Wednesday, February 18, 2026

ಹಳ್ಳಿಯಿಂದ ದಿಳ್ಳಿಗೆ ಬಂದ ಮುತ್ತಣ್ಣ - ಮೇಯರ್ ಮುತ್ತಣ್ಣ 1969 (ಅಣ್ಣಾವ್ರ ಚಿತ್ರ ೧೧೪/೨೦೭)

ಎಲ್ಲವೂ ಪೂರ್ಣತೆಗೆ ಅವಕಾಶ ಸಿಗೋಲ್ಲ.. ಇಲ್ಲ ಕೆಲವೊಮ್ಮೆ ಸಾಧ್ಯವಾಗೋಲ್ಲ.. ಪೂರ್ಣ ಚಂದ್ರ ಬರೋದು ಮೂವತ್ತು ದಿನಗಳಿಗೊಮ್ಮೆ ಮಾತ್ರ.. 

ಏಕೆ ಹೀಗೆ ಹೇಳ್ತೀನಿ ಅಂದ್ರಾ.. 

ಮೇಯರ್ ಮುತ್ತಣ್ಣ ಸಿನೆಮಾ ನೋಡಿದಾಗ ಈ ಮಾತುಗಳು ಹಾಗೆಯೇ ಮನಸ್ಸಿಗೆ ಬಂದವು..



ರಾಜಕುಮಾರ್ ಕರುನಾಡಿನ ಸಾಂಸ್ಕೃತಿಕ ರಾಯಭಾರಿ ಎನ್ನುವಂತೆ ಎಲ್ಲರಿಗೂ ಗೊತ್ತಾಗಿದ್ದು ಬಹುಶಃ ಈ ಸಿನಿಮಾದಿಂದ ಅನಿಸುತ್ತದೆ. 

ಕಾರಣ ಹಳ್ಳಿಯ ಮುಗ್ಧ ಪಟ್ಟಣದ ತಳುಕು ಬಳುಕು ಜಾಲ ಹೆಣೆಯುವ ಜನ ಇವರ ಮಧ್ಯೆ ಸಿಕ್ಕಿಕೊಂಡರೂ ತನ್ನ ತನವನ್ನು ಮರೆಯದೆ.. ಎಲ್ಲರಿಗೂ ಮಾದರಿಯಾಗಿ ನಿಲ್ಲುವ ಕಥಾವಸ್ತುವುಳ್ಳ ಈ ಚಿತ್ರದಲ್ಲಿ ಎಲ್ಲವೂ ಇದೆ. 

ಹಳ್ಳಿಯ ಮುಗ್ಧತೆ.. ತನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಜಯಶ್ರೀ ಕುಟುಂಬಕ್ಕೆ ಒದಗಿದ ಆಘಾತ... ಅದನ್ನು ಸರಿಪಡಿಸಲು ದೇವರ ಮೇಲೆ ಕೂಡ ಪ್ರಮಾಣ ಮಾಡುತ್ತೇನೆ ಎಂದು ಹೇಳುವ ದೃಶ್ಯ.. 

ಪಟ್ಟಣದಲ್ಲಿ ದುಶ್ಚಟಗಳಿಗೆ ಸಾಲ ಮಾಡಿ ಅದನ್ನು ತೀರಿಸಲಾಗದೆ, ತೊಳಲಾಡುವ ಊರಿನ ಪ್ರಮುಖನ ಮಗನನ್ನು ಕಾಪಾಡಲು ಕಳ್ಳತನದ ಆಪಾದನೆಯನ್ನು ತನ್ನ ಮೇಲೆ ಹಾಕಿಕೊಂಡು ಊರಿಂದ ಬಹಿಷ್ಕಾರಗೊಂಡು ಹಳ್ಳಿಯನ್ನು ಬಿಟ್ಟು ಓಡುವ ದೃಶ್ಯ.. 

ಹೊಟ್ಟೆ ಹಸಿದು ಊಟ ತಯಾರಾಗಿದೆ ಎನ್ನುವ ಬೋರ್ಡ್ ನೋಡಿ ಕಂಠ ಪೂರ್ತಿ ತಿಂದು ದುಡ್ಡಿಲ್ಲದೆ ಪರದಾಡುವ ದೃಶ್ಯ 

ಪಟ್ಟಣಕ್ಕೆ ಬಂದು, ಬದುಕಿಗಾಗಿ ಸ್ನೇಹಿತನ ಗುಡಿಸಲಿಗೆ ಹೋದಾಗ, ಅಲ್ಲಿ ಬರುವ ಮಾರ್ವಾಡಿಯ ಸಾಲವನ್ನು ಮುಗ್ಧತೆಯಿಂದ ತೀರಿಸಿ, ಆ ಕೊಳೆಗೇರಿಯಲ್ಲಿ ಜೀವನ ಶುರು ಮಾಡುವ ದೃಶ್ಯ 

ಪಟ್ಟಣದ ಹುಡುಗಿಗೆ ಚಿತ್ರಕಲೆಯಲ್ಲಿ ನಮ್ಮ ದೇಶದ ಬಡತನವನ್ನಲ್ಲ ಸಿರಿತನವನ್ನು ತೋರಿಸಬೇಕು ಎಂದು ತಿಳಿ ಹೇಳುವ ದೃಶ್ಯ 

ತನ್ನ ಊರಿನ ಹೆಣ್ಣು ಮಗಳು ದಾರಿಯಲ್ಲಿ ಸಿಕ್ಕಾಗ, ಮನೆಗೆ ಕರೆದು ತಂದು ಕ್ಷೇಮ ಸಮಾಚಾರ ನೋಡಿಕೊಳ್ಳುವ ದೃಶ್ಯ 

ತಾನು ವಾಸಮಾಡುವ ಪ್ರದೇಶ ಕೊಂಪೆಯಾಗಿದ್ದು ಕಂಡು, ಅದನ್ನು ಶುಚಿಗೊಳಿಸಲು ಮಂದಿಯನ್ನು ಒಟ್ಟುಗೂಡಿಸಿ, ಅಲ್ಲಿನ ನಾಯಕರಿಗೆ ಈ ಜಾಗವನ್ನು ಸರಿಯಾಗಿ ನೋಡಿಕೊಳ್ಳಲು ಪ್ರಯತ್ನ ಮಾಡಿ ಎಂದು ಕೇಳಿಕೊಳ್ಳುವ ದೃಶ್ಯ

ತನ್ನ ಸುತ್ತಮುತ್ತಲು ವಾಸಿಸುವ ಜನರ ಒತ್ತಾಸೆಯಂತೆ ಮೇಯರ್ ಚುನಾವಣೆಗೆ ನಿಂತು ಗೆಲ್ಲುವ ದೃಶ್ಯ.. 

ಕಡೆಯಲ್ಲಿ ತಾನು ಬಹಿಷ್ಕರಿಸಿಕೊಂಡ ಹಳ್ಳಿಯ ಜನರಿಂದಲೇ ಆನೆಯ ಮೇಲೆ ಮೆರವಣಿಗೆ ಮಾಡಿಸಿಕೊಳ್ಳುವ ದೃಶ್ಯ.. 

ಹೀಗೆ ಒಂದು ವ್ಯಾಪಾರೀ ಚಿತ್ರಕ್ಕೆ ಬೇಕಾದ ಎಲ್ಲಾ ಸರಕುಗಳನ್ನು ಅಚ್ಚುಕಟ್ಟಾಗಿ ಬಾಸುಮಣಿಯವರ ಮೂಲಕತೆಯನ್ನು ಅಚ್ಚುಕಟ್ಟಾದ ಚಿತ್ರಕಥೆಯ ಮೂಲಕ ಒಂದು ಸಹ್ಯ ಚಿತ್ರವನ್ನಾಗಿಸಿ ರಾಜಕುಮಾರ್ ಅವರನ್ನು ಮೆರೆಸಿದ ಚಿತ್ರದ ನಿರ್ದೇಶಕ ಸಿದ್ದಲಿಂಗಯ್ಯ ಅವರದ್ದು ಸ್ವತಂತ್ರ ನಿರ್ದೇಶನದ ಮೊದಲ ಚಿತ್ರ ಅನಿಸೋದೇ ಇಲ್ಲ. 

ದ್ವಾರಕೀಶ್ ಚಿತ್ರ ಲಾಂಛನದಡಿ ಶ್ರೀಮತಿ ಅಂಬುಜಾ ದ್ವಾರಕೀಶ್ ನಿರ್ಮಿಸಿದ ಚಿತ್ರವಿದು. 

ಸಾಹಿತ್ಯ ಮತ್ತು ಸಂಭಾಷಣೆ ಚಿ ಉದಯಶಂಕರ್ ಮನಮುಟ್ಟುವಂತೆ ರಚಿಸಿದ್ದಾರೆ

ಇಂಪಾದ ಸರಳ ಸಂಗೀತ ರಾಜನ್ ನಾಗೇಂದ್ರ ಅವರದ್ದು, ಗಾಯನದಲ್ಲಿ ಪಿ ಬಿ ಶ್ರೀನಿವಾಸ್, ಎಲ್ ಆರ್ ಈಶ್ವರಿ, ಪಿ ಸುಶೀಲ 

ಪಿ ಎಸ್ ಪ್ರಕಾಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ 

ನಾಯಕ ಬೇಕೇ ಅದಕ್ಕೆ ರಾಜಕುಮಾರ್ ಇದ್ದಾರೆ. ಹಳ್ಳಿಯ ಹೈದನಾಗಿ ಅದೇ ಭಾಷೆ ಮಾತಾಡುತ್ತ ಮುಗ್ಧತೆಯಿಂದ ನಟಿಸಿದ್ದಾರೆ. ಪಟ್ಟಣಕ್ಕೆ ಬಂದಾಗ ಪಟ್ಟಣದ ರೀತಿ ರಿವಾಜುಗಳಿಗೆ ಬಾಗಿ ಅದಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ ಹೋಟೆಲಿನ ಊಟದಲ್ಲಿ, ದೋಸೆಯ ಪಾತ್ರೆಗೆ ಇಲಿ ಬಿದ್ದುದ್ದನ್ನು ಹೇಳುವ, ನಾಗರೀಕತೆಯ ಹಮ್ಮಿನಿಂದ ಮೆರೆಯುವ ನಾಯಕಿಗೆ ದೇಶ, ಭಾಷೆಯ ಬಗ್ಗೆ ಅಭಿಮಾನ ಬರುವ ಹಾಗೆ ಹೇಳುವ, ಅನ್ಯಾಯ ಕಂಡಾಗ ಅದನ್ನು ಮೆಟ್ಟಿ ನಿಲ್ಲಬೇಕು ಎನ್ನುವ, ತಾನು ಇರುವ ಜಾಗವನ್ನು ಸ್ವರ್ಗವನ್ನಾಗಿ ಮಾಡಬೇಕು ಎನ್ನುವ ಹಂಬಲದ, ನಾಯಕಿ ತನ್ನನ್ನು ಇಷ್ಟಪಟ್ಟಿದ್ದಾಳೆ ಎಂದು ಅರಿವಾದಾಗ ಅದನ್ನು ಒಪ್ಪಿಕೊಳ್ಳುವ, ಪುರ ಪ್ರಮುಖನಾದಾಗ ಪಟ್ಟಣದ ಕುಂದುಕೊರತೆಗಳನ್ನು ನಿವಾರಿಸಬೇಕು ಎನ್ನುತ್ತಲೇ ಖಳನಾಯಕನನ್ನು ಮೆಟ್ಟಿ ನಿಲ್ಲುವ .. ವೈವಿಧ್ಯಮಯ ಪಾತ್ರದಲ್ಲಿ ರಾಜಕುಮಾರ್ ಕಂಗೊಳಿಸುತ್ತಾರೆ 

ಹಳ್ಳಿಯ ಮುಗ್ಧತೆ ಎಷ್ಟು ಚಂದವೋ, ನಾಗರೀಕತೆಯೇ ತುಂಬಿದ ಪಾತ್ರವೂ ಕೂಡ ಅಷ್ಟೇ ಸುಂದರ. 

ಹಳ್ಳಿಯಾದರೇನು ಶಿವ 

ಅಯ್ಯಯ್ಯೋ ಹಳ್ಳಿ ಮುಖ 

ಹಾವಿಗೆ ಮುಂಗುಸಿಯುಂಟು 

 ಒಂದೇ ನಾಡು ಒಂದೇ ಕುಲವು 

ಈ ಎಲ್ಲಾ ಹಾಡುಗಳಲ್ಲಿ ಅವರ ಅಭಿನಯ ಉತ್ತಮೋತ್ತಮ. 

ಇನ್ನೊಂದು ಕ್ಯಾಬರೆ ಹಾಡು ಹಲ್ಲೋ ಹಲ್ಲೋ ...ಗಾಯಕಿ ಎಲ್ ಆರ್ ಈಶ್ವರಿ ಅದ್ಭುತ 

ನಾಯಕಿ ಎಂದರೆ ಬರಿ ಬಳುಕುವ ಬಳ್ಳಿಯಲ್ಲ.. ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಪಾತ್ರವೂ ಹೌದು ಎನ್ನುವಂತೆ ರೂಪುಗೊಂಡಿದೆ ಭಾರತಿಯವರ ಪಾತ್ರ. ಹಳ್ಳಿಯ ಹೈದನನ್ನು ಮೆಚ್ಚಿಕೊಂಡು, ಆತನ ಆಶಯಕ್ಕೆ ಆಸರೆಯಾಗಿ ನಿಲ್ಲುವ ಪಾತ್ರದಲ್ಲಿ ಭಾರತಿಯವರ ಅಭಿನಯ ಸುಂದರ 

ಹಾಸ್ಯಕ್ಕೆ ದ್ವಾರಕೀಶ್ ಇದ್ದರೂ ಅವರ ಪಾತ್ರ ಪಟ್ಟಣದ ಮಂದಿಯ ಸೋಗಲಾಡಿತನವನ್ನು ಎತ್ತಿ ತೋರಿಸುವ ಸಂದೇಶ ಕೊಡುವ ಪಾತ್ರ. 

ಒಳ್ಳೆಯವರಿದ್ದ ಮೇಲೆ ಒಳ್ಳೆಯತನವಿಲ್ಲದವರೂ ಬೇಕಲ್ಲವೇ.. ಎಂಪಿ ಶಂಕರ್, ರಾಜಾನಂದ್, ಬಾಲಕೃಷ್ಣ ಇದ್ದಾರೆ. 

ಪೋಷಕ ಪಾತ್ರಗಳಲ್ಲಿ ಎಚ್ ಆರ್ ರಾಮಚಂದ್ರಶಾಸ್ತ್ರಿ ಜಯಶ್ರೀ, ಬಿವಿ ರಾಧಾ, ಜೋಕರ್ ಶ್ಯಾಮ್, ನಾಗಪ್ಪ, ಬಿ ಎಂ ವೆಂಕಟೇಶ್ , ತೂಗುದೀಪ ಶ್ರೀನಿವಾಸ್ ಇದ್ದಾರೆ.  

ಹಳ್ಳಿಯ ಕಥೆ, ಹಳ್ಳಿಯ ಒಳಜಗಳ, ಒಗ್ಗಟ್ಟು, ಪಟ್ಟಣದ ಬಣ್ಣದ ಬದುಕು, ಸಿರಿವಂತರ ಆಡಂಬರ, ಸಿರಿವಂತರನ್ನು ಲೂಟಿ ಮಾಡುವ ಖದೀಮರು.. ಉತ್ತಮ ಕಥಾವಸ್ತು, ಹಾಡುಗಳು, ಮನಮುಟ್ಟುವ ಸಂಭಾಷಣೆ, ಅಭಿನಯ ಎಲ್ಲವೂ ಮೇಳೈಸಿ ಇದೊಂದು ಅಪರೂಪದ ಪೂರ್ಣಪ್ರಮಾಣದ ಮನೋರಂಜನೆಯ ಚಿತ್ರವಾಗಿದೆ.

















Sunday, February 8, 2026

ಎಲ್ಲರ ಮನವ ಗೆಲ್ಲುವ ಚಿಕ್ಕಮ್ಮ 1969 (ಅಣ್ಣಾವ್ರ ಚಿತ್ರ ೧೧೩/೨೦೭)

ಈ ಚಿತ್ರ ಒಂದು .... 

ತಕ್ಷಣ ತೆರೆಯ ಹಿಂದೆ ಯಾರೋ ಕೂಗಿದಂತೆ ಆಯಿತು.. 

ಶ್ರೀ ಶ್ರೀ ತಡೆಯಪ್ಪ.. ಈ ಚಿತ್ರದ ಬಗ್ಗೆ ನಿನ್ನ ಶಂಖ ಊದುವಂತೆ.. ಅದಕ್ಕಿಂತ ಮೊದಲು ನಾನು ಕೆಲವು ವಿಷಯ ಹೇಳುತ್ತೇನೆ ಅಂತ ಪರದೆಯ ಒಳಗಿಂದ ಬಿಳಿ ಪಂಚೆ ಬಿಳಿ ಶರ್ಟ್ ಧರಿಸಿದ್ದ ರಾಜಕುಮಾರ್ ಹೊರಬಂದರು.. 

ಅರೆ ರಾಜಕುಮಾರ್ ಸರ್ ನೀವು.. ನಮಸ್ಕಾರಗಳು ರಾಜಕುಮಾರ್ ಸರ್ ಅಂದೇ 

ನಮಸ್ಕಾರ ನಮಸ್ಕಾರ ಶ್ರೀ.. ನೋಡಪ್ಪ ಈ ಚಿತ್ರದ ಬಗ್ಗೆ ನೀನು ಬರೆಯೋಕೆ ಕೂತೆ ಅಂತ ಗೊತ್ತಾದ ತಕ್ಷಣ ನಾನೇ ಓಡಿ ಬಂದೆ.. ನಾ ಹೇಳ್ತೀನಿ ನೀ ಬರೀತಾ ಹೋಗು ಆಯ್ತಾ.. 

ಅರೆ ರಾಜಕುಮಾರ್ ಸರ್.. ನೀವು ಹೇಳೋದು ನಾ ಬರೆಯೋದು.. ಎಂಥಹ ಪುಣ್ಯ ನನ್ನದು.. ಚಿತ್ರ ನಿಮ್ಮದು.. ಬರಹ ನಿಮ್ಮದು.. ಆದರೆ ನೀವು ಹೇಳಿದ್ದನ್ನ ಬರೆಯೋದು ನಾನು.. ಆಹಾ ವೇದವ್ಯಾಸರು ಹೇಳಿ ಗಣಪನ ಕೈಯಲ್ಲಿ ಮಹಾಭಾರತ ಬರೆಸಿದಂತೆ ಆಯ್ತು.. ಸೂಪರ್ 

ನೋಡಪ್ಪ ಈ ಚಿತ್ರದ ಹೆಸರು ಚಿಕ್ಕಮ್ಮ.. ಅಂದರೆ ಸಾಮಾಜಿಕ ತೊಂದರೆಯಿಂದ ಮನೆಯ ಜವಾಬ್ಧಾರಿ ಹೊತ್ತ ಹೆಣ್ಣು ಮಗಳು ತನ್ನ ಸುಖ ಸಂತೋಷವನ್ನು ತ್ಯಾಗ ಮಾಡಿ ತನ್ನ ಕುಟುಂಬವನ್ನು ಎತ್ತಿ ಹಿಡಿದು ಒಂದು ನೆಲೆ ಕಾಣಿಸುತ್ತಲೇ.. ತಾನು ಹೊಕ್ಕ ಗಂಡನ ಮನೆಯನ್ನು ಕೂಡ ಬೆಳಗುವ ಉದಾತ್ತ ಕಥೆಯುಳ್ಳ ಚಿತ್ರ. 



ತಾಂತ್ರಿಕವರ್ಗ ತಾರಾಗಣ ಇದರ ಬಗ್ಗೆ ನಿನಗೆ ಗೊತ್ತೇ ಇದೆ.. ಅದನ್ನು ಬರೆದು ಬಿಡು.. 

ಸರಿ ಸರ್ 

ಇದು ಎಸ್ ಎಲ್ ವಿ ಫಿಲಂ ಕಂಬೈನ್ಸ್ ಲಾಂಛನದಲ್ಲಿ ತಯಾರಾದ ಚಿತ್ರ 

ಇದರ ನಿರ್ದೇಶಕ ಆರ್ ಸಂಪತ್ ಅವರೇ ಛಾಯಾಗ್ರಹಣದ ಮೇಲ್ವಿಚಾರಣೆ ಕೂಡ ಹೊತ್ತಿದ್ದಾರೆ. 

ಮೂಲಕತೆ ವಿ ಎಂ ಕೆ ಅವರದ್ದು 

ಸಂಭಾಷಣೆ ಕುಣಿಗಲ್ ನಾಗಭೂಷಣ್ 

ಹಾಡುಗಳು ಆರ್ ಎನ್ ಜಯಗೋಪಾಲ್ 

ಹಾಡುಗಳನ್ನು ಪಿ ಸುಶೀಲ, ಎಲ್ ಆರ್ ಈಶ್ವರಿ, ವಸಂತ, ಪಿ ಬಿ ಶ್ರೀನಿವಾಸ್, ಬಾಲಸುಬ್ರಮಣ್ಯಂ ಮತ್ತು ಪಿ ನಾಗೇಶ್ವರ ರಾವ್ ಹಾಡಿದ್ದಾರೆ 

ಛಾಯಾಗ್ರಹಣ ಕೆ ಜಯರಾಮ್ ಅವರದ್ದು 

ಸಂಗೀತ ಟಿ ವಿ ರಾಜು ಅವರದ್ದು 

ನಿರ್ಮಾಣ ಎಂ ಚಂದ್ರಕುಮಾರ್ ಮತ್ತು ಬಿ ವಿ ಆನಂದ್ 

ತಾರಾಗಣದಲ್ಲಿ ಜಯಂತಿ, ಬಾಲಕೃಷ್ಣ, ನರಸಿಂಹರಾಜು, ಎಂ ಎನ್ ಲಕ್ಷ್ಮೀದೇವಿ, ಬೆಂಗಳೂರು ನಾಗೇಶ್,ನಾಗಪ್ಪ, ಗಣಪತಿ ಭಟ್, ಶ್ರೀನಾಥ್, ಮಹದೇವಪ್ಪ, ಶಾಂತಮ್ಮ ಮತ್ತು ಇವರ ಜೊತೆಯಲ್ಲಿ ಕೆಲವು ದೃಶ್ಯಗಳಲ್ಲಿ ರಾಜಕುಮಾರ್ ಇದ್ದಾರೆ. 

ಸರಿನಾ ರಾಜಕುಮಾರ್ ಸರ್.. 

ಭಲೇ ಭಲೇ ನನ್ನ ಮನಸ್ಸನ್ನು ಸರಿಯಾಗಿ ಆರ್ಥ ಮಾಡಿಕೊಂಡಿದ್ದೀಯ.. ಹೌದು ಈ ಚಿತ್ರದಲ್ಲಿ ನಾನು ಅಭಿನಯಿಸಿದ್ದು ಕೆಲವೇ ದೃಶ್ಯಗಳಲ್ಲಿ.. ಆರಂಭದ ಕೆಲವು ದೃಶ್ಯಗಳು ಮತ್ತು ಅಂತಿಮ ದೃಶ್ಯ.. ಮಿಕ್ಕಿದ್ದು ಪೂರ್ತಿ ಬಾಲಣ್ಣ ಅವರಿಗೆ ಸೇರಿದ್ದು.. 

ಈ ಚಿತ್ರದ ನಾಯಕ ಮತ್ತು ಖಳನಾಯಕ ಬಾಲಣ್ಣ ಅವರೇ.. ನಾಯಕಿ ಜಯಂತಿ.. 

ಬಾಲಣ್ಣ ಅವರ ಅಭಿನಯ ನೋಡಿದೆಯಾ.. ಎಷ್ಟು ಲೀಲಾಜಾಲವಾಗಿದೆ. ಉದ್ದುದ್ದ ಸಂಭಾಷಣೆಗಳನ್ನು ಕತ್ತು ದೇಹವನ್ನು ಅಲುಗಾಡಿಸುತ್ತಾ.. ಎಷ್ಟು ಅರ್ಥಗರ್ಭಿತವಾಗಿ ಹೇಳಿದ್ದಾರೆ. ಅಬ್ಬಬ್ಬಾ ನಾ ಅವರ ಅಭಿನಯವನ್ನು ನೋಡುತ್ತಾ ನೋಡುತ್ತಾ ನಾನೇ ಮರೆತು ಹೋಗುತ್ತಿದ್ದೆ.. ಹೌದು ಅವರ ಜೊತೆಯಲ್ಲಿ ನನಗೆ ದೃಶ್ಯಗಳಿಲ್ಲ ಆದರೆ ಅವರ ಅಭಿನಯ ನೋಡುವ ಸೌಭಾಗ್ಯ ನನಗೆ ದೇವರು ಕೊಟ್ಟಿದ್ದಾನೆ. ಅದ್ಭುತ ಕಲಾವಿದರು ನಮ್ಮ ಬಾಲಣ್ಣ. 

ಜಯಂತಿ ಆಕೆ ಅಭಿನಯ ಶಾರದೆ. ಚಿಕ್ಕಮ್ಮನ ಪಾತ್ರಕ್ಕೆ ತಕ್ಕ ನಟಿ.. ತವರು ಮನೆಯ ಸಮಸ್ಯೆಗಳನ್ನು ಹೆಗಲ ಮೇಲೆ ಹೊತ್ತುಕೊಂಡು.. ಇತ್ತ ಪತಿಯ ಮನೆಯನ್ನು ಸಂಭಾಳಿಸುವ ಪಾತ್ರ ಅಚ್ಚುಕಟ್ಟಾಗಿದೆ. 

ಶ್ರೀನಾಥ್, ಎಂ ಎನ್ ಲಕ್ಷ್ಮೀದೇವಿ, ನರಸಿಂಹರಾಜು, ಬೆಂಗಳೂರು ನಾಗೇಶ್, ನಾಗಪ್ಪ, ಮಹದೇವಪ್ಪ ಎಲ್ಲರ ಅಭಿನಯ ಸೊಗಸಾಗಿದೆ.. 

ಏನೇ ಹೇಳು ಶ್ರೀ ನಾನು ಇಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದರೂ, ಚಿತ್ರದ ಒಂದು ಚಿಕ್ಕ ಭಾಗವಾಗಿ ಮರೆಯಲ್ಲಿ ನಿಂತು ಎಲ್ಲರ ಅಭಿನಯ ನೋಡಿ ಖುಷಿ ಪಡೋದು ಇದೆಯಲ್ಲ ಅದರ ಅನುಭವ ಅದ್ಭುತ. 

ರಾಜಕುಮಾರ್ ಸರ್ ಇಂತಹ ಒಂದು ದೊಡ್ಡಗುಣವೇ ನಿಮ್ಮನ್ನು ನಟಸಾರ್ವಭೌಮನಾಗಿ ಮಾಡಿರುವುದು.. ನಿಮ್ಮ ಭೂಮಿತಾಯಿಯ ಗುಣಕ್ಕೆ ನನ್ನ ವಂದನೆಗಳು ..

ರಾಜಕುಮಾರ್  ನಸುನಕ್ಕು ಮತ್ತೆ ಸಿನಿಮಾ ಪರದೆಯ ಒಳಗೆ ಹೋದರು. 

















ಮನಸ್ಸೊಂದು ಜೀಕುವ ಉಯ್ಯಾಲೆ.. ಎನ್ನುವ ಉಯ್ಯಾಲೆ 1969 (ಅಣ್ಣಾವ್ರ ಚಿತ್ರ ೧೧೨/೨೦೭)

ಎನ್ ಲಕ್ಷ್ಮೀನಾರಾಯಣ್ ಭಾವನೆಗಳನ್ನು ಹಿಡಿದಿಡುವ ನಿರ್ದೇಶಕ. ಅವರು ಆಯ್ದುಕೊಳ್ಳುವ ಕಥಾವಸ್ತುವೂ ಹಾಗೆ ಇರುತ್ತದೆ. ಮತ್ತೆ ಅದರ ತಾರಾಗಣ ಕೂಡ. 



ವಯಸ್ಸಿಗೆ ಬಂದು ಹತ್ತಾರು ಕನಸ್ಸುಗಳನ್ನು ಕಟ್ಟಿಕೊಂಡಿರುವ ನಾಯಕಿ 

ಜೀವನದಲ್ಲಿ ಮದುವೆ ಎಂಬ ವೃತ್ತಕ್ಕೆ ಬಂದು ಮತ್ತೆ ಕಾರಣಾಂತರಗಳಿಂದ ಇನ್ನೊಂದು ಮದುವೆಯಾದರೂ, ಅದರಲ್ಲಿ ಅಷ್ಟೇನೂ ಆಸಕ್ತಿಯಿಲ್ಲದೆ ತನ್ನ ವೃತ್ತಿ, ಓದು ಇದರಲ್ಲಿಯೇ ಸಮಾಧಾನ ಕಂಡುಕೊಳ್ಳುವ ನಾಯಕ. 

ಬದುಕಲ್ಲಿ ಹುರುಪು ತುಂಬಿಕೊಂಡು ಪ್ರತಿ ಕ್ಷಣವನ್ನು ಅನುಭವಿಸುವ ನಾಯಕನ ಗೆಳೆಯ 

ತಮ್ಮ ಬದುಕಲ್ಲಿ ಏನೇ ಆಗಿದ್ದರೂ ಕಂಡವರ ಮನೆಯಲ್ಲಿ ನೆಡೆಯುವ ಘಟನೆಗಳೇ ತಮಗೆ ಉಸಿರು ಎಂದು ಬದುಕುವ ನೆರೆಹೊರೆಯ ಕುಟುಂಬ. 

ಈ ನಾಲ್ಕು ಮಂದಿಯ ಸುತ್ತಾ ಸುತ್ತುವ ಕಥೆಯೇ ಉಯ್ಯಾಲೆ. 

ನಾಯಕಿಯಾಗಿ ಕಲ್ಪನಾ ಹದಭರಿತ ಅಭಿನಯ.. ಭಾವನೆಗಳನ್ನು ಮುಖದಲ್ಲಿಯೇ ತೋರಿಸುತ್ತಾ, ನಿಧಾನವಾಗಿ ಅರ್ಥಗರ್ಭಿತವಾಗಿ ಹೇಳುವ ಸಂಭಾಷಣೆ.. ಕಣ್ಣಂಚಿನಲ್ಲಿಯೇ ದುಃಖ, ಸಂತೋಷ ಭಾವಗಳನ್ನು ಉಕ್ಕಿಸುವ ದೃಶ್ಯಗಳು ಅಬ್ಬಬ್ಬಾ ಎನಿಸುತ್ತದೆ. 

ನಾಯಕನಾಗಿ ತನ್ನ ಸಿದ್ಧಾಂತಕ್ಕೆ, ಭಾವನೆಗೆ ತಕ್ಕಂತೆ ರೂಪುಗೊಂಡ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಅಶ್ವಥ್. 

ನಾಯಕನ ಗೆಳೆಯನಾಗಿ ಮನೆಗೆ ಬರುವ ರಾಜಕುಮಾರ್ ನಿಧಾನವಾಗಿ ಕಥೆಯಲ್ಲಿ ಆವರಿಸಿಕೊಳ್ಳುವ ಪರಿ, ಮತ್ತೆ ತನ್ನ ಗೆಳೆಯನ ಮಡದಿಯ ಮೇಲೆ ಮನಸ್ಸಾಗಿರಬಹುದು ಎನ್ನುವ ಭಾವನೆಯನ್ನು ಅವರು ತೋರಿಸುವ ರೀತಿ.. ಅದರ ತಳಮಳ, ಸಂಭಾಷಣೆ.. ಅರೆ ರಾಜಕುಮಾರ್ ಅವರು ಈ ರೀತಿಯ ಸಂಕೀರ್ಣತೆಯ ಪಾತ್ರವನ್ನು ಹೇಗೆ ಒಪ್ಪಿಕೊಂಡರು ಎನ್ನುವ ಪ್ರಶ್ನೆ ಮೂಡಿದರು, ಅದಕ್ಕೆ ತಕ್ಕ ಅಭಿನಯ ನೀಡಿ ಗೆದ್ದಿದ್ದಾರೆ. 

ಸದಾ ಓಸಿ ಅಂದರೆ ಉಚಿತವಾಗಿ ನೆರೆಹೊರೆಯ ಮೇಲೆ ಅವಲಂಬಿತವಾಗಿ ಬದುಕುವುದೇ ತಮ್ಮ ಜೀವನದ ಗುರಿ ಎಂದು ಬದುಕುವ ಬಾಲಕೃಷ್ಣ ಅವರ ಹಾಸ್ಯ ಸಂಭಾಷಣೆ.. ಅದಕ್ಕೆ ಒಗ್ಗರಣೆ ಹಾಕುವ ರಮಾದೇವಿ ಜೀವ ತುಂಬಿದ್ದಾರೆ 

ನಿರ್ದೇಶಕರು ಅನೇಕ ದೃಶ್ಯಗಳನ್ನು ಹೆಣೆಯುವಾಗ ತೋರುವ ಜಾಣ್ಮೆ ಇಷ್ಟವಾಗುತ್ತದೆ. ನಾಯಕ ಮತ್ತು ನಾಯಕಿ ತಳಮಳಗೊಳ್ಳುವ ದೃಶ್ಯಗಳನ್ನು ನೆರಳು ಬೆಳಕಿನ ಮೂಲಕ ತೋರಿಸಿದ್ದಾರೆ. ನಾಯಕಿ ಒಂದು ಹೆಜ್ಜೆ ಮುಂದಿಡಲು ಹೋದಾಗ ಸಹನಾಯಕ ಒಂದು ಹೆಜ್ಜೆ ಹಿಂದೆ ಹೋಗೋದು.. ಆತ ಒಂದು ಹೆಜ್ಜೆ ಮುಂದೆ ಇಟ್ಟಾಗ ನಾಯಕಿ ಓಡಿ ಹೋಗುವ ದೃಶ್ಯ ಕಲ್ಪನೆ ಸೊಗಸಾಗಿದೆ. 

ಕಥೆಯ ಆಶಯಕ್ಕೆ ಜೊತೆಯಾಗಿ ಕಿಸಾ ಗೌತಮಿಯ ಸಾವಿಲ್ಲದ ಮನೆಯ ಸಾಸಿವೆ ರೂಪಕ ಅಚ್ಚುಕಟ್ಟಾಗಿ ಮೂಡಿಬಂದಿದೆ. 

ಬಹುಶಃ ರಾಜಕುಮಾರ್ ಅವರು ಬುದ್ಧನಾಗಿ ಅಭಿನಯಿಸಿದ್ದು ಇದುವರೆಗಿನ ಚಿತ್ರದಲ್ಲಿ ಇದೆ ಮೊದಲು. ಮುದ್ದಾಗಿ ಕಾಣುತ್ತಾರೆ. ಗೌತಮಿಯಾಗಿ ಲೀಲಾವತಿ ಅತಿಥಿ ಪಾತ್ರದಲ್ಲಿ ಬರುತ್ತ್ತಾರೆ. 

ನಿರ್ದೇಶಕರ ಮೆಚ್ಚಿನ ಸಂಗೀತ ನಿರ್ದೇಶಕ ವಿಜಯಭಾಸ್ಕರ್. 

ಹಾಡುಗಳನ್ನು ಆರ್ ಎನ್ ಜಯಗೋಪಾಲ್, ಚಿ ಉದಯಶಂಕರ್ ವಿಜಯನಾರಸಿಂಹ ಮತ್ತು ಗೀತಪ್ರಿಯ ರಚಿಸಿದ್ದಾರೆ. 

ಛಾಯಾಗ್ರಹಣ ಎನ್ ಜಿ ರಾವ್ ಅವರು ನಿಭಾಯಿಸಿದ್ದಾರೆ 

ಪಿ ಬಿ ಶ್ರೀನಿವಾಸ್ ಪಿ ಸುಶೀಲ ಗಾಯನಕ್ಕೆ ಬಂದಿದ್ದಾರೆ 

ನಿರ್ಮಾಣ ನಿರ್ವಣೆ ಗೋಪಾಲ್ ಮತ್ತು ಲಕ್ಶ್ಮಣ್ 

ಕಥೆ ಮತ್ತು ಸಂಭಾಷಣೆ ಸಾಹಿತಿ ಚದುರಂಗ (ಎಂ ಸುಬ್ರಮಣ್ಯ ರಾಜ್ ಅರಸ್) ಅವರದ್ದು. 

ನಿರ್ದೇಶನ ಎನ್ ಲಕ್ಷ್ಮೀನಾರಾಯಣ್

ಭಾವಗಳ ಉಯ್ಯಾಲೆಗೆ ಕಡಿವಾಣ ಹಾಕಬೇಕು ಎನ್ನುವ ಉಯ್ಯಾಲೆ ಒಂದು ಅರ್ಥಗರ್ಭಿತ ಚಿತ್ರ. 
















ಪಟ್ಟಣಕ್ಕೆ ಬಂದು ಭಲೇ ಎನಿಸಿಕೊಳ್ಳುವ ಭಲೇ ರಾಜ 1969 (ಅಣ್ಣಾವ್ರ ಚಿತ್ರ ೧೧೧/೨೦೭)

ಕೋಪ ಅನರ್ಥಕ್ಕೆ ದಾರಿ ಎನ್ನುತ್ತಾರೆ 

ಅಪರಿಮಿತ ಪ್ರೀತಿ ಅನರ್ಥಕ್ಕೆ ದಾರಿ ಎನ್ನುತ್ತಾರೆ 

ಹೌದು ಈ ಎರಡು ವಾಕ್ಯಗಳ ಮೇಲೆ ರಚಿಸಿರುವ ಕಥೆಯಿದು. ಕತೆಯ ಕತೃ ಪೂವೈ ಕೃಷ್ಣನ್ ಅವರದ್ದು. 



ಎಕ್ಸ್ಕ್ಯೂಟಿವ್ ಪ್ರೊಡ್ಯೂಸರ್, ಚಿತ್ರಕತೆ ಮತ್ತು ನಿರ್ದೇಶನ ವೈ ಆರ್ ಸ್ವಾಮಿ ಅವರದ್ದು 

ನಿರ್ಮಾಣ ಎಜಮಾನ್ ಮೋತಿ ವೀರಣ್ಣ 

ಸಂಗೀತ ಸತ್ಯಂ ಅವರದ್ದು 

ಹಾಡುಗಳು ಸೋರಟ್ ಅಶ್ವಥ್ ಮತ್ತು ಕಣಗಾಲ್ ಪ್ರಭಾಕರ್ ಶಾಸ್ತ್ರೀ 

ಹಾಡುಗಳನ್ನು ಪಿ ಬಿ ಶ್ರೀನಿವಾಸ್, ಪಿ ಸುಶೀಲ ಮತ್ತು ಬಾಲಸುಬ್ರಮಣ್ಯಂ  ಅವರ ಕಂಠಸಿರಿಯಲ್ಲಿ ಮೂಡಿಸಿದ್ದಾರೆ. 

ಛಾಯಾಗ್ರಹಣ ಆರ್ ಮಧು ಅವರದ್ದು

ರೈಲು ಅಪಘಾತದಲ್ಲಿ ತನ್ನ ಇಬ್ಬರು ಮಕ್ಕಳನ್ನು ದೂರ ಮಾಡಿಕೊಳ್ಳುವ ಜಯಶ್ರೀ, ಕೊನೆಯುಸಿರು ಎಳೆಯುತ್ತಿದ್ದ ಸಹಪ್ರಯಾಣಿಕನ ಇಚ್ಛೆಯಂತೆ ಆತನ ಮಗನನ್ನು ಸಾಕುವ ಮತ್ತು ಆಸ್ತಿಯನ್ನು ನೋಡಿಕೊಳ್ಳುವ ಹೊಣೆ ಹೊತ್ತುಕೊಳ್ಳುತ್ತಾರೆ. 

ಇತ್ತ ತಾಯಿಯಿಂದ ದೂರವಾದ ಮಕ್ಕಳಿಬ್ಬರು ಒಬ್ಬ ಸಿರಿವಂತನ ಆಶ್ರಯದಲ್ಲಿ ಬೆಳೆಯುತ್ತಾರೆ. ಆದರೆ ತಂಗಿಯ ಮೇಲೆ ಅಪಾರ ಪ್ರೀತಿಯಿದ್ದ ಅಣ್ಣ, ತನ್ನ ತಂಗಿಯನ್ನು ಆಕೆಯ ಸಹಪಾಠಿ ರೇಗಿಸಿದ ಎನ್ನುವ ಕಾರಣಕ್ಕೆ ಅವನನ್ನು ನೀರಿಗೆ ತಳ್ಳಿ, ತಂಗಿಯ ಮಾತಿನಂತೆ ಓಡಿ ಹೋಗುತ್ತಾನೆ ಪೋಲೀಸರ ಭಯದಿಂದ. 

ಮುಂದೆ ಆತ ಬೀದಿ ಬಸವನಾಗುತ್ತಾನೆ, ಇತ್ತ ತಂಗಿ ಸಿರಿವಂತನ ಮನೆಯಲ್ಲಿ ಅಚ್ಚುಕಟ್ಟಾಗಿ ಬೆಳೆಯುತ್ತಾಳೆ.  ಸಂದರ್ಭಗಳು ಮತ್ತೆ ಎಲ್ಲರನ್ನೂ ಒಂದುಗೂಡಿಸುತ್ತೆ. ಅದಕ್ಕೆ ಒಂದಷ್ಟು ತರ್ಕಬದ್ಧವಾದ ಕಥೆ. ಖಳನಾಯಕ ಆತ ಸೃಷ್ಟಿ ಮಾಡುವ ಕುಯುಕ್ತಿಯ ತಂತ್ರ, ಅದನ್ನು ನಾಯಕ ನಾಯಕಿ ಭೇದಿಸಿ, ಖಳನನ್ನು ಹಿಡಿಯುವುದು ಚಿತ್ರದ ಉಳಿದ ಭಾಗ. 

ಬಡವನಾಗಿ, ಜೇಬು ಕತ್ತರಿಸುವ ಪಾತ್ರದಲ್ಲಿ ರಾಜಕುಮಾರ್ ಸೂಪರ್. ಬಡತನವಿದ್ದರೂ, ಮಾಡುತ್ತಿದ್ದದ್ದು ಕಳ್ಳತನವೇ ಆದರೂ ಅದರಲ್ಲಿಯೂ ಮಾನವೀಯತೆ ತೋರುವ ಪಾತ್ರ. ತನ್ನ ತಂಗಿ ತನಗೆ ಸಿಕ್ಕಿದ್ದಾಳೆ ಎಂದಾಗ ಅವರು ತೋರುವ ಅಭಿನಯ, ಆದರೆ ತಾನೇ ಅಣ್ಣ ಎಂದು ಹೇಳಿಕೊಳ್ಳಲಾಗದ ಸಂಕಟ.. ಮತ್ತೆ ತನ್ನ ತಂಗಿಯ ಗಂಡ ಕಾರಣಾಂತರಗಳಿಂದ ಅಣ್ಣ ತಂಗಿಯ ಬಂಧವನ್ನು ಅನುಮಾನಿಸಿದಾಗ, ತನ್ನ ಭಾವನಿಗೆ ಒಂದಷ್ಟು ಏಟು ಕೊಡುವ ದೃಶ್ಯ, ಮತ್ತೆ ಮನೆಯ ಯಜಮಾನಿ ಮನೆಯಿಂದ ಹೊರಗೆ ಹೋಗು ಎನ್ನುವಾಗ ಸಂಕಟಪಡುತ್ತಾ ಹೇಳುವ ಸಂಭಾಷಣೆ.. ಮತ್ತೆ ಅಂತ್ಯದಲ್ಲಿ ಖಳನನ್ನು ಸದೆಬಡಿಯಲು ನಾಯಕಿಯೊಂದಿಗೆ ತಂತ್ರ ಹೂಡಿಕೆ. ಹಲವಾರು ಆಯಾಮಗಳ ಪಾತ್ರ.. ಗೆದ್ದಿದ್ದಾರೆ ರಾಜಕುಮಾರ್ ... ಎಲ್ಲಾ ದೃಶ್ಯಗಳಲ್ಲಿಯೂ ಅದ್ಭುತವಾಗಿದ್ದಾರೆ. 

ನಾಯಕಿಯಾಗಿ ಮತ್ತೆ ಜಯಂತಿ ಇಲ್ಲಿ ಘಟವಾಣಿಯಾಗಿ ಕಾಣಿಸಿಕೊಂಡಿದ್ದಾರೆ.. ಜೊತೆಗೆ ಅಷ್ಟೇ ನಾಜೂಕಾಗಿ ತಾನು ಹಿಡಿದ ಕಾರ್ಯವನ್ನು ಸಾಧಿಸುವ ಹೆಣ್ಣಾಗಿದ್ದಾರೆ. ಹಳ್ಳಿಗರ ಭಾಷೆ, ಅದಕ್ಕೆ ಒಪ್ಪುವ ಒಯ್ಯಾರ, ತಾನು ಹಿಡಿದ ಕಾರ್ಯ ಸಾಧಿಸುವಾಗಿನ ಚಾಲಾಕಿತನ ಎಲ್ಲವೂ ಸೊಗಸು. 

ಖಳನಾಗಿ ಎಂಪಿ ಶಂಕರ್ ಅವರಿಗೆ ಕೆಲವು ದೃಶ್ಯಗಳಿದ್ದರೂ ಅಬ್ಬರಿಸುತ್ತಾರೆ. 

ರಂಗ ಮತ್ತು ಬಿ ವಿ ರಾಧಾ ಅವರ ಪಾತ್ರ ಪೋಷಣೆ ಕಥೆಯ ಪರಿಮಿತಿಗೆ ಚೆನ್ನಾಗಿದೆ

ಜಯಶ್ರೀ, ಮಹದೇವಪ್ಪ, ನಾಗಪ್ಪ, ಈಶ್ವರಪ್ಪ, ಅಶ್ವಥ್ ಸಹಯೋಗ ನೀಡಿದ್ದಾರೆ.