Showing posts with label Puttanna Kanagal. Show all posts
Showing posts with label Puttanna Kanagal. Show all posts

Tuesday, December 1, 2020

ಪುಟ್ಟಣ್ಣ ಅನ್ನುವ ದೊಡ್ಡ ನಿರ್ದೇಶಕರ ದೊಡ್ಡಣ್ಣ ಅವರ ಜನುಮದಿನ!!!

"ಮಸಣದ ಹೂವು ಸಿನಿಮಾ ಮುಗಿಸಿದ್ದರೇ ಇನ್ನೊಂದಷ್ಟು ಸಿನಿಮಾ ತೆಗೆಯುವ ಆಸೆ ಇತ್ತು.. ಇನ್ನಷ್ಟು ಕಾದಂಬರಿಗಳನ್ನು ಕೊಡುವ ಮನಸ್ಸು ಇತ್ತು.. ಆದರೆ ಆ ಜಗನ್ಮಾತೆ ಪುಟ್ಟಣ್ಣ ಬಂದು ಬಿಡು ಅಂದಳು ಹೊರಟೆ ಬಿಟ್ಟೆ ಶ್ರೀ.. "

ಬೆಳಗಿನ ಜಾವ ಈ ಮಾತುಗಳು ನನ್ನ ಕಿವಿಯಲ್ಲಿ ಯಾರೋ ಹೇಳುತ್ತಿದ್ದಾರೆ ಅನ್ನುವ ಹಾಗೆ ಕನಸು.. 

ಅರೆ ಹೌದು ನನ್ನ ನೆಚ್ಚಿನ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರದ್ದೇ ಧ್ವನಿ.. ಅದೇ ಎಣ್ಣೆ ಹಾಕಿ ಬಾಚಿದ ಕಪ್ಪು ಬಿಳಿ ತಲೆಗೂದಲು.. ಹಣೆಯಲ್ಲಿ ವಿಭೂತಿ.. ಅದರ ಮಧ್ಯೆ ಕುಂಕುಮ.. ಆಗ ತಾನೇ ಸಂಧ್ಯಾವಂದನೆ ಮುಗಿಸಿ ಬಂದಿದ್ದರು.. 

ನನ್ನ ನೆಚ್ಚಿನ ವ್ಯಕ್ತಿಯನ್ನು ಬೆಳಿಗ್ಗೆಯೇ ನೋಡಿ ಖುಷಿಯೋ ಖುಷಿ. "ಪುಟ್ಟಣ್ಣ ಸರ್.. ನಿಮ್ಮ ಚಿತ್ರಗಳಿಂದ ಪ್ರಭಾವಕ್ಕೆ ಒಳಗಾದವನು ನಾನು.  ನಿಮ್ಮ ಚಿತ್ರಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.. ನಿಮ್ಮ ಜೊತೆ ಒಂದಷ್ಟು ಮಾತಾಡಬೇಕಿತ್ತು.. "

"ಶ್ರೀ ಮಾತಾಡೋಣ.. ಈಗ ನೀನು ಸಂಧ್ಯಾವಂದನೆ ಮಾಡೋಕೆ ಹೊರಟಿದ್ದೀಯ... ನಾನು ಇಲ್ಲಿಯೇ ನಿನ್ನ ಮನೆಯ ಬಾಲ್ಕನ್ನಿಯಲಿ ಕುಳಿತು ನೀ ಬರೆದ ನನ್ನ ಇಪ್ಪತ್ತನಾಲ್ಕು ಚಿತ್ರಗಳ ಬ್ಲಾಗ್ ಓದುತ್ತಾ ಇರುತ್ತೇನೆ.. ಮೊದಲು ಸಂಧ್ಯಾವಂದನೆ ಮುಗಿಸು.. ಆ ಗಾಯತ್ರಿ ದೇವಿ ನಿನಗೆ ಒಳ್ಳೆಯದನ್ನೇ ಮಾಡುತಾಳೆ.. "

"ಸರಿ ಪುಟ್ಟಣ್ಣ ಸರ್.. "ಎಂದು ಹೇಳಿ ಸಂಧ್ಯಾವಂದನೆ ಮಾಡೋಕೆ ಕುಳಿತೆ.. 

ನಾ ಬರುವ ಹೊತ್ತಿಗೆ.. ಅವರು ಅಷ್ಟು ಲೇಖನಗಳನ್ನು ಓದಿದ್ದರು.. ಅವರ ಜನುಮದಿನ ಮತ್ತು ಲಾಗ್ ಔಟ್ ಆದ ದಿನಗಳ ಬಗ್ಗೆ ಬರೆದಿದ್ದ ಲೇಖನಗಳನ್ನು ಓದಿದ್ದರು.. 

"ಶ್ರೀ ಎಷ್ಟು ಚೆನ್ನಾಗಿ ಬರೆದಿದ್ದೀಯ.. ನನ್ನ ಚಿತ್ರಗಳನ್ನು ಉತ್ತಮವಾಗಿ ವಿಮರ್ಶೆ ಮಾಡಿದ್ದೀಯಾ.. ಧನ್ಯವಾದಗಳು" 

"ಪುಟ್ಟಣ್ಣ ಸರ್.. ಅದು ದೊಡ್ಡ ಮಾತು.. ವಿಮರ್ಶೆ ಖಂಡಿತ ಅಲ್ಲ ಅನಿಸುತ್ತೆ.. ನಿಮ್ಮ ಚಿತ್ರಗಳನ್ನು ವಿಮರ್ಶೆ ಮಾಡಲು ಇಬ್ಬರಿಗೆ ಮಾತ್ರ ಸಾಧ್ಯ.. "

"ಹೌದಾ ಯಾರಪ್ಪ ಆ ಇಬ್ಬರು"

"ಒಬ್ಬರು ಜಗನ್ಮಾತೆ.. ಇನ್ನೊಬ್ಬರು ನೀವು... "

ಜೋರಾಗಿ ನಕ್ಕರು.... "ಸರಿ ಏನೋ ಮಾತಾಡಬೇಕು ಅಂದೆಯಲ್ಲ ಏನಪ್ಪಾ ಅದು.." 

"ಪುಟ್ಟಣ್ಣ ಸರ್.. ನೀವು ಚಿತ್ರಗಳಿಗೆ ನೆಡೆಸುವ ತಯಾರಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ.. ನಾ ಮಾಡುವ ಕೆಲಸಗಳಲ್ಲಿಯೂ ಕೂಡ ಅದೇ ರೀತಿಯ ತಯಾರಿ ಮಾಡಿಕೊಳ್ಳಬೇಕು.. ಅದನ್ನು ಕಲಿತುಕೊಳ್ಳಬೇಕು ಎನ್ನುವ ಹಂಬಲ ದಯಮಾಡಿ ಅದರ ಬಗ್ಗೆ ಒಂದೆರಡು ಮಾತುಗಳನ್ನು ಹೇಳುತ್ತೀರಾ.."

"ಆಗಲಿ ಶ್ರೀ.. ನನ್ನ ಚಿತ್ರಗಳು ಅನ್ನೋದಕ್ಕಿಂತ.. ಕನ್ನಡ ಚಿತ್ರಗಳ ಬಗ್ಗೆ ನಿನಗಿರುವ ಅಭಿಮಾನಕ್ಕೆ ನಾ ನಮಸ್ಕರಿಸುತ್ತೇನೆ.. ಶ್ರೀ ಯಾವುದೇ ಚಿತ್ರ ಮಾಡಬೇಕು ಎನ್ನುವ ಮನಸ್ಸು ಬರೋದಕ್ಕೆ ನಾ ಸಿದ್ಧಗೊಳ್ಳುತ್ತಿದ್ದ ರೀತಿ ಹೀಗಿದೆ.. "

"ಮೊದಲು ನೀನು ಏನು ಮಾಡಬೇಕು ಎಂದು ನಿರ್ಧರಿಸು ನಿರ್ಧರಿಸದ ಮೇಲೆ ಮತ್ತೆ ಆ ನಿರ್ಧಾರದಲ್ಲಿ ಬದಲಾವಣೆ ತರಬೇಡ ನಿನ್ನ ತಲೆಯೊಳಗೆ ಆ ಯೋಜನೆ ಪೂರ್ಣ ಸಿದ್ಧವಾಗಬೇಕು ಒಮ್ಮೆ ಸಿದ್ಧವಾದ ಮೇಲೆ.. ಕಥಾವಸ್ತುವನ್ನು ಕೈಗೆತ್ತಿಕೊ ಅದರಲ್ಲಿನ ಒಳ್ಳೆಯ ಅಂಶಗಳನ್ನು ಪಟ್ಟಿ ಮಾಡಿಕೊಅದಕ್ಕೆ ಕಥಾರೂಪ ಕೊಡು.. ಕಥಾರೂಪಕ್ಕೆ ಚಿತ್ರಕತೆಯ ಚೌಕಟ್ಟು ಕೊಡು ಈ ನಿನ್ನ ತಲೆಯೊಳಗಿರುವ ಯೋಜನೆಗೆ ಒಂದು ಚೌಕಟ್ಟು ಸಿಕ್ಕ ಹಾಗೆ ಆಯ್ತು ಇನ್ನು ಮುಂದೆ ಮಾಡಬೇಕಿರುವುದು ಆ ಚೌಕಟ್ಟಿನೊಳಗೆ ಪಾತ್ರಗಳನ್ನು ಕೂರಿಸುವುದುಆ ಪಾತ್ರಗಳಿಗೆ ಸರಿಯಾದ ನಟ ನಟಿಯರನ್ನು ಆಯ್ಕೆ ಮಾಡಿಕೊ ನಂತರ ಬರುವುದು ಸಂಭಾಷಣೆ.. ಸಿನಿಮಾಗಳಿಗೆ ಹಾಡು ಬೇಕೇ ಹೊರತು.. ಹಾಡುಗಳಿಗೆ ಸಿನಿಮಾ ಅಲ್ಲ.. ಹಾಗಾಗಿ ಸನ್ನಿವೇಶವನ್ನು, ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಂತಹ ಹಾಡುಗಳನ್ನು ಸಿದ್ಧ ಮಾಡಿಕೊ .. ಅದಕ್ಕೆ ಸಂಗೀತ ನಿರ್ದೇಶಕರು, ಸಾಹಿತಿಗಳು ನಿನ್ನ ಕೈಗೆ ಕೈಯನ್ನುಜೋಡಿಸುತ್ತಾರೆ.. ಇಷ್ಟು ಆದ ಮೇಲೆ.. ಒಂದಷ್ಟು ಹೊತ್ತು, ದಿನಗಳನ್ನು ಬಿಟ್ಟು ಬಿಡು.. ಆ ದಿನಗಳಲ್ಲಿ ಪ್ರತಿ ದೃಶ್ಯಗಳನ್ನು ಚಿತ್ರಿಸುವ ರೀತಿ, ಸ್ಥಳ, ಹಗಲು, ಇರುಳು, ಮಳೆ, ಬಿಸಿಲು, ಚಳಿ ಇವನ್ನೆಲ್ಲ ಹೇಗೆ ಉಪಯೋಗಿಸಬೇಕು ಎನ್ನುವುದನ್ನು ಪಟ್ಟಿ ಮಾಡಿಕೊ.. 

ಈಗ ನಿನ್ನ ತಲೆಯೊಳಗೆ ಇಡೀ ಚಿತ್ರ ಸಿದ್ಧವಾಗಿದೆ.. ಇನ್ನು ಮಾಡಬೇಕಿರುವುದು ತಲೆಯೊಳಗಿರುವುದನ್ನು ಕ್ಯಾಮೆರಾದೊಳಗೆ ತರುವುದು.. ಇಷ್ಟು ಮಾಡಿದರೆ ನಿನ್ನ ಚಿತ್ರ ಗೆದ್ದಂತೆ.. 

ಇವಿಷ್ಟು ನನ್ನ ಬೆಳ್ಳಿಮೋಡ ದಿನದಿಂದ ಮಸಣದ ಹೂವಿನ ಅರ್ಧ ಚಿತ್ರದ ತನಕ ನಾ ಪಾಲಿಸಿಕೊಂಡು ಬಂದ ಜಗನ್ಮಾತೆ ಹೇಳಿಕೊಟ್ಟ ಪಾಠಗಳು.. ಒಂದು ಚೂರು ಬದಲಾವಣೆ ಮಾಡಿಕೊಳ್ಳಲಿಲ್ಲ.. ಕೆಲವು ಚಿತ್ರಗಳು ಗೆದ್ದವು.. ಕೆಲವು ಚಿತ್ರಗಳು ಬಿದ್ದವು.. ಆದರೆ ಚಿತ್ರರಸಿಕರಿಗೆ ನನ್ನ ಎಲ್ಲಾ ಚಿತ್ರಗಳು ರತ್ನಗಳಾಗಿ ಉಳಿದಿದ್ದು ಸೋಜಿಗ ಅನಿಸುತ್ತಿದೆ.. "

"ಪುಟ್ಟಣ್ಣ ಸರ್.. ಅದ್ಭುತ ಮಾತುಗಳು.. ನಿಮ್ಮ ಜಗನ್ಮಾತೆ ಹೇಳಿಕೊಟ್ಟಿದ್ದನ್ನು ಪಾಲಿಸಿ ಚಿತ್ರರತ್ನಗಳನ್ನು ಕೊಟ್ಟಿರಿ.. ನೀವು ಹೇಳಿದ ಚಿತ್ರ ತಯಾರಿಕೆಯ ಸಿದ್ಧತೆಗಳನ್ನೇ ನಾನು ನನ್ನ ಕೆಲಸಗಳು, ಯೋಜನೆಗಳು, ಮತ್ತು ಯೋಚನೆಗಳಿಗೆ ಹೊಂದಿಸಿಕೊಂಡು ಮುಂದುವರೆಯುತ್ತೇನೆ.. ನಿಮ್ಮ ಆಶೀರ್ವಾದವಿರಲಿ.. "

"ಶ್ರೀ.. ನಿನಗೆ ಖಂಡಿತ ಶುಭವಾಗುತ್ತೆ.. ನೆಡೆಯುವ ಹಾದಿ ನಮಗೆ ಸ್ಪಷ್ಟವಿದ್ದಾಗ ಗೆಲುವು, ಸೋಲು, ಜಯ, ಅಪಜಯಗಳ ಗೊಂದಲ ನಮ್ಮ ತಲೆಗೆ ತಟ್ಟುವುದೇ ಇಲ್ಲ.. ಜೊತೆಗೆ ಯಶಸ್ಸು ಸೋಲು ತಲೆಗೆ ಹೋಗದೆ.. ಅದರಿಂದ ಪಾಠ ಕಲಿಯುತ್ತ ಹೋದಾಗ ಜೀವನ ಆಗಸದಲ್ಲಿ ಸದಾ ಬೆಳ್ಳಿ ಮೋಡ ಇದ್ದೆ ಇರುತ್ತದೆ.. "

ಪ್ರವರ ಹೇಳಿ ಪುಟ್ಟಣ್ಣನವರಿಗೆ ನಮಸ್ಕರಿಸಿದೆ.. "ಶತಮಾನಂಭವತಿ ಶತಾಯುಹ್ ಪುರುಷಃ ಶತೇಂದ್ರಿ ಯೈ ಪ್ರತಿತಿಷ್ಠತಿ"  

"ಶ್ರೀ ಶ್ರೀ.. ತಡವಾಗ್ತಿದೆ ಆಫೀಸಿಗೆ ಹೋಗೋಲ್ವ.. ಏಳಿ ಏಳಿ" ಅಂತ ಅಲುಗಾಡಿಸಿದಾಗ ಎಚ್ಚರ.. 

ಆಹಾ ಇಂತಹ ಸುಂದರ ಕನಸ್ಸು ನನಸಾಗಿದ್ದರೆ ಎಷ್ಟು ಚೆನ್ನಾ ಅನಿಸಿತ್ತು.. ಆದರೆ ನಿರ್ದೇಶಕರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಆಶೀರ್ವಾದ ಈ ಕರುನಾಡಿನ ಚಿತ್ರ ರಸಿಕರ ಮೇಲೆ ಸದಾ ಇರುತ್ತದೆ ಎನ್ನುವ ಮಾತು ಮನಸ್ಸಿಗೆ ಬಂದು ಸಮಾಧಾನ ಆಯ್ತು.. 

ಇಂದು ಪುಟ್ಟಣ್ಣವರು ಧರೆಗಿಳಿದ ದಿನ.. ಆ ಜಗನ್ಮಾತೆ ಕರುನಾಡಿಗೆ ಬಳುವಳಿಯಾಗಿ ಕೊಟ್ಟ ಅತಿ ದೊಡ್ಡ ವರ ಇವರು... 



ಅವರಿಗೆ.. ಅವರ ಚಿತ್ರಗಳಿಗೆ ಸದಾ ಧನ್ಯವಾದಗಳು ಹೇಳುತ್ತಾ ನಮ್ಮ ನಾಡಿನ ಚಿತ್ರರಸಿಕರ ಪರವಾಗಿ ಅವರಿಗೊಂದು ಜನುಮದಿನದ ಶುಭಾಶಯಗಳನ್ನು ಹೇಳೋಣ.. !!!

Sunday, October 28, 2018

ಕಾದಂಬರಿ ಮತ್ತು ಸಿನಿಮಾ ಒಂದು ಜುಗಲ್ ಬಂಧಿ - ನಾಗರಹಾವು (1972)

ಇದು ನಾಗರಹಾವಲ್ಲ.. ಕೇರೇ ಹಾವು.!!!

ಈ ಮಾತನ್ನು ಶ್ರೀ ತ ರಾ ಸುಬ್ಬರಾಯರು ಹೇಳಿದ್ದಾರೆ ಅಂತ ನನ್ನ ಬಾಲ್ಯದ ದಿನಗಳಲ್ಲಿ ಓದಿದ್ದ ನನೆಪು.. ನಂತರ ಅವಕಾಶ ಸಿಕ್ಕಾಗ ಟಿವಿಯಲ್ಲಿ ಬಂದಾಗ ನಾಗರಹಾವು ಚಿತ್ರ ನೋಡಿದ್ದೆ.. ಯಾಕೆ ತ ರಾ ಸುಬ್ಬರಾಯರು ಹಾಗೆ ಹೇಳಿದ್ರು ಅನ್ನುವ ಪ್ರಶ್ನೆ ಕಾಡುತ್ತಿತ್ತು..

ಅದರಲ್ಲೂ ನಾಗರಹಾವು ಚಿತ್ರವನ್ನು ಹಲವಾರು ಬಾರಿ ನೋಡಿದಾಗಲೂ ಲೇಖಕರ ಪ್ರತಿಕ್ರಿಯೆ ಮನಸ್ಸಿಗೆ ನಾಟಲಿಲ್ಲ..
ಶ್ರೀ ಪುಟ್ಟಣ್ಣ ಕಣಗಾಲ್ ಒಬ್ಬ ಅದ್ಭುತ ನಿರ್ದೇಶಕ, ಕನ್ನಡದಲ್ಲಿ ಅವರು ನಿರ್ದೇಶಿಸಿದ ೨೪ ಚಿತ್ರಗಳನ್ನು ನೋಡಿದ್ದೇನೆ ಮತ್ತು ಆ ಸಿನೆಮಾಗಳು ನನ್ನ ಮನಸ್ಸಿಗೆ ಯಾಕೆ ಇಷ್ಟವಾಯಿತು, ಆ ಚಿತ್ರದ ವಿಶೇಷವೇನು ಅನ್ನುವ ಕೆಲವು ವಿಷಯಗಳನ್ನು ಬರೆದಿದ್ದೆ.. ನಾಗರಹಾವು  ಚಿತ್ರ ನಿರ್ದೇಶನ ಮಾಡಿದ ಮೇಲೆ ಅವರ ಮುಂದಿನ ಎಲ್ಲಾ ಚಿತ್ರಗಳು ವಿಶೇಷವಾಗಿದ್ದವು.. ಹಾಗಾಗಿ ನಾಗರಹಾವು ಒಂದು ರೀತಿಯಲ್ಲಿ ಅವರ ಚಿತ್ರಗಳಿಗೆ ಒಂದು ತಿರುವು ಕೊಟ್ಟ ಚಿತ್ರವಾಗಿತ್ತು...

ಇದರಿಂದ ನನ್ನ ಕುತೂಹಲದ ದೀಪ ಇನ್ನಷ್ಟು ಜೋರಾಗಿ ಉರಿಯಲು ಶುರುಮಾಡಿತು.. ಸೊ ನನ್ನ ಹುಡುಕಾಟ ತ್ರಿವಳಿ ಕಾದಂಬರಿಗಳಾದ ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪಮತ್ಸರ ಪುಸ್ತಕಗಳ ಕಡೆಗೆ ಇಳಿಯಿತು..   ಹುಡುಕಲು ಶುರುಮಾಡಿದೆ.. ಫೇಸ್ಬುಕ್ ಸಹೋದರಿಯಾದ ಡಿಟಿಪಿ ಅಲಿಯಾಸ್ ಲಕ್ಷ್ಮಿಪ್ರಿಯ ನನಗೆ ಸಹಾಯ ಮಾಡಿ.. ಆ ಪುಸ್ತಕವನ್ನು ಕಳಿಸಿಕೊಟ್ಟರು..ಮೂರು ಕಾದಂಬರಿಗಳ ಒಂದು ಸಮಗ್ರ ರೂಪವನ್ನು ಪುಸ್ತಕ ಮಾಡಿ ಪ್ರಕಟಿಸಿದ್ದರು.. ಹುಚ್ಚು ಹಿಡಿದ ಹಾಗೆ ಓದಿ ಮುಗಿಸಿದೆ. ೫೪೩ ಪುಟಗಳಿರುವ ಕಾದಂಬರಿಯನ್ನು ಒಂದು ವಾರದಲ್ಲಿ ಓದಿ ಮುಗಿಸಿದೆ.. ಆ ಓದು ಮುಗಿದ ಮೇಲೆ ನನಗೆ ಅನಿಸಿದ ಕೆಲವು ವಿಷಯವನ್ನು ನನಗೆ ತೋಚಿದ ರೀತಿಯಲ್ಲಿ ಬರೆದಿದ್ದೇನೆ..

ಓದಿ.. ನಿಮಗೆ ಅನಿಸಿದ ಮಾತನ್ನು ಹೇಳಿ..

*****************************

ಸ್ವರ್ಗದಲ್ಲಿದ್ದ ಅಶ್ವಥ್ ಕಟ್ಟೆಯಲ್ಲಿ ಸಂಧ್ಯಾವಂದನೆ ಮುಗಿಸಿ ಪುಟ್ಟಣ್ಣ ಅವರು ಧ್ಯಾನ ಮಾಡುತ್ತಾ ಕೂತಿದ್ದರು.. ಸುಬ್ಬರಾಯರು ಬೆಳಗಿನ ವಾಕಿಂಗ್ ಮುಗಿಸಿ ಸುಧಾರಿಸಿಕೊಳ್ಳಲು ಅದೇ ಅಶ್ವಥ್ ಕಟ್ಟೆಯಲ್ಲಿ ಕುಳಿತರು. ಆ ಬದಿಯಲ್ಲಿ ಪುಟ್ಟನವರು.. ಈ ಬದಿಯಲ್ಲಿ ಸುಬ್ಬರಾಯರು.. 

ಇಬ್ಬರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿ ಮಂದಹಾಸ ಬೀರಿದರು.. ಪುಟ್ಟಣ್ಣನವರ ಧ್ಯಾನ ಮುಗಿದಿತ್ತು.. ಸುಬ್ಬರಾಯರಿಗೂ ಆಯಾಸ ಪರಿಹಾರವಾಗಿತ್ತು.. ಹಾಗೆ ಇಬ್ಬರೂ ಎದ್ದು ತಮ್ಮ ಮನೆಯ ಕಡೆ ಹೆಜ್ಜೆ ಹಾಕುತ್ತಾ ಹೋದರು.. ಇಬ್ಬರ ಮನೆಯೂ ಒಂದೇ ಬೀದಿಯಲ್ಲಿತ್ತು.. ಹಾಗಾಗಿ ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದರು. 


"ಪುಟ್ಟಣ್ಣನವರೇ .. ನೀವು ಚಿತ್ರಿಸಿದ ನಾಗರಹಾವು ಚಿತ್ರವನ್ನು ನಾನು ಕೇರೇ ಹಾವು ಎಂದರೂ ನೀವು ಕೋಪಗೊಳ್ಳಲಿಲ್ಲ.. ನನ್ನ ವಿರುದ್ಧ ಹೇಳಿಕೆ ಕೊಡಲಿಲ್ಲ.. ನನ್ನನ್ನು ಗೌರವಿಸಿದಿರಿ.. ನಾ ಏನು ಹೇಳಬೇಕು ಗೊತ್ತಾಗ್ತಾ ಇಲ್ಲ. .. ಹೇಗಿದ್ದರೂ ಕರುನಾಡಿನ ಚಿತ್ರರಸಿಕರು ನನ್ನ ಕಾದಂಬರಿಯನ್ನು.. ಹಾಗೂ ನಿಮ್ಮ ಕಣ್ಣಿನಲ್ಲಿ ರೂಪುಗೊಂಡ ಚಿತ್ರವನ್ನು ನೋಡಿ ಮೆಚ್ಚಿದ್ದಾರೆ.. ನೂತನ ತಂತ್ರಜ್ಞಾನದಲ್ಲಿ ತಂದ ಅದರ ಹೊಸ ರೂಪವನ್ನು ಮೆಚ್ಚಿದ್ದಾರೆ.. ಇದರ ಬಗ್ಗೆ ಒಂದು ಚರ್ಚೆ ಮಾಡೋಣವೇ.. ನನ್ನ ಅನಿಸಿಕೆ ನಾ ಹೇಳುವೆ.. ನಿಮ್ಮ ಅನಿಸಿಕೆ ನೀವು ಹೇಳಿ

"ಸುಬ್ಬರಾಯರೇ ಧನ್ಯವಾದಗಳು ನಿಮ್ಮ ಮಾತಿಗೆ.. ಖಂಡಿತ ಮಾತಾಡೋಣ.. ಚರ್ಚಿಸೋಣ.. ಆಗಬಹುದು.. ನಿಮ್ಮಿಂದಲೇ ಶುರುಮಾಡಿ.. ಯಾಕೆಂದರೆ ಅದು ನಿಮ್ಮ ಸೃಷ್ಟಿ, ನೀವು ಜನುಮ ಕೊಟ್ಟ ಕೂಸು ಈ ಕಾದಂಬರಿ.. ನಿಮ್ಮ ಮನದಲ್ಲಿ ರೂಪುಗೊಂಡ ಆ ಕಾದಂಬರಿಗೂ.. ಅದನ್ನು ನನ್ನ ಕಣ್ಣಿನಲ್ಲಿ ತೆರೆಗೆ ತಂದ ರೂಪಕ್ಕೂ ನಿಮ್ಮ ಅನಿಸಿಕೆ ಹೇಳಿ.. ಶುರುವಾಗಲಿ..

******* 

ಇನ್ನು ಮುಂದೆ ನೆಡೆಯುವುದು.. ಸಾಹಿತ್ಯದ ದಿಗ್ಗಜರು ಸುಬ್ಬರಾಯರು.. ಮತ್ತು ನಿರ್ದೇಶನದ ಕುರ್ಚಿಗೆ ತಾರಾಪಟ್ಟ ತಂದುಕೊಟ್ಟ ಪುಟ್ಟಣ್ಣನವರ ಮಾತುಕತೆ....!

*******

ನಾನು ರಾಮಾಚಾರಿ ಪಾತ್ರವನ್ನು ಸಮಾಜದಲ್ಲಿ ನೆಡೆಯುವ ಅಸೂಯೆ, ಹೊಟ್ಟೆಕಿಚ್ಚು, ಸಿಟ್ಟು, ಸೇಡು, ದ್ವೇಷ, ವೈಮನಸ್ಯ, ಅನುಮಾನಗಳು, ತಪ್ಪು ಕಲ್ಪನೆಗಳು, ಪ್ರೀತಿ, ಪ್ರೇಮ, ಸಹಾಯ ಮಾಡುವ ಮನೋಭಾವ, ಕಾಲು ಎಳೆದು ನಗುವ ಮನಸ್ಥಿತಿ, ಹೀಗೆ ಅರಿಷಡ್ವರ್ಗ ಜೊತೆಗೆ ಮಾನವನ ಸಹಜವಾದ ಗುಣಗಳು ಎಲ್ಲವನ್ನು ಕಲಸಿ, ಬೆರೆಸಿ ಮಾಡಿದ್ದೆ.. ಅವನ ಶಾಲಾದಿನಗಳಲ್ಲಿ ಸಾಮಾನ್ಯ ಅನ್ನಿಸುವ ಘಟನೆಯನ್ನು ತುಸು ವಸ್ತುಸಹಜವಾಗಿ ಮೂಡಿಸಿದ್ದೆ..

>ರಾಮಚಾರಿಯ ಹಠದ ಸ್ವಭಾವದ ಬಗ್ಗೆ ವಿವರಿಸುವ ಒಂದಷ್ಟು ಘಟನೆಗಳನ್ನು, ಸೇಡಿನ, ಕಿಚ್ಚಿನ ಸಾಹಸಗಳನ್ನು ಮನ  ಮುಟ್ಟುವಂತೆ ರಚಿಸಿದ್ದೆ.
>ಗುರುಗಳು ಎಂದು ಗೌರವ ಕೊಡುವ ಚಾಮಯ್ಯ ಮೇಷ್ಟ್ರು
>ಪ್ರೀತಿಸುವ ಅಲಮೇಲು, ಮಾರ್ಗರೆಟ್
>ಮೊದಲು ದ್ವೇಷ ಮಾಡಿದರೂ ನಂತರ ಮಗಳಿಗಾಗಿ ಇಷ್ಟಪಡುವ ಮೇರಿಯಮ್ಮ
>ಮಗನನ್ನು ಕಸದಂತೆ ಕಂಡರೂ, ಅವನ ಸಾಹಸವನ್ನು, ಊರಿನ ಜನತೆಗೆ ಸಹಾಯ ಮಾಡಲು ತೋರುವ ಧೈರ್ಯದ ಬಗ್ಗೆ ಊರಿನವರೆಲ್ಲ ಹೊಗಳಿದಾಗ ಮಗನನ್ನು ಆಪ್ತಮಿತ್ರನಂತೆ ಮಾತಾಡಿಸಿ, ತಮ್ಮ ಕಡೆಘಳಿಗೆಯಲ್ಲಿ ಮನೆಗೆ ನೀನೆ ಯಜಮಾನ ಎಂದು ಬಿಂಬಿಸುವ ಅಪ್ಪನ ಪಾತ್ರ ಮಧ್ವರಾಮಚಾರ್ಯರು 
>ಮಗ ತನ್ನ ಜೀವನವನ್ನು  ಬೆಳಗುತ್ತಾನೆ ಎಂದು ಮೊದಲಿಂದಲೂ ತನ್ನ ಪತಿಯೊಡನೆ ವಾದಮಾಡುತ್ತಾ ಕಡೆಯಲ್ಲಿ ಮಾರ್ಗರೆಟ್ ಜೊತೆಯಲ್ಲಿ ತನ್ನ ಮಗನ ಜೊತೆಯಲ್ಲಿದ್ದಾಳೆ ಎಂದು ತಿಳಿದಾಗ, ಪ್ರೀತಿ ಉರಿಯಾಗಿ ರಾಮಾಚಾರಿಯನ್ನು ದಹಿಸುತ್ತಾರೆ ಸೋನಾಬಾಯಿ!
>ಹುಡುಗಾಟದ ಹುಡುಗ ವರದಯ್ಯಂಗಾರಿ ಈ ಕತೆಗೆ ತಿರುವು ಕೊಡುವ ಪಾತ್ರ,  ಜಲೀಲನ ಜೊತೆಯಲ್ಲಿ ನೆಡೆಯುವ ಪುಟ್ಟ ಜಗಳ ಕತೆಗೆ ದೊಡ್ದ ತಿರುವನ್ನೇ ಕೊಡುತ್ತೆ
>ಪೈಲ್ವಾನ್ ಸಣ್ಣಬಸಪ್ಪ  ರಾಮಚಾರಿಯನ್ನು ತಿದ್ದಿ ತೀಡಿ ಅವನ ಜೀವನಕ್ಕೆ ಒಂದು ದಾರಿ ಮಾಡಿಕೊಡುತ್ತಾರೆ.. ದೇಹವನ್ನು ಹುರಿಗೊಳಿಸಲು ಸಹಾಯ ಮಾಡುತ್ತಾರೆ..
>ಪ್ರಭಣ್ಣ, ಸಣ್ಣರಂಗಪ್ಪ, ಹೈದರ್ ಷರೀಫ್, ಚೆಲುವಚಾರಿ ಈ ನಾಲ್ಕು ಮಂದಿ ಇಡೀ ಕಥೆಯಲ್ಲಿ ರಾಮಚಾರಿಗೆ ಬೆನ್ನೆಲುಬಾಗಿ ನಿಲ್ಲುವುದು ತೋರಿಸಿದ್ದೇನೆ
>ಪ್ಲೇಗ್ ಸಮರ, ಸಿನಿಮಾ ಟೆಂಟ್, ದಲ್ಲಾಳಿ ವಹಿವಾಟು
>ಚಾಮಯ್ಯನವರ ಸಮಾಜ ಸೇವೆ, ಅವರ ಕೆಲಸ ಉಳಿಸಿಕೊಳ್ಳಲು ತೋರುವ ಚಾಲಾಕಿತನ
>ವರದರಾಜುವಿನ ದುಂಡಾವರ್ತಿ, ಜೊತೆಗೆ  ಮಾರ್ಗರೆಟ್ ರಾಮಾಚಾರಿಯ ಅಪ್ಪನ ಕೆಲಸ ಮಾಡಲು ಹಣಕ್ಕೆ ಒದ್ದಾಡುತ್ತಿದ್ದ ವಿಷಯ ಕೇಳಿ, ವರದರಾಜುವನ್ನು ಸಹಾಯ ಕೇಳಿದಾಗ ಹಿಂದೆ ಮುಂದೆ ನೋಡದೆ ಸಹಾಯ ಮಾಡುವುದು
>ಫಕೀರಪ್ಪ ಹೆಣ್ಣಿನ ಚಪಲದಿಂದಾಗಿ ಅಲಮೇಲುವಿನ ನಿಜಸ್ಥಿತಿ ತಿಳಿಸಿ ಕಾದಂಬರಿಗೆ ಮುಕ್ತಾಯದ ಹಾದಿ ತೋರಿಸೋದು..
>ಶಾಲೆಯ ಮಾಸ್ಟರನ್ನು ರಾಮಾಚಾರಿ ಗೋಳುಹುಯ್ಕೊಳೋದು
>ಅಲಮೇಲು, ಮಾರ್ಗರೆಟ್ ಮತ್ತು ರಾಮಾಚಾರಿಯ ಪ್ರೀತಿಯನ್ನು ತೋರಿಸುವ ಆ ಪುಟಗಳು
>ಚಾಮಯ್ಯ ಮೇಷ್ಟ್ರ ಅಂತ್ಯ
>ರಾಮಾಚಾರಿ ಮಾರ್ಗರೆಟ್ ಅಂತ್ಯ
>ಕಡೆಯಲ್ಲಿ ಫಕೀರಪ್ಪ ಹೇಳುವ ಮಾತು

ಪುಟ್ಟಣ್ಣನವರೇ ನಾ ಕಾದಂಬರಿಯಲ್ಲಿ ಚಿತ್ರಿಸಲು ಪ್ರಯತ್ನ ಪಟ್ಟ ಈ ಮೇಲಿನ ವಿವರಣೆಗಳು, ನನಗೆ ಚಿತ್ರದಲ್ಲಿ ಅಲ್ಲಲ್ಲಿ ಕಂಡವೇ ಹೊರತು, ಪೂರ್ಣ ಪ್ರಮಾಣದಲ್ಲಿ ಕಾಣಲಿಲ್ಲ.. ನಾ ನಿಮ್ಮ ಹಿಂದಿನ ಚಿತ್ರದ ಬಗ್ಗೆ ಕೇಳಿದ್ದೆ.. ನೋಡಿದ್ದೇ.. ನಿಮ್ಮ ತಂತ್ರಜ್ಞಾನದ ಪ್ರತಿಭೆ ಎಲ್ಲದರ ಬಗ್ಗೆ ತಿಳಿದಿದ್ದೆ. ನನ್ನ ಕಾದಂಬರಿಯನ್ನು ಸಿನಿಮಾ ಮಾಡಲು ಹಕ್ಕುಗಳನ್ನು ಕೇಳಿದಾಗ, ನೀವೇ ಚಿತ್ರ ನಿರ್ದೇಶಿಸುವುದು ಎಂದು ತಿಳಿದಾಗ ಕುತೂಹಲ, ಆಸಕ್ತಿ ಗರಿಗೆದರಿತ್ತು.. ಚಿತ್ರವನ್ನು ನೋಡಿದಾಗ ನೀವು ತೋರಿದ ಚಿತ್ರದುರ್ಗದ ತಾಣಗಳು, ಕೋಟೆಗಳು, ಬೆಟ್ಟ ಗುಡ್ಡಗಳು, ವಾಣಿವಿಲಾಸ ಸಾಗರ ಎಲ್ಲವೂ ಖುಷಿ ಕೊಟ್ಟಿತು.. ಚಿತ್ರದುರ್ಗವನ್ನು ಅದ್ಭುತವಾಗಿ ತೋರಿಸಿದ ನಿಮಗೆ ಅಭಿನಂದನೆಗಳು.. ಆದರೆ ಕತೆಯಲ್ಲಿ ನಾ ಕಂಡ ದೃಶ್ಯಗಳು.. ಸಿನಿಮಾದಲ್ಲಿ ನಾ ಕಂಡ ಕತೆಗೂ ಹೊಂದಿಸಿಕೊಳ್ಳೋಕೆ ಕಷ್ಟವಾಯಿತು.. ಪ್ರತಿ ಕ್ಷಣದಲ್ಲಿಯೂ ನಾ ಕಾದಂಬರಿಯಲ್ಲಿ ಚಿತ್ರಿಸಿದ್ದ ದೃಶ್ಯಗಳು ಸಿನಿಮಾದಲ್ಲಿ ಆಗ ಬರುತ್ತೆ ಈಗ ಬರುತ್ತೆ ಅಂತ ಕಾದಿದ್ದೆ ಆಯಿತು... ಆದರೆ ನಿಮ್ಮ ಬುದ್ಧಿಮತ್ತೆಗೆ ಮತ್ತು ಸಂಭಾಷಣೆ ಬರೆದವರಿಗೆ ಸಲಾಂ ಹೇಳಬೇಕು. ಕಾರಣ ಎಲ್ಲಾ ಪಂಚ್ ಸಂಭಾಷಣೆಯನ್ನು ಹಾಗೆ ಉಳಿಸಿಕೊಂಡಿದ್ದೀರಾ.. ಅದಕ್ಕೆ ಧನ್ಯವಾದಗಳು ಪುಟ್ಟಣ್ಣನವರೇ.. ಹಾಡುಗಳನ್ನು ಚಿತ್ರಿಸಿದ ರೀತಿ, ನನ್ನ ಕಾದಂಬರಿಯಲ್ಲಿಲ್ಲದ ಒನಕೆ ಓಬವ್ವನ ಕತೆಯನ್ನು ಹಾಡಿನಲ್ಲಿ ಅದ್ಭುತವಾಗಿ ಚಿತ್ರಿಸಿದ ರೀತಿ, ಹೆಸರು ತೋರಿಸುವಾಗ ರಾಮಾಚಾರಿಯ ಗುಣ ವಿಶೇಷಣಗಳನ್ನು ಹೇಳುತ್ತಾ, ಚಾಮಯ್ಯ ಮೇಷ್ಟ್ರು ಮತ್ತು ರಾಮಾಚಾರಿಯ ಅನುಬಂಧವನ್ನು ತೋರಿಸಿದ ರೀತಿಗೆ ಖುಷಿಯಾಯಿತು..

"ಪುಟ್ಟಣ್ಣನವರೇ ಮೇಲೆ ಹೇಳಿದ ಮಾತುಗಳು ನನ್ನ ಮನದಾಳದ ಮಾತುಗಳು.. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಕೇಳಲು ಇಷ್ಟಪಡುತ್ತೇನೆ.. !!!"

"ಸುಬ್ಬರಾಯರೇ ಧನ್ಯವಾದಗಳು. ನಿಮ್ಮ ಮನದಾಳದ ಮಾತುಗಳನ್ನು ಎಷ್ಟು ವಿವರವಾಗಿ ಹೇಳಿದ್ದೀರ.. ನೀವು ಸರಸ್ವತಿ ಪುತ್ರರು.. ನಿಮಗೆ ಅರಿಯದ ವಿಷಯವೇನಿದೆ.. ತಾನು ಹೆತ್ತ ಸುಂದರ ಮಗುವಿನ ಮುಂದಿನ ಹಾದಿ ನಿರೀಕ್ಷೆಗೆ ತಕ್ಕ ಹಾಗೆ ಇಲ್ಲದೆ ಇದ್ದಾಗ ಆಗುವ ಬೇಸರವೇ ನಿಮಗೂ ಆಗಿದ್ದು.. ಅದರಲ್ಲಿ ನಿಮ್ಮ ತಪ್ಪೇನು ಇಲ್ಲ.. ದಯವಿಟ್ಟು ನೊಂದುಕೊಳ್ಳಬೇಡಿ. ನಾಗರಹಾವು ಚಿತ್ರೀಕರಣ ಮುಗಿದು ಸಿನಿಮಾ ಅದ್ಭುತ ಯಶಸ್ಸು ಕಂಡಾಗ.. ನನ್ನನ್ನು ಯಾರೋ ಕೇಳಿದ್ದರು.. ಸುಬ್ಬರಾಯರು ಇದನ್ನು ಕೇರೇ ಹಾವು ಎಂದಿದ್ದಾರೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ  ಏನೂ.. ನಾ ಅವಾಗ ಹೇಳಿದ್ದು ಒಂದೇ ಮಾತು..

"ಮೂರು ಕಾದಂಬರಿಗಳನ್ನು ಓದಿದೆ.. ಪಕ್ಕಕ್ಕಿಟ್ಟೆ.. ಚಿತ್ರಕಥೆ ಬರೆದೆ.. ಅದೇ ನಾಗರಹಾವು"

"ಸುಬ್ಬರಾಯರೇ.. ಒಂದು ಮಾತು.. ಬ್ರಾಹ್ಮಣರ ಮನೆಯ ಊಟ ನೋಡಿದ್ದೀರಾ.. ಊಟ ಮಾಡಿದೀರಾ.. ನಿಮಗೆ ಅರಿವಾಗದ ವಿಷಯವೇನಿದೆ ಹೇಳಿ... ಬಾಳೆ ಎಲೆ ಹಾಕಿ ಅಭ್ಗಾರ ಮಾಡಿದ ಮೇಲೆ.. ಒಂದೊಂದೇ ತಿನಿಸುಗಳನ್ನು ಬಡಿಸುತ್ತಾ ಹೋಗುತ್ತಾರೆ, ಪಾಯಸ, ಕೋಸಂಬರಿ, ಪಲ್ಯ ಉಪ್ಪು, ಉಪ್ಪಿನಕಾಯಿ, ಕಲಸಿದ ಅನ್ನ, ಹಪ್ಪಳ, ಸಂಡಿಗೆ, ಬರಿ ಅನ್ನ, ಅದರ ಮೇಲೆ ತೊವ್ವೆ, ಆಮೇಲೆ ತುಪ್ಪ.. ನಂತರ ಪರಿಶಿಂಚನ ಮಾಡಿ, ಚಿತ್ರಾಹುತಿ ಇಟ್ಟು, ಆಪೋಶನ ತೆಗೆದುಕೊಂಡು ನಂತರ ಊಟ ಶುರುಮಾಡುತ್ತೇವೆ.. ಇಡೀ ಬಾಳೆ ಎಳೆಯಲ್ಲಿ ಅಡಿಗೆ ಪದಾರ್ಥಗಳು ಇದ್ದರೂ, ನಮಗೆ ಇಷ್ಟವಾದದ್ದನ್ನು ತಿನ್ನುತ್ತಾ ಹೋಗುತ್ತೇವೆ.. ನಂತರ ಬರುವ ಸಾರು, ಹುಳಿ, ಮಜ್ಜಿಗೆ ಹುಳಿ, ತೊವ್ವೆ, ಮಜ್ಜಿಗೆ.. ಇದರ ಜೊತೆಯಲ್ಲಿ ಬರುವ ಸಿಹಿ ಖಾದ್ಯಗಳು, ಖಾರದ ಪದಾರ್ಥಗಳು ನಮಗೆ ಏನು ಬೇಕು ಅದು ತಿನ್ನುತ್ತೇವೆ.. ಯಾವುದು ಬೇಡವೋ ಅದನ್ನು ಬಿಡುತ್ತೇವೆ.. ಬೇಕಾದ್ದ ಪದಾರ್ಥಗಳನ್ನು ಕೇಳಿ ಹಾಕಿಸಿಕೊಳ್ಳುತ್ತೇವೆ.. ಬೇಡವಾದದ್ದು ಬಂದಾಗ ಕೈ ಅಡ್ಡ ಇತ್ತು ಬೇಡ ಅನ್ನುತ್ತೇವೆ.."

ಇದೆ ರೀತಿ ನಾನು ನಿಮ್ಮ ಕಾದಂಬರಿಗಳನ್ನು ಓದಿದ ಮೇಲೆ ಮಾಡಿದ್ದು.. ನಿಮ್ಮ ಕಾದಂಬರಿಗಳಲ್ಲಿ ನಾ ಆಯ್ದುಕೊಂಡ ಪಾತ್ರಗಳು.. ರಾಮಾಚಾರಿ, ಅವರ ಅಪ್ಪ, ಅಮ್ಮ.. ಚಾಮಯ್ಯ ಮೇಷ್ಟ್ರು ಅವರ ಹೆಂಡತಿ.. ಅಲಮೇಲು, ಅವರ ಅಪ್ಪ ಅಮ್ಮ, ವರದ, ತುಕಾರಾಂ, ಮೇರಿಯಮ್ಮ, ಮಾರ್ಗರೆಟ್, ವರದರಾಜು, ಪೈಲ್ವಾನ್ ಮತ್ತು ಜಲೀಲ   ಇವಿಷ್ಟು ನನ್ನ ಮನಸ್ಸಿನಲ್ಲಿ ಮೂಡಿದ ಪಾತ್ರಗಳು.. ಅದಕ್ಕೆ ಕೆಲವು ಪಾತ್ರಗಳನ್ನು ಸೇರಿಸಿಕೊಂಡೆ ಮತ್ತು ಕೆಲವು ಪಾತ್ರಗಳನ್ನು ಬದಲಿಸಿಕೊಂಡೆ. ಸಿದ್ಧಬಸಪ್ಪನ ಪಾತ್ರದ ಜೊತೆಗೆ ಇನ್ನು ಎರಡು ಪಾತ್ರಗಳಾಗಿ ಅವನ ಗೆಳೆಯರನ್ನು ಆರಿಸಿಕೊಂಡಿದ್ದೇನೆ, ಫಕೀರಪ್ಪನ ಪಾತ್ರಕ್ಕೆ ಬದಲಾಗಿ ನಾಜೂಕಯ್ಯನ ಪಾತ್ರ ಸೇರಿಸಿದೆ, ಶಾಲೆಯ ಮಾಸ್ತರಿಗೆ ಬದಲು ಪ್ರಿನ್ಸಿಪಾಲ ಶಾಮರಾಯರನ್ನು ಕರೆತಂದೆ.. ಶಾಲೆಯ ಬದಲಿಗೆ ಕಾಲೇಜು ತಂದೆ..  ಪ್ರೀತಿ ಪ್ರೇಮ ಎಂದು ಮಾರ್ಗರೆಟ್ ಮತ್ತು ಅಲಮೇಲು ಜೊತೆಯಲ್ಲಿ ನೆಡೆವ ಪ್ರಸಂಗಗಳನ್ನು ಒಳಗೆ ತರಲಿಲ್ಲ.. ವರದರಾಜುವಿನ ಇತಿಹಾಸ, ಮೇರಿಯಮ್ಮನ ಇತಿಹಾಸ, ಚಾಮಯ್ಯ ಮೇಷ್ಟ್ರ ಇತಿಹಾಸ, ಪ್ಲೇಗ್, ಸಿನಿಮಾ ಟೆಂಟ್ ಇವುಗಳನ್ನು ಬೇಡವೆಂದು ಬಿಟ್ಟೆ. ಶಾಲೆಯ ದಿನಗಳಲ್ಲಿ ರಾಮಚಾರಿ ಮತ್ತು ಸಂಗಡಿಗರ ತುಂಟತನ ವನ್ನು ಟೈಟಲ್ ಕಾರ್ಡ್ ತೋರಿಸುವಾಗ ಬರಿ ರಾಮಚಾರಿಯನ್ನಷ್ಟೇ ಮುಖ್ಯವಾಗಿಟ್ಟುಕೊಂಡು.. ಅವನ ಒಂದೆರಡು ಚೇಷ್ಟೆಗಳನ್ನು ಮಾತ್ರ ತೋರಿಸಿದೆ..ಮಿಕ್ಕಂತೆ ಹಾಡುಗಳು ನಮ್ಮ ಭಾರತದ ಸಿನಿಜಗತ್ತಿನ ಮುಖ್ಯ ಭಾಗಗಳು .. ಹಾಗಾಗಿ ರಾಮಾಚಾರಿಯ ಗುಣ ವಿಶೇಷತೆ ತಿಳಿಸಲು "ಹಾವಿನ ದ್ವೇಷ ಹನ್ನೆರಡು ವರುಷ" ಹಾಡು ಬಂತು.. ರಾಮಾಚಾರಿ ಮತ್ತು ಅಲಮೇಲುವಿನ ಪ್ರೀತಿ ಗುರುತಿಸಲು "ಕರ್ಪೂರದ ಗೊಂಬೆ ನಾನು" ಹಾಡು ಬರಬೇಕಾಯಿತು.. ಒಂದು ಗಂಡು ಎರಡು ಹೆಣ್ಣು .. ಇದರಲ್ಲಿ ಆಯ್ಕೆ ಎನ್ನುವ ಪ್ರಶ್ನೆ ಬಂದಾಗ.. ರಾಮಾಚಾರಿಗೆ ಸ್ಪಷ್ಟತೆ ಸಿಕ್ಕಿ ಅಲಮೇಲುವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಆ ಸಂದರ್ಭಕ್ಕೆ "ಬಾರೆ ಬಾರೆ ಚಂದದ ಚೆಲುವಿನ  ತಾರೆ" ಹಾಡು ತೋರಿಸಿದೆ..

ಮಧ್ಯದಲ್ಲಿಯೇ ಸುಬ್ಬರಾಯರು "ಪುಟ್ಟಣ್ಣನವರೇ ಒಂದು ಮಾತು.. ನಿಮ್ಮನ್ನು ಮೆಚ್ಚಿದ್ದು ಬಾರೆ ಬಾರೆ ಹಾಡಿನ ಚಿತ್ರೀಕರಣ.. ಸ್ಲೋ ಮೋಷನ್ ನಲ್ಲಿ ಹಾಡನ್ನು ಚಿತ್ರೀಕರಿಸಿರುವುದು ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲು.. ನಿಮ್ಮ ಮಾತಿಗೆ ಕೊಂಚ ತಡೆ ಮಾಡುತ್ತಿದ್ದೇನೆ .. ಈ ಹಾಡಿನ ಬಗ್ಗೆ ಹೇಳಿ.. ಅಲಮೇಲುವನ್ನು ಸ್ಲೋ ಮೋಷನ್ ನಲ್ಲಿ.. ರಾಮಾಚಾರಿಯನ್ನು ಸಹಜ ವೇಗದಲ್ಲಿ ಚಿತ್ರೀಕರಿಸಿದ್ದರ ಬಗ್ಗೆ ಹೇಳಿ.. ಆಮೇಲೆ ನಿಮ್ಮ ಪ್ರತಿಕ್ರಿಯೆ ಮುಂದುವರೆಸಿ .. ಆಗಬಹುದೇ"

"ಆಗಬಹುದು ಸುಬ್ಬರಾಯರೇ.. ಕಾದಂಬರಿ ಬರೆದು ಇಂತಹ ಅದ್ಭುತ ಚಿತ್ರ ಮಾಡುವ ಅನುಕೂಲ ಮಾಡಿಕೊಟ್ಟಿದ್ದೀರಾ. .ಖಂಡಿತ ಹೇಳುವೆ.. ರಾಮಚಾರಿ ಆವೇಗಕ್ಕೆ ಸದಾ ಒಳಗಾಗುವ ವ್ಯಕ್ತಿತ್ವ . ಅವನು ಯಾರ ಮಾತಿಗೂ ಬಗ್ಗುವವನಲ್ಲ.. ಹರಿವ ನೀರಿದ್ದ ಹಾಗೆ.. ನೀರಿಗೆ ತಡೆ ಮಾಡೋಕೆ ಆಗುತ್ತಾ.. ಖಂಡಿತ ಇಲ್ಲ.. ಆ ದೃಷ್ಠಿ ಇಟ್ಟುಕೊಂಡು ರಾಮಾಚಾರಿಯ ದೃಶ್ಯವು ಸಹಜವಾದ ವೇಗದಲ್ಲಿದೆ.. ಅದೇ ಅಲುಮೇಲು ಸಮಾಜದ ಕಟ್ಟುಪಾಡಿಗೆ ಬಾಗಬೇಕಾದವಳು, ಅಪ್ಪ, ಅಮ್ಮ, ವರದ ಹದ್ದು ಕಾಯ್ದಂತೆ ಅವಳನ್ನು ಕಾಯುತ್ತಿದ್ದವರು.. ಹಾಗಾಗಿ ಅವಳು ತಗ್ಗಿ ಬಗ್ಗಿ ನಿಧಾನಕ್ಕೆ ನೆಡೆಯಬೇಕು ಎನ್ನುವುದನ್ನು ಸ್ಲೋ ಮೋಷನಿನಲ್ಲಿ ಚಿತ್ರಿಸಿದ್ದೇವೆ.. "

"ಭಲೇ ಭಲೇ.. ಅದ್ಭುತ ವಿವರಣೆ. ಹಾ ಸರಿ ಮುಂದುವರೆಸಿ"

"ರಾಮಚಾರಿಯ ಸಂಸಾರದಲ್ಲಿ ಹೆಚ್ಚು ಮಂದಿಯನ್ನು ಸೇರಿಸದೆ, ಅಪ್ಪ ಅಮ್ಮ ಇವನು ಮೂವರನ್ನೇ ಉಳಿಸಿಕೊಂಡೇ.. ಮನೆಗೆ ಸಹಾಯ ಮಾಡದವನು ಮಗನಲ್ಲ ಎಂದು ದೂರುವ ಅಪ್ಪ ಅಮ್ಮನಿಗೆ ಸ್ವಲ್ಪ ಆಧಾರವಾಗಿರಲು ಗೈಡ್ ಕೆಲಸ ಮಾಡುತ್ತಾ ಚಿತ್ರದುರ್ಗದ ಒನಕೆ ಓಬವ್ವನ ಕತೆಯನ್ನು ಸೇರಿಸಿ ದುರ್ಗ ಎಂದರೇನು ಹೇಗಿರುತ್ತೆ ಎಂದು ಕರುನಾಡಿಗೆ ತಿಳಿಸಬೇಕಿತ್ತು ಅದಕ್ಕೆ "ಕನ್ನಡ ನಾಡಿನ ವೀರರಮಣೀಯ" ಹಾಡು ಬಂತು.. ಅಲಮೇಲು ಮದುವೆಯಾಯಿತು.. ಬೇರೆ ದಾರಿ ಕಾಣದೆ ರಾಮಾಚಾರಿ ನಿಧಾನವಾಗಿ ಮಾರ್ಗರೇಟ್ ಪ್ರೇಮಕ್ಕೆ ಮಣಿಯುತ್ತಾನೆ.. ಎರಡು ಬೇರೆ ಬೇರೆ ಧರ್ಮ ಅದರ ಸಂಗಮವಾಗುತ್ತಿದೆ ಎಂದು "ಸಂಗಮ ಸಂಗಮ" ಹಾಡು ಚಿತ್ರೀಕರಿಸಿದೆ.. ಅಲಮೇಲುವಿನ ಮದುವೆ ಬಲವಂತದ ಮದುವೆ ಜೊತೆಯಲ್ಲಿ ಒಲ್ಲದ ಗಂಡ ತನ್ನ ಆಸೆ ಪೂರೈಸಿಕೊಂಡ ಮೇಲೆ ಅವಳನ್ನು ವ್ಯಾಪಾರದ ಸರಕಾಗಿ ಬಳಸಿಕೊಳ್ಳುವುದು ಮತ್ತು ಅವಳ ದುರಂತ ಕತೆಯನ್ನು "ಕತೆ ಹೇಳುವೆ ನನ್ನ ಕತೆ ಹೇಳುವೆ" ಎಂದು ತೋರಿಸಿದ್ದೇನೆ.. ಅಲಮೇಲು ರಾಮಚಾರಿಯನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳಲು "ರಾಮಚಾರಿ ನೀ ಅಣ್ಣ ಅಂತ ಹೇಳಿದೆ.. ಆದರೆ ನಿನಗೆ ಆ ಸ್ಥಾನ ಕೊಟ್ಟಿಲ್ಲ.. ಈಗಲೂ ನನ್ನ ಜೊತೆ ಬಾಳುವೆ ಎಂದು ಹೇಳು.. ಇದನ್ನೆಲ್ಲಾ ಬಿಟ್ಟು ನಿನ್ನ ಜೊತೆ ಬಂದು ಬಿಡುತ್ತೇನೆ.. " ಎನ್ನುವ ಮಾತಿನಲ್ಲಿ ತೋರಿಸಿದ್ದೇನೆ.. ರಾಮಚಾರಿ ಈಗ ಮಾರ್ಗರೇಟ್ ಜೊತೆಯಲ್ಲಿ ಪ್ರೀತಿಸುತ್ತಿದ್ದಾನೆ ಎಂದು ತಿಳಿದ ಅವಳು "ಎಂಥಹ ;ಪರಿಸ್ಥಿತಿಯಲ್ಲಿಯೂ ಅವಳನ್ನು ಕೈಬಿಡಬೇಡ ಎಂಬ ಮಾತೆ ಚಾಮಯ್ಯ ಮೇಷ್ಟರ ಅವಸಾನಕ್ಕೆ ಕಾರಣವಾಗುತ್ತೆ.. ನಿಮ್ಮ ತ್ರಿವಳಿ ಕಾದಂಬರಿ ಓದಿ ನನಗೆ ಮೂಡಿಬಂದ ಕತೆಯ ಎಳೆ ಇದು.. ಅದನ್ನೇ ಜೋಪಾನವಾಗಿ ಹರಡಿ... ಶಾಲೆಯ ಬದಲಿಗೆ ಕಾಲೇಜು ತಂದೆ.. ರಾಮಾಚಾರಿಯ ತುಂಟತನ, ಹಠ ತೋರಿಸಲು ಶಾಮರಾಯರನ್ನು ಕಂಬಕ್ಕೆ ಕಟ್ಟುವ ದೃಶ್ಯ. ಜಲೀಲನ ಜೊತೆ ಗುದ್ದಾಟ.. ಇವುಗಳನ್ನು ಸೇರಿಸಿದೆ.. ಮಂಡಿ ಸಾಹುಕಾರನ ಬಳಿ ಕೆಲಸ ಕೊಡಿಸಲು ಪೈಲ್ವಾನ್ ಅವರ ಶಿಫಾರಸ್ಸಿನ ದೃಶ್ಯ ಹಾಗೆ ಇದೆ.. ಜೊತೆಯಲ್ಲಿ ಮಂಡಿ ಸಾಹುಕಾರನ ಗೆಳೆಯರನ್ನು ಸೇರಿಸಿದೆ.. ಇನ್ನೂ ತುಕಾರಾಂ ಮಾಡುವ ಗದ್ದಲಗಳು.. ಅವನು ಚಾಮಯ್ಯ ಮೇಷ್ಟ್ರಿಗೆ ರಾಮಾಚಾರಿಯ ಬಗ್ಗೆ ಹೇಳುವ ಚಾಡಿಮಾತು.. ಇವೆಲ್ಲಾ ಎಷ್ಟು ಬೇಕೋ ಅಷ್ಟು ತೆಗೆದುಕೊಂಡಿದ್ದೀನಿ.. ರಾಮಾಚಾರಿಯ ಪಾತ್ರವನ್ನು ಆರಂಭದಿಂದ ಕಡೆಯ ತನಕ ಯಾರಿಗೂ ಬಾಗದ ಅಸಾಮಿಯಾಗಿ ಚಿತ್ರಿಸಬೇಕೆಂದುಕೊಂಡಿದ್ದೆ.. ಸಾಮಾನ್ಯ ಚಿತ್ರದ್ ಅವಧಿ ಎರಡೂವರೆ ಅಥವಾ ಎರಡೂ ಮುಕ್ಕಾಲು ಘಂಟೆಯಲ್ಲಿ ಸಿನಿಮಾ ಮಾಡಬೇಕು... ತುಸು ಹೆಚ್ಚಾದರೂ ಜನರಿಗೆ ಬೋರ್ ಆಗಬಾರದು ನಿಮ್ಮ ಕತೆಯಲ್ಲಿ ಬರುತ ಹಲವಾರು ದೃಶ್ಯಗಳನ್ನು ಬಿಟ್ಟಿದ್ದೇನೆ.. ಶಾಲೆಯಿಂದ ಕಾಲೇಜಿಗೆ ವರ್ಗ ಮಾಡಿದ್ದು ಕೂಡ ಇದೆ ಕಾರಣಕ್ಕೆ.. ಶಾಲೆಯಲ್ಲಿ ಪ್ರೀತಿ ಪ್ರೇಮ ಈ ವಿಷಯಗಳು ಆಗಿನ ಕಾಲಕ್ಕೆ ಸರಿ ಹೊಂದುತ್ತಿರಲಿಲ್ಲ ಎನ್ನುವ ಭಾವ ಹೊತ್ತು ಕಾಲೇಜಿನಿಂದ ಕತೆ ಆರಂಭಿಸಿದೆ.. ಎಂದು ಇದು ನನ್ನ ವಿವರಣೆ ಸುಬ್ಬರಾಯರೇ.. "

"ಬೇಕಾದಷ್ಟು ಆಯ್ತು ಬಿಡಿ.. ಸುಂದರವಾಗಿದೆ ನಿಮ್ಮ ವಿವರಣೆ.. ಇರಲಿ ಬಿಡಿ. ನಾನು ಬರೆದದ್ದು ಲಕ್ಷ ಜನರಿಗೆ ತಲುಪಿತ್ತು.. ನೀವು ಚಿತ್ರೀಕರಿಸಿದ ಚಿತ್ರ ಕೋಟ್ಯಾಂತರ ಜನರಿಗೆ ತಲುಪಿದೆ.. ಹೋಗಲಿ ಬಿಡಿ ಆದದ್ದು ಆಯ್ತು.. ಅಂದ ಹಾಗೆ ನಾಗರಹಾವು ಹೊಸ ರೂಪದಲ್ಲಿ, ಹೊಸ ತಂತ್ರಜ್ಞಾನದಲ್ಲಿ ಮೂಡಿ ಬಂದಿದೆಯಂತೆ.. ಬನ್ನಿ ಇಬ್ಬರೂ ನೋಡಿ ಬರೋಣ.. "

"ಧನ್ಯವಾದಗಳು ಸುಬ್ಬರಾಯರೇ.. ಹೇಗೋ ನಿಮ್ಮ  ಮನಸ್ಸಿಗೆ ಸಂತಸ ಉಂಟು ಮಾಡಿತು ಅಂದರೆ ಅದಕ್ಕಿಂತ ಭಾಗ್ಯವೇನಿದೆ ಹೇಳಿ.. ನೆಡೆಯಿರಿ.. ನಾಗರಹಾವು ಕತೃವಿನ ಜೊತೆಯಲ್ಲಿ ಸಿನಿಮಾ ನೋಡುವ ಸದವಕಾಶ ನನಗೆ ಒದಗಿಸಿಕೊಟ್ಟ ನಿಮಗೆ ಅನಂತ ಧನ್ಯವಾದಗಳು!!!

(ಹೇಳಬೇಕಿಲ್ಲ... ಆದರೂ ಹೇಳುತ್ತೇನೆ.. ಇದೊಂದು ಕಾಲ್ಪನಿಕ ಬರಹ.. ಸುಬ್ಬರಾಯರ ಮಸಣದ ಹೂವು, ಚಂದವಳ್ಳಿಯ ತೋಟ ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪ ಮತ್ಸರ, ಚಂದನದ ಗೊಂಬೆ ಹೀಗೆ ಹತ್ತು ಹಲವಾರು ಸಿನೆಮಾಗಳಾಗಿರುವ ಅವರ ಕಾದಂಬರಿ ಆಧಾರಿತ ಚಿತ್ರಗಳನ್ನು ನೋಡಿದ್ದೇನೆ.. ಅಪಾರ ಗೌರವವಿದೆ ತ ರಾ ಸು ಅವರಲ್ಲಿ ಮತ್ತು ಅವರ ಬರವಣಿಗೆಯಲ್ಲಿ.. ಅದೇ ರೀತಿ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅದ್ಭುತ ಚಿತ್ರಗಳು ಅವರ ತಾಂತ್ರಿಕ ಅಂಶಗಳಿಗೆ ಕೊಡುವ ಪ್ರಾಮುಖ್ಯತೆ, ಹಾಡುಗಳು ಸಂಭಾಷಣೆ, ದೃಶ್ಯವನ್ನು ಕಟ್ಟಿ ಕೊಡುವ ಅವರ ಪ್ರಬುದ್ಧತೆ ಇವುಗಳನ್ನು ಕಂಡು ಅವರ ಅಭಿಮಾನಿಯಾಗಿದ್ದೇನೆ.. ಈ ಇಬ್ಬರು ಕಲಾ ದಿಗ್ಗಜರು ಮಾತಾಡಿರಬಹುದು ಎನ್ನುವ ಒಂದು ಕಾಲ್ಪನಿಕ ಯೋಚನೆ ಮೂಡಲು ಕಾರಣ ಇವರಿಬ್ಬರು.. ಇವರ ಕೊಟ್ಟ ಶಕ್ತಿ ಮತ್ತು ಪ್ರೋತ್ಸಾಹವೇ ಈ ಬರವಣಿಗೆಗೆ ಮೂಲ ಪ್ರೇರಕ ಅಂತ ನಾ ನಿಸ್ಸಂಕೋಚವಾಗಿ ಹೇಳುವೆ. .. ಮತ್ತು ಈ ಲೇಖನ ಶ್ರೀಯುತ ತ ರಾ ಸುಬ್ಬರಾಯರಿಗೆ ಮತ್ತು ಶ್ರೀಯುತ ಪುಟ್ಟಣ್ಣ ಕಣಗಾಲ್   ಅವರ ಚರಣಕಮಲಗಳಿಗೆ ಸಮರ್ಪಿತ!!!)

Sunday, October 21, 2018

ನಾದ ನಮನ ಸುಂದರ ಸಂಜೆ !!!

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ತಾಲೂಕಿನ ಬಳಿಯ ಕಣಗಾಲ್  ಎಂಬ ಪುಟ್ಟ ಗ್ರಾಮದ ಒಂದು ಹಳ್ಳಿಯ ಮನೆಯ  ಜಗಲಿಯ ಮೇಲೆ ಮೂರು ಬಾಲಕರು ಚೌಕಾಭಾರ ಆಟವಾಡುತ್ತಿದ್ದರು.. 

ಕಣಗಾಲ್ ಸಹೋದರರು ಆಡಿ ಬೆಳೆದ ಮನೆ!
"ಹೋಗ್ರೋ ಆಟವಾಡಿದ್ದು ಸಾಕು.. ಸ್ವಲ್ಪ ಗುಡಿಯ ಕಸಗುಡಿಸಿ ಬನ್ರೋ" ಎಂದು ಅವರ ಅಪ್ಪ ಹೇಳಿದ್ದು ಕೇಳಿ.. ಮೂವರು ಪರಕೆಯನ್ನು ಹಿಡಿದು.. ಆ ಊರಿನ ಮುಖ್ಯ  ದೇಗುಲದ ಅಂಗಳವನ್ನು ಶ್ರದ್ದೆಯಿಂದ ಸ್ವಚ್ಛಗೊಳಿಸಿ ಮತ್ತೆ ಆಡಲು ಜಗಲಿಗೆ ಬಂದರು.. 
ಆ ಊರಿನ ಜನತೆ ಹೇಳುವ ಪ್ರಕಾರ ಕಣಗಾಲ್ ಸಹೋದರರು ಸದಾ ಈ ಗುಡಿಗೆ ಬರುತ್ತಿದ್ದರು 

ಆಟ ಕುತೂಹಲಕಾರಿಯಾಗಿತ್ತು.. ಅಷ್ಟರಲ್ಲಿ ಟುರ್ ಟುರ್ ಟ್ರಾ ಎನ್ನುತ್ತಾ ಜೋಗಿ ಸಿದ್ದರು ಮನೆಯ ಮುಂದೆ ಬಂದು.. "ಏನ್ರಪ್ಪ ಹೇಗೆ ನೆಡಿತಿದೆ ಆಟ" ಎಂದಾಗ.. ಅವರಲ್ಲಿ ದೊಡ್ಡ ಬಾಲಕ.. 
ನೆಡೆದಾಡಿ ಹೆಜ್ಜೆ ಗುರುತು ಮೂಡಿಸಿದ ಹಾದಿ 
"ಚೆನ್ನಾಗಿ ನೆಡಿತಿದೆ ಸ್ವಾಮ್ಗಳೇ .. ನೀವು ಭವಿಷ್ಯ ಹೇಳ್ತಿರಂತೆ.. ಯಾರೂ ಗೆಲ್ತಾರೆ ಅಂತ ಹೇಳಿ ಸ್ವಾಮ್ಗಳೇ"

ಆ ಜೋಗಿ ಸಿದ್ಧರು ನಗುತ್ತಾ.. 

"ಮಕ್ಕಳೆ . ನಿಮಗೆ ಈ ಆಟದ ಭವಿಷ್ಯ ಬೇಡ .ನಿಮ್ಮ ಭವಿಷ್ಯ ಹೇಳುತ್ತೇನೆ ಕೇಳಿ.. ದೊಡ್ಡವ ನೀನು...  ನಿನ್ನ ಹೆಸರು ಪ್ರಭಾಕರ ಶಾಸ್ತ್ರಿ ಅಲ್ಲವೇ.. ?..

ಚಕಿತನಾದ ಹುಡುಗ "ಹೌದು.. ನಿಮಗೆ ಹೇ.. " ಮಾತಿನ್ನೂ ಮುಗಿದಿರಲಿಲ್ಲ.. 

"ಇವನು ಪುಟ್ಟಣ್ಣ.. ಇವನು ನರಸಿಂಹ" ಎಂದು ಎರಡನೇ ಮತ್ತು ಮೂರನೇ ಬಾಲಕರ ಹೆಸರು ಹೇಳಿದಾಗ ..ಆಡುತ್ತಿದ್ದ ಕವಡೆಯನ್ನು ಹಾಗೆ ಇಟ್ಟು ಮೂವರು ಜಗಲಿಯಿಂದ ರಸ್ತೆಗೆ ನೆಗೆದರು .. ಮಳೆ ಬಂದು ತೊಪ್ಪೆಯಾಗಿದ್ದ ಮಣ್ಣಿನ ರಸ್ತೆ.. ಮಕ್ಕಳಿಗೆ ಬಟ್ಟೆ ಕೊಚ್ಚೆಯಾಗುತ್ತೆ ಎಂಬ ಅರಿವಿರಲಿಲ್ಲ.. ಅವರಿಗಿದ್ದದ್ದು ಕುತೂಹಲ... 

ದೊಡ್ಡವ "ಹೇಳಿ ಸ್ವಾಮಿಗಳೇ.. ನಮ್ಮ ಪರಿಚಯ ನಿಮಗೆ ಹೇಗೆ.. ನೀವು ಯಾರು.. ಎಲ್ಲಿಂದ ಬಂದಿರಿ.. ಹೇಗೆ ಬಂದಿರಿ.. ? ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಾಗ.. 

ನಗುತ್ತ "ಬಾಲಕ.. ಆ ಪ್ರಶ್ನೆಗಳಿಗೆಲ್ಲ ಉತ್ತರ ಬೇಡ. .. ನಿಮಗೊಂದು ಭವಿಷ್ಯದಲ್ಲಿ ನೆಡೆಯುವ ಘಟನೆಯನ್ನು ಪೋಣಿಸಿ.. ಒಂದು ಘಟನೆಯನ್ನು ಹೇಳುತ್ತೇನೆ ಕೇಳಿ.. "

ಮೂವರು ಮೈಯೆಲ್ಲಾ ಕಿವಿಯಾಗಿ ಕೇಳುತ್ತಾ ಕುಳಿತರು.. ಪ್ರಪಂಚವೇ ಅವರಿಗೆ ಈ ಜೋಗಿ ಸಿದ್ಧರಾಗಿದ್ದರು.. ಅದು ಬಿಟ್ಟು ಮಿಕ್ಕಿದ್ದೆನು ಅವರ ಕಿವಿಗೆ ಕಣ್ಣಿಗೆ ಬೀಳುತ್ತಿರಲಿಲ್ಲ.. 

"ಬೆಂಗಳೂರಿನ ಸಾಂಸ್ಕತಿಕ ತಾಣ ರವೀಂದ್ರ ಕಲಾಕ್ಷೇತ್ರ.. ಅಲ್ಲಿ ಶ್ರೀ ವಿಳಂಬಿ ನಾಮ ಸಂವತ್ಸರ ದಕ್ಷಿಣಾಯಣ ಶರಧೃತು ಆಶ್ವಯುಜ ಮಾಸ ಶುಕ್ಲ ಪಕ್ಷದ ದಶಮಿಯಂದು ಒಂದು ಸುಂದರ ಸಮಾರಂಭ.. ಪ್ರಭಾಕರ ನಿನ್ನ "ಸಾವಿ"ರದ ಗೀತೆಗಳನ್ನು ಸಕಿ ಸಮೂಹ ಸಂಸ್ಥೆಗಳು "ನಾದ ನಮನ" ಎಂಬ ಸುಂದರ ಕಾರ್ಯಕ್ರಮದಲ್ಲಿ ಆಯೋಜಿಸುತ್ತಾರೆ.. ಅಲ್ಲಿ ನಿನ್ನ ಬಗ್ಗೆ ಮಾತಾಡುವುದಷ್ಟೇ ಅಲ್ಲದೆ.. ನಿನ್ನ ಗೀತೆಗಳ ಗಾಯನ ಇರುತ್ತದೆ ಮತ್ತು ನಿನ್ನ ಜೀವನದ ಸ್ಮರಣೀಯ ಕ್ಷಣಗಳ ಶ್ಲಾಘನೆ ನೆಡೆಯುತ್ತದೆ.. ನೆರೆದಿರುವ ನಿನ್ನ ಅಭಿಮಾನಿಗಳು ನಿನ್ನ ನೆನಪನ್ನು ಹೃದಯದಲ್ಲಿ ಹೊತ್ತು ಮನೆಗೆ ಹೋಗುತ್ತಾರೆ..ಆ ಒಲವಿನ ನೆನಪೇ ಹೃದಯಕೆ ಮಧುರ ಒಲವೇ ದೈವದ ಸಾಕ್ಷಾತ್ಕಾರ ಎನ್ನುತ್ತಾ ನಿನ್ನ ಗುಣಗಾನ ಮಾಡುತ್ತಾರೆ" ಎನ್ನುತ್ತಾ ಮುಂದಿನ ಮನೆಯ ಕಡೆ ಹೆಜ್ಜೆ ಇಟ್ಟರು.. 

ಬಾಲಕನಿಗೆ ಅರ್ಥವಾಗಲಿಲ್ಲ.. ಮೂರು ಘಂಟೆಯ ಸಿನೆಮಾವನ್ನು ಒಂದು ಹತ್ತು ಕ್ಷಣದಲ್ಲಿ ಹೇಳಿದಂತೆ ಭಾಸವಾಯಿತು.. ಆರಂಭ ಮಧ್ಯಭಾಗ ಅಂತ್ಯ ಎಲ್ಲವೂ ಗೊಂದಲಮಯ.. ಅವರನ್ನೇ ಹಿಂಬಾಲಿಸಿ  "ಸ್ವಾಮಿಗಳೇ ಅದೇನು ಸರಿಯಾಗಿ ಹೇಳಿ.. ಭವಿಷ್ಯ ಹೇಳುತ್ತೀನಿ ಅಂದ್ರಿ .. ಭವಿಷ್ಯ ಹೇಳಲಿಲ್ಲ ..ಘಟನೆ ಹೇಳುತ್ತೀನಿ ಅಂದ್ರಿ.. ಘಟನೆಯನ್ನು ಪೂರ್ತಿ ಹೇಳಲಿಲ್ಲ.. ಏನು ವಿಷಯ ಹೇಳಿ.. "

ಟುರ್ ಟುರ್ ಟ್ರಾ ಎಂದು ಸದ್ದು ಮಾಡುತ್ತಾ "ಮಗೂ ನೀನು ಪ್ರಭಾಕರ.. ಕಣಗಾಲ್ ಪ್ರಭಾಕರ ಶಾಸ್ತ್ರೀ ಎಂದು ಕನ್ನಡದ ಚಿತ್ರ ಜಗತ್ತಿನಲ್ಲಿ ಬರಹಗಾರ, ನಟ, ನಿರ್ದೇಶಕ, ನಿರ್ಮಾಪಕ, ಅದ್ಭುತ ಸಾಹಿತಿ ಎಂದು ಹೆಸರು ಮಾಡುತ್ತೀಯ.. ನಿನ್ನ ಬರವಣಿಗೆ ನಿನಗೆ ಉತ್ಸಾಹ ತುಂಬುತ್ತದೆ, ಶಕ್ತಿ ಕೊಡುತ್ತದೆ.. ಕನ್ನಡ ಚಿತ್ರ ಜಗತ್ತಿನಲ್ಲಿ ಅಪರೂಪದ ವ್ಯಕ್ತಿಯಾಗುತ್ತೀಯ.. ಅಂದಿನ ಕಾರ್ಯಕ್ರಮದ ಬಗ್ಗೆ ತುಸು ಮಾತು..ಪುಟ್ಟದಾಗಿ ಹೇಳುವೆ.. ಕೇಳು.. "

                                                                    ****
ಪರದೆ ಸರಿಯುತ್ತದೆ.. ನಿನ್ನ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆಯಾಗುತ್ತದೆ.. ನಿನ್ನ ಬಂಧುಗಳು ಅದನ್ನು ನೋಡಿ ಭಾವುಕರಾಗುತ್ತಾರೆ.. ನಿನ್ನ ಪುಟ್ಟ ಪರಿಚಯವಾಗುತ್ತದೆ.. ನಂತರ ಕಾರ್ಯಕ್ರಮ ಶುರು.. 

"ಶ್ರೀ ಚಾಮುಂಡೇಶ್ವರಿ ಅಮ್ಮ ಶ್ರೀ ಚಾಮುಂಡೇಶ್ವರಿ"  ಹಾಡಿಗೆ ಅದ್ಭುತ ನೃತ್ಯ ಮಾಡುವ ಮಕ್ಕಳು.. 
"ಆಡೋಣ ಒಲವಿನ ರಾಗಮಾಲೆ" ಎನ್ನುತ್ತಾ ಜೀವನದ ಉತ್ಸಾಹಕ್ಕೆ ತುಂಬುವ "ಶುಭ ಮಂಗಳ ಸುಮುಹೂರ್ತವೇ"  ಎಂದು ಜೀವನದಲ್ಲಿ ಸಂತಸ ತುಂಬಿಕೊಳ್ಳುತ್ತಾ ಪ್ರೇಮವಿಲ್ಲದೇ ಇರಲು ಸಾಧ್ಯವೇ.. ಅಸಾಧ್ಯ ಎಂದು "ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ" ಎನ್ನುತ್ತಾ ಪ್ರೇಮದ ಅದ್ಭುತ ಶಕ್ತಿಯನ್ನು ಹೊಗಳಬೇಕಾದರೆ ತಿರುಪತಿ ಗಿರಿವಾಸನ ಕೃಪೆ ಸದಾ ಇರಬೇಕು ಕಣಯ್ಯಾ ಎಂದು "ತಿರುಪತಿ ಗಿರಿವಾಸ ಶ್ರೀ ವೆಂಕಟೇಶ.. ನೀ ಒಲಿದ ಮನೆ ಮನೆಯೂ ಲಕ್ಷ್ಮಿ ನಿವಾಸ" ಎಂದ ಮೇಲೆ.. ಇನ್ನೇನೂ "ಅತಿ  ಮಧುರ ಅನುರಾಗ ಜೀವನ ಸಂಧ್ಯಾರಾಗ" ಆಗಲೇ ಬೇಕಲ್ಲವೇ.. ಜೀವನದಲ್ಲಿ ಆನಂದ ತುಂಬಿ ಹರಿಯುವಾಗ ಕರುನಾಡಿನ ಜೀವನದಿ ಕಾವೇರಿಯ ಬಣ್ಣನೆ ಮಾಡುತ್ತಾ "ಕೊಡಗಿನ ಕಾವೇರಿ.. ಕಾವೇರಿ ನೀ ಬೆಡಗಿನ ವೈಯ್ಯಾರಿ" ಎನ್ನುತ್ತಾ ಸಂಗಾತಿಯನ್ನು ಮತ್ತು ಜೀವನದಿಯನ್ನು ಬಣ್ಣಿಸುತ್ತಾ ಸಾಗುವ ಹಾಡು ಬರೆದ ನೀನು . ದೇಶದ ಸ್ಥಿತಿಯನ್ನು ಕಂಡು ಯುವ ಪೀಳಿಗೆಗೆ ಸಂದೇಶ ನೀಡುವ "ಇಂದಿನ ಹಿಂದೂ ದೇಶದ ನವ ಯುವಕರೇ ನವ ಯುವತಿಯರೇ" ಎಂದು ಬರೆದ ಹಾಡು ಅಮರವಾಗುತ್ತೆ.. ಈ ಪೀಳಿಗೆಗೆ ಸರಿದಾರಿಯಲ್ಲಿ ನೆಡೆಸುವ ಮೊದಲ ಗುರುಗಳು ತಂದೆ ತಾಯಿಯರು.. ಅವರ ಮಹತ್ವವನ್ನು "ತಾಯಿಯ ತಂದೆಯ ಮಮತೆ ವಾತ್ಸಲ್ಯ"  ಎಂದು ಹೃದಯದಲ್ಲಿ ಮಮತೆಯ ಝೇಂಕಾರ ಹುಟ್ಟಿಸುತ್ತಾ "ನಾನು ನೀನು ಜೋಡಿ.. ಒಲವೇ ನಮ್ಮಯ ಒಡನಾಡಿ" ಎಂದು ಆ ಮಧುರ ಪ್ರೇಮಕ್ಕೆ ನಮನ ಹೇಳುತ್ತಾ .. ಆ ನಾದ ಸರಸ್ವತಿಗೆ ತಲೆಬಾಗುತ್ತಾ ನಟರಾಜನನ್ನು ಹೊಗಳುತ್ತಾ "ನಟನ ವಿಶಾರದ ನಟಶೇಖರ" ಎನ್ನುವ ನಿನ್ನ ಮನಸ್ಸು ಸದಾ ಹೇಳುವುದು ಕನ್ನಡ ಭಾಷೆಯ ಬಗ್ಗೆ "ಒಲವಿನ ಪ್ರಿಯಲತೆ ಅವಳದೇ ಚಿಂತೆ.. ಅವಳ ಮಾತೆ ಮಧುರ ಗೀತೆ.. ಅವಳೇ ಎನ್ನ ದೇವತೆ" ಎನ್ನುವ ನಿನ್ನ ಕರುನಾಡ ಅಭಿಮಾನ ಸದಾ ಅಮರ ಮಧುರ.. ಅಮರ ಪ್ರೇಮಿಗಳನ್ನು ಸದಾ ಉಲ್ಲಸಿತವಾಗಿಡುವ "ಸುವ್ವಿ ಸುವ್ವಿ ಸುವ್ವಾಲೆ" .. ಪ್ರೇಮ ಒಂದು ದೇವರು ಅದಕ್ಕೆ ಕೈ ಮುಗಿಯುವ "ಶರಣೆಂಬೆನಾ ಶಶಿ ಭೂಷಣ".. ಈ ನಾಡಿನ ಮಣ್ಣಲ್ಲಿ ಹುಟ್ಟಿದ್ದೇ ನನ್ನ "ಬಹುಜನ್ಮದ ಪೂಜಾಫಲ" ಎನ್ನುವ ನಿನ್ನ ಮಾತು ಸದಾ ಗುನುಗುನಿಸುತ್ತದೆ..ಹರನಿಗೆ ಸಮನಾರು ಇಲ್ಲ ಅಲ್ಲವೇ ಅಂದರೆ ಅದಕ್ಕೆ ನೀ ಹೇಳುವುದು "ಶರಣು ವಿರುಪಾಕ್ಷ ಶಶಿಶೇಖರ ಪಂಪಾವತಿ ಪ್ರಣಯ ಪರಮೇಶ್ವರಾ".. ಹೀಗೆ ನಿನ್ನ ಪ್ರತಿಭೆಗೆ ನಮಸ್ಕರಿಸಲೇ.. ಅಥವಾ ಬೆನ್ನು ತಟ್ಟಲೇ ಎಂದ ಕೂಡಲೇ "ಇದೆ ಹೊಸ ಹಾಡು ಹೃದಯ ಸಾಕ್ಷಿ ಹಾಡು" ಎನ್ನುತ್ತೀಯಾ.. ಅಕ್ಷರಗಳಲ್ಲೇ ಮಜ್ಜನ ಮಾಡಿಸುವ ನೀನು ಅಕ್ಷರಗಳಿಗೆ ಕೈಮುಗಿಯುತ್ತ ಹೇಳುವುದು "ನಾ ಕಂಡೆ ನಿನ್ನಲ್ಲೇ ಮನೆ ದೇವರ" ಅಬ್ಬಾ ಎಂಥಹ ಧೈರ್ಯ ನಿನದು .. ಅದು ಹೇಗೆ ಬಂತು ಈ ಧೈರ್ಯ ಎಂದು ನನ್ನ ಹುಬ್ಬು ಮೇಲೆ ಏರಿದಾಗ ನೀ ನನಗೆ ಸಮಾಧಾನ ಮಾಡುತ್ತಾ ಉತ್ತರ ಕೊಡುವೆ "ಮಾತೆಗೆ ಮಿಗಿಲಾದ ದೇವರಿಲ್ಲ ಭೀತಿಗೆ ಹಿರಿದಾದ ಭೂತವಿಲ್ಲ" ಎಂದು ಎಲ್ಲವೂ ಮಾತೃದೇವೋಭವ ಎನ್ನುವೆ.. ಈ ಪೀಳಿಗೆ ಜನತೆ ನಿನ್ನ ಬಗ್ಗೆ ತಿಳಿಯದೆ ಯಾರಪ್ಪಾ ಈ ಮಹಾನುಭಾವ ಎಂದೊಡನೆ ನಿನ್ನ ಲೇಖನೀ ಬರೆದೇ ಬಿಡುತ್ತೆ "ಯಾವೂರವ್ವ ಏನ್ ಚಂದ ಕಾಣಿಸ್ತೌನೇ" ಎಂದು ನಿನ್ನ ಪರಿಚಯ ಮಾಡಿಕೊಡುತ್ತೀಯ.. ನೀ ಕರುನಾಡಿನ ಜನಮಾನಸದಲ್ಲಿ ಸದಾ ಹಸಿರಾಗಿರುತ್ತೀಯ ಎಂಬ ನನ್ನ ಮಾತಿಗೆ ನೀ ಒಮ್ಮೆ ನಕ್ಕರು ನೀ ಬರೆದ ಹಾಡು "ಕನ್ನಡ ನಾಡಿನ ರಸಿಕರ ಮಾನವ ಸೂರೆಗೊಂಡ" ನಾಯಕಿ ಅಂತ ಹೇಳಲೇ ನಾಯಕ ಅಂತ ಹೇಳಲೇ ಎನ್ನುವ ಗೊಂದಲ ಮೂಡಿಸುತ್ತದೆ.. ಇದೆಲ್ಲ ನಿನಗೆ ಹೇಗೆ ಸಾಧ್ಯವಾಯಿತು ಎಂದು ನಾನು ಅಚ್ಚರಿಗೊಂಡೆ.. ಆದರೆ ಅದು ನಿನಗೆ ಒಲಿದ ಅಕ್ಷರಗಳ ಸಾಕ್ಷಾತ್ಕಾರ.. ತಮಾಷೆ ಗೊತ್ತಾ ನಿನ್ನ ಪ್ರೀತಿಯ ತಮ್ಮ ನಿರ್ದೇಶಿಸುವ ಚಿತ್ರದಲ್ಲಿ ನೀ ಬರೆದ ಹಾಡು ಅಮರವಾಗಿ ಉಳಿಯುತ್ತೆ ಮತ್ತು ಆ ಹಾಡನ್ನು ನಿನ್ನ ತಮ್ಮ ಅಷ್ಟೇ ಸ್ಮರಣೀಯವಾಗಿ ಚಿತ್ರೀಕರಿಸುತ್ತಾನೆ.. ಏಕೆ ಗೊತ್ತೇ ನಿಮ್ಮ ಪ್ರತಿಭೆ ಆ ದೇವಾ ಕೊಟ್ಟ ವರ ಅದಕ್ಕೆ ನಾ ಹೇಳೋದು "ಒಲವೇ ಜೀವನ ಸಾಕ್ಷಾತ್ಕಾರ.. ಒಲವೇ ಮರೆಯದ ಮಮಕಾರ.. " ಶುಭವಾಗಲಿ ಕಂದ.. 

ಕಾರ್ಯಕ್ರಮದ ಕೆಲವು ದೃಶ್ಯಗಳನ್ನು ನಿನ್ನ ಕಣ್ಣ ಮುಂದೆ ತಂದಿಡುತ್ತೇನೆ.. ನೋಡು ಆನಂದಿಸು.. ಸೊಗಸಾದ ವಿವರಣೆ.. ಸೊಗಸಾದ ಸಂಗೀತ ... ಅಚ್ಚುಕಟ್ಟಾದ ಗಾಯನ.. ವಾದ್ಯವೃಂದ.. ನೃತ್ಯ.. ಎಲ್ಲವೂ ಸೊಗಸು.. !

















ಟುರ್ ಟುರ್ ಟ್ರ್ರಾ ಎಂದು ಸದ್ದು ಮಾಡುತ್ತಾ ಮತ್ತೆ ಹಿಂದೆ ತಿರುಗಿ ನೋಡದೆ ಜೋಗಿ ಸಿದ್ಧರು ಆ ಊರಿನ ಬೀದಿ ಹಾದು ಹೋದರು.. 

****
"ಮಗು ಪ್ರಭಾಕರ.. ಪ್ರಭಾಕರ ಏಳಪ್ಪ.. ಬೇಗ ಎದ್ದು ಸ್ನಾನ ಮಾಡಿ.. ಸಂಧ್ಯಾವಂದನೆ ಮಾಡಿ.. ಆ ಗುಡಿಯಲ್ಲಿ ಲಲಿತಾ ಸಹಸ್ರ ನಾಮ ಹೇಳಿ ಬಾರಪ್ಪ"

ಕಣ್ಣುಜ್ಜುತ್ತಾ ಎದ್ದ ಮುದ್ದು ಪ್ರಭಾಕರ ... ಸುತ್ತ ನೋಡಿದ.. ತಮ್ಮ ಪುಟ್ಟಣ್ಣ, ನರಸಿಂಹ ಶಾಸ್ತ್ರಿ ತನ್ನ ಹೊದ್ದಿಕೆಯನ್ನೇ ಹಂಚಿಕೊಂಡು ಇನ್ನೂ ಮಲಗಿದ್ದಾರೆ.. ಅವರ ಮುದ್ದು ಮುಖ ನೋಡುತ್ತಾ.. ಇಬ್ಬರ ಕೆನ್ನೆಯನ್ನೊಮ್ಮೆ ಸವರಿ.. ಪ್ರಾತಃಕರ್ಮ ಮುಗಿಸಲು ಹೊರಟ. ಮನಸ್ಸು ಹಗುರಾಗಿತ್ತು.. ತಾನು ಕಂಡದ್ದು ಕನಸೋ ನನಸೋ ಅರಿವಾಗಲಿಲ್ಲ.... 

ಆದರೆ ಕನ್ನಡ ಕುಲಕೋಟಿಗೆ ಅದ್ಭುತ ಸಾಹಿತಿ ಸಿಗುತ್ತಾರೆ.. ತಾಯಿ ಭುವನೇಶ್ವರಿಗೆ ಅಕ್ಷರಗಳ ಪೂಜೆ ಸಲ್ಲಿಸಲು ಅದ್ಭುತ ಬರಹಗಾರ ಬೆಳ್ಳಿ ಪರದೆಯನ್ನು ಬೆಳಗುತ್ತಾರೆ ಎನ್ನುವ ಸೂಚನೆ ಸಿಕ್ಕ ಕನಸು ಮುಂದೆ ನನಸಾಗಿದ್ದು ಇತಿಹಾಸ.. 

*****

ಕಣಗಾಲ್ ಊರಿನ ಸುಂದರ ದೃಶ್ಯ 

ಆಡಿ ಬೆಳೆದ ಮನೆ ಹಲವಾರು ಕನಸಿನ ತಾಣವಿದು 

ಕನಸು ಹೊತ್ತು ಓಡಾಡಿದ ಬೀದಿ 

ಆ ಶಕ್ತಿಗಳು ಬೆಳೆದ ಮನೆಯಂಗಳದಲ್ಲಿ ಈ ಜೀವಿಯೂ ಕೂತಿತ್ತು ಎನ್ನುವ ಹೆಮ್ಮೆ 

ಹೌದು ಸರ್ ನಾನೇ ನರಸಿಂಹ ಶಾಸ್ತ್ರಿ ಕಣಗಾಲ್ ಸಹೋದರರಲ್ಲಿ ನಾನು ಒಬ್ಬ 

ಶ್ರೀ ನರಸಿಂಹ ಶಾಸ್ತ್ರಿಗಳ ಜೊತೆಯಲ್ಲಿ ನಮ್ಮ ಸ್ನೇಹಿತರು 

ಆ ದಿವ್ಯಶಕ್ತಿಯ ಜೊತೆಯಲ್ಲಿ 
(ವಿಜಯದಶಮಿಯಂದು ಅಕ್ಟೋಬರ್ ೧೯ ೨೦೧೮ ರವೀಂದ್ರ ಕಲಾಕ್ಷೇತ್ರದಲ್ಲಿ ನಾದ ನಮನ ಎಂದು ಶ್ರೀ ಕಣಗಾಲ್ ಪ್ರಭಾಕರ್ ಶಾಸ್ತ್ರೀ ಅವರ ಅಮರ ಗೀತೆಗಳನ್ನು ಹಾಡಿ ರಂಜಿಸಿದ ಸಕಿ ಸಮೂಹ ಸಂಸ್ಥೆಗಳ ಅದ್ಭುತ ಕಾರ್ಯಕ್ರಮವನ್ನು ನೋಡುತ್ತಾ ಹೋದ ಹಾಗೆ ಸುಮಾರು ನಾಲ್ಕು ವರ್ಷಗಳ ಹಿಂದೆ.. ಶ್ರೀ ಪುಟ್ಟಣ್ಣ ಕಣಗಾಲ್ ಅವರ ಮನೆಯನ್ನು ಹುಡುಕುತ್ತಾ ಹೋಗಿ ಅವರು ಓಡಾಡಿದ ಮನೆ.. ದೇವಸ್ಥಾನ.. ಅವರು ಹೆಜ್ಜೆ ಇಟ್ಟು .. ಚಿತ್ರ ಜಗತ್ತಿನಲ್ಲಿ ಹೆಜ್ಜೆ ಗುರುತು ಮೂಡಿಸಿದ ಆ ರಸ್ತೆ.. ಅವರ ತಮ್ಮ ಶ್ರೀ ನರಸಿಂಹ ಶಾಸ್ತ್ರೀ ಅವರನ್ನು ರಾಮನಾಥಪುರದ ಅವರ ಮನೆಯಲ್ಲಿ ಭೇಟಿ ಮಾಡಿ ಬೆಳ್ಳಿಮೋಡ ಚಿತ್ರ ರೂಪುಗೊಂಡ ಅದ್ಭುತ ಕತೆಯನ್ನು ಅವರ  ಬಾಯಲ್ಲಿ ಸುಮಾರು ಒಂದೂವರೆ ಘಂಟೆ ಕೇಳಿದ್ದು .. ಅವರಿಗೆ ಪ್ರವರ ಹೇಳುತ್ತಾ ನಮಸ್ಕರಿಸಿದ್ದು ಹಾಗೆ ಕಣ್ಣ ಮುಂದೆ ಬಂತು.. ಅದೇ ಗುಂಗಿನಲ್ಲಿ ಮೂಡಿದ ಲೇಖನವಿದು ..ಓದಿರಿ ನಲಿಯಿರಿ..ಆಶೀರ್ವದಿಸಿ!!!)

Saturday, July 21, 2018

ವಿಭಿನ್ನ ಅನುಭವ - ನಾಗರಹಾವು

ಮತ್ತೆ ನಾಗರಹಾವು ಬರುತ್ತಿದೆ ಎಂದು ತಿಳಿದಾಗ ಖುಷಿಯಾಯಿತು... ಇದರಲ್ಲಿ ಮತ್ತೆ ಏನೂ ಮಾಡ್ತಾರೆ ಅಂತ ಯು ಟ್ಯೂಬ್ ನಲ್ಲಿ ಟ್ರೈಲರ್ /ಟೀಸರ್ ನೋಡಿದಾಗ ನೋಡಲೇ ಬೇಕು ಎನ್ನುವ ಹಠ ಹುಟ್ಟಿತು.. ಆದದ್ದು ಆಗಲಿ.. ನೋಡಿಯೇ ಬಿಡೋಣ ಅಂತ ಹೋಗಲು ತೀರ್ಮಾನಿಸಿದಾಗ.. ನನ್ನ ಅಣ್ಣ ಹೋಗೋಣ ನೆಡಿ ಅಂತ ಇಡೀ ಪರಿವಾರ ಮೈನಸ್ ಮುರಳಿ ಆದಿತ್ಯ ಹೊರಟೆವು..

ಥೀಯೇಟರ್ ಮುಂದೆ ಒಂದು ಸೆಲ್ಫಿ .. ಈ ಸಿನಿಮಾದ ಹುಚ್ಚನ್ನು ಹೆಚ್ಚು ಮಾಡಿತು.. ಮನೆಯ ಹತ್ತಿರವೇ ಟಾಕೀಸು ಇದ್ದದರಿಂದ ಆರಾಮಾಗಿ ಹೋದೆವು.. ರೂರಲ್ ಪ್ರದೇಶ.. ಪಟ್ಟಣದ ಗಿಜಿ ಗಿಜಿ ಇರಲಿಲ್ಲ.. ಸಿನೆಮಾವನ್ನು ಅನುಭವಿಸಿ ನೋಡಬಹುದಿತ್ತು.. ಆದರೆ ಪಟ್ಟಣದಲ್ಲಿ ಸಿಗುವ ಶಿಳ್ಳೆ .. ಚಪ್ಪಾಳೆ..ಪರದೆಗೆ ವಿಷ್ಣು ಬಂದಾಗ ಕರ್ಪೂರದ ಆರತಿ.. ಕೂಗಾಟ. .ಜೈಕಾರ.. ಇವುಗಳು ಇರಲಿಲ್ಲ ಅಂತಲ್ಲ.. ಆದರೆ ಪ್ರಮಾಣ ಕಮ್ಮಿ ಇದ್ದವು. ... ಹಾಗಾಗಿ ಸಿನೆಮಾವನ್ನು ಸಿನೆಮವನ್ನಾಗಿ ನೋಡಲು ಸಾಧ್ಯವಾಯಿತು..
ಪರಿವಾರ @ ನಾಗರಹಾವು 

ಇಡೀ ಚಿತ್ರ ಮೊದಲೇ ಅದ್ಧೂರಿಯಾಗಿ ಅಂದಿನ ಕಾಲಕ್ಕೆ ತಕ್ಕನಾಗೆ ನಿರ್ಮಿಸಿದ್ದರು.. ಪ್ರಸಿದ್ಧ ನಿರ್ಮಾಪಕ ಶ್ರೀ ವೀರಾಸ್ವಾಮಿ ಅವರು... ಈ ಮರುಸೃಷ್ಟಿ ಕೂಡ ಅಷ್ಟೇ ಅದ್ಧೂರಿಯಾಗಿ ಮಾಡಿದ್ದಾರೆ.. ಆಧುನಿಕ ವರ್ಣ ಸ್ಪರ್ಶ.. ಸಂಗೀತದ ಪುನರ್ ನಿರ್ಮಾಣ.. ಹಳೆಯದನ್ನು ಉಳಿಸಿಕೊಂಡು ಅದಕ್ಕೆ ಅಲ್ಲಲ್ಲಿ ಸ್ಪರ್ಶ ನೀಡಿದ್ದಾರೆ.. ಆದರೂ ಒಮ್ಮೆ ಅನ್ನಿಸಿತು ಹಳೆಯ ಸಂಗೀತವನ್ನೇ ಇಟ್ಟುಕೊಂಡು ವರ್ಣ ಸ್ಪರ್ಶ.. ಮತ್ತೆ ೭೦ಎಂಎಂಗೆ ಮಾಡಿದ್ದಾರೆ ಚೆನ್ನ ಅಂತ.. ಆದರೆ ಇದು ನೆಗೆಟಿವ್ ಸಿಕ್ಕಿದ್ದು.. ಅದರ ಹಿಂದೆ ಪಟ್ಟ ಬವಣೆ.. ಹೊಸ ತಂತ್ರಜ್ಞಾನಕ್ಕೆ ಒಗ್ಗಿಸುವಲ್ಲಿ ಇರುವ ಮಿತಿ.. ಇದನ್ನು ದಾಟಿ ಅದ್ಭುತವಾಗಿ ಮಾಡಿದ್ದಾರೆ..

ಒಂದು ತಲೆಮಾರನ್ನು ದಾಟಿ ಅದರ ಮುಂದಿನ ತಲೆಮಾರಿನ ಜನತೆ ನೋಡುತ್ತಿರುವುದರಿಂದ ಈ ತಲೆಮಾರಿಗೆ ಖಂಡಿತಾ ಇಷ್ಟವಾಗುತ್ತದೆ ಅನ್ನುವ ಭರವಸೇ ನನ್ನದು..

ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಕನ್ನಡ ಚಿತ್ರಗಳ ಬಗ್ಗೆ ಬರೆಯುವಾಗ ನನ್ನ ಅನುಭವಕ್ಕೆ ತಲುಪಿದ ರೀತಿಯನ್ನು ಬರೆದಿದ್ದೆ.. ಅದರ ಕೊಂಡಿ ಇಲ್ಲಿದೆ.. ಸ್ಪೆಷಾಲಿಟಿ... ಪುಟ್ಟಣ್ಣ ಸ್ಪೆಷಾಲಿಟಿ - ನಾಗರಹಾವು (1972)  ಹಾಗಾಗಿ ಮತ್ತೆ ಅದೇ ವಿಷಯ ಹೇಳಿ ನಿಮಗೆ ಬೋರ್ ಹೊಡೆಸೋಲ್ಲ :-)

ಏನೋ ಒಂದು ಸೆಳೆತ ಇದೆ ಈ ಚಿತ್ರದಲ್ಲಿ.. ಅಂದುಕೊಂಡಿದ್ದು ಏನೂ ಸಾಗೊಲ್ಲ... ದುರಂತದಲ್ಲಿ ಕೊನೆಗಾಣುತ್ತದೆ.. ಒಂದು ಬದುಕು ಸುಂದರವನವಲ್ಲ ... ಅಲ್ಲಿ ನೂರಾರು ತಾಕಲಾಟಗಳು ಸುತ್ತುತ್ತವೆ.. ಪ್ರೀತಿ ಪ್ರೇಮ .. ಜಾತಿ.. ಧರ್ಮ.. ಆಸ್ತಿ.. ಅಂತಸ್ತು..    ಭಿನ್ನಾಭಿಪ್ರಾಯ.. ಸಂಬಂಧದ ಬಗ್ಗೆ ಒಡುಕು ಮೂಡಿಸೋದು.. ಹೊಟ್ಟೆ ಉರಿಗೆ ಬೆಂಕಿ ಹಚ್ಹೋದು ಎಲ್ಲವೂ ಇದೆ..
ಗುರು ಶಿಷ್ಯ 

ಈ ದೃಶ್ಯದ ಸಂಗೀತ.. ಸೂಪರ್ 

ನಿರ್ಮಾಪಕರು - ವೀರಾಸ್ವಾಮಿ 

ಆಚಾರ್.. ಅಯ್ಯಂಗಾರ್.. ಸ್ಮಾರ್ಥ ಈ ಮೂರು ಪಂಗಡಗಳ  ಘರ್ಷಣೆ ಒಂದು ಕಡೆ.. ಕ್ರಿಶ್ಚಿಯನ್.. ಮತ್ತು ಇಸ್ಲಾಮ್ ಧರ್ಮ ಪಾತ್ರಗಳು ತರುವ ಬಿಕ್ಕಟ್ಟು .. ಇಡೀ ಚಿತ್ರದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತೆ..

ಜಲೀಲ ಅಲಮೇಲುವನ್ನು ರೇಗಿಸದಿದ್ದರೆ.. ರಾಮಾಚಾರಿಗೂ ಅಲಮೇಲುಗೂ ಪ್ರೀತಿ ಬೆಳೆಯುತ್ತಿರಲಿಲ್ಲ.. ಮಾರ್ಗರೇಟ್ ಪಾತ್ರ ಬರದೇ ಇದ್ದಿದ್ದರೆ ಅಂತ್ಯ ಹೀಗಿರುತ್ತಿತ್ತಾ... ಅನ್ನಿಸುತ್ತದೆ..

ಈ ಚಿತ್ರ ನೋಡುತ್ತಾ ಹೋದ ಹಾಗೆ.. ಈ ಚಿತ್ರದ ಅನೇಕ ಪಾತ್ರಗಳ ನಟ ನಟಿಯರು ಈಗಿಲ್ಲ ಎನ್ನುವ ಅಂಶ ಬೇಸರ ತರಿಸುತ್ತದೆ..

೧) ಚಿತ್ರದ ನಿರ್ದೇಶಕ - ಪುಟ್ಟಣ್ಣ ಕಣಗಾಲ್
೨) ನಿರ್ಮಾಪಕ - ವೀರಾಸ್ವಾಮಿ
೩) ಚಾಮಯ್ಯ ಮೇಷ್ಟ್ರು - ಅಶ್ವಥ್
೪) ರಾಮಾಚಾರಿ - ವಿಷ್ಣುವರ್ಧನ್
೫) ತುಕಾರಾಂ - ಧೀರೇಂದ್ರ ಗೋಪಾಲ್
೬) ನಾಯ್ಡು ಅಂಕಲ್ - ಶಕ್ತಿ ಪ್ರಸಾದ್
೭) ಸಾಹಿತಿಗಳು - ಆರ್ ಏನ್ ಜಯಗೋಪಾಲ್
೮) ಸಾಹಿತಿಗಳು - ವಿಜಯನಾರಸಿಂಹ
೯) ಸಾಹಿತಿಗಳು - ಚಿ ಉದಯಶಂಕರ್
೧೦) ಸಂಗೀತ - ವಿಜಯಭಾಸ್ಕರ್
೧೧) ಕಾದಂಬರಿಕಾರರು - ತ ರಾ ಸುಬ್ಬರಾಯರು
೧೨) ಲಕ್ಷಮು - ವಜ್ರಮುನಿ
೧೩) ಮಂಡಿ ಸಾಹುಕಾರರು - ರಂಗ
೧೪) ಪೈಲ್ವಾನ್ - ಎಂ ಪಿ ಶಂಕರ್
೧೫) ರಾಮಾಚಾರಿ ಅಪ್ಪ - ರಾಘವೇಂದ್ರ ರಾವ್
೧೬) ರಾಮಚಾರಿ ಅಮ್ಮ - ಜಯಶ್ರೀ
೧೭) ಅಲಮೇಲು ಅಪ್ಪ - ರಾಮಚಂದ್ರ ಶಾಸ್ತ್ರೀ

ಇದು ತೆರೆಯ ಮೇಲೆ ಹೆಸರಾಗಿದ್ದ ನಟ ನಟಿಯರು ಮತ್ತು ಕೆಲವು ತಂತ್ರಜ್ಞರು.. ಇದರ ಹಿಂದೆ ಶಕ್ತಿ ಮೀರಿ ದುಡಿದ್ದಿದ್ದ ಅನೇಕಾನೇಕ ತಂತ್ರಜ್ಞರು.. ಯೂನಿಟ್ ಕೆಲಸಗಾರರು.. ಮರೆಯಾಗಿದ್ದರು ಅವರೆಲ್ಲರ ಅನುಭವದ ಶ್ರಮ ಈ ಚಿತ್ರ..

ಪುಟ್ಟಣ್ಣ ಕಣಗಾಲ್ ಎನ್ನುವ ಮಾಂತ್ರಿಕ ನಿರ್ದೇಶಕ.. ತರಾಸು ಎನ್ನುವ ಅದ್ಭುತ ಕತೆಗಾರರ ಕಾದಂಬರಿಯ ಒಳ ನೋಟವನ್ನು ಅನುಭವಿಸಿ ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಿ ಅವರಿಂದ ಚಿತ್ರಕ್ಕೆ ಬೇಕಾದ ರೀತಿಯಲ್ಲಿ ಅಭಿನಯ ತೆಗೆದು.. ಇದನ್ನೊಂದು ಅದ್ಭುತ ಕಲಾಕೃತಿ ನಿರ್ಮಿಸಿದ ವೀರಾಸ್ವಾಮಿ ಎಲ್ಲರೂ ಸ್ವರ್ಗದಲ್ಲಿಯೇ ಈ ಚಿತ್ರದ ಬಗೆಗಿನ ಹೊಸ ತಂತ್ರಜ್ಞಾನದ ಲೇಪದೊಂದಿಗೆ ಬೆಳ್ಳಿತೆರೆಯನ್ನು ಬೆಳೆಗುತ್ತಿರುವ ಯಶಸ್ಸನ್ನು ಕಂಡು ಕರುನಾಡ ಚಿತ್ರರಂಗವನ್ನು ಆಶೀರ್ವದಿಸುತ್ತಿದ್ದರೆ ಎನ್ನುವ ನಂಬಿಕೆ ನನ್ನದು..

ಈಶ್ವರಿ ಸಂಸ್ಥೆಯ ಈ ಪರಿಶ್ರಮ ಸೋದರ ಬಾಲಜಿಯ ಜೊತೆಯಲ್ಲಿ ನಿಂತು ರವಿಚಂದ್ರನ್ ಕುಟುಂಬ ಮಾಡಿದ ಈ ಸಾಹಸ ಮೆಚ್ಚುವಂತದ್ದು..

ಮೇಷ್ಟ್ರೇ ನಾನು ಬರುತ್ತಿದ್ದೇನೆ ಆದರೆ ಮಾರ್ಗರೆಟ್ ಜೊತೆಯಲ್ಲಿ ಈ ಸಂಭಾಷಣೆ ಥೀಯೇಟರ್ ಹೊರಗೆ ಬಂದ ಮೇಲೂ ಗುಯ್ ಅನ್ನುತ್ತಿರುತ್ತದೆ..

ಎಲ್ಲರೂ ನೋಡಿ.. ಈ ಪರಿಶ್ರಮವನ್ನು ಗುರುತಿಸಿ.. ನೋಡಿ.. ಮತ್ತು ಬೆಂಬಲಿಸಿ.. !

Thursday, December 1, 2016

ಭಾರತ ಭೂಶಿರದಲ್ಲಿ ಪುಟ್ಟಣ್ಣ ಅವರ ಜನುಮದಿನ

"ಪುಟ್ಟಣ್ಣ ಸರ್ ನಿಮ್ಮ ಹತ್ತಿರ ಮಾತಾಡಬೇಕಿತ್ತು.. ೪೪೦ ಕ್ಷಣಗಳು ಸಿಗಬಹುದೇ.. "

"ಯಾರಪ್ಪ ನೀನು.. "

"ನಿಮ್ಮ ಕೋಟಿ ಕೋಟಿ ಅಭಿಮಾನಿಗಳಲ್ಲಿ ನಾನು ಒಬ್ಬ.. ಇಂದು ನಿಮ್ಮ ಜೊತೆ ಮಾತಾಡಬೇಕು ಅನ್ನಿಸ್ತಿದೆ.. "

"ಸರಿ.. ಬಾ ಇಲ್ಲೇ ಸ್ವಲ್ಪ ದೂರದಲ್ಲಿ ನಮ್ಮ ಊರಿನವರ ಬೊಂಡ ಅಂಗಡಿ ಇದೆ.. ಅಂಬಡೆ ಮತ್ತು ಮೆಣಸಿನ ಕಾಯಿ ಬಜ್ಜಿ ಚೆನ್ನಾಗಿ ಮಾಡ್ತಾರೆ.. "

ನನಗೆ ಬಾಯಲ್ಲಿ ನೀರು..

"ಸರಿ ಸರ್"

ಇಬ್ಬರೂ ನೆಡೆಯುತ್ತಾ ಹೋದೆವು... ಅಂಗಡಿ ಸಿಕ್ಕಿತು.. "ಏನಪ್ಪಾ.. ಬಿಸಿ ಬಿಸಿ ಅಂಬಡೆ, ಮೆಣಸಿನಕಾಯಿ ಬಜ್ಜಿ ಎರಡು ಕಾಫಿ.. ಒಂದು ೫೫೫ ಕಳಿಸು.. ನಿನಗೆ ೫೫೫?"

"ಇಲ್ಲ ಸರ್.. ಅಭ್ಯಾಸವಿಲ್ಲ.. ಬಜ್ಜಿ, ಕಾಫಿ ಸಾಕು"

"ಸರಿ ಬಾ.. ನಾ ಓದಿದ್ದ ಶಾಲೆ ಇದು.. ಶಾಲೆಯ ಹೊರಗೆ ಒಂದು ಕಲ್ಲು ಬೆಂಚು ಇದೆ.. ಇವತ್ತು ಭಾನುವಾರ.. ಅಲ್ಲಿಯೇ ಕುಳಿತು ಮಾತಾಡೋಣ.. ಆಗಬಹುದೇ?"

ದೊಡ್ಡವರಿಗೆ ಇಲ್ಲ ಎನ್ನಲು ಆಗುತ್ತದೆಯೇ.. ಸುಮ್ಮನೆ ಗೋಣು ಆಡಿಸಿದೆ..

ಬಜ್ಜಿ, ಅಂಬಡೆ, ಕಾಫೀ ಮತ್ತು ೫೫೫ ಬಂತು..

"ಸರಿ ಹೇಳಪ್ಪ ಏನು ನಿನ್ನ ಮಾತು"

"ಸರ್.. ಉಪಾಸನೆ ಚಿತ್ರದ ಭಾರತ ಭೂಶಿರ ಹಾಡನ್ನು ಗುರುಗಳ ಆಶ್ರಮದಲ್ಲಿ ಚಿತ್ರೀಕರಿಸಿದ ರೀತಿ ನನಗೆ ಬಲು ಇಷ್ಟ ಅದರ ಬಗ್ಗೆ ಹೇಳಿ.. ೪೪೦ ಕ್ಷಣಗಳು ನಿಮ್ಮ ಮಾತಿಗಾಗಿ ಮಾತ್ರ"

"ನೋಡಪ್ಪ.. ಸಂಗೀತ ಒಂದು ಅದ್ಭುತ ಔಷದಿ ಇದ್ದ ಹಾಗೆ.. ಹಾಡನ್ನುಹಾಡುವವರು , ಅದರ ಸಂಗೀತ, ಹಾಡುವ ಸ್ಥಳ, ಹಾಡಿನ ಸಾಹಿತ್ಯ ಎಲ್ಲವೂ ಒಂದು ದೇವಸ್ಥಾನ ಹಾಗೂ ಅಲ್ಲಿನ ಪರಿಸರದಲ್ಲಿರುವ ದೇವರ ಮೂರ್ತಿ, ಪೂಜೆ ಸಾಮಗ್ರಿಗಳು ಇದ್ದ ಹಾಗೆ .. ದೇವರಿಗೆ ನಾವು ಧೂಪ, ದೀಪ, ಮಂತ್ರ, ಅಭಿಷೇಕ, ಅಲಂಕಾರ ಹೇಗೆ ಮಾಡುತ್ತೇವೆಯೋ ಹಾಗೆ.. ಒಂದು ಹಾಡಿಗೂ ಅದೇ ರೀತಿಯ ಸಿದ್ಧತೆ ಬೇಕು.

ಈ ಹಾಡು ಚಿತ್ರೀಕರಿಸುವ ಸ್ಥಳ ಗುರುಗಳ ಆಶ್ರಮ..
ಆಶ್ರಮ ಒಂದು ದೇವಾಲಯವೇ ಅಲ್ಲವೇ
ಆ ಆಶ್ರಮದ ಗುರುಗಳು ದೇವರಿಗೆ ಅರ್ಚಿಸುವ ಅರ್ಚಕರು ತಾನೇ
ಆ ಅರ್ಚನೆಗೆ ಬೇಕಾಗುವ ಸಾಹಿತ್ಯ,  
ಸಂಗೀತ,ಗಾಯನ..
ಭಕ್ತರು ಎಲ್ಲರೂ ಸೇರಿ
ಈ ಹಾಡನ್ನು ಮೇಲಕ್ಕೆ ಏರಿಸಿದ್ದಾರೆ.

ಶಾರದೆ ಪಾತ್ರಧಾರಿ ಸಂಗೀತ ಎಂದರೆ ತಪಸ್ಸು ಎಂದುಕೊಂಡವಳು.. ತಾನುಬಾಲ್ಯದಲ್ಲಿ ಕಣ್ಣಾರೆ ಕಂಡ ಒಂದು  ದೃಶ್ಯವನ್ನು ಹಾಡಿನಲ್ಲಿ ಕಟ್ಟಿ ಕೊಡುತ್ತೇನೆ ಎಂದು ಹೇಳುವಾಗ ಅದಕ್ಕೆ ಬೇಕಾದ ವೇದಿಕೆಯನ್ನು ಸೃಷ್ಟಿ ಮಾಡಲು ಮನಸ್ಸಾಯಿತು.

ವಿಜಯನಾರಸಿಂಹನಿಗೆ ಹೇಳಿದೆ "ನನಗೆ ಈ ರೀತಿಯ ಹಾಡು ಬೇಕು.. ಕನ್ಯಾಕುಮಾರಿಯ ಬಗ್ಗೆ ಹಾಡು" ಅಂತ..
"ಪುಟ್ಟಣ್ಣ ನೀನು ಕೇಳಿದೆ ನಾನು ಕೊಟ್ಟೆ" ಅಂತ ಅದ್ಭುತ ಹಾಡನ್ನು ಬರೆದುಕೊಟ್ಟ.

ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್ ಸಾಹಿತ್ಯಕ್ಕೆ ಸಂಗೀತ ಕೊಟ್ಟನೋ.. ಅಥವಾ ಸಂಗೀತಕ್ಕೆ ಸಾಹಿತ್ಯ ಬಂದಿತೋ ಅರಿವಿಲ್ಲ.. ಅದ್ಭುತವಾದ ಎದೆ ಝಲ್ ಎನ್ನುವಂಥ ಸಂಗೀತ ಒದಗಿಸಿದ..

ಇಬ್ಬರು "ವಿಜಯ"ರು ಈ ಗಾನ ಸಂಭ್ರಮ ಮಹಾಸಮರದಲ್ಲಿ ವಿಜಯಿಯಾದರು..

ಜಾನಕಿಯಮ್ಮನಿಗೆ ಈ ಹಾಡಿನ ಬಗ್ಗೆ ಹೇಳಿದಾಗ.. ಪುಟ್ಟಣ್ಣಾಜಿ ಖಂಡಿತ ಇದು ಒಂದು ಅದ್ಭುತ ಕೃತಿಯಾಗುತ್ತದೆ ಎಂದರು.. ಅದು ನಿಜವೇ ಆಯಿತು..

ಇಂಥಹಃ ಅಮೋಘ ಹಾಡನ್ನು ಸುಮ್ಮನೆ ಹೇಗೋ ಹೇಗೋ ಚಿತ್ರೀಕರಿಸಲು ಮನಸ್ಸಾಗಲಿಲ್ಲ..

ಛಾಯಾಗ್ರಾಹಕ ಶ್ರೀಕಾಂತ್ ಗೆ ಹೇಳಿದೆ.. "ಶಾರದೆ ಮೊಗದ ಮೇಲೆ ಕಾಂತಿ ಬರುವಂತೆ ಲೈಟಿಂಗ್ ಮಾಡಿ.. ಆಕೆಯ ಮುಖದ ಪ್ರತಿ ಭಾವವೂ ಎದ್ದು ಕಾಣುವಂತೆ ನೀವು ಸೆರೆ ಹಿಡಿಯಬೇಕು.. ವೀಣೆಯನ್ನು ನುಡಿಸುವ ಅಭ್ಯಾಸ ಆಕೆಗೆ ಆಗಿದೆ.. ನೋಡುವವರಿಗೆ ಶಾರದೆಯೇ ವೀಣೆ ನುಡಿಸುತ್ತಿದ್ದಾಳೆ ಎನ್ನುವ ಮನವರಿಕೆಯಾಗುತ್ತದೆ.. ಜೊತೆಗೆ ಈ ಹಾಡಿನಲ್ಲಿ ಹಿತಮಿತವಾಗಿ ವೀಣೆಯನ್ನು ಉಪಯೋಗಿಸಿರುವುದರಿಂದ, ಜೊತೆಗೆ ಹಾಡಿನಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ವೀಣೆಯ ನಾದವಿರುವುದರಿಂದ.. ಆಕೆಯ ಮುಖದ ಭಾವ, ತನ್ಮಯತೆ ಈ ಹಾಡಿಗೆ ಬೇಕು.. " ಮರುಮಾತಿಲ್ಲದೆ ಶ್ರೀಕಾಂತ್ ನಾನು ಹೇಗೆ ಹೇಳಿದ್ದೇನೋ ಅದಕ್ಕಿಂತ ಇನ್ನೂ ಅತ್ಯುತ್ತಮವಾಗಿ ಚಿತ್ರೀಕರಿಸಿದ್ದಾರೆ.

ಇನ್ನೂ ಜಾನಕಿಯಮ್ಮ.. ಅಬ್ಬಾ ಆಕೆ ನಿಜಕ್ಕೂ ಗಾನಸರಸ್ವತಿಯೆ ಹೌದು.. ಪ್ರತಿ ಪದವನ್ನು ಅರ್ಥಮಾಡಿಕೊಂಡು ಅದಕ್ಕೆ ಬೇಕಾದ ಭಾವ ತುಂಬಿ ಈ ಹಾಡನ್ನು ಅಕ್ಷರಶಃ ದೇವಗಾನವನ್ನಾಗಿ ಮಾಡಿದ್ದಾರೆ ಆಕೆ. "ಶಿವ ತಾಂಡವದ  ಢಮರು ನಿನಾದ ನಾದ ಬ್ರಹ್ಮನ ಓಂಕಾರ ನಾದ.. " ಈ ಪದವನ್ನು ಅದೆಷ್ಟು ಭಕ್ತಿಭಾವದಿಂದ ಹಾಡಿದ್ದಾರೆ.. ನನಗೆ ರೋಮಾಂಚನವಾಗುತ್ತದೆ..

ಇನ್ನೂ ಹಾಡು ಶುರುವಾದಾಗ ಬರುವ ರುದ್ರಪಟ್ಟಣದ ಸಂಗೀತ ವಿಧ್ವಾನ್ ಅವರ ಅಭಿನಯ, ಜಾನಕಿಯಮ್ಮನವರ ಆಲಾಪ ಕೇಳಿ ಕಣ್ಣು ಮತ್ತು ಮೊಗದಲ್ಲಿ ಅವರು ತೋರುವ ಭಾವ.. ನಿಜಕ್ಕೂ ನನಗೆ ಈಗ ಹಾಡನ್ನು ಕೇಳಿದರೂ ಕಣ್ಣಲ್ಲಿ ನೀರು ಬರುತ್ತದೆ.."

ಆ ಹಾಡು ಮುಗಿದಾಗ.. "ನಿಮ್ಮ ವಿಧ್ವತ್ತಿನ ಪ್ರತಿಬಿಂಬ ನಿಮ್ಮ ಶಿಷ್ಯೆ.. ಕರುಳು ಹಿಂಡುವ ವೀಣೆಯ ನಾದ, ಜೀವ ತುಂಬುವ ಗಾನದ ಸುಧೆ ನಮ್ಮ ಊರಿನವರೆಲ್ಲರಿಗೂ ತಲುಪುವಂತೆ ಮಾಡಿ" ಎಂದು ಹೇಳಿದಾಗ ನಿಜಕ್ಕೂ ನಾ ಮೂಕನಾದೆ.

ಇಡೀ ದೃಶ್ಯವನ್ನು ನಾ ಕಲ್ಪಿಸಿಕೊಂಡ ರೀತಿಯಲ್ಲಿಯೇ ಚಿತ್ರಿಸಿದ ಹೆಮ್ಮೆ ನನಗೆ.. ಅದನ್ನು ಮೆಚ್ಚಿ ಈ ಚಿತ್ರವನ್ನು ಹಾಡನ್ನು ಯಶಸ್ಸುಗೊಳಿಸಿದ ಕೀರ್ತಿ ಕರುನಾಡ ಚಿತ್ರರಸಿಕರಿಗೆ ಸಲ್ಲಬೇಕು.. :-)

ಇಷ್ಟು ಹೇಳಿ ಪುಟ್ಟಣ್ಣ ಸರ್ ೫೫೫ ನ ಕೊನೆ ದಂ ಎಳೆದರು.. ತಮ್ಮ ಕೈಗಡಿಯಾರ ನೋಡಿಕೊಂಡು ಕಣ್ಣು ಹೊಡೆದರು.. ೪೩೯ ಕ್ಷಣಗಳಾಗಿತ್ತು..

ಅಷ್ಟು ಹೊತ್ತಿಗೆ ಅಂಬಡೆ, ಮೆಣಸಿನಕಾಯಿ ಬಜ್ಜಿ ಎರಡು ಖಾಲಿಯಾಗಿದ್ದವು..

ಪುಟ್ಟಣ್ಣ ಸರ್ ಅವರಿಗೆ ಪ್ರವರ ಹೇಳಿ ಒಂದು ನಮಸ್ಕಾರ ಮಾಡಿ.. ಸಂತೃಪ್ತಿಯಿಂದ ಹೊರ ನೆಡೆದೆ..

ಒಮ್ಮೆ ತಿರುಗಿ ನೋಡಿದೆ.. ಪುಟ್ಟಣ್ಣ ಸರ್.. ಇನ್ನೊಂದು ೫೫೫ ಹಚ್ಚಿ ವಿಜಯದ ಸಂಕೇತವಾದ ಹೆಬ್ಬೆರಳನ್ನು ತೋರಿಸಿದರು..

ತಾಯಿ ಭುವನೇಶ್ವರಿ ವೀಣೆಯನ್ನು ಹಿಡಿದು ನುಡಿಸಿದಂತೆ.. ಹಾಡು ಕೇಳಿಸುತ್ತಿತ್ತು



ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ

ಸಾಮಗಾನಪ್ರಿಯ ಸಾಂಬರೂಪಿಣಿ
ಪಾಲಗಡಲ ಸ್ವರ ಪಂಚಮಧಾರಿಣಿ
ಸಾಕಾರ ಷಡ್ಜದ ಶರಧಿ ತರಂಗಿಣಿ
ಸಾಗರ ಸಂಗಮ ಸರಸ ವಿಹಾರಿಣಿ

ಶಿವತಾಂಡವದಾ ಢಮರುನಿನಾದ....
ನಾದ ಬ್ರಹ್ಮನ ಓಂಕಾರನಾದ...
ನಾದದೆ ಲೀನಾ ಆಗಮವೇದ
ನಾದ...ವೇದ ...ಶಿವೇ....
ನಾದ ವೇದ ಶಿವೆ ನಿನ್ನವಿನೋದ

ಸಂಗೀತಸುಧೆಯ ಚೈತನ್ಯಧಾರೆ
ಕಣ ಕಣ ನೀನೇ ಕರುಣಾ ಪೂರೆ
ನವ ಭಾವ ನವ ಜೀವ ನೀ ತುಂಬಿ ಬಾರೆ
ನವರಸವಾಹಿನಿ ನೀ ದಯೆ ತೋರೆ

ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ

(ಪುಟ್ಟಣ್ಣ ಅವರ  ಜನುಮದಿನದಂದು ಅವರ ನೆನಪಲ್ಲಿ ಕೆಲವು ಸಾಲುಗಳನ್ನು ಬರೆಯೋಣ ಎಂದುಕೊಂಡಾಗ ಮೂಡಿ ಬಂತು ಮೇಲಿನ ಕೆಲವು ಅಕ್ಷರಗಳು.. ಇದು ಕೇವಲ ನನ್ನ ಹೃದಯದಲ್ಲಿ ಮೂಡಿಬಂದ ಭಾವಕ್ಕೆ ಒಂದು ಕಾಲ್ಪನಿಕ ಕಥಾ ರೂಪ ಕೊಟ್ಟು ಬರೆದಿದ್ದೇನೆ.. )

ಪುಟ್ಟಣ್ಣ ಸರ್.. ನಿಮ್ಮ ಪ್ರತಿಭೆಗೆ ಏನೂ ಬರೆದರೂ ಅದು ಕಮ್ಮಿಯೇ.. ಆದರೂ ಒಂದು ನುಡಿ ನಮನ ಸಲ್ಲಿಸೋಣ ಎಂದು ಸ್ವಲ್ಪ ಸಲುಗೆ ತೆಗೆದುಕೊಂಡು ಜನುಮದಿನಕ್ಕೆ ಈ ರೀತಿಯ ಶುಭಾಷಯ ಕೋರಿದ್ದೇನೆ.. (ಕ್ಷಮೆ ಇರಲಿ)

Sunday, November 1, 2015

ಬೋರ್ಡ್ ನಲ್ಲಿ ಕಾಣದೆ ಇರುವ - ಫಲಿತಾಂಶ (1976)

ಪಾಠ ಪ್ರವಚನಗಳು ಹಲವಾರು ಬಾರಿ ಹಳೆಯದಾಗಿಬಿಡುತ್ತದೆ, ಆದರೆ ಅವು ನಮಗೆ ದಾರಿ ತೋರಿಸಿದ ಬಗೆ ಯಾವತ್ತಿಗೂ ನೆನಪಿರುತ್ತದೆ. ಪುಟ್ಟಣ್ಣ ಕಣಗಾಲ್ ಚಿತ್ರಜಗತ್ತಿನಲ್ಲಿ ಸೃಷ್ಠಿ ಮಾಡಿದ ರತ್ನಗಳು ಹಲವಾರು.

ಒಂದೊಂದು ರತ್ನವೂ ಭಿನ್ನ ವಿಭಿನ್ನ. ಪ್ರತಿ ರತ್ನ ಮಣಿಯನ್ನು ಅರಸುತ್ತಾ ಅದನ್ನು ನೋಡಿ ಸಂಭ್ರಮಿಸುತ್ತಾ ಹೋಗುತ್ತಿದ್ದ ನನಗೆ, ಆ ಸಾಲಿನಲ್ಲಿ ಒಂದು ಅನರ್ಘ್ಯ ರತ್ನದ ಹೆಸರಿತ್ತು, ಆದರೆ ಆ ಜಾಗದಲ್ಲಿ ಖಾಲಿ ಖಾಲಿ. ಅದರ ಫಲಕ ನೋಡಿದೆ, ಅದರಲ್ಲಿ "ಫಲಿತಾಂಶ" ಎಂದಿತ್ತು.

ಯಾಕೋ ಕುತೂಹಲ ಕಾಡಿತು, ಆ ಜಾಗವನ್ನು ಮತ್ತೆ ಮತ್ತೆ ನೋಡಿದೆ ಕೆಳಕಂಡ ವಿವರಗಳು ಸಿಕ್ಕವು.

ಆ ಮಾಣಿಕ್ಯ ೧೯೭೬ ನೆ ಇಸವಿಯಲ್ಲಿ ಅನಾವರಣಗೊಂಡಿತ್ತು.

ಅರೆಗಲ್ ಬ್ರದರ್ಸ್ ತಮ್ಮ ಕಿಸೆಯಿಂದ ಹಾಕಿದ ಕಾಂಚಣ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿತ್ತು.

ಜೈ ಜಗದೀಶ್, ಆರತಿ, ಶುಭ ಜೊತೆಯಲ್ಲಿ ಹಿಂದಿ ಚಿತ್ರ ಜಗತ್ತಿನ ಕಂಚಿನ ಕಂಠ ಅಮರೀಶ್ ಪುರಿ ಕನ್ನಡಕ್ಕೆ ಕಾಲಿಟ್ಟ ಹೆಮ್ಮೆಯ ಕ್ಷಣ ಅದು.

ಆರ್ ಏನ್ ಜಯಗೋಪಾಲ್ ರಚಿಸಿದ ಸುಂದರ ಹಾಡುಗಳನ್ನು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅಷ್ಟೇ ಸುಂದರವಾಗಿ ಜೀವ ತುಂಬಿ ಹಾಡಿದ್ದರು. ಇಂದಿಗೂ ನೆನಪಲ್ಲಿ ಉಳಿದಿರುವ ಅನೇಕ ಗೀತೆಗಳಲ್ಲಿ ಇವು ಕೂಡ ಒಂದು.

ಪುಟ್ಟಣ್ಣ ಚಿತ್ರಗಳು ಎಂದ ಮೇಲೆ ಸಂಗೀತದ ಮಾತು ಬಂದಾಗ ಮೊದಲ ಹೆಸರು ಬರುವುದು ಅವರ ನೆಚ್ಚಿನ ಗೆಳೆಯ ವಿಜಯಭಾಸ್ಕರ್. ಹೌದು ಈ ಚಿತ್ರವನ್ನು ವಿಜಯಭಾಸ್ಕರ್ ಸಂಗೀತ ಶರಧಿಯಲ್ಲಿ ಅದ್ದಿ ತೆಗೆದಿದ್ದಾರೆ.

"ಈ ಚೆಂಡಿನ ಆಟ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಪಿ ಸುಶೀಲ ಹಾಡಿದ್ದಾರೆ.



"ಲವ್ ಎಂದರೆ ಯಾರೂ ಬಿಡಿಸಿದ ಬಂಧನ" ಈ ಹಾಡು ಇಷ್ಟವಾಗುವುದು ವಾಣಿಜಯರಾಂ ಅವರ ಧ್ವನಿ ಮತ್ತು ಪಾಶ್ಚಾತ್ಯ ಸಂಗೀತದ ಅಚ್ಚಿನಲ್ಲಿ ಮೂಡಿರುವ ಹಿನ್ನೆಲೆ ಸಹ ಗಾಯಕರ ಧ್ವನಿ.


ಫಲಿತಾಂಶವನ್ನು ಕಪ್ಪು ಬಿಳುಪಿನಲ್ಲಿ ಸೆರೆ ಹಿಡಿದದ್ದು ಬಿ ಎನ್ ಹರಿದಾಸ್ ಅವರ ಕ್ಯಾಮೆರ. 

ಶ್ರೀನಿವಾಸ್ ಕುಲಕರ್ಣಿಯವರ ಕತೆಯನ್ನು ತೆರೆಗೆ ಅಳವಡಿಸಿ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ನೋಡಲು ಅನುಕೂಲ ಮಾಡಿಕೊಟ್ಟವರು ಪುಟ್ಟಣ್ಣ ಕಣಗಾಲ್.

ಹುಡುಕಿ ಹುಡುಕಿ ಸುಸ್ತಾಗಿ ಅಲ್ಲೇ ಒಂದು ಮೂಲೆಯಲ್ಲಿ ಕುಳಿತಾಗ ಈ ಚಿತ್ರದ ಪುಟ್ಟ ಮಾಹಿತಿ ಫಲಕ ಅಲ್ಲಿ ನೇತು ಹಾಕಿದ್ದು ಬಿದ್ದು ಹೋಗಿತ್ತು .. :-)


ಫಲಿತಾಂಶ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಅರಗಲ್ ಸಹೋದರರು
ಕಥೆಶ್ರೀನಿವಾಸ ಕುಲಕರ್ಣಿ
ಪಾತ್ರವರ್ಗಜೈಜಗದೀಶ್ ಆರತಿ ವೈಶಾಲಿ,ಪದ್ಮಾಕುಮುಟಅರುಣ ಇರಾನಿ,ಶುಭಲೋಕನಾಥ್ಲೀಲಾವತಿ,ಅಮರೀಶ್ ಪುರಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಎ.1 ಮೂವೀಟೋನ್
ಹಿನ್ನೆಲೆ ಗಾಯನವಾಣಿ ಜಯರಾಂ,ಎಸ್.ಪಿ.ಬಾಲಸುಬ್ರಹ್ಮಣ್ಯಂ


ಈ ಚಿತ್ರ ಎಲ್ಲೇ ಹುಡುಕಿದರೂ ಸಿಗದ ಕಾರಣ, ಪುಟ್ಟಣ್ಣ ಕಣಗಾಲ್ ಚಿತ್ರಸರಣಿಯಲ್ಲಿ ಕೊನೆಯಲ್ಲಿ ಬರೆಯೋಣ ಎಂದು ಇಟ್ಟುಕೊಂಡಿದ್ದೆ. ಚಿತ್ರವನ್ನು ಕೈ ಬಿಡಲು ಮನಸ್ಸು ಒಪ್ಪಲ್ಲಿಲ್ಲ. ಆದ್ದರಿಂದ ಈ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಕೈ ಎಟುಕಿದ ಮಾಹಿತಿಯನ್ನು ಓದಿ ನನಗೆ ಅನ್ನಿಸಿದ ಒಂದಷ್ಟು ಪದಗಳಲ್ಲಿ ಒಂದು ಲೇಖನ ಮಾಡಿದ್ದೇನೆ. ಈ ಚಿತ್ರವನ್ನು ಯಾವಾಗಲಾದರೂ ನೋಡಿಯೇ ನೋಡುತ್ತೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ. ನೋಡಿದ ದಿನ ಆ ಚಿತ್ರವನ್ನು ನನ್ನ ಮೂಸೆಯಲ್ಲಿ ಅರಳಿಸಿ, ನನಗೆ ತಾಕಿದ ಅನುಭವದ ಬಗ್ಗೆ ಒಂದಷ್ಟು ಪದಗಳನ್ನು ಹರಿಯ ಬಿಡುತ್ತೇನೆ...

****

ಪುಟ್ಟಣ್ಣ ಕಣಗಾಲ್ ಗುರುಗಳೇ, ಕರುನಾಡಿನ ಭಾಷೆಯಲ್ಲಿ ನಿಮ್ಮ ದಿಗ್ದರ್ಶನದಲ್ಲಿ ಅರಳಿದ ೨೪ ಚಿತ್ರಗಳಲ್ಲಿ ೨೩ ಚಿತ್ರಗಳನ್ನು ನೋಡಿ ನನ್ನ ಅನುಭವಕ್ಕೆ ನಿಲುಕಿದ ಒಂದೆರಡು ಮಾತುಗಳನ್ನು ಹಂಚಿಕೊಂಡಿದ್ದೇನೆ. ಒಂದು ಚಿತ್ರದ ಬಗ್ಗೆ ಕೇವಲ ಲಭ್ಯವಾದ ಮಾಹಿತಿಯನ್ನು ಮಾತ್ರ ಕೊಟ್ಟಿದ್ದೇನೆ. ನಿಮ್ಮ ಚಿತ್ರಗಳನ್ನು ಬಾಲ್ಯದಿಂದಲೂ ಆನಂದಿಸಿಕೊಂಡು ಬಂದಿದ್ದ ನನಗೆ, ಆ ಚಿತ್ರಗಳ ಬಗ್ಗೆ ಬರೆಯಬೇಕೆಂಬ ಹಂಬಲ ಹುಟ್ಟಿತ್ತು. ನಾ ಏನೇ ಬರೆದಿದ್ದರೂ ಅದು ನಿಮ್ಮ ಆಶೀರ್ವಾದದ ಬಲ ನನ್ನೊಳಗೆ ಕೂತು ಬರೆಸಿದೆ. ಈ ಲೇಖನಮಾಲಿಕೆಗಳನ್ನೂ ಬರೆಯುವ ಸಾಹಸಕ್ಕೆ ಸ್ಫೂರ್ತಿ ನೀಡಿದವರು ನನ್ನ ಅಪ್ಪ (ಮಂಜುನಾಥ್), ಮತ್ತು ನನ್ನ ಸೋದರ ಮಾವ (ಶ್ರೀಕಾಂತ್ ಅಲಿಯಾಸ್ ರಾಜ),  ಇವರಿಬ್ಬರೂ ಹಲವಾರು ರೀತಿಯಲ್ಲಿ ನನಗೆ ಮಾರ್ಗದರ್ಶಿಗಳು ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಶ್ರೀ  ನೀವು ಬರೆಯಿರಿ ಖಂಡಿತ ನೀವು ಈ ಸುಂದರ ಮಾಲೆಯನ್ನು ಪೂರ್ಣ ಮಾಡುತ್ತೀರಿ ಎಂದು ಧೈರ್ಯ ತುಂಬಿದವರು ಶ್ರೀ ಬಾಲಸುಬ್ರಮಣ್ಯ ಅರ್ಥಾತ್ ಬಾಲೂ ಸರ್, ಶ್ರೀ ಪ್ರಕಾಶ್ ಹೆಗ್ಡೆ, ಶ್ರೀಮತಿ ರೂಪ ಸತೀಶ್, ಶ್ರೀಮತಿ ನಿವೇದಿತ ಚಿರಂತನ್, ಶ್ರೀಮತಿ ಸ್ವರ್ಣ ಪಿ, ಶ್ರೀಮತಿ ಹರಿಣಿ GNT, ಶ್ರೀಮತಿ ಸುಗುಣ ಮಹೇಶ್, ಬದರಿನಾಥ್ ಪಲವಳ್ಲಿ  ಮತ್ತು ನಿಮ್ಮ ದಿಗ್ದರ್ಶನದ ಬಗ್ಗೆ ಅಭೂತಪೂರ್ವ ಮಾಹಿತಿ ಕೊಟ್ಟ ನಿಮ್ಮಯ ಆತ್ಮೀಯ ಸ್ನೇಹಿತರಾದ ಶ್ರೀ ಮೋಹನ್ ಕಂಪ್ಲಾಪುರ್ ಅಥವಾ ಕಂಪ್ಲಾಪುರದ ಮೋಹನ್  ಮತ್ತು ಅನೇಕ ಪುಟ್ಟಣ್ಣ ಕಣಗಾಲ್ ಅಭಿಮಾನಿಗಳು.

ಇಂದಿಗೂ ನನಗೆ ನೆನಪಿದೆ ನಿಮ್ಮ ಸಹೋದರ ಶ್ರೀ ನರಸಿಂಹ ಶಾಸ್ತ್ರಿಗಳು ನಿರರ್ಗಳವಾಗಿ ಒಂದೂವರೆ ತಾಸು ನಿಮ್ಮ ಬೆಳ್ಳಿಮೋಡದ ಚಿತ್ರದ ತಯಾರಿಯಿಂದ ಹಿಡಿದು ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದನ್ನು ಅದ್ಭುತವಾಗಿ ಕಣ್ಣಿಗೆ ಕಟ್ಟಿದಂತೆ ವಿವರಿಸಿದ ರೀತಿ. ನಿಮ್ಮ ಮತ್ತು ನಿಮ್ಮ ಸಹೋದರರ ಚರಣ ಕಮಲಗಳಿಗೆ ಈ ಲೇಖನ ಅರ್ಪಿತ.

ಇದು ಖಂಡಿತ ನಾ ಬರೆದಿದ್ದಲ್ಲ, ನನ್ನೊಳಗೆ ಕೂತು, ನನಗೆ ಪ್ರೇರಣೆ ನೀಡಿ ನನ್ನ ಕೈಯಿಂದ ಬರೆಸಿದವರು.  ನೀವೇ ಹೇಳುವಂತೆ ಈ ಲೇಖನ ಮಾಲಿಕೆಯ ದಿಗ್ದರ್ಶನ ಜಗನ್ಮಾತೆ.

ಧನ್ಯವಾದಗಳು ಗುರುಗಳೇ ಮತ್ತು ಆರಂಭದಿಂದಲೂ ಪ್ರೋತ್ಸಾಹಿಸಿದ ಎಲ್ಲಾ ಓದುಗರಿಗೆ ನನ್ನ ಶಿರಸಾ ಪ್ರಣಾಮಿ.. !

Saturday, October 31, 2015

ಕಾಡುವ ಭಾವದೊಳಗೆ ಮಾಸದ ಮಸಣದ ಹೂವು (1984)

ಕೊಳವೆ ಬಾವಿ ತೋಡುವಾಗ ಆ ಯಂತ್ರ ಒಂದೇ ಸಮನೆ ನೆಲವನ್ನು ಕೊರೆಯುತ್ತಾ ಹೋಗುತ್ತದೆ ಎಡಬಿಡದೆ. ಹಾಗೆಯೇ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಅಂತಿಮ ಚಿತ್ರ ಕೂಡ. ಈ ಚಿತ್ರವನ್ನು ಅನೇಕ ಬಾರಿ ನೋಡಿದ್ದೇನೆ. ಈ ಲೇಖನ ಬರೆಯುವ ಮೊದಲು ನೋಡಲು ಕುಳಿತೆ. ಸೂಕ್ಷ್ಮವಾಗಿ ಗಮನಿಸಿದಾಗ ಅರಿವಿಗೆ ಬಂದದ್ದು, ಈ ಚಿತ್ರದಲ್ಲಿ ಅನೇಕ ಉದ್ದುದ್ದ ದೃಶ್ಯಗಳು ಇವೆ (ಲಾಂಗ್ ಶಾಟ್ಸ್). ನನಗೆ ಅಚ್ಚರಿ ಆಯಿತು, ತಾಂತ್ರಿಕತೆ ಮತ್ತು ನಿರ್ದೇಶನದ ಮೇಲೆ ಮತ್ತು ಕತೆಯ ಮೇಲೆ ಹಿಡಿತ ಇದ್ದಾಗ ಎಂಥಹ ಜಾದೂ ಮಾಡಬಹುದು ಎಂದು.

ಈ ಚಿತ್ರ ಚೆನ್ನಾಗಿದೆ ಎಂದರೆ, ಮನುಕುಲದ ಮೇಲೆಯೇ ಒಂದು ರೀತಿಯಲ್ಲಿ ವಾಕರಿಕೆ ಬರುತ್ತದೆ, ಏಕೆಂದರೆ ಇದರ ಹುಟ್ಟಿಗೆ ಮನುಕುಲದ ವಿಷಮ ಮನಸ್ಥಿತಿಯೇ ಕಾರಣ. ಶ್ರೀ ತ ರಾ ಸುಬ್ಬರಾಯರು ರಚಿಸಿದ ಅನೇಕ ಕೃತಿಗಳು ಚಲನಚಿತ್ರಗಳಾಗಿವೆ. ಇದು ಒಂದು ರೀತಿಯ ವಿಚಿತ್ರ ಪರಿಸ್ಥಿತಿ. ಪುಟ್ಟಣ್ಣ ಅವರು ಈ ಚಿತ್ರವನ್ನು ನಿರ್ದೇಶಿಸಿದ ರೀತಿ ನೋಡಿದಾಗ, ಮುಂದಿನ ಚಿತ್ರಗಳು ಹೇಗಿರಬಹುದು ಎನ್ನುವ ಒಂದು ಖುಷಿ ಮನಸ್ಸಿಗೆ ಬಂದಿದ್ದು ಸುಳ್ಳಲ್ಲ. 

ಕಾರಣ, ನಾ ಮಸಣದ ಹೂವು ಕಾದಂಬರಿಯನ್ನು ಓದಿದಾಗ ಅಕ್ಷರಶಃ ಮನಸ್ಸು ಗಲಿಬಿಲಿಗೊಂಡಿದ್ದು ಮತ್ತು ಮನಸ್ಸು ತಲ್ಲಣಗೊಂಡಿದ್ದು ನಿಜ. ಮನುಜ ತನಗೆ ಬೇಕಾದ ದೇಹದ ಬಯಕೆಗೆ ಅಥವಾ ತನ್ನ ಕೆಲಸ ಸಾಧಿಸಿಕೊಳ್ಳುವ ತವಕದಲ್ಲಿ ಸಮಾಜದಲ್ಲಿ ಒಂದು ಅಸಹ್ಯ ಎನಿಸುವ ಒಂದು ಮೂಲೆಯನ್ನು ಸೃಷ್ಠಿ ಮಾಡಿದ್ದಾನೆ ಎಂದು ಅರಿವಾದಾಗ ನಿಜಕ್ಕೂ ವಕರಿಕೆಯೇ ಬರುತ್ತದೆ. ಕಾದಂಬರಿ ಕತೃ, ಆ ಲೋಕದ ದೃಶ್ಯವನ್ನು ಅಷ್ಟು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ. 

ಪುಟ್ಟಣ್ಣ ಕಣಗಾಲ್ ಅವರು ಅಕ್ಷರಶಃ ಪುಸ್ತಕದಲ್ಲಿ ಇರುವಂಥಹ ಕ್ರೌರ್ಯ, ಸಾಕಪ್ಪ ಎನ್ನಿಸುವಷ್ಟು ಮನಸ್ಸಿಗೆ ಹಿಂಸೆ ಅನ್ನಿಸುವ ದೃಶ್ಯಗಳನ್ನು ನವಿರಾಗಿ, ಮನಕ್ಕೆ ತಾಕುವಂತೆ ಚಿತ್ರೀಕರಿಸಿದ್ದಾರೆ. ಈ ರೀತಿಯ ಕಥೆಗಳನ್ನು ದೃಶ್ಯಕಾವ್ಯವಾಗಿ ಮಾಡಲು ಅದ್ಭುತ ಸೃಜನಶೀಲತೆ ಬೇಕು.  ಎಲ್ಲೇ ಮೀರಲು ಎಲ್ಲಾ ಅವಕಾಶಗಳು ಇದ್ದಾಗ್ಯೂ, ಸಹ್ಯವಾಗಿ ಚಿತ್ರವನ್ನು ಕೊಟ್ಟಿರುವುದು ಅವರ ಅಸಾಧಾರಣ ಪ್ರತಿಭೆಯ ವಿರಾಟ್ ರೂಪ ಎಂಬ ಮಾತು ನನ್ನದು. 

ಉತ್ತುಂಗದಲ್ಲಿದ್ದ ಅಂಬರೀಶ್ ಅಕ್ಷರಶಃ ತಮ್ಮ ಗುರುಗಳ ದಿಗ್ದರ್ಶನದಲ್ಲಿ ತಮ್ಮ ಇಮೇಜ್ ಬಿಟ್ಟು ಅಭಿನಯಿಸಿದ್ದಾರೆ. ಮೇಡಂ ನನಗೆ ಎರಡು ಸಾವಿರ ಕೊಡಿ, ನೀವು ಹೇಳಿದ ಕೆಲಸ ಮಾಡಿಕೊಂಡು ಇರುತ್ತೇನೆ ಎನ್ನುವಾಗ ಅವರ ಕಣ್ಣುಗಳಲ್ಲಿ ಕಾಣುವ ನೋವು, ಜೀವನದ ಬಗ್ಗೆ ತಿರಸ್ಕಾರ ಜೊತೆಯಲ್ಲಿಯೇ, ಹೇಗಾದರೂ ಸರಿ ಬದುಕಬೇಕು ಎನ್ನುವ ಭಾವ ಎದ್ದು ಕಾಣುತ್ತದೆ. ತಮ್ಮ ತಾಯಿಗೆ ರಾತ್ರಿಯೊಳಗೆ ನಾ ಬರದಿದ್ದರೆ, ಇಲಿ ಪಾಷಾಣ ಮತ್ತು ನೀರು ಇದೆ ಎನ್ನುವ ಧ್ವನಿಯಲ್ಲಿ ನಿರಾಶೆ, ಹತಾಶೆ ಮತ್ತು ತನ್ನ ತಾಯಿಗೆ, ಬಡತನದಿಂದ ಮುಕ್ತಿ ನೀಡಲು ವಿಷ ತಿನ್ನು ಎಂದು ಹೇಳುವಂಥಹ ದೃಶ್ಯ. ಇದರಲ್ಲಿ ಅವರ ಅಭಿನಯ ಕಣ್ಣಲ್ಲಿ ನೀರು ಮೂಡಿಸುತ್ತದೆ. 

ಎರಡು ಸಾವಿರ ಕೊಡಿ ಎಂದಾಗ, ಅದಕ್ಕೆ ಕೆಲವು ನಿಯಮಗಳಿವೆ ಎಂದಾಗ, ಏನೇ ಆಗಲಿ, ನಾ ನೀವು ಹೇಳುವ ಕೆಲಸ ಮಾಡುತ್ತೇನೆ ಎಂದು ಎರಡು ಬೊಗಸೆಗಳನ್ನು ಒಡ್ಡಿ ನಿಂತಾಗ, ಯಾರ ಕಣ್ಣಲ್ಲೇ ಆದರೂ ಜೋಗದ ಹನಿ ಕಂಡೆ ಕಾಣುತ್ತದೆ. ತಲೆಹಿಡುಕನ ಪಾತ್ರದಲ್ಲಿ ಅದ್ಭುತ ಪರಕಾಯ ಪ್ರವೇಶ. ನಡೆ, ನುಡಿ, ಹಾವ ಭಾವ, ಅಬ್ಬಬ್ಬ ಎನ್ನಿಸುತ್ತದೆ. 

ಜಯಂತಿ, ಮಾತೆ ಬೇಡ, ಹಲವಾರು ದೃಶ್ಯಗಳಲ್ಲಿ ಬರಿ ಕಣ್ಣುಗಳಲ್ಲೇ ಅಭಿನಯ ತೋರಿಸಿದ್ದಾರೆ. ಆ ಪಾತ್ರಕ್ಕೆ ಬೇಕಾದ ಅಂಗೀಕ ಅಭಿನಯ, ತಿರಸ್ಕಾರ, ಹಣಕ್ಕೆ ಮಾತ್ರ ಪ್ರಾಮುಖ್ಯತೆ ಮಿಕ್ಕವು ಗೌಣ ಎಂದು ಕೆಲವು ದೃಶ್ಯಗಳಲ್ಲಿ ಕಂಡು ಬಂದರೆ, ಇನ್ನೂ ಕೆಲವು ದೃಶ್ಯಗಳಲ್ಲಿ ನಂಬಿದವರನ್ನು ಸಲಹುವುದು, ಜೊತೆಯಲ್ಲಿಯೇ ಅವರನ್ನು ರಕ್ಷಿಸಲು ಮುಂದಾಗುವ ರೀತಿಯ  ಅಭಿನಯ ಅವರು ಮಾತ್ರ ಮಾಡಲು ಸಾಧ್ಯ. ತಾನು ಕಳಿಸಿದ ಹುಡುಗಿಯ ವರ್ತನೆ ಬಗ್ಗೆ ಕೇಳಿಬಂದಾಗ ಕೋಪಗೊಂಡು ಆ ಹುಡುಗಿಗೆ ದಂಡಿಸುತ್ತಾರೆ, ನಂತರ ನಿಜದ ಅರಿವಾದ ಮೇಲೆ, ಆಕೆಯನ್ನು ತಬ್ಬಿಕೊಂಡು ಕ್ಷಮೆ ಕೇಳುತ್ತಾರೆ. ಇಂಥಹ ವೃತ್ತಿಯಲ್ಲಿ ಈ ರೀತಿಯ ಮಾನವೀಯತೆಯೂ ಇದೆ ಎಂದು ಕೂಗಿ ತೋರಿಸುವ ಅಭಿನಯ. ಇಡಿ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.  

ಇನ್ನು ಉಳಿದ ಪಾತ್ರಗಳು ಚಿತ್ರಕ್ಕೆ ಬೇಕಾದ ಅಗತ್ಯ ಅಭಿನಯವನ್ನು ನೀಡಿದ್ದಾರೆ. ಇಡಿ ಚಿತ್ರದ ತುಂಬಾ ತುಂಬಿಕೊಂಡಿರುವುದು ಅಂಬರೀಶ್ ಮತ್ತು ಜಯಂತಿ. ಇವರಿಬ್ಬರಿಂದ ಹಿತಮಿತವಾಗಿ, ಪರಿಣಾಮಕಾರಿಯಾಗಿ ಅಭಿನಯ ತೆಗೆದಿರುವುದು ಪುಟ್ಟಣ್ಣ ಅವರ ಅದ್ಭುತ ಹಿಡಿತ ಹೊಂದಿರುವ ನಿರ್ದೇಶನದ ಕುರ್ಚಿ. 

ಪಂಚಾಮೃತದಲ್ಲಿ ಹಾಲು, ಮೊಸರು, ಸಕ್ಕರೆ, ಜೇನುತುಪ್ಪ, ಮತ್ತು ಫಲಗಳು ಸೇರಿದಂತೆ, ಪ್ರತಿ ದೃಶ್ಯವನ್ನು ಕಲೆಯ ಹಾಲಿನ ಕಡಲಲ್ಲಿ ಅದಕ್ಕೆ ಬೇಕಾಗುವ ವಿವಿಧ ಭಾವಗಳನ್ನು ಬೆರೆಸಿ ಅದ್ದಿ ತೆಗೆದಂತೆ ಚಿತ್ರೀಕರಿಸಿದ್ದಾರೆ. ಚಿತ್ರವನ್ನು ನೋಡುತ್ತಾ ಹೋದಂತೆ, ಅಲ್ಲಿ ಚಿತ್ರಕಥಾವಸ್ತುಗಿಂತಲೂ ಪುಟ್ಟಣ್ಣ ಅವರ ನಿರ್ದೇಶಕನ ಜವಾಬ್ಧಾರಿ ಕೊಂಚವೂ ಅಲುಗಾಡದಂತೆ ಆದರೆ ಅವರ ಮೇಲೆ ಹೆಮ್ಮೆ ಬರುವಂತೆ ದೃಶ್ಯಗಳನ್ನು ಪೋಣಿಸಿದ್ದಾರೆ. 

ಕೆಲವು ಅದ್ಭುತ ದೃಶ್ಯಗಳು 
೧) ಮೇಡಂ, ಎರಡು ಸಾವಿರ ಕೊಡಿ ಎಂದಾಗ, ನನಗೆ ಒಂದು ಮುತ್ತು ಕೊಡು ಎಂದು ಕೇಳುತ್ತಾರೆ. ಹಿಂದೆ ಮುಂದೆ ನೋಡುತ್ತಾ ನಿಂತ ನಾಯಕನಿಗೆ ಬಯ್ದು, ಒಂದು ಮುತ್ತು ಕೊಡಲು ಹಿಂದೆ ಮುಂದೆ ನೀಡುವ ನೀನು ಈ ಮನೆಯಲ್ಲಿ ಏನು ತಾನೇ ಕೆಲಸ ಮಾಡ್ತೀಯ, ಹೋಗು ಹೋಗು ಎಂದು ಅಟ್ಟುತ್ತಾರೆ. ಆಗ ಕೊಂಚವೂ ಗಲಿಬಿಲಿ ಗೊಳ್ಳದೆ ಮುತ್ತು ನೀಡುತ್ತಾರೆ, ಆದರೆ ಆ ದೃಶ್ಯವನ್ನು ತೋರಿಸುವ ರೀತಿ ಅದ್ಭುತ. ಅಶ್ಲೀಲತೆ ಇಲ್ಲವೇ ಇಲ್ಲ ಅಲ್ಲಿ.  ಬದುಕಲೇ ಬೇಕು  ಎಂಬ ಹಠ ಬಂದಾಗ, ಜೀವನ ತನಗೆ ತಾನೇ ದಾರಿ ತೋರಿಸುತ್ತದೆ, ಹಾಗೂ ಧೈರ್ಯ ತುಂಬುತ್ತದೆ. 

೨) ಮೇಡಂ, ಸುಮ್ಮನೆ ಎರಡು ಸಾವಿರ ಗೊತ್ತಿರದ ಅವನಿಗೆ ಕೊಟ್ಟು ಬಿಟ್ಟಿರಿ, ಅವನು ಬರದೆ ಹೋದರೆ "ನೋಡು ಅವನು ನಿಯತ್ತಿನ ಮನುಷ್ಯ ಅನ್ನಿಸುತ್ತದೆ, ಒಂದು ವೇಳೆ ಬರದೆ ಹೋದರೆ, ನನ್ನ ಕಾಲುಮುಟ್ಟಿ ನಮಸ್ಕರಿಸಿದ ಅವನ ಶ್ರದ್ಧೆ ವಜಾ ಮಾಡಿಕೊಳ್ಳುತ್ತೇನೆ". ಬಂಡೆಯಲ್ಲಿ ಕೂಡ ನಂಬಿಕೆ ಇದು, ಒಲಿದರೆ ದೇವರಾಗುತ್ತದೆ, ಇಲ್ಲವೇ ಮನೆ ಕಟ್ಟಲು ಕಲ್ಲಾಗುತ್ತದೆ ಎನ್ನುತ್ತದೆ ಸುಭಾಷಿತ. ಎಷ್ಟು ನಿಜ ಅಲ್ಲವೇ. 

೩) ಇದುವರೆಗೂ ಯಾರು ಯಾರಿಗೋ ಕೈ ಮುಗಿದೇ, ಆದರೆ ಇಂದು ಒಂದು ದೇವರ ಮೂರ್ತಿ ತರಹ ಇರುವ ನಿಮಗೆ ಕೈಮುಗಿಯುತ್ತೇನೆ ಎಂದು ಲೋಕನಾಥ್ ಪಾತ್ರಧಾರಿಗೆ ಕೈಮುಗಿಯುವ ಜಯಂತಿ ಅಭಿನಯ. ಆ ಮನೆಗೆ ಬರುವವರೆಲ್ಲ ಬರಿ ಸುಖಃ ಅರಸಿಕೊಂಡು ಬರುವವರಲ್ಲ, ಬದಲಿಗೆ ಮಾನವೀಯತೆಯನ್ನು ಅರಸಿಕೊಂಡು ಬರುವವರು ಇದ್ದಾರೆ ಎನ್ನುವ ನಿರೂಪಣೆ ಇಲ್ಲಿದೆ. 

ಈ ಚಿತ್ರದ ದೊಡ್ಡ ಆಸ್ತಿ ಚಿತ್ರದಲ್ಲಿ ಅದ್ಭುತವಾಗಿ ಚಿತ್ರೀಕರಣಗೊಂಡ ಹಾಡುಗಳು. ಇಂಥಹ ಚಿತ್ರದಲ್ಲೂ ಕರುನಾಡನ್ನು, ಅದರ ಸೊಬಗನ್ನು ತೋರಿಸುವ ಪುಟ್ಟಣ್ಣ ಅವರ ವಿಶಿಷ್ಟ ಭಾವ ಇಲ್ಲೂ ಇದೆ. ಬಹುತೇಕ ಕರಾವಳಿ ಪ್ರದೇಶಗಳಲ್ಲಿ ಚಿತ್ರಿತವಾಗಿರುವ "ಕನ್ನಡ ನಾಡಿನ ಕರಾವಳಿ" ಜಯಚಂದ್ರನ್ ಮತ್ತು ವಾಣಿ ಜಯರಾಂ ಅವರ ಜೇನಿನ ಕಂಠದಲ್ಲಿ ಮೂಡಿ ಬಂದಿದೆ. ಎಸ್ ಆರ್ ಎಕ್ಕುಂಡಿ ಅವರ ಅಮೋಘ ಸಾಹಿತ್ಯಕ್ಕೆ ಕರಾವಳಿಯ ಎಲ್ಲಾ ಪ್ರಕಾರದ ಸಂಗೀತ ಒದಗಿಸಿರುವ ವಿಜಯಭಾಸ್ಕರ್, ಮತ್ತು ನೃತ್ಯ ಸಂಯೋಜನೆ, ಕರುನಾಡಿನ ವಿಶಿಷ್ಠತೆಯನ್ನು ಎತ್ತಿ ತೋರಿಸುವ ಹಾಡಾಗಿ ಉಳಿದುಕೊಂಡು ಬಂದಿದೆ. 

ಪ್ರೀತಿ ಎಲ್ಲಿಂದ ಹುಟ್ಟುತ್ತೆ ಹೇಗೆ ಜೀವನವನ್ನು ಬೆಳಗಬಲ್ಲದು ಎನ್ನುವ ಅನೇಕ ಪ್ರಶ್ನೆಗಳಿಗೆ ಹಾಡಿನ ರೂಪದಲ್ಲಿ ಚಿತ್ರೀಕರಿಸಿದ್ದಾರೆ "ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ" ಮತ್ತೊಮ್ಮೆ ಜಯಚಂದ್ರನ್ ಮತ್ತು ವಾಣಿ ಜಯರಾಂ ಮನಸ್ಸಿನ ಮೂಲೆ ಮೂಲೆಯನ್ನು ತಟ್ಟುತ್ತಾರೆ. ವಿಜಯನಾರಸಿಂಹ ಅವರ ಸರಳ ಆದರೆ ಪರಿಣಾಮಕಾರಿ ಸಾಹಿತ್ಯ ಇಷ್ಟವಾಗಲೇ ಬೇಕು. ಪ್ರೇಮಿಗಳ ಹಾಡಾಗಿ ಬರುತ್ತದೆ. 

ಒಂದು ಕ್ಷಣದ ಆದರೆ ಜೀವನದ ಗತಿಯನ್ನು ಬದಲಾಯಿಸಬಲ್ಲ ತಿರುವನ್ನು ಒಂದು ಹಾದಿ ಬಿಟ್ಟ ಹುಡುಗಿಗೆ ಕೊಡುವ ನಾಯಕನನ್ನು ಕನಸಿನಲ್ಲಿ ಮತ್ತು ಮನಸ್ಸಿನಲ್ಲಿಯೇ ಅಭಿನಂದಿಸುವ ಹಾಡಾಗಿ ಬಂದಿದೆ "ಓ ಗುಣವಂತ". ಈ ಹಾಡಿನ ಸಾಹಿತ್ಯ ಎಷ್ಟು ಬಾರಿ ಕೇಳಿದರೂ, ಹೊಸ ಹೊಸ ರೀತಿಯಲ್ಲಿ ಮನಸ್ಸಿಗೆ ತಾಕುತ್ತದೆ. ಕನಸ್ಸುಗಳ ಮೂಟೆಯನ್ನು ಹೊತ್ತು ಸಾಗುವಾಗ ಬರುವ ಒಂದು ವಿಚಿತ್ರ ತಿರುವು ಮತ್ತು ಆ ತಿರುವಿಗೆ ಒಂದು ಕೊಂಕು ಹಾಕಿ, ಮತ್ತೆ ಹಳಿಗೆ ಬರುವ ಜೀವನ ಪಥವನ್ನು ತೋರುವ ಆ ನಾಯಕನಿಗೆ ಧನ್ಯವಾದಗಳನ್ನು ಅರ್ಪಿಸುವ ಹಾಡನ್ನು ಎಸ್ ಜಾನಕಿಯಮ್ಮ ಆಪೋಶನ ಮಾಡಿ ಹಾಡಿದ್ದಾರೆ. ಸಂಗೀತ, ಅದಕ್ಕೆ ತಕ್ಕಂತೆ ಸಾಹಿತ್ಯ, ಅದಕ್ಕೆ ಬೇಕಾದ ಅದ್ಭುತ ಗಾಯನ... ನಾ ಹೇಳೋಲ್ಲ ನೀವೇ ಕೇಳಿ ಈ ಹಾಡನ್ನು ತಲೆದೂಗದೆ ಇರಲು ಸಾಧ್ಯವೇ ಇಲ್ಲ. 

ಚಂದ್ರ ತೋರಿಸಲೇ, ನಕ್ಷತ್ರಗಳನ್ನು ನಿನ್ನ ಮುಡಿಗೆ ಪೋಣಿಸಲೇ ಎಂದು ಇಲ್ಲದ ಆಸೆ ಹುಟ್ಟಿಸುವ ಪ್ರೇಮಿಗಳ ಆಶಾಪಾಶದ ಮಧ್ಯದಲ್ಲಿ, ನನ್ನ ಮಟ್ಟ ಹೀಗಿದೆ, ನನಗೆ ಅದು ತರಲು ಆಗೋಲ್ಲ, ಇದು ತರಲು ಅಸಾಧ್ಯ ಎಂದು ಹೇಳುತ್ತಲೇ, ನಿನಗಾಗಿ ಏನು ತರಲಿ ಹೇಳು ಎಂದು ಪ್ರೀತಿಯ ನಿವೇದನೆ ಮಾಡುವ ಹಾಡಿನಲ್ಲಿ ಎಸ್ ಅರ್ ಎಕ್ಕುಂಡಿ ವಿರಚಿತ "ಯಾವ ಕಾಣಿಕೆ ನೀಡಲಿ" ಎಂದು ಎಸ್ ಪಿ ಬಾಲಸುಬ್ರಮಣ್ಯಂ ಮನವನ್ನು ತಟ್ಟುತ್ತಾರೆ. 

ಕಸದ ಬಿದ್ದ ಹೂವಿಗೂ ಬೆಲೆಯಿದೆ, ಮುದುಡಿ ಹೋದ ಮಾಲೆಗೆ ಬೆಲೆ ಕಟ್ಟುವ ಮನಸಿದ್ದರೆ ಸಾಕು, ಅದು ಹೃದಯ ಕಮಲದ ಗುಡಿಯಲ್ಲಿ ಪೂಜೆಗೆ ಅರ್ಹವಾಗುವ ಮನಸ್ಸಿಗೆ ಅರ್ಪಿತವಾಗುತ್ತದೆ ಎನ್ನುವ ಒಂದು ಹೃದಯ ಹಿಂಡುವ ಸಾಹಿತ್ಯ "ಮಸಣದ ಹೂವೆಂದು ನೀನೇಕೆ ಕೊರಗುವೆ" ಹಾಡು, ಇಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರ "ಪಾರ್ವತಿ" ಎಂದು ಕೂಗುವ ಶಬ್ದ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ. 

ಹಾಡುಗಳು ಚಿತ್ರದ ಅವಿಭಾಜ್ಯ ಅಂಗ ಮತ್ತು ಅದು ಕತೆಯನ್ನು ಮುಂದುವರೆಸಲು ಸಹಾಯವಾಗುತ್ತದೆ ಎಂದು ಬಲವಾಗಿ ನಂಬಿದ್ದ ಪುಟ್ಟಣ್ಣ ಕಣಗಾಲ್ ತಮ್ಮ ಅಂತಿಮ ಚಿತ್ರದಲ್ಲಿಯೂ ಕೂಡ ಹಾಡುಗಳನ್ನು ಸರಿಯಾದ ಜಾಗದಲ್ಲಿ ಅಳವಡಿಸಿಡಿಸಿ ಕಥೆಯ ಓಟಕ್ಕೆ ಒಂದು ನಿರ್ಧಿಷ್ಟ ವೇಗವನ್ನು ಕೊಟ್ಟಿದ್ದಾರೆ. 

ಇಡಿ ಚಿತ್ರ ಎಲ್ಲೂ ಒಂದಿನಿತು ಬೇಸರ ತರಿಸುವುದಿಲ್ಲ. ಒಬ್ಬ ಜಾದೂಗಾರ ಯಕ್ಷಿಣಿ ಮಾಡಿ ಮಾಡಿ ಜನರ ಮನಸ್ಸನ್ನು ಗೆಲ್ಲುವಂತೆ, ಪ್ರತಿ ದೃಶ್ಯಗಳನ್ನು ಜಾದೂಗಾರಿಕೆಯ ದಂಡದಿಂದ ಸ್ಪರ್ಶ ಮಾಡಿ, ಮರೆಯದ ಮಾಣಿಕ್ಯವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿದ್ದಾರೆ. 

ಅನುಗ್ರಹ ಮೂವಿ ಮೇಕರ್ಸ್ ಲಾಂಛನದಲ್ಲಿ ಬಿ ಎಸ್ ಗಾಯತ್ರಿ ಮತ್ತು ಎಸ್ ಆರ್ ಸರ್ವೋತ್ತಮ ಕಣಗಾಲ್ ಅವರ ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರ ರತ್ನಕ್ಕೆ ಛಾಯಾಗ್ರಾಹಣ ಮಾಡಿದವರು ಎಸ್ ಮಾರುತಿರಾವ್.  ಸರಳ ಆದರೆ ಪರಿಣಾಮಕಾರಿ ಸಂಭಾಷಣೆ ನೀಡಿದವರು ಟಿ ಜಿ ಅಶ್ವತ್ ನಾರಾಯಣ. 

ತಮ್ಮ ಎಲ್ಲಾ ಕಾಯಕಕ್ಕೂ ಪ್ರೇರೇಪಣೆ ನೀಡಿದ ಜಗನ್ಮಾತೆಯನ್ನು ಸ್ಮರಿಸುತ್ತಾ  ಆ ಮಾತೆಯ ದಿಗ್ದರ್ಶನದಲ್ಲಿ ಈ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟವರು ಪುಟ್ಟಣ್ಣ ಕಣಗಾಲ್ ಅವರು. 

ತಾವು ಕಂಡ ರೀತಿಯಲ್ಲಿ ಚಿತ್ರವನ್ನು ಮುಗಿಸುವ ಮೊದಲೇ ಆ ಜವರಾಯನ ಕರೆಗೆ ಓಗೊಟ್ಟು ಇಹಲೋಕದಿಂದ ಹೊರನೆಡೆದ ಮೇಲೆ, ಅವರಿಗೆ ಗೌರವ ಸಲ್ಲಿಸುತ್ತಲೇ, ಉಳಿದ ಭಾಗವನ್ನು ಆದಷ್ಟು ಪುಟ್ಟಣ್ಣ ಅವರ ಕಲ್ಪನೆಯಲ್ಲಿ ಇರಬಹುದು ಎನ್ನುವ ರೀತಿಯಲ್ಲಿ ಚಿತ್ರವನ್ನು ಪೂರ್ಣಗೊಳಿಸಿ, ತಾವು ಚಿತ್ರೀಕರಿಸಿದ ಭಾಗದಲ್ಲಿ ತಪ್ಪಿದ್ದರೆ ಅದು ತಮ್ಮದೇ ಎಂದು ಹೇಳಿ ತಮ್ಮ ಗೆಳೆಯ ಪುಟ್ಟಣ್ಣ ಕಣಗಾಲ್ ಅವರಿಗೆ ವಂದನೆ ಅರ್ಪಿಸುವ ಇತ್ತೀಚಿಗಷ್ಟೇ ಪುಟ್ಟಣ್ಣ ಕಣಗಾಲ್ ಅವರನ್ನು ಸ್ವರ್ಗದಲ್ಲಿ ಭೇಟಿ ಮಾಡಲು ತೆರಳಿದವರು ರವಿ ಅಥವಾ ಕೆ ಎಸ್ ಎಲ್ ಸ್ವಾಮೀ. 



ಈ ಚಿತ್ರದ ಹೆಸರು ಮಸಣದ ಹೂವು ಎಂದಿದ್ದರೂ ಕನ್ನಡಿಗರ ಮತ್ತು ಚಲನ ಚಿತ್ರ ರಸಿಕರ ಹೃದಯ ಕಮಲದಲ್ಲಿ ಈ ಚಿತ್ರ ಎಂದೂ ಬಾಡದ ಪಾರಿಜಾತ ಹೂವಾಗಿ ಸದಾ ನಗುನಗುತ್ತಲೇ ಇರುತ್ತದೆ. 

ಪುಟ್ಟಣ್ಣ ಕಣಗಾಲ್ ಮತ್ತು ರವಿ ಅವರಿಗೆ ಈ ಲೇಖನ ಅರ್ಪಿತ. 

Thursday, October 29, 2015

ಸ್ನೇಹದ ಅಮೃತ ಸಿಂಚನ ಮಾಡುವ ಅಮೃತ ಘಳಿಗೆ (1984)

ಸಮುದ್ರದಲ್ಲಿ ತೇಲುವ ಅನುಭವ ಎಷ್ಟು ಸೊಗಸೋ ಅಷ್ಟೇ ಭಯನಕವಾಗಿರುತ್ತೆ ದೈತ್ಯ ಅಲೆಗಳು ಸುತ್ತ ಮುತ್ತಲ ಸೃಷ್ಠಿಯನ್ನು ಆಪೋಶನ ಮಾಡುವಾಗ. ಆದರೆ ಆ ದೈತ್ಯ ಅಲೆಗಳಿಗೆ ಶಕ್ತಿ ಕೊಡುವುದು ಯಾವುದು ಗೊತ್ತೇ, ಕಡಲಲ್ಲಿ ಇರುವ ನೀರು ಮತ್ತು ಅದರ ಮೇಲೆ ಬೀಸುವ ಗಾಳಿ.

ನಿಜ ಅದರ ಒಡಲೊಳಗೆ ಇರುವ ನೀರು ದೈತ್ಯಾಕಾರ ತಾಳುತ್ತದೆ ಎಂದರೆ, ಅದರೊಳಗಿನ ಶಕ್ತಿ ನಮ್ಮ ಊಹೆಗೆ ನಿಲುಕದ್ದು. 

ಪುಟ್ಟಣ್ಣ ಕಣಗಾಲ್ ಅವರು ಮಾಮೂಲಿ ಎನ್ನುವ ಕಥೆಯನ್ನು ಕೂಡ ಅಸಾಧಾರಣ ರೀತಿಯಲ್ಲಿ ತೆರೆಯ ಮೇಲೆ ಬಡಿಸುತ್ತಿದ್ದುದು ಅವರ ಅಗಾಧ ಪ್ರತಿಭೆಯ ಶಕ್ತಿಯಿಂದ. ನಮ್ಮ ಕಣ್ಣಿಗೆ ಸಾಧಾರಣ ಎನ್ನಿಸುವುದನ್ನು ಅಷ್ಟೇ ವಿವರವಾಗಿ, ವಿಶಿಷ್ಟ ರೀತಿಯಿಂದ ಹೀಗೂ ನೋಡಬಹುದು ಎನ್ನುವುದನ್ನು ಕಳಿಸಿಕೊಟ್ಟ ಗುರುಗಳು ಅವರು. 

ಅಮೃತ ಘಳಿಗೆ ಈ ಚಿತ್ರದ ಕಥೆಯನ್ನು ಅವರ ಜೀವದ ಗೆಳೆಯ ಮೋಹನ್ ಕಂಪ್ಲಾಪುರ್ ಕೊಟ್ಟಾಗ ಅ ಪುಸ್ತಕದ ಮೇಲೆ ಇದ್ದ ಶಿರೋನಾಮೆ "ದೊಡ್ಡೇರಿ ವೆಂಕಟಗಿರಿ ರಾವ್ - "ಅವಧಾನ" ". ಅದನ್ನೇ ಸುಂದರ ಚಿತ್ರಕಥೆ ಮಾಡಿ, ಅದಕ್ಕೊಂದು ಸುಂದರ ತಾಣವನ್ನು ಹುಡುಕಿ, ಅಮೃತ ಘಳಿಗೆ ಎನ್ನುವ ಒಂದು ನಿತ್ಯ ನೂತನ ಚಿತ್ರವನ್ನು ನೀಡಿದರು. ಈ ಕಥೆ ಆ ಕಾಲದಲ್ಲಿ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿತ್ತು. ಪುಟ್ಟಣ್ಣ ಅವರ ಹುಡುಕಾಟದಲ್ಲಿ ಸಿಕ್ಕ ಇಂಥಹ ಕಥಾ ಮುತ್ತುಗಳು ಹೇರಳ. 

ಎಸ್ ಆರ್ ರಾಜನ್, ಭೀಮ ರಾವ್, ಕೆ ನಾಗರತ್ನ, ಪುಟ್ಟಣ್ಣ ಕಣಗಾಲ್ ತಂಡ ನಿರ್ಮಾಪಕರಾಗಿ ಈ ಚಿತ್ರವನ್ನು ಜಯಭೇರಿ ಫಿಲಂಸ್ ಲಾಂಛನದಲ್ಲಿ ತೆರೆಗೆ ತಂದರು. 

ಆರಂಭದಲ್ಲಿ ಪುಟ್ಟಣ್ಣ ಅವರ ಮಾತೃಶ್ರಿ ಅವರಿಗೆ ನಮನ ಸಲ್ಲಿಸುತ್ತಾ, ಶುರುವಾಗುವ ಈ ಚಿತ್ರದ ವಿಶೇಷ ಛಾಯಾಗ್ರಹಣ ಬಿ ಎಸ್ ಬಸವರಾಜ್ ಅವರದ್ದು. ಅದ್ಭುತ ಹಾಡುಗಳನ್ನು ಬರೆದದ್ದು ಜೀವದ ಗೆಳೆಯ ವಿಜಯನಾರಸಿಂಹ ಅದಕ್ಕೆ ಸಂಗೀತ ಕಿರೀಟ ತೊಡಿಸಿದವರು ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್. 

ಪುಟ್ಟಣ್ಣ ಅವರಿಗೆ ಕರುನಾಡಿನ ಪ್ರತಿಭೆಗಳನ್ನು, ಕರುನಾಡಿನ ಸುಂದರ ತಾಣಗಳನ್ನು ಪರಿಚಯಿಸುವ ಉತ್ಸಾಹ ಯಾವಾಗಲೂ ಇತ್ತು. ಅವರ ಚಿತ್ರಗಳ ಮೂಲಕ ಬೆಳಕಿಗೆ ಬಂದ ನಕ್ಷತ್ರಗಳು ಅನೇಕ ಅನೇಕ. ಈ ಚಿತ್ರದ ಮೂಲಕ ಕರುನಾಡಿಗೆ ಕೊಟ್ಟ ಉಡುಗೊರೆ ಬಿ ಆರ್ ಛಾಯ ಎನ್ನುವ ಕರುನಾಡಿನ ಮನೆಮಗಳಾದ ಗಾಯಕಿ. 

ಚುರುಕು ಸಂಭಾಷಣೆ, ಹಿತಮಿತವಾದ ಪದಗಳು ಪುಟ್ಟಣ್ಣ ಚಿತ್ರಗಳ ಆಸ್ತಿ, ಈ ಚಿತ್ರಕ್ಕೆ ಪದಗಳನ್ನು ಜೋಡಿಸಿದವರು ಬಿ ಎಲ್ ವೇಣು. ಜಗನ್ಮಾತೆಯ ದಿಗ್ದರ್ಶನದಲ್ಲಿ ಚಿತ್ರಕಥೆ, ನಿರೂಪಣೆ ಮತ್ತು ನಿರ್ವಹಣೆ ಪೂಜ್ಯ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರದ್ದು. 

ಪುಟಿಯುವ ಯೌವನದ ಉತ್ಸಾಹ ಕೆಲವೊಮ್ಮೆ ಎಂಥಹ ಹಾದಿಯನ್ನು ಹಿಡಿಯುತ್ತದೆ ಎನ್ನುವುದರ ಆರಂಭ ಈ ಚಿತ್ರದ ಆರಂಭಿಕ ದೃಶ್ಯದಲ್ಲಿ ಕಾಣುತ್ತದೆ. ಬುಗ್ಗೆ ಬುಗ್ಗೆಯಾಗಿ ದೋಣಿಯ ಮೋಟಾರಿನ ಕೆಳಗೆ ಉಕ್ಕುವ ನೀರು ಈ ಮಾತಿಗೆ ಸಾಕ್ಷಿ. 
ಆಧುನಿಕ ಪ್ರಪಂಚ ದಾಪುಗಾಲು ಇಡುತ್ತಾ ಸಾಗಿದಾಗ ಪ್ರಕೃತಿಯನ್ನು ಮನುಷ್ಯ ಹೇಗೆ ಕಬಳಿಸುತ್ತಾ ಹೋಗುತ್ತಾನೆ ಎನ್ನುವುದಕ್ಕೆ ಶರಾವತಿ ಹಿನ್ನೀರಿನ ಬಗ್ಗೆ ನಾಯಕಿ ಮಾತಲ್ಲಿ ಬರುವ ಆರಂಭಿಕ ಸಂಭಾಷಣೆ ಸಾಕ್ಷಿಯಾಗಿ ನಿಲ್ಲುತ್ತದೆ. 

ಶಾಲೆಯ ಕಡಿವಾಣದ ದಿನಗಳಿಂದ ಕಾಲೇಜು ಎನ್ನುವ ಸ್ವತಂತ್ರ ಎನ್ನುವ ಇನ್ನೊಂದು ಪರಿಧಿಯೊಳಗೆ ಹೋಗುವ ಹರೆಯದ ತುಡಿತವನ್ನು ಕೆಲವೇ ದೃಶ್ಯಗಳಲ್ಲಿ ಅಚ್ಚುಕಟ್ಟಾಗಿ ತಂದಿದ್ದಾರೆ. ನೋಡಿದ ತಕ್ಷಣ ರೂಪು, ವಯ್ಯಾರ ಅಥವಾ ಲಕ್ಷಣಗಳನ್ನು ಗಮನಿಸದೆ ಪ್ರೀತಿ ಎನ್ನುವ ಒಂದು ವಿಚಿತ್ರ ಭಾವಕ್ಕೆ ಬೀಳುವ ನಾಯಕ ಪಾತ್ರಧಾರಿ ರಾಮಕೃಷ್ಣ ಉತ್ತಮವಾಗಿ ಅಭಿನಯಿಸಿದ್ದಾರೆ. ನಾಯಕಿ ಪದ್ಮಾವಾಸಂತಿ ಮತ್ತೆ ಅಭಿನಯವನ್ನು ಸಾಣೆ ಹಿಡಿದಂತೆ ನಟಿಸಿದ್ದಾರೆ. ಇನ್ನೂ ಮೊದಲ ಪರಿಚಯ ಶ್ರೀಧರ್ ಗಂಭೀರ ಪಾತ್ರದಲ್ಲಿ ಮಿಂಚಿದ್ದಾರೆ. ಎಲ್ಲೂ ಅತಿರೇಕದ ಅಭಿನಯ ಅಥವಾ ದೃಶ್ಯಗಳನ್ನು ಕಟ್ಟಿ ಕೊಡದಿರುವುದು ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಪ್ರಮುಖ ಆಕರ್ಷಣೆ. ಹದವಾಗಿ, ನವಿರಾದ ಸಂಭಾಷಣೆಗಳು ಮತ್ತು ಅದಕ್ಕೆ ಬದ್ಧವಾಗಿ ನಿಲ್ಲುವ ದೃಶ್ಯ ಜೋಡಣೆ, ಪರಿಸರ ಇದು ಈ ಚಿತ್ರದ ಮತ್ತೊಂದು ಆಕರ್ಷಣೆ. ರಾಮಕೃಷ್ಣ ಒಬ್ಬರನ್ನು ಬಿಟ್ಟರೆ ಮಿಕ್ಕೆಲ್ಲಾ ಕಲಾವಿದರು ಅಷ್ಟೇನೂ ಬೆಳಕಿಗೆ ಬಂದು ಮಿಂಚಿದ ಪ್ರತಿಭೆಗಳಲ್ಲ. ಆದರೆ ಪ್ರತಿಯೊಬ್ಬರಲ್ಲೂ ಕಥೆಗೆ ಬೇಕಷ್ಟು ಅಭಿನಯ ಹೊಮ್ಮಿಸಿರುವ ರೀತಿ ಇಷ್ಟವಾಗುತ್ತದೆ.

ಸೂರ್ಯಾಸ್ತದ ಅನೇಕ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರುವ ಪುಟ್ಟಣ್ಣ, ಅದನ್ನು ಸರಿಯಾದ ದೃಶ್ಯಕ್ಕೆ ಒಪ್ಪವಾಗಿ ಜೋಡಿಸಿದ್ದಾರೆ.

ಮೊದಲ ಪ್ರೇಮವನ್ನು ನಿವೇದಿಸುತ್ತಾ ಮನಸ್ಸಲ್ಲೇ ರಮ್ಯ ಕಲ್ಪನೆ ಮಾಡಿಕೊಳ್ಳುವ ಹಾಡಾಗಿ "ಮಯೂರಿ ನಾಟ್ಯ ಮಯೂರಿ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಛಾಯ ಅವರ ಕಂಠ ಸಿರಿಯಲ್ಲಿ ಬರುತ್ತದೆ. ರಾಮಕೃಷ್ಣ ಅವರ ನೃತ್ಯ, ಪದ್ಮಾವಾಸಂತಿ ಅಭಿನಯ ಈ ಹಾಡಿನ ಮೆಚ್ಚತಕ್ಕ ಅಂಶ. ಶರಾವತಿ ಹಿನ್ನೀರಿನ ರಮ್ಯ ತಾಣವನ್ನು ಪರಿಚಯಿಸಿಕೊಡುತ್ತಾರೆ

ಪ್ರಣಯದ ಉತ್ತುಂಗ, ಮತ್ತು ಮನಸ್ಸಿನ ಮೇಲೆ ಹಿಡಿತ ಜಾರುವ ದೃಶ್ಯವನ್ನು ಹಾಡಾಗಿ "ಪಾರವತಿ ಪರಶಿವನ ಪ್ರಣಯ ಪ್ರಸಂಗ" ಹಾಡಿನಲ್ಲಿ ಮನಸ್ಸಿನ ಮೇಲೆ ಬೀರುವ ವಿಧ ವಿಧ ಭಾವಕ್ಕೆ ಒಪ್ಪುವಂತೆ ಬಣ್ಣ ಬಣ್ಣಗಳ ಬೆಳಕಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ ಇಕ್ಕೇರಿಯ ದೇಗುಲದಲ್ಲಿ. ಪುಟ್ಟಣ್ಣ ಅವರ ತಾಂತ್ರಿಕ ಜ್ಞಾನದ ಭವ್ಯ ಅನಾವರಣ.

ಮುಂದಿನ ವಿದ್ಯಾಭ್ಯಾಸಕ್ಕೆ ಹೊರಡುವ ನಾಯಕ, ಮೊದಲ ಕಾಗದವನ್ನು ತಲುಪಿಸಿದಾಗ ಅದನ್ನು ಓದುವ ನಾಯಕಿ, ಮತ್ತು ಆ ದೃಶ್ಯವನ್ನು ಉಯ್ಯಾಲೆಯಲ್ಲಿ ತೂಗಿದಂತೆ ಚಿತ್ರೀಕರಿಸಿದ್ದಾರೆ. ಅದನ್ನು ನಾಯಕಿಯ ದೇಹದಲ್ಲಿ ಆಗುವ ಬದಲಾವಣೆ ಮತ್ತು ನಾಯಕ ಹೊರಳಿದ ಪಥದಲ್ಲಿ ನಿಲ್ಲುವನು ಎನ್ನುವ ಉಪಮೆ ನೀಡಿದ್ದಾರೆ. ಬಿಸಿಗೆ ಕರಗಿದ ಮಂಜಿನಂತೆ ನಾಯಕನ ಪ್ರೇಮವೂ ಪ್ರೀತಿಯೂ ಅನುಮಾನಕ್ಕೆ ತಿರುಗುತ್ತೆ ಇದರ ಮುನ್ಸೂಚನೆ ಈ ದೃಶ್ಯದಲ್ಲಿ ಕಾಣುತ್ತದೆ.

ನಾಯಕಿ ತನ್ನ ಬವಣೆಯನ್ನು ತನ್ನ ಆತ್ಮೀಯ ಸ್ನೇಹಿತ ಶ್ರೀಧರ್ ಗೆ ಹೇಳಲು ಹೊರ ಕರೆಯುತ್ತಾಳೆ, ಆದರೆ ಸ್ನೇಹಿತನ ಮುಂದೆ ತಾನು ಕಾಲು ಜಾರಿದ್ದೇನೆ ಎಂದು ಹೇಳಲು ತೊಳಲಾಡುವ ದೃಶ್ಯವನ್ನು ಅಷ್ಟೇ ಅದ್ಭುತವಾಗಿ ಕ್ಯಾಮೆರ ಓಡಾಡುತ್ತಲೇ ಇರುವಂತೆ ತೋರಿಸಿದ್ದಾರೆ. ಶ್ರೀಧರ್ ಹತ್ತಿರ ಬಂದು ಏನು ಸಮಾಚಾರ ಎಂದಾಗ, ಕ್ಯಾಮೆರ ನಿಲ್ಲುತ್ತದೆ, ಅಂದರೆ, ಜೀವದ ಗೆಳೆಯ ಆತ್ಮ ವಿಶ್ವಾಸ ತುಂಬುತ್ತಾನೆ ಮತ್ತು ತನ್ನ ಎಲ್ಲಾ ಕಷ್ಟಗಳಿಗೆ ಸ್ಪಂಧಿಸುತ್ತಾನೆ ಎನ್ನುವ ಭರವಸೆ ಮೂಡಿದಾಗ ತೂಗಾಡುವ ಮನಸ್ಸು ಒಂದು ತಹಬದಿಗೆ ನಿಲ್ಲುತ್ತದೆ ಎನ್ನುವ ಮಾತನ್ನು ಈ ದೃಶ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.

ನಾಯಕಿಯ ಪರಿಸ್ಥಿತಿಗೆ ಪರಿಹಾರ ಎನ್ನುವಂತೆ ತಾನೇ ಮದುವೆ ,ಮಾಡಿಕೊಳ್ಳುವ ಶ್ರೀಧರ್, ತನ್ನ ತಾಯಿಗೆ ಹೇಳುವ ಮಾತು "ಯಾವತ್ತೂ ಯಾವ ಕಾರಣಕ್ಕೂ ಇವಳ ಮನಸ್ಸನ್ನು ನೋಯುವ ಮಾತನ್ನು ಆಡಬೇಡ" ಎಂದಾಗ ತಾಯಿ ಹೇಳುವ ಅದ್ಭುತ ಮಾತು "ಮಗ ಇಷ್ಟ ಪಟ್ಟು ಮದುವೆ ಮಾಡಿಕೊಂಡ ಹೆಣ್ಣನ್ನು ನಿಕೃಷ್ಟವಾಗಿ ಕಾಣುವಷ್ಟು ಕೆಟ್ಟ ತಾಯಿಯಲ್ಲ" ಎನ್ನುತ್ತಾಳೆ.

ಇದಕ್ಕೆ ವಿವರಣೆಯೇ ಬೇಡವೇ ಬೇಡ.

ಕರುನಾಡಿನ ರಮ್ಯತಾಣ ಶ್ರೀಧರ ತೀರ್ಥ ಇರುವ ವರದಹಳ್ಳಿ. ಇಲ್ಲಿ ಚಿತ್ರೀಕರಣ ಮಾಡಿದ್ದಾರೆ ಒಂದು ಅದ್ಭುತ ಹಾಡನ್ನು "ಹಿಂದೂಸ್ಥಾನವು ಎಂದೂ ಮರೆಯದ" ಜಯಚಂದ್ರನ್ ಹಾಡಿರುವ ರೀತಿ, ಆ ಸಾಹಿತ್ಯ ಅದ್ಭುತ. ಶ್ರೀಧರ್ ಈ ಹಾಡಿಗೆ ಉತ್ತಮ ಅಭಿನಯ ನೀಡಿದ್ದಾರೆ. ಮುಂದೆ ಇದೆ ಹಾಡನ್ನು ಬಿ ಆರ್ ಛಾಯ ಹಾಡಿರುವ ರೀತಿಯೂ ಸೊಗಸಾಗಿದೆ.

ಶ್ರೀಧರ್ ಪಾತ್ರ ಮರಣಹೊಂದಿದಾಗ, ಮುಗ್ಧ ಮಗು ಸ್ಮಶಾನದಲ್ಲಿ ಏನೂ ಮಾತಾಡದೆ ಅಥವಾ ಅಳಲು  ಗೊತ್ತಾಗದೆ ನಿಂತಿರುತ್ತದೆ. ಇಲ್ಲಿ ಯಾವುದೇ ಭಾವನಾತ್ಮಕ ಸಂಭಾಷಣೆ ಇರುವುದಿಲ್ಲ, ನಿಶ್ಯಬ್ಧ... ಅತ್ಯುತ್ತಮ ದೃಶ್ಯ ಇಡಿ ಚಿತ್ರದಲ್ಲಿ.

ಕಡೆಯ ಕೆಲ ದೃಶ್ಯದಲ್ಲಿ ರಾಮಕೃಷ್ಣ ತನ್ನ ತಪ್ಪಿನ ಅರಿವಾಗಿ ನಾಯಕಿಯನ್ನು ನೋಡಲು ಬಂದಾಗ, ನಾಯಕಿಯ ಮೊಗದಲ್ಲಿ ತನ್ನ ಬಾಳನ್ನು ನಾಶ ಮಾಡಿದ ಅವನನ್ನು ನೋಡಿದ ತಕ್ಷಣ ಕೋಪ ಆದರೆ ಕೆಲವು ಕ್ಷಣಗಳಲ್ಲಿ ಶಾಂತ ಸ್ವಭಾವದ ಅಭಿನಯ ಸೂಪರ್ ಸೂಪರ್ ಎನ್ನಿಸುತ್ತದೆ.

ಶ್ರೀಧರ್ ಬರೆದಿಟ್ಟ ಪತ್ರ ಮತ್ತು ಉಯಿಲನ್ನು ಓದುವ ರಾಮಕೃಷ್ಣ ಕೂತಿರುವ ಶರಾವತಿ ಹಿನ್ನೀರಿನ ದಡದಲ್ಲಿ ದೃಶ್ಯವನ್ನು ಪದೇ ಪದೇ ಹಿಂದಕ್ಕೆ ಮುಂದಕ್ಕೆ ಜೂಮ್ ಮಾಡುತ್ತಲೇ ಇರುತ್ತದೆ ದೃಶ್ಯ ಸಂಯೋಜನೆ, ನಾಯಕ ತನ್ನ ಗತ ಜೀವನದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು ಮತ್ತು ಅದಕ್ಕೆ ಒಂದು ಅವಕಾಶವಿದೆ, ಮತ್ತೆ ತನ್ನ ತಪ್ಪನ್ನು ಸರಿ ಪಡಿಸಿಕೊಳ್ಳಲಿಕ್ಕೆ ಸಾಧ್ಯವಿದೆ ಎನ್ನುವ ಅಭಿಪ್ರಾಯ ಮೂಡಿಬರಲು ಸಹಾಯ ಮಾಡುತ್ತದೆ.


ಪುಟ್ಟಣ್ಣ ಕಣಗಾಲ್ ಮತ್ತೆ ತಮ್ಮ ಜಾದೂವನ್ನು ತೋರಿಸಿದ ಚಿತ್ರ ಇದು. ಸುಂದರ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿರೂಪಣೆ ಮಾಡಿರುವ ರೀತಿಗೆ ಮನಸ್ಸಲ್ಲೇ ನಮನ ಸಲ್ಲಿಸುತ್ತೇನೆ. 

Sunday, October 18, 2015

ಸಾವಿರ ಸಾವಿರ ಮನಸ್ಸಿನ ಭಾವದ ಉಗಮಸ್ಥಾನ "ಸಾವಿರ ಮೆಟ್ಟಿಲು" - ಪೂರ ಹತ್ತದ ಮೆಟ್ಟಿಲುಗಳು (2006)

ಕಲಾವಿದರ ಕಾಲು ಅಳತೆ ಒಬ್ಬರಿಂದ ಒಬ್ಬರದು ವಿಭಿನ್ನ ಎಂದು ಹೇಳುತ್ತಾರೆ. ಒಬ್ಬರ ಪರಿಶ್ರಮದ ಪಾದರಕ್ಷೆ ಇನ್ನೊಬ್ಬರ ಕಾಲಿಗೆ ಆಗೋಲ್ಲ ಎಂದು.

ಪುಟ್ಟಣ್ಣ ಕಣಗಾಲ್ ಒಂದು ಪ್ರತಿಭಾ ಪೆಟ್ಟಿಗೆ, ಅವರ ಮೆದುಳು ಒಂದು ಈಗಿನ ಕಾಲದ ಮಾಹಿತಿ ಕೇಂದ್ರ ಅಥವಾ ಕಂಪ್ಯೂಟರ್ ಇದ್ದ ಹಾಗೆ. ಅವರ ಬಗ್ಗೆ ಜನಜನಿತ ಮಾತು ಅಂದರೆ, ಅವರು ಒಂದು ಸಿನಿಮಾ ಕೈಗೆತ್ತಿಕೊಂಡರೆ ಅದರಲ್ಲಿಯೇ ಮುಳುಗಿಬಿಡುತ್ತಿದ್ದರು ಎಂದು, ಹಾಗಾಗಿ ಕಥೆ ಚಿತ್ರಕಥೆ ಎಲ್ಲವೂ ಅವರ ತಲೆಯೊಳಗೆ ಇದ್ದುಬಿಡುತ್ತಿದ್ದವು, ಒಂದು ಮಾದರಿ ಅಥವ ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಬ್ಲೂ ಪ್ರಿಂಟ್ ಅಥವಾ ನಕಾಶೆ ಇರುತ್ತಿದ್ದವು ಅನ್ನಿಸುತ್ತದೆ, ಅದನ್ನು ಚಿತ್ರಿಕರಿಸುವಾಗ ಅದಕ್ಕೆ ಮತ್ತಷ್ಟು ಹೊಳಪು ಕೊಟ್ಟು ಬೆಳಗಿಸುತ್ತಿದ್ದರು ಎನ್ನುವ ಅನುಭವ ಅವರ ಎಲ್ಲಾ ಚಿತ್ರಗಳನ್ನು ನೋಡಿದ ಅವರ ಅಪ್ಪಟ ಅಭಿಮಾನಿಗಳಲ್ಲಿ ಒಬ್ಬನಾದ ನನ್ನದು. 

ಇದು ಒಂದು ಮಟ್ಟಿಗೆ ನಿಜ, ಕಲಾವಿದ ಎಂದಿಗೂ ತನ್ನ ಕಲೆಯನ್ನು ಅಥವಾ ತನ್ನ ಕೃತಿಯನ್ನು ಹೊಳಪಿನ ಮೂಸೆಗೆ ತಳ್ಳುತ್ತಲೇ ಇರುತ್ತಾನೆ. ಅದು ಪೂರ್ಣ ಕೃತಿಗೆ ಬರುವಷ್ಟರಲ್ಲಿ ಅವರ ತಲೆಯೊಳಗೆ ಮತ್ತು ಹೃದಯದ ಪರಿಷ್ಕರಣ ಪೆಟ್ಟಿಗೆಯೊಳಗೆ ಮಿಂದೆದ್ದು ಬರುತ್ತದೆ. 

ಅದನ್ನು ಮುಟ್ಟುವುದು ಅಥವಾ ಅದನ್ನು ಮುಂದುವರೆಸುವುದು ಸವಾಲಿನ ಸಂಗತಿಯೇ ಸರಿ. ಶ್ರೀ ಬಸವೇಗೌಡರು ಮತ್ತು ಕೆ ಎಸ್ ಎಲ್ ಸ್ವಾಮೀ ಇಬ್ಬರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಪೂರ್ಣ ಚಿತ್ರಕಥೆಯಿಲ್ಲ, ಕಥೆಯನ್ನು ಎಲ್ಲಿಂದ ಆರಂಭಿಸಬೇಕು, ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಹೀಗೆ ಯಾವುದೇ ಒಂದು ನಿರ್ದಿಷ್ಟ ಚೌಕಟ್ಟಿನ ಜೊತೆಯಲ್ಲಿದೆ ಒಬ್ಬ ಕಲಾವಿದನ ಕುಂಚವನ್ನು ಮುಂದಕ್ಕೆ ಒಯ್ಯುವುದು ಸವಾಲಿನ ವಿಷಯ. ಇಂಥಹ ಪರಿಶ್ರಮ ಕೈಗೊಂಡ ಇಬ್ಬರೂ ಸಾಧಕರಿಗೂ ಮತ್ತು ಅದಕ್ಕೆ ಸಹಕರಿಸಿದ ಎಲ್ಲಾ ಕಲಾವಿದರಿಗೂ ಮತ್ತು ತಾಂತ್ರಿಕ ವರ್ಗಕ್ಕೆ ಅಭಿನಂದನೆಗಳು. 

ಈ ಚಿತ್ರದ ಬಗ್ಗೆಗಿನ ನನ್ನ ಬರಹವನ್ನು ಪುಟ್ಟಣ್ಣ ಅವರು ಚಿತ್ರೀಕರಿಸಿದ ಭಾಗಗಷ್ಟೇ ಸೀಮಿತಗೊಳಿಸುತ್ತೇನೆ, ಕಾರಣ ನಿಮಗೆ ಗೊತ್ತು. 

ಪುಟ್ಟಣ್ಣ ಕಣಗಾಲ್ ಅವರ ಮೊದಲ ಕೆಲ ಪ್ರಯತ್ನಗಳಲ್ಲಿ ಇದು ಒಂದು ಚಿತ್ರ ಎನ್ನಿಸುವ ಎಲ್ಲಾ ಸುಳಿವು ಇದರಲ್ಲಿ ಸಿಗುತ್ತದೆ. ವಜ್ರ ತನ್ನನ್ನೇ ತಾನು ಹೊಳಪಿನ ಪ್ರಖರತೆ ಒಡ್ಡಿಕೊಳ್ಳುತ್ತಿರುವ ಎಲ್ಲಾ ಲಕ್ಷಣಗಳು ಇವೆ ಈ ಚಿತ್ರದಲ್ಲಿ. 

ಈ ಚಿತ್ರದಲ್ಲಿ ನಟಿಸಿರುವ ಸುಮಾರು ೮೦% ಕಲಾವಿದರು ಈ ಚಿತ್ರ ಬಿಡುಗಡೆಯಾದಾಗ ಇಲ್ಲ. ತಾರಾಗಣ ಪಟ್ಟಿಯಲ್ಲಿ ಅವರ ಹೆಸರಿನ ಹಿಂದೆ "ದಿ।।" ಎಂದು ನೋಡುವುದು ಮನಸ್ಸಿಗೆ ಬಹಳ ಹಿಂಸೆಯಾಗುತ್ತದೆ.ನಮ್ಮ ಕರುನಾಡಿನ ಚಿತ್ರರಂಗವನ್ನು ಬೆಳಗಲು ಶ್ರಮಿಸಿದ  ಅನೇಕ ಕಲಾರತ್ನಗಳ ಹೆಸರುಗಳ ಹಿಂದೆ ಆ ಅಕ್ಷರ ನೋಡುವುದು ನಿಜಕ್ಕೂ ಬೇಸರದ ಸಂಗತಿ. 

ಕಪ್ಪು ಬಿಳುಪಿನಲ್ಲಿ ತಯಾರಾದ ಈ ಚಿತ್ರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಯೇ ಚಿತ್ರಿಕರಣವಾಗಿದೆ. ಒಂದು ಪ್ರದೇಶವನ್ನು ಅದೇ ಅದೇ ಚೌಕಟ್ಟಿನಲ್ಲಿ ತರದೇ, ಪ್ರತಿದೃಶ್ಯವನ್ನು ಅರೆ ಇದು ಬೇರೆಯದೇ ತಾಣ ಇರಬಹುದೇನೋ ಅನ್ನುವಂತೆ ತೋರಿಸಿದ್ದಾರೆ ಛಾಯಾಗ್ರಾಹಕರು. 

"ಗಂಡು ಬೀರಿ ನಾನಲ್ಲ" ಹಾಡು ಎಲ್ ಆರ್ ಈಶ್ವರಿ ಅಬ್ಬರಿಸಿದ್ದಾರೆ, ಜೊತೆಯಲ್ಲಿಯೇ ನಿಜಕ್ಕೂ ಗಂಡು ಬೀರಿಯಂತೆಯೇ ಅಭಿನಯಿಸಿರುವ ಜಯಂತಿ.  
ಎಳನೀರು ಮಾರುವ ಪಾತ್ರದಲ್ಲಿ ನನ್ನ ಪ್ರೀತಿಯ ಅಶ್ವತ್ ಗಮನಸೆಳೆಯುತ್ತಾರೆ. 
ಆ ಕಾಲದ ಸುರಸುಂದರಾಂಗ ಕಲ್ಯಾಣ್ ಕುಮಾರ್ "ಕೈ ನೀಡಿದೇ ನೀನು ಅಂದು" ಪಿ ಬಿ ಶ್ರೀನಿವಾಸ್ ಮತ್ತು ಎಸ್ ಜಾನಕಿ  ಹಾಡಿಗೆ ಸುಂದರ ನೃತ್ಯ ಮತ್ತು ಅಭಿನಯಯವರ ಜೊತೆಯಲ್ಲಿ ಜಯಂತಿ ಅವರದು 
"ನಮ್ಮೂರ ಬೆಟ್ಟದ" ಎನ್ನುವ ಹಾಡಿನಲ್ಲಿ ಮೈಸೂರನ್ನು ರಮ್ಯವಾಗಿ ತೋರಿಸುವ ದೃಶ್ಯಗಳು ಕಣ್ಣಿಗೆ ಕಟ್ಟುತ್ತವೆ. ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ ಸಾಹಿತ್ಯಕ್ಕೆ ದನಿಯಾಗುತ್ತಾರೆ. 

ಅದ್ಭುತ ದೃಶ್ಯ ಸಂಯೋಜನೆ ಅಂದರೆ 
ವಜ್ರಮುನಿ, ಜಯಂತಿ ಮತ್ತು ಕಲ್ಯಾಣ್ ಕುಮಾರ್ ಒಂದು ದೃಶ್ಯದಲ್ಲಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿರುತ್ತಾರೆ. ಆ ದೃಶ್ಯದಲ್ಲಿ ಮೂವರು ಜೋರಾಗಿ ಮಾತಾಡಬೇಕು ಅಥವಾ ಬೇಡಿಕೊಳ್ಳುವ ದನಿ ಇರಬೇಕು ಇಲ್ಲವೇ ಅಥವಾ ಒಬ್ಬರಿಗೂಬ್ಬರು ತಮ್ಮ ತಮ್ಮ ಬಗ್ಗೆ ಸಮಜಾಯಿಷಿ ಕೊಡಬೇಕು. ಇವಿಷ್ಟನ್ನು ಕೇವಲ ಒಂದು ನಿಮಿಷದ ದೃಶ್ಯದಲ್ಲಿ ತೋರಿಸುತ್ತಾರೆ ಪುಟ್ಟಣ್ಣ ಅವರು. ಇಡಿ ದೃಶ್ಯವನ್ನು ಮೂರು ಜೊತೆ ಕಣ್ಣುಗಳಲ್ಲಿ ತೋರುತ್ತಾರೆ.. ಪ್ರತಿ ಐದು ಅಥವಾ ಹತ್ತು ಕ್ಷಣಗಳಿಗೆ ಒಂದೊಂದು ಜೊತೆ ಕಣ್ಣುಗಳಲ್ಲಿ ಭಾವ ಬದಲಾಗುತ್ತಾ ಹೋಗುತ್ತದೆ. ಅದ್ಭುತ ಅದ್ಭುತ ಎನ್ನಿಸುವ ದೃಶ್ಯ ಸಂಯೋಜನೆ. 

ಜಯಂತಿ ಪಾತ್ರವನ್ನು ಅತಿ ಅಲ್ಲಿಯ ತನಕ ಅತಿ ಎತ್ತರದಲ್ಲಿ ಕೂರಿಸಿದ್ದ ವಜ್ರಮುನಿ ಮನೆಯವರು (ಪಂಡರಿ ಬಾಯಿ ಮತ್ತು ಆಕೆಯ ಮಗಳು ಮತ್ತು ಮಗ), ಯಾವುದೇ ಕಾರಣಕ್ಕೆ, ಜಯಂತಿ ಅಪರಾಧಿನಿ ಎಂದುಅರಿವಾಗುತ್ತದೆ , ಮಹಡಿಯ ಕೆಳಗೆ ಇದ್ದ ವಜ್ರಮುನಿ ಮತ್ತು ಆತನ ತಾಯಿ ಪಂಡರಿಬಾಯಿ ಜಯಂತಿಯನ್ನು ಕರೆಯುತ್ತಾರೆ. ಜಯಂತಿ ಇಳಿದುಬರುತ್ತಿರುವಾಗ ಆಕೆಯ ಕಣ್ಣಲ್ಲಿ ಅಪರಾಧಿ ಭಾವ ಎದ್ದು ಕಾಣುತ್ತದೆ, ಜೊತೆಯಲ್ಲಿಯೇ ಕ್ಯಾಮೆರ ಚಾಲನೆ ನಿಧಾನವಾಗಿ ಕೆಳಗೆ ಇಳಿಯುತ್ತಾ ಹೋಗುತ್ತದೆ. ವಜ್ರಮುನಿ ಮತ್ತು ಪಂದರಿಬಾಯಿಯವರ ಮುಖಭಾವವನ್ನೇ ತೋರಿಸುತ್ತಾ ಕ್ಯಾಮೆರಾ ನಿಧಾನವಾಗಿ ಕೆಳಗೆ ಇಳಿಯುತ್ತಾ ಹೋಗುತ್ತದೆ. 

ಅಂದರೆ ಜಯಂತಿ ಪಾತ್ರ, ಆ ಮನೆಯವರ ಮುಂದೆ ಅಪರಾಧಿ ಭಾವದಿಂದ ಎತ್ತರದಲ್ಲಿದ್ದ ವ್ಯಕ್ತಿತ್ವ ಭೂಮಿಗೆ ಇಳಿಯುತ್ತಾ ಹೋದಂತೆ ತೋರಿಸುವ ದೃಶ್ಯ. 

ಗುರುಗಳೇ ಇವೆರಡು ದೃಶ್ಯಗಳು ಸಾಕು, ನಿಮ್ಮ ಪ್ರತಿಭೆ ಅನಾವರಣಗೊಳ್ಳಲು ಕರುನಾಡಿನ ರಂಗ ಪರದೆ ಕಾಯುತ್ತಿತು ಎಂದು ತಿಳಿದುಕೊಳ್ಳಲು. 

ಪುಟ್ಟಣ್ಣ ಅವರ ತಲೆಯಲ್ಲಿದ್ದ ಇಡಿ ಚಿತ್ರಕಥೆ ಸಿಕ್ಕಿದ್ದರೂ, ಅಥವಾ ಕಥೆಯ ಒಳ ಸುಳಿವು ಗೊತ್ತಿದ್ದರೂ ಪುಟ್ಟಣ್ಣ ಕಣಗಾಲ್ ಅವರ ಮನಪಟಲದಲ್ಲಿದ್ದ ಚಿತ್ರಕೃತಿಯನ್ನು ಇತರರಿಗೆ ಅಸಾಧ್ಯ ಎನ್ನಿಸುತ್ತಿತ್ತೋ ಏನೋ. ನನ್ನ ಉತ್ತರ ಅಸಾಧ್ಯ ಎಂದು. ಕಾರಣ ಗುರುಗಳು ಗುರುಗಳೇ. 

ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಶ್ರದ್ಧಾ ಪೂರ್ವಕ ನಮನಸಲ್ಲಿಸುವ ಕಾರ್ಯದಲ್ಲಿ ಬಸವೇಗೌಡರು ಮತ್ತು ಕೆ ಎಸ್ ಎಲ್ ಸ್ವಾಮೀ ಮತ್ತು ಚಿತ್ರತಂಡದವರು ಶ್ರಮಿಸಿದ್ದು ನಿಜಕ್ಕೂ ಶ್ಲಾಘನೀಯ. ಪುಟ್ಟಣ್ಣ ಕಣಗಾಲ್ ಮೇಲಿನ ಪ್ರೀತಿ ಮತ್ತು ಗೌರವ ಅವರ ಈ ಬೃಹತ್ ಕಾರ್ಯದಲ್ಲಿ ಜೊತೆ ನೀಡಿದೆ. 

ಪುಟ್ಟಣ್ಣ ಕಣಗಾಲ್ ಅವರಿಗೆ ನನ್ನ ಹೃದಯ ಪೂರ್ವಕ ನಮನಗಳು. 

Friday, October 16, 2015

ಋಣ ಮುಕ್ತಳು - ಒಂದು ವಿಭಿನ್ನ ಅನುಭವ (1984)

ಒಂದು ಮಹಾನ್ ಚೇತನ ಅಮೋಘ ಚಿತ್ರಗಳನ್ನು ನೀಡುತ್ತಾ ನೀಡುತ್ತಾ ಬಸವಳಿದಾಗ ಮತ್ತೆ ಅದಕ್ಕೆ ಚೈತನ್ಯ ನೀಡುವುದೇ ಮತ್ತೊಂದು ಪರಿಶ್ರಮ ಬೇಡುವ ಚಿತ್ರ.

ಹೌದು ಈ ಚಿತ್ರವನ್ನು ನಾ ಇದುವರೆಗೂ ನೋಡೇ ಇರಲಿಲ್ಲ. ಯಾವಾಗಲೂ ಈ ಚಿತ್ರ ದೂರದರ್ಶನದಲ್ಲಿ ಮೂಡಿ ಬಂದರೂ ಬರಿ ಅಂತಿಮ ಕ್ಷಣವನ್ನು ಮಾತ್ರ ನೋಡಿದ್ದೇ.  ಭಾರತಿ ತನ್ನ ಮೊಗದಲ್ಲಿ ಯಾವುದೇ ಭಾವನೆ ತೋರದೆ ನಿಧಾನವಾಗಿ ಆಶ್ರಮವಾಸಿಗಳ ಜೊತೆಯಲ್ಲಿ ನಿರ್ಮಲ ಎನ್ನಿಸುವ ಶ್ವೇತ ವಸ್ತ್ರಧಾರಿಯಾಗಿ ಹೆಜ್ಜೆ ಹಾಕುತ್ತಾ ಹೋಗುವುದು, ಮತ್ತು ರಾಮಕೃಷ್ಣ ತನ್ನ ಹೆತ್ತ ತಾಯಿಯನ್ನು ನೋಡುತ್ತಾ ನಿಲ್ಲುವುದು ಅವರ ಮೊಗದ ಮೇಲೆ ಒಂದು ರೀತಿಯ ಆತಂಕ ಮತ್ತು ತನ್ನ ಮಾತೆ ತನಗೆ ನೆಮ್ಮದಿ ಸಿಗುವ ತಾಣವನ್ನು ಅರಸಿಕೊಂಡ ಒಂದು ಸಂತೋಷ. 

ಕಣಗಾಲ್ ಕ್ರಿಯೇಷನ್ಸ್ ಲಾಂಛನದಲ್ಲಿ ಪುಟ್ಟಣ್ಣ ಕಣಗಾಲ್ ಪರಿವಾರದವರೊಡನೆ ಸೇರಿ ತಯಾರಿಸಿದ ಚಿತ್ರ ಇದು. ಶ್ರೀಮತಿ ಅನುಪಮ ನಿರಂಜನ್ ರವರ "ಋಣ" ಎನ್ನುವ ಕಾದಂಬರಿ ಆಧಾರಿತ ಈ ಚಿತ್ರ ಮೊದಲಿಂದ ಕಡೆಯತನಕ ಏರು ಪೆರಿಲ್ಲದೆ ನೋಡಿಸಿಕೊಂಡು ಹೋಗುತ್ತದೆ. 

ಚಿತ್ರದ ಹೆಸರನ್ನು ತೋರಿಸುವಾಗ ಒಂದು ಪುಸ್ತಕದಲ್ಲಿ  ಪ್ರತಿ ಹಾಳೆಯನ್ನು ತಿರುವು ಹಾಕುತ್ತ ಹೋದಂತೆ ತಾರಾಗಣವನ್ನು ಪರಿಚಯ ಮಾಡಿಕೊಡುತ್ತಾರೆ. ನಮಗೆ ಕಾಣದ ನರಕಲೋಕದಲ್ಲಿ ಚಿತ್ರಗುಪ್ತ ಪ್ರತಿ ಜೀವಿಯ ತಪ್ಪು ಒಪ್ಪುಗಳನ್ನು ಅವಲೋಕಿಸುತ್ತಾ ಪಡೆದದ್ದು, ಕಳೆದದ್ದು ಇವುಗಳ ತುಲನೆ ಮಾಡಿ ಯಮಧರ್ಮ ಶಿಕ್ಷೆ ಕೊಡಲು ಅಹವಾಲು ನೀಡುವಂತೆ ತೋರುವ ದೊಡ್ಡ ಪುಸ್ತಕದ ಹಾಳೆಗಳಂತೆ ಈ ದೃಶ್ಯ ಗೋಚರಿಸುತ್ತದೆ. ಪುಟ್ಟಣ್ಣ ಪ್ರತಿ ಚಿತ್ರವನ್ನು  ಆರಂಭಿಸುವ ರೀತಿ ಯಾವಾಗಲೂ ವಿಭಿನ್ನ. 

ಸಂಭಾಷಣೆಯ ಜವಾಬ್ಧಾರಿಯನ್ನು ಕುಣಿಗಲ್ ನಾಗಭೂಷಣ್ ಜೊತೆ ಹಂಚಿಕೊಂಡು, ಚಿತ್ರಕಥೆ ಬರೆದು ನಿರೂಪಣೆ ಮಾಡಿ ಜಗನ್ಮಾತೆಯ ದಿಗ್ಧರ್ಶನದಲ್ಲಿ ಚಿತ್ರ ಮೂಡಿಸಿದ್ದಾರೆ. ಅವರ ಕನಸಿಗೆ ಕಣ್ಣಾಗಿ ಬರುವುದು ಎಸ್ ಮಾರುತಿರಾವ್ ಅವರ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗೆ ಜೀವ ತುಂಬುವ ಸಂಗೀತ ಹೊಣೆ ವಿಜಯಭಾಸ್ಕರ್ ಅವರದ್ದು. 

ಮನುಜ ತಾನು ಮಾಡಿದ ಪಾಪ ಪುಣ್ಯ ಇವುಗಳನ್ನು ಇಲ್ಲೇ ಒಪ್ಪ ಮಾಡಿ ಹೋಗುತ್ತಾನೆ ಎನ್ನುವ ನೀತಿಯ ತಳಹದಿ ಈ ಚಿತ್ರದಲ್ಲಿದೆ. ಹಳ್ಳಿಯಲ್ಲಿ ಹಾಯಾಗಿ ಇರಬಹುದಾದ ಮನೆಯ ಯಜಮಾನ ಹಣದ ಆಮಿಷಕ್ಕೆ ಒಳಗಾಗಿ ಪಟ್ಟಣಕ್ಕೆ ಬಂದು, ಆ ಪಟ್ಟಣದ ರೂಪು ರೇಶೆಗಳಿಗೆ ತಕ್ಕಂತೆ ಅನೈತಿಕತೆಯಿಂದ ಹಣ ಸಂಪಾದಿಸುವುದು, ಇದರ ಜೊತೆಯಲ್ಲಿ ಇವನ ಈ ಸಾಹಸ ಮಕ್ಕಳ ಮೇಲೆ ಪರಿಣಾಮ ಬೀರುವುದು ಸುಂದರವಾಗಿ ಚಿತ್ರಿಕೃತವಾಗಿದೆ. 

ಬುದ್ಧಿವಂತ ಮೊದಲನೇ ಮಗುವನ್ನು  ಎರಡನೇ ಮಗುವಿನ ಮುಂದೆ ಹೋಗಲಿ, ಈ ಚಿಕ್ಕ ಮಗುವಿನ ಮನದಲ್ಲಿ ರೋಷ ದ್ವೇಷ ತುಂಬಿ ಸಮಾಜಕ್ಕೆ ಒಂದು ರೀತಿಯ ಪಿಡುಗು ಎನ್ನಿಸುವಂತಹ ಪ್ರಜೆ ನೀಡುವುದರಲ್ಲಿ ಅಪ್ಪನ ಪಾತ್ರಧಾರಿ ಸಫಲ ಆಗುತ್ತಾರೆ. 
ಇದರ ಜೊತೆಯಲ್ಲಿ ಕ್ಷಣಿಕ ಆಸೆಗೆ ಬಲಿಯಾಗಿ ಮನೆಕೆಲಸದ ಹುಡುಗಿಯ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡು ಒಂದು ಮಗುವಿನ ಜನನಕ್ಕೆ ಕಾರಣವಾಗುವಂಥಹ ವಿಚಿತ್ರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುತ್ತಾನೆ. ಆ ಮನೆಗೆಲಸದ ಹುಡುಗಿ ಬೇರೆ ಮದುವೆ ಮಾಡಿಕೊಂಡರೂ, ಅಲ್ಲಿ ಸುಖ ಕಾಣದೆ ಗಂಡನನ್ನು ಕಳೆದುಕೊಂಡು, ಆ ದುಃಖದಲ್ಲಿಯೇ ತನ್ನ ಅನೈತಿಕ ಮಗುವನ್ನು ಜತನಮಾಡುವ ಪಾತ್ರ. 

ಮಗು ಒರಟು ಎಂದು ಗೊತ್ತಿದ್ದರೂ, ತಾಯಿ ಹೃದಯ ಮಿಡಿಯುತ್ತದೆ, ಬೇರೆಯವರ ಹತ್ತಿರ ಒರಟು ಒರಟಾಗಿ ಮಾತಾಡಿದರೂ ತನ್ನ ತಾಯಿಗೋಸ್ಕರ ಮಿಡಿಯುವ ಮಗು. ಇವರೆಡರ ಭಾವನಾತ್ಮಕ ತಾಕಲಾಟ ಸುಂದರವಾಗಿ ಕೆಲವು ದೃಶ್ಯಗಳಲ್ಲಿ ಭಿತ್ತರಗೊಂಡಿದೆ. 

ಅದರಲ್ಲೂ, ಜಗಳ ಮಾಡಿಕೊಂಡು ಮನೆಬಿಟ್ಟು ಹೋದ ಮಗನನ್ನು ನೆನೆದು, ಅಯ್ಯೋ ನಾ ತಪ್ಪು ಮಾಡಿದೆ, ಅವನನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಹಲಬುವ ಅಪ್ಪ, ಮತ್ತು ಅಕಾಲ ಮರಣಕ್ಕೆ ತುತ್ತಾಗಿ, ಕಡೆಯಲ್ಲಿ ತನ್ನ ಮಗನನ್ನು ನೋಡಬೇಕು ಎಂದು ಬಯಸಿ, ಮಗ ಬರುವ ಮುನ್ನ ಇಹಲೋಕ ತ್ಯಜಿಸಿದ ಮೇಲೆ, ಸುಮಾರು ಒಂದು ಮೂವತ್ತು ಸೆಕೆಂಡ್ ಏಕದಂ ಮೌನ. ತಾಯಿ ನೋಡಿದೆಯ ಮಗನೆ ನಿನ್ನ ಅಪ್ಪನನ್ನು ಎಂದಾಗ, ಮಗ ದೊಡ್ಡದಾಗಿ ಬಾಯಿ ತೆಗೆದು ಅಳುವ ಮೂಕ ದೃಶ್ಯ, ಇಡಿ ಚಿತ್ರದಲ್ಲಿ ಪುಟ್ಟಣ್ಣ ಅವರ ಕೈಚಳಕ ಕಾಣಿಸುವ ದೃಶ್ಯ ಇದು. 

ಕೆಲವೇ ಕೆಲವು ಪಾತ್ರಗಳು, ಆದರೆ ಎಲ್ಲರೂ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಭಾರತಿ, ಸುಂದರಕೃಷ್ಣ ಅರಸ್, ರಾಮಕೃಷ್ಣ, ಭರತ್ ಭಾಗವತರ್, ಆಶಾಲತ, ಮಾ, ಹಿರಣ್ಣಯ್ಯ, ರಾಜಾನಂದ್, ಪದ್ಮಾವಾಸಂತಿ ಎಲ್ಲರೂ ಎಷ್ಟು ಬೇಕೋ ಅಷ್ಟು ಅಭಿನಯ ನೀಡಿದ್ದಾರೆ. 

"ಆಕಾಶದುದ್ದಾದ ಮಾಮರವು ಚಂದ" ಮನುಜನ ಇಬ್ಬಗೆ ನೀತಿಯನ್ನು ಸುಂದರ ಹೋಲಿಕೆಗಳ ಮೂಲಕ ವಿಜಯನಾರಸಿಂಹ ಬರೆದ ಹಾಡನ್ನು ಎಸ್ ಜಾನಕಿ ಹಾಡಿದ್ದಾರೆ. 

"ದೇವರ ಒಲಿಸಲು" ತಾಯಿಯ ಮಹತ್ವವನ್ನು ಬಿಂಬಿಸುವ ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಜೀವ ತುಂಬಿದ್ದಾರೆ 

"ಕಣ್ಣಾರೆ ಕಂಡೆ ನಾ" ವಾಣಿ ಜಯರಾಂ ಅವರ ಕಂಚಿನ ಕಂಠ ಇಷ್ಟವಾಗುತ್ತದೆ. 



ಕಥಾವಸ್ತು ಆ ಕಾಲಕ್ಕೆ ಒಂದು ಚೂರು ಮುಂದಾಗಿತ್ತು ಅನ್ನಿಸುತ್ತದೆ. ಕೆಲವೊಮ್ಮೆ ಸಾಗರ ಪ್ರಶಾಂತವಾಗಿದ್ದ ಸಾಗರ ಚಂಡಮಾರುತದ ಮುನ್ಸೂಚನೆ ನೀಡುವಂತೆ, ಪುಟ್ಟಣ್ಣ ಕಣಗಾಲ್ ತಮ್ಮ ಮುಂದಿನ ಚಿತ್ರ ರತ್ನಕ್ಕೆ ಈ ಚಿತ್ರದಿಂದಲೇ ಅನಿಯಾಗುತ್ತಿದ್ದರೋ ಏನೋ ಎನ್ನಿಸಿತು ನನಗೆ.