Showing posts with label ಪುಟ್ಟಣ್ಣ ಕಣಗಾಲ್. Show all posts
Showing posts with label ಪುಟ್ಟಣ್ಣ ಕಣಗಾಲ್. Show all posts

Sunday, October 28, 2018

ಕಾದಂಬರಿ ಮತ್ತು ಸಿನಿಮಾ ಒಂದು ಜುಗಲ್ ಬಂಧಿ - ನಾಗರಹಾವು (1972)

ಇದು ನಾಗರಹಾವಲ್ಲ.. ಕೇರೇ ಹಾವು.!!!

ಈ ಮಾತನ್ನು ಶ್ರೀ ತ ರಾ ಸುಬ್ಬರಾಯರು ಹೇಳಿದ್ದಾರೆ ಅಂತ ನನ್ನ ಬಾಲ್ಯದ ದಿನಗಳಲ್ಲಿ ಓದಿದ್ದ ನನೆಪು.. ನಂತರ ಅವಕಾಶ ಸಿಕ್ಕಾಗ ಟಿವಿಯಲ್ಲಿ ಬಂದಾಗ ನಾಗರಹಾವು ಚಿತ್ರ ನೋಡಿದ್ದೆ.. ಯಾಕೆ ತ ರಾ ಸುಬ್ಬರಾಯರು ಹಾಗೆ ಹೇಳಿದ್ರು ಅನ್ನುವ ಪ್ರಶ್ನೆ ಕಾಡುತ್ತಿತ್ತು..

ಅದರಲ್ಲೂ ನಾಗರಹಾವು ಚಿತ್ರವನ್ನು ಹಲವಾರು ಬಾರಿ ನೋಡಿದಾಗಲೂ ಲೇಖಕರ ಪ್ರತಿಕ್ರಿಯೆ ಮನಸ್ಸಿಗೆ ನಾಟಲಿಲ್ಲ..
ಶ್ರೀ ಪುಟ್ಟಣ್ಣ ಕಣಗಾಲ್ ಒಬ್ಬ ಅದ್ಭುತ ನಿರ್ದೇಶಕ, ಕನ್ನಡದಲ್ಲಿ ಅವರು ನಿರ್ದೇಶಿಸಿದ ೨೪ ಚಿತ್ರಗಳನ್ನು ನೋಡಿದ್ದೇನೆ ಮತ್ತು ಆ ಸಿನೆಮಾಗಳು ನನ್ನ ಮನಸ್ಸಿಗೆ ಯಾಕೆ ಇಷ್ಟವಾಯಿತು, ಆ ಚಿತ್ರದ ವಿಶೇಷವೇನು ಅನ್ನುವ ಕೆಲವು ವಿಷಯಗಳನ್ನು ಬರೆದಿದ್ದೆ.. ನಾಗರಹಾವು  ಚಿತ್ರ ನಿರ್ದೇಶನ ಮಾಡಿದ ಮೇಲೆ ಅವರ ಮುಂದಿನ ಎಲ್ಲಾ ಚಿತ್ರಗಳು ವಿಶೇಷವಾಗಿದ್ದವು.. ಹಾಗಾಗಿ ನಾಗರಹಾವು ಒಂದು ರೀತಿಯಲ್ಲಿ ಅವರ ಚಿತ್ರಗಳಿಗೆ ಒಂದು ತಿರುವು ಕೊಟ್ಟ ಚಿತ್ರವಾಗಿತ್ತು...

ಇದರಿಂದ ನನ್ನ ಕುತೂಹಲದ ದೀಪ ಇನ್ನಷ್ಟು ಜೋರಾಗಿ ಉರಿಯಲು ಶುರುಮಾಡಿತು.. ಸೊ ನನ್ನ ಹುಡುಕಾಟ ತ್ರಿವಳಿ ಕಾದಂಬರಿಗಳಾದ ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪಮತ್ಸರ ಪುಸ್ತಕಗಳ ಕಡೆಗೆ ಇಳಿಯಿತು..   ಹುಡುಕಲು ಶುರುಮಾಡಿದೆ.. ಫೇಸ್ಬುಕ್ ಸಹೋದರಿಯಾದ ಡಿಟಿಪಿ ಅಲಿಯಾಸ್ ಲಕ್ಷ್ಮಿಪ್ರಿಯ ನನಗೆ ಸಹಾಯ ಮಾಡಿ.. ಆ ಪುಸ್ತಕವನ್ನು ಕಳಿಸಿಕೊಟ್ಟರು..ಮೂರು ಕಾದಂಬರಿಗಳ ಒಂದು ಸಮಗ್ರ ರೂಪವನ್ನು ಪುಸ್ತಕ ಮಾಡಿ ಪ್ರಕಟಿಸಿದ್ದರು.. ಹುಚ್ಚು ಹಿಡಿದ ಹಾಗೆ ಓದಿ ಮುಗಿಸಿದೆ. ೫೪೩ ಪುಟಗಳಿರುವ ಕಾದಂಬರಿಯನ್ನು ಒಂದು ವಾರದಲ್ಲಿ ಓದಿ ಮುಗಿಸಿದೆ.. ಆ ಓದು ಮುಗಿದ ಮೇಲೆ ನನಗೆ ಅನಿಸಿದ ಕೆಲವು ವಿಷಯವನ್ನು ನನಗೆ ತೋಚಿದ ರೀತಿಯಲ್ಲಿ ಬರೆದಿದ್ದೇನೆ..

ಓದಿ.. ನಿಮಗೆ ಅನಿಸಿದ ಮಾತನ್ನು ಹೇಳಿ..

*****************************

ಸ್ವರ್ಗದಲ್ಲಿದ್ದ ಅಶ್ವಥ್ ಕಟ್ಟೆಯಲ್ಲಿ ಸಂಧ್ಯಾವಂದನೆ ಮುಗಿಸಿ ಪುಟ್ಟಣ್ಣ ಅವರು ಧ್ಯಾನ ಮಾಡುತ್ತಾ ಕೂತಿದ್ದರು.. ಸುಬ್ಬರಾಯರು ಬೆಳಗಿನ ವಾಕಿಂಗ್ ಮುಗಿಸಿ ಸುಧಾರಿಸಿಕೊಳ್ಳಲು ಅದೇ ಅಶ್ವಥ್ ಕಟ್ಟೆಯಲ್ಲಿ ಕುಳಿತರು. ಆ ಬದಿಯಲ್ಲಿ ಪುಟ್ಟನವರು.. ಈ ಬದಿಯಲ್ಲಿ ಸುಬ್ಬರಾಯರು.. 

ಇಬ್ಬರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿ ಮಂದಹಾಸ ಬೀರಿದರು.. ಪುಟ್ಟಣ್ಣನವರ ಧ್ಯಾನ ಮುಗಿದಿತ್ತು.. ಸುಬ್ಬರಾಯರಿಗೂ ಆಯಾಸ ಪರಿಹಾರವಾಗಿತ್ತು.. ಹಾಗೆ ಇಬ್ಬರೂ ಎದ್ದು ತಮ್ಮ ಮನೆಯ ಕಡೆ ಹೆಜ್ಜೆ ಹಾಕುತ್ತಾ ಹೋದರು.. ಇಬ್ಬರ ಮನೆಯೂ ಒಂದೇ ಬೀದಿಯಲ್ಲಿತ್ತು.. ಹಾಗಾಗಿ ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದರು. 


"ಪುಟ್ಟಣ್ಣನವರೇ .. ನೀವು ಚಿತ್ರಿಸಿದ ನಾಗರಹಾವು ಚಿತ್ರವನ್ನು ನಾನು ಕೇರೇ ಹಾವು ಎಂದರೂ ನೀವು ಕೋಪಗೊಳ್ಳಲಿಲ್ಲ.. ನನ್ನ ವಿರುದ್ಧ ಹೇಳಿಕೆ ಕೊಡಲಿಲ್ಲ.. ನನ್ನನ್ನು ಗೌರವಿಸಿದಿರಿ.. ನಾ ಏನು ಹೇಳಬೇಕು ಗೊತ್ತಾಗ್ತಾ ಇಲ್ಲ. .. ಹೇಗಿದ್ದರೂ ಕರುನಾಡಿನ ಚಿತ್ರರಸಿಕರು ನನ್ನ ಕಾದಂಬರಿಯನ್ನು.. ಹಾಗೂ ನಿಮ್ಮ ಕಣ್ಣಿನಲ್ಲಿ ರೂಪುಗೊಂಡ ಚಿತ್ರವನ್ನು ನೋಡಿ ಮೆಚ್ಚಿದ್ದಾರೆ.. ನೂತನ ತಂತ್ರಜ್ಞಾನದಲ್ಲಿ ತಂದ ಅದರ ಹೊಸ ರೂಪವನ್ನು ಮೆಚ್ಚಿದ್ದಾರೆ.. ಇದರ ಬಗ್ಗೆ ಒಂದು ಚರ್ಚೆ ಮಾಡೋಣವೇ.. ನನ್ನ ಅನಿಸಿಕೆ ನಾ ಹೇಳುವೆ.. ನಿಮ್ಮ ಅನಿಸಿಕೆ ನೀವು ಹೇಳಿ

"ಸುಬ್ಬರಾಯರೇ ಧನ್ಯವಾದಗಳು ನಿಮ್ಮ ಮಾತಿಗೆ.. ಖಂಡಿತ ಮಾತಾಡೋಣ.. ಚರ್ಚಿಸೋಣ.. ಆಗಬಹುದು.. ನಿಮ್ಮಿಂದಲೇ ಶುರುಮಾಡಿ.. ಯಾಕೆಂದರೆ ಅದು ನಿಮ್ಮ ಸೃಷ್ಟಿ, ನೀವು ಜನುಮ ಕೊಟ್ಟ ಕೂಸು ಈ ಕಾದಂಬರಿ.. ನಿಮ್ಮ ಮನದಲ್ಲಿ ರೂಪುಗೊಂಡ ಆ ಕಾದಂಬರಿಗೂ.. ಅದನ್ನು ನನ್ನ ಕಣ್ಣಿನಲ್ಲಿ ತೆರೆಗೆ ತಂದ ರೂಪಕ್ಕೂ ನಿಮ್ಮ ಅನಿಸಿಕೆ ಹೇಳಿ.. ಶುರುವಾಗಲಿ..

******* 

ಇನ್ನು ಮುಂದೆ ನೆಡೆಯುವುದು.. ಸಾಹಿತ್ಯದ ದಿಗ್ಗಜರು ಸುಬ್ಬರಾಯರು.. ಮತ್ತು ನಿರ್ದೇಶನದ ಕುರ್ಚಿಗೆ ತಾರಾಪಟ್ಟ ತಂದುಕೊಟ್ಟ ಪುಟ್ಟಣ್ಣನವರ ಮಾತುಕತೆ....!

*******

ನಾನು ರಾಮಾಚಾರಿ ಪಾತ್ರವನ್ನು ಸಮಾಜದಲ್ಲಿ ನೆಡೆಯುವ ಅಸೂಯೆ, ಹೊಟ್ಟೆಕಿಚ್ಚು, ಸಿಟ್ಟು, ಸೇಡು, ದ್ವೇಷ, ವೈಮನಸ್ಯ, ಅನುಮಾನಗಳು, ತಪ್ಪು ಕಲ್ಪನೆಗಳು, ಪ್ರೀತಿ, ಪ್ರೇಮ, ಸಹಾಯ ಮಾಡುವ ಮನೋಭಾವ, ಕಾಲು ಎಳೆದು ನಗುವ ಮನಸ್ಥಿತಿ, ಹೀಗೆ ಅರಿಷಡ್ವರ್ಗ ಜೊತೆಗೆ ಮಾನವನ ಸಹಜವಾದ ಗುಣಗಳು ಎಲ್ಲವನ್ನು ಕಲಸಿ, ಬೆರೆಸಿ ಮಾಡಿದ್ದೆ.. ಅವನ ಶಾಲಾದಿನಗಳಲ್ಲಿ ಸಾಮಾನ್ಯ ಅನ್ನಿಸುವ ಘಟನೆಯನ್ನು ತುಸು ವಸ್ತುಸಹಜವಾಗಿ ಮೂಡಿಸಿದ್ದೆ..

>ರಾಮಚಾರಿಯ ಹಠದ ಸ್ವಭಾವದ ಬಗ್ಗೆ ವಿವರಿಸುವ ಒಂದಷ್ಟು ಘಟನೆಗಳನ್ನು, ಸೇಡಿನ, ಕಿಚ್ಚಿನ ಸಾಹಸಗಳನ್ನು ಮನ  ಮುಟ್ಟುವಂತೆ ರಚಿಸಿದ್ದೆ.
>ಗುರುಗಳು ಎಂದು ಗೌರವ ಕೊಡುವ ಚಾಮಯ್ಯ ಮೇಷ್ಟ್ರು
>ಪ್ರೀತಿಸುವ ಅಲಮೇಲು, ಮಾರ್ಗರೆಟ್
>ಮೊದಲು ದ್ವೇಷ ಮಾಡಿದರೂ ನಂತರ ಮಗಳಿಗಾಗಿ ಇಷ್ಟಪಡುವ ಮೇರಿಯಮ್ಮ
>ಮಗನನ್ನು ಕಸದಂತೆ ಕಂಡರೂ, ಅವನ ಸಾಹಸವನ್ನು, ಊರಿನ ಜನತೆಗೆ ಸಹಾಯ ಮಾಡಲು ತೋರುವ ಧೈರ್ಯದ ಬಗ್ಗೆ ಊರಿನವರೆಲ್ಲ ಹೊಗಳಿದಾಗ ಮಗನನ್ನು ಆಪ್ತಮಿತ್ರನಂತೆ ಮಾತಾಡಿಸಿ, ತಮ್ಮ ಕಡೆಘಳಿಗೆಯಲ್ಲಿ ಮನೆಗೆ ನೀನೆ ಯಜಮಾನ ಎಂದು ಬಿಂಬಿಸುವ ಅಪ್ಪನ ಪಾತ್ರ ಮಧ್ವರಾಮಚಾರ್ಯರು 
>ಮಗ ತನ್ನ ಜೀವನವನ್ನು  ಬೆಳಗುತ್ತಾನೆ ಎಂದು ಮೊದಲಿಂದಲೂ ತನ್ನ ಪತಿಯೊಡನೆ ವಾದಮಾಡುತ್ತಾ ಕಡೆಯಲ್ಲಿ ಮಾರ್ಗರೆಟ್ ಜೊತೆಯಲ್ಲಿ ತನ್ನ ಮಗನ ಜೊತೆಯಲ್ಲಿದ್ದಾಳೆ ಎಂದು ತಿಳಿದಾಗ, ಪ್ರೀತಿ ಉರಿಯಾಗಿ ರಾಮಾಚಾರಿಯನ್ನು ದಹಿಸುತ್ತಾರೆ ಸೋನಾಬಾಯಿ!
>ಹುಡುಗಾಟದ ಹುಡುಗ ವರದಯ್ಯಂಗಾರಿ ಈ ಕತೆಗೆ ತಿರುವು ಕೊಡುವ ಪಾತ್ರ,  ಜಲೀಲನ ಜೊತೆಯಲ್ಲಿ ನೆಡೆಯುವ ಪುಟ್ಟ ಜಗಳ ಕತೆಗೆ ದೊಡ್ದ ತಿರುವನ್ನೇ ಕೊಡುತ್ತೆ
>ಪೈಲ್ವಾನ್ ಸಣ್ಣಬಸಪ್ಪ  ರಾಮಚಾರಿಯನ್ನು ತಿದ್ದಿ ತೀಡಿ ಅವನ ಜೀವನಕ್ಕೆ ಒಂದು ದಾರಿ ಮಾಡಿಕೊಡುತ್ತಾರೆ.. ದೇಹವನ್ನು ಹುರಿಗೊಳಿಸಲು ಸಹಾಯ ಮಾಡುತ್ತಾರೆ..
>ಪ್ರಭಣ್ಣ, ಸಣ್ಣರಂಗಪ್ಪ, ಹೈದರ್ ಷರೀಫ್, ಚೆಲುವಚಾರಿ ಈ ನಾಲ್ಕು ಮಂದಿ ಇಡೀ ಕಥೆಯಲ್ಲಿ ರಾಮಚಾರಿಗೆ ಬೆನ್ನೆಲುಬಾಗಿ ನಿಲ್ಲುವುದು ತೋರಿಸಿದ್ದೇನೆ
>ಪ್ಲೇಗ್ ಸಮರ, ಸಿನಿಮಾ ಟೆಂಟ್, ದಲ್ಲಾಳಿ ವಹಿವಾಟು
>ಚಾಮಯ್ಯನವರ ಸಮಾಜ ಸೇವೆ, ಅವರ ಕೆಲಸ ಉಳಿಸಿಕೊಳ್ಳಲು ತೋರುವ ಚಾಲಾಕಿತನ
>ವರದರಾಜುವಿನ ದುಂಡಾವರ್ತಿ, ಜೊತೆಗೆ  ಮಾರ್ಗರೆಟ್ ರಾಮಾಚಾರಿಯ ಅಪ್ಪನ ಕೆಲಸ ಮಾಡಲು ಹಣಕ್ಕೆ ಒದ್ದಾಡುತ್ತಿದ್ದ ವಿಷಯ ಕೇಳಿ, ವರದರಾಜುವನ್ನು ಸಹಾಯ ಕೇಳಿದಾಗ ಹಿಂದೆ ಮುಂದೆ ನೋಡದೆ ಸಹಾಯ ಮಾಡುವುದು
>ಫಕೀರಪ್ಪ ಹೆಣ್ಣಿನ ಚಪಲದಿಂದಾಗಿ ಅಲಮೇಲುವಿನ ನಿಜಸ್ಥಿತಿ ತಿಳಿಸಿ ಕಾದಂಬರಿಗೆ ಮುಕ್ತಾಯದ ಹಾದಿ ತೋರಿಸೋದು..
>ಶಾಲೆಯ ಮಾಸ್ಟರನ್ನು ರಾಮಾಚಾರಿ ಗೋಳುಹುಯ್ಕೊಳೋದು
>ಅಲಮೇಲು, ಮಾರ್ಗರೆಟ್ ಮತ್ತು ರಾಮಾಚಾರಿಯ ಪ್ರೀತಿಯನ್ನು ತೋರಿಸುವ ಆ ಪುಟಗಳು
>ಚಾಮಯ್ಯ ಮೇಷ್ಟ್ರ ಅಂತ್ಯ
>ರಾಮಾಚಾರಿ ಮಾರ್ಗರೆಟ್ ಅಂತ್ಯ
>ಕಡೆಯಲ್ಲಿ ಫಕೀರಪ್ಪ ಹೇಳುವ ಮಾತು

ಪುಟ್ಟಣ್ಣನವರೇ ನಾ ಕಾದಂಬರಿಯಲ್ಲಿ ಚಿತ್ರಿಸಲು ಪ್ರಯತ್ನ ಪಟ್ಟ ಈ ಮೇಲಿನ ವಿವರಣೆಗಳು, ನನಗೆ ಚಿತ್ರದಲ್ಲಿ ಅಲ್ಲಲ್ಲಿ ಕಂಡವೇ ಹೊರತು, ಪೂರ್ಣ ಪ್ರಮಾಣದಲ್ಲಿ ಕಾಣಲಿಲ್ಲ.. ನಾ ನಿಮ್ಮ ಹಿಂದಿನ ಚಿತ್ರದ ಬಗ್ಗೆ ಕೇಳಿದ್ದೆ.. ನೋಡಿದ್ದೇ.. ನಿಮ್ಮ ತಂತ್ರಜ್ಞಾನದ ಪ್ರತಿಭೆ ಎಲ್ಲದರ ಬಗ್ಗೆ ತಿಳಿದಿದ್ದೆ. ನನ್ನ ಕಾದಂಬರಿಯನ್ನು ಸಿನಿಮಾ ಮಾಡಲು ಹಕ್ಕುಗಳನ್ನು ಕೇಳಿದಾಗ, ನೀವೇ ಚಿತ್ರ ನಿರ್ದೇಶಿಸುವುದು ಎಂದು ತಿಳಿದಾಗ ಕುತೂಹಲ, ಆಸಕ್ತಿ ಗರಿಗೆದರಿತ್ತು.. ಚಿತ್ರವನ್ನು ನೋಡಿದಾಗ ನೀವು ತೋರಿದ ಚಿತ್ರದುರ್ಗದ ತಾಣಗಳು, ಕೋಟೆಗಳು, ಬೆಟ್ಟ ಗುಡ್ಡಗಳು, ವಾಣಿವಿಲಾಸ ಸಾಗರ ಎಲ್ಲವೂ ಖುಷಿ ಕೊಟ್ಟಿತು.. ಚಿತ್ರದುರ್ಗವನ್ನು ಅದ್ಭುತವಾಗಿ ತೋರಿಸಿದ ನಿಮಗೆ ಅಭಿನಂದನೆಗಳು.. ಆದರೆ ಕತೆಯಲ್ಲಿ ನಾ ಕಂಡ ದೃಶ್ಯಗಳು.. ಸಿನಿಮಾದಲ್ಲಿ ನಾ ಕಂಡ ಕತೆಗೂ ಹೊಂದಿಸಿಕೊಳ್ಳೋಕೆ ಕಷ್ಟವಾಯಿತು.. ಪ್ರತಿ ಕ್ಷಣದಲ್ಲಿಯೂ ನಾ ಕಾದಂಬರಿಯಲ್ಲಿ ಚಿತ್ರಿಸಿದ್ದ ದೃಶ್ಯಗಳು ಸಿನಿಮಾದಲ್ಲಿ ಆಗ ಬರುತ್ತೆ ಈಗ ಬರುತ್ತೆ ಅಂತ ಕಾದಿದ್ದೆ ಆಯಿತು... ಆದರೆ ನಿಮ್ಮ ಬುದ್ಧಿಮತ್ತೆಗೆ ಮತ್ತು ಸಂಭಾಷಣೆ ಬರೆದವರಿಗೆ ಸಲಾಂ ಹೇಳಬೇಕು. ಕಾರಣ ಎಲ್ಲಾ ಪಂಚ್ ಸಂಭಾಷಣೆಯನ್ನು ಹಾಗೆ ಉಳಿಸಿಕೊಂಡಿದ್ದೀರಾ.. ಅದಕ್ಕೆ ಧನ್ಯವಾದಗಳು ಪುಟ್ಟಣ್ಣನವರೇ.. ಹಾಡುಗಳನ್ನು ಚಿತ್ರಿಸಿದ ರೀತಿ, ನನ್ನ ಕಾದಂಬರಿಯಲ್ಲಿಲ್ಲದ ಒನಕೆ ಓಬವ್ವನ ಕತೆಯನ್ನು ಹಾಡಿನಲ್ಲಿ ಅದ್ಭುತವಾಗಿ ಚಿತ್ರಿಸಿದ ರೀತಿ, ಹೆಸರು ತೋರಿಸುವಾಗ ರಾಮಾಚಾರಿಯ ಗುಣ ವಿಶೇಷಣಗಳನ್ನು ಹೇಳುತ್ತಾ, ಚಾಮಯ್ಯ ಮೇಷ್ಟ್ರು ಮತ್ತು ರಾಮಾಚಾರಿಯ ಅನುಬಂಧವನ್ನು ತೋರಿಸಿದ ರೀತಿಗೆ ಖುಷಿಯಾಯಿತು..

"ಪುಟ್ಟಣ್ಣನವರೇ ಮೇಲೆ ಹೇಳಿದ ಮಾತುಗಳು ನನ್ನ ಮನದಾಳದ ಮಾತುಗಳು.. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಕೇಳಲು ಇಷ್ಟಪಡುತ್ತೇನೆ.. !!!"

"ಸುಬ್ಬರಾಯರೇ ಧನ್ಯವಾದಗಳು. ನಿಮ್ಮ ಮನದಾಳದ ಮಾತುಗಳನ್ನು ಎಷ್ಟು ವಿವರವಾಗಿ ಹೇಳಿದ್ದೀರ.. ನೀವು ಸರಸ್ವತಿ ಪುತ್ರರು.. ನಿಮಗೆ ಅರಿಯದ ವಿಷಯವೇನಿದೆ.. ತಾನು ಹೆತ್ತ ಸುಂದರ ಮಗುವಿನ ಮುಂದಿನ ಹಾದಿ ನಿರೀಕ್ಷೆಗೆ ತಕ್ಕ ಹಾಗೆ ಇಲ್ಲದೆ ಇದ್ದಾಗ ಆಗುವ ಬೇಸರವೇ ನಿಮಗೂ ಆಗಿದ್ದು.. ಅದರಲ್ಲಿ ನಿಮ್ಮ ತಪ್ಪೇನು ಇಲ್ಲ.. ದಯವಿಟ್ಟು ನೊಂದುಕೊಳ್ಳಬೇಡಿ. ನಾಗರಹಾವು ಚಿತ್ರೀಕರಣ ಮುಗಿದು ಸಿನಿಮಾ ಅದ್ಭುತ ಯಶಸ್ಸು ಕಂಡಾಗ.. ನನ್ನನ್ನು ಯಾರೋ ಕೇಳಿದ್ದರು.. ಸುಬ್ಬರಾಯರು ಇದನ್ನು ಕೇರೇ ಹಾವು ಎಂದಿದ್ದಾರೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ  ಏನೂ.. ನಾ ಅವಾಗ ಹೇಳಿದ್ದು ಒಂದೇ ಮಾತು..

"ಮೂರು ಕಾದಂಬರಿಗಳನ್ನು ಓದಿದೆ.. ಪಕ್ಕಕ್ಕಿಟ್ಟೆ.. ಚಿತ್ರಕಥೆ ಬರೆದೆ.. ಅದೇ ನಾಗರಹಾವು"

"ಸುಬ್ಬರಾಯರೇ.. ಒಂದು ಮಾತು.. ಬ್ರಾಹ್ಮಣರ ಮನೆಯ ಊಟ ನೋಡಿದ್ದೀರಾ.. ಊಟ ಮಾಡಿದೀರಾ.. ನಿಮಗೆ ಅರಿವಾಗದ ವಿಷಯವೇನಿದೆ ಹೇಳಿ... ಬಾಳೆ ಎಲೆ ಹಾಕಿ ಅಭ್ಗಾರ ಮಾಡಿದ ಮೇಲೆ.. ಒಂದೊಂದೇ ತಿನಿಸುಗಳನ್ನು ಬಡಿಸುತ್ತಾ ಹೋಗುತ್ತಾರೆ, ಪಾಯಸ, ಕೋಸಂಬರಿ, ಪಲ್ಯ ಉಪ್ಪು, ಉಪ್ಪಿನಕಾಯಿ, ಕಲಸಿದ ಅನ್ನ, ಹಪ್ಪಳ, ಸಂಡಿಗೆ, ಬರಿ ಅನ್ನ, ಅದರ ಮೇಲೆ ತೊವ್ವೆ, ಆಮೇಲೆ ತುಪ್ಪ.. ನಂತರ ಪರಿಶಿಂಚನ ಮಾಡಿ, ಚಿತ್ರಾಹುತಿ ಇಟ್ಟು, ಆಪೋಶನ ತೆಗೆದುಕೊಂಡು ನಂತರ ಊಟ ಶುರುಮಾಡುತ್ತೇವೆ.. ಇಡೀ ಬಾಳೆ ಎಳೆಯಲ್ಲಿ ಅಡಿಗೆ ಪದಾರ್ಥಗಳು ಇದ್ದರೂ, ನಮಗೆ ಇಷ್ಟವಾದದ್ದನ್ನು ತಿನ್ನುತ್ತಾ ಹೋಗುತ್ತೇವೆ.. ನಂತರ ಬರುವ ಸಾರು, ಹುಳಿ, ಮಜ್ಜಿಗೆ ಹುಳಿ, ತೊವ್ವೆ, ಮಜ್ಜಿಗೆ.. ಇದರ ಜೊತೆಯಲ್ಲಿ ಬರುವ ಸಿಹಿ ಖಾದ್ಯಗಳು, ಖಾರದ ಪದಾರ್ಥಗಳು ನಮಗೆ ಏನು ಬೇಕು ಅದು ತಿನ್ನುತ್ತೇವೆ.. ಯಾವುದು ಬೇಡವೋ ಅದನ್ನು ಬಿಡುತ್ತೇವೆ.. ಬೇಕಾದ್ದ ಪದಾರ್ಥಗಳನ್ನು ಕೇಳಿ ಹಾಕಿಸಿಕೊಳ್ಳುತ್ತೇವೆ.. ಬೇಡವಾದದ್ದು ಬಂದಾಗ ಕೈ ಅಡ್ಡ ಇತ್ತು ಬೇಡ ಅನ್ನುತ್ತೇವೆ.."

ಇದೆ ರೀತಿ ನಾನು ನಿಮ್ಮ ಕಾದಂಬರಿಗಳನ್ನು ಓದಿದ ಮೇಲೆ ಮಾಡಿದ್ದು.. ನಿಮ್ಮ ಕಾದಂಬರಿಗಳಲ್ಲಿ ನಾ ಆಯ್ದುಕೊಂಡ ಪಾತ್ರಗಳು.. ರಾಮಾಚಾರಿ, ಅವರ ಅಪ್ಪ, ಅಮ್ಮ.. ಚಾಮಯ್ಯ ಮೇಷ್ಟ್ರು ಅವರ ಹೆಂಡತಿ.. ಅಲಮೇಲು, ಅವರ ಅಪ್ಪ ಅಮ್ಮ, ವರದ, ತುಕಾರಾಂ, ಮೇರಿಯಮ್ಮ, ಮಾರ್ಗರೆಟ್, ವರದರಾಜು, ಪೈಲ್ವಾನ್ ಮತ್ತು ಜಲೀಲ   ಇವಿಷ್ಟು ನನ್ನ ಮನಸ್ಸಿನಲ್ಲಿ ಮೂಡಿದ ಪಾತ್ರಗಳು.. ಅದಕ್ಕೆ ಕೆಲವು ಪಾತ್ರಗಳನ್ನು ಸೇರಿಸಿಕೊಂಡೆ ಮತ್ತು ಕೆಲವು ಪಾತ್ರಗಳನ್ನು ಬದಲಿಸಿಕೊಂಡೆ. ಸಿದ್ಧಬಸಪ್ಪನ ಪಾತ್ರದ ಜೊತೆಗೆ ಇನ್ನು ಎರಡು ಪಾತ್ರಗಳಾಗಿ ಅವನ ಗೆಳೆಯರನ್ನು ಆರಿಸಿಕೊಂಡಿದ್ದೇನೆ, ಫಕೀರಪ್ಪನ ಪಾತ್ರಕ್ಕೆ ಬದಲಾಗಿ ನಾಜೂಕಯ್ಯನ ಪಾತ್ರ ಸೇರಿಸಿದೆ, ಶಾಲೆಯ ಮಾಸ್ತರಿಗೆ ಬದಲು ಪ್ರಿನ್ಸಿಪಾಲ ಶಾಮರಾಯರನ್ನು ಕರೆತಂದೆ.. ಶಾಲೆಯ ಬದಲಿಗೆ ಕಾಲೇಜು ತಂದೆ..  ಪ್ರೀತಿ ಪ್ರೇಮ ಎಂದು ಮಾರ್ಗರೆಟ್ ಮತ್ತು ಅಲಮೇಲು ಜೊತೆಯಲ್ಲಿ ನೆಡೆವ ಪ್ರಸಂಗಗಳನ್ನು ಒಳಗೆ ತರಲಿಲ್ಲ.. ವರದರಾಜುವಿನ ಇತಿಹಾಸ, ಮೇರಿಯಮ್ಮನ ಇತಿಹಾಸ, ಚಾಮಯ್ಯ ಮೇಷ್ಟ್ರ ಇತಿಹಾಸ, ಪ್ಲೇಗ್, ಸಿನಿಮಾ ಟೆಂಟ್ ಇವುಗಳನ್ನು ಬೇಡವೆಂದು ಬಿಟ್ಟೆ. ಶಾಲೆಯ ದಿನಗಳಲ್ಲಿ ರಾಮಚಾರಿ ಮತ್ತು ಸಂಗಡಿಗರ ತುಂಟತನ ವನ್ನು ಟೈಟಲ್ ಕಾರ್ಡ್ ತೋರಿಸುವಾಗ ಬರಿ ರಾಮಚಾರಿಯನ್ನಷ್ಟೇ ಮುಖ್ಯವಾಗಿಟ್ಟುಕೊಂಡು.. ಅವನ ಒಂದೆರಡು ಚೇಷ್ಟೆಗಳನ್ನು ಮಾತ್ರ ತೋರಿಸಿದೆ..ಮಿಕ್ಕಂತೆ ಹಾಡುಗಳು ನಮ್ಮ ಭಾರತದ ಸಿನಿಜಗತ್ತಿನ ಮುಖ್ಯ ಭಾಗಗಳು .. ಹಾಗಾಗಿ ರಾಮಾಚಾರಿಯ ಗುಣ ವಿಶೇಷತೆ ತಿಳಿಸಲು "ಹಾವಿನ ದ್ವೇಷ ಹನ್ನೆರಡು ವರುಷ" ಹಾಡು ಬಂತು.. ರಾಮಾಚಾರಿ ಮತ್ತು ಅಲಮೇಲುವಿನ ಪ್ರೀತಿ ಗುರುತಿಸಲು "ಕರ್ಪೂರದ ಗೊಂಬೆ ನಾನು" ಹಾಡು ಬರಬೇಕಾಯಿತು.. ಒಂದು ಗಂಡು ಎರಡು ಹೆಣ್ಣು .. ಇದರಲ್ಲಿ ಆಯ್ಕೆ ಎನ್ನುವ ಪ್ರಶ್ನೆ ಬಂದಾಗ.. ರಾಮಾಚಾರಿಗೆ ಸ್ಪಷ್ಟತೆ ಸಿಕ್ಕಿ ಅಲಮೇಲುವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಆ ಸಂದರ್ಭಕ್ಕೆ "ಬಾರೆ ಬಾರೆ ಚಂದದ ಚೆಲುವಿನ  ತಾರೆ" ಹಾಡು ತೋರಿಸಿದೆ..

ಮಧ್ಯದಲ್ಲಿಯೇ ಸುಬ್ಬರಾಯರು "ಪುಟ್ಟಣ್ಣನವರೇ ಒಂದು ಮಾತು.. ನಿಮ್ಮನ್ನು ಮೆಚ್ಚಿದ್ದು ಬಾರೆ ಬಾರೆ ಹಾಡಿನ ಚಿತ್ರೀಕರಣ.. ಸ್ಲೋ ಮೋಷನ್ ನಲ್ಲಿ ಹಾಡನ್ನು ಚಿತ್ರೀಕರಿಸಿರುವುದು ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲು.. ನಿಮ್ಮ ಮಾತಿಗೆ ಕೊಂಚ ತಡೆ ಮಾಡುತ್ತಿದ್ದೇನೆ .. ಈ ಹಾಡಿನ ಬಗ್ಗೆ ಹೇಳಿ.. ಅಲಮೇಲುವನ್ನು ಸ್ಲೋ ಮೋಷನ್ ನಲ್ಲಿ.. ರಾಮಾಚಾರಿಯನ್ನು ಸಹಜ ವೇಗದಲ್ಲಿ ಚಿತ್ರೀಕರಿಸಿದ್ದರ ಬಗ್ಗೆ ಹೇಳಿ.. ಆಮೇಲೆ ನಿಮ್ಮ ಪ್ರತಿಕ್ರಿಯೆ ಮುಂದುವರೆಸಿ .. ಆಗಬಹುದೇ"

"ಆಗಬಹುದು ಸುಬ್ಬರಾಯರೇ.. ಕಾದಂಬರಿ ಬರೆದು ಇಂತಹ ಅದ್ಭುತ ಚಿತ್ರ ಮಾಡುವ ಅನುಕೂಲ ಮಾಡಿಕೊಟ್ಟಿದ್ದೀರಾ. .ಖಂಡಿತ ಹೇಳುವೆ.. ರಾಮಚಾರಿ ಆವೇಗಕ್ಕೆ ಸದಾ ಒಳಗಾಗುವ ವ್ಯಕ್ತಿತ್ವ . ಅವನು ಯಾರ ಮಾತಿಗೂ ಬಗ್ಗುವವನಲ್ಲ.. ಹರಿವ ನೀರಿದ್ದ ಹಾಗೆ.. ನೀರಿಗೆ ತಡೆ ಮಾಡೋಕೆ ಆಗುತ್ತಾ.. ಖಂಡಿತ ಇಲ್ಲ.. ಆ ದೃಷ್ಠಿ ಇಟ್ಟುಕೊಂಡು ರಾಮಾಚಾರಿಯ ದೃಶ್ಯವು ಸಹಜವಾದ ವೇಗದಲ್ಲಿದೆ.. ಅದೇ ಅಲುಮೇಲು ಸಮಾಜದ ಕಟ್ಟುಪಾಡಿಗೆ ಬಾಗಬೇಕಾದವಳು, ಅಪ್ಪ, ಅಮ್ಮ, ವರದ ಹದ್ದು ಕಾಯ್ದಂತೆ ಅವಳನ್ನು ಕಾಯುತ್ತಿದ್ದವರು.. ಹಾಗಾಗಿ ಅವಳು ತಗ್ಗಿ ಬಗ್ಗಿ ನಿಧಾನಕ್ಕೆ ನೆಡೆಯಬೇಕು ಎನ್ನುವುದನ್ನು ಸ್ಲೋ ಮೋಷನಿನಲ್ಲಿ ಚಿತ್ರಿಸಿದ್ದೇವೆ.. "

"ಭಲೇ ಭಲೇ.. ಅದ್ಭುತ ವಿವರಣೆ. ಹಾ ಸರಿ ಮುಂದುವರೆಸಿ"

"ರಾಮಚಾರಿಯ ಸಂಸಾರದಲ್ಲಿ ಹೆಚ್ಚು ಮಂದಿಯನ್ನು ಸೇರಿಸದೆ, ಅಪ್ಪ ಅಮ್ಮ ಇವನು ಮೂವರನ್ನೇ ಉಳಿಸಿಕೊಂಡೇ.. ಮನೆಗೆ ಸಹಾಯ ಮಾಡದವನು ಮಗನಲ್ಲ ಎಂದು ದೂರುವ ಅಪ್ಪ ಅಮ್ಮನಿಗೆ ಸ್ವಲ್ಪ ಆಧಾರವಾಗಿರಲು ಗೈಡ್ ಕೆಲಸ ಮಾಡುತ್ತಾ ಚಿತ್ರದುರ್ಗದ ಒನಕೆ ಓಬವ್ವನ ಕತೆಯನ್ನು ಸೇರಿಸಿ ದುರ್ಗ ಎಂದರೇನು ಹೇಗಿರುತ್ತೆ ಎಂದು ಕರುನಾಡಿಗೆ ತಿಳಿಸಬೇಕಿತ್ತು ಅದಕ್ಕೆ "ಕನ್ನಡ ನಾಡಿನ ವೀರರಮಣೀಯ" ಹಾಡು ಬಂತು.. ಅಲಮೇಲು ಮದುವೆಯಾಯಿತು.. ಬೇರೆ ದಾರಿ ಕಾಣದೆ ರಾಮಾಚಾರಿ ನಿಧಾನವಾಗಿ ಮಾರ್ಗರೇಟ್ ಪ್ರೇಮಕ್ಕೆ ಮಣಿಯುತ್ತಾನೆ.. ಎರಡು ಬೇರೆ ಬೇರೆ ಧರ್ಮ ಅದರ ಸಂಗಮವಾಗುತ್ತಿದೆ ಎಂದು "ಸಂಗಮ ಸಂಗಮ" ಹಾಡು ಚಿತ್ರೀಕರಿಸಿದೆ.. ಅಲಮೇಲುವಿನ ಮದುವೆ ಬಲವಂತದ ಮದುವೆ ಜೊತೆಯಲ್ಲಿ ಒಲ್ಲದ ಗಂಡ ತನ್ನ ಆಸೆ ಪೂರೈಸಿಕೊಂಡ ಮೇಲೆ ಅವಳನ್ನು ವ್ಯಾಪಾರದ ಸರಕಾಗಿ ಬಳಸಿಕೊಳ್ಳುವುದು ಮತ್ತು ಅವಳ ದುರಂತ ಕತೆಯನ್ನು "ಕತೆ ಹೇಳುವೆ ನನ್ನ ಕತೆ ಹೇಳುವೆ" ಎಂದು ತೋರಿಸಿದ್ದೇನೆ.. ಅಲಮೇಲು ರಾಮಚಾರಿಯನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳಲು "ರಾಮಚಾರಿ ನೀ ಅಣ್ಣ ಅಂತ ಹೇಳಿದೆ.. ಆದರೆ ನಿನಗೆ ಆ ಸ್ಥಾನ ಕೊಟ್ಟಿಲ್ಲ.. ಈಗಲೂ ನನ್ನ ಜೊತೆ ಬಾಳುವೆ ಎಂದು ಹೇಳು.. ಇದನ್ನೆಲ್ಲಾ ಬಿಟ್ಟು ನಿನ್ನ ಜೊತೆ ಬಂದು ಬಿಡುತ್ತೇನೆ.. " ಎನ್ನುವ ಮಾತಿನಲ್ಲಿ ತೋರಿಸಿದ್ದೇನೆ.. ರಾಮಚಾರಿ ಈಗ ಮಾರ್ಗರೇಟ್ ಜೊತೆಯಲ್ಲಿ ಪ್ರೀತಿಸುತ್ತಿದ್ದಾನೆ ಎಂದು ತಿಳಿದ ಅವಳು "ಎಂಥಹ ;ಪರಿಸ್ಥಿತಿಯಲ್ಲಿಯೂ ಅವಳನ್ನು ಕೈಬಿಡಬೇಡ ಎಂಬ ಮಾತೆ ಚಾಮಯ್ಯ ಮೇಷ್ಟರ ಅವಸಾನಕ್ಕೆ ಕಾರಣವಾಗುತ್ತೆ.. ನಿಮ್ಮ ತ್ರಿವಳಿ ಕಾದಂಬರಿ ಓದಿ ನನಗೆ ಮೂಡಿಬಂದ ಕತೆಯ ಎಳೆ ಇದು.. ಅದನ್ನೇ ಜೋಪಾನವಾಗಿ ಹರಡಿ... ಶಾಲೆಯ ಬದಲಿಗೆ ಕಾಲೇಜು ತಂದೆ.. ರಾಮಾಚಾರಿಯ ತುಂಟತನ, ಹಠ ತೋರಿಸಲು ಶಾಮರಾಯರನ್ನು ಕಂಬಕ್ಕೆ ಕಟ್ಟುವ ದೃಶ್ಯ. ಜಲೀಲನ ಜೊತೆ ಗುದ್ದಾಟ.. ಇವುಗಳನ್ನು ಸೇರಿಸಿದೆ.. ಮಂಡಿ ಸಾಹುಕಾರನ ಬಳಿ ಕೆಲಸ ಕೊಡಿಸಲು ಪೈಲ್ವಾನ್ ಅವರ ಶಿಫಾರಸ್ಸಿನ ದೃಶ್ಯ ಹಾಗೆ ಇದೆ.. ಜೊತೆಯಲ್ಲಿ ಮಂಡಿ ಸಾಹುಕಾರನ ಗೆಳೆಯರನ್ನು ಸೇರಿಸಿದೆ.. ಇನ್ನೂ ತುಕಾರಾಂ ಮಾಡುವ ಗದ್ದಲಗಳು.. ಅವನು ಚಾಮಯ್ಯ ಮೇಷ್ಟ್ರಿಗೆ ರಾಮಾಚಾರಿಯ ಬಗ್ಗೆ ಹೇಳುವ ಚಾಡಿಮಾತು.. ಇವೆಲ್ಲಾ ಎಷ್ಟು ಬೇಕೋ ಅಷ್ಟು ತೆಗೆದುಕೊಂಡಿದ್ದೀನಿ.. ರಾಮಾಚಾರಿಯ ಪಾತ್ರವನ್ನು ಆರಂಭದಿಂದ ಕಡೆಯ ತನಕ ಯಾರಿಗೂ ಬಾಗದ ಅಸಾಮಿಯಾಗಿ ಚಿತ್ರಿಸಬೇಕೆಂದುಕೊಂಡಿದ್ದೆ.. ಸಾಮಾನ್ಯ ಚಿತ್ರದ್ ಅವಧಿ ಎರಡೂವರೆ ಅಥವಾ ಎರಡೂ ಮುಕ್ಕಾಲು ಘಂಟೆಯಲ್ಲಿ ಸಿನಿಮಾ ಮಾಡಬೇಕು... ತುಸು ಹೆಚ್ಚಾದರೂ ಜನರಿಗೆ ಬೋರ್ ಆಗಬಾರದು ನಿಮ್ಮ ಕತೆಯಲ್ಲಿ ಬರುತ ಹಲವಾರು ದೃಶ್ಯಗಳನ್ನು ಬಿಟ್ಟಿದ್ದೇನೆ.. ಶಾಲೆಯಿಂದ ಕಾಲೇಜಿಗೆ ವರ್ಗ ಮಾಡಿದ್ದು ಕೂಡ ಇದೆ ಕಾರಣಕ್ಕೆ.. ಶಾಲೆಯಲ್ಲಿ ಪ್ರೀತಿ ಪ್ರೇಮ ಈ ವಿಷಯಗಳು ಆಗಿನ ಕಾಲಕ್ಕೆ ಸರಿ ಹೊಂದುತ್ತಿರಲಿಲ್ಲ ಎನ್ನುವ ಭಾವ ಹೊತ್ತು ಕಾಲೇಜಿನಿಂದ ಕತೆ ಆರಂಭಿಸಿದೆ.. ಎಂದು ಇದು ನನ್ನ ವಿವರಣೆ ಸುಬ್ಬರಾಯರೇ.. "

"ಬೇಕಾದಷ್ಟು ಆಯ್ತು ಬಿಡಿ.. ಸುಂದರವಾಗಿದೆ ನಿಮ್ಮ ವಿವರಣೆ.. ಇರಲಿ ಬಿಡಿ. ನಾನು ಬರೆದದ್ದು ಲಕ್ಷ ಜನರಿಗೆ ತಲುಪಿತ್ತು.. ನೀವು ಚಿತ್ರೀಕರಿಸಿದ ಚಿತ್ರ ಕೋಟ್ಯಾಂತರ ಜನರಿಗೆ ತಲುಪಿದೆ.. ಹೋಗಲಿ ಬಿಡಿ ಆದದ್ದು ಆಯ್ತು.. ಅಂದ ಹಾಗೆ ನಾಗರಹಾವು ಹೊಸ ರೂಪದಲ್ಲಿ, ಹೊಸ ತಂತ್ರಜ್ಞಾನದಲ್ಲಿ ಮೂಡಿ ಬಂದಿದೆಯಂತೆ.. ಬನ್ನಿ ಇಬ್ಬರೂ ನೋಡಿ ಬರೋಣ.. "

"ಧನ್ಯವಾದಗಳು ಸುಬ್ಬರಾಯರೇ.. ಹೇಗೋ ನಿಮ್ಮ  ಮನಸ್ಸಿಗೆ ಸಂತಸ ಉಂಟು ಮಾಡಿತು ಅಂದರೆ ಅದಕ್ಕಿಂತ ಭಾಗ್ಯವೇನಿದೆ ಹೇಳಿ.. ನೆಡೆಯಿರಿ.. ನಾಗರಹಾವು ಕತೃವಿನ ಜೊತೆಯಲ್ಲಿ ಸಿನಿಮಾ ನೋಡುವ ಸದವಕಾಶ ನನಗೆ ಒದಗಿಸಿಕೊಟ್ಟ ನಿಮಗೆ ಅನಂತ ಧನ್ಯವಾದಗಳು!!!

(ಹೇಳಬೇಕಿಲ್ಲ... ಆದರೂ ಹೇಳುತ್ತೇನೆ.. ಇದೊಂದು ಕಾಲ್ಪನಿಕ ಬರಹ.. ಸುಬ್ಬರಾಯರ ಮಸಣದ ಹೂವು, ಚಂದವಳ್ಳಿಯ ತೋಟ ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪ ಮತ್ಸರ, ಚಂದನದ ಗೊಂಬೆ ಹೀಗೆ ಹತ್ತು ಹಲವಾರು ಸಿನೆಮಾಗಳಾಗಿರುವ ಅವರ ಕಾದಂಬರಿ ಆಧಾರಿತ ಚಿತ್ರಗಳನ್ನು ನೋಡಿದ್ದೇನೆ.. ಅಪಾರ ಗೌರವವಿದೆ ತ ರಾ ಸು ಅವರಲ್ಲಿ ಮತ್ತು ಅವರ ಬರವಣಿಗೆಯಲ್ಲಿ.. ಅದೇ ರೀತಿ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅದ್ಭುತ ಚಿತ್ರಗಳು ಅವರ ತಾಂತ್ರಿಕ ಅಂಶಗಳಿಗೆ ಕೊಡುವ ಪ್ರಾಮುಖ್ಯತೆ, ಹಾಡುಗಳು ಸಂಭಾಷಣೆ, ದೃಶ್ಯವನ್ನು ಕಟ್ಟಿ ಕೊಡುವ ಅವರ ಪ್ರಬುದ್ಧತೆ ಇವುಗಳನ್ನು ಕಂಡು ಅವರ ಅಭಿಮಾನಿಯಾಗಿದ್ದೇನೆ.. ಈ ಇಬ್ಬರು ಕಲಾ ದಿಗ್ಗಜರು ಮಾತಾಡಿರಬಹುದು ಎನ್ನುವ ಒಂದು ಕಾಲ್ಪನಿಕ ಯೋಚನೆ ಮೂಡಲು ಕಾರಣ ಇವರಿಬ್ಬರು.. ಇವರ ಕೊಟ್ಟ ಶಕ್ತಿ ಮತ್ತು ಪ್ರೋತ್ಸಾಹವೇ ಈ ಬರವಣಿಗೆಗೆ ಮೂಲ ಪ್ರೇರಕ ಅಂತ ನಾ ನಿಸ್ಸಂಕೋಚವಾಗಿ ಹೇಳುವೆ. .. ಮತ್ತು ಈ ಲೇಖನ ಶ್ರೀಯುತ ತ ರಾ ಸುಬ್ಬರಾಯರಿಗೆ ಮತ್ತು ಶ್ರೀಯುತ ಪುಟ್ಟಣ್ಣ ಕಣಗಾಲ್   ಅವರ ಚರಣಕಮಲಗಳಿಗೆ ಸಮರ್ಪಿತ!!!)

Saturday, July 21, 2018

ವಿಭಿನ್ನ ಅನುಭವ - ನಾಗರಹಾವು

ಮತ್ತೆ ನಾಗರಹಾವು ಬರುತ್ತಿದೆ ಎಂದು ತಿಳಿದಾಗ ಖುಷಿಯಾಯಿತು... ಇದರಲ್ಲಿ ಮತ್ತೆ ಏನೂ ಮಾಡ್ತಾರೆ ಅಂತ ಯು ಟ್ಯೂಬ್ ನಲ್ಲಿ ಟ್ರೈಲರ್ /ಟೀಸರ್ ನೋಡಿದಾಗ ನೋಡಲೇ ಬೇಕು ಎನ್ನುವ ಹಠ ಹುಟ್ಟಿತು.. ಆದದ್ದು ಆಗಲಿ.. ನೋಡಿಯೇ ಬಿಡೋಣ ಅಂತ ಹೋಗಲು ತೀರ್ಮಾನಿಸಿದಾಗ.. ನನ್ನ ಅಣ್ಣ ಹೋಗೋಣ ನೆಡಿ ಅಂತ ಇಡೀ ಪರಿವಾರ ಮೈನಸ್ ಮುರಳಿ ಆದಿತ್ಯ ಹೊರಟೆವು..

ಥೀಯೇಟರ್ ಮುಂದೆ ಒಂದು ಸೆಲ್ಫಿ .. ಈ ಸಿನಿಮಾದ ಹುಚ್ಚನ್ನು ಹೆಚ್ಚು ಮಾಡಿತು.. ಮನೆಯ ಹತ್ತಿರವೇ ಟಾಕೀಸು ಇದ್ದದರಿಂದ ಆರಾಮಾಗಿ ಹೋದೆವು.. ರೂರಲ್ ಪ್ರದೇಶ.. ಪಟ್ಟಣದ ಗಿಜಿ ಗಿಜಿ ಇರಲಿಲ್ಲ.. ಸಿನೆಮಾವನ್ನು ಅನುಭವಿಸಿ ನೋಡಬಹುದಿತ್ತು.. ಆದರೆ ಪಟ್ಟಣದಲ್ಲಿ ಸಿಗುವ ಶಿಳ್ಳೆ .. ಚಪ್ಪಾಳೆ..ಪರದೆಗೆ ವಿಷ್ಣು ಬಂದಾಗ ಕರ್ಪೂರದ ಆರತಿ.. ಕೂಗಾಟ. .ಜೈಕಾರ.. ಇವುಗಳು ಇರಲಿಲ್ಲ ಅಂತಲ್ಲ.. ಆದರೆ ಪ್ರಮಾಣ ಕಮ್ಮಿ ಇದ್ದವು. ... ಹಾಗಾಗಿ ಸಿನೆಮಾವನ್ನು ಸಿನೆಮವನ್ನಾಗಿ ನೋಡಲು ಸಾಧ್ಯವಾಯಿತು..
ಪರಿವಾರ @ ನಾಗರಹಾವು 

ಇಡೀ ಚಿತ್ರ ಮೊದಲೇ ಅದ್ಧೂರಿಯಾಗಿ ಅಂದಿನ ಕಾಲಕ್ಕೆ ತಕ್ಕನಾಗೆ ನಿರ್ಮಿಸಿದ್ದರು.. ಪ್ರಸಿದ್ಧ ನಿರ್ಮಾಪಕ ಶ್ರೀ ವೀರಾಸ್ವಾಮಿ ಅವರು... ಈ ಮರುಸೃಷ್ಟಿ ಕೂಡ ಅಷ್ಟೇ ಅದ್ಧೂರಿಯಾಗಿ ಮಾಡಿದ್ದಾರೆ.. ಆಧುನಿಕ ವರ್ಣ ಸ್ಪರ್ಶ.. ಸಂಗೀತದ ಪುನರ್ ನಿರ್ಮಾಣ.. ಹಳೆಯದನ್ನು ಉಳಿಸಿಕೊಂಡು ಅದಕ್ಕೆ ಅಲ್ಲಲ್ಲಿ ಸ್ಪರ್ಶ ನೀಡಿದ್ದಾರೆ.. ಆದರೂ ಒಮ್ಮೆ ಅನ್ನಿಸಿತು ಹಳೆಯ ಸಂಗೀತವನ್ನೇ ಇಟ್ಟುಕೊಂಡು ವರ್ಣ ಸ್ಪರ್ಶ.. ಮತ್ತೆ ೭೦ಎಂಎಂಗೆ ಮಾಡಿದ್ದಾರೆ ಚೆನ್ನ ಅಂತ.. ಆದರೆ ಇದು ನೆಗೆಟಿವ್ ಸಿಕ್ಕಿದ್ದು.. ಅದರ ಹಿಂದೆ ಪಟ್ಟ ಬವಣೆ.. ಹೊಸ ತಂತ್ರಜ್ಞಾನಕ್ಕೆ ಒಗ್ಗಿಸುವಲ್ಲಿ ಇರುವ ಮಿತಿ.. ಇದನ್ನು ದಾಟಿ ಅದ್ಭುತವಾಗಿ ಮಾಡಿದ್ದಾರೆ..

ಒಂದು ತಲೆಮಾರನ್ನು ದಾಟಿ ಅದರ ಮುಂದಿನ ತಲೆಮಾರಿನ ಜನತೆ ನೋಡುತ್ತಿರುವುದರಿಂದ ಈ ತಲೆಮಾರಿಗೆ ಖಂಡಿತಾ ಇಷ್ಟವಾಗುತ್ತದೆ ಅನ್ನುವ ಭರವಸೇ ನನ್ನದು..

ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಕನ್ನಡ ಚಿತ್ರಗಳ ಬಗ್ಗೆ ಬರೆಯುವಾಗ ನನ್ನ ಅನುಭವಕ್ಕೆ ತಲುಪಿದ ರೀತಿಯನ್ನು ಬರೆದಿದ್ದೆ.. ಅದರ ಕೊಂಡಿ ಇಲ್ಲಿದೆ.. ಸ್ಪೆಷಾಲಿಟಿ... ಪುಟ್ಟಣ್ಣ ಸ್ಪೆಷಾಲಿಟಿ - ನಾಗರಹಾವು (1972)  ಹಾಗಾಗಿ ಮತ್ತೆ ಅದೇ ವಿಷಯ ಹೇಳಿ ನಿಮಗೆ ಬೋರ್ ಹೊಡೆಸೋಲ್ಲ :-)

ಏನೋ ಒಂದು ಸೆಳೆತ ಇದೆ ಈ ಚಿತ್ರದಲ್ಲಿ.. ಅಂದುಕೊಂಡಿದ್ದು ಏನೂ ಸಾಗೊಲ್ಲ... ದುರಂತದಲ್ಲಿ ಕೊನೆಗಾಣುತ್ತದೆ.. ಒಂದು ಬದುಕು ಸುಂದರವನವಲ್ಲ ... ಅಲ್ಲಿ ನೂರಾರು ತಾಕಲಾಟಗಳು ಸುತ್ತುತ್ತವೆ.. ಪ್ರೀತಿ ಪ್ರೇಮ .. ಜಾತಿ.. ಧರ್ಮ.. ಆಸ್ತಿ.. ಅಂತಸ್ತು..    ಭಿನ್ನಾಭಿಪ್ರಾಯ.. ಸಂಬಂಧದ ಬಗ್ಗೆ ಒಡುಕು ಮೂಡಿಸೋದು.. ಹೊಟ್ಟೆ ಉರಿಗೆ ಬೆಂಕಿ ಹಚ್ಹೋದು ಎಲ್ಲವೂ ಇದೆ..
ಗುರು ಶಿಷ್ಯ 

ಈ ದೃಶ್ಯದ ಸಂಗೀತ.. ಸೂಪರ್ 

ನಿರ್ಮಾಪಕರು - ವೀರಾಸ್ವಾಮಿ 

ಆಚಾರ್.. ಅಯ್ಯಂಗಾರ್.. ಸ್ಮಾರ್ಥ ಈ ಮೂರು ಪಂಗಡಗಳ  ಘರ್ಷಣೆ ಒಂದು ಕಡೆ.. ಕ್ರಿಶ್ಚಿಯನ್.. ಮತ್ತು ಇಸ್ಲಾಮ್ ಧರ್ಮ ಪಾತ್ರಗಳು ತರುವ ಬಿಕ್ಕಟ್ಟು .. ಇಡೀ ಚಿತ್ರದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತೆ..

ಜಲೀಲ ಅಲಮೇಲುವನ್ನು ರೇಗಿಸದಿದ್ದರೆ.. ರಾಮಾಚಾರಿಗೂ ಅಲಮೇಲುಗೂ ಪ್ರೀತಿ ಬೆಳೆಯುತ್ತಿರಲಿಲ್ಲ.. ಮಾರ್ಗರೇಟ್ ಪಾತ್ರ ಬರದೇ ಇದ್ದಿದ್ದರೆ ಅಂತ್ಯ ಹೀಗಿರುತ್ತಿತ್ತಾ... ಅನ್ನಿಸುತ್ತದೆ..

ಈ ಚಿತ್ರ ನೋಡುತ್ತಾ ಹೋದ ಹಾಗೆ.. ಈ ಚಿತ್ರದ ಅನೇಕ ಪಾತ್ರಗಳ ನಟ ನಟಿಯರು ಈಗಿಲ್ಲ ಎನ್ನುವ ಅಂಶ ಬೇಸರ ತರಿಸುತ್ತದೆ..

೧) ಚಿತ್ರದ ನಿರ್ದೇಶಕ - ಪುಟ್ಟಣ್ಣ ಕಣಗಾಲ್
೨) ನಿರ್ಮಾಪಕ - ವೀರಾಸ್ವಾಮಿ
೩) ಚಾಮಯ್ಯ ಮೇಷ್ಟ್ರು - ಅಶ್ವಥ್
೪) ರಾಮಾಚಾರಿ - ವಿಷ್ಣುವರ್ಧನ್
೫) ತುಕಾರಾಂ - ಧೀರೇಂದ್ರ ಗೋಪಾಲ್
೬) ನಾಯ್ಡು ಅಂಕಲ್ - ಶಕ್ತಿ ಪ್ರಸಾದ್
೭) ಸಾಹಿತಿಗಳು - ಆರ್ ಏನ್ ಜಯಗೋಪಾಲ್
೮) ಸಾಹಿತಿಗಳು - ವಿಜಯನಾರಸಿಂಹ
೯) ಸಾಹಿತಿಗಳು - ಚಿ ಉದಯಶಂಕರ್
೧೦) ಸಂಗೀತ - ವಿಜಯಭಾಸ್ಕರ್
೧೧) ಕಾದಂಬರಿಕಾರರು - ತ ರಾ ಸುಬ್ಬರಾಯರು
೧೨) ಲಕ್ಷಮು - ವಜ್ರಮುನಿ
೧೩) ಮಂಡಿ ಸಾಹುಕಾರರು - ರಂಗ
೧೪) ಪೈಲ್ವಾನ್ - ಎಂ ಪಿ ಶಂಕರ್
೧೫) ರಾಮಾಚಾರಿ ಅಪ್ಪ - ರಾಘವೇಂದ್ರ ರಾವ್
೧೬) ರಾಮಚಾರಿ ಅಮ್ಮ - ಜಯಶ್ರೀ
೧೭) ಅಲಮೇಲು ಅಪ್ಪ - ರಾಮಚಂದ್ರ ಶಾಸ್ತ್ರೀ

ಇದು ತೆರೆಯ ಮೇಲೆ ಹೆಸರಾಗಿದ್ದ ನಟ ನಟಿಯರು ಮತ್ತು ಕೆಲವು ತಂತ್ರಜ್ಞರು.. ಇದರ ಹಿಂದೆ ಶಕ್ತಿ ಮೀರಿ ದುಡಿದ್ದಿದ್ದ ಅನೇಕಾನೇಕ ತಂತ್ರಜ್ಞರು.. ಯೂನಿಟ್ ಕೆಲಸಗಾರರು.. ಮರೆಯಾಗಿದ್ದರು ಅವರೆಲ್ಲರ ಅನುಭವದ ಶ್ರಮ ಈ ಚಿತ್ರ..

ಪುಟ್ಟಣ್ಣ ಕಣಗಾಲ್ ಎನ್ನುವ ಮಾಂತ್ರಿಕ ನಿರ್ದೇಶಕ.. ತರಾಸು ಎನ್ನುವ ಅದ್ಭುತ ಕತೆಗಾರರ ಕಾದಂಬರಿಯ ಒಳ ನೋಟವನ್ನು ಅನುಭವಿಸಿ ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಿ ಅವರಿಂದ ಚಿತ್ರಕ್ಕೆ ಬೇಕಾದ ರೀತಿಯಲ್ಲಿ ಅಭಿನಯ ತೆಗೆದು.. ಇದನ್ನೊಂದು ಅದ್ಭುತ ಕಲಾಕೃತಿ ನಿರ್ಮಿಸಿದ ವೀರಾಸ್ವಾಮಿ ಎಲ್ಲರೂ ಸ್ವರ್ಗದಲ್ಲಿಯೇ ಈ ಚಿತ್ರದ ಬಗೆಗಿನ ಹೊಸ ತಂತ್ರಜ್ಞಾನದ ಲೇಪದೊಂದಿಗೆ ಬೆಳ್ಳಿತೆರೆಯನ್ನು ಬೆಳೆಗುತ್ತಿರುವ ಯಶಸ್ಸನ್ನು ಕಂಡು ಕರುನಾಡ ಚಿತ್ರರಂಗವನ್ನು ಆಶೀರ್ವದಿಸುತ್ತಿದ್ದರೆ ಎನ್ನುವ ನಂಬಿಕೆ ನನ್ನದು..

ಈಶ್ವರಿ ಸಂಸ್ಥೆಯ ಈ ಪರಿಶ್ರಮ ಸೋದರ ಬಾಲಜಿಯ ಜೊತೆಯಲ್ಲಿ ನಿಂತು ರವಿಚಂದ್ರನ್ ಕುಟುಂಬ ಮಾಡಿದ ಈ ಸಾಹಸ ಮೆಚ್ಚುವಂತದ್ದು..

ಮೇಷ್ಟ್ರೇ ನಾನು ಬರುತ್ತಿದ್ದೇನೆ ಆದರೆ ಮಾರ್ಗರೆಟ್ ಜೊತೆಯಲ್ಲಿ ಈ ಸಂಭಾಷಣೆ ಥೀಯೇಟರ್ ಹೊರಗೆ ಬಂದ ಮೇಲೂ ಗುಯ್ ಅನ್ನುತ್ತಿರುತ್ತದೆ..

ಎಲ್ಲರೂ ನೋಡಿ.. ಈ ಪರಿಶ್ರಮವನ್ನು ಗುರುತಿಸಿ.. ನೋಡಿ.. ಮತ್ತು ಬೆಂಬಲಿಸಿ.. !

Thursday, December 1, 2016

ಭಾರತ ಭೂಶಿರದಲ್ಲಿ ಪುಟ್ಟಣ್ಣ ಅವರ ಜನುಮದಿನ

"ಪುಟ್ಟಣ್ಣ ಸರ್ ನಿಮ್ಮ ಹತ್ತಿರ ಮಾತಾಡಬೇಕಿತ್ತು.. ೪೪೦ ಕ್ಷಣಗಳು ಸಿಗಬಹುದೇ.. "

"ಯಾರಪ್ಪ ನೀನು.. "

"ನಿಮ್ಮ ಕೋಟಿ ಕೋಟಿ ಅಭಿಮಾನಿಗಳಲ್ಲಿ ನಾನು ಒಬ್ಬ.. ಇಂದು ನಿಮ್ಮ ಜೊತೆ ಮಾತಾಡಬೇಕು ಅನ್ನಿಸ್ತಿದೆ.. "

"ಸರಿ.. ಬಾ ಇಲ್ಲೇ ಸ್ವಲ್ಪ ದೂರದಲ್ಲಿ ನಮ್ಮ ಊರಿನವರ ಬೊಂಡ ಅಂಗಡಿ ಇದೆ.. ಅಂಬಡೆ ಮತ್ತು ಮೆಣಸಿನ ಕಾಯಿ ಬಜ್ಜಿ ಚೆನ್ನಾಗಿ ಮಾಡ್ತಾರೆ.. "

ನನಗೆ ಬಾಯಲ್ಲಿ ನೀರು..

"ಸರಿ ಸರ್"

ಇಬ್ಬರೂ ನೆಡೆಯುತ್ತಾ ಹೋದೆವು... ಅಂಗಡಿ ಸಿಕ್ಕಿತು.. "ಏನಪ್ಪಾ.. ಬಿಸಿ ಬಿಸಿ ಅಂಬಡೆ, ಮೆಣಸಿನಕಾಯಿ ಬಜ್ಜಿ ಎರಡು ಕಾಫಿ.. ಒಂದು ೫೫೫ ಕಳಿಸು.. ನಿನಗೆ ೫೫೫?"

"ಇಲ್ಲ ಸರ್.. ಅಭ್ಯಾಸವಿಲ್ಲ.. ಬಜ್ಜಿ, ಕಾಫಿ ಸಾಕು"

"ಸರಿ ಬಾ.. ನಾ ಓದಿದ್ದ ಶಾಲೆ ಇದು.. ಶಾಲೆಯ ಹೊರಗೆ ಒಂದು ಕಲ್ಲು ಬೆಂಚು ಇದೆ.. ಇವತ್ತು ಭಾನುವಾರ.. ಅಲ್ಲಿಯೇ ಕುಳಿತು ಮಾತಾಡೋಣ.. ಆಗಬಹುದೇ?"

ದೊಡ್ಡವರಿಗೆ ಇಲ್ಲ ಎನ್ನಲು ಆಗುತ್ತದೆಯೇ.. ಸುಮ್ಮನೆ ಗೋಣು ಆಡಿಸಿದೆ..

ಬಜ್ಜಿ, ಅಂಬಡೆ, ಕಾಫೀ ಮತ್ತು ೫೫೫ ಬಂತು..

"ಸರಿ ಹೇಳಪ್ಪ ಏನು ನಿನ್ನ ಮಾತು"

"ಸರ್.. ಉಪಾಸನೆ ಚಿತ್ರದ ಭಾರತ ಭೂಶಿರ ಹಾಡನ್ನು ಗುರುಗಳ ಆಶ್ರಮದಲ್ಲಿ ಚಿತ್ರೀಕರಿಸಿದ ರೀತಿ ನನಗೆ ಬಲು ಇಷ್ಟ ಅದರ ಬಗ್ಗೆ ಹೇಳಿ.. ೪೪೦ ಕ್ಷಣಗಳು ನಿಮ್ಮ ಮಾತಿಗಾಗಿ ಮಾತ್ರ"

"ನೋಡಪ್ಪ.. ಸಂಗೀತ ಒಂದು ಅದ್ಭುತ ಔಷದಿ ಇದ್ದ ಹಾಗೆ.. ಹಾಡನ್ನುಹಾಡುವವರು , ಅದರ ಸಂಗೀತ, ಹಾಡುವ ಸ್ಥಳ, ಹಾಡಿನ ಸಾಹಿತ್ಯ ಎಲ್ಲವೂ ಒಂದು ದೇವಸ್ಥಾನ ಹಾಗೂ ಅಲ್ಲಿನ ಪರಿಸರದಲ್ಲಿರುವ ದೇವರ ಮೂರ್ತಿ, ಪೂಜೆ ಸಾಮಗ್ರಿಗಳು ಇದ್ದ ಹಾಗೆ .. ದೇವರಿಗೆ ನಾವು ಧೂಪ, ದೀಪ, ಮಂತ್ರ, ಅಭಿಷೇಕ, ಅಲಂಕಾರ ಹೇಗೆ ಮಾಡುತ್ತೇವೆಯೋ ಹಾಗೆ.. ಒಂದು ಹಾಡಿಗೂ ಅದೇ ರೀತಿಯ ಸಿದ್ಧತೆ ಬೇಕು.

ಈ ಹಾಡು ಚಿತ್ರೀಕರಿಸುವ ಸ್ಥಳ ಗುರುಗಳ ಆಶ್ರಮ..
ಆಶ್ರಮ ಒಂದು ದೇವಾಲಯವೇ ಅಲ್ಲವೇ
ಆ ಆಶ್ರಮದ ಗುರುಗಳು ದೇವರಿಗೆ ಅರ್ಚಿಸುವ ಅರ್ಚಕರು ತಾನೇ
ಆ ಅರ್ಚನೆಗೆ ಬೇಕಾಗುವ ಸಾಹಿತ್ಯ,  
ಸಂಗೀತ,ಗಾಯನ..
ಭಕ್ತರು ಎಲ್ಲರೂ ಸೇರಿ
ಈ ಹಾಡನ್ನು ಮೇಲಕ್ಕೆ ಏರಿಸಿದ್ದಾರೆ.

ಶಾರದೆ ಪಾತ್ರಧಾರಿ ಸಂಗೀತ ಎಂದರೆ ತಪಸ್ಸು ಎಂದುಕೊಂಡವಳು.. ತಾನುಬಾಲ್ಯದಲ್ಲಿ ಕಣ್ಣಾರೆ ಕಂಡ ಒಂದು  ದೃಶ್ಯವನ್ನು ಹಾಡಿನಲ್ಲಿ ಕಟ್ಟಿ ಕೊಡುತ್ತೇನೆ ಎಂದು ಹೇಳುವಾಗ ಅದಕ್ಕೆ ಬೇಕಾದ ವೇದಿಕೆಯನ್ನು ಸೃಷ್ಟಿ ಮಾಡಲು ಮನಸ್ಸಾಯಿತು.

ವಿಜಯನಾರಸಿಂಹನಿಗೆ ಹೇಳಿದೆ "ನನಗೆ ಈ ರೀತಿಯ ಹಾಡು ಬೇಕು.. ಕನ್ಯಾಕುಮಾರಿಯ ಬಗ್ಗೆ ಹಾಡು" ಅಂತ..
"ಪುಟ್ಟಣ್ಣ ನೀನು ಕೇಳಿದೆ ನಾನು ಕೊಟ್ಟೆ" ಅಂತ ಅದ್ಭುತ ಹಾಡನ್ನು ಬರೆದುಕೊಟ್ಟ.

ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್ ಸಾಹಿತ್ಯಕ್ಕೆ ಸಂಗೀತ ಕೊಟ್ಟನೋ.. ಅಥವಾ ಸಂಗೀತಕ್ಕೆ ಸಾಹಿತ್ಯ ಬಂದಿತೋ ಅರಿವಿಲ್ಲ.. ಅದ್ಭುತವಾದ ಎದೆ ಝಲ್ ಎನ್ನುವಂಥ ಸಂಗೀತ ಒದಗಿಸಿದ..

ಇಬ್ಬರು "ವಿಜಯ"ರು ಈ ಗಾನ ಸಂಭ್ರಮ ಮಹಾಸಮರದಲ್ಲಿ ವಿಜಯಿಯಾದರು..

ಜಾನಕಿಯಮ್ಮನಿಗೆ ಈ ಹಾಡಿನ ಬಗ್ಗೆ ಹೇಳಿದಾಗ.. ಪುಟ್ಟಣ್ಣಾಜಿ ಖಂಡಿತ ಇದು ಒಂದು ಅದ್ಭುತ ಕೃತಿಯಾಗುತ್ತದೆ ಎಂದರು.. ಅದು ನಿಜವೇ ಆಯಿತು..

ಇಂಥಹಃ ಅಮೋಘ ಹಾಡನ್ನು ಸುಮ್ಮನೆ ಹೇಗೋ ಹೇಗೋ ಚಿತ್ರೀಕರಿಸಲು ಮನಸ್ಸಾಗಲಿಲ್ಲ..

ಛಾಯಾಗ್ರಾಹಕ ಶ್ರೀಕಾಂತ್ ಗೆ ಹೇಳಿದೆ.. "ಶಾರದೆ ಮೊಗದ ಮೇಲೆ ಕಾಂತಿ ಬರುವಂತೆ ಲೈಟಿಂಗ್ ಮಾಡಿ.. ಆಕೆಯ ಮುಖದ ಪ್ರತಿ ಭಾವವೂ ಎದ್ದು ಕಾಣುವಂತೆ ನೀವು ಸೆರೆ ಹಿಡಿಯಬೇಕು.. ವೀಣೆಯನ್ನು ನುಡಿಸುವ ಅಭ್ಯಾಸ ಆಕೆಗೆ ಆಗಿದೆ.. ನೋಡುವವರಿಗೆ ಶಾರದೆಯೇ ವೀಣೆ ನುಡಿಸುತ್ತಿದ್ದಾಳೆ ಎನ್ನುವ ಮನವರಿಕೆಯಾಗುತ್ತದೆ.. ಜೊತೆಗೆ ಈ ಹಾಡಿನಲ್ಲಿ ಹಿತಮಿತವಾಗಿ ವೀಣೆಯನ್ನು ಉಪಯೋಗಿಸಿರುವುದರಿಂದ, ಜೊತೆಗೆ ಹಾಡಿನಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ವೀಣೆಯ ನಾದವಿರುವುದರಿಂದ.. ಆಕೆಯ ಮುಖದ ಭಾವ, ತನ್ಮಯತೆ ಈ ಹಾಡಿಗೆ ಬೇಕು.. " ಮರುಮಾತಿಲ್ಲದೆ ಶ್ರೀಕಾಂತ್ ನಾನು ಹೇಗೆ ಹೇಳಿದ್ದೇನೋ ಅದಕ್ಕಿಂತ ಇನ್ನೂ ಅತ್ಯುತ್ತಮವಾಗಿ ಚಿತ್ರೀಕರಿಸಿದ್ದಾರೆ.

ಇನ್ನೂ ಜಾನಕಿಯಮ್ಮ.. ಅಬ್ಬಾ ಆಕೆ ನಿಜಕ್ಕೂ ಗಾನಸರಸ್ವತಿಯೆ ಹೌದು.. ಪ್ರತಿ ಪದವನ್ನು ಅರ್ಥಮಾಡಿಕೊಂಡು ಅದಕ್ಕೆ ಬೇಕಾದ ಭಾವ ತುಂಬಿ ಈ ಹಾಡನ್ನು ಅಕ್ಷರಶಃ ದೇವಗಾನವನ್ನಾಗಿ ಮಾಡಿದ್ದಾರೆ ಆಕೆ. "ಶಿವ ತಾಂಡವದ  ಢಮರು ನಿನಾದ ನಾದ ಬ್ರಹ್ಮನ ಓಂಕಾರ ನಾದ.. " ಈ ಪದವನ್ನು ಅದೆಷ್ಟು ಭಕ್ತಿಭಾವದಿಂದ ಹಾಡಿದ್ದಾರೆ.. ನನಗೆ ರೋಮಾಂಚನವಾಗುತ್ತದೆ..

ಇನ್ನೂ ಹಾಡು ಶುರುವಾದಾಗ ಬರುವ ರುದ್ರಪಟ್ಟಣದ ಸಂಗೀತ ವಿಧ್ವಾನ್ ಅವರ ಅಭಿನಯ, ಜಾನಕಿಯಮ್ಮನವರ ಆಲಾಪ ಕೇಳಿ ಕಣ್ಣು ಮತ್ತು ಮೊಗದಲ್ಲಿ ಅವರು ತೋರುವ ಭಾವ.. ನಿಜಕ್ಕೂ ನನಗೆ ಈಗ ಹಾಡನ್ನು ಕೇಳಿದರೂ ಕಣ್ಣಲ್ಲಿ ನೀರು ಬರುತ್ತದೆ.."

ಆ ಹಾಡು ಮುಗಿದಾಗ.. "ನಿಮ್ಮ ವಿಧ್ವತ್ತಿನ ಪ್ರತಿಬಿಂಬ ನಿಮ್ಮ ಶಿಷ್ಯೆ.. ಕರುಳು ಹಿಂಡುವ ವೀಣೆಯ ನಾದ, ಜೀವ ತುಂಬುವ ಗಾನದ ಸುಧೆ ನಮ್ಮ ಊರಿನವರೆಲ್ಲರಿಗೂ ತಲುಪುವಂತೆ ಮಾಡಿ" ಎಂದು ಹೇಳಿದಾಗ ನಿಜಕ್ಕೂ ನಾ ಮೂಕನಾದೆ.

ಇಡೀ ದೃಶ್ಯವನ್ನು ನಾ ಕಲ್ಪಿಸಿಕೊಂಡ ರೀತಿಯಲ್ಲಿಯೇ ಚಿತ್ರಿಸಿದ ಹೆಮ್ಮೆ ನನಗೆ.. ಅದನ್ನು ಮೆಚ್ಚಿ ಈ ಚಿತ್ರವನ್ನು ಹಾಡನ್ನು ಯಶಸ್ಸುಗೊಳಿಸಿದ ಕೀರ್ತಿ ಕರುನಾಡ ಚಿತ್ರರಸಿಕರಿಗೆ ಸಲ್ಲಬೇಕು.. :-)

ಇಷ್ಟು ಹೇಳಿ ಪುಟ್ಟಣ್ಣ ಸರ್ ೫೫೫ ನ ಕೊನೆ ದಂ ಎಳೆದರು.. ತಮ್ಮ ಕೈಗಡಿಯಾರ ನೋಡಿಕೊಂಡು ಕಣ್ಣು ಹೊಡೆದರು.. ೪೩೯ ಕ್ಷಣಗಳಾಗಿತ್ತು..

ಅಷ್ಟು ಹೊತ್ತಿಗೆ ಅಂಬಡೆ, ಮೆಣಸಿನಕಾಯಿ ಬಜ್ಜಿ ಎರಡು ಖಾಲಿಯಾಗಿದ್ದವು..

ಪುಟ್ಟಣ್ಣ ಸರ್ ಅವರಿಗೆ ಪ್ರವರ ಹೇಳಿ ಒಂದು ನಮಸ್ಕಾರ ಮಾಡಿ.. ಸಂತೃಪ್ತಿಯಿಂದ ಹೊರ ನೆಡೆದೆ..

ಒಮ್ಮೆ ತಿರುಗಿ ನೋಡಿದೆ.. ಪುಟ್ಟಣ್ಣ ಸರ್.. ಇನ್ನೊಂದು ೫೫೫ ಹಚ್ಚಿ ವಿಜಯದ ಸಂಕೇತವಾದ ಹೆಬ್ಬೆರಳನ್ನು ತೋರಿಸಿದರು..

ತಾಯಿ ಭುವನೇಶ್ವರಿ ವೀಣೆಯನ್ನು ಹಿಡಿದು ನುಡಿಸಿದಂತೆ.. ಹಾಡು ಕೇಳಿಸುತ್ತಿತ್ತು



ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ

ಸಾಮಗಾನಪ್ರಿಯ ಸಾಂಬರೂಪಿಣಿ
ಪಾಲಗಡಲ ಸ್ವರ ಪಂಚಮಧಾರಿಣಿ
ಸಾಕಾರ ಷಡ್ಜದ ಶರಧಿ ತರಂಗಿಣಿ
ಸಾಗರ ಸಂಗಮ ಸರಸ ವಿಹಾರಿಣಿ

ಶಿವತಾಂಡವದಾ ಢಮರುನಿನಾದ....
ನಾದ ಬ್ರಹ್ಮನ ಓಂಕಾರನಾದ...
ನಾದದೆ ಲೀನಾ ಆಗಮವೇದ
ನಾದ...ವೇದ ...ಶಿವೇ....
ನಾದ ವೇದ ಶಿವೆ ನಿನ್ನವಿನೋದ

ಸಂಗೀತಸುಧೆಯ ಚೈತನ್ಯಧಾರೆ
ಕಣ ಕಣ ನೀನೇ ಕರುಣಾ ಪೂರೆ
ನವ ಭಾವ ನವ ಜೀವ ನೀ ತುಂಬಿ ಬಾರೆ
ನವರಸವಾಹಿನಿ ನೀ ದಯೆ ತೋರೆ

ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ

(ಪುಟ್ಟಣ್ಣ ಅವರ  ಜನುಮದಿನದಂದು ಅವರ ನೆನಪಲ್ಲಿ ಕೆಲವು ಸಾಲುಗಳನ್ನು ಬರೆಯೋಣ ಎಂದುಕೊಂಡಾಗ ಮೂಡಿ ಬಂತು ಮೇಲಿನ ಕೆಲವು ಅಕ್ಷರಗಳು.. ಇದು ಕೇವಲ ನನ್ನ ಹೃದಯದಲ್ಲಿ ಮೂಡಿಬಂದ ಭಾವಕ್ಕೆ ಒಂದು ಕಾಲ್ಪನಿಕ ಕಥಾ ರೂಪ ಕೊಟ್ಟು ಬರೆದಿದ್ದೇನೆ.. )

ಪುಟ್ಟಣ್ಣ ಸರ್.. ನಿಮ್ಮ ಪ್ರತಿಭೆಗೆ ಏನೂ ಬರೆದರೂ ಅದು ಕಮ್ಮಿಯೇ.. ಆದರೂ ಒಂದು ನುಡಿ ನಮನ ಸಲ್ಲಿಸೋಣ ಎಂದು ಸ್ವಲ್ಪ ಸಲುಗೆ ತೆಗೆದುಕೊಂಡು ಜನುಮದಿನಕ್ಕೆ ಈ ರೀತಿಯ ಶುಭಾಷಯ ಕೋರಿದ್ದೇನೆ.. (ಕ್ಷಮೆ ಇರಲಿ)

Thursday, October 29, 2015

ಸ್ನೇಹದ ಅಮೃತ ಸಿಂಚನ ಮಾಡುವ ಅಮೃತ ಘಳಿಗೆ (1984)

ಸಮುದ್ರದಲ್ಲಿ ತೇಲುವ ಅನುಭವ ಎಷ್ಟು ಸೊಗಸೋ ಅಷ್ಟೇ ಭಯನಕವಾಗಿರುತ್ತೆ ದೈತ್ಯ ಅಲೆಗಳು ಸುತ್ತ ಮುತ್ತಲ ಸೃಷ್ಠಿಯನ್ನು ಆಪೋಶನ ಮಾಡುವಾಗ. ಆದರೆ ಆ ದೈತ್ಯ ಅಲೆಗಳಿಗೆ ಶಕ್ತಿ ಕೊಡುವುದು ಯಾವುದು ಗೊತ್ತೇ, ಕಡಲಲ್ಲಿ ಇರುವ ನೀರು ಮತ್ತು ಅದರ ಮೇಲೆ ಬೀಸುವ ಗಾಳಿ.

ನಿಜ ಅದರ ಒಡಲೊಳಗೆ ಇರುವ ನೀರು ದೈತ್ಯಾಕಾರ ತಾಳುತ್ತದೆ ಎಂದರೆ, ಅದರೊಳಗಿನ ಶಕ್ತಿ ನಮ್ಮ ಊಹೆಗೆ ನಿಲುಕದ್ದು. 

ಪುಟ್ಟಣ್ಣ ಕಣಗಾಲ್ ಅವರು ಮಾಮೂಲಿ ಎನ್ನುವ ಕಥೆಯನ್ನು ಕೂಡ ಅಸಾಧಾರಣ ರೀತಿಯಲ್ಲಿ ತೆರೆಯ ಮೇಲೆ ಬಡಿಸುತ್ತಿದ್ದುದು ಅವರ ಅಗಾಧ ಪ್ರತಿಭೆಯ ಶಕ್ತಿಯಿಂದ. ನಮ್ಮ ಕಣ್ಣಿಗೆ ಸಾಧಾರಣ ಎನ್ನಿಸುವುದನ್ನು ಅಷ್ಟೇ ವಿವರವಾಗಿ, ವಿಶಿಷ್ಟ ರೀತಿಯಿಂದ ಹೀಗೂ ನೋಡಬಹುದು ಎನ್ನುವುದನ್ನು ಕಳಿಸಿಕೊಟ್ಟ ಗುರುಗಳು ಅವರು. 

ಅಮೃತ ಘಳಿಗೆ ಈ ಚಿತ್ರದ ಕಥೆಯನ್ನು ಅವರ ಜೀವದ ಗೆಳೆಯ ಮೋಹನ್ ಕಂಪ್ಲಾಪುರ್ ಕೊಟ್ಟಾಗ ಅ ಪುಸ್ತಕದ ಮೇಲೆ ಇದ್ದ ಶಿರೋನಾಮೆ "ದೊಡ್ಡೇರಿ ವೆಂಕಟಗಿರಿ ರಾವ್ - "ಅವಧಾನ" ". ಅದನ್ನೇ ಸುಂದರ ಚಿತ್ರಕಥೆ ಮಾಡಿ, ಅದಕ್ಕೊಂದು ಸುಂದರ ತಾಣವನ್ನು ಹುಡುಕಿ, ಅಮೃತ ಘಳಿಗೆ ಎನ್ನುವ ಒಂದು ನಿತ್ಯ ನೂತನ ಚಿತ್ರವನ್ನು ನೀಡಿದರು. ಈ ಕಥೆ ಆ ಕಾಲದಲ್ಲಿ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿತ್ತು. ಪುಟ್ಟಣ್ಣ ಅವರ ಹುಡುಕಾಟದಲ್ಲಿ ಸಿಕ್ಕ ಇಂಥಹ ಕಥಾ ಮುತ್ತುಗಳು ಹೇರಳ. 

ಎಸ್ ಆರ್ ರಾಜನ್, ಭೀಮ ರಾವ್, ಕೆ ನಾಗರತ್ನ, ಪುಟ್ಟಣ್ಣ ಕಣಗಾಲ್ ತಂಡ ನಿರ್ಮಾಪಕರಾಗಿ ಈ ಚಿತ್ರವನ್ನು ಜಯಭೇರಿ ಫಿಲಂಸ್ ಲಾಂಛನದಲ್ಲಿ ತೆರೆಗೆ ತಂದರು. 

ಆರಂಭದಲ್ಲಿ ಪುಟ್ಟಣ್ಣ ಅವರ ಮಾತೃಶ್ರಿ ಅವರಿಗೆ ನಮನ ಸಲ್ಲಿಸುತ್ತಾ, ಶುರುವಾಗುವ ಈ ಚಿತ್ರದ ವಿಶೇಷ ಛಾಯಾಗ್ರಹಣ ಬಿ ಎಸ್ ಬಸವರಾಜ್ ಅವರದ್ದು. ಅದ್ಭುತ ಹಾಡುಗಳನ್ನು ಬರೆದದ್ದು ಜೀವದ ಗೆಳೆಯ ವಿಜಯನಾರಸಿಂಹ ಅದಕ್ಕೆ ಸಂಗೀತ ಕಿರೀಟ ತೊಡಿಸಿದವರು ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್. 

ಪುಟ್ಟಣ್ಣ ಅವರಿಗೆ ಕರುನಾಡಿನ ಪ್ರತಿಭೆಗಳನ್ನು, ಕರುನಾಡಿನ ಸುಂದರ ತಾಣಗಳನ್ನು ಪರಿಚಯಿಸುವ ಉತ್ಸಾಹ ಯಾವಾಗಲೂ ಇತ್ತು. ಅವರ ಚಿತ್ರಗಳ ಮೂಲಕ ಬೆಳಕಿಗೆ ಬಂದ ನಕ್ಷತ್ರಗಳು ಅನೇಕ ಅನೇಕ. ಈ ಚಿತ್ರದ ಮೂಲಕ ಕರುನಾಡಿಗೆ ಕೊಟ್ಟ ಉಡುಗೊರೆ ಬಿ ಆರ್ ಛಾಯ ಎನ್ನುವ ಕರುನಾಡಿನ ಮನೆಮಗಳಾದ ಗಾಯಕಿ. 

ಚುರುಕು ಸಂಭಾಷಣೆ, ಹಿತಮಿತವಾದ ಪದಗಳು ಪುಟ್ಟಣ್ಣ ಚಿತ್ರಗಳ ಆಸ್ತಿ, ಈ ಚಿತ್ರಕ್ಕೆ ಪದಗಳನ್ನು ಜೋಡಿಸಿದವರು ಬಿ ಎಲ್ ವೇಣು. ಜಗನ್ಮಾತೆಯ ದಿಗ್ದರ್ಶನದಲ್ಲಿ ಚಿತ್ರಕಥೆ, ನಿರೂಪಣೆ ಮತ್ತು ನಿರ್ವಹಣೆ ಪೂಜ್ಯ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರದ್ದು. 

ಪುಟಿಯುವ ಯೌವನದ ಉತ್ಸಾಹ ಕೆಲವೊಮ್ಮೆ ಎಂಥಹ ಹಾದಿಯನ್ನು ಹಿಡಿಯುತ್ತದೆ ಎನ್ನುವುದರ ಆರಂಭ ಈ ಚಿತ್ರದ ಆರಂಭಿಕ ದೃಶ್ಯದಲ್ಲಿ ಕಾಣುತ್ತದೆ. ಬುಗ್ಗೆ ಬುಗ್ಗೆಯಾಗಿ ದೋಣಿಯ ಮೋಟಾರಿನ ಕೆಳಗೆ ಉಕ್ಕುವ ನೀರು ಈ ಮಾತಿಗೆ ಸಾಕ್ಷಿ. 
ಆಧುನಿಕ ಪ್ರಪಂಚ ದಾಪುಗಾಲು ಇಡುತ್ತಾ ಸಾಗಿದಾಗ ಪ್ರಕೃತಿಯನ್ನು ಮನುಷ್ಯ ಹೇಗೆ ಕಬಳಿಸುತ್ತಾ ಹೋಗುತ್ತಾನೆ ಎನ್ನುವುದಕ್ಕೆ ಶರಾವತಿ ಹಿನ್ನೀರಿನ ಬಗ್ಗೆ ನಾಯಕಿ ಮಾತಲ್ಲಿ ಬರುವ ಆರಂಭಿಕ ಸಂಭಾಷಣೆ ಸಾಕ್ಷಿಯಾಗಿ ನಿಲ್ಲುತ್ತದೆ. 

ಶಾಲೆಯ ಕಡಿವಾಣದ ದಿನಗಳಿಂದ ಕಾಲೇಜು ಎನ್ನುವ ಸ್ವತಂತ್ರ ಎನ್ನುವ ಇನ್ನೊಂದು ಪರಿಧಿಯೊಳಗೆ ಹೋಗುವ ಹರೆಯದ ತುಡಿತವನ್ನು ಕೆಲವೇ ದೃಶ್ಯಗಳಲ್ಲಿ ಅಚ್ಚುಕಟ್ಟಾಗಿ ತಂದಿದ್ದಾರೆ. ನೋಡಿದ ತಕ್ಷಣ ರೂಪು, ವಯ್ಯಾರ ಅಥವಾ ಲಕ್ಷಣಗಳನ್ನು ಗಮನಿಸದೆ ಪ್ರೀತಿ ಎನ್ನುವ ಒಂದು ವಿಚಿತ್ರ ಭಾವಕ್ಕೆ ಬೀಳುವ ನಾಯಕ ಪಾತ್ರಧಾರಿ ರಾಮಕೃಷ್ಣ ಉತ್ತಮವಾಗಿ ಅಭಿನಯಿಸಿದ್ದಾರೆ. ನಾಯಕಿ ಪದ್ಮಾವಾಸಂತಿ ಮತ್ತೆ ಅಭಿನಯವನ್ನು ಸಾಣೆ ಹಿಡಿದಂತೆ ನಟಿಸಿದ್ದಾರೆ. ಇನ್ನೂ ಮೊದಲ ಪರಿಚಯ ಶ್ರೀಧರ್ ಗಂಭೀರ ಪಾತ್ರದಲ್ಲಿ ಮಿಂಚಿದ್ದಾರೆ. ಎಲ್ಲೂ ಅತಿರೇಕದ ಅಭಿನಯ ಅಥವಾ ದೃಶ್ಯಗಳನ್ನು ಕಟ್ಟಿ ಕೊಡದಿರುವುದು ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಪ್ರಮುಖ ಆಕರ್ಷಣೆ. ಹದವಾಗಿ, ನವಿರಾದ ಸಂಭಾಷಣೆಗಳು ಮತ್ತು ಅದಕ್ಕೆ ಬದ್ಧವಾಗಿ ನಿಲ್ಲುವ ದೃಶ್ಯ ಜೋಡಣೆ, ಪರಿಸರ ಇದು ಈ ಚಿತ್ರದ ಮತ್ತೊಂದು ಆಕರ್ಷಣೆ. ರಾಮಕೃಷ್ಣ ಒಬ್ಬರನ್ನು ಬಿಟ್ಟರೆ ಮಿಕ್ಕೆಲ್ಲಾ ಕಲಾವಿದರು ಅಷ್ಟೇನೂ ಬೆಳಕಿಗೆ ಬಂದು ಮಿಂಚಿದ ಪ್ರತಿಭೆಗಳಲ್ಲ. ಆದರೆ ಪ್ರತಿಯೊಬ್ಬರಲ್ಲೂ ಕಥೆಗೆ ಬೇಕಷ್ಟು ಅಭಿನಯ ಹೊಮ್ಮಿಸಿರುವ ರೀತಿ ಇಷ್ಟವಾಗುತ್ತದೆ.

ಸೂರ್ಯಾಸ್ತದ ಅನೇಕ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರುವ ಪುಟ್ಟಣ್ಣ, ಅದನ್ನು ಸರಿಯಾದ ದೃಶ್ಯಕ್ಕೆ ಒಪ್ಪವಾಗಿ ಜೋಡಿಸಿದ್ದಾರೆ.

ಮೊದಲ ಪ್ರೇಮವನ್ನು ನಿವೇದಿಸುತ್ತಾ ಮನಸ್ಸಲ್ಲೇ ರಮ್ಯ ಕಲ್ಪನೆ ಮಾಡಿಕೊಳ್ಳುವ ಹಾಡಾಗಿ "ಮಯೂರಿ ನಾಟ್ಯ ಮಯೂರಿ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಛಾಯ ಅವರ ಕಂಠ ಸಿರಿಯಲ್ಲಿ ಬರುತ್ತದೆ. ರಾಮಕೃಷ್ಣ ಅವರ ನೃತ್ಯ, ಪದ್ಮಾವಾಸಂತಿ ಅಭಿನಯ ಈ ಹಾಡಿನ ಮೆಚ್ಚತಕ್ಕ ಅಂಶ. ಶರಾವತಿ ಹಿನ್ನೀರಿನ ರಮ್ಯ ತಾಣವನ್ನು ಪರಿಚಯಿಸಿಕೊಡುತ್ತಾರೆ

ಪ್ರಣಯದ ಉತ್ತುಂಗ, ಮತ್ತು ಮನಸ್ಸಿನ ಮೇಲೆ ಹಿಡಿತ ಜಾರುವ ದೃಶ್ಯವನ್ನು ಹಾಡಾಗಿ "ಪಾರವತಿ ಪರಶಿವನ ಪ್ರಣಯ ಪ್ರಸಂಗ" ಹಾಡಿನಲ್ಲಿ ಮನಸ್ಸಿನ ಮೇಲೆ ಬೀರುವ ವಿಧ ವಿಧ ಭಾವಕ್ಕೆ ಒಪ್ಪುವಂತೆ ಬಣ್ಣ ಬಣ್ಣಗಳ ಬೆಳಕಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ ಇಕ್ಕೇರಿಯ ದೇಗುಲದಲ್ಲಿ. ಪುಟ್ಟಣ್ಣ ಅವರ ತಾಂತ್ರಿಕ ಜ್ಞಾನದ ಭವ್ಯ ಅನಾವರಣ.

ಮುಂದಿನ ವಿದ್ಯಾಭ್ಯಾಸಕ್ಕೆ ಹೊರಡುವ ನಾಯಕ, ಮೊದಲ ಕಾಗದವನ್ನು ತಲುಪಿಸಿದಾಗ ಅದನ್ನು ಓದುವ ನಾಯಕಿ, ಮತ್ತು ಆ ದೃಶ್ಯವನ್ನು ಉಯ್ಯಾಲೆಯಲ್ಲಿ ತೂಗಿದಂತೆ ಚಿತ್ರೀಕರಿಸಿದ್ದಾರೆ. ಅದನ್ನು ನಾಯಕಿಯ ದೇಹದಲ್ಲಿ ಆಗುವ ಬದಲಾವಣೆ ಮತ್ತು ನಾಯಕ ಹೊರಳಿದ ಪಥದಲ್ಲಿ ನಿಲ್ಲುವನು ಎನ್ನುವ ಉಪಮೆ ನೀಡಿದ್ದಾರೆ. ಬಿಸಿಗೆ ಕರಗಿದ ಮಂಜಿನಂತೆ ನಾಯಕನ ಪ್ರೇಮವೂ ಪ್ರೀತಿಯೂ ಅನುಮಾನಕ್ಕೆ ತಿರುಗುತ್ತೆ ಇದರ ಮುನ್ಸೂಚನೆ ಈ ದೃಶ್ಯದಲ್ಲಿ ಕಾಣುತ್ತದೆ.

ನಾಯಕಿ ತನ್ನ ಬವಣೆಯನ್ನು ತನ್ನ ಆತ್ಮೀಯ ಸ್ನೇಹಿತ ಶ್ರೀಧರ್ ಗೆ ಹೇಳಲು ಹೊರ ಕರೆಯುತ್ತಾಳೆ, ಆದರೆ ಸ್ನೇಹಿತನ ಮುಂದೆ ತಾನು ಕಾಲು ಜಾರಿದ್ದೇನೆ ಎಂದು ಹೇಳಲು ತೊಳಲಾಡುವ ದೃಶ್ಯವನ್ನು ಅಷ್ಟೇ ಅದ್ಭುತವಾಗಿ ಕ್ಯಾಮೆರ ಓಡಾಡುತ್ತಲೇ ಇರುವಂತೆ ತೋರಿಸಿದ್ದಾರೆ. ಶ್ರೀಧರ್ ಹತ್ತಿರ ಬಂದು ಏನು ಸಮಾಚಾರ ಎಂದಾಗ, ಕ್ಯಾಮೆರ ನಿಲ್ಲುತ್ತದೆ, ಅಂದರೆ, ಜೀವದ ಗೆಳೆಯ ಆತ್ಮ ವಿಶ್ವಾಸ ತುಂಬುತ್ತಾನೆ ಮತ್ತು ತನ್ನ ಎಲ್ಲಾ ಕಷ್ಟಗಳಿಗೆ ಸ್ಪಂಧಿಸುತ್ತಾನೆ ಎನ್ನುವ ಭರವಸೆ ಮೂಡಿದಾಗ ತೂಗಾಡುವ ಮನಸ್ಸು ಒಂದು ತಹಬದಿಗೆ ನಿಲ್ಲುತ್ತದೆ ಎನ್ನುವ ಮಾತನ್ನು ಈ ದೃಶ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.

ನಾಯಕಿಯ ಪರಿಸ್ಥಿತಿಗೆ ಪರಿಹಾರ ಎನ್ನುವಂತೆ ತಾನೇ ಮದುವೆ ,ಮಾಡಿಕೊಳ್ಳುವ ಶ್ರೀಧರ್, ತನ್ನ ತಾಯಿಗೆ ಹೇಳುವ ಮಾತು "ಯಾವತ್ತೂ ಯಾವ ಕಾರಣಕ್ಕೂ ಇವಳ ಮನಸ್ಸನ್ನು ನೋಯುವ ಮಾತನ್ನು ಆಡಬೇಡ" ಎಂದಾಗ ತಾಯಿ ಹೇಳುವ ಅದ್ಭುತ ಮಾತು "ಮಗ ಇಷ್ಟ ಪಟ್ಟು ಮದುವೆ ಮಾಡಿಕೊಂಡ ಹೆಣ್ಣನ್ನು ನಿಕೃಷ್ಟವಾಗಿ ಕಾಣುವಷ್ಟು ಕೆಟ್ಟ ತಾಯಿಯಲ್ಲ" ಎನ್ನುತ್ತಾಳೆ.

ಇದಕ್ಕೆ ವಿವರಣೆಯೇ ಬೇಡವೇ ಬೇಡ.

ಕರುನಾಡಿನ ರಮ್ಯತಾಣ ಶ್ರೀಧರ ತೀರ್ಥ ಇರುವ ವರದಹಳ್ಳಿ. ಇಲ್ಲಿ ಚಿತ್ರೀಕರಣ ಮಾಡಿದ್ದಾರೆ ಒಂದು ಅದ್ಭುತ ಹಾಡನ್ನು "ಹಿಂದೂಸ್ಥಾನವು ಎಂದೂ ಮರೆಯದ" ಜಯಚಂದ್ರನ್ ಹಾಡಿರುವ ರೀತಿ, ಆ ಸಾಹಿತ್ಯ ಅದ್ಭುತ. ಶ್ರೀಧರ್ ಈ ಹಾಡಿಗೆ ಉತ್ತಮ ಅಭಿನಯ ನೀಡಿದ್ದಾರೆ. ಮುಂದೆ ಇದೆ ಹಾಡನ್ನು ಬಿ ಆರ್ ಛಾಯ ಹಾಡಿರುವ ರೀತಿಯೂ ಸೊಗಸಾಗಿದೆ.

ಶ್ರೀಧರ್ ಪಾತ್ರ ಮರಣಹೊಂದಿದಾಗ, ಮುಗ್ಧ ಮಗು ಸ್ಮಶಾನದಲ್ಲಿ ಏನೂ ಮಾತಾಡದೆ ಅಥವಾ ಅಳಲು  ಗೊತ್ತಾಗದೆ ನಿಂತಿರುತ್ತದೆ. ಇಲ್ಲಿ ಯಾವುದೇ ಭಾವನಾತ್ಮಕ ಸಂಭಾಷಣೆ ಇರುವುದಿಲ್ಲ, ನಿಶ್ಯಬ್ಧ... ಅತ್ಯುತ್ತಮ ದೃಶ್ಯ ಇಡಿ ಚಿತ್ರದಲ್ಲಿ.

ಕಡೆಯ ಕೆಲ ದೃಶ್ಯದಲ್ಲಿ ರಾಮಕೃಷ್ಣ ತನ್ನ ತಪ್ಪಿನ ಅರಿವಾಗಿ ನಾಯಕಿಯನ್ನು ನೋಡಲು ಬಂದಾಗ, ನಾಯಕಿಯ ಮೊಗದಲ್ಲಿ ತನ್ನ ಬಾಳನ್ನು ನಾಶ ಮಾಡಿದ ಅವನನ್ನು ನೋಡಿದ ತಕ್ಷಣ ಕೋಪ ಆದರೆ ಕೆಲವು ಕ್ಷಣಗಳಲ್ಲಿ ಶಾಂತ ಸ್ವಭಾವದ ಅಭಿನಯ ಸೂಪರ್ ಸೂಪರ್ ಎನ್ನಿಸುತ್ತದೆ.

ಶ್ರೀಧರ್ ಬರೆದಿಟ್ಟ ಪತ್ರ ಮತ್ತು ಉಯಿಲನ್ನು ಓದುವ ರಾಮಕೃಷ್ಣ ಕೂತಿರುವ ಶರಾವತಿ ಹಿನ್ನೀರಿನ ದಡದಲ್ಲಿ ದೃಶ್ಯವನ್ನು ಪದೇ ಪದೇ ಹಿಂದಕ್ಕೆ ಮುಂದಕ್ಕೆ ಜೂಮ್ ಮಾಡುತ್ತಲೇ ಇರುತ್ತದೆ ದೃಶ್ಯ ಸಂಯೋಜನೆ, ನಾಯಕ ತನ್ನ ಗತ ಜೀವನದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು ಮತ್ತು ಅದಕ್ಕೆ ಒಂದು ಅವಕಾಶವಿದೆ, ಮತ್ತೆ ತನ್ನ ತಪ್ಪನ್ನು ಸರಿ ಪಡಿಸಿಕೊಳ್ಳಲಿಕ್ಕೆ ಸಾಧ್ಯವಿದೆ ಎನ್ನುವ ಅಭಿಪ್ರಾಯ ಮೂಡಿಬರಲು ಸಹಾಯ ಮಾಡುತ್ತದೆ.


ಪುಟ್ಟಣ್ಣ ಕಣಗಾಲ್ ಮತ್ತೆ ತಮ್ಮ ಜಾದೂವನ್ನು ತೋರಿಸಿದ ಚಿತ್ರ ಇದು. ಸುಂದರ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿರೂಪಣೆ ಮಾಡಿರುವ ರೀತಿಗೆ ಮನಸ್ಸಲ್ಲೇ ನಮನ ಸಲ್ಲಿಸುತ್ತೇನೆ. 

Friday, October 16, 2015

ಋಣ ಮುಕ್ತಳು - ಒಂದು ವಿಭಿನ್ನ ಅನುಭವ (1984)

ಒಂದು ಮಹಾನ್ ಚೇತನ ಅಮೋಘ ಚಿತ್ರಗಳನ್ನು ನೀಡುತ್ತಾ ನೀಡುತ್ತಾ ಬಸವಳಿದಾಗ ಮತ್ತೆ ಅದಕ್ಕೆ ಚೈತನ್ಯ ನೀಡುವುದೇ ಮತ್ತೊಂದು ಪರಿಶ್ರಮ ಬೇಡುವ ಚಿತ್ರ.

ಹೌದು ಈ ಚಿತ್ರವನ್ನು ನಾ ಇದುವರೆಗೂ ನೋಡೇ ಇರಲಿಲ್ಲ. ಯಾವಾಗಲೂ ಈ ಚಿತ್ರ ದೂರದರ್ಶನದಲ್ಲಿ ಮೂಡಿ ಬಂದರೂ ಬರಿ ಅಂತಿಮ ಕ್ಷಣವನ್ನು ಮಾತ್ರ ನೋಡಿದ್ದೇ.  ಭಾರತಿ ತನ್ನ ಮೊಗದಲ್ಲಿ ಯಾವುದೇ ಭಾವನೆ ತೋರದೆ ನಿಧಾನವಾಗಿ ಆಶ್ರಮವಾಸಿಗಳ ಜೊತೆಯಲ್ಲಿ ನಿರ್ಮಲ ಎನ್ನಿಸುವ ಶ್ವೇತ ವಸ್ತ್ರಧಾರಿಯಾಗಿ ಹೆಜ್ಜೆ ಹಾಕುತ್ತಾ ಹೋಗುವುದು, ಮತ್ತು ರಾಮಕೃಷ್ಣ ತನ್ನ ಹೆತ್ತ ತಾಯಿಯನ್ನು ನೋಡುತ್ತಾ ನಿಲ್ಲುವುದು ಅವರ ಮೊಗದ ಮೇಲೆ ಒಂದು ರೀತಿಯ ಆತಂಕ ಮತ್ತು ತನ್ನ ಮಾತೆ ತನಗೆ ನೆಮ್ಮದಿ ಸಿಗುವ ತಾಣವನ್ನು ಅರಸಿಕೊಂಡ ಒಂದು ಸಂತೋಷ. 

ಕಣಗಾಲ್ ಕ್ರಿಯೇಷನ್ಸ್ ಲಾಂಛನದಲ್ಲಿ ಪುಟ್ಟಣ್ಣ ಕಣಗಾಲ್ ಪರಿವಾರದವರೊಡನೆ ಸೇರಿ ತಯಾರಿಸಿದ ಚಿತ್ರ ಇದು. ಶ್ರೀಮತಿ ಅನುಪಮ ನಿರಂಜನ್ ರವರ "ಋಣ" ಎನ್ನುವ ಕಾದಂಬರಿ ಆಧಾರಿತ ಈ ಚಿತ್ರ ಮೊದಲಿಂದ ಕಡೆಯತನಕ ಏರು ಪೆರಿಲ್ಲದೆ ನೋಡಿಸಿಕೊಂಡು ಹೋಗುತ್ತದೆ. 

ಚಿತ್ರದ ಹೆಸರನ್ನು ತೋರಿಸುವಾಗ ಒಂದು ಪುಸ್ತಕದಲ್ಲಿ  ಪ್ರತಿ ಹಾಳೆಯನ್ನು ತಿರುವು ಹಾಕುತ್ತ ಹೋದಂತೆ ತಾರಾಗಣವನ್ನು ಪರಿಚಯ ಮಾಡಿಕೊಡುತ್ತಾರೆ. ನಮಗೆ ಕಾಣದ ನರಕಲೋಕದಲ್ಲಿ ಚಿತ್ರಗುಪ್ತ ಪ್ರತಿ ಜೀವಿಯ ತಪ್ಪು ಒಪ್ಪುಗಳನ್ನು ಅವಲೋಕಿಸುತ್ತಾ ಪಡೆದದ್ದು, ಕಳೆದದ್ದು ಇವುಗಳ ತುಲನೆ ಮಾಡಿ ಯಮಧರ್ಮ ಶಿಕ್ಷೆ ಕೊಡಲು ಅಹವಾಲು ನೀಡುವಂತೆ ತೋರುವ ದೊಡ್ಡ ಪುಸ್ತಕದ ಹಾಳೆಗಳಂತೆ ಈ ದೃಶ್ಯ ಗೋಚರಿಸುತ್ತದೆ. ಪುಟ್ಟಣ್ಣ ಪ್ರತಿ ಚಿತ್ರವನ್ನು  ಆರಂಭಿಸುವ ರೀತಿ ಯಾವಾಗಲೂ ವಿಭಿನ್ನ. 

ಸಂಭಾಷಣೆಯ ಜವಾಬ್ಧಾರಿಯನ್ನು ಕುಣಿಗಲ್ ನಾಗಭೂಷಣ್ ಜೊತೆ ಹಂಚಿಕೊಂಡು, ಚಿತ್ರಕಥೆ ಬರೆದು ನಿರೂಪಣೆ ಮಾಡಿ ಜಗನ್ಮಾತೆಯ ದಿಗ್ಧರ್ಶನದಲ್ಲಿ ಚಿತ್ರ ಮೂಡಿಸಿದ್ದಾರೆ. ಅವರ ಕನಸಿಗೆ ಕಣ್ಣಾಗಿ ಬರುವುದು ಎಸ್ ಮಾರುತಿರಾವ್ ಅವರ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗೆ ಜೀವ ತುಂಬುವ ಸಂಗೀತ ಹೊಣೆ ವಿಜಯಭಾಸ್ಕರ್ ಅವರದ್ದು. 

ಮನುಜ ತಾನು ಮಾಡಿದ ಪಾಪ ಪುಣ್ಯ ಇವುಗಳನ್ನು ಇಲ್ಲೇ ಒಪ್ಪ ಮಾಡಿ ಹೋಗುತ್ತಾನೆ ಎನ್ನುವ ನೀತಿಯ ತಳಹದಿ ಈ ಚಿತ್ರದಲ್ಲಿದೆ. ಹಳ್ಳಿಯಲ್ಲಿ ಹಾಯಾಗಿ ಇರಬಹುದಾದ ಮನೆಯ ಯಜಮಾನ ಹಣದ ಆಮಿಷಕ್ಕೆ ಒಳಗಾಗಿ ಪಟ್ಟಣಕ್ಕೆ ಬಂದು, ಆ ಪಟ್ಟಣದ ರೂಪು ರೇಶೆಗಳಿಗೆ ತಕ್ಕಂತೆ ಅನೈತಿಕತೆಯಿಂದ ಹಣ ಸಂಪಾದಿಸುವುದು, ಇದರ ಜೊತೆಯಲ್ಲಿ ಇವನ ಈ ಸಾಹಸ ಮಕ್ಕಳ ಮೇಲೆ ಪರಿಣಾಮ ಬೀರುವುದು ಸುಂದರವಾಗಿ ಚಿತ್ರಿಕೃತವಾಗಿದೆ. 

ಬುದ್ಧಿವಂತ ಮೊದಲನೇ ಮಗುವನ್ನು  ಎರಡನೇ ಮಗುವಿನ ಮುಂದೆ ಹೋಗಲಿ, ಈ ಚಿಕ್ಕ ಮಗುವಿನ ಮನದಲ್ಲಿ ರೋಷ ದ್ವೇಷ ತುಂಬಿ ಸಮಾಜಕ್ಕೆ ಒಂದು ರೀತಿಯ ಪಿಡುಗು ಎನ್ನಿಸುವಂತಹ ಪ್ರಜೆ ನೀಡುವುದರಲ್ಲಿ ಅಪ್ಪನ ಪಾತ್ರಧಾರಿ ಸಫಲ ಆಗುತ್ತಾರೆ. 
ಇದರ ಜೊತೆಯಲ್ಲಿ ಕ್ಷಣಿಕ ಆಸೆಗೆ ಬಲಿಯಾಗಿ ಮನೆಕೆಲಸದ ಹುಡುಗಿಯ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡು ಒಂದು ಮಗುವಿನ ಜನನಕ್ಕೆ ಕಾರಣವಾಗುವಂಥಹ ವಿಚಿತ್ರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುತ್ತಾನೆ. ಆ ಮನೆಗೆಲಸದ ಹುಡುಗಿ ಬೇರೆ ಮದುವೆ ಮಾಡಿಕೊಂಡರೂ, ಅಲ್ಲಿ ಸುಖ ಕಾಣದೆ ಗಂಡನನ್ನು ಕಳೆದುಕೊಂಡು, ಆ ದುಃಖದಲ್ಲಿಯೇ ತನ್ನ ಅನೈತಿಕ ಮಗುವನ್ನು ಜತನಮಾಡುವ ಪಾತ್ರ. 

ಮಗು ಒರಟು ಎಂದು ಗೊತ್ತಿದ್ದರೂ, ತಾಯಿ ಹೃದಯ ಮಿಡಿಯುತ್ತದೆ, ಬೇರೆಯವರ ಹತ್ತಿರ ಒರಟು ಒರಟಾಗಿ ಮಾತಾಡಿದರೂ ತನ್ನ ತಾಯಿಗೋಸ್ಕರ ಮಿಡಿಯುವ ಮಗು. ಇವರೆಡರ ಭಾವನಾತ್ಮಕ ತಾಕಲಾಟ ಸುಂದರವಾಗಿ ಕೆಲವು ದೃಶ್ಯಗಳಲ್ಲಿ ಭಿತ್ತರಗೊಂಡಿದೆ. 

ಅದರಲ್ಲೂ, ಜಗಳ ಮಾಡಿಕೊಂಡು ಮನೆಬಿಟ್ಟು ಹೋದ ಮಗನನ್ನು ನೆನೆದು, ಅಯ್ಯೋ ನಾ ತಪ್ಪು ಮಾಡಿದೆ, ಅವನನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಹಲಬುವ ಅಪ್ಪ, ಮತ್ತು ಅಕಾಲ ಮರಣಕ್ಕೆ ತುತ್ತಾಗಿ, ಕಡೆಯಲ್ಲಿ ತನ್ನ ಮಗನನ್ನು ನೋಡಬೇಕು ಎಂದು ಬಯಸಿ, ಮಗ ಬರುವ ಮುನ್ನ ಇಹಲೋಕ ತ್ಯಜಿಸಿದ ಮೇಲೆ, ಸುಮಾರು ಒಂದು ಮೂವತ್ತು ಸೆಕೆಂಡ್ ಏಕದಂ ಮೌನ. ತಾಯಿ ನೋಡಿದೆಯ ಮಗನೆ ನಿನ್ನ ಅಪ್ಪನನ್ನು ಎಂದಾಗ, ಮಗ ದೊಡ್ಡದಾಗಿ ಬಾಯಿ ತೆಗೆದು ಅಳುವ ಮೂಕ ದೃಶ್ಯ, ಇಡಿ ಚಿತ್ರದಲ್ಲಿ ಪುಟ್ಟಣ್ಣ ಅವರ ಕೈಚಳಕ ಕಾಣಿಸುವ ದೃಶ್ಯ ಇದು. 

ಕೆಲವೇ ಕೆಲವು ಪಾತ್ರಗಳು, ಆದರೆ ಎಲ್ಲರೂ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಭಾರತಿ, ಸುಂದರಕೃಷ್ಣ ಅರಸ್, ರಾಮಕೃಷ್ಣ, ಭರತ್ ಭಾಗವತರ್, ಆಶಾಲತ, ಮಾ, ಹಿರಣ್ಣಯ್ಯ, ರಾಜಾನಂದ್, ಪದ್ಮಾವಾಸಂತಿ ಎಲ್ಲರೂ ಎಷ್ಟು ಬೇಕೋ ಅಷ್ಟು ಅಭಿನಯ ನೀಡಿದ್ದಾರೆ. 

"ಆಕಾಶದುದ್ದಾದ ಮಾಮರವು ಚಂದ" ಮನುಜನ ಇಬ್ಬಗೆ ನೀತಿಯನ್ನು ಸುಂದರ ಹೋಲಿಕೆಗಳ ಮೂಲಕ ವಿಜಯನಾರಸಿಂಹ ಬರೆದ ಹಾಡನ್ನು ಎಸ್ ಜಾನಕಿ ಹಾಡಿದ್ದಾರೆ. 

"ದೇವರ ಒಲಿಸಲು" ತಾಯಿಯ ಮಹತ್ವವನ್ನು ಬಿಂಬಿಸುವ ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಜೀವ ತುಂಬಿದ್ದಾರೆ 

"ಕಣ್ಣಾರೆ ಕಂಡೆ ನಾ" ವಾಣಿ ಜಯರಾಂ ಅವರ ಕಂಚಿನ ಕಂಠ ಇಷ್ಟವಾಗುತ್ತದೆ. 



ಕಥಾವಸ್ತು ಆ ಕಾಲಕ್ಕೆ ಒಂದು ಚೂರು ಮುಂದಾಗಿತ್ತು ಅನ್ನಿಸುತ್ತದೆ. ಕೆಲವೊಮ್ಮೆ ಸಾಗರ ಪ್ರಶಾಂತವಾಗಿದ್ದ ಸಾಗರ ಚಂಡಮಾರುತದ ಮುನ್ಸೂಚನೆ ನೀಡುವಂತೆ, ಪುಟ್ಟಣ್ಣ ಕಣಗಾಲ್ ತಮ್ಮ ಮುಂದಿನ ಚಿತ್ರ ರತ್ನಕ್ಕೆ ಈ ಚಿತ್ರದಿಂದಲೇ ಅನಿಯಾಗುತ್ತಿದ್ದರೋ ಏನೋ ಎನ್ನಿಸಿತು ನನಗೆ. 

Saturday, October 3, 2015

ಮನದ ಸರೋವರವನ್ನು ಕೆದಕುವ ಮಾನಸ ಸರೋವರ (1982)

ಈ ಸಿನಿಮಾ ತುಂಬಾ ಕಾಡಿತ್ತು ಆ ಕಾಲದಲ್ಲಿಯೇ. ಮೊದಲ ಬಾರಿಗೆ ಈ ಚಿತ್ರವನ್ನು ದೂರದರ್ಶನದಲ್ಲಿ ನೋಡಿದಾಗ ನನಗೆ ಸುಮಾರು ಹದಿನೈದು ವರ್ಷಗಳು ಇರಬಹುದು. 

ಆ ವಯಸ್ಸು ಒಂದು ರೀತಿಯ ಬದಲಾವಣೆಯ ಪರ್ವವಾಗಿರುತ್ತದೆ. ಮೊದಲಿಂದಲೂ ಸಿನಿಮಾ ನೋಡುವ ಮತ್ತು ಅದರ ಒಳಗೆ ಕೂತು ನೋಡುವ ಒಂದು ವಿಚಿತ್ರ ರೋಗವಿದ್ದದರಿಂದ ಬಹುಶಃ ಈ ಚಿತ್ರ ಇನ್ನಷ್ಟು ಕಾಡಿತ್ತು ಎನ್ನಿಸುತ್ತದೆ.  

ಅದಾದ ಮೇಲೆ ಹಲವಾರು ಬಾರಿ ಈ ಚಿತ್ರವನ್ನು ನೋಡಿದ್ದೇನೆ. ಪ್ರತಿಬಾರಿಯೂ ನನಗೆ ಮೊಟ್ಟಮೊದಲು ನೋಡಿದ ಅನುಭವ ಹೇಗೆ ಇರುತ್ತದೆಯೋ ಅದೇ ಅನುಭವ. ಒಂದೂ ಚೂರು ಬದಲಾವಣೆ ಇಲ್ಲ. 
ಹಲವಾರು ಚಿತ್ರಗಳು ಪ್ರತಿ ಬಾರಿ ನೋಡಿದಾಗಲೂ ಹಲವಾರು ರೀತಿಯಲ್ಲಿ ಕೈಗೆ ಎಟುಕುತ್ತದೆ, ಆದರೆ ಈ ಚಿತ್ರ ಪ್ರತಿ ಸಾರಿ ನೋಡಿದ ಮೇಲೆ ಇನ್ನಷ್ಟು ಆಳಕ್ಕೆ ಇಳಿಯುತ್ತದೆ ಮತ್ತು ಅದೇ ಮೊದಲ ಅನುಭವವನ್ನು ಕಣ್ಣ ಮುಂದೆ ತಂದಿಡುತ್ತದೆ. 

ಚಿತ್ರದ ಆರಂಭ ನನಗೆ ಇನ್ನೂ ಕಾಡುತ್ತದೆ.  ಮನಸ್ಸಿನ ಬಗ್ಗೆ ಒಂದೆರಡು ವಾಕ್ಯಗಳು ಮನಸ್ಸಿಗೆ ತಾಕಿದರೆ, ಹೂವಿನ ಜೊತೆಯಲ್ಲಿ ಹೆಸರನ್ನು ತೋರಿಸುತ್ತಾ, ಪ್ರತಿ ಬಾರಿಯೂ ಅಲೆಗಳು ಬಂದು ಆ ಅಕ್ಷರಗಳನ್ನು ಅಳಿಸಿಹಾಕುವಂತಹದು, ನಮ್ಮ ಜೀವನದಲ್ಲಿ ಎಷ್ಟೋ ಮಂದಿ ಬರುತ್ತಾರೆ, ನೆನಪು ಉಳಿಸುತ್ತಾರೆ, ಅಳಿಸುತ್ತಾರೆ, ಆದರೆ ಕಾಲ ಮುಂದೆ ಸಾಗುತ್ತಲೇ ಇರುತ್ತವೆ, ಅಲೆಗಳು ಬರುತ್ತಲೇ ಇರುತ್ತವೆ ಎಂಬ ಸೂಕ್ಷ್ಮ ಸಂದೇಶ ಹೊತ್ತು ತರುತ್ತದೆ. 

ಹುಣ್ಣಿಮೆಯ ಚಂದ್ರ, ಆವ ಚೆಲ್ಲುವ ಬೆಳದಿಂಗಳು, ಪ್ರೀತಿ ಪ್ರೇಮ ಪ್ರಣಯ ಇವುಗಳ ಉಗಮಸ್ಥಾನ, ಚಂದ್ರನ ಕಿರಣಗಳು ಮನಸ್ಸಿನ ಮೇಲೆ ಬಲು ಪ್ರಭಾವ ಬೀರುತ್ತದೆ. ಕಾವ್ಯಮಯವಾದ ಮನಸ್ಸಿನ  ನಾಯಕ ಆ ಬೆಳದಿಂಗಳ ಚಂದ್ರನ ಬೆಳಕಲ್ಲಿ ಕೂತು, ತೂಗಾಡುವ ಮನಸ್ಸನ್ನು ಪ್ರತಿಬಿಂಬಿಸುವ, ಉಯ್ಯಾಲೆಯಲ್ಲಿ ಜೀಕುತ್ತಾ ಕೂತಿದ್ದಾಗ ಏನೋ ಒಂದು ಅದ್ಭುತ ವಿಷಯ ಹೊಳೆಯುತ್ತದೆ. 

ಅದನ್ನು ಅಷ್ಟೇ ಪ್ರೀತಿಯಿಂದ ತನ್ನ ಮಡದಿಗೆ ಹೇಳಬಂದಾಗ ಆಕೆ ಭಾವನಾತ್ಮಕವಾಗಿ ಸ್ಪಂದಿಸದೇ, ವ್ಯಾವಹಾರಿಕ ಜಗತ್ತಿನ ಸೂತ್ರದಲ್ಲಿ ಬಂಧಿಯಾಗಿ, ತನಗೆ ಲಾಭ ತರದ ಈ ಕಾವ್ಯಮಯ ಭಾಷೆ ಅನಗತ್ಯ ಎನ್ನುವ ಮಾತುಗಳನ್ನು ಹೇಳುತ್ತಾಳೆ. 

ಅಲ್ಲಿಂದ ಶುರು ನಾಯಕನ ಮನಸ್ಸು ಅವನ ಜೊತೆ ಮಾತಾಡಲು ಅನುವಾಗುತ್ತದೆ. ಅದ್ಭುತ ದೃಶ್ಯ ಕಲ್ಪನೆ. ನಮ್ಮ ಮನಸ್ಸು ನಮಗೆ ಮಾರ್ಗದರ್ಶಿ ಎನ್ನುವ ಮಾತು ಎಷ್ಟು ನಿಜ. 

ಮನಸ್ಸು ಒಂದು ಕಡೆಯಲ್ಲಿ ಸಹಾನುಭೂತಿ ತೋರಿದರೆ, ತನ್ನ ಮನದಲ್ಲಿ ಕೂತ ಮಡದಿಯಿಂದ ತಿರಸ್ಕಾರ ಸಾಕು ಎನ್ನಿಸಿ ಮನೆ ಬಿಟ್ಟು ಹೊರಡುತ್ತಾನೆ. ಆಗ ಇನ್ನೊಂದು ಅದ್ಭುತ ಜಗತ್ತು ನಾಯಕನ ಮನಸ್ಸಿಗೆ ಸಿಗುತ್ತದೆ. 

ಜಿ ಎಸ್ ಶಿವರುದ್ರಪ್ಪ ಅವರ ಅದ್ಭುತ ಕವಿತೆ "ವೇದಾಂತಿ ಹೇಳಿದನು" ಪಿ ಬಿ ಶ್ರೀನಿವಾಸ್ ಅವರ ಸಿರಿಕಂಠದಲ್ಲಿ ಅಷ್ಟೇ ಅದ್ಭುತವಾಗಿ ಮೂಡಿ ಬಂದಿದೆ. ಕಾಡಿನಲ್ಲಿ ಕಾರಿನಲ್ಲಿ ಹೋಗುತ್ತಾ ಜೋರಾಗಿ ಈ ಹಾಡನ್ನು ಕೇಳಿದರೆ ಸಿಗುವ ಆನಂದ ಹೇಳಲಿಕ್ಕೆ ಆಗೋಲ್ಲ (ನಾ ಹಲವಾರು ಬಾರಿ ಒಬ್ಬನೇ ಪಯಣ ಮಾಡುವಾಗ.. ಈ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕುವುದು ಉಂಟು) 
ಈ ಹಾಡಿನಲ್ಲಿರುವ ಸತ್ವವನ್ನು ವಿಜಯಭಾಸ್ಕರ್ ಸಂಗೀತದಲ್ಲಿ ಅದ್ದಿ ಅದ್ದಿ ತೆಗೆದಿದ್ದಾರೆ. ಎಷ್ಟು ಬಾರಿ ಕೇಳಿದರೂ ಬೋರ್ ಅನ್ನಿಸಿದ ಅನೇಕ ಹಾಡುಗಳಲ್ಲಿ ಇದು ಒಂದು. ಈ ಹಾಡನ್ನು ಚಿತ್ರೀಕರಿಸಿದ ರೀತಿಯೂ ಸುಂದರ. 

ಒಂದು ರಕ್ಷಾ ಬೇಲಿ ಇರುವ ಮನೆಯಿಂದ ಹೊರಡುವ ನಾಯಕನ ಮನೆಯ ಎದುರು ದಾರಿಗಳು ಕವಲಾಗಿ ಎರಡಾಗುತ್ತವೆ. ನಾಯಕನ ಬಾಳಿನ ಪಥದಲ್ಲೂ ಇಬ್ಬಗೆಯ ಹಾದಿ ಎದುರಿಗೆ ಇದೆ ಎನ್ನುವ ಸೂಚ್ಯ ಅದು. 
ಅಲ್ಲಿಂದ ಹೊರಡುವ ಅವನ ಕಾರು, ತಂಪಾದ ಹಸಿರು ಕಾಡಿನ ಮಧ್ಯೆ ಸಾಗುವುದು, ಹಿನ್ನೆಲೆಯಲ್ಲಿ ಹಾಡು ಬರುವುದು ವಾಹ್ ಎನ್ನಿಸುತ್ತದೆ. ಎಂಥಹ ಸಮಸ್ಯೆಗೂ ಪ್ರಕೃತಿಯೇ ಅದ್ಭುತ ವೈದ್ಯ ಎನ್ನುವುದರ ಸುಂದರ ನಿರೂಪಣೆಯ ಭಾವ ಈ ಹಾಡಿನಲ್ಲಿ ಇದೆ. ಬೇಲಿಯಿರುವ ಮನೆಯಿಂದ, ವಿಹಂಗಮ ಪ್ರಕೃತಿಯ ಮಧ್ಯೆ ಯಾವುದೇ ಬಂಧನವಿರದ ಮುಕ್ತವಾಗಿರುವ ಮನೆಗೆ ಬರುತ್ತಾನೆ. ಈ ಹಾಡು ನೋಡಬೇಕು ಕೇಳಬೇಕು ಆಗಲೇ ಅದರ ಸತ್ವ ಅರಿವಾಗುವುದು. 

ಮಿತ್ರವೃಂದ ಲಾಂಛನದಲ್ಲಿ ತಯಾರಾದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ವಹಣೆ ಮತ್ತು ನಿರೂಪಣೆ ಪುಟ್ಟಣ್ಣ ಕಣಗಾಲ್ ಅವರದ್ದು. ತನ್ನ ಸಾಧನೆ ಏನೂ ಅಲ್ಲ, ಅದಕ್ಕೆಲ್ಲ ಕಾರಣ ಜಗನ್ಮಾತೆ ಎನ್ನುವ ತತ್ವವನ್ನು ದಿಗ್ದರ್ಶನ - ಜಗನ್ಮಾತೆ ಎಂದು ತೋರುವ ಮೂಲಕ, ತಾನು ಯಶಸ್ಸಿನ ಶಿಖರದಲ್ಲಿದ್ದರೂ ಅದಕ್ಕೆ ಕಾರಣ ಕಾಣದ ಆ ಮಹಾನ್ ಶಕ್ತಿ ಎಂಬ ಅರಿವು ಮೂಡಿಸುತ್ತಾರೆ. 

ಮೂರು ಮಂದಿ ಮಿತ್ರರ ಜೊತೆಗೂಡಿ (ವರ್ಗಿಸ್, ಕಮಲಾಕರ್, ಗೀತ ಶ್ರೀನಾಥ್) ನಿರ್ಮಿಸಿದ ಚಿತ್ರವಿದು. ಚುರುಕಾದ ಸಂಭಾಷಣೆ ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಆಸ್ತಿ, ಈ ಚಿತ್ರದಲ್ಲಿ ಆ ಹೊಣೆ ಹೊತ್ತವರು ಟಿ ಎನ್ ಸೀತಾರಾಮ್. ಪುಟ್ಟಣ್ಣ ಅವರ ಅನೇಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಬಿ ಎಸ್ ಬಸವರಾಜ್ ಮತ್ತೊಮ್ಮೆ ಪುಟ್ಟಣ್ಣ ಅವರ ಭಾವಗಳಿಗೆ ತಕ್ಕಂತೆ ದೃಶ್ಯಗಳನ್ನು ಚಿತ್ರೀಕರಿಸಲು ಜೊತೆಯಾಗಿದ್ದರು.  

ಒಂದು ಅಡಿಗೆ ಸಿದ್ಧಮಾಡುವಾಗ, ಅಥವಾ ಯಾವುದೇ ಕೆಲಸ ಮಾಡುವಾಗ, ಅದರ ಬಗ್ಗೆ ಪುಟ್ಟ ಪುಟ್ಟ ವಿವರಗಳು, ವಿಧಾನಗಳು ಇವೆಲ್ಲಾ ಸರಿಯಾಗಿ ಸಿಕ್ಕಿ, ಅದನ್ನು ಹೇಳಿಕೊಡುವ ಒಬ್ಬರು ಜೊತೆಗಿದ್ದರೆ ಪವಾಡ ಸೃಷ್ಟಿಸಬಹುದು ಎನ್ನುತ್ತದೆ ಮಾತು. ಅದನ್ನು ಈ ಚಿತ್ರದಲ್ಲಿ ನೋಡಬಹುದು. ಪ್ರತಿಯೊಬ್ಬ ಕಲಾವಿದರು ಪಾತ್ರಗಳಿಗೆ ಎಷ್ಟು ಬೇಕು ಅಷ್ಟೇ ಅಭಿನಯ ನೀಡಿದ್ದಾರೆ ಅಥವಾ ಪಾತ್ರ ಬೇಡುವಷ್ಟು ಅಭಿನಯ ನೀಡಿದ್ದಾರೆ. 

ಅಡಿಗೆ ಕೆಲಸಮಾಡಿಕೊಂಡು ಮನೆ ನೋಡಿಕೊಳ್ಳುವ ಪಾಂಡು ಅಂಕಲ್ ಪಾತ್ರ, ನಾಯಕನ ತೋಟವನ್ನು ತಮ್ಮ ತಂಗಿಯನ್ನು ಮುಂದೆ ಇಟ್ಟುಕೊಂಡು ಕಬಳಿಸಲು ಹೊಂಚು ಹೂಡುವ ಲಂಬಾಣಿ ಹುಡುಗರ ಪಾತ್ರ, ಲಂಬಾಣಿ ಹುಡುಗಿಯಾಗಿ ಅಭಿನಯಿಸಿರುವ ವೈಶಾಲಿ ಕಾಸರವಳ್ಳಿ, ನಾಯಕಿಯ ತಂದೆಯಾಗಿ ಬರುವ ಜಿ ವಿ ಶಿವಾನಂದ್.. ಹೀಗೆ ಎಲ್ಲರಲ್ಲಿಯೂ ತಮಗೆ ಬೇಕಾದಷ್ಟೇ ಅಭಿನಯ ಪಡೆಯುವಲ್ಲಿ ಯಶಸ್ವೀ ಆಗಿದ್ದಾರೆ ಪುಟ್ಟಣ್ಣ ಕಣಗಾಲ್. 

"ಹಾಡು ಹಳೆಯದಾದರೇನು" ಮತ್ತೊಮ್ಮೆ ಜಿ ಎಸ್ ಶಿವರುದ್ರಪ್ಪ ಅವರ ಕವಿತೆಯನ್ನು ಸಂಗೀತದಲ್ಲಿ ಅಳವಡಿಸಿರುವುದು ಇಷ್ಟವಾಗುತ್ತದೆ. ವಾಣಿ ಜಯರಾಂ ಭಾವ ತುಂಬಿ ಹಾಡಿದ್ದಾರೆ, ಈ ಹಾಡನ್ನು ಚಿತ್ರಿಸಿರುವ ರೀತಿ ಇಷ್ಟವಾಗುತ್ತದೆ. ಹಸಿರಿನ ಮಧ್ಯೆ ಕಂಗೊಳಿಸುವ ಹಿತ ಮಿತ ಬೆಳಕಿನಲ್ಲಿ ಸೂಪರ್ ಎನ್ನಿಸುತ್ತದೆ. 

ನಾಯಕಿಗೆ ಚಿಕಿತ್ಸೆ ನೀಡುವಲ್ಲಿ ಬೇಕಾದ ತಾಳ್ಮೆ, ಸಂಯಮ, ಹಿತ ಮಿತ ನುಡಿಗಳು, ಮಗುವನ್ನು ಪಾಲಿಸುವ ಅಮ್ಮನಂತಹ ಪಾತ್ರದಲ್ಲಿ, ಕೆಲವೊಮ್ಮೆ ಮುಗ್ಧ ಮಗುವೆ ಆಗುವ ಪಾತ್ರದಲ್ಲಿ ಶ್ರೀನಾಥ್ ಸ್ಮರಣೀಯ ಅಭಿನಯ ನೀಡಿದ್ದಾರೆ. ಮಾನಸಿಕ ರೋಗತಜ್ಞನ ಪಾತ್ರದಲ್ಲಿ ಅವರ ಅಭಿನಯ ಅದ್ಭುತ. ಆ ಪಾತ್ರಕ್ಕೆ ಬೇಕಾದ ಆಂಗೀಕ ಅಭಿನಯ, ವೇಷ ಭೂಷಣ, ತಾನು ಸರಿ ಎನ್ನುತ್ತಾ ಮಾತಾಡುವ ಶೈಲಿ ಬಹುಕಾಲ ನೆನಪಲ್ಲಿ ಉಳಿಯುತ್ತದೆ. ನಿರ್ದೇಶಕರ ಅಣತಿಯಂತೆ ನಟಿಸಿರುವ ಈ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. 

ಕುಂಬಾರ ಒಂದು ಮಣ್ಣಿನ ಮುದ್ದೆಯನ್ನು ತಿರುಗುವ ಚಕ್ರದಮೇಲೆ ಹಾಕಿ, ಆ ಮಣ್ಣಿಗೆ ಸುಂದರ ರೂಪವನ್ನು ಕೊಡುವ ಹಾಗೆ ಪದ್ಮಾವಾಸಂತಿ ಅವರಿಂದ ಅಭಿನಯ ಕಲೆಯನ್ನು ಅನಾವರಣಗೊಳಿಸಿರುವುದು ಪುಟ್ಟಣ್ಣ ಅವರ ತಾಕತ್. ಬಹುಶಃ ಪದ್ಮಾವಾಸಂತಿ ಈ ಚಿತ್ರದಲ್ಲಿ ಅಭಿನಯಿಸಿರುವಂತೆ ಇನ್ಯಾವ ಚಿತ್ರಗಳಲ್ಲೂ ಅಭಿನಯಿಸಲಿಕ್ಕೆ ಅವಕಾಶ ಸಿಗಲಿಲ್ಲ ಅಂದರೆ ತಪ್ಪಿಲ್ಲ ಎನುವ ಅಭಿಪ್ರಾಯ ನನ್ನದು. 

"ಮಾನಸ ಸರೋವರ" ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅವರ ಧ್ವನಿಯಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಸುಂದರ ಪರಿಸರ, ಈ ಹಾಡು ಶುರುವಾಗುವ ಮುಂಚೆ ಬರುವ ವೇದ ಮಂತ್ರಗಳು ಈ ಹಾಡನ್ನು ನೋಡುವಾಗ ಒಂದು ಭಕ್ತಿ ಭಾವದ ಜೊತೆಯಲ್ಲಿ ಒಂದು ಮಧುರ ಭಾವ ನೀಡುತ್ತದೆ. 

"ಚಂದ ಚಂದ"  ಹಾಡು, ಅದರ ಆರಂಭಿಕ ಸಂಗೀತ ಹುಚ್ಚು ಹಿಡಿಸುತ್ತದೆ. ಜಯಚಂದ್ರನ್ "ಚಂದ ಚಂದಾ" ಎಂದು ಶುರು ಮಾಡುವ ರೀತಿ ವಾಹ್. ಸಾಹಿತ್ಯ ಎಂ ಎನ್ ವ್ಯಾಸರಾವ್ ಅವರದ್ದು, ಈ ಹಾಡು ಇಷ್ಟವಾಗಲು ಕಾರಣ, ಸರಳ ಸಂಗೀತ, ರಾಮಕೃಷ್ಣ ಅವರ ಹುಡುಗು ಹುಡುಗು ನೃತ್ಯ, ಸುಂದರ ಹೊರಾಂಗಣ. 

ಈ ಚಿತ್ರದ ಆರಂಭದಿಂದ ಈ ಹಾಡಿನ ತನಕ ಬಿರು ಬಿಸಿಲ ನಾಡು ಎಂದೇ ಖ್ಯಾತವಾದ ಬಳ್ಳಾರಿಯಲ್ಲಿ ಚಿತ್ರಿಕರಿಸಿದ್ದರೂ, ಆ ಬಿಸಿಲಿನ ತಾಪ ಎಲ್ಲೂ ಕಾಣದ ರೀತಿಯಲ್ಲಿ ಸುಂದರ ಹಸಿರಿನಲ್ಲಿ ಆಹ್ಲಾದಕರ ರೀತಿಯಲ್ಲಿ ಈ ದೃಶ್ಯದ ತನಕ ಚಿತ್ರೀಕರಿಸಿದ್ದಾರೆ. ಈ ಹಾಡು ಬರುವ ಹೊತ್ತಿಗೆ ನಾಯಕನ ಹೃದಯಕ್ಕೆ ಘಾಸಿಯಾಗಿರುತ್ತದೆ. ಮನಸ್ಸಿನ ಹಸಿರಿನ ಕಾಡು ಬೆಂಗಾಡಾಗಳು ಸಿದ್ಧವಾಗಿರುತ್ತದೆ. ಹೃದಯ ಒಡೆದು ಚೂರಾಗಿರುತ್ತದೆ. ಅಂಥಹ ಸಂದರ್ಭದಲ್ಲಿ ಬರುವ ಹಾಡು "ನೀನೆ ಸಾಕಿದ ಗಿಣಿ". 

ವಿಜಯನಾರಸಿಂಹ ಅವರ ಹೃದಯ ಹಿಂಡುವ ಸಾಹಿತ್ಯಕ್ಕೆ ಜೊತೆಯಾಗಿ ನಿಲ್ಲುತ್ತದೆ ಸಂಗೀತ ಮತ್ತು ಛಾಯಾಗ್ರಹಣ. ಕ್ಯಾಮೆರ ಚಾಲನೆ, ಕ್ಯಾಮೆರಾದ ಓಡಾಟ ಈ ಹಾಡಿನಲ್ಲಿ ನನಗೆ ಬಲು ಇಷ್ಟವಾಗುತ್ತದೆ. ಒಂದು ಹೃದಯ ಇನ್ನೊಂದು ಹೃದಯಕ್ಕೆ ಹತ್ತಿರವಾಗಬೇಕು ಎನ್ನುವಷ್ಟರಲ್ಲಿ ಮತ್ತೆ ದೂರ ಹೋಗುತ್ತದೆ. ಅದ್ಭುತವಾದ ರೀತಿಯಲ್ಲಿ ಚಿತ್ರಿಕರಣವಾಗಿದೆ. 

ನಾಯಕನ ಮನಸ್ಸು ಹೇಳುವ ಮಾತು "ಇವಳಿಗೆ ಬೇಕಾಗಿರುವುದು ಆನಂದ ಕಣೋ ಸಂತೋಷ ಅಲ್ಲ" ಅದ್ಭುತ ಮಾತುಗಳು. ಆನಂದ ನಿರಂತರದ ಭಾವ, ಸಂತೋಷ ಕೇವಲ ಕ್ಷಣ ಮಾತ್ರ ಸಿಗುವ ಸುಂದರ ಅನುಭವ. ಇಡಿ ಚಿತ್ರ ಈ ಮೇಲಿನ ಸಾಲಿನ ಮೇಲೆ ನಿಂತಿದೆ. 

ಈ ಚಿತ್ರದಲ್ಲಿ ಅಭಿನಯಿಸಿರುವ ಮೂವರು ಮೂರು ಆಧಾರ ಸ್ಥಂಭಗಳು. 

ಶ್ರೀನಾಥ್ : ಚಿತ್ರಜೀವನದಲ್ಲಿಯೇ ಒಂದು ಮೈಲಿಗಲ್ಲು, ಆನಂದನ ಪಾತ್ರದಲ್ಲಿ ಕೈಕಟ್ಟಿಕೊಂಡು ಓಡಾಡುವ, ಕನ್ನಡಕವನ್ನು ಆಗಾಗ ಸರಿಪಡಿಕೊಳ್ಳುವ ರೀತಿ, ಸಿಲ್ಲಿ ಫೆಲೋ ಸಿಲ್ಲಿ ಫೆಲ್ಲೋ ಎನ್ನುವ ಮಾತುಗಳು, ಅಪಾರ ಚಿಂತನೆ ನಡೆಸಿ ಮನಸ್ಸು ಹಣ್ಣಾಗಿದೆ ಎನ್ನುವಂಥಹ ಮನೋಜ್ಞ ಅಭಿನಯ ಈ ಪಾತ್ರದಲ್ಲಿ ಕಾಣಸಿಗುತ್ತದೆ 

ಪದ್ಮಾವಾಸಂತಿ: ವಾಸಂತಿ ಎನ್ನುವ ಮಾನಸಿಕ ಸ್ಥಿಮಿತ ಕಳೆದುಕೊಂಡ ಪಾತ್ರದಲ್ಲಿ ಅತಿರೇಕಕ್ಕೆ ಹೋಗದೆ, ನಿಭಾಯಿಸಿರುವ ರೀತಿ, ತನ್ನ ಕಾಯಿಲೆ ಗುಣವಾದಮೇಲೆ ಹಿಂದಿನ ಪಾತ್ರದ ಪರಿಣಾಮ ಕೊಂಚವೂ ಇರದ ಹಾಗೆ ಅಭಿನಯ ಇಷ್ಟವಾಗುತ್ತದೆ. 

ರಾಮಕೃಷ್ಣ : ಚಿತ್ರ ಒಂದು ನಿಟ್ಟಿನಲ್ಲಿ ಓಡುತ್ತಿದೆ ಎಂದು ಅಂದುಕೊಂಡಾಗ ಪ್ರತ್ಯಕ್ಷವಾಗುವ ಪಾತ್ರ ಚಿತ್ರದ ದಿಕ್ಕನ್ನೇ ಬದಲಿಸಿಬಿಡುತ್ತದೆ. ತನಗೆ ಅರಿವಿಲ್ಲದೆ ವಾಸಂತಿ ಪಾತ್ರವನ್ನು ಪ್ರೀತಿಸುತ್ತಾ, ಅರಿವಿಲ್ಲದೆ ನಾಯಕನ ಭಾವಗಳಿಗೆ ಬರೆ ಎಳೆಯುವ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ. 

ಈ ಮೂವರು ಈ ಮೇಲಿನ ಪಾತ್ರ ಮಾಡಲಿಕ್ಕೆ ನಟಿಸಿದ್ದಾರೆಯೋ ಅನ್ನುವಷ್ಟು ಸಹಜವಾಗಿ ಮೂಡಿ ಬಂದಿದೆ. 

ಈ ಪಾತ್ರಗಳ ಮತ್ತು ಮನೋಜ್ಞ ಕಥೆಯ ಕತೃ ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ದೊಡ್ಡ ಸಲಾಂ ಈ ಲೇಖನದ ಮೂಲಕ!!!

Sunday, September 13, 2015

ಅಂತರಂಗವನ್ನು ಗುಪ್ತಗಾಮಿನಿಯಾಗಿ ಹರಿಸುವ - ರಂಗನಾಯಕಿ (1981)

ಪುಟ್ಟಣ್ಣ ಕಣಗಾಲ್ ಹತ್ತಿರ ಕ್ಷಮೆ ಕೇಳಿ ಕೇಳಿ ಸಾಕಾಯ್ತು.. ಇರಲಿ ಅವರು ಕ್ಷಮಿಸುವಂಥಹ ಧಾರಾಳ ಮನಸ್ಸಿನವರು.. ಅವರ ಕ್ಷಮೆಯಾಚನೆಯೊಂದಿಗೆ ಮತ್ತೆ ಅವರ ಚಿತ್ರರತ್ನಗಳ ಕಡೆಗೆ ನನ್ನ ಪಯಣ.

ದೂರದರ್ಶನ ಎಂಭತ್ತರ ದಶಕದ ಆರಂಭದಲ್ಲಿ ಮಾಯಾಜಾಲವನ್ನೇ ಸೃಷ್ಠಿಸಿತ್ತು.. ಪ್ರತಿ ಶನಿವಾರ ಚಲನಚಿತ್ರಗಳಿಗೋಸ್ಕರ ಕಾದು ಕುಳಿತಿರುತ್ತಿದ್ದೆವು. ರಂಗನಾಯಕಿ ಆ ರೀತಿಯಲ್ಲಿ ಯಾರದೋ ಮನೆಯ ದೂರದರ್ಶನದಲ್ಲಿ, ಕಿಟಕಿಯ ಮೂಲಕ ಅಥವಾ ಅವರ ಧಾರಾಳ ಮನಸ್ಸಿದ್ದರೆ ಅವರ ಮನೆಯೊಳಗೇ ಕೂತು ನೋಡುವ ಅವಕಾಶ.     

ಬಾಲ್ಯದಲ್ಲಿಯೆ ಈ ಚಿತ್ರ ನಾನಾ ಕಾರಣಗಳಿಂದ ಇಷ್ಟವಾಗಿತ್ತು. 

೧) ಎಂ ಏನ್ ವ್ಯಾಸರಾವ್ ಅವರ ಪಾನಿ ಪುರಿ ಗೀತೆ ಎನ್ನುವಂತೆ ರಚಿಸಿದ "ಪ್ರೇಮದಲ್ಲಿ ಸ್ನೇಹದಲ್ಲಿ" ಹಾಡು, ಎಂ ರಂಗರಾವ್ ಅವರ ಅದ್ಭುತ ಟಪೋರಿ ವಾದ್ಯ ಮೇಳ, ಅದಕ್ಕೆ ಸಂಗೀತ ಅದರಲ್ಲಿಯೂ " ಮೈ ಡಿಯರ್" ಎಂದು ಹಾಡಿದ ಕೂಡಲೇ ಬರುವ ಡ್ರಮ್ ಸಂಗೀತ ನನ್ನನ್ನು ಹುಚ್ಚನನ್ನಾಗಿ ಮಾಡಿಸಿತ್ತು. ಎಸ್ ಪಿ ಬಾಲಸುಬ್ರಮಣ್ಯಂ ಅವರ ಅದ್ಭುತ ಗಾಯನ, ಪ್ಲೇ ಬಾಯ್ ಎನ್ನುವ ಒಂದು ಇಮೇಜ್ ಸೃಷ್ಠಿಗೆ ಕಾರಣವಾದ ರಾಮಕೃಷ್ಣ ಅವರ ಪಾತ್ರ, 

೨) " ಮಂದಾರ ಪುಷ್ಪವು ನೀನು" ವಿಜಯನಾರಸಿಂಹ ರಚಿಸಿರುವ ಈ ಹಾಡಿನ್ನು ಜಯಚಂದ್ರನ್ ಶುರುಮಾಡುವ ರೀತಿ, ಧರ್ಮಸ್ಥಳದ ಉದ್ಯಾನವನದಲ್ಲಿ ರಾಧ ಕೃಷ್ಣರ ಮೂರ್ತಿಯ ಮುಂದೆ ಶುರುವಾಗುವ ಈ ಹಾಡು, ಮದ್ಯೆ ಮದ್ಯೆ ಎಸ್ ಪಿ ಶೈಲಜಾ ಸುರಿಸುವ ಜೇನು ಹನಿ ಒಂದು ಕಡೆಯಾದರೆ, ಸರಳ ಇಂಪಾದ ಸಂಗೀತ, ಸುಂದರ ಪ್ರಕೃತಿಯ ಮಡಿಲಲ್ಲಿ ಚಿತ್ರೀಕರಿಸಿದ ರೀತಿ ಇಷ್ಟವಾಗಿತ್ತು. ನಾಯಕ ಅಶೋಕ್ ಅವರ ವೇಷಭೂಷಣ, ಅಂದಗಾರ್ತಿ ಆರತಿಯ ಸುಂದರ ಅಲಂಕಾರ ಒಂದು ರೀತಿಯಲ್ಲಿ ಈ ಹಾಡನ್ನು ಮತ್ತೆ ಮತ್ತೆ ಕೇಳಬೇಕು ಎನ್ನಿಸಿತ್ತು. 

೩) ಶಕ್ತಿ ಸ್ಥಳ ಕೊಲ್ಲೂರಿನಲ್ಲಿ ಆರತಿ ಹಾಡಿ ಕುಣಿಯುವ "ಜೈ ಜಗದಂಬೆ" , ಎಸ್ ಜಾನಕಿ ಭಕ್ತಿ ಪೂರ್ವಕವಾಗಿ ಪರವಶರಾಗಿ ಹಾಡಿದ್ದಾರೆ, ಅದ್ಭುತ ಎನ್ನಿಸುವ ಸಾಹಿತ್ಯದ ರೂವಾರಿ ವಿಜಯನಾರಸಿಂಹ. ಸಂಗೀತದಲ್ಲಿ ಉಪಯೋಗಿಸಿರುವ ವಾದ್ಯ, ಚಿತ್ರೀಕರಣದಲ್ಲಿ ಅದಕ್ಕೆ ಹತ್ತಿರವಾಗುವಂತೆ ಉಪಯೋಗಿಸಿರುವ ವಾದ್ಯ ಇಷ್ಟವಾಗುತ್ತದೆ. ಆರತಿ ಈ ಹಾಡಿನಲ್ಲಿ ಇಷ್ಟವಾಗುವ ಕಾರಣ ಅವರು ಉಟ್ಟಿರುವ ಸೀರೆಯ ಬಣ್ಣ, ಹಣೆಯಲ್ಲಿ ದೊಡ್ಡದಾದ ಕುಂಕುಮದ ಕೆಳಗೆ ಒಂದು ಚಿಕ್ಕ ಬೊಟ್ಟು. 

೪) ಅಣ್ಣ ಎಂದರೆ ಹೀಗೆಯೇ ಇರಬೇಕು ಎನ್ನಿಸುವಷ್ಟು ಇಷ್ಟವಾಗುವ ಅಂಬರೀಶ್, ಕಣಗಾಲ್ ಪ್ರಭಾಕರ್ ಶಾಸ್ತ್ರೀ ರಚಿಸಿರುವ "ಕನ್ನಡ ನಾಡಿನ ರಸಿಕರ ಮನವ" ಹಾಡು ಮತ್ತೊಮ್ಮೆ ಎಸ್ ಪಿ ಬಾಲಸುಬ್ರಮಣ್ಯಂ ನಮಗೆ ಹತ್ತಿರವಾಗುತ್ತಾರೆ. ತುಮಕೂರು ಬಳಿಯ ಶಿವಗಂಗೆಯಲ್ಲಿ ಚಿತ್ರಿಕರಿಸಿರುವ ಹಾಡು ಮತ್ತೆ ಮತ್ತೆ ಕೇಳಬೇಕು ಮತ್ತು ನೋಡಬೇಕು ಎನ್ನಿಸುತ್ತದೆ. ಅದರಲ್ಲೂ ಈ ಹಾಡಿನ ಮದ್ಯೆ ಮದ್ಯೆ ರಂಗಭೂಮಿಯ ಚಿಕ್ಕ ಚಿಕ್ಕ ತುಣುಕುಗಳನ್ನು ಹೆಣೆದಿರುವುದು ಪುಟ್ಟಣ್ಣ ಹಾಡುಗಳನ್ನು ಚಿತ್ರೀಕರಿಸುವ ಅದ್ಭುತ ಶೈಲಿಯನ್ನು ತೋರಿಸುತ್ತದೆ. ಕಡೆಯಲ್ಲಿ ಹಾಡಿನ ಸಾಲನ್ನು ನಿಧಾನಗತಿಯಲ್ಲಿ ಹಾಡಿ ರಂಗಭೂಮಿಯ ಬ್ಯಾನರ್ ಇಂದ ಆರತಿ ಹೆಸರಿಗೆ ಬಣ್ಣವನ್ನು ಬಳೆದು ಅಳಿಸುವುದು ಬಣ್ಣದ ಬದುಕು ಎಷ್ಟು ಕ್ಷಣಿಕ ಎನ್ನುವಂತೆ ಭಾವ ತೋರುತ್ತದೆ. ಆದರೆ ಈ ಹಾಡು ಶುರುವಾಗುವಾಗ ರಂಗು ರಂಗಿನ ಪರದೆ, ಬೆಳಕು ಇವುಗಳ ಮದ್ಯೆ ನಾಯಕಿಯನ್ನು ತೋರಿಸಿ ರಂಗಭೂಮಿಯ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುತ್ತಾರೆ. 

ಶ್ರೀ ಅಶೋಕ್ ಆರ್ಟ್ಸ್ ಲಾಂಛನದಲ್ಲಿ, ಬಿ ತಿಮ್ಮಣ್ಣ ಅವರ ನಿರ್ಮಾಣದಲ್ಲಿ , ಅಶ್ವತ್ಥ ಅವರ "ರಂಗನಾಯಕಿ" ಎನ್ನುವ ಕಥೆಯನ್ನ ಚಲನಚಿತ್ರವಾಗಿಸಿದರು ಪುಟ್ಟಣ್ಣ. ಚಿತ್ರದ ತಾರಾಗಣ, ತಾಂತ್ರಿಕವರ್ಗದ ಹೆಸರನ್ನು ತೆರೆಯ ಮೇಲೆ ತೋರಿಸುವಾಗ, ರಂಗಭೂಮಿಯ ಅಂದಿನ ಕಾಲದ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳ ಜೊತೆಯಲ್ಲಿ ತೋರಿಸುವುದು ಪುಟ್ಟಣ್ಣ ಒಂದು ವಸ್ತು ವಿಷಯಕ್ಕೆ ಎಷ್ಟು ಒತ್ತು ನೀಡುತ್ತಿದ್ದರು ಎನ್ನುವುದಕ್ಕೆ ಸಾಕ್ಷ್ಟಿಯಾಗಿದೆ. 
ಯೋಗಣ್ಣ ಅವರ ಜೊತೆಗೂಡಿ ಈ ಕಥೆಗೆ ಚಿತ್ರಕಥೆ ಬರೆದು ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ಯಶಸ್ಸಿನ ಮಹಲಿಗೆ ಕೊಂಡೊಯ್ದರು. ಚಿತ್ರಕ್ಕೆ ತಕ್ಕ ತಾಂತ್ರಿಕ ವರ್ಗ ಎನ್ನುವ ಹಾಗೆ ಈ ಚಿತ್ರಕ್ಕೆ ಸಂಗೀತಕ್ಕೆ ಬಂದವರು ಎಂ ರಂಗರಾವ್. ಎಸ್ ಮಾರುತಿರಾವ್ ಪುಟ್ಟಣ್ಣ ಅವರ ಕಲ್ಪನೆಯನ್ನು ಹಾಗೆ ಕ್ಯಾಮೆರ ಕಣ್ಣಲ್ಲಿ ಸೆರೆ ಹಿಡಿಯಲು ನಿಂತರು. 

ಆ ಕಾಲಘಟ್ಟದ ಮುಖ್ಯ ಪ್ರತಿಭೆಗಳನ್ನು ಆಯ್ದು ಈ ಚಿತ್ರ ಮಾಡಿದ್ದರು. ಆರತಿ, ರಾಜಾನಂದ್, ಅಂಬರೀಶ್, ಅಶೋಕ್, ರಾಮಕೃಷ್ಣ, ಹಲವಾರು ರಂಗಭೂಮಿಯ ಪ್ರತಿಭೆಗಳನ್ನು ಆಯ್ಕೆ ಮಾಡಿದ್ದರು. ಇಲ್ಲಿ ಬರುವ ಪ್ರತಿ ಪಾತ್ರಗಳು ಚಿಕ್ಕದೋ ದೊಡ್ಡದೋ ಚಿತ್ರದ ಕಥೆಯ ಮೇಲೆ ಮುಖ್ಯ ಪರಿಣಾಮ ಬೀರುತ್ತಲೇ ಇರುವಂಥವು. 

ಈ ಚಿತ್ರದ ಪ್ರಮುಖ ಪಾತ್ರ ರಂಗನಾಯಕಿ ಎನ್ನುವ ರಂಗಭೂಮಿ ಕಲಾವಿದೆಯದು. ಅವಳ ಬಾಲ್ಯವನ್ನು ಒಂದೆರಡು ದೃಶ್ಯಗಳಲ್ಲಿ ತೋರಿಸಿ, ಆ ಮಗುವಿಗೆ ಬಾಲ್ಯದಿಂದಲೂ ಸಂಗೀತ, ಅಭಿನಯ, ಬಣ್ಣ ಇವುಗಳ ಮೇಲೆ ಇರುವ ಆಸಕ್ತಿಯನ್ನು ರಂಗಭೂಮಿಯ ತಾಲೀಮನ್ನು ನೋಡುವಾಗ ಆ ಮಗುವಿನ ಕಣ್ಣು, ಕಿವಿ, ಕೈ, ಕಾಲುಗಳನ್ನು ಮಾತ್ರ ತೋರಿಸಿ ದೃಶ್ಯದ ಗಾಢತೆಯನ್ನು ಹೆಚ್ಹು ಮಾಡುತ್ತಾರೆ. 

ಅನಾಥ ಮಗುವಾದ ಅಂಬರೀಶ್ ಅವರನ್ನು ಸಾಕಿ ಸಲುಹಿದ ತನ್ನ ಸಾಕು ತಂದೆಯ ಬಗ್ಗೆ ಅಭಿಮಾನದಿಂದ ಹೇಳುವಾಗ ಅಂಬರೀಶ್ ಇಷ್ಟವಾಗುತ್ತಾರೆ, ಆ ಅಭಿಮಾನ, ಹೆಮ್ಮೆ ಅವರ ಧ್ವನಿ ಆಹಾ. 

ರಾಜಾನಂದ್ ಅವರ ಸ್ನೇಹಿತ ಕಷ್ಟ ಕಾಲದಲ್ಲಿ ಇವರ ಬಳಿ ಬರುತ್ತಾರೆ, ಮೊದಲೇ ಕಷ್ಟದಲ್ಲಿದ್ದರೂ, ತನ್ನ ಸ್ನೇಹಿತನಿಗೆ ಸಹಾಯ ಮಾಡಬೇಕು ಎಂದು ತಮ್ಮ ನಾಟಕದ ಮೂರು ದಿನದಲ್ಲಿ ಬರುವ ಪೂರ್ತಿ ಹಣವನ್ನು ಅವನಿಗೆ ಕೊಡುವ ಭರವಸೆ ಕೊಡುತ್ತಾರೆ. ಆಗ ಹೇಳುವ ಮಾತು "ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನ ಕಷ್ಟಕ್ಕೆ ಆಗದಿದ್ದರೆ ಕಲಾವಿದನ ಜನ್ಮ ಯಾಕೋ" ಎನ್ನುತ್ತಾರೆ. ಅದ್ಭುತ ನಟನೆ.  

ಕೆಲ ಹಣವುಳ್ಳ ಕಾಮುಕ ವ್ಯಕ್ತಿ ಹಣದ ದರ್ಪದಿಂದ ರಂಗಭೂಮಿ ಕಲಾವಿದರನ್ನು ಅವಮಾನಗೊಳಿಸುವ ಯತ್ನದಲ್ಲಿದ್ದಾಗ, ಅಂಬರೀಶ್ ಚೆನ್ನಾಗಿ ಹೊಡೆದು ಕಳಿಸುತ್ತಾರೆ, ಆಗ ಸಾಕು ತಂದೆ ರಾಜಾನಂದ್ ಅಂಬರೀಶ್ ಅವರಿಗೆ ಚೆನ್ನಾಗಿ ಹೊಡೆಯುತ್ತಾರೆ, 

"ನಾ ಮಾಡಿದ್ದು ತಪ್ಪಾ ಹೇಳಿ ಅಪ್ಪಾಜಿ, ನೀವು ತಪ್ಪು ಎಂದರೆ, ಆ ಸಾಹುಕಾರನ ಕಾಲಿಗೆ ಬಿದ್ದು ತಪ್ಪಾಯ್ತು ಎಂದು ಹೇಳಿ ಕರೆದುಕೊಂಡು ಬರುವೆ" 

"ಕಲಾವಿದರಿಗೂ ಸ್ವಾಭಿಮಾನ, ಮಾರ್ಯಾದೆ ಇದೆ ಎಂದು ತೋರಿಸಲು ನಿನ್ನಂಥವರು ಲಕ್ಷ ಲಕ್ಷ ಹುಟ್ಟಬೇಕು ಕಣೋ" ಎಂದು ರಾಜಾನಂದ್ ಅಂಬರೀಶ್ ಅವರನ್ನು ಅಪ್ಪಿಕೊಳ್ಳುತ್ತಾರೆ. ಅಲ್ಲಿ ರಾಜಾನಂದ್ ಅವರ ಮುಖಾಭಿನಯ, ಧ್ವನಿ ಮತ್ತು ಆ ಗತ್ತು ಅದ್ಭುತ. 

ಈ ಚಿತ್ರದಲ್ಲಿ ಅಭಿನಯ ನೀಡಿರುವ ಕಲಾವಿದರೂ ಈ ಚಿತ್ರಕ್ಕೊಸ್ಕರವೇ ಹುಟ್ಟಿದ್ದಾರೆನೋ ಅನ್ನುವಷ್ಟು ಅದ್ಭುತವಾಗಿ ನಟಿಸಿದ್ದಾರೆ. 

ರಾಜಾನಂದ್ 
ಮೇಲೆ ಹೇಳಿದ ಎರಡು ದೃಶ್ಯಗಳು, 
ಆರತಿಯ ಏಳಿಗೆಯನ್ನು ಕಂಡು ಖುಷಿಯಾಗುವ ದೃಶ್ಯ. 
ಆರತಿಯ ಅಂದವನ್ನು ಮೆಚ್ಚಿ ಬರುವ ಅಶೋಕ್ ಅವರಿಗೆ ರಂಗಭೂಮಿಯ ರಾತ್ರಿ ಹೊತ್ತಿನ ಜಗಮಗ ಬೆಳಕಿನ ಪ್ರಪಂಚ ಮತ್ತು ಬೆಳಗಿನ ಆರ್ಥಿಕ ಪರಿಸ್ಥಿತಿ ಬಿಂಬಿಸುವ ದೃಶ್ಯವನ್ನು ವಿವರಿಸುವ ರೀತಿ. 
ಮದುವೆ ಮಾಡಿಕೊಂಡು ಗಂಡನ ಜೊತೆಯಲ್ಲಿ ಹೋಗುವಾಗ, ಆಗಾಗ ಪತ್ರ ಬರಿ ಎಂದು ಆರತಿಗೆ ಹೇಳುವ ತುಣುಕು
ಆರತಿಯನ್ನು ಚಲನಚಿತ್ರದವರು ಅಭಿನಯಿಸಿ ಎಂದು ಕೇಳಿಕೊಂಡಾಗ, ಆರತಿಯನ್ನು ಒಪ್ಪಿಸುವ ದೃಶ್ಯ 
ದಶರಥನ ಪಾತ್ರದಲ್ಲಿ ಅಂತಿಮ ದೃಶ್ಯದಲ್ಲಿ ನೀಡಿರುವ ಅಭಿನಯ

ಅಂಬರೀಶ್
ಇಡಿ ಚಿತ್ರದಲ್ಲಿ ಆರತಿ ಪಾತ್ರಕ್ಕೆ ನೆರಳಂತೆ ರಕ್ಷಣೆ ನೀಡುವ ಪಾತ್ರ. ತಾನು ಚಿಕ್ಕ ವಯಸ್ಸಿನಲ್ಲಿ ಆಕೆಯನ್ನು ಇಷ್ಟಪಟ್ಟಿದ್ದರೂ, ರಂಗನಾಯಕಿ ಹೇಳುವ ನೀ ನನ್ನ ಅಣ್ಣ ಕಣೋ ಎಂದಾಗ ಒಂದು ಕಡೆ ನಿರಾಸೆ ಇನ್ನೊಂದು ಕಡೆ ಅಣ್ಣನಾದೆ ಎನ್ನುವ ಹೆಮ್ಮೆಯ ಅಭಿನಯ ಅದ್ಭುತ ಎನ್ನಿಸುತ್ತದೆ. ಈ ಕಲಾವಿದ ಎಲ್ಲೋ ಸಿದ್ಧ ಸೂತ್ರಗಳ ಚಿತ್ರಗಳಲ್ಲಿ ಕಳೆದು ಹೋದರೆನೋ ಅನ್ನಿಸುತ್ತದೆ. 

ಅಶೋಕ್
ಪ್ರೀತಿ, ಪ್ರೇಮಗಳು ನಿಜ ಜೀವನದ ಕಷ್ಟ ನಷ್ಟಗಳಲ್ಲಿ ಹೇಗೆ ಕರಗಿ ಹೋಗುತ್ತದೆ ಎನ್ನುವುದನ್ನು ಮುಖಭಾವ ಹಾಗೂ ಮಾತುಗಳ ಭರದಲ್ಲಿ ತೋರಿದ್ದಾರೆ
ನಟಿಮಣಿಯನ್ನು ಸತಿಮಣಿಯನ್ನಾಗಿ ಮಾಡಿ ಮೆರೆಸಲು ಹೊರಟ ನನ್ನ ಬುದ್ಧಿಗೆ ಚಪ್ಪಲಿಲಿ ಹೊಡೆದುಕೊಳ್ಳಬೇಕು ಎನ್ನುವ ದೃಶ್ಯ ಸೂಪರ್ 
ಕಡೆಯಲ್ಲಿ ಆರತಿಗೆ "ಈ ಮಗನಿಗೆ ಜನ್ಮ ಕೊಟ್ಟವಳು ಒಬ್ಬ ದೇವತೆ ಅನ್ನೋ ವಿಷಯವನ್ನು ಮುಚ್ಚಿಟ್ಟುಬಿಟ್ಟಿದ್ದೇನೆ" ಎನ್ನುವಾಗ ಅವರ ತಳಮಳದ ಅಭಿನಯ ಇಷ್ಟವಾಗುತ್ತದೆ. 
ಒರಟು, ಒಂದು ರೀತಿಯ ಪ್ರೀತಿ ಪ್ರೇಮ ಅನುಕಂಪ ಇವುಗಳನ್ನೆಲ್ಲ ಒಂದು ಲಾಭಕ್ಕಾಗಿ ಬಳಸುವ ಮನೋಭಾವದ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. 

ರಾಮಕೃಷ್ಣ
ಕನ್ನಡ ಚಿತ್ರಜಗತ್ತಿಗೆ ಟಪೋರಿ, ಪ್ಲೇ ಬಾಯ್, ಚಲ್ಲುಚಲ್ಲಾಗಿ ಆಡುವ ಪಾತ್ರದ ರೂಪನ್ನು ತಂದು ಕೊಟ್ಟವರು ಇವರು. ಪುಟ್ಟಣ್ಣ ಅವರ ಅದ್ಭುತ ಮಾರ್ಗದರ್ಶನದಲ್ಲಿ ಆ ರೀತಿಯ ಪಾತ್ರಗಳನ್ನೂ ತೆರೆಯ ಮೇಲೆ ಜೀವಂತ ಮಾಡಿದವರು ಇವರು. ಬೆಲ್ ಬಾಟಮ್ ಪ್ಯಾಂಟ್, ಕಪ್ಪು ಕನ್ನಡಕ, ಕುರುಚಲು ಗಡ್ಡ, ದೊಡ್ಡದಾದ ಬೆಲ್ಟ್, ಯಾವಾಗಲೂ ಒಂದು ರೀತಿಯಲ್ಲಿ ತೂಗಾಡುತ್ತಾ, ಪ್ರಪಂಚವನ್ನು ಉಡಾಫೆಯಿಂದ ನೋಡುವ ಪಾತ್ರದಲ್ಲಿ ಅಪ್ಪಟ ಪರಕಾಯ ಪ್ರವೇಶ ಮಾಡಿದ್ದಾರೆ. 
ಮೊದಲು ನೀವು ಅಭಿನಯ ಮಾಡೋದು ಕಲೀರಿ, ನಿಮ್ಮ ಕಣ್ಣಲ್ಲಿ ಕಾಮ ಎಲ್ಲ್ರಿ ಇದೆ, ತನ್ನ ಮಗುವನ್ನು ನೋಡುವ ತಾಯಿ ಪ್ರೇಮ ಇದೆ.. ನಿಮಗೆ ಕಾಮದ ಕಣ್ಣಲ್ಲಿ ನೋಡೋಕೆ ಬರೋಲ್ಲ.. ನನಗೆ ನಿಮ್ಮನ್ನು ತಾಯಿಯ ರೂಪದಲ್ಲಿ ನೋಡೋಕೆ ಬರೋಲ್ಲ ಎಂದು ಅಳುತ್ತಾ ಹೋಗುವಾಗ ಶಭಾಶ್ ಎನ್ನಿಸುತ್ತದೆ. 
ಆರತಿ 
ಈ ಪಾತ್ರ ಮಾಡೋಕೆ ಹುಟ್ಟಿದ್ದಾರೆನೋ ಅನ್ನುವಷ್ಟು  ಅದ್ಭುತ ಅಭಿನಯ ನೀಡಿದ್ದಾರೆ. ಹಲವಾರು ದೃಶ್ಯಗಳಲ್ಲಿ ಬರಿ ಕಣ್ಣು, ಮುಖಭಾವಗಳಲ್ಲೇ ದೃಶ್ಯವನ್ನು ಉತ್ತುಂಗಕ್ಕೆ ಕರೆದೊಯ್ದಿದ್ದಾರೆ. 
ಮದುವೆ ಆದನಂತರ ಪ್ರೀತಿ ಪ್ರೇಮಗಳು ಬದುಕಿನ ನಿಜ ರೂಪದ ಮುಂದೆ ನಿಲ್ಲೋಲ್ಲ ಎನ್ನುವಂತಹ ದೃಶ್ಯಗಳಲ್ಲಿ ಆರತಿ ಪ್ರಪಂಚದಲ್ಲಿ ಪ್ರೀತಿ, ಪ್ರೇಮ ಇದೆ ಎನ್ನುವ ವಾದ ಒಪ್ಪಿಕೊಂಡರೆ, ಅಶೋಕ್ ವಸ್ತುಗಳು, ಅಂತಸ್ತು, ಹಣ,ಇವುಗಳು ಮಾತ್ರ ಖುಷಿ ನೀಡುತ್ತವೆ ಎನ್ನುವ ವಾದವನ್ನು ಒಪ್ಪಿಕೊಂಡವರು, ಇವುಗಳ ನಡುವೆ ಸಮರವಾದಗೆಲ್ಲ ಆರತಿ ಸಂಭಾಷಣೆ, ಕಣ್ಣಲ್ಲಿ ಕೊಡುವ  ಅಭಿನಯ ಇಷ್ಟವಾಗುತ್ತದೆ. 
ಅಭಿನಯ, ರಂಗ ಭೂಮಿ, ಕಲೆ ಸಾಧನೆ ಇದನ್ನೆಲ್ಲಾ ಅಶೋಕ್ ಅವರಿಗೆ ವಿವರಿಸುವಾಗ ಅವರ ಕಣ್ಣಲ್ಲೇ ಮಾತಾಡುತ್ತಾರೆ. 
ಸಾರಂಗಧರ ನಾಟಕದ ತಾಲೀಮಿನಲ್ಲಿ ಸಾರಂಗಧರ ಪಾತ್ರವನ್ನು ರಾಮಕೃಷ್ಣ ಅವರಿಗೆ ಹೇಳಿಕೊಡುವಾಗ ಮಸ್ತ್ ಮಸ್ತ್ ಅಭಿನಯ. 
ತಾನು ನಂಬಿಕೊಂಡಿರುವ ಕಲೆ ತನ್ನನ್ನು ಬೆಳೆಸಿದೆ ಎನ್ನುವ ಅರಿವು ಇಡಿ ಚಿತ್ರದ ತುಂಬಾ ಹರಿದಾಡಿದೆ. 
ಭಾವುಕ ಸನ್ನಿವೇಶಗಳಲ್ಲಿ, ಮಮತೆಯ ನಟಿಯಾಗಿ, ಮಗನಿಗೆ ಪರಿತಪಿಸುವ ತಾಯಿಯಾಗಿ, ಹತಾಶೆಗೊಳ್ಳುವ ಹೆಂಡತಿಯಾಗಿ ಪ್ರತಿ ಸನ್ನಿವೇಶಗಳಲ್ಲೂ ಆರತಿ ಅದ್ಭುತ ಅಭಿನಯ ನೀಡಿದ್ದಾರೆ. 


ತಾ ನಂಬಿದ ಸಿದ್ಧ ಸೂತ್ರಗಳ ಮೇಲೆ ನಂಬಿಕೆ ಸದಾ ಇರಬೇಕು ಎನ್ನುವ ಮಾತು ಆರತಿಯವರ ಪಾತ್ರದ ಮೂಲಕ ತಿಳಿದು ಬಂದರೆ, ಮಾಡುವ ಕೆಲಸದಲ್ಲಿ ಶ್ರಧ್ಹೆ, ಅಭಿಮಾನ ಇರಬೇಕು ಎನ್ನುವ ಮಾತು ರಾಜಾನಂದ್, ಅಂಬರೀಶ್ ಅವರ ಪಾತ್ರಗಳ ಮೂಲಕ ಅರಿವಾಗುತ್ತದೆ. 
ವಸ್ತು ಸುಖದ ಹಿಂದೆ ಹೋಗುವವರು ಪ್ರಪಂಚದಲ್ಲಿ ಬದುಕಿರುತ್ತಾರೆ ಹೊರತು ಜೀವಿಸಲು ಆಗೋಲ್ಲ ಎನ್ನುವ ನೀತಿ ಅಶೋಕ್ ಪಾತ್ರಧಾರಿ ಹೇಳುತ್ತಾರೆ. 
ಚೆಲ್ಲು ಚೆಲ್ಲು ಅಥವಾ ಉಡಾಫೆ ಇದೆ ಜೀವನವಲ್ಲ, ಸತ್ಯದ ಅರಿವಾಗಬೇಕು, ತಾಳ್ಮೆ ಇರಬೇಕು, ಯೋಚಿಸಬೇಕು ಎನ್ನುವ ಮಾತನ್ನು ರಾಮಕೃಷ್ಣ ಪಾತ್ರ ತೋರುತ್ತದೆ.. 

ಈ ಚಿತ್ರ ಹಲವಾರು ಮುತ್ತು ರತ್ನಗಳನ್ನು ಸುಂದರವಾಗಿ ಪೋಣಿಸಿ ಕನ್ನಡಾಂಬೆಗೆ ತೊಡಿಸಿದ ಅಮೂಲ್ಯ ರತ್ನ ಹಾರ. ಪ್ರತಿಯೊಂದು ದೃಶ್ಯವೂ ಕಲಾತ್ಮಕತೆಯಿಂದ ಕೂಡಿದೆ, ಯಾವುದು ಅತಿ ಎನ್ನಿಸುವುದಿಲ್ಲ. ಕೆಲವು ನಾಟಕದ ತುಣುಕುಗಳನ್ನು ಚಿತ್ರದ ಪರಿಣಾಮ ಹೆಚ್ಚು ಮಾಡುವುದಕ್ಕೆ ಉಪಯೋಗಿಸಿರುವ ಪರಿ ಇಷ್ಟವಾಗುತ್ತದೆ. ಪುಟ್ಟಣ್ಣ ಒಬ್ಬ ಮಾಂತ್ರಿಕ ಕಥೆಯನ್ನು ಹೇಗೆ ಬೆಳ್ಳಿ ಪರದೆಯ ಮೇಲೆ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ತರಬೇಕು ಎನ್ನುವ ಅದ್ಭುತ ಕಲ್ಪನೆ ಯಾವಾಗೂ ಅವರ ಬಳಿ ಚಿತ್ರದ ತಯಾರಿಕ ಹಂತಗಳಲ್ಲೇ ಇರುತ್ತಿತ್ತು ಮತ್ತು ಅದನ್ನು ಹಾಗೆ ಸಾಕ್ಷಾತ್ಕರಿಸಲು ತಮ್ಮ ಪ್ರತಿಭೆಯನ್ನು ಧಾರೆ ಎರೆಯುತ್ತಿದ್ದರು ಎನ್ನುವುದಕ್ಕೆ ರಂಗನಾಯಕಿ ಚಿತ್ರ ಅತ್ಯುತ್ತಮ ಉದಾಹರಣೆ. 

ಪುಟ್ಟಣ್ಣ ಗುರುಗಳೇ... ನಿಮ್ಮ ಮುಂದಿನ ಚಿತ್ರವನ್ನು ನೋಡಿ ಬಂದು ಮತ್ತೊಮ್ಮೆ ನಿಮ್ಮ ಚರಣಕಮಲಗಳಿಗೆ ಅರ್ಪಿಸುವೆ. 

Saturday, January 3, 2015

ಅಚ್ಹ ಬಿಳುಪಿನ ಮನದ ಬಿಳಿ ಹೆಂಡ್ತಿ (1975)

ಪುಟ್ಟಣ್ಣ ಕಣಗಾಲ್ ಎಂಬ ಮಾಂತ್ರಿಕ ತಾ ಮುಟ್ಟಿದ್ದೆಲ್ಲ ರತ್ನವಾಗಲೇ  ಎನ್ನುವ ಮನಶಕ್ತಿಉಳ್ಳವರಾಗಿದ್ದರು.  ಎಲ್ಲರ ಮನೆಯಲ್ಲೂ ನಡೆಯಬಹುದಾದ ಒಂದು ಸಂಗತಿ ಹೊಂದಿದ್ದ ಕಥೆಯನ್ನು ಅಸಾಧಾರಣ ರೀತಿಯಲ್ಲಿ ತೆರೆಗೆ ಅಳವಡಿಸಿ, ಅದಕ್ಕೆ ಹೊನ್ನಿನಂಥಹ ಗೀತೆ, ಸಂಭಾಷಣೆಗಳನ್ನು ತೊಡಿಸಿ ಒಂದು ಹೊಳೆಯುವ ರತ್ನವನ್ನಾಗಿ ಮಾಡಿದ್ದು ಅವರ ಶಕ್ತಿ. 

ಮ ನ ಮೂರ್ತಿಯವರ ಕಥಾ ಆಧಾರಿತ ಈ ಚಿತ್ರವನ್ನು ಎಂ ಜೆ ಎಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುದ್ದುಕೃಷ್ಣ, ಜಯಸಿಂಹ, ಮಾರುತಿ ನಿರ್ಮಾಣ ಮಾಡಿದ್ದರು. 

ಈ ಚಿತ್ರದ ಒಂದು ಮುಖ್ಯ ಅಂಶ ಎಂದರೆ, ಇಡಿ ಕಥೆಗೆ ತಿರುವು ಕೊಡುವುದು ನಾಯಕನ ಪಾತ್ರ ಆದರೆ ಇಡಿ ಚಿತ್ರದಲ್ಲಿ ನಾಯಕನ ಪಾತ್ರವನ್ನು ಗುಪ್ತಗಾಮಿನಿಯಂತೆ ಮಾಡಿ, ಬರಿ ಹೆಣ್ಣು ಪಾತ್ರಗಳೇ ಮೆರೆದಾಡುವಂತೆ ಚಿತ್ರವನ್ನು ತೆರೆಗೆ ತಂದಿರುವುದು ವಿಶೇಷ. 

ಯಾವ ಮನೆಯಾದರೂ, ಮನವಾದರೂ ಎರಡು ಜಡೆಗಳು ಒಂದಾದಾಗ ಸುಖಃ ನೆಮ್ಮದಿ ಶಾಂತಿ ಅಲ್ಲಿ ನೆಲೆಸುತ್ತದೆ ಎನ್ನುವು ಸಂದೇಶವನ್ನು ಸಾರಿ ಸಾರಿ ಹೇಳಲು ಈ ರೀತಿಯಲ್ಲಿ ವಿಭಿನ್ನ ಬಗೆಯ ನಿರೂಪಣೆಯ ಮೊರೆ ಹೊಕ್ಕಿದ್ದಾರೆ ಅನ್ನಿಸುತ್ತದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಮನೆಯ ಆಳಿನ ಪಾತ್ರ "ಮಲ್ಲ" ಹೇಳುವ ಮಾತು.. ಕಾರಿನಲ್ಲಿ ಕೂತು ಬರುವಾಗ ಇರುವ ಒಗ್ಗಟ್ಟು ಸಂಸಾರದಲ್ಲಿಯೂ ಇದ್ದಾರೆ ನಮ್ಮ ಪರ್ಪಂಚ ಸುಂದರ ಅತಿ ಸುಂದರ (ಸುಮಾರು ಹತ್ತು ಹೆಂಗಸರು ಅಂಬಾಸಡರ್ ಕಾರಿನಲ್ಲಿ ಬಿಳಿ ಹೆಂಡ್ತಿಯನ್ನು ನೋಡಲು ಬರುತ್ತಾರೆ.. ಆಗ ಮಲ್ಲ ಹೇಳುವ ಮಾತು)

ಇಡಿ ಚಿತ್ರದಲ್ಲಿ ನಾಯಕನಿಗೆ ಹಾಡು ಇರುವುದಿಲ್ಲ. ಹಿನ್ನೆಲೆ ಗಾಯನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವವರು ಅದ್ಭುತ ಗಾಯಕಿ ಶ್ರೀಮತಿ ವಾಣಿಜಯರಾಂ, ಮತ್ತು ಕೋಮಲ ಕಂಠದ ಕಸ್ತೂರಿ ಶಂಕರ್.  ಸಂಗೀತ ಸಂಯೋಜನೆ ಮಾಂತ್ರಿಕ ವಿಜಯಭಾಸ್ಕರ್. 

"ಆ ದೇವರೇ ನುಡಿದ ಮೊದಲ ನುಡಿ" ಪ್ರೇಮವನ್ನು, ಪ್ರೇಮದ ಹುಟ್ಟನ್ನು ಹಾಡಿನಲ್ಲಿ ವಿಜಯನಾರಸಿಂಹ ಅದ್ಭುತವಾಗಿ ಜೋಡಿಸಿದ್ದಾರೆ. ಆರತಿಯವರಿಗೆ ಸರಿಯಾದ ಕಂಠ ಎನ್ನುವಷ್ಟರ ಮಟ್ಟಿಗೆ ವಾಣಿಯಮ್ಮ ದನಿಯಾಗುತ್ತಾರೆ. ಪದಗಳ ಉಳಿತ, ಅದಕ್ಕೆ ಆರತಿಯವರ ಅಭಿನಯ ಸೊಗಸು. 

"ಯಾವ ತಾಯಿಯು ಹಡೆದ ಮಗಳಾದರೇನು" ಕಸ್ತೂರಿ ಕಂಠದಲ್ಲಿ ಕಸ್ತೂರಿ ಶಂಕರ್ ಮನ ಗೆಲ್ಲುತ್ತಾರೆ. ಕೋಮಲ ಕಂಠದಲ್ಲಿ ಮೂಡಿ ಬರುವ ಹಾಡು ನಮ್ಮ ಧರ್ಮ ಹೇಗೆ ಇತರರನ್ನು ತನ್ನ ಮಡಿಲಲ್ಲಿ ಸಾಂತ್ವನವನ್ನು ನೀಡಿ ತಮ್ಮ ಮನದಲ್ಲಿ ಕೂರಿಸಿಕೊಳ್ಳುತ್ತಾರೆ ಎನ್ನುವ ಸಂದೇಶ ಕೊಡುತ್ತದೆ. ಜೊತೆಯಲ್ಲಿ ಕನ್ನಡ ನಾಡಿನ ಬಗ್ಗೆ ಪುಟ್ಟಣ್ಣ ಅವರ ಅಭಿಮಾನ "ಕನ್ನಡಾಂಬೆಯ ಮಡಿಲ ಮಗುವಾದೆ ನೀನು" ಎನ್ನುವ ಸಾಲುಗಳಲ್ಲಿ ನುಗ್ಗಿ ಬರುತ್ತದೆ. 

ಇಡಿ ಚಿತ್ರಕಥೆಯನ್ನು ಹಾಡಿನಲ್ಲಿ ಪೋಣಿಸಿ, ಐದೇ ನಿಮಿಷದಲ್ಲಿ ಇಡಿ ಚಿತ್ರದ ಸಾರವನ್ನು ಬಡಿಸಿರುವ "ರಂಗೇನಹಳ್ಳಿಯಾಗೆ"  ಹಾಡು ನೊಂದ ಮನ ಮತ್ತು ಉಲ್ಲಾಸದ ಮನ ಎರಡರ ಅದ್ಭುತ ಸಂಗಮವಾಗಿ ಮೂಡಿ ಬರುತ್ತದೆ. ಕಸ್ತೂರಿ ಶಂಕರ್ ಎತ್ತಿ ಕೊಡುವ ಹಾಡನ್ನು ವಾಣಿ ಜಯರಾಂ ಅಂಗ್ಲ ಶೈಲಿಯಲ್ಲಿ ಸುಲಲಿತವಾಗಿ ಹಾಡಿರುವುದು ಸೂಪರ್ ಎನ್ನಿಸುತ್ತದೆ. 

ಮತ್ತೊಮ್ಮೆ ಪೂರ್ಣ ಆಂಗ್ಲಶೈಲಿಯಲ್ಲಿಯೇ "ರಂಗೇನ ಹಳ್ಳಿಯಾಗೆ" ಹಾಡು ವಾಣಿ ಜಯರಾಂ ಅವರ ಸಿರಿಕಂಠ ಗಮನಸೆಳೆಯುತ್ತದೆ. ಅಂಬರೀಶ್ ಚಿಕ್ಕ ಚೊಕ್ಕ ಪಾತ್ರದಲ್ಲಿ ಬಂದು ಹೋಗುತ್ತಾರೆ. 

ಇಡಿ ಚಿತ್ರದಲ್ಲಿ ಎದ್ದು ನಿಲ್ಲುವುದು ಇಂಗ್ಲಿಷ್ ಹಾಡು "ಹಾಪ್ಯೆಸ್ಟ್ ಮೊಮೆಂಟ್... ಎವ್ರಿ ಇವೆಂಟ್ ಬಿಳಿ ಹೆಂಡ್ತಿ ಸಿಂಗ್ಸ್ ಇನ್ ಎಗ್ಸೈಟ್ಮೆಂಟ್" ಇದನ್ನು ಪಕ್ಕಾ ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಿರುವುದು, ನೃತ್ಯ ಸಂಯೋಜಿಸಿರುವುದು, ಸಂಗೀತವನ್ನು ಆಯೋಜಿಸಿರುವುದು  ಪುಟ್ಟಣ್ಣ ಅವರ ಮಾಧ್ಯಮದ ಮೇಲಿನ ಹಿಡಿತವನ್ನು ತೋರುತ್ತದೆ. ವಾಣಿಜಯರಾಂ ಅಕ್ಷರಶಃ ಈ ಹಾಡಿನಲ್ಲಿ ನಮ್ಮ ಮನವನ್ನು ಕಲಕುತ್ತಾರೆ.  

ಇಡಿ ಚಿತ್ರವನ್ನು ಕಣ್ಣಲ್ಲಿ ಕಣ್ಣಿಟ್ಟು ಚಿತ್ರಿಸಿರುವ ಬಿ ಏನ್ ಹರಿದಾಸ್ ಪುಟ್ಟಣ್ಣ ಅವರ ಭಾವವನ್ನು ಹಾಗೆ ಬರೆದಿದ್ದಾರೆ ನೆರಳು ಬೆಳಕಿನಲ್ಲಿ. 

ಚುರುಕಾದ ಸಂಭಾಷಣೆ ಕೆಲವೊಮ್ಮೆ ನಗೆ ಉಕ್ಕಿಸಿದರೆ, ಹಾಗೆಯೇ ಕೆಲವು ಸಂಭಾಷಣೆಗಳು ಮನಕ್ಕೆ ಮುಟ್ಟುತ್ತವೆ. ಇದರ ರೂವಾರಿ ಹೆಚ್ ಎಸ್ ಸುಬ್ಬರಾವ್. 

ನಗೆ ಉಕ್ಕಿಸುವ ದೃಶ್ಯಗಳು 
  • ಉಮಾ ಶಿವಕುಮಾರ್ ಅವರ ಏರೋಪ್ಲೇನ್ ಮೇಲಿನ ಪ್ರೀತಿ 
  • ಎಲ್ಲಿ ಸ್ವಾಮೀ ನಾಲಿಗೆ ತೋರಿಸಿ.. ಆವಾಗ ಅಂಗನ್ದಿರಿ, ಇವಾಗ ಇಂಗನ್ದಿರಿ  ಅದು ಎಂಗೆ.. (ಹಳ್ಳಿಯ ಮನೆಯ ಉಸ್ತುವಾರಿ ಹೊತ್ತಿದ್ದವ ಬಿಳಿ ಹೆಂಡ್ತಿ ಜೊತೆಯಲ್ಲಿ ಚಿಕ್ಕ ದಣಿಗಳು ಬರುತ್ತಿದ್ದಾರೆಂದು ತಿಳಿದಾಗ.. ಹೀನ ಮಾನವಾಗಿ ಮಾತಾಡುವ.. ಅವರು ಬಂದ ಕೂಡಲೇ ಮಾತನ್ನೇ ತಿರುಗಿಸಿ ಹೋಗಲು ಭಟ್ಟನಾಗುವ ದೃಶ್ಯಕ್ಕೆ ಮನೆಯ ಆಳುಗಳು ಹೇಳುವ ಸಂಭಾಷಣೆ)
  • ಮನೆಯ ಆಳು "ಮಲ್ಲ" ತಮಾಷೆ ಮಾತುಗಳನ್ನು ಆಡುತ್ತಲೇ.. ಮನ ಮುಟ್ಟುವ ಸಂದೇಶಾತ್ಮಕ ಮಾತುಗಳನ್ನು ನಗೆ ಉಕ್ಕಿಸುತ್ತವೆ ಹಾಗೆಯೇ ಮನಕ್ಕೆ ತಾಕುತ್ತವೆ. 
ಅದ್ಭುತ ದೃಶ್ಯಗಳು 
  • ಮಗ ಬಿಳಿ ಹುಡುಗಿಯನ್ನು ಮದುವೆ ಮಾಡಿಕೊಂಡು ಬಂದಿದ್ದಾನೆ ಎಂದು ತಿಳಿದು ಆಕೆಯನ್ನು ದೆಹಲಿಯಿಂದ ಹಾಗೆಯೇ ಅಲ್ಪ ಸ್ವಲ್ಪ ದುಡ್ಡು ಕೊಟ್ಟು ಸಾಗು ಹಾಕಬೇಕೆಂಬ ನಿರ್ಧಾರದಿಂದ ಬರುವ ಸೀತಾರಂ.. ಆಕೆಯನ್ನು ನೋಡಿ, ಆಕೆ ಕನ್ನಡ ಭಾಷೆಯಲ್ಲಿ ಮಾತಾಡುವುದು, "ಮಾವ" ಎಂದು ಸಂಭೋಧಿಸುವುದನ್ನು ನೋಡಿ, ಹಣದ ಪೆಟ್ಟಿಗೆಯನ್ನು ಹಾಗೆ ಪಕ್ಕದಲ್ಲಿಟ್ಟುಕೊಂಡು ಆಶೀರ್ವಾದ ಮಾಡುತ್ತಾರೆ. ಸಂಸ್ಕಾರ ಇದ್ದಾಗ ಸಂಪತ್ತು ಮುಖ್ಯ ಅಲ್ಲಾ ಎನ್ನುವ ಅದ್ಭುತ ಸಂದೇಶ ಕಾಣ ಸಿಗುತ್ತದೆ. 
  • ಹಣದ ಪೆಟ್ಟಿಗೆಯನ್ನು ಸೀತಾರಾಮ್ ತೆಗೆಯಲು ಹೋದಾಗ.. ಎಲಿಸಾ ಮಾವ ಎಂದು ಬಗ್ಗಿ ನಮಸ್ಕರಿಸಿ ನಿಮ್ಮನ್ನು ನೋಡಿದಾಗ ಸ್ವಾಮೀ ವಿವೇಕಾನಂದರನ್ನು ನೋಡಿದ ಹಾಗೆ ಆಯಿತು ಎನ್ನುತ್ತಾಳೆ.
  • ಸೊಸೆಯನ್ನು ಮನೆಗೆ ಕರೆ ತಂದಾಗ, ಆರತಿ, ಲೀಲಾವತಿ, ಸೀತಾರಾಮ್ ಇವರುಗಳ ನಡುವೆ ನಡೆಯುವ ಭಾವೋದ್ವೇಗದ ತೊಳಲಾಟ  
  • ಗುರುಗಳೇ ನನಗೆ ವೇದ, ಉಪನಿಷತ್ತು ಇವುಗಳ ಬಗ್ಗೆ ಹೇಳಿರಿ ಎಂದು ಎಲಿಸಾ ಕೇಳಿಕೊಂಡಾಗ ಉದಯಕುಮಾರ್ ಮುಖದಲ್ಲಿ ತೋರುವ ಅಭಿನಯ, ಆನಂದಭಾಷ್ಪದಿಂದ ತೋಯ್ದು ಹೋಗುತ್ತಾ... ಸಮಯ ಆದಗೆಲ್ಲಾ ಹೇಳಿ ಕೊಡುತ್ತೇನೆ ಎಂದಾಗ ಎಲಿಸಾಳ ಮೊಗದಲ್ಲಿ ತೋರುವ ಭಾವನೆಗಳು 
  • ಎರಡು ಆಯಾಮದಲ್ಲಿ ಬರುವ ಒಂದು ದೃಶ್ಯ, ಆರತಿಯನ್ನು ಬಹುವಾಗಿ ಮೆಚ್ಚಿಕೊಳ್ಳುವ ಎಲಿಸಾ ಅವಳನ್ನು ತನ್ನ ಗಂಡನ ಬಳಿ ಹೊಗಳುತ್ತಿದ್ದಾರೆ, ಅದೇ ದೃಶ್ಯದಲ್ಲಿ ಲೀಲಾವತಿ ಆರತಿಯನ್ನು ಎಲಿಸಾಳ ಜೊತೆಯಲ್ಲಿ ಓಡಾಡುವುದನ್ನು ಕಂಡು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಒಂದು ಕಡೆ ಬರಿ ಸಂಭಾಷಣೆ ಕೇಳಿಸುತ್ತಾ.. ದೃಶ್ಯದಲ್ಲಿ ಆರತಿ ಲೀಲಾವತಿಯ ನಡುವೆ ಜುಗಳಬಂಧಿ.. ಒಂದು ಅತ್ಯುತ್ತಮ ದೃಶ್ಯ ಸಂಯೋಜನೆ. 
  • ಆರತಿ ತಮ್ಮಿಬ್ಬರ ನಡುವೆ ಅಡ್ಡ ಬರುತ್ತಿದ್ದಾರೆ ಎನ್ನುವ ತಪ್ಪು ಕಲ್ಪನೆಯಿಂದ ತನ್ನ ಹೆಂಡತಿಯ ಜೊತೆಯಲ್ಲಿ ಹಳ್ಳಿಗೆ ಬರುವ ನಾಯಕ, ತನ್ನ ಹೆಂಡತಿಯ ಮೇಲೆ ಮಮತೆ, ಪ್ರೀತಿ ತೋರಿಸುವ ದೃಶ್ಯವನ್ನು ಕ್ಯಾಮೆರಾದ ಚಲನೆಯ ಮೂಲಕ ತೋರಿರುವುದು ಇಷ್ಟವಾಗುತ್ತದೆ.. ದೂರ ದೂರ ಸಾಗುವ ಕ್ಯಾಮೆರ... ನಿಧಾನವಾಗಿ ಅವರಿಬ್ಬರ ಹತ್ತಿರಕ್ಕೆ ಬರುತ್ತದೆ. ಕೆಲ ಕಾರಣಗಳಿಂದ ಪ್ರೀತಿಯನ್ನು ವ್ಯಕ್ತ ಪಡಿಸಲಾಗದ ಸನ್ನಿವೇಶಗಳಿಂದ ನಿಧಾನವಾಗಿ ಹೊರಬಂದು ಗಂಡ ಹೆಂಡತಿಯ ಪ್ರೀತಿ ಬೆಸುಗೆಯಾಗುತ್ತಿದೆ ಎನ್ನುವ ಸಾಂಕೇತಿಕ ದೃಶ್ಯ ಸಂಯೋಜನೆ ಇಷ್ಟವಾಗುತ್ತದೆ.
  • ನಾಯಕ, ಆರತಿ ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ತನ್ನ ಹೆಂಡತಿಯ ಜೊತೆಯಲ್ಲಿ ಸ್ನೇಹ ಬೆಳೆಸುತ್ತಿದ್ದಾಳೆ ಎನ್ನುವ ತಪ್ಪು ಕಲ್ಪನೆಯಿಂದ.. ಅವಳ ಮೇಲೆ ಹೆರುವ ಆರೋಪಗಳಿಗೆಲ್ಲಾ ಆರತಿ ಕೊಡುವುದು ಒಂದೇ ಉತ್ತರ "ನಂದು ತಪ್ಪೇ ಗೋಪಿ". ಕೆಲವೊಮ್ಮೆಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರ ಇರುತ್ತದೆ.. ಅಥವಾ ಎಲ್ಲಾ ಪರಿಹಾರಗಳಿಗೂ ಅನೇಕ ಸಮಸ್ಯೆಗಳ ಸಂಗಮ ಇರುತ್ತದೆ ಎನ್ನುವಂಥಹ ಉತ್ತಮ ಸಂಭಾಷಣೆ ಈ ದೃಶ್ಯದಲ್ಲಿದೆ. 
  • ನಿಜ ಸ್ಥಿತಿ ಅರಿವಾದಾಗ ಎಲಿಸಾ ಆರತಿಯ ಹತ್ತಿರ ಬಂದು "ತಂದ ಬೇರೊಂದು ಹೆಣ್ಣಾ, ಮದುವೆನಾ ನೋಡಿ ರಂಗಿ ಮನದಾಗೆ ದುಖಃ ನುಂಗಿ" ಎನ್ನುತ್ತಾ ಕಣ್ಣೀರಾಗಿ.. "ಆಮ್ ಸರಿ" ಎಂದು ಓಡಿ ಹೋಗುತ್ತಾಳೆ.. ಸೂಪರ್ ದೃಶ್ಯ ಕಲ್ಪನೆ.,.. ಆದ್ರೆ ರೀತಿಯಲ್ಲಿ ಎಲಿಸಾ ಹೊರತು ನಿಂತಾಗ ಆರತಿ "ಹಸ್ಬೆಂಡ್, ಮಾವ, ಅತ್ತೆ ಶಾರದ ಎವ್ರಿ ಒನ್ ಮೇಕ್ ಮಿ ಸ್ಮೈಲ್" ಎಂದು ಹೇಳುತ್ತಾ ಕಣ್ಣೀರಾಗುತ್ತಾರೆ.. ದೊಡ್ಡ ದೊಡ್ಡ ಭಾಷಣದ ಮಾತುಗಳು ಬರಬಹುದಾದ ದೃಶ್ಯವನ್ನು ಚುಟುಕು ಮಾತುಗಳಿಂದ ಅಲಂಕರಿಸಿ ಭಾವನಾತ್ಮಕ ದೃಶ್ಯವನ್ನಾಗಿಮಾಡಿದ್ದಾರೆ . ಹಾಟ್ಸ್ ಆಫ್ ಟು ಪುಟ್ಟಣ್ಣ ಮತ್ತು ಸಂಭಾಷಣಕಾರ ಎಚ್ ವಿ ಸುಬ್ಬರಾವ್. 

ಪ್ರಾಯಶಃ ಮೊತ್ತ ಮೊದಲ ಬಾರಿಗೆ ಆರತಿಯವರ ಚಿತ್ರದಲ್ಲಿ ಇನ್ನೊಂದು ಹೆಣ್ಣು ಪಾತ್ರ ಅವರನ್ನು ಹಿಂದಕ್ಕೆ ಹಾಕಿರುವುದು. ಮಾರ್ಗರೆಟ್ ಥಾಮ್ಸನ್ ಎನ್ನುವ ಅಮೇರಿಕಾದ ಕಲಾವಿದೆ ಇಡಿ ಚಿತ್ರವನ್ನು ಆವರಿಸಿಬಿಟ್ಟಿದ್ದಾರೆ.  ಕನ್ನಡದಲ್ಲಿಯೇ ನಿಧಾನವಾಗಿ ಮಾತಾಡುತ್ತಾ, ಭಾವಾಭಿನಯ, ಕಣ್ಣಿನಲ್ಲಿಯೇ ಭಾವವನ್ನು ಹೊರಗೆಡುಹುವುದು ಇಷ್ಟವಾಗುತ್ತದೆ. ರಂಗೇನ ಹಳ್ಳಿಯಾಗೆ ಹಾಡಿನಲ್ಲಿ ಪಕ್ಕ ಹಳ್ಳಿ ಕುಣಿತ ಕುಣಿವ ಇವರು, ಹ್ಯಾಪಿಯೇಸ್ಟ್ ಮೊಮೆಂಟ್ ಹಾಡಿನಲ್ಲಿ ಪಾಶ್ಚಾತ್ಯ ಮತ್ತು ನಮ್ಮ ದೇಶದ ಎರಡು ತರಹದ ನೃತ್ಯ ಮಾಡುತ್ತಾ ಹಾಡಿರುವುದು ಸೂಪರ್ ಎನ್ನಿಸುತ್ತದೆ. ಜೊತೆಯಲ್ಲಿಯೇ ಮುಖ ಭಾವ ಬೇಕಾದ ದೃಶ್ಯಗಳಲ್ಲಿ ಮಾತ್ರ ಅವರ ಮುಖವನ್ನು ಹತ್ತಿರದಿಂದ ತೋರಿಸಿ, ತುಟಿ ಚಾಲನೆಗೆ ಸರಿಯಾದ ಸಂಭಾಷಣೆಗಳನ್ನು ಕೊಟ್ಟು.. ಉದ್ದುದ್ದ ಮಾತುಗಳಿಗೆ ದೂರದಿಂದ ದೃಶ್ಯವನ್ನು ಚಿತ್ರಿಕರಿಸಿರುವುದು ಜಾಣ್ಮೆಯ ನಡೆಯಾಗಿದೆ. ಮಾತುಗಳಿಗೆ.. ಹಾಡುಗಳಿಗೆ  ಸರಿಯಾದ ತುಟಿ ಚಾಲನೆ ನೀಡಿರುವ ಈ ಕಲಾವಿದೆಗೆ ಸಹಸ್ರ ಅಭಿನಂದನೆಗಳು. "ಅತ್ತೆ ನಿಮಗೆ ಬಾಯ್ ಬೇಬಿ ಬೇಕೋ ಗರ್ಲ್ ಬೇಬಿ ಬೇಕೋ... ನಾ ಬೇಬಿ ಕೊಟ್ಟರೆ ನನ್ನ ಮೇಲಿನ ಕೋಪ ಒಂಟೋಯ್ತದೆ ಅಲ್ಲವಾ ಅತ್ತೆ" ಅತ್ತ್ಯುತ್ತಮ ದೃಶ್ಯ ಮತ್ತು ಸಂಭಾಷಣೆ. 

ಆರತಿ ಈ ಕಲಾವಿದೆಯ ಬಗ್ಗೆ ಏನು ಹೇಳಲಿ.. ಇವರು ನೀರಿನ ತರಹ ಯಾವ ಪಾತ್ರ ಕೊಟ್ಟರೂ ಅದಕ್ಕೆ ಪ್ರವೇಶ ಮಾಡಿಯೇ ಬಿಡುತ್ತಾರೆ.. ಇಡಿ ಚಿತ್ರದಲ್ಲಿ ತಮ್ಮ ಹತಾಶೆ, ಪ್ರೀತಿ, ಪ್ರೇಮ, ನೋವು, ನಲಿವು, ಸಂತಸ ಎಲ್ಲವನ್ನು ಅದುಮಿಟ್ಟುಕೊಂಡು ಹದವಾಗಿ ಕೊಡುವ ಅಭಿನಯ ಇಷ್ಟವಾಗುತ್ತದೆ. ಅತ್ತೆ ಮಾವನ ಮನೆಯಲ್ಲದ್ದಿದ್ದರೂ ಅವರನ್ನು ಅತ್ತೆ ಮಾವ ಎಂದು ಕರೆಯುತ್ತಾ ಅಕ್ಷರಶಃ ಆ ಮನೆಯಲ್ಲಿಯೇ ಕಳೆಯುವ, ಹಾಗೆಯೇ ತನ್ನ ಅಪ್ಪ ಅಮ್ಮನ ಗೊಂದಲಗಳು, ನೋವುಗಳು ಇವಕ್ಕೆ ತಕ್ಕ ಉತ್ತರ ಕೊಡುತ್ತಾ ಎರಡನ್ನು ಸಂಭಾಳಿಸುವಂಥಹ ಅಭಿನಯ ನೀಡಿ ಗೆದ್ದಿದ್ದಾರೆ. ಎಲಿಸಾಳನ್ನು ತನ್ನ ಅತ್ತೆ ಮಾವನ ಮನದಲ್ಲಿ ಭದ್ರವಾಗಿ ಕೂರಿಸುವ ಅವರ ಪ್ರಯತ್ನ ಮತ್ತು ಅದರಲ್ಲಿ ಯಶಸ್ವೀ ಆಗುವ ಅಭಿನಯ ಗಮನ ಸೆಳೆಯುತ್ತದೆ. ಪ್ರೀತಿ ತ್ಯಾಗ ಮಮತೆ ಎಲ್ಲವನ್ನು ಹದವಾದ ಪಾಕದಲ್ಲಿ ಬೆರೆಸಿ ಅಭಿನಯದ ಮೂಲಕ ನಮಗೆ ಹಂಚಿದ್ದಾರೆ. ಆರತಿ ನಿಮಗೆ ಒಂದು ಸಲಾಂ. 

ಬೇಡದ ಸೊಸೆಯನ್ನು ನೋಡಿಕೊಳ್ಳುವ ಬೇಡ ಕೆಲಸವನ್ನು ಸಿಟ್ಟು ಸೆಡವುಗಳಲ್ಲಿ ತೋರಿಸುವ ಲೀಲಾವತಿ, ತನ್ನ ಆಂಗ್ಲ ಸೊಸೆ ತುಳಸಿ ಕಟ್ಟೆಯನ್ನು ಸುತ್ತುವುದನ್ನು ಕಂಡು ಅಭಿಮಾನ ಉಕ್ಕಿದರೂ, ಅತ್ತೆ ಎನ್ನುವ ಅಹಂ ಅಡ್ಡಿ ಬರುವ ಅಭಿನಯ, ತನ್ನ ಸೊಸೆ ಗರ್ಭಿಣಿ ಎಂದು ಗೊತ್ತಾದಾಗ ತಡೆದು ತಡೆದು ಬಂದು ಪ್ರೀತಿ ವ್ಯಕ್ತ ಪಡಿಸುವ ರೀತಿ.. ಸೂಪರ್.. ಲೀಲಾವತಿ ಇಲ್ಲಿ ಎಂದಿನಂತೆ ಕಲಾವತಿಯಾಗಿ ಬಿಟ್ಟಿದ್ದಾರೆ. 

ಮೃದು ಮಾತು, ಮೃದು ಅಭಿನಯ, ಸರಳ ವ್ಯಕ್ತಿತ್ವ ಇದರ ಸಮಾಗಮ ಸೀತಾರಾಮ್. ಸೊಸೆಯನ್ನು ಕರೆದು ತರುವ ಇವರು ಅವಳ ಗುಣಕ್ಕೆ ಮಾರು ಹೋಗಿ ತನ್ನ ಸ್ನೇಹಿತನಿಗೆ ಕೊಟ್ಟ ಮಾತನ್ನು ಮುರಿಯುತ್ತಾರೆ. ಆದರೆ ಅದಕ್ಕೆ ಅವರು ಕೊಡುವ ಕಾರಣ "ದುಡ್ಡು ಕೊಟ್ಟು ಅವಳ ಕಾಲಿಗೆ ಬಿದ್ದು ನನ್ನ ಮಗನ ಜೀವನದಿಂದ ಹೊರಗೆ ಕಲಿಸಬೇಕು ಎಂದು ಹೋದೆ.. ಅವಳ ಗುಣ ನಡತೆಯನ್ನು ನೋಡಿ.. ನಮ್ಮ ದೇಶದ ಸಂಸ್ಕೃತಿ ಗುಣವನ್ನು ಆದರಿಸುತ್ತದೆಯೇ ಹೊರತು ಹಣವನ್ನಲ್ಲ ಎನ್ನುವಂಥಹ ತರ್ಕ ಬದ್ಧ ಮಾತುಗಳನ್ನು ಆಡುವಾಗ ಅವರ ತೊಳಲಾಟ ಇಷ್ಟವಾಗುತ್ತದೆ. 

ವ್ಯಂಗ್ಯ, ಕುಹಕ, ಚುಚ್ಚುವ ಮಾತುಗಳು, ಜೊತೆಯಲ್ಲಿಯೇ ಸ್ನೇಹಿತನ ಮೇಲಿನ ಅಭಿಮಾನ ಇವುಗಳ ಮಿಲನ ಲೋಕನಾಥ್ ಅವರ ಅಭಿನಯ. ಮಗಳ ಮೇಲಿನ ವ್ಯಾಮೋಹ, ಅವಳ ಬಾಳಿಗೆ ಫ್ರೇಮ್ ಹಾಕಿಕೊಡಬೇಕು ಎನ್ನುವ ತವಕ ಎಲ್ಲ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಅವರಿಗೆ ಸರಿಸಾಟಿಯಾಗಿ ಉಮ ಶಿವಕುಮಾರ್ ಅಭಿನಯ. 

ಇವರ ಜೊತೆಯಲ್ಲಿ ಬರುವ ದಿನೇಶ್ ಪುಟ್ಟ ಪಾತ್ರದಲ್ಲಿ ಮಿನುಗಿ ಹೋಗುತ್ತಾರೆ, ಅಂಬರೀಶ್ ಹಾಡಿನಲ್ಲಿ ಬರುತ್ತಾರೆ. ಆದರೆ ಉದಯಕುಮಾರ್ ಶಾಸ್ತ್ರಿಗಳ ಪಾತ್ರದಲ್ಲಿ ಕಾಡುತ್ತಾರೆ..

ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಅದ್ಭುತ ಶಕ್ತಿ ಇತ್ತು, ಪಾತ್ರಕ್ಕೆ ತಕ್ಕ ಕಲಾವಿದರು. ಆ ಪಾತ್ರದ ಅಭಿನಯ ನೋಡಿದ ಮೇಲೆ ಅರೆ ಇವರು ಈ ಪಾತ್ರ ಮಾಡಲೆಂದೇ ಜನಿಸಿದ್ದಾರೆನೋ ಅನ್ನಿಸುವಷ್ಟು ಸಹಜವಾಗಿರುತ್ತೆ. ಜೊತೆಯಲ್ಲಿಯೇ ಒಂದು ಗೆರೆಯನ್ನು ಉದ್ದ ಮಾಡಬೇಕೆಂದು ಅಂದುಕೊಂಡಾಗ ಆ ಗೆರೆಯನ್ನು ಅಳಿಸದೆ ಪಕ್ಕದಲ್ಲಿಯೇ ಇನ್ನೊಂದು ಚಿಕ್ಕ ಗೆರೆಯನ್ನು ಎಳೆಯುವ ಅತ್ಯುತ್ತಮ ಜಾಣ್ಮೆ ಅವರಲ್ಲಿ ಇತ್ತು.  ಇಲ್ಲಿ ನಾಯಕನ ಪಾತ್ರ ಮುಖ್ಯ ಆದರೆ ಅದು ಕಥೆಗೆ ತಿರುವು ಕೊಡುವಲ್ಲಿ ಮಾತ್ರ.. ಅದಕ್ಕೆಂದೇ ಹೊಸ ಪರಿಚಯವಾದ ಅನಿಲ್ ಕುಮಾರ್ ಎನ್ನುವ ನಟನನ್ನು ಹುಡುಕಿ ತಂದರು. ಕಥೆಗೆ ಬೇಕಾದಂಥಹ ಅಭಿನಯ ಕೊಟ್ಟಿದ್ದಾರೆ.. ಆದರೆ ಅವರ ಮುಂದೆ ಉದ್ದವಾಗಿ ನಿಲ್ಲುವುದು ಬಿಳಿ ಹೆಂಡ್ತಿ ಪಾತ್ರಧಾರಿ.  ಇದು ನಿರ್ದೇಶಕನ ಚಾತುರ್ಯ. 

ಚಿತ್ರದ ಬಹುತೇಕ ಭಾಗ ಸ್ಟುಡಿಯೋ ಒಳಗೆ ನಡೆದರೂ ಪುಟ್ಟಣ್ಣ ಅವರ ಸುಂದರ ತಾಣಗಳ ಹುಡುಕಾಟ ಮೇಲುಕೋಟೆ, ತೊಣ್ಣುರ್ ಕೆರೆ, ದೊಡ್ಡ ಆಳದ ಮರ ಇವುಗಳ ಸುತ್ತಮುತ್ತಲಿನ ವಿಹಂಗಮ ದೃಶ್ಯಗಳನ್ನು ಕಣ್ಣ ಮುಂದೆ ಬಿಡಿಸಿದ್ದಾರೆ.  

ಮನದ ಕಡಲಲ್ಲಿ ಬರುವ ಅಸಮಾಧಾನದ ತರಂಗಗಳನ್ನು ಜೋಪಾನವಾಗಿ ತಡೆದು ಅದನ್ನು ಸರಿಯಾಗಿ ಬಳಕೆ ಮಾಡಿ ಅದನ್ನು ಏರಿ ಸಾಗಿ ನಮ್ಮ ಸಮಾಧಾನ ಎನ್ನುವ ಗುರಿಯನ್ನು, ಸಂಬಂಧ ಎನ್ನುವ ಗುಡಿಯನ್ನು ಮುಟ್ಟಲೇಬೇಕು ಎನ್ನುವ ಸುಂದರ ಸಂದೇಶವನ್ನು ಹೊತ್ತು ತಂದ  ಬಿಳಿ ಹೆಂಡ್ತಿ ಚಿತ್ರ ಪುಟ್ಟಣ್ಣ ಕಣಗಾಲ್ ಅವರ ಬತ್ತಳಿಕೆಯಿಂದ ಹೊರ ಬಂದ ಇನ್ನೊಂದು ಚಿತ್ರ ರತ್ನ. 

ಗುರುಗಳೇ ಸಲಾಂ ನಿಮಗೆ!!!

Friday, December 12, 2014

ವಾಣಿಯ ಝೇಂಕಾರ.. "ತಣ್ಣನೆ"ಯ ಧ್ವನಿ ಅದೇ ಅದೇ ಉಪಾಸನೆ (1974)

ನನಗೆ ಮೊದಲಿಂದಲೂ ಕೆಲವು (ಅಲ್ಲ ಅಲ್ಲ ಅಲ್ಲ ಹಲವು ಎಂದರೆ ಸರಿ) ವಿಷಯಗಳ ಬಗ್ಗೆ ಹುಚ್ಚು.. ಕೆಲವು ಧ್ವನಿಗಳು, ಸ್ಥಳಗಳು, ಚಿತ್ರಗಳು, ಹಾಡುಗಳು ಹೀಗೆ.. ಯಾಕೆ ಇಷ್ಟ ಎಂದರೆ ಹೇಳೋಕೆ ಆಗೋಲ್ಲ.. ಆದರೆ ಅದರ ಬಗ್ಗೆ ಒಂದು ರೀತಿಯ ಹುಚ್ಚು ಮನಸಲ್ಲೇ ಆಲದ ಮರವಾಗಿ ಬೇರೂರಿಬಿಡುತ್ತವೆ..

ನನ್ನ ಬಾಲ್ಯದ ದಿನಗಳಲ್ಲಿ ಎಂಭತ್ತರ ದಶಕದ ಆರಂಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ "ಉಪಾಸನೆ" ಚಿತ್ರ ನೋಡಿ ಬೆಕ್ಕಸ ಬೆರಗಾಗಿದ್ದೆ. ಯಾಕೋ ಅರಿಯದೆ ನಾ ಪುಟ್ಟಣ್ಣ ಅವರ ಚಿತ್ರಗಳ ಹುಚ್ಚನ್ನು ಆಗಲೇ ಹತ್ತಿಸಿಕೊಂಡಿದ್ದೆ. 

ಹಾಗೆಯೇ.. ಈ ಚಿತ್ರದಲ್ಲಿ ಬರುವ ಕನ್ಯಾಕುಮಾರಿ ಸ್ಥಳದ  ಬಗ್ಗೆಯೂ ಕೂಡ.. ಆ ಜಾಗ ನೋಡಲೇ ಬೇಕು.. ಮತ್ತೆ ಹೋದಾಗ ಅಲ್ಲಿ ನನ್ನ ಮಡದಿ ಮತ್ತು ಮಗು ಇರಲೇ ಬೇಕು ಎನ್ನುವ ಹಠ ನನಗೆ ಸುಮಾರು ಹತ್ತು ವರ್ಷದ ಹುಡುಗನಾಗಿದ್ದಾಗಲೇ ಬಂದಿತ್ತು. (ಉತ್ಪ್ರೇಕ್ಷೆ ಖಂಡಿತ ಅಲ್ಲಾ.. ನನ್ನ ಆಸೆಗಳು....  ಹುಚ್ಚುಗಳು ಹೀಗೆಯೇ ಇರುತ್ತವೆ). 

ಈ ಚಿತ್ರ ಹಲವಾರು ಕಾರಣಗಳಿಗೆ ಮನಸ್ಸಿಗೆ ನುಗ್ಗುತ್ತದೆ. 


ಉಪಾಸನೆ ಸೀತಾರಾಮ್ ಎಂದೇ ಹೆಸರಾದ ಸೀತಾರಾಮ್ ಅವರ ಮೃದು ಮಾತು ಚಿತ್ರದ್ದುದ್ದಕ್ಕು ಕಾಡುತ್ತದೆ. ತಾಯಿ, ಮಗು, ಶಾರದೆ ಎನ್ನುವಾಗ ಅವರ ಧ್ವನಿಯಲ್ಲಿ ಬರುವ ಕಂಪನ, ಮಧುರ ಮಿಡಿತ, ತುಡಿತ ಬಹಳ ಕಾಡುತ್ತದೆ. ಅತ್ಯಮೋಘ ಅಭಿನಯ ನೀಡಿರುವ ಅವರು ಚಿತ್ರದ ಯಶಸ್ಸಿನ ಬಹು ಪಾಲನ್ನು ಆಕ್ರಮಿಸಿಕೊಳ್ಳುತ್ತಾರೆ. ಶರೀರ ಶಾರೀರ ಎರಡರ ಅಭಿನಯ ಸೊಗಸಾಗಿದೆ. ಅವರ ಮತ್ತು ಆರತಿಯ ಜುಗಲಬಂದಿ ಬಹುವಾಗಿ ಇಷ್ಟಪಡುವ ಹಾಗೆ ಅಭಿನಯಿಸಿದ್ದಾರೆ.
"ವಾಣಿ"ಜಯರಾಂ ಅವರ ತುಂಟ ಧ್ವನಿ ಇನ್ನೊಂದು ರೀತಿಯಲ್ಲಿ ಕಾಡುತ್ತದೆ. "ಭಾವವೆಂಬ ಹೂವು ಅರಳಿ" ಈ ಹಾಡಿನಲ್ಲಿ ಅವರು "ಅರಳಿ" ಎನ್ನುವಾಗ ಅವರ ಧ್ವನಿ ಕೇಳಲೇ ಒಂದು ಹಿತ. ಚಿ ಉದಯಶಂಕರ್ ಅವರ ಸರಳ ಸಾಹಿತ್ಯಕ್ಕೆ ಚಂದದ ಮೆರುಗು ವಾಣಿಯಮ್ಮ ಅವರ ಗಾಯನ.   "ಭಾವಯ್ಯ ಭಾವಯ್ಯ"   ಎನ್ನುವ ಎರಡು ಬಗೆಯ ಭಿನ್ನ ಹಾಡುಗಳಲ್ಲಿ ಬರುವ ತುಂಟತನದ ಧ್ವನಿ, ಆ ತಮಾಷೆ ಬೀರುವ ಪದಗಳ ಜೋಡಣೆ, ಅದಕ್ಕೆ ಜೀವ ತುಂಬಿರುವ ಇವರ ಗಾಯನ ಸೊಗಸಾಗಿದೆ. ಎರಡು ಹಾಡನ್ನು ರಚಿಸಿರುವ ಆರ್ ಏನ್ ಜಯಗೋಪಾಲ್ ಅವರ ಸಾಹಿತ್ಯ ಮನಸ್ಸೆಳೆಯುವುದು ಹಾಸ್ಯ ಮಿಶ್ರಿತ ಪದಗಳ ಪುಂಜಗಳಿಂದ. 

ನೀವು ಹಾಡುತ್ತಾ ಇರಿ ನಾ ಬರುತ್ತೇನೆ ಎಂದು ಕಾದು ಹೇಳಿ..  ನಂತರ ಬಂದು..  ಮೂರು ಹಾಡುಗಳಲ್ಲಿ ಇಡಿ ಚಿತ್ರವನ್ನೇ ನುಂಗಿ ಬಿಡುವ ಅತ್ಯುತ್ತಮ ಗಾಯಕಿ ಜಾನಕಿಯಮ್ಮ ಮನಸ್ಸನ್ನೇ ಕದ್ದು ಬಿಡುತ್ತಾರೆ. "ಆಚಾರವಿಲ್ಲದ ನಾಲಿಗೆ" ಪುರಂದರದಾಸರ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಹಾಡುವ ಇವರು.. ಭಾರತದ ತುತ್ತ ತುದಿ ಕನ್ಯಾಕುಮಾರಿಯ ಬಗ್ಗೆ ವಿಜಯನಾರಸಿಂಹ ಅವರ "ಭಾರತ ಭೂಶಿರ ಮಂದಿರ ಸುಂದರಿ" ಸುಮಧುರ ಸಾಹಿತ್ಯವನ್ನು ಹಾಡುವಾಗ ಸಾಕ್ಷಾತ್ ಶಾರದೆಯೇ ಆಗಿ ಬಿಟ್ಟಿದ್ದಾರೆ. ಎರಡು ಹಾಡನ್ನು ಉಚ್ಹ ಸ್ಥಾಯಿಯಲ್ಲಿ ಹಾಡಿರುವ ಜಾನಕಿಯಮ್ಮ ಅಬ್ಬಬ್ಬ ಎನ್ನಿಸಿಬಿಡುತ್ತಾರೆ.  ಅಮೋಘ ಗಾಯನದ ಪ್ರತಿಭೆ ಜಾನಕಿಯಮ್ಮ ಅವರ ಧ್ವನಿಯಲ್ಲಿ ಜೋಗದ ಜಲಪಾತದ ರಭಸ, ಲಾಲಿತ್ಯ, ಮಧುರತೆ ಎಲ್ಲವೂ ಬಂದಿಯಾಗಿಬಿಟ್ಟಿವೆ. 

ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಬಿ ಕೆ ಸುಮಿತ್ರ ಅವರ "ಸಂಪಿಗೆ ಮರದ ಹಸಿರೆಲೆ ನಡುವೆ" ಗೀತೆ ಸರಳ ಸಾಹಿತ್ಯದಿಂದ ಗಮನ ಸೆಳೆಯುತ್ತದೆ. ಜೊತೆಯಲ್ಲಿ ಆರ್ ಏನ್ ಜಯಗೋಪಾಲ್ ಅವರು ಚಿಕ್ಕ ಚಿಕ್ಕ ಮಕ್ಕಳು ಉಲಿಯುವ ಪದಗಳನ್ನು ತಂದು ಜೋಡಿಸಿ ಹೆಣೆದಿರುವ ಈ ಹಾಡು ಇಷ್ಟವಾಗುತ್ತದೆ. 

ಆರತಿ ಗಂಧದ ಕೊರಡಿನ ಹಾಗೆ ಅಭಿನಯವನ್ನು ತೇಯ್ದು .. ಈ ಚಿತ್ರ ಗೆದ್ದರೆ ನಾ ಗೆಲ್ಲುವೆ ಎನ್ನುವಂತೆ ತಮ್ಮ ಅಭಿನಯದ  ಶಕ್ತಿಯನ್ನು ತೇಯ್ದು .. ಈ ಪಾತ್ರಕ್ಕೆ ಅಭಿನಯಿಸಲೆಂದೇ ನಾ ಹುಟ್ಟಿದ್ದೇನೆ ಎನ್ನುವಂತೆ ಛಲ ತುಂಬಿಕೊಂಡು ನಟಿಸಿದ್ದಾರೆ ,  ಅಲ್ಲ ಅಲ್ಲ ಆ ಪಾತ್ರವೇ ಆಗಿ ಹೋಗಿದ್ದಾರೆ. ಹಾಡುಗಳಲ್ಲಿ ಅವರು ತೋರುವ ಶ್ರದ್ಧೆ, ಸಂಭಾಷಣೆ ಹೇಳುವಾಗ ಅವರು ತೋರುವ ಚೈತನ್ಯ, ಕೆಲವೊಮ್ಮೆ ಮಾತೆ ಬೇಡ ಎನ್ನಿಸುವ ದೃಶ್ಯಗಳಲ್ಲಿ ಕಣ್ಣಲ್ಲೇ ತೋರುವ ಭಾವ (ತಂಗಿ ಮತ್ತು ಗಂಡನನ್ನು ಕೋಣೆಯ ಒಳಗೆ ಸೇರಿಸಿ.. ಬಾಗಿಲನ್ನು ಹಾಕಿ ಹೊರ ಬರುವ ದೃಶ್ಯದಲ್ಲಿ) ಆಹಾ ಆಹಾ ಹೇಳಿದಷ್ಟು ಸೊಗಸು. ಸಮುದ್ರದ ಅಲೆಗಳನ್ನು ನೋಡುವಾಗ ಒಂದು ಅಲೆ ಹೋದರೆ ಇನ್ನೊಂದು ಬರುವಂತೆ, ಒಂದು ದೃಶ್ಯದಲ್ಲಿ ಅಬ್ಬಾ ಎನ್ನಿಸುತ್ತ ಮುಂದಿನ ದೃಶ್ಯ ನೋಡಿದಾಗ ಅರೆ ಅರೆ ಇದು ಇನ್ನು ಸೊಗಸು ಅನ್ನಿಸುತ್ತದೆ. ಇಡಿ ಚಿತ್ರದಲ್ಲಿ ಸರಿ ಸುಮಾರು ಪ್ರತಿಯೊಂದು ದೃಶ್ಯದಲ್ಲಿ ಕಾಣಿಸಿಕೊಳ್ಳುವ ಆರತಿ ಅಭಿನಯ ಅವರ ಚಿತ್ರ ಜೀವನದಲ್ಲಿನ ಅತ್ಯುತ್ತಮ ಅಭಿನಯ ಎನ್ನುತ್ತೇನೆ.  (ರಂಗನಾಯಕಿ ಚಿತ್ರವಿದೆ!!!!)

ಚಿತ್ರಜ್ಯೋತಿ ಲಾಂಛನದಲ್ಲಿ ರಾಶಿ ಸಹೋದರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರ ದೇವಕಿ ಮೂರ್ತಿ ಎನ್ನುವವರ ಅದೇ ಹೆಸರಿನ ಕಥೆಯನ್ನು ಆಧರಿಸಿತ್ತು.  ಈ ಕಥೆಗೆ ಸಂಭಾಷಣೆಯ ಪೋಷಾಕು ತೊಡಿಸಿದವರು ನವರತ್ನರಾಂ ಅವರು. ಎಸ್ ವಿ ಶ್ರೀಕಾಂತ್ ಸುಂದರ ಭಾವುಕ ದೃಶ್ಯಗಳನ್ನು ಜೊತೆಯಲ್ಲಿ ಅದ್ಭುತ ಸ್ಥಳ ಕನ್ಯಾಕುಮಾರಿಯನ್ನು ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದಾರೆ. ಭಾರತ ಭೂಶಿರ ಹಾಡನ್ನು ಒಳಾಂಗಣದಲ್ಲಿ ಚಿತ್ರೀಕರಿಸಿ ಆರತಿಯವರ ಮುಖವನ್ನು ಹೊಳೆಯುವ ಪಾದರಸದಂತೆ, ಜೊತೆಯಲ್ಲಿ ಕ್ಯಾಮೆರ ಒಂದು ಚೂರು ಕದಲದೆ ಬರಿ ಮುಖವನ್ನು ತೋರಿಸುವ ಅದ್ಭುತ ಛಾಯಾಗ್ರಹಣ ಇವರದು. ಮತ್ತೆ ಭಾವುಕ ಸನ್ನಿವೇಶಗಳಿಗೆ ತಕ್ಕಂತೆ ಕ್ಯಾಮೆರ ಓಡಾಡುವ, ಇಲ್ಲವೇ ಸುತ್ತವ, ಇಲ್ಲವೇ ಜೋಕಾಲಿಯಂತೆ  ತೂಗುವ ವಿಭಿನ್ನ ತಂತ್ರ ಈ ಚಿತ್ರದಲ್ಲಿ ಮಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಕ್ರಿಯಾಶೀಲತೆಗೆ ಸಾಕ್ಷಿ. 

ಪುಟ್ಟಣ್ಣ ಅವರ ಜೀವದ ಗೆಳೆಯ ವಿಜಯಭಾಸ್ಕರ್ ಈ ಚಿತ್ರದ ಆತ್ಮ ಎನ್ನಲೇ ಬೇಕು. ಪ್ರತಿ ಹಾಡಿಗೂ ವಿಭಿನ್ನ ಸಂಗೀತ, ಜೊತೆಯಲ್ಲಿ ಚಿತ್ರದುದ್ದಕ್ಕೂ ಬರುವ ಹಿನ್ನೆಲೆ ವೀಣೆಯ ನಾದ ಶ್ಯಾಮಲಾ ಸ್ವಾಮೀ ಅವರದು. ವಿಜಯಭಾಸ್ಕರ ಅವರ ರಾಗ ಸಂಯೋಜನೆ ಅಮೋಘ ಅದ್ಭುತ ಎನ್ನಲೇ ಬೇಕು. ಭಾರತ ಭೂಶಿರ ಎಷ್ಟು ಬಾರಿ ಕೇಳಿದರೂ ಹೊಸದು ಎನ್ನಿಸಲು ಅವರ ಸಂಗೀತವೆ ಕಾರಣ. 

ಹೊಟ್ಟೆಕಿಚ್ಚಿನ ಗುರುವಾಗಿ ಮುಸುರಿ ನಗೆ ಮೀಟುತ್ತಾರೆ. ಅವರು ಬಂದು ಹೋಗುವ  ಐದಾರು ದೃಶ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಹೊರತಂದಿದ್ದಾರೆ.
 "ಗೊತ್ರಿ ನನಗೆ ಗೊತ್ರಿ ನೀವು ಹೀಗೆ ಹೇಳ್ತೀರಾ ಅಂತ ನನಗೆ ಗೊತ್ರಿ" 
"ಭಾರತದ ತಮಟೆ ವಾದ್ಯದಿಂದ ಹಿಡಿದು ಪರದೇಶದ ಪಿಯಾನೋ ತನಕ ಬರುತ್ತೆ ಕಣಯ್ಯಾ"
"ತಂಬೂರಿಗೆ ಕಮಾನ್ ಹಾಕೋದು ಇದ್ದೆ ಇದೆ ಕಣಯ್ಯಾ.. ಮೊದಲು ಪಿಟೀಲಿಗೆ ಕಮಾನು ಹಾಕು.. ಆಮೇಲೆ ತಂಬೂರಿಗೆ  ಕಮಾನು ಹಾಕಿ ಕಮಾಲ್ ನೋಡೋಣ"
ಹೀಗೆ ಚಿಕ್ಕ ಚಿಕ್ಕ ಮಾತುಗಳು ಅಂಗೀಕ ಅಭಿನಯದಿಂದ ಮನಸ್ಸು ಗೆಲ್ಲುತ್ತಾರೆ ಮುಸುರಿ ಕೃಷ್ಣಮೂರ್ತಿ. 

ಸದಾ ಒಲಾಡುತ್ತಲೇ, ಹಿಪ್ಪಿ ಕೂದಲು ಬಿಟ್ಟು ವಿಚಿತ್ರ ಅಭಿನಯ ಕೊಡುವ ಶಿವಾರಂ, ನಗೆ ಮೀಟುತ್ತಾರೆ.  ಪುಟ್ಟಣ್ಣ ಅವರ ಹಲವಾರು ಚಿತ್ರದಲ್ಲಿ  ಪಾತ್ರ ಮಾಡಿರುವ ಶಿವರಾಂ, ಪ್ರತಿ ಚಿತ್ರದಲ್ಲೂ ಏನಾದರೂ ಹೊಸ ತರಹ ಅಂಗೀಕ ಅಭಿನಯ, ಒಂದು ಪಂಚಿಂಗ್ ಸಂಭಾಷಣೆ ತರುತ್ತಾರೆ. ಅವರ ಹಾಸ್ಯಭರಿತ ಸಂಭಾಷಣೆ ಕೇಳುವುದೇ ಒಂದು ಮಜಾ.  ಇದರ ಒಂದು ಒಂದು ಝಲಕ್ "ಸಂಗೀತದಲ್ಲಿರುವ ಉತ್ತರಾದಿ, ದಕ್ಷಿಣಾದಿ, ಪೂರ್ವಾದಿ, ಪಶ್ಚಿಮಾದಿ, ಪಾಶ್ಚಾತ್ಯಾದಿ ಸಂಗೀತ ಪ್ರಕಾರಗಳನ್ನು ಕಲಸಿ, ಬೆರೆಸಿ, ಪ್ರೇಕ್ಷಕರನ್ನು ನಲಿಸಿ, ಕುಣಿಸಿ, ತಣಿಸಿ,ಬೆದರಿಸಿ ಸ್ಟನ್ ಮಾಡಬೇಕೆಂಬುದೇ ಈ ಶಂಕರಾಭರಣನ ಲೈಫ್ ಆಂಬಿಶನ್ "

ಸಂಗೀತದ ಎಲ್ಲಾ ಸಿದ್ಧ ಸೂತ್ರಗಳು ಗೊತ್ತು ಎಂದು ಜಂಬ ಕೊಚ್ಚುತ್ತಾ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವ ಅಶ್ವಥ್ ಅವರ ಅಭಿನಯ ಚಿತ್ರದ ಹೈ ಲೈಟ್.  ತುಂಬಾ ಗಂಭೀರ ಪಾತ್ರ ಮಾಡುವ ಅಶ್ವಥ್ ಹಾಸ್ಯ ಪಾತ್ರಗಳಲ್ಲೂ ನಾ ಗೆಲ್ಲಬಲ್ಲೆ ಎಂದು ತೋರುತ್ತಾರೆ. ನಾಗರಹಾವಿನ ಚಾಮಯ್ಯ ಮೇಷ್ಟ್ರು, ಶುಭಮಂಗಳದ ಉಬ್ಬಸದ ವೈದ್ಯರು, ಇಲ್ಲಿ ತಮಾಷೆ ಬೀರುವ ಸಂಗೀತದ ಆರಾಧಕ.... ಆಶಾ ಎಷ್ಟು ವಿಭಿನ್ನ ಅಭಿನಯದ ನಟರು ಇವರು.  ಪ್ರತಿಯೊಂದು ಸಂಭಾಷಣೆಯಲ್ಲೂ "ಬೇಕಾದ್ರೆ ನನ್ನ ಹೆಂಡತೀನ ಕೇಳಿ" ಮಾತು ಇಷ್ಟವಾಗುತ್ತದೆ. ಅಂತಿಮ ದೃಶ್ಯಗಳಲ್ಲಿ ತೊಳಲಾಡುವ ಅವರ ಅಭಿನಯ ನಿಜಕ್ಕೂ ಇಷ್ಟವಾಗುತ್ತದೆ. 

ಆದವಾನಿ ಲಕ್ಷ್ಮೀದೇವಿ, ಲೀಲಾವತಿ ತಮ್ಮ ಪಾತ್ರಗಳಲ್ಲಿ ಲೀನವಾಗಿದ್ದಾರೆ.. ಆದವಾನಿ ಲಕ್ಷ್ಮೀದೇವಿ ತಾಯಿ ಮಮತೆ ತೋರುವ ಕರುಣಾಮಯಿ ಆದರೆ, ಲೀಲಾವತಿ ಕೆಲವೊಮ್ಮೆ ಅಮ್ಮನ ಕರುಣಾಳು ಪಾತ್ರ, ಹಲವೆಡೆ ಅತ್ತೆ ಎನ್ನುವ ಗತ್ತು ಎರಡನ್ನು ಮಿಶ್ರಣಗೊಳಿಸಿರುವ ಅಭಿನಯ ತಾಕುತ್ತದೆ. 

ವೆಂಕಟರಾವ್ ತಲಗೇರಿ ಅಪ್ಪನ ಪಾತ್ರದಲ್ಲಿ ಛಾಪು ಒತ್ತುತ್ತಾರೆ, ಉದ್ವೇಗವಿಲ್ಲದ ನಿಧಾನ ರೀತಿಯ ಸಂಭಾಷಣೆ,ಆ ಧ್ವನಿ, ಅಪ್ಪ ಎನ್ನುವ ಜವಾಬ್ಧಾರಿಯ ಗುಣ ಮೈ ಎತ್ತಿದಂತೆ ಅಭಿನಯ ನೀಡಿದ್ದಾರೆ. ಅದರಲ್ಲೂ ಕಡೆಯಲ್ಲಿ ಸಂಗೀತದ ಗುರುಗಳಿಗೆ ಅವರ ಶಿಷ್ಯೆ ಕಚೇರಿ ಮಾಡಬಾರದೆಂದು ಹೇಳಿ ಎಂದು ಕೇಳಿಕೊಳ್ಳುವ ದೃಶ್ಯ ಸೂಪರ್. 

ಚಿಕ್ಕ ಚೊಕ್ಕ ಪಾತ್ರದಲ್ಲಿ ಎಂ ಏನ್ ಲಕ್ಷ್ಮೀದೇವಿ ಮತ್ತು ವಜ್ರಮುನಿ ಗಮನಸೆಳೆಯುತ್ತಾರೆ. 

ಇಡಿ ಚಿತ್ರ ಸಂಗೀತದ ರಥದ ಮೇಲೆ ಸಾಗುತ್ತದೆ. ವಿಜಯಭಾಸ್ಕರ್ ಅವರು ತಮ್ಮ ಛಾಯೆಯನ್ನು ಈ ಚಿತ್ರದಲ್ಲಿ ಒತ್ತಿಬಿಟ್ಟಿದ್ದಾರೆ. ಅವರ  ಸಂಗೀತವನ್ನು ಹೊರಗೆ ತೆಗೆದು ಈ ಚಿತ್ರವನ್ನು ನೋಡಿದರೆ ಬಹಳ ಸಪ್ಪೆ ಎನ್ನಿಸುತ್ತದೆ. ಆದರೆ ಸಂಗೀತ ಕಲಾವಿದರ ಅಭಿನಯವನ್ನು ನುಂಗದೆ, ಅವರ ಅಭಿನಯಕ್ಕೆ ಹೊಳಪು ಕೊಡುವ ರತ್ನವಾಗಿರುವುದು ವಿಶೇಷ. 

ಈ ಚಿತ್ರದಲ್ಲಿ ಸಂಗೀತವನ್ನು ಪ್ರಧಾನವಾಗಿ ಇಟ್ಟುಕೊಂಡು ರೂಪಿಸಿರುವ ಚಿತ್ರ. ಆರತಿಯೇ ಈ ಚಿತ್ರದ ಕೇಂದ್ರ ಬಿಂದು. ಅವರ ಸುತ್ತಲೇ ಇಡಿ ಚಿತ್ರ ಸುತ್ತುತ್ತದೆ.  ಬರುವ ಪಾತ್ರಗಳು ಅವರ ಸಂಗೀತದ ಆಸಕ್ತಿಯ ಬಗ್ಗೆ ಪುರಸ್ಕಾರ ಇಲ್ಲಾ ತಿರಸ್ಕಾರ  ತೋರುವಂತೆ ಅಭಿನಯಿಸಿವೆ. ರೇಡಿಯೋ ರಂಗಮ್ಮ, ಮುಸುರಿ, ವಜ್ರಮುನಿ, ಲಕ್ಷ್ಮೀದೇವಿ, ಕೊಂಚ ಹೊತ್ತು ಶಿವರಾಂ ಎಲ್ಲರೂ ಅವರ ಸಂಗೀತದ ಆಸಕ್ತಿಗೆ  ಬರೆ ಎಳೆಯುವಂತೆ ಮಾಡಿದರೆ, ಸೀತಾರಾಮ್, ವೆಂಕಟರಾವ್, ಲಕ್ಷ್ಮೀದೇವಿ, ಲೀಲಾವತಿ, ಅಶ್ವತ್, ಮತ್ತು ನಾಯಕನಾಗಿ ಅಭಿನಯಿಸಿರುವ ಗೋವಿಂದರಾವ್ ಮಣ್ಣೂರ್ ಮುದ್ದಾಗಿ ಕಾಣುವುದಷ್ಟೇ ಅಲ್ಲದೆ ಸಂಗೀತಕ್ಕೆ ಪ್ರೋತ್ಸಾಹ ಕೊಡುವಲ್ಲಿ ಗಮನ ಸೆಳೆಯುವ ಕೊಡುಗೆ ಕೊಟ್ಟಿದ್ದಾರೆ. 

ಸಂಗೀತವನ್ನು ವೃತ್ತ ಎಂದು ಭಾವಿಸಿ ಅದನ್ನು  ಚಿತ್ರಿಸಲು ಹೊರಟರೆ ಅಲ್ಲಿ ಕೇಂದ್ರ ಬಿಂದು ಆರತಿ, ಪರಿಧಿಯಲ್ಲಿ ಕಾಣುವ, ಬರುವ ಪಾತ್ರಗಳೇ ಮಿಕ್ಕವು. ಗುರು ಪಾತ್ರ ಮಾತ್ರ ಪರಿಧಿಯೊಳಗೆ ಬರುತ್ತಾರೆ ಹೊರತು ಮಿಕ್ಕವರೆಲ್ಲಾ ಪರಿಧಿಯ ಹೊರಗೆ ನಿಲ್ಲುತ್ತಾರೆ,. ಇಂಥಹ ಒಂದು ಅನುಭವ ಕೊಡುವ ಈ ಚಿತ್ರ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಲ್ಲಿ ಒಂದು ರತ್ನವಾಗಿ ನಿಲ್ಲಲು ಸಹಾಯ ಮಾಡಿವೆ. 

ಪುಟ್ಟಣ್ಣ ಕಣಗಾಲ್, ದೇವಕಿ ಮೂರ್ತಿಅವರ ಕಥೆಯನ್ನು ಅಚ್ಚುಕಟ್ಟಾಗಿ ಚಿತ್ರಕಥೆಗೆ ಅಳವಡಿಸಿಕೊಂಡು ಎಲ್ಲೂ ಬೇಸರಬಾರದಂತೆ, ಸಂಗೀತ ಬಲ್ಲವರೂ, ಬಾರದಿರುವವರು ಕೂಡ ನೋಡಿ ಮೆಚ್ಚಿ ತಲೆದೂಗುವಂತೆ ಚಿತ್ರಿಕರಿಸಿರುವುದು ಅವರ ಅದ್ಭುತ ಪ್ರತಿಬೆಗೆ ಸಾಕ್ಷಿ. 

೧. ಚಿತ್ರದ ಆರಂಭ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಯಾವಾಗಲು ವಿಶೇಷ, ಅಲ್ಲಿಯ ಚಿತ್ರದ ಸಂದೇಶದ ಒಂದು ಝಲಕ್ ಕೊಟ್ಟಿರುತ್ತಾರೆ.  ಸಂಗೀತ ಸಾಧಕರ ಚಿತ್ರಗಳ ಹಿನ್ನೆಲೆಯಲ್ಲಿ, ವಾದ್ಯಗಳ ಚಿತ್ರಗಳ ಜೊತೆಯಲ್ಲಿ ಆರಂಭವಾಗುವ ಟೈಟಲ್ ಕಾರ್ಡ್ ಗಮನ ಸೆಳೆಯುತ್ತದೆ. ಸಂಗೀತಕ್ಕೆ ತಮ್ಮನ್ನೇ ಅರ್ಪಿಸಿಕೊಂಡ ಮಹಾನ್ ಚೇತನಗಳ ದರ್ಶನ ಆರಂಭದಲ್ಲೇ ಮಾಡಿಸುತ್ತಾರೆ. 

೨. ಹಲವಾರು ದೃಶ್ಯಗಳಲ್ಲಿ, ಕಲಾವಿದರ ಅಭಿನಯದಲ್ಲಿ ತಳಮಳ, ಆತಂಕ, ಅನುಮಾನ, ಹುಯ್ದಾಟ ಇವನ್ನು ಚಿತ್ರಿಕರಿಸುವಾಗ ಕ್ಯಾಮೆರವನ್ನು ತೂಗಡಿಸಿ, ಅಲುಗಾಡಿಸಿ, ಇಲ್ಲವೇ ಅತ್ತಾ ಇತ್ತಾ ತೂರಾಡುವ ಶೈಲಿಯಲ್ಲಿ ಉಪಯೋಗಿಸಿದ್ದಾರೆ. ಕಲಾವಿದರ ಅಭಿನಯಕ್ಕೆ ಇನ್ನಷ್ಟು ಸಾಂಧ್ರತೆ ಹೆಚ್ಚಾಗಲು ಸಹಕಾರಿಯಾಗಿದೆ.  

೩. ಶಾರದೆಯ ಮದುವೆ ವಿಷಯ ಬಂದಾಗ.. ನೆರಳಿನಲ್ಲಿ ಅವಳ ವೀಣೆಯನ್ನು ಕಿತ್ತುಕೊಂಡು, ಅದನ್ನು ಬಿಸಾಡುವ ದೃಶ್ಯ, ಅವಳ ಮನಸ್ಸಲ್ಲೇ ನಡೆಯುತ್ತಿರುವ ತಳಮಳವನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಇದು ಅವರ ಜಾಣ್ಮೆಗೆ ಹಿಡಿದ ಕನ್ನಡಿ. ನೂರಾರು ಮಾತುಗಳಲ್ಲಿ ಹೇಳಬೇಕಾದ ದೃಶ್ಯವನ್ನು ಕೇವಲ ಕೆಲವೇ ಕ್ಷಣಗಳಲ್ಲಿ ತಲುಪಿಸುವ ಅವರ ಕ್ರಿಯಾಶೀಲತೆಗೆ ನಮನ. 

೪. ಸ್ವಾಮೀ ವಿವೇಕಾನಂದರ ಅಮರವಾಣಿಯ ಧ್ಯೋತಕವಾಗಿ ರೂಪಿಗೊಂಡಿರುವ ಕನ್ಯಾಕುಮಾರಿಯಲ್ಲಿನ ಅವರ ಸುಂದರ ದೇವಾಲಯದ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಿರುವುದು ಬಹಳ ಇಷ್ಟವಾಗುತ್ತದೆ. ಬಹುಶಃ ಈ ಚಿತ್ರವೇ ಮೊದಲು ಅಲ್ಲಿ ಚಿತ್ರೀಕರಣ ಮಾಡಿದ್ದು ಅನ್ನಿಸುತ್ತದೆ.

5. ಇಡಿ ಚಿತ್ರದಲ್ಲಿ ಒಂದು ಅಂಶ ಎದ್ದು ಕಾಣುತ್ತದೆ, ಆರಂಭದಿಂದಲೂ ತುಂಟಿ, ತರಲೆ ಮಾಡುವ ಪಾತ್ರದಲ್ಲಿ ಮೂಡಿಬರುವ ಶಾರದೆಯ ತಂಗಿ ಪಾತ್ರ (ಜಿ ವಿ ಶಾರದ) ಮದುವೆಯ ನಂತರ ಗಂಭೀರ ಪಾತ್ರಕ್ಕೆ ನುಗ್ಗುವುದು, ಹಾಗೆಯೇ ಅಶ್ವತ್ ಚಿತ್ರದುದ್ದಕ್ಕೂ ಶಾರದೆಯ ಪರವಾಗಿ ನಿಲ್ಲುವ ಅವರು ಕಡೆಯ ದೃಶ್ಯಗಳಲ್ಲಿ ಶಾರದೆಗೆ ವಿರುದ್ಧವಾಗಿ ನಿಲ್ಲುವುದು. ಇಂಥಹ ವೈರುಧ್ಯ ಪಾತ್ರಗಳಲ್ಲಿನ ಅಭಿನಯವನ್ನು ಹೊರತೆಗೆಯುವಲ್ಲಿ ಪುಟ್ಟಣ್ಣ ಅವರ ಯಾವಾಗಲು ಸಿದ್ಧ ಹಸ್ತರಾಗಿದ್ದರು.

೬." ಭಾರತ ಭೂಶಿರ ಮಂದಿರ ಸುಂದರಿ" ಹಾಡನ್ನು ಗುರುಗಳ ಮನೆಯಲ್ಲಿ ಚಿತ್ರೀಕರಿಸಿರುವ ಶೈಲಿ, ಆರತಿ ಮುಖವನ್ನು ಮಾತ್ರ ಸ್ಟಡಿ ಕ್ಯಾಮೆರಾದಲ್ಲಿ ತೋರಿಸಿ, ಅದನ್ನು ಕೇಳಲೆಂದು ಬಂದ ಮಂದಿಯನ್ನು ತೋರಿಸುವಾಗ ಆ ದೃಶ್ಯಗಳು ತೂಗಾಡುತ್ತ ಇರುವಂತೆ ಚಿತ್ರೀಕರಿಸಿದ್ದಾರೆ. ಸಂಗೀತದ ಶಕ್ತಿಯನ್ನು ತೋರಿಸುವ ಒಂದು ವಿಭಿನ್ನ ರೀತಿ. ರಾಮಚಂದ್ರ ಶಾಸ್ತ್ರೀ ಅವರು ಆ ಹಾಡಿನಲ್ಲಿ ಬಂದು ಹೋದರೂ ಅವರು ಹೇಳುವ ಮಾತು "ಅನಂತ ಶಾಸ್ತ್ರಿಗಳೇ ಹೃದಯ ಹಿಂಡುವ ನಿಮ್ಮ ಶಿಷ್ಯಳ ಸಂಗೀತ ಎಲ್ಲರ ಮನವನ್ನು ತಣಿಸಲಿ.. " ಇಷ್ಟವಾಗುತ್ತದೆ.

೭. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರ ಇಂದಿಗೂ ಸಂಗೀತಮಯ ಚಿತ್ರ ಎಂದಾಗ ಮೊದಲಿಗೆ ಬಂದು ನಿಲ್ಲುತ್ತದೆ.

ಉಪಾಸನೆ ಒಂದು ಚಿತ್ರರತ್ನವಾಗಿ ನಿಲ್ಲಲು ಎಲ್ಲರ ಪರಿಶ್ರಮದ ಅಗತ್ಯ ಇದೆ. ಇಡಿ ಚಿತ್ರವನ್ನು ಹೆಗಲಿಗೆ ಜೋತು ಹಾಕಿಕೊಂಡು ಚಿತ್ರಿಸಿರುವ ಪುಟ್ಟಣ್ಣ ಕಣಗಾಲ್ ಧ್ವನಿ ಎಂಬ ಒಂದು ಚಿಕ್ಕ ಸಂಗತಿಯನ್ನು ಇಟ್ಟುಕೊಂಡು ತಣ್ಣನೆ ಮಧುರ ಅನುಭವ ಕೊಡುವ ಚಿತ್ರವನ್ನಾಗಿ ಕೊಟ್ಟಿದ್ದಾರೆ. ಅದಕ್ಕೆ ನಮ್ಮ ಅದ್ಭುತ ನಿರ್ದೇಶಕರಿಗೆ ಒಂದು ಸಲಾಂ ಹೇಳೋಣ.. !!!

Tuesday, December 2, 2014

ಮಂಗಳಕರವಾದ ಶುಭಮಂಗಳ (1975)

ನೂಲಿನ ಉಂಡೆಯನ್ನು ನಿಧಾನವಾಗಿ ಬಿಡಿಸುತ್ತಾ ಹೋದಹಾಗೆ. ನೂಲಿನ ಉದ್ದವೂ ವಿಸ್ತರಿಸುತ್ತಾ ಹೋಗುತ್ತದೆ. ಹಾಗೆಯೇ ಒಂದು ಸಣ್ಣ ಎಳೆಯನ್ನು ನಿಧಾನವಾಗಿ ಹರಡುತ್ತಾ ಹೋದ ಹಾಗೆ ಅದರ ಹರಿವು ಅರಿವಾಗುತ್ತಾ ಹೋಗುತ್ತದೆ,

ಪುಟ್ಟಣ್ಣ ಕಣಗಾಲ್ ಕೂಡ ಹಾಗೆ.. ಒಂದು ಸಣ್ಣ ಛಲವನ್ನು ಹೊತ್ತು ಚಿತ್ರರಂಗಕ್ಕೆ ಬಂದರು. ಚಲನ ಚಿತ್ರದ ಎಲ್ಲಾ ಪ್ರಾಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರ ಫಲಿತಾಂಶ ಪ್ರತಿ ಚಿತ್ರದಲ್ಲಿಯೂ ಹೊಸ ವಿಷಯ, ಹೊಸ ಸಂದೇಶ, ಹೊಸ ಬಗೆಯ ತಾಣ, ಹೊಸ ಲಯ ಎಲ್ಲವೂ ಹೊಸದು

ಅವರ ಎಲ್ಲಾ ಚಿತ್ರಗಳನ್ನು ಸಾಲು ಸಾಲು ನಿಲ್ಲಿಸಿದರೆ ಒಂದಕ್ಕಿಂತ ಒಂದು ವಿಭಿನ್ನ., ಅದು ಅವರು ಕನ್ನಡಾಂಬೆಯ ಪೂಜೆಗೆ ಸಲ್ಲಿಸುವ ವಿವಿಧ ಪುಷ್ಪ ನಾಮಾವಳಿ,

ಇಂದು ಅವರ ಜನುಮದಿನ.. ಶುಭಾಪ್ರದವಾಗಿಯೇ ಇರುತ್ತದೆ ಎನ್ನುವುದಕ್ಕೆ ಅವರ ಶುಭಮಂಗಳ ಚಿತ್ರದ ಮೂಲಕ ಅವರ ಚರಣಕ್ಕೆ ಅರ್ಪಿಸುತ್ತಿರುವ ಈ ಮಾಲಿಕೆ ಸಾಕ್ಷಿ,

ಹುಟ್ಟು ಹಬ್ಬದ ಶುಭ ಕೋರುವ ಮೂಲಕ ಈ ಲೇಖನ ಮಾಲಿಕೆಯನ್ನು ಮುಂದುವರೆಸುತ್ತಿದ್ದೇನೆ... ಬನ್ನಿ ಕಡಲ ಕಿನಾರೆಯಲ್ಲಿ ಸ್ನೇಹದ ಕಡಲಲ್ಲಿ ಮೀಯೋಣ....


 ಶ್ರೀನಿಧಿ ಪ್ರೊಡಕ್ಷನ್ಸ್  ಲಾಂಛನದಲ್ಲಿ ತಯಾರಾದ ಈ ಚಿತ್ರ ತಯಾರಾದದ್ದು ಕರಾವಳಿಯ ಮಡಿಲಲ್ಲಿ. ಕರಾವಳಿಯ ಸುಂದರ ದೃಶ್ಯಗಳನ್ನು ಇಡಿ ಚಿತ್ರದಲ್ಲಿ ಕಾಡುವಂತೆ ಸೆರೆ ಹಿಡಿದಿರುವುದು ಛಾಯಾಗ್ರಾಹಕ ಎನ್ ಜಿ ರಾವ್.

ಸ್ನೇಹದ ಮಹತ್ವವನ್ನು ಸಾರುವ ಈ ಚಿತ್ರದ ಆರಂಭ ಸೊಗಸಾಗಿದೆ.  ಸ್ನೇಹದ ಉಗಮ ಯಾರಿಗೂ ಅರಿವಾಗುವುದಿಲ್ಲ. ಒಂದು ಸಣ್ಣ ನೋಟ, ಒಂದು ಸಣ್ಣ ನಗು, ಒಂದು ಸಣ್ಣ ಮುನಿಸು ಸ್ನೇಹಕ್ಕೆ ನಾಂದಿ ಹಾಡುತ್ತದೆ. ಹಾಗೆಯೇ ಚಿತ್ರದ ಆರಂಭ ಒಂದು ಸಣ್ಣ ಝರಿಯಿಂದ ಶುರುವಾಗಿ ಚಿತ್ರದ ಹೆಸರು ತಾರಾಗಣ ಎಲ್ಲವನ್ನು ತೋರಿಸುತ್ತಾ ಹೋಗುತ್ತಾರೆ. ಹಾಗೆ ಮುಂದುವರಿದಂತೆಯೇ ಝರಿ, ಸಣ್ಣ ತೊರೆಯಾಗುತ್ತದೆ, ನದಿಯಾಗುತ್ತದೆ, ಬೆಟ್ಟದಿಂದ ಧುಮುಕಿ ಜಲಪಾತವಾಗುತ್ತದೆ, ಕಣಿವೆಯಲ್ಲಿ ಹರಿಯುತ್ತದೆ, ಸಮುದ್ರ ಸೇರುತ್ತದೆ. ಸ್ನೇಹದ ಮಹತ್ವ ತೋರಿಸುವುದಕ್ಕಾಗಿ ಎಷ್ಟು ಸೊಗಸಾದ ವಿಧಾನ ಅನುಸರಿಸಿದ್ದಾರೆ ನಮ್ಮ ಪುಟ್ಟಣ್ಣ,

ಶ್ರೀಮತಿ ವಾಣಿಯವರ ಕಾದಂಬರಿಯ ಒಂದು ಎಳೆಯನ್ನು ಹಿಡಿದು ಈ ಚಿತ್ರವನ್ನು ಮಾಡಿದ್ದರೂ ಅದರ ಸಂಪೂರ್ಣ ಕಾಣಿಕೆ ಕಾದಂಬರಿಕಾರ್ತಿಗೆ ಅರ್ಪಿಸುವುದು ಅವರ ದೊಡ್ಡತನ ತೋರುತ್ತದೆ.

ಸಂಬಂಧಿಕರಾಗಿದ್ದರು ಸ್ನೇಹದ ಅಡಿಪಾಯದ ಮೇಲೆ ಅರಳುವ ನಾಯಕ ನಾಯಕಿಯ ಜೀವನ ಎಲ್ಲೋ ಹುಟ್ಟಿ, ಎಲ್ಲೋ ಹರಿದು, ಸ್ನೇಹದ ಸುಂದರ ಹಂತ ಮಿಲನದಲ್ಲಿ ನಿಲ್ಲುತ್ತದೆ. ಎಷ್ಟು ವಿವಿಧಬಗೆಯ ಯೋಚನೆ ಈ ಕಥಾ ಹಂದರದ್ದು.

ಒಂದು ಹೆಣ್ಣು ಮನಸ್ಸು ಹೇಗೆ ಭಾವನೆಗಳಿಗೆ ಅರಳುತ್ತದೆ, ರೋಷದ ಮಾತುಗಳಿಗೆ ಕೆರಳುತ್ತದೆ ಎನ್ನುವುದು ಚಿತ್ರದುದ್ದಕ್ಕೂ ನಾಯಕಿಯ ಎರಡು ಜಡೆಯಲ್ಲಿ ಬಿಂಭಿತವಾಗಿದೆ.

ಇಲ್ಲಿ ಪ್ರತಿಪಾತ್ರಗಳು ಅಭಿನಯಿಸಿಲ್ಲ ಬದಲಾಗಿ ನಟರೆ ಪಾತ್ರಗಳಾಗಿದ್ದಾರೆ,  ಪುಟ್ಟಣ್ಣ ಅವರು ಮತ್ತೆ ಕೆಲವೇ ನಟ ನಟಿಯರ ತಾರಾಗಣದಲ್ಲಿ ಈ ಚಿತ್ರವನ್ನು  ಚಿತ್ರಿಸಿದ್ದಾರೆ.

ಸಂಗೀತ ವಿಜಯಭಾಸ್ಕರ್ ಅವರ ಭದ್ರ ಕೋಟೆಯಲ್ಲಿ ನಿಂತರೆ, ಛಾಯಾಗ್ರಹಣ  ಎನ್ ಜಿ ರಾವ್ ಅವರ ಸಾರಥ್ಯಕ್ಕೆ ಸಿದ್ಧವಾಗಿರುತ್ತದೆ, ಸೊಗಸಾದ ಸಂಭಾಷಣೆಯ ಕತೃಗಳು ಹಾಸ್ಯ ಪಿತಾಮಹ ಬಿChi, ಜೊತೆಯಲ್ಲಿ ಯೋಗಾನರಸಿಂಹ ಮೂರ್ತಿ.

ತಂದೆಯ ಕೆಲವು  ರೋಷ ಸೇಡು ಹಠದ ಗುಣಗಳನ್ನು ಬಳುವಳಿಯಾಗಿ ಪಡೆದ ನಾಯಕಿ ತನ್ನ ಸ್ವಾಭಿಮಾನ, ಹಠ, ಛಲಕ್ಕೆ ಜೋತು ಬಿದ್ದು ಪಾತ್ರ ನಿರ್ವಹಿಸುತ್ತಾಳೆ. ಜೀವನದ ಕಡಲಿನಲ್ಲಿ ಸ್ನೇಹದ ತರಂಗಗಳು ಬಡಿದು ಬಡಿದು ಅವಳ ಸಿಟ್ಟು ರೋಷ ಹಠ ಇವನ್ನು ಕಮ್ಮಿ ಮಾಡುತ್ತಾ ಸ್ನೇಹದ ಸಂಕೋಲೆಗೆ ಶರಣಾಗುತ್ತಾಳೆ.

ಆರತಿ " ಹೇಮಾ"ಳನ್ನು ಆಲಂಗಿಸಿ ಮುದ್ದಾಡಿ ಅಪ್ಪಿಕೊಂಡು ಅವಳೊಳಗೆ ತೂರಿಕೊಂಡು ಬಿಟ್ಟಿದ್ದಾರೆ. ಇಡಿ ಚಿತ್ರದುದ್ದಕ್ಕೂ ಹೇಳುವ "ಪ್ರಭಾಕರ" ಶಬ್ದ ಅವರ ದನಿಯಲ್ಲೇ ಕೇಳಬೇಕು. ಪ್ರತಿ ದೃಶ್ಯದಲ್ಲೂ ಆವರಿಸಿಕೊಳ್ಳುತ್ತಾ ಹೋಗುವ ಅವರು.. ಅವರಿರಿರದೆ ಚಿತ್ರವಿಲ್ಲ ಎನ್ನುವಷ್ಟು ಕಾಡುತ್ತಾರೆ.

  • ಕಾರನ್ನು ಓದಿಸಿ ಪ್ರಭಾಕರನನ್ನು ಗೋಳು ಹುಯ್ದು ಕೊಳ್ಳುವ ದೃಶ್ಯ 
  • ಲೆಖ್ಖ ಲೆಖ್ಖ ಎನ್ನುತ್ತಾ ಪ್ರತಿ ಬಾರಿಯೂ ಗಲಾಟೆ ಮಾಡುವ ದೃಶ್ಯ 
  • ಇಷ್ಟು ದೊಡ್ಡ ಜಗತ್ತಲ್ಲಿ ನನಗೊಬ್ಬಳಿಗೆ ಜಾಗ ಇರೋಲ್ವೆ.. ಎನ್ನುವಾಗ ಹತಾಶೆ ಕಂಡರೂ ಸ್ವಲ್ಪ ಬಿಗುಮಾನ ಇರುವ ಮಾತುಗಳು 
  • ತಿಮ್ಮ, ಮೂಗ ನಮ್ಮ ಮನೆ ಆಳಲ್ಲ ನನ್ನ ಒಡಹುಟ್ಟಿದವರು ಎನ್ನುವ ಅವರ ಮಾತಿನ ಧಾಟಿ ಸೂಪರ್ 
  • ಕೆಲಸ ಸಿಕ್ಕಿ ಸಂಬಳ ತಂದು ಪ್ರಭಾಕರನನ್ನು ಛೇಡಿಸುವ ದೃಶ್ಯ "ಈ ಶತಮಾನದ ಮಾದರಿ ಹೆಣ್ಣು" ಹಾಡುತ್ತಾ ಪ್ರಭಾಕರನ ಬರುವಿಕೆಗೆ ಕಾಯುವ ಅಭಿನಯ 
  • ಪ್ರಭಾಕರನ ಸ್ನೇಹಕ್ಕೆ ಸೋತು ತನ್ನ ಕೊನೆಗೆ ಬಂದಾಗ ಅಪ್ಪನ ಭಾವ ಚಿತ್ರವನ್ನು ಮಡಚಿಟ್ಟು ಇಂಥಹ ಸ್ನೇಹಕ್ಕೆ ನಾ ಹೇಗಪ್ಪ ಸೋಲದಿರಲಿ ಎನ್ನುವಾಗ ಕಣ್ಣೀರಾಗುತ್ತೇವೆ
  • ಒಂದು ಸನ್ನಿವೇಶದಲ್ಲಿ ಪ್ರಭಾಕರ ಹೇಮಾಳ ಮೇಲೆ ಅನುಮಾನ ಪಟ್ಟು ಅವಮಾನಿಸಿದಾಗ. ಅಳುತ್ತಾ ಕೂತಾಗ .. ತಪ್ಪನ್ನು ಅರಿತ ಪ್ರಭಾಕರ ಕ್ಷಮೆ ಕೇಳುತ್ತಾ ಕಣ್ಣಲ್ಲಿ ನೀರು ತುಂಬಿ ಕೊಂಡಾಗ.. ಅಳುತ್ತ ಇದ್ದ ಹೇಮಾ, ತುಸು ಮುನಿಸಿನಲ್ಲಿ... ಸ್ವಲ್ಪವೇ ನಗುತ್ತಾ.. "ಅದ್ಯಾಕೋ ಪ್ರಭಾಕರ ಅಳ್ತೀಯ ಹೆಣ್ಣಿಗರಾಮ.. " ಈ ದೃಶ್ಯ ಸೂಪರ್. ಒಂದು ಕಡೆ ಅಳು, ಕೋಪ, ಸ್ನೇಹಿತನಿಗೆ ಬೇಸರವಾಯ್ತು ಎನ್ನುವ ಭಾವ ಎಲ್ಲವೂ ಮೇಳೈಸಿ ತೋರಿಸಿರುವ ಅವರ ಭಾವ ಸೂಪರ್ 
  •  ಪ್ರಭಾಕರನ ಮನೆ ತನ್ನ ಹೆಸರಿಗೆ ಇದೆ ಎಂದು ಗೊತ್ತಾದ ಮೇಲೆ.. ಪ್ರಭಾಕರ ಆ ಮನೆಯನ್ನು ಬಿಟ್ಟು ಹೋಗುತ್ತೇನೆ ಎಂದಾಗ.. ಇಲ್ಲೇ ಇರು ಎಂದು ಒತ್ತಾಯ ಮಾಡುತ್ತಾಳೆ... ಆಗ ಹೆಣ್ಣಾದ ನಿನಗೆ ಸ್ವಾಭಿಮಾನ ಇದೆ.. ಗಂಡಾದ ನನಗೆ ಸ್ವಾಭಿಮಾನ ಸತ್ತು ಹೋಗಿದೆಯ ಎಂದಾಗ ಕಪಾಳಕ್ಕೆ ಹೊಡೆಯುವ ಶಬ್ದ ಜೊತೆಯಲ್ಲಿ ಹೇಮಾಳ ಅಭಿನಯ. 
ಒಟ್ಟಿನಲ್ಲಿ ಇಡಿ ಚಿತ್ರವನ್ನು ತನ್ನ ಭುಜದ ಮೇಲೆ ಹೊತ್ತು ಸಾಗಿರುವ ಪರಿ ಆರತಿ ಹೇಮಾಳ ಪಾತ್ರವನ್ನು ಅಭಿನಯಿಸೋಕೆ ಜನ್ಮ ತಾಳಿದ್ದಾರೆ ಅನ್ನುವಷ್ಟು ಇಷ್ಟವಾಗುತ್ತಾರೆ. 

ಶ್ರೀನಾಥ್ ಪ್ರಭಾಕರನ ಪಾತ್ರದಲ್ಲಿ ಇಳಿದು ಬಿಟ್ಟಿದ್ದಾರೆ.. ನಾಯಕನಾಗಿ ಮೊದಲ ದೊಡ್ಡ ಚಿತ್ರ ಇದು. ನಂತರ ಪುಟ್ಟಣ್ಣ ಅವರ ಸುಮಾರು ಚಿತ್ರಗಳಲ್ಲಿ ಮಿನುಗಿದ್ದಾರೆ. ಹೇಮಾಳ ಜೊತೆಯಲ್ಲಿನ ಜಗಳ, ತಮಾಷೆ, ಸ್ನೇಹ ಎಲ್ಲವು ಸೂಪರ್. ಅವರ ಜೀವನದ ಒಂದು ಭಾಗವೇ ಆಗಿ ಹೋದ "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ" ಹಾಡು ಸುಂದರವಾಗಿದೆ. ಹೇಮಾಳ ಪ್ರತಿ ಸಂಭಾಷಣೆಗೂ ತಕ್ಕ ಪ್ರತಿಯುತ್ತರ ಕೊಡುತ್ತ ಹೋಗುವ ಅವರ ಪಾತ್ರದ ಹರಿವು ಇಷ್ಟವಾಗುತ್ತದೆ. ಸ್ನೇಹಕ್ಕೆ ಸ್ನೇಹದ ಮನಸ್ಸಿಗೆ ಮನಸೋಲುವ ಅಭಿನಯ ಸುಂದರವಾಗಿದೆ 


ತಿಮ್ಮನ ಪಾತ್ರದಲ್ಲಿ ನಟ ಶಿವರಾಂ ಕೆಲವೊಮ್ಮೆ ನಗಿಸುತ್ತಾರೆ, ಕೆಲವೊಮ್ಮೆ ಮನಸ್ಸಿಗೆ ತಾಕುತ್ತಾರೆ.. "ಹೇಮವ್ವ ಪ್ರಭಾಕರಪ್ಪ ನಿಮ್ಮನ್ನು ಬಚಾಯಿಸಿದರು.. ಎನ್ನುವಾಗ ಕಣ್ಣೀರು ತುಂಬಿಕೊಳ್ಳುತ್ತಾರೆ.. ಸೂರ್ಯಂಗೂ ಚಂದ್ರಂಗೂ ಹಾಡಿನಲ್ಲಿ ಹೇಮಾ ಮತ್ತು ಪ್ರಭಾಕರನನ್ನು ಸೇರಿಸಲು ಪಡುವ ಪಾಡು ಇಷ್ಟವಾಗುತ್ತದೆ. "ಸಮುದ್ರದಲ್ಲಿ ಈ ಪಾಟಿ ನೀರೈತೆ.. ಕುಡಿಯೋಕೆ ಒಂದು ನೀರು ಸಿಗುತ್ತಾ ಹೇಳಿ" ಎನ್ನುವಾಗ ತಿಮ್ಮ ಅನುಭವಿ ರೀತಿಯಲ್ಲಿ ಮಾತಾಡುತ್ತ ಹೋಗುವ ಪಾತ್ರ ಇಷ್ಟವಾದರೆ, ಮನೆಯ ಫೌಂಟನ್ ನಲ್ಲಿ ಸ್ನಾನ ಮಾಡುವಾಗ, ಊಟ ಮಾಡಿದಮೇಲೆ ಹಣ್ಣಿನ ತಟ್ಟೆಯನ್ನು ಎತ್ತಿಕೊಂಡು ಹೋಗುವಾಗ ನಗೆ ಉಕ್ಕಿಸುತ್ತಾರೆ.

ಮೂಗನ ಪಾತ್ರದಲ್ಲಿ ಅಂಬರೀಶ್.. ಅಬ್ಬಾ ಎನ್ನಿಸುತ್ತಾರೆ ಇಡಿ ಚಿತ್ರದಲ್ಲಿ ತಿಮ್ಮನ ನೆರಳಾಗೆ ಇರುವ ಈ ಪಾತ್ರ.. ಹೇಮಾ ಕೆಲಸ ಮಾಡುವ ಅಂಗಡಿಯಲ್ಲಿ ಆ ಅಂಗಡಿಯ ಯಜಮಾನರ ಮಕ್ಕಳು ಅವಳನ್ನು ಪೀಡಿಸಿದರು ಎಂದು ತಿಳಿದಾಗ ರೋಷ ವೇಷದಲ್ಲಿ ಬಂದು ತಿಮ್ಮನ ಕಣ್ಣೀರನ್ನು ಒರೆಸಿ ಅಂಗಡಿಗೆ ನುಗ್ಗಿ ಬಡಿಯುವ ದೃಶ್ಯ ಇಷ್ಟವಾಗುತ್ತದೆ. ಈ ದೃಶ್ಯದಲ್ಲಿ ಹೇಮಾ ತನ್ನ ಕಷ್ಟವನ್ನು ಹೇಳಿಕೊಳ್ಳಲು ಮೂಗನನ್ನು ಆರಿಸಿಕೊಳ್ಳುವುದು.. ಭಾವ ವ್ಯಕ್ತ ಪಡಿಸಿಕೊಳ್ಳೋಕೆ ಮಾತಲ್ಲ ಮುಖ್ಯ ಭಾವ ಮತ್ತು ಭಾವನೆ ಮುಖ್ಯ ಎಂದು ತೋರಿಸುತ್ತದೆ.  ಯಾಕೆ ಅಂದ್ರೆ ಈ ದೃಶ್ಯದಲ್ಲಿ ಮಾತು ಬರುವ ಎಲ್ಲರೂ ಹೇಮಾ ತಪ್ಪು ಮಾಡಿದ್ದಾಳೆ ಎಂದೇ ನಂಬಿರುತ್ತಾರೆ.. ಮೂಗ ಒಬ್ಬನೇ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುವುದು. ಪುಟ್ಟಣ್ಣ ಇಂಥಹ ಸಂಕೀರ್ಣ ಪಾತ್ರ ಸೃಷ್ಟಿಸುವುದರಲ್ಲಿ ಎತ್ತಿದ ಕೈ. ಅಂಬರೀಶ್ ಇಡಿ ಚಿತ್ರದಲ್ಲಿ ಇಷ್ಟವಾಗುತ್ತಾರೆ.

ಪುಟ್ಟಣ್ಣ ನವರ ನಾಗರಹಾವು ಚಿತ್ರದಲ್ಲಿ ಅಬ್ಬರಿಸಿದ್ದ ಚಾಮಯ್ಯ ಮೇಷ್ಟ್ರು ಈ ಚಿತ್ರದಲ್ಲಿ ಅಶ್ವತ್ ವೈದ್ಯರ ಚಿಕ್ಕ ಚೊಕ್ಕ ಪಾತ್ರದಲ್ಲಿ ಬಂದು ನಗಿಸುತ್ತಾರೆ. ಪುಟ್ಟಣ್ಣ ಅವರ ಚಿತ್ರಗಳನ್ನು ನಿರಾಕರಿಸಲು ಸಾಧ್ಯವೇ ಇಲ್ಲ ಎನ್ನುವ ಹಂತ ಅಶ್ವಥ್ ಅವರ ಚಿಕ್ಕ ಪಾತ್ರವನ್ನು ಒಪ್ಪಿಕೊಳ್ಳುವುದರ ಮೂಲಕ ತೋರಿಸುತ್ತಾರೆ .

ಆದ್ರೆ ರೀತಿಯಲ್ಲಿ ಸೀತಾರಾಂ ಚಿಕ್ಕ ಪಾತ್ರವಾದರೂ ಮುಂದೆ ಉಪಾಸನೆ ಚಿತ್ರದಲ್ಲಿ ಗಮನ ಸೆಳೆಯುವಂಥಹ ಅಭಿನಯ ನೀಡಿ ಮನಗೆಲ್ಲುತ್ತಾರೆ. ಹೀಗೆ ಕಲಾವಿದರಿಗೆ ಅವರ ಆಳವನ್ನು ತೋರಿಸುತ್ತಾ ಅವರ ಪ್ರತಿಭೆಯನ್ನು ಹೊರ ತೆಗೆಯುವ ಶಕ್ತಿ ಪುಟ್ಟಣ್ಣ ಅವರಿಗೆ ಕರಗತವಾಗಿತ್ತು.

ಈ ಚಿತ್ರದ ಹಾಡುಗಳು ಅಜರಾಮರ..

"ಈ ಶತಮಾನದ ಮಾದರಿ ಹೆಣ್ಣು" ವಾಣಿ ಜಯರಾಂ "ಹೆಣ್ಣು" ಎನ್ನುವ ಪದವನ್ನು ಉಲಿಯುವ ರೀತಿ ಸೂಪರ್. ವಿಜಯನಾರಸಿಂಹ ಅವರ ಸಾಹಿತ್ಯವನ್ನು ಎತ್ತರದ ಸ್ಥಾಯಿಯಲ್ಲಿ ಹಾದಿ ಮನ ಗೆದ್ದಿದ್ದಾರೆ ವಾಣಿ ಜಯರಾಂ.

"ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ" ಸ್ನೇಹದ ಮಹತ್ವ, ಬಾಲ್ಯದ ಹುಡುಗಾಟ ಎಲ್ಲವನ್ನು ಕಲಸಿ ಬರೆದಿರುವ ಚಿ ಉದಯಶಂಕರ್ ಸ್ನೇಹಕ್ಕೆ ಒಂದು ಹಾಡು ಎಂದಾಗ ಈ ಹಾಡೇ ನೆನಪಿಗೆ ಬರುವುದು. ಎಸ್ ಪಿ ಬಾಲಸುಬ್ರಮಣ್ಯಂ ಅವರು ಜೀವ ತುಂಬಿ ಹಾಡಿದ್ದಾರೆ. ಶ್ರೀನಾಥ್ ಅವರ ಅನೇಕ ಗೀತೆಗಳನ್ನು ಹಾಡಿರುವ ಇವರಿಬ್ಬರ ಸ್ನೇಹಕ್ಕೆ ಮುನ್ನುಡಿ ಈ ಹಾಡಾಯಿತು.

ಕನಸ್ಸಲ್ಲಿ ಕಂಡು ಬರುವ "ಶುಭ ಮಂಗಳ ಸುಮೂಹೂರ್ತವೆ" ವಾಣಿ ಜಯರಾಂ ಮತ್ತು ಪಿ ಬಿ ಶ್ರೀನಿವಾಸ್ ಗಮನಸೆಳೆಯುತ್ತಾರೆ. ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ ಸಾಹಿತ್ಯವನ್ನು ಅಷ್ಟೇ ಮುದ್ದಾಗಿ ಚಿತ್ರಿಸಿರುವ ಶೈಲಿ ಪಟಾಕಿ ಸಿಡಿಮದ್ದು ಇಲ್ಲದೆ ಬರಿ ಹೂಬಾಣಗಳ ಮಧ್ಯೆ ಸುಂದರವಾಗಿ ಮೂಡಿ ಬಂದಿದೆ.

ಮಲ್ಪೆಯ ಕಡಲ ತೀರದ "ಸೈಂಟ್ ಮೇರಿಸ್" ಸುಂದರ ದ್ವೀಪದಲ್ಲಿ ಚಿತ್ರಿಸಿರುವ ಹಾಡು "ನಾಕೊಂದ್ಲ ನಾಕು" ಎಂ ಎನ್ ವ್ಯಾಸರಾವ್ ಅವರ ತುಂಟ ಸಾಹಿತ್ಯ, ಜೊತೆಯಲ್ಲಿ ಪ್ರಕೃತಿಯ ವಿಹಂಗಮ ಬಣ್ಣನೆ ಇಷ್ಟವಾಗುತ್ತದೆ. ಎಸ್ ಪಿ ಬಾಲಸುಬ್ರಮಣ್ಯಂ ಮತ್ತೆ ತುಂಟ ತನದ ಈ ಹಾಡಿಗೆ ದನಿಯಾಗುತ್ತಾರೆ.

ಪುಟ್ಟಣ್ಣ ಅವರು ಪ್ರತಿಭೆಗಳನ್ನು ಹೇಗೆ ಹುಡುಕುತ್ತಿದ್ದರು ಎನ್ನುವುದಕ್ಕೆ ಉತ್ತಮ ಸಾಕ್ಷಿ "ಸೂರ್ಯಂಗೂ ಚಂದ್ರಂಗೂ" ಹಾಡು. ನಿರ್ದೇಶಕ ರವಿ ಅವರ ದಪ್ಪ ದನಿಯಲ್ಲಿ ಹಾಡಿಸಿರುವ ಈ ಹಾಡು ಇಷ್ಟವಾಗುವುದು ಅದರ ಸಾಹಿತ್ಯ, ಹಳ್ಳಿಯ ಶೈಲಿಯಲ್ಲಿಯೇ ಹಾಡಿರುವ ಬಗೆ, ಜೊತೆಯಲ್ಲಿ ಶಿವರಾಂ ಅವರ ಅಭಿನಯ. ಎಂ ಎನ್ ವ್ಯಾಸರಾವ್ ಅವರ ಅರ್ಥ ಗರ್ಭಿತ ಸಾಹಿತ್ಯ ಮನಗೆಲ್ಲುತ್ತದೆ.

ಇನ್ನೊಬ್ಬ ಸುಂದರ ನಟ ಆರ್ ನಾಗೇಂದ್ರ ರಾಯರ ಮಗ ಸುದರ್ಶನ್ ಅವರ ಸಿರಿ ಕಂಠ ದಲ್ಲಿ ಮೂಡಿರುವ ಗೀತೆ "ಹೂವೊಂದು ಬಳಿ ಬಂದು" ಹಾಡಿಗೆ ಒಂದು ಭಾವುಕ ಚೌಕಟ್ಟು ಒದಗಿಸುವಲ್ಲಿ ಈ ಹಾಡು ಗಾಯನ ತನ್ನ ಕಾಣಿಕೆ ಸಲ್ಲಿಸುತ್ತದೆ. ವಿಜಯನಾರಸಿಂಹ ಅವರ ಸುಂದರ ಪದಗಳ ಜಾದೂ ಶ್ರೀನಾಥ್ ಅವರ ಅಭಿನಯ ಈ ಹಾಡಿಗೆ ಮೆರುಗು ತಂದಿದೆ.

ಇಡಿ ಚಿತ್ರದಲ್ಲಿ ಸ್ನೇಹದ ಕಡಲಿನ ಮೇಲೆ ತೇಲಿಸುವಂತೆ ಅನುಭವ ಕೊಡುವ ಸಂಗೀತ ವಿಜಯಭಾಸ್ಕರ್ ಅವರದ್ದು. ಪ್ರತಿ ಹಾಡಿಗೂ ಪ್ರತಿ ಸನ್ನಿವೇಶಕ್ಕೂ ವಿಭಿನ್ನ ರೀತಿಯಲ್ಲಿ ಸಂಗೀತ ತುಂಬುತ್ತಾ ಜೀವ ತುಂಬುವ ಅವರ ಸಂಗೀತ ಈ ಚಿತ್ರದ ಉತ್ತಮ ಯಶಸ್ಸಿಗೆ ಕಾರಣವಾಗಿತ್ತು. ಅದ್ಭುತ ಗೆಳೆತನ ವಿಜಯಭಾಸ್ಕರ್, ಪುಟ್ಟಣ್ಣ ಮತ್ತು ವಿಜಯನಾರಸಿಂಹ ಅವರದ್ದು. ಈ ಗೆಳೆತನದ ಅಪಾರ ಶಕ್ತಿ ಈ ಚಿತ್ರದ ಯಶಸ್ಸಿಗೆ ದುಡಿದಿದೆ.

ಗುರುಗಳೇ ಇಂಥಹ ಸ್ನೇಹದ ಕಡಲಲ್ಲಿ ನಮ್ಮನ್ನು ತೇಲಿಸಿ ಸಾಗಿಸಿರುವ ಈ ಚಿತ್ರದ ನುಡಿ ನಮನದ ಜೊತೆಯಲ್ಲಿ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ನಿಮ್ಮ ಅಭಿಮಾನಿ ಬಳಗದ ಮೂಲಕ ಕೋರುತ್ತಿದ್ದೇವೆ.  ಶುಭಮಂಗಳಕರ ನೆನಪುಗಳೊಂದಿಗೆ ಮತ್ತೊಂದು ಚಿತ್ರದ ಜೊತೆಯಲ್ಲಿ ಬರುವೆ.






Saturday, November 1, 2014

ಕನ್ನಡ ಜನರ ಔದಾರ್ಯದಂತೆ ... ಸಾಕ್ಷಾತ್ಕಾರ (1971)

ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ನನ್ನ ಅಣ್ಣ ಆಗಿನ VCP ನಲ್ಲಿ ಸಾಕ್ಷಾತ್ಕಾರ ಚಿತ್ರವನ್ನು ಒಬ್ಬನೇ ನೋಡಿ ಸುಮಾರು ದಿನಗಳು ಮಾತೆ ಆಡದಂತೆ ಮೌನವಾಗಿದ್ದ. ಯಾಕೋ ಅಂತ ಕೇಳಿದರೆ ಆ ಚಿತ್ರ ತುಂಬಾ ಕಾಡುತ್ತದೆ.. ನೀ ಆ ಚಿತ್ರವನ್ನು ಒಮ್ಮೆ ನೋಡು ಆಮೇಲೆ ನಿನಗೆ ಗೊತ್ತಾಗುತ್ತೆ ಅಂದ.

ಒಮ್ಮೆ ನೋಡಿದೆ, ನಾ ಮೂಕ ಹಕ್ಕಿಯ ಹಾಗೆ ಆಗಿಬಿಟ್ಟೆ.

ಬಿ ಮಲ್ಲಿಕ್ ಅವರ ಮಲ್ಲಿಕ್ ಪ್ರೊಡಕ್ಷನ್ಸ್ ಅವರ ನಿರ್ಮಾಣದಲ್ಲಿ ೧೯೭೧ರಲ್ಲಿ ಬೆಳ್ಳಿತೆರೆಯಲ್ಲಿ ಸಾಕ್ಷಾತ್ಕಾರಗೊಂಡ ಈ ಚಿತ್ರ ಹಲವಾರು ಕಾರಣಗಳಿಗೆ ನಮ್ಮ ಮನದಲ್ಲಿ ಹಸಿರಾಗಿ ನಿಲ್ಲುತ್ತದೆ.


ಚಿತ್ರವನ್ನು ಚಿಕಮಗಳೂರು, ಕಳಸ, ಮುಡುಕುತೊರೆ ಮುಂತಾದ ಸುಂದರ ತಾಣಗಳಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಆರಂಭಿಕ ದೃಶ್ಯದಲ್ಲಿ ಕನ್ನಡದ ಚೇತನ ಅ ನ ಕೃಷ್ಣರಾಯರು ಬಂದು ಶುಭ ಹಾರೈಸುವುದು, ಜೊತೆಯಲ್ಲಿಯೇ ಚಿತ್ರರಂಗದ ಶೋ ಮ್ಯಾನ್ ಎಂದೇ ಹೆಸರಾದ ರಾಜ್ ಕಪೂರ್, ಮತ್ತು ಭಾರತ ಚಿತ್ರರಂಗದ ಸಿಂಹ ಪೃಥ್ವಿರಾಜ್ ಕಪೂರ್ ಇವರನ್ನೆಲ್ಲ ಸಾಕ್ಷಾತ್ಕರಿಸಿಕೊಂಡ ದೃಶ್ಯ ನೆನಪಾಗಿ ನಿಲ್ಲುತ್ತದೆ.

ಕನ್ನಡ ಚಿತ್ರರಂಗದ ಭೀಷ್ಮ ಆರ್ ನಾಗೇಂದ್ರರಾಯರು, ನನ್ನ ನೆಚ್ಚಿನ ಬಾಲಕೃಷ್ಣ, ಕಪ್ಪು ಬಿಳುಪಿನ ವರ್ಣದಲ್ಲೂ ಮುಗ್ಧವಾಗಿ ಕಾಣುವ ಜಮುನ, ಕಂಚಿನ ಕಂಠದ ವಜ್ರಮುನಿ, ಇಡಿ ಚಿತ್ರದಲ್ಲಿ ಮೃದುವಾಗಿ ಮಾತಾಡಿ ವಿಶಿಷ್ಟ ಅಭಿನಯ ನೀಡಿರುವ ರಾಜ್, ಚಿಕ್ಕ ಚಿಕ್ಕ ಪಾತ್ರದಲ್ಲಿ ನರಸಿಂಹರಾಜು ಮತ್ತು  ಉಳಿದ ಸಹಕಲಾವಿದರು  ಚಿತ್ರಕ್ಕೆ ಬೇಕಾದ ವರ್ಣವನ್ನು ತಂದು ಕೊಟ್ಟಿದ್ದಾರೆ.

ಈ ಚಿತ್ರದಲ್ಲಿ ಎದ್ದು ಕಾಣುವುದು ಈ ಮಹಾನ್ ಕಲಾವಿದರು

ಪೃಥ್ವಿರಾಜ್ ಕಪೂರ್:


ದೊಡ್ಡ ದೇಹ, ದೊಡ್ಡ ಶಾರೀರ, ಮಾತು, ಅಂಗೀಕ ಅಭಿನಯ ವಾಹ್ ವಾಹ್.

ಇಡಿ  ಪಾತ್ರವನ್ನು ಅವರ ಧ್ವನಿಯಲ್ಲಿಯೇ ಅಭಿನಯಿಸಿರುವುದು ಪುಟ್ಟಣ್ಣ ಅವರು ಕನ್ನಡ ನುಡಿ, ನೆಲಕ್ಕೆ ತೋರಿಸುತ್ತಿದ್ದ ಅಭಿಮಾನ.

"ಒಲವೆ ಜೀವನ ಸಾಕ್ಷಾತ್ಕಾರ" ಈ ಮಾತುಗಳನ್ನು ಹೇಳುವಾಗ ಅವರ ಧ್ವನಿ

"ಆದಷ್ಟು ಬೇಗ ಮನುಷ್ಯನಾಗಬೇಕು ಉಮಾ ಮಹೇಶ್ವರನಾಗಬೇಕು"

"ಒಲವಿನ ಬಲವೇ ದೈವ ಬಲ"

ಎಲ್ಲರೂ ಈ ಮನೆಯಿಂದ ಹೊರತು ಹೋದರೆ ಏನು ಉಳಿಯುತ್ತದೆ ಎನ್ನುವ ಅವರ ಶ್ರೀಮತಿ ಪ್ರಶ್ನೆಗೆ ಅವರು ಕೊಡುವ ಉತ್ತರ
"ಸತ್ಯ ಧರ್ಮ ಮನುಷ್ಯತ್ವ" 

ಹೆಂಡತಿ ಅವರ ಮಾತು ಕೇಳದೆ ಮನೆ ಬಿಟ್ಟು ಹೋಗುವಾಗ ಅವರು ಕೂಗುವ "ತಾಯೇ" ನಿಜಕ್ಕೂ ಒಮ್ಮೆ ನಾನೇ ಬೆಚ್ಚಿ ಬಿದ್ದೆ. ರೋಮಾಂಚನ ಮತ್ತು ಭೀತಿ ಎರಡರ ಮಧ್ಯದ ಸ್ಥಿತಿ ನನ್ನದು ಆಗ.

"ನನ್ನ ಮನೆ ಬಾಗಿಲು ದೊಡ್ಡದಾಗಿ ತೆರೆದಿದೆ
ಬರುವವರಿಗೆ ಸ್ವಾಗತ ಸುಸ್ವಾಗತ
ಹೋಗೋರಿಗೆ" ಎಂದು ಹೇಳಿ ಎರಡು ಕೈಯನ್ನು ಎತ್ತಿ ಮುಗಿಯುತ್ತಾರೆ. ಇಡಿ ದೃಶ್ಯದಲ್ಲಿ ಅವರು ಓಡಾಡುವ ಪರಿ, ಅದಕ್ಕೆ ಕೊಡುವ ಗಂಭೀರತೆ ಮನಸ್ಸೆಳೆಯುತ್ತದೆ. ಒಂದು ದೃಶ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಕಲೆ ಪುಟ್ಟಣ್ಣ ಅವರಿಗೆ ಸಿದ್ಧಿಸಿತ್ತು.

"ಮಡದಿಯೇ ಮನೆ ದೇವತೆ"

"ಈ ಪ್ರಪಂಚದಲ್ಲಿ ತನ್ನ ಹೆಂಡತಿಯನ್ನು ಕರೆದುಕೊಂಡು ಬಾರೋ ಅಂತ ಹೇಳುವ ದೌರ್ಭಾಗ್ಯ ಯಾವ ಅಪ್ಪನಿಗೂ ಬಾರದಿರಲಿ" ಕಣ್ಣಿನಲ್ಲಿ ಮಡುಗಟ್ಟಿದ ದುಃಖ ಧ್ವನಿಯಲ್ಲಿ ನಡುಕ, ವಾಹ್ ಸೂಪರ್ ಸೂಪರ್

ಹತಾಶರಾಗಿ ಅರಳಿ ಕಟ್ಟೆಯ ಬಳಿ ಕೂತಿದ್ದಾಗ ತನ್ನ ಸ್ನೇಹಿತ ಬಾರೋ ಮನೆಗೆ ಹೋಗೋಣ ಅಂತ ಹೇಳುವ ಮಾತು
"ಮನೆ  ಮಡದಿ, ಮಕ್ಕಳು ಎಲ್ಲಾ ನಶ್ವರ
ಈಶ್ವರನೊಬ್ಬನೆ ಶಾಶ್ವತ"

ಸ್ನೇಹಿತ "ಸ್ಥಳ ಬದಲಾದರೆ ನಿನ್ನ ಮನಸ್ಸು ತಿಳಿಯಾಗುತ್ತದೆ ನಡಿ ಶೃಂಗೇರಿಗೆ ಹೋಗೋಣ" ಅಂದಾಗ ಮಗುವಿನ ತರಹ ಅಭಿನಯ ಕೊಡುತ್ತಾ "ಶೃಂಗೇರಿಗೆ!.. ಹಾ ಹೋಗೋಣ" ಎಂದು ಎದ್ದು ನಿಲ್ಲುವಾಗ ಆ ಬೃಹತ್ ದೇಹದಲ್ಲಿ ಒಂದು ಪುಟಾಣಿ ಮಗು ಕಾಣುತ್ತದೆ.

ಅವರ ಅಂತಿಮ ದೃಶ್ಯದಲ್ಲಿ ತಮ್ಮ ಮಗನಿಗೆ ಬರೆದ ಪತ್ರದ ಸಾರಾಂಶವನ್ನು ಓದುವ ಅವರ  ಧ್ವನಿ
"ಈ ನೆಲದ ಬಾಳು ನಶ್ವರ
ಇಲ್ಲಿ ಒಲವು ಮಾತ್ರ ಅಮರ
ಕಳೆದ ನಿನ್ನೆಗಳಿಗಾಗಿ ಚಿಂತಿಸಬೇಡ 
ಬರುವ ನಾಳೆಗಳಿಗಾಗಿ ಭೀತನಾಗಬೇಡ
ನಿನ್ನ ತಾಯಿಯನ್ನು ದೈವದಂತೆ ಗೌರವಿಸು (ಈ ಮಾತನ್ನು ಹೇಳುವಾಗ "ದೈವ" ಎನ್ನುವ ಪದಕ್ಕೆ ಅವರು ಕೊಡುವ ಒತ್ತು ಸೂಪರ್)
ಜೀವನವನ್ನು ಜೇನಾಗಿ ನೆನೆದು ಸವಿಯುವ ಸಾಧನೆ ಮಾಡು 
ಸತತ ಪ್ರಯತ್ನವೇ ಸಾಧನೆಯ ರಹಸ್ಯ"

ಅವರು ಮಾತುಗಳನ್ನು ತುಸು ನಿಧಾನಗತಿಯಲ್ಲಿ ಜೊತೆಯಲ್ಲಿ ಅದಕ್ಕೆ ಕೊಟ್ಟಿರುವ  ಪ್ರತಿಧ್ವನಿಯೂ ಪರಿಣಾಮಕಾರಿಯಾಗಿ ಅವರ ಅಭಿನಯವನ್ನು ಇನ್ನಷ್ಟು ಹೆಚ್ಚಿಸಲು ಅನು ಮಾಡಿಕೊಟ್ಟಿದೆ. ಅನ್ಯ ಭಾಷೆಯ ನಟನನ್ನು ಕರೆತಂದು ಅವರೇ ಪಾತ್ರಕ್ಕೆ ಧ್ವನಿ ನೀಡುವಂತೆ ಮಾಡಿ, ಅವರಿಂದ ಕಥೆಗೆ ಬೇಕಾದ ರೀತಿಯಲ್ಲಿ ಅಭಿನಯ ಹೊರಗೆ ತೆಗೆದದ್ದು ಪುಟ್ಟಣ್ಣ ಅವರು ನಿರ್ದೇಶನದ ಮಾಧ್ಯಮದ ಮೇಲೆ ಹಿಡಿತವಿದ್ದದ್ದಕ್ಕೆ ಸಾಕ್ಷಿ.

ಹಣೆಯ ಮೇಲಿನ ವಿಭೂತಿ, ನಡುಗುವ ಕಣ್ಣುಗಳು, ಕಂಚಿನ ಕಂಠ, ವಸ್ತ್ರಗಳು ಎಲ್ಲವೂ ಆ ಪಾತ್ರಕ್ಕೆ ಸೊಗಸಾಗಿ ಜೊತೆಯಾಗಿವೆ.


ಆರ್ ನಾಗೇಂದ್ರರಾಯರು

ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಹೆಸರಾದ ನಾಗೇಂದ್ರರಾಯರು ಪೃಥ್ವಿರಾಜ್ ಅವರಿಗೆ ಸರಿಸಾಟಿಯಾಗಿ ಅಭಿನಯಿಸಿದ್ದಾರೆ.

"ಮಹೇಶ ನಿನಗೆ ಪುಸ್ತಕದ ಜ್ಞಾನ ಹೆಚ್ಚು 
ಮಸ್ತಕದ ಜ್ಞಾನ ಕಮ್ಮಿ"

"ಬೇಡೋ ಕಣೋ.. ನಾನು ನೀನು ಬಾಲ್ಯ ಸ್ನೇಹಿತರು
ನಿನ್ನ ಮನೆ ಬೇರೆ ಅಲ್ಲ ನನ್ನ ಮನೆ ಬೇರೆ ಅಲ್ಲಾ 
ನಿನ್ನ ಹೆಂಡತಿ ಹೇಳಿದಾಗೆ ಅನಿಷ್ಟ ಅಂಗಾರಕ ದೋಷ ಮನೆ, ವಂಶವನ್ನೇ ನಿರ್ನಾಮ ಮಾಡುತ್ತದೆ"

"ಇಂದಿನಿಂದ ನೀವಿಬ್ಬರೂ ಒಲವಿನ ಜೋಡಿಗಳಲ್ಲ 
ಒಲವಿನ ಅಣ್ಣ ತಂಗಿಯರ ಹಾಗೆ ಬಾಳಿ"

ತನ್ನ ಸ್ನೇಹಿತನ ನೆಮ್ಮದಿಗೋಸ್ಕರ ಶೃಂಗೇರಿ ಬಂದು ನದಿಯಲ್ಲಿ ಅರ್ಘ್ಯ ಕೊಡುತ್ತಾ ಮಂತ್ರಗಳನ್ನು ಹೇಳುತ್ತಾ ಮುಖದಲ್ಲಿ ತೋರುವ  ಭಾವ..

"ಮಹೇಶ ಸುಮ್ಮನೆ ಒಲವು ಒಲವು ಅಂತ ಒದ್ದಾಡ್ತಾನೆ.. ಮಾಟ ಮದ್ದು ಮಾಡುವರಿಗೆ ಒಲವಿನ ಮಾತು ಎಲ್ಲಿ ಹೋಗುತ್ತೆ.. "

ಸಲೀಸಾದ ಅಭಿನಯ, ಪೃಥ್ವಿರಾಜ್ ಜೊತೆಯಲ್ಲಿಯೇ ಸರಿಸಾಟಿಯಾದ ಅಭಿನಯ ನೋಡೋದೇ ಕಣ್ಣಿಗೆ ಒಂದು ಹಬ್ಬ.

ಬಾಲಕೃಷ್ಣ ಅರ್ಥಾತ್ ಬಾಲಣ್ಣ 

ಅಕ್ಷರಶಃ ಈ ಚಿತ್ರದಲ್ಲಿ ಛಾಪು ಮೂಡಿಸಿದವರು ಇವರೇ. ಇಡಿ ಚಿತ್ರಕ್ಕೆ ಒಂದು ಮಹತ್ ತಿರುವು ಕೊಟ್ಟು, ತಮ್ಮ ಅಭಿನಯ, ಸಂಭಾಷಣೆ, ಮುಖಭಾವ ಎಲ್ಲದರಲ್ಲಿಯೂ ಖಳ ಅಂದರೆ ಕೂಗಾಡಲೇ ಬೇಕು, ದಪ್ಪ ದಪ್ಪ ಕಣ್ಣುಗಳು, ಮೀಸೆಗಳು, ವಿಚಿತ್ರ ವೇಷಭೂಷಣಗಳು ಇರಬೇಕು ಎನ್ನುವ ಸಿದ್ಧ ಸೂತ್ರವನ್ನು ಬದಿಗಿಟ್ಟ ಚಿತ್ರ ಇದು.  ಎಲ್ಲರ ರೀತಿಯಲ್ಲಿ ಸಹಜವಾಗಿ ಕಾಣುವ ಬಾಲಣ್ಣ ಈ ಚಿತ್ರದಲ್ಲಿ ಮಾಡಿರುವ ಜಾದೂ ಬಗ್ಗೆ ಹೇಳೋಕೆ ಪದಗಳೇ ಸಾಲದು.

"ಆವದಾನಿಗಳೇ ನನ್ನ ಮಗಳು ಸುಮಾ ಮಹೇಶನ ಮದುವೆ ಆಗಬೇಕು.. ನನ್ನ ಭಾವನ ಆಸ್ತಿ ನನಗೆ ಬರಬೇಕು.. ನನ್ನ ಭವನ ಸೊಕ್ಕು ಇಳಿಯಬೇಕು.. "

"ತಗೊಳ್ಳಿ ಕೊಲೆ ಮೊಕ್ಕದಮ್ಮೆಯಲ್ಲಿ ಬಂದ ದುಡ್ಡು... ಕೊಲೆ ಮಾಡಿದವನನ್ನೇ ಗೆಲ್ಲಿಸಿಬಿಟ್ಟೆ ಅದರ ಧರ್ಮ ಕರ್ಮಗಳು ನಿಮಗೆ ಇರಲಿ"

"ನಿನಗೆ ನಿನ್ನಮ್ಮನಹಾಗೆ ಮೈ ಬಂತೆ ಹೊರತು
ನನ್ನ ಹಾಗೆ ಬುದ್ದಿ ಬರಲಿಲ್ಲ"

"ಮಹಾರಾಣಿ ಆಗಿ ಬಾಳೇ ಮಗಳೇ ಅಂದ್ರೆ
ಹಾವ್ರಾಣಿ ಆಗಿ ಹಲ್ಲಿ ನುಂಗ್ತೀನಿ ಅಂತ್ಯಲ್ಲೇ"

"ನಾ ನಂಬಿದೋರಿಗೆ ದ್ರೋಹ ಮಾಡೋನಲ್ಲ
ತಂಬಿಟ್ಟಿಗೆ ಉಪ್ಪು ಬೆರೆಸೋನಲ್ಲಾ"

ಹೀಗೆ ಚಿತ್ರದ ಉದ್ದಕ್ಕೂ ಹೇಳುತ್ತಾ ಬರುವ ಬಾಲಣ್ಣನ ಪಾತ್ರ ಮಾಡೋದೆಲ್ಲ ಅನಾಚಾರವೇ.. ಅದ್ಭುತ ನಟನೆ.

ರಾಜ್ 

ಮೊದಲಿಗೆ ಗಮನಸೆಳೆಯುವುದು ಮುದ್ದಾಗಿ ಕಾಣುವ ಅವರು ಮತ್ತು ವಿದೇಶದಿಂದ ಬರುವ ಮೊದಲ ದೃಶ್ಯದಲ್ಲಿ ತನ್ನ ಓರಗೆಯವರನ್ನು ಯಾವ ಹಮ್ಮು ಬಿಮ್ಮು ಇಲ್ಲದೆ ಮಾತಾಡಿಸುವ ರೀತಿ.

ಅವರ ವೇಷಭೂಷಣಗಳು ಗಮನಸೆಳೆಯುತ್ತದೆ

ಇಡಿ ಚಿತ್ರದಲ್ಲಿ ಒಮ್ಮೆಯೂ ತಾಳ್ಮೆ ಕಳೆದುಕೊಳ್ಳದೆ ಸಂಯಮದಿಂದ ಮಾತಾಡುವ ಅಭಿನಯ.

ತಾನು ಮದುವೆಯಾಗುವ ಹೆಣ್ಣಿನಿಂದ ಹಲವು ಕಾರಣಗಳಿಗಾಗಿ ತನ್ನ ಮನೆಯೇ ಒಡೆದು ತನ್ನ ಬಂಧುಗಳೆಲ್ಲ ದೂರವಾದಮೇಲೆ ಈ ಮನೆ ಏನಾಗಿದೆ ಏನಾಗಬೇಕಿತ್ತು ಎನ್ನುವ ಸರಣಿ ಸಂಭಾಷಣೆಯಲ್ಲಿ ಅವರು ತೋರುವ ಮುಖಭಾವ ಮತ್ತು ಸಂಭಾಷಣೆಯನ್ನು ಹೇಳುವ ರೀತಿ.

ಅಪ್ಪನ ಅಣತಿಯಂತೆ ಅಮ್ಮನನ್ನು ಕರೆದೊಯ್ಯಲು ಬಂದಾಗ ಸಿದ್ಧವಾಗುವ ಅಮ್ಮನನ್ನು ನೋಡಿ ಸಂತಸಗೊಂಡು ಕೂತಿರುತ್ತಾರೆ. ಆದರೆ ಬಾಲಣ್ಣನ ಮಾತನ್ನು ಕೇಳಿ ತನ್ನ ತಾಯಿ "ಅಪ್ಪಾಜಿನೇ ಬಂದು ಕರೆದುಕೊಂಡು ಹೋದರೆ ಬರ್ತೀನಿ" ಎಂದು ಹೇಳಿದ ಮೇಲೆ.. ಒಂದು ಮಾತಾಡದೆ ತಮ್ಮ ಚಡಪಡಿಕೆ ತೋರುವ ಅಭಿನಯ ವಾಹ್ ಎನ್ನಿಸುತ್ತದೆ.

ಬೇರೆ ಯಾರೂ ತನ್ನ ತಾಯಿಯನ್ನು ಗುಂಡಿಟ್ಟು ಕೊಂದ ಮೇಲೆ.. ತಾಯಿಯ ಹತ್ತಿರ ಬಂದಾಗ "ಒಲವು ಒಲವು ಅಂತ ಹೇಳಿ.. ಒಲವಿನ ತಾಯಿಯನ್ನೇ ಬಲಿ ತೆಗೆದುಕೊಂಡೆಯ" ಎಂದು ತನ್ನ ತಾಯಿ ಹೇಳುತ್ತಾ ಕೊನೆ ಉಸಿರು ಎಳೆದಾಗ ರಾಜ್ ಅಭಿನಯ ಸೂಪರ್.

ಜೀವನವೆಲ್ಲ ಒಲವು ಒಲವು ಎಂದು ಹೋರಾಡಿಕೊಂಡು ಬಂದರೂ ತನ್ನ ತಾಯಿಯೇ ತನನ್ನು ತಪ್ಪು ತಿಳಿದುಕೊಂಡಾಗ.. ವಾಹ್ ಅಭಿನಯದಲ್ಲಿನ ತನ್ಮಯತೆ ನಮ್ಮನ್ನು ಸದಾ ಕಾಡುತ್ತದೆ

ಅಂತ್ಯದಲ್ಲಿ ತಮ್ಮ ಅಪ್ಪಾಜಿ ಹೇಳುತ್ತಿದ್ದ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ
"ಜೀವನವೇ ಒಂದು ಪಾಠಶಾಲೆ
ಅದರಲ್ಲಿ ಬರುವ ಒಂದೊಂದು ಸನ್ನಿವೇಶವೂ ಪರೀಕ್ಷೆ
ಅದರಲ್ಲಿ ತೇರ್ಗಡೆಯಾದವನಿಗೆ ಮಾತ್ರ ಜೀವನ ಸಾಕ್ಷಾತ್ಕಾರ"

ಅತ್ಯುತ್ತಮ ಸಂಭಾಷಣೆ ಮತ್ತು ಅತ್ಯುತ್ತಮ ಅಭಿನಯ.

******

ನಾಯಕಿ ಜಮುನ ಅವರ ಅಭಿನಯ, ಮುಗ್ಧ ಸೌಂದರ್ಯ, ಸಂಭಾಷಣೆ, ಹಾಡುಗಳಲ್ಲಿ ನೃತ್ಯ ಇಷ್ಟವಾಗುತ್ತದೆ.
"ನಾನು ಅಂಗಾರಕ ದೋಷದ ಹೆಣ್ಣಲ್ಲ" ಎನ್ನುವಾಗ ತನ್ನ ಹಣೆಯ ಮೇಲಿನ ಕಳಂಕ ದೂರವಾದ ಆ ಕ್ಷಣಗಳಿಗೆ ಸಂತಸ ಪಡುವ ಅವರ ಅಭಿನಯ ಮನ ಮುಟ್ಟುತ್ತದೆ.

ಇಡಿ ಚಿತ್ರ ಪುಟ್ಟಣ್ಣ ಅವರ ಅಗ್ರಜ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಕೂಸು. ಆರಂಭದಲ್ಲಿಯೇ "ಕಣಗಾಲ್ ಪ್ರಭಾಕರ್ ಶಾಸ್ತ್ರೀ ವಿರಚಿತ" ಎಂದು ತೋರಿಸುವ ಮೂಲಕ ಪುಟ್ಟಣ್ಣ ಪ್ರತಿಯೊಬ್ಬರ ಕಲೆಯನ್ನು, ಮತ್ತು ಅವರ ಶ್ರಮಕ್ಕೆ ತಕ್ಕ ಗುರುತಿಸುವಿಕೆಯನ್ನು ಪಾಲಿಸುತ್ತಿದ್ದದು ಇಷ್ಟವಾಗುತ್ತದೆ.

ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು ಎಲ್ಲವನ್ನೂ ಬರೆದಿರುವ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಇಡಿ ಚಿತ್ರದುದ್ದಕ್ಕೂ ತಮ್ಮ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ಈ ಚಿತ್ರ ಸಂಭಾಷಣೆ, ಹಾಡುಗಳಿಗೆ ಹೆಸರು ಮಾಡಿತ್ತು.

ಇಂಥಹ ಸುಮಧುರ ಚಿತ್ರಕ್ಕೆ ಛಾಯಾಗ್ರಹಣ ನೀಡಿದ ಶ್ರೀಕಾಂತ್ ಮತ್ತು ಸಂಗೀತ ಮತ್ತು ಮಹೋನ್ನತ ಗೀತೆಗಳನ್ನು ಕೊಟ್ಟ ಎಂ ರಂಗರಾವ್ ಸ್ಮರಣೀಯರು.

ಹಾಡುಗಳ ಬಗ್ಗೆ ಹೇಳಲೇ ಬೇಕು

"ಒಲವೆ ಜೀವನ ಸಾಕ್ಷಾತ್ಕಾರ" ಮೊದಲ ಹಾಡಿಗೆ ದನಿಯಾದವರು ಪಿ ಸುಶೀಲ, ಅಮೋಘ ಗಾಯನ ಜೊತೆಯಲ್ಲಿ
ಹಾಡಿನ ಕಡೆಯಲ್ಲಿ ಬರುವ ಸಾಲುಗಳನ್ನು ಹಾಡುವಾಗ ಅವರ ಧ್ವನಿ ಇಷ್ಟವಾಗುತ್ತದೆ.

"ಒಲವಿನ ಪೂಜೆಗೆ ಒಲವೆ ಮಂದಾರ
ಒಲವೆ ಬದುಕಿನ ಬಂಗಾರ
ಒಲವಿನ ನೆನಪೇ ಹೃದಯಕೆ ಮಧುರ
ಒಲವೇ ದೈವದ ಸಾಕ್ಷಾತ್ಕಾರ"

ಈ ಸಾಲುಗಳು ಮನಸ್ಸನ್ನು ಬಹಳ ಕಾಡುತ್ತವೆ.

ತನ್ನ ಒಲವಿನ ಗೆಳೆಯನ ಮುಂದೆ ಈ ಹಾಡನ್ನು ಹಾಡುತ್ತಾ ಅವನಿಗೆ ಒಲವಿನ ಪುಷ್ಪ ಮಾಲಿಕೆ ಅರ್ಪಿಸಿದ ಮೇಲೆ ರಾಜ್.. ಈ ದೃಶ್ಯವನ್ನು ತನ್ನ ಅಪ್ಪ ಮತ್ತು ಭಾವಿ ಮಾವ ನೋಡಿದರು ಎಂದು ಅರಿವಾದಾಗ ಅಭಿನಯ ಸುಂದರ.

"ಕಾದಿರುವಳು ಕೃಷ್ಣಾ ರಾಧೇ" ತನ್ನ ಬಾಳಿನ ಸಂಗಾತಿಯಾಗಿ ಬರುವುದಕ್ಕೆ ಸಿದ್ಧತೆಯಾಗಿ ಲಗ್ನ ಪತ್ರಿಕೆ ಶಾಸ್ತ್ರದಲ್ಲಿ ಹಾಡುವ ಹಾಡು. ಪಿ ಸುಶೀಲ ಅವರ ಗಾಯನ ಮರುಳು ಮಾಡುತ್ತದೆ. ಜಮುನ ಮೊಗದಲ್ಲಿ ನಾಚಿಕೆ, ಮುಂದಿನ ಜೀವನದ ಆಸೆ ಆಕಾಂಕ್ಷೆಗಳು ಎಲ್ಲವೂ ಮೆಲೈಸಿರುತ್ತದೆ.

"ಜನುಮ ಜನುಮದ ಅನುಬಂಧ" ಈ ಹಾಡಿನಲ್ಲಿ ಪಿ ಬಿ ಶ್ರೀನಿವಾಸ್ ನಮ್ಮ ಮನಸ್ಸನ್ನೇ ಅಪಹರಿಸಿಬಿಡುತ್ತಾರೆ. ಲಯಬದ್ಧವಾದ ಸಂಗೀತ, ಉತ್ತಮ ನೃತ್ಯ ಸಂಯೋಜನೆ ಈ ಹಾಡಿನ ಗರಿಮೆ. ಹಾಡಿನಲ್ಲಿ ಬರುವ "ಕನ್ನಡ.. ಜನರ ಔದಾರ್ಯದಂತೆ ಜನುಮ ಜನುಮದ ಅನುಬಂಧ" ದೃಶ್ಯದಲ್ಲಿ ಗಾಯಕ ಮತ್ತು ನಾಯಕರ ಜುಗಲ್ ಬಂದಿಇಷ್ಟವಾಗುತ್ತದೆ .

"ಫಲಿಸಿತು ಒಲವಿನ ಪೂಜಾ ಫಲ" ಸಂಪ್ರದಾಯ, ಸಂಸ್ಕಾರ, ನಮ್ಮ ಆಚರಣೆಗಳು, ಮದುವೆಯ ಸಂಭ್ರಮ ಎಲ್ಲವನ್ನೂ ಒಟ್ಟಿಗೆ ಒಂದು ಹಾಡಿನಲ್ಲಿ ತಂದಿರುವುದು ವಿಶೇಷ. ಪಿ ಸುಶೀಲ ಗಾಯನದಲ್ಲಿ ಮತ್ತೆ ಮುಂಚೂಣಿಯಲ್ಲಿ ನಿಂತರೆ, ನೃತ್ಯ, ಅಭಿನಯದಲ್ಲಿ ಜಮುನ ಗಮನ ಸೆಳೆಯುತ್ತಾರೆ.

ಅಂತಿಮ ದೃಶ್ಯದ "ಒಲವೆ ಜೀವನ ಸಾಕ್ಷಾತ್ಕಾರ" ಯುಗಳ ಗೀತೆ ಈ ಹಾಡನ್ನು ಮತ್ತೆ ಹಾಡಿನ ಬಗ್ಗೆ ಎಷ್ಟು ಹೇಳಿದರೂ ನನಗೆ ತೃಪ್ತಿ ಸಿಗುವುದಿಲ್ಲ. ಕಾರಣ ಈ ಕೆಳಗಿನಂತೆ

೧. ನಾಯಕಿ ಹಾಡಿದ್ದನ್ನೇ ನಾಯಕ ಮತ್ತೆ ಹಾಡುತ್ತಾನೆ. ಪಿ ಸುಶೀಲ ಅವರ ಧ್ವನಿಯಲ್ಲಿ ಹಾಡು ಸುಂದರವಾಗಿ ಮೂಡಿ ಬಂದಿದೆ. ಪಿ ಬಿ ಶ್ರೀನಿವಾಸ್ ಅವರ ಧ್ವನಿಗೆ ಪ್ರತಿಧ್ವನಿಯನ್ನು ಪರಿಣಾಮಕಾರಿಯಾಗಿ ಕೊಟ್ಟಿದ್ದಾರೆ.
೨. ಸಾಹಿತ್ಯ, ಅಭಿನಯ ಅತ್ಯುತ್ತಮ ಮಟ್ಟದ್ದಾಗಿದೆ
೩. ಇನ್ನೂ ಕ್ಯಾಮೇರ ಕೈಚಳಕ.

  • ಒಂದು ಕ್ಷಣವೂ ಕ್ಯಾಮೆರ ನಿಲ್ಲುವುದಿಲ್ಲ 
  • ಹತ್ತಿರ ಬರುತ್ತದೆ.. ದೂರ ಹೋಗುತ್ತದೆ 
  • ಕ್ಯಾಮೆರಾ ಚಾಲನೆಯ ವೇಗ 
  • ಆ ಬಯಲು ಪ್ರದೇಶವನ್ನೂ ಅಧ್ಬುತವಾಗಿ ಉಪಯೋಗಿಸಿಕೊಂಡಿರುವ ರೀತಿ 
ಇವೆಲ್ಲಾ ಒಂದು ಮಾತನ್ನು ಹೇಳುತ್ತದೆ. ಒಲವು ಬರಿ ಒಂದು ಕಡೆಯಲ್ಲಿ ನಿಲ್ಲುವುದಲ್ಲ, ಅಥವಾ ನಿಂತಿರುವುದಲ್ಲ.. ಓಡಾಡುತ್ತಲೇ, ಒಬ್ಬರಿಂದ ಒಬ್ಬರಿಗೆ ಹರಿಯುತ್ತಲೇ ಇರಬೇಕು. ಆಗಲೇ ಅದರ ಸಾಕ್ಷಾತ್ಕಾರ.  ಕ್ಯಾಮೆರ ಹತ್ತಿರ ಬರುತ್ತದೆ ದೂರ ಹೋಗುತ್ತದೆ.. ಇದರಿಂದ ಒಲವು ಬೇಡಿದಾಗ ಬಂದರೂ.. ನಾವು ಅದನ್ನು ಹಿಡಿದಿಡಲಾಗುವುದಿಲ್ಲ.. ಹಾಗೆಯೇ ದೂರ ಹೋದರು ಮತ್ತೆ ಮತ್ತೆ ಮರಳಿ ಬರುತ್ತಲೇ ಇರುತ್ತದೆ. 


ತನ್ನ ದುರಾಸೆಯ ವೃಕ್ಷಕ್ಕೆ ನೀರೆಯಲು ತನ್ನ ಅಕ್ಕನ ಮನೆಯ ಆಸ್ತಿಯನ್ನು ದೋಚಲು ಹೊಂಚು ಹಾಕುತ್ತಾ, ತನ್ನ ಅಕ್ಕನ ಮಗ ಇಷ್ಟ ಪಡುತ್ತಿದ್ದ ಹೆಣ್ಣಿನ ಜಾತಕದಲ್ಲಿ ದೋಷವಿದೆ ಎಂದು ಸುಳ್ಳು ಹೇಳಿಸಿ.. ಒಲವು ಒಲವು ಎಂದು ಹೇಳುತ್ತಿದ್ದ ಅಪ್ಪನ ಮಗನ ಪ್ರೀತಿ ಅನುಬಂಧವನ್ನು ಲೆಕ್ಕಿಸದೆ, ತನ್ನ ಅಕ್ಕನ ತಲೆಯಲ್ಲಿ ದ್ವೇಷದ ಬೀಜ ಬಿತ್ತಿ ಇಡಿ ಮನೆಯನ್ನು ರಣರಂಗ ಮಾಡುತ್ತಾನೆ. 
ಅಲ್ಲಿಂದ ಶುರುವಾಗುತ್ತದೆ ಧರ್ಮ ಕರ್ಮಗಳ ಹೊಡೆದಾಟ. ಕಡೆಯಲ್ಲಿ ತಾನು ಮಾಡಿದ ಪಾಪ ಶೇಷಗಳು ಸಶೇಷವಾಗದೆ ಈ ಜನ್ಮದಲ್ಲಿಯೇ ಅದಕ್ಕೆ ಪ್ರತಿಫಲ ಸಿಗುತ್ತದೆ ಎನ್ನುವದನ್ನು ಮಾರ್ಮಿಕವಾಗಿ ತೋರಿದ್ದಾರೆ ಈ ಚಿತ್ರದಲ್ಲಿ.

ಇಡಿ ಚಿತ್ರದ ಅದ್ಭುತ ರೂವಾರಿ ಪುಟ್ಟಣ್ಣ ಅದ್ಭುತ ಮಾಂತ್ರಿಕರೆ ಹೌದು. ತಮಗೆ ಅನ್ನಿಸಿದ್ದನ್ನ, ತಮ್ಮ ಮನದಾಳದಲ್ಲಿದ್ದುದ್ದನ್ನು  

ಹಾಗೆಯೇ ತೆರೆಯ ಮೇಲೆ ತಂದಿಡುವ ಅವರ ಶಕ್ತಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. ಅವರ ಚಿತ್ರಗಳು ಅತ್ಯುತ್ತಮ ಗುಣಮಟ್ಟ ಹೊಂದಿರುತ್ತಿದ್ದವು. ಕಾರಣ ಚಲನ ಚಿತ್ರ ವಿಭಾಗದ ಪ್ರತಿ ಹಂತಗಳನ್ನು ಬಲ್ಲವರಾಗಿದ್ದರಿಂದ ಅದರ ಒಳಗೆ ಅಡಗಿರುತ್ತಿದ್ದ ಹೂರಣವನ್ನು ತೆರೆದಿಡಲು ಅನುಕೂಲವಾಗುತ್ತಿತ್ತು.

ಪುಟ್ಟಣ್ಣ ಕಣಗಾಲ್ ಗುರುಗಳೇ ಇಲ್ಲಿಯ ತನಕ ನಿಮ್ಮ ಚಿತ್ರಗಳ ಹರಿವು ಒಂದು ವಿಧದಲ್ಲಿತ್ತು. ಈ ಚಿತ್ರದ ನಂತರ ನಿಮ್ಮ ಆತ್ಮ ವಿಶ್ವಾಸ, ನಿಮ್ಮ ಪ್ರತಿಭೆಯ ಬಗ್ಗೆ ನಿಮಗೆ ಇದ್ದ ನಂಬಿಕೆ ಎಲ್ಲವೂ ಒಟ್ಟುಗೂಡಿಕೊಂಡು ಮುಂದೆ ನೀವು ಬೆಳ್ಳಿತೆರೆಗೆ ಅರ್ಪಿಸಿದ ಚಿತ್ರಗಳೆಲ್ಲವೂ ಒಂದೊಂದು ಮಾಣಿಕ್ಯ ರತ್ನಗಳೇ..

ಅಕ್ಷರಶಃ ಈ ಚಿತ್ರದ ನಂತರ ನೀವೂ ನಿಜವಾಗಿಯೂ ಕನ್ನಡ ಚಿತ್ರರಂಗವನ್ನು ಬೆಳಗಿದ ಚಿತ್ರ ಜ್ಯೋತಿಗಳನ್ನು ಹಚ್ಚಿಡುತ್ತಾ ಬಂದಿರಿ. ನಿಮ್ಮ ಕನ್ನಡಾಭಿಮಾನಕ್ಕೆ, ನೆಲದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ಬಿಂಬಿಸಿದ ನಿಮ್ಮ ಪ್ರತಿಭೆ ಶರಣು!!!