ನಾಗಿರೆಡ್ಡಿ ಚಕ್ರಪಾಣಿ 

ನಿಜ..  ವರದಕ್ಷಿಣೆ ಒಂದು ಸದಾ ಕಾಡುವ ಸಾಮಾಜಿಕ ಪಿಡುಗು.. ತನ್ನ ಅಕ್ಕನನ್ನು ಮದುವೆ ಮಾಡಿ ಕಳಿಸಿದ ಮೇಲೆ ತಾನು ಮದುವೆ ಆಗೋದು ಎಂಬ ತತ್ವ ಹೊಂದಿದ್ದ ತಮ್ಮ ಮನೆಯಲ್ಲಿನ ಒತ್ತಡದಿಂದ ಅಕ್ಕನಿಗೆ ವರ ಹುಡುಕಲು ಹೊರಡುವ ಈತ ಪರಿಸ್ಥಿತಿಯಿಂದ ಒತ್ತಡದಿಂದ ತನ್ನ ಮದುವೆಯಾಗಿ ನಂತರ ಅಕ್ಕನ ಮದುವೆಗೆ ದಾರಿ ಸಿಗುತ್ತದೆ.. 

ಆದರೆ ವರದಕ್ಷಿಣೆಯ ಭೂತ ಕಾಡಿ.. ಮದುವೆಯಾದರೂ ಗಂಡ ಹೆಂಡತಿ ಬೇರೆಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.. ಅನೇಕಾನೇಕ ಒತ್ತಡಗಳ ನಡುವೆ ಸಿನಿಮಾದ ಅಂತ್ಯದಲ್ಲಿ ವರನ ಅಪ್ಪ ತನ್ನ ತಪ್ಪನ್ನು ತಿದ್ದಿಕೊಂಡು ಮತ್ತೆ ಎಲ್ಲರೂ ಒಂದಾಗುತ್ತಾರೆ. 

ತಡವಾಗಿ ಬಂದರೂ ಬಂದ ಮೇಲೆ ಜಾದೂ ಅಭಿನಯ ನೀಡುವ ರಾಜಕುಮಾರ್.. ಅದರಲ್ಲೂ ತಂದೆಯನ್ನು ಎದುರಿಸಿ ನಿಲ್ಲಬೇಕು ಎನ್ನುವಾಗ ತೋರುವ ಅಭಿನಯ.. ಹುಚ್ಚನಂತೆ ಮಾತಾಡುತ್ತಾ, ಹುಚ್ಚನ ಹಾಗೆ ಅಭಿನಯಿಸುವುದು.. ಮತ್ತೆ ಚಿತ್ರದ ಅಂತ್ಯದಲ್ಲಿ ರೌದ್ರಾವತಾರ ತೋರುವ ಅಭಿನಯ ಸೊಗಸು. 

ನಾಯಕಿಯ ಪಾತ್ರದಲ್ಲಿ ಲೀಲಾವತಿ ಶುಶ್ರೂಷೆ ಮಾಡುವ ದಾದಿಯಾಗಿ ಮನಸೆಳೆಯುತ್ತಾರೆ. 

ಅಶ್ವಥ್ ಒಂದು ರೀತಿಯ ಭಿನ್ನ ಅಭಿನಯ.. ತನ್ನ ಸ್ಥಿತಿ ಸರಿಯಿಲ್ಲದಿದ್ದರೂ ಇತರರ ಸಮಸ್ಯೆಗಳನ್ನು ನೇರಮಾಡುವ .. ಜೊತೆಗೆ ಒಂದು ರೀತಿಯಲ್ಲಿ ದೇಹ, ಕೈಗಳು, ಭುಜ ತಲೆಯನ್ನು ಅಲಗಾಡಿಸುತ್ತಾ ಶೈಲಿ  ಇಷ್ಟವಾಗುತ್ತದೆ 

ಈ ಚಿತ್ರದ ಆತ್ಮ ಆರ್ ನಾಗೇಂದ್ರ ರಾವ್.. ಪುರಾಣದ ಕಥೆಗಳನ್ನೂ ಹೇಳುತ್ತಿದ್ದರೂ, ದುರಾಸೆ, ದೂರಾಲೋಚನೆ.. ಮಗನ ಭವಿಷ್ಯವನ್ನು ಭದ್ರ ಪಡಿಸುವಲ್ಲಿ ತಮ್ಮ ಶ್ರಮಪಡುವ ಪಾತ್ರ.. ಮತ್ತೆ ಚಿತ್ರದ ಅನಾಟ್ಯದಲ್ಲಿ ತಮ್ಮ ತಪ್ಪು ಅಂತ ಗೊತ್ತಿದ್ದರೂ ಅದನ್ನು ತಮ್ಮ ಅಹಂನಿಂದ ಮುಚ್ಚಿಕೊಂಡು ಮಗನ ಭವಿಷ್ಯದ ಬಗ್ಗೆ ಮಾತಾಡುತ್ತಾ.. ಗೋಳಾಡುವ ಪಾತ್ರದಲ್ಲಿ ಶಕ್ತಿಯುತ ಅಭಿನಯ ನೀಡಿದ್ದಾರೆ. 

ಒಟ್ಟಿನಲ್ಲಿ ಇದೊಂದು ಸಾಮಾಜಿಕ ಚಿತ್ರ.. ಸಾಮಾನ್ಯವಾಗಿ ಪೌರಾಣಿಕ ಚಿತ್ರಗಳನ್ನು ಚಿತ್ರಿಸುವಲ್ಲಿ ಸಿದ್ಧಹಸ್ತರಾಗಿರುವ ಹುಣಸೂರ್ ಕೃಷ್ಣಮೂರ್ತಿ ಅವರ ಉತ್ತಮ  ಚಿತ್ರಗಳಲ್ಲಿ ಇದು ಒಂದು!