Monday, September 12, 2016

ರಾಜೋತ್ಸವ --- ಅರ್ಥಾತ್ ಅಣ್ಣಾವ್ರ ಚಿತ್ರಗಳ ಜೈತ್ರ ಯಾತ್ರೆ...!

ಪುಟ್ಟಣ್ಣ ಕಣಗಾಲ್ ಅವರ ೨೪ ಚಿತ್ರಗಳು ಅಕ್ಷರ ರೂಪದಲ್ಲಿ ಬಂದವು
ಬಾಲಣ್ಣ ಅವರ ಚಿತ್ರಗಳ ಲಹರಿ ಶುರು ಆಗಿದೆ.
ಅಣ್ಣಾವ್ರ ಎಲ್ಲಾ ಚಿತ್ರಗಳನ್ನು ಅಕ್ಷರ ರೂಪದಲ್ಲಿ ಹಿಡಿದಿಡುವ ಸಾಹಸಕ್ಕೆ ಕೈ ಹಾಕುವ ಆಸೆ....
ಹುಚ್ಚೋ ಬೆಪ್ಪೋ ಶಿವನ ಲೀಲೆಯೋ ಅರಿವಾಗುತ್ತಿಲ್ಲ .....

ಹೀಗೊಂದು ಆಸೆ ಮನದಾಳದಲ್ಲಿ ಒಂದು ಚಿಕ್ಕ ಬಿಂದುವಾಗಿ ಮೂಡ ತೊಡಗಿತು.. ನನ್ನ ಆತ್ಮ ಬಂಧುಗಳು ಹತ್ತಿರ ಹೇಳಿಕೊಂಡೆ.. "ಶ್ರೀ.. ವಾಹ್" ಅಂದರು

ನನ್ನ ಆಪ್ತ ಮಿತ್ರರ ಹತ್ತಿರ ಹೇಳಿದೆ.. "ಕಾಯುತ್ತಿರುತ್ತೇವೆ..  ನೀವು ಮಾಡುತ್ತಿರುವುದು ನಿಮಗೆ ರಾಜ್ ಚಿತ್ರಗಳ ಬಗ್ಗೆ ವ್ಯಾಮೋಹ ಅನ್ನಿಸಿದರೂ ಮುಂದಿನ ಪೀಳಿಗೆಗೆ ರಾಜ್ ಎನ್ನುವ ಪ್ರತಿಭಾ ಶಕ್ತಿಯನ್ನು ಅಕ್ಷರಗಳಲ್ಲಿ ಹಿಡಿದಿಡುವ ಒಂದು ಪ್ರಯತ್ನವಾಗಿ ನಿಲ್ಲುತ್ತದೆ " ಅಂದರು..

ಎಷ್ಟರ ಮಟ್ಟಿಗೆ ಯಶಸ್ಸು ಕಾಣತ್ತೇನೆ ಎನ್ನುವ ಗೊಂದಲವಿತ್ತು ಅಣ್ಣಾವ್ರು ಮಲಗಿರುವ ಸ್ಥಳಕ್ಕೆ ಹೋದೆ..... ಕೆಲ ಕ್ಷಣ ಕಣ್ಣು ಮುಂಚೆ ನಿಂತೇ..

"ಶ್ರೀಕಾಂತಾ ಜಮಾಯಿಸಿ ಬಿಡಿ" ಅಂತ ಹೇಳಿದ ಹಾಗೆ ಭಾಸವಾಯಿತು... ಅಣ್ಣಾವ್ರು ಮೈದಡವಿ ಹರಸಿದ್ದಾರೆ ಅನ್ನಿಸಿತು .. ಹಾಗಾಗಿ ಈ ಸಾಹಸ.

ಅಣ್ಣಾವ್ರ ಹತ್ತಿರ ನನ್ನ ಅವರ ಸಂಭಾಷಣೆ ನೆಡೆಯುತ್ತಲೇ ಇರುತ್ತದೆ.. ಅದು ನಿಮಗೆಲ್ಲ ಗೊತ್ತಿರುವ ವಿಷಯವೇ ಅಲ್ಲವೇ..

"ಸಕಲ ಗ್ರಹಗಳ ಬಲ ನೀನೆ ಸರಸಿಜಾಕ್ಷ" ಎನ್ನುವ ಅಣ್ಣಾವ್ರ ಶ್ರುತಿ ಸೇರಿದಾಗ ಚಿತ್ರದ ಕಡೆಯ ದೃಶ್ಯದ ಸಂಭಾಷಣೆಯಂತೆ.. ದೇವರ ಮೇಲೆ ಭಾರ ಹಾಕಿ ಅಭಿಮಾನಿ ದೇವರುಗಳ ದೇವರು ನಮ್ಮ ಕಣ್ಣ ಮುಂದೆಯೇ ೨೦೯ ಚಿತ್ರಗಳಲ್ಲಿ ಆ ಪರಮಾತ್ಮ ಸೃಷ್ಠಿ ಮಾಡಿದ ವಸುಂಧರೆಯನ್ನು, ಭೂಲೋಕ, ಪಾತಾಳ ಲೋಕ, ಸ್ವರ್ಗ, ನರಕ.. ದೇವರು, ದಾನವರು, ರಾಜರು ಮಹಾರಾಜರು, ದಾರ್ಶನಿಕರು, ಸಾಮಾಜಿಕ ಕಳಕಳಿಯುಳ್ಳ ಅರಸರು, ಸಮಾಜಕ್ಕೆ ಹೀಗೆ ಇರಿ ಅನ್ನುವ ಬದಲು.. ಹೀಗೆ ಇದ್ದರೆ ಚೆನ್ನಾ ಎನ್ನುವ ಭಾವ ಹೊತ್ತು ತಂದ ಅನೇಕ ಪಾತ್ರಗಳಲ್ಲಿ ಮನದಲ್ಲಿ ಕೂತಿರುವ ಅಣ್ಣಾವ್ರ ಚಿತ್ರಗಳನ್ನು ನನ್ನ ಮನದ ಕಣ್ಣಿಗೆ ಕಂಡಂತೆ ಅಕ್ಷರಗಳಲ್ಲಿ ಬರೆಯುವ ಒಂದು ದುಸ್ಸಾಹಸ ಶುರು..

ಅಣ್ಣಾವ್ರ ಸಾಲು ಸಾಲು ಚಿತ್ರಗಳ ಪಾತ್ರಗಳಿಂದ ಹೊತ್ತು ತಂದ ಸಂದೇಶಗಳನ್ನು, ಸ್ಫೂರ್ತಿಗಳನ್ನು, ಪಾಠಗಳನ್ನು ನಾ ನೋಡಿ ,ಕಲಿತು, ಅದರಿಂದ ಕಳೆತು, ಮಾಗಿದ ಹಣ್ಣಿನಂತೆ ಸವಿಯಾಗಿ ನನ್ನ ಜೀವನವನ್ನು ಹೀಗೆ ಮಾಡಿಕೊಳ್ಳಬಹುದು ಎಂದು ದಾರಿ ದೀಪವಾಗಿರುವ ಅವರ ಚಿತ್ರಗಳ ಜಲಧಾರೆ ಅಕ್ಷರವರ್ಷವಾಗಿ ನಿಮ್ಮೆಲ್ಲರ ಮುಂದೆ.. ಬರಲಿದೆ

ಕಲ್ಲಿನೊಳಗೆ ಅಡಕವಾಗಿರುವ ಮೂರ್ತಿಯನ್ನು ಕಂಡು ಹಿಡಿದು, ಅದನ್ನು ಸುಂದರವಾದ ಶಿಲ್ಪವನ್ನಾಗಿ ಮಾಡಿದ ಅವರ ಚಿತ್ರಗಳ ನಿರ್ದೇಶಕರು, ಸಾಹಿತಿಗಳು, ಸಂಗೀತ ನಿರ್ದೇಶಕರು, ಛಾಯಾಚಿತ್ರಗ್ರಾಹಕರು, ಸಾಹಸ ನಿರ್ದೇಶಕರು, ಸಹ ನಟ ನಟಿಯರು, ತಂತ್ರಜ್ಞರು, ನೃತ್ಯ ನಿರ್ದೇಶಕರು, ಸಂಕಲನಕಾರರು, ಚಿತ್ರತಂಡದ ಪ್ರತಿಯೊಬ್ಬ ಸಹಾಯಕರು ಮತ್ತು ಇವರೆಲ್ಲರ ಜೀವ.. ಅಣ್ಣಾವ್ರ ಮಾತಿನಲ್ಲಿಯೇ ಅನ್ನದಾತರು ಎನ್ನಿಸಿಕೊಳ್ಳುವ ನಿರ್ಮಾಪಕರು, ಅಣ್ಣಾವ್ರ ಪ್ರತಿ ಚಿತ್ರದ ಕಥೆಯನ್ನು ಕೂಲಂಕುಶವಾಗಿ ಅರ್ಥೈಸಿಕೊಂಡು ಅಣ್ಣಾವ್ರನ್ನು ತ್ರಿವಿಕ್ರಮನಾಗಿ ಬೆಳೆಸಿದ ಅಣ್ಣಾವ್ರ ತಮ್ಮ ವರದಪ್ಪ ಅವರಿಗೂ  ಮತ್ತು ಈ ಸುಂದರ ಅಭಿಮಾನಿದೇವರುಗಳ ದೇವರನ್ನು  ಈ ಭುವಿಗೆ ತಂದ ಅಣ್ಣಾವ್ರ ಅಪ್ಪ ಅಮ್ಮನ ಚರಣಕಮಲಗಳಿಗೆ ಈ ಚಿತ್ರ ಬರಹದ ಜಾತ್ರೆ "ಅರ್ಪಿತಾ"..

ಕರುನಾಡ ತಾಯಿ ಭುವನೇಶ್ವರಿಯ ಕೊರಳ ಮಾಲೆಯನ್ನು ಅಲಂಕರಿಸಿದ ಚಲನಚಿತ್ರ ರತ್ನಮಣಿಗಳು ಈ ಕೆಳಗಿನಂತಿವೆ.

1 1954 ಬೇಡರ ಕಣ್ಣಪ್ಪ
2 1955 ಸೋದರಿ
3 1956 ಭಕ್ತ ವಿಜಯ
4 1956 ಹರಿಭಕ್ತ
5 1956 ಓಹಿಲೇಶ್ವರ
6 1957 ಸತಿ ನಳಾಯಿನಿ
7 1957 ರಾಯರ ಸೊಸೆ
8 1958 ಭೂಕೈಲಾಸ
9 1958 ಶ್ರೀ ಕೃಷ್ಣಗಾರುಡಿ
10 1958 ಅಣ್ಣ ತಂಗಿ
11 1959 ಜಗಜ್ಯೋತಿ ಬಸವೇಶ್ವರ
12 1959 ಧರ್ಮ ವಿಜಯ
13 1959 ಮಹಿಷಾಸುರ ಮರ್ಧಿನಿ
14 1959 ಅಬ್ಬಾ ಆ ಹುಡುಗಿ
15 1960 ರಣಧೀರ ಕಂಠೀರವ
16 1960 ರಾಣಿ ಹೊನ್ನಮ್ಮ
17 1960 ಆಶಾಸುಂದರಿ
18 1960 ದಶಾವತಾರ
19 1960 ಭಕ್ತ ಕನಕದಾಸ
20 1961 ಶ್ರೀಶೈಲ ಮಹಾತ್ಮೆ
21 1961 ಕಿತ್ತೂರು ಚೆನ್ನಮ್ಮ
22 1961 ಕಣ್ತೆರೆದು ನೋಡು
23 1961 ಕೈವಾರ ಮಹಾತ್ಮೆ
24 1961 ಭಕ್ತ ಚೇತ
25 1961 ನಾಗಾರ್ಜುನ
26 1962 ಗಾಳಿಗೋಪುರ
27 1962 ಭೂದಾನ
28 1962 ಸ್ವರ್ಣಗೌರಿ
29 1962 ದೇವಸುಂದರಿ
30 1962 ಕರುಣೆಯೇ ಕುಟುಂಬದ ಕಣ್ಣು
31 1962 ಮಹಾತ್ಮ ಕಬೀರ್
32 1962 ವಿಧಿವಿಲಾಸ
33 1962 ತೇಜಸ್ವಿನಿ
34 1963 ವಾಲ್ಮೀಕಿ
35 1963 ನಂದಾದೀಪ
36 1963 ಸಾಕು ಮಗಳು
37 1963 ಕನ್ಯಾರತ್ನ
38 1963 ಗೌರಿ
39 1963 ಜೀವನ ತರಂಗ
40 1963 ಮಲ್ಲಿ ಮದುವೆ
41 1963 ಕುಲವಧು
42 1963 ಕಲಿತರೂ ಹೆಣ್ಣೇ
43 1963 ವೀರಕೇಸರಿ
44 1963 ಮನ ಮೆಚ್ಚಿದ ಮಡದಿ
45 1963 ಸತಿ ಶಕ್ತಿ
46 1963 ಚಂದ್ರಕುಮಾರ
47 1963 ಸಂತ ತುಕಾರಾಮ
48 1963 ಶ್ರೀರಾಮಾಂಜನೇಯ ಯುದ್ಧ
49 1964 ನವಕೋಟಿ ನಾರಾಯಣ
50 1964 ಚಂದವಳ್ಳಿಯ ತೋಟ
51 1964 ಶಿವರಾತ್ರಿ ಮಹಾತ್ಮೆ
52 1964 ಅನ್ನಪೂರ್ಣ
53 1964 ತುಂಬಿದ ಕೊಡ
54 1964 ಶಿವಗಂಗೆ ಮಹಾತ್ಮೆ
55 1964 ಮುರಿಯದ ಮನೆ
56 1964 ಪ್ರತಿಜ್ಞೆ
57 1964 ನಾಂದಿ
58 1965 ನಾಗಪೂಜ
59 1965 ಚಂದ್ರಹಾಸ
60 1965 ಸರ್ವಜ್ಞಮೂರ್ತಿ
61 1965 ವಾತ್ಸಲ್ಯ
62 1965 ಸತ್ಯ ಹರಿಶ್ಚಂದ್ರ
63 1965 ಮಹಾಸತಿ ಅನುಸೂಯ
64 1965 ಇದೇ ಮಹಾ ಸುದಿನ
65 1965 ಬೆಟ್ಟದ ಹುಲಿ
66 1965 ಸತಿ ಸಾವಿತ್ರಿ
67 1965 ಮದುವೆ ಮಾಡಿ ನೋಡು
68 1965 ಪತಿವ್ರತಾ
69 1966 ಮಂತ್ರಾಲಯ ಮಹಾತ್ಮೆ
70 1966 ಕಠಾರಿವೀರ
71 1966 ಬಾಲನಾಗಮ್ಮ
72 1966 ತೂಗುದೀಪ
73 1966 ಪ್ರೇಮಮಯಿ
74 1966 ಕಿಲಾಡಿ ರಂಗ
75 1966 ಮಧುಮಾಲತಿ
76 1966 ಎಮ್ಮೆ ತಮ್ಮಣ್ಣ
77 1966 ಮೋಹಿನಿ ಭಸ್ಮಾಸುರ
78 1966 ಶ್ರೀ ಕನ್ನಿಕಾಪರಮೇಶ್ವರಿ ಕಥೆ
79 1966 ಸಂಧ್ಯಾರಾಗ
80 1967 ಪಾರ್ವತಿ ಕಲ್ಯಾಣ
81 1967 ಸತಿಸುಕನ್ಯ
82 1967 ಗಂಗೆ ಗೌರಿ
83 1967 ರಾಜಶೇಖರ
84 1967 ಲಗ್ನಪತ್ರಿಕೆ
85 1967 ರಾಜದುರ್ಗದ ರಹಸ್ಯ
86 1967 ದೇವರ ಗೆದ್ದ ಮಾನವ
87 1967 ಬೀದಿ ಬಸವಣ್ಣ
88 1967 ಮನಸ್ಸಿದ್ದರೆ ಮಾರ್ಗ
89 1967 ಬಂಗಾರದ ಹೂವು
90 1967 ಚಕ್ರತೀರ್ಥ
91 1967 ಇಮ್ಮಡಿ ಪುಲಿಕೇಶಿ
92 1968 ಜೇಡರ ಬಲೆ
93 1968 ಗಾಂಧಿನಗರ
94 1968 ಮಹಾಸತಿ ಅರುಂಧತಿ
95 1968 ಮನಸ್ಸಾಕ್ಷಿ
96 1968 ಸರ್ವಮಂಗಳ
97 1968 ಭಾಗ್ಯದೇವತೆ
98 1968 ಬೆಂಗಳೂರು ಮೈಲ್
99 1968 ಹಣ್ಣೆಲೆ ಚಿಗುರಿದಾಗ
100 1968 ಭಾಗ್ಯದ ಬಾಗಿಲು
101 1968 ನಟಸಾರ್ವಭೌಮ
102 1968 ರೌಡಿ ರಂಗಣ್ಣ
103 1968 ಧೂಮಕೇತು (ಚಲನಚಿತ್ರ)
104 1968 ಅಮ್ಮ
105 1968 ಸಿಂಹಸ್ವಪ್ನ
106 1968 ಗೋವಾದಲ್ಲಿ ಸಿ.ಐ.ಡಿ. ೯೯೯
107 1968 ಮಣ್ಣಿನ ಮಗ
108 1969 ಮಾರ್ಗದರ್ಶಿ
109 1969 ಗಂಡೊಂದು ಹೆಣ್ಣಾರು
110 1969 ಮಲ್ಲಮ್ಮನ ಪವಾಡ
111 1969 ಚೂರಿ ಚಿಕ್ಕಣ್ಣ
112 1969 ಪುನರ್ಜನ್ಮ
113 1969 ಭಲೇ ರಾಜ
114 1969 ಉಯ್ಯಾಲೆ
115 1969 ಚಿಕ್ಕಮ್ಮ
116 1969 ಮೇಯರ್ ಮುತ್ತಣ್ಣ
117 1969 ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯
118 1970 ಶ್ರೀ ಕೃಷ್ಣದೇವರಾಯ
119 1970 ಕರುಳಿನ ಕರೆ
120 1970 ಹಸಿರು ತೋರಣ
121 1970 ಭೂಪತಿ ರಂಗ
122 1970 ಮಿಸ್ಟರ್ ರಾಜ್‍ಕುಮಾರ್
123 1970 ಭಲೇ ಜೋಡಿ
124 1970 ಸಿ.ಐ.ಡಿ. ರಾಜಣ್ಣ
125 1970 ನನ್ನ ತಮ್ಮ
126 1970 ಬಾಳು ಬೆಳಗಿತು
127 1970 ದೇವರ ಮಕ್ಕಳು
128 1970 ಪರೋಪಕಾರಿ
129 1970 ನಾಡಿನ ಭಾಗ್ಯ
130 1971 ಕಸ್ತೂರಿ ನಿವಾಸ
131 1971 ಬಾಳ ಬಂಧನ
132 1971 ಕುಲಗೌರವ
133 1971 ನಮ್ಮ ಸಂಸಾರ
134 1971 ಕಾಸಿದ್ರೆ ಕೈಲಾಸ
135 1971 ತಾಯಿದೇವರು
136 1971 ಪ್ರತಿಧ್ವನಿ (ಚಲನಚಿತ್ರ)
137 1971 ಸಾಕ್ಷಾತ್ಕಾರ
138 1971 ನ್ಯಾಯವೇ ದೇವರು
139 1971 ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ
140 1972 ಜನ್ಮರಹಸ್ಯ
141 1972 ಸಿಪಾಯಿರಾಮು
142 1972 ಬಂಗಾರದ ಮನುಷ್ಯ
143 1972 ಹೃದಯ ಸಂಗಮ
144 1972 ಕ್ರಾಂತಿವೀರ
145 1972 ಭಲೇ ಹುಚ್ಚ
146 1972 ನಂದಗೋಕುಲ
147 1972 ಜಗಮೆಚ್ಚಿದ ಮಗ
148 1973 ದೇವರು ಕೊಟ್ಟ ತಂಗಿ
149 1973 ಬಿಡುಗಡೆ (ಚಲನಚಿತ್ರ)
150 1973 ಸ್ವಯಂವರ (ಚಲನಚಿತ್ರ)
151 1973 ಗಂಧದ ಗುಡಿ
152 1973 ದೂರದ ಬೆಟ್ಟ
153 1973 ಮೂರೂವರೆ ವಜ್ರಗಳು
154 1974 ಬಂಗಾರದ ಪಂಜರ
155 1974 ಎರಡು ಕನಸು, ಮಂಜುಳಾ
156 1974 ಸಂಪತ್ತಿಗೆ ಸವಾಲ್
157 1974 ಭಕ್ತ ಕುಂಬಾರ
158 1974 ಶ್ರೀ ಶ್ರೀನಿವಾಸ ಕಲ್ಯಾಣ
159 1974 ದಾರಿ ತಪ್ಪಿದ ಮಗ
160 1975 ಮಯೂರ
161 1975 ತ್ರಿಮೂರ್ತಿ
162 1976 ಪ್ರೇಮದ ಕಾಣಿಕೆ
163 1976 ಬಹದ್ದೂರ್ ಗಂಡು
164 1976 ರಾಜ ನನ್ನ ರಾಜ
165 1976 ನಾ ನಿನ್ನ ಮರೆಯಲಾರೆ
166 1976 ಬಡವರ ಬಂಧು
167 1977 ಬಬ್ರುವಾಹನ
168 1977 ಭಾಗ್ಯವಂತರು
169 1977 ಗಿರಿಕನ್ಯೆ
170 1977 ಸನಾದಿ ಅಪ್ಪಣ್ಣ
171 1977 ಒಲವು ಗೆಲವು
172 1978 ಶಂಕರ್ ಗುರು
173 1978 ಆಪರೇಷನ್ ಡೈಮಂಡ್ ರ್ಯಾಕೆಟ್
174 1978 ತಾಯಿಗೆ ತಕ್ಕ ಮಗ
175 1979 ಹುಲಿಯ ಹಾಲಿನ ಮೇವು
176 1979 ನಾನೊಬ್ಬ ಕಳ್ಳ
177 1980 ರವಿಚಂದ್ರ
178 1980 ವಸಂತಗೀತ
179 1981 ಹಾವಿನ ಹೆಡೆ
180 1981 ನೀ ನನ್ನ ಗೆಲ್ಲಲಾರೆ
181 1981 ಭಾಗ್ಯವಂತ
182 1981 ಕೆರಳಿದ ಸಿಂಹ
183 1982 ಹೊಸಬೆಳಕು
184 1982 ಹಾಲು ಜೇನು
185 1982 ಚಲಿಸುವ ಮೋಡಗಳು
186 1983 ಕವಿರತ್ನ ಕಾಳಿದಾಸ
187 1983 ಕಾಮನಬಿಲ್ಲು
188 1983 ಭಕ್ತ ಪ್ರಹ್ಲಾದ
189 1983 ಎರಡು ನಕ್ಷತ್ರಗಳು
190 1984 ಸಮಯದ ಗೊಂಬೆ
191 1984 ಶ್ರಾವಣ ಬಂತು
192 1984 ಯಾರಿವನು
193 1984 ಅಪೂರ್ವ ಸಂಗಮ
194 1985 ಅದೇ ಕಣ್ಣು
195 1985 ಜ್ವಾಲಾಮುಖಿ
196 1985 ಧ್ರುವತಾರೆ
197 1986 ಭಾಗ್ಯದ ಲಕ್ಷ್ಮಿ ಬಾರಮ್ಮ
198 1986 ಅನುರಾಗ ಅರಳಿತು
199 1986 ಗುರಿ
200 1987 ಒಂದು ಮುತ್ತಿನ ಕಥೆ
201 1987 ಶ್ರುತಿ ಸೇರಿದಾಗ
202 1988 ದೇವತಾ ಮನುಷ್ಯ
203 1988 ಶಿವ ಮೆಚ್ಚಿದ ಕಣ್ಣಪ್ಪ
204 1989 ಪರಶುರಾಮ್
205 1992 ಜೀವನ ಚೈತ್ರ
206 1993 ಆಕಸ್ಮಿಕ
207 1994 ಒಡಹುಟ್ಟಿದವರು
208 1994 ಗಂಧದಗುಡಿ ಭಾಗ-೨
209 2000 ಶಬ್ದವೇಧಿ

ಸೂಚನೆ :
೧) "ನಟಸಾರ್ವಭೌಮ" ಇದು ಅಣ್ಣಾವ್ರು ನೂರು ಚಿತ್ರಗಳು ಬಿಡುಗಡೆಗೊಂಡು ಶತಚಿತ್ರಗಳ ನಟ ಎಂದು ಹೆಸರು ಪಡೆದ ಶುಭ ಸಂದರ್ಭದಲ್ಲಿ ತಯಾರಾದ ಒಂದು ಸಾಕ್ಷ್ಯಚಿತ್ರ

೨) ನಾಡಿನ ಭಾಗ್ಯ ಈ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದಾರೆ..

(ಎಲ್ಲೆಡೆಯೂ ಅವರು ಅಭಿನಯಿಸಿದ್ದು ೨೦೭ ಚಿತ್ರಗಳು ಎಂದಿವೆ.. ಆದರೂ ಪಟ್ಟಿಯಲ್ಲಿನ ಎಲ್ಲಾ ೨೦೯ ಚಿತ್ರಗಳ ಪಾತ್ರಗಳ ಬಗ್ಗೆ ಬರೆವೆ.. ಇದರ ಮಧ್ಯೆದಲ್ಲಿ ಮೇಲೆ ಪಟ್ಟಿಮಾಡಿದ ಚಿತ್ರಗಳಲ್ಲದೆ ಇನ್ನು ಯಾವುದಾದರೂ ಚಿತ್ರದಲ್ಲಿ ಅಣ್ಣಾವ್ರು ಕಂಡು ಬಂದರೆ ಅದನ್ನು ಈ ಪಟ್ಟಿಗೆ ಸೇರಿಸುತ್ತೇನೆ)

ಬನ್ನಿ ಕರುನಾಡು ಮಾತ್ರವಲ್ಲದೆ ಇಡೀ ಜಗತ್ತಿನ ಚಿತ್ರರಂಗ ಕಂಡ ಸರ್ವಶ್ರೇಷ್ಠ ಕಲಾವಿದ ಎಂಬ ಹೆಗ್ಗಳಿಕೆ ಹೊಂದಿರುವ ಅಣ್ಣಾವ್ರ ಚಿತ್ರಯಾತ್ರೆಯನ್ನು ಶುರುಮಾಡೋಣ.. !!!

ನನ್ನ ಜೊತೆಯಲ್ಲಿ ನೀವೆಲ್ಲರೂ ಬರುತ್ತೀರಾ ಅಲ್ಲವೇ!!!
ಏನೇನೂ ಬರೀತೀಯ ಶ್ರೀಕಾಂತಾ...
ಅಣ್ಣಾವ್ರ ಯೋಚನಾ ಲಹರಿ 

ಇದು ಅಣ್ಣಾವ್ರ ಕರೆ.. !!!

Saturday, July 23, 2016

ರಜನಿ ನಟನೆಯ ಹಸಿವು... ಕಬಾಲಿ.. ಡಾ (2016)

ಉಫ್ ಉಫ್ ಉಫ್

ಕಬಾಲಿ ಚಿತ್ರ ನೋಡಿದ ಮೇಲೆ ನನಗೆ ಅನ್ನಿಸಿದ್ದು..

ಇಡೀ ಚಿತ್ರರಂಗ ಎದುರು ನೋಡುತಿದ್ದ ಚಿತ್ರ ಇದು.. ತಲೈವಾ ಎನ್ನುತ್ತಲೇ ಹೆಸರಾದ.. ರಜನಿಕಾಂತ್ ನನ್ನ ಮನಸ್ಸಿನ ಕೋಟೆಯಲ್ಲಿ ಇನ್ನಷ್ಟು ಭದ್ರವಾಗಿ ಕೂತದ್ದು ಸುಳ್ಳಲ್ಲ..

****
ಈ ಚಿತ್ರ ಚಿತ್ರಮಂದಿರದಲ್ಲೇ ನೋಡಲೇಬೇಕು ಎಂದು ಭೀಷ್ಮ ಶಪಥ ಮಾಡಿದ್ದೆ.. ಸರಿ ಎರಡನೇ ದಿನವೇ ಟಿಕೆಟ್ ಸಿಕ್ಕಿತು.. ನನ್ನ ತಮ್ಮ ಅವನ ಮನೆಯ ಹತ್ತಿರ ಇದ್ದ ಚಿತ್ರಮಂದಿರದಲ್ಲಿ ಟಿಕೆಟ್ ತೆಗೆದು ಇಟ್ಟಿದ್ದ..

ನಾನು, ಸವಿತಾ, ಶೀತಲ್, ಅಮ್ಮ ಮತ್ತು ಅಕ್ಕ ಚಿತ್ರಮಂದಿರದ ಹತ್ತಿರ ಹೋದೆವು.. ಎಲ್ಲರನ್ನು ಕಳಿಸಿ ನಿಧಾನವಾಗಿ ಒಳಗೆ ಹೊರಟೆ. ಯಾರೋ ನನ್ನ ಕರೆದ ಹಾಗೆ ಭಾಸವಾಯಿತು.. ತಿರುಗಿ ನೋಡಿದೆ.. ಅರೆ ರಜನಿಕಾಂತ್ ತನ್ನ ಬಿಳಿ ಗಡ್ಡ ನೀವಿಕೊಳ್ಳುತ್ತಾ ನಿಂತಿದ್ದರು..
"ಸರ್ಜಿ ನಮಸ್ಕಾರ.. "

"ಶ್ರೀ .. ಈ ಚಿತ್ರ ನೋಡಲೇ ಬೇಕು ಎಂದು ನಿರ್ಧರಿಸಿದ್ದು ಖುಷಿಯಾಯಿತು.. ನನ್ನ ಹೆಸರು ನಿನ್ನ ಹೆಸರು ಉತ್ತರಾರ್ಧ ಒಂದೇ ತರಹ ಇದೆ.. ಆ ಸಲುಗೆಯಿಂದ ಒಂದು ಮಾತು ಹೇಳುತ್ತೇನೆ.. ನೀ ನಿನ್ನ ಮೆದುಳಿಂದ, ಮನಸಿಂದ, ಹೃದಯದಿಂದ ನನ್ನ ನೆನಪನ್ನು ಪೂರ್ಣ ಅಳಿಸಿಕೊಂಡು ಹೋಗು.. "

"ಆಯಿತು ಸರ್ ನೀವು ಹೇಳಿದ ಹಾಂಗೆ ಮಾಡ್ತೀನಿ"
****************

ದೀಪವೆಲ್ಲಾ ಆರಿ ಹೋಯಿತು.. ಚಿತ್ರಮಂದಿರ ಪೂರ್ಣ ಕತ್ತಲಾಯಿತು..

ಶುರುವಾಯಿತು..

ವಾವ್.. ಆ ಹೃದಯವೇ ಚೀರುವಂತಹ ಹಿನ್ನೆಲೆ ಸಂಗೀತ.. ಹೃದಯ ಡಬ ಡಬ ಹೊಡೆದುಕೊಳ್ಳಲು ಶುರು..
S U P E R
R A J A N I 
S T A R

ಈ ಹೆಸರು ತೆರೆಯ ಮೇಲೆ ಬಂದಾಗ ಆ ವಿದ್ಯುತ್ ಸಂಚಾರ.. ಅನುಭವಿಸಿಯೇ ತೀರಬೇಕು..
ರಜನಿ ತೆರೆಯ ಮೇಲೆ ಆವರಿಸಿಕೊಳ್ಳುತ್ತಾ ಹೋದರು.. ಪ್ರತಿ ನಿಮಿಷವೂ ಮೈಯೆಲ್ಲಾ ಕಣ್ಣಾಗಿ, ಕಿವಿಯಾಗಿ ಈ ಚಿತ್ರ ನೋಡಿದೆ.
ಕಬಾಲಿ ಡಾ ಎನ್ನುವ ದೃಶ್ಯ ಬಂದಾಗ.. ಅಕ್ಷರಶಃ ಹೃದಯ ಬಾಯಿಗೆ ಬಂದಿತ್ತು.. ಈ ಚಿತ್ರವನ್ನು ಬೆಂಗಳೂರಿನ ನಟರಾಜ ಅಥವಾ ಊರ್ವಶಿ ಚಿತ್ರಮಂದಿರದಲ್ಲಿ ನೋಡಿದರೆ ಅದರ ಮಜವೇ ಬೇರೆ.. ಇರಲಿ ಸಾಧ್ಯ ಆದರೆ ನೋಡುವೆ ಮತ್ತೊಮ್ಮೆ ಆ ಚಿತ್ರಮಂದಿರಗಳಲ್ಲಿ. ಕಾರಣ.. ಕೈಕಟ್ಟಿಕೊಂಡು ನೋಡುವ ಪ್ರೇಕ್ಷಕರು ಅಲ್ಲಿ ಬರುವುದಿಲ್ಲ.. ಚಿತ್ರವನ್ನು ಚಿತ್ರವನ್ನಾಗಿ ನೋಡಲು ಬರುತ್ತಾರೆ.

ರಜನಿ ಗಡ್ಡದಾರಿಯಾಗಿ ಸೊಗಸಾಗಿ ಕಾಣುತ್ತಾರೆ.. ಪ್ರತಿ ದೃಶ್ಯವನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗಿರುವ ರೀತಿ ಅಮೋಘ. ನಿರ್ದೇಶಕರ ನಟ ಅವರು ಆದರೂ ತಮ್ಮ ಕೆಲವು ಟ್ರೇಡ್ ಮಾರ್ಕ್ ಶೈಲಿಗಳನ್ನು ಪೂರ್ಣ ಬದಿಗೊತ್ತಿ ಅಭಿನಯಿಸಿದ್ದಾರೆ. ಇತ್ತೀಚಿನ ಅವರ ಅನೇಕ ಚಿತ್ರಗಳಲ್ಲಿ ಅಭಿನಯ ಅನ್ನುವುದಕ್ಕಿಂತ ಅವರು ವಿಜೃಂಭಿಸಿದ್ದು ಹೆಚ್ಚು.. ಆದರೆ ಈ ಚಿತ್ರದಲ್ಲಿ ತಮ್ಮ ಹೃದಯವನ್ನೇ ಇಟ್ಟು ಅಭಿನಯಿಸಿದ್ದಾರೆ..

ಆರಂಭಿಕ ದೃಶ್ಯದಲ್ಲಿ ಕಾಣುವ ಆ ಗತ್ತು, ಸ್ಟೈಲ್, ಮೆಲ್ಲಗೆ ಹುಸಿ ನಗೆ..ಯಪ್ಪಾ ನಿಜಕ್ಕೂ ಚಿತ್ರರಂಗದ ನಾಯಕರೇ ಅವರು.
ಆ ಧ್ವನಿ, ಕಲ ಕಲ ಎಂದು ನಗುವ ಆ ಸ್ಟೈಲ್ ಸರೋವರದಲ್ಲಿ ಏಳುವ ಮೆಲ್ಲನೆ ಅಲೆಯಂತೆ ಆವರಿಸಿಕೊಳ್ಳುತ್ತಾರೆ.

೧) ಶಿಸ್ತುಬದ್ಧವಾದ ಅವರ ಉಡುಪು
೨) ೭೫ ಪ್ರತಿಶತ ಕಪ್ಪು ಕನ್ನಡ ಧರಿಸಿಯೇ ಇದ್ದರೂ, ಅವರ ಮುಖಾಭಿನಯ ಅದ್ಭುತವಾಗಿ ಮೂಡಿ ಬಂದಿದೆ
೩) ನಿಧಾನಗತಿಯಲ್ಲಿ ನೆಡೆದುಬರುವ ಶೈಲಿ
೪) ಕಬಾಲಿ ಡಾ ಎನ್ನುವ ಸಂಭಾಷಣೆಯಲ್ಲಿನ ಅಭಿನಯ.. ಮತ್ತು ಆ ಸ್ಟೈಲ್.. ಮೈ ನವಿರೇಳಿಸುತ್ತದೆ
೫) ಕಬಾಲಿ ಥೀಮ್ ಮ್ಯೂಸಿಕ್ ನಲ್ಲಿ ಅವರ ಧ್ವನಿ.. ಮತ್ತು ಚಿತ್ರದ ಪ್ರತಿಹಂತದಲ್ಲಿಯೂ ಬರುವ ಆ ಹಿನ್ನೆಲೆ ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್
೬) ಚಿತ್ರದ ಮಧ್ಯಂತರದಲ್ಲಿ ತಿರುವ ಸಿಗುವ ದೃಶ್ಯದಲ್ಲಿನ ಅವರ ಅಭಿನಯ.. ಮಾತಿಲ್ಲದೆ ಮುಖಭಾವ .. ವಾಹ್
೭) ತನ್ನ ಹೆಂಡತಿ ಬಗ್ಗೆ ವಿಷಯ ಹೇಳುವಾಗ. ..ದೃಶ್ಯದಲ್ಲಿನ ತೀವ್ರತೆ, ಉಗುರು ಕಡಿಯುವುದು, ಆತುರತೆ, ಕಾತುರತೆ.. ಕಣ್ಣಲ್ಲಿ ಹೊಳಪು .. ರಜನಿ ನಟ ಆಗಿ ಮನಸ್ಸಲ್ಲಿಯೇ ಕುಳಿತು ಬಿಡುತ್ತಾರೆ. .
೮)  ಮಗಳ್ಚಿ (magizhchi) ಎನ್ನುವ ಆ ಧ್ವನಿಯಲ್ಲಿನ ಏರಿಳಿತ, ಒಂದೇ ಪದ ಆದರೆ ಈ ಪದವನ್ನು ಚಿತ್ರ ಪೂರ್ತಿ ಅನೇಕ ದೃಶ್ಯದಲ್ಲಿ ಬಗೆ ಬಗೆಯಾಗಿ ಹೇಳುತ್ತಾರೆ
೯) ಗಡ್ಡದಾರಿಯಾಗಿ ತುಂಬಾ ಆಪ್ತರಾಗುತ್ತಾರೆ ಮನಸ್ಸಿಗೆ.
೧೦) ಒಟ್ಟಾರೆ.. ರಜನಿ ರಜನಿ ರಜನಿ ರಜನಿ ರಜನಿ ರಜನಿ.. ಪೂರ್ಣ ಅವರೇ ಅವರೇ.. ತಲೈವಾ


ರಾಧಿಕಾ ಆಪ್ಟೆ.. ಪುಟ್ಟ ಪುಟ್ಟ ಮಾತು.. ಚಿತ್ರದಲ್ಲಿ ಸಿಗುತ್ತಲೇ ಇರುತ್ತಾರೆ.. ಹೊಳೆಯುವ ಕಣ್ಣುಗಳು.. ರಜನಿಗೆ ಪ್ರತಿ ಹೆಗಲು ಕೊಟ್ಟಿದ್ದಾರೆ.. ಅವರ ಕಣ್ಣುಗಳ ಹೊಳಪು ರಜನಿ ಕಣ್ಣುಗಳ ತೀವ್ರತೆಗೆ ಜೊತೆಯಾಗಿ ನಿಂತಿದೆ.
ರಜನಿ ಹೇಳುತ್ತಾರೆ "ನೀ ಸತ್ತು ಹೋಗಿದ್ದೆ ಅಂತ ಅನ್ಕೊಂಡಿದ್ದೆ"
ಆಗ "ಹೌದು.. ಸತ್ತು ಹೋಗಿದ್ದೆ.. ಆದರೆ ನೀವ್ ಸಿಗುವವರೆಗೂ" ಪುಟ್ಟ ಮಾತು.. ಆದರೇ ನನಗರಿವಿಲ್ಲದೆ ಚಪ್ಪಾಳೆ ಹೊಡಿಸಿಬಿಟ್ಟಿತು.

ಧನ್ಸಿಕ.. ಮುದ್ದು ಮುದ್ದಾಗಿ ಕಾಣುತ್ತಾರೆ.. ಆ ಮುದ್ದು ಮೊಗದಲ್ಲಿಯೂ ಕ್ರೌರ್ಯ ಸೂಸೂವ ಕಣ್ಣುಗಳು.. ಹೊಡೆದಾಟದ ದೃಶ್ಯದಲ್ಲಿನ ರಭಸ ಈ ಮುದ್ದು ಮೊಗದ ನಟಿ.. ಇಷ್ಟು ಕ್ರೌರ್ಯ ಸೂಸುತ್ತಾರೆಯೇ ಅನ್ನಿಸುತ್ತದೆ. ಈ ನಟಿಯ ಸಂಪತ್ತು.. ಹೊಳೆಯುವ ಕಣ್ಣುಗಳು..ರಜನಿ ಮತ್ತು ಈಕೆಯ ನಡುವಿನ ದೃಶ್ಯಗಳನ್ನು ಕಟ್ಟಿ ಕೊಟ್ಟಿರುವ ರೀತಿ ಸೂಪರ್ ಸೂಪರ್.

ಉಳಿದ ಸಹಕಲಾವಿದರು ನಿಜಕ್ಕೂ ಭಾಗ್ಯವಂತರು..ಇಂತಹ ನಟನ ಜೊತೆಯಲ್ಲಿನ ಅಭಿನಯ, ಅವರ ಜೊತೆಯಲ್ಲಿನ ಮಾತುಗಳು, ಅವರ ಜೊತೆ ಕಳೆದ ಕ್ಷಣಗಳು.. ಬೆಲೆಕಟ್ಟಲಾಗದ್ದು.

ಕನ್ನಡ ಹುಡುಗರು ರಜನಿಕಾಂತ್ ಜೊತೆಯಲ್ಲಿ ಕಿಶೋರ್ ಅಬ್ಬರಿಸುತ್ತಾರೆ ಈ ಚಿತ್ರದಲ್ಲಿ.

ಚಿತ್ರದ ಛಾಯಾಗ್ರಹಣ ಅದ್ಭುತವಾಗಿದೆ.. ಎಲ್ಲೆಲ್ಲಿ ಕ್ಯಾಮೇರಾ ಇಟ್ಟಿದ್ದಾರೆ ಸಂಶಯ ಬರುತ್ತದೆ.. ಮೇಲಿನಿಂದ ತೋರುವ ಪಕ್ಷಿನೋಟದ ದೃಶ್ಯಗಳು, ಮಲೇಷಿಯಾದ ಗಗನಚುಂಬಿ ಕಟ್ಟಡಗಳು ಎಲ್ಲವೂ ಸೊಗಸಾಗಿ ಮೂಡಿ ಬಂದಿದೆ. ಸ್ಲೋ ಮೋಶನ್ ದೃಶ್ಯಗಳು ಈ ಚಿತ್ರದ ಹೈಲೈಟ್ ಅದರಲ್ಲೂ ರಜನಿ ಯನ್ನು ತೋರಿಸುವಾಗ ದೃಶ್ಯಗಳು.

ಸಂಗೀತ.. ಇಡೀ ಚಿತ್ರವನ್ನು ರಥದ ಕುದುರೆಯಂತೆ ಎಳೆದೊಯ್ದಿರುವುದು ಹಾಡುಗಳ ಸಂಗೀತ ಮತ್ತು ಹಿನ್ನೆಲೆ ಸಂಗೀತ. ನೇರ್ರುಪ್ಪು ಡಾ ಹಾಡು ಮೈ ಜುಮ್ ಎನ್ನಿಸುವಂತೆ ಇಡೀ ಚಿತ್ರದಲ್ಲಿ ಬರುತ್ತಲೇ ಇರುತ್ತದೆ. ಮತ್ತು ಕಬಾಲಿ ಥೀಮ್ ಮ್ಯೂಸಿಕ್ ಮನಸ್ಸೆಳೆಯುತ್ತದೆ.

ಸಂಕಲನ ಕೂಡ ಹಿತಮಿತವಾಗಿದೆ. ದೃಶ್ಯ ಜೋಡಣೆ ಇಷ್ಟವಾಗುತ್ತದೆ.

ರಜನಿ ಅಂತ ಸೂಪರ್ ಸ್ಟಾರ್ ನನ್ನ ಇಂತಹ ಅದ್ಭುತ ಕತೆಯಲ್ಲಿ ನುಗ್ಗಿಸಿರುವುದು ಮತ್ತು ಅವರನ್ನು ಸರಿಯಾಗಿ ಬಳಕೆ ಮಾಡಿಕೊಂಡಿರುವುದು ಚಿತ್ರದ ನಿರ್ದೇಶಕ ಪಾ ರಂಜಿತ್ ಗೆ ಸೇರುತ್ತದೆ. ಈ ಚಿತ್ರದ ಯಶಸ್ಸಿನ ಸಿಂಹಪಾಲು ರಜನಿ ಜೊತೆಯಲ್ಲಿ ಅವರಿಗೂ ಸೇರುತ್ತದೆ.

ರಜನಿ ಒಂದು ಸಂದರ್ಶನದಲ್ಲಿ ಹೇಳಿದಂತೆ ಇದು ರಜನಿ ಚಿತ್ರವಲ್ಲ.. ರಂಜಿತ್ ಚಿತ್ರ..

ನಿಜಕ್ಕೂ ಹೌದು.. ರಜನಿಕಾಂತ್ ಅದ್ಭುತ ನಟನಾಗಿ ಮತ್ತೆ ತೆರೆಗೆ ಅಪ್ಪಳಿಸಿರುವ ಚಿತ್ರ ಇದು..

*********
ರಜನಿ(ಶ್ರೀ)ಕಾಂತ್ ಬಗ್ಗೆ ಕೆಲವು ವಿಚಾರಗಳು 
೧) ರಜನಿ ಎಂದಾಗ ವಿಚಿತ್ರವಾದ ಸ್ಟೈಲ್, ಸಿಗರೇಟ್ ಬಾಯಿಗೆ ಎಸೆದುಕೊಳ್ಳುವುದು, ಕನ್ನಡಕ ವಿಚಿತ್ರವಾಗಿ ಹಾಕಿಕೊಳ್ಳುವುದು, ಹೊಡೆದಾಟ, ಕೇಶ ವಿನ್ಯಾಸ.. ಕೋಟನ್ನು ಆಚೆ ಈಚೆ ಎಳೆದುಕೊಳ್ಳುವುದು, ನಾಣ್ಯವನ್ನು ವಿಚಿತ್ರವಾಗಿ ಎಸೆಯುವುದು ಹೀಗೆ.. ಒಬ್ಬ ಯಾವುದನ್ನು ಊಹಿಸಿಕೊಳ್ಳುವುದಿಲ್ಲವೋ ಆ ಸ್ಟೈಲ್ ರಜನಿ ಮಾಡುತ್ತಿದ್ದರು.. ಅದೆಲ್ಲಾ ನನಗೆ ತಮಾಷೆಯಾಗಿ ಕಾಣುತ್ತಿತ್ತು.. ಯಾಕೋ ರಜನಿ ಚಿತ್ರ ಅಂದರೆ.. ಮನೆಯಲ್ಲಿ ಟಿವಿ ಯಲ್ಲಿ ಬಂದರೆ.. ಹೊರಗೆ ಓಡುತ್ತಿದೆ..

ನನ್ನ ಅದ್ಭುತ ಗೆಳೆಯ ವಿಕ್ರಮಾದಿತ್ಯ ಅರಸ್ ಒಮ್ಮೆ ರಜನಿ ಬಗ್ಗೆ ಈ-ಮೈಲ್ ನಲ್ಲಿ ರಸಪ್ರಶ್ನೆ ಮಾಡಿದ್ದರು.. ಐದು ಚಿತ್ರಗಳನ್ನು ಕೊಟ್ಟ ಅದು ಯಾವ ರಜನಿ ಚಿತ್ರದ ಹೆಸರು ಹೇಳಬೇಕಿತ್ತು.. ನಾನು ಯಾವುದೋ ಅಸಾಧ್ಯ ನೆನಪಿನ ಶಕ್ತಿಯಲ್ಲಿ ನಾಲ್ಕು ಪ್ರಶ್ನೆಗಳಿಗೆ ಉತ್ತರ ನೀಡಿದ್ದೆ.. ಆದರೆ ಪಾಸಾಗಿರಲಿಲ್ಲ ಆ ರಸಪ್ರಶ್ನೆಯಲ್ಲಿ..

ಆದರೆ ವಿಕ್ರಂ ಶ್ರೀಕಾಂತ್ ನಿಮಗೋಸ್ಕರ.. ಇನ್ನೊಂದು ಅವಕಾಶ ಕೊಡುತ್ತೇನೆ.. ಮತ್ತೆ ಸರಿ ಮಾಡಿ ಅಂದರು.. ಆದರೂ ನಾ ಎಡವಿದ್ದೇ.. ಆದರೆ ಅವರ ಸ್ನೇಹದ ಸಂಕೋಲೆಯಲ್ಲಿ ನನ್ನನ್ನು ಬಂಧಿಸಿ.. ಪಡೆಯಪ್ಪ ಚಿತ್ರವನ್ನು ಕೊಟ್ಟರು... ಈ ಚಿತ್ರವನ್ನು ನೋಡಿ ಎಂದು.. ನಾ ಅವಾಗಲೂ ಹಿಂದೆ ಮುಂದೆ ನೋಡಿದ್ದೇ.. ಕಾರಣ ಯಾಕೋ ಮನಸ್ಸಿಗೆ ರಜನಿ ನುಗ್ಗಿರಲಿಲ್ಲ..

ಅಂದು ಏನಾಗಿತ್ತೋ ಏನೋ.. ನೋಡಿಯೇ ಬಿಡುವ.. ಎಂದು ನೋಡಿದೆ.. ೨೦೧೦ ರ ಡಿಸೆಂಬರ್ ನಲ್ಲಿ ಅದಾದ ಮೇಲೆ ಈ ಆರು ವರ್ಷಗಳಲ್ಲಿ ೧೦೦ಕ್ಕೂ ಹೆಚ್ಚು ಬಾರಿ ನೋಡಿದ್ದೇನೆ.. ಮತ್ತು ರಜನಿ ಅಭಿಮಾನಿಯಾಗಿದ್ದೀನಿ.

೨) ನನ್ನ ಚಾರಣದ ಗೆಳೆಯ ಯಶದೀಪ್ ಒಮ್ಮೆ ಕೇಳಿದ್ದ.. ಶ್ರೀಕಾಂತ್.. ನಿನಗೂ ರಜನೀಕಾಂತ್ ಗೂ ಏನಾದರೂ ಸಂಬಂಧ ಇದೆಯಾ..
ನಾ ಹೇಳಿದ್ದೆ.. ರಜನಿಕಾಂತ್ ಹೆಸರಿನಲ್ಲಿ ರಜನಿ ತೆಗೆದು ನಾ ಅಲ್ಲಿಗೆ ನುಗ್ಗಿದ್ದೇನೆ.. ಅಂದಿನಿಂದ ಅವನು ನನ್ನನು ರಜನಿಕಾಂತ್ ಅಂತಾನೆ ಕರೀತಿದ್ದ..  ಅಲೆಮಾರಿಗಳು ನನ್ನ ಚಾರಣದ ಗುಂಪು ಅದರಲ್ಲಿ ಅವನು ಯಾವಾಗಲೂ ಹೇಳುತ್ತಿದ್ದದು.. ನಮ್ಮ ಶ್ರೀ(ರಜನಿ)ಕಾಂತ್ ಇದ್ದ ಮೇಲೆ ನಮಗೇಕೆ ಭಯ.. ಹಹಹಹಃ

೩) ನನ್ನ ಅಕ್ಕನಿಗೆ ತಮಿಳ್ ಸಿನೆಮಾಗಳ ಹುಚ್ಚು.. ಅದರಲ್ಲೂ ರಜನಿ ಚಿತ್ರಗಳು..ನಮ್ಮ ಸಂಬಂಧಿ ಹಾಸನದ ಬಳಿಯ ಕಿತ್ತಾನೆ ಹಳ್ಳಿಯ ಸುರೇಶ್ ಶಿವಮೊಗ್ಗದಲ್ಲಿದ್ದಾಗ.. ಸಿಂಗಪೂರ್ ನಲ್ಲಿ ರಾಜಾಕುಳ್ಳ ಚಿತ್ರ ತೋರಿಸು ಎಂದರೆ.. ಅದು ಬೇಡ "ಪ್ರಿಯ" ಚಿತ್ರ ನೋಡು ಅದನ್ನು ಸಿಂಗಪೂರ್ ನಲ್ಲಿ ಚಿತ್ರಿಸಿದ್ದಾರೆ ಎಂದು ಅದಕ್ಕೆ ಕರೆದುಕೊಂಡು ಹೋಗಿದ್ದರು. ಅಂದಿನಿಂದ ಅಕ್ಕ ರಜನಿ ಅಭಿಮಾನಿ. ಈ ಚಿತ್ರ ನೋಡಿದ ಮೇಲೆ.. ರಜನಿ ಇನ್ನಷ್ಟು ಫೈಟ್, ಡಾನ್ಸ್, ಸ್ಟೈಲ್ ಮಾಡಬೇಕಿತ್ತು.... ಆಗ ನಾ ಹೇಳಿದೆ.. ಇದು ರಜನಿ ನಟನಾಗಿ ಅಭಿನಯಿಸಿರುವ ಚಿತ್ರ :-)

೪) ನನಗೆ ದೇವರೇ ಕೊಟ್ಟ ಅದ್ಭುತ ಜೀವ "DFR" ಅವರು ಹೇಳಿದ್ದು.. ಶ್ರೀ ರಜನಿ ಸರ್ ಚಿತ್ರ ನೋಡಬೇಕೆಂದರೆ ಅವರ ಅದ್ಭುತ  ಅಭಿಮಾನಿಯಾಗಿರಬೇಕು.. ನಿಜವಾದ ಮಾತು ಇದು.
************
ಚಿತ್ರ ನೋಡಿ ಹೊರಬಂದೆ.. ಹೊರಗೆ ತಣ್ಣನೆ ಮಳೆ ಬಂದು.. ವಾತಾವರಣ ತಂಪಾಗಿತ್ತು.. ಕಣ್ಣು ಅತ್ತಿತ್ತ ಆಡಿಸಿದೆ.. ಮತ್ತೆ ಗಡ್ಡ ನೀವಿಕೊಳ್ಳುತ್ತಾ ರಜನಿ ಅಲ್ಲಿಯೇ ಇದ್ದರು.. 

"ತಲೈವಾ.. ನಮಸ್ಕಾರ"  
"ಶ್ರೀ.. ಹೇಗಿದೆ ಚಿತ್ರ"
"ನಿಮ್ಮ ಒಳಗಿನ ನಟನೆಯ ಹಸಿವನ್ನು ತೀರಿಸಿಕೊಂಡ ಚಿತ್ರ ಇದು"
"ಮಗಳ್ಚಿ (ನಿನ್ನ ಭೇಟಿ ಮಾಡಿದ್ದು ಖುಷಿಯಾಯಿತು).. " ಎಂದು ಹೇಳಿದರು..
"ರಜನಿ ಸರ್.. ನಿಮ್ಮ ಪಡೆಯಪ್ಪ ಸ್ಟೈಲ್ ನಲ್ಲಿ .. ಶಾರ್ಪ್ ಸಲ್ಯೂಟ್ ನೋಡಬೇಕಿನಿಸಿದೆ"
"ಅಷ್ಟೇ ತಾನೇ ಶ್ರೀ ... ನೋಡು ಇಲ್ಲಿ"


ಈ ಬರಹ ಮನಸ್ಸಲ್ಲಿಯೇ ಹೆಣೆದುಕೊಂಡು ಅವರಿಗೆ ಹಾಗೆ ಹೇಳಿದೆ.. ಆಗ ಅವರ ಪ್ರತಿಕ್ರಿಯೆ.. ಕೆಳಗಿನಂತಿತ್ತು..


***********

ಕಿರ್ ಟೀವ್ ಪೀಮ್ ಪೀಮ್ ಸದ್ದಾಯಿತು..

ಒಯೆ ರಸ್ತೆಯಲ್ಲಿ ವಾಲ್ ಪೋಸ್ಟರ್ ನೋಡ್ತಾ ಕನಸು ಕಾಣ್ತಾ ಇದ್ದೀಯ.. ಆ ಕಡೆ ಹೋಗಪ್ಪ ಎಂದಾಗ.. ಹಾಗೆ ಕಣ್ಣು ಅರಳಿಸಿದೆ.. ಕಬಾಲಿ ವಾಲ್ ಪೋಸ್ಟರ್ ಒಳಗಿಂದ  "ಭಯಮ.. " ಎಂದು ರಜನಿ ಹೇಳಿದ ಹಾಗೆ ಭಾಸವಾಯಿತು..

ನಾನು ಒಮ್ಮೆ ಅವರ ರೀತಿಯಲ್ಲಿಯೇ ಕಣ್ಣು ಹೊಡೆದು.. "ಮಗಳ್ಚಿ" ಎಂದೇ... 

Sunday, June 5, 2016

ಪುಟ್ಟಣ್ಣ ಕಣಗಾಲ್ - ಇಲ್ಲದ ೩೧ ಸಂವತ್ಸರಗಳು - 2016

ಮಾಂತ್ರಿಕತೆ ಎಂದರೆ ಏನು.. ಮೈದಾಸ ಟಚ್ ಅಂದರೆ ಏನು.. ಹೀಗೆಲ್ಲಾ ಶಾಲಾ ದಿನಗಳಲ್ಲಿ ಅದು ಬಾಲ್ಯದ ದಿನಗಳಲ್ಲಿ ಮನದಲ್ಲಿ ಏಳುತ್ತಿದ್ದ ಪ್ರಶ್ನೆಗಳು. 

ಉತ್ತರ ಅಸ್ಪಷ್ಟವಾಗಿ ಅಲ್ಲಿ ಇಲ್ಲಿ ಸಿಕ್ಕಿದ್ದರೂ, ಒಂದು ಪರಿಪೂರ್ಣ ಉತ್ತರ ಸಿಗುವುದಕ್ಕೆ ಕಷ್ಟವಾಗಿತ್ತು. ಕನ್ನಡ ಹಳೆಯ ಚಿತ್ರಗಳು ನೋಡಿದಾಗ, ಟಂಗ್ ಅಂತಾ ಮಾಯಾ ಆಗೋದು, ಮತ್ತೆ ದಿಡೀರ್ ಪ್ರತ್ಯಕ್ಷ ಆಗೋದು ಇವೆನ್ನೆಲ್ಲಾ ಮ್ಯಾಜಿಕ್ ಅಥವಾ ಮಾಂತ್ರಿಕತೆ ಎಂದು ತಿಳಿದಿದ್ದ ದಿನಗಳು. ಹಾಗೆಯೇ ಒಂದು ಮಂತ್ರ ದಂಡದಲ್ಲಿ ಮುಟ್ಟಿದ ತಕ್ಷಣ ಮನುಷ್ಯ ಪಾರಿವಾಳ, ಕಲ್ಲು ಇಲ್ಲವೇ ಬೂದಿಯಾಗೋದು ಅಥವಾ ಮುಟ್ಟಿದ್ದು ಚಿನ್ನವಾಗೋದು ಇವೆನ್ನೆಲ್ಲ ನೋಡಿ ನೋಡಿ ಇದೆ ಮೈದಾಸ್ ಟಚ್ ಇರಬಹುದು ಎಂದುಕೊಂಡಿದ್ದು ಉಂಟು. 

ಆದರೆ ಕಾಲವನ್ನು ತಡೆದೋರು ಯಾರೂ ಇಲ್ಲಾ ಹಾಗೆಯೇ ಬರುವಂಥಹ ಜ್ಞಾನವನ್ನು ಅಡ್ಡಗಟ್ಟಿದವರು ಯಾರೂ ಇಲ್ಲ ಅಲ್ಲವೇ.. 

ಚಲನ ಚಿತ್ರ ನೋಡಿ ನೋಡಿ, ಅದರೊಳಗಿನ ಸಂದೇಶಗಳನ್ನೂ ನೀತಿ ಪಾಠಗಳನ್ನೂ ಕಲಿಯುತ್ತಾ, ಪುಸ್ತಕ ಕೊಡುತ್ತಿದ್ದ ಜ್ಞಾನಕ್ಕೆ ಸೆಡ್ಡು ಹೊಡೆದು ಈ ದೃಶ್ಯ ಮಾಧ್ಯಮ ನೀಡುತ್ತಿದ್ದ ಜ್ಞಾನಕ್ಕೆ ಶರಣಾದ  ಆ ಪರ್ವಕಾಲದಲ್ಲಿ ಸಿಕ್ಕಿದ್ದು ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಮತ್ತು ಅನೇಕ ಉತ್ತಮ ಕನ್ನಡ ಚಿತ್ರಗಳು. 

ಇಂದು ನಾ ಯೋಚಿಸುವ ಪರಿ, ಜೀವನವನ್ನು ನೋಡುವ ಪರಿ ಏನಾದರೂ ಅರ್ಥ ಕೊಡಬೇಕೆಂದರೆ ಅಥವಾ ಅದನ್ನು ವಿವರಿಸಬೇಕೆಂದರೆ ಅದಕ್ಕೆ ಮೂಲ ಪ್ರೇರಕಗಳು ಚಲನಚಿತ್ರಗಳು. 

ಹಾಗಾಗಿಯೇ ಈ ಬ್ಲಾಗ್ ಮತ್ತು ಬ್ಲಾಗ್ ನಲ್ಲಿ ಮೂಡುವ ಲೇಖನಗಳು. 

ಪುಟ್ಟಣ್ಣ ಕಣಗಾಲ್ ಈ ಚಿತ್ರ ಜಗತ್ತನ್ನು ಅಗಲಿ ೩೧ ಸಂವತ್ಸರಗಳು ಕಳೆದವು.  ಆದರೆ ಇಂದಿಗೂ ನಿರ್ದೇಶಕ ಎನ್ನುವ ಮಾತು ಈ ಭಾರತೀಯ ಚಿತ್ರರಂಗದಲ್ಲಿ ಬಂದಾಗ, ಕರುನಾಡಿನ ಈ ನಿರ್ದೇಶಕನ ಹೆಸರು ಆ ಪಟ್ಟಿಯಲ್ಲಿ ಇದ್ದೆ ಇರುತ್ತದೆ. ಅಂಥಹ ಅದ್ಭುತ ನಿರ್ದೇಶಕ, ತಾಂತ್ರಿಕ ಹಾಗೂ ತನ್ನ ಮನದಲ್ಲಿ ಇದ್ದಂತೆ ಚಿತ್ರ ಬರಬೇಕು ಎಂದು ಯಾವ ಮುಲಾಜಿಗೂ ಜಗ್ಗದೆ, ಚಿತ್ರಗಳನ್ನು ಕೊಡುತ್ತಿದ್ದ ಪ್ರತಿಭಾವಂತ. 

ಅವರ ನಿರ್ದೇಶನದಲ್ಲಿ ಮೂಡಿ ಬಂದ ಅಷ್ಟೂ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನ, ಒಂದು ಚಿತ್ರದ ವಿಷಯ ಇನ್ನೊಂದರಲ್ಲಿ ಬರುತ್ತಿರಲಿಲ್ಲ. ಹಾಗೆಯೇ ಕರುನಾಡಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಿಸಿ, ಒಂದು ರೀತಿಯಲ್ಲಿ ಪ್ರವಾಸ ಉದ್ಯಮಕ್ಕೂ ನೆರವಾಗಿದ್ದು ಅವರ ಚಿತ್ರಗಳು ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ. 

ಈ ಕೆಳಗಿನ ಎಲ್ಲಾ ಚಿತ್ರಗಳನ್ನು ನೋಡಿ, ನನಗೆ ಈ ಚಿತ್ರಗಳು ತಾಕಿದ ಬಗೆ ಒಂದಷ್ಟು ಅಕ್ಷರಗಳಲ್ಲಿ ನನ್ನ ಅಭಿಪ್ರಾಯ ಬರೆದಿದ್ದೇನೆ. ಇದು ಕಾಣದ ಗುರುಗಳ ಸ್ಥಾನದಲ್ಲಿ ಕೂತಿರುವ ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಶ್ರದ್ಧಾಂಜಲಿ ಮತ್ತು ಗೌರವ ಪೂರ್ವಕ ನುಡಿ ನಮನಗಳು. 
ಸಾವಿರ ಮೆಟ್ಟಿಲು (2006) 

ಪೂಜ್ಯ ಗುರುಗಳೇ ನಿಮ್ಮ ಚಿತ್ರಗಳು ಸದಾ ನಮ್ಮ ಮನದಲ್ಲಿ ಜೀವಂತ. ನೀವು ಕರುನಾಡಿಗೆ ಮತ್ತು ಚಿತ್ರ ಜಗತ್ತಿಗೆ ಇತ್ತ ಅಷ್ಟೂ ಚಿತ್ರಗಳು ಮಾಣಿಕ್ಯವೇ. ಪ್ರತಿ ಚಿತ್ರವೂ ಕಲಿಕೆ ಒಂದು ವಿಶ್ವವಿದ್ಯಾಲಯದ ಪಾಠಗಳಿದ್ದಂತೆ.  ನಿಮ್ಮ ಚಿತ್ರಗಳಿಂದ ಕಲಿತಿದ್ದು ಕಲಿಯಬೇಕಿದ್ದು ಬೇಕಾದಷ್ಟು ಇವೆ.

ನಿಮ್ಮದೇ ಚಿತ್ರಗಳಿಂದ ನಿಮಗೆ ನುಡಿ ನಮನಗಳು.. ಈ ಚಿತ್ರಗಳನ್ನು ನೀಡಿದ ನಿಮಗೆ ಮತ್ತು ನಿಮ್ಮ ಪ್ರತಿಭೆಗೆ ಒಂದು ಸಲಾಂ. 

ಮನಸ್ಸಿನ ಬಣ್ಣ ಮತ್ತು ಅದರ ಅನಾವರಣ - ಗೋಧಿ ಬಣ್ಣ ಸಾಧಾರಣ ಮೈಕಟ್ಟು (2016)

ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್ ಒಂದು ಸಂದರ್ಶನದಲ್ಲಿ ಹೇಳಿದ್ದರು.. "ಒಂದು ಚಿತ್ರ ಹಾಗೆಯೇ ಜನರ ಮನಸ್ಸನ್ನು ಸೆಳೆಯಬೇಕು.. ನಾನು ಒಂದು ಚಿತ್ರವನ್ನು ಮಾಡಿ ಥಿಯೇಟರ್ ಬಾಗಿಲ ಬಳಿ ನಿಲ್ಲುತ್ತೇನೆ.. ಎದೆಉಬ್ಬಿಸಿಕೊಂಡು.. ಇದು ನಾ ಮಾಡಿದ ಚಿತ್ರ.." ಇದು ಒಬ್ಬ ಚಿತ್ರ ತಯಾರಕರಿಗೆ  ಇರಬೇಕಾದ ಆತ್ಮವಿಶ್ವಾಸದ ಮಾತುಗಳು...

ನಾ ಚಿತ್ರ ನೋಡಬೇಕೆಂದರೆ ಅದು ಸಹಜವಾಗಿ ಕುತೂಹಲ ಬೆಳೆಸಬೇಕು.. ನಾ ನೋಡಲೇ ಬೇಕು ಎಂದು ಅನ್ನಿಸುವ ಚಿತ್ರಗಳನ್ನು ಮಾತ್ರ ನಾ ನೋಡುತ್ತೇನೆ.

"ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಎಂಭತ್ತರ ದೂರದರ್ಶನ ಜಮಾನ ಹಾಗೂ ವಿವಿಧ ಭಾರತಿ ಆಕಾಶವಾಣಿ ಕೇಂದ್ರದ ವಾಣಿಜ್ಯ  ವಿಭಾಗ..  ಈ ಎರಡು ಅದ್ಭುತ ಮಾಧ್ಯಮಗಳಲ್ಲಿ ಪ್ರತಿ ದಿನವೂ ಕೇಳುತ್ತಿದ್ದ ಮಾತುಗಳು... ಸಹಜವಾಗಿಯೇ ಚಿತ್ರದ ಹೆಸರು, ಮತ್ತು ಚಿತ್ರದ ಮುಖ್ಯ ಪಾತ್ರಧಾರಿ ಇಬ್ಬರೂ ಮನಸ್ಸನ್ನು ಸೆಳೆದರು ಈ ಚಿತ್ರವನ್ನು ನೋಡಲಿಕ್ಕೆ.
ಚಿತ್ರ ಕೃಪೆ - ಗೂಗಲ್ 

ನನ್ನ ಅನಿಸಿಕೆ ಪ್ರಪಂಚದಲ್ಲಿ ಈ ನಟನನ್ನು ಅನುಕರಿಸಲು ಸಾಧ್ಯವೇ ಇಲ್ಲ ಅಥವಾ ಅನುಕರಿಸಿದವರನ್ನು ನೋಡಿಯೇ ಇಲ್ಲ. ಅನಂತ್ ನಾಗ್ ಅಂಥಹ ವರ ಪಡೆದ ನಟ.

ಚಿತ್ರ ಶುರುವಾಯಿತು.. ಬಿಂದುವಾಗಿ ಶುರುವಾದ ಅವರ ಪಾತ್ರ, ನೀರಿನಲ್ಲಿ ಒಂದು ಸಣ್ಣ ಕಲ್ಲು ಉಂಗುರಗಳನ್ನು ಸೃಷ್ಟಿಸಿ, ಅದು ಹಿಗ್ಗುತ್ತಾ ಹಿಗ್ಗುತ್ತಾ ಹೋಗುವಂತೆ, ಇಡಿ ಚಿತ್ರದ ತುಂಬಾ ಆವರಿಸಿಕೊಳ್ಳುತ್ತಾರೆ.  ಅವರ ಅಭಿನಯ ನೀರಿನಂತೆ, ಯಾವುದೇ ಪಾತ್ರೆಗೆ ಹೋದರು ಅದಕ್ಕೆ ಒಗ್ಗಿಕೊಳ್ಳುವಂತೆ, ಈ ಪಾತ್ರ ಅವರಿಗಾಗಿಯೇ ಮಾಡಿದ್ದು ಅನ್ನಿಸಿಬಿಡುತ್ತದೆ ಮೊದಲ ದೃಶ್ಯದಲ್ಲಿಯೇ.

ಮುಖದಲ್ಲಿ ಅಭಿನಯ, ಆಂಗೀಕ ಅಭಿನಯ, ಆ ಮುಗ್ಧತೆ, ಕಣ್ಣುಗಳಲ್ಲೇ ಕಾಡುವ ಸಂಭಾಷಣೆ, ಮಾತುಗಳು ಕೆಲವೇ ಇದ್ದರೂ ಅದನ್ನು ಹೇಳುವಾಗ, ಆ ರೋಗದ ಲಕ್ಷಣ ಇರುವ ವ್ಯಕ್ತಿ ಯಾವ ರೀತಿಯಲ್ಲಿ ಮಾತಾಡಬಹುದೋ ಅದೇ ರೀತಿಯಲ್ಲಿನ ಸಂಭಾಷಣಾ ವೈಖರಿ ಇಷ್ಟವಾಗುತ್ತದೆ, ತೊದಲು ತೊದಲು ಮಾತಾಡುವಾಗ ಬಾಯಿಯನ್ನು ದಪ್ಪಗೆ ಮಾತಾಡಿಕೊಂಡು ಮಾತಾಡುವ ಪ್ರಯತ್ನ. ಅದ್ಭುತ

ಇಡಿ ಚಿತ್ರ ಶಿವ ಪಾತ್ರಧಾರಿ ಹೇಳುವ ಒಂದು ಸಂಭಾಷಣೆಯ ಮೇಲೆ ನಿಂತಿದೆ ಅನ್ನಿಸಿತು
"ಅಣ್ಣನಿಗೆ ಮರೆವಿನ ರೋಗ ಬಂದಿದೆ.. ಆದರೆ ಮರೆತು ಹೋಗಿದ್ದು ನಾನು"

ಕರುನಾಡಿನ ಕೆಲವು ಪ್ರದೇಶಗಳಲ್ಲಿ ಅಪ್ಪನನ್ನು "ಅಣ್ಣ" ಎಂದು ಕರೆಯುವುದು. ಈ ಚಿತ್ರ ಮೊದಲು ನನಗೆ ತಾಕಿದ್ದು ಅಲ್ಲಿಂದ.. ಯಾಕೆಂದರೆ ನಾನು ಕೂಡ ಅಪ್ಪನನ್ನು ಅಣ್ಣಾ ಎಂದೇ ಕರೆಯುವುದು.

ಅನಂತ್ ನಾಗ್ ಅವರು ವೆಂಕೋಬ ರಾವ್ ಆಗಿಬಿಟ್ಟಿದ್ದಾರೆ.

"ಎಲ್ಲರ ಮನಸ್ಸಲ್ಲಿಯೂ ಎರಡು ಜಾತಿಯ ನಾಯಿಗಳು ಇರುತ್ತವೆ, ಸುಳ್ಳು, ದ್ವೇಷ, ಮೋಸ ಎನ್ನುವ ಕರಿ ನಾಯಿ ಮತ್ತು ಸತ್ಯ, ಶಾಂತಿ, ನೆಮ್ಮದಿ  ಎನ್ನುವ ಬಿಳಿ ನಾಯಿ. ಎರಡಕ್ಕೂ ಯಾವಾಗಲೂ ಜಗಳ ನಡೆಯುತ್ತಲೇ ಇರುತ್ತದೆ.. ಯಾವುದಕ್ಕೆ ಹೆಚ್ಚು ಬಿಸ್ಕತ್ತು ಹಾಕುತ್ತೇವೆಯೋ ಅದು ಗೆಲ್ಲುತ್ತದೆ"

ಈ ಸಂಭಾಷಣೆ ಹೇಳುವಾಗ ಅವರ ಮನಸ್ಸಿನ ಶಾಂತತೆ, ಮುಗ್ಧತೆ ಮತ್ತು ಮುಖಾಭಿನಯ ವಾಹ್ ಎನ್ನಿಸಿತು.

ಮನುಜ ಪ್ರಾಣಿಗಳಿಗಿಂತ ಭಿನ್ನ ಏಕೆಂದರೆ .. ಅವನು ಕಿವಿಯ ಮೂಲಕ ಮೆದುಳಿಗೆ ಹೋಗಿ ಅಲ್ಲಿಂದ ಹೃದಯದಲ್ಲಿ
ತೂರಿಬರುವ ಪದಗಳೆಂಬ ಶಬ್ಧಗಳನ್ನು ಅಲ್ಲಿಯೇ ಮಂಥನ ನಡೆಸಿ ನಂತರ ಒಂದು ನಿರ್ಧಾರಕ್ಕೆ ಬರುತ್ತಾನೆ.

ಈ ಸಂಭಾಷಣೆಗೆ ನನಗೆ ಅರಿವಿಲ್ಲದೆ ಜೋರಾಗಿ ಚಪ್ಪಾಳೆ ತಟ್ಟಿ ಬಿಟ್ಟೆ.. ಪ್ರಾಯಶಃ ಚಲನಚಿತ್ರ ಒಂದು ರೀಲ್ ಮಾಧ್ಯಮ, ಅಲ್ಲಿ ತೋರಿಸಿವುದು ಹುಸಿ ಎಂದು ಅರಿವಿದ್ದರೂ, ಆ ಪಾತ್ರದೊಳಗೆ ನಮ್ಮನ್ನು ಕರೆದೊಯ್ಯುವ ಮಾತುಗಳು, ಅಭಿನಯಗಳು ಈಚಿನ ಚಿತ್ರಗಳಲ್ಲಿ ಬಲು ದುರ್ಲಭ... ಅಂಥಹ ಅವಕಾಶ ಸಿಕ್ಕಿತು.

ಇಡಿ ಚಿತ್ರದೊಳಗೆ ಅನಂತನಾಗ್ ಸರ್ ಜೊತೆಯಲ್ಲಿ ನಾನೂ ನಿಂತಿದ್ದೆನೇನೋ ಅನ್ನುವಷ್ಟು ಮನಸ್ಸಿನ ಆಳಕ್ಕೆ ಇಳಿಯಿತು ಈ ಚಿತ್ರ.

ತನ್ನ ಮತ್ತು ತನ್ನ ಹೆಂಡತಿಯ ಪ್ರೀತಿಯ ಘಟನೆಯನ್ನು ಹೇಳುವಾಗ ಅವರ ಮುಖದ ಭಾವಗಳು ಮುಗ್ಧತೆ, ಪ್ರೀತಿ, ಸಂತೋಷ, ಕೋಪ, ಮತ್ತು ಗೆದ್ದೇ ಎಂಬ ಹೆಮ್ಮೆ ಎಲ್ಲವನ್ನು ಆ ಎರಡು ಮೂರು ನಿಮಿಷಗಳ ಸಂಭಾಷಣೆಯಲ್ಲಿ ವಿವರಿಸುವಾಗ ಥೀಯೇಟರ್ ನಲ್ಲಿ ಶಿಳ್ಳೆಗಳ ಮೊರೆತ. ಸೂಪರ್ ಸೂಪರ್.

ಅನಂತ್ ನಾಗ್ ಸರ್ ಅವರ ಜಾದೂವಿನನಂಥಹ ಅಭಿನಯದ ಜೊತೆಯಲ್ಲಿ ಇನ್ನೊಬ್ಬ ಪಾತ್ರಧಾರಿ ಗಮನ ಸೆಳೆಯುತ್ತಾರೆ.
ಶ್ರುತಿ ಹರಿಹರನ್ "ಸಹನಾ" ಪಾತ್ರದಲ್ಲಿ. ಮುದ್ದು ಮುಖ, ನೀಳ ನಾಸಿಕ, ಪುಟಾಣಿ ಬಿಂದಿ, ಹೊಳೆಯುವ ಕಣ್ಣುಗಳು.. ಮಾತಿನಲ್ಲಿನ ನಿಖರತೆ.. ಇದರ ಜೊತೆಯಲ್ಲಿ "ವೆಂಕೋಬ ರಾವ್" ಪಾತ್ರದ ಬಗ್ಗೆ ಅವರು ತೋರುವ ಕಾಳಜಿ.. ಕೋಪಗೊಂಡರೂ, ಶಾಂತತೆಯಿಂದ ಉತ್ತರ ಕೊಡುವ ಶೈಲಿ, ಅರೆ ನೆರೆ ಮನೆ ಹುಡುಗಿ ಎನ್ನುವ ಮಾತು ಇಂಥಹ ಪಾತ್ರಗಳಿಂದಲೇ ಹುಟ್ಟಿತೋ ಏನೋ ಅನಿಸುತ್ತದೆ. ಸರಳ ಅಭಿನಯ ಈ ಹುಡುಗಿಯದು.

ಚಿತ್ರ ಕೃಪೆ - ಗೂಗಲ್ 

ಹಾಲಿನ ಕೆನೆ ಪದರ ತುಸು ಗಟ್ಟಿ, ಮತ್ತು ತುಸು ಒರಟು ಎನಿಸಿದರೂ, ಆ ಕೆನೆಯನ್ನು ಕೊಂಚ ತಳ್ಳಿದರೆ ಸ್ವಾಧಿಷ್ಟ ಹಾಲು ಸಿಗುತ್ತದೆ. ಅಚ್ಯುತ್ ಕುಮಾರ್ ಅವರ ಪಾತ್ರವೂ ಹಾಗೆ. ತೆರೆಯ ಬಂದ ಕೂಡಲೇ ಮ್ಯಾಜಿಕ್ ಶುರುವಾಗುತ್ತದೆ. ಭರ ಭರ ಮಾತು, ತಡಬಡಾಯಿಸುತ್ತಾ, ನಗುವ, ಕೋಪ ತೋರಿಸುವ, ಪ್ರೀತಿ ತೋರಿಸುವ ಪಾತ್ರದಲ್ಲಿ ಎರಕ ಹುಯ್ದಂತೆ ನಿಲ್ಲುತ್ತಾರೆ.
"ಸಿಗರೆಟ್ ಎರಡು.. ಬೇಡ ಅಂದ್ರೆ ಬಿಡಿ ಸರ್" ಎಂದು ತಣ್ಣಗೆ ಹೇಳುವ ಮಾತು ಅವರ ಅಭಿನಯದ ಶಕ್ತಿಯನ್ನು ಸಾರಿ ಸಾರಿ ಹೇಳುತ್ತದೆ.
ಚಿತ್ರ ಕೃಪೆ - ಗೂಗಲ್ 

ಅರುಣ ಮೇಡಂ.. ಮಧ್ಯಮ ವರ್ಗದ ಗೃಹಿಣಿಯ ತಳಮಳವನ್ನು ಅನಾಮತ್ತಾಗಿ ತಂದಿಡುತ್ತಾರೆ. "ಮೊದಲು ಅಲ್ಲಿ ಹೋಗಿ ಹೇಳಿ, ಅಯ್ಯೋ ರಾಮ ರಾಮ" ಎನ್ನುವಾಗ ಅಯ್ಯೋ ಅನಿಸುತ್ತದೆ. ಸಹಜವಾಗಿ ಮಾತಾಡುತ್ತಲೇ ಹೃದಯದ ಭಾವವನ್ನು ಸೂಸುವ ಅಭಿನಯ ಇಷ್ಟವಾಗುತ್ತದೆ.

ಗುಪ್ತಗಾಮಿನಿಯಂತೆ ಹರಿದಿರುವ ಪಾತ್ರ ರಕ್ಷಿತ್ ಶೆಟ್ಟಿ ಅವರದು. ಸುಲಭವಾಗಿ ಅಭಿನಯ ನೀಡುತ್ತಾ, ತನ್ನ ಅಣ್ಣ (ತಂದೆಯ) ಬಗ್ಗೆ ಹೇಳುವಾಗ ಮೊಗದಲ್ಲಿ ತೋರುವ ಭಾವನೆ ಆಪ್ತವೆನಿಸುತ್ತದೆ. "ರೋಗಬಂದಿದ್ದು ಅಣ್ಣನಿಗೆ ಆದರೆ ನಾನೇ ಮರೆತು ಬಿಟ್ಟೆ" ಈ ಮಾತುಗಳು ಅವರು ಬರಿ ಬಾಯಿಂದ ಹೇಳುವುದಿಲ್ಲ ಹೃದಯದ ಬಡಿತ ಆ  ಮಾತುಗಳನ್ನು ಹೊರ ಹಾಕುತ್ತದೆ. ಕೋಪಗೊಳ್ಳುವುದು, ಶಾಂತತೆ, ಮತ್ತೆ ಸಿಡಿಮಿಡಿಗೊಳ್ಳುವುದು, ನಿಧಾನಕ್ಕೆ ಮರಳಿ ಬರುವುದು.. ಮತ್ತು " ಅಣ್ಣ" ಎನ್ನುವಾಗ ಅವರ ಧ್ವನಿ ಇಷ್ಟವಾಗುತ್ತದೆ (ಈಚಿನ ಚಿತ್ರಗಳಲ್ಲಿ ಅಪ್ಪನಿಗೆ "ಅಣ್ಣ" ಎನ್ನುವ ಮಾತೆ ಬಂದಿಲ್ಲ.. .) ಬಾಲ್ಯದ ನೆನಪನ್ನು ಹಂಚಿಕೊಳ್ಳುವಾಗ ಅವರ ಮುಗ್ಧತೆ ಪೂರ್ಣ ಅಂಕಗಳು ಸಿಗುತ್ತವೆ.
ಚಿತ್ರ ಕೃಪೆ - ಗೂಗಲ್ 
ಇನ್ನೂ ಪುಟ್ಟ ಪುಟ್ಟ ಪಾತ್ರಗಳಲ್ಲಿ ಬರುವ ತ್ರಿವೇಣಿ, ದತ್ತಾತ್ರೇಯ, ಮತ್ತು ಇಬ್ಬರು ಅಭ್ಯಾಗತರು ಒಬ್ಬರು ರಂಗಣ್ಣನ ಪಾತ್ರಧಾರಿ ವಸಿಷ್ಠ - ಎಂಥಹ ಅದ್ಭುತ ಧ್ವನಿ,  ಕಂಡರೂ ಕಾಣದ ಪುಟ್ಟ ನಗೆ, ಕಣ್ಣಲ್ಲಿ ಕ್ರೌರ್ಯ ಸೂಸುತ್ತಲೇ, ತುಸು ತುಸುವೇ ಮಾತಾಡುವ ಪಾತ್ರ..  ಸೂಪರ್ ಸೂಪರ್.. , ಇನ್ನೊಬ್ಬ ತುಂಟತನದಿಂದಲೇ ಇಷ್ಟವಾಗುವ ಮಂಜಣ್ಣ ಪಾತ್ರ ಎಲ್ಲರೂ ಇಷ್ಟವಾಗುತ್ತಾರೆ.

"ಸಚಿನ್ ಆಟ ನಿಲ್ಲಿಸಿದ ಮೇಲೆ ನೀವಿಬ್ಬರೂ ಹೇಗೆ ಇರುತ್ತೀರೋ, ಏನು ಮಾತಾಡುತ್ತೀರೋ" ಒಂದು ಮನೆಯ ವಾತಾವರಣ ಹೇಗೆ ಇರುತ್ತದೆ.. ಮನಸ್ಸುಗಳ ನಡುವೆ ಹೇಗೆ ಸೇತುವೆ ಬದಲು ಗೋಡೆ ಏಳುತ್ತದೆ ಎನ್ನುವುದನ್ನು ತೀಕ್ಷ್ಣವಾಗಿ ಹೇಳುತ್ತದೆ ದೃಶ್ಯ ಮತ್ತು ಮಾತು.

ಇದು ನಿಜವಾಗಿಯೂ ಒಬ್ಬ ಹಿರಿಯ ನಾಗರೀಕನ ಬಗೆಗಿನ ಚಿತ್ರ ಎಂದು ಮೇಲ್ನೋಟಕ್ಕೆ ಅನಿಸಿದರೂ, ಪ್ರತಿಯೊಬ್ಬರ ಅಂತರಂಗವನ್ನು ಬಡಿದು, ಬಡಿದು ಹಳೆಯ ನೆನಪುಗಳನ್ನು,   ಹಣ್ಣೆಲೆಗಳನ್ನು ತಾವಾಗಿಯೇ ಉದುರಿ ಹೋಗುವ ತನಕ ಜತನ ಕಾಪಾಡಿಕೊಳ್ಳಬೇಕು ಎನ್ನುತ್ತಲೇ.. ಆಧುನಿಕ ಯುಗದಲ್ಲಿಯೂ, ಈ ಯಂತ್ರ ಯುಗದಲ್ಲಿಯೂ ಕೂಡ ಮಾನವನ ಭಾವ ಸೆಲೆ ಇಂಗುವುದಿಲ್ಲ, ಮತ್ತು ಇಂಗುವುದಕ್ಕೆ ಸಾಧ್ಯವೇ ಇಲ್ಲ.. ಅದಕ್ಕೆ ಬೇಕಾಗಿರುವುದು ಕಣ್ಣಿನ ಮತ್ತು ಮನಸ್ಸಿನ ಮೇಲೆ ಬಿದ್ದಿರುವ ತುಸು ಧೂಳನ್ನು ಕೊಡವಿಕೊಳ್ಳುವ ಮಾರ್ಗ. ಅಷ್ಟೇ ಎಂದು ನವಿರಾಗಿ ತೋರಿಸುವ ಉತ್ತಮ ಪ್ರಯತ್ನ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ.

ಈ ಚಿತ್ರ ಕಾಡುತ್ತದೆ.. ಆವರಿಸಿಕೊಳ್ಳುತ್ತದೆ.. ಮತ್ತು ನಮ್ಮೊಳಗೇ ಮಂಥನ ನಡೆಸುತ್ತದೆ.

ಇಡಿ ಚಿತ್ರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತಾಂತ್ರಿಕತೆ, ಛಾಯಚಿತ್ರಣ, ಹಿನ್ನೆಲೆ ಸಂಗೀತ, ಸಂಭಾಷಣೆ ಎಲ್ಲವೂ ಹಾಲಿನಲ್ಲಿ ಜೇನು ಮತ್ತು ಸಕ್ಕರೆ ಬರೆಸಿದಷ್ಟೇ ಹಿತವಾಗಿ ಸೇರಿಕೊಂಡಿದೆ.  ನಿರ್ದೇಶಕ ಎಲ್ಲೂ ಕೂಡ ತಮ್ಮ ಎಳೆಯಿಂದ ಹೊರಗೆ ಹೋಗದೆ, ಒಂದು ನೀಟಾದ ಚಿತ್ರವನ್ನು ನಮ್ಮ ಮುಂದೆ ತಂದು ನಿಲ್ಲಿಸಿದ್ದಾರೆ.
ಚಿತ್ರ ಕೃಪೆ - ಗೂಗಲ್ 

ಒಂದು ಒಳ್ಳೆಯ ಚಿತ್ರ ನೋಡಿದ ಅನುಭವ.. ನನಗೆ ಆದದ್ದು ಖುಷಿಯಾಯಿತು, ಮನಸ್ಸಿಗೆ ನಿರಾಳತೆ ಕೊಟ್ಟಿತು.
*************

ಈ ಚಿತ್ರವನ್ನು ನೋಡಲು ಮೂರು ಮುಖ್ಯ ಕಾರಣಗಳು ಇದ್ದವು.

೧) ಧೈರ್ಯ ಲಕ್ಷ್ಮಿ ಎನ್ನುವ ಚಿತ್ರ ನೋಡಿದಾಗಿಂದಲೂ ಅನಂತ್ ನಾಗ್ ಅವರು ನನಗೆ ಬಲು ಇಷ್ಟ, ಅವರ ಬೆಳದಿಂಗಳ ಬಾಲೆ ಚಿತ್ರ ಮನಸ್ಸಿಗೆ ತಂಪೆರೆಯುವ ಚಿತ್ರ. ಇಂಥಹ ಮೇರು ನಟ,ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ  ನನ್ನ ಹುಟ್ಟು ಹಬ್ಬಕ್ಕೆ ತಮ್ಮ ಹಸ್ತಾಕ್ಷರ ಸಹಿತ ಶುಭಾಶಯಗಳನ್ನು ಕೊಟ್ಟಿದ್ದು ಸಂತಸಕ್ಕೆ ಪಾರವೇ ಇಲ್ಲವಾಗಿತ್ತು.  ಇವರ ಈ ಚಿತ್ರವನ್ನು ನೋಡಲೇಬೇಕು, ಹೀಗೆ ಅವರ ಶುಭಾಶಯಗಳಿಗೆ ಗೌರವ ಸೂಚಿಸಿದ ಹಾಗೂ ಆಯಿತು ಜೊತೆಯಲ್ಲಿ ಒಂದು ಒಳ್ಳೆಯ ಕನ್ನಡ ಚಿತ್ರವನ್ನು ನೋಡಿದ ಹಾಗೆ ಆಯಿತು ಎನ್ನುವುದು ಮೊದಲ ಕಾರಣ.
ಕೃಪೆ - ಶುಭಾಶಯಗಳನ್ನೂ ಬರೆದು ಕೊಟ್ಟ
 ಅನಂತ್ ನಾಗ್ ಸರ್ ಮತ್ತು
ಅದನ್ನು ನನಗೆ ತಲುಪಿಸಿದ ನಿವೇದಿತ ಚಿರಂತನ್ 

೨) ನನ್ನ ಆಪ್ತ ಗೆಳೆಯ ಚಿರಂತನ್ ವಸಿಷ್ಠ ಮತ್ತು ನಿವೇದಿತ ಚಿರಂತನ್ ಅವರ ಪುತ್ರ ಅದ್ವೈತ್ ಈ ಚಿತ್ರದಲ್ಲಿ ಒಂದು ಪುಟ್ಟ ಪಾತ್ರ ಮಾಡಿದ್ದ. ಚಿತ್ರದಲ್ಲಿ ಅಚ್ಯುತ್ ಮತ್ತು ಅರುಣ ಅವರ ಮಗನ ಪಾತ್ರ. ಚಿತ್ರದ ಅಗತ್ಯತೆಗೆ ಪಾತ್ರದ ಉದ್ದ ಕಡಿಮೆ ಮಾಡಿದ್ದಾರೆ, ಆದರೂ ಈ ಮುದ್ದು ಪ್ರತಿಭೆ ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಬಂದದ್ದು, ಮತ್ತು ಅವನನ್ನು ನೋಡಬೇಕೆಂಬುದು ಎರಡನೇ ಕಾರಣ.

೩) ಶ್ರೀ ನಿಮ್ಮ ಹುಟ್ಟು ಹಬ್ಬಕ್ಕೆ ಒಂದು ಸರ್ಪ್ರೈಸ್ ಎಂದು ಹೇಳಿ ಅನಂತ್ ನಾಗ್ ಅವರಿಂದ ಶುಭಾಷಯ ಪತ್ರವನ್ನು ನನಗಾಗಿ ಕೊಟ್ಟಿದ್ದು ನಿವೇದಿತ ಚಿರಂತನ್. ಇದು ನನ್ನ ಸೌಭಾಗ್ಯ ಎನ್ನಲೇ ಬೇಕು. ಕಾರಣಾ ಅದ್ಭುತ ಬರಹಗಾರ್ತಿ, ಛಾಯಗ್ರಾಹಕಿ ಮತ್ತು ಅತ್ಯುತ್ತಮ ವಿಶ್ಲೇಷಕಿ ಇವರು. ಇವರು ಪ್ರೀತಿಯಿಂದ ಕೊಟ್ಟ ಕಾಣಿಕೆಗೆ ಬೆಲೆ ಕಟ್ಟಲು ಸಾದ್ಯವೇ ಇಲ್ಲ. ಅನಂತ್ ನಾಗ್, ಮುದ್ದು ಆದಿ, ಗೆಳೆಯ ಚಿರಂತನ್ ಮತ್ತು ನಿವೇದಿತ ಅವರು ನನ್ನ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಗಾಗಿ ಈ ಚಿತ್ರ ನೋಡಲೇಬೇಕು ಎನ್ನುವ ಕಾರಣ ಮೂರನೆಯದು.

ಒಟ್ಟಿನಲ್ಲಿ ಕಾರಣಗಳು  ಏನೇ ಇದ್ದರೂ, ಕರುನಾಡಿನ ಚಿತ್ರ ಪ್ರೇಮಿಗಳು ನೋಡಲೇಬೇಕಾದ ಒಂದು  ಚಿತ್ರ.. ಚಿತ್ರಮಂದಿರದಲ್ಲಿ ನೋಡಿ, ಪ್ರೋತ್ಸಾಹಿಸಿ, ಮತ್ತು ಇಂಥಹ ಉತ್ತಮ ಪ್ರಯತ್ನಗಳಿಗೆ ಬೆನ್ನು ತಟ್ಟಿದಾಗ ಮಾತ್ರ ಕರುನಾಡು ಮತ್ತೆ ಸುವರ್ಣ ಯುಗಕ್ಕೆ ಹಿಂತಿರುಗಲು ಸಾಧ್ಯ ಅಲ್ಲವೇ!!!

Friday, May 27, 2016

Hey Ram - Kamaal Ki Movies (2000)

This is one kind of adventure only...!

Because, I never wrote about a movie of one of the finest actor in Indian Cinema...

I read in one of the blog am following..  Conversations Over Chai.. even though i read many many articles in this blog..what it amazed was how many movies the author of this blog watches and how effectively conveys the message / heart of the movie giving even minute details of the same..just a absolute hats off to this wonderful author and owner of the blog Conversations Over Chai!!!

Recent post was the review of the movie Hey Ram!.  16 years old movie under the  complete eclipse of Kamal Hassan.

I always  believed and loved Kamal Movies in three types.

1) Kamal Movies - earlier movies in his carrier beginning, where he was directors actor.  He followed bit by bit what his director wanted..and exactly portrayed the character on the screen.  In this era..Story, Acting, and his screen presence pulled the people to the theaters.

2) Kamaal Ki Movies - Here he literally started ruling the silver screen. He got wonderful scripts, amazing songs, extraordinary performances (Swathi Muthyam, Sagara Sangamam, Nayagan, Moonram Pirai / Sadma, Pushapaka Vimana and many more).  It created a kind of spectrum like Kamal movies will be kamaal ki movies.

3) Kamal ki Movies - Post Apoorva Sahodargal.. he started playing with the characters, costumes, appearance, the characterization. And he was almost dominating the screen completely for the entire length of the movie...a herculean efforts of which he carried the expectations and the performance on his broad shoulders to the 100% perfection.

Given a chance, i always like his Kamaal Ki Movies rather than the first and three era.

However, "Hey Ram" review in the blog pulled my  curiosity horse to the core..and it was suggested to watch Tamil Version with a subtitle.


I would say...I was not at all disappointed. Initially, when i saw the duration of the movie..i was worried, How do i last long the duration....but.....

The movie starts with a tribute, and the title card - Hey Ram with a complex image.  This gave me a message that..this movie is not a straight pot boiler of come and go movie. something is inside, let me watch it.  The marathon length 3.21 hours just hooked me to the movie.

His portrayal of Saket Ram in almost 4 different make over was really impressive.  This movie literally takes us to the 1940's era bit by bit. The tone of the photography, the costumes, the lighting, music everything perfectly in place.


The characters played by others, like Rani in a short spell creates jadoo...so the Vasundhara Das intelligent gal portrayal.

Along with Kamal, Rani, Vasundhara...the other character impresses was Atul Kulkarni.  Awesome.

Here, almost every scene Kamal presence is there, but he scores full marks when he realises Aparna - Rani is no more, and his silence and expressions in the last few scenes, when Amjad Ali Khan played by Shar Rukh Khan, was killed.

He shouldered enought responsibility as producer, Director, Script, Dialogue, his acting never suffered.  He just nose dives in to the character Saket Ram.

He makes us to believe that, yeah there was character in pre-independence era called Saket Ram, and he changed his stance as a hater of Gandhi and his principles to believer of him and his principles.

I didnt let my eye lid go down through out the length of the movie.

Three days i was in like a trance.. if i close my eyes, my body would be roaming in the streets of Calcutta with a gun in my hand.  Such was the creation and depiction of this period dram.

Hats off to Kamal and hats off to the author of the blog who made me to watch  this movie, which i refused to watch it since the movie hit the silver screen in the year 2000.

Do watch this movie in Tamil Version with a subtitle. For a change, this movie is not completely in Tamil, atleast 40% is english and Hindi.  The remaining 60% is in Tamil but it can followed easily by understanding the sequences.

A watchable movie and I can guarantee you that, it will make you to head towards the silent zone at least for 24 Hours.

Hey Ram!!!!...A movie to take us to the tower of silence.!!!

Sunday, April 24, 2016

ಈ (ಕೀಲಿ ಮಣೆ) ಕಂಗಳು ಮಾಡಿದ ಪುಣ್ಯವೋ!!!

ವಿಶ್ವಾಮಿತ್ರರು ಮತ್ತೆ ಸುದ್ದಿಯಾದರು.  ಮೇನಕೆಯಿಂದ ತಪೋಭಂಗವಾದ ಮೇಲೆ ಮತ್ತೊಮ್ಮೆ ತಪಸ್ಸಿಗೆ ಕೂರುವ ಮುನ್ನ, ಯಾಕೋ ಸ್ವರ್ಗಲೋಕಕ್ಕೆ ಹೋಗಿಬರೋಣ ಎಂದುಕೊಂಡು ಅಲ್ಲಿಗೆ ಬಂದರು.

ಯಥಾ ಪ್ರಕಾರ ಇಂದ್ರನ ಆಸ್ಥಾನದಲ್ಲಿ ಸಭೆ ನಡೆಯುತ್ತಿತ್ತು, ನೃತ್ಯ ಗಾಯನದ ನಂತರ, ವಸಿಷ್ಠರು ಇಂದು  ಒಂದು ವಿಚಾರ ಚರ್ಚೆ ಮಾಡೋಣ. ಇಂದಿನ ವಿಷಯ ಕಲಾವಿದರು ಮತ್ತು ಅವರ ಅಭಿಮಾನಿಗಳು.

ವಿಶ್ವಾಮಿತ್ರ ಇಂಥಹ ಸುದ್ದಿಗಳಿಗಾಗಿಯೇ ಕಾಯುತ್ತಿರುವವರು.. ಕಮಂಡಲದ ತೀರ್ಥವನ್ನು ಪರೀಕ್ಷಿಸಿದರು. ಸಾಕಷ್ಟು ಇತ್ತು.

ಚರ್ಚೆ ಶುರುವಾಯಿತು.. ತಾರಕಕ್ಕೆ ಹೋಯಿತು.. ಹೊಡೆದಾಟ ಬಡಿದಾಟ ಕೈ ಮೀರಿತ್ತು.. ಯಾರೊಬ್ಬರು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.. ಅವರಿಗೆ ಬೇಕಿದ್ದು ತಮ್ಮ ಮಾತನ್ನು ಪುಷ್ಠಿಕರಿಸುವುದಷ್ಟೇ ಆಗಿತ್ತು. ಯಾರಿಗೂ ನಿಜಾಂಶ ಬೇಕಿರಲಿಲ್ಲವಾಗಿತ್ತು.

ವಸಿಷ್ಠರಿಗೆ ಈ ತರಹ ವಾದ ವಾಗ್ವಾದಗಳು ಹೊಸತೆನಲ್ಲ.. ಸುಮ್ಮನೆ ಎಲ್ಲರ ಮಾತನ್ನು ಕೇಳುತ್ತಾ ಕೂತಿದ್ದರು. ಇಂದ್ರನಿಗೆ ಸಾಕಾಗಿ ಹೋಗಿತ್ತು... ಒಂದು ದಿನ ಸಂಭ್ರಮದಲ್ಲಿ ಕಳೆಯೋಣ ಅಂದರೆ ಇವರು ಒಂದು ವಿಷಯವನ್ನು ಕಡೆದು ಕಡೆದು ಆನಂದವನ್ನು ಹಾಳು ಮಾಡುತ್ತಿದ್ದಾರೆ .. ಮನದಲ್ಲಿಯೇ ಜಪ ಮಾಡಿದ.

ಮಂಜಿನ ಗಾಳಿ ಎಲ್ಲರ ಮೊಗಕ್ಕೆ ತಾಗಿ, ಬಿಸಿಯಾಗಿದ್ದ ಮನಸ್ಸು ದೇಹ ಹಾಯ್ ಎನ್ನುವಂತೆ ಮಾಡಿತು.

"ಅಭಿಮಾನಿ ದೇವರುಗಳಿಗೆ ನಮಸ್ಕಾರ.. ಯಾಕೆ ಇಷ್ಟೊಂದು ಬಿಸಿ ಬಿಸಿ ಚರ್ಚೆ... " ಶ್ವೇತ ವಸ್ತ್ರದಾರಿಯ ಮಾತು ಕೇಳಿ ಎಲ್ಲರೂ ಮಂತ್ರಕ್ಕೆ ಒಳಗಾದವರಂತೆ ತಣ್ಣಗಾದರು.

ಅಭಿಮಾನಿ ದೇವರುಗಳೇ.. ನಿಮ್ಮ ಮನೆಯ ಮಗುವನ್ನು ನೀವೇ ಮುದ್ದು ಮಾಡಿ, ಅದಕ್ಕೆ ಬೇಕಾದ ಪೋಷಾಕುಗಳನ್ನು ಹಾಕಿದಿರಿ. ಒಮ್ಮೆ ಕೃಷ್ಣದೇವರಾಯ ಎಂದಿರಿ, ಇನ್ನೊಮ್ಮೆ ಮಯೂರ ಎಂದಿರಿ, ಕುಂಬಾರ ಎಂದಿರಿ, ಜೇಮ್ಸ್ ಬಾಂಡ್, ದಾಸರು ಎಂದರಿ... ನಿಮ್ಮ ಅಭಿಮಾನಕ್ಕೆ ನಾ ಚಿರಋಣಿ. ನಿಮ್ಮ ಮಗು ಬಗ್ಗೆ ನೀವು ಹೆಮ್ಮೆ ಪಡುವುದು ನಿಮ್ಮ ಪ್ರೀತಿಯ ಸಂಕೇತ. ನೀವು ಪ್ರೀತಿ ತೋರಿಸಿದಿರಿ, ಅದು ನಾ ಈ ಮಟ್ಟಿಗೆ ಬೆಳೆಯಲು ಅನುಕೂಲ ಮಾಡಿಕೊಟ್ಟಿತು. ಚಂದ್ರ ಯಾವಾಗಲೂ ಪೂರ್ಣ ನಾಗಿಯೆ ಇರುವುದಿಲ್ಲ ಅಲ್ಲವೇ, ಹಾಗೆಯೇ ಶುಕ್ಲ ಪಕ್ಷದ ಚಂದ್ರ ಗೆರೆಯಿಂದ ಪೂರ್ಣ ಸ್ವರೂಪ ತೆಗೆದುಕೊಂಡ ಹಾಗೆ, ನಿಮ್ಮ ಅಭಿಮಾನದ ಬೆಳಕಲ್ಲಿ, ಈ ಸಣ್ಣ ಬಿಂಧು ಅಥವಾ ಈ ಸಣ್ಣ ಕಣ ಪೂರ್ಣ ಚಂದ್ರವಾಯಿತು. ಅದರ ಬೆಳಕು ಕರುನಾಡಿನ ಭುವನೇಶ್ವರಿಯ ಮಡಿಲು ಸೇರಿ ಇನ್ನಷ್ಟು ಹೊಳಪು ಖಂಡಿತು.

ನನ್ನನ್ನು ಅಣ್ಣ, ಅಣ್ಣಾವ್ರು, ಅಪ್ಪಾವ್ರು, ಅಪ್ಪಾಜಿ, ಸರ್ ಹೀಗೆ ನೂರಾರು ಹೆಸರಿಂದ, ಅಭಿಮಾನದ ಭಾವದಿಂದ ಗುರುತಿಸಿದಿರಿ. ಒಂದೇ ಅಕ್ಕಿಯಿಂದ ತಯಾರಾದ ಖಾದ್ಯ, ಬೇರೆ ಬೇರೆ ಹೆಸರು ಪಡೆದುಕೊಳ್ಳುತ್ತದೆ, ಬರಿ ಅನ್ನವಾಗುತ್ತದೆ, ಚಿತ್ರಾನ್ನ ಆಗುತ್ತದೆ, ಬಿಸಿಬೇಳೆ ಬಾತ್ ಆಗುತ್ತದೆ, ಪುಳಿಯೋಗರೆ, ಬಿರ್ಯಾನಿ ಹೀಗೆ ಅನೇಕ ಹೆಸರು ಬಂದು ಬಿಡುತ್ತದೆ, ಅದರಂತೆ ನೀವು ಏನೇ ಕರೆದರೂ ಅಥವಾ ನನ್ನನ್ನು ಹೇಗೆ ಗೌರವಿಸಿದರೂ ಅದು ಮೂಲ ಸ್ವರೂಪದಲ್ಲಿಯೇ ಇರುವ ಅಕ್ಕಿಯಂತೆ ಬೆಂದು ಬಗೆ ಬಗೆಯ ಭಕ್ಷ್ಯವಾಗುವಂತೆ, ನಿಮ್ಮ ಅಭಿಮಾನದ ಹೊಳೆಯಲ್ಲಿ ಮಿಂದು ನಾ ನಿಮ್ಮ ರಾಜಕುಮಾರನಾಗಿದ್ದೇನೆ.

ಒಂದು ಮಗುವಿಗೆ ಅಣ್ಣ ಎಂದು ಹೆಸರಿಟ್ಟರೆ, ಆ ಮಗು ಚಿಕ್ಕದಾಗಿದ್ದಾಗಲೂ ಅಣ್ಣನೆ, ವಯಸ್ಸಿಗೆ ಬಂದಾಗಲೂ ಅಣ್ಣನೆ, ಮುಪ್ಪಿಗೆ ಬಂದಾಗಲೂ ಅಣ್ಣನೆ, ಇದಕ್ಕೆ ಅಪವಾದವೆ ಇಲ್ಲ ಅಲ್ಲವೇ. ಅದು ಹೆಸರಿನ ತಪ್ಪಲ್ಲ, ಅದು ಆ ಮಗುವನ್ನು ಆದರಿಸುವ ಪರಿ.

ನಾನು ಕರುನಾಡಿನ, ಕನ್ನಡ ಭಾಷ ಚಿತ್ರರಂಗಕ್ಕೆ ಅಣ್ಣ ಎನಿಸಿದರೂ, ನನಗಿಂತ ಅಪಾರ ಕೀರ್ತಿ ಪಡೆದ, ನನಗಿಂತಲೂ ಪ್ರತಿಭಾವಂತರನ್ನು ಕೂಡ ಅಣ್ಣ ಎಂದರೆ ಕರೆಯುತ್ತಿದ್ದೀರಿ. ಶಂಕ್ರಣ್ಣ, ಪುಟ್ಟಣ್ಣ, ದೊಡ್ಡಣ್ಣ, ಅಂಬಿಯಣ್ಣ, ವಿಷ್ಣುದಾದ ಹೀಗೆ ಕಲಾವಿದರು ನಮಗೆ ಹೇಗೆ ಹತ್ತಿರವಾಗುತ್ತಾರೆಯೋ ಹಾಗೆ ಅವರು ಅಣ್ಣ, ಅಣ್ಣಾವ್ರು, ಅಪ್ಪಾವ್ರು, ಅಪ್ಪಾಜಿ ಹೀಗೆ ರೂಪ ಪಡೆದುಕೊಳ್ಳುತ್ತಾರೆ. ಪಕ್ಕದ ಚಿತ್ರರಂಗದಲ್ಲಿ ಎಮ್. ಜಿ ಆರ್, ಶಿವಾಜಿ ಗಣೇಶನ್, ರಜನಿಕಾಂತ್, ಕಮಲ್, ಹಿಂದಿಯ ಬಚ್ಚನ್ ಅವರನ್ನು ತಮ್ಮ ಕುಟುಂಬದ ಸದಸ್ಯರಿಗಿಂತ ತುಸು ಹೆಚ್ಚಾಗಿಯೇ ಪ್ರೀತಿಸುತ್ತಾರೆ, ಅಂದ ಮಾತ್ರಕ್ಕೆ ತಮ್ಮ ಮಕ್ಕಳನ್ನು ಬೀದಿಗೆ ಬಿಡೋಲ್ಲ.

ಕಲಾಭಿಮಾನಿಗಳು ನನ್ನ ಹಾಗೆ ಕರೆದರೆ ಅದು ಅವರ ಮಗುವನ್ನು "ಚಿನ್ನಾ, ಮುದ್ದು, ಪುಟ್ಟಿ" ಎಂದು ಕರೆಯುವ ಹಾಗಿರುತ್ತೆಯೇ ಹೊರತು ಅದಕ್ಕೆ ಪದ ಅರ್ಥ ಹುಡುಕಿ ಗೊಂದಲ ಮಾಡಿಕೊಳ್ಳಬಾರದು.

ಇಂದ್ರನ ಸಭೆಯಲ್ಲಿ.. ಸೂಜಿ ಬಿದ್ದರೂ ಕೇಳಿಸುವಂಥಹ ನಿಶ್ಯಬ್ಧ.. ವಸಿಷ್ಠರಿಗೆ ಜೋರಾಗಿ ಚಪ್ಪಾಳೆ ಹಾಕಿ "ಅಣ್ಣಾವ್ರಿಗೆ, ಮತ್ತು ಮುತ್ತಿನಂಥಹ ಮಾತುಗಳಿಗೆ ಜೈ" ಅನ್ನಬೇಕು ಅನ್ನಿಸಿತು, ಆದರೆ ಸ್ವಲ್ಪ ಹೊತ್ತು ಸುಮ್ಮನಿದ್ದರು.

ಅಣ್ಣಾವ್ರು ಹೇಳಿದ್ದು ಒಬ್ಬೊಬ್ಬರ ಮನಸ್ಸಿಗೆ ಇಳಿಯುತ್ತಾ ಹೋಯಿತು.. ಇಂದ್ರ ಸಭೆಯೇ ಕಿತ್ತು ಹೋಗುವಷ್ಟು ಜೋರಾದ ಚಪ್ಪಾಳೆ, ಜೊತೆಯಲ್ಲಿ "ಅಣ್ಣಾವ್ರಿಗೆ ಜೈ" ಎಂಬ ಜೈಕಾರ..

ಪಕ್ಕದಲ್ಲಿಯೇ ದೈವ ಧೂತ.. ಅಣ್ಣಾವ್ರೆ ಯಾಕೆ ಕಣ್ಣೀರು ಎಂದು ಕೇಳಿದ

ಅಣ್ಣಾವ್ರು "ಇದು ಕಣ್ಣೀರಲ್ಲ ಪನ್ನೀರು ಪನ್ನೀರು"... ಚಿನ್ನದಂಥ ಅಭಿಮಾನಿಗಳು ಇರುವಾಗ ಕಣ್ಣೀರೆತೆಕೆ, ಮನಸನು ಅರಿತು ನೆಡೆಯುತಲಿರಲು ಚಿಂತೆಯ ಮಾತೇಕೆ.. ಅಭಿಮಾನಿಗಳು  ನಗುತಿರಲು ನಮ್ಮೀ ಕರುನಾಡಿಗೆ ಆ ಸ್ವರ್ಗವೇ ಜಾರಿದಂತೆ.. "

ಇಷ್ಟು ಕೇಳಿ, ಆ ಧೂತ ಅಣ್ಣಾವ್ರ ಕಾಲಿಗೆ ಎರಗುತ್ತಾ "ಅಣ್ಣಾವ್ರಿಗೆ ಜೈ ಅಣ್ಣಾವ್ರಿಗೆ ಜೈ.. ಅಣ್ಣಾವ್ರಿಗೆ ಹುಟ್ಟು ಹಬ್ಬದ ಶುಭಾಶಯಗಳು.. ." ಎಂದು ಜೈ ಕಾರ ಹಾಕಿದ..

ಸಭೆಯಲ್ಲಿದ್ದ ಎಲ್ಲರೂ ಎದ್ದು ಕರತಾಡನ ಮಾಡಿ.. ಒಬ್ಬರ ಮುಖ ಒಬ್ಬರು ನೋಡಿಕೊಂಡರು.. ಎಲ್ಲರ ಮನಸ್ಸು, ಮೊಗ ತೊಳೆದ ಪಾತ್ರೆಯಂತೆ ಲಕ ಲಕ ಹೊಳೆಯುತ್ತಿತ್ತು..

ಆ ಕ್ಷಣದಲ್ಲಿ ಗಾಳಿಯಲ್ಲಿ ತೇಲಿಬಂದ ಒಂದು ಕರ ಪತ್ರದಲ್ಲಿ ಮೂಡಿ ಬಂದ ದೃಶ್ಯ ನೋಡಿ ಎಲ್ಲರೂ ಹೋ ಹೋ ಅಣ್ಣಾವ್ರಿಗೆ ಜೈ ಎಂದು ಕೂಗಿ

ಅಣ್ಣಾವ್ರೆ ನಿಮ್ಮ ಜೊತೆಯಲ್ಲಿಯೇ ಈ ಚಿತ್ರವನ್ನು ನೋಡೋಣ ನಡೆಯಿರಿ ಎಂದು ರಥವನ್ನು ಹತ್ತಿಸಿದರು...
ಇಂದ್ರಸಭೆಯ ಪಕ್ಕದಲ್ಲಿಯೇ ಇದ್ದ ಮಲ್ಟಿಪ್ಲೆಕ್ಸ್ ನಲ್ಲಿ ಆಗಲೇ ಶುರುವಾಗಿತ್ತು .. ಎಲ್ಲರೂ ದಡ ದಡ ಒಳಗೆ ನುಗ್ಗಿದರು.. ಆಗ ಹಾಡು ಬರುತ್ತಿತ್ತು..




"ನಾವಾಡುವ ನುಡಿಯೇ ಕನ್ನಡ ನುಡಿ..
ನಾವಿರುವ ತಾಣವೇ ಗಂಧದ ಗುಡಿ ಅಂದದ ಗುಡಿ ಚಂದದ ಗುಡಿ ಶ್ರೀ ಗಂಧದ ಗುಡಿ"

ಅಣ್ಣಾವ್ರೆ ನನ್ನ ಕೆಲವು ಗೊಂದಲಗಳಿಗೆ ನಿಮ್ಮ ಮಾತುಗಳು ಬೇಕಿತ್ತು.. ನೀವು ಹೀಗೆಯೇ ಉತ್ತರಿಸಬಹುದು ಎಂದು ಅಂದುಕೊಂಡು ಈ ಲೇಖನವನ್ನು ನಿಮ್ಮ ಹುಟ್ಟು ಹಬ್ಬಕ್ಕೆ ಸಮರ್ಪಿಸುತ್ತಿದ್ದೇನೆ.

ಕರುನಾಡು ಕಂಡ ಅದ್ಭುತ ಕಲಾವಿದ ನೀವು.. ನಿಮಗೆ ಹುಟ್ಟು ಹಬ್ಬದ ಶುಭ ಕೋರುವುದು ನಾ ಮಾಡಿದ ಪುಣ್ಯದ ಫಲ ಎನ್ನಬಹುದು..

ನನ್ನ ಮನಸ್ಸು ಹೇಳುತ್ತಿದೆ "ಇದು ಯಾರ ತಪಸಿನ ಫಲವೋ.. ಈ (ಕೀಲಿ ಮಣೆ) ಕಂಗಳು ಮಾಡಿದ ಪುಣ್ಯವೋ"

ಅಣ್ಣಾವ್ರೆ ಹುಟ್ಟು ಹಬ್ಬದ ಶುಭಾಶಯಗಳು!!!

Tuesday, April 12, 2016

ಹಾಡುಗಳಲ್ಲಿ ನುಗ್ಗಿ ಬರುವ ಭಾವ ಲೋಕದಲ್ಲಿ ಅಣ್ಣಾವ್ರು

ಅಣ್ಣಾವ್ರ  ಚಿತ್ರಗಳಲ್ಲಿ ಹಾಡುಗಳು ಎಂದಿಗೂ ಜೀವ ತುಂಬಿ ಹರಿಯುವ ನದಿಯ ತರಹ, ಬೆಳದಿಂಗಳಲ್ಲಿ ಬರುವ ಮಳೆಯ  ಹಾಗೆ, ಚೈತ್ರ ಮಾಸದಲ್ಲಿ ಅರಳುವ ಹೂಗಳ ಹಾಗೆ ಇರುತ್ತಿದ್ದವು.. ಅದರಲ್ಲೂ ಅಣ್ಣಾವ್ರೆ ಹಾಡಲು ಶುರು ಮಾಡಿದ ಮೇಲೆ, ಅವರ ಎಲ್ಲಾ ಚಿತ್ರಗಳಲ್ಲಿ ಹಾಡುಗಳು ವಿಜೃಂಬಿಸಿದ್ದು ಒಂದು ದಂತ ಕಥೆ ಎನ್ನಬಹುದು.

ಅಣ್ಣಾವ್ರ ಗಾಯನದಲ್ಲಿ ನಾ ಮೆಚ್ಚುವ ಅನೇಕ ಅಂಶಗಳಲ್ಲಿ ಒಂದು, ಅವರು ಹಾಡಿನ ಮಧ್ಯೆ ಆಡುವ ಮಾತುಗಳು, ಇಲ್ಲವೇ ಪುಟ್ಟ ಪುಟ್ಟ ಧ್ವನಿಗಳು, ಸಂಗತಿಗಳು..

ಅವರ ನೂರಾರು ಹಾಡುಗಳ ಮಧ್ಯೆ ನನಗೆ ಇಷ್ಟವಾಗುವುದು, ಅವರು ಯುಗಳ ಗೀತೆಗಳಲ್ಲಿ, ಮಧ್ಯೆ ನುಗ್ಗುವ ಪರಿ. ಸಿನೆಮಾ ಟಾಕೀಸುಗಳಲ್ಲಿ ಅಣ್ಣಾವ್ರು ಯುಗಳ ಗೀತೆಯ ಮಧ್ಯೆ ಅಥವಾ ನಾಯಕಿ ಒಬ್ಬಳೇ ಹಾಡುತ್ತಿದ್ದಾಗ ನುಗ್ಗಿ ಬರುವ ಪರಿ, ಅದಕ್ಕೆ ಅವರ ಅಭಿಮಾನಿ ದೇವರುಗಳ ಸಂಭ್ರಮ ಅದರ ಬಗ್ಗೆ ಬರೆಯೋಣ ಅನ್ನಿಸಿತು. ಅದಕ್ಕಾಗಿ ಈ ಲೇಖನ.

ಈ ಹಾಡುಗಳಲ್ಲಿ ಸಾಂತ್ವನ ಹೇಳುವ ಹಾಡುಗಳು ಇವೆ, ಪ್ರಣಯವೂ ಇದೆ, ಗುಪ್ತಗಾಮಿನಿಯ ಹಾಗೆ ಹರಿಯುವ ಭಾವ ಪ್ರಶಾಂತತೆ ಇದೆ, ಹೀಗೆ ಹಲವಾರು ರಸಗಳ ಸಂಗಮ.. ಅಣ್ಣಾವ್ರು ಹಾಡುಗಳಲ್ಲಿ ಮಧ್ಯೆ ಎಂಟ್ರಿ ಆಗುವ ದೃಶ್ಯಗಳು.

*****

ನಾನೊಬ್ಬ ಕಳ್ಳ ಚಿತ್ರದಲ್ಲಿ, ಒಂದು ಬಗೆಯ ವಿಷಾದ ತುಂಬಿರುತ್ತದೆ, ಆಗ ಶುರುವಾಗುತ್ತದೆ "ಆಸೆಯು ಕೈಗೂಡಿತು". 
ನಾಯಕಿ ಲಕ್ಷ್ಮಿ ರಾಜ್ ರನ್ನು ಸಂತೈಸುತ್ತಲೇ ಶುರುವಾಗುವ ಹಾಡು, ಅಣ್ಣಾವ್ರು ಶುರು ಮಾಡುವ "ಕಂದ ನೊಂದು ಅತ್ತಾಗ, ಯಾರೂ ಕಾಣದಾದಾಗ ಸಂತೈಸಲೆಂದು ಓಡೋಡಿ ಬರುವ ತಾಯಂತೆ ನೀನು ಬಂದೆ.. ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ, ಆ ದೀಪದಲ್ಲಿ ನೀ ಜೀವವಾಗಿ ಹೊರಾಡಲೆಂದು ಬಂದೆ.. ಉಸಿರಾಡುವಾಸೆ ತಂದೆ"
ಈ ಪದಗಳಲ್ಲಿ  ಪ್ರೇಯಸಿಯ ಸಾಮಿಪ್ಯವನ್ನು, ನೊಂದ ಮಗುವನ್ನು ತಾಯಿ ರಮಿಸುವ ಹಾಗೆ ಹೋಲಿಸಿದ್ದಾರೆ. ಅದ್ಭುತ ಹಾಡು, ಲಕ್ಷ್ಮಿ ಹಾಗೂ ಅಣ್ಣಾವ್ರು ಅದ್ಭುತ ಅಭಿನಯ. ಚಿ ಉದಯಶಂಕರ್ ಜೀವ ತುಂಬಿ ಸಾಹಿತ್ಯ ಕೊಟ್ಟರೆ, ಅದಕ್ಕೆ ಬಂಗಾರದ ಚೌಕಟ್ಟು ಸಿಕ್ಕಿದ್ದು ರಾಜನ್ ನಾಗೇಂದ್ರ ಅವರ ಸುಲಲಿತ ಸಂಗೀತ. 



ಕೆರಳಿದ ಸಿಂಹ, ರಾಜ್ ಸಾಹಸಮಯ ಚಿತ್ರಗಳಲ್ಲಿ ಒಂದು. ಸಂದೇಹ, ಮತ್ತು ಪರಿಸ್ಥಿತಿಯ ಒತ್ತಡ, ನಾಯಕಿ ಮತ್ತು ನಾಯಕನನ್ನು ದೂರ ಮಾಡಿರುತ್ತದೆ. ಹೇಗಿದ್ದೆವು ಹೇಗಾದೆವು ಎಂದು ಯೋಚಿಸುತ್ತಾ ಕೂತಾಗ ಬರುವ " ಏನೋ ಮೋಹ ಏಕೋ ದಾಹ". ಅಣ್ಣಾವ್ರ ಚಿತ್ರಗಳಲ್ಲಿ ಈ ಹಾಡು ತುಂಬಾ ವಿಭಿನ್ನ ಅನ್ನಿಸುವ ಕಾರಣ ಅದರ ಸಾಹಿತ್ಯ ಮತ್ತು ಸಂಗೀತ. ಆಂಗ್ಲ ಶೈಲಿಯಲ್ಲಿ ಸತ್ಯಂ ಅವರು ಸಂಗೀತ ಸಂಯೋಜನೆ ಮಾಡಿದ್ದರೆ, ಪ್ರೇಮಿಗಳ ವಿರಹವನ್ನು ಪದಗಳಲ್ಲಿ ಕಟ್ಟಿ ಕೊಟ್ಟದ್ದು ಚಿ ಉದಯಶಂಕರ್. ಈ ಹಾಡಿನಲ್ಲಿ ಸರಿತಾ ಮನಮೋಹಕವಾಗಿ ಕಾಣುತ್ತಾರೆ, ಉದ್ದ ಕೂದಲು, ಕಣ್ಣುಗಳು ಭಾವನೆಗಳಿಂದ ಸರಿತಾ ಮುದ್ದಾಗಿಕಂಡರೆ , ಅಣ್ಣಾವ್ರು ಅಚ್ಚುಕಟ್ಟಾದಮೈಕಟ್ಟು , ವಸ್ತ್ರ ವಿನ್ಯಾಸ, ಬಲಗೈಗೆ ಚೈನ್ ವಾಚ್, ತುಂಬಾ ವಿಭಿನಾವಾಗಿ ಕಾಣುತ್ತಾರೆ. ವಾಣಿ ಜಯರಾಂ ಅವರ ಧ್ವನಿಯಲ್ಲಿ ಶುರುಮಾಡುವ ಹಾಡಿಗೆ, "ಏನೋ ಮೋಹ" ಎಂದು ಕೆಳಗಿಂದ ಮೇಲೆ ಎದ್ದು ನಿಲ್ಲುವ ಅಣ್ಣಾವ್ರ ಧ್ವನಿ ಮತ್ತು ಮೈಕಟ್ಟಿಗೆ ಟಾಕೀಸಿನಲ್ಲಿ ಶಿಳ್ಳೆಗಳ ಮೇಲೆ ಶಿಳ್ಳೆ.  ಒಂದು ಮಾದಕತೆ ತುಂಬಿರುವ ಪ್ರಣಯ ಗೀತೆಯನ್ನು ಅಶ್ಲೀಲವಾಗದಂತೆ ಚಿತ್ರಿಕರಿಸಿರುವುದು ಈ ಹಾಡಿನ ವಿಶೇಷ. 


ಹೊಸ ಬೆಳಕು ಚಿತ್ರದಲ್ಲಿ ತನಗೆ ಅರಿವಿಲ್ಲದ ಪ್ರೇಮಿಸುವ ನಾಯಕ ಒಂದು ಕಡೆ, ಪ್ರೀತಿ ತುಂಬಿದ್ದರೂ ತೋರಿಸಿಕೊಳ್ಳದೇ ಮೂಕ ರೋದನೆ ಪಡುವ ನಾಯಕಿ ಸರಿತಾ ಇನ್ನೊಂದು ಕಡೆ. ತನಗೆ ಇಚ್ಚೆ ಇರದ ಹುಡುಗನ ಜೊತೆ ಮೈಸೂರಿನ ಬೃಂದಾವನಕ್ಕೆ ಬರುವ ನಾಯಕಿ ಸರಿತಾ, ಆ ಹುಡುಗ ಹಾಡು ಬೇಕು ಹೇಳಿ.. ಎಂದು ಬಲವಂತ ಮಾಡಿದಾಗ "ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು" ಹಾಡಿನಲ್ಲಿ ತನ್ನ ಎಲ್ಲಾ ಭಾವನೆಗಳನ್ನು ದಿನಕರನಿಗೆ ಹೋಲಿಸಿ ತನ್ನ ನಾಯಕ "ರವಿ" ಪಾತ್ರಕ್ಕೆ ಒಪ್ಪುವ ಹಾಗೆ ಹಾಡುತ್ತಾ ಹೋಗುತ್ತಾಳೆ. ಎಸ್ ಜಾನಕಿ ಕಂಠ ಸಿರಿಯಲ್ಲಿ ಚಿ ಉದಯಶಂಕರ್ ಅವರ ಸಾಹಿತ್ಯ, ಎಂ ರಂಗರಾವ್ ಅವರಿಂದ ಬಂದ ಸಂಗೀತಕ್ಕೆ ರಾಜ್ ಮಧ್ಯೆ ನುಗ್ಗುತ್ತಾರೆ ಒಂದು ದೋಣಿಯಲ್ಲಿ "ಆಅ ಅಹ ಹಾ ಆಹಾ ಲ ಲಾ".. ಕಿವಿ ಕಿತ್ತುಹೋಗುವ ಹಾಗೆ ಶಿಳ್ಳೆ.  ನಾಯಕಿ ಯ ಭಾವಕ್ಕೆ ಭಾವ ಜೋಡಿಸಿ ಹೆಜ್ಜೆಗೆ ಹೆಜ್ಜೆ ಹಾಕಿ ನಲಿಯುವ ಈ ಹಾಡು, ನಾಯಕಿಗೆ ನಾ ಇದ್ದೇನೆ ನಿನ್ನ ಜೊತೆ ಎನ್ನುವ ಬಂಧವನ್ನು ದಯಪಾಲಿಸುತ್ತದೆ. 


ಅಣ್ಣ ತಂಗಿಯರ ಅಪ್ಪ ಅಮ್ಮನ ಬಾಂಧ್ಯವದ ಚಿತ್ರ "ಸಮಯದ ಗೊಂಬೆ", ವಿಧಿಯ ಆಟದಲ್ಲಿ ಹೇಗೆ ಮೂಕ ಪ್ರೇಕ್ಷಕರಾಗಿ ನಿಲ್ಲಬೇಕಾಗುತ್ತದೆ ಎನ್ನುವ ಸಂದೇಶ ಹೊತ್ತ ಚಿತ್ರದಲ್ಲಿ, ಹೇಗೂ ಪರಿಸ್ಥಿತಿಯ ಹಿಡಿತದಲ್ಲಿ ತನ್ನ ತಂಗಿ ಸಿಗುತ್ತಾಳೆ. ತಂಗಿ ಮಗುವಿನ ಹುಟ್ಟು ಹಬ್ಬದ ಸಂಭ್ರಮದಲ್ಲಿ ಆ ಮನೆಯಲ್ಲಿ ಚಾಲಕನ ಕೆಲಸ ನಿಭಾಯಿಸುವ ನಾಯಕ, ತಾನೇ ನಿನ್ನ ಅಣ್ಣ ಎಂದು ಹೇಳಿಕೊಳ್ಳಲಾಗದೆ ತೊಳಲಾಡುತ್ತಾ ನಿಂತಿರುವಾಗ.. ತಂಗಿ "ಕೋಗಿಲೆ ಹಾಡಿದೆ ಕೇಳಿದೆಯ" ಎಸ್ ಜಾನಕಿಯ ಮಂಜಿನ ಧ್ವನಿಯಲ್ಲಿ ಮೂಡಿಬರುತ್ತದೆ. ನಾಯಕನಿಗೆ ತನ್ನ ಬಾಲ್ಯದ ನೆನಪಾಗುತ್ತದೆ, ಮರಗುತ್ತಾ ಆ ಹಾಡನ್ನು ಹಾಗೆ ಕೇಳುತ್ತಾ ಕನಸಿನ ಲೋಕಕ್ಕೆ ಜಾರುತ್ತಾನೆ. ಕಾರಿನಿಂದ ಇಳಿಯುವ ದೃಶ್ಯದಲ್ಲಿ ಟಾಕೀಸಿನಲ್ಲಿ ಕೂಗು, ಶಿಳ್ಳೆ, ಚಪ್ಪಾಳೆಯ ಸುರಿಮಳೆ. ಹಾಡುತ್ತಾ ಬರುವ ಅಣ್ಣಾವ್ರು, ಅದ್ಭುತವಾಗಿ ಹಾಡಿ, ಚಿ ಉದಯಶಂಕರ್ ಅವರ ಸಾಹಿತ್ಯಕ್ಕೆ ಮೆರುಗು ನೀಡುತ್ತಲೇ, ರಾಜನ್ ನಾಗೇಂದ್ರ ಅವರ ಸಂಗೀತ ಜೊತೆಯಲ್ಲಿ ತಾವು ಮಂಜಿನ ಹೂವಾಗುತ್ತಾರೆ. 


ಹೀಗೆ ನಾ ಮೇಲೆ ಉಲ್ಲೇಖ ಮಾಡಿದ್ದು ಕೆಲವು ಹಾಡುಗಳನ್ನು ಮಾತ್ರ.. ಈ ತರಹ ಹಾಡುಗಳು ರಾಜ್ ಮತ್ತು ಪಿ ಬಿ ಎಸ್ ಜೋಡಿಯಲ್ಲಿ ಇನ್ನಷ್ಟು ಬೇಕಾದಷ್ಟು ಇವೆ. 

ಇಂದು ಅಣ್ಣಾವ್ರು  ಚಿತ್ರಗಳಲ್ಲಿ ಮಾತ್ರ ಅವರನ್ನು ಬಿಟ್ಟು ಆನಂದ ಲೋಕವನ್ನು ಸೇರಿದ ದಿನ. ಅವರ ನೆನಪು ಅಮರ ಮಧುರ. ಎಂದಿಗೂ ಅಳಿಸಲಾರದ ಬಂಧ ಅಣ್ಣಾವ್ರು, ಕರುನಾಡು ಮತ್ತು ಅವರ ಅದ್ಭುತ ಚಿತ್ರಗಳು.. 

ಅಣ್ಣಾವ್ರಿಗೆ ಒಂದು ಜೈ ಹೇಳುತ್ತಾ, ಅವರ ಸುಂದರ ಆತ್ಮಕ್ಕೆ ಒಂದು ನಮನ!!!

Monday, February 8, 2016

ಟಿ ಎನ್ ಬಾಲಕೃಷ್ಣ ... ಬುಂಡೆಕ್ಯಾತ.. ಬೂತಯ್ಯನ ನೆರಳಲ್ಲಿ

ಒಂದು ಅಮೋಘ ಚಿತ್ರದಲ್ಲಿ ಘಟಾನುಘಟಿಗಳ ಮಧ್ಯೆ ತಾನು ಪ್ರಚಂಡನಾಗಿದ್ದರೂ, ಸದ್ದಿಲ್ಲದೇ ಈ ಚಿತ್ರದಲ್ಲಿ ಎದ್ದು  ನಿಂತಿದ್ದು ಬಾಲಕೃಷ್ಣ ಅವರ ತಾಕತ್ತು. ಅವರು ನಂಬಿದ್ದು ಒಂದು ತತ್ವ.. "ಮನಸ್ಸಿಟ್ಟು ತನ್ನ ಕೆಲಸ ಮಾಡಿದರೆ, ತನ್ನ ಹೆಜ್ಜೆ ಗುರುತು ನೀರಿನಲ್ಲೂ ಮೂಡಿಸಬಹುದು". ಈ ತತ್ವವೇ ಅವರನ್ನು ಬೆಳ್ಳಿ ಪರದೆಯ ಮಹಾನ್ ನಕ್ಷತ್ರವನ್ನಾಗಿ ಮಾಡಿದ್ದು.

ಸಿದ್ಧಲಿಂಗಯ್ಯ ಅವರ ಅದ್ಭುತ ಚಿತ್ರ ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ತನ್ನ ಛಾಪನ್ನು ಮೂಡಿಸಿದ್ದು ಹಲವಾರು ರೀತಿ. ಒಂದು ರೀತಿಯಲ್ಲಿ ಶಕುನಿ ಮಾದರಿಯಲ್ಲಿ ಮೂಡಿದ ಪಾತ್ರ ಬಾಲಕೃಷ್ಣ ಅವರದು. ಶಕುನಿ ತನಗೆ ಮತ್ತು ತನ್ನ ಕುಟುಂಬಕ್ಕೆ ಮಾಡಿದ ಮೋಸ, ಕ್ರೌರ್ಯಕ್ಕೆ ತಕ್ಕ ಉತ್ತರ ನೀಡಲು ಕೌರವರ ಜೊತೆಯಲ್ಲಿಯೇ  ಸೇರಿಕೊಂಡು ಅವರ ವಂಶವನ್ನೇ ನಿರ್ಮೂಲ ಮಾಡುವ ವ್ಯಕ್ತಿತ್ವ ಅವರದು. ಆದರೆ ತಣ್ಣಗಿನ ಕ್ರೌರ್ಯ, ಕುಹಕ ನಗೆ, ಸೇಡು ಬಿಡದ ಪಾತ್ರ.

ಈ ಚಿತ್ರದಲ್ಲಿ ಬಾಲಕೃಷ್ಣ ಅವರದು ಅಂತಹುದೇ ಪಾತ್ರ. ಎಲ್ಲೂ ಎಲ್ಲೇ ಮೀರದೆ, ಪಾತ್ರದ ಮಿತಿಯಲ್ಲಿಯೇ ಈಜುತ್ತಾ ಇಡಿ ಚಿತ್ರದಲ್ಲಿ ಮೇಲಕ್ಕೆ ಏರದೆ ಕೆಳಕ್ಕೆ ಇಳಿಯದೆ ಸಮಾನಾಂತರವಾಗಿ ಸಿಗುವುದು ಅವರ ಪಾತ್ರ.

ಹಾಸ್ಯದಿಂದ ಶುರುವಾಗುವ ಅವರ ಪಾತ್ರ ಜೊತೆ ಜೊತೆಯಲ್ಲಿಯೇ ಆ ಊರಿನ ಜನತೆಗೆ ಹಚ್ಚಿಕೊಡುತ್ತಾ, ಬೂತಯ್ಯ ಮತ್ತು ಸಾಂಬಯ್ಯನ ಕುಟುಂಬದ ಮೇಲೆ ಕೋಪದ ಅಗ್ನಿಗೆ ತುಪ್ಪ ಹುಯ್ಯುತ್ತಲೇ, ಈ ಕಡೆಯೂ ಕೂಡ ಸಮಯಕ್ಕೆ ಬೇಕಾದ ಸಲಹೆಗಳನ್ನು ಕೊಡುತ್ತಾ ಬೂತಯ್ಯನ ಮನೆಯವರು ಕೋಪದಲ್ಲಿ ದಾರಿ ತಪ್ಪುವಂತೆ ವಿವೇಚನೆ ಕಳೆದುಕೊಳ್ಳುವಂತೆ ಮಾಡುವ ಪಾತ್ರದಲ್ಲಿ ಬೆಳಗಿದ್ದಾರೆ.

ಅವರ ಪಾತ್ರದ ಕೆಲವು ತುಣುಕುಗಳು.. ಚಿತ್ರದುದ್ದಕ್ಕೂ ನನಗೆ ಅನ್ನಿಸಿದ ರೀತಿ..
*****
"ಕವಿ ಕಟ್ಟಿದರೂ ಕಪಿ ಮೆಚ್ಚುವ ಹಂಗೆ ಇರಬೇಕು ಕಣ್ರೋ..
ಬೂತಯ್ಯನೆಂಬ ಬಂಗಿಯ ಸೊಪ್ಪಾ
ಭಸ್ಮವ ಮಾಡೋಕೆ ಬೆಂಕಿಯ ಹಚ್ಚಪ್ಪ
ಒಗ್ಗಟ್ಟಿನಿಂದ ಎಲ್ಲರೂ ಕೂಡಿ
ಮಗ್ಗುಲು ಮುರಿಯಬೇಕು ಸಮಯವ ನೋಡಿ
ಅರ್ಥವಾಯಿತೆನ್ರೋ..
ನಿಮಗೆಲ್ಲಿ ಅರ್ಥವಾಗಬೇಕು.. ಹೆಬ್ಬೆಟ್ಟು ಒತ್ತೋ ಮಡ್ಡಿ ಸಾಂಬ್ರಾಣಿಗಳು..
ಒಗ್ಗಟ್ಟು ಅಂದ್ರೆ ಒಬ್ಬಟ್ಟು ಅಂತೀರಾ.."

ಎಷ್ಟು ಸಲೀಸಾಗಿ ಒಂದು ಗ್ರಾಮದ ವ್ಯವಸ್ಥೆಯನ್ನು ತುಂಬಿಕೊಡುವ ಸಂಭಾಷಣೆಯನ್ನು ಹಾಗೆ ತಮ್ಮ ಶೈಲಿಯಲ್ಲಿ ಹೇಳುವ ರೀತಿ ಸೊಗಸಾಗಿದೆ.

ಈ ಮಾತಿಗೆ.. ಅವರ ಸಹಪಾಟಿಗಳು ಕುಹಕಮಾಡಿದಾಗ "ಜತೇಲಿ ಹುಟ್ಟಿದವರ್ನೆಲ್ಲಾ ಕೌರವ ಕೊಂದರೂ, ಅವರ ಕಡೆನೇ ಸೇರಿಕೊಂಡಿದ್ದ  ಯಾಕೆ? ಅವರ ವಂಶನ ನಿರ್ವಂಶ ಮಾಡೋಕೆ.. ಹಾಗೆ ಈ ಸಿಂಗ್ಳಯ್ಯ ಉರುಫ್ ಬುಂಡೆಕ್ಯಾತ ಬೂತಯ್ಯನ ಮನೆಯಲ್ಲಿ ಸೇರಿಕೊಂಡಿರೋದು.. ಅವರ ವಂಶನಾ ಬುಡ ಸಮೇತ ಕಿತ್ತಾಕೋಕೆ.. "

ಅವರ ಅಭಿನಯ.. ಒಂದು ಕಡೆ ತನ್ನ ಸ್ನೇಹಿತರು ತಮ್ಮ ಮೇಲೆ ಕುಹಕ ಮಾಡುತ್ತಿದ್ದಾರೆ ಎನ್ನುವ ಕೋಪ, ಇನ್ನೊಂದು ಕಡೆ ಬೂತಯ್ಯನ ಮನೆಯ ಮೇಲಿನ ಸೇಡು,  ಜೊತೆಯಲ್ಲಿ ತನ್ನ ಸ್ನೇಹಿತರ ಮುಂದೆ ತಾನು ಏನು ಎಂದು ತೋರಿಸುವ ಛಲ.. ಆ ಸಿಟ್ಟಿನಲ್ಲಿ ಬಂಗಿ  ಸೇದುವ ಭಂಗಿ ಸೂಪರ್ ಸೂಪರ್..
*****

ಬಂಗಿ ಚಟಕ್ಕೆ.. ದುಡ್ಡು ಬೇಕಾದಾಗ ತನ್ನ ಸ್ನೇಹಿತನ ಮನೆಗೆ ಬರುತ್ತಾರೆ.. ಅಲ್ಲಿ ಇನ್ನೇನು ದುಡ್ಡು ತೆಗೆದುಕೊಂಡು ಹೋಗಬೇಕು.. ಅಷ್ಟೊತ್ತಿಗೆ ಸ್ನೇಹಿತನ  ಹೆಂಡತಿ ಬರುತ್ತಾರೆ.. ಮಾತಿನ ಚಕಮಕಿ ನೆಡೆದು.. ಸ್ನೇಹಿತನ ಹೆಂಡತಿ.. ಬಾಲಕೃಷ್ಣ ಅವರಿಗೆ ಚೆನ್ನಾಗಿ ಬಯ್ತಾರೆ... ಜೊತೆಯಲ್ಲಿ ಬಂಗಿ ಸೇದುವ ಕೆಟ್ಟ ಚಟ ಕಲಿಸಿದ್ದಕ್ಕೆ ಛೀಮಾರಿ ಹಾಕುತ್ತಾರೆ..  ಹಾಲು ಬೇಕಾದರೆ ಕುಡಿ.. ಬಂಗಿ ಗಿಂಗಿ ಅಂತ ನನ್ನ ಗಂಡನನ್ನು ಕರೆದುಕೊಂಡು ಹೋಗಬೇಡ.. ಎಂದಾಗ..

"ಬೇಡಾ.. ಇಲ್ಲೇ ತನ್ಕೊಡ್ತೀವಿ.. ಕೇಸರಿ, ಬಾದಾಮಿ, ಸಕ್ಕರೆ ಅರೆದು ಹಾಲಿಗೆ ಹಾಕಿ ರಾಮರಸ ಮಾಡಿಕೊಡು.. ಸುಟ್ಟೋನು ಕೆಟ್ಟ ಅರೆದೋನು ಮೆರೆದ ಅಂತ ನಿನ್ನ ಹೆಸರನ್ನು ಹೇಳಿಕೊಂಡು ಹಾಯಾಗಿ ಇಲ್ಲೇ ಕುಡ್ಕೊಂಡು ಕೂತಿರ್ತೀವಿ.. "

ಈ ದೃಶ್ಯದಲ್ಲಿ ಕುಶಿ ಕೊಡುವುದು.. ತನ್ನನ್ನು ಬಯ್ದು ಹೀಯಾಳಿಸಿದರು, ಸಿಕ್ಕ ಅವಕಾಶವನ್ನು ಅಚಾನಕ್ ಆಗಿ ಎತ್ತಿಕೊಂಡು ಹೊಸ ರೂಪ ಕೊಡುವುದು, ಮತ್ತು ಆ ಸಂಭಾಷಣೆ ಹೇಳುವಾಗ ಅಂಗೀಕ ಅಭಿನಯ.

*****

ಊರಿನಲ್ಲಿ ಎತ್ತಿನ ಗಾಡಿ ಸ್ಪರ್ಧೆ ನಡೆದಾಗ, ಗುಳ್ಳನ ಎತ್ತುಗಳು ಗೆಲ್ಲುತ್ತವೆ, ಆಗ ಬೂತಯ್ಯ ಹೇಳುವ ಸಂಭಾಷಣೆ
"ಗುಳ್ಳನ ಎತ್ತುಗಳು ಗೆದ್ದರೂ, ಭೈರನ ಹೋರಿಗಳು ಮೈ ತುಂಬಿಕೊಂಡು ಲಕ್ಷಣವಾಗಿವೆ"

ಪಕ್ಕದಲ್ಲಿಯೇ ನಿಂತಿದ್ದ ಬಾಲಕೃಷ್ಣ ಹೇಳುವ ಮಾತು "ಬಿತ್ತಾ ಕಣ್ಣು.. ಸರಿ" (ಕೆನ್ನೆ ಸವರಿಕೊಂಡು ಹೇಳುವ ಮಾತು.. ಬೂತಯ್ಯನ ಕ್ರೂರತೆಯನ್ನು ಹಾಗೆ ಕಣ್ಣ ಮುಂದೆ ತಂದು ನಿಲ್ಲಿಸುತ್ತೆ)..

ಈ ದೃಶ್ಯ ಕೇವಲ ಒಂದು ಮೂವತ್ತು ಸೆಕೆಂಡ್ ಅಷ್ಟೇ.. ಜೊತೆಯಲ್ಲಿ ಬಾಲಕೃಷ್ಣ ಹೇಳುವ ಮಾತು ಮೂರೇ ಪದ.. ಆದ್ರೆ ಅದರಲ್ಲಿ ತುಂಬಿರುವ ಅರ್ಥ.. ಅಗಾಧ.. ಇದು ಬಾಲಕೃಷ್ಣ ಅವರ ಪರಿಣಾಮಕಾರಿ ಅಭಿನಯದ ಗುಟ್ಟು.

*****

ಭೈರನ ಹೋರಿಯನ್ನು ಬೂತಯ್ಯ ಕದ್ದು ಮಾರಿಬಿಟ್ಟಿರುತ್ತಾನೆ.. ಆ ಹೋರಿಗಳನ್ನು ಹುಡುಕಿಕೊಂಡು ಬರುವ ಭೈರನಿಗೆ ಬಾಲಕೃಷ್ಣ ಹೇಳುವ ಮಾತು

" ನಮ್ಮ ಮಾವ ಬೂತಯ್ಯನ ಕಣ್ಣಿಗೆ ಬಿದ್ದು, ಸಂತೇಲಿ ಮಾರಿದ್ದು ಆಯ್ತು, ಅದರ ಮೈಮೂಳೆ ಗೋರಿನೂ ಆಗೋಯ್ತು.. ಈಗ ನಿನ್ನ ಹೊಟ್ಟೆ ಉರಿ ತೀರಿಸ್ಕೋ, ನಿನ್ನ ಕಡೆ ಹತ್ತು ಜನಕ್ಕೆ ಹೇಳಿ ಗುಂಪು ಕಟ್ಟು, ಬೂತಯ್ಯನಿಗೆ ಸರಿಯಾದ ಗತಿ ಕಾಣಿಸು.. ನಾ ಹೇಳಿದೆ ಅಂತ ಹೇಳಬೇಡ"

ಈ ಕಡೆ ಭೈರನಿಗೆ ಸಮಾಧಾನ ಮಾಡಿದ ಹಾಗೆ, ಆ ಕಡೆ ಅವನನ್ನು ಬೂತಯ್ಯನ ಎದಿರು ಎತ್ತಿಕಟ್ಟುವುದು, ಈ ದೃಶ್ಯದಲ್ಲಿ ಮಿಂಚುವುದು ಸಂಭಾಷಣೆಯಲ್ಲಿ ಏರಿಳಿತ, ಮತ್ತು ಅಂಗೀಕ ಅಭಿನಯ, ನೊಂದವರ ಕೋಪದ ಉರಿಗೆ ಸರಿಯಾಗಿ ಹದವಾಗಿ ತುಪ್ಪ ಸುರಿಯುವುದು.
****
ಬೂತಯ್ಯನಿಗೆ ಊರಿನ ಸಭ್ಯಸ್ಥ ದೇವಯ್ಯನ ಮೇಲೆ ಕಣ್ಣಿರುತ್ತದೆ.. ದೇವಯ್ಯ ಮಾತ್ರ ಬೂತಯ್ಯನ ಕಪಿಮುಷ್ಟಿಗೆ ಸಿಕ್ಕಿರೋಲ್ಲ.. ಯಾವುದೇ ಕಾರಣಕ್ಕೆ ಊರಿನವನ್ನು ಕಾಪಾಡಲು ದೇವಯ್ಯ ಸಾಲಕ್ಕೆ ಜಾಮೀನಾಗಿ ನಿಲ್ಲುತ್ತಾನೆ.

"ದೇವಯ್ಯ ಒಬ್ಬ ತಪ್ಪಿಸಿಕೊಂಡಿದ್ದ.. ಈಗ ಅವನು ಭೂತಕ್ಕೆ ಬಲಿಯಾಗಿ ಹೋದ" ಒಂದು ರೀತಿಯಲ್ಲಿ ವಿಷಾದ ತುಂಬಿದ ಮಾತು, ಜೊತೆಯಲ್ಲಿಯೇ ತಣ್ಣಗಿನ ಆಕ್ರೋಶ.. ಎರಡು ಹದವಾಗಿ ಬೆರೆಸಿದ ಸಂಭಾಷಣಾ ಶೈಲಿ... ಬಾಲಕೃಷ್ಣ ಅವರಿಗೆ ಮಾತ್ರ ಸಾಧ್ಯ.
*****

ಬೂತಯ್ಯ ಲಕ್ವ ಹೊಡೆದು ಪ್ರಾಣ ಬಿಡುತ್ತಾನೆ.. ಅವನನ್ನು ದೆವ್ವ ಕಂಡ ಹಾಗೆ ದ್ವೇಷಿಸುವ ಊರಿನ ಜನ ಸಹಾಯಕ್ಕೆ ಬರೋಲ್ಲ.. ಆಗ "ರಾತ್ರಿಯೆಲ್ಲಾ ಹಳ್ಳಿ ಹಳ್ಳಿ ತಿರುಗಿಬಂದೆ, ಮಾವನ ಹೆಣ ಹೊರೋಕೆ ಒಬ್ಬನು ಸಿಗಲಿಲ್ಲ, ಅರೆ ದುಡ್ಡು ಕೊಡ್ತೀನಿ ಬನ್ರೋ ಅಂದರೂ ಅದಕ್ಕೂ ಉಹೂಂ... ಎಷ್ಟು ಹಣ ಸಂಪಾದನೆ ಮಾಡಿದರೆ ಏನು.. ಕೊನೆಗಾಲದಲ್ಲಿ ಗತಿ ಕಾಣಿಸೋಕೆ ನಾಲ್ಕು ಜನ ಸಿಗಲಿಲ್ವಲ್ಲ.. "

ಜೀವನದಲ್ಲಿ ಪ್ರೀತಿ,  ಮಮತೆ, ವಿಶ್ವಾಸ ಇವುಗಳು ಮುಖ್ಯ ಹಣವಲ್ಲ ಎನ್ನುವ ಮಾತನ್ನು ವಿಷಾದ ಭರಿತ ಮಾತುಗಳಲ್ಲಿ ಮನಕ್ಕೆ ದಾಟಿಸುವ ಕೆಲಸ ಈ ಸಂಭಾಶಣೆಯಲ್ಲಿದೆ..

*****

"ಬಿಡು ಮಾವ ಅವನ ಬುರುಡೆ ಚೂರು ಚೂರು ಮಾಡಿ ಬುದ್ಧಿ ಕಲಿಸುತ್ತೀನಿ" ಎಂದು ಸಾಂಬಯ್ಯ ಎದ್ದು ನಿಂತಾಗ "ಆಮೇಲೆ ಪೋಲಿಸ್ನೋರು ಸುಮ್ಮನೆ ಬಿಟ್ಟು ಬಿಡ್ತಾರೆಯೇ.. ನಿಮ್ಮಪ್ಪ ಗುಟ್ಟಾಗಿ ಗುಂಡು ಹಾರಿಸಿ ಎಷ್ಟೊಂದು ಜನರನ್ನು ಕೊಂದಿಲ್ಲ.. ಹಾಗೆ ಮಾಡಬೇಕೆ ಹೊರತು .. ಬೀದಿಯಲ್ಲಿ ಈಗೆಲ್ಲ ಮಾಡಬಾರದು.. .. ಕಾಲಬರುತ್ತೆ "

ಕೋಪದಲ್ಲಿ ವ್ಯಾಘ್ರನಾಗಿ ನಿಂತ ಸಾಂಬಯ್ಯನನ್ನು ಮಾತಿನಲ್ಲಿ ಹಿಡಿದು ಹಾಕಿ, ತಲೆ ಸವರಿ  ಸಮಾಧಾನ ಮಾಡುತ್ತಾ, ವಕೀಲನ ಬಳಿಗೆ ಬರುತ್ತಾರೆ.

ಆ ವಕೀಲ... ಆ ಸೆಕ್ಷನ್ ಈ ಸೆಕ್ಷನ್ ಅಂತ ಹೇಳಿ "ಈ ರೀತಿ ಮಾಡಿದರೆ" ಎಂದು ನಿಲ್ಲಿಸುತ್ತಾರೆ.. ಆಗ ಬಾಲಕೃಷ್ಣ "ಅವರ ಕಥೆ ಮುಗೀತು ಅಂತೀರಾ.. ಮುಗಿಸಿ" ಕೋರ್ಟು, ಕಟ್ಟಲೆ  ಇದರ ಬಗ್ಗೆ ವಿರಕ್ತಿ ತುಂಬಿದ ಮಾತುಗಳನ್ನು ಬರಿ ಐದು ಪದಗಳಲ್ಲಿ ಹೇಳುವ ರೀತಿಗೆ ಯಾರು ಸಾಟಿ ಹೇಳಿ.

ಬೆಂದ ಮನೆಯಲ್ಲಿ ಹಿರಿದಿದ್ದೆ ಲಾಭ ಎನ್ನುವಂತೆ.. ವಕೀಲನ ಹತ್ತಿರ "ಸ್ವಾಮೀ ರಸ ಇರುವ ಕಬ್ಬು.. ಎಷ್ಟು ಬೇಕೋ ಅಷ್ಟು ಹೀರಿಕೊಳ್ಳಿ.. ಇಲ್ಲಿ ಒಂದೆರಡು ತೊಟ್ಟು ಕೊಡವಿಬಿಡಿ.. " ಆ ರಾಗಭರಿತ ಮಾತುಗಳು, ಸಿಕ್ಕ ಅವಕಾಶವನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ತೋರಿಸುತ್ತದೆ.

ಕಡೆಯ ದೃಶ್ಯದಲ್ಲಿ.. ಊರಿನ ಜನರೆಲ್ಲಾ ಸಾಂಬಯ್ಯನ ಮನೆಯನ್ನು ಲೂಟಿ ಮಾಡಲು ಬಂದಾಗ, ಅವರ ಜತೆಯಲ್ಲಿ ತನ್ನ ಮಾವನು ನಿಂತಿದ್ದನ್ನು ನೋಡಿದಾಗ, ಆಶ್ಚರ್ಯ, ದಿಗ್ಭ್ರಮೆ ವ್ಯಕ್ತಪಡಿಸುತ್ತಾನೆ ಸಾಂಬಯ್ಯ.. ಆಗ ಉದ್ರಿಕ್ತ ಮೊಗದಲ್ಲಿಯೇ ತಲೆ ಅಲ್ಲಾಡಿಸುವುದು ಬಾಲಕೃಷ್ಣ, ಈ ದೃಶ್ಯದಲ್ಲಿ ಸಂಭಾಷಣೆ ಇಲ್ಲ, ಆದರೆ ಮುಖಭಾವ.. ಆಹಾ.

*****

ಈ ಚಿತ್ರದಲ್ಲಿ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಬೆಳಗಿದೆ, ಜೊತೆಯಲ್ಲಿ ಆ ಪಾತ್ರವನ್ನು ತನ್ನ ಹೆಗಲ ಮೇಲೆ ನಿಲ್ಲಿಸಿಕೊಂಡು ಅಭಿನಯ ನೀಡಿರುವುದು ಬಾಲಕೃಷ್ಣ ಅವರ ಶಕ್ತಿ. ಪಾತ್ರಕ್ಕೆ ಎಲ್ಲಿಯೂ ಲೋಪ ಬರದಂತೆ ಅಭಿನಯಿಸಿರುವ ಎಲ್ಲಾ ನಟ ನಟಿಯರ ಮಧ್ಯೆ ತನ್ನದೇ ರೀತಿಯಲ್ಲಿ ಗುಪ್ತಗಾಮಿನಿಯಂತೆ ಅಭಿನಯಿಸಿ, ಪ್ರತಿ ಹಂತದಲ್ಲೂ ತನ್ನ ಇರುವಿಕೆಯನ್ನು ತೋರುವ ಅಭಿನಯ ಬಾಲಕೃಷ್ಣ ಅವರಿಂದ ಮೂಡಿ ಬಂದಿದೆ. ಇದಕ್ಕೆ ನಿರ್ದೇಶಕ ಸಿದ್ಧಲಿಂಗಯ್ಯ, ಸಂಭಾಷಣಕಾರ ಹುಣಸೂರು ಕೃಷ್ಣಮೂರ್ತಿಯ ಜೊತೆ ಜೊತೆಯಲ್ಲಿಯೇ ಬಾಲಕೃಷ್ಣ ಕೂಡ ಅಂಕಗಳಿಸುತ್ತಾರೆ.

*********************

ಬಾಲಕೃಷ್ಣ ಅವರ ಅಭಿಮಾನಿಯಾದ ನನಗೆ ಬಾಲಕೃಷ್ಣ ಸಾಕ್ಷಾತ್ ದೇವರೇ ಹೌದು. ನನಗೆ ಅವರ ಮೇಲಿನ ಅಭಿಮಾನ ಕೆಲವು ಕಡೆ ಅತಿರೇಕ ಎಂದು ಓದುಗರಿಗೆ ಅನಿಸಿದರೆ, ಅದು ನನ್ನ ಅಭಿಮಾನದ ಮತ್ತು ಬರಹದ ದೌರ್ಬಲ್ಯ ಎನ್ನಬಹುದೇ ಹೊರತು, ತುಸುವೂ ಕೂಡ ಕೊಂಕಿಲ್ಲದ ಬಾಲಕೃಷ್ಣ ಅವರ ನಟನೆ ಅಮೋಘ ಎಂಬುದು ನನ್ನ ಅಭಿಪ್ರಾಯ...

ಮತ್ತೆ ಬಾಲಕೃಷ್ಣ ಅವರ ಇನ್ನೊಂದು ಅದ್ಭುತ ಕಲಾಚಿತ್ರರತ್ನದ ಜೊತೆ ಮತ್ತೊಮ್ಮೆ ಬರುತ್ತೇನೆ.. ಓದಿ ನಿಮ್ಮ ಅಭಿಪ್ರಾಯ.... ಇರಲಿ ಇರಲಿ... 

Friday, January 1, 2016

ಜೀವನದಲ್ಲಿ ಆನಂದ ಉಕ್ಕಿಸುವ ಆನಂದ್ - 1970 - (ಹಿಂದಿ)

ನೋವು ಎದೆಯೊಳಗೆ ನಲಿವು ತುಟಿಯ ಮೇಲೆ ಎನ್ನುವ ಅದ್ಭುತ ಸಂದೇಶ ಹೊತ್ತ ಚಿತ್ರ ಇದು.

ಈ ಚಿತ್ರದ ಬಗ್ಗೆ ಬರೆಯಲು ಪ್ರಯತ್ನವನ್ನೇ ಮಾಡಿರಲಿಲ್ಲ. ಇದೊಂದು ಅದ್ಭುತ ಚಿತ್ರಅನಿಸಲೇ ಇಲ್ಲ ಬದಲಿಗೆ ಇದೊಂದು ಸಾರ್ವಕಾಲಿಕ ಉತ್ಸಾಹ ಬತ್ತದ ಚಿಲುಮೆ ಎಂಬುದು ನನ್ನ ಅಭಿಪ್ರಾಯ. 

ಜೀವನದಲ್ಲಿ ಯಾವಾಗ ಬೇಕಾದರೂ ಈ ಚಿತ್ರವನ್ನು ನೋಡಿ ಅರಗಿಸಿಕೊಂಡು, ಆಲಂಗಿಸಿಕೊಂಡು, ಈ ಚಿತ್ರದಲ್ಲಿ ಬರುವ ಹೂರಣದಿಂದ ಕಲಿಯಬಹುದಾದ ಅವಕಾಶ ಸದಾ ಸಿಕ್ಕೆ ಸಿಗುತ್ತದೆ. 

ಜಲ ಒಂದು ಸಣ್ಣ ಬಿರುಕಿನಿಂದ ಹೊರಗೆ ಬಂದು, ಝರಿಯಾಗಿ,  ತೊರೆಯಾಗಿ, ನದಿಯಾಗಿ, ಕಡಲು ಸೇರುವ ತನಕ ಒಂದೇ ರುಚಿ ಇರುವ ಹಾಗೆ, ಈ ಚಿತ್ರದಲ್ಲಿ ಯಾವ ಕಾಲಘಟ್ಟದಲ್ಲಿ ನೋಡಿದರೂ ನಿಮಗೆ ಒಂದೇ ತೆರನಾದ ಅನುಭವ ಕೊಡುತ್ತದೆ. 

ಇಡಿ ಚಿತ್ರದಲ್ಲಿ ಪ್ರತಿ ಫ್ರೇಮ್ ನಲ್ಲಿ  ಕಾಣುವ ರಾಜೇಶ್ ಖನ್ನ ಈ ಚಿತ್ರದಲ್ಲಿ ಬರಿ ಅಭಿನಯಿಸಿಲ್ಲ, ಬದಲಿಗೆ ತಾವೇ ಪಾತ್ರವಾಗಿಬಿಟ್ಟಿದ್ದಾರೆ. ಈ ರೀತಿಯ ಕಥೆಯನ್ನು ಎಲ್ಲೂ ಎಳೆಯದೆ, ಪ್ರತಿ ದೃಶ್ಯದಲ್ಲಿಯೂ ನಗು, ಸಂದೇಶ ಹೊತ್ತು ಬರುವ ಹಾಗೆ ಚಿತ್ರೀಕರಣ ಮಾಡಿರುವುದು ವಿಶೇಷ. 

ಸಾಮಾನ್ಯ ಕಥಾನಾಯಕ ಅಂತ್ಯದಲ್ಲಿ ಸಾವು ಬರುತ್ತದೆ ಎಂದು ಒಬ್ಬರಿಗೆ ಗೊತ್ತಿರುತ್ತದೆ, ಇಲ್ಲವೇ ಬರಿ ಕಥಾನಾಯಕನಿಗೆ ಮಾತ್ರ ಗೊತ್ತಿರುತ್ತದೆ. ಆದರೆ  ಇಲ್ಲಿ ಬರುವ ಎಲ್ಲಾ ಮುಖ್ಯ ಪಾತ್ರಗಳಿಗೆ ಆನಂದ್ ತನ್ನ ಅಂತ್ಯಕ್ಕೆ ಕೆಲವೇ ವಾರಗಳು, ದಿನಗಳು ಇದೆ ಎಂದು ಅರಿತಿರುತ್ತಾರೆ. 

ಆದರೆ ಯಾರೊಬ್ಬರು ಸುಮ್ಮನೆ ಅಳುವುದಾಗಲಿ, ಅಥವಾ ಆಗದಲೇ ಇರುವ ಸಮಾಧಾನದ ಮಾತುಗಳನ್ನು ಹೇಳುವುದಿಲ್ಲ. ಬದಲಿಗೆ ಎಲ್ಲರೂ ಮುಂದಿನ ಜನುಮ, ಅಥವಾ ನಾನು  ಅಲ್ಲಿಗೆ ಬರುತ್ತೇನೆ ಎನ್ನುವ ವಿಶ್ವಾಸದ ಮಾತುಗಳನ್ನು ಆಡುತ್ತಾರೆ. ಅದು ನಿಜವಾಗಿಯೂ ಈ ಚಿತ್ರವನ್ನು ರತ್ನವನ್ನಾಗಿ ಮಾಡಿರುವ ಅಂಶಗಳು. 

ಅದ್ಭುತ ಸಂಭಾಷಣೆ, ಅದ್ಭುತ ಸಾಹಿತ್ಯ, ಸಂಗೀತ, ಗಾಯನ ಈ ಚಿತ್ರಕ್ಕೆ ಭದ್ರ ಬುನಾದಿ ಕೊಟ್ಟಿವೆ. ಆದರೆ ಇವಿಷ್ಟು ನಿಂತಿರೋದು  ಸರಳ ಕಥೆಯನ್ನು ಅತ್ಯುತ್ತಮ ಚಿತ್ರಕಥೆಯನ್ನಾಗಿ ಮಾಡಿ, ನವಿರಾದ ಹಾಸ್ಯ, ತುಂಬಿ ಜೀವನದ ಹಾದಿಗೆ ಹೇಗೆ ಸಿದ್ಧರಾಗಬೇಕು ಎಂದು ಚಿತ್ರದ ಮೂಲಕ ಎಲ್ಲಿಯೂ ಉಪದೇಶದ ತರಹ ನೀಡದೆ ಗುಪ್ತಗಾಮಿನಿಯ ಹಾಗೆ ನುಸುಳಿ ನೋಡುವ ವೀಕ್ಷಕರಿಗೆ ಅರ್ಥವಾಗುವ ಹಾಗೆ ಚಿತ್ರಿಸಿರುವುದು. 

ನನಗೆ ತುಂಬಾ ತುಂಬಾ ಇಷ್ಟವಾಗುವ ದೃಶ್ಯಗಳು : 

೧) ಜಾನಿ ವಾಕರ್ ರಾಜೇಶ್ ಖನ್ನಾರನ್ನು ನೋಡಲು ಬರುತ್ತಾರೆ, ನಂತರ ನಗುತ್ತಲೇ ಮಾತಾಡುತ್ತಾ ಕಣ್ಣೀರು ಹಾಕಿಕೊಂಡು ಹೊರ ಬರುತ್ತಾರೆ 
೨) ಚಿತ್ರದ ಆರಂಭದಲ್ಲಿ ಅಮಿತಾಬ್ ಬಚ್ಚನ್ ತನ್ನ ವೈದ್ಯಕೀಯ ವೃತ್ತಿಯ ಬಗ್ಗೆ ನಿರಾಸೆ ತುಂಬಿದ್ದರೂ, ಅಷ್ಟೇ ಪ್ರೌಡಿಮೆ ಇರುತ್ತದೆ, ಹಾಗಾಗಿ, ರಾಜೇಶ್ ಖನ್ನ ಪಾತ್ರಕ್ಕೆ ಬಂದಿರುವ ರೋಗಕ್ಕೆ ಚಿಕಿತ್ಸೆ ಇಲ್ಲವೇ ಇಲ್ಲ ಎಂದು ಮಾತಾಡುತ್ತಾರೆ, ಆದರೆ ಬರುತ್ತಾ ಬರುತ್ತಾ ಚಿತ್ರದ ಅಂತ್ಯದಲ್ಲಿ, ತನ್ನ ಜ್ಞಾನ ಬದಿಗಿಟ್ಟು, ತನ್ನ ಗೆಳೆಯನನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ (ರಘು ಕಾಕ ದೇವರ ಪ್ರಸಾದ ತರಲು ಹೋಗುವಾಗ, ಆದಷ್ಟು ಬೇಗ ಬನ್ನಿ ಎಂದು ಹೇಳುವುದು, ಡಾ. ಶಾಸ್ತ್ರಿ ಬಳಿಯಲ್ಲಿ ಸಿಗಬಹುದಾದ ಔಷಧಿಯಿಂದ ಗುಣಮುಖ ಆಗಬಹುದು ಎಂದು ಅದನ್ನು ತರಲು ಹೋಗುವುದು)

೩) ಆರಂಭದಲ್ಲಿ ಆನಂದ್ ಪಾತ್ರವನ್ನು ಕಂಡರೆ ಕೋಪಗೊಳ್ಳುವ ಅವರು ಚಿತ್ರ ಸಾಗುತ್ತಾ ಹೋದಹಾಗೆ ಆ ಪಾತ್ರವು ತನ್ನ ಮನಸ್ಸಿಗೆ ಹತ್ತಿರ ಎಂದು ಮಾರ್ಪಾಡಾಗುವ ರೀತಿ. 

೪) ನೀ ಎಲ್ಲಿಗೂ ಹೋಗಬೇಡ, ಸಾಯುವುದಾದರೆ ನೀ ಇಲ್ಲೇ, ನನ್ನ ಮಡಿಲಲ್ಲಿ ಸಾಯಬೇಕು ಎಂದು ಹೇಳುವಾಗ ಬಚ್ಚನ್ ಕಣ್ಣಲ್ಲಿ ಕಾಣುವ ಪ್ರೀತಿ ಆಹ್. 

೫) ರಾಜೇಶ್ ಖನ್ನ ... ಈ ಪಾತ್ರದ ಬಗ್ಗೆ ಏನು ಬರೆಯಲಿ, ಚಿತ್ರದ ಆರಂಭದ ೨೦ ನಿಮಿಷಗಳು ನಿಧಾನಗತಿಯಲ್ಲಿ ಸಾಗುತ್ತಿರುತ್ತದೆ, ಇವರು ಬಂದ ಕ್ಷಣದಿಂದ ಚಿತ್ರ ಅಂತ್ಯ ಆಗುವವರಗೆ ಚಿತ್ರದ ಓಟ ಅದ್ಭುತ.  ಪ್ರತಿ ದೃಶ್ಯದಲ್ಲಿಯೂ ಅವರೇ ಇದ್ದರೂ, ಎಲ್ಲಿಯೂ ಕೂಡ ಅರೆ ಯಾಕೆ ಅನ್ನಿಸುವುದಿಲ್ಲ. ಇಡಿ ಚಿತ್ರವನ್ನು ಅಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದಾರೆ. 

೬) ನರ್ಸ್ ಪಾತ್ರದ ಲಲಿತ ಪವಾರ್, ಡಾ. ಪ್ರಕಾಶ್ ಪಾತ್ರದ ರಮೇಶ್ ಡಿಯೋ, ಸುಮನ್ ಪಾತ್ರಧಾರಿ, ರೇಣು ಪಾತ್ರ, ಎಲ್ಲವೂ ರಾಜೇಶ್ ಖನ್ನ ಪಾತ್ರಕ್ಕೆ ಅದ್ಭುತ ಸಾತ್ ನೀಡಿದೆ. 

  •  ಜೀವನ ಉದ್ದ ಇರಬಾರದು ದೊಡ್ಡದಾಗಿರಬೇಕು 
  • ಎಲ್ಲಿಯ ತನಕ ಬದುಕಿದ್ದೇನೋ ನಾ ಸತ್ತಿರೊಲ್ಲ, ಸತ್ತ ಮೇಲೆ ನಾನೇ ಇಲ್ಲಾ
  • ನಾ ನಿನಗೆ ಏನು ಆಶೀರ್ವಾದ ನೀಡಲಿ, ನನ್ನ ಆಯಸ್ಸು ನಿನಗೆ ಕೊಡುತ್ತೀನಿ ಅಂತ ಹೇಳೋಕು ಆಗೋಲ್ಲ 
  • ಪ್ರತಿ ನಗುವಿನ ಹಿಂದೆ ಬರಿ ಖುಷಿ ಮಾತ್ರ ಇರೋಲ್ಲ 
  • ನಮ್ಮ ತಪ್ಪು ಏನು ಅಂದರೆ, ನಾಳೆ ಬರುವ ಕಷ್ಟಗಳನ್ನು ಇಂದಿಗೆ ತಂದುಕೊಂಡು, ಇವತ್ತಿನ ಖುಷಿ ಹಾಳುಮಾಡಿಕೊಳ್ಳುತ್ತೇವೆ. 
  • ನಾ ಆಮೇಲೆ ಇರೋಲ್ಲ ಅಂತ ಅಳದೆ, ನಾ ಇರುವ ತನಕ ನಿನ್ನ ಇರಬಹುದಾದ ಸಾವಿರಾರು ಕ್ಷಣಗಳನ್ನು ಯಾಕೆ ಕಳೆದುಕೊಳ್ಳುತ್ತೀಯ 
  • ಅವರಿಗೆ ರೋಗವಿಲ್ಲ, ಆದರೆ ರೋಗವಿದೆ ಎನ್ನುವ ಅವರ ಸಂಶಯಕ್ಕೆ ಚಿಕಿತ್ಸೆ ಕೊಡುತ್ತೇನೆ 
  • ಹಾಲು ಮಾರಿದರೆ ನೀರು ಸೇರಿಸುತ್ತಿದ್ದೆ, ವಕೀಲ ಆಗಿದ್ದರೆ ಕೊಲೆಗಾರನ ಹತ್ತಿರ ದುಡ್ಡು ತೆಗೆದುಕೊಂಡು ಅವನನ್ನು ಉಳಿಸುತ್ತಿದ್ದೆ, ಆದರೆ ಡಾಕ್ಟರ್ ಆಗಿರೋದರಿಂದ ಜನ ನೋವನ್ನು ಕಡಿಮೆ ಮಾಡುತ್ತಿದ್ದೇನೆ, ಅದು ಕುಶಿ ಕೊಡುತ್ತದೆ
  • ಒಬ್ಬ ಸತ್ತಿಲ್ಲ, ಇನ್ನೊಬ್ಬ ಸಾಯೋಕೆ ಹುಟ್ಟಿದ 
ಇಡಿ ಚಿತ್ರದಲ್ಲಿ ಬರುವ ಪ್ರತಿ ಸಂಭಾಷಣೆಯ ತುಣುಕು ಕೂಡ ಒಂದು ಸಂದೇಶ ಭರಿತ ಮಾತುಗಳೇ. ಅಂತ್ಯದಲ್ಲಿ ಬರುವ ಒಂದು ಚಿಕ್ಕ ಕವಿತೆ ಮತ್ತು ಸಂಭಾಷಣೆ ಕಣ್ಣಲ್ಲಿ ನೀರು ತರಿಸುತ್ತದೆ.

ರಾಜೇಶ್ ಖನ್ನ ಚಿತ್ರದಲ್ಲಿ ಅಮಿತಾಭ್ ಪಾತ್ರವನ್ನು ಬಾಬು ಮೊಶಾಯ್ ಎಂದು ಗೋಳು ಹುಯ್ದುಕೊಳ್ಳುವ ರೀತಿ ಇಷ್ಟವಾಗುತ್ತದೆ. ಸ್ನೇಹ ಎಂದರೆ ಹೀಗಿರಬೇಕು, ಒಬ್ಬರ ನೋವು ಒಬ್ಬರಿಗೆ ಅರ್ಥವಾಗುತ್ತದೆ, ಇಬ್ಬರಿಗೂ ಗೊತ್ತು ಒಬ್ಬರನ್ನು ಒಬ್ಬರು ಹೇಗೆ ಕಾಪಾಡಿಕೊಳ್ಳಬೇಕು ಎಂದು.  ಸ್ನೇಹದ ಪರಿಧಿ ಸುಂದರವಾಗಿ ಅನಾವರಣಗೊಂಡಿದೆ. 

ಚಿತ್ರ ತಂಡ 
ಸಂಭಾಷಣೆ - ಗುಲ್ಜಾರ್ 
ಸಾಹಿತ್ಯ - ಗುಲ್ಜಾರ್ ಮತ್ತು ಯೋಗೇಶ್ 
ಗಾಯನ - ಮನ್ನಾಡೆ, ಮುಕೇಶ್ ಮತ್ತು ಲತಾ 
ಸಂಗೀತ - ಸಲೀಲ್ ಚೌಧರಿ 
ಛಾಯಾಗ್ರಹಣ - ಜಯವಂತ್ ಪಥಾರೆ 
ಚಿತ್ರಕಥೆ - ಹೃಷಿಕೇಶ್ ಮುಖರ್ಜೀ, ಗುಲ್ಜಾರ್, ಡಿ. ಎನ್. ಮುಖರ್ಜೀ, ಬಿಮಲ್ ದತ್ತಾ 
ನಿರ್ಮಾಣ - ಎನ್ ಸಿ ಸಿಪ್ಪಿ ಮತ್ತು ಹೃಷಿಕೇಶ್ ಮುಖರ್ಜೀ
ಕಥೆ, ಸಂಕಲನ ಮತ್ತು ನಿರ್ದೇಶನ - ಹೃಷಿಕೇಶ್ ಮುಖರ್ಜೀ

ರಾಜೇಶ್ ಖನ್ನ ಮತ್ತು ಅಮಿತಾಭ್ ಒಟ್ಟಿಗೆ ಮೊದಲ ಬಾರಿಗೆ ನಟಿಸಿದ ಈ ಚಿತ್ರದಲ್ಲಿ ಜಾದೂ ಎನ್ನಿಸುವಂಥಹ ಅಭಿನಯ ನೀಡಿದ್ದಾರೆ.  ಪ್ರತಿ ಪಾತ್ರವೂ ಕೂಡ ಇಲ್ಲಿ ಮುಖ್ಯ ಪಾತ್ರವಾಗುತ್ತದೆ. ಯಾವುದೇ ಪಾತ್ರ ಅಥವಾ ಸನ್ನಿವೇಶ ಬೇಡ ಅನ್ನುವ ಹಾಗೆ ಇಲ್ಲ. 

ಅಯಸ್ಕಾಂತ ಕಬ್ಬಿಣದ ತುಂಡುಗಳನ್ನು ಆಕರ್ಷಿಸುವ ಹಾಗೆ, ಈ ಚಿತ್ರದಲ್ಲಿ ಬರುವ ಪಾತ್ರಗಳು ತಮಗೆ ಅರಿವಿಲ್ಲದೆ ರಾಜೇಶ್ ಖನ್ನ ಪಾತ್ರದ ಕಾಂತತ್ವಕ್ಕೆ ಆಕರ್ಷಿತಗೊಂಡು ಕಾಂತೀಯ ಗುಣ ಹೊಂದುತ್ತಾರೆ.

ಪ್ರತಿ ಕ್ಷಣವನ್ನು ಆನಂದಿಸಬೇಕು, ಆದರಿಸಬೇಕು, ಧನಾತ್ಮಕವಾಗಿ ಜೀವನವನ್ನು ನೋಡಬೇಕು, ನಮ್ಮಲ್ಲಿ ಏನೇ ನ್ಯೂನ್ಯತೆ ಇದ್ದರೂ ಕೂಡ ಖುಷಿಯಾಗಿ ಆ ಕ್ಷಣವನ್ನು ಅನುಭವಿಸಿದರೆ, ಅದು ನಾವು ಜೀವನವನ್ನು ನೋಡುವ ರೀತಿಯನ್ನು
ಬದಲಾಯಿಸುತ್ತದೆ ಎನ್ನುವ ಸುಂದರ ಸಂದೇಶ ಈ ಚಿತ್ರ ಕೊಡುತ್ತದೆ.

ಮನಸ್ಸಿಗೆ ಮುದ ನೀಡುವ ಈ ಚಿತ್ರ ಸಾರ್ವಕಾಲಿಕ ಬತ್ತದ  ಉತ್ಸಾಹದ ಚಿಲುಮೆ. 

Monday, November 2, 2015

ಅಭಿಮಾನದ ಕೂಸು - ಟಿ ಎನ್ ಬಾಲಕೃಷ್ಣ - ಆರಂಭ


ಕನ್ನಡ ಚಿತ್ರಗಳನ್ನು ಮೊದಲಿಂದ ಆಸಕ್ತಿಯಿಂದ ನೋಡುತ್ತಾ ಬಂದ ನನಗೆ, ಅದನ್ನು ಇನ್ನಷ್ಟು ಆಸಕ್ತಿಯಿಂದ ನೋಡಲು ಪ್ರೇರೇಪಣೆ ನೀಡಿದವರಲ್ಲಿ ಮೊದಲಿಗರು ಅಂದರೆ ಟಿ ಎನ್ ಬಾಲಕೃಷ್ಣ. 

ಒಬ್ಬ ಕಲಾವಿದನ ಅದರಲ್ಲೂ ಪೋಷಕ ಪಾತ್ರದಲ್ಲಿ ಬರುವ ಕಲಾವಿದರು ನೆನಪಲ್ಲಿ ಉಳಿಯುವುದು ಬಲು ಅಪರೂಪದ ಸಂಗತಿ. ಆದರೆ ಅಂದಿನ ಆ ಕನ್ನಡ ಚಿತ್ರರಂಗದಲ್ಲಿ ಇದ್ದವರೆಲ್ಲಾ ದಿಗ್ಗಜರೆ. ಕುಮಾರ ತ್ರಯರು, ನರಸಿಂಹರಾಜು, ಜಿ ವಿ ಅಯ್ಯರ್, ಲೀಲಾವತಿ, ರಾಮಚಂದ್ರ ಶಾಸ್ತ್ರಿ, ಡಿಕ್ಕಿ ಮಾಧವರಾವ್, ಜಯಶ್ರೀ, ಪಂತುಲು, ಎಂ ವಿ ರಾಜಮ್ಮ, ಪಂಡರಿಬಾಯಿ, ಅಶ್ವತ್, ದ್ವಾರಕೀಶ್ ಹೇಳುತ್ತಾ ಹೋದ ಹಾಗೆ ಹನುಮನ ಬಾಲ ಬೆಳದಂತೆ ಬೆಳೆಯುತ್ತಲೇ ಇರುತ್ತದೆ. 

ಅಂದಿನ ಕಾಲದಲ್ಲಿ ಎಲ್ಲಾ ಕಲಾವಿದರ ಗುರಿ ಒಂದೇ.. ಈ ಚಿತ್ರದಲಿ ಚೆನ್ನಾಗಿ ಅಭಿನಯಿಸಿದರೆ, ಇನ್ನೊಂದು ಚಿತ್ರ ಸಿಗುತ್ತದೆ, ಕೆಲಸ ಸಿಗುತ್ತದೆ, ಹೊಟ್ಟೆಗೆ ಆಧಾರವಾಗುತ್ತದೆ. ಅಷ್ಟೇ ಅವರ ತಲೆಯಲ್ಲಿ ಇದ್ದುದ್ದು, ಅವರಿಗೆಲ್ಲಾ ಚೆನ್ನಾಗಿ ಗೊತ್ತಿತ್ತು ಕಲಾದೇವಿ ನಮ್ಮನ್ನು ಆರಿಸಿದ್ದಾಳೆ ಎಂದರೇ, ನಮ್ಮ ಬದುಕನ್ನು ಜೋಪಾನ ಮಾಡುತ್ತಾಳೆ ಎಂದು, 

ಅವರ ನಂಬಿಕೆ ಎಂದೂ ಸುಳ್ಳಾಗಿರಲಿಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ, ನಮ್ಮ ಕರುನಾಡಿನ ಅಭಿಮಾನದ ಕೂಸು ಬಾಲಕೃಷ್ಣ. ಆ ದಿಗ್ಗಜರಲ್ಲಿ ಎಲ್ಲರೂ ಒಂದೊಂದು ಮ್ಯಾನರಿಸಂ ಅಥವಾ ಅವರದೇ ಆದ ಒಂದು ವಿಶಿಷ್ಟ ಛಾಪು ಇದ್ದಿತ್ತು. ನಮ್ಮ ಬಾಲಕೃಷ್ಣ ತಮ್ಮ ಅಭಿನಯ ಚಾತುರ್ಯವನ್ನು ಕೊಂಡೊಯ್ದ ರೀತಿ ಶಭಾಶ್ ಎನ್ನಲೇ ಬೇಕು ಅನ್ನಿಸುವಷ್ಟು ತಾಜಾ ಆಗಿತ್ತು ಮತ್ತು ನಿಜವಾಗಿತ್ತು. 

ಅವರು ಮಾಡದ ಪಾತ್ರವೇ ಇರಲಿಲ್ಲ. ಆದರೆ ನೀರಿನ ತರಹ ಯಾವುದೇ ಆಕಾರಕ್ಕೆ ಹೋದರೂ ನೀರು ಅದೇ ಪಾತ್ರಕ್ಕೆ ಒಗ್ಗಿಕೊಳ್ಳುವ ಹಾಗೆ, ಬಾಲಕೃಷ್ಣ ಕೂಡ ಅವರು ಮಾಡಿದ ಪಾತ್ರದೊಳಗೆ ಹೊಕ್ಕುಬಿಡುತ್ತಿದ್ದರು. ನೋಡಿದವರಿಗೆ, ಈ ಪಾತ್ರವನ್ನು ಬೇರೆ ಯಾರೇ ಮಾಡಿದರೂ ಅದು ಬಾಲಕೃಷ್ಣ ಮಾಡಿದ ಹಾಗಿಲ್ಲ ಅನ್ನಿಸುವುವಷ್ಟು ಶಕ್ತಿಶಾಲಿಯಾಗಿರುತ್ತಿತ್ತು. 

ನನ್ನ ಜೀವನದಲ್ಲಿ ಮೂರು "ಅಣ್ಣ" ಬಂದೆ ಬರುತ್ತಾರೆ, ಮತ್ತು ನಾನು ಜೀವನವನ್ನು ನೋಡುವ ರೀತಿ ಮತ್ತು ಬದುಕುವ ರೀತಿಗೆ ಸ್ಫೂರ್ತಿ ತುಂಬಿದವರು ಇವರು 

ಮೊದಲು ನನ್ನ ಅಣ್ಣ, ಅಂದರೆ ನನ್ನ ಅಪ್ಪ - ಮಂಜುನಾಥ್. 

ಎರಡನೆಯವರು ಬಾಲಣ್ಣ ಅರ್ಥಾತ್ ಬಾಲಕೃಷ್ಣ 

ಮೂರನೆಯವರು ಅಣ್ಣ - ಕರುನಾಡಿನ ಅಣ್ಣಾವ್ರು. 

ಬಾಲಕೃಷ್ಣ ನನಗೆ ಬಲು ಇಷ್ಟ ಪಡಲು ಕಾರಣ ಅವರ ಸಂಭಾಷಣೆ ಹೇಳುವ ಶೈಲಿ. ಒಂದು ಸಾಮಾನ್ಯ ಪದಗಳು ಇವರ ಬಾಯಲ್ಲಿ ನುಸುಳಿ ಬಂದರೆ ಮಹಾನ್ ಶಕ್ತಿ ಪಡೆಯುತ್ತಿತ್ತು ಮತ್ತು ಅದಕ್ಕೆ ಒಂದು ತೂಕ ಬರುತ್ತಿತ್ತು. ಖಳನಾಯಕನ ಪಾತ್ರ ಕೂಡ ನಗೆ ಉಕ್ಕಿಸಬಲ್ಲುದು ಮತ್ತು ಅಷ್ಟೇ ರೋಷ ಉಕ್ಕಿಸಬಲ್ಲುದು ಎಂದು ತೋರಿಸಿಕೊಟ್ಟವರು. (ಉದಾಹರಣೆ ಕಣ್ತೆರೆದು ನೋಡು, ಸಂಪತ್ತಿಗೆ ಸವಾಲ್, ಗಂಧದ ಗುಡಿ, ಗಾಂಧಿನಗರ, ದೂರದ ಬೆಟ್ಟ ಹೀಗೆ ಹತ್ತಾರು ಚಿತ್ರಗಳ ಪಾತ್ರಗಳು)

ಇಂಥಹ ಒಂದು ಅದ್ಭುತ ಶಕ್ತಿಯ ಬಾಲಕೃಷ್ಣ ಅವರ ಹಲವಾರು ಚಿತ್ರಗಳಲ್ಲಿ ನನಗೆ ಇಷ್ಟವಾದ, ಮತ್ತು ಪರಿಣಾಮಕಾರಿ ಸಂಭಾಷಣೆ, ಅಭಿನಯ ಕೂಡಿರುವ ಒಂದಷ್ಟು ಚಿತ್ರಗಳ ಬಗ್ಗೆ ಬರೆಯುತ್ತ ಹೋಗುವೆ. ಎಲ್ಲಿ ಆರಂಭಿಸಲಿ, ಎಲ್ಲಿ ನಿಲ್ಲಿಸಲಿ ಗೊತ್ತಿಲ್ಲ ಕಾರಣ, ಬಾಲಕೃಷ್ಣ ಒಂದು ಕಡಲು. 

ಕಡಲಿನ ನೀರು ಆವಿಯಾಗುತ್ತದೆ, ಮೊಡವಾಗುತ್ತದೆ, ಮೋಡದಲ್ಲಿ ಸಾಂಧ್ರತೆ ಹೆಚ್ಚಾದಾಗ ಮಳೆ ಸುರಿಸುತ್ತದೆ. ಝರಿಗಳು ಹುಟ್ಟುತ್ತವೆ, ತೊರೆಯಾಗುತ್ತದೆ, ನದಿಯಾಗುತ್ತದೆ, ಕಡಲು ಸೇರುತ್ತದೆ.... ಮತ್ತೆ ಆವಿಯಾಗುತ್ತದೆ. 

ಹೀಗೆ ಬಾಲಕೃಷ್ಣ ಅವರ ಯಾವುದೇ ಚಿತ್ರವನ್ನು ನೋಡಿದರೂ ಮತ್ತೆ ಆರಂಭಕ್ಕೆ ಹೋಗಿ ನಿಲ್ಲಬಹುದು. ಎಲ್ಲಿಂದ ಬೇಕಾದರೂ ಆರಂಭಿಸಬಹುದು ಮತ್ತು ಎಲ್ಲಿ ಬೇಕಾದರೂ ಅಲ್ಪವಿರಾಮ ತೆಗೆದುಕೊಳ್ಳಬಹುದು. 

ಅಂಥಹ ಮಹಾನ್ ಶಕ್ತಿಯ ಚೇತನ ಭುವಿಗೆ ಬಂದು ೧೦೪ ವಸಂತಗಳು ಕಳೆದು ಹೋದವು. ಹೇಳಿದಷ್ಟು, ಬರೆದಷ್ಟು, ಗೀಚಿದಷ್ಟು ಹೊಸ ಹೊಸ ಅರ್ಥಗಳು ಹುಟ್ಟಿಕೊಳ್ಳುವ ಕನ್ನಡಾಂಬೆಯ ಅಭಿಮಾನದ ಕೂಸಿಗೆ ಇಂದು ಜನುಮ ದಿನದ ಸಂಭ್ರಮ. 

ಇದೆ ಸಂತಸದಲ್ಲಿ ಬಾಲಕೃಷ್ಣ ಅವರ ಚಿತ್ರಗಳ ಯಾತ್ರೆಯನ್ನು ನೋಡಲು, ಮತ್ತು ಅದರಿಂದ ಕೆಲವು ಪ್ರಭಾವಿ ಸನ್ನಿವೇಶಗಳನ್ನು, ನನಗೆ ಬಲು ಇಷ್ಟವಾದ ಕೆಲವು ಸ್ಪೂರ್ತಿದಾಯಕ ಅಥವಾ ಜೀವನಕ್ಕೆ ದಾರಿದೀಪವಾಗಬಲ್ಲಂಥಹ ಕೆಲವು  ಸಂಭಾಷಣೆಗಳನ್ನು ಬರೆಯಲು ಇಷ್ಟಪಡುತ್ತೇನೆ. 

ನನ್ನ ನಲ್ಮೆಯ ಓದುಗರ ಕಣ್ಣು ಮತ್ತು ಹೃದಯದ ಸಹಕಾರವಿರಲಿ... !

ಬಾಲಕೃಷ್ಣ ಅವರಿಗೆ ಜನುಮದಿನದ ಶುಭಾಶಯಗಳು. 

Sunday, November 1, 2015

ಬೋರ್ಡ್ ನಲ್ಲಿ ಕಾಣದೆ ಇರುವ - ಫಲಿತಾಂಶ (1976)

ಪಾಠ ಪ್ರವಚನಗಳು ಹಲವಾರು ಬಾರಿ ಹಳೆಯದಾಗಿಬಿಡುತ್ತದೆ, ಆದರೆ ಅವು ನಮಗೆ ದಾರಿ ತೋರಿಸಿದ ಬಗೆ ಯಾವತ್ತಿಗೂ ನೆನಪಿರುತ್ತದೆ. ಪುಟ್ಟಣ್ಣ ಕಣಗಾಲ್ ಚಿತ್ರಜಗತ್ತಿನಲ್ಲಿ ಸೃಷ್ಠಿ ಮಾಡಿದ ರತ್ನಗಳು ಹಲವಾರು.

ಒಂದೊಂದು ರತ್ನವೂ ಭಿನ್ನ ವಿಭಿನ್ನ. ಪ್ರತಿ ರತ್ನ ಮಣಿಯನ್ನು ಅರಸುತ್ತಾ ಅದನ್ನು ನೋಡಿ ಸಂಭ್ರಮಿಸುತ್ತಾ ಹೋಗುತ್ತಿದ್ದ ನನಗೆ, ಆ ಸಾಲಿನಲ್ಲಿ ಒಂದು ಅನರ್ಘ್ಯ ರತ್ನದ ಹೆಸರಿತ್ತು, ಆದರೆ ಆ ಜಾಗದಲ್ಲಿ ಖಾಲಿ ಖಾಲಿ. ಅದರ ಫಲಕ ನೋಡಿದೆ, ಅದರಲ್ಲಿ "ಫಲಿತಾಂಶ" ಎಂದಿತ್ತು.

ಯಾಕೋ ಕುತೂಹಲ ಕಾಡಿತು, ಆ ಜಾಗವನ್ನು ಮತ್ತೆ ಮತ್ತೆ ನೋಡಿದೆ ಕೆಳಕಂಡ ವಿವರಗಳು ಸಿಕ್ಕವು.

ಆ ಮಾಣಿಕ್ಯ ೧೯೭೬ ನೆ ಇಸವಿಯಲ್ಲಿ ಅನಾವರಣಗೊಂಡಿತ್ತು.

ಅರೆಗಲ್ ಬ್ರದರ್ಸ್ ತಮ್ಮ ಕಿಸೆಯಿಂದ ಹಾಕಿದ ಕಾಂಚಣ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿತ್ತು.

ಜೈ ಜಗದೀಶ್, ಆರತಿ, ಶುಭ ಜೊತೆಯಲ್ಲಿ ಹಿಂದಿ ಚಿತ್ರ ಜಗತ್ತಿನ ಕಂಚಿನ ಕಂಠ ಅಮರೀಶ್ ಪುರಿ ಕನ್ನಡಕ್ಕೆ ಕಾಲಿಟ್ಟ ಹೆಮ್ಮೆಯ ಕ್ಷಣ ಅದು.

ಆರ್ ಏನ್ ಜಯಗೋಪಾಲ್ ರಚಿಸಿದ ಸುಂದರ ಹಾಡುಗಳನ್ನು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅಷ್ಟೇ ಸುಂದರವಾಗಿ ಜೀವ ತುಂಬಿ ಹಾಡಿದ್ದರು. ಇಂದಿಗೂ ನೆನಪಲ್ಲಿ ಉಳಿದಿರುವ ಅನೇಕ ಗೀತೆಗಳಲ್ಲಿ ಇವು ಕೂಡ ಒಂದು.

ಪುಟ್ಟಣ್ಣ ಚಿತ್ರಗಳು ಎಂದ ಮೇಲೆ ಸಂಗೀತದ ಮಾತು ಬಂದಾಗ ಮೊದಲ ಹೆಸರು ಬರುವುದು ಅವರ ನೆಚ್ಚಿನ ಗೆಳೆಯ ವಿಜಯಭಾಸ್ಕರ್. ಹೌದು ಈ ಚಿತ್ರವನ್ನು ವಿಜಯಭಾಸ್ಕರ್ ಸಂಗೀತ ಶರಧಿಯಲ್ಲಿ ಅದ್ದಿ ತೆಗೆದಿದ್ದಾರೆ.

"ಈ ಚೆಂಡಿನ ಆಟ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಪಿ ಸುಶೀಲ ಹಾಡಿದ್ದಾರೆ.



"ಲವ್ ಎಂದರೆ ಯಾರೂ ಬಿಡಿಸಿದ ಬಂಧನ" ಈ ಹಾಡು ಇಷ್ಟವಾಗುವುದು ವಾಣಿಜಯರಾಂ ಅವರ ಧ್ವನಿ ಮತ್ತು ಪಾಶ್ಚಾತ್ಯ ಸಂಗೀತದ ಅಚ್ಚಿನಲ್ಲಿ ಮೂಡಿರುವ ಹಿನ್ನೆಲೆ ಸಹ ಗಾಯಕರ ಧ್ವನಿ.


ಫಲಿತಾಂಶವನ್ನು ಕಪ್ಪು ಬಿಳುಪಿನಲ್ಲಿ ಸೆರೆ ಹಿಡಿದದ್ದು ಬಿ ಎನ್ ಹರಿದಾಸ್ ಅವರ ಕ್ಯಾಮೆರ. 

ಶ್ರೀನಿವಾಸ್ ಕುಲಕರ್ಣಿಯವರ ಕತೆಯನ್ನು ತೆರೆಗೆ ಅಳವಡಿಸಿ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ನೋಡಲು ಅನುಕೂಲ ಮಾಡಿಕೊಟ್ಟವರು ಪುಟ್ಟಣ್ಣ ಕಣಗಾಲ್.

ಹುಡುಕಿ ಹುಡುಕಿ ಸುಸ್ತಾಗಿ ಅಲ್ಲೇ ಒಂದು ಮೂಲೆಯಲ್ಲಿ ಕುಳಿತಾಗ ಈ ಚಿತ್ರದ ಪುಟ್ಟ ಮಾಹಿತಿ ಫಲಕ ಅಲ್ಲಿ ನೇತು ಹಾಕಿದ್ದು ಬಿದ್ದು ಹೋಗಿತ್ತು .. :-)


ಫಲಿತಾಂಶ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಅರಗಲ್ ಸಹೋದರರು
ಕಥೆಶ್ರೀನಿವಾಸ ಕುಲಕರ್ಣಿ
ಪಾತ್ರವರ್ಗಜೈಜಗದೀಶ್ ಆರತಿ ವೈಶಾಲಿ,ಪದ್ಮಾಕುಮುಟಅರುಣ ಇರಾನಿ,ಶುಭಲೋಕನಾಥ್ಲೀಲಾವತಿ,ಅಮರೀಶ್ ಪುರಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಎ.1 ಮೂವೀಟೋನ್
ಹಿನ್ನೆಲೆ ಗಾಯನವಾಣಿ ಜಯರಾಂ,ಎಸ್.ಪಿ.ಬಾಲಸುಬ್ರಹ್ಮಣ್ಯಂ


ಈ ಚಿತ್ರ ಎಲ್ಲೇ ಹುಡುಕಿದರೂ ಸಿಗದ ಕಾರಣ, ಪುಟ್ಟಣ್ಣ ಕಣಗಾಲ್ ಚಿತ್ರಸರಣಿಯಲ್ಲಿ ಕೊನೆಯಲ್ಲಿ ಬರೆಯೋಣ ಎಂದು ಇಟ್ಟುಕೊಂಡಿದ್ದೆ. ಚಿತ್ರವನ್ನು ಕೈ ಬಿಡಲು ಮನಸ್ಸು ಒಪ್ಪಲ್ಲಿಲ್ಲ. ಆದ್ದರಿಂದ ಈ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಕೈ ಎಟುಕಿದ ಮಾಹಿತಿಯನ್ನು ಓದಿ ನನಗೆ ಅನ್ನಿಸಿದ ಒಂದಷ್ಟು ಪದಗಳಲ್ಲಿ ಒಂದು ಲೇಖನ ಮಾಡಿದ್ದೇನೆ. ಈ ಚಿತ್ರವನ್ನು ಯಾವಾಗಲಾದರೂ ನೋಡಿಯೇ ನೋಡುತ್ತೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ. ನೋಡಿದ ದಿನ ಆ ಚಿತ್ರವನ್ನು ನನ್ನ ಮೂಸೆಯಲ್ಲಿ ಅರಳಿಸಿ, ನನಗೆ ತಾಕಿದ ಅನುಭವದ ಬಗ್ಗೆ ಒಂದಷ್ಟು ಪದಗಳನ್ನು ಹರಿಯ ಬಿಡುತ್ತೇನೆ...

****

ಪುಟ್ಟಣ್ಣ ಕಣಗಾಲ್ ಗುರುಗಳೇ, ಕರುನಾಡಿನ ಭಾಷೆಯಲ್ಲಿ ನಿಮ್ಮ ದಿಗ್ದರ್ಶನದಲ್ಲಿ ಅರಳಿದ ೨೪ ಚಿತ್ರಗಳಲ್ಲಿ ೨೩ ಚಿತ್ರಗಳನ್ನು ನೋಡಿ ನನ್ನ ಅನುಭವಕ್ಕೆ ನಿಲುಕಿದ ಒಂದೆರಡು ಮಾತುಗಳನ್ನು ಹಂಚಿಕೊಂಡಿದ್ದೇನೆ. ಒಂದು ಚಿತ್ರದ ಬಗ್ಗೆ ಕೇವಲ ಲಭ್ಯವಾದ ಮಾಹಿತಿಯನ್ನು ಮಾತ್ರ ಕೊಟ್ಟಿದ್ದೇನೆ. ನಿಮ್ಮ ಚಿತ್ರಗಳನ್ನು ಬಾಲ್ಯದಿಂದಲೂ ಆನಂದಿಸಿಕೊಂಡು ಬಂದಿದ್ದ ನನಗೆ, ಆ ಚಿತ್ರಗಳ ಬಗ್ಗೆ ಬರೆಯಬೇಕೆಂಬ ಹಂಬಲ ಹುಟ್ಟಿತ್ತು. ನಾ ಏನೇ ಬರೆದಿದ್ದರೂ ಅದು ನಿಮ್ಮ ಆಶೀರ್ವಾದದ ಬಲ ನನ್ನೊಳಗೆ ಕೂತು ಬರೆಸಿದೆ. ಈ ಲೇಖನಮಾಲಿಕೆಗಳನ್ನೂ ಬರೆಯುವ ಸಾಹಸಕ್ಕೆ ಸ್ಫೂರ್ತಿ ನೀಡಿದವರು ನನ್ನ ಅಪ್ಪ (ಮಂಜುನಾಥ್), ಮತ್ತು ನನ್ನ ಸೋದರ ಮಾವ (ಶ್ರೀಕಾಂತ್ ಅಲಿಯಾಸ್ ರಾಜ),  ಇವರಿಬ್ಬರೂ ಹಲವಾರು ರೀತಿಯಲ್ಲಿ ನನಗೆ ಮಾರ್ಗದರ್ಶಿಗಳು ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಶ್ರೀ  ನೀವು ಬರೆಯಿರಿ ಖಂಡಿತ ನೀವು ಈ ಸುಂದರ ಮಾಲೆಯನ್ನು ಪೂರ್ಣ ಮಾಡುತ್ತೀರಿ ಎಂದು ಧೈರ್ಯ ತುಂಬಿದವರು ಶ್ರೀ ಬಾಲಸುಬ್ರಮಣ್ಯ ಅರ್ಥಾತ್ ಬಾಲೂ ಸರ್, ಶ್ರೀ ಪ್ರಕಾಶ್ ಹೆಗ್ಡೆ, ಶ್ರೀಮತಿ ರೂಪ ಸತೀಶ್, ಶ್ರೀಮತಿ ನಿವೇದಿತ ಚಿರಂತನ್, ಶ್ರೀಮತಿ ಸ್ವರ್ಣ ಪಿ, ಶ್ರೀಮತಿ ಹರಿಣಿ GNT, ಶ್ರೀಮತಿ ಸುಗುಣ ಮಹೇಶ್, ಬದರಿನಾಥ್ ಪಲವಳ್ಲಿ  ಮತ್ತು ನಿಮ್ಮ ದಿಗ್ದರ್ಶನದ ಬಗ್ಗೆ ಅಭೂತಪೂರ್ವ ಮಾಹಿತಿ ಕೊಟ್ಟ ನಿಮ್ಮಯ ಆತ್ಮೀಯ ಸ್ನೇಹಿತರಾದ ಶ್ರೀ ಮೋಹನ್ ಕಂಪ್ಲಾಪುರ್ ಅಥವಾ ಕಂಪ್ಲಾಪುರದ ಮೋಹನ್  ಮತ್ತು ಅನೇಕ ಪುಟ್ಟಣ್ಣ ಕಣಗಾಲ್ ಅಭಿಮಾನಿಗಳು.

ಇಂದಿಗೂ ನನಗೆ ನೆನಪಿದೆ ನಿಮ್ಮ ಸಹೋದರ ಶ್ರೀ ನರಸಿಂಹ ಶಾಸ್ತ್ರಿಗಳು ನಿರರ್ಗಳವಾಗಿ ಒಂದೂವರೆ ತಾಸು ನಿಮ್ಮ ಬೆಳ್ಳಿಮೋಡದ ಚಿತ್ರದ ತಯಾರಿಯಿಂದ ಹಿಡಿದು ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದನ್ನು ಅದ್ಭುತವಾಗಿ ಕಣ್ಣಿಗೆ ಕಟ್ಟಿದಂತೆ ವಿವರಿಸಿದ ರೀತಿ. ನಿಮ್ಮ ಮತ್ತು ನಿಮ್ಮ ಸಹೋದರರ ಚರಣ ಕಮಲಗಳಿಗೆ ಈ ಲೇಖನ ಅರ್ಪಿತ.

ಇದು ಖಂಡಿತ ನಾ ಬರೆದಿದ್ದಲ್ಲ, ನನ್ನೊಳಗೆ ಕೂತು, ನನಗೆ ಪ್ರೇರಣೆ ನೀಡಿ ನನ್ನ ಕೈಯಿಂದ ಬರೆಸಿದವರು.  ನೀವೇ ಹೇಳುವಂತೆ ಈ ಲೇಖನ ಮಾಲಿಕೆಯ ದಿಗ್ದರ್ಶನ ಜಗನ್ಮಾತೆ.

ಧನ್ಯವಾದಗಳು ಗುರುಗಳೇ ಮತ್ತು ಆರಂಭದಿಂದಲೂ ಪ್ರೋತ್ಸಾಹಿಸಿದ ಎಲ್ಲಾ ಓದುಗರಿಗೆ ನನ್ನ ಶಿರಸಾ ಪ್ರಣಾಮಿ.. !