Monday, January 26, 2026

ಚೂರಿಯಷ್ಟೇ ಚೂಪಾದ ಚಿತ್ರಕಥೆಯ ಚೂರಿ ಚಿಕ್ಕಣ್ಣ - 1969 (ಅಣ್ಣಾವ್ರ ಚಿತ್ರ ೧೦೯/೨೦೭)

ಹಲವಾರು ಚಿತ್ರಗಳು ಯಶಸ್ವಿಯಾಗೋದು ಉತ್ತಮ ಕಥೆಯಿಂದ ಮತ್ತೆ ಅದಕ್ಕೆ ಕೊಡುವ ಚಿತ್ರಕಥೆಯಿಂದ.. ಇವೆರಡು ಸರಿ ಇದ್ದರೇ ಅರ್ಧ ಕೆಲಸ ಆದಂತೆ. 

ರಾಜಕುಮಾರ್ ಪ್ರವರ್ಧಮಾನಕ್ಕೆ ಬಂದಂತೆ ಅವರಿಗೆ ಸಿಗುವ ಚಿತ್ರಗಳು ವಿಭಿನ್ನವಾಗಿರುತ್ತಿದ್ದವು. ಇದು ಅದೇ ಹಾದಿಯಲ್ಲಿ ಸಾಗುವ ಚಿತ್ರ. ಹೆಸರಿಗೆ ತಕ್ಕ ಹಾಗೆ ಇರಬೇಕು ಅಂತ ಅವರ  ದೃಶ್ಯದಲ್ಲಿ ಕಳ್ಳನ ಹಾಗೆ ತೋರಿಸಿದ್ದಾರೆ.. ನಂತರ ಕೆಲವು ದೃಶ್ಯಗಳು ಹಾಗೆಯೇ ಇದೆ.. ಮತ್ತೆ ಸುಳಿವನ್ನು ಹಿಡಿಯಲು ಸದಾರಮೆ ರೂಪಕದಲ್ಲಿ ಕಳ್ಳನ ಹಾಗೆ ವೇಷ. ಆದರೆ  ಮಿಕ್ಕ ಎಲ್ಲಾ ದೃಶ್ಯಗಳಲ್ಲಿ ನಾಗರೀಕತೆಯ ಪೋಷಾಕಿನಲ್ಲಿ ಸುರಸುಂದರ. 

ಆಫೀಸಿನ ಕೆಲಸ ಮಾಡುವಾಗ ಅದೇ ತನ್ಮಯತೆ ... ಕೇಡಿಗಳ ಜೊತೆ ಇರುವಾಗ ಅದೇ ಭಾಷೆ, ನಾಯಕಿಯ ಜೊತೆ ಮಾತಾಡುವಾಗ ನಾಜೂಕುತನ, ಹಿರಿಯರ ಜೊತೆಯಲ್ಲಿದ್ದಾಗ ಗತ್ತು. ಹೀಗೆ ಹಲವಾರು ಆಯಾಮಗಳಲ್ಲಿ ನಟಿಸಿರುವ ಅವರ ಅಭಿನಯ ಚಂದ. 

ಅವರು  ಪಾತ್ರಗಳಿಗೆ ಹೊಂದಿಕೊಳ್ಳುವ ಪರಿ ಅನನ್ಯ.. ಇವರೇ ಆ ಪಾತ್ರವೇನೋ ಅನಿಸುತ್ತೆ. 


ಚೂರಿ ಚಿಕ್ಕಣ್ಣ ಆ ರೀತಿಯ ಹೊಂದಿಕೊಂಡು ಅಭಿನಯಿಸಿರುವ ಚಿತ್ರವಿದು.. ಪ್ರತಿ ದೃಶ್ಯದಲ್ಲಿಯೂ ಅವರು ತೋರುವ ತನ್ಮಯತೆ ಸೂಪರ್. ಹಾಡುಗಳಲ್ಲಿ, ನೃತ್ಯಗಳಲ್ಲಿ ಕೂಡ. 

ಪಿ ಬಿ ಶ್ರೀನಿವಾಸ್ ಇಲ್ಲಿ ಹಾಡುಗಳಲ್ಲಿ ಕುಣಿಸುತ್ತಾರೆ 

"ಕಾರನೇರಿ ಬಂದ"

"ಮೆಲ್ಲಗೆ ನೆಡೆ ಮೆಲ್ಲಗೆ"

"ಕೇಳೆ ಕೇಳೆ ನಿನ್ನ ಕಥೆ ಹೇಳುವೆ"

ರಾಜಕುಮಾರ್ ಅವರಿಗೆ ತಕ್ಕಂತೆ ಪಿ ಬಿ ಶ್ರೀನಿವಾಸ್, ಪಿ ಬಿ ಶ್ರೀನಿವಾಸ್ ಅವರಿಗೆ ತಕ್ಕಂತೆ ರಾಜಕುಮಾರ್.. ಈಗಾಗಲೇ ಅನೇಕ ಚಿತ್ರಗಳಲ್ಲಿ ಅವರಿಬ್ಬರ ಜೋಡಿ ಮೋಡಿ ಮಾಡಿರೋದು ನಮಗೆ ಗೊತ್ತಲ್ಲವೇ. 

ಜಯಂತಿ ಚಿತ್ರದ ನಾಯಕಿ, ಆರಂಭದ ದೃಶ್ಯಗಳಲ್ಲಿ ಬರುತ್ತಾರೆ.. ಕಥೆ  ಮುಂದುವರಿದಂತೆ ಕೂತೂಹಲ ಹೆಚ್ಚಾಗುತ್ತದೆ.. ಹಾಗಾಗಿ ಜಯಂತಿ ಅವರ ಪಾತ್ರ ಕಡಿಮೆ ಇದೆ.. ಆದರೆ ಚಿಕ್ಕದ ತಿರುವಿಗೆ ಅವರು ಮುಖ್ಯ ಕಾರಣ. 

ಅಶ್ವಥ್ ಇಲ್ಲಿ ಗುಪ್ತಗಾಮಿನಿಯ ಪಾತ್ರ.. ಸಾಮ್ಯವಾಗಿಯೇ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. 

ನರಸಿಂಹರಾಜು, ಸಹನಟಿ, ನಾಗಪ್ಪ, ಗಣಪತಿ  ಭಟ್, ಮತ್ತು ಬಿವಿರಾಧ ಮತ್ತು ಚಿ೦ಪಾಂಜಿ  ಸಹನಟರಾಗಿ ಚಿತ್ರವನ್ನು ಮುಂದುವರೆಸಿದ್ದಾರೆ. 

ಬಹು ಮುಖ್ಯ ಪಾತ್ರದಲ್ಲಿ ದಿನೇಶ್ ಖಳನಟರಾಗಿ ನಟಿಸಿದ್ದಾರೆ. ಇತ್ತ ತಂಗಿಗಾಗಿ ಎಲ್ಲಾ ಮಾಡುವ ಅಣ್ಣನಾಗಿ ಇಷ್ಟವಾದರೆ, ಅದಕ್ಕೆ ಅವರು ಆಯ್ಕೆ ಮಾಡಿಕೊಂಡ ದಾರಿ ದುರ್ಗಮವಾದ ಹಾದಿ.. ಕಳ್ಳದಾರಿ.. ಸಂಭಾಷಣೆ, ದರ್ಪ ಎಲ್ಲವೂ ಸೊಗಸು.. 

ನಿರ್ಮಾಪಕ ನಿರ್ದೇಶಕ ಆರ್. ರಾಮಮೂರ್ತಿ ಅವರು. 

ಛಾಯಾಗ್ರಹಣ ಬಿ ದೊರೈರಾಜ್ 

ಸಂಗೀತ ಸತ್ಯಂ 

ಕಥೆ ಕೊಟ್ಟಾರಕರ್ 

ಸಂಭಾಷಣೆ ಮತ್ತು ಹಾಡುಗಳು ಚಿ ಉದಯಶಂಕರ್ 

ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಎಲ್ ಆರ್ ಈಶ್ವರಿ,  ಬೆಂಗಳೂರು ಲತಾ, ಎಸ್ ಪಿ ಬಾಲಸುಬ್ರಮಣ್ಯಂ, ಜಯದೇವ್, ರತ್ನಾಕರ್ ಗಾಯನ ತಂಡದಲ್ಲಿದ್ದಾರೆ. 

ಇದು ಶ್ರೀ ರಾಮ ಎಂಟರ್ಪ್ರೈಸಸ್ ಅವರ ಕೊಡುಗೆ. 













Saturday, January 24, 2026

ಮೃಗವನ್ನು ಪಳಗಿಸಿದ ಮಲ್ಲಮ್ಮನ ಪವಾಡ - 1969 (ಅಣ್ಣಾವ್ರ ಚಿತ್ರ ೧೦೮/೨೦೭)


"ನಮ್ಮ ಕಡೆ ಆ ತರಹ  ಇಲ್ಲ ಚಿನ್ನ ... ಮೈಸೂರು ಚಿಗುರೆಲೆಯಲ್ಲಿ ಮಲ್ಲಿಗೆಯಂಥ ಮನಸ್ಸನ್ನು ಇಟ್ಟು ದಂತದಂತಹ ಕೈಯಲ್ಲಿ ಅವರಿಗೆ ಬಾಯಿಗಿಟ್ಟರೆ ಆಯಿತು ಅದೇ ಮದುವೆ"

"ಯಾರು ಚಿನ್ನ ಇದು .. ತಾಯೀನ ಬಿಡು ಚಿನ್ನ.. ಸಾಧಾರಣ"

"ಅಮ್ಮ ನಿನ್ನ ಹಣೆಯಿಂದ ಕುಂಕುಮ ಹೋದ ಮೇಲೆ ನಿನಗೆ ಬೇಕಾಗಿರೋದು ನಾಲ್ಕು ಗೋಡೆ.. ಹೊಟ್ಟೆಗೆ ಊಟ.. ಅಷ್ಟೇ"

"ತಾಯಿಯ ಪ್ರೀತಿ ಗಂಗೆಯಿದ್ದ ಹಾಗೆ.. ನಾಲ್ಕು ಬೊಗಸೆ ನೀರು ಕುಡಿದಾಕ್ಷಣ ಗಂಗೆ ಬತ್ತಿ ಹೋಗೋಲ್ಲ"

"ಮಲ್ಲವ್ವ.. ನಮ್ಮ ಮನೆಯಲ್ಲಿ ಪಳಗಿಸಬೇಕಾದ ಒಂದು ಪಶು ಇದೆ"

"ಸಾಹಿತ್ಯ ಲೋಕವನ್ನೇ ಸೂರೆ ಮಾಡಿದ ರನ್ನನ ಗದಾಯುದ್ಧ ಅಪ್ಪಾಜಿ:

"ಲಗಾವಣೆ .. ಜಮಾವಣೆ.. "

"ಯಾವ್ ಸೀಮೆ ಊರೋ ಇದು.. ಯಾವ ಸೀಮೆ ಜನರೋ ನೀವು. ನನಗೆ ಕೊಡಬೇಕು ಕಣೋ ಕಿಸ್ತು"

"ವಿಷ ಯಾಕೆ ಸ್ವಲ್ಪ ಅಫೀಮು ಸಾಕು ಅಲ್ಲವೇ"

"ಅಯ್ಯೋ ನಾವು ಒಂದೇ ಕಡೆ ನಿಲ್ಲೋ ಹಾಗಿಲ್ಲ.. ನೀವು ಯಥಾ ಶಕ್ತಿ ಕೊಟ್ರಿ.. ರಾಜಿ ಯಥಾ ಶಕ್ತಿ ಸೇವೆ ಮಾಡಿದ್ಲು.. ಇನ್ನು ನಾವು ಮುಂದಿನ ಊರಿಗೆ ಹೋಗಬೇಕು"

"ಹೌದು ತಿಂತಾನೆ ಇರ್ಲಿಲ್ಲ .. ಬರಿ ಕುಡ್ಕೊಂಡೇ ಇದ್ರೂ"

ಹೀಗೆ ಹತ್ತಾರು ನೆನಪಲ್ಲಿ ಉಳಿಯುವಂತಹ ಸಂಭಾಷಣೆಗಳು, ಖಡಕ್ ಅಭಿನಯ, ದೃಶ್ಯ ಸಂಯೋಜನೆ, ಹಾಡುಗಳು ಎಲ್ಲವೂ ಸೊಗಸಾಗಿದೆ. 

ನಾನೂನೂ ನಿಮ್ಮಂತೆ ಗೊಂಬೆನೇ ಕಣರೋ - ಪಿ ಬಿ ಶ್ರೀನಿವಾಸ್ 

ಶರಣೆಂಬೆನಾ ಶಶಿಭೂಷಣ - ಪಿ ಸುಶೀಲ 

ಆಶಾ ವಿಲಾಸಿ ಈ ರೂಪ ರಾಶಿ - ಎಲ್ ಆರ್ ಈಶ್ವರಿ 

ಹಾಡೋಣ ಒಲವಿನ ರಾಗ ಮಾಲೆ - ಪಿ ಬಿ ಶ್ರೀನಿವಾಸ್, ಪಿ ಸುಶೀಲ 

ಹುಚ್ಚರಲ್ಲ ನೀವು ಹುಚ್ಚರಲ್ಲ - ಪಿ ಸುಶೀಲ 

ಮರೆಯದ ಮಾತಾಡು - ಸುಮಿತ್ರಾ 

ಇಲ್ಲಿ ಹಾಡುಗಳು ಚಿತ್ರಕಥೆಯನ್ನು ಕೊಂಡೊಯ್ಯುವಂತೆ ರೂಪಿತವಾಗಿರೋದು ಮತ್ತು ಅಷ್ಟೇ ಉತ್ತಮವಾಗಿ ಕತೆಯ ಓಟದಲ್ಲಿ ಸೇರಿಸಿರೋದು ನಿರ್ದೇಶಕರ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ. 

ಶರಣೆಂಬೆನ ಹಾಡಿನಲ್ಲಿ ನೆರಳು ಬೆಳಕಿನ ಸಂಯೋಜನೆ silhouette ಅಂತಾರೆ ಆ ರೀತಿಯಲ್ಲಿ ಚಿತ್ರೀಕರಿಸಿರುವುದು ವಿಶೇಷ. 

ಸಂಗೀತ ನಿರ್ದೇಶಕರ ಪರಿಶ್ರಮ ಎದ್ದು ಕಾಣುತ್ತದೆ ಹಾಗೂ ಚಿತ್ರದ ಗತಿಗೆ ತಕ್ಕಂತೆ ಸಂಗೀತ ನೀಡಿರುವ ವಿಜಯಭಾಸ್ಕರ್ ವಿಶೇಷ ಪ್ರಶಂಸೆಗಳಿಸುತ್ತಾರೆ . 

ಕಣಗಾಲ್ ಪ್ರಭಾಕರ್ ಶಾಸ್ತ್ರೀ ಮತ್ತು ವಿಜಯನಾರಸಿಂಹ ಹಾಡುಗಳನ್ನು ರಚಿಸಿದ್ದಾರೆ. 

ಛಾಯಾಗ್ರಹಣ ಕೈಚಳಕ ಸೊಗಸಾಗಿದೆ, ಕ್ಲೋಸ್ ಅಪ್ ದೃಶ್ಯಗಳು, ನೆರಳು ಬೆಳಕಿನ ಸಂಯೋಜನೆ ವಿ ಸೆಲ್ವರಾಜ್ ಅವರದ್ದು. 




ವಿಷಯಕ್ಕೆ  ಬಾರಪ್ಪ ಅಂದರು ರಾಜಕುಮಾರ್. 

ಬಿ ಪುಟ್ಟಸ್ವಾಮಯ್ಯನವರ ಕಾದಂಬರಿ ಆಧಾರಿತ ಚಿತ್ರ.  

                                        

ಬಿ ಪುಲ್ಲಯ್ಯನವರು ಚಿತ್ರಕಥೆ ರಚಿಸಿದ್ದಾರೆ. 

ನಿರ್ದೇಶಕರ ಕುರ್ಚಿಯಲ್ಲಿ ಎಸ್ ಆರ್ ಪುಟ್ಟಣ್ಣ ಕಣಗಾಲ್ ಅವರು  ತಾರಾಗಣ, ತಂತ್ರಜ್ಞರ ಪ್ರತಿಭೆಯನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ.. ಕಥೆಯ ಪುಟಗಳ ಮೇಲೆ ಹೆಸರು ಬರುವಂತೆ ತೋರಿಸಿರುವುದು ನಿರ್ದೇಶಕರ ಕ್ರಿಯಾಶೀಲತೆಯನ್ನು ತೋರಿಸುತ್ತದೆ. 

ಬಾಲ್ಯದಲ್ಲಿ  ತನ್ನ ಮಲತಾಯಿ ಧೋರಣೆಯಿಂದ ಆದ ಬುದ್ದಿ ಮಾಂದ್ಯತೆಯಿಂದ  ಬಳಲುವ ರಾಜಕುಮಾರ್ ಆ ಪಾತ್ರದಲ್ಲಿ ನೈಜವಾಗಿ ಅಭಿನಯಿಸಿದ್ದಾರೆ. ತಮ್ಮನಿಂದ ಹೊಡೆತ ತಿನ್ನುವಾಗ ಹಿಂಸೆ ಪಡುವುದು, ಅದನ್ನು ತನ್ನ ಮಡದಿಯಲ್ಲಿ ಹೇಳಿಕೊಳ್ಳುವಾಗಿನ ಮುಗ್ಧತೆ ಬಹಳ ನೈಜವಾಗಿದೆ. ತನ್ನ ಮಡದಿಯ ಆರೈಕೆಯಿಂದ, ಮಾರ್ಗದರ್ಶನದಿಂದ ಓದು ಬರಹ ಕಲಿತು.. ಸುಶಿಕ್ಷಿತನಾಗಿ ಮುಂದುವರೆಯುವ ಪಾತ್ರದಲ್ಲಿ ಇನ್ನಷ್ಟು ಇಷ್ಟವಾಗುತ್ತಾರೆ. 

ಓದುತ್ತಾ ಕೂತಿದ್ದ ಮಗನನ್ನು ಕಾಣಲು ಬರುವ ಸಂಪತ್ ಮಗನ ಸ್ಥಿತಿ ಕಂಡು ಸಂತಸ ಪಡುತ್ತಾ, ಏನು ಓದುತ್ತಿದ್ದೀಯ ಅಂತ ಕೇಳಿದಾಗ ರಾಜಕುಮಾರ್ ಹೇಳುವ ಸಂಭಾಷಣೆ ಮತ್ತು ಅಭಿನಯ ಅದ್ಭುತವಾಗಿದೆ. 

ಎರಡೂ ರೀತಿಯ ಪಾತ್ರ ಪೋಷಣೆಯಲ್ಲಿ ಅದ್ಭುತ ಬದಲಾವಣೆ ತಂದು ಕೊಂಡಿದ್ದಾರೆ. ಅದೇ ವೇಷಭೂಷಣ,  ಮೇಕಪ್, ಆದರೇ ಸಂಭಾಷಣೆ, ಮುಖಭಾವ ಬದಲಾವಣೆ ಸೊಗಸಾಗಿದೆ. ರಾಜಕುಮಾರ್ ಪಾತ್ರ ಪೋಷಣೆ ಸೊಗಸಾಗಿದೆ  ಮತ್ತು ರಾಜಕುಮಾರ್ ಗೆದ್ದಿದ್ದಾರೆ ಎಂದಿನಂತೆ. 







ಬಾಲಣ್ಣ ಏನು ಹೇಳೋದು ಈ ನಟನ ಬಗ್ಗೆ.  ಸೋಗಲಾಡಿತನದ ಪಾತ್ರದಲ್ಲಿ ಪ್ರತಿ ಸಂಭಾಷಣೆ, ಆಂಗೀಕ ಅಭಿನಯ ಅದ್ಭುತ. 

ರಮಾದೇವಿ ಬಾಲಣ್ಣ ಅವರಿಗೆ ಸಾತ್ ನೀಡಿದ್ದಾರೆ. 


ಉದಯಚಂದ್ರಿಕಾ ಚೆಲುವೆ..  ಅವರ ಚೆಲುವನ್ನು ನೋಡೋದೇ ಒಂದು ಖುಷಿ. 


ಆದವಾನಿ ಲಕ್ಷ್ಮೀದೇವಿ ಮಲತಾಯಿಯ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಅದರಲ್ಲೂ ತನ್ನ ಮಗನಿಂದಲೇ ಅವಮಾನ  ಮನೆಯಿಂದ ಹೊರಗೆ ಬರುವ ದೃಶ್ಯದಲ್ಲಿ ಕಣ್ಣೀರಾಗಿಸುತ್ತಾರೆ. 


ಸಂಪತ್ ಹಳ್ಳಿಯ ಪ್ರಮುಖನಾಗಿ, ತನ್ನ ಮನೆಯಲ್ಲಿಯೇ ತನಗೆ ಬೆಲೆ ಇಲ್ಲದಂತಹ ಪಾತ್ರದಲ್ಲಿ ಅಭಿನಯ ಸರಳ.ಸುಂದರ  


 ಎಚ್  ರಾಮಚಂದ್ರ ಶಾಸ್ತ್ರೀ ಲೆಕ್ಕಿಗನಾಗಿ, ಮತ್ತು ಮನೆಯ ಹಿತೈಷಿಯಾಗಿ ಇಷ್ಟವಾಗುತ್ತಾರೆ. 


ಶಾಂತಮ್ಮ, ದ್ವಾರಕೀಶ್, ಅನಂತರಾಮ್ ಮಚ್ಚೇರಿ ಪಾತ್ರೋಚಿತ ಅಭಿನಯ.

 






ಹಾಗೆಯೇ ಸುಂದರಕೃಷ್ಣ ಅರಸ್ ಪಾತ್ರವೂ ಉತ್ತಮವಾಗಿದೆ. ಆದರೆ ಪುಟ್ಟ ಪಾತ್ರವಾಗಿದ್ದರಿಂದ ನಟವರ್ಗದಲ್ಲಿ ಕಾಣದೆ ತಾಂತ್ರಿಕ ವರ್ಗದಲ್ಲಿ ಕಾಣುತ್ತಾರೆ.



 ರಾಜಕುಮಾರ್ ಅವರ ಪಾತ್ರಕ್ಕೆ ಇರುವ ಪ್ರಾಮುಖ್ಯತೆಯಷ್ಟೇ ಇನ್ನೆರಡು ಪಾತ್ರಗಳು ಅಂದರೆ ಬಿ ಸರೋಜಾದೇವಿ  ನಾಯಕಿಯಾಗಿ ಕಂಗೊಳಿಸುತ್ತಾರೆ. ಪ್ರತಿನಾಯಕನನ್ನು ಪಳಗಿಸುವ, ಹಾಗೆಯೇ ತನ್ನ ಪತಿರಾಯನನ್ನು ಸುಶಿಕ್ಷಿತನಾಗಿ ಮಾಡುವಲ್ಲಿ  ಅವರ ಸಂಯಮದ ಅಭಿನಯ ಹಾಗೂ ಕೆಲವು ದೃಶ್ಯಗಳಲ್ಲಿ ರೌದ್ರತೆ ಶ್ಲಾಘನೀಯ. 



ಬಿಡುಗಡೆಯಾದ ಮೊದಲನೇ ಚಿತ್ರದಲ್ಲಿ ವಜ್ರಮುನಿ ಅದ್ಭುತ ಅಭಿನಯ ನೀಡಿದ್ದಾರೆ. ಅವರ ಪಾತ್ರದಲ್ಲಿ ತುಂಬಿರುವ ಧೈರ್ಯ ಮತ್ತು ಅವರ ಅಭಿನಯದ ಮನೋಧೈರ್ಯ ಮೆಚ್ಚಬೇಕಾದ್ದು. ಕಾರಣ ಆಗಲೇ ಶತ  ಅಭಿನಯಿಸಿರುವ ಮತ್ತು ನಟಸಾರ್ವಭೌಮ, ವರನಟ ಅಂತ ಜನಮನ್ನಣೆಗಳಿಸಿರುವ ನಟನ ಮುಂದೆ ಆ ರೀತಿ ಅಬ್ಬರದ ನಟನೆ ಮಾಡುವುದು ತಮಾಷೆಯಲ್ಲ. ಅದರಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಮೇಲುಗಣ್ಣು ಬಿಟ್ಟುಕೊಂಡು, ಮೇಲುಸ್ಥಾಯಿಯಲ್ಲಿ ಹೇಳುವ ಸಂಭಾಷಣೆಯಲ್ಲಿ ಅವರನ್ನು ನೋಡುವುದೇ ಖುಷಿ. ವಜ್ರಮುನಿ ಮೊದಲ ಬಿಡುಗಡೆ ಚಿತ್ರದಲ್ಲಿಯೇ ಎಲ್ಲರಿಗೂ ಇಷ್ಟವಾಗುತ್ತಾರೆ. 



ನಿರ್ದೇಶಕರ ಬಗ್ಗೆ ಏನು ಹೇಳುವುದು. ಉತ್ತಮ ಪ್ರತಿಭೆಗಳಿಂದ ಅತ್ಯುತ್ತಮ ಕೆಲಸವನ್ನು ತೆಗೆದುಕೊಂಡು ಈ ಕಥಾನಕವನ್ನು ಅರ್ಥಗರ್ಭಿತ ಚಿತ್ರರತ್ನವನ್ನಾಗಿಸಿರುವ ಅವರ ಅದ್ಭುತ ಪ್ರತಿಭೆಗೊಂದು ನಮೋನಮಃ!

Thursday, January 22, 2026

ವಿವಾಹ ಎಂಬುವ ಬಂಧಕ್ಕೆ ಸಕ್ಸಸ್ ಫಾರ್ಮುಲಾ - ಗಂಡೊಂದು ಹೆಣ್ಣಾರು - 1969 (ಅಣ್ಣಾವ್ರ ಚಿತ್ರ ೧೦೭/೨೦೭)

ಬಿ ಆರ್ ಪಂತುಲು ಅದ್ಭುತ ಕಥೆ ಹೇಳುವ ಚತುರ ನಿರ್ದೇಶಕ.. ಅವರ ಚಿತ್ರದ ಕಥೆಗಳು ಸಾಮಾನ್ಯವಾಗಿರುತ್ತೆ ಆದರೆ ಅದಕ್ಕೆ ಕೊಡುವ ಅವರ ತರ್ಕ, ಅದನ್ನು ಬೆಳೆಸುವ ಪರಿ ವಿಭಿನ್ನ. ಅಂತಹ ಒಂದು ಚಿತ್ರರತ್ನ ಗಂಡೊಂದು ಹೆಣ್ಣಾರು.. 


ಈ ಚಿತ್ರದ ಹೆಸರನ್ನು ಮೂರು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು

೧) ಗಂಡೊಂದು ಹೆಣ್ಣಾರು?

ಗಂಡು ಒಂದು.. ಹೆಣ್ಣು ಯಾರು ಅಂತ 

೨) ಗಂಡೊಂದು ಹೆಣ್ಣಾರು

ಗಂಡು ಒಂದೇ ಆದರೆ ಹೆಣ್ಣುಗಳು ಆರು ಇದ್ದಾರೆ 

೩) ಗಂಡೊಂದು ಹೆಣ್ಣಾರು 

ಗಂಡು ಒಂದು..ಆರು ಗುಣಗಳಿರುವ ಹೆಣ್ಣು.. 

ಮೂರನೇ ಅರ್ಥವೇ ಈ ಚಿತ್ರದ ಮೂಲ ತಿರುಳು.. ಹೆಣ್ಣಿನಲ್ಲಿ ಆರು ಗುಣಗಳಿರಬೇಕು ಎನ್ನುವ ಸೂತ್ರದ ತಳಹದಿಯ ಮೇಲೆ ಈ ಚಿತ್ರದ ಚಿತ್ರಕತೆ ನಿಂತಿದೆ. 

ಸಿರಿವಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳೆದ ನಾಯಕನಿಗೆ ತನ್ನ ಸುತ್ತಲೂ ಹಣ ಹಣಕ್ಕೆ ಬಾಯಿ ಬಿಡುವ ಜನರನ್ನು ಕಂಡು ಬೇಸತ್ತು ದೂರದೂರಿಗೆ ಪಯಣ ಮಾಡಲು ನಿರ್ಧರಿಸುತ್ತಾನೆ. ದಾರಿಯಲ್ಲಿ ಕಾರು ನಿಂತು  ಹೋದಾಗ, ಅಲ್ಲಿಯೇ ಹತ್ತಿರದಲ್ಲಿದ್ದ ಗುಡಿಸಲಿನಲ್ಲಿ ಇಬ್ಬರು ವಯೋವೃದ್ಧ ದಂಪತಿಗಳು ಸಂತಸದಿಂದ ಇರುವುದನ್ನು ಕಂಡು.. ಇದಕ್ಕೆ ಕಾರಣವೇನು ಎಂದು ಕೇಳಿದಾಗ.. ಅವರು ಹೇಳುವ ಮಾತುಗಳೇ ಚಿತ್ರದ ಬುನಾದಿಯಾಗುತ್ತದೆ. 


ಹೆಣ್ಣಿಗೆ ಆರು ಗುಣಗಳಿರಬೇಕು.. ಆಗ ಮಾತ್ರ ಸಂಸಾರ ಸುಂದರವಾಗಲು ಸಾಧ್ಯ.. ಎಂದು ಹೇಳುತ್ತಾ ನಾಯಕನಿಗೆ ಆ ಆರು ಗುಣಗಳು ಯಾವುದು ಎಂದು ಹೇಳಿ, ಅದಕ್ಕೆ ಅರ್ಥ ವಿಸ್ತಾರ ಕೊಟ್ಟು, ಈ ರೀತಿಯ ಆರು ಗುಣಗಳಿರುವ ಹೆಣ್ಣನ್ನೇ ಮದುವೆಯಾಗಬೇಕು ಎಂದು ಹೇಳುತ್ತಾರೆ. ಸವಾಲಾಗಿತೆಗೆದುಕೊಂಡು ನಾಯಕ ಆ ಆರು ಗುಣಗಳಿರುವ ಹೆಣ್ಣಿನ ಹುಡುಕಾಟವೇ ಈ ಚಿತ್ರ. 

ಮಧ್ಯಂತರದಲ್ಲಿ ಕಥೆ ಆ ಕಡೆ ಈ ಕಡೆ ಓಡಾಡುತ್ತಿದೆ, ಎಲ್ಲೋ ಲಯ ತಪ್ಪುತ್ತಿದೆ ಎನಿಸುತ್ತದೆ, ಆದರೆ ಅಂತಿಮ ದೃಶ್ಯಗಳಲ್ಲಿ ಆ ಎಳೆಯನ್ನು ನವಿರಾಗಿ ಬಿಡಿಸಿ ಅದಕ್ಕೊಂದು ತಾರ್ಕಿಕ ಅಂತ್ಯ ಕೊಡುವ ನಿರ್ದೇಶಕರ ಜಾಣ್ಮೆ ಮೆಚ್ಚುವಂತದ್ದು. 

ಇಲ್ಲಿ ನಿರ್ಮಾಪಕ ನಿರ್ದೇಶಕ ಬಿ ಆರ್ ಪಂತುಲು ಗೆದ್ದಿದ್ದಾರೆ. 


ಅವರ ಆಸ್ಥಾನದ ಸಂಗೀತ ನಿರ್ದೇಶಕ ಟಿ ಜಿ ಲಿಂಗಪ್ಪ ಯಶಸ್ವಿಯಾಗಿ ಸಂಗೀತ ನೀಡಿದ್ದಾರೆ 

ಕಣಗಾಲ್ ಪ್ರಭಾಕರ್ ಶಾಸ್ತ್ರೀ ಮತ್ತು ಜಿ ವಿ ಅಯ್ಯರ್ ಅವರ ಉತ್ತಮ ಸಾಹಿತ್ಯ,

ಜಿ ವಿ ಅಯ್ಯರ್ ಅವರ ಅರ್ಥಗರ್ಭಿತ ಸಂಭಾಷಣೆಗಳು 

ಪಿ ಬಿ ಶ್ರೀನಿವಾಸ್, ಎಸ್ ಜಾನಕಿ, ಪಿ ಸುಶೀಲ, ಪಿ ಲೀಲಾ, ಪಿ ನಾಗೇಶ್ವರಾವ್, ಬೆಂಗಳೂರು ಲತಾ ಧ್ವನಿ ನೀಡಿದ್ದಾರೆ. 

ಉತ್ತಮ ತಾರಾಗಣವಿದೆ.. 

ನಾಯಕಿಯಾಗಿ ಭಾರತೀ..ಚಿತ್ರದ ಆರಂಭದಿಂದ ಅಂತ್ಯದವರೆಗೂ ತೆರೆಯನ್ನು ಆವರಿಸಿಕೊಂಡಿದ್ದಾರೆ. ಚಿತ್ರದ ಎರಡನೇ ಅರ್ಧದಲ್ಲಿ ಹಲವಾರು ವೇಷಭೂಷಣಗಳಲ್ಲಿನ ಅವರ ಅಭಿನಯ ಕಳೆಗಟ್ಟಿದೆ. ಕಥೆಯನ್ನು ನಿರ್ದಿಷ್ಟ ದಿಕ್ಕಿಗೆ ಒಯ್ಯುವುದರಲ್ಲಿ ಅವರ ಅಭಿನಯ ಸಹಕಾರಿಯಾಗಿದೆ. ಇವರ ಪಾತ್ರವೇ ಗೊಂದಲಮಯವಾದರೂ, ಅದನ್ನು ನಿವಾರಿಸುವ ನಿರ್ದೇಶಕರ ಜಾಣ್ಮೆಗೆ ಭಾರತಿ ಅಭಿನಯ ಒತ್ತು ನೀಡಿದೆ. 



ಬಾಲಕೃಷ್ಣ ಕಡಿಮೆ ದೃಶ್ಯಗಳಾದರೂ ಅವರೇ ಚಿತ್ರದ ತಿರುವಿಗೆ ನಿಂತಿದ್ದಾರೆ.


ಗಣಪತಿ ಭಟ್, ನಾಗಪ್ಪ, ಎಚ್ ರಾಮಚಂದ್ರಶಾಸ್ತ್ರಿ, ನರಸಿಂಹರಾಜು, ಹನುಮಂತಾಚಾರ್, ಮೈನಾವತಿ, ದಿನೇಶ್, ರಮಾದೇವಿ, ಗುಗ್ಗು. ಎಂ  ಪಿ ಶಂಕರ್ ಜೊತೆಯಾಗಿದ್ದಾರೆ. 











ಇವರನ್ನೆಲ್ಲ ತಮ್ಮ ಭುಜದ ಮೇಲೆ ಹೊತ್ತಂತೆ ರಾಜಕುಮಾರ್ ನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಆ ಸಿರಿವಂತಿಕೆಯ ದರ್ಪವಿಲ್ಲದ ಅಭಿನಯ, ಹಣದಿಂದ  ಬೇಸತ್ತ ಹೋದ ಅಭಿನಯ, ಹೊಸ ವಿಚಾರವನ್ನು ಕಲಿಯುವ ತವಕ, ಸ್ನೇಹಿತನಿಗೆ ಸಹಾಯ ಮಾಡುವ ಮನೋಗುಣ, ನಾಯಕಿಯನ್ನು ಕಂಡು ಅವರ ಮನೆಯ ವಿಚಾರ ಅರಿತು, ಅದಕ್ಕೆ ಬೆನ್ನೆಲುಬಾಗಿ ನಿಲ್ಲುವ ಚಾಣಾಕ್ಷತನ.. ಎಲ್ಲವೂ ಸೊಗಸಾಗಿ ಮೂಡಿ ಬಂದಿದೆ. 


ರಾಜಕುಮಾರ್ ಅವರು ಅಭಿನಯ ಮಾಡುತ್ತಾರೋ, ಪಾತ್ರವೇ ಅವರಾಗುತ್ತಾರೋ ಹೇಳುವುದು ಕಷ್ಟ.. ಅಷ್ಟರಮಟ್ಟಿಗೆ ಪರಕಾಯ ಪ್ರವೇಶದ ಶಕ್ತಿ ಅವರ ಅಭಿನಯಕ್ಕೆ ಇದೆ. 

ಈ ಚಿತ್ರದ ಸೂತ್ರಧಾರ ಬಿ ಆರ್ ಪಂತುಲು.. ಒಂದು ಮುಖ್ಯ ಪಾತ್ರದಲ್ಲಿ ವಿಜ್ಞಾನಿಯಾಗಿ ಕಾಣಿಸಿಕೊಳ್ಳುವ ಅವರ ಅಭಿನಯ ಸ್ಮರಣೀಯ... K2+SO4+CR2 ಅಂತ ಚಿತ್ರದುದ್ದಕ್ಕೂ ಹೇಳುತ್ತಲೇ ಇರುವ ಪಾತ್ರ. 


ಒಂದು ವಿಭಿನ್ನ ಚಿತ್ರ ಗಮನ ಸೆಳೆಯುತ್ತದೆ. ರಾಜಕುಮಾರ್ ಚಿತ್ರವನ್ನು ತೂಗಿಸಿಕೊಂಡು ಹೋಗಿರುವುದು ಎದ್ದು ಕಾಣುತ್ತದೆ. 


ಛಾಯಾಗ್ರಹಣ ವಿಭಾಗದಲ್ಲಿ  ಟ್ರಿಕ್ ಶಾಟ್ಸ್ ಚೆನ್ನಾಗಿ ಉಪಯೋಗಿಸಿದ್ದಾರೆ.