Saturday, February 18, 2017

ಮನವನ್ನು ಹರನ ತಾಣವ ಮಾಡುವ ಭೂ ಕೈಲಾಸ (1958) (ಅಣ್ಣಾವ್ರ ಚಿತ್ರ ೦೮ / ೨೦೭)


ಅವಕಾಶಗಳು ಹೇಗೆ ಬರುತ್ತದೆಯೋ ಹಾಗೆ ನುಗ್ಗಬೇಕು. ಉಳಿವಿನ ಒತ್ತಡ ಒಂದು ಕಡೆ,  ಬಣ್ಣದ ಕನಸ್ಸು ಇನ್ನೊಂದೆಡೆ. ಈ ಹಾದಿಯಲ್ಲಿ ಸಿಕ್ಕ ಪಾತ್ರಗಳು ಚಿಕ್ಕದೇ ಇರಲಿ ದೊಡ್ಡದೇ ಇರಲಿ ಒಪ್ಪಿಕೊಂಡು ತಮಗೆ ಹೇಳಿದಷ್ಟು ಅಭಿನಯ ನೀಡುತ್ತಿದ್ದ ರಾಜ್ ಅವರಿಗೆ ಇನ್ನೊಂದು ಉತ್ತಮ ಅವಕಾಶ ಸಿಕ್ಕಿತು.. !

ಆ ಕಾಲದ ಉತ್ತಮ ತಾಂತ್ರಿಕತೆ - ಹಲವಾರು ರಾಜ್!
ಹಿಂದಿನ ಚಿತ್ರಗಳಲ್ಲಿನ ತಮ್ಮ ಅಭಿನಯದ ಮುದ್ರೆಯನ್ನು ಇನ್ನಷ್ಟು ಗಟ್ಟಿಯಾಗಿ ಒತ್ತಲು ಈ ಚಿತ್ರ ಸಹಾಯ ಮಾಡಿತು. ಪ್ರತಿಷ್ಠಿತ ಎ. ವಿ. ಎಂ  ಸಂಸ್ಥೆ ನಿರ್ಮಿಸಿದ ಈ ಚಿತ್ರವನ್ನ ನಿರ್ದೇಶಿಸಿದ್ದು ಕೆ. ಶಂಕರ್.

ಕು ರಾ ಸೀತಾರಾಮಶಾಸ್ತ್ರಿ ಅವರ ಸಾಹಿತ್ಯ ಸಂಭಾಷಣೆ ಇದ್ದ ಈ ಚಿತ್ರದಲ್ಲಿ ಸುಮಾರು ೧೮ ಹಾಡುಗಳಿದ್ದದು ವಿಶೇಷ.

ಒಂದು ಹಾಡಿನಲ್ಲಿ ಇಡೀ ರಾಮಾಯಣವನ್ನು ರಚಿಸಿದ್ದು. ದೃಶ್ಯದ ಮೂಲಕ ತೋರಿಸಿದ್ದಾರೆ.  ಸಂಗೀತ, ಗಾಯನ ಎಲ್ಲವೂ ಸುಂದರವಾಗಿದೆ. ಇಂದಿಗೂ "ರಾಮನ ಅವತಾರ ರಘುಕುಲ ಸೋಮನ ಅವತಾರ" ಅತ್ಯಂತ ಜನಪ್ರಿಯ ಕನ್ನಡ ಹಾಡುಗಳಲ್ಲಿ ಒಂದು.  ರಾಮನ ಜನನದಿಂದ ಪಟ್ಟಾಭಿಷೇಕದವರೆಗೆ ಸಮಗ್ರ ಕತೆಯನ್ನು ಚಿಕ್ಕ ಪುಟ್ಟ ದೃಶ್ಯದಲ್ಲಿ ಚಿತ್ರಿಸಿರುವುದು ನಿರ್ದೇಶಕರ ಕಲಾವಂತಿಕೆಗೆ ಸಾಕ್ಷಿ.

ಆ ತುಣುಕುಗಳು ನಿಮಗಾಗಿ..

ಶ್ರೀ ರಾಮ ಮತ್ತು ಅನುಜರ ಜನನ 
ಅಹಲ್ಯೆ ಶಾಪ ವಿಮೋಚನೆ 

ಶಿವ ಧನಸ್ಸು ಮತ್ತು ಶ್ರೀ ರಾಮ 

ಕೈಕೇಯಿ ಮತ್ತು ದಶರಥ ... ಶಾಪವಾದ ಕೊಟ್ಟ ಮಾತು 

ಭರತನ ಭ್ರಾತೃ ಪ್ರೇಮ... ರಾಮನ ಪಾದುಕೆ ಹೊತ್ತ ಭರತ
ಲಕ್ಶ್ಮಣ ರೇಖೆ



ಸೀತಾಪಹರಣ 

ಕನ್ನಡ ಕುಲ ಪುಂಗವ ಹನುಮ 

ರಾಮನ ಮುದ್ರಿಕೆ ಕಂಡ  ಸೀತೆ 

ಲಂಕಾದಹನ 

ಮರಳಿ ಆಯೋಧ್ಯೆಗೆ 

ರಾಜ್ ಕುಮಾರ್ ಅವರು ರಾವಣನಾಗಿ ಅಬ್ಬರಿಸಿದ ಈ ಚಿತ್ರದಲ್ಲಿ ಅವರ ಅಭಿನಯದ ಪ್ರಚಂಡ ಪ್ರತಿಭೆ ತೆರೆಯ ಮೇಲೆ ಬಂದಿದೆ. ಸಂಭಾಷಣೆ, ಉಚ್ಚಾರಣೆ, ಕಣ್ಣಲ್ಲಿ ಕಾರುವ ಕೋಪ, ಗಹಗಹಿಸಿ ನಗುವುದು, ಓರೇ ನೋಟ, ಆಕ್ರೋಶ, ಸಿಟ್ಟು, ದೇಹ ಭಾಷೆ ಎಲ್ಲವೂ ಸುಸೂತ್ರವಾಗಿ ಮೂಡಿ ಬಂದಿದೆ. ತೆರೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ.
ರಾವಣನಾಗಿ ರಾಜ್ 

 ಈ ಚಿತ್ರದ ಕಥೆ ಎಲ್ಲರಿಗೂ ಗೊತ್ತಿರುವುದೇ. ಲಂಕೇಶ್ವರ ರಾವಣ ತನ್ನ ತಾಯಿಯ ಮೇಲಿನ ಅಪರಿಮಿತ ಪ್ರೀತಿಯಿಂದಾಗಿ, ಅವಳ ನಿತ್ಯ ಪೂಜೆಗೆ ಶಿವನ ಆತ್ಮಲಿಂಗವನ್ನೇ ತರುವುದಾಗಿ ಉಗ್ರ ತಪಸ್ಸು ಮಾಡುತ್ತಾನೆ.
ರಾವಣನ ಮಾತೆ ಕೈಕಸಿಯ ಶಿವನ ಪೂಜೆ 
ಅವನ ತಪಸ್ಸಿನ ಭಕ್ತಿಗೆ ಮೆಚ್ಚಿದ ಪರಶಿವ ಪಾರ್ವತಿಯೊಂದಿಗೆ ಪ್ರಕಟವಾಗುತ್ತಾನೆ. ಅದಕ್ಕೆ ತುಸುಮುಂಚೆ ರಾವಣನ ತಪಸ್ಸಿನ ಇಂಗಿತವನ್ನು ತಿಳಿದ ಕಲಹಪ್ರಿಯ ಆದರೆ ಲೋಕಕಲ್ಯಾಣಕ್ಕಾಗಿ ಶ್ರಮಿಸುವ ನಾರದ, ಪಾರ್ವತಿಯನ್ನು ಹರಿಯ ಬಳಿ ಸಹಾಯ ಕೇಳುವಂತೆ ಮಾಡುತ್ತಾನೆ.  ಹರಿಯು ಮೋಹದ ಹೆಣ್ಣಿನ ರೂಪದಲ್ಲಿ ರಾವಣನ ಮನಸ್ಸನ್ನು ಸೇರಿಬಿಡುತ್ತಾನೆ.
ತಪಸ್ಸಿಗೆ ಹೊರಟ ರಾವಣ 

ಪರಶಿವ ಪಾರ್ವತಿ ಸಮೇತನಾಗಿ ಪ್ರಕಟವಾಗಿ ಬೇಡಿದ ವರ ಕೊಡುವೆ ಎಂದಾಗ, ಹರಿಯ ಮೋಹದ ಜಾಲದಲ್ಲಿ ಸಿಕ್ಕಿದ್ದ ರಾವಣ, ತಾಯಿ ಪಾರ್ವತಿಯ ಮೇಲೆಯೇ ಮೋಹವಶನಾಗಿ ಅವಳನ್ನೇ ಬೇಡುತ್ತಾನೆ. ಭಕ್ತರ ಇಷ್ಟ ನೆರವೇರಿಸುವ ಶಿವ, ಒಪ್ಪಿಗೆ ನೀಡಿ ಪಾರ್ವತಿಯನ್ನು ರಾವಣ ಜೊತೆಯಲ್ಲಿ ಕಳಿಸುತ್ತಾನೆ .
ಉಗ್ರರೂಪಿಯಾಗಿ ಪಾರ್ವತಿ 

ಮತ್ತೆ ನಾರದ ತನ್ನ ಕೈಚಳಕ ತೋರಿ, ರಾವಣನ  ಕಣ್ಣಿಗೆ ಪಾರ್ವತಿ ಉಗ್ರ ರೂಪಿಯಾಗಿ ಕಾಣುವ ಹಾಗೆ ಮಾಡುತ್ತಾನೆ.  ಕುಪಿತಗೊಂಡ ರಾವಣ, ಪಾರ್ವತಿಯನ್ನು  ಕೈಲಾಸಕ್ಕೆ ಬಿಟ್ಟು, ಶಿವನಿಗೆ  ಹರಿತವಾದ ಕುಪಿತ ಮಾತುಗಳನ್ನು ಹೇಳಿ ಹೊರಡುತ್ತಾನೆ.

ನಾರದ ರಾವಣನ ಉಗ್ರಮಾತುಗಳಿಗೆ ಸಮಾಧಾನ ಹೇಳುತ್ತಾ ಪಾರ್ವತಿಗಿಂತಲೂ ಸುಂದರಿ ಪಾತಾಳ ಲೋಕದ ದೊರೆ ಮಯನ ಮಗಳು ಮಂಡೋದರಿಯ ಜೊತೆ ಲಗ್ನವಾಗುವಂತೆ ಮಾಡುತ್ತಾನೆ. ಪಾರ್ವತಿಯ ಮೋಹ ಇನ್ನೂ ಇಳಿಯದ ಲಂಕೇಶ್ವರ ತನ್ನ ಅರಮನೆಗೆ ಬಂದು ತಾಯಿಯ ಆಶೀರ್ವಾದ ಬೇಡಿದಾಗ, ತಾಯಿ ಕೇಳುತ್ತಾಳೆ "ರಾವಣ ಆತ್ಮಲಿಂಗವೆಲ್ಲಿ"
ಮಂಡೋದರಿಯಾಗಿ ಜಮುನಾ 
 ತನ್ನ ತಪ್ಪಿನ ಅರಿವಾಗದ ರಾವಣ ಅಹಂನಲ್ಲಿ ಇನ್ನಷ್ಟು ಮಾತಾಡಿದಾಗ ನಾರದ ಹರಿಯ ಮೋಹರೂಪಿಯನ್ನು ರಾವಣನ ಮನದಿಂದ ದೂರವಾಗುವಂತೆ ಮಾಡಿದಾಗ, ರಾವಣನಿಗೆ ತನ್ನ ತಪ್ಪಿನ  ಅರಿವಾಗುತ್ತದ. ಮತ್ತೆ ಉಗ್ರತಪಸ್ಸಿಗೆ ಕೂರುತ್ತಾನೆ.

ಭಕ್ತರ ಭಕ್ತ ಮಹಾದೇವ ರಾವಣನಿಗೆ ತನ್ನ ಆತ್ಮ ಲಿಂಗವನ್ನು ಕೊಡುತ್ತಾ, ಇದರೊಳಗೆ ಅಡಗಿರುವ ಕಾಂತಿಗೆ, ಶಕ್ತಿಗೆ ಭೂ ಪ್ರಕೃತಿ ಸದಾ ಆಕರ್ಷಿಸಿರುತ್ತದೆ.. ನಿರ್ಧಾರಿತ ಸ್ಥಳ ಸೇರುವತನಕ ಇದು ಭೂಸ್ಪರ್ಶವಾಗದ ರೀತಿಯಲ್ಲಿ ನೋಡಿಕೋ ಎಂದು ಎಚ್ಚರಿಕೆಯ ಮಾತುಗಳನ್ನುಹೇಳುತ್ತಾನೆ.
ರಾವಣನಿಗೆ ಆತ್ಮಲಿಂಗ 
ಕರಾವಳಿಯ ಮಾರ್ಗದಲ್ಲಿ ಲಂಕೆಗೆ ಹೊರಟ ರಾವಣನ್ನು ಕಂಡು, ನಾರದ ಗಣಪತಿಗೆ ಹೇಳುತ್ತಾನೆ "ನಿನಗೆ ಆಗ್ರ ಪೂಜೆ ಮಾಡದೆ ತನ್ನ ಕಾರ್ಯ ಸಾಧಿಸಿದ್ದಾನೆ.. ಇನ್ನೂ ಆತ್ಮಲಿಂಗ ಲಂಕೆಗೆ ಸೇರಿದರೆ ಮುಗಿಯಿತು.. ನೀವೆಲ್ಲಾ ರಾವಣನ  ಊಳಿಗಕ್ಕೆ ಸಿದ್ಧವಾಗಿರಿ"
ಗಣಪನ  ಅಭಯ ಹಸ್ತ 

ಚತುರಮತಿ ಗಣಪತಿ ಗೋಪಾಲಕನಾಗಿ ರಾವಣನಿಗೆ ಕಾಣಿಸಿಕೊಂಡು, ಅರ್ಘ್ಯ ಕೊಡುವುದಕ್ಕಾಗಿ ರಾವಣ ಆತ್ಮಲಿಂಗವನ್ನು ತನ್ನ ಕೈಗೆ ನೀಡುವಂತೆ ಮಾಡುತ್ತಾನೆ. ಮೂರು ಬಾರಿ ಕರೆಯುತ್ತೇನೆ, ಅಷ್ಟರಲ್ಲಿ ನೀ ಬರದೇ ಹೋದರೆ ಕೆಳಗೆ ಇಟ್ಟು, ಅರ್ಘ್ಯ ನೀಡಲು ಹೋಗುತ್ತೇನೆ ಎನ್ನುತ್ತಾನೆ.
ಭೂಸ್ಪರ್ಶವಾದ ಆತ್ಮ ಲಿಂಗ 

ಗೋಪಾಲಕನನ್ನು ಥಳಿಸುವ ರಾವಣ 

ಗಣಪನ ಕುಚೋದ್ಯ 
ಪೂರ್ವನಿರ್ಧಾರಿತ ಯೋಜನೆಯಂತೆ ಮೂರು ಬಾರಿ ರಾವಣನ ಹೆಸರು ಕೂಗಿ, ರಾವಣ ಬರದೇ ಇರುವುದನ್ನು ನೋಡಿ ಭೂ ಸ್ಪರ್ಶ  ಮಾಡಿಸಿಯೇ ಬಿಡುತ್ತಾನೆ. ಕುಪಿತಗೊಂಡ ರಾವಣ ಆ ಗೋಪಾಲಕನಿಗೆ ಮನಬಂದಂತೆ ಬಯ್ದು, ಹೊಡೆದು.. ನಂತರ ಆ ಆತ್ಮಲಿಂಗವನ್ನು ಭೂ ತಾಣದಿಂದ ಹೊರ ತೆಗೆಯಲು  ಶ್ರಮಿಸಿ ಆಗದೆ ಹೋಗಿ ಕಡೆಗೆ ತನ್ನ  ಆತ್ಮಾರ್ಪಣೆ ಮಾಡಲು ಸಿದ್ಧವಾಗುತ್ತಾನೆ.

ಅವನ ಭಕ್ತಿಗೆ ಮೆಚ್ಚಿ, ಸದಾಶಿವ ಭೂ ಸ್ಪರ್ಶ ಮಾಡಿದ ಈ ತಾಣ ಭೂ ಕೈಲಾಸ ಎಂದು ಪ್ರಸಿದ್ಹಿಯಾಗಲಿ ಎಂದು
ಹರಸುತ್ತಾನೆ.
ಭೂಕೈಲಾಸ 
ಈ ಕಥೆಯನ್ನು ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿರುವ ರೀತಿ  ಸೊಗಸಾಗಿದೆ.  ಬರೋಬ್ಬರಿ ಹದಿನೆಂಟು ಹಾಡುಗಳು ಇದ್ದರೂ ಚಿತ್ರದ ಓಘಕ್ಕೆ ಅಡ್ಡಿಮಾಡದೆ ಚಿತ್ರದ ಕತೆಯನ್ನು  ಕೊಂಡೊಯ್ಯುತ್ತದೆ. "ರಾಮನ ಅವತಾರ" ಪ್ರಸಿದ್ಧವಾದ ಹಾಡಾಗಿದೆ.

ರಾವಣನಾಗಿ ರಾಜ್ ಕುಮಾರ್ ಅದ್ಭುತವಾಗಿ ನಟಿಸಿದ್ದಾರೆ..
ಭವಿಷ್ಯದ ತಾರಾ ಪಟ್ಟ - ರಾಜ್ 

ನಾರದನಾಗಿ  ತುಂಟನಗುವಿನ ಸರದಾರ ಕಲ್ಯಾಣ್ ಕುಮಾರ್ ಚಿತ್ರದುದ್ದಕ್ಕೂ ಕಾಣುತ್ತಾರೆ. ಸಂಭಾಷಣೆ, ಆ ಕುಟಿಲತೆ, ತರ್ಕಬದ್ಧವಾದ  ಮಾತುಗಳು.ಕುಚೋದ್ಯ ಎಲ್ಲದರಲ್ಲಿಯೂ ಮಿಂಚುತ್ತಾರೆ.
 ತುಂಟ ಕಲಹಪ್ರಿಯ ನಾರದನಾಗಿ ಕಲ್ಯಾಣ್ ಕುಮಾರ್ 
ಅಶ್ವಥ್ ರಾಜ್ ಚಿತ್ರಸರಣಿಯಲ್ಲಿ ಮೊದಲಬಾರಿಗೆ  ಸೇರಿಕೊಳ್ಳುತ್ತಾರೆ. ಶಿವನ ಪಾತ್ರದಲ್ಲಿ  ಹದವರಿತ ನಟನೆ. ಜೀವಂತ ಹಾವನ್ನು ಕೊರಳಿಗೆ ಸುತ್ತಿಕೊಂಡು  ಅಭಿನಯಿಸಿರುವುದು ವಿಶೇಷ.
ಪರಶಿವನಾಗಿ ಅಶ್ವತ್ 
ಮಂಡೋದರಿಯಾಗಿ ಜಮುನಾ ಅವರ ಅಭಿನಯ ಸೊಗಸಾಗಿದೆ.
ಶಿವನ ಸತಿ  ಪಾರ್ವತಿಯಾಗಿ ಬಿ ಸರೋಜಾದೇವಿ ಮುದ್ದಾಗಿ ಕಾಣುತ್ತಾರೆ.
ಕಪ್ಪುಬಿಳುಪಿನ ದೃಶ್ಯಗಳಲ್ಲಿ ನಟ ನಟಿಯರು ಮುದ್ದಾಗಿ ಕಾಣುತ್ತಾರೆ.  ಉಳಿದ ಪಾತ್ರವರ್ಗದಲ್ಲಿ ಚಿತ್ರಕತೆಗೆ ತಕ್ಕ ಅಭಿನಯ

ಪಾರ್ವತಿಯಾಗಿ ಬಿ ಸರೋಜಾದೇವಿ 
ಆರ್ ಸುದರ್ಶನಂ ಮತ್ತು ಆರ್ ಗೋವರ್ಧನಂ ಅವರ ಸಂಗೀತದಿಂದ ಬೆಳಗಿದ್ದ ಈ ಚಿತ್ರಕ್ಕೆ ಛಾಯಾಗ್ರಹಣ ಮಾಧವ ಬುಲ್ ಬುಲೆ ಅವರದ್ದು.  ಗಾಯಕರು  ಸಿ ಎಸ್ ಜಯರಾಮನ್, ಎಸ್ ಗೋವಿಂದರಾಜನ್, ಎಂ ಎಲ್ ವಸಂತಕುಮಾರಿ, ಪಿ ಸುಶೀಲ, ಟಿ ಎಸ್ ಭಗವತಿ ಮತ್ತು ಎ ವಿ ಕೋಮಲ.

ಗುರಿ ಕಣ್ಣ ಮುಂದೆ ಇದ್ದಾಗ ಅಡ್ಡಿ ಅಡಚಣೆಗಳು ಇರುತ್ತವೆ, ಗುರಿ ತಪ್ಪಿಸಲು ಹೊರಗಿನ ಶಕ್ತಿಗಳು  ತಡೆ ಹಾಕುತ್ತವೆ, ಆದರೆ ಅದನ್ನು ದಾಟಬೇಕು. ಗುರಿಯಲ್ಲಿ ಸೋತರು ಮತ್ತೊಮ್ಮೆ ಶಕ್ತಿ ಮೈಗೂಡಿಸಿಕೊಂಡು ಮುನ್ನುಗ್ಗಬೇಕು. ಇದೆಲ್ಲದರ ಜೊತೆಯಲ್ಲಿ  ಗುರಿ ಸಾತ್ವಿಕವಾಗಿದ್ದಾಗ ದೈವದ ಪ್ರೇರಣೆ ಇರುತ್ತದೆ, ಆದರೆ ಆ ಗುರಿಯಲ್ಲಿ ಹಾದಿ ತಪ್ಪಿದರೆ ದೈವವೇ ಕಾಡುವ ಭೂತವಾಗುತ್ತದೆ ಎನ್ನುವ ಸಂದೇಶ  ಸಿಗುತ್ತದೆ..

ರಾಜ್ ಕುಮಾರ್ ತಮಗೆ ಸಿಕ್ಕ ಪಾತ್ರ ದೊಡ್ಡದೇ ಇರಲಿ ಚಿಕ್ಕದೇ ಇರಲಿ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದದು ಅವರ ಹೆಗ್ಗಳಿಕೆ.. ಅಂತಹ ಇನ್ನೊಂದು  ಶ್ರದ್ಧೆಯಿಂದ ಕೂಡಿದ ಚಿತ್ರದ ಜೊತೆಯಲ್ಲಿ ಮತ್ತೊಮ್ಮೆ ಸೇರೋಣವೇ.. !

1 comment:

  1. ಎಂದಿನಂತೆ ಅಮೋಘವಾಗಿ ವಿವರಿಸಿದ್ದೀರಿ. ರಾಜ್ ಅವರ ಅಭಿನಯದ ಬಲವೇ ಹಾಗಿತ್ತು. ಯಾವುದೇ ಪಾತ್ರದಲ್ಲಿ ನಟಿಸಿದರು, ಇದು ರಾಜ್ ಅವರಿಗಾಗೇ ಬರೆದ ಪಾತ್ರ ಎನಿಸುವಂತೆ ನಟಿಸುತ್ತಿದ್ದರು :)

    ReplyDelete