Wednesday, April 1, 2026

ಕೈಗೆ ಸಿಗದೇ ಸತಾಯಿಸುತ್ತಿರುವ ವರ್ಣಮಯ ಮಿ. ರಾಜಕುಮಾರ್ 1970 (ಅಣ್ಣಾವ್ರ ಚಿತ್ರ ೧೨೦/೨೦೭)

ವರ್ಣಮಯವಾಗಿ ಕಂಡ ಶ್ರೀ ಕೃಷ್ಣದೇವರಾಯರು .. ಮುಂದಿನ ಚಿತ್ರಗಳಲ್ಲಿ ವರ್ಣವಾಗಬಹುದು ಅಂತ ನಿರೀಕ್ಷೆಯಿದ್ದಾಗ ಬಂದ ಚಿತ್ರ ಮಿ. ರಾಜಕುಮಾರ್.. 

ಬಹುಶಃ ನಟನ ಹೆಸರಲ್ಲಿ ಚಿತ್ರವಾಗಿದ್ದು ನನ್ನ ಜ್ಞಾನದಲ್ಲಿ ಇದೆ ಮೊದಲಿರಬಹುದು.. ಕನ್ನಡದಲ್ಲಿ. ಇತರ ಭಾಷಾ ಚಿತ್ರರಂಗದಲ್ಲಿ ಆಗಿರಬಹುದು.. 


ಇರಲಿ ಮತ್ತೆ ಈ ಚಿತ್ರದ ವಿಷಯಕ್ಕೆ ಬಂದರೆ.. ಯು ಟ್ಯೂಬ್ ಇಲ್ಲ ಮಾರಾಯ ಅಂತ .. ನನ್ನ ವಿಸಿಡಿ ಭಂಡಾರದಲ್ಲಿ ಈ ಚಿತ್ರ ಏಕೆ ಇಲ್ಲ  ಅಂತ ಖಡ್ಗ ಹಿರಿದು ನಿಂತಿತ್ತು... ಜಾಲತಾಣದಲ್ಲಿ ಜಾಲಾಡಿದರೂ ಅದು ಅರಣ್ಯ ರೋದನವಾಯಿತು .. .

ಏನು ಮಾಡಲಿ ನಾನು ಏನು ಹೇಳಲಿ ಅಂತ ಸುಮ್ಮನೆ ಕೂತು ವಾರಗಳೇ ಕಳೆದವು.. ಅರೆ ಏಪ್ರಿಲ್ ೧೨ ಬರುತ್ತಿದೆ.. ಅಷ್ಟರ ಹೊತ್ತಿಗೆ ಒಂದೂವರೆ ಶತಕ ಅಂತ ಇದ್ದ ಗುರಿ ಮಠ ಸೇರುವ ಪರಿಸ್ಥಿತಿ ಬಂದಿದೆ.. 

ಸರಿ.. ಊಟಕ್ಕೆ ಕರೆದವರು ಬರುವ ನಿರೀಕ್ಷೆಯಿದ್ದಾಗ ಅವರಿಗಾಗಿ ಒಂದು ಎಲೆ ಹಾಕಿ.. ಕಾಯುತ್ತಾ ಮಿಕ್ಕ ಪಂಕ್ತಿಯ ಊಟಕ್ಕೆ ಚಾಲನೆ ಕೊಡುವುದು ಸರಿ ಎನ್ನಿಸಿ.. ಈ ಚಿತ್ರದ ಬಗ್ಗೆ ಜಾಲತಾಣದಲ್ಲಿ ಸಿಕ್ಕ ಕೆಲವು ಮಾಹಿತಿಗಳನ್ನು ಹಂಚಿಕೊಂಡು ಮುಂದಿನ ಚಿತ್ರದ ಕಡೆಗೆ ಹೆಜ್ಜೆ ಹಾಕುತ್ತೇನೆ.. ನಿಮ್ಮೆಲ್ಲರ ಕ್ಷಮೆ ಕೋರಿ, ರಾಜಕುಮಾರ್ ಅವರ ಕ್ಷಮೆ ಕೋರಿ ಮುಂದುವರೆಯುತ್ತೇನೆ.. 

ಮತ್ತೆ ಶಪಥ ಕೂಡ ಮಾಡುತ್ತೀನಿ. ಈ ಚಿತ್ರದ ವಿಸಿಡಿಯನ್ನು ಹುಡುಕಿ.. ಚಿತ್ರ ನೋಡಿ.. ಇದರ ಮುಂದೆ ಬರೆಯುತ್ತೇನೆ.. ಓಕೇ ನಾ.. 

 ಇದು ರಾಜಕುಮಾರ್ ಅವರ ಎರಡನೇ ವರ್ಣ ಚಿತ್ರ... ಮೊದಲನೆಯದು ಐತಿಹಾಸಿಕವಾಗಿತ್ತು.. ಎರಡನೆಯದು ಸಾಮಾಜಿಕ.. ಹಾಗಾಗಿ ರಾಜಕುಮಾರ್ ಅವರ ಸಾಮಾಜಿಕ ಚಿತ್ರಗಳಲ್ಲಿ ಇದೆ ಮೊದಲನೇ ವರ್ಣ ಚಿತ್ರ.. 

ಪ್ರಸಿದ್ಧ ನಿರ್ಮಾಪಕ ನಿರ್ದೇಶಕ ಬಿ ಎಸ್ ರಂಗ ಅವರ ವಿಕ್ರಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗಿದ್ದು ಈ ಚಿತ್ರ.. 

ಕಥೆ ಚಿತ್ರಕತೆ ಜಿ ಬಿ ಬಾಲಸುಬ್ರಮಣ್ಯಂ ಅವರದ್ದು 

ಸಂಭಾಷಣೆ ಮತ್ತು ಹಾಡುಗಳು ಚಿ ಉದಯಶಂಕರ್ 

ಸಂಗೀತ ಎಸ್ ರಾಜೇಶ್ವರರಾವ್

ಛಾಯಾಗ್ರಹಣ ಬಿ ಎನ್ ಹರಿದಾಸ್ ಅವರದ್ದು 

ರಾಜಕುಮಾರ್ ಅವರ ಜೊತೆ ರಾಜಶ್ರೀ ನಾಯಕಿ 

ಉಳಿದಂತೆ ನಾಗಪ್ಪ, ದ್ವಾರಕೀಶ್, ರಾಘವೇಂದ್ರರಾವ್, ರಮಾದೇವಿ, ಬೆಂಗಳೂರು ನಾಗೇಶ್ ಮುಂತಾದವರಿದ್ದಾರೆ. 

ಹಾಡುಗಳು ಜನಪ್ರಿಯವಾಗಿದೆ ಗಂಗಿ ನಿನ್ ಮ್ಯಾಲೆ ನಂಗೆ ಮನಸೈತೆ ಇಂದಿಗೂ ಜನಪ್ರಿಯ.. 

ಗಂಗಿ ನಿನ್ ಮ್ಯಾಲೆ ನಂಗೆ ಮನಸೈತೆ

                                                         ಬಳ್ಳಿಯೊಂದು ಬಳುಕುತಿದೆ 

ರೋಜಾ ಎನ್ನಿ ಗುಲಾಬಿ ಎನ್ನಿ 

ಬೇಗನೆ ಸಿನಿಮಾ ನೋಡುವಂತಾಗಲಿ ಎಂದು ಆಶಿಸೋಣ.. ! 

ರಾಂಗ್ ಆದ ಖಳನಿಗೆ ರಂಗನಾದ ಭೂಪತಿ ರಂಗ 1970 (ಅಣ್ಣಾವ್ರ ಚಿತ್ರ ೧೧೯/೨೦೭)

ರೈಲುಪಟ್ಟಿಯ ಹಾಗೆ ಸಮಾನಾಂತರವಾಗಿ ಸಾಗುವ ಕತೆಯುಳ್ಳ ಚಿತ್ರವಿದು.. ಅಪಾಯದ ಕೋಟೆಯಲ್ಲಿದ್ದುಕೊಂಡೇ ತಾನು ಸುರಕ್ಷಿತವಾಗಿದ್ದೀನಿ ಎಂಬ ಭ್ರಮೆ ಕಳಚಿದ ಮೇಲೆ ತಿರುವು ಸಿಗುವ ಚಿತ್ರವೇ ಇದು. 

ಸಮಾಜದಲ್ಲಿ ಒಂದು ಒಳ್ಳೆಯ ಹೆಸರಾದ ಮೇಲೆ ಅದನ್ನು ಕಾಪಿಡಿಕೊಳ್ಳುವುದು ಸಾಹಸ.. ಜೊತೆಯಲ್ಲಿ ಪರದೆಯ ಹಿಂದೆ ಮಾಡುವ ಕುಕೃತ್ಯಗಳು ಬೆಳಕಿಗೆ ಬರದಂತೆ ತಡೆಯುವುದು ಸಾಹಸ.. ಅದಕ್ಕಾಗಿ ಹಣ ಚೆಲ್ಲುವುದು, ಭದ್ರ ಕೋಟೆಯನ್ನು ಸೃಷ್ಟಿಸಿಕೊಳ್ಳುವುದು, ಅದನ್ನು ಜೋಪಾನ ಮಾಡಿಕೊಳ್ಳೋದಕ್ಕೆ ಒಬ್ಬನನ್ನು ನೇಮಿಸಿಕೊಳ್ಳುವುದು.. ಆತ ಅನ್ಯಾಯ ಕಂಡರೂ.. ಅದನ್ನು ಮಾಡುವುದರಲ್ಲಿ ಯಜಮಾನರಿಗೆ ಸಹಕರಿಸುತ್ತಿದ್ದರೂ ಕೂಡ ಪಾಪ ಪ್ರಜ್ಞೆಯಿಲ್ಲದೆ ಭಾಗಿಯಾಗುವುದು.. ಯಾವುದೋ ಸಂದರ್ಭದಲ್ಲಿ ಉದ್ಭವವಾಗುವ ನಾಯಕಿಂಗೆ ಜೊತೆಯಾಗಿ ಆ ದುಷ್ಟತನದ ಖಳನನ್ನು ಸದೆಬಡಿಯುವುದು.. ಇದು ತಿರುಳು.. 

ಈ ಕಥೆಯನ್ನು ಮೂಡಿಸಿರುವುದು ನಿರ್ಮಾಪಕ ತಂಡ ಭಾಸ್ಕರ್ ಮೂವೀಸ್. ಅದಕ್ಕೆ ಚಿತ್ರಕತೆ ರೂಪಿಸಿರುವುದು ವಲಂಪುರಿ  ಸೋಮನಾಥನ್.. 

ಸಮರ್ಥ ನಿರೂಪಣೆ ಮಾಡಿರುವುದು ನಿರ್ದೇಶಕ ಗೀತಪ್ರಿಯ. 

ನಿರ್ಮಾಣ ಎನ್ ಬಿ ವತ್ಸಲನ್ 

ನಾಗರೀಕ ಮಾನವ 
ಹಕ್ಕಿಯು ಹಾರುತಿದೆ 
ಒಹೋ ಮುದ್ದಿನ ಮಲ್ಲಿಗೆ 
ರಸಿಕ ರಸಿಕ 
ಗೂಡಲ್ಲಿ ತಾಯಿ ಹಕ್ಕಿ 
ಹಸುವಿನ ವೇಷದ ಹೆಬ್ಬುಲಿ ನೀನು 

ಮೆಲುಕು ಹಾಕುವ ಹಾಡುಗಳನ್ನು ಮತ್ತು ಅರ್ಥಗರ್ಭಿತ ಸಂಭಾಷಣೆಗಳನ್ನು ರಚಿಸಿರುವುದು ಗೀತಪ್ರಿಯ. .

ಅದಕ್ಕೆ ಇಂಪಾದ ಸಂಗೀತ ವಿಜಯಭಾಸ್ಕರ್ ಅವರದ್ದು. 
ಪಿ ಬಿ ಶ್ರೀನಿವಾಸ್, ಎಲ್ ಆರ್ ಈಶ್ವರಿ ಮತ್ತು ಪಿ ಸುಶೀಲ ಗಾಯಕ ಗಾಯಕಿಯಾಗಿದ್ದಾರೆ. 
ಪ್ರಕಾಶ್ ಅವರ ಛಾಯಾಗ್ರಹಣವಿದೆ 

ಮುದ್ದಾಗಿ ಕಾಣುವ ಉದಯಚಂದ್ರಿಕಾ ನಾಯಕಿ.. ಅವರು ಚಿತ್ರದಲ್ಲಿ ಅತಿ ಸುಂದರವಾಗಿ ಕಾಣುತ್ತಾರೆ..ನಯನಗಳು, ಆ ಮಾತಿನ ಭಂಗಿ, ಹಾವ ಭಾವ. ಇಷ್ಟವಾಗುತ್ತಾರೆ.. 

ನರಸಿಂಹರಾಜು ಅವರದ್ದು ಸಂಕೀರ್ಣತೆಯ ಪಾತ್ರ.. ಹಾಸ್ಯವೂ ಅಲ್ಲದ.. ಖಳ ಛಾಯೆ ಇರುವ ಆದರೆ ಖಳನಲ್ಲದ.. ಅಂತಃಕರಣವುಳ್ಳ ಪಾತ್ರ 

ಖಳನ ದೌರ್ಜನ್ಯಕ್ಕೆ ಬಲಿಯಾಗುವ ಪಾತ್ರದಲ್ಲಿ ರೇಣುಕಾ ಚಿತ್ರದುದ್ದಕ್ಕೂ ಅಳುತ್ತಲೇ ಇರುತ್ತಾರೆ 

ಮರ್ಯಾದೆಗೆ ಅಂಜುವ ಪಾತ್ರದಲ್ಲಿ ಜಯಶ್ರೀ.. ಪ್ರಾಣಕ್ಕಿಂತ ಮಾನವೇ ಹೆಚ್ಚು ಎಂದು ತಂಗಿಗಾಗಿ ಮಾವಿನಹಣ್ಣನ್ನು ಕದ್ದ ಸ್ವಂತ ಮಗನನ್ನೇ ಮನೆಯಿಂದ ಹೊರಗೆ ಹಾಕುವ ಪಾತ್ರ.. ತನ್ನ ಮಗಳು ದುಷ್ಟನಿಗೆ ಬಲಿಯಾಗಿದ್ದಾಳೆ ಎಂದು ತಿಳಿದಾಗ ಸತ್ತು ಹೋಗು ಎಂದು ಶಪಿಸಿ.. ತಾನೇ ಹೃದಯಾಘಾತದಿಂದ ಸಾಯುವ ಪಾತ್ರದಲ್ಲಿ ಜಯಶ್ರೀ ಅದ್ಭುತ. 
 
ಹಳ್ಳಿಯವನಾಗಿ ಅಶ್ವಥ್ ನಾರಾಯಣ್.. ಇವರೇ ಕಥೆಗೆ ತಿರುವುದು ಕೊಡುವ ಮಾವಿನ ತೋಪಿನ ಮಾಲೀಕ.. ಅಣ್ಣ ತನ್ನ ಪ್ರೀತಿಯ ತಂಗಿಗೆ ಮಾವಿನ ಹಣ್ಣನ್ನು ಕಿತ್ತುಕೊಟ್ಟಿದ್ದನ್ನ ದೊಡ್ಡದು ಮಾಡಿ ಕಥೆಗೆ ತಿರುವುದು ನೀಡುತ್ತಾರೆ.. ಮತ್ತೆ ನಾಯಕ ಮರಳಿ ತನ್ನ ಮನೆಗೆ ಬಂದಾಗ ನೆಡೆದ ಘಟನೆ ಹೇಳಿ.. ತನ್ನಿಂದ ಈ ಪ್ರಮಾದವಾಯಿತು ಎಂದು ಹೇಳುತ್ತಾರೆ.. 

ನಗರದಲ್ಲಿ ಅಂತಃಕರಣವುಳ್ಳ ಪಾತ್ರದಲ್ಲಿ ಸಹಕಲಾವಿದರು.. 

ದಿನೇಶ್ ಗೋಮುಖ ವ್ಯಾಘ್ರನಾಗಿ ದೌರ್ಜನ್ಯ ಎಸುಗುವುದು... ದಾನ ಧಾರ್ಮ ಮಾಡುವುದು.. ಒಂದು ಕಡೆ ಮೃದು ಮಾತು.. ಇನ್ನೊಂದು ಕಡೆ ಕಟು ಮಾತು.. ಮಿಂಚುತ್ತಾರೆ. 

ರಾಜಕುಮಾರ್.. ಆಹಾ ಏನೂ ಹೇಳುವ ಹಾಗೆ ಇಲ್ಲ.. ಅದ್ಭುತ ಪಾತ್ರ ಪೋಷಣೆ ಮತ್ತು ಅಭಿನಯ.. ಕೆಲಸ ಬೇಕಾದ ತೀವ್ರತೆ.. ಅದಕ್ಕೆ ಒಪ್ಪುವಂಥಾ ಕೆಲಸವಲ್ಲದಿದ್ದರೂ ಬದುಕು ಸಾಗಿಸಲು ಕೆಲಸಕ್ಕೆ ಬರುವುದು.. ತನ್ನ ಯಜಮಾನರ ಒಳಗುಣದ ಬಗ್ಗೆ ಅರಿವಿಲ್ಲದೆ.. ತನ್ನ ತಂಗಿಯ ಬದುಕನ್ನು ಈತನೇ ಹಾಳುಮಾಡಿದ್ದು ಎಂದು ಅರಿವಾಗದೇ.. ಯಜಮಾನರೇ ದೇವರು ಎಂದು ಅವರನ್ನು ಕಾಪಾಡುವುದು.. ನಂತರ ನಿಜ ಅರಿವಾದಾಗ ಯಜಮಾನರಿಗೆ ಸರಿಯಾಗಿ ಬುದ್ದಿ ಕಲಿಸುವುದು.. ಇದರ ಜೊತೆಯಲ್ಲಿ ನಾಯಕಿಯ ಮನೆಯಲ್ಲಿ ಇದ್ದುಕೊಂಡು.. ನಾಯಕಿಯ ಪ್ರೀತಿಯನ್ನು ಸಂಪಾದಿಸಿದರು.. ತನ್ನ ಇತಿಮಿತಿಯಲ್ಲಿ ಇರುವಂತಹ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.  ತನ್ನ ತಂಗಿಯೆಂದು ತಿಳಿಯದೆ ಹೀನಾಮಾನವಾಗಿ ಬಯ್ದು ನಂತರ ತಂಗಿ ಎಂದು ತಿಳಿದ ಮೇಲೆ ಪೇಚಾಡುವ ದೃಶ್ಯದಲ್ಲಿ ಅದ್ಭುತ ಅವರು.. 

ಒಂದು ಸಾಮಾಜಿಕ ಚಿತ್ರದಲ್ಲಿ ಸಹಜವಾಗಿ ಅಭಿನಯಿಸುವ ಕಲೆ ಸಿದ್ಧಿಸಿರುವ ಅವರ ಮುಂದಿನ ಚಿತ್ರಗಳೆಲ್ಲ ಸಾಮಾನ್ಯವಾಗಿ  ಅದೇ ಹಾದಿಯಲ್ಲಿ ಸಾಗುತ್ತದೆ. ಸಿಗೋಣವೇ ಮುಂದಿನ ಚಿತ್ರಗಳಲ್ಲಿ.








ಮನೆಗೂ ಮನಕ್ಕೂ ಕಟ್ಟಿದ ತೋರಣವೇ ಹಸಿರು ತೋರಣ 1970 (ಅಣ್ಣಾವ್ರ ಚಿತ್ರ ೧೧೮/೨೦೭)

ರಾಜಕುಮಾರ್ ಅವರಿಗೆ ಅರಸಿ ಬರುತ್ತಿದ್ದ ಪಾತ್ರಗಳ ವೈಶಿಷ್ಠತೆಯಿಂದ ಕೂಡಿ ಬರುತ್ತಿತ್ತು.. ಸಣ್ಣದಾಗಿ ಝರಿಯಿಂದ ಹುಟ್ಟಿ ಸಾಗರ ಸೇರುವ ನದಿಯಂತೆ.. ಅವರ ಪಾತ್ರ ಚಿಕ್ಕದಾಗಿ ಶುರುವಾಗಿ ವಿಸ್ತಾರವಾಗುತ್ತಿತು. 

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸಾಗರ ಸೇರುವ ನದಿಯಂತೆ.. ಮೂರು ಮುಖ್ಯ ಪಾತ್ರಗಳು ರಾಜಕುಮಾರ್, ನರಸಿಂಹರಾಜು ಮತ್ತು ಭಾರತಿ.. ಆರಂಭದ ದೃಶ್ಯಗಳಲ್ಲಿ ಸೇರುವ ಪಾತ್ರಗಳು ಚಿತ್ರದುದ್ದಕ್ಕೂ ಅನೇಕ ತಿರುವುಗಳಲ್ಲಿಯೂ ಕೂಡ ವಿಚಲಿತರಾಗದೆ ಸಮಚಿತ್ತಗಳಿಂದ ಕೂಡುವ ಚಿತ್ರವಿದು. 


ಶ್ರೀಮತಿ ಸುನಂದಮ್ಮ ಅವರ ಕಥೆಯನ್ನು ಆಧರಿಸಿ ನಿರ್ದೇಶಕ ಟಿ ವಿ ಸಿಂಗ್ ಠಾಕೂರ್ ನಿರ್ದೇಶಿಸಿರುವು ಚಿತ್ರವಿದು. 
ಉಪೇಂದ್ರಕುಮಾರ್ ಅವರ ಹಿತವಾದ ಸಂಗೀತ, ಆರ್ ಏನ್ ಜಯಗೋಪಾಲ್ ಮತ್ತು ಜಿ ವಿ ಅಯ್ಯರ್ ಅವರ ಹಾಡುಗಳಿಗೆ ದನಿಯಾದವರು ಪಿ ಬಿ ಶ್ರೀನಿವಾಸ್, ಎಸ್ ಜಾನಕೀ ಮತ್ತು ಎಲ್ ಆರ್ ಈಶ್ವರಿ. 
ಛಾಯಾಗ್ರಹಣ ಶ್ರೀಕಾಂತ್ ಮತ್ತುರಾಜಾರಾಮ್ ಮತ್ತೆ ಕುಮಾರ್.  



ರಾಜಕುಮಾರ್ ಮತ್ತು ನರಸಿಂಹರಾಜು ಒಂದು ಮುರುಕಲು ಹಡಗಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಹಗಲು ಹೊತ್ತಿನಲ್ಲಿ ಕೆಲಸ.. ರಾತ್ರಿ ಅಲ್ಲಿಯೇ ವಾಸ. .. ಒಂದು ದಿನ ಭಾರತಿ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಸಮುದ್ರಕ್ಕೆ ಹಾರಿದಾಗ ಅದನ್ನು ಕಂಡ ರಾಜಕುಮಾರ್ ಅವರನ್ನು ಬದುಕಿಸಿ ದಡಕ್ಕೆ ತಂದು.. ಏತಕ್ಕೆ ಆತ್ಮಹತ್ಯೆ ಎಂದು ಕಾರಣ ಕೇಳಿದಾಗ ಇಷ್ಟವಿಲ್ಲದ ಮದುವೆ ಕಾರಣ ಎನ್ನುತ್ತಾರೆ.. ಮತ್ತೆ ನನ್ನನ್ನು ಎಲ್ಲಿಗೂ ಕಳಿಸಬೇಡಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಒತ್ತಾಯ ಮಾಡುತ್ತಾರೆ 



ಮೂವರು ಅದೇ ಮುರುಕಲು ಹಡಗಿನಲ್ಲಿ ವಾಸ ಮಾಡುವಾಗ.. ಆ ಹಡಗಿನ ಮಾಲೀಕ.. ಇಲ್ಲಿಗೆ ಕೆಲಸ ಮುಗಿಯಿತು.. ನಾಳೆಯಿಂದ ನಿಮ್ಮ ಹಾದಿ ನೋಡಿಕೊಳ್ಳಿ ಎಂದಾಗ ಇವರಿಗೆ ಸಮಸ್ಯೆ ಶುರು.. 

ಅತ್ತ ರಾಜಕುಮಾರ್ ಅವರ ಮನೆಯಲ್ಲಿ ತಾಯಿ ಮತ್ತು ತಮ್ಮನನ್ನು ಹಳ್ಳಿಯಲ್ಲಿ ಬಿಟ್ಟು ಬಂದಿರುತ್ತಾರೆ.. ಸಂಪಾದನೆ ಮಾಡಿ ಮನೆಗೆ ಕಲಿಸಬೇಕು ಎಂದು.. ಆದರೆ ಊಟಕ್ಕೆ ತತ್ವಾರ.. ಕೆಲಸವಿಲ್ಲ.. ಜೊತೆಯಲ್ಲಿ ಇನ್ನೊಬ್ಬರ ಹೊಣೆಗಾರಿಕೆ.. 

ಈ ಹಾದಿಯಲ್ಲಿ ಚಿತ್ರ ಮುಂದುವರೆಯುತ್ತದೆ.. 

ರಾಘವೇಂದ್ರರಾವ್ ಅವರು ಭಾರತಿ ಅವರ ತಂದೆಯ ಪಾತ್ರ.. ಆಕೆಯನ್ನು ಮದುವೆ ಮಾಡಿಕೊಂಡು ಮಾವನ ಆಸ್ತಿಯನ್ನು ಕಬಳಿಸಲು ಉದಯಕುಮಾರ್ ಸಂಚು.. ಅದನ್ನು ನಿಷ್ಪಲ ಮಾಡುವುದು ರಾಜಕುಮಾರ್ ಮತ್ತು ನರಸಿಂಹರಾಜು ಅವರ ಕಾಯಕವಾಗುತ್ತದೆ 

ಇದರ ಮಧ್ಯೆ ರಾಜಕುಮಾರ್ ಅವರ ತಮ್ಮ ಪುಟ್ಟ ಬಾಲಕ.. ಮತ್ತು ದೇವರಿಗೆ ಬರೆಯುವ ಪತ್ರ.. ಅದನ್ನು ನೆರವೇರಿಸಲು ರಾಘವೇಂದ್ರರಾವ್ ಅವರ ಪರಿಶ್ರಮ.. ಹೀಗೆ ಸಾಗುವ ಚಿತ್ರ. ಅಂತ್ಯದಲ್ಲಿ ಎಲ್ಲವೂ ಶುಭವಾಗುತ್ತದೆ.. 

ಪಂಡರಿಬಾಯಿ ಆ ಪುಟ್ಟ ಬಾಲಕನ ಮುಗ್ಧ ತಾಯಿಯ ಪಾತ್ರ.. 
ಕುಪ್ಪುರಾಜ್, ಎಚ್ ಆರ್ ಶಾಸ್ತ್ರೀ, ಜಯಶ್ರೀ, ಗಣಪತಿ ಭಟ್, ಶನಿಮಹಾದೇವಪ್ಪ, ಕಮೆಡಿಯನ್ ಗುಗ್ಗು, ಇಂದಿರಾ ಜಾರ್ಜ್ ಪಾತ್ರಗಳಿಗೆ ಜೀವ ತುಂಬುತ್ತಾರೆ.. 













ರಾಜಕುಮಾರ್ ಅವರ ಅಭಿನಯ ಈ ಚಿತ್ರದ ಶ್ರೀ ರಕ್ಷೆ.. ಅದರಲ್ಲೂ ಅಂತಿಮ ದೃಶ್ಯದಲ್ಲಿ ತನ್ನ ತಮ್ಮನ ಮುಂದೆ ಕೈಜೋಡಿಸಿಕೊಂಡು ಕ್ಷಮೆ ಕೇಳುವ ಪಾತ್ರದಲ್ಲಿ ಕಣ್ಣೇರು ತರಿಸುತ್ತಾರೆ.  ಚಿತ್ರದುದ್ದಕ್ಕೂ ಸಮಯೋಚಿತ ಅಭಿನಯ ನೀಡುವ ಅವರ ಪಾತ್ರಾಭಿನಯ ಖುಷಿ ನೀಡುತ್ತದೆ. ಶ್ರೀರಾಮನಾಗಿ ನಾಟಕದಲ್ಲಿನ ಅಭಿನಯ.. ಸೂಪರ್ 

ಭಾರತಿ ಮುಗ್ಧೆಯಾಗಿ ಅಭಿನಯ ಇಷ್ಟವಾಗುತ್ತದೆ.. ಹಿತವಾದ ಮಾತು, ಕಂಗಳು ಮಾತಾಡುವುದು.. ನಾಯಕನ ಮೇಲೆ ಗೌರವ, ಪ್ರೀತಿ , ಮಮತೆ ಎಲ್ಲವೂ ಮಿಳಿತವಾದ ಸಂಭಾಷಣೆಗಳು ಖುಷಿ ಕೊಡುತ್ತದೆ. 
ಸೀತೆಯಾಗಿ ನಾಟಕದಲ್ಲಿನ ಅಭಿನಯ ಕಳೆಕಟ್ಟುತ್ತದೆ.. 

ನರಸಿಂಹರಾಜು ಹಾಸ್ಯದಲ್ಲೂ ಮತ್ತು ನಾಯಕನಿಗೆ ಪ್ರತಿ ಸನ್ನಿವೇಶದಲ್ಲೂ ಸಹಾಯ ಮಾಡುವ ಪಾತ್ರ. 

ಖಳನಾಗಿ ಉದಯ್ ಅಬ್ಬರಿಸುತ್ತಾರೆ. 

ರಾಘವೇಂದ್ರರಾವ್ ಅಪ್ಪನ ಪಾತ್ರದಲ್ಲಿನ ತೊಳಲಾಟ ಸೊಗಸಾಗಿದೆ.. ಹಾಗೆ ತಂಗಿಯಾಗಿ ಜಯಶ್ರೀ ಪಾತ್ರವೂ ಕೂಡ. 

ಹಾಡುಗಳು ಖುಷಿ ಕೊಡುತ್ತದೆ 
ಒಂದು ದಿನ ಎಲ್ಲಿಂದಲೋ ನೀ ಬಂದೆ
ನೋಡು ನೋಡು ಮೆಲ್ಲಗೆ 
ಒಂದೇ ತಾಯಿ ಮಕ್ಕಳು 
ಈ ಮೀನಂತ ಹೆಣ್ಣು 
ಸೀತೆ ಹೃದಯದ ಹೆಣ್ಣು 
ನೀ ಯಾರೋ ಏನೋ ಸಖ 

ಇನ್ನೊಂದು ವಿಶೇಷ ಎಂದರೆ.. ಪ್ರಣಯದ ಚಿತ್ರಗೀತೆಗಳಲ್ಲಿ ನಾಯಕ ನಾಯಕಿಯನ್ನು ಎತ್ತಿ ಕೊಳ್ಳುವುದು ಸಾಮಾನ್ಯ.. ಆದರೆ ಇಲ್ಲಿ ನಾಯಕಿ ನಾಯಕನನ್ನು ಎತ್ತಿ ಕೊಳ್ಳುವುದು.. 
ಹೌದು ಚಿತ್ರದ ತುಣುಕು ಇದೆ ನೋಡಿ.. 

ಒಂದು ಸುಂದರ ಚಿತ್ರವನ್ನು ನೋಡಿದ ಖುಷಿ ನನ್ನದು.. ಹಾಗೆ ರಾಜಕುಮಾರ್ ಎಂಬ ನಟನ ಉಲ್ಕೆ ಕರುನಾಡಿನ ಬೆಳ್ಳಿ ಬರದೆಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಸಿನಿರಸಿಕರನ್ನು ರಂಜಿಸಿ ಮುಂದುವರೆಯುತ್ತಿರುವುದು.. 

Tuesday, March 31, 2026

ಕಣ್ಣಿಗೆ ಅರಿವಾಗದ್ದು ಕರುಳಿಗೆ ಅರಿವಾಗಿ ಕೂಗುವ ಕರುಳಿನ ಕರೆ 1970 (ಅಣ್ಣಾವ್ರ ಚಿತ್ರ ೧೧೭/೨೦೭)

ಶ್ರೀ ಇದೊಂದು ಬಹಳ ತುಂಬು ಹೃದಯದ ಚಿತ್ರಕಥೆ.. ನಮ್ಮ ಪುಟ್ಟಣ್ಣ ಕಣಗಾಲ್ ಇದ್ದಾರಲ್ಲ ಪುಟ್ಟಣ್ಣ ಕಣಗಾಲ್.. ಅವರು ಪುಟ್ಟಣ್ಣ ಅಲ್ಲ ದೊಡ್ಡಣ್ಣ.. ಚಿತ್ರಕಥೆಯನ್ನು ರಜತ ಪರದೆಯಲ್ಲಿ ತೋರಿಸುವುದರಲ್ಲಿ ಎತ್ತಿದ ಕೈ. 

ಅವರ ಜೊತೆ ಮೊದಲು ಚಿತ್ರ ಮಾಡುವ ಸೌಭಾಗ್ಯ ಸಿಕ್ಕಿದ್ದು ಮಲ್ಲಮ್ಮನ ಪವಾಡ ಚಿತ್ರದಲ್ಲಿ.. ಆ ನೆರಳು ಬೆಳಕಿನ ಜೊತೆಯಲ್ಲಿ ಚಿತ್ರವನ್ನು ಮೂಡಿಸಿದ ರೀತಿ ಅದ್ಭುತವಾಗಿತ್ತು... 

ಈ ಚಿತ್ರವೂ ಹಾಗೆ.. ಪ್ರತಿಯೊಂದು ದೃಶ್ಯವನ್ನು ಕಲೆಗಾರ ಕುಂಚದಿಂದ ಚಿತ್ರವನ್ನು ಸಿಂಗರಿಸಿದಂತೆ ಪ್ರತಿ ದೃಶ್ಯವನ್ನು ಕಾವ್ಯವಾಗಿ ಮಾಡಿದ್ದಾರೆ.. ಹಾಸ್ಯ, ಅನುಕಂಪ, ಕ್ರೌರ್ಯ, ದ್ವೇಷ, ಕಿಲಾಡಿತನ ಎಲ್ಲವನ್ನೂ ಚಿತ್ರಕತೆಯಲ್ಲಿ ಅಳವಡಿಸಿ ಒಂದು ಅಮರ ಚಿತ್ರವನ್ನಾಗಿ ಮಾಡಿದ್ದಾರೆ. 

ಪುಟ್ಟಣ್ಣ ಅವರ ಕಲೆಗಾರಿಕೆ ಅದ್ಭುತವಾಗಿದೆ. 

ನನ್ನ ಪಾತ್ರ ಪೋಷಣೆಗೆ ಹೆಚ್ಚಿನ ಅವಕಾಶ ನೀಡಿದ್ದಾರೆ.. ಅಂದರೆ ನನ್ನ ಹಾವಭಾವ, ಹಾಸ್ಯವನ್ನು ನಿಭಾಯಿಸೋದು, ಹೊಡೆದಾಟ, ಹಾಡುಗಾರಿಕೆ, ನೃತ್ಯ ಪ್ರತಿಯೊಂದು ಅವರ ಮನದಲ್ಲಿ ಇದ್ದ ಹಾಗೆ ಮೂಡಿಬರಲು ನನಗೆ ಸಹಕಾರ ನೀಡಿದ್ದಾರೆ 

ಇಲ್ಲಿ ಮುಖ್ಯಪಾತ್ರ ನಾನು ಅನ್ನೋದಕ್ಕಿಂತ ಭೀಷ್ಮ ನಾಗೇಂದ್ರರಾಯರು ಮುಖ್ಯವಾಗಿದ್ದಾರೆ. ಅವರ ನೆರಳಿನಲ್ಲಿ ನಾವೆಲ್ಲಾ ಅಭಿನಯಿಸಿದ್ದೇವೆ ಅಂತ ಎದೆ ತಟ್ಟಿ ಹೇಳಬಹುದು. 

ಲಾರಿ ಚಾಲಕನಾಗಿ ನನಗೆ ಇರಬೇಕಾದ ಕೆಲವು ಹಾವಭಾವಗಳನ್ನು ಹೇಳಿಕೊಟ್ಟರು.. ಕಲ್ಪನಾ ಪಾತ್ರಧಾರಿಯ ಜೊತೆ ಹಾಸ್ಯ, ಛೇಡಿಸುವ ಮಾತುಗಳು .. ಚೆನ್ನಾಗಿ ಮೂಡಿ ಬಂದಿದೆ.. 

ನಾವೆಲ್ಲ ಒಂದು ತೂಕವಾದರೆ.. ನಾಗೇಂದ್ರರಾಯರ ಅಭಿನಯ, ಅವರ ಪಾತ್ರವೇ ಇನ್ನೊಂದು ತೂಕ.. ನಮ್ಮನ್ನು ತೂಗಿಸಿಕೊಂಡು ಹೋಗಿದ್ದಾರೆ ರಾಯರು.. 

ಇದೆ ನನ್ನ ಆಶ್ರಮ, ಇದೆ ನನ್ನ ಕಾಯಕದ ನೆಲೆ ಎಂದು ಹೇಳುವ ಸಂಭಾಷಣೆ ಇಷ್ಟವಾಗುತ್ತದೆ.. ಮನೆ 
ಈ ಎಂಟಾಣಿ ಎಂಟು ಲಕ್ಷ ರೂಪಾಯಿ ಬರುವ ಹಾಗೆ ಆಗಲಿ ಎನ್ನುವಾಗ ಅವರ ಧ್ವನಿ .. ಸೂಪರ್.. 
ಅಂತ್ಯದಲ್ಲಿ ಎಲ್ಲಾ ಗೋಜಲುಗಳನ್ನು ಪರಿಹರಿಸುವ ಆ ಪಾತ್ರವೇ ಚಿತ್ರದ ಹೈಲೈಟ್. 
ಪೋಷಕ ಪಾತ್ರದಲ್ಲಿ ಇವರು ಮತ್ತು ಅಶ್ವಥ್ ಯಾವಾಗಲೂ ದೈತ್ಯರು. 

ಹೌದು ಖಳ ಇರಲೇಬೇಕಲ್ಲ ಚಿತ್ರದಲ್ಲಿ.. ನನ್ನ ಬಹುಪಾಲು ಚಿತ್ರದ ಖಳನಟ ದಿನೇಶ್ ಮತ್ತೊಮ್ಮೆ ಇಲ್ಲಿದ್ದಾರೆ.  ಅವರ ಧ್ವನಿ, ಏರಿಳಿತ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಲು ನಿರ್ದೇಶಕ ಪುಟ್ಟಣ್ಣನವರ ಪ್ರತಿಭೆ ಇಲ್ಲಿ ಅನಾವರಣಗೊಂಡಿದೆ.

ತಾಯಿ ಹೃದಯ.. ಮಿಡಿಯುವ ಮನಸ್ಸು.. ಆದವಾನಿ ಲಕ್ಷ್ಮೀದೇವಿ ಅಕ್ಷರಶಃ ತಾಯಿಯಾಗಿದ್ದಾರೆ. 
ತಂದೆಯ ವಿರುದ್ಧ ಸಿಡಿದು ಬೀಳುವ ಮಗನಾಗಿ, ಒಪ್ಪಿಕೊಂಡ ಹುಡುಗಿಗೆ ಪ್ರೇಮಿಯಾಗಿ, ಗೌರವ ಕೊಡುವ ಭಾವಿ ಅಳಿಯನಾಗಿ ಸುದರ್ಶನ್  ಒಪ್ಪವಾಗಿ ಪಾತ್ರವಾಗಿದ್ದಾರೆ. 

ಕಲ್ಪನಾ ಈ ತಾಯಿ ಯಾವುದೇ ಪಾತ್ರವಾದರೂ ಸಲೀಸಾಗಿ ಹರಿಯುವ ಅದ್ಭುತ ಕಲಾವಿದೆ. ಹಳ್ಳಿಯ ಸೊಗಡಿನ ಪಾತ್ರದಲ್ಲಿ ಕಳ್ಳೇ ಕಾಯಿ ಕಳ್ಳೇ ಕಾಯಿ ಹಾಡು.. ಆ ಹಣ್ಣು, ಪುರಿ ಮಾರುವ ತಳ್ಳುಗಾಡಿಯ  ವ್ಯಾಪಾರಿಯ ಗುಣವನ್ನು ಪರದೆಯ ಮೇಲೆ ಸಾಕ್ಷಾತ್ಕರಿಸಿದ್ದಾರೆ. "ಏ ಲಾರಿ" ಅನ್ನುವಾಗ ಮುಗ್ಧತನ, "ಪರಮೇಶಿ" ಅನ್ನುವಾಗ ತೋರುವ ಪ್ರೀತಿ .. ಅವರಿಗೆ ಅವರೇ ಸಾಟಿ.. 

ಉಳಿದ ಪಾತ್ರಗಳು ಚಿತ್ರಕತೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. 

ಸುಂದರಕೃಷ್ಣ ಅರಸ್, ರತ್ನಾಕರ್, ಬೆಂಗಳೂರು ನಾಗೇಶ್ ಮತ್ತು ಸಹಕಲಾವಿದರ ಹಾಸ್ಯ, ಬೇಜವಾಬ್ಧಾರಿತನ, ಮೂರ್ಖತನ ಪ್ರತಿಯೊಂದನ್ನು ಹಾಸ್ಯಮಯವಾಗಿ ನಿರೂಪಿಸಿದ್ದಾರೆ. ಹೆಣ್ಣಿನ ಸ್ವಯಂವರದ ದೃಶ್ಯ ಚಿತ್ರದ ಪ್ರಮುಖ ಹಾಸ್ಯ ದೃಶ್ಯದಲ್ಲಿ ಒಂದು. ಎಚ್ ರಾಮಚಂದ್ರಶಾಸ್ತ್ರಿ ಅವರ ಹೆಣ್ಣಿನ ತಂದೆಯಾಗಿ ಸಿಡಿದು ಬೀಳುವ ಪರಿ ಸೊಗಸಾಗಿದೆ. 

ಕಥೆ, ಚಿತ್ರಕತೆ ಮಾಡಿ ನಿರ್ದೇಶಿಸಿದ್ದು ನನ್ನ ನೆಚ್ಚಿನ ಪುಟ್ಟಣ್ಣ ಕಣಗಾಲ್. 
ಸಂಗೀತ ಅವರ ಆಪ್ತ ಎಂ ರಂಗರಾವ್ 
ಹಾಡುಗಳನ್ನು ಆರ್ ಎನ್ ಜಯಗೋಪಾಲ್ ರಚಿಸಿದ್ದಾರೆ. 
ಪಿ ಬಿ ಶ್ರೀನಿವಾಸ್, ಎಲ್ ಆರ್ ಈಶ್ವರಿ, ಬಿ ಕೆ ಸುಮಿತ್ರಾ  ಮತ್ತು  ಎಸ್ ಜಾನಕೀ ಹಾಡಿದ್ದಾರೆ ಜೊತೆಗೆ ಆ ಆ ಈ ಈ ಕನ್ನಡ ಅಕ್ಷರಮಾಲೆ ಹಾಡಿನಲ್ಲಿ ಆರ್ ಎನ್ ಜಯಗೋಪಾಲ್ ದನಿಗೂಡಿಸಿದ್ದಾರೆ 
ಶ್ರೀಕಾಂತ್ ಕುಮಾರ್ ಛಾಯಾಗ್ರಹಣದ ಜವಾಬ್ಧಾರಿವಹಿಸಿಕೊಂಡಿದ್ದಾರೆ
ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್ಪ್ರೈಸಸ್ ಲಾಂಛನದಲ್ಲಿ ಶ್ರೀಕಾಂತ್ ನಹತಾ ಹಾಗೂ ಶ್ರೀಕಾಂತ್ ಪಟೇಲ್ ನಿರ್ಮಿಸಿದ್ದಾರೆ 

ಶ್ರೀ ನಿನಗೆ ಗೊತ್ತು ಆದರೂ.. ಪುಟ್ಟಣ್ಣ ಕಣಗಾಲ್ ಚಿತ್ರಗಳಲ್ಲಿ ನಾಡು ನುಡಿಯ ಬಗ್ಗೆ ಬಹಳ ಅಭಿಮಾನ ಬರುವ ಹಾಡುಗಳು ಸದಾ ಚಿತ್ರಿಸಿರುತ್ತಾರೆ.. ಇದು ಚಿತ್ರಕತೆಯ ಓಘಕ್ಕೆ ಭಂಗ ಬರದಂತೆ ಮತ್ತು ಅದು ಕಥೆಯನ್ನು ಮುಂದುವರೆಸುವ ಎಳೆಯಾಗಿ ಮೂಡಿ ಬರೋದು ವಿಶೇಷತೆ 

ಮೈಸೂರು ದಸರಾ ಎಷ್ಟೊಂದು ಸುಂದರ .. ದಸರಾ ಹಬ್ಬವನ್ನು ಪೂರ್ಣವಾಗಿ ತೋರಿಸಿದ್ದಾರೆ. 
ಆ ಆ ಈ ಈ ಕನ್ನಡ ಅಕ್ಷರಮಾಲೆ .. ಮಕ್ಕಳಿಗೆ ಅಕ್ಷರಮಾಲೆ ಸಲೀಸಾಗಿ ಬರುವಂತೆ ಪ್ರತಿ ಅಕ್ಷರಕ್ಕೂ ಒಂದೊಂದು ಬಂಧ ಕಲ್ಪಿಸಿ ಚಿತ್ರಿಸಿದ್ದಾರೆ. 
ಕಂಡೆ ನಾ ಕಂಡೆ ತಾಯಿ ಮಮತೆಯ ಸವಿಯನ್ನು ಅನುಭವಿಸಿದ ಪಾತ್ರ ಹಾಡಿಕೊಂಡು ಹೋಗುತ್ತದೆ
 ತಾಜಾ ತಾಜಾ ಕಳ್ಳೆ ಕಾಯಿ.. ಕಡಲೆ ಕಾಯಿಯ ಮಹತ್ವವನ್ನು ವಿವರಿಸುತ್ತಲೇ ಬೆಂಗಳೂರಿನ ಪ್ರಮುಖ ತಾಣಗಳನ್ನು ತೋರಿಸುತ್ತಾರೆ
ಹೊಡೆಯುವ ಕೈಯೊಂದು ಕಣ್ಣೊರೆಸುವ ಕೈಯೊಂದು ಕೊಲ್ಲುವವ ಒಬ್ಬನಾದರೆ ಕಾಯುವವ ಇನ್ನೊಬ್ಬ ಎನ್ನುವ ಸಂದೇಶವನ್ನು ವಿವರಿಸುತ್ತದೆ 
ನನ್ನವರಿಗೆ ಯಾರು ಸಾಟಿಯೇ ಇಬ್ಬರು ಪ್ರೇಮಿಗಳು ತನ್ನವನೇ ಶ್ರೇಷ್ಠ ಎಂದು ತೋರುವ ಸ್ಪರ್ಧೆಯ ಹಾಡು.. 

ನನಗೆ ಇದು ಪುಟ್ಟಣ್ಣ ಕಣಗಾಲ್ ಜೊತೆಯಲ್ಲಿ ಎರಡನೇ ಸಿನಿಮಾ.. ಒಂದು ಅದ್ಭುತ ಅಭಿನಯ ನೀಡಲು ಅವಕಾಶ ಮಾಡಿಕೊಟ್ಟಿದ್ದಾರೆ 

ರಾಜಕುಮಾರ್ ಸರ್.. ಎಷ್ಟು ಸುಂದರವಾಗಿ ಚಿತ್ರದ ಬಗ್ಗೆ ವಿವರಿಸಿದ್ದೀರಾ.. ಜೊತೆಗೆ ಚಿತ್ರದ ವಿಶೇಷತೆ, ಹಾಡುಗಳ ವೈಶಿಷ್ಟತೆ, ಪಾತ್ರಗಳ ಪರಿಚಯ.. ಪ್ರತಿಯೊಂದು ಸೊಗಸಾಗಿದೆ.. 
ನಿಮ್ಮ ಪಾತ್ರದ ಬಗ್ಗೆ.. 
ಆರಂಭದ ದೃಶ್ಯದಲ್ಲಿ ಕೂಲಿಂಗ್ ಗ್ಲಾಸ್, ಜಾಕೆಟ್ ನಲ್ಲಿ ಲಾರಿಯಿಂದ ಇಳಿಯುವ ದೃಶ್ಯ. .. 
ಕಳ್ಳೇಕಾಯಿ ಎಂದು ಕಲ್ಪನಾ ಪಾತ್ರವನ್ನು ರೇಗಿಸುವುದು, 
ಅಪ್ಪಾಜಿ ಅಪ್ಪಾಜಿ ಎಂದು ನಾಗೇಂದ್ರರಾಯರನ್ನು ಗೌರವಿಸುವುದು... 
ಆದವಾನಿ ಲಕ್ಷ್ಮೀದೇವಿಯವರಲ್ಲಿ ತಮ್ಮ ತಾಯಿ ಪ್ರೇಮವನ್ನು ಕಾಣುವ ದೃಶ್ಯಗಳು 
ದಿನೇಶ್ ಅವರ ಜೊತೆಯಲ್ಲಿನ ದೃಶ್ಯಗಳು 
ನೀನು ತುಂಬಾ ಚೆನ್ನಾಗಿದಾ, ನೀನು ತುಂಬಾ ಮುದ್ದಾಗಿದಾ ಎಂದು ದಿನೇಶ್ ಅವರ ಗೆಳತಿಯನ್ನು ಛೇಡಿಸುವುದು.. 
ಮೈಸೂರು ದಸರಾ ಹಾಡಿನಲ್ಲಿ ನಿಮ್ಮ ನೃತ್ಯ
ಸುದರ್ಶನ್ ಅವರ ಜೊತೆಯಲ್ಲಿ ಮೋಹನಪ್ಪಾ, ಮೋಹನಪ್ಪಾ ನನ್ನ ತಂಗಿಯನ್ನು ನೀವು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತೀರಾ ಎಂದು ತೋರುವ ಅಭಿಮಾನ.. 
ಅಂತಿಮ ದೃಶ್ಯದ ಹೊಡೆದಾಟದ ದೃಶ್ಯಗಳು 
ನಿಮ್ಮನ್ನು ನೀವು ಈ ಪಾತ್ರದಲ್ಲಿ ತೊಡಗಿಸಿಕೊಂಡಿರುವ ರೀತಿ ಅದ್ಭುತ ಸರ್.. 

ಏನಪ್ಪಾ ಇದು ಸಣ್ಣ ಮಾತಿನಲ್ಲಿ ಈ ಪಾಟಿ ಹೇಳುತ್ತಿದ್ದೀಯ ನಿನಗೆ ಮಂಗಳವಾಗಲಿ ಶ್ರೀ 

ರಾಜಕುಮಾರ್ ಸರ್ ನಿಮ್ಮ ಅಭಿಮಾನಕ್ಕೆ ಧನ್ಯೋಸ್ಮಿ.. ಮತ್ತೊಂದು ನಿಮ್ಮ ಚಿತ್ರರತ್ನದ ಜೊತೆ ಸಿಗುವೆ.. 

ಶುಭವಾಗಲಿ ಶ್ರೀ.. ಹನ್ನೆರಡು ಮತ್ತು ಇಪ್ಪತ್ತನಾಲ್ಕು ದಿನಾಂಕಕ್ಕೆ ಮತ್ತೆ ಸಿಗುತ್ತೇನೆ.. !
 










Thursday, March 5, 2026

ಕಣ್ಣ ಮುಂದೆ ಬಂದ ಇತಿಹಾಸದ ಪ್ರಸಿದ್ಧ ಪುರುಷ ಶ್ರೀ ಕೃಷ್ಣದೇವರಾಯ 1970 (ಅಣ್ಣಾವ್ರ ಚಿತ್ರ ೧೧೬/೨೦೭)

ಕೆಲವನ್ನು ನಾವು ಆರಿಸಿಕೊಂಡು ಹೋಗುತ್ತೇವೆ.. 
ಕೆಲವು ನಮ್ಮನ್ನು ಆರಿಸಿಕೊಂಡು ಬರುತ್ತವೆ.. 

ರಾಜಕುಮಾರ್ ಒಂದು ಸಂದರ್ಶನದಲ್ಲಿ ಹೇಳಿದ ಮಾತು..  ... 
ರಾಜಕುಮಾರ್ ಅವರ ಚಿತ್ರಜೀವನದಲ್ಲಿ ಅಕ್ಷರಶಃ ಈ ಮಾತು ನಿಜ...

ದಕ್ಷಿಣ ಭಾರತವನ್ನು ಶ್ರೀಮಂತಗೊಳಿಸಿದ ಮೇರು ವ್ಯಕ್ತಿಗಳಲ್ಲಿ ಶ್ರೀ ಕೃಷ್ಣದೇವರಾಯರು ಒಬ್ಬರು.. ಇವರಿದ್ದ ಕಾಲಘಟ್ಟದಲ್ಲಿ ಶ್ರೀಮಂತಿಕೆ ಬರಿ ಸಂಪತ್ತಿನ ವಿಚಾರದಲ್ಲಿ ಮಾತ್ರವಲ್ಲದೆ ಶಿಲ್ಪಕಲೆ, ಆಡಳಿತದ ವೈಖರಿ, ಸಾಮಾಜಿಕ ಸುಧಾರಣೆಗಳು, ನಾಡ ಹಬ್ಬಗಳು, ಸಂಗೀತ, ಸಾಹಿತ್ಯ, ಸೇನೆ ಹೀಗೆ ಎಲ್ಲಾ ಪ್ರಾಕಾರಗಳಲ್ಲಿಯೂ ಈ ಕಾಲ ಸುವರ್ಣಯುಗವಾಗಿತ್ತು ಅಂತ ಇತಿಹಾಸಕಾರರು ಹೇಳುತ್ತಾರೆ. 

ನಮ್ಮ ಅದೃಷ್ಟವೆಂದರೆ, ಆ ಕಾಲಘಟ್ಟಕ್ಕೆ ನಮ್ಮ ಗಡಿಯಾರವನ್ನು ತಿರುಗಿಸಿಕೊಂಡು ಹೋಗಲು ಸಾಧ್ಯವಿಲ್ಲ.. ಆದರೆ ಈ ಕಾಲಘಟ್ಟವನ್ನೇ ನಮ್ಮ ಕಣ್ಣುಗಳ ಮುಂದೆ ತಂದು ನಿಲ್ಲಿಸುವ ಶಕ್ತಿ ಪದ್ಮಿನಿ ಪಿಕ್ಚರ್ಸ್ ಲಾಂಛನದಲ್ಲಿ ಚಿತ್ರಕತೆ, ನಿರ್ಮಾಣ, ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದ ಬಿ ಆರ್ ಪಂತುಲು ಮತ್ತು ತಂಡದವರಿಗಿತ್ತು.

ಅರಂಭದಲ್ಲಿ ಸಂಬಂಧ ಪಟ್ಟ ಮಹನೀಯರಿಗೆ ಕೃತಜ್ಞತೆ ಸಲ್ಲಿಸುವುದು.. ಚಿತ್ರದ ಇತಿಹಾಸ ಪುರುಷನ ಬಗ್ಗೆ ಒಂದು ಸಣ್ಣ ಪರಿಚಯ.. ಹೀಗೆ ಶುರುವಾಗುವ ಸಿನಿಮಾ ಸಿನಿ ರಸಿಕರನ್ನು ಹಿಡಿದಿಡಲು ಸಹಾಯ ಮಾಡಿತು





ಆ ಮಹಾನ್ ಕಥಾನಾಯಕನನ್ನು ರಾಜಕುಮಾರ್ ಎಂಬ ಶ್ರೀಕೃಷ್ಣದೇವರಾಯನ ಪಡಿಯಚ್ಚಿನಂತೆ ಇರುವ ...ಅಲ್ಲ ಅಲ್ಲ ಶ್ರೀಕೃಷ್ಣದೇವರಾಯರೇ ಧರೆಗಿಳಿದು ಬಂದರೂ, ಅವರೇ ಅಚ್ಚರಿ ಪಡುವಂತೆ ಪಾತ್ರದೊಳಗೆ ಹೊಕ್ಕಿದ್ದ ರಾಜಕುಮಾರ್ ಅವರನ್ನು ತೆರೆಯ ಮೇಲೆ ತಂದದ್ದು ಅವರ ಅದ್ಭುತ ಪ್ರತಿಭೆಗೆ ಸಾಕ್ಷಿಯಾಗಿತ್ತು.. 

ನಾವ್ಯಾರು ಆ ಮಹಾನ್ಅ ಕಥಾನಾಯಕನ್ನು ನೋಡಿಲ್ಲ ಅಂತ ಸುಳ್ಳು ಹೇಳುವ ಬದಲು.. ಶ್ರೀಕೃಷ್ಣದೇವರಾಯರನ್ನು ನಾವು ತೆರೆಯ ಮೇಲೆ ನೋಡಿದ್ದೇವೆ ಅಂತ ಎದೆ ತಟ್ಟಿಕೊಂಡು ಹೇಳಬಹುದು.. 





ಶ್ರೀಕೃಷ್ಣದೇವರಾಯನಾಗಿ - ರಾಜಕುಮಾರ್ , ಮತ್ತು ತಿಮ್ಮರಸು ಅವರಾಗಿ ಬಿ ಆರ್ ಪಂತುಲು.. ಉಳಿದ ಪಾತ್ರಗಳಲ್ಲಿ ನರಸಿಂಹರಾಜು, ಭಾರತಿ, ಜಯಂತಿ, ದಿನೇಶ್, ಹನುಮಂತಚಾರ್, ಆರ್ ನಾಗೇಂದ್ರರಾವ್, ನರಸಿಂಹರಾಜು, ಆರ್ ಎನ್ ಸುದರ್ಶನ್, ಎಂ ವಿ ರಾಜಮ್ಮ, ಮೈನಾವತಿ, ಚಿಂದೋಡಿ ಲೀಲಾ, ಜಯ ಶನಿಮಹಾದೇವಪ್ಪ, ಜೋಕರ್ ಶ್ಯಾಮ್ ಉಳಿದ ಕೆಲವು ಮುಖ್ಯ ಪಾತ್ರಗಳಲ್ಲಿದ್ದಾರೆ. 


















ಈ ಚಿತ್ರ ವಿಶೇಷ ಅನಿಸೋದು ಎರಡು ಕಾರಣಗಳಿಗೆ.. ಶ್ರೀ ಕೃಷ್ಣದೇವರಾಯ ಎಂದರೆ  ರಾಜಕುಮಾರ್, ರಾಜಕುಮಾರ್ ಎಂದರೆ ಶ್ರೀ ಕೃಷ್ಣದೇವರಾಯ ಎನ್ನುವಷ್ಟು ಕರಾರುವಾಕ್ ಪಾತ್ರ ಮೂಡಿಬಂದಿದೆ. 

ಎರಡು ಇತಿಹಾಸವನ್ನು ಹತ್ತಿರದಿಂದ ತೋರಿಸಿರುವ ಹಾಗೂ ಹೊರಾಂಗಣ ಒಳಾಂಗಣ, ಯುದ್ಧದ ಸನ್ನಿವೇಶಗಳು, ರಾಜದರ್ಬಾರ್, ಹಾಸ್ಯ ದೃಶ್ಯಗಳು, ಹಾಡುಗಳು, ಸಂಗೀತ ಎಲ್ಲವೂ ಒಂದಕ್ಕೊಂದು ಮಿಳಿತಗೊಂಡಿದೆ. 

ಒಂದು ಚಿತ್ರರತ್ನವಾಗಿ ನಮ್ಮ ಮುಂದೆ ನಿಂತಿರುವ ಈ ಚಿತ್ರವನ್ನು ನೋಡದಿರುವ ಚಲನಚಿತ್ರ ರಸಿಕರಿಲ್ಲ ಎನ್ನುವಷ್ಟು ಪ್ರಸಿದ್ಧಿ ಪಡೆದಿದೆ.. 

ಆ ರಾಜಗಾಂಭೀರ್ಯ ನೆಡೆ ನುಡಿ ಹಾವ ಭಾವ ರಣಕ್ಕೆ ಇಳಿದಾಗ ಮೂಡುವ ರೋಷಾವೇಶ, ಹಾಗೆಯೇ ಅರಮನೆಯಲ್ಲಿ ತನ್ನ ಪರಿವಾರದೊಂದಿಗೆ ಇರುವಾಗ ತೋರುವ ಯಜಮಾನತನ, ರಾಜಸಭೆಯಲ್ಲಿ ತೋರುವ ಗೌರವ, ಅದೇ ತನ್ನ ರಾಜ್ಯದ ಪಂಡಿತರಿಗೆ ಅವಮಾನ ಮಾಡಲು ಸಂಚು ಮಾಡಿಕೊಂಡು ಬಂದವರನ್ನು ನಿಭಾಯಿಸುವ ಕಲೆ..ಮಂತ್ರಿಗಳೊಂದಿಗೆ ಚರ್ಚಿಸುವಾಗ ತೋರುವ ರಾಜಕೀಯ ಮುತ್ಸದ್ದಿತನ ಎಲ್ಲವೂ ಶ್ರೀ ಕೃಷ್ಣದೇವರಾಯ ಅವರ ಆತ್ಮವೇ ಒಳ ಹೊಕ್ಕಿದಿಯೆನೋ ಎನ್ನುವಷ್ಟು ಕರಾರುವಾಕ್ಕಾಗಿ ನಿಭಾಯಿಸಿರುವ ಪಾತ್ರದ ಯಶಸ್ಸು ರಾಜಕುಮಾರ್ ಅವರಿಗೆ ಸಲ್ಲಬೇಕು.. 

ಈ ಪಾತ್ರವನ್ನು ಅಷ್ಟೇ ಗಟ್ಟಿಯಾಗಿ ನಿರೂಪಿಸಿ ನಿರ್ದೇಶನ ಮಾಡಿರುವುದು ಅಲ್ಲದೆ, ಶ್ರೀಕೃಷ್ಣದೇವರಾಯ ಅವರ ವಿಜಯನಗರ ಸಾಮ್ರಾಜ್ಯ ಉತ್ತುಂಗ ತಲುಪಲು ನೇರವಾದ ಇನ್ನೊಂದು ಬಲಾಢ್ಯ ಹೆಸರು ಮಂತ್ರಿ ತಿಮ್ಮರಸು ಅವರ ಪಾತ್ರ ಪೋಷಣೆಯಲ್ಲಿ ಬಿ ಆರ್ ಪಂತುಲು ಸೊಗಸಾಗಿ ಗೆದ್ದಿದ್ದಾರೆ. 

ಇಡೀ ಚಿತ್ರ ಇವರೆಡು ಪಾತ್ರಗಳ ಸುತ್ತಲೇ ಸುತ್ತುತ್ತದೆ ಎಂದರೆ ಅಚ್ಚರಿಯಿಲ್ಲ.. ನಿಜ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಗೆದ್ದಿರುವುದು ಹೆಮ್ಮೆಯ ಮಾತು

ಮಾತೃಹೃದಯಿಯಾಗಿ ಎಂ ವಿ ರಾಜಮ್ಮ ಅವರದ್ದು ಮರೆಯಲಾರದ ಅಭಿನಯ.. 

ಜಯಂತಿ ಮತ್ತು ಭಾರತಿ ಪಾತ್ರೋಚಿತ್ರ ಅಭಿನಯ 

ನರಸಿಂಹರಾಜು ತೆನಾಲಿ ರಾಮಕೃಷ್ಣನ ಕೆಲವು ಬುದ್ಧಿವಂತಿಕೆಯ ದೃಶ್ಯಗಳಲ್ಲಿ ಜೀವ ತುಂಬಿದ್ದಾರೆ ಅವರ ಪತ್ನಿಯಾಗಿ ಮೈನಾವತಿ.. ಅವರ ತಂದೆಯಾಗಿ ಎಚ್ ಆರ್ ರಾಮಚಂದ್ರಶಾಸ್ತ್ರಿ ಇದ್ದಾರೆ. 

ಪಂತುಲು ಅವರ ಆಸ್ಥಾನ ಸಂಗೀತ ಗಾರುಡಿಗ ಟಿ ಜಿ ಲಿಂಗಪ್ಪ ಸಂಗೀತದ ಮಾಧುರ್ಯದಿಂದ ಮಿಂಚಿದ್ದಾರೆ 

ಸಾಹಿತ್ಯಕ್ಕೆ ಕಣಗಾಲ್ ಪ್ರಭಾಕರ್ ಶಾಸ್ತ್ರೀ ಮತ್ತು ಆರ್ ಎನ್ ಜಯಗೋಪಾಲ್ ಅವರದ್ದು 

ಛಾಯಾಗ್ರಹಣ ಉಸ್ತುವಾರಿ ಎ ಷಣ್ಮುಗಂ ಅವರದ್ದು 

ಈ ರೀತಿಯ ಇತಿಹಾಸವನ್ನು ಮರುಸೃಷ್ಟಿ ಮಾಡುವ ಚಿತ್ರಗಳು ಆರಂಭ ಎಷ್ಟು ಕ್ರೂರತೆಯಿಂದ ಕೂಡಿ ನಂತರ ಅದರ ಉಚ್ಛ್ರಾಯ ಸ್ಥಿತಿ ತಲುಪಿ ನಂತರ ಮತ್ತೆ ಧಾರುಣವಾಗಿ ಅಂತ್ಯಗೊಳ್ಳುತ್ತದೆ. ಅಂತ್ಯ ಜೀರ್ಣಿಸಿಕೊಳ್ಳಲು ಆಗೋಲ್ಲ ಆದರೆ ಅದನ್ನು ಹೇಳದಿದ್ದರೆ ಪೂರ್ತಿ ಇತಿಹಾಸ ಹೇಳಿದಂತಾಗದು.. 

ಅದನ್ನೇ ಸೂಕ್ಷ್ಮವಾಗಿ ನಿರ್ದೇಶಕರು ಅಂತಿಮ ದೃಶ್ಯಗಳಲ್ಲಿ ಹೇಳಿದ್ದಾರೆ.. 

ಇದೊಂದು ಚಿತ್ರವಲ್ಲ. ಐತಿಹಾಸಿಕ ಚಿತ್ರ.. ಅದರಲ್ಲೂ ಪ್ರವರ್ಧಮಾನಕ್ಕೆ ಬಂದು ಕನ್ನಡ ಚಿತ್ರರಂಗವನ್ನು ಗಟ್ಟಿಯಾಗಿ ಬೇರೂರಲು ಕಾರಣೀಕರ್ತರಾದ ಹಲವು ಮಹನೀಯರ ಹೆಸರಲ್ಲಿ ರಾಜಕುಮಾರ್ ಅವರದ್ದು ಇರುವುದು ಮತ್ತು ರಾಜಕುಮಾರ್ ಚಿತ್ರಜೀವನದ ಮೊಟ್ಟಮೊದಲ ವರ್ಣ ಚಿತ್ರವೂ ಹೌದು. !