Friday, August 15, 2025

ಕಾಣದ ಕಡಲಿನ ಮುತ್ತು ಮೋಹಿನಿ ಭಸ್ಮಾಸುರ 1966 (ಅಣ್ಣಾವ್ರ ಚಿತ್ರ ೭೭/೨೦೭)

ಕಡಲಲ್ಲಿ ಮುತ್ತನ್ನು ಆರಿಸುವಾಗ ಅನೇಕ ಬಾರಿ ಕೈಯಲ್ಲಿ ಸಿಕ್ಕ ಮುತ್ತನ್ನು ಕಪ್ಪೆ ಚಿಪ್ಪು ಅಂತಲೋ ಅಥವ ಕಲ್ಲು ಅಂತಾನೋ ಬಿಸಾಡಿ ನಂತರ ಅರೆ ಅದೇ ಮುತ್ತಾಗಿತ್ತು ಅನಿಸುವಂತೆ ಮಾಡುತ್ತದೆ.. ಪೇಚಾಡಿದರೂ ಮತ್ತೆ ಸಿಗುವುದು ಕಷ್ಟ ಸಾಧ್ಯ.. 

ಹಾಗೆಯೇ ಈ ಸಿನಿಮಾ ಕೂಡ ಅನೇಕ ಪ್ರಯತ್ನಗಳ ಬಳಿಕ ವಿಷಯ ಗೊತ್ತಾಗಿದ್ದು ಈ ಚಿತ್ರದ ತುಣುಕಾಗಲಿ ಚಿತ್ರವಾಗಲಿ ಎಲ್ಲೂ ಲಭ್ಯವಿಲ್ಲ ಎಂದು.. ಕಾರಣಗಳು ಹತ್ತಾರು ಆದರೆ ಈ ಚಿತ್ರವನ್ನು ನೋಡುವ ಭಾಗ್ಯ ನಮಗಿಲ್ಲ ಎನ್ನುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ.. 

ಇರಲಿ ಕೆಲವೊಮ್ಮೆ ಹಾಗಿತ್ತು ಹೀಗಿತ್ತು ಅನ್ನುವ ಕಲ್ಪನೆ ವಾಸ್ತವಕ್ಕಿಂತ ಖುಷಿ ಕೊಡುವುದು ಸಹಜ.. ಹಾಗೆ ಈ ಚಿತ್ರವೂ ಕೂಡ.. 

ಅನೇಕ ಸಂದರ್ಶಗಳನ್ನು ಈ ಚಿತ್ರ ಬಗ್ಗೆ ಕೇಳಿದಾಗ ನೋಡಿದಾಗ ತಿಳಿದದ್ದು ರಾಜಕುಮಾರ್ ಅವರ ಈ ಪೌರಾಣಿಕ ಚಿತ್ರದ ಅಭಿನಯ ಅಮೋಘವಾಗಿದೆ ಎಂದು.. ಹಿಂದಿನ ಎರಡು ತಲೆಮಾರಿನವರು ನೋಡಿದವರು ಹೇಳುವ ಮಾತಿದು.. 

ಇರಲಿ ಸಿಕ್ಕಷ್ಟೇ ಭಾಗ್ಯ. ಕೇಳಿದ್ದಷ್ಟೇ ಪುಣ್ಯ ಅನ್ನುವ ಮಾತಿನಂತೆ.. ರಾಜಕುಮಾರ್ ಅವರ ಈ ಚಿತ್ರ ಮರೀಚಿಕೆಯಾದರೂ ಅಂತಹ ಕಾಲಘಟ್ಟದಲ್ಲಿ ನಾವಿದ್ದೆವು ಅನ್ನುವುದೇ ನಮ್ಮ ಪುಣ್ಯ ಅಲ್ಲವೇ.. 


 

ಎಸ್ ಎಸ್ ವರ್ಮಾ ನಿರ್ದೇಶನವಿದ್ದ ಈ ಚಿತ್ರವನ್ನು ಟಿ ಮಾದರ್ ಹಾಗೂ ವಿ ಎಂ ಕುಪ್ಪಯ್ಯ ಚೆಟ್ಟಿಯಾರ್ ನಿರ್ಮಿಸಿದ್ದರು.  .. 

ಟಿ ಛಲಪತಿ ರಾವ್ ಅವರ ಸಂಗೀತ ನಿರ್ದೇಶನವಿದ್ದ ಈ ಚಿತ್ರದಲ್ಲಿ ರಾಜಕುಮಾರ್, ಲೀಲಾವತಿ ಉದಯಕುಮಾರ್, ಬಾಲಕೃಷ್ಣ ಅಭಿನಯಿಸಿದ್ದರು.   

ರಾಜಕುಮಾರ್ ಅವರು ಭಸ್ಮಾಸುರನಾಗಿ ಅಮೋಘ ಅಭಿನಯ ನೀಡಿದ್ದಾರೆ ಅಂತ ಓದಿದ್ದೆ 

ಹಾಗೆಯೇ ಉದಯಕುಮಾರ್ ಅವರ ಶಿವನ ಪಾತ್ರಧಾರಿ ಕೂಡ.. ಉದಯಕುಮಾರ್ ಶಿವನ ಪಾತ್ರದಲ್ಲಿ ಪ್ರಾಯಶಃ ಮೊದಲ ಬಾರಿಗೆ ಅಂತ ನನ್ನ ಅನಿಸಿಕೆ 

ಹಾಗೆಯೇ ಬಾಲಕೃಷ್ಣ ನಾರದನ ಪಾತ್ರದಲ್ಲಿ. 

ಒಂದು ವಿಶೇಷ ಚಿತ್ರವಿದು .. ಆದರೆ ನೋಡುವ ಅವಕಾಶವಿಲ್ಲ.. ಅದೇ ಬೇಸರ ಇರಲಿ.. ಇರಲಿ .. ನೋಡೋಣ ನಮ್ಮ ಜೀವಿತ ಕಾಲದಲ್ಲಿ ಸಾಧ್ಯ ಸಾಧ್ಯತೆಯ ಬಗ್ಗೆ..   ಆಶಾವಾದಿಯಾಗಿರೋಣ.. 

ಓದಿಗೂ ವ್ಯಕ್ತಿತ್ವಕ್ಕೂ ಸಂಬಂಧವಿಲ್ಲ ಅಂತ ಹೇಳುವ ಎಮ್ಮೆ ತಮ್ಮಣ್ಣ 1966 (ಅಣ್ಣಾವ್ರ ಚಿತ್ರ ೭೬/೨೦೭)

 ಈ ರೀತಿಯ ಕಥೆ ಚಿತ್ರಕಥೆಯಲ್ಲಿ ರಾಜಕುಮಾರ್ ಅವರು ನೀರು ಕುಡಿದಷ್ಟು ಸಲೀಸಾಗಿ ಅಭಿನಯಿಸುವಷ್ಟು ಅವರ ಅಭಿನಯ ಪರಿಪೂರ್ಣವಾಗುತಿತ್ತು.. 

ಒಂದೇ ತರಹ ಏಳು ಜನ ಇರುತ್ತಾರೆ ಎನ್ನುತ್ತದೆ ನಾಣ್ಣುಡಿ ಹಾಗೆಯೇ ಎಮ್ಮೆ ತಮ್ಮಣ್ಣನನ್ನು ಹೋಲುವ ಅಥವ ಎಮ್ಮೆ ತಮ್ಮಣ್ಣನು ಇನ್ನೊಬನನ್ನು ಹೋಲುವ ಕಥಾವಳಿ ಈ ಚಿತ್ರದಲ್ಲಿದೆ. 


ಆರಂಭದಲ್ಲಿ ಹಳ್ಳಿಯ ಶೈಲಿಯ ಮಾತುಗಳನ್ನು ಆಡುತ್ತಾ.. ಕೆಲವೇ ದೃಶ್ಯಗಳಲ್ಲಿ ಪಟ್ಟಣದ ಶಿಸ್ತುಬದ್ಧ ನೆಡೆಯನ್ನು ತೋರುವ ರಾಜಕುಮಾರ್ ಪಾತ್ರ ಈ ಚಿತ್ರದ ವಿಶೇಷ.. ಪಟ್ಟಣದ ನಾಜೂಕತನ.. ಆ ವೇಷಭೂಷಣ, ಭಾಷ ಶೈಲಿ.. ಎಲ್ಲವನ್ನೂ ರೂಡಿಸಿಕೊಂಡು ಸಿದ್ಧವಾಗುವ ಇನ್ನೊಂದು ಪಾತ್ರವೂ ವಿಶೇಷ. 



ಹೀಗೆ ಒಂದೇ ಚಿತ್ರದಲ್ಲಿ ಇಬ್ಬರೂ ರಾಜಕುಮಾರ್ ಅವರನ್ನು ನೋಡುವ ಭಾಗ್ಯ ನಮ್ಮದು.. ಸತಿ ಶಕ್ತಿ ಚಿತ್ರದಲ್ಲಿ ದ್ವಿಪಾತ್ರ ಚಿತ್ರದುದ್ದಕ್ಕೂ ಇದೆ.. ಆದರೆ ಅದೊಂದು ಪೌರಾಣಿಕ ಹಿನ್ನೆಲೆಯ ಚಿತ್ರ.. ಮಲ್ಲಿ ಮದುವೆಯಲ್ಲಿ ಒಂದು ಅರೆ ಕ್ಷಣ ಬಂದು ಹೋಗುವ ಪಾತ್ರದೊಂದಿಗೆ ಅದು ದ್ವಿಪಾತ್ರದ ಚಿತ್ರ ಎನಿಸಿದರೂ, ಪೂರ್ಣ ಪ್ರಮಾಣದಲ್ಲಿ ದ್ವಿಪಾತ್ರದಲ್ಲಿ ಚಿತ್ರದುದ್ದಕ್ಕೂ ಆವರಿಸಿಕೊಂಡಿರುವುದು ಸಾಮಾಜಿಕ ಚಿತ್ರಗಳಲ್ಲಿ ಇದೆ ಮೊದಲು. 

ಪ್ರತಿಯೊಂದು ದೃಶ್ಯದಲ್ಲೂ ರಾಜಕುಮಾರ್ ಇದ್ದೆ ಇರುತ್ತಾರೆ ಅನ್ನುವಷ್ಟು ಶಕ್ತಿಶಾಲಿಯಾಗಿದೆ ಚಿತ್ರಕಥೆ. ಇದು ಎ ಕೆ ವೇಲನ್ ಅವರ ಕಥೆಯಾಧರಿಸಿ, ಪದ್ಮಿನಿ ಪಿಕ್ಟ್ಚರ್ಸ್ ಸಾಹಿತ್ಯ ವಿಭಾಗ ಹೆಣೆದ ಚಿತ್ರಕಥೆಯುಳ್ಳ ಈ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದು ಬಿ ಆರ್ ಪಂತುಲು. 

ಸಂಭಾಷಣೆ ಮತ್ತು ಗೀತೆಗಳ ಹೊಣೆ ಹೊತ್ತವರು ಜಿ ವಿ ಅಯ್ಯರ್ .. ಸಂಗೀತ ಟಿ ಜಿ ಲಿಂಗಪ್ಪ.. ಗಾಯನ ಪಿ ಬಿ ಶ್ರೀನಿವಾಸ್, ಎಸ್ ಜಾನಕಿ, ಬೆಂಗಳೂರು ಲತಾ, ಪಿ ನಾಗೇಶ್ವರ್ ರಾವ್ ಅವರದ್ದು.. ಛಾಯಾಗ್ರಹಣ ಪಿ ಎಲ್ ನಾಗಪ್ಪ .. 

ಉತ್ತಮ ತಾಂತ್ರಿಕತೆ ಹೊಂದಿದ ಈ ಚಿತ್ರ.. ದ್ವಿಪಾತ್ರಗಳ ದೃಶ್ಯಗಳನ್ನು ತಂತ್ರಜ್ಞಾನದ ಇತಿಮಿತಿಯಲ್ಲಿ ಸೊಗಸಾಗಿ ಚಿತ್ರೀಕರಿಸಿದ್ದಾರೆ 

> ನೀನಾರಿಗಾದೆಯೋ ಎಲೆ ಮಾನವ ಹರಿ ಹರಿ ಗೋವು ನಾನು 

> ಕೊಳಲನೂದಿ ಕುಣಿವ ಪ್ರಿಯನೇ ಬಾರೋ 

> ಎಮ್ಮೆ ಎಲ್ಲಾ ಎಲ್ಲಣ್ಣ ಎಮ್ಮೆ ತಮ್ಮಣ್ಣ 

> ಬೆಳ್ಳಿ ಹಕ್ಕಿ ಆಗುವ ಬೆಳ್ಳಿ ಮೋಡ ಏರುವ 

> ಕಣ್ಣೆರೆಡು ಕರೆಯುತಿದೆ 

> ಕತ್ತರಿಸು ಕತ್ತರಿಸು 

ಹೀಗೆ ಆರು ಹಾಡುಗಳಿವೆ.. ಮತ್ತು ಕಥೆಯನ್ನು ಮುಂದುವರೆಸುತ್ತವೆ 

ಮುಖ್ಯ ಖಳಪಾತ್ರದಲ್ಲಿ ಡಿಕ್ಕಿ ಮಾಧವರಾವ್ ಅದ್ಭುತ.. ಖಳನಾಯಕ ಎಂದರೆ ಕಿರುಚಾಡಬೇಕು.. ಹೋರಾಡಬೇಕು ಎನ್ನುವ ಯಾವುದೇ ಸೂತ್ರವೂ ಇಲ್ಲದೆ ಪಾತ್ರಕ್ಕೆ ಎಷ್ಟು ಕ್ರೌರ್ಯ ತುಂಬಾ ಬಹುದು ಎಂದು ತೋರಿಸಿದ್ದಾರೆ. 

ವಕೀಲನಾದರೇನು ಸಂಗೀತ ಪ್ರಿಯನೂ ಹಾಗೂ ಮಾನವೀಯತೆ ರೂಡಿಸಿಕೊಂಡು ಬರುತ್ತೇನೆ ಎನ್ನುವಂತಹ ವ್ಯಕ್ತಿತ್ವದ ಪಾತ್ರದಲ್ಲಿ ಬಿ ಆರ್ ಪಂತುಲು ನಟಿಸಿದ್ದಾರೆ. ಮನೆ ಆಧಾರವಾಗಿಟ್ಟು ಕೇಸಿನ ಫೀಸ್ ತಂದಿದ್ದೇನೆ ಎಂದಾಗ.. ಕಕ್ಷಿಧಾರನಿಗೆ ಬಯ್ದು ದುಡ್ಡು ಕೊಟ್ಟು ವಾಪಸ್ ಕಳಿಸುವ ದೃಶ್ಯ ಉತ್ತಮವಾಗಿದೆ. 


ಬರುವ ಕಕ್ಷಿಧಾರರಿಗೆ ಹೊಟ್ಟೆ ತುಂಬಾ ಊಟ ಬಡಿಸಿ ಕೋರ್ಟಿಗೆ ಹೋಗಿರಪ್ಪಾ ಎಂದು ಹೇಳುತ್ತಾ.. ಸಂಸಾರವನ್ನು ನೆಡೆಸುವ ಎಂ ವಿ ರಾಜಮ್ಮ .. ಜೊತೆಯಲ್ಲಿ ಭಾರತೀಯ ನಾರಿಯ ಸಂಸೃತಿ ಸಂಸ್ಕಾರವನ್ನು ಮಾತುಗಳಲ್ಲಿ ಹೇಳುವಷ್ಟು ಪರಿಣಾಮಕಾರಿಯಾಗಿ ಅವರ ಅಭಿನಯವೂ ಕೂಡ ಇದೆ. 


ನರಸಿಂಹರಾಜು ಚಿತ್ರದ ಅಗತ್ಯತೆಗೆ ಹಾಗೂ ಹಾಸ್ಯಕ್ಕೆ ಸೇತುವೆಯಾಗಿ ನಿಂತಿದ್ದಾರೆ


ಭಾರತಿ ಚಿತ್ರದ ಇನ್ನೊಂದು ಉತ್ತಮ ಅಂಶ.. ನಾಜೂಕಾಗಿ ಅಭಿನಯಿಸುತ್ತ ಸದಾ ಕ್ಯಾಮೆರಾ ಇಟ್ಟುಕೊಂಡು ಫೋಟೋ ತೆಗೆಯುವ ಪಾತ್ರ.. 


ಜಿ ವಿ ಲತಾದೇವಿ ಎರಡನೇ ನಾಯಕಿಯಾಗಿ ಮುದ್ದಾದ ಅಭಿನಯ ನೀಡಿದ್ದಾರೆ . 


ಉಳಿದ ಕೆಲವು ಪಾತ್ರಗಳಲ್ಲಿ ಸುಬ್ಬಣ್ಣ, ಕೃಷ್ಣಶಾಸ್ತ್ರಿ, ಕುಪ್ಪುಸ್ವಾಮಿ, ಅನಂತರಾಮ್ ಮಚ್ಚೇರಿ, ಗುಗ್ಗು, ಪಾಪಮ್ಮ ಜಯ ಕಥೆಯ ಮುಖ್ಯ ವಾಹಿನಿಯಲ್ಲಿ ತೇಲಿಬರುತ್ತಾರೆ. 






ಇದೊಂದು ಉತ್ತಮ ಸಾಮಾಜಿಕ ಚಿತ್ರ.. ರಾಜಕುಮಾರ್ ಅವರ ಅಭಿನಯ ಮಾಗುತ್ತಿದೆ ಮತ್ತೆ ಪಾತ್ರಕ್ಕೆ ತಕ್ಕ ಹಾಗೆ ತಮ್ಮನ್ನು ಒಗ್ಗಿಸಿಕೊಳ್ಳುವ ಕಲೆ ಪ್ರಬುದ್ಧವಾಗಿ ಬೆಳೆಯುತ್ತಿದೆ ಎಂದು ನಿರೂಪಿಸುವ ಚಿತ್ರವಿದು. 

ಪಂಚತಂತ್ರ ಮೂಲದ ಮಧುಮಾಲತಿ 1966 (ಅಣ್ಣಾವ್ರ ಚಿತ್ರ ೭೫/೨೦೭)

ಪಂಚತಂತ್ರ ನಮ್ಮ ಭಾರತೀಯ ಕಥೆಗಳಿಗೆ ಅಗ್ರಮೂಲ ವಸ್ತುವಾಗಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಆ ಕಥೆಗಳನ್ನು ಭಿನ್ನ ವಿಭಿನ್ನವಾಗಿ ಅರ್ಥೈಸಿಕೊಂಡು, ಅದನ್ನು ಅಳವಡಿಸಿಕೊಂಡು ಹೆಣೆದ ಚಿತ್ರಕತೆಗಳೆಷ್ಟೋ ಎಣಿಕೆಗೆ ಬಾರದು. 

ಹಾಗೆಯೇ ಇನ್ನೊಂದು ಕಥಾಸರಣಿ ವಿಕ್ರಂ ಮತ್ತು ಬೇತಾಳನ ಕತೆಗಳು.. 

ಆ ಕಾಲದ ಅದ್ಭುತ ಕವಿ ಕಥೆಗಾರ ಭವಭೂತಿ ಅವರ ಮಾಲತಿಮಾಧವ ಕಥೆಯನ್ನು ಆಧರಿಸಿ ಹೆಣೆದ ಚಿತ್ರಕಥೆ ಈ ಚಿತ್ರದ ನಿರ್ದೇಶಕ ಎಸ್ ಕೆ ಎ ಚಾರಿ ಅವರದ್ದು. ಖುಷಿ ಪಡಬೇಕಾದ್ದು ಅಂದರೆ ಕಥೆ ತನ್ನದು ಎಂದು ಹಾಕಿಕೊಂಡಿದ್ದರು ಅದರ ಕೆಳಗೆ ಭವಭೂತಿ ಅವರ ಕಥೆಯಾಧಾರಿತ ಎಂದು ಹಾಕಿರೋದು ಸನ್ನೆಡತೆಯ ಪ್ರತೀಕ ಎಂದು ತೋರಿಸುತ್ತದೆ. 

ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಎಸ್ ಕೆ ಎ ಚಾರಿ ಅವರದ್ದು. ಎಂ ಸಂಪತ್ ಈ ಚಿತ್ರದ ನಿರ್ಮಾಪಕರು. ತ್ರಿಮೂರ್ತಿ ಫಿಲಂಸ್ ಲಾಂಛನದದಲ್ಲಿ, ಬಿ ದೊರೈರಾಜ್ ಛಾಯಾಗ್ರಹಣದಲ್ಲಿ, ಜಿ ಕೆ ವೆಂಕಟೇಶ್ ಅವರ ಸಂಗೀತ ಸಾರಥ್ಯದಲ್ಲಿ ಮಿಂದೆದ್ದ ಚಿತ್ರವಿದು. 

ಮಾನ ಮುಚ್ಚಿಕೊಳ್ಳುವುದಕ್ಕೆ ಸಹಾಯ ಮಾಡಿದವ ಒಬ್ಬ, ಮಾನವನ್ನು ಕಾಪಾಡಿದವ ಒಬ್ಬ, ಮಗುವಿನಂತೆ ಕಂಡವನೊಬ್ಬ.. ಹೀಗೆ ಮೂರು ಭಿನ್ನ ಮನೋದೃಷ್ಟಿಯಿಂದ ನೋಡಿದ ವ್ಯಕ್ತಿತ್ವವನ್ನು ಅಳೆದು ತೀರ್ಪು ನೀಡಿದ ವಿಕ್ರಮಾದಿತ್ಯ ಮಹಾರಾಜಾ ಪಾತ್ರದಲ್ಲಿ ಚಿತ್ರರಂಗದ ಭೀಷ್ಮ ಆರ್ ನಾಗೇಂದ್ರ ರಾವ್ ಅವರು. 


ಅಲ್ಪಾಯುಸ್ಸಿನ ಮಧುಮಾಲತಿ ಷೋಡಶ ವಯೋಮಾನದಲ್ಲಿ ಯೋಗ್ಯವರನಿಗೆ ಮದುವೆ ಮಾಡಿ ಕೊಟ್ಟರೆ ಆತನ ಪರಾಕ್ರಮದಿಂದ ಷೋಡಶ ವಯಸ್ಸಿನ ಕಂಟಕ ಕಳೆಯುವುದು ಎಂಬ ಗುರುಗಳ ಮಾತಿನಂತೆ ವ್ಯಾಪಾರೀ ಕೇಶವಗುಪ್ತ, ಆತನ ಮಡದಿ ಹಾಗು ಮಗ ಈ ಮೂವರಿಗೂ ಭಿನ್ನವಾದ ಅನುಭವ ಬಂದು ಮಧುಮಾಲತಿಯನ್ನು ರಕ್ಷಿಸಿದ್ದು ತಿಳಿದು ಆತನೇ ಸರಿಯಾದ ಜೋಡಿ ಎಂದು ಮೂವರು ನಿರ್ಧರಿಸುತ್ತಾರೆ. ಆದರೆ ಅವರಿಗೆ ತಿಳಿಯದ ವಿಷಯ ಎಂದರೆ ಆ ಮೂವರು ಗುಣಾತ್ಮರು ಒಂದೇ ಗುರುವಿನ ಬಳಿ ಶಿಕ್ಷಣ ಪಡೆದ ಜೀವದ ಗೆಳೆಯರು ಎಂದು. 

ಒಬ್ಬ ಜ್ಯೋತಿಶ್ಶಾಸ್ತ್ರದಲ್ಲಿ ನಿಪುಣ 

ಒಬ್ಬ ವೀರ ಪರಾಕ್ರಮಿ   

ಇನ್ನೊಬ್ಬ ಅಥರ್ವ ವಿದ್ಯೆ ಅಂದರೆ ಮಾಯಾಜಾಲದಲ್ಲಿ ನಿಷ್ಣಾತ. 

ಮಧುಮಾಲತಿಯನ್ನು ಮಂತ್ರವಾದಿಯಿಂದ ರಕ್ಷಿಸುವ ಘಟನೆಯಲ್ಲಿ ಜ್ಯೋತಿಷಿ ತಂದೆಯಂತೆ ಕಾಪಾಡುತ್ತಾನೆ  

ಮಾನಹಾನಿಯಿಂದ ಪರಾಕ್ರಮಿ ರಕ್ಷಣೆ ಮಾಡಿರುತ್ತಾನೆ 

ಮಗುನಂತೆ ತನ್ನ ತಾಯಿಯನ್ನು ರಕ್ಷಿಸುವ ಹಾಗೆ ಅಥರ್ವ ವಿದ್ಯೆ ಕಲಿತವನು ರಕ್ಷಿಸಿರುತ್ತಾನೆ. 

ಒಬ್ಬ ತಂದೆಯಂತೆ, ಒಬ್ಬ ಪತಿಯಂತೆ ಒಬ್ಬ ಮಗನಂತೆ ಕಾಪಾಡಿರುವುದರಿಂದ ಆ ವೀರಪರಾಕ್ರಮಿಯೇ ಕೈ ಹಿಡಿಯಬೇಕು ಎಂದು ತೀರ್ಪು ನೀಡುತ್ತಾರೆ ವಿರ್ಕ್ರಮಾದಿತ್ಯ ಮಹಾರಾಜ. 

ಒಬ್ಬರಿಗಿಂತ ಒಬ್ಬರು ಪೈಪೋಟಿ ನೀಡಿ ಅಭಿನಯಿಸಿರುವ ಚಿತ್ರವಿದು. 

ಜ್ಯೋತಿಷಿಯಾಗಿ ಅರುಣ್ ಕುಮಾರ್.. ಮುದ್ದಾದ ರೂಪು, ಭಾಷ ಸ್ಪಷ್ಟತೆ, ಅಭಿನಯ 


ವೀರಪರಾಕ್ರಮಿಯಾಗಿ ದಕ್ಷ ಅಭಿನಯ, ಹೋರಾಟಗಳಲ್ಲಿ ಅದ್ಭುತ ಚಾಣಾಕ್ಷತೆಯಿಂದ ಮಿಂಚುವ ರಾಜಕುಮಾರ್ 



ಅಂಗೀಕಾ ಅಭಿನಯಕ್ಕೆ ಸದಾ ಹೆಸರಾಗಿರುವ ಉದಯಕುಮಾರ್ ಇಲ್ಲಿಯೂ ಕೂಡ ಸಂಭಾಷಣೆ ಮತ್ತು ಮುಖಭಾವದಿಂದ ಮಿಂಚುತ್ತಾರೆ. 


ವ್ಯಾಪಾರಿ ಕೇಶವ ಗುಪ್ತನಾಗಿ ಅಶ್ವಥ್ ಅವರದ್ದು ಸೊಗಸಾದ ಅಭಿನಯ. ಮಗಳ ಭವಿಷ್ಯ, ಮಗಳ ಬದುಕು, ಆ ತಳಮಳ, ಹೇಗಾದರೂ ಸರಿ ಮಗಳ ಭವಿಷ್ಯ ಮುಖ್ಯ ಎಂದು ಹಪಹಪಿಸುವ ತಂದೆಯ ಪಾತ್ರದಲ್ಲಿ  ಸೊಗಸಾದ ಅಭಿನಯ. 


ಅಶ್ವಥ್ ಅವರಿಗೆ ತಕ್ಕಂತೆ ತಾಯಿಯಾಗಿ ಜಯಶ್ರೀ ಅಭಿನಯ ಕಳೆಕಟ್ಟುತ್ತದೆ 


ಮಧುಮಾಲತಿಯ ಅಣ್ಣನಾಗಿ ರಂಗ ಉತ್ತಮ ಪಾತ್ರಪೋಷಣೆಯಿಂದ ಇಷ್ಟವಾಗುತ್ತಾರೆ. 


ಮಂತ್ರವಾದಿಯಾಗಿ ಎಂ ಪಿ ಶಂಕರ್ ಅಬ್ಬರಿಸುತ್ತಾರೆ. ಆ ಗಹಗಹಿಸುವ ನಗು, ಕ್ರೂರತೆ, ತಾನು ಆಳಿದರು ತನ್ನ ಕಾರ್ಯ ಸಾಧನೆ ನಿಲ್ಲಬಾರದು ಎಂದು ಹೋರಾಡುವ ಅವರ ಪಾತ್ರ ಚಿತ್ರದುದ್ದಕ್ಕೂ ಸೊಗಸಾಗಿ ಮೂಡಿಬಂದಿದೆ. 


ಮಂತ್ರವಾದಿಯ ಜೀ ಹೂಜೂರ್ ಪಾತ್ರಧಾರಿ ಪ್ರಚಂಡನಾಗಿ ಕುಪ್ಪುಸ್ವಾಮಿ ಕಡೆಯ ದೃಶ್ಯದ ತನಕ ಕಾಡುತ್ತಾರೆ. 


ರಾಜಕುಮಾರಿಯೆಂದರೆ ಹೀಗೆ ಇರಬೇಕು ಎನ್ನುವ ಹಾಗೆ ಅಭಿನಯ ನೀಡಿರುವ ಭಾರತಿ ಈ ಚಿತ್ರದಲ್ಲಿ ಮೊದಲ ಬಾರಿಗೆ ರಾಜಕುಮಾರ್ ಅವರಿಗೆ ನಾಯಕಿಯಾಗಿದ್ದಾರೆ. 


ಎಲ್ಲರಿಗೂ ಆವಕಾಶವಿರುವಂತೆ ಚಿತ್ರಕತೆ ಹೆಣೆದು ನಿರ್ದೇಶಿಸಿರುವ ಈ ಚಿತ್ರದ ಹೆಚ್ಚುಗಾರಿಕೆ ಇದೆ. ಪ್ರತಿ ಪಾತ್ರವೂ ಹೆಚ್ಚು ಇಲ್ಲ ಕಡಿಮೆಯೂ ಇಲ್ಲ. ಮೂವರು ಮಿತ್ರರಿಗೂ ಅಭಿನಯಕ್ಕೆ ಸಮಾನ ಅವಕಾಶ. ಮೂವರು ಮುದ್ದಾಗಿ ಕಾಣುತ್ತಾರೆ. ಸಂಭಾಷಣೆ ಹೇಳುವ ವೈಖರಿ, ಆಂಗೀಕ ಅಭಿನಯ, ಹಾಡುಗಳಲ್ಲಿ ತೋರುವ ತನ್ಮಯತೆ ಎಲ್ಲೂ ಹೆಚ್ಚಿಲ್ಲ ಕಡಿಮೆ ಇಲ್ಲ. 

ರಾಜಕುಮಾರ್ ಅವರು ಈ ಚಿತ್ರದ ಹೊತ್ತಿಗೆ ಎಪ್ಪತ್ತನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಕೂಡ ತಮ್ಮ ಪಾತ್ರದ ಅಳತೆಯನ್ನು ಅರಿತು ಸಹ ಕಲಾವಿದರ ಜೊತೆಯಲ್ಲಿ ಮನೋಜ್ಞ ಅಭಿನಯ ನೀಡಿರುವುದು ಅವರ ವೃತ್ತಿಪರತೆಯನ್ನು ತೋರಿಸುತ್ತದೆ. 

ಎಲ್ಲರಂತೆಯೇ ನಾನು ಎನ್ನುವ ಮನೋಭಾವ ಅವರ ಎಲ್ಲಾ ಚಿತ್ರಗಳಲ್ಲಿಯೂ ಕಂಡು ಬರುತ್ತದೆ.. ಈ ಚಿತ್ರ ಕೂಡ ಅದಕ್ಕೆ ಹೊರತಲ್ಲ.  ಸಹನಾಯಕರ ಜೊತೆಗಿನ ಹೊಂದಾಣಿಕೆಯ ಅಭಿನಯ, ಅವರ ಜೊತೆ ಪೈಪೋಟಿಯಂತೆ ನಟನೆ... ಇದೆಲ್ಲದರ ಜೊತೆ ಮುದ್ದಾಗಿ ಕಾಣುವ ಅವರ ವೇಷಭೂಷಣ. ಅದಕ್ಕೆ ತಕ್ಕ ಗಾಂಭೀರ್ಯ.. ರಾಜಕುಮಾರ್ ಒಬ್ಬ ನಟರಲ್ಲ ಬದಲಿಗೆ ಮೆಲ್ಲನೆ ತಯಾರಾಗುತ್ತಿರುವ ಒಂದು ಅಭಿನಯದ ವಿಶ್ವಕೋಶ ಎಂದು ಸಾರಿ ಸಾರಿ ಹೇಳುತ್ತದೆ. 

Sunday, August 3, 2025

ಸಮಸ್ಯೆಗಳಿಗೆ ಕಿಲಾಡಿತನದ ಪರಿಹಾರ ತೋರಿಸುವ ಕಿಲಾಡಿರಂಗ 1966 (ಅಣ್ಣಾವ್ರ ಚಿತ್ರ ೭೪/೨೦೭)

 ಬಿ ಎಸ್ ರಂಗ ಅವರು ವಸಂತ್ ಪಿಚ್ಚರ್ ಲಾಂಛನದಲ್ಲಿ ನಿರ್ಮಿಸಿದ ಈ ಚಿತ್ರವನ್ನು ಚಿತ್ರರಂಗದ ಆರಂಭದ ದಿನಗಳಿಂದಲೂ ಒಂದಲ್ಲ ಒಂದು ರೀತಿ ತೊಡಗಿಸಿಕೊಂಡಿದ್ದ ಜಿ ವಿ ಅಯ್ಯರ್ ಅವರು. 

ಈ ಚಿತ್ರ Anthony Hope ಅವರ ಇಂಗ್ಲಿಷ್ ಕಾದಂಬರಿ The Prisoner of Zendaಯಿಂದ ಪ್ರೇರೇಪಿತ ಅಂತ ವಿಕಿಪೀಡಿಯ ಹೇಳುತ್ತದೆ. ಯು ಟ್ಯೂಬಿನಲ್ಲಿ ಸಿಗದೇ ಸಿಡಿ ಸಿಕ್ಕಿರದೆ ಸ್ವಲ್ಪ ತಡವಾಯಿತು.. ಆದರೆ ಕಳೆದ ತಿಂಗಳು ಯು ಟ್ಯೂಬಿನಲ್ಲಿ ಸಿಕ್ಕ ಕಾರಣ.. ಜೊತೆಯಲ್ಲಿ ಸುಮಾರು ದೃಶ್ಯಗಳು ಜಂಪ್ ಆಗಿರುವ ಕಾರಣ ಚಿತ್ರ ಶೀರ್ಷಿಕೆ ಸರಿಯಾಗಿ ಸಿಗಲಿಲ್ಲ. ಆದ್ದರಿಂದ ಈ ಚಿತ್ರಕತೆಗೆ ಕಾದಂಬರಿ ಆಧಾರಿತವಾಗಿದೆ ಎನ್ನುವ ವಿಷಯ ಗೊತ್ತಾಗಲಿಲ್ಲ. 



ಇರಲಿ ಜಗತ್ತಿನ ಕತೆಗಳು ಒಂದಲ್ಲ ಒಂದು ರೀತಿ ಹಲವಾರು ಕಡೆಯಿಂದ ಪ್ರೇರೇಪಿತವಾಗಿರೋದು ಸಹಜ..   ಜಿ ವಿ ಅಯ್ಯರ್, ಸದಾಶಿವ ಬ್ರಹ್ಮ ಮತ್ತು ಚಿ ಸದಾಶಿವಯ್ಯನವರ ಚಿತ್ರಕಥೆ ಹೊತ್ತು ಚಿತ್ರನಾಟಕ, ಸಂಭಾಷಣೆ ಮತ್ತು ನಿರ್ದೇಶನ ಹೊಣೆ ಹೊತ್ತವರು ಜಿ ವಿ ಅಯ್ಯರ್. 

ಜಿ ಕೆ ವೆಂಕಟೇಶ್ ಅವರ ಸಂಗೀತ, ಪಿಬಿ ಶ್ರೀನಿವಾಸ್, ಎಸ್ ಜಾನಕೀ, ಪೀಠಾಪುರಂ ನಾಗೇಶ್ವರ ರಾವ್, ಎಲ್ ಆರ್ ಈಶ್ವರಿ ಅವರ ಗಾಯನ.. ಬಿ ಎನ್ ಹರಿದಾಸ್ ಅವರ ಛಾಯಾಗ್ರಹ ಈ ಚಿತ್ರಕ್ಕಿದೆ. 

ರಾಜಕುಮಾರ್ ಅವರದ್ದು ದ್ವಿಪಾತ್ರ.. ಒಂದು ಪಾತ್ರ ರಾಜಕುವರನದ್ದು ಇನ್ನೊಂದು ಸಾಮಾನ್ಯ ಪ್ರಜೆ ಆದರೆ ಕಳ್ಳನ ಪಾತ್ರಧಾರಿ. ಅಧಿಕಾರ ದಾಹ ಹೆಚ್ಚಾದಾಗ ಅಪ್ಪ ಅಮ್ಮ ತಮ್ಮ ಬಂಧು ಬಳಗ ಯಾವುದು ಲೆಕ್ಕಕ್ಕೆ ಇರೋದಿಲ್ಲ. ಇದು ಸತ್ಯ ಎನ್ನುವ ಮಾತು ಈ ಚಿತ್ರದ ತಳಹದಿ. 

ರೋಗಪೀಡಿತ ರಾಜ ತನ್ನ ಮುಂದಿನ ಉತ್ತರಾಧಿಕಾರಿಯನ್ನಾಗಿ ತನ್ನ ಹಿರಿಯ ಹೆಂಡತಿಯ ಮಗ ಸಂಜಯನೇ ( ರಾಜಕುಮಾರ್)   ಆಗಬೇಕು ಎಂದು ರಾಜಾಜ್ಞೆ ಬರೆದಿರುತ್ತಾನೆ. ಆತನ ಕಿರಿಯ ರಾಣಿಯ ಮಗ ದುರ್ಜಯ (ಎಂ ಪಿ   ಶಂಕರ್) ಆತನೇ ಹಿರಿಯನಾಗಿದ್ದರೂ ಅಧಿಕಾರದ ಲಾಲಸೆ, ಪ್ರಜಾಪೀಡಕನಾಗಿದ್ದರಿಂದ ಆತ ರಾಜನಾಗಬಾರದು ಎಂದು ಈ ರೀತಿ ಮಾಡಿರುತ್ತಾನೆ. 

ಆದರೆ ಸಂಜಯನಿಗೆ ಅಧಿಕಾರ ಆಸೆಯಿರೋಲ್ಲ ಜೊತೆಯಲ್ಲಿ ತನ್ನ ಅಣ್ಣ ಅಧಿಕಾರಕ್ಕಾಗಿ ತನ್ನ ಅಪ್ಪ ಅಮ್ಮನನ್ನು ಮತ್ತೆ ತನ್ನನ್ನು ಪೀಡಿಸುತ್ತಾ ಇರೋದರಿಂದ.. ಅಧಿಕಾರದ ಆಸೆ ಬಿಟ್ಟು.. ಮದಿರೆಯಲ್ಲಿ ಆ ದುಃಖವನ್ನು ಮರೆಯಲು ಪ್ರಯತ್ನ ಮಾಡುತ್ತಿರುತ್ತಾನೆ.. 

ಅರಮನೆಗೆ ಅಚಾನಕಕ್ಕಾಗಿ ಬರುವ ಕಳ್ಳನ ಪಾತ್ರಧಾರಿಯ ಹೆಸರು ರಂಗ (ರಾಜಕುಮಾರ್ ಎರಡನೇ ಪಾತ್ರ) ನಿಗೆ ಸಂಜಯನನ್ನ ಮುಗಿಸಿ, ತಾನೇ ರಾಜನಾಗುವ ಷಡ್ಯಂತ್ರ ಮಾಡುವ ವಿಚಾರ ತಿಳಿದು.. ಸಂಜಯನನ್ನು ಈ ಷಡ್ಯಂತ್ರದಿಂದ ಕಾಪಾಡುವ ಪಣ ತೊಡುತ್ತಾನೆ.. ಅದೇ ಚಿತ್ರದ ಆಶಯ ಮತ್ತು ವಿಷಯವಾಗುತ್ತದೆ. 

ಈ ಹಾದಿಯಲ್ಲಿ ಮಂತ್ರಿ ತನ್ನ ಪ್ರಾಣವನ್ನು ಪಣವಾಗಿಟ್ಟು ಸಂಜಯನನ್ನು ರಕ್ಷಿಸುತ್ತಾರೆ.. ಸಂಜಯ ವೇಷಮರೆಸಿಕೊಂಡು ಹಳ್ಳಿಯಲ್ಲಿ ಸಾಮಾನ್ಯನಾಗಿ ವಾಸಿಸಲು ಶುರು ಮಾಡುತ್ತಾರೆ. 

ಇತ್ತ ವೇಷಧಾರಿ ರಂಗ .. ದುರ್ಜಯನ ಮಾತನ್ನು ಕೇಳುತ್ತಿದ್ದೇನೆ ಎಂದು ನಂಬಿಸುತ್ತಲೇ ದುರ್ಜನನ್ನು ಹಣಿಯಲು ಉಪಾಯ ಮಾಡುತ್ತಾನೆ.. ಕಡೆಯಲ್ಲಿ ರಂಗನ ಕಿಲಾಡಿತನದಿಂದ ಕಿಲಾಡಿರಂಗನಾಗಿ ಸಂಜಯನನ್ನು ಉಳಿಸಿ, ರಕ್ಷಿಸಿ, ರಾಜ್ಯವನ್ನು ರಕ್ಷಣೆ ಮಾಡಿ, ದುರ್ಜಯನ ಮರಣಕ್ಕೆ ಕಾರಣನಾಗುತ್ತಾನೆ. 

ಇದೊಂದು ಸರಳ ಕತೆ.. ಅಷ್ಟೇ ಸರಳವಾಗಿ ಚಿತ್ರಿಸಿದ್ದಾರೆ. ಅನವಶ್ಯಕ ದೃಶ್ಯಗಳಾಗಲಿ, ಹಾಡುಗಳಾಗಲಿ ಇಲ್ಲದೆ ನೇರವಾಗಿ ಕತೆ ಹೇಳುತ್ತಾ ಯಾವುದೇ ವಿಧವಾದ ತಿರುವುಗಳನ್ನು ಕೊಡದೆ.. ಸೀದಾ ಕತೆ ಹೇಳುತ್ತಾ ಅಂತ್ಯದತ್ತ ನೆಡೆಯುವುದು ಈ ಚಿತ್ರದ ವಿಶೇಷ. 

ಎರಡೂ ಪಾತ್ರಗಳಲ್ಲಿ ರಾಜಕುಮಾರ್ ಅವರ ಅಭಿನಯ ವಿಭಿನ್ನವಾಗಿದೆ. ರಾಜನಾಗಿ ಗತ್ತು ಗಾಂಭೀರ್ಯ ತೋರುವ.. ಮಾತುಗಳಲ್ಲಿ ತೂಕವಿಡುತ್ತಾ ಹಾಗೆಯೇ ಹಳ್ಳಿಗನಾಗಿ ನಿಂತಾಗ ಅದೇ ಮುಗ್ಧತೆ ತೋರುವ ಪಾತ್ರ ಒಂದು ಕಡೆ.. ಅದೇ ರಂಗನ ಪಾತ್ರದಲ್ಲಿ ಕಿಲಾಡಿತನ, ಗಟ್ಟಿತನ, ಧೈರ್ಯ, ಚಾಲಾಕಿತನ ಎಲ್ಲವನ್ನೂ ಸೇರಿಸಿಕೊಂಡಿದ್ದಾರೆ.. 

ಜಯಶ್ರೀ ಅಮ್ಮನಾಗಿ ಕೆಲವು ದೃಶ್ಯಗಳಲ್ಲಿ ಬಂದರೂ ತಾಯಿಮಮತೆಯ ತೋರುವ ದೃಶ್ಯಗಳಲ್ಲಿ ರಾಜಕುಮಾರ್ ಅವರ ಜೊತೆಯಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ 

ಚಿತ್ರದ ಮಧ್ಯದಲ್ಲಿಯೇ ಮರಣ ಹೊಂದುವ ಮಂತ್ರಿಯಾಗಿ ರಾಘವೇಂದ್ರರಾವ್ ಅವರ ಪಾತ್ರ ಪೋಷಣೆ ಚೆನ್ನಾಗಿದೆ. 

ಎಂ ಪಿ ಶಂಕರ್ ಖಳನಾಗಿ. ಅವರ ಪಾತ್ರಾಭಿನಯ ಸೊಗಸಾಗಿದೆ 

ಉಳಿದಂತೆ ನರಸಿಂಹರಾಜು, ಜಯಂತಿ, ಬಿವಿ ರಾಧಾ, ಬೆಂಗಳೂರು ನಾಗೇಶ್, ದಿನೇಶ್ ಪಾತ್ರಗಳು ಚಿತ್ರದ ವೇಗಕ್ಕೆ ಅನುಕೂಲವಾಗಿವೆ. 

ಇದೊಂದು ಸರಳ ಸಾಮಾಜಿಕ ಚಿತ್ರ... 










Sunday, May 4, 2025

ಮಮಕಾರ ಹೆಚ್ಚಿಸುವ ಪ್ರೇಮಮಯಿ 1966 (ಅಣ್ಣಾವ್ರ ಚಿತ್ರ ೭೩/೨೦೭)

ಅರೆ ಇದೇನಿದು.. ಹೀಗೆ.. ನಾ ಮತ್ತೆ ಕರುಣೆಯೇ ಕುಟುಂಬದ ಕಣ್ಣು ಚಿತ್ರ ನೋಡುತ್ತಿದ್ದೇನೆಯೇ ಅನ್ನಿಸಿತು.. ರಾಜಕುಮಾರ್ ಅವರು ಚಿತ್ರದ ಪರದೆಯಿಂದ ಹೊರಗೆ ಬಂದು... ಶ್ರೀ ಇಲ್ಲಪ್ಪ ಮುಂದೆ ನೋಡು.. ಎರಡು ಮೂರು ದೃಶ್ಯಗಳನ್ನು ನೋಡಿಯೇ ತೀರ್ಮಾನಕ್ಕೆ ಬರಬೇಡ.. ಇನ್ನೂ ಸ್ವಲ್ಪ ದೃಶ್ಯಗಳನ್ನು ನೋಡು ಆಮೇಲೆ ನಿನ್ನ ನಿರ್ಧಾರ ಹೇಳುವಂತೆ.. 

ಮೊದಲ ಕೆಲವು ದೃಶ್ಯಗಳು ನೋಡಿದಾಗ ಅಯ್ಯೋ ರಾಜಕುಮಾರ್ ಅವರು ಈ ಚಿತ್ರವನ್ನು ಏಕೆ ಒಪ್ಪಿಕೊಂಡರು ಅನಿಸುತ್ತದೆ.. ಕಾರಣ ಕುಟುಂಬ ಜೀವನ.. ಎಲ್ಲರೂ ನಮ್ಮವರು ಎಲ್ಲರೂ ನನ್ನವರು ಅನ್ನುವ ಭಾವನೆ ಅವರ ಎಲ್ಲಾ ಚಿತ್ರಗಳಲ್ಲಿಯೂ ಇದ್ದವು.. ಕೆಲವೊಂದು ಚಿತ್ರಗಳು ಉಲ್ಟಾ ಗುಣಗಳನ್ನು ತೋರಿದರೂ ನಂತರ ಉತ್ತರಾರ್ಧದಲ್ಲಿ ಬದಲಾದ ಚಿತ್ರಕಥೆ ಅವರ ಚಿತ್ರಗಳ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸುತಿತ್ತು.. 


ಕೆಲವು ದುಷ್ಟ ಸಹವಾಸಗಳಿಂದ, ಅದಕ್ಕೆ ಬೇಕಾದ ಹಣದ ಮುಗ್ಗಟ್ಟು.. ತನ್ನ ಸ್ನೇಹಿತರ ದಾರಿ ತಪ್ಪಿಸುವ ಮಾತುಗಳಿಂದ ತನ್ನ ಅಣ್ಣನನ್ನು ಆಸ್ತಿಯ ಪಾಲು ಕೇಳಿದಾಗ ಅಯ್ಯೋ ಅನಿಸಿತು.. ಆದರೆ ತನ್ನ ಅತಿಗ್ಗೆಯ ಮಧುರ ಮಾತುಗಳು.. ಹಾಗೂ ಆ ಸಮಯದಲ್ಲಿ ಜನಿಸಿದ ತನ್ನ ಅಣ್ಣನ ಮಗುವಿನ ಮೇಲಿನ ಮಮತೆಯಿಂದ ಮತ್ತೆ ಮನೆಗೆ ಮರಳಿ ಮೊದಲಿಗಿಂತ ಮನೆಯನ್ನು, ಮನೆಯವರನ್ನು ಪ್ರೀತಿಸಲು ತೊಡಗುತ್ತಾರೆ.. ಆಗ ನನಗೆ ನಿರಾಳವಾಯಿತು.. ಅಬ್ಬಾ ರಾಜಕುಮಾರ್ ಅವರ ಚಿತ್ರಗಳು ಅಂದರೆ ಹೀಗೆ ಇರಬೇಕು ಎನ್ನುವ ಒಂದು ಚೌಕಟ್ಟಿಗೆ ಮತ್ತೆ ಚಿತ್ರ ಬಂದು ನಿಂತಿತು. 

ಅಣ್ಣ ನಮ್ಮವನು ಆದರೆ ಅತ್ತಿಗೆ ನಮ್ಮವಳಲ್ಲ.. ಇದು ಸಾಮಾನ್ಯವಾದ ಮಾತು.. ಮತ್ತೆ ಅನೇಕ ಕಡೆ ನೆಡೆಯುವುದು ಹೀಗೆ.. ಅದನ್ನೇ ಸಾರಾಂಶ ಮಾಡಿಕೊಂಡು ಈ ಚಿತ್ರದ ಕಥೆಯನ್ನು ಹೆಣೆದಿದ್ದಾರೆ.. ಅರ್ಥಾತ್ ಮಲಯಾಳಂ ಚಿತ್ರದ ತಿರುಳನ್ನು ಕನ್ನಡಕ್ಕೆ ಒಗ್ಗಿಸಿ ಕಥೆ ಮಾಡಿದ್ದಾರೆ.. 

ರಾಜಕುಮಾರ್ ಮತ್ತು ಅಶ್ವಥ್ ಅವರು ಅಣ್ಣ ತಮ್ಮಂದಿರು.. ರಾಮ ಲಕ್ಶ್ಮಣ ಇದ್ದಂತೆ ಇರುತ್ತಾರೆ.. ಅಣ್ಣನ ಮಡದಿ ಲೀಲಾವತಿ  ಸಂಸಾರವನ್ನು ಎತ್ತಿ ಹಿಡಿದು ನಿಂತಿರುತ್ತಾರೆ.. ಆದರೆ  ಯಥಾಪ್ರಕಾರ ಕಥೆ ಚೆನ್ನಾಗಿಓಡುತ್ತಿದ್ದಾಗ ಏನಾದರೂ ಕಿರಿಕಿರಿ ಆಗಲೇ ಬೇಕು ಅಲ್ಲವೇ.. ಆತನ ತಂಗಿ ಜಯ ಇವರ ಅನ್ನ್ಯೋನ್ಯತೆಯನ್ನು ಕಂಡು ಉಲ್ಟಾ ಪುಲ್ಟಾ ಮಾತಾಡುತ್ತಿರುತ್ತಾರೆ . ಅದೇ ರೀತಿ ಆತನ ತಾಯಿ ಬಿ ಜಯಮ್ಮ ಕೂಡ ಅತ್ತೆ ತಾನು ಎನ್ನುವ ದರ್ಪವನ್ನು ಎತ್ತಿ ತೋರಿಸುತ್ತಾರೆ

ಆದರೆ ಲೀಲಾವತಿ ತಮ್ಮ ಪ್ರೇಮಮಯಿ ಮಾತುಗಳಿಂದ ತನ್ನ ಅತ್ತೆಯನ್ನು ಅಮ್ಮ ಎಂದು ಕರೆದು. ತಾ ಮಾಡುತ್ತಿರುವ ಕೆಲಸ, ಮಾತುಗಳು ಬದುಕಿಗೆ ಮುಖ್ಯ ಎಂದು ಮನವರಿಕೆ ಮಾಡಿಕೊಟ್ಟಾಗ ತನ್ನತಪ್ಪನ್ನು ಅರ್ಥ ಮಾಡಿಕೊಳ್ಳುತ್ತಾರೆ. 

ಕಾಲಾನಂತರ ತಾಯಿ ಮರಣಿಸುತ್ತಾರೆ..  ಅದಕ್ಕೆ ಮುಂಚೆ ರಾಜಕುಮಾರ್ ಅವರಿಗೆ ಮಡದಿಯಾಗಿ ಜಯಂತಿ ಬರುತ್ತಾರೆ..  ತನ್ನದೇ ನೆಡೆಯಬೇಕು.. ಅಂತ ಜಯಂತಿ ಹಠ ಮಾಡಿದಾಗ.. ಲೀಲಾವತಿ ಅಶ್ವಥ್ ಎಲ್ಲ ಆಸ್ತಿಯನ್ನು ರಾಜಕುಮಾರ್ ಕುಟುಂಬಕ್ಕೆ ಬಿಟ್ಟು.. ತಾವು ಹೊರ ನೆಡೆಯುತ್ತಾರೆ.. 

ಆದರೆ ತುಂಬು ಗರ್ಭಿಣಿಯಾದ ಜಯಂತಿಗೆ ರಕ್ತದ ಅವಶ್ಯಕತೆ ಇದೆ ಎಂದು ತಿಳಿದಾಗ ಲೀಲಾವತಿ ತಮ್ಮ ರಕ್ತ ಕೊಟ್ಟು ಜಯಂತಿಯನ್ನು ಕಾಪಾಡುತ್ತಾರೆ.. ಆದರೆ ಚಿಕಿತ್ಸೆ ಸಮಯದಲ್ಲಿ ಮಳೆ ಬಂದು ವಿದ್ಯುತ್ ವ್ಯತ್ಯಯವಾಗಿ ಲೀಲಾವತಿ ದೇಹದಿಂದ ಬರುತ್ತಿದ್ದ ರಕ್ತದ ಪೈಪು ತುಂಡಾಗಿ.. ಆಕೆಯ ರಕ್ತವೆಲ್ಲಾ ಹರಿದು ಹೋಗಿ ಮರಣಿಸುತ್ತಾರೆ. 

ಜಯಂತಿಗೆ ತನ್ನ ತಪ್ಪಿನ ಅರಿವಾಗಿ.. ಲೀಲಾವತಿಯ ಮಗುವನ್ನು ತನ್ನ ಇನ್ನೊಂದು ಮಗು ಎಂದು ಒಪ್ಪಿಕೊಳ್ಳುವಲ್ಲಿಗೆ ಚಿತ್ರ ಮುಗಿಯುತ್ತದೆ.. ಲೀಲಾವತಿ ಕುಟುಂಬಕ್ಕಾಗಿ ಪ್ರೇಮಮಯಿಯಾಗಿ ನಿಂತು ತಮ್ಮ ಪ್ರಾಣವನ್ನು ಅರ್ಪಿಸಿರುತ್ತಾರೆ. 

ಸುಂದರ ಕಥೆಯನ್ನುಏರು ಪೇರಿಲ್ಲದೆ ಸರಳವಾಗಿ ಚಿತ್ರಿಸಿದ್ದಾರೆ.  

ರಾಜಕುಮಾರ್ ಮನೋಜ್ಞ ಅಭಿನಯ ನೀಡಿದ್ದಾರೆ.. ಅದರಲ್ಲೂ ತನ್ನ ಅಣ್ಣ ಅಶ್ವಥ್ ಅವರ ಜೊತೆ ಪಾಲು ಕೇಳುವಾಗ ಅವರ ಕ್ರೋಧ.. ತನ್ನ ಅತ್ತಿಗೆಯನ್ನು ಬಯ್ದು ಹೀಯಾಳಿಯಿಸುವಾಗ.. ಜಯಂತಿ ಜೊತೆಯಲ್ಲಿ ಪ್ರೇಮದ ಮಾತನಾಡುವಾಗ.. ತನ್ನ ಅಣ್ಣನ ಮಗು ಚಿಕ್ಕಪ್ಪ ಎಂದು ಹತ್ತಿರ ಬಂದಾಗ.. ಆ ಮಗುವನ್ನು ಮುದ್ದು ಮಾಡುವುದು.. ಪ್ರತಿ ದೃಶ್ಯದಲ್ಲೂ ಅವರ ನಟನಾ ಸಾಮರ್ಥ್ಯವನ್ನು ತೋರಿದ್ದಾರೆ. ಆರಂಭದ ಆರ್ಭಟದ ಅಭಿನಯ.. ಚಿತ್ರ ಮುಂದುವರೆದಂತೆ ಪ್ರಬುದ್ಧತೆ ಎದ್ದು ಕಾಣುತ್ತದೆ. 

ಅಶ್ವಥ್ ಆರಂಭದಲ್ಲಿ ಹಠಮಾರಿಯಾಗಿ ತನ್ನ ಅಸ್ತಿ ಕರಗಿದರೂ ಸರಿ ತನ್ನ ಪ್ರತಿಷ್ಠೆಯೇ ಮುಖ್ಯ ಎಂದು ತಮ್ಮ ಆಸ್ತಿಯನ್ನು ಒತ್ತೆ ಇತ್ತು ಹಣಪಡೆಯುವ ಮಾತುಗಳು.. ನಂತರ ತನ್ನ ಮಡದಿಯ ಮಾತುಗಳ ಒಳಾರ್ಥ,  ದೂರದೃಷ್ಟಿಯ ಮಾತುಗಳು ಅವರ ಮನಸ್ಸನ್ನು ಬದಲಿಸಿ ಮನೆಯ ಬಗ್ಗೆ ಯೋಚಿಸುವ ಅಭಿನಯ ಇಷ್ಟವಾಗುತ್ತದೆ. ಹಾಗೆಯೆ ತನ್ನ ತಮ್ಮನಿಗಾಗಿ ಮಿಡಿಯುವ ಮನಸ್ಸಿನ ಅಣ್ಣನಾಗಿ ಗಮನ ಸೆಳೆಯುತ್ತಾರೆ. 

ಈ ಕಥೆಯ ಮುಖ್ಯ ಪಾತ್ರ ಲೀಲಾವತಿ.. ಮಾತಿನ ಧಾಟಿ.. ಮನೆಯ ದೃಢತೆ ಮುಖ್ಯ ಎಂದು ಪ್ರತಿ ದೃಶ್ಯದಲ್ಲೂ ಎತ್ತಿ ತೋರುವ ಅವರ ನಟನೆ.. ಆ ಮೃದು ಮಾತು.. ತನ್ನ ಓರಗಿತ್ತಿಯನ್ನು ನೋಡಿಕೊಳ್ಳುವ.. ಆಕೆಯ ಚುಚ್ಚು ಮಾತುಗಳನ್ನು ಸಹಿಸಿಕೊಂಡು ಆಕೆಗೆ ಪ್ರೀತಿಯನ್ನೇ ಧಾರೆಯೆರೆಯುವ ಪಾತ್ರದಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.. 

ಜಯಂತಿ ಈ ಚಿತ್ರಕ್ಕೆ ಬೇಕಾಗುವ ತಿರುವಿನ ಪಾತ್ರ ಪೋಷಣೆ ಮಾಡಿದ್ದಾರೆ.. ಗುಣ ಬಂಗಾರ.. ಕಿವಿ ಹಿತ್ತಾಳೆ ಎನ್ನುವ ಗಾದೆಯಂತೆ ಅನ್ಯರ ಮಾತುಗಳನ್ನು ಕೇಳಿ.. ತನ್ನ ತುಂಬು ಕುಟುಂಬವನ್ನು ಒಡೆದು.. ಮನೆಯ ಅವನತಿಗೆ ಕಾರಣವಾಗುವ ಪಾತ್ರ.. ಆದರೆ ಲೀಲಾವತಿಯವರ ಪಾತ್ರದ ಗಟ್ಟಿತನದಿಂದ ಮನೆ ಒಡೆಯುವುದು ತಪ್ಪಿದರೂ, ಅದಕ್ಕೆ ತೆರುವ ಬೆಲೆ ಲೀಲಾವತಿಯ ಪ್ರಾಣ ಎಂದು ಅರಿವಾದಾಗ ಜಯಂತಿಯ ಅಭಿನಯ ಇಷ್ಟವಾಗುತ್ತದೆ. 

ಅತ್ತೆಯ ಪಾತ್ರದಲ್ಲಿ ರಂಗಭೂಮಿಯ ದೈತ್ಯ ಪ್ರತಿಭೆ ಬಿ ಜಯಮ್ಮ.. ಅವರ ಧ್ವನಿ ಕೇಳುವುದೇ ಚಂದ.. ಆಕೆಯ ಮಗಳಾಗಿ ಬಿ ಜಯ.. ಅಳಿಯ ಅರುಣ್ ಕುಮಾರ್.. ಡಿಕ್ಕಿ ಮಾಧವರಾವ್, ಬಿ ರಾಘವೇಂದ್ರ ರಾವ್, ಆರ್ ಟಿ ರಮಾ..  ರಂಗ, ಕುಪ್ಪುರಾಜು ಅವರೆಯೋಲ್ಲರ ಪಾತ್ರ ಪೋಷಣೆ ಉತ್ತಮವಾಗಿದೆ. 

ಆರ್ ಸುದರ್ಶನಂ ಅವರ ಸಂಗೀತ ಈ ಚಿತ್ರದ ಭಾಗವಾಗಿದೆ... ಜೆ ಏಸುದಾಸ್ ಅಥವ ಕೆ ಜೇಸುದಾಸ್ ರಾಜಕುಮಾರ್ ಅವರಿಗೆ ಧ್ವನಿ ಮಾಡಿದ ಏಕೈಕ ಹಾಡು ಈ ಚಿತ್ರದಲ್ಲಿದೆ. "ಟೂ ಟೂ ಬೇಡಪ್ಪ ಓಡಿ ಬಂದು ನನ್ನ ಸಂಗ ಕಟ್ಟಪ್ಪ". 

ಉಳಿದಂತೆ ಹಾಡುಗಳಿಗೆ ಸಾಹಿತ್ಯ ಒದಗಿಸಿರುವ ವಿಜಯನಾರಸಿಂಹ, ನರೇಂದ್ರ ಬಾಬು.. ಛಾಯಾಗ್ರಹಣ ಶ್ರೀಕಾಂತ್, ಕಥೆ ಕೆ ಜಿ ಸೇತುನಾಥ್, ನಿರ್ದೇಶಕರಾಗಿ ಎಂ ಆರ್ ವಿಠ್ಠಲ್, ನಿರ್ಮಾಪಕರಾಗಿ ಶ್ರೀಕಾಂತ್ ನಹತ ಮತ್ತು ಶ್ರೀಕಾಂತ್ ಪಟೇಲ್ ಈ ಚಿತ್ರ ತೆರೆಕಾಣುವಲ್ಲಿ ಸಹಕರಿಸಿದ್ದಾರೆ. 







Thursday, April 24, 2025

ಸಹ ಕಲಾವಿದರ ಪ್ರತಿಭೆ ಅಣ್ಣಾವ್ರ ಮಾತುಗಳಲ್ಲಿ - ಅಣ್ಣಾವ್ರ ಜನುಮದಿನ (2025)

ಇಪ್ಪತ್ತನಾಲ್ಕನೆ ತಾರೀಕು ನನ್ನ ಇನ್ನೊಬ್ಬ ನೆಚ್ಚಿನ ಕಲಾವಿದನ ಬಗ್ಗೆ ನೀ ಬರೆಯಬೇಕು.. ನಿನಗೆ ಹನ್ನೆರಡು ದಿನಗಳ ಸಮಯ ಕೊಟ್ಟಿದ್ದೀನಿ.. ಇದರ ಜವಾಬ್ಧಾರಿ ನಿನದು..

ಆಗಲಿ ಅಣ್ಣಾವ್ರೇ.. ನೀವು ನನಗೆ ಕೆಲಸ ಕೊಡುವುದು.. ಅದನ್ನು ನಾ ಮಾಡುವುದು ಅದಕ್ಕಿಂತ ಈ ಬದುಕಿಗೆ ಇನ್ನೇನು ಬೇಕಾಗಿದೆ!

ಶುಭವಾಗಲಿ ಶ್ರೀ.. ನಿಮ್ಮಿಂದಲೇ ಮಣ್ಣಾಗಿ ಹತ್ತೊಂಬತ್ತು ವರ್ಷಗಳಾಯಿತು ಶ್ರೀ.. ನಂಬೋಕೆ ಆಗ್ತಿಲ್ಲ.. ಮಣ್ಣಾದೆ ಅಷ್ಟೇ ಆದರೆ ನಿಮ್ಮಗಳ ಹೃದಯದಲ್ಲಿ ಸದಾ ಈ ನಿಮ್ಮ ರಾಜಕುಮಾರ ಅಜರಾಮರ!

ಇದು ಅಣ್ಣಾವ್ರ ಪುಣ್ಯದಿನದಂದು ಅಣ್ಣಾವ್ರು ಹೇಳಿದ ಮಾತುಗಳು.. ಅದೇ ಈ ಲೇಖನದ ಆರಂಭಕ್ಕೆ ಮುನ್ನುಡಿಯಾಯಿತು.. 

ಬೆಳಿಗ್ಗೆ ಕಣ್ಣುಜ್ಜಿಕೊಂಡು ಕರಾಗ್ರೇ ಹೇಳಿದೆ.. ಇಷ್ಟ ದೇವರಾದ ಗಣಪನಿಗೆ ಕೈಮುಗಿದು ಬಂದಾಗ ಎದುರಿಗೆ ಕಂಡದ್ದು ಮನೆಯಲ್ಲಿರುವ ಅಣ್ಣಾವ್ರ ಭಾವಚಿತ್ರ..ಅಣ್ಣಾ ಎಂದೇ.. ಶ್ರೀ ಎಂದು ನನ್ನ ತಲೆ ಸವರಿದರು.. ತಿರುಗಿ ನೋಡಿದೆ.. ಅದೇ ಬಿಳಿ ವಸ್ತ್ರ.. ನಗು ಮೊಗ.. ಹೊಳೆಯುವ ತ್ವಚ್ಛೆ.. ಕೈ ಬೆರಳಲ್ಲಿ ನೀಲಿಯ ಹರಳುಳ್ಳ ಉಂಗುರ.. ಅವರ ಅನೇಕ ಚಿತ್ರಗಳಲ್ಲಿ ಅವರ ಪೋಷಾಕಿನ ಒಂದು ಭಾಗವಾಗಿತ್ತು 

ಅಣ್ಣ ನಿಮ್ಮ ಸಹಕಲಾವಿದರೊಬ್ಬರ ಬಗ್ಗೆ ಬರೆಯಿರಿ ಎಂದಿದ್ದೀರಿ.. ನಿಮ್ಮ ಚಿತ್ರಜೀವನದ ಕಡಲಿನಲ್ಲಿ ನಿಮ್ಮ ಜೊತೆ ನಟಿಸಿದ ಕಲಾವಿದರೆಲ್ಲರೂ ಮುತ್ತಿನ ಮಣಿಗಳೇ ಹೌದು.. ಯಾರ ಬಗ್ಗೆ ಬರೆಯಬೇಕು ಹೇಳಿ ಅಣ್ಣಾವ್ರೇ.. 

ಎಲ್ಲಾ ಬಡವ.. ನಾ ನಿನಗೆ ಕೆಲಸ ಕೊಟ್ಟರೆ.. ನನಗೆ ಕೆಲಸ ಕೊಡುತ್ತೀಯಾ.. ನನ್ನ ಚಿತ್ರಗಳ ಜೈತ್ರ ಯಾತ್ರೆ ಶುರು ಮಾಡಿದ್ದೀಯಾ/.. ಆಗಲೇ ೭೨ ಚಿತ್ರಗಳು ಮುಗಿದಿವೆ.. ನೀನೆ ಹೇಳು ನೋಡೋಣ.. ಎನ್ನುತ್ತಾ ತಮ್ಮ ಕೈಲಿದ್ದ ಡಮರುಗವನ್ನು ತೆಗೆದುಕೊಂಡು ಡಮಡಮ ಅಂತ ಸದ್ದು ಮಾಡಿದರು.. 

ನನಗೆ ಅರಿವಿದ್ದದ್ದು ಮರೆತುಹೋಯಿತು.. ಹಾಗೆ ಮೆಲ್ಲನೆ ಅಣ್ಣಾವ್ರ ೨೦೭ ಚಿತ್ರಗಳ ದೃಶ್ಯಗಳು ರಪ್ಪನೆ ಕಣ್ಣು ಮುಂದೆ ಬರತೊಡಗಿತು.. 

ಅಣ್ಣಾವ್ರೇ.. ಆ ಚಿತ್ರದಲ್ಲಿ ಎರಡು ಅದ್ಭುತ ದೃಶ್ಯಗಳಿವೆ ಒಂದು ನೀವು ಕುರುಬರ ಪಿಳ್ಳೆ ಪಾತ್ರದಿಂದ ಕಾಳಿದಾಸನಾಗುವುದು.. ಆ ಪರಿವರ್ತನೆ ಅಳೆಯಲು ಯಾವುದೇ ಮಾನದಂಡವಿಲ್ಲ.. 

ಶ್ರೀ ಇದರ ಬಗ್ಗೆ ಆಗಲೇ ಬರೆದಿದ್ದೀಯ.. ಸುಮ್ಮನೆ ಸತಾಯಿಸಬೇಡ.. ಮುಂದಕ್ಕೆ ಹೇಳು.. 

ಅಣ್ಣ ಇನ್ನೊಂದು ಡಿಂಡಿಮ ಕವಿ.. "ಕಮಲೇ ಕಮಲೋತ್ಪತ್ತಿ: ಶ್ರೂಯತೇ ನ ಚ ದೃಶ್ಯತೇ | ಬಾಲೇ ತವ ಮುಖಾಂಭೋಜೇ ದೃಷ್ಟಮಿನ್ದೀವರದ್ವಯಂ"

ಸೂಪರ್ bulls eye ಶ್ರೀ ... ಅಬ್ಬಬ್ಬಾ ಅದೇನು ಅದ್ಭುತ ಅಭಿನಯ ಆತನದು.. ಈ ದೃಶ್ಯದಲ್ಲಿ ನಾನಿಲ್ಲವಲ್ಲ ಎಂದು ಇಂದಿಗೂ ನನಗೆ ಕೊರಗಿದೆ.. ಈ ದೃಶ್ಯದ ಚಿತ್ರೀಕರಣವಾದ ಮೇಲೆ.. ರಷಸ್ ನೋಡಿದಾಗ ನಾನೇ ಬೆಕ್ಕಸ ಬೆರಗಾದೆ.. 

ರಾಜನ್ ಕೊಟ್ಟಿದ್ದ ಘಳಿಗೆ ಮುಗಿದು ಇಟ್ಟಿದ್ದ ಘಳಿಗೆ ಬಂದಾಯ್ತು.. 
ಕಟ್ಟಕಡೆಗಾದರೂ ಬಾಯ್ಬಿಟ್ಟರೆ ನಿನ್ನ ಈ ಭಂಟ್ಟಂಗಿ ಕವಿಗಳು.. 

ಕವಿಗಳೇ ನಮ್ಮ ರಾಜ್ಯದ ಓರ್ವ ವೇಶ್ಯೆ ಪೂರೈಸಿದ್ದಾಳೆ ನಿಮ್ಮ ಈ ಸಮಸ್ಯೆಯನ್ನು ಅಂತ ಮಂತ್ರಿಗಳು ಹೇಳಿದಾಗ.. 


"ಶರೀರವನ್ನು ವಿಕ್ರಯಿಸುವ ಓರ್ವ ವೇಶ್ಯೆ ನನ್ನ ಸಮಸ್ಯೆಯನ್ನು ಪೂರೈಸಿದ್ದಾಳೆ ಎಂದರೆ ನನ್ನ ಸರಸ್ವತಿಯನ್ನು" ಅಂತ ಡಮರುಗವನ್ನು ನೋಡುತ್ತಾ ..ಹೇಳಿದಾಗ ಆ ವೇಶ್ಯೆ ಪ್ರತಿಯಾಗಿ ನನಗೆ ಅರ್ಧ ರಾಜ್ಯ ಸಿಗುವುದು ಎಂದು ಇಷ್ಟು ಮತ್ಸರವೇ ಎನ್ನುತ್ತಾಳೆ.. ಆಗ  ಅಲ್ಲಿಂದ ಇವರ ಪ್ರತಾಪ ಶುರು 

"ರಾಜನ್ ಗಂಗೆ ಹರಿಯ ಚರಣದಿಂದ ಉದ್ಭವಿಸುವದೇ ಹೊರತು ನರನ ಪಾದದಿಂದಲ್ಲ 
ರತ್ನ ಸರ್ಪದ ಶಿರಸ್ಸಿನಲ್ಲಿ ಇರುತ್ತದೆಯೇ ಹೊರತು ಆಮೆಯ ತಲೆಯ ಮೇಲಲ್ಲ 
ಕವಿತಾ ಪ್ರೌಢಿಮೆ ವಾಗ್ದೇವಿಯ ಭಂಡಾರದ  ಬೀಗ ಮುದ್ರೆಯನ್ನು ತಲೆಯಿಂದ ಕುಟ್ಟಿ ಕೆಡವಿದವರಿಗೆ ಲಭ್ಯವಾಗುವುದೇ ಹೊರತು ಪರ್ಯಂಕದಲ್ಲಿ ಪವಡಿಸಿ ಸುಖಿಸುವವರಿಗಲ್ಲ."





https://www.youtube.com/watch?v=ierfiryJLug

ಈ ದೃಶ್ಯವನ್ನು ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ ಹಾಗೆಯೇ ಈ ದೃಶ್ಯದ ಪೂರ್ಣ ಅಂಕ ಈ ಕಲಾವಿದನಿಗೆ ಅರ್ಪಣೆ.. ಈ ದೃಶ್ಯ ಚಿತ್ರೀಕರಣವಾದ ಮೇಲೆ.. ರಷಸ್ ನೋಡಿ ಶಭಾಷ್ ಹೇಳಿದಾಗ ಆತ.. "ಅಣ್ಣಾವ್ರೇ ಈ ದೃಶ್ಯದಲ್ಲಿ ನೀವಿಲ್ಲ ಅದೇ ನನಗೆ ಬೇಸರ.. ನಿಮ್ಮ ಜೊತೆಯಲ್ಲಿ ಈ ದೃಶ್ಯ ಇರಬೇಕಿತ್ತು ಅನಿಸುತ್ತದೆ.. ಆದರೆ ಈ ದೃಶ್ಯದಿಂದಾಗಿಯೇ ನೀವು ಮತ್ತೆ ಸಿಕ್ಕಿದ್ದು ಈ ಚಿತ್ರದಲ್ಲಿ.. ಅಲ್ಲವೇ.. ಆದರೆ ಕಡೆ ದೃಶ್ಯದಲ್ಲಿ ನೀವು ಭೋಜರಾಜನಿಗೆ ಹೇಳುತ್ತಾ "ನಮ್ಮಿಬ್ಬರ ಮಿಲನಕ್ಕೆ ಇವರೇ ಕಾರಣ" ಅಂತ ನನ್ನನ್ನು ಆಲಂಗಿಸಿದಾಗ.. ಜಗತ್ತನ್ನೇ ಗೆದ್ದಷ್ಟು ಸಂಭ್ರಮ.. 

ಗೊತ್ತಾಯಿತೇ ಆ ಕಲಾವಿದ ಯಾರು ಅಂತ ಶ್ರೀ

ಅಣ್ಣಾವ್ರೇ ನಿಮ್ಮ ಬದುಕಿನುದ್ದಕ್ಕೂ ಸುಮಾರು ನಲವತ್ತು ದಶಕಗಳು ನಿಮ್ಮ ಜೊತೆಯಲ್ಲಿ ಬದುಕಿದ ಕಲಾವಿದ.. ಶನಿಮಹಾದೇವಪ್ಪ.. ನಿಮ್ಮ ಅನೇಕಾನೇಕ ಚಿತ್ರಗಳಲ್ಲಿ ನಿಮ್ಮ ಜೊತೆ ಅಭಿನಯಿಸಿರುವ ಇವರನ್ನು ಮರೆಯೋದುಂಟೆ.. 

ಬಂಗಾರದ ಮನುಷ್ಯದ ಚಿತ್ರದ ಚಾಮಯ್ಯ
ಬಡವರ ಬಂಧು ಚಿತ್ರದ "ಪರಚಿಂತೆ ನಮಗೇಕಯ್ಯ" ಅಂತ ಮೋಸ ಮಾಡುವ ಕಪಟ ಸನ್ಯಾಸಿ 
ದಾರಿ ತಪ್ಪಿದ ಮಗ ಚಿತ್ರದ ಪೊಲೀಸ್ ಕಮಿಷನರ್ 
ಶಂಕರ್ ಗುರು ಚಿತ್ರದ ಸತೀಶ್ ಪಾತ್ರದ ಬಿಸಿನೆಸ್ ಪಾರ್ಟ್ನರ್ 
ಕಾಮನಬಿಲ್ಲು ಚಿತ್ರದ ಹಿರಿಗೌಡರ ಮನೆಯಾಳು 
ಕೆರಳಿದ ಸಿಂಹ ಚಿತ್ರದ ಮುಖ್ಯ ಖಳನಾಯಕನ  ಬಲಗೈ ಭಂಟ 
ಭಕ್ತ ಕುಂಬಾರ ಚಿತ್ರದ ಜ್ಞಾನದೇವ 
ಅನುರಾಗ ಅರಳಿತು ಚಿತ್ರದ ರಾಮಲಿಂಗಂ ಜಂಬುಲಿಂಗಂ ಜೋಡಿ 
ಅದೇ ಕಣ್ಣು ಚಿತ್ರದಲ್ಲಿ ಮನೆಯಾಳು 
ಯಾರಿವನು ಚಿತ್ರದ ಮನೆಯಾಳು 
ಸಮಯದ ಗೊಂಬೆಯ ಲಾರಿ ಡ್ರೈವರ್ 
ಭಕ್ತ ಪ್ರಹ್ಲಾದದಲ್ಲಿ ಬ್ರಹ್ಮ 
ಚಲಿಸುವ ಮೋಡಗಳು ಚಿತ್ರದ ಪ್ರವಾಸಿ ಬಂಗಲೆಯ ಮೇಲ್ವಿಚಾರಕ 
ಹೊಸ ಬೆಳಕು ಸಿನೆಮಾದ ಮಾರ್ವಾಡಿ ಪಾತ್ರ 
ತ್ರಿಮೂರ್ತಿ ಚಿತ್ರದಲ್ಲಿ ಸಂಪತ್ ಅವರ ಮನೆಯಾಳು 
ಮಯೂರ ಚಿತ್ರದಲ್ಲಿ ಸಹಪಾಠಿ 
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ವಜ್ರಮುನಿಯ ಸೇವಕ 
ಎರಡು ಕನಸು ಚಿತ್ರದಲ್ಲಿ ರಾಜ್ ಊರಿನವ 
ಬಂಗಾರದ ಪಂಜರದ ಅಡಿಗೆಯವ 

ಒಂದೇ ಎರಡೇ ನಿಮ್ಮ ಅನೇಕ ಚಿತ್ರಗಳಲ್ಲಿ ನೆರಳಾಗಿ ಹಿಂಬಾಲಿಸಿದ ಶನಿಮಹಾದೇವಪ್ಪ ಅವರ ಮೂಲ ಹೆಸರು ಶಿವಪ್ರಕಾಶ್ ಅಂತ.. ಅವರು ಒಂದು ನಾಟಕದಲ್ಲಿ ಶನಿ ಪಾತ್ರ ಮಾಡಿ ಬಹಳ ಹೆಸರು ಮಾಡಿದರು.. ಆಗಿನಿಂದ ಅವರ ಹೆಸರು ಶನಿಮಹಾದೇವಪ್ಪ ಅಂತಾನೆ ಹೆಸರು.. 

ಹೌದು ಶ್ರೀ ಸರಿಯಾಗಿ ಹೇಳಿದೆ ... ಪಾರ್ವತೀ ಯಾವಾಗಲೂ ಹೇಳುತ್ತಿದ್ದಳು ನೋಡಿ ನಮ್ಮ ಸಂಸ್ಥೆಯ ಯಾವುದೇ ಚಿತ್ರವಾದರೂ ಸರಿ.. ಅದರಲ್ಲಿ ಇವರಿಗೆ ಒಂದು ಪಾತ್ರ ಕೊಡಲೇ ಬೇಕು.. " ಅಂತ.. ಅದೇ ಪದ್ಧತಿ ನೆಡೆದು ಬಂತು.. ನನ್ನ ಚಿತ್ರದಲ್ಲಿ ಮಾತ್ರವಲ್ಲ.. ನನ್ನ ಮಕ್ಕಳ ಅನೇಕ ಚಿತ್ರಗಳಲ್ಲಿ ಇವರಿಗೆ ಹೊಂದುವಂತಹ ಪಾತ್ರವನ್ನು ಕೊಡುತ್ತಲೇ ಬಂದಿದ್ದರು.. 

ಅಣ್ಣಾವ್ರೇ ನಲವತ್ತಕ್ಕೂ ಹೆಚ್ಚು ವರ್ಷ ನಿಮ್ಮ ಜೊತೆಯಲ್ಲಿ ಅಭಿನಯ ಮಾಡುತ್ತಿದ್ದರು.. ಈಗ ಐದು ವರ್ಷಗಳಿಂದ ನಿಮ್ಮ ಜೊತೆಯಲ್ಲಿಯೇ ಇದ್ದಾರೆ.. ..

ಹೌದು ಶ್ರೀ ನನಗೆ ಅವರನ್ನು ಒಂದು ಪ್ರಶ್ನೆ ಕೇಳಬೇಕಿತ್ತು.. 
ಅದಕ್ಕೇನಂತೆ ಕೇಳಿ ಅಣ್ಣ.. ಹೇಗೂ ನಿಮ್ಮ ಜೊತೆಯಲ್ಲಿ ಸ್ವರ್ಗದಲ್ಲಿದ್ದಾರೆ.. ತಾನೇ ಒಂದು ಕರೆ ನಿಮ್ಮ ಮುಂದೆ ಓಡಿ ಬರುತ್ತಾರೆ.. ಭುವಿಯಲ್ಲಿದ್ದಾಗ ನಿಮ್ಮ ಚಿತ್ರದ ಮುಹೂರ್ತ ಎಂದರೆ ಸಿದ್ಧವಾಗಿ ಬರುತ್ತಿದ್ದರು.. ನೀವು ಕೂಡ ನಿಮ್ಮ ಚಿತ್ರಗಳಲ್ಲಿ ಒಂದು ಸಣ್ಣದೋ ದೊಡ್ಡದೋ ಪಾತ್ರಗಳನ್ನು ಕೊಡುತ್ತಲೇ ಬಂದಿದ್ರಿ.. ಒಂದು ಕರೆ ಮಾಡಿ ಅಣ್ಣ"

ಅಣ್ಣಾವ್ರು ತಮ್ಮ ಮಡದಿ ಹತ್ತಿರ ಮೊಬೈಲ್ ತೆಗೆದುಕೊಂಡು ಕರೆ ಮಾಡಿ.. ಇನ್ನೂ ಮುಗಿಸಿರಲಿಲ್ಲ ಅಷ್ಟರಲ್ಲಿಯೇ ಶನಿಮಹಾದೇವಪ್ಪ ಡಿಂಡಿಮ ಕವಿಯ ವೇಷದಲ್ಲಿ ಬಂದೆ ಬಿಟ್ಟರು.. 

"ಅರೆ ಹೀಗೆ ಬಂದು ಬಿಟ್ಟಿರಾ.. ನಿಮ್ಮಲ್ಲಿ ಒಂದು ಪ್ರಶ್ನೆ"
"ಅಯ್ಯೋ ಅಣ್ಣಾವ್ರೇ ನೀವು ನನ್ನ ಕೇಳೋದಾ.. ಆರ್ಡರ್ ಮಾಡಿ ಅಣ್ಣ"
"ಇಲ್ಲ ಹಾಗಲ್ಲ.. ಆ ಪ್ರಶ್ನೆ ಎಂದರೆ.. ಡಿಂಡಿಮ ಕವಿಯ ಪಾತ್ರವನ್ನು ಅದೆಷ್ಟು ಅದ್ಭುತವಾಗಿ ನಟಿಸಿದಿರಿ.. ಡಿಂಡಿಮ ಕವಿಯೇ ಭುವಿಗೆ ಬಂದರೂ ಒಮ್ಮೆ ಆತ ನಿಮ್ಮನ್ನು ನೋಡಿ ಅಭಿನಯ ಕಲಿಯಬೇಕು ಅನ್ನಿಸುವಷ್ಟರ ಮಟ್ಟಿಗೆ  ಅದ್ಭುತವಾಗಿ ನಟಿಸಿದ್ದೀರಾ ಆ ದೃಶ್ಯದಲ್ಲಿ ನಾನಿಲ್ಲವಲ್ಲ ಎಂಬುದೇ ಕೊರಗು. ಅದಿರಲಿ.. ಅದೇಗೆ ಅಷ್ಟು ಅದ್ಭುತವಾಗಿ ನಟಿಸಲು ಸಾಧ್ಯವಾಯಿತು .. ?"

"ಅಣ್ಣ ಅವರೇ ನಿಮ್ಮ ಕುರುಬರ ಪಿಳ್ಳೆಯಿಂದ ಕಾಳಿದಾಸನಾಗಿ ಬದಲಾಗುವ ದೃಶ್ಯವನ್ನು ತುಂಬಾ ಆಸಕ್ತಿಯಿಂದ ಗಮನಿಸಿದೆ.. ಡಿಂಡಿಮ ಕವಿಯ ದೃಶ್ಯದ ಚಿತ್ರೀಕರಣವಾಗುವ ದಿನ.. ಒಂದಷ್ಟು ಹೊತ್ತು ನಿಮ್ಮ ಆ ಪರಕಾಯ ಪ್ರವೇಶದ ದೃಶ್ಯವನ್ನು ನೆನೆಸಿಕೊಂಡು ಕುಳಿತಿದ್ದೆ.. ಅದೆಂಗೋ ಗೊತ್ತಿಲ್ಲ ಆ ನಿಮ್ಮ ಅಭಿನಯದ ಸ್ಫೂರ್ತಿಯೇ ನನಗೆ ಆ ಪಾತ್ರ ಮಾಡಲು ಶಕ್ತಿ ಕೊಟ್ಟಿದ್ದು.. ಒಂದು ವೇಳೆ ನೀವು ಆ ದೃಶ್ಯದಲ್ಲಿದ್ದರೆ ನನಗೆ ಬಲು ಕಷ್ಟವಾಗುತಿತ್ತು.. "

"ಹಾಗೇನು ಇಲ್ಲ ಶನಿಮಹಾದೇವಪ್ಪನವರೇ.. ನಾನೇ ಒಂದು ಕ್ಷಣ ದಂಗಾಗಿ ಬಿಟ್ಟಿದ್ದೆ.. ಅಷ್ಟು ಅದ್ಭುತವಾಗಿ ಮೂಡಿಬಂದಿದೆ.. ಸಾಮಾನ್ಯ ನನ್ನ ಅಭಿನಯದ ಚಿತ್ರಗಳಲ್ಲಿ ನನ್ನ ಪಾತ್ರದ ಸುತ್ತಲೇ ಸುತ್ತುತ್ತದೆ.. ಮತ್ತೆ ಉಳಿದ ಕಲಾವಿದರೂ .. ಉಳಿದ ಕಲಾವಿದರು ವಿಜೃಂಭಿಸಿದ್ದು ಉಂಟು.. ಆದ್ರೆ ಅಕ್ಷರಶಃ ನನ್ನಷ್ಟೇ ತಿಂದು ಬಿಟ್ಟಿದ್ದೀರಾ ಈ ದೃಶ್ಯದಲ್ಲಿ ಹಾಗಾಗಿ ಟಿವಿಯಲ್ಲಿ ಈ ಸಿನಿಮಾದ ಬಂದಾಗೆಲ್ಲ ಈ ದೃಶ್ಯವನ್ನು ಅದೆಷ್ಟು ಆಸಕ್ತಿಯಿಂದ ನೋಡುತ್ತೇನೋ ನನಗೆ ಗೊತ್ತಿಲ್ಲ.. ಒಂದು ವೇಳೆ ನಾನೇನಾದರೂ ಆ ದೃಶ್ಯ ನೋಡುವ ಹೊತ್ತಿಗೆ ಬೇರೆ ಏನಾದರೂ ಕೆಲಸವೋ.. ಸಂದರ್ಶನವೋ ಇದ್ದರೂ ಕೂಡ.. ಮನೆಯವರು ಈ ದೃಶ್ಯವನ್ನು ನೋಡಲು ನನಗೆ ಅನುಕೂಲ ಮಾಡಿಕೊಡುತ್ತಾರೆ.. ಅದು ನಿಮ್ಮ ಶಕ್ತಿ.. "

ಅಣ್ಣಾವ್ರೇ ನಿಮ್ಮಿಂದ ಈ ಮಾತುಗಳು ಧನ್ಯೋಸ್ಮಿ..ನಿಮ್ಮ ಜನುಮದಿನಕ್ಕೆ ನಿಮಗೆ ಶುಭಾಶಯ ಹೇಳಬೇಕು.. ಉಡುಗೊರೆ ಕೊಡಬೇಕು.. ಆದರೆ ನೀವೇ ನನಗೆ ಹೊರಲಾರದಷ್ಟು ದೊಡ್ಡ ಅಭಿಮಾನದ ಶ್ರೀ ರಕ್ಷೆ ಕೊಟ್ಟು ಹರಸಿದ್ದೀರಾ.. ಇದಕ್ಕಿಂತ ಇನ್ನೇನು ಬೇಕು.. ಧನ್ಯೋಸ್ಮಿ ಅಣ್ಣ.. ಎನ್ನುತ್ತಾ ಅಣ್ಣಾವ್ರಿಗೆ ನಮಸ್ಕರಿಸಿ ಹೊರತು ಬಿಟ್ಟರು.. 

ನಾನು ಅಣ್ಣಾವ್ರ ಕಡೆಗೆ ನೋಡಿದೆ.. 

ಶಭಾಷ್ ಜಮಾಯಿಸಿ ಬಿಟ್ರಿ.. ಸೂಪರ್ ಎನ್ನುತ್ತಾ ಹೆಬ್ಬೆರಳನ್ನು ಮೇಲಕ್ಕೆ ಎತ್ತಿ ತೋರಿದರು.. 

ಅಣ್ಣಾವ್ರೇ ಜನುಮದಿನದ ಶುಭಾಶಯಗಳು!