Sunday, April 12, 2026

ಕುಂಭಮೇಳದಲ್ಲಿ ಕಳೆಯದ ತಮ್ಮ ಅಂತರ್ಜಾಲದಲ್ಲಿ ಕಳೆದು ಹೋದ - ನನ್ನ ತಮ್ಮ 1970 (ಅಣ್ಣಾವ್ರ ಚಿತ್ರ ೧೨೩/೨೦೭)

 ಕೆಲವು ಚಿತ್ರಗಳೇ ಹಾಗೆ.. ನೋಡೋಣ  ಅಂದ್ರೆ ಸಿಗೋಲ್ಲ.. ಸಿಕ್ಕಿದ್ದು ನೋಡೋಕೆ ಆಗಲ್ಲ.. ಹುಡುಕಿದರೆ ಬೇಕಾದಷ್ಟು ಸಿನಿಮಾಗಳು ಸಿಗುತ್ತವೆ..  ಬೇಕಾದ್ದು ಸಿಗೋದು ಸುಲಭವಲ್ಲ.. 

ನನ್ನ ತಮ್ಮ ಚಿತ್ರ ಕೂಡ ಅಂತರ್ಜಾಲದಲ್ಲಿ ಕಾಣುತ್ತಿಲ್ಲ.. ಸಿಡಿ ಸಿಗುವ ಬಗ್ಗೆ ಮಾಹಿತಿ ಇಲ್ಲ..  ಆದರೂ ಪ್ರಯತ್ನ ಮುಂದುವರೆದಿದೆ.. ನೋಡೋಣ 





 ರಾಜಕುಮಾರ್ ಅವರ ಜೊತೆಯಲ್ಲಿ ಜಯಂತಿ, ಗಂಗಾಧರ್, ಆರ್ ನಾಗೇಂದ್ರ ರಾಯರು, ಬಾಲಣ್ಣ, ದಿನೇಶ್, ನಾಗಪ್ಪ, ಎಚ್ ರಾಮಚಂದ್ರಶಾಸ್ತ್ರಿ, ಹನುಮಂತಚಾರ್, ಶ್ಯಾಮ್, ಬಿ ಜಯಶ್ರೀ ಮುಂದವರಿದ್ದಾರೆ 

ಘಂಟಸಾಲ  ಚಿತ್ರದ ಸಂಗೀತ  ನಿರ್ದೇಶಕ. 
ಮಾಧವ ಬುಲ್ ಬುಲೇ ಛಾಯಾಗ್ರಾಹಕರು 
ಕಥೆ ಚಿತ್ರಕಥೆ ನಿರ್ದೇಶನ ಕೆ ಬಾಬು ರಾವ್ ಅವರದ್ದು 
ಸಾಹಿತ್ಯ ಕಣಗಾಲ್ ಪ್ರಭಾಕರ್ ಶಾಸ್ತ್ರೀ 
ವಿಜಯ್ ಪಿಕ್ಚರ್ಸ್ ಸರ್ಕುಟ್  ಲಾಂಛನದಲ್ಲಿ ಕೆ ವಿ ಗುಪ್ತ ನಿರ್ಮಿಸಿದ್ದಾರೆ. 

ಮತ್ತೆ ಸಿ ಐ ಡಿ ಯಾಗಿ ರಾಜಣ್ಣ - ಸಿ ಐ ಡಿ ರಾಜಣ್ಣ 1970 (ಅಣ್ಣಾವ್ರ ಚಿತ್ರ ೧೨೩/೨೦೭)

ಮತ್ತೊಂದು ಸಿ ಐ ಡಿ ಚಿತ್ರ.. ಆದರೆ ಹಿಂದಿನ ನಾಲ್ಕು ಸಿ ಐ ಡಿ ಸರಣಿಯ ಮುಂದುವರಿದ ಭಾಗವಲ್ಲ.. ಇದು ಸಂಪೂರ್ಣ ವಿಭಿನ್ನ ಚಿತ್ರ.. 

ಇಲ್ಲಿ ನಾಯಕನ ಹೆಸರೇ ಚಿತ್ರದ ಪಾತ್ರಧಾರಿ ಹೆಸರೂ ಕೂಡ.. 



ಕೊಟ್ಟಾರಕರ್ ಅವರ ರಚಿಸಿದ ಕಥೆಯನ್ನು ಪರಿಣಾಮಕಾರಿಯಾದ ಚಿತ್ರಕತೆಯನ್ನಾಗಿ ರೂಪಿಸಿದ್ದು ವಿ ಸೋಮನಾಥನ್. 

ಆ ಚಿತ್ರಕತೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಿ ನಿದೇಶಿಸಿದ್ದು ಆರ್  ರಾಮಮೂರ್ತಿ ಶ್ರೀ ರಾಮ ಎಂಟರ್ಪ್ರೈಸ್ ಲಾಂಛನದಲ್ಲಿ. 


ನಾಯಕಿ ರಾಜಕುಮಾರ್ ಅವರ ಅನೇಕಾನೇಕ ಚಿತ್ರಗಳಲ್ಲಿ ಪಾತ್ರವಹಿಸಿದ್ದ ಮುದ್ದು ಮುಖದ ರಾಜಶ್ರೀ.. ಸಹನಾಯಕಿಯಾಗಿ ಪ್ರೇಮಲತಾ.. 






ದಿನೇಶ್ ಮತ್ತೊಮ್ಮೆ ಇಲ್ಲಿ ಖಳನ ಪಾತ್ರಧಾರಿ.. ಆದರೆ ಅವರಿಗೆ ಸಿಗುತ್ತಿದ್ದ ಪಾತ್ರಗಳು ವಿಶೇಷ.. ಇಲ್ಲಿ ಹಿತವಾಗಿ ಮಿತವಾಗಿ ಮಾತಾಡಿದ್ದಾರೆ.. ಖಳಛಾಯೆ ಇಲ್ಲದ ಪಾತ್ರ.. ಆದರೆ ಸಾಂದರ್ಭಿಕವಾಗಿ ಅಂತ್ಯದಲ್ಲಿ ತಮ್ಮ ವಿರಾಟ್ ರೂಪ ತೋರಿಸುತ್ತಾರೆ. 


ಗೋಮುಖ ವ್ಯಾಘ್ರನಾಗಿ ಅಶ್ವಥ್.. ಪರಿಣಾಮಕಾರಿ ಅಭಿನಯ. ಈತ ಹೆಣ್ಣುಮಕ್ಕಳಿಗೆ ಕರುಣಾಮಯಿ ತಂದೆಯಾಗಿ.. ಅತ್ತ ಕಡೆ ವ್ಯಾಘ್ರನಾಗಿ ಸಮಾಜಘಾತುಕ ಶಕ್ತಿಯ ತಂಡದೊಳಗೆ.. ವಿಭಿನ್ನ ಅಭಿನಯ.. ಮನಸ್ಸಿನ ತೊಳಲಾಟ.  ಎಲ್ಲವನ್ನೂ ಸೊಗಸಾಗಿ ಅಭಿನಯಿಸಿದ್ದಾರೆ



ರಂಗ ಸುಂದರನಾಗಿ ಕಾಣೋದಷ್ಟೇ ಅಲ್ಲದೆ.. ಅವರ ಧ್ವನಿ ಇಷ್ಟವಾಗುತ್ತದೆ.. ಪೈಲಟ್ ಆಗಿ ಕೆಲವು ದೃಶ್ಯಗಳಲ್ಲಿ ಕಾಣುವ ಅವರು ಮುದ್ದಾಗಿ ಕಾಣುತ್ತಾರೆ 



ಪ್ರೇಮಲತಾ ಮಿತವಾದ ಅವಕಾಶದಲ್ಲಿ ಕಾಣುತ್ತಾರೆ 

ಜಯಶ್ರೀ ಖಡಕ್ ತಾಯಿಯಾಗಿ, ಹಾಗೆ ಮಮತಾಮಯಿ ಪ್ರೇಮಿಯಾಗಿ ಸೊಗಸಾಗಿದ್ದಾರೆ. ಅವರ ಅಭಿನಯವೇ ಚಿತ್ರದ ಆರಂಭಕ್ಕೆ ಚಾಲನೆ ನೀಡುವುದು.. ಮನೆಯ ಶಿಕ್ಷಣ ತಾಯಿಯಿಂದ ಶುರು ಎನ್ನುವ ಮಾತಿನಂತೆ ಮನಸೆಳೆಯುತ್ತಾರೆ


ಸೇನೆಯ ಮೇಜರ್ ಆಗಿ ಬರೀ ಹಿನ್ನೆಲೆಯ ಧ್ವನಿಯಲ್ಲಿ ರಾಜಕುಮಾರ್ ಅವರ ಗಂಭೀರ ಧ್ವನಿ ಇಷ್ಟವಾಗುತ್ತದೆ. ತನ್ನ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು.. ಹೇಗೆ ದೇಶಭಕ್ತರನ್ನಾಗಿ ಮಾಡಬೇಕು ಎಂದು ಚುಟುಕಾಗಿ ಹೇಳುವ ಅವರ ಮಾತುಗಳು ಇಷ್ಟವಾಗುತ್ತದೆ.

 
ಉಳಿದಂತೆ ಸಹನಟರಾಗಿ ಭಟ್ಟಿ ಮಹದೇವಪ್ಪ ಗಮನಸೆಳೆಯುತ್ತಾರೆ .. ಖಳನ ಸಹಪಡೆಯಲ್ಲಿ ನಾಗಪ್ಪ ಇದ್ದಾರೆ. ರಾಮಚಂದ್ರ ಶಾಸ್ತ್ರೀ ಬಂದು ಹೋಗುತ್ತಾರೆ. ಜೋಕರ್ ಶ್ಯಾಮ್ ಇದ್ದಾರೆ. ಗಣಪತಿ  ಭಟ್ ಪುಟ್ಟ ಪಾತ್ರದಲ್ಲಿ ಬಂದು ಹೋಗುತ್ತಾರೆ. 









ಕೆಲವು ಹಾಸ್ಯ ದೃಶ್ಯಗಳಲ್ಲಿ ದ್ವಾರಕೀಶ್ ನಗಿಸುತ್ತಾರೆ .. ಇದೊಂದು ರಾಜಕುಮಾರ್ ಅವರ ಮುಂದಿನ ಚಿತ್ರಗಳ ದಿಕ್ಸೂಚಿ ತೋರಿಸುತ್ತದೆ ಎಂದರೆ ತಪ್ಪಿಲ್ಲ.. ಕಾರಣ ರಾಜಕುಮಾರ್ ಅವರ ಹಾಸ್ಯ ಶಕ್ತಿಯ ಪ್ರತಿಭೆ ಇಲ್ಲಿ ತೆರೆಗೆ ಬಂದಿದೆ.



ಚಿತ್ರದ ಆರಂಭದಲ್ಲಿ ಹೆಸರುಗಳನ್ನ ತೋರಿಸುವ ವಿಭಿನ್ನ ರೀತಿ .. ಪ್ರತಿ ಕಲಾವಿದರಷ್ಟೇ ಅಲ್ಲದೆ ತೆರೆಮರೆಯ ಸಿಬ್ಬಂದಿ, ತಂತ್ರಜ್ಞರು, ಸಂಗೀತ ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನ, ಸಾಹಿತ್ಯ ಹೀಗೆ ಎಲ್ಲಾ ವಿಭಾಗದವರ ಚಿತ್ರಗಳನ್ನು ತೋರಿಸುತ್ತಾರೆ. ಇದೊಂದು ಉತ್ತಮ ಪ್ರಯತ್ನ ಯಾಕೆ ಎಂದರೆ ನಾಯಕ ನಾಯಕಿ ಮತ್ತಿತರ ಕಲಾವಿದರನ್ನಷ್ಟೇ ಗುರುತಿಸುವ ಚಿತ್ರರಸಿಕರ ಗಮನಕ್ಕೆ  
ಉಳಿದವರ ಚಿತ್ರಪಟಗಳನ್ನು ನೋಡಿದಾಗ ಅರೆ ಇವರು.. ಅರೆ ಇವರನ್ನು ನೋಡಿದ್ದೇನೆ ಅಂತ ಅನಿಸುತ್ತದೆ. ಇದು ತಂತ್ರಜ್ಞರನ್ನು ಗುರುತಿಸುವ ಒಂದು ಉತ್ತಮ ಪ್ರಯತ್ನ. 







ಹಾಡುಗಳನ್ನು ಸಂಭಾಷಣೆಗಳನ್ನು ಚಿ ಉದಯಶಂಕರ್ ರಚಿಸಿದ್ದಾರೆ 

ಸಂಗೀತ ಸತ್ಯಂ ಅವರದ್ದು 

ಛಾಯಾಗ್ರಹಣ ಬಿ ದೊರೈರಾಜ್ 

ಗಾಯನ.. ಅರೆ ಹೌದು ರಾಜಕುಮಾರ್ ಅವರ ಪಾತ್ರಕ್ಕೆ ಉದಯೋನ್ಮುಖ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರು ಧ್ವನಿ ನೀಡಿದ್ದಾರೆ.. ಹಿಂದಿನ ಕೆಲವು ಚಿತ್ರಗಳಲ್ಲಿ ಎಸ್ ಪಿ ಅವರ ಧ್ವನಿ ಹಾಡಿನ ಕೆಲವು ಭಾಗಕ್ಕೆ ಮೀಸಲಾಗಿದ್ದರೇ ಈ ಹಾಡಿನಲ್ಲಿ ಪೂರ್ಣಪ್ರಮಾಣದಲ್ಲಿ ಎಸ್ಪಿಬಿ ಧ್ವನಿ ಸೇರಿದೆ. 
"ಇಲ್ಲಿ ಆಡುವ ಮಾತು ಕನ್ನಡ.. " ಇದೆ ಆ ಹಾಡು 

ಉಳಿದಂತೆ ಪಿ ಸುಶೀಲ, ಎಸ್ ಜಾನಕೀ, ಪಿ ಶ್ರೀನಿವಾಸ್ ಉಳಿದ  ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಸಾಹಸಮಯ ಚಿತ್ರವಾದರೂ, ಭಾವನೆಗಳಿಗೆ ಉತ್ತಮ ಅವಕಾಶವಿದೆ. 

ರಾಜಕುಮಾರ್ ಬಗ್ಗೆ ಹೇಳಲೇ ಇಲ್ಲ ಅಂದೀರಾ.. ಇಡೀ ಚಿತ್ರ ಅವರ ಮೇಲೆ ನಿಂತಿದೆ.. ತಾಯಿ ಪ್ರೇಮ, ತಮ್ಮನ ಮೇಲೆ ಅಭಿಮಾನ, ತಾನು ಪ್ರೀತಿಸುವ ಹುಡುಗಿಯ ಮೇಲೆ ಪ್ರೇಮ, ಮಮತೆ.. ತನ್ನ ಮಾವನಾಗಬೇಕಾದವರು ದೇಶದ ವಿರುದ್ಧ ಕೆಲಸ ಮಾಡುವ ಗ್ಯಾಂಗ್ ಅಂತ ಗೊತ್ತಾದಮೇಲೆ ಅದನ್ನು ನಿಷ್ಕಾರುಣವಾಗಿ ದೂರ ಮಾಡುವ ಮಾತುಗಳು... ಸಿ ಐ ಡಿ ಪಾತ್ರಕ್ಕೆ  ಬೇಕಾದ ಚಾಕಚಕ್ಯತೆ, ಆ ಮುಖಭಾವ.. ಖಡಕ್ ಮಾತುಗಳು ಎಲ್ಲವೂ ಮಸ್ತ್ ಇದೆ. 




ದಶಾವತಾರದಂತೆ ಭಿನ್ನ ವಿಭಿನ್ನ ವೇಷಧಾರಿಯಾಗಿ ಚಿತ್ರದುದ್ದಕ್ಕೂ ಮಿಂಚುತ್ತಾರೆ. 
 
ರಾಜಕುಮಾರ್ ಇಡೀ ಚಿತ್ರವನ್ನು ಹಲವಾರು ಚಿತ್ರಗಳಲ್ಲಿ ಮಾಡಿದಂತೆ ತಮ್ಮ ಹೆಗಲ ಮೇಲೆ ಹೊತ್ತು ನಿಭಾಯಿಸಿದ್ದಾರೆ.

ಇಂದು ದಿನಾಂಕ ಹನ್ನೆರಡು ಏಪ್ರಿಲ್.. ಚಿತ್ರಲೋಕವನ್ನು ಬಿಟ್ಟು ಗಂಧರ್ವ ಲೋಕವನ್ನು ಸೇರಿದ ದಿನ.. ಇಪ್ಪತ್ತು ವಸಂತಗಳು ಕಳೆದಿವೆ.. ಅವರ ಮ್ಯಾಜಿಕ್, ಅವರ ಚಿತ್ರಗಳ ಮೇಲಿನ ಮೋಹ ಎಲ್ಲವೂ ಮುಂದುವರೆದಿದೆ.. 

ಯುಗದಲ್ಲಿ ಒಮ್ಮೆ ಮಾತ್ರ ಈ ರೀತಿಯ ಪಾತ್ರ ಆ ಬ್ರಹ್ಮನಿಗೆ ಸೃಷ್ಟಿಸಲು ಸಾಧ್ಯ

ಸಹ ಕಲಾವಿದರು ಅಣ್ಣಾವ್ರ ಚಿತ್ರ ಜಗತ್ತಿನಲ್ಲಿ ... ಪುಣ್ಯ ದಿನ - 2026

ಶ್ರೀ ಒಂದು ಸಾಮ್ರಾಜ್ಯ ಕಟ್ಟಿ ಅದು ಗಟ್ಟಿಯಾಗಿ ನಿಲ್ಲಬೇಕು ಎಂದರೆ.. ಅದಕ್ಕೆ ಅನೇಕಾನೇಕ ಶ್ರಮಜೀವಿಗಳ ಪರಿಶ್ರಮ ಇದ್ದೆ ಇರುತ್ತದೆ.. 

ನನ್ನ ಚಿತ್ರಜೀವನ ಎಲ್ಲೋ ಹುಟ್ಟಿ ಹೇಗೋ ಬೆಳೆದು.. ಕರುನಾಡ ಚಿತ್ರ ಸಾಗರದಲ್ಲಿ ನನ್ನ ಮುಳುಗಿಸದೆ ತೇಲಿಸಿದ್ದು ಈ ಅಭಿಮಾನಿ ದೇವರುಗಳ ಆಶೀರ್ವಾದ..

ನನ್ನಿಂದ ನಟಿಸಿಲ್ಪಟ್ಟ ಬೇಡರ ಕಣ್ಣಪ್ಪನಿಂದ ಹಿಡಿದು ನಟಿಸುವುದು ಬೇಡ ಎಂದುಕೊಂಡ ಶಬ್ಧವೇದಿಯ ತನಕ ಜೇನುನೊಣಗಳಂತೆ ಈ ರಾಜಕುಮಾರ್ ಎಂಬ ಜೇನು ಗೂಡನ್ನು ಕಟ್ಟಲು ಪರಿಶ್ರಮಿಸಿದ್ದಾರೆ.. 

ಇಂದು ಸ್ವರ್ಗದಲ್ಲಿ ಅವರೆಲ್ಲ ಜೊತೆ ಒಂದು ಭೇಟಿಯ ಕಾರ್ಯಕ್ರಮವನ್ನು ನಮ್ಮ ಪಾರ್ವತೀ ಮತ್ತು ತಂಡ ಸಿದ್ಧಪಡಿಸಿದೆ.. 

ಈಗ ನೋಡು ಒಬ್ಬೊಬ್ಬರೇ ಈ ನಿಮ್ಮ ಫ್ಯಾಷನ್ ಪ್ರಪಂಚದಲ್ಲಿ ರಾಂಪ್ ವಾಕ್ ಎನ್ನುತ್ತಾರಲ್ಲ ಹಾಗೆ ಒಬ್ಬೊಬ್ಬರೇ ಬರುತ್ತಾರೆ.. ಅವರ ಪರಿಚಯ ನಾನೇ ಮಾಡಿಕೊಡುತ್ತೇನೆ..

ಪಾರ್ವತೀ ಶುರುವಾಗಲಿ.. ಶೂಟಿಂಗ್ ಶುರು !!!

೧) ಎಚ್ ಆರ್ ರಾಮಚಂದ್ರಶಾಸ್ತ್ರಿ 


ಇವರ ಬಗ್ಗೆ ಏನು ಹೇಳೋದು.. ಮಾಸ್ತರು, ಗುಮಾಸ್ತರು, ರೈತ, ಮಂತ್ರಿ, ಗುರುಗಳು, ಸಲಹೆಗಾರರು, ದೇವಸ್ಥಾನದ ಪೂಜಾರಿ .. ಹೀಗೆ ಹತ್ತಾರು ರೂಪದಲ್ಲಿ ಇವರ ಅಭಿನಯವನ್ನು ಸವಿಯುವ ಸೌಭಾಗ್ಯ ನನಗೆ ಸಿಕ್ಕಿದೆ .. ಬಡತನದ ಪಾತ್ರಗಳೇ ಹೆಚ್ಚಾದರೂ ಅದು ಜೀವಂತಿಕೆಯಿಂದ ಇರುವಂತೆ ತಮ್ಮ ಅಭಿನಯ ಚಾತುರ್ಯವನ್ನು ತೋರುವ ಇವರ ಪ್ರತಿಭೆ ಶ್ಲಾಘನೀಯ.. 

೨) ಭಟ್ಟಿ ಮಹದೇವಪ್ಪ 

ಇವರ ಸುಮಾರು ಚಿತ್ರಗಳು ಕಳೆದ ಮೇಲೆ ಇವರ ಪ್ರಭಾವಕ್ಕೆ ಬಂದೆ .. ಧ್ರುವತಾರೆ ಚಿತ್ರದಲ್ಲಿ ನಾ ತಂದೆಯನ್ನು ಕಳೆದುಕೊಂಡು ನಿಂತಿದ್ದಾಗ.. ಇವರ ಮನೆಗೆ ಬಂದಾಗ.. ತನ್ನ ಮಡದಿ ಪಾತ್ರಕ್ಕೆ ಏನಾದರೂ ತಿನ್ನಲು ಕೊಡು ಎನ್ನುವ ಸನ್ನೆ ಅದ್ಭುತ..ಹಲವಾರು ಚಿತ್ರಗಳಲ್ಲಿ ಇವರ ಅಭಿನಯ ದೃಶ್ಯಗಳಲ್ಲಿ ನಾ ಇರೋಕೆ ಆಗಲಿಲ್ಲ.. ಆದರೆ ಸ್ಪಷ್ಟ ಕನ್ನಡ, ಗಡುಸು ಧ್ವನಿ ನನಗೆ ಬಲು ಇಷ್ಟ

೩) ಅಶ್ವಥ್ ನಾರಾಯಣ 


ಯಪ್ಪಾ ಚಂದವಳ್ಳಿಯ ತೋಟದ ಅತಿ ಪ್ರಮುಖ ಪಾತ್ರ ಇವರದ್ದು.. ಇಂದಿಗೂ ಆ ಚಿತ್ರದ ತುಣುಕು ನೋಡಿದಾಗ ಖಳನೊಬ್ಬ ಇಷ್ಟು ನಯವಾಗಿರಬಹುದೇ ಎಂದು ಅಚ್ಚರಿಗೊಳಿಸುತ್ತದೆ..ಇವರು ಕೂಡ ಪೂಜಾರಿ, ತೋಟದ ಮಾಲಿ, ಮನೆಯ ಅಡಿಗೆ ಭಟ್ಟ  ಹೀಗೆ ಇವರ ಪಾತ್ರಾಭಿನಯ ನನಗೆ ಬಲು ಇಷ್ಟ 

೪) ಶಾಂತಮ್ಮ 



ನನ್ನ ಇನ್ನೊಬ್ಬ ತಾಯಿ ಇವರು.. ಸರಿ ಸುಮಾರು ಅರವತ್ತರ ದಶಕಗಳಿಂದ ನನ್ನ ಚಿತ್ರಜೀವನ ಅಂತ್ಯಗೊಳ್ಳುವ ತನಕ ಈಕೆಯ ಜೊತೆ ಅಭಿನಯ ಸಾಗುತ್ತಲೇ ಇತ್ತು..  ಕಾಮನಬಿಲ್ಲು ಚಿತ್ರದಲ್ಲಿ ಮನೆಯ ಜವಾಬ್ಧಾರಿ ತೆಗೆದುಕೊಳ್ಳದೆ ಊರಿನ ಬಗ್ಗೆ ಯೋಚನೆ ಮಾಡುತ್ತಿದ್ದ ನನ್ನ ಪಾತ್ರಕ್ಕೆ ದಾರಿ ತೋರಿಸುವ ಮಾತುಗಳು.... ಸಂಧ್ಯಾರಾಗದಲ್ಲಿ ಹಾಸಿಗೆಯಿಂದ ಏಳಲಿಕ್ಕೆ ಆಗದೆ ಮಲಗಿದ್ದ ತನ್ನ ಪತಿ.. ನನ್ನ ಪಾತ್ರದ ಹಾಡನ್ನು ಕೇಳಿ ಹಾಸಿಗೆಯಿಂದ ಎದ್ದಾಗ .. ನನಗೆ ಹಾಡು ನಿಲ್ಲಿಸಬೇಡ ಅಂತ ಹೇಳುವ ಆ ಅಭಿನಯ.. ಆಹಾ .. ಶ್ರುತಿಸೇರಿದಾಗ ಚಿತ್ರದಲ್ಲಿ ಇವರ ಪಾತ್ರಕ್ಕೆ ಅವಕ್ಶವೇ ಇಲ್ಲ ಅಂತ ಯೋಚಿಸುತ್ತಿದ್ದಾಗ ಕಡೆಯ ದೃಶ್ಯದಲ್ಲಿ ಬಂದಾಗ ನನಗೆ ಸಮಾಧಾನ   

೬) ಶನಿಮಹಾದೇವಪ್ಪ 

ಇವರ ಬಗ್ಗೆ ಏನು ಹೇಳಲಿ ಕಳೆದ ವರ್ಷ ಇವರ ಕವಿರತ್ನ ಕಾಳಿದಾಸ ಚಿತ್ರದ ಡಿಂಡಿಮನ ಡಮರುಗ ಇನ್ನೂ ಗುಯ್ ಅನ್ನುತ್ತಲೇ ಇದೆ.. ಅದ್ಭುತ ಕಲಾವಿದ.. ನನ್ನ ಚಿತ್ರಗಳಲ್ಲಿ ಇವರ ಪ್ರತಿಭೆ ಹೆಚ್ಚು ಬೆಳಕಿಗೆ ಬಂತು ಎನ್ನುವುದು ನನಗೆ ಖುಷಿ.. ಧ್ರುವತಾರೆ ಚಿತ್ರದ ಶೇರ್ ಖಾನ್, ಸಮಯದ ಗೊಂಬೆ ಚಿತ್ರದ ಸಹ ವಾಹನ ಚಾಲಕ.. ಶಂಕರ್ ಗುರು ಚಿತ್ರದ ಸತೀಶ್, 

೭) ಸತೀಶ್ 



ಉತ್ತಮ ಕಲಾವಿದ.. ಕೆರಳಿದ ಸಿಂಹದಲ್ಲಿ ಖಳನ ಪಾತ್ರ, ಗುರಿ ಚಿತ್ರದ ಇನ್ಸ್ಪೆಕ್ಟರ್, ಅದೇ ಕಣ್ಣು ಚಿತ್ರದ ಬೆಕ್ಕಿನ ಕಣ್ಣಿನ ಇನ್ಸ್ಪೆಕ್ಟರ್, ಒಲವು ಗೆಲುವು ಚಿತ್ರದ ವಿದ್ಯಾರ್ಥಿ.. ಹೀಗೆ ಸುಂದರ ಹುಡುಗ ಈತ... 

೮) ಕುಪ್ಪುರಾಜ್ 



ವಿಶಿಷ್ಟ ಧ್ವನಿ ಇವರದ್ದು.. ಅನೇಕ ಚಿತ್ರಗಲ್ಲಿ ಖಳನಾಯಕನನ್ನು ಮುಖ ತೋರಿಸದೆ ಗಾಜಿನ ಹಿಂದೆ, ಪರದೆಯ ಹಿಂದೆ ತೋರಿಸುವ ಪಾತ್ರಗಳಿಗೆ ಧ್ವನಿ ನೀಡುತ್ತಿದ್ದದ್ದು ಇವರೇ.. 

೯) ರಾಘವೇಂದ್ರ ರಾವ್ 

ಇವರ ಬಗ್ಗೆ ಏನು ಹೇಳಲಿ.. ನನ್ನ ಎರಡನೇ ಚಿತ್ರದಲ್ಲಿ ನಾಯಕನಟ ಆಗೋಕೆ ಅವಕಾಶ ಕೊಟ್ಟಿದ್ದು ಇವರೇ. ಇವರೇ ಈ ಚಿತ್ರದ ನಾಯಕನಾಗಬೇಕಿತ್ತು.. ಆದರೆ ಆ ಅವಕಾಶ ನನಗೆ ಬಂತು.. ಅನೇಕ ಚಿತ್ರಗಳಲ್ಲಿ ಅಪ್ಪನ ಪಾತ್ರ, ಗುರುವಿನ ಪಾತ್ರ, ಪೂಜಾರಿಯ ಪಾತ್ರದಲ್ಲಿ ಇದ್ದಾರೆ.. ಆದರೆ ನನಗೆ ಅತಿ ಮೆಚ್ಚಿನ ಪಾತ್ರ ಚಂದವಳ್ಳಿ ತೋಟದ ನರಹರಿಯ ಪಾತ್ರ.. ತನ್ನ ಸ್ನೇಹಿತನ ಮನೆಯನ್ನು ಉಳಿಸುವುದಕ್ಕೆ ಈತ ಪಡುವ ಪಾಡು.. ಅದ್ಭುತ ಅಭಿನಯ.. 

೧೦) ಗಣಪತಿ ಭಟ್ 

ದಪ್ಪ ಧ್ವನಿ.. ಅದರ ವಿಶೇಷತೆ ಎಂದರೆ ದಯನೀಯವಾಗಿ ಮಾತಾಡುವಾಗಲೂ, ದರ್ಪದಿಂದ ಮಾತಾಡುವಾಗಲೂ ಅವರ ವಿಶಿಷ್ಟ ಧ್ವನಿ ಅವರಿಗೆ ಜೊತೆಯಾಗುತಿತ್ತು.. ಕಣ್ಣ್ತೆರೆದು ನೋಡು ಚಿತ್ರದ ಸೇಠು, ಬಂಗಾರದ ಮನುಷ್ಯ ಚಿತ್ರದ ರೈತ.. ಹೀಗೆ ಹಲವಾರು ಚಿತ್ರಗಳಲ್ಲಿ ಇವರ ಜೊತೆ ಅಭಿನಯ ಕೊಡುವ ಅವಕಾಶ ಬಂದಿದ್ದು ನನ್ನ ಪುಣ್ಯ

೧೧)



ಓಯ್ ಶ್ರೀ ಇರಪ್ಪ.. ಇವತ್ತಿಗೆ ಹತ್ತು ಸಾಕು ಜನರಿಗೆ ಬೋರ್ ಆಗಬಹುದು.. ಇನ್ನೂ ಇದೆಯಲ್ಲ ಹನ್ನೆರಡು ದಿನ ಆದ ಮೇಲೆ ಮತ್ತೆ ಇನ್ನೊಂದು ರಾಂಪ್ ವಾಕ್ ಮಾಡೋಣ.. ಏನಂತೀಯಾ.. 


******

ಎರಡು ದಶಕಗಳು.. ಅಣ್ಣಾವ್ರು ಹೊರಗಿನ ಪ್ರಪಂಚದಿಂದ ಆಗಲೇ ನಮ್ಮೊಳಗೇ ಇದ್ದ ಹೃದಯ ಸಿಂಹಾಸನದಲ್ಲಿ ಅಮರವಾಗಿದ್ದು ಇದೆ ದಿನ..  

ಅಣ್ಣಾವ್ರ ನೆನಪಿಲ್ಲದೆ ಏನೂ ಇಲ್ಲ.. 
ಅಣ್ಣಾವ್ರ ನೆನಪೇ ಎಲ್ಲಾ   

Saturday, April 11, 2026

ಒಂದಲ್ಲ ಎರಡು .. ಅದೇ ಭಲೇ ಜೋಡಿ 1970 (ಅಣ್ಣಾವ್ರ ಚಿತ್ರ ೧೨೧/೨೦೭)

ಚಿತ್ರದ ಕೊನೆಯಲ್ಲಿ ಮುದ್ದಾದ ತಂಗಿ ಪಾತ್ರಧಾರಿ ಹೇಳುತ್ತದೆ "ಇದು ಒಂದು ಜೋಡಿ.. ಅದು ಒಂದು ಜೋಡಿ .. ಭಲೇ ಜೋಡಿ"


ನಿಜ.. ಈ ಚಿತ್ರ ಸುಂದರ ಕಥಾನಕ ಹೊಂದಿದ ಚಿತ್ರ.. 

ರಾಜಕುಮಾರ್ ಅಂತಹ ಅದ್ಭುತ  ನಟರಿಗೆ ಜನುಮ ನೀಡಿದ ಸಿಂಗಾನಲ್ಲೂರು ನಾ ಪುಟ್ಟಸ್ವಾಮಯ್ಯನವರಿಗೆ ಭಕ್ತಿಪೂರ್ವಕವಾಗಿ ಈ ಚಿತ್ರವನ್ನು ಅರ್ಪಿಸಿದ್ದಾರೆ. 



ಚಿತ್ರೀಕರಣ ಬಹುಪಾಲು ಊಟಿಯ ಎಸ್ಟೇಟಿನಲ್ಲಿ ನೆಡೆಯುತ್ತದೆ.. ಆ ಎಸ್ಟೇಟ್ ಮಾಲೀಕರಿಗೂ ಧನ್ಯವಾದಗಳನ್ನು ಹೇಳಿದ್ದಾರೆ. ಇದೊಂದು ಉತ್ತಮ ಸಂಪ್ರದಾಯವಾಗಿದೆ. 


ರಾಜಕುಮಾರ್ ಎರಡು ಪಾತ್ರಗಳಲ್ಲಿ ಮಿಂಚುತ್ತಾರೆ.. ಆ ಕಾಲಘಟ್ಟದಲ್ಲಿ ಈ ರೀತಿಯ ದ್ವಿಪಾತ್ರ ಅಭಿನಯದ ಚಿತ್ರಗಳು ಕಡಿಮೆ.. ಎರಡು ಪಾತ್ರಗಳು ಬೇರೆ ಬೇರೆ ಚಿತ್ರಣ ಮಾಡಬೇಕು.. ಅಲ್ಲಿ ಇದ್ದಾರೆ ಅಂತ ಕಲ್ಪಿಸಿಕೊಂಡು ಅಥವ ಇನ್ನೊಬ್ಬ ಭಾವರಹಿತ ಸಂಭಾಷಣೆಯನ್ನು ಕೇಳಿಕೊಂಡು ಜೀವ ತುಂಬಿ ಅಭಿನಯಿಸಬೇಕು.. ಇದೆಲ್ಲ ಕಷ್ಟ ಸಾಧ್ಯದ ಕೆಲಸಗಳು.. ಜೊತೆಯಲ್ಲಿ ಧ್ವನಿಯ ಏರಿಳಿತ.. ಹಾವಭಾವ.. ಕೆಲವೊಮ್ಮೆ ಎರಡೂ ಪಾತ್ರಗಳು ಒಂದೇ ರೀತಿ ಅಭಿನಯಿಸಬೇಕಾಗುತ್ತದೆ.. ಕೆಲವೊಮ್ಮೆ ಒಂದು ಧೈರ್ಯಶಾಲಿ.. ಇನ್ನೊಂದು ಪುಕ್ಕಲು ಸ್ವಭಾವ.. ಇಲ್ಲವೇ ಒಂದು ಪಾತ್ರ ಒಳ್ಳೆಯದು.. ಇನ್ನೊಂದು ಕ್ರೂರತನದಿಂದ ಕೂಡಿದ್ದು.. ಹೀಗೆ ಪಾತ್ರಗಳ ಒಳನೋಟ ಅರಿತು ಅಭಿನಯಿಸೋದು .. ಸವಾಲು ಹೌದು.. 

ಇದರಲ್ಲಿ ರಾಜಕುಮಾರ್ ಪಳಗಿದ ನಟ ಅಂತ ನಾ ಹೇಳುತ್ತೇನೆ.. ಏಕೆಂದರೆ ಸತಿ ಶಕ್ತಿಯಲ್ಲಿ ಅವರ ಅಭಿನಯ ಅದ್ಭುತ.. ಇನ್ನೂ ಕೆಲವು ಚಿತ್ರಗಳಲ್ಲಿ ದ್ವಿಪಾತ್ರಾಭಿನಯ ಮಾಡಿದ್ದರೂ ಸತಿ ಶಕ್ತಿ ಒಂದು ಉನ್ನತ ಉದಾಹರಣೆ.. 

ರಮೇಶ್ ಪಾತ್ರ ಮೃದು.. ಸ್ವಲ್ಪ ಭಯಸ್ಥ.. ಸ್ವಲ್ಪ ಮುಗ್ಧತೆ... 

ಸುರೇಶನ ಪಾತ್ರ ಚಾಲಾಕಿತನ, ಧೈರ್ಯಸ್ಥ.. ಏನಾಗುತ್ತೋ ನೋಡಿಬಿಡೋಣ ಅನ್ನುವ ಧೈರ್ಯ .. ಪರರಿಗೆ ಉಪಕಾರ ಮಾಡುವ ಧಾರಾಳತನ.. 

ಈ ರೀತಿಯ ಎರಡೂ ಪಾತ್ರಗಳನ್ನೂ ಒಂದರ ಪಾತ್ರ ಇನ್ನೊಂದರ ಮೇಲೆ ನೆರಳು ಬೀಳದಂತೆ ಅಭಿನಯಿಸಿದ್ದಾರೆ.. 

ದಿನೇಶ್ ಮತ್ತೆ ಖಳನಾಗಿ ಇಲ್ಲಿ ವಿಜೃಂಭಿಸಿದ್ದಾರೆ.. ಏ ರಮೇಶ, ಬಾರೋ ಸೈನ್ ಹಾಕೋ, ಎದ್ದೇಳೋ ಇನ್ನೂ ಮಲಗಿದ್ದೀಯ..ಅಂತ ಜಬರ್ದಸ್ತ್ ಆಗಿ ಕೂಗುವ ದೃಶ್ಯಗಳು ಸಾಕಷ್ಟಿವೆ.. ಅದರಲ್ಲಿ ದಿನೇಶ್ ಗೆದ್ದಿದ್ದಾರೆ.. 


ಅವರ ತಂದೆಯಾಗಿ ಬಾಲಕೃಷ್ಣ ಅರ್ಥಾತ್ ಬಾಲಣ್ಣ ಅವರಿಗೆ ತುಸು ಕಡಿಮೆ ಅವಕಾಶ.. ಆದರೂ ತಮ್ಮತನವನ್ನು ಬಿಡದೆ ತಮ್ಮ ಛಾಪು ಮೂಡಿಸಿದ್ದಾರೆ 

ಬಿ ವಿ ರಾಧಾ ಎಂದಿನಂತೆ ಸಂತ್ರಸ್ತೆಯ ಪಾತ್ರ.. ಮೋಹಿನಿಯಾಗಿ ಕಾಡುವ ಕೆಲವು ದೃಶ್ಯಗಳು.. ಭಯ ಹುಟ್ಟಿಸುತ್ತದೆ. ಅವರು ಎರಡನೇ ಪಾತ್ರಧಾರಿಗೆ ನಾಯಕಿ 

ಮುಖ್ಯ ನಾಯಕಿಯಾಗಿ ಭಾರತಿ.. ಆದರೆ ಅವರು ಸಿನೆಮಾ ಶುರುವಾಗಿ ಒಂದು ಘಂಟೆಯ ನಂತರ ಬರುತ್ತಾರೆ.. ಸೀಮಿತ ಅವಕಾಶದ ಪಾತ್ರ.. ಆದರೆ ಮುಗ್ಧ ಸೌಂದರ್ಯದಿಂದ ಗಮನಸೆಳೆಯುತ್ತಾರೆ 


ಗಣಪತಿ ಭಟ್ ಸೇಟುವಾಗಿ ಅವರ ಭಾಷೆ, ಧ್ವನಿ ಇಷ್ಟವಾಗುತ್ತದೆ 

ಪಂಡರಿಬಾಯಿ ಸುರೇಶನ ತಾಯಿಯಾಗಿ ಮಮತೆಯನ್ನು ಧಾರೆಯೆರೆದಿದ್ದಾರೆ 

ಮುಗ್ಧೆ ತಂಗಿಯಾಗಿ ಚುರುಕು ಮೆಣಸಿನಕಾಯಿ ಅಭಿನಯ ನೀಡಿದ್ದಾರೆ ಬೇಬಿ ಸುನೀತಾ 

ನಾಗಪ್ಪ ಅವರ ಮೊದಲ ದೃಶ್ಯ ನೋಡಿ.. ಅರೆ ವಾಹ್.. ಎಷ್ಟು ಚೆನ್ನಾದ ಪಾತ್ರ.. ಹೀಗೂ ಸಾಧ್ಯವೇ ಅಂತ ಅನ್ನಿಸಿ.. ಮುಂದಿನ ದೃಶ್ಯ ನೋಡಿದಾಗ ಅವರ ವಿರಾಟ್ ನಿಜ ರೂಪ ಕಂಡೆ.. ಆಹಾ ಇದು ಸರಿ.. ಇದು ನಿಜವಾದ ನಾಗಪ್ಪ ಅನಿಸಿತು.. 











ಈ ಚಿತ್ರದ ನಿಜವಾದ ಹೈಲೈಟ್ ಎಂದರೆ.. ರಾಜಕುಮಾರ್ ಅವರ ಮೊದಲ ದೃಶ್ಯ.. 

ಎಚ್ಚಮನಾಯಕನ ಪಾತ್ರ ಅದ್ಭುತ.. ಉದ್ದುದ್ದದ ಸಂಭಾಷಣೆಯನ್ನು ನಿರರ್ಗಳವಾಗಿ ಹೇಳುತ್ತಾ, ಅದಕ್ಕೆ ಬೇಕಾದ ಪರಿಣಾಮಕಾರಿ ಧ್ವನಿ ಮತ್ತು ಭಾವಾಭಿನಯ ಕೊಡುವ ಸುಮಾರು ಹತ್ತು ನಿಮಿಷದ ನಾಟಕದಲ್ಲಿ ಅದ್ಭುತವಾಗಿದ್ದಾರೆ.. ಅದೊಂದು ಮತ್ತೆ ಮತ್ತೆ ನೋಡಬೇಕಾದ ದೃಶ್ಯ.. ಅವರ ಜೊತೆಯಲ್ಲಿ ಭಟ್ಟಿ ಮಹದೇವಪ್ಪ ತಿರುವೆಂಕಟನಾಗಿ ಸರಿಸಾಟಿ ಅಭಿನಯ ನೀಡಿದ್ದಾರೆ 





ಉಳಿದಂತೆ ಪುಟ್ಟ ಪುಟ್ಟ ಪಾತ್ರದಲ್ಲಿ ಜೋಕರ್ ಶ್ಯಾಮ್, ಅಡಿಗೆ ಭತ್ತನಾಗಿ ರಾಘವನ್, ವಕೀಲನಾಗಿ ಶನಿ ಮಹದೇವಪ್ಪ, ವೈದ್ಯನಾಗಿ ಬಿ ಮಲ್ಲೇಶ್,  ಒಂದು ಪುಟ್ಟ ಪಾತ್ರದಲ್ಲಿ ಕುಪ್ಪುರಾಜ್ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ .



ಜಾವರ್ ಸೀತಾರಾಮನ್ ಅವರ ಕತೆಯನ್ನು ಚಿತ್ರಕತೆ ಮತ್ತು ನಿದೇಶನದ ಹೊಣೆಯನ್ನು ಹೊತ್ತವರು ವೈ ಆರ್ ಸ್ವಾಮಿ. 

ಸಂಭಾಷಣೆ ಚಿ ಉದಯಶಂಕರ್ 

ಹಾಡುಗಳು ಚಿ ಉದಯಶಂಕರ್ ಮತ್ತು ಆರ್ ಎನ್ ಜಯಗೋಪಾಲ್

ಗಾಯಕರಾಗಿ ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಎಲ್ ಆರ್ ಈಶ್ವರಿ ಕಂಠ ದಾನ ಮಾಡಿದ್ದಾರೆ 

ಆರ್ ರತ್ನ ಅವರ ಸುಮಧುರ ಸಂಗೀತವಿದೆ 

ಛಾಯಾಗ್ರಹಣದಲ್ಲಿ ಯಾವಾಗಲೂ ಜಾದೂ ಮಾಡುವ ಆರ್ ಮಧುಸೂದನ್ ಇಲ್ಲಿ ಅವರ ಕೈಚಳಕ ಅದ್ಭುತವಾಗಿದೆ. ದ್ವಿಪಾತ್ರಗಳನ್ನು ಒಂದೇ ದೃಶ್ಯದಲ್ಲಿ ಮೂಡಿಸುವ ಅವರ ಜಾಣ್ಮೆ, ಪ್ರತಿಭೆಗೆ ಎಷ್ಟು ಚಪ್ಪಾಳೆ ಕೊಟ್ಟರೂ ಕಡಿಮೆಯೇ.. ಅಸಾಧ್ಯವನ್ನು ಸಾಧ್ಯ ಎಂದು ನಂಬಿಸುವ ಅವರ ಛಾಯಾಗ್ರಹಣದ ಪ್ರತಿಭೆ ಅದ್ಭುತ. 



ರಾಜಕಮಲ್ ಆರ್ಟ್ಸ್ ಲಾಂಛನದಲ್ಲಿ ತಯಾರಾದ ಚಿತ್ರ ಮನಸ್ಸಿಗೆ ಮುದ ನೀಡುತ್ತದೆ.