Showing posts with label Kanagal Prabhakar Shastri. Show all posts
Showing posts with label Kanagal Prabhakar Shastri. Show all posts

Sunday, October 21, 2018

ನಾದ ನಮನ ಸುಂದರ ಸಂಜೆ !!!

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ತಾಲೂಕಿನ ಬಳಿಯ ಕಣಗಾಲ್  ಎಂಬ ಪುಟ್ಟ ಗ್ರಾಮದ ಒಂದು ಹಳ್ಳಿಯ ಮನೆಯ  ಜಗಲಿಯ ಮೇಲೆ ಮೂರು ಬಾಲಕರು ಚೌಕಾಭಾರ ಆಟವಾಡುತ್ತಿದ್ದರು.. 

ಕಣಗಾಲ್ ಸಹೋದರರು ಆಡಿ ಬೆಳೆದ ಮನೆ!
"ಹೋಗ್ರೋ ಆಟವಾಡಿದ್ದು ಸಾಕು.. ಸ್ವಲ್ಪ ಗುಡಿಯ ಕಸಗುಡಿಸಿ ಬನ್ರೋ" ಎಂದು ಅವರ ಅಪ್ಪ ಹೇಳಿದ್ದು ಕೇಳಿ.. ಮೂವರು ಪರಕೆಯನ್ನು ಹಿಡಿದು.. ಆ ಊರಿನ ಮುಖ್ಯ  ದೇಗುಲದ ಅಂಗಳವನ್ನು ಶ್ರದ್ದೆಯಿಂದ ಸ್ವಚ್ಛಗೊಳಿಸಿ ಮತ್ತೆ ಆಡಲು ಜಗಲಿಗೆ ಬಂದರು.. 
ಆ ಊರಿನ ಜನತೆ ಹೇಳುವ ಪ್ರಕಾರ ಕಣಗಾಲ್ ಸಹೋದರರು ಸದಾ ಈ ಗುಡಿಗೆ ಬರುತ್ತಿದ್ದರು 

ಆಟ ಕುತೂಹಲಕಾರಿಯಾಗಿತ್ತು.. ಅಷ್ಟರಲ್ಲಿ ಟುರ್ ಟುರ್ ಟ್ರಾ ಎನ್ನುತ್ತಾ ಜೋಗಿ ಸಿದ್ದರು ಮನೆಯ ಮುಂದೆ ಬಂದು.. "ಏನ್ರಪ್ಪ ಹೇಗೆ ನೆಡಿತಿದೆ ಆಟ" ಎಂದಾಗ.. ಅವರಲ್ಲಿ ದೊಡ್ಡ ಬಾಲಕ.. 
ನೆಡೆದಾಡಿ ಹೆಜ್ಜೆ ಗುರುತು ಮೂಡಿಸಿದ ಹಾದಿ 
"ಚೆನ್ನಾಗಿ ನೆಡಿತಿದೆ ಸ್ವಾಮ್ಗಳೇ .. ನೀವು ಭವಿಷ್ಯ ಹೇಳ್ತಿರಂತೆ.. ಯಾರೂ ಗೆಲ್ತಾರೆ ಅಂತ ಹೇಳಿ ಸ್ವಾಮ್ಗಳೇ"

ಆ ಜೋಗಿ ಸಿದ್ಧರು ನಗುತ್ತಾ.. 

"ಮಕ್ಕಳೆ . ನಿಮಗೆ ಈ ಆಟದ ಭವಿಷ್ಯ ಬೇಡ .ನಿಮ್ಮ ಭವಿಷ್ಯ ಹೇಳುತ್ತೇನೆ ಕೇಳಿ.. ದೊಡ್ಡವ ನೀನು...  ನಿನ್ನ ಹೆಸರು ಪ್ರಭಾಕರ ಶಾಸ್ತ್ರಿ ಅಲ್ಲವೇ.. ?..

ಚಕಿತನಾದ ಹುಡುಗ "ಹೌದು.. ನಿಮಗೆ ಹೇ.. " ಮಾತಿನ್ನೂ ಮುಗಿದಿರಲಿಲ್ಲ.. 

"ಇವನು ಪುಟ್ಟಣ್ಣ.. ಇವನು ನರಸಿಂಹ" ಎಂದು ಎರಡನೇ ಮತ್ತು ಮೂರನೇ ಬಾಲಕರ ಹೆಸರು ಹೇಳಿದಾಗ ..ಆಡುತ್ತಿದ್ದ ಕವಡೆಯನ್ನು ಹಾಗೆ ಇಟ್ಟು ಮೂವರು ಜಗಲಿಯಿಂದ ರಸ್ತೆಗೆ ನೆಗೆದರು .. ಮಳೆ ಬಂದು ತೊಪ್ಪೆಯಾಗಿದ್ದ ಮಣ್ಣಿನ ರಸ್ತೆ.. ಮಕ್ಕಳಿಗೆ ಬಟ್ಟೆ ಕೊಚ್ಚೆಯಾಗುತ್ತೆ ಎಂಬ ಅರಿವಿರಲಿಲ್ಲ.. ಅವರಿಗಿದ್ದದ್ದು ಕುತೂಹಲ... 

ದೊಡ್ಡವ "ಹೇಳಿ ಸ್ವಾಮಿಗಳೇ.. ನಮ್ಮ ಪರಿಚಯ ನಿಮಗೆ ಹೇಗೆ.. ನೀವು ಯಾರು.. ಎಲ್ಲಿಂದ ಬಂದಿರಿ.. ಹೇಗೆ ಬಂದಿರಿ.. ? ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಾಗ.. 

ನಗುತ್ತ "ಬಾಲಕ.. ಆ ಪ್ರಶ್ನೆಗಳಿಗೆಲ್ಲ ಉತ್ತರ ಬೇಡ. .. ನಿಮಗೊಂದು ಭವಿಷ್ಯದಲ್ಲಿ ನೆಡೆಯುವ ಘಟನೆಯನ್ನು ಪೋಣಿಸಿ.. ಒಂದು ಘಟನೆಯನ್ನು ಹೇಳುತ್ತೇನೆ ಕೇಳಿ.. "

ಮೂವರು ಮೈಯೆಲ್ಲಾ ಕಿವಿಯಾಗಿ ಕೇಳುತ್ತಾ ಕುಳಿತರು.. ಪ್ರಪಂಚವೇ ಅವರಿಗೆ ಈ ಜೋಗಿ ಸಿದ್ಧರಾಗಿದ್ದರು.. ಅದು ಬಿಟ್ಟು ಮಿಕ್ಕಿದ್ದೆನು ಅವರ ಕಿವಿಗೆ ಕಣ್ಣಿಗೆ ಬೀಳುತ್ತಿರಲಿಲ್ಲ.. 

"ಬೆಂಗಳೂರಿನ ಸಾಂಸ್ಕತಿಕ ತಾಣ ರವೀಂದ್ರ ಕಲಾಕ್ಷೇತ್ರ.. ಅಲ್ಲಿ ಶ್ರೀ ವಿಳಂಬಿ ನಾಮ ಸಂವತ್ಸರ ದಕ್ಷಿಣಾಯಣ ಶರಧೃತು ಆಶ್ವಯುಜ ಮಾಸ ಶುಕ್ಲ ಪಕ್ಷದ ದಶಮಿಯಂದು ಒಂದು ಸುಂದರ ಸಮಾರಂಭ.. ಪ್ರಭಾಕರ ನಿನ್ನ "ಸಾವಿ"ರದ ಗೀತೆಗಳನ್ನು ಸಕಿ ಸಮೂಹ ಸಂಸ್ಥೆಗಳು "ನಾದ ನಮನ" ಎಂಬ ಸುಂದರ ಕಾರ್ಯಕ್ರಮದಲ್ಲಿ ಆಯೋಜಿಸುತ್ತಾರೆ.. ಅಲ್ಲಿ ನಿನ್ನ ಬಗ್ಗೆ ಮಾತಾಡುವುದಷ್ಟೇ ಅಲ್ಲದೆ.. ನಿನ್ನ ಗೀತೆಗಳ ಗಾಯನ ಇರುತ್ತದೆ ಮತ್ತು ನಿನ್ನ ಜೀವನದ ಸ್ಮರಣೀಯ ಕ್ಷಣಗಳ ಶ್ಲಾಘನೆ ನೆಡೆಯುತ್ತದೆ.. ನೆರೆದಿರುವ ನಿನ್ನ ಅಭಿಮಾನಿಗಳು ನಿನ್ನ ನೆನಪನ್ನು ಹೃದಯದಲ್ಲಿ ಹೊತ್ತು ಮನೆಗೆ ಹೋಗುತ್ತಾರೆ..ಆ ಒಲವಿನ ನೆನಪೇ ಹೃದಯಕೆ ಮಧುರ ಒಲವೇ ದೈವದ ಸಾಕ್ಷಾತ್ಕಾರ ಎನ್ನುತ್ತಾ ನಿನ್ನ ಗುಣಗಾನ ಮಾಡುತ್ತಾರೆ" ಎನ್ನುತ್ತಾ ಮುಂದಿನ ಮನೆಯ ಕಡೆ ಹೆಜ್ಜೆ ಇಟ್ಟರು.. 

ಬಾಲಕನಿಗೆ ಅರ್ಥವಾಗಲಿಲ್ಲ.. ಮೂರು ಘಂಟೆಯ ಸಿನೆಮಾವನ್ನು ಒಂದು ಹತ್ತು ಕ್ಷಣದಲ್ಲಿ ಹೇಳಿದಂತೆ ಭಾಸವಾಯಿತು.. ಆರಂಭ ಮಧ್ಯಭಾಗ ಅಂತ್ಯ ಎಲ್ಲವೂ ಗೊಂದಲಮಯ.. ಅವರನ್ನೇ ಹಿಂಬಾಲಿಸಿ  "ಸ್ವಾಮಿಗಳೇ ಅದೇನು ಸರಿಯಾಗಿ ಹೇಳಿ.. ಭವಿಷ್ಯ ಹೇಳುತ್ತೀನಿ ಅಂದ್ರಿ .. ಭವಿಷ್ಯ ಹೇಳಲಿಲ್ಲ ..ಘಟನೆ ಹೇಳುತ್ತೀನಿ ಅಂದ್ರಿ.. ಘಟನೆಯನ್ನು ಪೂರ್ತಿ ಹೇಳಲಿಲ್ಲ.. ಏನು ವಿಷಯ ಹೇಳಿ.. "

ಟುರ್ ಟುರ್ ಟ್ರಾ ಎಂದು ಸದ್ದು ಮಾಡುತ್ತಾ "ಮಗೂ ನೀನು ಪ್ರಭಾಕರ.. ಕಣಗಾಲ್ ಪ್ರಭಾಕರ ಶಾಸ್ತ್ರೀ ಎಂದು ಕನ್ನಡದ ಚಿತ್ರ ಜಗತ್ತಿನಲ್ಲಿ ಬರಹಗಾರ, ನಟ, ನಿರ್ದೇಶಕ, ನಿರ್ಮಾಪಕ, ಅದ್ಭುತ ಸಾಹಿತಿ ಎಂದು ಹೆಸರು ಮಾಡುತ್ತೀಯ.. ನಿನ್ನ ಬರವಣಿಗೆ ನಿನಗೆ ಉತ್ಸಾಹ ತುಂಬುತ್ತದೆ, ಶಕ್ತಿ ಕೊಡುತ್ತದೆ.. ಕನ್ನಡ ಚಿತ್ರ ಜಗತ್ತಿನಲ್ಲಿ ಅಪರೂಪದ ವ್ಯಕ್ತಿಯಾಗುತ್ತೀಯ.. ಅಂದಿನ ಕಾರ್ಯಕ್ರಮದ ಬಗ್ಗೆ ತುಸು ಮಾತು..ಪುಟ್ಟದಾಗಿ ಹೇಳುವೆ.. ಕೇಳು.. "

                                                                    ****
ಪರದೆ ಸರಿಯುತ್ತದೆ.. ನಿನ್ನ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆಯಾಗುತ್ತದೆ.. ನಿನ್ನ ಬಂಧುಗಳು ಅದನ್ನು ನೋಡಿ ಭಾವುಕರಾಗುತ್ತಾರೆ.. ನಿನ್ನ ಪುಟ್ಟ ಪರಿಚಯವಾಗುತ್ತದೆ.. ನಂತರ ಕಾರ್ಯಕ್ರಮ ಶುರು.. 

"ಶ್ರೀ ಚಾಮುಂಡೇಶ್ವರಿ ಅಮ್ಮ ಶ್ರೀ ಚಾಮುಂಡೇಶ್ವರಿ"  ಹಾಡಿಗೆ ಅದ್ಭುತ ನೃತ್ಯ ಮಾಡುವ ಮಕ್ಕಳು.. 
"ಆಡೋಣ ಒಲವಿನ ರಾಗಮಾಲೆ" ಎನ್ನುತ್ತಾ ಜೀವನದ ಉತ್ಸಾಹಕ್ಕೆ ತುಂಬುವ "ಶುಭ ಮಂಗಳ ಸುಮುಹೂರ್ತವೇ"  ಎಂದು ಜೀವನದಲ್ಲಿ ಸಂತಸ ತುಂಬಿಕೊಳ್ಳುತ್ತಾ ಪ್ರೇಮವಿಲ್ಲದೇ ಇರಲು ಸಾಧ್ಯವೇ.. ಅಸಾಧ್ಯ ಎಂದು "ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ" ಎನ್ನುತ್ತಾ ಪ್ರೇಮದ ಅದ್ಭುತ ಶಕ್ತಿಯನ್ನು ಹೊಗಳಬೇಕಾದರೆ ತಿರುಪತಿ ಗಿರಿವಾಸನ ಕೃಪೆ ಸದಾ ಇರಬೇಕು ಕಣಯ್ಯಾ ಎಂದು "ತಿರುಪತಿ ಗಿರಿವಾಸ ಶ್ರೀ ವೆಂಕಟೇಶ.. ನೀ ಒಲಿದ ಮನೆ ಮನೆಯೂ ಲಕ್ಷ್ಮಿ ನಿವಾಸ" ಎಂದ ಮೇಲೆ.. ಇನ್ನೇನೂ "ಅತಿ  ಮಧುರ ಅನುರಾಗ ಜೀವನ ಸಂಧ್ಯಾರಾಗ" ಆಗಲೇ ಬೇಕಲ್ಲವೇ.. ಜೀವನದಲ್ಲಿ ಆನಂದ ತುಂಬಿ ಹರಿಯುವಾಗ ಕರುನಾಡಿನ ಜೀವನದಿ ಕಾವೇರಿಯ ಬಣ್ಣನೆ ಮಾಡುತ್ತಾ "ಕೊಡಗಿನ ಕಾವೇರಿ.. ಕಾವೇರಿ ನೀ ಬೆಡಗಿನ ವೈಯ್ಯಾರಿ" ಎನ್ನುತ್ತಾ ಸಂಗಾತಿಯನ್ನು ಮತ್ತು ಜೀವನದಿಯನ್ನು ಬಣ್ಣಿಸುತ್ತಾ ಸಾಗುವ ಹಾಡು ಬರೆದ ನೀನು . ದೇಶದ ಸ್ಥಿತಿಯನ್ನು ಕಂಡು ಯುವ ಪೀಳಿಗೆಗೆ ಸಂದೇಶ ನೀಡುವ "ಇಂದಿನ ಹಿಂದೂ ದೇಶದ ನವ ಯುವಕರೇ ನವ ಯುವತಿಯರೇ" ಎಂದು ಬರೆದ ಹಾಡು ಅಮರವಾಗುತ್ತೆ.. ಈ ಪೀಳಿಗೆಗೆ ಸರಿದಾರಿಯಲ್ಲಿ ನೆಡೆಸುವ ಮೊದಲ ಗುರುಗಳು ತಂದೆ ತಾಯಿಯರು.. ಅವರ ಮಹತ್ವವನ್ನು "ತಾಯಿಯ ತಂದೆಯ ಮಮತೆ ವಾತ್ಸಲ್ಯ"  ಎಂದು ಹೃದಯದಲ್ಲಿ ಮಮತೆಯ ಝೇಂಕಾರ ಹುಟ್ಟಿಸುತ್ತಾ "ನಾನು ನೀನು ಜೋಡಿ.. ಒಲವೇ ನಮ್ಮಯ ಒಡನಾಡಿ" ಎಂದು ಆ ಮಧುರ ಪ್ರೇಮಕ್ಕೆ ನಮನ ಹೇಳುತ್ತಾ .. ಆ ನಾದ ಸರಸ್ವತಿಗೆ ತಲೆಬಾಗುತ್ತಾ ನಟರಾಜನನ್ನು ಹೊಗಳುತ್ತಾ "ನಟನ ವಿಶಾರದ ನಟಶೇಖರ" ಎನ್ನುವ ನಿನ್ನ ಮನಸ್ಸು ಸದಾ ಹೇಳುವುದು ಕನ್ನಡ ಭಾಷೆಯ ಬಗ್ಗೆ "ಒಲವಿನ ಪ್ರಿಯಲತೆ ಅವಳದೇ ಚಿಂತೆ.. ಅವಳ ಮಾತೆ ಮಧುರ ಗೀತೆ.. ಅವಳೇ ಎನ್ನ ದೇವತೆ" ಎನ್ನುವ ನಿನ್ನ ಕರುನಾಡ ಅಭಿಮಾನ ಸದಾ ಅಮರ ಮಧುರ.. ಅಮರ ಪ್ರೇಮಿಗಳನ್ನು ಸದಾ ಉಲ್ಲಸಿತವಾಗಿಡುವ "ಸುವ್ವಿ ಸುವ್ವಿ ಸುವ್ವಾಲೆ" .. ಪ್ರೇಮ ಒಂದು ದೇವರು ಅದಕ್ಕೆ ಕೈ ಮುಗಿಯುವ "ಶರಣೆಂಬೆನಾ ಶಶಿ ಭೂಷಣ".. ಈ ನಾಡಿನ ಮಣ್ಣಲ್ಲಿ ಹುಟ್ಟಿದ್ದೇ ನನ್ನ "ಬಹುಜನ್ಮದ ಪೂಜಾಫಲ" ಎನ್ನುವ ನಿನ್ನ ಮಾತು ಸದಾ ಗುನುಗುನಿಸುತ್ತದೆ..ಹರನಿಗೆ ಸಮನಾರು ಇಲ್ಲ ಅಲ್ಲವೇ ಅಂದರೆ ಅದಕ್ಕೆ ನೀ ಹೇಳುವುದು "ಶರಣು ವಿರುಪಾಕ್ಷ ಶಶಿಶೇಖರ ಪಂಪಾವತಿ ಪ್ರಣಯ ಪರಮೇಶ್ವರಾ".. ಹೀಗೆ ನಿನ್ನ ಪ್ರತಿಭೆಗೆ ನಮಸ್ಕರಿಸಲೇ.. ಅಥವಾ ಬೆನ್ನು ತಟ್ಟಲೇ ಎಂದ ಕೂಡಲೇ "ಇದೆ ಹೊಸ ಹಾಡು ಹೃದಯ ಸಾಕ್ಷಿ ಹಾಡು" ಎನ್ನುತ್ತೀಯಾ.. ಅಕ್ಷರಗಳಲ್ಲೇ ಮಜ್ಜನ ಮಾಡಿಸುವ ನೀನು ಅಕ್ಷರಗಳಿಗೆ ಕೈಮುಗಿಯುತ್ತ ಹೇಳುವುದು "ನಾ ಕಂಡೆ ನಿನ್ನಲ್ಲೇ ಮನೆ ದೇವರ" ಅಬ್ಬಾ ಎಂಥಹ ಧೈರ್ಯ ನಿನದು .. ಅದು ಹೇಗೆ ಬಂತು ಈ ಧೈರ್ಯ ಎಂದು ನನ್ನ ಹುಬ್ಬು ಮೇಲೆ ಏರಿದಾಗ ನೀ ನನಗೆ ಸಮಾಧಾನ ಮಾಡುತ್ತಾ ಉತ್ತರ ಕೊಡುವೆ "ಮಾತೆಗೆ ಮಿಗಿಲಾದ ದೇವರಿಲ್ಲ ಭೀತಿಗೆ ಹಿರಿದಾದ ಭೂತವಿಲ್ಲ" ಎಂದು ಎಲ್ಲವೂ ಮಾತೃದೇವೋಭವ ಎನ್ನುವೆ.. ಈ ಪೀಳಿಗೆ ಜನತೆ ನಿನ್ನ ಬಗ್ಗೆ ತಿಳಿಯದೆ ಯಾರಪ್ಪಾ ಈ ಮಹಾನುಭಾವ ಎಂದೊಡನೆ ನಿನ್ನ ಲೇಖನೀ ಬರೆದೇ ಬಿಡುತ್ತೆ "ಯಾವೂರವ್ವ ಏನ್ ಚಂದ ಕಾಣಿಸ್ತೌನೇ" ಎಂದು ನಿನ್ನ ಪರಿಚಯ ಮಾಡಿಕೊಡುತ್ತೀಯ.. ನೀ ಕರುನಾಡಿನ ಜನಮಾನಸದಲ್ಲಿ ಸದಾ ಹಸಿರಾಗಿರುತ್ತೀಯ ಎಂಬ ನನ್ನ ಮಾತಿಗೆ ನೀ ಒಮ್ಮೆ ನಕ್ಕರು ನೀ ಬರೆದ ಹಾಡು "ಕನ್ನಡ ನಾಡಿನ ರಸಿಕರ ಮಾನವ ಸೂರೆಗೊಂಡ" ನಾಯಕಿ ಅಂತ ಹೇಳಲೇ ನಾಯಕ ಅಂತ ಹೇಳಲೇ ಎನ್ನುವ ಗೊಂದಲ ಮೂಡಿಸುತ್ತದೆ.. ಇದೆಲ್ಲ ನಿನಗೆ ಹೇಗೆ ಸಾಧ್ಯವಾಯಿತು ಎಂದು ನಾನು ಅಚ್ಚರಿಗೊಂಡೆ.. ಆದರೆ ಅದು ನಿನಗೆ ಒಲಿದ ಅಕ್ಷರಗಳ ಸಾಕ್ಷಾತ್ಕಾರ.. ತಮಾಷೆ ಗೊತ್ತಾ ನಿನ್ನ ಪ್ರೀತಿಯ ತಮ್ಮ ನಿರ್ದೇಶಿಸುವ ಚಿತ್ರದಲ್ಲಿ ನೀ ಬರೆದ ಹಾಡು ಅಮರವಾಗಿ ಉಳಿಯುತ್ತೆ ಮತ್ತು ಆ ಹಾಡನ್ನು ನಿನ್ನ ತಮ್ಮ ಅಷ್ಟೇ ಸ್ಮರಣೀಯವಾಗಿ ಚಿತ್ರೀಕರಿಸುತ್ತಾನೆ.. ಏಕೆ ಗೊತ್ತೇ ನಿಮ್ಮ ಪ್ರತಿಭೆ ಆ ದೇವಾ ಕೊಟ್ಟ ವರ ಅದಕ್ಕೆ ನಾ ಹೇಳೋದು "ಒಲವೇ ಜೀವನ ಸಾಕ್ಷಾತ್ಕಾರ.. ಒಲವೇ ಮರೆಯದ ಮಮಕಾರ.. " ಶುಭವಾಗಲಿ ಕಂದ.. 

ಕಾರ್ಯಕ್ರಮದ ಕೆಲವು ದೃಶ್ಯಗಳನ್ನು ನಿನ್ನ ಕಣ್ಣ ಮುಂದೆ ತಂದಿಡುತ್ತೇನೆ.. ನೋಡು ಆನಂದಿಸು.. ಸೊಗಸಾದ ವಿವರಣೆ.. ಸೊಗಸಾದ ಸಂಗೀತ ... ಅಚ್ಚುಕಟ್ಟಾದ ಗಾಯನ.. ವಾದ್ಯವೃಂದ.. ನೃತ್ಯ.. ಎಲ್ಲವೂ ಸೊಗಸು.. !

















ಟುರ್ ಟುರ್ ಟ್ರ್ರಾ ಎಂದು ಸದ್ದು ಮಾಡುತ್ತಾ ಮತ್ತೆ ಹಿಂದೆ ತಿರುಗಿ ನೋಡದೆ ಜೋಗಿ ಸಿದ್ಧರು ಆ ಊರಿನ ಬೀದಿ ಹಾದು ಹೋದರು.. 

****
"ಮಗು ಪ್ರಭಾಕರ.. ಪ್ರಭಾಕರ ಏಳಪ್ಪ.. ಬೇಗ ಎದ್ದು ಸ್ನಾನ ಮಾಡಿ.. ಸಂಧ್ಯಾವಂದನೆ ಮಾಡಿ.. ಆ ಗುಡಿಯಲ್ಲಿ ಲಲಿತಾ ಸಹಸ್ರ ನಾಮ ಹೇಳಿ ಬಾರಪ್ಪ"

ಕಣ್ಣುಜ್ಜುತ್ತಾ ಎದ್ದ ಮುದ್ದು ಪ್ರಭಾಕರ ... ಸುತ್ತ ನೋಡಿದ.. ತಮ್ಮ ಪುಟ್ಟಣ್ಣ, ನರಸಿಂಹ ಶಾಸ್ತ್ರಿ ತನ್ನ ಹೊದ್ದಿಕೆಯನ್ನೇ ಹಂಚಿಕೊಂಡು ಇನ್ನೂ ಮಲಗಿದ್ದಾರೆ.. ಅವರ ಮುದ್ದು ಮುಖ ನೋಡುತ್ತಾ.. ಇಬ್ಬರ ಕೆನ್ನೆಯನ್ನೊಮ್ಮೆ ಸವರಿ.. ಪ್ರಾತಃಕರ್ಮ ಮುಗಿಸಲು ಹೊರಟ. ಮನಸ್ಸು ಹಗುರಾಗಿತ್ತು.. ತಾನು ಕಂಡದ್ದು ಕನಸೋ ನನಸೋ ಅರಿವಾಗಲಿಲ್ಲ.... 

ಆದರೆ ಕನ್ನಡ ಕುಲಕೋಟಿಗೆ ಅದ್ಭುತ ಸಾಹಿತಿ ಸಿಗುತ್ತಾರೆ.. ತಾಯಿ ಭುವನೇಶ್ವರಿಗೆ ಅಕ್ಷರಗಳ ಪೂಜೆ ಸಲ್ಲಿಸಲು ಅದ್ಭುತ ಬರಹಗಾರ ಬೆಳ್ಳಿ ಪರದೆಯನ್ನು ಬೆಳಗುತ್ತಾರೆ ಎನ್ನುವ ಸೂಚನೆ ಸಿಕ್ಕ ಕನಸು ಮುಂದೆ ನನಸಾಗಿದ್ದು ಇತಿಹಾಸ.. 

*****

ಕಣಗಾಲ್ ಊರಿನ ಸುಂದರ ದೃಶ್ಯ 

ಆಡಿ ಬೆಳೆದ ಮನೆ ಹಲವಾರು ಕನಸಿನ ತಾಣವಿದು 

ಕನಸು ಹೊತ್ತು ಓಡಾಡಿದ ಬೀದಿ 

ಆ ಶಕ್ತಿಗಳು ಬೆಳೆದ ಮನೆಯಂಗಳದಲ್ಲಿ ಈ ಜೀವಿಯೂ ಕೂತಿತ್ತು ಎನ್ನುವ ಹೆಮ್ಮೆ 

ಹೌದು ಸರ್ ನಾನೇ ನರಸಿಂಹ ಶಾಸ್ತ್ರಿ ಕಣಗಾಲ್ ಸಹೋದರರಲ್ಲಿ ನಾನು ಒಬ್ಬ 

ಶ್ರೀ ನರಸಿಂಹ ಶಾಸ್ತ್ರಿಗಳ ಜೊತೆಯಲ್ಲಿ ನಮ್ಮ ಸ್ನೇಹಿತರು 

ಆ ದಿವ್ಯಶಕ್ತಿಯ ಜೊತೆಯಲ್ಲಿ 
(ವಿಜಯದಶಮಿಯಂದು ಅಕ್ಟೋಬರ್ ೧೯ ೨೦೧೮ ರವೀಂದ್ರ ಕಲಾಕ್ಷೇತ್ರದಲ್ಲಿ ನಾದ ನಮನ ಎಂದು ಶ್ರೀ ಕಣಗಾಲ್ ಪ್ರಭಾಕರ್ ಶಾಸ್ತ್ರೀ ಅವರ ಅಮರ ಗೀತೆಗಳನ್ನು ಹಾಡಿ ರಂಜಿಸಿದ ಸಕಿ ಸಮೂಹ ಸಂಸ್ಥೆಗಳ ಅದ್ಭುತ ಕಾರ್ಯಕ್ರಮವನ್ನು ನೋಡುತ್ತಾ ಹೋದ ಹಾಗೆ ಸುಮಾರು ನಾಲ್ಕು ವರ್ಷಗಳ ಹಿಂದೆ.. ಶ್ರೀ ಪುಟ್ಟಣ್ಣ ಕಣಗಾಲ್ ಅವರ ಮನೆಯನ್ನು ಹುಡುಕುತ್ತಾ ಹೋಗಿ ಅವರು ಓಡಾಡಿದ ಮನೆ.. ದೇವಸ್ಥಾನ.. ಅವರು ಹೆಜ್ಜೆ ಇಟ್ಟು .. ಚಿತ್ರ ಜಗತ್ತಿನಲ್ಲಿ ಹೆಜ್ಜೆ ಗುರುತು ಮೂಡಿಸಿದ ಆ ರಸ್ತೆ.. ಅವರ ತಮ್ಮ ಶ್ರೀ ನರಸಿಂಹ ಶಾಸ್ತ್ರೀ ಅವರನ್ನು ರಾಮನಾಥಪುರದ ಅವರ ಮನೆಯಲ್ಲಿ ಭೇಟಿ ಮಾಡಿ ಬೆಳ್ಳಿಮೋಡ ಚಿತ್ರ ರೂಪುಗೊಂಡ ಅದ್ಭುತ ಕತೆಯನ್ನು ಅವರ  ಬಾಯಲ್ಲಿ ಸುಮಾರು ಒಂದೂವರೆ ಘಂಟೆ ಕೇಳಿದ್ದು .. ಅವರಿಗೆ ಪ್ರವರ ಹೇಳುತ್ತಾ ನಮಸ್ಕರಿಸಿದ್ದು ಹಾಗೆ ಕಣ್ಣ ಮುಂದೆ ಬಂತು.. ಅದೇ ಗುಂಗಿನಲ್ಲಿ ಮೂಡಿದ ಲೇಖನವಿದು ..ಓದಿರಿ ನಲಿಯಿರಿ..ಆಶೀರ್ವದಿಸಿ!!!)