Showing posts with label Balanna. Show all posts
Showing posts with label Balanna. Show all posts

Monday, February 8, 2016

ಟಿ ಎನ್ ಬಾಲಕೃಷ್ಣ ... ಬುಂಡೆಕ್ಯಾತ.. ಬೂತಯ್ಯನ ನೆರಳಲ್ಲಿ

ಒಂದು ಅಮೋಘ ಚಿತ್ರದಲ್ಲಿ ಘಟಾನುಘಟಿಗಳ ಮಧ್ಯೆ ತಾನು ಪ್ರಚಂಡನಾಗಿದ್ದರೂ, ಸದ್ದಿಲ್ಲದೇ ಈ ಚಿತ್ರದಲ್ಲಿ ಎದ್ದು  ನಿಂತಿದ್ದು ಬಾಲಕೃಷ್ಣ ಅವರ ತಾಕತ್ತು. ಅವರು ನಂಬಿದ್ದು ಒಂದು ತತ್ವ.. "ಮನಸ್ಸಿಟ್ಟು ತನ್ನ ಕೆಲಸ ಮಾಡಿದರೆ, ತನ್ನ ಹೆಜ್ಜೆ ಗುರುತು ನೀರಿನಲ್ಲೂ ಮೂಡಿಸಬಹುದು". ಈ ತತ್ವವೇ ಅವರನ್ನು ಬೆಳ್ಳಿ ಪರದೆಯ ಮಹಾನ್ ನಕ್ಷತ್ರವನ್ನಾಗಿ ಮಾಡಿದ್ದು.

ಸಿದ್ಧಲಿಂಗಯ್ಯ ಅವರ ಅದ್ಭುತ ಚಿತ್ರ ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ತನ್ನ ಛಾಪನ್ನು ಮೂಡಿಸಿದ್ದು ಹಲವಾರು ರೀತಿ. ಒಂದು ರೀತಿಯಲ್ಲಿ ಶಕುನಿ ಮಾದರಿಯಲ್ಲಿ ಮೂಡಿದ ಪಾತ್ರ ಬಾಲಕೃಷ್ಣ ಅವರದು. ಶಕುನಿ ತನಗೆ ಮತ್ತು ತನ್ನ ಕುಟುಂಬಕ್ಕೆ ಮಾಡಿದ ಮೋಸ, ಕ್ರೌರ್ಯಕ್ಕೆ ತಕ್ಕ ಉತ್ತರ ನೀಡಲು ಕೌರವರ ಜೊತೆಯಲ್ಲಿಯೇ  ಸೇರಿಕೊಂಡು ಅವರ ವಂಶವನ್ನೇ ನಿರ್ಮೂಲ ಮಾಡುವ ವ್ಯಕ್ತಿತ್ವ ಅವರದು. ಆದರೆ ತಣ್ಣಗಿನ ಕ್ರೌರ್ಯ, ಕುಹಕ ನಗೆ, ಸೇಡು ಬಿಡದ ಪಾತ್ರ.

ಈ ಚಿತ್ರದಲ್ಲಿ ಬಾಲಕೃಷ್ಣ ಅವರದು ಅಂತಹುದೇ ಪಾತ್ರ. ಎಲ್ಲೂ ಎಲ್ಲೇ ಮೀರದೆ, ಪಾತ್ರದ ಮಿತಿಯಲ್ಲಿಯೇ ಈಜುತ್ತಾ ಇಡಿ ಚಿತ್ರದಲ್ಲಿ ಮೇಲಕ್ಕೆ ಏರದೆ ಕೆಳಕ್ಕೆ ಇಳಿಯದೆ ಸಮಾನಾಂತರವಾಗಿ ಸಿಗುವುದು ಅವರ ಪಾತ್ರ.

ಹಾಸ್ಯದಿಂದ ಶುರುವಾಗುವ ಅವರ ಪಾತ್ರ ಜೊತೆ ಜೊತೆಯಲ್ಲಿಯೇ ಆ ಊರಿನ ಜನತೆಗೆ ಹಚ್ಚಿಕೊಡುತ್ತಾ, ಬೂತಯ್ಯ ಮತ್ತು ಸಾಂಬಯ್ಯನ ಕುಟುಂಬದ ಮೇಲೆ ಕೋಪದ ಅಗ್ನಿಗೆ ತುಪ್ಪ ಹುಯ್ಯುತ್ತಲೇ, ಈ ಕಡೆಯೂ ಕೂಡ ಸಮಯಕ್ಕೆ ಬೇಕಾದ ಸಲಹೆಗಳನ್ನು ಕೊಡುತ್ತಾ ಬೂತಯ್ಯನ ಮನೆಯವರು ಕೋಪದಲ್ಲಿ ದಾರಿ ತಪ್ಪುವಂತೆ ವಿವೇಚನೆ ಕಳೆದುಕೊಳ್ಳುವಂತೆ ಮಾಡುವ ಪಾತ್ರದಲ್ಲಿ ಬೆಳಗಿದ್ದಾರೆ.

ಅವರ ಪಾತ್ರದ ಕೆಲವು ತುಣುಕುಗಳು.. ಚಿತ್ರದುದ್ದಕ್ಕೂ ನನಗೆ ಅನ್ನಿಸಿದ ರೀತಿ..
*****
"ಕವಿ ಕಟ್ಟಿದರೂ ಕಪಿ ಮೆಚ್ಚುವ ಹಂಗೆ ಇರಬೇಕು ಕಣ್ರೋ..
ಬೂತಯ್ಯನೆಂಬ ಬಂಗಿಯ ಸೊಪ್ಪಾ
ಭಸ್ಮವ ಮಾಡೋಕೆ ಬೆಂಕಿಯ ಹಚ್ಚಪ್ಪ
ಒಗ್ಗಟ್ಟಿನಿಂದ ಎಲ್ಲರೂ ಕೂಡಿ
ಮಗ್ಗುಲು ಮುರಿಯಬೇಕು ಸಮಯವ ನೋಡಿ
ಅರ್ಥವಾಯಿತೆನ್ರೋ..
ನಿಮಗೆಲ್ಲಿ ಅರ್ಥವಾಗಬೇಕು.. ಹೆಬ್ಬೆಟ್ಟು ಒತ್ತೋ ಮಡ್ಡಿ ಸಾಂಬ್ರಾಣಿಗಳು..
ಒಗ್ಗಟ್ಟು ಅಂದ್ರೆ ಒಬ್ಬಟ್ಟು ಅಂತೀರಾ.."

ಎಷ್ಟು ಸಲೀಸಾಗಿ ಒಂದು ಗ್ರಾಮದ ವ್ಯವಸ್ಥೆಯನ್ನು ತುಂಬಿಕೊಡುವ ಸಂಭಾಷಣೆಯನ್ನು ಹಾಗೆ ತಮ್ಮ ಶೈಲಿಯಲ್ಲಿ ಹೇಳುವ ರೀತಿ ಸೊಗಸಾಗಿದೆ.

ಈ ಮಾತಿಗೆ.. ಅವರ ಸಹಪಾಟಿಗಳು ಕುಹಕಮಾಡಿದಾಗ "ಜತೇಲಿ ಹುಟ್ಟಿದವರ್ನೆಲ್ಲಾ ಕೌರವ ಕೊಂದರೂ, ಅವರ ಕಡೆನೇ ಸೇರಿಕೊಂಡಿದ್ದ  ಯಾಕೆ? ಅವರ ವಂಶನ ನಿರ್ವಂಶ ಮಾಡೋಕೆ.. ಹಾಗೆ ಈ ಸಿಂಗ್ಳಯ್ಯ ಉರುಫ್ ಬುಂಡೆಕ್ಯಾತ ಬೂತಯ್ಯನ ಮನೆಯಲ್ಲಿ ಸೇರಿಕೊಂಡಿರೋದು.. ಅವರ ವಂಶನಾ ಬುಡ ಸಮೇತ ಕಿತ್ತಾಕೋಕೆ.. "

ಅವರ ಅಭಿನಯ.. ಒಂದು ಕಡೆ ತನ್ನ ಸ್ನೇಹಿತರು ತಮ್ಮ ಮೇಲೆ ಕುಹಕ ಮಾಡುತ್ತಿದ್ದಾರೆ ಎನ್ನುವ ಕೋಪ, ಇನ್ನೊಂದು ಕಡೆ ಬೂತಯ್ಯನ ಮನೆಯ ಮೇಲಿನ ಸೇಡು,  ಜೊತೆಯಲ್ಲಿ ತನ್ನ ಸ್ನೇಹಿತರ ಮುಂದೆ ತಾನು ಏನು ಎಂದು ತೋರಿಸುವ ಛಲ.. ಆ ಸಿಟ್ಟಿನಲ್ಲಿ ಬಂಗಿ  ಸೇದುವ ಭಂಗಿ ಸೂಪರ್ ಸೂಪರ್..
*****

ಬಂಗಿ ಚಟಕ್ಕೆ.. ದುಡ್ಡು ಬೇಕಾದಾಗ ತನ್ನ ಸ್ನೇಹಿತನ ಮನೆಗೆ ಬರುತ್ತಾರೆ.. ಅಲ್ಲಿ ಇನ್ನೇನು ದುಡ್ಡು ತೆಗೆದುಕೊಂಡು ಹೋಗಬೇಕು.. ಅಷ್ಟೊತ್ತಿಗೆ ಸ್ನೇಹಿತನ  ಹೆಂಡತಿ ಬರುತ್ತಾರೆ.. ಮಾತಿನ ಚಕಮಕಿ ನೆಡೆದು.. ಸ್ನೇಹಿತನ ಹೆಂಡತಿ.. ಬಾಲಕೃಷ್ಣ ಅವರಿಗೆ ಚೆನ್ನಾಗಿ ಬಯ್ತಾರೆ... ಜೊತೆಯಲ್ಲಿ ಬಂಗಿ ಸೇದುವ ಕೆಟ್ಟ ಚಟ ಕಲಿಸಿದ್ದಕ್ಕೆ ಛೀಮಾರಿ ಹಾಕುತ್ತಾರೆ..  ಹಾಲು ಬೇಕಾದರೆ ಕುಡಿ.. ಬಂಗಿ ಗಿಂಗಿ ಅಂತ ನನ್ನ ಗಂಡನನ್ನು ಕರೆದುಕೊಂಡು ಹೋಗಬೇಡ.. ಎಂದಾಗ..

"ಬೇಡಾ.. ಇಲ್ಲೇ ತನ್ಕೊಡ್ತೀವಿ.. ಕೇಸರಿ, ಬಾದಾಮಿ, ಸಕ್ಕರೆ ಅರೆದು ಹಾಲಿಗೆ ಹಾಕಿ ರಾಮರಸ ಮಾಡಿಕೊಡು.. ಸುಟ್ಟೋನು ಕೆಟ್ಟ ಅರೆದೋನು ಮೆರೆದ ಅಂತ ನಿನ್ನ ಹೆಸರನ್ನು ಹೇಳಿಕೊಂಡು ಹಾಯಾಗಿ ಇಲ್ಲೇ ಕುಡ್ಕೊಂಡು ಕೂತಿರ್ತೀವಿ.. "

ಈ ದೃಶ್ಯದಲ್ಲಿ ಕುಶಿ ಕೊಡುವುದು.. ತನ್ನನ್ನು ಬಯ್ದು ಹೀಯಾಳಿಸಿದರು, ಸಿಕ್ಕ ಅವಕಾಶವನ್ನು ಅಚಾನಕ್ ಆಗಿ ಎತ್ತಿಕೊಂಡು ಹೊಸ ರೂಪ ಕೊಡುವುದು, ಮತ್ತು ಆ ಸಂಭಾಷಣೆ ಹೇಳುವಾಗ ಅಂಗೀಕ ಅಭಿನಯ.

*****

ಊರಿನಲ್ಲಿ ಎತ್ತಿನ ಗಾಡಿ ಸ್ಪರ್ಧೆ ನಡೆದಾಗ, ಗುಳ್ಳನ ಎತ್ತುಗಳು ಗೆಲ್ಲುತ್ತವೆ, ಆಗ ಬೂತಯ್ಯ ಹೇಳುವ ಸಂಭಾಷಣೆ
"ಗುಳ್ಳನ ಎತ್ತುಗಳು ಗೆದ್ದರೂ, ಭೈರನ ಹೋರಿಗಳು ಮೈ ತುಂಬಿಕೊಂಡು ಲಕ್ಷಣವಾಗಿವೆ"

ಪಕ್ಕದಲ್ಲಿಯೇ ನಿಂತಿದ್ದ ಬಾಲಕೃಷ್ಣ ಹೇಳುವ ಮಾತು "ಬಿತ್ತಾ ಕಣ್ಣು.. ಸರಿ" (ಕೆನ್ನೆ ಸವರಿಕೊಂಡು ಹೇಳುವ ಮಾತು.. ಬೂತಯ್ಯನ ಕ್ರೂರತೆಯನ್ನು ಹಾಗೆ ಕಣ್ಣ ಮುಂದೆ ತಂದು ನಿಲ್ಲಿಸುತ್ತೆ)..

ಈ ದೃಶ್ಯ ಕೇವಲ ಒಂದು ಮೂವತ್ತು ಸೆಕೆಂಡ್ ಅಷ್ಟೇ.. ಜೊತೆಯಲ್ಲಿ ಬಾಲಕೃಷ್ಣ ಹೇಳುವ ಮಾತು ಮೂರೇ ಪದ.. ಆದ್ರೆ ಅದರಲ್ಲಿ ತುಂಬಿರುವ ಅರ್ಥ.. ಅಗಾಧ.. ಇದು ಬಾಲಕೃಷ್ಣ ಅವರ ಪರಿಣಾಮಕಾರಿ ಅಭಿನಯದ ಗುಟ್ಟು.

*****

ಭೈರನ ಹೋರಿಯನ್ನು ಬೂತಯ್ಯ ಕದ್ದು ಮಾರಿಬಿಟ್ಟಿರುತ್ತಾನೆ.. ಆ ಹೋರಿಗಳನ್ನು ಹುಡುಕಿಕೊಂಡು ಬರುವ ಭೈರನಿಗೆ ಬಾಲಕೃಷ್ಣ ಹೇಳುವ ಮಾತು

" ನಮ್ಮ ಮಾವ ಬೂತಯ್ಯನ ಕಣ್ಣಿಗೆ ಬಿದ್ದು, ಸಂತೇಲಿ ಮಾರಿದ್ದು ಆಯ್ತು, ಅದರ ಮೈಮೂಳೆ ಗೋರಿನೂ ಆಗೋಯ್ತು.. ಈಗ ನಿನ್ನ ಹೊಟ್ಟೆ ಉರಿ ತೀರಿಸ್ಕೋ, ನಿನ್ನ ಕಡೆ ಹತ್ತು ಜನಕ್ಕೆ ಹೇಳಿ ಗುಂಪು ಕಟ್ಟು, ಬೂತಯ್ಯನಿಗೆ ಸರಿಯಾದ ಗತಿ ಕಾಣಿಸು.. ನಾ ಹೇಳಿದೆ ಅಂತ ಹೇಳಬೇಡ"

ಈ ಕಡೆ ಭೈರನಿಗೆ ಸಮಾಧಾನ ಮಾಡಿದ ಹಾಗೆ, ಆ ಕಡೆ ಅವನನ್ನು ಬೂತಯ್ಯನ ಎದಿರು ಎತ್ತಿಕಟ್ಟುವುದು, ಈ ದೃಶ್ಯದಲ್ಲಿ ಮಿಂಚುವುದು ಸಂಭಾಷಣೆಯಲ್ಲಿ ಏರಿಳಿತ, ಮತ್ತು ಅಂಗೀಕ ಅಭಿನಯ, ನೊಂದವರ ಕೋಪದ ಉರಿಗೆ ಸರಿಯಾಗಿ ಹದವಾಗಿ ತುಪ್ಪ ಸುರಿಯುವುದು.
****
ಬೂತಯ್ಯನಿಗೆ ಊರಿನ ಸಭ್ಯಸ್ಥ ದೇವಯ್ಯನ ಮೇಲೆ ಕಣ್ಣಿರುತ್ತದೆ.. ದೇವಯ್ಯ ಮಾತ್ರ ಬೂತಯ್ಯನ ಕಪಿಮುಷ್ಟಿಗೆ ಸಿಕ್ಕಿರೋಲ್ಲ.. ಯಾವುದೇ ಕಾರಣಕ್ಕೆ ಊರಿನವನ್ನು ಕಾಪಾಡಲು ದೇವಯ್ಯ ಸಾಲಕ್ಕೆ ಜಾಮೀನಾಗಿ ನಿಲ್ಲುತ್ತಾನೆ.

"ದೇವಯ್ಯ ಒಬ್ಬ ತಪ್ಪಿಸಿಕೊಂಡಿದ್ದ.. ಈಗ ಅವನು ಭೂತಕ್ಕೆ ಬಲಿಯಾಗಿ ಹೋದ" ಒಂದು ರೀತಿಯಲ್ಲಿ ವಿಷಾದ ತುಂಬಿದ ಮಾತು, ಜೊತೆಯಲ್ಲಿಯೇ ತಣ್ಣಗಿನ ಆಕ್ರೋಶ.. ಎರಡು ಹದವಾಗಿ ಬೆರೆಸಿದ ಸಂಭಾಷಣಾ ಶೈಲಿ... ಬಾಲಕೃಷ್ಣ ಅವರಿಗೆ ಮಾತ್ರ ಸಾಧ್ಯ.
*****

ಬೂತಯ್ಯ ಲಕ್ವ ಹೊಡೆದು ಪ್ರಾಣ ಬಿಡುತ್ತಾನೆ.. ಅವನನ್ನು ದೆವ್ವ ಕಂಡ ಹಾಗೆ ದ್ವೇಷಿಸುವ ಊರಿನ ಜನ ಸಹಾಯಕ್ಕೆ ಬರೋಲ್ಲ.. ಆಗ "ರಾತ್ರಿಯೆಲ್ಲಾ ಹಳ್ಳಿ ಹಳ್ಳಿ ತಿರುಗಿಬಂದೆ, ಮಾವನ ಹೆಣ ಹೊರೋಕೆ ಒಬ್ಬನು ಸಿಗಲಿಲ್ಲ, ಅರೆ ದುಡ್ಡು ಕೊಡ್ತೀನಿ ಬನ್ರೋ ಅಂದರೂ ಅದಕ್ಕೂ ಉಹೂಂ... ಎಷ್ಟು ಹಣ ಸಂಪಾದನೆ ಮಾಡಿದರೆ ಏನು.. ಕೊನೆಗಾಲದಲ್ಲಿ ಗತಿ ಕಾಣಿಸೋಕೆ ನಾಲ್ಕು ಜನ ಸಿಗಲಿಲ್ವಲ್ಲ.. "

ಜೀವನದಲ್ಲಿ ಪ್ರೀತಿ,  ಮಮತೆ, ವಿಶ್ವಾಸ ಇವುಗಳು ಮುಖ್ಯ ಹಣವಲ್ಲ ಎನ್ನುವ ಮಾತನ್ನು ವಿಷಾದ ಭರಿತ ಮಾತುಗಳಲ್ಲಿ ಮನಕ್ಕೆ ದಾಟಿಸುವ ಕೆಲಸ ಈ ಸಂಭಾಶಣೆಯಲ್ಲಿದೆ..

*****

"ಬಿಡು ಮಾವ ಅವನ ಬುರುಡೆ ಚೂರು ಚೂರು ಮಾಡಿ ಬುದ್ಧಿ ಕಲಿಸುತ್ತೀನಿ" ಎಂದು ಸಾಂಬಯ್ಯ ಎದ್ದು ನಿಂತಾಗ "ಆಮೇಲೆ ಪೋಲಿಸ್ನೋರು ಸುಮ್ಮನೆ ಬಿಟ್ಟು ಬಿಡ್ತಾರೆಯೇ.. ನಿಮ್ಮಪ್ಪ ಗುಟ್ಟಾಗಿ ಗುಂಡು ಹಾರಿಸಿ ಎಷ್ಟೊಂದು ಜನರನ್ನು ಕೊಂದಿಲ್ಲ.. ಹಾಗೆ ಮಾಡಬೇಕೆ ಹೊರತು .. ಬೀದಿಯಲ್ಲಿ ಈಗೆಲ್ಲ ಮಾಡಬಾರದು.. .. ಕಾಲಬರುತ್ತೆ "

ಕೋಪದಲ್ಲಿ ವ್ಯಾಘ್ರನಾಗಿ ನಿಂತ ಸಾಂಬಯ್ಯನನ್ನು ಮಾತಿನಲ್ಲಿ ಹಿಡಿದು ಹಾಕಿ, ತಲೆ ಸವರಿ  ಸಮಾಧಾನ ಮಾಡುತ್ತಾ, ವಕೀಲನ ಬಳಿಗೆ ಬರುತ್ತಾರೆ.

ಆ ವಕೀಲ... ಆ ಸೆಕ್ಷನ್ ಈ ಸೆಕ್ಷನ್ ಅಂತ ಹೇಳಿ "ಈ ರೀತಿ ಮಾಡಿದರೆ" ಎಂದು ನಿಲ್ಲಿಸುತ್ತಾರೆ.. ಆಗ ಬಾಲಕೃಷ್ಣ "ಅವರ ಕಥೆ ಮುಗೀತು ಅಂತೀರಾ.. ಮುಗಿಸಿ" ಕೋರ್ಟು, ಕಟ್ಟಲೆ  ಇದರ ಬಗ್ಗೆ ವಿರಕ್ತಿ ತುಂಬಿದ ಮಾತುಗಳನ್ನು ಬರಿ ಐದು ಪದಗಳಲ್ಲಿ ಹೇಳುವ ರೀತಿಗೆ ಯಾರು ಸಾಟಿ ಹೇಳಿ.

ಬೆಂದ ಮನೆಯಲ್ಲಿ ಹಿರಿದಿದ್ದೆ ಲಾಭ ಎನ್ನುವಂತೆ.. ವಕೀಲನ ಹತ್ತಿರ "ಸ್ವಾಮೀ ರಸ ಇರುವ ಕಬ್ಬು.. ಎಷ್ಟು ಬೇಕೋ ಅಷ್ಟು ಹೀರಿಕೊಳ್ಳಿ.. ಇಲ್ಲಿ ಒಂದೆರಡು ತೊಟ್ಟು ಕೊಡವಿಬಿಡಿ.. " ಆ ರಾಗಭರಿತ ಮಾತುಗಳು, ಸಿಕ್ಕ ಅವಕಾಶವನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ತೋರಿಸುತ್ತದೆ.

ಕಡೆಯ ದೃಶ್ಯದಲ್ಲಿ.. ಊರಿನ ಜನರೆಲ್ಲಾ ಸಾಂಬಯ್ಯನ ಮನೆಯನ್ನು ಲೂಟಿ ಮಾಡಲು ಬಂದಾಗ, ಅವರ ಜತೆಯಲ್ಲಿ ತನ್ನ ಮಾವನು ನಿಂತಿದ್ದನ್ನು ನೋಡಿದಾಗ, ಆಶ್ಚರ್ಯ, ದಿಗ್ಭ್ರಮೆ ವ್ಯಕ್ತಪಡಿಸುತ್ತಾನೆ ಸಾಂಬಯ್ಯ.. ಆಗ ಉದ್ರಿಕ್ತ ಮೊಗದಲ್ಲಿಯೇ ತಲೆ ಅಲ್ಲಾಡಿಸುವುದು ಬಾಲಕೃಷ್ಣ, ಈ ದೃಶ್ಯದಲ್ಲಿ ಸಂಭಾಷಣೆ ಇಲ್ಲ, ಆದರೆ ಮುಖಭಾವ.. ಆಹಾ.

*****

ಈ ಚಿತ್ರದಲ್ಲಿ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಬೆಳಗಿದೆ, ಜೊತೆಯಲ್ಲಿ ಆ ಪಾತ್ರವನ್ನು ತನ್ನ ಹೆಗಲ ಮೇಲೆ ನಿಲ್ಲಿಸಿಕೊಂಡು ಅಭಿನಯ ನೀಡಿರುವುದು ಬಾಲಕೃಷ್ಣ ಅವರ ಶಕ್ತಿ. ಪಾತ್ರಕ್ಕೆ ಎಲ್ಲಿಯೂ ಲೋಪ ಬರದಂತೆ ಅಭಿನಯಿಸಿರುವ ಎಲ್ಲಾ ನಟ ನಟಿಯರ ಮಧ್ಯೆ ತನ್ನದೇ ರೀತಿಯಲ್ಲಿ ಗುಪ್ತಗಾಮಿನಿಯಂತೆ ಅಭಿನಯಿಸಿ, ಪ್ರತಿ ಹಂತದಲ್ಲೂ ತನ್ನ ಇರುವಿಕೆಯನ್ನು ತೋರುವ ಅಭಿನಯ ಬಾಲಕೃಷ್ಣ ಅವರಿಂದ ಮೂಡಿ ಬಂದಿದೆ. ಇದಕ್ಕೆ ನಿರ್ದೇಶಕ ಸಿದ್ಧಲಿಂಗಯ್ಯ, ಸಂಭಾಷಣಕಾರ ಹುಣಸೂರು ಕೃಷ್ಣಮೂರ್ತಿಯ ಜೊತೆ ಜೊತೆಯಲ್ಲಿಯೇ ಬಾಲಕೃಷ್ಣ ಕೂಡ ಅಂಕಗಳಿಸುತ್ತಾರೆ.

*********************

ಬಾಲಕೃಷ್ಣ ಅವರ ಅಭಿಮಾನಿಯಾದ ನನಗೆ ಬಾಲಕೃಷ್ಣ ಸಾಕ್ಷಾತ್ ದೇವರೇ ಹೌದು. ನನಗೆ ಅವರ ಮೇಲಿನ ಅಭಿಮಾನ ಕೆಲವು ಕಡೆ ಅತಿರೇಕ ಎಂದು ಓದುಗರಿಗೆ ಅನಿಸಿದರೆ, ಅದು ನನ್ನ ಅಭಿಮಾನದ ಮತ್ತು ಬರಹದ ದೌರ್ಬಲ್ಯ ಎನ್ನಬಹುದೇ ಹೊರತು, ತುಸುವೂ ಕೂಡ ಕೊಂಕಿಲ್ಲದ ಬಾಲಕೃಷ್ಣ ಅವರ ನಟನೆ ಅಮೋಘ ಎಂಬುದು ನನ್ನ ಅಭಿಪ್ರಾಯ...

ಮತ್ತೆ ಬಾಲಕೃಷ್ಣ ಅವರ ಇನ್ನೊಂದು ಅದ್ಭುತ ಕಲಾಚಿತ್ರರತ್ನದ ಜೊತೆ ಮತ್ತೊಮ್ಮೆ ಬರುತ್ತೇನೆ.. ಓದಿ ನಿಮ್ಮ ಅಭಿಪ್ರಾಯ.... ಇರಲಿ ಇರಲಿ... 

Tuesday, November 1, 2011

ನಮ್ಮ ಅಣ್ಣ ಬಾಲಣ್ಣ ಜನ್ಮ ಶತಮಾನೋತ್ಸವ (2011)

ಹೆಮ್ಮೆಯ ಬಾಲಣ್ಣ
ಬಾಲಣ್ಣ ನಮ್ಮ ಜೊತೆ ಇದ್ದರು.....ಛೆ ಎಂಥ ಮಾತು...ನಮ್ಮ ಜೊತೆ ಸದಾ ಇರುವ ಅಪರೂಪದ ವ್ಯಕ್ತಿತ್ವ...


ಜೀವನದಲ್ಲಿ ಅನೇಕ ಪುಸ್ತಕಗಳನ್ನು ಓದುವುದಕ್ಕಿಂತ...ಬಾಲಣ್ಣನ ಸಿನಿಮಾಗಳು ಕೊಡುವ ಜ್ಞಾನ ಅದಕ್ಕಿಂತ ಅಧಿಕ...
ಇಂದಿಗೆ ಬಾಲಣ್ಣ ನಮ್ಮ ಕರುನಾಡ ಭೂಮಿಯನ್ನು ಬೆಳಗುವುದಕ್ಕೆ ಬಂದು ನೂರು ವರ್ಷಗಳಾದವು..
ನೂರು ಸಂಖ್ಯೆ ಬರಿ ಸಂಖ್ಯೆ ಮಾತ್ರ...ಆದ್ರೆ ಬಾಲಣ್ಣ ನಮ್ಮ ಬಾಳಿನ ಮೇಲೆ ಮಾಡಿರುವ ಹೆಗ್ಗುರುತು ಅಪಾರ..ಅವರ ಬಾಲ್ಯದ ಬಗ್ಗೆ, ಕಿವುಡುತನದ ಬಗ್ಗೆ, ಅಭಿಮಾನ್ ಸ್ಟುಡಿಯೋ ಕಟ್ಟಲು ಸಾಹಸ ಮಾಡಿದರ ಬಗ್ಗೆ ಸಾವಿರಾರು ಪುಟಗಳು ಸಿಗುತ್ತವೆ...

ಆದ್ರೆ ಅವರ ಚಿತ್ರ ಬದುಕಿನಲ್ಲಿ ಸಾಧಿಸಿದ ಪಟ್ಟ, ಸಣ್ಣ ಪಾತ್ರದಿಂದ ತ್ರಿವಿಕ್ರಮನಂತೆ ಬೆಳೆದ ಪರಿ ಎಂಥವರನ್ನು ಮಂತ್ರ ಮುಗ್ಧರನ್ನಾಗಿಸುತ್ತೆ 
ಅವರ ಪ್ರತಿ ಸಂಭಾಷಣೆಯಲ್ಲೂ ಇರುತಿದ್ದ ಶ್ರದ್ಧೆ, ಅನುಭವಿಸಿ ಮಾತಾಡುತ್ತಿದ್ದ ರೀತಿ, ರಾಗವಾಗಿ ಹೇಳುತಿದ್ದ ರೀತಿ...ಅವರಿಗೆ ಅವ್ರೆ ಸಾಟಿ...

ಬಂಗಾರದ ಮನುಷ್ಯ ಚಿತ್ರದ ರಾಚೂಟಪ್ಪ ಅಣ್ಣಾವ್ರ ರಾಜೀವನ ಪಾತ್ರದಷ್ಟೇ ಪರಿಣಾಮಕಾರಿ..ಈ ಚಿತ್ರ ಬಿಡುಗಡೆ ಆದ ಮೇಲೆ ಅನೇಕ ಧನವಂತರು ದಾನಶೀಲ  ಗುಣಗಳನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು ಅನ್ನುವ ಮಾತಿದೆ..
ಗಂಧದಗುಡಿ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯ ತಣ್ಣಗಿನ ಕ್ರೌರ್ಯ ತೋರಿಸುತ್ತೆ..
ಕಣ್ತೆರೆದು ನೋಡು ಚಿತ್ರದಲ್ಲಿ ಖಳನಾಯಕನಾಗಿ ಅಭಿನಯ ಬೆಣ್ಣೆ ಮೇಲಿನ ಕೂದಲು ತೆಗೆಯುವಷ್ಟೇ ಸಲಿಸಾಗಿ ಮೋಸ ಮಾಡುತ್ತ ಹೋಗುತ್ತೆ..
ಚಂದವಳ್ಳಿಯ ತೋಟದಲ್ಲಿ ಅಣ್ಣ ತಮ್ಮನ ಮಧ್ಯೆ ತಂದು ಹಾಕಿ ಮನೆ ಮುರುಕನ  ಪಾತ್ರ ಕಣ್ಣಲ್ಲಿ ಕೋಪ ತರಿಸುತ್ತೆ..
ಗಾಂಧಿನಗರದ ಚಿತ್ರದಲ್ಲಿ ಬೇಜವಬ್ಧಾರಿ ತಂದೆಯ ಪಾತ್ರ..
ಭೂತಯ್ಯನ ಮಗ ಅಯ್ಯು ಚಿತ್ರದ ಸಂಸಾರದಲ್ಲಿ ಇದ್ದುಕೊಂಡು ಅವರಿಗೆ ಒಂದು ಗತಿ ತೋರಿಸುವ ಶಕುನಿ ಪಾತ್ರ..
ಒಂದೇ ಎರಡೇ..ಪ್ರತಿ ಪಾತ್ರದಲ್ಲೂ ಅವರ ಪಾತ್ರ ಜೀವನಕ್ಕೆ ಒಂದು ಪಾಠ...

ಕನ್ನಡಕ್ಕೆ ಇಬ್ಬರೇ ಅಣ್ಣ ಒಂದು ರಾಜಣ್ಣ ..ಇನ್ನೊದು ಬಾಲಣ್ಣ...
ಬಾಲಣ್ಣ ರಾಜಣ್ಣನಿಗೆ ಸಂಭಾಷಣೆ ತಿದ್ದುವ ಮೇಷ್ಟ್ರು ಆಗಿದ್ದರೆನ್ನುವುದು ಅತಿಶಯ ಅಲ್ಲ...ರಾಜಣ್ಣ ಅವ್ರೆ ಇದನ್ನು ಹಂಚಿಕೊಂಡಿದ್ದರು..

ಇಂತಹ ಮಹಾನ್ ಕಲಾವಿದ ನಮ್ಮ ನಾಡಿನಲ್ಲಿ ಇದ್ದರು ಎನ್ನುವುದೇ ನಮಗೆ ಹೆಮ್ಮೆ...
ನಾವು ಅವರ ಬದುಕಿಗೆ ಏನು ಮಾಡಲಿಲ್ಲ...ಆದ್ರೆ ಅದಕ್ಕಾಗಿ ಕೊರಗುವ ಬದಲು ....ಅವರ ಅಭಿನಯದ ಚಿತ್ರಗಳಿಂದ ನಮ್ಮ ಜೀವನ ಸುಧಾರಿಸಿಕೊಂಡರೆ...ನಾವು ಅವರ ಈ ಶತಮಾನೋತ್ಸವಕ್ಕೆ ಕೊಡುವ ದೊಡ್ಡ ಸನ್ಮಾನ ಅನ್ನುವ ಮಾತು ಹಾಗು ಇಂಗಿತ ನನ್ನದು...