Sunday, June 28, 2015

ಸಂಕಟದಲ್ಲಿ ಸೆರೆಯಾದ ಧರ್ಮ... ಧರ್ಮಸೆರೆ (1979)

ಒಳ್ಳೆಯ ರಸ್ತೆ ಎಂದೂ ಒಳ್ಳೆಯ ವಾಹನ ಚಾಲಕನನ್ನು ನೀಡುವುದಿಲ್ಲ ಎನ್ನುತ್ತಾರೆ ಹಿರಿಯರು..


ಸದಾ ಸವಾಲನ್ನು ಬೆನ್ನಿಗೆ ಹಾಕಿಕೊಂಡು, ಭಿನ್ನ ವಿಭಿನ್ನವಾದ ಕಥೆಗಳನ್ನು ಆಯ್ದುಕೊಂಡು.. ಇಂಥಹ ಕಥೆಗಳು ಬೆಳ್ಳಿ ತೆರೆಯ ಮೇಲೆ ಬರಲು ಸಾಧ್ಯವೇ ಎನ್ನುವ ತರ್ಕವನ್ನೇ ಬುಡಮೇಲು ಮಾಡಿ, ಅನೇಕ ಅದ್ಭುತ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟವರು ನಮ್ಮ ಅಚ್ಚುಮೆಚ್ಚಿನ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು.

ಮತ್ತು ಅವರು ತುಳಿದ ಹಾದಿ. ಒಂದು ಚಿತ್ರ ನಂತರ ಇನ್ನೊಂದಕ್ಕೆ ಯಾವುದೇ ರೀತಿಯಲ್ಲಿ ತರ್ಕ ಬದ್ಧ ಲಯವಿರುತ್ತಿರಲಿಲ್ಲ.. ಅದೇ ಬೇರೆ ಇದೆ ಬೇರೆ ಎನ್ನುವ ರೀತಿಯಲ್ಲಿ ಅವರ ಚಿತ್ರಗಳು ಮೂಡಿ ಬರುತ್ತಿದ್ದವು. ಇಂದಿನ ಬೆಟ್ಟಿಂಗ್ ಯುಗದಲ್ಲಿ ಅವರ ಚಿತ್ರಗಳು ಬಂದಿದ್ದರೇ ಅವರ ಚಿತ್ರ ಕತೆಗಳ ಮೇಲೆ ಜೂಜು ಕಟ್ಟಿ ಸೋಲುತ್ತಿದ್ದವರು ಲೆಕ್ಕಕ್ಕೆ ಇರುತ್ತಿರಲಿಲ್ಲ.

ಹಿಂದಿನ ಚಿತ್ರ ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ದೈಹಿಕ ದಬ್ಬಾಳಿಕೆ, ಬಹಿಷ್ಕಾರ, ಉಸಿರು ಕಟ್ಟಿಸಿ ಗುಲಾಮಿ ಪದ್ದತಿಯನ್ನು ರೂಡಯಲ್ಲಿಟ್ಟುಕೊಂಡ ಹಳ್ಳಿ ಕಥೆಯನ್ನು ಹೇಳಿದರೆ, ಈ ಚಿತ್ರದಲ್ಲಿ ಮಾನಸಿಕ ಹಿಂಸೆ ಬಗ್ಗೆಯೇ ಒಂದು ಚಿತ್ರ ನೀಡುತ್ತಾರೆ.

ಶ್ರೀ ಜಡಭರತ ಅವರ ಅದೇ ಹೆಸರಿನ ಕಥೆಯನ್ನು ಕೈಗೆ ತೆಗೆದುಕೊಳ್ಳುವ ಇವರಿಗೆ ಜೊತೆಯಾಗಿ ನಿಂತದ್ದು ನಟಿ ಆರತಿ ನಿರ್ಮಾಪಕಿಯಾಗಿ. ಆ ಕಾಲದಲ್ಲಿ ಆರತಿ ಉತ್ತುಂಗ ತಲುಪಿದ್ದ ಕಾಲ, ಯಾವುದೇ ಕಾರಣಕ್ಕೂ ಈ ಚಿತ್ರವನ್ನು ಆರಿಸಿಕೊಳ್ಳಲು ಕಾರಣ ಬೇಕಿರಲಿಲ್ಲ. ಅವರು ಹೇಳಿದ ರೀತಿ ಕಥೆ ತಯಾರಾಗಬಹುದಿದ್ದ ಕಾಲ ಅದು.

ಕಿವುಡಿ ಮೂಕಿಯಾಗಿ ಮನೋಜ್ಞ ಅಭಿನಯ ನೀಡಿರುವ ಆರತಿ ಈ ಚಿತ್ರದಲ್ಲಿ ಒಂದು ವಿಭಿನ್ನ ನಾಯಕಿಯಾಗಿ ನೆಲೆ ನಿಲ್ಲುತ್ತಾರೆ. ನಿರ್ದೇಶಕರ ನಟಿ ಎಂಬ ಹೆಸರಿಗೆ ತಕ್ಕಂತೆ ಅಭಿನಯ ನೀಡಿದ್ದಾರೆ. ಮಾತಿಲ್ಲ, ಆದರೆ ಅವರ ಅಭಿನಯ ಮಾತಾಡುತ್ತದೆ ಇಡಿ ಚಿತ್ರದಲ್ಲಿ.  ಕಥಾಸಂಗಮದ ಮುನಿತಾಯಿ ಮತ್ತೆ ತೆರೆಯ ಮೇಲೆ ಅಪ್ಪಲಿಸಿದ್ದಾರೆ, ಆದರೆ ಇಲ್ಲಿ ಬರಿ ಕುರುಡಿಯಾಗಿ ಅಲ್ಲ, ಕಿವುಡಿ ಮತ್ತು ಮೂಕಿಯಾಗಿ.

ಈ ಚಿತ್ರ ಆರಂಭಿಕ ಹಂತದಲ್ಲಿ ಅರೆ ಆರತಿ ಏಕೆ ಈ ಚಿತ್ರಕಥೆಗೆ ಒಪ್ಪಿಕೊಂಡರು ಎಂಬ ಅನುಮಾನ ಕಾಡಿತ್ತು.. ಆದರೆ ಮೊದಲ ಅರ್ಧ ಅಥವಾ ಮುಕ್ಕಾಲು ಘಂಟೆ ಆದ ಮೇಲೆ ನಿಧಾನವಾಗಿ ಆವರಿಸಿಕೊಳ್ಳುತ್ತಾ ಹೋಗುತ್ತಾರೆ.

ತನ್ನ ತಂಗಿ ಮತ್ತು ಭಾವ ಭೂಮದೂಟಕ್ಕೆ ಕೂತಾಗ.. ತಾನು ಆ ಜಾಗದಲ್ಲಿದ್ದೇನೆ ಎನ್ನುವಂತೆ ಕಲ್ಪಿಸಿಕೊಂಡು ಅಭಿನಯ ಕಣ್ಣಿಗೆ ಕಟ್ಟುತ್ತದೆ. "ಮೂಕ ಹಕ್ಕಿಯು ಹಾಡುತಿದೆ" ಹಾಡು ಹಂತ ಹಂತವಾಗಿ ಮೂಡಿ ಬರುತ್ತದೆ, ಪ್ರತಿಹಂತದಲ್ಲೂ ಅವರ ಅಭಿನಯ ಅಬ್ಬಬ್ಬ ಎನ್ನಿಸುತ್ತದೆ.

ಆರತಿ ತನ್ನ ಮನೆಯಲ್ಲಿ ಇರಲಿ ಎಂದು ಶ್ರೀನಾಥ್ ಹೇಳಿದಾಗ, ಆ ಮೂಕವೇದನೆಯಲ್ಲೂ ಅಭಿನಯ ತೋರುವ ಆರತಿ ನಮ್ಮ ಹೃದಯದಲ್ಲಿ ಚಪ್ಪಾಳೆ ಗಿಟ್ಟಿಸುತ್ತಾರೆ.

ಅವರ ತಂಗಿ ಭಾವನ ಫೋಟೋ ತರಹವೇ ತನ್ನದು ಫೋಟೋ ಇರಬೇಕು ಎನ್ನುವಾಗ ಅವರು ತೋರುವ ಕಣ್ಣುಗಳ ಅಭಿನಯ ಸೂಪರ್.

ಮನಸ್ತಾಪ ಬಂದು ತನ್ನ ತಂಗಿ ಇವರನ್ನು ತನ್ನ ಕೋಣೆಯಿಂದ ಹೊರಗೆ ಹಾಕಿದಾಗ, ಕಣ್ಣಲ್ಲೇ ಮಡುವು ಗಟ್ಟಿದ ದುಃಖವನ್ನು ತೋರುತ್ತಾ.. ಕ್ಯಾಮೆರ ನಿಧಾನವಾಗಿ ಕಸದ ಕಡೆಗೆ ತೋರುತ್ತದೆ. ಪುಟ್ಟಣ್ಣ ಅವರ ಸೂಕ್ಷ್ಮ ನಿರ್ದೇಶಕನ ಮನಸ್ಸು ತೋರುವುದು ಆ ಪಾತ್ರದ ಬೆಲೆ ಕಸಕ್ಕಿಂತ ಕಡೆ ಎಂದು. ಸೂಪರ್ ಕಲ್ಪನೆ ಮತ್ತು ದೃಶ್ಯ ಸಂಯೋಜನೆ.

ತನ್ನ ತಂಗಿ ಮನೆಯಲ್ಲಿ ಇಲ್ಲದಾಗ, ಬಣ್ಣ ಬಣ್ಣದ ಕನಸ್ಸು ಕಾಣುತ್ತಾ, ತೋರಣವನ್ನು ಮುಟ್ಟಿ ಮುಟ್ಟಿ ನೋಡುವ ಆರತಿ ಅಭಿನಯ, ನಂತರ, ಶ್ರೀನಾಥ್ ಆರತಿ ಪಾತ್ರಕ್ಕೆ ಮನಸೋತು ಆಕೆಯನ್ನು ಒಪ್ಪಿಕೊಳ್ಳುವ ದೃಶ್ಯ, ನೆರಳು ಬೆಳಕಿನಲ್ಲಿ ಬಣ್ಣ ಬಣ್ಣದ ದೀಪದಲ್ಲಿ ತೋರುತ್ತಾರೆ. ಮತ್ತೊಮ್ಮೆ ಅದ್ಭುತ ದೃಶ್ಯ ಸಂಯೋಜನೆ ಪುಟ್ಟಣ್ಣ ಅವರದ್ದು.

ಶ್ರೀನಾಥ್.. ಗುರುಗಳೇ ನೀವು ಹೇಳಿ ನಾ ಅಭಿನಯಿಸುತ್ತೇನೆ ಎನ್ನುವ ದೃಷ್ಟಿಯಲ್ಲಿ ಇಡಿ ಚಿತ್ರದಲ್ಲಿ ನಿಲ್ಲುತ್ತಾರೆ. ಪ್ರತಿ ಮಾತನ್ನು ಅಳೆದು ತೂಗಿ ಮಾತಾಡುವ ಸಂಯಮದ ಪಾತ್ರ. ಒಮ್ಮೆ ಮಾತ್ರ ತನ್ನ ಮಡದಿಯ ಮಾತನ್ನು ಕೇಳಿ ಆರತಿಗೆ ಹೊಡೆಯುವ ದೃಶ್ಯದಲ್ಲಿ ಮಾತ್ರ ಸಂಯಮ ಕಳೆದುಕೊಳ್ಳುವ ಅಭಿನಯ ತೋರುತ್ತಾರೆ. ಆದರೆ ಇಡಿ ಚಿತ್ರದಲ್ಲಿ ಒಂದು ತೂಕಬದ್ಧ ಪಾತ್ರದಲ್ಲಿನ ಅಭಿನಯ ಶ್ರೀನಾಥ್ ಅವರಿಂದ ಮೂಡಿ ಬಂದಿದೆ.

"ಕಂದಾ ಓ ನನ್ನ ಕಂದಾ" ಹಾಡಿನಲ್ಲಿ ಶ್ರೀನಾಥ್ ಅವರ ಅಭಿನಯ ವಿಶೇಷ ಎನ್ನಿಸುತ್ತದೆ.. ಹಾಗೆಯೇ ಎಸ್ ಪಿ ಬಾಲಸುಬ್ರಮಣ್ಯಂ ಅವರು ಎದೆ ತುಂಬಿ ಹಾಡಿದ್ದಾರೆ. ಚಿತ್ರದ ಅಂತ್ಯದಲ್ಲಿ ಇದೆ ಹಾಡಿನ ತುಣುಕನ್ನು ಪುಟ್ಟಣ್ಣ ಅವರ ಮೆಚ್ಚಿನ ಗಾಯಕ ಪಿ ಬಿ ಶ್ರೀನಿವಾಸ್ ಹಾಡಿದ್ದಾರೆ.

ಕಳೆದ ದಶಕದ ಹಲಾವರು ಚಿತ್ರಗಳಲ್ಲಿ ಖಾಯಂ ಅಮ್ಮನ ಪಾತ್ರ ಮಾಡಿರುವ ಸತ್ಯಪ್ರಿಯ ಈ ಚಿತ್ರದಲ್ಲಿ ಎರಡನೇ ನಾಯಕಿ ಪಾತ್ರದಲ್ಲಿ ಶೋಭಿಸುತ್ತಾರೆ. ಪ್ರೀತಿ, ವಿಶ್ವಾಸ, ದ್ವೇಷ, ಅಸೂಯೆ ಎಲ್ಲವನ್ನು ಹೊರಹೊಮ್ಮಿಸುವ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ.

ಉಪಾಸನೆಯ ನಂತರ ಮತ್ತೊಮ್ಮೆ ಆರತಿ ಮತ್ತು ಸೀತಾರಾಂ ಅವರ ಜೋಡಿ ಅಭಿನಯ ಮನಸ್ಸು ತಾಕುತ್ತದೆ. ಅಪ್ಪ ಮಗಳಾಗಿ ಒಬ್ಬರನ್ನು ಇನ್ನೊಬ್ಬರು ಅನುಸರಿಸಿ ಅಭಿನಯ ನೀಡಿರುವುದು ವಿಶೇಷ. ಸೀತಾರಾಂ ತನ್ನ ಮಗಳು ಗರ್ಭಿಣಿ ಎಂದು ತಿಳಿದ ಮೇಲೆ, ತಾಳ್ಮೆ ಕೆಟ್ಟು ಕೂಗಾಡುವ ಅಭಿನಯ ಮನಸ್ಸನ್ನು ಕಲಕುತ್ತದೆ. ಅಲ್ಲಿವರೆಗೂ ತಾಳ್ಮೆ, ಅನುಭೂತಿ ಇಟ್ಟುಕೊಂಡು ತನ್ನ ಮಗಳನ್ನು ನೆರಳಾಗಿ ಕಾಯುವ ಅವರು ಅಚಾನಕ್ ಆವೇಶಕ್ಕೆ ಮನಸೋತು, ತನ್ನ ಮಗಳ ಮೇಲೆ ನಂಬಿಕೆ ಕಳೆದುಕೊಂಡು ರೌದ್ರಾವತಾರ ತಾಳುವ ದೃಶ್ಯ ಬೊಂಬಾಟ್.

ಮುಸುರಿ ಕೃಷ್ಣಮೂರ್ತಿ.. ಪ್ರಚಂಡ ಅಭಿನಯ ಹೊತ್ತ ಮಹನೀಯ ಇವರು. ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ಇಡಿ ಚಿತ್ರವನ್ನು ಆವರಿಸಿಕೊಳ್ಳುವ ಇವರು, ಇಲ್ಲಿ ಮತ್ತೊಮ್ಮೆ ತಮ್ಮ ಅಭಿನಯದ ಛಾಪನ್ನು ಒತ್ತಿದ್ದಾರೆ. ಕ್ರೌರ್ಯ, ಉಪಟಳ ಕೊಡುವ ಸೋದರಮಾವನಾಗಿ ಆರತಿಗೆ ನಾನಾ ವಿಧದಲ್ಲಿ ಕಾಟ ಕೊಡುವ ಅಭಿನಯ ಆಹಾ ಎನ್ನಿಸುತ್ತದೆ. ಅದರಲ್ಲೂ ಆರತಿ ಮಾನಸಿಕ ಹಿಂಸೆ ಕೊಡುವ ದೃಶ್ಯದಲ್ಲಿ ಅವರ ಅಭಿನಯ, ಖಳ ಎಂದರೆ ಮಾಮೂಲಿ ವೇಷ ಭೂಷಣದಲ್ಲೂ ಮಿಂಚಬಹುದು ಎಂದು ತೋರಿದ್ದಾರೆ.

ಅವರ ಚುರುಕು ಸಂಭಾಷಣೆ
"ಯಾವ ಬ್ರಾಂಡ್ ಸಿಮೆಂಟ್ ಆದರೇನೂ.. ನೀರು ಬಿದ್ದ ಕೂಡಲೇ ಕಚ್ಚಿಕೊಳ್ಳುತ್ತೆ"

"ಗಂಡು ಹೆಣ್ಣು ಎರಡು ಇಟ್ಟಿಗೆ ಇದ್ದ ಹಾಗೆ, ಎರಡು ಇಟ್ಟಿಗೆ ಬಲವಾಗಿ ಕಚ್ಚಿಕೊಂಡು ಹಾರೆ ಹಾಕಿದರೂ ಬಿಡಬಾರದು ಅಷ್ಟು ಬಲವಾಗಿ ಇರಬೇಕಾದರೆ, ಪರಸ್ಪರ ಒಪ್ಪಿಗೆ ಎನ್ನುವ ಸಿಮೆಂಟ್ ಇರಬೇಕು"

"ದೇಹಕ್ಕೆ ಹಿಂಸೆ ಕೊಟ್ಟರೆ ಭಾವನಿಗೆ ಗೊತ್ತಾಗುತ್ತದೆ, ಮಾನಸಿಕವಾಗಿ ಹಿಂಸೆ ಕೊಟ್ಟರೆ, ಕಬ್ಬಿಣದ ಗುಂಡು ಕುಲುಮೆಯಲ್ಲಿ ಕರಗಿ ನೀರಾಗುವ ಹಾಗೆ ಅವಳೊಳಗೆ ಇರುವ ಪಿಂಡ ಹಾಗೆ ಕರಗಿ ನೀರಾಗಿ ಹೋಗುತ್ತದೆ"

ಬಾಯಲ್ಲಿ ಇರೋದು ನಾಲಿಗೆನೋ ಎಕ್ಕಡಾನೋ ಎನ್ನುವ ಮಾತಿಗೆ "ಎಕ್ಕಡಾನೆ ಅಂದುಕೋ" ಎಂದು ಹೇಳಿ ನಾಲಿಗೆಯನ್ನು ಹೊರಕ್ಕೆ ಹಾಕಿ "ಎಕ್ಕಡ ಆಗೊಯ್ತೋ" ಎನ್ನುತ್ತಾರೆ.. ತದನಂತರ ಸೀತಾರಾಂ ಮುಸುರಿಯನ್ನು ಹೊಡೆದು ದೂಕುತ್ತಾರೆ, ಜೋಕಾಲಿಯನ್ನು ದಾಟಿ ನೆಗೆದು ಬೀಳುತ್ತಾರೆ.. ಬಹಳ ನಿಜವಾಗಿ ಮೂಡಿ ಬಂದಿದೆ ಈ ದೃಶ್ಯ.

ಪುಟ್ಟಣ್ಣ ಅವರು ಈ ಚಿತ್ರಕಥೆಯನ್ನು ತುಂಬಾ ಚೆನ್ನಾಗಿ ಹೆಣೆದಿದ್ದಾರೆ. ಬೋರ್ ಅಥವಾ ಅಳುಮುಂಜಿ ಚಿತ್ರವಾಗಬಹುದಿದ್ದ ಚಿತ್ರವನ್ನು ಸಹ್ಯವಾಗಿ ಚಿತ್ರಿಸಿದ್ದಾರೆ.

ಧರ್ಮ ಸೆರೆ ಎಂದಾಗ ನಾವೇ ಸೃಷ್ಟಿಸಿಕೊಂಡಿರುವ ಈ ಜಗತ್ತಿನ ನಿಯಮದಲ್ಲಿ ನಾವೇ ಬಂಧಿಯಾಗಿ ನರಳುವುದನ್ನು ಎದಿ ಚಿತ್ರದ ಹೆಸರನ್ನು ಕಿಟಕಿಯ ಸರಳುಗಳನ್ನು ಸೆರೆಮನೆಯ ಸರಳುಗಳ ಹಾಗೆ ನೆರಳಲ್ಲಿ ತೋರಿಸಿರುವುದು ಅವರ ಜಾಣ್ಮೆಗೆ ಸಾಕ್ಷಿ
ಮದುವೆ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ಚಿತ್ರಿಸಿರುವುದು.
ಧರ್ಮ ಜಿಜ್ಞಾಸೆಯನ್ನು ಕೆಲವೇ ಮಾತುಗಳಲ್ಲಿ ಮೂಡಿಸಿರುವುದು
ಆರಂಭಿಕ ದೃಶ್ಯದಲ್ಲಿಯೇ ನಾಯಕಿ ಮೂಗಿ ಮತ್ತು ಆಕೆಯ ಮೂಕ ಪ್ರಾಣಿಗಳ ಮೇಲಿನ ಮಮಕಾರ
ಈ ಚಿತ್ರದಲ್ಲಿ ಬರಿ ನಟರಿಂದ ಅಷ್ಟೇ ಅಲ್ಲದೆ ಪ್ರಾಣಿಗಳಿಂದ ಕೂಡ ಅಭಿನಯ ತೆಗೆದಿರುವುದು.
            ಬಳೆಗಾರನನ್ನು ಮತ್ತೆ ಕರೆದು ತರುವ ನಾಯಿ ಕೋತಿ
            ಮುಸುರಿ ಆರತಿಯ ಮೇಲೆ ಕಣ್ಣು ಹಾಕಿದಾಗ ಪರಕೆ ಸೇವೆ ಮಾಡುವ ಕೋತಿ
            ಆರತಿಯನ್ನು ಬಿಡದೆ ಹಿಂಬಾಲಿಸುವ ಕೋತಿ ಮತ್ತು ನಾಯಿ
ಕೈ ಹಿಡಿದ ಹೆಂಡತಿ ಕೋಪಗೊಂಡು ನಾಯಕನ ಜೊತೆಗಿನ ಫೋಟೋವನ್ನು ಒಡೆದು ಹಾಕಿದಾಗ.. ಆ ಫೋಟೋದಲ್ಲಿರುವ ವ್ಯಕ್ತಿಗಳು ಮಾತಾಡಿದಾಗ ಕ್ಯಾಮೆರ ಕೊಡ ಆ ಚಿತ್ರದಲ್ಲಿನ ವ್ಯಕ್ತಿಗಳ ಮೇಲೆ ಕೆಂದ್ರಿಕರಿಸಿರುವುದು.
ಗಂಡ ಹೆಂಡತಿ ಸಂಭಾಷಣೆಯನ್ನು ಒಡೆದ ಗಾಜಿನ ಫಿಲ್ಟರ್ ನಲ್ಲಿ ಚಿತ್ರಿಸಿರುವುದು.. ಗಂಡ ಹೆಂಡಿರ ಮಧ್ಯೆ ಸಂಬಂಧ ಒಡೆದಿದೆ ಎಂದು ತೋರಿಸುವ ತಾರ್ಕಿಕ ದೃಶ್ಯ
ಕ್ಷಮೆಯಾಚಿಸುವ ಗಂಡ ಮೇಲೆ ಕೋಪಗೊಂಡ ಹೆಂಡತಿ ತಾನು ಗಂಡನೊಡನೆ ಮಾತಾಡೋಲ್ಲ ಎಂದು ಬಾಗಿಲು ಹಾಕಿಕೊಂಡಾಗ, ಬಾಗಿಲ ಮೇಲಿನ ಸಿಮೆಂಟ್ ಗೋಡೆ ಬಿರುಕು ಬಿಟ್ಟುಕೊಳ್ಳುವುದು ಸಾಂಕೇತಿಕವಾಗಿ ಮೂಡಿಬಂದಿದೆ.

"ಈ ಸಂಭಾಷಣೆ" ಹಾಡಿನಲ್ಲಿ ಬಣ್ಣ ಬಣ್ಣದ ಕನಸ್ಸನ್ನು ಕಾಣುವ ನಾಯಕ ನಾಯಕಿಯ ಮನಸ್ಸನ್ನು ಚಿತ್ರಿಕರಿಸುತ್ತಲೇ ಫಿಲ್ಟರ್ ಮೂಲಕ ಬಣ್ಣ ಬಣ್ಣವನ್ನು ತೋರುವ ಜಾಣ್ಮೆ ಇಲ್ಲಿ ಪುಟ್ಟಣ್ಣ ಅವರದ್ದು.

ಹಿರಿಮಗಳಿಗೆ ಮದುವೆ ಮಾಡದೆ ಕಿರಿಮಗಳಿಗೆ ಮದುವೆ ಮಾಡಿದರೆ ಧರ್ಮಸೆರೆಗೆ ಸಿಕ್ಕಿದಂತಾಗುತ್ತದೆ.. ಎನ್ನುವ ಒಂದು ಚಿಕ್ಕ ಸೆಲೆಯನ್ನು ಸುಂದರ ಕಥೆಯನ್ನಾಗಿ ಮಾಡಿರುವುದು ಜಡಭರತರ ಪ್ರತಿಭೆಯಾದರೆ, ಅದೇ ಕಥೆಯನ್ನು ಚಿತ್ರಕ್ಕೆ ಒಗ್ಗುವಂತೆ ಮೂಡಿಸಿರುವುದು ಪುಟ್ಟಣ್ಣ ಅವರ ಜಾಣ್ಮೆ. ಮೊದಲ ಮಗಳು ಅಂಗವಿಹೇನೆ ಆಗಿದ್ದಾಗ ಎರಡನೇ ಮಗಳಿಗೆ ಮದುವೆ ಮಾಡಬಹುದು ಎಂದು ಗರುಡ ಪುರಾಣದಲ್ಲಿ ಹೇಳಿದ್ದಾರೆ ಎಂದಾಗ .. ಪುರಾಣ ಆ ಕಾಲದಲ್ಲಿ ಇತ್ತು, ನಡೆಯುತ್ತಿತ್ತು ಈಗ ನಡೆಯುತ್ತದೆಯೇ, ಸಮಾಜದಲ್ಲಿ ಹೀಗೆ ನಡೆಯಬಾರದು, ಈ ಮದುವೆ ನಡೆಯಬಾರದು ಎಂದಾಗ.. ಅದಕ್ಕೆ ಏನಾದರೂ ಪರಿಹಾರ ಬೇಕು ಎಂಬಲ್ಲಿಂದ ಈ ಚಿತ್ರ ಶುರುವಾಗುತ್ತದೆ. ಆರತಿ ಜೊತೆಯಲ್ಲಿ ಸಾಂಕೇತಿಕವಾಗಿ ಮದುವೆ ಅಷ್ಟೇ ಎಂದು ಶ್ರೀನಾಥ್ ಹೇಳುವ ದೃಶ್ಯದಲ್ಲಿ ಎಲ್ಲರೂ ಸೇರಿ ಹೇಳುವಾಗ ವಾಲಗದ ತಂಡವನ್ನು ತೋರುತ್ತಾರೆ.. ಶ್ರೀನಾಥ್ ಕಿವಿಗೆ ಇವರು ಹೇಳಿದ ಮಾತುಗಳು ಬಿದ್ದಿವೆ ಎನ್ನುವಾಗ ಬರಿ ವಾಲಗವನ್ನು ತೋರುತ್ತಾರೆ. ಅಂದರೆ ಹಲವಾರು ಜನರು ಹೇಳಿದರೂ ಕಿವಿಗೆ ಹೋಗಬೇಕಾದು ಒಂದೇ ಮಾತುಗಳು ಎನ್ನುವ ಸಾಂಕೇತಿಕ ದೃಶ್ಯ.

ಚಿತ್ರಕಥೆಯನ್ನು ಅತ್ಯಂತ ನಾಜೂಕಾಗಿ ನಿರೂಪಣೆ ಮಾಡಿರುವ ಅವರ ಯಶಸ್ಸಿಗೆ ಸಹಭಾಗಿಯಾಗಿ ಸಂಭಾಷಣೆ ಬರೆದವರು ಯೋಗಣ್ಣ ಮತ್ತು ಸೋರೆಟ್ ಅಶ್ವಥ್. ಚಿತ್ರಕ್ಕೆ ತಕ್ಕ ಸಾಹಿತಿ, ಸಾಹಿತ್ಯಕ್ಕೆ ತಕ್ಕ ಸಂಗೀತ ಎನ್ನುವ ಮನೋಭಾವ ಇದ್ದ ಪುಟ್ಟಣ್ಣ ಈ ಚಿತ್ರದ ಎಲ್ಲಾ ಹಾಡುಗಳನ್ನು ತಮ್ಮ ಆಪ್ತ ವಿಜಯನಾರಸಿಂಹ ಅವರಿಂದ ಬರೆಸಿದ್ದಾರೆ. ಇಡಿ ಚಿತ್ರಕ್ಕೆ ಬೆನ್ನೆಲುಬು ಹಾಡುಗಳು ಮತ್ತು ಹಿನ್ನೆಲೆ ಸಂಗೀತ, ಇದರಲ್ಲಿ ಯಶಸ್ವಿಯಾದವರು ಉಪೇಂದ್ರ ಕುಮಾರ್.

ಇನ್ನು ಈ ಚಿತ್ರದ ಇನ್ನೊಂದು ಉತ್ತಮ ಅಂಶ ಎಂದರೆ.. ಪುಟ್ಟಣ್ಣ ಅವರ ಮನಸ್ಸೊಳಗೆ ಇರುವಂತೆಯೇ ನೆರಳು ಬೆಳಕಿನ ಆಟವನ್ನು ದೃಶ್ಯಕಾವ್ಯವಾಗಿ ಚಿತ್ರಿಕರಿಸಿರುವುದು ಛಾಯಾಗ್ರಾಹಕ ಎಸ್ ಮಾರುತಿರಾವ್.

ಒಂದು ಸಂಕೀರ್ಣ ವಿಷಯವನ್ನು ಅಷ್ಟೇ ಸುಲಭ ಎನ್ನುವ ರೀತಿಯಲ್ಲಿ ಸಂಭಾಷಣೆ, ದೃಶ್ಯ ಜೋಡಣೆ ಮತ್ತು ಹಾಡುಗಳು ಮತ್ತು ಹಿನ್ನೆಲೆ ಸಂಗೀತದಿಂದ ಜೊತೆಯಲ್ಲಿ  ಎಲ್ಲಾ ಕಲಾವಿದರ ಹದವರಿತ ಅಭಿನಯವನ್ನು ತೆಗೆದು ಒಂದು ಸಹ್ಯ ಚಿತ್ರವನ್ನಾಗಿ ಮಾಡಿದ್ದಾರೆ ನಮ್ಮ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್.

ಮತ್ತೆ ಮುಂದೆ ಅವರ ಚಿತ್ರರತ್ನ ರಂಗನಾಯಕಿಯನ್ನು ಬರ ಮಾಡಿಕೊಳ್ಳೋಣ! 

Friday, June 19, 2015

ಕನೆಕ್ಷನ್ ಪಾಂಡವರು... ಪಡುವಾರಹಳ್ಳಿ ಪಾಂಡವರು (1978)

ಅಡಿಗೆ ಮಾಡುವಾಗ ಕೆಲವೊಮ್ಮೆ ಎಲ್ಲಾ ಪದಾರ್ಥಗಳು ಸಿಗದೇ ಇದ್ದಾಗ ಇರುವುದನ್ನೇ ಹದವಾಗಿ ಉಪಯೋಗಿಸಿ ಒಂದು ಸವಿರುಚಿ ಮಾಡಬಹುದು. ಕೆಲವೊಮ್ಮೆ ಎಲ್ಲಾ ಪದಾರ್ಥಗಳು ಇದ್ದಾಗ ಅದನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿ ಸವಿ ಭೋಜನ ಮಾಡಬಹುದು..

ಇಂಥಹ ಒಂದು ಅದ್ಭುತ ಸಾಹಸಕ್ಕೆ ಕೈ ಹಾಕಿದ್ದು ಪುಟ್ಟಣ್ಣನವರು ಈ ಚಿತ್ರದಲ್ಲಿ... ಅಲ್ಲಿಯ ತನಕ ಕಥೆ, ಸಾಹಿತ್ಯ, ಸಂಭಾಷಣೆ, ಹೆಣ್ಣಿನ ಮನಸ್ಸಿನ ತುಮುಲಗಳು, ಅದ್ಭುತ ತಾಂತ್ರಿಕತೆ ಇದನ್ನೆಲ್ಲಾ ಇಟ್ಟುಕೊಂಡು ಪರಮಾದ್ಭುತ ಚಿತ್ರಗಳನ್ನು ಕೊಟ್ಟಿದ್ದ ಈ ಮಹಾನ್ ನಿರ್ದೇಶಕ.. ಅಚಾನಕ್ ಬೇರೊಂದು ಮಗ್ಗುಲಿಗೆ ಹೊರಳಿ.. ವ್ಯವಸ್ಥೆಯ ವಿರುದ್ಧ ಹೋರಾಡುವಂಥಹ ಚಿತ್ರ ಮಾಡಬಲ್ಲೆ ಎಂದು ತೋರಿಸಿದ ಚಿತ್ರ ಇದು. 

ಇದು ಅವರದೇ ನಿರ್ಮಾಣ ಲಾಂಛನದಲ್ಲಿ ಮೂಡಿ ಬಂದ ಕಲಾರತ್ನ. ಇಂದಿಗೂ ಈ ಚಿತ್ರ ಜನಮಾನಸದಲ್ಲಿ ಉಳಿದಿರುವುದು ಅದ್ಭುತ ಅಭಿನಯ, ಸಂಭಾಷಣೆ ಹಾಗೂ ಹಾಡುಗಳು. 

ತಮ್ಮ ಇಷ್ಟವಾದ ಪ್ರದೇಶ ಚಿಕಮಗಳೂರಿನ ಸುತ್ತಾ ಮುತ್ತಾ ಎನ್ ಮಾರುತಿ ರಾವ್ ಅವರ ಕ್ಯಾಮೆರಾದಲ್ಲಿ ಚಿತ್ರೀಕರಿಸಿದರು. ಸೊಂಪಾದ ಇಂಪಾದ ಸಂಗೀತ ಅವರ ಜೀವದ ಗೆಳೆಯ ವಿಜಯಭಾಸ್ಕರ್ ಅವರದ್ದಾಗಿತ್ತು. ಪ್ರತಿ ಹಾಡಿಗೆ ಭಿನ್ನ ಭಿನ್ನವಾಗಿ ಸಂಗೀತ ನೀಡಿರುವ ಅವರು, ಹಿನ್ನೆಲೆ ಸಂಗೀತದಲ್ಲಿ ಪವಾಡವನ್ನೇ ಮಾಡಿದ್ದಾರೆ. 

ಚಿತ್ರಕ್ಕೆ ತಕ್ಕ ಹಾಗೆ ಸಾಹಿತಿಗಳನ್ನು ಕರೆತರುತ್ತಿದ್ದ ಪುಟ್ಟಣ್ಣ ಅವರು ಈ ಚಿತ್ರಕ್ಕೆ ಮೂವರು ಸಾಹಿತಿಗಳಿಂದ ಹಾಡುಗಳನ್ನು ಬರೆಸಿದರು.  

ಕಯ್ಯಾರ ಕಿಞಞಣ್ಣ ರೈ- 
ಮಹಾಕವಿ, ಸ್ವತಂತ್ರ ಹೋರಾಟಗಾರ, ಇಂತಹವರ ಕೈಯಿಂದ ಬಂದ ಸಾಹಿತ್ಯ ಬಳಸಿಕೊಂಡಿರುವ ಪುಟ್ಟಣ್ಣ ಸಾಧನೆಯನ್ನೇ ಮಾಡಿದ್ದಾರೆ. 
"ಸಾವಿರ ಸಾವಿರ ಯುಗಯುಗ ಕಳೆದರು ಸಾಗಿದೆ ಸಂಗ್ರಾಮ" ಎನ್ನುವ ಬಂಡಾಯ ಮಿಶ್ರಿತ ಹಾಡನ್ನು ಅದ್ಭುತವಾಗಿ ಹಾಡಿದವರು ಎಸ್ ಪಿ ಬಾಲಸುಬ್ರಮಣ್ಯಂ ಅವರು. ಜಿ ವಿ ಕೃಷ್ಣ ಅವರು ಸ್ವಾಮಿಗಳ ಪಾತ್ರದ ಅಭಿನಯ ನೆನಪಲ್ಲಿ ಉಳಿಯುತ್ತದೆ. 

"ಹಾಡೊಮ್ಮೆ ಹಾಡಬೇಕು" ಸಂಘಟಿತ ಮನೋಭಾವ ಬೇಕು ಎಂದು ಸಂದೇಶ ನೀಡುವ ಹಾಡು ಎಸ್ ಪಿ ಬಿ ಮತ್ತು ಪಿ ಬಿ ಎಸ್ ಅವರ ಅಮೋಘ ಧ್ವನಿಯಲ್ಲಿ ಮೂಡಿ ಬಂದಿತು. ಈ ಚಿತ್ರದ ಪಾಂಡವರು ಸೇರಿ ಹಾಡಿ ಕುಣಿಯುವ ಹಾಡಿನ ಚಿತ್ರೀಕರಣ ಸುಂದರವಾಗಿದೆ. 

"ಬಹಿಷ್ಕಾರ ನಿಮ್ಮ ಬಹಿಷ್ಕಾರಕ್ಕೆ ನಮ್ಮಯ ಒಮ್ಮತ ದಿಕ್ಕಾರ" ಹಳ್ಳಿಗಳಲ್ಲಿ ನಡೆಯುವ ರಾಜಕೀಯ, ಒಳ ಸಂಚು ಇದನ್ನೆಲ್ಲಾ ಪದಗಳಲ್ಲಿ ಕೂಡಿ ಹಾಕಿ ಬರೆದಿರುವ ಸಾಹಿತ್ಯ ಸೂಪರ್ ಸೂಪರ್ ಎನ್ನಲೇ ಬೇಕು.. ಎಸ್ ಪಿ ಬಿ ಅದೇ ರೋಷ ವೇಷದಲ್ಲಿ ಹಾಡಿದ್ದಾರೆ. ಈ ಚಿತ್ರದ ಪಾಂಡವರ ಮೇಲೆ ಈ ಹಾಡು ಮೂಡಿ ಬಂದಿದೆ 

ಸೋರಟ್ ಅಶ್ವತ್ 
ಅದ್ಭುತ ಸಾಹಿತಿ ಇವರು.. ತಮ್ಮ ಇತಿಮಿತಿಗಳಲ್ಲಿಯೇ ಅನೇಕ ಪ್ರಬುದ್ಧ ಹಾಡುಗಳನ್ನು, ಸಂಭಾಷಣೆಗಳನ್ನು ಕೊಟ್ಟ ಕಲಾ ಪ್ರತಿಭೆ ಇವರು. 

"ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ"  ಪಿ ಬಿ ಎಸ್ ಹಳ್ಳಿಯ ಜೀತದ ಪದ್ಧತಿಯನ್ನು ನವಿರಾಗಿ ರೂಪಿಸಿರುವ ಈ ಹಾಡನ್ನು ಅಷ್ಟೇ ಸೂಕ್ಷಮತೆಯಿಂದ ಹಾಡಿದ್ದಾರೆ. ಜೈಜಗದೀಶ್ ಸುಂದರ ತರುಣ.. ಹಳ್ಳಿ ಮಕ್ಕಳಿಗೆ ಸಂದೇಶ ಹೇಳುತ್ತಾ, ಅಲ್ಲಿಯ ಹುಳುಕುತನವನ್ನು ಎತ್ತಿ ಹಿಡಿಯುವ ಅಭಿನಯ ಈ ಹಾಡಿನಲ್ಲಿ ಸೊಗಸಾಗಿದೆ. ಬೆಳಗಿನ ಹೊತ್ತನ್ನು ಬಿಂಬಿಸುವ ನಿಟ್ಟಿನಲ್ಲಿ ಆ ಸೂರ್ಯ ರಶ್ಮಿ, ಧೂಳು, ಬೆಳಕು ನೆರಳಿನ ಆಟ ಎಲ್ಲವನ್ನು ಅದ್ಭುತವಾಗಿ ತಂದಿದ್ದಾರೆ. 
"ಕಣ್ಣ ಮುಚ್ಚಿ ಕುಳಿತರೆ ಕಾಣ್ವರು ನೂರಾರು ಶಿವರು" ಮಠದ ಸ್ವಾಮೀಜಿಯ ಪಾತ್ರಧಾರಿ ಈ ಹಾಡನ್ನು ಹಾಡುತ್ತಾ ಇಡಿ ಹಳ್ಳಿಯನ್ನು ಸುತ್ತುತ್ತಾರೆ.. ಬಡವ, ಬಲ್ಲಿದ, ನೋವು, ನಲಿವು, ದೇವರು ಕೂಡ ಎಲ್ಲೋ ತಪ್ಪು ಮಾಡಿದ್ದಾನಾ ಎನ್ನುವ ಅರ್ಥದಲ್ಲಿ ಬರುವ ಈ ಹಾಡು ಉತ್ಕೃಷ್ಟ ಸಾಹಿತ್ಯದಿಂದ ಗಮನಸೆಳೆಯುತ್ತದೆ. 

ದೊಡ್ಡರಂಗೇಗೌಡ 
ಹಳ್ಳಿಸೊಗಡಿನ ಭಾಷೆಯನ್ನು ಉಪಯೋಗಿಸಿಕೊಂಡು ಹಾಡುಗಳನ್ನು ಬರೆಯುವುದರಲ್ಲಿ ಇವರದು ಪ್ರಚಂಡ ಪ್ರತಿಭೆ. ಅನೇಕ ಇಂಥಹ ಸುಮಧುರ ಹಾಡುಗಳನ್ನು ಬರೆದಿರುವ ಇವರ ಪ್ರತಿಭೆಯನ್ನು ಸಶಕ್ತರೀತಿಯಲ್ಲಿ ಈ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ ಪುಟ್ಟಣ್ಣನವರು. 

"ಏಸು ವರ್ಸ ಆಯ್ತೆ ನಿಂಗೆ ನನ್ನ ಬಂಗಾರಿ"   ಸುಮಧುರ ಕಂಠದ ಒಡತಿ ಕಸ್ತೂರಿ ಶಂಕರ್ ಮತ್ತು ಎಸ್ ಪಿ ಬಿ ಅವರ ಹಾಡಿಗೆ ತಕ್ಕ ಹಾಗೆ ಅಂಬರೀಶ್ ಮತ್ತು ಸಹನಟಿ ನೃತ್ಯ ಮನಸ್ಸಿಗೆ ಹಿತ ನೀಡುತ್ತದೆ. ಹಳ್ಳಿಯ ಶೈಲಿಯಲ್ಲಿಯೇ ಚಿತ್ರೀಕರಣ, ನೃತ್ಯ, ಪದಗಳ ಬಳಕೆ ಈ ಹಾಡನ್ನು ಮೇಲಕ್ಕೆ ಒಯ್ಯುತ್ತದೆ. 

"ಶ್ರೀ ರಾಮ ಬಂದೌನೆ, ಸೀತೆಯ ಕಾಣಲಿಕ್ಕೆ" ಮತ್ತೆ ಕಸ್ತೂರಿ ಶಂಕರ್ ಗಾಯನ ಪ್ರತಿಭೆ ಅನಾವರಣಗೊಂಡಿದೆ. ಹಳ್ಳಿ ಭಾಷ ಪ್ರಯೋಗ, ಸಮರ್ಥವಾಗಿ ಉಪಯೋಗಿಸಿರುವ ರೀತಿ ಗಾಯನ ಶೈಲಿ ಹಿತನೀಡುತ್ತದೆ. 

"ಜನುಮ ನೀಡಿದ ಭೂತಾಯಿಯ" ಈ ಚಿತ್ರದ ಸಶಕ್ತ ಹಾಡು ಜೊತೆಯಲ್ಲಿಯೇ.. ಪರನಾಡಿನಲ್ಲಿರುವ ಎಲ್ಲರ ಮಂತ್ರವಾಗಿ ಹೋಗಿರುವ ಈ ಹಾಡಿನ ಪ್ರತಿ ಸಾಲುಗಳು ಜೀವಂತ. ರಾಮಕೃಷ್ಣ ಅದ್ಭುತ ರೀತಿಯಲ್ಲಿ ಅಭಿನಯಿಸಿದ್ದಾರೆ. ಹಳ್ಳಿಯ ಮೂಲೆ ಮೂಲೆಯನ್ನು ಪರಿಚಯಿಸಿರುವ ಈ ದೃಶ್ಯಗಾರಿಕೆ ಇಷ್ಟವಾಗುತ್ತದೆ.   

ರಾವ್ ಬಹದ್ದೂರ್ ಅವರ ಸತ್ವಯುಕ್ತ ಕಥೆಯನ್ನು ಪುಟ್ಟಣ್ಣನವರು ಇನ್ನಷ್ಟು ಬಿಗಿಗೊಳಿಸಿ ಅತ್ಯುತ್ತಮ ಚಿತ್ರಕಥೆ ಮಾಡಿದ್ದಾರೆ. ಇದಕ್ಕೆ ಕಳಶವಿಟ್ಟಂತೆ ಯೋಗಾನರಸಿಂಹ ಮತ್ತು ಬಾಬು ಕೃಷ್ಣಮೂರ್ತಿಯವರ ಸಂಭಾಷಣೆ ಇಡಿ ಚಿತ್ರವನ್ನು ಗಟ್ಟಿಯಾಗಿ ಹಿಡಿದಿಟ್ಟಿದೆ. ಸಂಭಾಷಣೆ ಈ ಚಿತ್ರದ ಅತ್ಯುತ್ತಮ ಅಂಶಗಳಲ್ಲಿ ಒಂದು. 

ಕೆಲವು ತುಣುಕುಗಳು 
"ಊರ ಮುಂದಿನ ಹಾದಿ ಅಂದರೆ ನೂರಾರು ಜನ ತಿರುಗಾಡಿರ್ತಾರೆ.. ಇರೋ ಹೆಜ್ಜೆ ಗುರುತೆಲ್ಲ ನಂದೇ ಅಂದ್ರೆ"
"ಜಾತ್ರೆಲಿ ಉಂಡ ಮೇಲೆ ಯಾರಾದ್ರು ಎಲೇನ ಮನೆಗೆ ತರ್ತಾರೆನೋ.."
"ಒಂದು ಬಾಟಲಿ ಬ್ರಾಂಡಿ ಕೊಡೊ ಸುಖ ಒಂದು  ಕೊಡ ನೀರು ಕೊಡುತ್ತೇನೋ"
"ಇವ್ರು ಅಂದ್ರೆ ಪಡುವಾರಹಳ್ಳಿ.. ಪಡುವಾರಹಳ್ಳಿ ಅಂದ್ರೆ  ಇವರು"
"ನಮ್ಮ ಹತ್ರ ನಗಾರಿ ಅಯ್ತೆ. ಒಂದು ಸಾರಿ ಬಾರಿಸಿದರೆ ಚಂಡಮಾರುತದಲ್ಲಿ ತರಗೆಲೆಗಳ ಹಾಗೆ ತೂರಿ ಹೋಗ್ತೀರಾ"
"ಕಸ ತುಂಬಿದ ಮನೆ ಅಂತ ಮನೆನ ಸುಟ್ಟು ಹಾಕು.. ಕೆಸರಾಗಿದೆ ಅಂತ ಕಾಲನ್ನೇ ಕಡಿದು ಹಾಕು.. ಊರು ಹೊಲಸಾಗಿದೆ ಅಂತ ಊರನ್ನೇ ಬಿಡು"
"ಮೀಸೇನೆ ಮೂಗು ತಿನ್ನೋಕೆ ಶುರು ಮಾಡಿದ್ರೆ"
ಬ್ಯಾಸ್ಗೆಲಿ ಬರ ಸಿಡಿಲು ಬಂದಂತೆ ಬಂದೆ"

ಈ ಚಿತ್ರದ ನಾಯಕರು ಅಂಬರೀಶ್, ರಾಮಕೃಷ್ಣ, ಜೈಜಗದೀಶ್, ಮಹದೇವ್, ಚಂದ್ರಹಾಸ.. ಆದರೆ ಇಡಿ ಚಿತ್ರವನ್ನು ತಮ್ಮ ಭುಜದ ಮೇಲೆ ಹೊತ್ತು ನಿಂತವರು ಧೀರೇಂದ್ರ ಗೋಪಾಲ್, ಮತ್ತು ಕನೆಕ್ಷನ್ ಕಾಳಪ್ಪ ಪಾತ್ರದ ಮುಸುರಿ ಕೃಷ್ಣಮೂರ್ತಿ. 
ಕ್ರೌರ್ಯ, ಹಿಂಸೆ, ದಬ್ಬಾಳಿಕೆ, ದರ್ಪ, ಸಿರಿತನ ಎಲ್ಲವನ್ನು ಬರಿ ಮಾತುಗಳಿಂದಲೇ ವ್ಯಕ್ತ ಪಡಿಸುವ ಈ ಇವರಿಬ್ಬರ ಅಭಿನಯ ಅದ್ಭುತ. ಅವರಿಬ್ಬರ ಚಿತ್ರಜಗತ್ತಿನಲ್ಲಿ ಮೊದಲ ಸಾಲಲ್ಲಿ ನಿಲ್ಲುವ ಈ ಚಿತ್ರದ ಅಭಿನಯಕ್ಕೆ ಸಂಪೂರ್ಣ ಅಂಕಗಳು. 

ಬರಿ ಹೊಡೆದಾಟ, ಹಿಂಸೆ, ರಕ್ತಪಾತ ಬರಿ ಇವೆ ಖಳನಾಯಕನ ಆಸ್ತಿ ಎಂದು ತೆರೆಯ ಮೇಲೆ ನೋಡಿ ನೋಡಿ ಸಾಕಾಗಿದ್ದ ಪ್ರೇಕ್ಷಕನಿಗೆ ಅರೆ ಖಳ ನಾಯಕ ಹೀಗೂ ಇರಬಹುದು ಎಂದು ಆಶ್ಚರ್ಯ ಪಡುವಂತೆ ಅಭಿನಯವನ್ನು ತೆಗೆದಿದ್ದಾರೆ ಪುಟ್ಟಣ್ಣನವರು ಈ ಮಹಾನ್ ಪ್ರತಿಭೆಗಳಿಂದ. 

ಈ ಚಿತ್ರದ  ಬಗ್ಗೆ ಹೇಳಿದಷ್ಟು ಕಡಿಮೆಯೇ.. 

ಚಿತ್ರದ ಆರಂಭದಲ್ಲಿ ದರ್ಪ, ದಬ್ಬಾಳಿಕೆ, ಗುಂಡು, ಬಂದೂಕ ಇವೆಲ್ಲವೂ ಹಳ್ಳಿಯಲ್ಲಿ ಕಾಣುತ್ತಿದ್ದ ಈ ಕ್ರೂರ ಪದ್ದತಿಯನ್ನು ತೋರುವ ನಿಟ್ಟಿನಲ್ಲಿ ಫಲಕ ತೋರುವ ಆರಂಭದಿಂದ ಅಂತ್ಯದವರೆಗೂ ಪರದೆ ಎಡ ಬಲಕ್ಕೆ ಸರಿದಾಡುತ್ತಲೇ ಇರುತ್ತದೆ,  ಹಿನ್ನೆಲೆಯಲ್ಲಿ ಮದ್ದು, ಗುಂಡು, ಬಂದೂಕು, ಬೂಟು ಕಾಲಿನ ಸಪ್ಪಳ.. ಆರಂಭದಲ್ಲಿಯೇ ಅರಿವಾಗುತ್ತದೆ ಚಿತ್ರದ ಮೂಲ ಉದ್ದೇಶ ಏನು ಎಂದು. ಇದು ಪುಟ್ಟಣ್ಣ ಅವರ ಚಿತ್ರಗಳ ತಾಕತ್ತು. 

ಚಿತ್ರಕಥೆಯ ಅಮಲನ್ನು ಆರಂಭದಿಂದಲೇ ಏರಿಸಿ ಹಾಗೆ ಅದನ್ನು ಕಾಯ್ದುಕೊಂಡು ಕೊನೆಯವರೆಗೂ ಹಾಗೆ ಉಳಿಸಿ ತೋರಿಸುವುದು ಅವರ ನಿರ್ದೇಶಕನ ಸ್ಥಾನದ ಮೇಲೆ ಅವರಿಗಿದ್ದ ಪ್ರಬುದ್ಧತೆಯನ್ನು ತೋರಿಸುತ್ತಿತ್ತು. 

ಸಹಪಾತ್ರಗಳು ಮಚ್ಚೇರಿ, ಆರತಿ, ಶುಭ, ಮೈಸೂರು ಲೋಕೇಶ್, ಶ್ರೀ ಲಲಿತ,ಜಯಶ್ರೀ ಎಲ್ಲರ ಅಭಿನಯ ಹಿತಮಿತ. ಒಂದೇ ಒಂದು ಈ ಸನ್ನಿವೇಶ ಸರಿಯಿಲ್ಲ ಅನ್ನಿಸುವ ಮಾತೆ ಇಲ್ಲ. ಇಡಿ ಚಿತ್ರದ ಚಿತ್ರಕಥೆ ಅಷ್ಟು ಸಶಕ್ತವಾಗಿದೆ. 

ಪುಟ್ಟಣ್ಣ ಅವರ ಚಿತ್ರಗಳಲ್ಲಿಯೇ ಈ ಚಿತ್ರ ತೀರ ಭಿನ್ನ ವಿಭಿನ್ನ. ಅವರ ಶಕ್ತಿ ಹೆಣ್ಣಿನ ಅಂತರೀಕ ತುಮುಲಗಳನ್ನು ಉಪಯೋಗಿಸಿಕೊಂಡೆ ಒಂದು ಹಳ್ಳಿಯಲ್ಲಿನ ಸಂಪೂರ್ಣ ಚಿತ್ರ ಕೊಡುವುದು ಅವರಿಗೆ ಸಾಧ್ಯವಾಗಿದ್ದು ಅವರ ಅದ್ಭುತ ಕಲೆಗೆ ಒಂದು ಸಾಕ್ಷಿ. 


ಬರುತ್ತಲೇ ಇರುತ್ತಾರೆ.. ನೀವು ಓಡಿಸುತ್ತಲೇ ಇರಿ.. ಬರುತ್ತಲೇ ಇರುತ್ತಾರೆ ಓಡಿಸುತ್ತಲೇ ಇರಿ ಎನ್ನುವ ಶ್ರೀಲಲಿತ ಅವರ ಸಂಭಾಷಣೆಯೊಂದಿಗೆ ಈ ಚಿತ್ರ ಮುಗಿಯುತ್ತದೆ. ಹಾಗೆ ಸಮಸ್ಯೆಗಳು ಇದ್ದೆ ಇರುತ್ತವೆ.. ಧೈರ್ಯ ತುಂಬಿಕೊಂಡು ಎದೆಗುಂದದೆ ಅದನ್ನು ಮೆಟ್ಟಿ ನಿಲ್ಲಬೇಕು ಎನ್ನುವ ಸಂದೇಶ ಕೊಟ್ಟಿದ್ದಾರೆ ನಮ್ಮ ಗುರುಗಳು ಪುಟ್ಟಣ್ಣ ಕಣಗಾಲ್. 


ಅದ್ಭುತ ಅನುಭವ ಖಂಡಿತ ಕೊಡುತ್ತದೆ.. ಒಮ್ಮೆ ನೋಡಿ .. ಪಡುವಾರಹಳ್ಳಿ ಪಾಂಡವರು... !!!

Friday, May 15, 2015

ಗಿರ ಗಿರ ತಿರುಗಿಸುವ ಕಾಲೇಜು ರಂಗ (1976)

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.. ದಾಸರ ಪದ ನೆನಪಿಗೆ ಬರುತ್ತಿದೆ..

ಇಡಿ ಚಿತ್ರವನ್ನು ನೋಡಿದಾಗ ಅನ್ನಿಸುತ್ತದೆ ಇಲ್ಲಿ ಗುರು ಶಿಷ್ಯರ ಇಬ್ಬರ ಕೈಚಳಕವು ಆಳವಾಗಿದೆ ಎಂದು.

"ಕಾಲೇಜು ರಂಗ" ಈ ಚಿತ್ರ ಒಂದು ರೀತಿಯಲ್ಲಿ ಪುಟ್ಟಣ್ಣ-ಪಂತುಲು ಅವರ ಅಮೋಘ ಸಂಗಮ.. ಎಲ್ಲೋ ಓದಿದ್ದ ನೆನಪು, ಪುಟ್ಟಣ್ಣ ಅವರ ಗುರುಗಳು ಬಿ ಆರ್ ಪಂತುಲು ಈ ಚಿತ್ರವನ್ನು ಮಾಡಬೇಕೆಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ, ಆ ಕಾಲನ ಸಾಮ್ರಾಜ್ಯದಿಂದ ಕರೆ ಬಂದ ಕಾರಣ ಹೊರಟು ಬಿಟ್ಟರು ಎಂದು.

ಗುರುಗಳಿಗೆ ದಕ್ಷಿಣೆ ನೀಡುವ ಒಂದು ಸುಸಂಧರ್ಭ ಪುಟ್ಟಣ್ಣ ಅವರಿಗೆ ಒದಗಿ ಬಂತು. ಹಾಗಾಗಿ ಈ ಚಿತ್ರವನ್ನು ಗುರುಗಳ ಕಣ್ಣಲ್ಲಿ ಮತ್ತು ತಮ್ಮ ಮನದಲ್ಲಿ ಮೂಡಿದಂತೆ ಚಿತ್ರಿಸಿದ್ದಾರೆ.

೧೯೭೬ ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ಅತ್ಯುತ್ತಮ ಕಲಾವಿದರ ದಂಡೆ ನೆರೆದಿತ್ತು. ಕಲ್ಯಾಣ್ ಕುಮಾರ್, ಲೋಕನಾಥ್, ಗೋಡೆ ಲಕ್ಷ್ಮಿನಾರಾಯಣ, ಡಿಕ್ಕಿ ಮಾಧವರಾವ್, ಜಿ ಕೆ ಗೋವಿಂದರಾವ್, ಲೀಲಾವತಿ, ಮುಸುರಿ ಕೃಷ್ಣಮೂರ್ತಿ ಇನ್ನೂ ಅನೇಕರ ಜೊತೆಯಲ್ಲಿ ಹೊಸ ಮುಖವಾದ ಜಯಸಿಂಹ, ಪದ್ಮಶ್ರೀ ಮುಂಚೂಣಿಯಲ್ಲಿ ಅಭಿನಯಿಸಿದ್ದ ಈ ಚಿತ್ರ ಶ್ರೀ ಬಿ ಜಿ ಎಲ್ ಸ್ವಾಮೀ ಅವರ ಕಾಲೇಜು ರಂಗ ಎನ್ನುವ ಕಾದಂಬರಿ ಆಧರಿಸಿತ್ತು ಹಾಗೂ ಅವರೇ ಸಂಭಾಷಣೆಯನ್ನು ಒದಗಿಸಿದ್ದರು.


ಪದ್ಮಿನಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ಈ ಚಿತ್ರದ ಆರಂಭದಲ್ಲಿ ಪುಟ್ಟಣ್ಣ ತಮ್ಮ ಗುರುಗಳ ಬಗ್ಗೆ ಒಂದು ಸಂಕ್ಷಿಪ್ತ  ವಿವರ ಮತ್ತು ತಮ್ಮ ಮನದಾಳದ ಮಾತುಗಳಿಂದ ಗುರುದಕ್ಷಿಣೆಯ ಜೊತೆಗೆ ಆ ಮಹಾನ್ ಪ್ರತಿಭೆಗೆ ಒಂದು ಸುಂದರ ಚೌಕಟ್ಟನ್ನು ಹಾಕಿದ್ದಾರೆ.

ಪುಟ್ಟಣ್ಣ ಅವರು ಸಾಹಿತಿಗಳಿಗೆ ಕಲಾವಿದರಿಗೆ ಮತ್ತು ಅವರ ಕಲೆಗೆ ಬೆಲೆ ಕೊಡುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಚಿತ್ರಕಥೆ ಸಲಹೆ ಎಂದು ಯೋಗಾನರಸಿಂಹ ಮೂರ್ತಿ, ನರೇಂದ್ರಬಾಬು, ನವರತ್ನರಾಂ, ಎ ಎಸ್ ಮೂರ್ತಿ ಹೆಸರನ್ನು ಉಲ್ಲೇಖಿಸುತ್ತಾರೆ. ಹಾಡುಗಳು ಚಿ ಉದಯಶಂಕರ್, ಆರ್ ಎನ್ ಜಯಗೋಪಾಲ್ ಮತ್ತು ವಿಜಯನಾರಸಿಂಹ ಅವರ ಮೂಸೆಯಲ್ಲಿ ಅರಳಿದರೆ, ಅದಕ್ಕೆ ಸಂಗೀತ ಗುರುಗಳು ಪಂತಲು ಅವರ ಆಸ್ಥಾನ ಸಂಗೀತಗಾರರಾದ ಟಿ ಜಿ ಲಿಂಗಪ್ಪ ಅವರದ್ದು. ಚಿತ್ರವನ್ನು ಬಿ ಎನ್ ಹರಿದಾಸ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಗುರುಗಳಿಗೆ ಈ ಚಿತ್ರವನ್ನು ಅರ್ಪಿಸುತ್ತಾ ಚಿತ್ರಕಥೆ ನಿರ್ದೇಶನದ ಕುರ್ಚಿಯಲಿ ಪುಟ್ಟಣ್ಣ ಅವರ  ಕೂರುತ್ತಾರೆ.

ಬರಿ ಗೋದಾಮಿನಲ್ಲಿ ಮಾತ್ರ ಇಲಿಗಳು ಹೆಗ್ಗಣಗಳು ಇರೋಲ್ಲ ವಿದ್ಯಾ ಸಂಸ್ಥೆಗಳಲ್ಲೂ ನೆಲೆಸಿರುತ್ತವೆ ಎನ್ನುವುದನ್ನು ಸೂಕ್ಷ್ಮವಾಗಿ ಪಾತ್ರಗಳನ್ನ್ನು ಪರಿಚಯಿಸುತ್ತಾ ಆ ಪಾತ್ರಗಳ ಹೊಟ್ಟೆಬಾಕತನವನ್ನು ಮತ್ತು ಅನಾರೋಗ್ಯಕಾರಿ ಲಂಚಗುಳಿತನವನ್ನು, ತಮಗೆ ಅನ್ನ ನೀಡುತ್ತಿರುವ ಸಂಸ್ಥೆಗೆ ಕನ್ನ ಹಾಕುವ ಪರಿಯನ್ನು ವಿವರವಾಗಿ ತೋರಿಸುತ್ತಾ ಹೋಗುತ್ತಾರೆ.

ಎರಡು ವ್ಯಕ್ತಿಗಳ ಮನಸ್ಥಿತಿಯನ್ನು ಬಿಂಬಿಸುವ ಈ ಸಂಭಾಷಣೆಯ ಜಾದೂ ನೋಡಿ.

ಕಲ್ಯಾಣಕುಮಾರ್ ಒಳ್ಳೆಯತನಕ್ಕೆ, ತನಗೆ ಹುದ್ದೆ ಕೊಟ್ಟಿರುವ ಸಂಸ್ಥೆಗೆ ಅಳಿಲು ಸೇವೆ ಮಾಡಬೇಕೆನ್ನುವ ಹಂಬಲ ಇಟ್ಟುಕೊಂಡವರು. ಕಾಲೇಜಿನ ಆಡಳಿತ ಮಂಡಳಿಯ ಪ್ರೆಸಿಡೆಂಟ್ ಜಿ ಕೆ ಗೋವಿಂದರಾವ್ ಅವರ ಮನೆಗೆ ಬರುತ್ತಾರೆ. ಅಲ್ಲಿನ ಸಂಭಾಷಣೆ

ಪ್ರೆಸಿಡೆಂಟ್ ಅವರ ಧರ್ಮಪತ್ನಿ ಲೀಲಾವತಿ  ಹೇಳುತ್ತಾರೆ "ನೋಡಿ ನೀವು ನಿಜ ಹೇಳಿದರೂ ನಂಬ್ತೀರಿ.. ಸುಳ್ಳು ಹೇಳಿದರೂ ನಂಬ್ತೀರಿ.. " ಎಂದಾಗ ಕಲ್ಯಾಣ್ ಕುಮಾರ್ ಹೇಳುತ್ತಾರೆ " ಅಮ್ಮ ನಾನು ನಿಜ ಹೇಳಿದರೆ ಮಾತ್ರ ನಂಬ್ತೀನಿ"

ಅದೇ ಮಾತನ್ನು ಎರಡು ಮುಖದ, ಅಧಿಕಾರದ ದುರಾಸೆ ಇಟ್ಟುಕೊಂಡು ಹೇಗಾದರೂ ಸರಿ ಪ್ರಿನ್ಸಿಪಾಲ್ ಹುದ್ದೆಯಲ್ಲಿ ಕೂರಬೇಕು ಎನ್ನುವ ಹಠ ತೊಟ್ಟ ಲೋಕನಾಥ್ ಅವರಿಗೆ ಲೀಲಾವತಿ ಇದೆ ಮಾತನ್ನು ಹೇಳಿದಾಗ "ನೋಡಿಮ್ಮ ನಿಜ ಯಾವುದು ಸುಳ್ಳು ಯಾವುದು ನನಗೆ ಗೊತ್ತಿಲ್ಲ.. ನೀವು ಏನು ಹೇಳಿದರೂ ನಂಬ್ತೀನಿ"

ಒಂದು ಚಿತ್ರವನ್ನು, ಪಾತ್ರಗಳನ್ನೂ, ಚಿತ್ರದ ಹೂರಣವನ್ನು ಒಂದು ಸಂಭಾಷಣೆಯ ಮೇಲೆ ನಿಲ್ಲಿಸುವುದು ಅಥವಾ ಬಿಂಬಿಸುವುದು ಸಂಭಾಷಣಕಾರ ಮತ್ತು ನಿರ್ದೇಶಕನ ತಾಕತ್ತು. ಅದರಲ್ಲಿ ಬಿ ಜಿ ಎಲ್ ಸ್ವಾಮೀ ಮತ್ತು ಪುಟ್ಟಣ್ಣ ಅವರು ಜಯಶಾಲಿಗಳಾಗಿದ್ದಾರೆ.

ಹಲವಾರು ಚುಟುಕು ಚಿನಕುರುಳಿ ಸಂಭಾಷಣೆಗಳು ಇವೆ.

"ಇಮೇಜ್ ಇಲ್ಲದಿದ್ದರೆ ಏನಂತೆ ಕರೇಜ್ ಇದೆ"

"ದಬ್ಬಳದಲ್ಲಿ ಬಾವಿ ತೋಡುತ್ತಿರೆನ್ರಿ"

"ಬೆಳಿಗ್ಗೆ ಕ್ಲಾಸ್ ಮೇಟ್ಸ್ ಸಂಜೆಗೆ ಗ್ಲಾಸ್ ಮೇಟ್ಸ್"

ಈ ಚಿತ್ರದಲ್ಲಿ ಗಮನ ಸೆಳೆಯುವುದು ಲೋಕನಾಥ್ ಅವರ ವೇಷ ಭೂಷಣ, ದಪ್ಪ ಹುಬ್ಬು, ಜೊಂಡು ಮೀಸೆ, ಕುಂಟು ನಡಿಗೆ, ವಿಶಿಷ್ಟ ಮಾತಿನ ಶೈಲಿ ಇವೆಲ್ಲ ಒಂದು ಕಡೆಯಾದರೆ, ಗುಳ್ಳೆ ನರಿ ವ್ಯಕ್ತಿತ್ವದ ಗೋಡೆ ಲಕ್ಷ್ಮಿನಾರಾಯಣ, ಅವರ ಸಹಚರ ಇವರಿಬ್ಬರ ನಾಟಕೀಯ ಶೈಲಿಯಲ್ಲಿ ಸಂಭಾಷಣೆ, ಜಿ ಕೆ ಗೋವಿಂದರಾವ್ ಡಿಪ್ಲೊಮಸಿ ಎನ್ನುತ್ತಾ ಉಡಾಫೆ ಸಂಭಾಷಣೆ, ಲೀಲಾವತಿ ಅವರ ದರ್ಪ, ಅಜ್ಞಾನ, ಮತ್ತು ಸೋಗು ಹಾಕುವ ರೀತಿಯಲ್ಲಿನ ಸಂಭಾಷಣೆ ಮನಸ್ಸೆಳೆಯುತ್ತದೆ.

ಇಡಿ ಚಿತ್ರದಲ್ಲಿ ಕಾಡುವುದು ಕಲ್ಯಾಣ್ ಕುಮಾರ್.. ತಮ್ಮ ಅದ್ಭುತ ಅಭಿನಯ, ಸಂಭಾಷಣೆ ಹೇಳುವ ತಾಳ್ಮೆಯ ರೀತಿ, ಆ ಧ್ವನಿ, ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಮೋಸ ಆಗಬಾರದು, ಚೆನ್ನಾಗಿ ಕಲಿಯುವಂಥಹ ವಾತಾವರಣ ಮತ್ತು ಅನುಕೂಲತೆಗಳನ್ನು ಮಾಡಿಕೊಡಬೇಕು ಎನ್ನುವ ಕಾಳಜಿ ಎಲ್ಲವನ್ನೂ ಅರೆದು ಕುಡಿದಂತೆ ಅಭಿನಯಿಸಿದ್ದಾರೆ.

ಹಾಡುಗಳು ಮೂರೇ ಇದ್ದರೂ ಮನಸ್ಸಿಗೆ ನಾಟುವಂಥಹ ಹಾಡುಗಳು..

"ಉಪ್ಪ ತಿಂದ ಮೇಲೆ ನೀರಾ ಕುಡಿಯಲೇಬೇಕು" ಎಸ್ಪಿ ಮತ್ತು ರವಿ ಅವರ ಹಾಡುಗಾರಿಕೆ ಇಷ್ಟವಾಗುತ್ತದೆ.

"ಕಾಲೇಜು ರಂಗದಲ್ಲಿ ಕಾಳಿಂಗ ಸರ್ಪ" ಈ ಹಾಡಿನಲ್ಲಿ ಗಬ್ಬೆದ್ದು ನಾರುತ್ತಿರುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಚಾವಟಿ ಬೀಸುವ ಶಾಲಿಯಲ್ಲಿ ಎಸ್ಪಿ ಹಾಡಿದ್ದಾರೆ.

"ಭವ್ಯ ಭಾರತ ಪರಂಪರೆಯಲ್ಲಿ ಗುರುಕುಲ ಎಂಬುದು ಒಂದಿತ್ತು" ಹೇಗಿರಬೇಕು ಮತ್ತು ಹೇಗಿದೆ ಎನ್ನುವ ಹೋಲಿಕೆ ತುಂಬಿದ ಭಾವ ಇರುವ ಈ ಹಾಡನ್ನು ಎಸ್ಪಿ ಮತ್ತು ವಾಣಿಜಯರಾಂ ಹಾಡಿದ್ದಾರೆ.

ಈ ಚಿತ್ರದ ಇನ್ನೊಂದು ಪ್ರಮುಖ  ಅಂಶ ಸಂಗೀತ ಮತ್ತು ನೆರಳು ಬೆಳಕಿನ ಉಪಯೋಗ.

ಪ್ರತಿಯೊಬ್ಬರಿಗೂ ಅವರ ಭಾವಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ ಮೂಡಿ ಬರುತ್ತದೆ. ಮತ್ತು ಸನ್ನಿವೇಶಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವನ್ನು  ಅಳವಡಿಸಿದ್ದಾರೆ. ಉದಾಹರಣೆಗೆ ಕಾಲೇಜಿನಲ್ಲಿ ಶಿಕ್ಷಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ತಕ್ಕಂತೆ ನಾಣ್ಯಗಳು ಬೀಳುವ ಸದ್ದು ಮೂಡಿ ಬರುವುದು ಅದ್ಭುತ ಎನ್ನಿಸುತ್ತದೆ.

ಹಾಗೆಯೇ ಅಂತಿಮ ದೃಶ್ಯಗಳಲ್ಲಿ ಲೋಕನಾಥ್, ಕಲ್ಯಾಣಕುಮಾರ್ ಅವರ ಲ್ಯಾಬ್ ನಲ್ಲಿ ಇರುವ ದೊಡ್ಡ ಕಪಾಟನ್ನು ಬೆಂಕಿಗೆ ಆಹುತಿ ಮಾಡುವಾಗ ಅವರ ಮೊಗದಲ್ಲಿ ಮೂಡಿ ಬರುವ ಕ್ರೌರ್ಯ ನೆರಳು ಬೆಳಕಿನಲ್ಲಿ ಎದ್ದು ಕಾಣುವಂತೆ ತೋರಿಸಿದ್ದಾರೆ ಪುಟ್ಟಣ್ಣ ಅವರು.

ಪುಟ್ಟಣ್ಣ ಅವರ ಮಿಕ್ಕ ಚಿತ್ರಗಳಿಗಿಂತ ಭಿನ್ನ ಆದರೆ ಅವರದೇ ಛಾಪು ಮೂಡಿಸುವಂತಹ ಚಿತ್ರ ರತ್ನ "ಕಾಲೇಜು ರಂಗ"

ಇದಕ್ಕೆ ಪುಟ್ಟಣ್ಣ ಅವರಿಗೆ ಮನದಾಳದ ನಮನಗಳು!!!

Friday, April 24, 2015

ನಗುವಿನ ಹೊಡೆದಾಟದಲ್ಲಿ ಅಣ್ಣಾವ್ರು !!!

ಬ್ರಹ್ಮ ಮಾಡಿದ ಒಂದು ಪರಿಪೂರ್ಣ ಕಲಾವಿದರ ಪಟ್ಟಿಯಲ್ಲಿ ಅಣ್ಣಾವ್ರು  ಅಣ್ಣಾವ್ರೆ..

ಬರಿ ಕನ್ನಡಾಭಿಮಾನ ಅಥವಾ ಕರುನಾಡಿನ ಕಲಾವಿದ ಎನ್ನುವ ಹೆಗ್ಗಳಿಕೆ ಅಥವಾ ಅಹಂ ಎನ್ನುವುದಕ್ಕಿಂತ ಒಂದು ಪಕ್ವ ರುಚಿಕರ ಭೋಜನ ಹೇಗೆ  ಸೊಗಸೋ ಹಾಗೆಯೇ ಇವರು ಕೂಡ. ಎಲ್ಲರಲ್ಲಿಯೂ ಸಲ್ಲುವವರು. ಪರಿಪೂರ್ಣತೆ ಎನ್ನುವುದು ಅವರಿಗೆ ದೇವರು ಕೊಟ್ಟ ಉಡುಗೊರೆಯೇ ಸರಿ.

ಅಭಿನಯ, ಗಾಯನ, ನೃತ್ಯ,ಹೊಡೆದಾಟ, ಪ್ರೇಮ ನಿವೇದನೆ, ಪರಿತಪಿಸುವಿಕೆ ಹೀಗೆ ಯಾವುದೇ ಭಾವ ಇರಲಿ ಅದಕ್ಕೆ ಅಣ್ಣಾವ್ರ ಹೆಸರೊಂದೆ ನನ್ನ ಮನಸ್ಸಲ್ಲಿ ಮೂಡಿ ಬರುವುದು.

ಇಂದು ಅವರ ಜನುಮದಿನ... ಹೀಗೆ ಅವರ ಚಿತ್ರಗಳ, ಪಾತ್ರಗಳ ಬಗ್ಗೆ,  ಹೊಡೆದಾಟದ ದೃಶ್ಯಗಳು ಬಗ್ಗೆ  ಯೋಚಿಸುತ್ತಿರುವಾಗ ಮನಕ್ಕೆ  ಬಂದ ಮಾತುಗಳು ಲೇಖನವಾಗಿದೆ

ಕಟ್ಟು ಮಸ್ತು ಶರೀರ, ಅದಕ್ಕೆ ಒಪ್ಪುವ ಅಭಿನಯ, ಮುಖ ಭಾವ, ರೋಷ, ಆವೇಗ  ಇವುಗಳ ಸಮಾಗಮ ಈ ಕೆಳಕೊಂಡ ಹೊಡೆದಾಟದ ದೃಶ್ಯಗಳು ನನಗೆ ಬಹಳ ಇಷ್ಟವಾಗಿವೆ!!!.

ಚಿತ್ರದ ಕಥೆಯ ಬಗ್ಗೆ ಬರೆಯೋಕೆ ಹೋಗೋಲ್ಲ.. ಆ ಹೊಡೆದಾಟದ ದೃಶ್ಯಗಳ ಬಗ್ಗೆ ಬರೆಯುತ್ತಾ ಹೋಗುತ್ತೇನೆ!!

ದಾರಿ ತಪ್ಪಿದ ಮಗ 

ಕಳ್ಳ ಸಾಗಣಿಕೆಯ ತಂಡದ ನಾಯಕನ ಪಾತ್ರದಲ್ಲಿ ಅಣ್ಣಾವ್ರು.. ಬೆಲೆಬಾಳುವ ವಜ್ರಗಳನ್ನು ಕದಿಯಲು ಬಂದರಿಗೆ ಬರುತ್ತಾರೆ. ಅಲ್ಲಿ ಒಬ್ಬನನ್ನು ಆ ತಂಡದ ಸದಸ್ಯನ ಬಗ್ಗೆ ಕೇಳುತ್ತಾರೆ.. ನೀನು ಯಾರು ಎಂಬ ಪ್ರಶ್ನೆ ಬರುತ್ತದೆ.. ಆಗ ಶುರು ಹೊಡೆದಾಟ.
ಈ ಹೊಡೆದಾಟದ ದೃಶ್ಯದ ಅತ್ಯುತ್ತಮ ಅಂಶ ಅಂದರೆ ಹಿನ್ನೆಲೆ ಸಂಗೀತ. ಅಲ್ಲಿಯ ತನಕ ಡಿಶುಂ ಡಿಶುಂ ಸದ್ದು ಕೇಳಿಸುತ್ತಿದ್ದ ರೀತಿಗಿಂತ,  ಆಂಗ್ಲ ಶೈಲಿಯಲ್ಲಿ ಹಿನ್ನೆಲೆ ಸಂಗೀತ ನೀಡಿರುವುದು ಜಿ ಕೆ ವೆಂಕಟೇಶ್ ಅವರ ಕಲೆಗಾರಿಕೆ.  ಹಡಗಿನ ಮೇಲಿಂದ ಕೆಳಗೆ ನೆಗೆಯುತ್ತಾರೆ.. ಎದ್ದು ನಿಂತ ತಕ್ಷಣ.. ಅಲ್ಲಿದ್ದ ಒಬ್ಬ ಅಣ್ಣಾವ್ರಿಗೆ ಚಾಕು ತೋರಿಸುತ್ತಾನೆ.,. ಆಗ ಬರುವ ಹಿನ್ನೆಲೆ ಸಂಗೀತ.. ಆಹಾ ನೋಡಿಯೇ ನಲಿಯಬೇಕು .. ಮತ್ತು ಚಾಕು ನೋಡಿದ ತಕ್ಷಣ ಅಣ್ಣಾವ್ರ ಭಾವಾಭಿನಯ.. ಸೂಪರ್

ಸಮಯದ ಗೊಂಬೆ 

ಅಣ್ಣಾವ್ರು ಕೆಲಸ ಮಾಡುತ್ತಿದ್ದ ಮನೆ ಮಾಲೀಕರ ಮಗು ಕಾಣದಾಗಿರುತ್ತದೆ.. ಅದನ್ನ ಹುಡುಕಿಕೊಂಡು ಅವರ ತಮ್ಮ ಸಹೋದ್ಯೋಗಿಗಳ ಜೊತೆಯಲ್ಲಿ ಮೈಸೂರು ಲೋಕೇಶ್ ಹತ್ತಿರ ಬರುತ್ತಾರೆ.. ನಿಧಾನವಾಗಿ ಕೇಳುತ್ತಾರೆ, ರೇಗುತ್ತಾರೆ, ಹೊಡೆಯುತ್ತಾರೆ.. ಬಾಯಿ ಬಿಡುವುದಿಲ್ಲ.. ಕಡೆಗೆ ತಮ್ಮ ಸ್ನೇಹಿತರಿಗೆ ಪೆಟ್ರೋಲ್ ಸುರಿಯಿರಿ ಇವನ ಮೇಲೆ.. ಎಂದು ಪೆಟ್ರೋಲ್ ಸುರಿದು ಕಡ್ಡಿ ಗೀರಬೇಕು.. ಅಷ್ಟರಲ್ಲಿ ಮೈಸೂರು ಲೋಕೇಶ್ ಹೇಳ್ತೀನಿ.. ಹೇಳ್ತೀನಿ.. ಎಂದು ಭಯ ಮಿಶ್ರಿತ ನುಡಿಯಲ್ಲಿ "ಮಾರಿಬಿಟ್ಟೆ" ಎಂದು ಹೇಳುತ್ತಾರೆ.. ಆಗ ಅಣ್ಣಾವ್ರು "ಮಾರಿಬಿಟ್ಟೆ" ಎಂದು ಜೋರಾಗಿ ಕೂಗುತ್ತಾ.. ತಮ್ಮ ತೋಳಿನಲ್ಲಿ ಲೋಕೇಶ್ ಅವರ ಕುತ್ತಿಗೆಯನ್ನು ಅಮುಕುತ್ತಾರೆ.. ಆ ರೌದ್ರಾವತಾರ ಆಹಾ ಆಹಾ..

ಕಾಮನಬಿಲ್ಲು 

ಊರಿನಲ್ಲಿ ದ್ವೇಷ ಅಸೂಯೆಯ ಫಲ.. ಅಣ್ಣಾವ್ರ ಮೇಲೆ ಕೆಟ್ಟ ಹೆಸರನ್ನು ತರಬೇಕು ಎಂದು ಮೈಸೂರು ಲೋಕೇಶ್ ಅವರನ್ನು ಪುಸಲಾಯಿಸಿ ಭತ್ತದ ಮೆದೆಗೆ ಬೆಂಕಿ ಇಡಲು ಹೇಳುತ್ತಾರೆ ತೂಗುದೀಪ ಶ್ರೀನಿವಾಸ್.. ಬೆಂಕಿ ಇಡುವಾಗ ಅದನ್ನು ನೋಡಿದ ಅಣ್ಣಾವ್ರು ಜೋರಾಗಿ ಕೂಗುತ್ತಾ ಒಬ್ಬೊಬ್ಬರನ್ನೇ ಬಡಿಯಲು ಶುರುಮಾಡುತ್ತಾರೆ.. ಒಬ್ಬನ ಕೈಯಿಂದ ಪಂಜನ್ನು ಕಸಿದುಕೊಳ್ಳಲು ಅವನ ಕೈಗಳಿಗೆ ಜೋರಾಗಿ ಒದೆಯುತ್ತಾರೆ.. ಆಕಾಶಕ್ಕೆ ಚಿಮ್ಮಿದ ಪಂಜಗಳನ್ನೂ ಎರಡು ಕೈಯಲ್ಲಿ ಹಿಡಿದು ಕೊಂಡು ಅಲ್ಲಿದ್ದವರ ಜೊತೆಯಲ್ಲಿ ಕಾದಾಡಲು ಶುರುಮಾಡುತ್ತಾರೆ. ಎರಡು ಪಂಜುಗಳನ್ನು ಹಿಡಿದು ನಿಂತ ಅಣ್ಣಾವ್ರ ನೋಟ.. ಬಿಡಿ ಆ ದೃಶ್ಯವನ್ನು ನೋಡಬೇಕು ನೀವು.

ಶಂಕರ್ ಗುರು 

ಈ ಚಿತ್ರದ ಬಗ್ಗೆ ಹೇಳಿದಷ್ಟು ಕಡಿಮೆಯೇ. ಮೂರು ಪಾತ್ರ.. ಅಂತಿಮ ದೃಶ್ಯಗಳಲ್ಲಿ ಮೂರು ಪಾತ್ರಗಳು ಹೊಡೆದಾಡುವ ರೀತಿ. ಒಬ್ಬೊಬ್ಬರದು ಒಂದು ವಿಭಿನ್ನ ಶೈಲಿ. ಶಂಕರ್ ಪಾತ್ರದಲ್ಲಿ ಗಂಭೀರ ಹೊಡೆದಾಟ ಇದ್ದರೆ.. ಗುರು ಪಾತ್ರ ಹಾಸ್ಯ ಲಾಸ್ಯ ಬೆರೆತ ಸಂಗಮ.. ಇನ್ನೂ ಹಿರಿಯ ಪಾತ್ರ ರಾಜಶೇಖರ್.. ಘನತೆ ಗಾಂಭೀರ್ಯ ಸಾರುವ ರೀತಿಯಲ್ಲಿ ಇದೆ. ಒಂದು ರೀತಿ ಮೂರು ಚಿತ್ರಗಳನ್ನು ಒಟ್ಟಿಗೆ ಮಲ್ಟಿಪ್ಲೆಕ್ಸ್ ಮಂದಿರಗಳಲ್ಲಿ ನೋಡಿದ ಹಾಗೆ.. ಕನ್ನಡ ಚಿತ್ರಗಳಲ್ಲಿಯೇ ಅಪರೂಪದ ಹೊಡೆದಾಟದ ದೃಶ್ಯಗಳು ಈ ಚಿತ್ರದ ಅಂತಿಮ ದೃಶ್ಯಗಳಲ್ಲಿದೆ.

ಜಗಮೆಚ್ಚಿದ ಮಗ 

ಅಣ್ಣಾವ್ರನ್ನು ಕಟ್ಟಿ ಹಾಕಿರುತ್ತಾರೆ.. ಮೈಗೆ ಅಂಟಿಕೊಂಡಂತಹ ಪ್ಯಾಂಟ್ ಬೂಟು ತೊಟ್ಟ ಅವರನ್ನು ಕಬ್ಬಿಣದ ಸರಪಳಿಗಳಿಂದ ಕೈಗಳನ್ನು ಕಟ್ಟಿರುತ್ತಾರೆ. ಅಣ್ಣಾವ್ರ ಕಟ್ಟು ಮಸ್ತಾದ ಶರೀರದ ಅಮೋಘ ಪ್ರದರ್ಶನ ಅದು. ಹೊಡೆಸಿಕೊಂಡು ಸೋತು ಸುಣ್ಣ ಆಗಿ ಕೈಗಳನ್ನು ಕಟ್ಟಿಸಿಕೊಂಡು ನಿಂತಿದ್ದ ಅಣ್ಣಾವ್ರಿಗೆ ಅವರ ತಾಯಿಯ ವಾಣಿ ಮೊಳಗುತ್ತದೆ "ಏಳು ಕಂದ.. ನಿನ್ನ ತೋಳಿನಲ್ಲಿ ಸಿಂಹಬಲವನ್ನು ತಂದುಕೋ.. ಸರಪಳಿಯನ್ನು ಮುರಿದು ಹೋಗು ಹೋಗು... ವೈರಿಯನ್ನು ಸದೆ ಬಡಿ ಎಂಬ ಅರ್ಥ ಬರುವ ಉತ್ತೇಜಿತ ಮಾತುಗಳು ಮೂಡುತ್ತವೆ.. ಆಗ .. ಅಣ್ಣಾವ್ರು ನಗುತ್ತ, ಗಹಗಹಿಸಿ ನಗುತ್ತ, ಅಟ್ಟಹಾಸ ಮಾಡುತ್ತಾ.. ಕೈಗಳನ್ನು ಸರಪಳಿಗಳಿಂದ ಬಿಡಿಸಿಕೊಳ್ಳಲು ಕೂಗಾಡುವ ದೃಶ್ಯ.. ಇಂದಿಗೂ ಆ ದೃಶ್ಯ ನೋಡಿದಾಗ ರೋಮಾಂಚನವಾಗುತ್ತದೆ.

ಮಯೂರ 

ವೇದ ಕಲಿಯುತ್ತಿದ್ದ ಬ್ರಾಹ್ಮಣ... ಗರಡಿ ಮನೆಯ ಜಟ್ಟಿಯು ತನ್ನ ಗ್ರಾಮಸ್ಥರನ್ನು ಹೀಯಾಳಿಸುವಂಥಹ ಮಾತುಗಳನ್ನು ಹೇಳಿದಾಗ... ತನ್ನ ಇರುವನ್ನೇ ಮರೆತು .. ಜಟ್ಟಿಯ ಜೊತೆಯಲ್ಲಿ ಹೋರಾಡಲು ಸಿದ್ಧರಾಗುತ್ತಾರೆ.. ಆದರೆ ಆ ಕಾಳಗಕ್ಕೆ ಬೇಕಾದ ಗರಡಿ ಮನೆಯಲ್ಲಿ ಧರಿಸುವ ವಸ್ತ್ರಗಳು ಅವರ ಬಳಿ ಇರುವುದಿಲ್ಲ.. ನಾನು ಹೀಗೆ ಕಾಳಗ ಮಾಡುತ್ತೇನೆ ಎಂದಾಗ ಅಲ್ಲಿದ್ದವರೆಲ್ಲ ನಗುತ್ತಾರೆ.. ಅದನ್ನು ಲೆಕ್ಕಿಸದೆ ಜನಿವಾರವನ್ನು ಸೊಂಟಕ್ಕೆ ಕಟ್ಟಿಕೊಂಡು ಸಿದ್ಧವಾಗುತ್ತಾರೆ.. ಆದರೆ ಅಲ್ಲಿದ್ದವರು ಅವರಿಗೆ ಗರಡಿಮನೆಯ ಉಡುಪನ್ನು ಕೊಡುತ್ತಾರೆ.. ಕಾಳಗಕ್ಕೆ ಸಿದ್ಧವಾಗಬೇಕಾದರೆ.. ಅವರ ಮುಖದಲ್ಲಿನ ಮುಗ್ಧತೆ.. ಜನರು ಎಷ್ಟೇ ನಕ್ಕರು, ಹೀಯಾಳಿಸಿದರು  ಲೆಕ್ಕಿಸದೆ ಹೋರಾಡುವ ದೃಶ್ಯ.. ಸೂಪರ್ ಸೂಪರ್ ಎನ್ನಲೇಬೇಕು.

ಸಿಪಾಯಿ ರಾಮು 

ಸಿಪಾಯಿಯಾಗಿದ್ದ ರಾಮು ಪಾತ್ರ.. ಕಾರಣಾಂತರಗಳಿಂದ ಡಕಾಯಿತರ ಗುಂಪಿಗೆ ಬಂದು ಸೇರುತ್ತಾರೆ.. ಅವರ ಶಕ್ತಿ ಪರೀಕ್ಷೆ ಮಾಡಲು.. ಡಕಾಯಿತರ ಪರಂಪರೆಯಂತೆ..ಬಂದೂಕಿನ ಗುರಿ , ಕತ್ತಿ ಕಾಳಗ, ಮತ್ತು ಪರಸ್ಪರ ಕೈಗಳನ್ನು ಕಟ್ಟಿಕೊಂಡು ಹೊಡೆದಾಡುವ ದೃಶ್ಯ.. ಅಣ್ಣಾವ್ರು ಪಾತ್ರಗಳಲ್ಲಿ ತೊಡಗಿಸಿಕೊಳ್ಳುವ ಪರಿಪೂರ್ಣತೆಗೆ ಒಂದು ಸಾಕ್ಷಿ

ಬಂಗಾರದ ಮನುಷ್ಯ 

ಅಣ್ಣಾವ್ರು ತಮ್ಮ ಜಮೀನನ್ನು ಬಿಟ್ಟು ಕೊಡಲು ಎಂ ಪಿ ಶಂಕರ್ ಬಳಿ ಕೇಳಿದಾಗ.. ಎಂಪಿ ಶಂಕರ್  "ಯಾರಪ್ಪನ ಜಮೀನು" ಎಂದು ಬಯ್ದು ಹೊಡೆದೆ ಬಿಡುತ್ತಾರೆ.. ಆಗ ಶುರುವಾಗುತ್ತದೆ ಕೆಸರು ಗದ್ದೆಯಲ್ಲಿ ಹೊಡೆದಾಟ.. ಮೈಗೆ ಅಂಟಿಕೊಳ್ಳುವ ಕೆಸರು.. ಯೋಚಿಸದೆ ಹೊಡೆದಾಡುವ ರೀತಿ.. ಅದಕ್ಕೆ ತಕ್ಕ ಅಭಿನಯ.. ಅಣ್ಣಾವ್ರೆ ಇದಕ್ಕೆ ಸರಿಯಾದ ಪಾತ್ರಧಾರಿ.

ಪ್ರೇಮದ ಕಾಣಿಕೆ 

ತನ್ನ ಪ್ರೇಯಸಿಯನ್ನು ಕೆಣಕುತ್ತ ಬರುವ ವಜ್ರಮುನಿ ಪಾತ್ರಧಾರಿ.. ಅಣ್ಣಾವ್ರನ್ನು ಹೀಯಾಳಿಸುತ್ತಾರೆ, ಬಯ್ಯುತ್ತಾರೆ.. ತನ್ನ ಪ್ರೇಯಸಿ ಬಿಡಿ ಇವರ ಸಹವಾಸ ನಮಗೇಕೆ ಎಂದಾಗ ಸರಿ ಎಂದು ಕೋಣೆಯ ತನಕ ಹೋಗಿ ತನ್ನ ಪ್ರೇಯಸಿಯನ್ನು ಕೋಣೆಯಲ್ಲಿ ಕೂಡಿ ಹಾಕಿ. ತಾವು ಹಾಕಿಕೊಂಡ ಜರ್ಕಿನ್ ತೆಗೆಯುವ ದೃಶ್ಯದಲ್ಲಿ ಅವರ ಮುಖಭಾವ.. ತನ್ನ ಪ್ರೇಯಸಿಯನ್ನು ಹೊಡೆದದ್ದು, ತಮಗೆ ಹೀಯಾಳಿಸಿದ್ದು, ಹೊಡೆದದ್ದು ಎಲ್ಲಾವುದಕ್ಕೆ ಬಡ್ಡಿ ಸಮೇತ ವಾಪಸ್ ಕೊಡುತ್ತೇನೆ ಎನ್ನುವ ಅಭಿನಯ.. ಸೂಪರ್ ಸೂಪರ್..

ಅನುರಾಗ ಅರಳಿತು 

"ಆ ಬಡ್ಡಿ ಮಗ ಯಾರ ಮಾತನ್ನು ಕೇಳುವುದಿಲ್ಲ" ಎಂದ ಫ್ಯಾಕ್ಟರಿ ಮ್ಯಾನೇಜರ್ ಮಾತಿಗೆ.. ಬಡ್ಡಿ ಮಗನ ಅರ್ಥ ಇದೆ ಎಂದು ಕಪಾಳಕ್ಕೆ ಬಿಗಿಯುತ್ತಾರೆ ಅಣ್ಣಾವ್ರು.. ಅದರಿಂದ ಕ್ರೋಧಗೊಂಡ ಮ್ಯಾನೇಜರ್ ಸಂಜೆ ಕೆಲವು ಬಾಡಿಗೆಗೆ ಗೂಂಡಗಳನ್ನು ಕರೆಸಿ  ಸೈಕಲ್ ನಲ್ಲಿ ಕಳಿಸುತ್ತಾರೆ.. ಒಂದು ವಿಭಿನ್ನ ಸಾಹಸ ಸಂಯೋಜನೆ ಈ ದೃಶ್ಯದಲ್ಲಿದೆ .. ಅಣ್ಣಾವ್ರು ಕೂಡ ಸೈಕಲ್ ಮೇಲೆ ಕೆಲವು ಸಾಹಸಗಳನ್ನು ಮಾಡಿದ್ದಾರೆ .. ಅಷ್ಟೊತ್ತಿಗೆ ಆಗಲೇ ಸುಮಾರು ಐವತ್ತು ವರ್ಷಗಳು ದಾಟಿದ್ದರೂ ಆ ಹುರಿಗಟ್ಟಿದ ದೇಹ, ಆ ಶಿಸ್ತು ಹೊಡೆದಾಟದಲ್ಲಿ ಎದ್ದು ಕಾಣುತ್ತದೆ.

ಕತ್ತಿ, ಕಠಾರಿ, ಭರ್ಜಿ, ಕೋಲು, ದೊಣ್ಣೆ, ಹಗ್ಗ, ಬಿಲ್ಲು ಬಾಣ ಇವುಗಳ ಬಗ್ಗೆ ನಾ ಮಾತಾಡುವುದೇ ಇಲ್ಲ ಕಾರಣ ಈ ಆಯುಧಗಳ ಜೊತೆಯಲ್ಲಿ ಹೋರಾಡಲು ಕಾದಾಡಲು ಭಾರತೀಯ ಮತ್ತು ಪ್ರಪಂಚದ ಎಲ್ಲಾ ಸಿನಿಮಾರಂಗದಲ್ಲಿ ಅಣ್ಣಾವ್ರು ಮಾತ್ರ ಅದಕ್ಕೆ ತಕ್ಕ ನೈಜತೆ ಕೊಡುತ್ತಿದ್ದುದ್ದು. ಹಾಗಾಗಿ ಮಾಮೂಲಿ ಹೊಡೆದಾಟ ಎನ್ನಬಹುದಾದ ದೃಶ್ಯಗಳನ್ನು ಅಪರೂಪದ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದುದ್ದು ಅಣ್ಣಾವ್ರ ಹೆಗ್ಗಳಿಕೆ.

ಆ ಕಟ್ಟು ಮಸ್ತಾದ ಶರೀರಕ್ಕೆ ಮತ್ತು ಅದರ ಆರೈಕೆಗಾಗಿ ಅವರು ಪ್ರತಿದಿನ ಪಡುತ್ತಿದ್ದ  ಪರಿಶ್ರಮಕ್ಕೆ ಈ ಲೇಖನ ಸಮರ್ಪಿತ. ಜೊತೆಯಲ್ಲಿಯೇ ಈ ಎಲ್ಲಾ ಸಾಹಸಗಳನ್ನು ಸಂಯೋಜಿಸುತ್ತಿದ್ದ ಆ ಸಾಹಸ ನಿರ್ದೇಶಕರಿಗೂ ಅಭಿನಂದನೆಗಳು.

ಅಣ್ಣಾವ್ರೆ ನಿಮಗೆ ಜನುಮದಿನದ ಕೊಡುಗೆಯಾಗಿ ಈ ಲೇಖನ.. ಇಷ್ಟವಾಯಿತೆ..?

ಕನಸಲ್ಲಿ ಬಂದು ಹೇಳಿ.. !!! 

Sunday, April 12, 2015

ಯುಗಯುಗಕ್ಕೂ ಸಲ್ಲುವ ಏಕೈಕ ಆರಾಧ್ಯ ದೈವ....!

ದಿನಗಳು ಉರುಳುತ್ತವೆ... ಅವು ವಾರಗಳಾಗುತ್ತವೆ, ಮಾಸಗಳಾಗುತ್ತವೆ.. ವಸಂತಗಳಾಗುತ್ತವೆ.. ದಶಕಗಳಾಗುತ್ತವೆ.. ಶತಮಾನಗಳು, ಯುಗಗಳು ಆಗುತ್ತವೆ.. ಈ ಕಾಲಚಕ್ರವನ್ನು ಮೆಟ್ಟಿ ನಿಲ್ಲಬಲ್ಲವರು, ಯುಗಯುಗಗಳಿಗೂ ಸಲ್ಲುವವರ ಸಂಖ್ಯೆ ಬೆರಳೆಣಿಕೆ.. ಅಂಥವರಲ್ಲಿ ಅಭಿಮಾನಿ ದೇವರುಗಳ ಹೃದಯದಲ್ಲಿ ಸದಾ ನೆಲೆಸಿರುವ ದೇವರು ನಮ್ಮ ಅಣ್ಣಾವ್ರು.

ದೇವಲೋಕದಲ್ಲಿ ಎಲ್ಲರಲ್ಲೂ ತಳಮಳ, ಸಂದೇಹ.. ದೊಡ್ಡ ದೊಡ್ಡ ಚರ್ಚೆಗಳೇ ಆಗೊಗಿದ್ದವು.. ಯಾರಿಗೂ ಒಮ್ಮತ ನಿರ್ಣಯ ಕೊಡಲು ಸಾಧ್ಯವಿರಲಿಲ್ಲ. ತ್ರಿಮೂರ್ತಿಗಳೇ ಬಂದರೂ, ಋಷಿ ಮುನಿಗಳು, ಬ್ರಹ್ಮರ್ಷಿಗಳು, ಮಹರ್ಷಿಗಳು ಊಒಹೂ ನಿರ್ಣಯಕ್ಕೆ ಬರಲು ಹೋರಾಡಿದರು, ಮಾತಿನಲ್ಲಿ ಕುರುಕ್ಷೆತ್ರವನ್ನೇ ಕಟ್ಟಿದರು.. ಉಪಯೋಗವಾಗಲೇ ಇಲ್ಲ..

ಯಾಕೋ ಸಭೆಯಲ್ಲಿ ಅಚಾನಕ್ ನಿಶ್ಯಬ್ಧ..ಎಲ್ಲರೂ ತುಟಿಗಳಿಗೆ ಬೀಗ ಮುದ್ರೆ ಹಾಕಿಕೊಂಡು ಬಿಟ್ಟಿದ್ದಾರೋ ಎನ್ನುವಂಥ ಸನ್ನಿವೇಶ ಸೃಷ್ಟಿಯಾಗಿತ್ತು.. ಅಲ್ಲಿದ್ದ ನಾರದರಿಗೆ ಆಶ್ಚರ್ಯ ಇದೇನಿದು. ಈಗ ಕೆಲ ಹೊತ್ತಿನಲ್ಲಿ ನಭೋಮಂಡಲವೇ ತೂತು ಬಿದ್ದು ನಾವೆಲ್ಲಾ ಭುವಿಗೆ ಜಾರಿ ಬಿದ್ದು ಬಿಡುತ್ತೇವೆ ಅನ್ನುವಷ್ಟು ಸದ್ದು ಮಾಡುತ್ತಿದ್ದ ಈ ದೇವಲೋಕದಲ್ಲಿ ಈ ನಿರ್ವಾತ ವಾತಾವರಣವೇಕೆ ಎನ್ನುವ ಅನುಮಾನ ಬಂದು.... ಹಾಗೆ ತಂಬೂರಿ ಮೀಟುತ್ತಾ, ನಾರಾಯಣ ನಾರಾಯಣ ಎಂದು ತಿರುಗಿ ನೋಡುತ್ತಾರೆ...

"ಓಹ್ ಬನ್ನಿ ಬನ್ನಿ.. ನಿಮಗೆ ಕಾಯುತ್ತಿದ್ದೆವು.. ನಿಮ್ಮ ಪರಿಚಯವಾಗಲಿ ನಮಗೆಲ್ಲ.. ನಮಗೆ ನಿಮ್ಮ ಪರಿಚಯವಿದೆ... ಆದರೆ ನಿಮ್ಮನ್ನು ನೋಡುವ ತವಕ ನಮಗೆಲ್ಲರಿಗೂ ಇತ್ತು.. .. "

"ನಮಸ್ಕಾರ ನಮಸ್ಕಾರ.. ನಾರದ ಮುನಿಗಳೇ ನನ್ನ ಆಗಮನವನ್ನು ನೀವೆಲ್ಲ ನಿರೀಕ್ಷಿಸುತ್ತಿದ್ದೀರ.. ? ದೊಡ್ಡ ಮಾತು ದೊಡ್ಡ ಮಾತು.. ನೀವೆಲ್ಲ ದೇವಾನುದೇವತೆಗಳು.. ನಾ ಒಬ್ಬ ಹುಲು ಮಾನವ.. ನಾನೆಲ್ಲಿ ನೀವೆಲ್ಲಿ.. ಏನಿದು ಈ ತುಂಟತನ... "

"ಇಲ್ಲ ಇಲ್ಲ.. ನಾವೆಲ್ಲಾ ಯುಗಯುಗಗಳ ಕಾಲ ತಪಸ್ಸು ಮಾಡಿ ಸಿದ್ಧಿಸಿ ಈ ದೇವತ್ವವನ್ನು ಪಡೆದ ನಮಗೆ ಸಾಧಿಸಲು ಆಗದ ಕೆಲಸವನ್ನು ನೀವು ಕೇವಲ ಏಳೆಂಟು ದಶಕಗಳಲ್ಲಿ ಸಾಧಿಸಿದ್ದೀರಿ.. ಅದು ನಿಮಗೆ ಹೇಗೆ ಸಾಧ್ಯವಾಯಿತು.. ಇನ್ನೊಂದು ತಮಾಷೆ ಗೊತ್ತೇ.. ಇದನ್ನು ಕೇಳಿದರೆ ನೀವೇ ನಗುತ್ತೀರಿ"

"ನಿಮಗೆ ಅಭ್ಯಂತರ ಇಲ್ಲದೆ ಹೋದರೆ  ಹೇಳಿ ನಾರದ ಮುನಿಗಳೇ.. ನೀವು ಹೇಳಿ ನಂತರ ನಿಮ್ಮ ಪ್ರಶ್ನೆಗೆ ಉತ್ತರಿಸುವೆ.. "

"ದೇವಲೋಕದ ನಮ್ಮ ಮಾರುಕಟ್ಟೆಯಲ್ಲಿ ತಿಂಡಿ ತಿನಿಸು ಪೇಯ ಎಲ್ಲವೂ ಸರಾಗವಾಗಿ ಮಾರಾಟವಾಗುತ್ತದೆ.. ಬಳೆ, ಲೋಲಾಕು, ಉಡುಗೆ ತೊಡುಗೆ, ಪಾದರಕ್ಷೆಗಳು ಯಾವುದಕ್ಕೂ ಮೋಸವಿಲ್ಲ.. ಆದರೆ ಆದರೆ... "

"ಹೇಳಿ ಮುನಿಗಳೇ ಏನು ಆದರೆ?"

"ಇಲ್ಲಿನ ದೇವರ ಚಿತ್ರಗಳಾದ ಗಣಪ, ಸುಬ್ರಮಣ್ಯ, ತ್ರಿಮೂರ್ತಿಗಳು, ರಾಮ, ಕೃಷ್ಣ, ಹೀಗೆ ವಿಷ್ಣುವಿನ ದಶಾವತಾರ, ಋಷಿ ಮುನಿಗಳು, ಇವೆಲ್ಲ ಹೋಗಲಿ ಅಸುರರಾದ ರಾವಣ, ಜರಾಸಂಧ, ದುರ್ಯೋಧನ, ಹೀಗೆ ಮಿಕ್ಕಿತರ ಪುರಾಣ ಪಾತ್ರಗಳ ಯಾವುದೇ ಚಿತ್ರಪಟಗಳು ನಮ್ಮ ಮಾರುಕಟ್ಟೆಯಲ್ಲಿ ಕೊಳೆಯುತ್ತಾ ಬಿದ್ದಿವೆ.. ಯಾರೂ ಅದನ್ನು ತೆಗೆದುಕೊಳ್ಳುವುದಿಲ್ಲ.. ಇದನ್ನು ತೋರಿಸಿದರೂ ಬೇಡ ಬೇಡವೇ ಎಂದು ಹೇಳುತ್ತಾರೆ..."

"ಅರೆ ಅರೆ ಇದೇನಿದು ಆಶ್ಚರ್ಯವಾಗಿದೆಯೆ.. ಯಾಕಂತೆ.. ದೇವಲೋಕದಲ್ಲಿ ದೇವರ ಬಗ್ಗೆ ಭಕ್ತಿ, ಶ್ರದ್ಧೆ ಕಡಿಮೆಯಾಯಿತೆ.. ಅಥವಾ ದೇವರ ಮಹಿಮೆ ಕಡಿಮೆ ಆಗಿದೆಯೇ.. ಕೇಳಿದ ವರವನ್ನು ಕರುಣಿಸಲು ಆಗುತ್ತಿಲ್ಲವೇ.. ಯಾಕೆ ಯಾಕೆ.. ನನಗೆ ಕುತೂಹಲ ತಡೆಯಲು ಆಗುತ್ತಿಲ್ಲ.. ಹೇಳಿ ಮುನಿಗಳೇ ಹೇಳಿ ಮುನಿಗಳೇ"

"ನೋಡಿ ನೋಡಿ ನೀವೇ ನೋಡಿ.. ಬರಿ ಈ ಕೆಳಗಿನ ಪಟಗಳನ್ನು ಮಾತ್ರ ಕೊಳ್ಳುತ್ತಿದ್ದಾರೆ.. ನಮ್ಮ ಇಲ್ಲಿನ ಯಾರ ಚಿತ್ರಪಟಗಳನ್ನು ಮೂಸಿ ಕೂಡ ನೋಡುತ್ತಿಲ್ಲ.. "

ಹಾಗೆಯೇ ಕಣ್ಣು ಹಾಯಿಸಿದರು.. ಆಶ್ಚರ್ಯ.. ನಗು ಎಲ್ಲವೂ ಒಟ್ಟಿಗೆ









"ಓಹ್ ಆಹಾ ಆಹಾ ಅಹಹ" ನಗು ಬಂತು.. "ಅರೆ ಇದೆಲ್ಲ ನನ್ನದೇ ಚಿತ್ರಗಳ ಚಿತ್ರ ಪಟ.. ಇದೆಲ್ಲ ಇಲ್ಲಿಗೆ ಹೇಗೆ ಬಂದವು.. "

"ಅಯ್ಯೋ ನಮ್ಮ ಗಣಪ ಇದ್ದಾನಲ್ಲ ಅವನು ಪ್ರತಿ ವರ್ಷ ಭುವಿಗೆ ಭಾದ್ರಪದ ಶುಕ್ಲ ಚೌತಿಯ ದಿನ ಹೋದಾಗ.. ಒಮ್ಮೆ ನಿಮ್ಮ ಚಲನಚಿತ್ರಗಳನ್ನು ನೋಡಿ.. ಇಲ್ಲಿಗೆ ತಂದು ಬಿಟ್ಟಿದ್ದಾನೆ.. ಅವನ ಕೆಲಸ ನಿಮ್ಮ ಚಿತ್ರಗಳು ಖಾಲಿ ಆಗದೆ ಇರುವ ಹಾಗೆ ಸದಾ ಅಚ್ಚು ಹಾಕುತ್ತಲೇ ಇರುವುದು.. ನೋಡಿ ಅವನ ಅಂಗಡಿ ಸದಾ ಗಿಜಿ ಗಿಜಿ ಎನ್ನುತ್ತಲೇ ಇರುತ್ತದೆ.. "

"ನಾರದ ಮುನಿಗಳೇ ಈ ದೇಹವನ್ನು ರಾಜಕುಮಾರ, ಮುತ್ತು ರಾಜ, ರಾಜಣ್ಣ, ಅಣ್ಣಾವ್ರು ಎಂದು ಗುರುತಿಸುತ್ತಾರೆ.. ಆದ್ರೆ ಈ ಲೋಕದಲ್ಲಿ ನೀವೆಲ್ಲ ನನಗೆ ತೋರುತ್ತಿರುವ ಗೌರವ ನೋಡಿ ನಾ ಮೂಕನಾಗಿದ್ದೇನೆ.. ಭುವಿಯಲ್ಲಿ ನನಗೆ ಅಭಿಮಾನಿಗಳು ಅಣ್ಣಾ ಎಂದು ಕರೆದರೆ.. ನೀವೆಲ್ಲ ನನ್ನನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದೀರ.. ನಿಮಗೆಲ್ಲಾ ನನ್ನ ಹೃದಯ ಪೂರ್ವಕ ನಮನಗಳು"

"ಹೌದು ಅಣ್ಣಾವ್ರೆ .. ನಿಮ್ಮ ಮಾತು ನಿಜ.. ನೀವು ನಟಸಾರ್ವಭೌಮ ಮಾತ್ರವೇ ಅಲ್ಲ ನೀವು ಚಲನಚಿತ್ರದ ಅನಭಿಷಿಕ್ತ ಸಾಮ್ರಾಟರು.. ನಿಮ್ಮಲ್ಲೇ ಮುನ್ನೂರು ಕೋಟಿ ದೇವಾನುದೇವತೆಗಳನ್ನು ನೋಡಬಹುದು ನೋಡುತ್ತಿದ್ದೇವೆ.. "
ಇಡಿ ದೇವಲೋಕ ಎದ್ದು ನಿಂತು .. ಅಣ್ಣಾವ್ರೆ ನೀವು ನಮ್ಮ ಕರೆಗೆ ಓಗೊಟ್ಟು ನಿಮ್ಮ ಅಭಿಮಾನಿ ದೇವರುಗಳನ್ನು ಬಿಟ್ಟು ಇಲ್ಲಿಗೆ ಬಂದದ್ದು ನಮಗೆ ಕುಶಿ ಆಯ್ತು ಅಂತ ಹೇಳಿದರೂ.. ನಿಮ್ಮ ಅಭಿಮಾನಿ ದೇವರುಗಳು ನಿಮ್ಮನ್ನು ದೇವರೇ ಎಂದು ಸಂಭ್ರಮಿಸುವುದನ್ನು ನೋಡಿ ಕೇಳುವುದೇ ನಮ್ಮ ಭಾಗ್ಯ"

************

"ಹೀಗೆ ಯುಗಯುಗಕ್ಕೂ ಸಲ್ಲುವ ಏಕೈಕ ಆರಾಧ್ಯ ದೈವ ನಮ್ಮ ಅಭಿಮಾನಿದೇವರುಗಳ ದೇವರು.. "

Saturday, January 3, 2015

ಅಚ್ಹ ಬಿಳುಪಿನ ಮನದ ಬಿಳಿ ಹೆಂಡ್ತಿ (1975)

ಪುಟ್ಟಣ್ಣ ಕಣಗಾಲ್ ಎಂಬ ಮಾಂತ್ರಿಕ ತಾ ಮುಟ್ಟಿದ್ದೆಲ್ಲ ರತ್ನವಾಗಲೇ  ಎನ್ನುವ ಮನಶಕ್ತಿಉಳ್ಳವರಾಗಿದ್ದರು.  ಎಲ್ಲರ ಮನೆಯಲ್ಲೂ ನಡೆಯಬಹುದಾದ ಒಂದು ಸಂಗತಿ ಹೊಂದಿದ್ದ ಕಥೆಯನ್ನು ಅಸಾಧಾರಣ ರೀತಿಯಲ್ಲಿ ತೆರೆಗೆ ಅಳವಡಿಸಿ, ಅದಕ್ಕೆ ಹೊನ್ನಿನಂಥಹ ಗೀತೆ, ಸಂಭಾಷಣೆಗಳನ್ನು ತೊಡಿಸಿ ಒಂದು ಹೊಳೆಯುವ ರತ್ನವನ್ನಾಗಿ ಮಾಡಿದ್ದು ಅವರ ಶಕ್ತಿ. 

ಮ ನ ಮೂರ್ತಿಯವರ ಕಥಾ ಆಧಾರಿತ ಈ ಚಿತ್ರವನ್ನು ಎಂ ಜೆ ಎಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುದ್ದುಕೃಷ್ಣ, ಜಯಸಿಂಹ, ಮಾರುತಿ ನಿರ್ಮಾಣ ಮಾಡಿದ್ದರು. 

ಈ ಚಿತ್ರದ ಒಂದು ಮುಖ್ಯ ಅಂಶ ಎಂದರೆ, ಇಡಿ ಕಥೆಗೆ ತಿರುವು ಕೊಡುವುದು ನಾಯಕನ ಪಾತ್ರ ಆದರೆ ಇಡಿ ಚಿತ್ರದಲ್ಲಿ ನಾಯಕನ ಪಾತ್ರವನ್ನು ಗುಪ್ತಗಾಮಿನಿಯಂತೆ ಮಾಡಿ, ಬರಿ ಹೆಣ್ಣು ಪಾತ್ರಗಳೇ ಮೆರೆದಾಡುವಂತೆ ಚಿತ್ರವನ್ನು ತೆರೆಗೆ ತಂದಿರುವುದು ವಿಶೇಷ. 

ಯಾವ ಮನೆಯಾದರೂ, ಮನವಾದರೂ ಎರಡು ಜಡೆಗಳು ಒಂದಾದಾಗ ಸುಖಃ ನೆಮ್ಮದಿ ಶಾಂತಿ ಅಲ್ಲಿ ನೆಲೆಸುತ್ತದೆ ಎನ್ನುವು ಸಂದೇಶವನ್ನು ಸಾರಿ ಸಾರಿ ಹೇಳಲು ಈ ರೀತಿಯಲ್ಲಿ ವಿಭಿನ್ನ ಬಗೆಯ ನಿರೂಪಣೆಯ ಮೊರೆ ಹೊಕ್ಕಿದ್ದಾರೆ ಅನ್ನಿಸುತ್ತದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಮನೆಯ ಆಳಿನ ಪಾತ್ರ "ಮಲ್ಲ" ಹೇಳುವ ಮಾತು.. ಕಾರಿನಲ್ಲಿ ಕೂತು ಬರುವಾಗ ಇರುವ ಒಗ್ಗಟ್ಟು ಸಂಸಾರದಲ್ಲಿಯೂ ಇದ್ದಾರೆ ನಮ್ಮ ಪರ್ಪಂಚ ಸುಂದರ ಅತಿ ಸುಂದರ (ಸುಮಾರು ಹತ್ತು ಹೆಂಗಸರು ಅಂಬಾಸಡರ್ ಕಾರಿನಲ್ಲಿ ಬಿಳಿ ಹೆಂಡ್ತಿಯನ್ನು ನೋಡಲು ಬರುತ್ತಾರೆ.. ಆಗ ಮಲ್ಲ ಹೇಳುವ ಮಾತು)

ಇಡಿ ಚಿತ್ರದಲ್ಲಿ ನಾಯಕನಿಗೆ ಹಾಡು ಇರುವುದಿಲ್ಲ. ಹಿನ್ನೆಲೆ ಗಾಯನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವವರು ಅದ್ಭುತ ಗಾಯಕಿ ಶ್ರೀಮತಿ ವಾಣಿಜಯರಾಂ, ಮತ್ತು ಕೋಮಲ ಕಂಠದ ಕಸ್ತೂರಿ ಶಂಕರ್.  ಸಂಗೀತ ಸಂಯೋಜನೆ ಮಾಂತ್ರಿಕ ವಿಜಯಭಾಸ್ಕರ್. 

"ಆ ದೇವರೇ ನುಡಿದ ಮೊದಲ ನುಡಿ" ಪ್ರೇಮವನ್ನು, ಪ್ರೇಮದ ಹುಟ್ಟನ್ನು ಹಾಡಿನಲ್ಲಿ ವಿಜಯನಾರಸಿಂಹ ಅದ್ಭುತವಾಗಿ ಜೋಡಿಸಿದ್ದಾರೆ. ಆರತಿಯವರಿಗೆ ಸರಿಯಾದ ಕಂಠ ಎನ್ನುವಷ್ಟರ ಮಟ್ಟಿಗೆ ವಾಣಿಯಮ್ಮ ದನಿಯಾಗುತ್ತಾರೆ. ಪದಗಳ ಉಳಿತ, ಅದಕ್ಕೆ ಆರತಿಯವರ ಅಭಿನಯ ಸೊಗಸು. 

"ಯಾವ ತಾಯಿಯು ಹಡೆದ ಮಗಳಾದರೇನು" ಕಸ್ತೂರಿ ಕಂಠದಲ್ಲಿ ಕಸ್ತೂರಿ ಶಂಕರ್ ಮನ ಗೆಲ್ಲುತ್ತಾರೆ. ಕೋಮಲ ಕಂಠದಲ್ಲಿ ಮೂಡಿ ಬರುವ ಹಾಡು ನಮ್ಮ ಧರ್ಮ ಹೇಗೆ ಇತರರನ್ನು ತನ್ನ ಮಡಿಲಲ್ಲಿ ಸಾಂತ್ವನವನ್ನು ನೀಡಿ ತಮ್ಮ ಮನದಲ್ಲಿ ಕೂರಿಸಿಕೊಳ್ಳುತ್ತಾರೆ ಎನ್ನುವ ಸಂದೇಶ ಕೊಡುತ್ತದೆ. ಜೊತೆಯಲ್ಲಿ ಕನ್ನಡ ನಾಡಿನ ಬಗ್ಗೆ ಪುಟ್ಟಣ್ಣ ಅವರ ಅಭಿಮಾನ "ಕನ್ನಡಾಂಬೆಯ ಮಡಿಲ ಮಗುವಾದೆ ನೀನು" ಎನ್ನುವ ಸಾಲುಗಳಲ್ಲಿ ನುಗ್ಗಿ ಬರುತ್ತದೆ. 

ಇಡಿ ಚಿತ್ರಕಥೆಯನ್ನು ಹಾಡಿನಲ್ಲಿ ಪೋಣಿಸಿ, ಐದೇ ನಿಮಿಷದಲ್ಲಿ ಇಡಿ ಚಿತ್ರದ ಸಾರವನ್ನು ಬಡಿಸಿರುವ "ರಂಗೇನಹಳ್ಳಿಯಾಗೆ"  ಹಾಡು ನೊಂದ ಮನ ಮತ್ತು ಉಲ್ಲಾಸದ ಮನ ಎರಡರ ಅದ್ಭುತ ಸಂಗಮವಾಗಿ ಮೂಡಿ ಬರುತ್ತದೆ. ಕಸ್ತೂರಿ ಶಂಕರ್ ಎತ್ತಿ ಕೊಡುವ ಹಾಡನ್ನು ವಾಣಿ ಜಯರಾಂ ಅಂಗ್ಲ ಶೈಲಿಯಲ್ಲಿ ಸುಲಲಿತವಾಗಿ ಹಾಡಿರುವುದು ಸೂಪರ್ ಎನ್ನಿಸುತ್ತದೆ. 

ಮತ್ತೊಮ್ಮೆ ಪೂರ್ಣ ಆಂಗ್ಲಶೈಲಿಯಲ್ಲಿಯೇ "ರಂಗೇನ ಹಳ್ಳಿಯಾಗೆ" ಹಾಡು ವಾಣಿ ಜಯರಾಂ ಅವರ ಸಿರಿಕಂಠ ಗಮನಸೆಳೆಯುತ್ತದೆ. ಅಂಬರೀಶ್ ಚಿಕ್ಕ ಚೊಕ್ಕ ಪಾತ್ರದಲ್ಲಿ ಬಂದು ಹೋಗುತ್ತಾರೆ. 

ಇಡಿ ಚಿತ್ರದಲ್ಲಿ ಎದ್ದು ನಿಲ್ಲುವುದು ಇಂಗ್ಲಿಷ್ ಹಾಡು "ಹಾಪ್ಯೆಸ್ಟ್ ಮೊಮೆಂಟ್... ಎವ್ರಿ ಇವೆಂಟ್ ಬಿಳಿ ಹೆಂಡ್ತಿ ಸಿಂಗ್ಸ್ ಇನ್ ಎಗ್ಸೈಟ್ಮೆಂಟ್" ಇದನ್ನು ಪಕ್ಕಾ ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಿರುವುದು, ನೃತ್ಯ ಸಂಯೋಜಿಸಿರುವುದು, ಸಂಗೀತವನ್ನು ಆಯೋಜಿಸಿರುವುದು  ಪುಟ್ಟಣ್ಣ ಅವರ ಮಾಧ್ಯಮದ ಮೇಲಿನ ಹಿಡಿತವನ್ನು ತೋರುತ್ತದೆ. ವಾಣಿಜಯರಾಂ ಅಕ್ಷರಶಃ ಈ ಹಾಡಿನಲ್ಲಿ ನಮ್ಮ ಮನವನ್ನು ಕಲಕುತ್ತಾರೆ.  

ಇಡಿ ಚಿತ್ರವನ್ನು ಕಣ್ಣಲ್ಲಿ ಕಣ್ಣಿಟ್ಟು ಚಿತ್ರಿಸಿರುವ ಬಿ ಏನ್ ಹರಿದಾಸ್ ಪುಟ್ಟಣ್ಣ ಅವರ ಭಾವವನ್ನು ಹಾಗೆ ಬರೆದಿದ್ದಾರೆ ನೆರಳು ಬೆಳಕಿನಲ್ಲಿ. 

ಚುರುಕಾದ ಸಂಭಾಷಣೆ ಕೆಲವೊಮ್ಮೆ ನಗೆ ಉಕ್ಕಿಸಿದರೆ, ಹಾಗೆಯೇ ಕೆಲವು ಸಂಭಾಷಣೆಗಳು ಮನಕ್ಕೆ ಮುಟ್ಟುತ್ತವೆ. ಇದರ ರೂವಾರಿ ಹೆಚ್ ಎಸ್ ಸುಬ್ಬರಾವ್. 

ನಗೆ ಉಕ್ಕಿಸುವ ದೃಶ್ಯಗಳು 
  • ಉಮಾ ಶಿವಕುಮಾರ್ ಅವರ ಏರೋಪ್ಲೇನ್ ಮೇಲಿನ ಪ್ರೀತಿ 
  • ಎಲ್ಲಿ ಸ್ವಾಮೀ ನಾಲಿಗೆ ತೋರಿಸಿ.. ಆವಾಗ ಅಂಗನ್ದಿರಿ, ಇವಾಗ ಇಂಗನ್ದಿರಿ  ಅದು ಎಂಗೆ.. (ಹಳ್ಳಿಯ ಮನೆಯ ಉಸ್ತುವಾರಿ ಹೊತ್ತಿದ್ದವ ಬಿಳಿ ಹೆಂಡ್ತಿ ಜೊತೆಯಲ್ಲಿ ಚಿಕ್ಕ ದಣಿಗಳು ಬರುತ್ತಿದ್ದಾರೆಂದು ತಿಳಿದಾಗ.. ಹೀನ ಮಾನವಾಗಿ ಮಾತಾಡುವ.. ಅವರು ಬಂದ ಕೂಡಲೇ ಮಾತನ್ನೇ ತಿರುಗಿಸಿ ಹೋಗಲು ಭಟ್ಟನಾಗುವ ದೃಶ್ಯಕ್ಕೆ ಮನೆಯ ಆಳುಗಳು ಹೇಳುವ ಸಂಭಾಷಣೆ)
  • ಮನೆಯ ಆಳು "ಮಲ್ಲ" ತಮಾಷೆ ಮಾತುಗಳನ್ನು ಆಡುತ್ತಲೇ.. ಮನ ಮುಟ್ಟುವ ಸಂದೇಶಾತ್ಮಕ ಮಾತುಗಳನ್ನು ನಗೆ ಉಕ್ಕಿಸುತ್ತವೆ ಹಾಗೆಯೇ ಮನಕ್ಕೆ ತಾಕುತ್ತವೆ. 
ಅದ್ಭುತ ದೃಶ್ಯಗಳು 
  • ಮಗ ಬಿಳಿ ಹುಡುಗಿಯನ್ನು ಮದುವೆ ಮಾಡಿಕೊಂಡು ಬಂದಿದ್ದಾನೆ ಎಂದು ತಿಳಿದು ಆಕೆಯನ್ನು ದೆಹಲಿಯಿಂದ ಹಾಗೆಯೇ ಅಲ್ಪ ಸ್ವಲ್ಪ ದುಡ್ಡು ಕೊಟ್ಟು ಸಾಗು ಹಾಕಬೇಕೆಂಬ ನಿರ್ಧಾರದಿಂದ ಬರುವ ಸೀತಾರಂ.. ಆಕೆಯನ್ನು ನೋಡಿ, ಆಕೆ ಕನ್ನಡ ಭಾಷೆಯಲ್ಲಿ ಮಾತಾಡುವುದು, "ಮಾವ" ಎಂದು ಸಂಭೋಧಿಸುವುದನ್ನು ನೋಡಿ, ಹಣದ ಪೆಟ್ಟಿಗೆಯನ್ನು ಹಾಗೆ ಪಕ್ಕದಲ್ಲಿಟ್ಟುಕೊಂಡು ಆಶೀರ್ವಾದ ಮಾಡುತ್ತಾರೆ. ಸಂಸ್ಕಾರ ಇದ್ದಾಗ ಸಂಪತ್ತು ಮುಖ್ಯ ಅಲ್ಲಾ ಎನ್ನುವ ಅದ್ಭುತ ಸಂದೇಶ ಕಾಣ ಸಿಗುತ್ತದೆ. 
  • ಹಣದ ಪೆಟ್ಟಿಗೆಯನ್ನು ಸೀತಾರಾಮ್ ತೆಗೆಯಲು ಹೋದಾಗ.. ಎಲಿಸಾ ಮಾವ ಎಂದು ಬಗ್ಗಿ ನಮಸ್ಕರಿಸಿ ನಿಮ್ಮನ್ನು ನೋಡಿದಾಗ ಸ್ವಾಮೀ ವಿವೇಕಾನಂದರನ್ನು ನೋಡಿದ ಹಾಗೆ ಆಯಿತು ಎನ್ನುತ್ತಾಳೆ.
  • ಸೊಸೆಯನ್ನು ಮನೆಗೆ ಕರೆ ತಂದಾಗ, ಆರತಿ, ಲೀಲಾವತಿ, ಸೀತಾರಾಮ್ ಇವರುಗಳ ನಡುವೆ ನಡೆಯುವ ಭಾವೋದ್ವೇಗದ ತೊಳಲಾಟ  
  • ಗುರುಗಳೇ ನನಗೆ ವೇದ, ಉಪನಿಷತ್ತು ಇವುಗಳ ಬಗ್ಗೆ ಹೇಳಿರಿ ಎಂದು ಎಲಿಸಾ ಕೇಳಿಕೊಂಡಾಗ ಉದಯಕುಮಾರ್ ಮುಖದಲ್ಲಿ ತೋರುವ ಅಭಿನಯ, ಆನಂದಭಾಷ್ಪದಿಂದ ತೋಯ್ದು ಹೋಗುತ್ತಾ... ಸಮಯ ಆದಗೆಲ್ಲಾ ಹೇಳಿ ಕೊಡುತ್ತೇನೆ ಎಂದಾಗ ಎಲಿಸಾಳ ಮೊಗದಲ್ಲಿ ತೋರುವ ಭಾವನೆಗಳು 
  • ಎರಡು ಆಯಾಮದಲ್ಲಿ ಬರುವ ಒಂದು ದೃಶ್ಯ, ಆರತಿಯನ್ನು ಬಹುವಾಗಿ ಮೆಚ್ಚಿಕೊಳ್ಳುವ ಎಲಿಸಾ ಅವಳನ್ನು ತನ್ನ ಗಂಡನ ಬಳಿ ಹೊಗಳುತ್ತಿದ್ದಾರೆ, ಅದೇ ದೃಶ್ಯದಲ್ಲಿ ಲೀಲಾವತಿ ಆರತಿಯನ್ನು ಎಲಿಸಾಳ ಜೊತೆಯಲ್ಲಿ ಓಡಾಡುವುದನ್ನು ಕಂಡು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಒಂದು ಕಡೆ ಬರಿ ಸಂಭಾಷಣೆ ಕೇಳಿಸುತ್ತಾ.. ದೃಶ್ಯದಲ್ಲಿ ಆರತಿ ಲೀಲಾವತಿಯ ನಡುವೆ ಜುಗಳಬಂಧಿ.. ಒಂದು ಅತ್ಯುತ್ತಮ ದೃಶ್ಯ ಸಂಯೋಜನೆ. 
  • ಆರತಿ ತಮ್ಮಿಬ್ಬರ ನಡುವೆ ಅಡ್ಡ ಬರುತ್ತಿದ್ದಾರೆ ಎನ್ನುವ ತಪ್ಪು ಕಲ್ಪನೆಯಿಂದ ತನ್ನ ಹೆಂಡತಿಯ ಜೊತೆಯಲ್ಲಿ ಹಳ್ಳಿಗೆ ಬರುವ ನಾಯಕ, ತನ್ನ ಹೆಂಡತಿಯ ಮೇಲೆ ಮಮತೆ, ಪ್ರೀತಿ ತೋರಿಸುವ ದೃಶ್ಯವನ್ನು ಕ್ಯಾಮೆರಾದ ಚಲನೆಯ ಮೂಲಕ ತೋರಿರುವುದು ಇಷ್ಟವಾಗುತ್ತದೆ.. ದೂರ ದೂರ ಸಾಗುವ ಕ್ಯಾಮೆರ... ನಿಧಾನವಾಗಿ ಅವರಿಬ್ಬರ ಹತ್ತಿರಕ್ಕೆ ಬರುತ್ತದೆ. ಕೆಲ ಕಾರಣಗಳಿಂದ ಪ್ರೀತಿಯನ್ನು ವ್ಯಕ್ತ ಪಡಿಸಲಾಗದ ಸನ್ನಿವೇಶಗಳಿಂದ ನಿಧಾನವಾಗಿ ಹೊರಬಂದು ಗಂಡ ಹೆಂಡತಿಯ ಪ್ರೀತಿ ಬೆಸುಗೆಯಾಗುತ್ತಿದೆ ಎನ್ನುವ ಸಾಂಕೇತಿಕ ದೃಶ್ಯ ಸಂಯೋಜನೆ ಇಷ್ಟವಾಗುತ್ತದೆ.
  • ನಾಯಕ, ಆರತಿ ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ತನ್ನ ಹೆಂಡತಿಯ ಜೊತೆಯಲ್ಲಿ ಸ್ನೇಹ ಬೆಳೆಸುತ್ತಿದ್ದಾಳೆ ಎನ್ನುವ ತಪ್ಪು ಕಲ್ಪನೆಯಿಂದ.. ಅವಳ ಮೇಲೆ ಹೆರುವ ಆರೋಪಗಳಿಗೆಲ್ಲಾ ಆರತಿ ಕೊಡುವುದು ಒಂದೇ ಉತ್ತರ "ನಂದು ತಪ್ಪೇ ಗೋಪಿ". ಕೆಲವೊಮ್ಮೆಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರ ಇರುತ್ತದೆ.. ಅಥವಾ ಎಲ್ಲಾ ಪರಿಹಾರಗಳಿಗೂ ಅನೇಕ ಸಮಸ್ಯೆಗಳ ಸಂಗಮ ಇರುತ್ತದೆ ಎನ್ನುವಂಥಹ ಉತ್ತಮ ಸಂಭಾಷಣೆ ಈ ದೃಶ್ಯದಲ್ಲಿದೆ. 
  • ನಿಜ ಸ್ಥಿತಿ ಅರಿವಾದಾಗ ಎಲಿಸಾ ಆರತಿಯ ಹತ್ತಿರ ಬಂದು "ತಂದ ಬೇರೊಂದು ಹೆಣ್ಣಾ, ಮದುವೆನಾ ನೋಡಿ ರಂಗಿ ಮನದಾಗೆ ದುಖಃ ನುಂಗಿ" ಎನ್ನುತ್ತಾ ಕಣ್ಣೀರಾಗಿ.. "ಆಮ್ ಸರಿ" ಎಂದು ಓಡಿ ಹೋಗುತ್ತಾಳೆ.. ಸೂಪರ್ ದೃಶ್ಯ ಕಲ್ಪನೆ.,.. ಆದ್ರೆ ರೀತಿಯಲ್ಲಿ ಎಲಿಸಾ ಹೊರತು ನಿಂತಾಗ ಆರತಿ "ಹಸ್ಬೆಂಡ್, ಮಾವ, ಅತ್ತೆ ಶಾರದ ಎವ್ರಿ ಒನ್ ಮೇಕ್ ಮಿ ಸ್ಮೈಲ್" ಎಂದು ಹೇಳುತ್ತಾ ಕಣ್ಣೀರಾಗುತ್ತಾರೆ.. ದೊಡ್ಡ ದೊಡ್ಡ ಭಾಷಣದ ಮಾತುಗಳು ಬರಬಹುದಾದ ದೃಶ್ಯವನ್ನು ಚುಟುಕು ಮಾತುಗಳಿಂದ ಅಲಂಕರಿಸಿ ಭಾವನಾತ್ಮಕ ದೃಶ್ಯವನ್ನಾಗಿಮಾಡಿದ್ದಾರೆ . ಹಾಟ್ಸ್ ಆಫ್ ಟು ಪುಟ್ಟಣ್ಣ ಮತ್ತು ಸಂಭಾಷಣಕಾರ ಎಚ್ ವಿ ಸುಬ್ಬರಾವ್. 

ಪ್ರಾಯಶಃ ಮೊತ್ತ ಮೊದಲ ಬಾರಿಗೆ ಆರತಿಯವರ ಚಿತ್ರದಲ್ಲಿ ಇನ್ನೊಂದು ಹೆಣ್ಣು ಪಾತ್ರ ಅವರನ್ನು ಹಿಂದಕ್ಕೆ ಹಾಕಿರುವುದು. ಮಾರ್ಗರೆಟ್ ಥಾಮ್ಸನ್ ಎನ್ನುವ ಅಮೇರಿಕಾದ ಕಲಾವಿದೆ ಇಡಿ ಚಿತ್ರವನ್ನು ಆವರಿಸಿಬಿಟ್ಟಿದ್ದಾರೆ.  ಕನ್ನಡದಲ್ಲಿಯೇ ನಿಧಾನವಾಗಿ ಮಾತಾಡುತ್ತಾ, ಭಾವಾಭಿನಯ, ಕಣ್ಣಿನಲ್ಲಿಯೇ ಭಾವವನ್ನು ಹೊರಗೆಡುಹುವುದು ಇಷ್ಟವಾಗುತ್ತದೆ. ರಂಗೇನ ಹಳ್ಳಿಯಾಗೆ ಹಾಡಿನಲ್ಲಿ ಪಕ್ಕ ಹಳ್ಳಿ ಕುಣಿತ ಕುಣಿವ ಇವರು, ಹ್ಯಾಪಿಯೇಸ್ಟ್ ಮೊಮೆಂಟ್ ಹಾಡಿನಲ್ಲಿ ಪಾಶ್ಚಾತ್ಯ ಮತ್ತು ನಮ್ಮ ದೇಶದ ಎರಡು ತರಹದ ನೃತ್ಯ ಮಾಡುತ್ತಾ ಹಾಡಿರುವುದು ಸೂಪರ್ ಎನ್ನಿಸುತ್ತದೆ. ಜೊತೆಯಲ್ಲಿಯೇ ಮುಖ ಭಾವ ಬೇಕಾದ ದೃಶ್ಯಗಳಲ್ಲಿ ಮಾತ್ರ ಅವರ ಮುಖವನ್ನು ಹತ್ತಿರದಿಂದ ತೋರಿಸಿ, ತುಟಿ ಚಾಲನೆಗೆ ಸರಿಯಾದ ಸಂಭಾಷಣೆಗಳನ್ನು ಕೊಟ್ಟು.. ಉದ್ದುದ್ದ ಮಾತುಗಳಿಗೆ ದೂರದಿಂದ ದೃಶ್ಯವನ್ನು ಚಿತ್ರಿಕರಿಸಿರುವುದು ಜಾಣ್ಮೆಯ ನಡೆಯಾಗಿದೆ. ಮಾತುಗಳಿಗೆ.. ಹಾಡುಗಳಿಗೆ  ಸರಿಯಾದ ತುಟಿ ಚಾಲನೆ ನೀಡಿರುವ ಈ ಕಲಾವಿದೆಗೆ ಸಹಸ್ರ ಅಭಿನಂದನೆಗಳು. "ಅತ್ತೆ ನಿಮಗೆ ಬಾಯ್ ಬೇಬಿ ಬೇಕೋ ಗರ್ಲ್ ಬೇಬಿ ಬೇಕೋ... ನಾ ಬೇಬಿ ಕೊಟ್ಟರೆ ನನ್ನ ಮೇಲಿನ ಕೋಪ ಒಂಟೋಯ್ತದೆ ಅಲ್ಲವಾ ಅತ್ತೆ" ಅತ್ತ್ಯುತ್ತಮ ದೃಶ್ಯ ಮತ್ತು ಸಂಭಾಷಣೆ. 

ಆರತಿ ಈ ಕಲಾವಿದೆಯ ಬಗ್ಗೆ ಏನು ಹೇಳಲಿ.. ಇವರು ನೀರಿನ ತರಹ ಯಾವ ಪಾತ್ರ ಕೊಟ್ಟರೂ ಅದಕ್ಕೆ ಪ್ರವೇಶ ಮಾಡಿಯೇ ಬಿಡುತ್ತಾರೆ.. ಇಡಿ ಚಿತ್ರದಲ್ಲಿ ತಮ್ಮ ಹತಾಶೆ, ಪ್ರೀತಿ, ಪ್ರೇಮ, ನೋವು, ನಲಿವು, ಸಂತಸ ಎಲ್ಲವನ್ನು ಅದುಮಿಟ್ಟುಕೊಂಡು ಹದವಾಗಿ ಕೊಡುವ ಅಭಿನಯ ಇಷ್ಟವಾಗುತ್ತದೆ. ಅತ್ತೆ ಮಾವನ ಮನೆಯಲ್ಲದ್ದಿದ್ದರೂ ಅವರನ್ನು ಅತ್ತೆ ಮಾವ ಎಂದು ಕರೆಯುತ್ತಾ ಅಕ್ಷರಶಃ ಆ ಮನೆಯಲ್ಲಿಯೇ ಕಳೆಯುವ, ಹಾಗೆಯೇ ತನ್ನ ಅಪ್ಪ ಅಮ್ಮನ ಗೊಂದಲಗಳು, ನೋವುಗಳು ಇವಕ್ಕೆ ತಕ್ಕ ಉತ್ತರ ಕೊಡುತ್ತಾ ಎರಡನ್ನು ಸಂಭಾಳಿಸುವಂಥಹ ಅಭಿನಯ ನೀಡಿ ಗೆದ್ದಿದ್ದಾರೆ. ಎಲಿಸಾಳನ್ನು ತನ್ನ ಅತ್ತೆ ಮಾವನ ಮನದಲ್ಲಿ ಭದ್ರವಾಗಿ ಕೂರಿಸುವ ಅವರ ಪ್ರಯತ್ನ ಮತ್ತು ಅದರಲ್ಲಿ ಯಶಸ್ವೀ ಆಗುವ ಅಭಿನಯ ಗಮನ ಸೆಳೆಯುತ್ತದೆ. ಪ್ರೀತಿ ತ್ಯಾಗ ಮಮತೆ ಎಲ್ಲವನ್ನು ಹದವಾದ ಪಾಕದಲ್ಲಿ ಬೆರೆಸಿ ಅಭಿನಯದ ಮೂಲಕ ನಮಗೆ ಹಂಚಿದ್ದಾರೆ. ಆರತಿ ನಿಮಗೆ ಒಂದು ಸಲಾಂ. 

ಬೇಡದ ಸೊಸೆಯನ್ನು ನೋಡಿಕೊಳ್ಳುವ ಬೇಡ ಕೆಲಸವನ್ನು ಸಿಟ್ಟು ಸೆಡವುಗಳಲ್ಲಿ ತೋರಿಸುವ ಲೀಲಾವತಿ, ತನ್ನ ಆಂಗ್ಲ ಸೊಸೆ ತುಳಸಿ ಕಟ್ಟೆಯನ್ನು ಸುತ್ತುವುದನ್ನು ಕಂಡು ಅಭಿಮಾನ ಉಕ್ಕಿದರೂ, ಅತ್ತೆ ಎನ್ನುವ ಅಹಂ ಅಡ್ಡಿ ಬರುವ ಅಭಿನಯ, ತನ್ನ ಸೊಸೆ ಗರ್ಭಿಣಿ ಎಂದು ಗೊತ್ತಾದಾಗ ತಡೆದು ತಡೆದು ಬಂದು ಪ್ರೀತಿ ವ್ಯಕ್ತ ಪಡಿಸುವ ರೀತಿ.. ಸೂಪರ್.. ಲೀಲಾವತಿ ಇಲ್ಲಿ ಎಂದಿನಂತೆ ಕಲಾವತಿಯಾಗಿ ಬಿಟ್ಟಿದ್ದಾರೆ. 

ಮೃದು ಮಾತು, ಮೃದು ಅಭಿನಯ, ಸರಳ ವ್ಯಕ್ತಿತ್ವ ಇದರ ಸಮಾಗಮ ಸೀತಾರಾಮ್. ಸೊಸೆಯನ್ನು ಕರೆದು ತರುವ ಇವರು ಅವಳ ಗುಣಕ್ಕೆ ಮಾರು ಹೋಗಿ ತನ್ನ ಸ್ನೇಹಿತನಿಗೆ ಕೊಟ್ಟ ಮಾತನ್ನು ಮುರಿಯುತ್ತಾರೆ. ಆದರೆ ಅದಕ್ಕೆ ಅವರು ಕೊಡುವ ಕಾರಣ "ದುಡ್ಡು ಕೊಟ್ಟು ಅವಳ ಕಾಲಿಗೆ ಬಿದ್ದು ನನ್ನ ಮಗನ ಜೀವನದಿಂದ ಹೊರಗೆ ಕಲಿಸಬೇಕು ಎಂದು ಹೋದೆ.. ಅವಳ ಗುಣ ನಡತೆಯನ್ನು ನೋಡಿ.. ನಮ್ಮ ದೇಶದ ಸಂಸ್ಕೃತಿ ಗುಣವನ್ನು ಆದರಿಸುತ್ತದೆಯೇ ಹೊರತು ಹಣವನ್ನಲ್ಲ ಎನ್ನುವಂಥಹ ತರ್ಕ ಬದ್ಧ ಮಾತುಗಳನ್ನು ಆಡುವಾಗ ಅವರ ತೊಳಲಾಟ ಇಷ್ಟವಾಗುತ್ತದೆ. 

ವ್ಯಂಗ್ಯ, ಕುಹಕ, ಚುಚ್ಚುವ ಮಾತುಗಳು, ಜೊತೆಯಲ್ಲಿಯೇ ಸ್ನೇಹಿತನ ಮೇಲಿನ ಅಭಿಮಾನ ಇವುಗಳ ಮಿಲನ ಲೋಕನಾಥ್ ಅವರ ಅಭಿನಯ. ಮಗಳ ಮೇಲಿನ ವ್ಯಾಮೋಹ, ಅವಳ ಬಾಳಿಗೆ ಫ್ರೇಮ್ ಹಾಕಿಕೊಡಬೇಕು ಎನ್ನುವ ತವಕ ಎಲ್ಲ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಅವರಿಗೆ ಸರಿಸಾಟಿಯಾಗಿ ಉಮ ಶಿವಕುಮಾರ್ ಅಭಿನಯ. 

ಇವರ ಜೊತೆಯಲ್ಲಿ ಬರುವ ದಿನೇಶ್ ಪುಟ್ಟ ಪಾತ್ರದಲ್ಲಿ ಮಿನುಗಿ ಹೋಗುತ್ತಾರೆ, ಅಂಬರೀಶ್ ಹಾಡಿನಲ್ಲಿ ಬರುತ್ತಾರೆ. ಆದರೆ ಉದಯಕುಮಾರ್ ಶಾಸ್ತ್ರಿಗಳ ಪಾತ್ರದಲ್ಲಿ ಕಾಡುತ್ತಾರೆ..

ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಅದ್ಭುತ ಶಕ್ತಿ ಇತ್ತು, ಪಾತ್ರಕ್ಕೆ ತಕ್ಕ ಕಲಾವಿದರು. ಆ ಪಾತ್ರದ ಅಭಿನಯ ನೋಡಿದ ಮೇಲೆ ಅರೆ ಇವರು ಈ ಪಾತ್ರ ಮಾಡಲೆಂದೇ ಜನಿಸಿದ್ದಾರೆನೋ ಅನ್ನಿಸುವಷ್ಟು ಸಹಜವಾಗಿರುತ್ತೆ. ಜೊತೆಯಲ್ಲಿಯೇ ಒಂದು ಗೆರೆಯನ್ನು ಉದ್ದ ಮಾಡಬೇಕೆಂದು ಅಂದುಕೊಂಡಾಗ ಆ ಗೆರೆಯನ್ನು ಅಳಿಸದೆ ಪಕ್ಕದಲ್ಲಿಯೇ ಇನ್ನೊಂದು ಚಿಕ್ಕ ಗೆರೆಯನ್ನು ಎಳೆಯುವ ಅತ್ಯುತ್ತಮ ಜಾಣ್ಮೆ ಅವರಲ್ಲಿ ಇತ್ತು.  ಇಲ್ಲಿ ನಾಯಕನ ಪಾತ್ರ ಮುಖ್ಯ ಆದರೆ ಅದು ಕಥೆಗೆ ತಿರುವು ಕೊಡುವಲ್ಲಿ ಮಾತ್ರ.. ಅದಕ್ಕೆಂದೇ ಹೊಸ ಪರಿಚಯವಾದ ಅನಿಲ್ ಕುಮಾರ್ ಎನ್ನುವ ನಟನನ್ನು ಹುಡುಕಿ ತಂದರು. ಕಥೆಗೆ ಬೇಕಾದಂಥಹ ಅಭಿನಯ ಕೊಟ್ಟಿದ್ದಾರೆ.. ಆದರೆ ಅವರ ಮುಂದೆ ಉದ್ದವಾಗಿ ನಿಲ್ಲುವುದು ಬಿಳಿ ಹೆಂಡ್ತಿ ಪಾತ್ರಧಾರಿ.  ಇದು ನಿರ್ದೇಶಕನ ಚಾತುರ್ಯ. 

ಚಿತ್ರದ ಬಹುತೇಕ ಭಾಗ ಸ್ಟುಡಿಯೋ ಒಳಗೆ ನಡೆದರೂ ಪುಟ್ಟಣ್ಣ ಅವರ ಸುಂದರ ತಾಣಗಳ ಹುಡುಕಾಟ ಮೇಲುಕೋಟೆ, ತೊಣ್ಣುರ್ ಕೆರೆ, ದೊಡ್ಡ ಆಳದ ಮರ ಇವುಗಳ ಸುತ್ತಮುತ್ತಲಿನ ವಿಹಂಗಮ ದೃಶ್ಯಗಳನ್ನು ಕಣ್ಣ ಮುಂದೆ ಬಿಡಿಸಿದ್ದಾರೆ.  

ಮನದ ಕಡಲಲ್ಲಿ ಬರುವ ಅಸಮಾಧಾನದ ತರಂಗಗಳನ್ನು ಜೋಪಾನವಾಗಿ ತಡೆದು ಅದನ್ನು ಸರಿಯಾಗಿ ಬಳಕೆ ಮಾಡಿ ಅದನ್ನು ಏರಿ ಸಾಗಿ ನಮ್ಮ ಸಮಾಧಾನ ಎನ್ನುವ ಗುರಿಯನ್ನು, ಸಂಬಂಧ ಎನ್ನುವ ಗುಡಿಯನ್ನು ಮುಟ್ಟಲೇಬೇಕು ಎನ್ನುವ ಸುಂದರ ಸಂದೇಶವನ್ನು ಹೊತ್ತು ತಂದ  ಬಿಳಿ ಹೆಂಡ್ತಿ ಚಿತ್ರ ಪುಟ್ಟಣ್ಣ ಕಣಗಾಲ್ ಅವರ ಬತ್ತಳಿಕೆಯಿಂದ ಹೊರ ಬಂದ ಇನ್ನೊಂದು ಚಿತ್ರ ರತ್ನ. 

ಗುರುಗಳೇ ಸಲಾಂ ನಿಮಗೆ!!!

Friday, December 19, 2014

ಕಥೆಗಳ ಸಂಗಮ ಹಾಗೆಯೇ ಭಾವ ಸಂಗಮ ಕೂಡ - ಕಥಾಸಂಗಮ (1976)

ಉತ್ಸಾಹದ ಚಿಲುಮೆಯಾಗಿದ್ದಾಗ ಕಣ್ಣಿಗೆ ಕಾಣುವ ಚಿಕ್ಕ ಚಿಕ್ಕ ರತ್ನಗಳು ಮುತ್ತುಗಳಾಗುತ್ತವೆ. ಈ ವಾಕ್ಯದ ಸತ್ಯದರ್ಶನ ನಮಗೆ ಮಾಡಿಸಿದ್ದು ಪುಟ್ಟಣ್ಣ ಅವರ ಕಥಾಸಂಗಮ ಚಿತ್ರ.  ಲೇಖಕರೆ ಹೇಳುವಂತೆ ನನ್ನ ಸಣ್ಣ ಕಥೆಯನ್ನು ಆರಿಸಿ ಚಿತ್ರ ಮಾಡಿದ್ದಾರೆ. ಅದನ್ನು ಬೆಳ್ಳಿತೆರೆಯ ಮೇಲೆ ಹೇಗೆ ತರುತ್ತಾರೆ ಎನ್ನುವ ಕುತೂಹಲ ನನಗೂ ಇದೆ ಎಂದು,

ಪುಟ್ಟಣ್ಣ ಅವರ ತಾಖತ್ ಇದ್ದದ್ದು ಮನಸ್ಸಿಗೆ ಹಿಡಿಸುವ ಕಥೆಗಳನ್ನು ಲೇಖನಗಳನ್ನು ಹುಡುಕುವುದು ಮತ್ತು ಅದು ಕಾಡಿದರೆ ಅದನ್ನು ಚಿತ್ರಕ್ಕೆ ಅಳವಡಿಸುವುದು.

ಇಂಥಹ ಒಂದು ಅಭೂತಪೂರ್ವ ಘಟನೆ ನಡೆದದ್ದು ೧೯೭೬ ಇಸವಿಯಲ್ಲಿ.  ಹೊರಜಗತ್ತಿಗೆ ಸಾಮಾನ್ಯ ಅನ್ನಿಸುವ ಚಿಕ್ಕ ಚಿಕ್ಕ ಕತೆಗಳನ್ನು ಹುಡುಕಿ ಆರಿಸಿ ಅದನ್ನು ಬೆಳ್ಳಿತೆರೆಯ ಮೇಲೆ ಉತ್ತು ಬಿತ್ತು ಬೆಳಗಿಸಿದ್ದು ಕಥಾಸಂಗಮ ಎನ್ನುವ ಒಂದು ಪುಷ್ಪಮಾಲಿಕೆಯಲ್ಲಿ.


ಸಾಮಾನ್ಯ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಪಾತ್ರಗಳು, ಕಲಾವಿದರು ಕಾಡುತ್ತಾರೆ. ಆದರೆ ಇಲ್ಲಿ ಕಾಡುವುದು ಕಲಾವಿದರಾದರೂ.. ಅದರ ಗಾಢತೆಯಿಂದ ಕಾಡುವುದು ಆ ಕಲಾವಿದರು ನಿರ್ವಹಿಸಿದ ಪಾತ್ರಗಳು ಮತ್ತು ಅದರ ಪೋಷಣೆ.

ವರ್ಧಿನಿ ಆರ್ಟ್ಸ್ ಪಿಕ್ಕ್ಚರ್ಸ್ ಲಾಂಛನದಲ್ಲಿ ಸಿ ಎಸ್ ರಾಜ ಅವರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರಕ್ಕೆ ಹಾಡುಗಳನ್ನು ಬರೆದದ್ದು ಪುಟ್ಟಣ್ಣ ಅವರ ಜೀವದ ಗೆಳೆಯ ವಿಜಯನಾರಸಿಂಹ.. ಸಂಗೀತ ಪ್ರಾಣ ಸ್ನೇಹಿತ ವಿಜಯಭಾಸ್ಕರ್. ಮೂರು ಹಾಡುಗಳಲ್ಲಿ  ಒಂದನ್ನು ಪಿ ಬಿ ಶ್ರೀನಿವಾಸ್ ಮತ್ತು ಉಳಿದ ಎರಡನ್ನು ಕಸ್ತೂರಿ ಶಂಕರ್ ತಮ್ಮ ಕೋಮಲ ಕಂಠದಲ್ಲಿ ಸೊಗಸಾಗಿ ಹಾಡಿದ್ದಾರೆ. ಕಪ್ಪು ಬಿಳುಪು ವರ್ಣದಲ್ಲಿ ಇಡಿ ಚಿತ್ರವನ್ನು ಸೆರೆಹಿಡಿದದ್ದು ಹರಿದಾಸ್.

ಮಾನವನ ವಿಭಿನ್ನ ಮುಖಗಳ, ಭಾವಗಳ, ಅಂತಃಕರಣ ಎಲ್ಲವನ್ನು ನವಿರಾದ ಬಟ್ಟೆಯ ಹಾಗೆ ತಮ್ಮ ಕಥೆಗಳಲ್ಲಿ ತುಂಬಿದ್ದನ್ನು ಅಷ್ಟೇ ಜೋಪಾನ ವಾಗಿ ಕಥೆಯ ಮತ್ತು ಲೇಖಕರ ಆಶಯಕ್ಕೆ ಭಂಗ ಬರದಂತೆ ಅಷ್ಟೇ ಸುಂದರಾದ ರಂಗವಲ್ಲಿ ಹಾಕಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದವರು ಪುಟ್ಟಣ್ಣ ಕಣಗಾಲ್.

ಆರಂಭದಲ್ಲಿ ಲೇಖಕರನ್ನು ತೆರೆಯ ಮೇಲೆ ಬರುವಂತೆ ಮಾಡಿ, ಅವರ ಕಿರುಪರಿಚಯ ಮಾಡಿಕೊಟ್ಟು, ಅವರನ್ನು ಮಾತಾಡಲು ತೆರೆಯನ್ನು ಬಿಟ್ಟುಕೊಟ್ಟು ತಾವು ಲೇಖಕರನ್ನು ಎಷ್ಟು ಆದರಿಸುತ್ತಿದ್ದರು ಎನ್ನುವುದನ್ನು ಸೂಕ್ಷವಾಗಿ ತೋರಿದ್ದಾರೆ. ಅದಕ್ಕಿಂತ ಕೊಂಚ ಮೊದಲು ಕನ್ನಡ ಸಾಹಿತ್ಯ ಭಂಡಾರವನ್ನು ಪರಿಚಯಿಸುತ್ತಾ ಅನೇಕಾನೇಕ ಲೇಖಕ/ಕಿಯರನ್ನು ಅವರ ಭಾವಚಿತ್ರಗಳ ಮೂಲಕ ತೋರುವುದು ಒಂದು ವಿಭಿನ್ನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಶ್ರೀ ಗಿರೆಡ್ಡಿ ಗೋವಿಂದರಾಜು ಅವರ "ಹಂಗು" ಎನ್ನುವ ಪುಟ್ಟ ಕಥೆಯನ್ನು ಪರಿಣಾಮಕಾರಿಯಾಗಿ ಮೂಡಿಸಲು ಪುಟ್ಟಣ್ಣ ಅವರಿಗೆ ಕೈ ಜೋಡಿಸಿರುವುದು ಜಿ ಕೆ ಗೋವಿಂದರಾವ್, ಲೋಕನಾಥ್.

ತನ್ನ ಸ್ವಾರ್ಥಕ್ಕೆ, ತನಗೆ ಬೇಕಾದ ಕೆಲಸ ಮಾಡಿಸಿಕೊಳ್ಳಲು ಪ್ರೊಫೆಸರ್ ಅವರನ್ನು ಬಳಸಿಕೊಳ್ಳಲು ಹೋರಾಡುವ/ಕಾಡಿಸುವ ಪಾತ್ರದಲ್ಲಿ ಲೋಕನಾಥ್ ಗಮನ ಸೆಳೆಯುತ್ತಾರೆ. ರಾಗವಾಗಿ ಮಾತಾಡುತ್ತ, ಧ್ವನಿಯನ್ನು ಕೇಳಿದರೆ ಸಿಟ್ಟು ಬರುವಂತೆ ಮೈ ಕೈ ಪರಚಿಕೊಳ್ಳುವಂತೆ ಮಾಡಬಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಇಲ್ಲಿ ಗೆಲ್ಲುವುದು ಅವರ ಪಾತ್ರವೇ ಆದರೂ ಆ ಪಾತ್ರದ ಸುತ್ತಲೂ ನಿಲ್ಲುವ ಇತರ ಪಾತ್ರಗಳು ಗಮನಾರ್ಹ ಕೊಡುಗೆ ನೀಡಿದ್ದಾವೆ.

ಒಣಗಿ ಹೋದ ಮರದ ಹಿನ್ನೆಲೆಯಲ್ಲಿ ನಿಂತ ಅಪ್ಪ, ಲೋಹದ ಬಲೆಯ ಹಿಂದೆ ನಿಂತ ತನ್ನ ತಂಗಿ, ಖಾಯಿಲೆ ಇಂದ ನರಳುತ್ತಿರುವ ಮಗು, ಔಷದಿ ತರಲು ಬೇಕಾಗುವ ಹಣಕ್ಕೆ ಪಕ್ಕದ ಮನೆಯಿಂದ ಸಾಲ ತರುವೆ ಎನ್ನುವ ಮಡದಿ, ಇಡಿ ಸನ್ನಿವೇಶಕ್ಕೆ ಯಜಮಾನರಾಗುವ ಗೋವಿಂದರಾವ್ ಗಮನ ಸೆಳೆಯುತ್ತಾರೆ. ತನ್ನ ಧ್ಯೇಯ ಒಂದು ಕಡೆ, ಸಂಸಾರದ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ತಾನು ನಂಬಿರುವ ಸಿದ್ಧಾಂತಗಳನ್ನು ಗಾಳಿಗೆ ತೂರಿಬಿಡಬೇಕಾದ ಧ್ವಂಧ್ವ ಇವುಗಳನ್ನು ಗುರುತರವಾಗಿ ಪ್ರದರ್ಶನ ಮಾಡಿದ್ದಾರೆ ತಮ್ಮ ಅಭಿನಯದ ಮೂಲಕ.

ಇಷ್ಟವಾಗುವ ದೃಶ್ಯ.. ಸಾಹುಕಾರ ತನ್ನ ಕೆಲಸ ಮಾಡಿಸಿಕೊಳ್ಳಲು ಪ್ರೊಫೆಸರ್ ಮನೆಗೆ ನುಗ್ಗಿ ಅವರಿಗೆ ಬೇಕಾದ ಅನುಕೂಲತೆ ಮಾಡಿಕೊಟ್ಟು ಹೋದ ಮೇಲೆ.. ಸುಮ್ಮನೆ ಯೋಚನೆ ಮಾಡುತ್ತಾ ಕೂರುವ ಪ್ರೊಫೆಸರ್ ತಲೆಯ ಮೇಲೆ ನೆರಳಿನಲ್ಲಿ ಎರಡು ಕೈಗಳು ಇವರನ್ನು ಆವರಿಸಿಕೊಳ್ಳುತ್ತಾ ಬರುವಂತೆ ತೋರುವ ದೃಶ್ಯ.

ಕಡೆಯ ದೃಶ್ಯದಲ್ಲಿ ಉತ್ತರ ಪತ್ರಿಕೆ ಅವರನ್ನು ಓಡಿಸಿಕೊಂಡು ಬರುವುದು, ಮತ್ತು ಸಾಹುಕಾರ ಹಿಂದೆ ಓಡಿ ಬರುತ್ತಾ, ಗಹಗಹಿಸಿ ನಗುತ್ತಾ ನನ್ನ ಹಂಗೇಕೆ ನಿಮಗೆ ಒಂದು ನಾಲ್ಕು ಮಾರ್ಕ್ಸ್ ಹಾಕಿಬಿಡಿ ಎನ್ನುವುದು.. ಭ್ರಷ್ಟಾಚಾರದ ವಿರೋಧಿಯಾದರೂ ಪರಿಸ್ಥಿತಿ ಆ ನಂಬಿಕೆಯನ್ನು ಹೇಗೆ ಬದಲಾಯಿಸಲು ಕಾಡುತ್ತಾ ಬರುತ್ತದೆ ಎನ್ನುವುದೇ ಇದರ ಕಥಾವಸ್ತು.
*******************
ಹಂಗು ಮಾನವನನ್ನು ಮುಲಾಜಿಗೆ ಸಿಕ್ಕಿಸಿ.. ಪರಿಸ್ಥಿತಿಯನ್ನು ಬಲೆಯಂತೆ ಹೆಣೆದು ಸಿಕ್ಕಿಸುವ ಪ್ರಯತ್ನವಾದರೆ.. ಶ್ರೀಮತಿ ವೀಣಾ ಅವರ "ಅತಿಥಿ" ಪರಿಸ್ಥಿತಿ ಅನುಕೂಲವಾಗಿದ್ದರೂ ತಾ ಅಂದುಕೊಂಡ ವಿಚಿತ್ರ ಆದರ್ಶಗಳು ಹೇಗೆ ಬದುಕಿನ ಸುಖವನ್ನು ಹಿಂಡಿ ಹಿಪ್ಪೆ ಮಾಡಿ ಮನಸ್ಸನ್ನು ಮುದುಡಿ ಹಾಕುತ್ತದೆ ಎಂಬುದನ್ನು ಸಾಂಕೇತಿಕವಾಗಿ ಕಥೆಯ ಮೂಲಕ ಹೇಳುತ್ತದೆ.

ರೂಪ, ಯೌವನ ಮನಷ್ಯನ್ನು ಗರ್ವಿ ಅಥವಾ ತಾ ಅಂದುಕೊಂಡಿದ್ದು ಸರಿ ಎನ್ನುವ ಒಂದು ಪೊಳ್ಳು ಪೊರೆಯನ್ನು ಸೃಷ್ಟಿಸಿರುತ್ತದೆ. ಅದರಲ್ಲಿಯೂ ಆ ಪೊರೆ ಹೆಣ್ಣಲ್ಲಿ ಇದ್ದರೆ, ಅದು ಇನ್ನು ಕಾಡುತ್ತದೆ. ಯೌವನ ಕಾಲದಲ್ಲಿ ಗಂಡಸರು ಎಂದರೆ ಹಾಗೆ ಹೀಗೆ ಎನ್ನುವ ಒಂದು  ಮಿಥ್ಯ ವಲಯವನ್ನು ಸೃಷ್ಟಿಸಿಕೊಂಡು ಜೇಡ ತಾ ಕಟ್ಟಿದ ಬಲೆಯೊಳಗೆ ಕೆಲವೊಮ್ಮೆ ತಾನೇ ಸಿಕ್ಕಿಕೊಂಡು ಹೊರಬರಲಾರದೆ ತವಕಿಸುವ ಹುಳುವಂತೆ ಆಗಿ ಬಿಡುತ್ತದೆ.

ನೋಡುವ ನೋಟ ಸರಿಯಾಗಿ ಇರಬೇಕು ಎನ್ನುವುದು ನಿಜವಾದರೂ, ಎಲ್ಲಿ ನೋಡುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ, ಈ ಮಾತನ್ನು ಪುಷ್ಠಿಕರಿಸುವ ಸಂಭಾಷಣೆ ಇಲ್ಲಿ ಕಾಣುತ್ತದೆ.
"ಪಶ್ಚಿಮ ದಿಕ್ಕಿನತ್ತ ಬಾಗಿಲು ತೆರೆದಿಟ್ಟುಕೊಂಡು ನೋಡಿದರೆ ಬರಿ ಸೂರ್ಯ ಮುಳುಗೋದು ಮಾತ್ರ ಕಾಣುತ್ತದೆ. ಪೂರ್ವ ದಿಕ್ಕಿನತ್ತ ನೋಡ್ರಿ ಗಂಡಸು ಏನು ಎಂದು ಅರ್ಥವಾಗುತ್ತದೆ"

ನಿರ್ಧಾರ ತೆಗೆದುಕೊಳ್ಳುವಾಗ.. ಕೂತಲ್ಲಿಯೇ ಕೂರೋಲ್ಲ, ನಿಂತಲ್ಲಿಯೇ ನಿಲ್ಲೋಲ್ಲ.. ಆದರೆ ಜಾಗಬದಲಾಯಿಸಿದಾಕ್ಷಣ ನಿರ್ಧಾರವೂ ಬದಲಾಗಲೇ ಬೇಕಿಲ್ಲ ಎನ್ನುವುದು ಈ ಸಂಭಾಷಣೆಯಲ್ಲಿ ಇಣುಕುತ್ತದೆ.

"ಜಾಗ ಬದಲಾಯಿಸಿದಾಗ ನಿರ್ಧಾರವೂ ಬದಲಾಯಿಸುತ್ತೀರಿ ಎಂದುಕೊಂಡೆ.. ಆದರೆ ಮತ್ತೆ ಅದೇ ಜಾಗದಲ್ಲಿ ಹೋಗಿ ಕೂತ್ರಿ"
ಒಂದು ಮಾತಲ್ಲಿಯೇ ಮುಗಿಸಬಹುದಾದ ದೃಶ್ಯವನ್ನು ಕಥಾನಾಯಕಿ ನಾಲ್ಕು ಕಲ್ಲಿನ ಬೆಂಚುಗಳಲ್ಲಿ ಕೆಲ ಕ್ಷಣ ಕೂತು ಎದ್ದು ಬರುವುದು ಮತ್ತು ಕಡೆಯಲ್ಲಿ ತನ್ನ ಹಳೆ ನಿರ್ಧಾರವೇ ಸರಿ ಎಂಬ ತೀರ್ಮಾನಕ್ಕೆ ಬರುವುದು ಈ ದೃಶ್ಯದ ಸಾರಾಂಶ. ದೃಶ್ಯ ಸಂಯೋಜನೆ ಇಷ್ಟವಾಗುತ್ತದೆ.

ಪ್ರೀತಿ ಪ್ರೇಮ ಅನುರಾಗ ಇವೆಲ್ಲ ಬದುಕಿಗೆ ಉತ್ಸಾಹ ತುಂಬುವ ಚೇತನಗಳು ಎನ್ನುವುದನ್ನು "ಕಾಳಿದಾಸನ ಕಾವ್ಯಲಹರಿಗೆ" ಹಾಡಿನಲ್ಲಿ ಪಿ ಬಿ ಶ್ರೀನಿವಾಸ್ ಪರಿಣಾಮಕಾರಿಯಾಗಿ ಹೇಳಿದ್ದಾರೆ.
ಗಂಡಿನ ಹಂಗಿಲ್ಲದೆ ನಾ ಬದುಕಿ ತೋರಿಸುತ್ತೇನೆ ಎನ್ನುವ ನಾಯಕಿಯ ಮಾತಿಗೆ ನಾಯಕ ಹೇಳುವ ಮಾತುಗಳು ಇಷ್ಟವಾಗುತ್ತವೆ.

"ನೀವು.. ಇದನ್ನು ಸಾಧಿಸಬಹುದು.. ಗೆಲ್ಲಲೂ ಬಹುದು, ಆದರೆ ಗಂಡು ಹೆಣ್ಣಿನ ಮಧುರ ಪ್ರೇಮದಲ್ಲಿ ಸುಪ್ತವಾದ ಒಂದು ಅವ್ಯಕ್ತ ಆನಂದವನ್ನು ಕಳೆದುಕೊಳ್ಳುತ್ತೀರಿ" ಸೂಪರ್ ಸಂಭಾಷಣೆ.

ಕಡೆಯಲ್ಲಿ.. "ಈ ಜೀವನಕ್ಕೆ ನಾ ಅತಿಥಿಯಾಗಿ ಬಂದವಳೇ" ಎನ್ನುವ ಮಾತು ನಿರ್ಧಾರಗಳನ್ನು ಕಾಲಕಾಲಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಇಲ್ಲವೇ ತುಕ್ಕು ಹಿಡಿದ ಕಬ್ಬಿಣದಂತಾಗುತ್ತದೆ ಎನ್ನುವ ಸಂದೇಶ ಹೇಳುತ್ತದೆ.

ಈ ಭಾಗದ ಚಿತ್ರದಲ್ಲಿ ಸರೋಜಾದೇವಿ ಮತ್ತು ಕಲ್ಯಾಣ್ ಕುಮಾರ್ ಅವರ ಜುಗಳಬಂಧಿ ಇಷ್ಟವಾಗುತ್ತದೆ, ಸೇರಿಗೆ ಸವ್ವಾ ಸೇರು ಎನ್ನುವಂತೆ ಇರುವ ಸಂಭಾಷಣೆಗಳು ಮನಕ್ಕೆ ತಾಕುತ್ತದೆ.

                                                         *******************

ಕಣ್ಣಿದ್ದು ಪರಿಸ್ಥಿತಿಗೆ ಬಲಿಪಶುವಾಗಿ ಹಂಗಿಗೆ ಬೀಳುವ ಕತೆಯಾದರೆ.. ಹೃದಯವಿದ್ದೂ ಪರಿಸ್ಥಿಯನ್ನು ಸರಿಯಾಗಿ ನೋಡದೆ ಅತಿಥಿಯಾದೇ ಎನ್ನುವ ನೋವಲ್ಲಿ ನಿಲ್ಲುವ ನಾಯಕಿ ಇನ್ನೊಂದು ಕತೆಯಾಗುತ್ತಾರೆ. 

ಶ್ರೀ ಈಶ್ವರ ಚಂದ್ರ ಅವರ "ಮುನಿತಾಯಿ" ಕತೆಯಲ್ಲಿ ಜೀವನದ ಆನಂದವನ್ನು ಅನುಭವಿಸಲು ಕೆಲವರಿಗೆ ಕಣ್ಣು ಬೇಕು ಕೆಲವರಿಗೆ ಕಣ್ಣು ಬೇಡ.. ಆದರೆ  ಹೃದಯ ವೈಶಾಲ್ಯತೆ ಬೇಕು ಎಂಬ ಮಾತನ್ನು ಹೇಳುತ್ತದೆ..

ಹುಟ್ಟು ಕುರುಡಿಯಾಗಿದ್ದರೂ ಮನದ ಕಣ್ಣುಗಳಿಂದ ಲೋಕವನ್ನು ನೋಡುವ ಕಥಾನಾಯಕಿ.. ತನ್ನೆಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳುವಷ್ಟು ಶಕ್ತಳಾಗಿರುತ್ತಾಳೆ. ಹೃದಯವೈಶಾಲ್ಯವುಳ್ಳ ನಾಯಕ ಅವಳಿಗೆ ಬಾಳು ಕೊಡುತ್ತಾನೆ.

ಕಣ್ಣಿದ್ದು ಕುರುಡರು ಅನ್ನುವ ಮಾತಿನಂತೆ.. ಲೋಕವನ್ನು ಕಣ್ಣಿಗೆ ಕಾಣುವಂತೆ ನೋಡುವ ಕಾಮಾಲೆ ಕಣ್ಣಿನ ಕೆಲ ಮಂದಿ ಹೇಗೆ ಮನದ ಕೊಳವನ್ನು ರಾಡಿ ಮಾಡುತ್ತಾರೆ ಎನ್ನುವುದೇ ಕಥಾ ವಸ್ತು.

"ಓ ದ್ಯಾವ್ರೆ ನಿನ್ನ ಅಂದ ಚಂದವೇನೋ" ಈ ಹಾಡು ಎರಡು ಕಾರಣಕ್ಕೆ ಗಮನ ಸೆಳೆಯುತ್ತದೆ.
೧. ಕಣ್ಣು ಕಾಣದ ಹೆಣ್ಣು ತಾ ಕಂಡಿದ್ದೇನೆ ಎನ್ನುವಂತೆ ವರ್ಣಿಸುವ ಹಾಡು ಒಮ್ಮೆ ಬಂದರೆ.. ಇನ್ನೊಮ್ಮೆ ಕಾಣದ ದೇವರನ್ನು ಕಂಡಿದ್ದೇನೆ ಎನ್ನುವಂತೆ ಅವನಿಗೆ ಕೃತಜ್ಞತೆ ಸಲ್ಲಿಸುವ ರೀತಿಯಲ್ಲಿ ಇನ್ನೊಮ್ಮೆ ಬರುತ್ತದೆ
೨. ಕಸ್ತೂರಿ ಶಂಕರ್ ಅವರ ಮಧುರ ಧ್ವನಿ ಈ ಹಾಡನ್ನು ಇನ್ನಷ್ಟು ಮೇಲಕ್ಕೆ ಏರಿಸಿದೆ.

ನೋಡಬಾರದ ದೃಶ್ಯವನ್ನು ನೋಡುವಂತೆ ಮನಸ್ಸು ಪ್ರಚೋಧಿಸಿದಾಗ.. ಬೇಡ ಬೇಡ ಅನ್ನುತ್ತಲೇ ಕಣ್ಣಲ್ಲೇ ಭಾವನೆ ವ್ಯಕ್ತ ಪಡಿಸುವ ಉಮೇಶ್ ಈ ಚಿತ್ರದ ಮುಖ್ಯ ಪಾತ್ರ. ಬಹುಶಃ ನನಗೆ ಅನ್ನಿಸಿದಂತೆ ಒಂದು ಮಸಾಲೆ ದೃಶ್ಯವನ್ನು ಅಶ್ಲೀಲವಾಗಿ ಚಿತ್ರಿಸದೆ ಅದ್ಭುತವಾಗಿ ಕಣ್ಣಿನ ಭಾವದಲ್ಲಿಯೇ ಚಿತ್ರಿಸಿರುವುದು ಇದೆ ಮೊದಲು.. ಈ ದೃಶ್ಯ ಸಂಯೋಜನೆಗೆ ಪುಟ್ಟಣ್ಣ ಅವರಿಗೆ ಸಲಾಂ ಹೇಳಲೇ ಬೇಕು.
ಇದೆ ರೀತಿಯಲ್ಲಿ ರಜನಿಕಾಂತ್ ಕೂಡ ಹಾಗೆಯೇ ಅಭಿನಯಿಸಿದ್ದಾರೆ. ಮನಸ್ಸು ಒಮ್ಮೆ ಹಾಗೆ ಝಲ್ ಎನ್ನಿಸುತ್ತದೆ. ಅರೆ ಚಲನಚಿತ್ರಗಲ್ಲಿ ಅಶ್ಲೀಲ ಎನ್ನಿಸಬಹುದಾದ ದೃಶ್ಯಗಳನ್ನು ತನ್ನ ಕಸುಬುದಾರಿಕೆಯಿಂದ ಈ ಮಟ್ಟಕ್ಕೆ ಅದ್ಭುತವಾಗಿ ಚಿತ್ರಿಕರಿಸಬಹುದಾದರೆ ಅಶ್ಲೀಲತೆ ಎನ್ನುವುದೇ ಈ ಪ್ರಪಂಚದಲ್ಲಿ ದೃಶ್ಯ ಮಾಧ್ಯಮದಲ್ಲಿ ಇರಲಾರದು ಎನ್ನಿಸುತ್ತದೆ.

ಕಡೆಯಲ್ಲಿ ಕಥಾನಾಯಕ ಹೇಳುವ ಮಾತು "ಅಹಲ್ಯೆಯನ್ನು ತಪ್ಪು ದಾರಿಗೆ ಎಳೆದದ್ದು ದೇವೇಂದ್ರ ಅವನಿಗೆ ಶಾಪ ಕೊಟ್ಟರು ಗೌತಮರು ಅದು ಸರಿ... ಜೊತೆಯಲ್ಲಿ ತಪ್ಪೇ ಮಾಡಿರದ ಅಹಲ್ಯೆಗೂ ಶಾಪ ಕೊಟ್ಟರು.. ಆದರೆ ನಾ ಆ ತಪ್ಪು ಮಾಡೋಲ್ಲ. ನಿನಗೆ ಶಾಪ ಕೊಡೋಲ್ಲ.. ಬದಲಿಗೆ ತಪ್ಪು ಮಾಡಿದವನಿಗೆ ಶಿಕ್ಷೆ ಕೊಡುತ್ತೇನೆ" ಅದ್ಭುತ ಮಾತುಗಳು.

ಈ ಭಾಗದ ಚಿತ್ರ ಇಷ್ಟವಾಗೋದು..

  • ಕುರುಡಿ ಅಂದರೆ ಹೀಗೆ ಇರುತ್ತಾರೆ.. ಮತ್ತೆ ನಟಿ ಆರತಿ ಕುರುಡಿಯೇ ಎನ್ನುವಷ್ಟು ನೈಜತೆಯಿಂದ ಮುನಿತಾಯಿ ಪಾತ್ರದಲ್ಲಿ ಅಭಿನಯಿಸಿರುವ ಆರತಿ. 
  • ಕುರುಡಿಯನ್ನು ಗೋಳು ಹುಯ್ದು ಕೊಂಡು ಅವಳ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಳ್ಳುವ ತಿಮ್ಮರಾಯಿ ಪಾತ್ರದಲ್ಲಿ ಎಂ ಎಸ್ ಉಮೇಶ್. ಬಹುಶಃ ತಿಮ್ಮರಾಯಿ ಪಾತ್ರ ಅವರ ಚಿತ್ರ ಜೀವನದ ಅತ್ಯುತ್ತಮ ಪಾತ್ರದಲ್ಲಿ ಮೊದಲಿಗೆ ನಿಲ್ಲುತ್ತದೆ 
  • ರಜನಿಕಾಂತ್ ಮೊದಲಬಾರಿಗೆ ತೆರೆಗೆ ಬಂದ ಈ ಚಿತ್ರದಲ್ಲಿ ಅವರ ಚಿಕ್ಕ ಸ್ಟೈಲ್ ಇಷ್ಟವಾಗುತ್ತದೆ.  
  • ಗಂಗಾಧರ್, ಸಂಪತ್ ಅವರ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. 
ಕಣ್ಣಿದ್ದು ಹಂಗಿಗೆ ಸಿಕ್ಕಿ ಹಾಕಿಕೊಳ್ಳುವರು ಹಂಗು ಕಥಾವಸ್ತುವಲ್ಲಿ ಸಿಕ್ಕರೆ,  ಕಣ್ಣಿದ್ದು ಹೃದಯವಿಲ್ಲದೆ ಜೀವನದಲ್ಲಿ ನೋವು ಅನುಭವಿಸುವರು "ಅತಿಥಿ" ಭಾಗದಲ್ಲಿ ಕಾಡುತ್ತಾರೆ, ಕಣ್ಣಿಲ್ಲದೆ ಇದ್ದರೂ ಮಾಡದ ತಪ್ಪಿಗೆ ಹೃದಯ ಕಣ್ಣಿರುವವವರ ಕ್ಷಮೆ ಸಿಗುವ ಸುಂದರ ನೋಟವನ್ನು "ಮುನಿತಾಯಿ" ಪ್ರಸಂಗದಲ್ಲಿ ಕಾಣುತ್ತೇವೆ. 


ಇಡಿ ಚಿತ್ರ ನಿಂತಿರುವುದು ಸಂಭಾಷಣೆಯ ಮೇಲೆ.. ಅದರ ಕೀರ್ತಿ ಸಂಭಾಷಣಕಾರ ಯೋಗಾನರಸಿಂಹ ಮೂರ್ತಿ ಅವರಿಗೆ ಸಲ್ಲುತ್ತದೆ.

ಒಂದು ಕಥೆಯನ್ನು ಹಲವು ಬಗೆಯಲ್ಲಿ ಹೇಳುವುದು ನೋಡಿದ್ದೇವೆ.. ಆದರೆ ಇಲ್ಲಿ ವಿವಿಧ ಕಥೆಯನ್ನು ಸರಿಯಾಗಿ ಹೊಂದಿಸಿ, ಮತ್ತು ಅದನ್ನು ಅನುಕ್ರಮವಾಗಿ ಜೋಡಿಸಿ ಮುತ್ತಿನ ಸರ ಪೋಣಿಸಿರುವ ರೂವಾರಿ "ಪುಟ್ಟಣ್ಣ" ಅವರಿಗೆ ಮನದಲ್ಲಿ ವಂದಿಸುತ್ತದೆ ತ್ರಿವೇಣಿ ಕತೆಯ ಸಮಾಗಮ ಅದುವೇ ಕಥಾಸಂಗಮ!

Friday, December 12, 2014

ವಾಣಿಯ ಝೇಂಕಾರ.. "ತಣ್ಣನೆ"ಯ ಧ್ವನಿ ಅದೇ ಅದೇ ಉಪಾಸನೆ (1974)

ನನಗೆ ಮೊದಲಿಂದಲೂ ಕೆಲವು (ಅಲ್ಲ ಅಲ್ಲ ಅಲ್ಲ ಹಲವು ಎಂದರೆ ಸರಿ) ವಿಷಯಗಳ ಬಗ್ಗೆ ಹುಚ್ಚು.. ಕೆಲವು ಧ್ವನಿಗಳು, ಸ್ಥಳಗಳು, ಚಿತ್ರಗಳು, ಹಾಡುಗಳು ಹೀಗೆ.. ಯಾಕೆ ಇಷ್ಟ ಎಂದರೆ ಹೇಳೋಕೆ ಆಗೋಲ್ಲ.. ಆದರೆ ಅದರ ಬಗ್ಗೆ ಒಂದು ರೀತಿಯ ಹುಚ್ಚು ಮನಸಲ್ಲೇ ಆಲದ ಮರವಾಗಿ ಬೇರೂರಿಬಿಡುತ್ತವೆ..

ನನ್ನ ಬಾಲ್ಯದ ದಿನಗಳಲ್ಲಿ ಎಂಭತ್ತರ ದಶಕದ ಆರಂಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ "ಉಪಾಸನೆ" ಚಿತ್ರ ನೋಡಿ ಬೆಕ್ಕಸ ಬೆರಗಾಗಿದ್ದೆ. ಯಾಕೋ ಅರಿಯದೆ ನಾ ಪುಟ್ಟಣ್ಣ ಅವರ ಚಿತ್ರಗಳ ಹುಚ್ಚನ್ನು ಆಗಲೇ ಹತ್ತಿಸಿಕೊಂಡಿದ್ದೆ. 

ಹಾಗೆಯೇ.. ಈ ಚಿತ್ರದಲ್ಲಿ ಬರುವ ಕನ್ಯಾಕುಮಾರಿ ಸ್ಥಳದ  ಬಗ್ಗೆಯೂ ಕೂಡ.. ಆ ಜಾಗ ನೋಡಲೇ ಬೇಕು.. ಮತ್ತೆ ಹೋದಾಗ ಅಲ್ಲಿ ನನ್ನ ಮಡದಿ ಮತ್ತು ಮಗು ಇರಲೇ ಬೇಕು ಎನ್ನುವ ಹಠ ನನಗೆ ಸುಮಾರು ಹತ್ತು ವರ್ಷದ ಹುಡುಗನಾಗಿದ್ದಾಗಲೇ ಬಂದಿತ್ತು. (ಉತ್ಪ್ರೇಕ್ಷೆ ಖಂಡಿತ ಅಲ್ಲಾ.. ನನ್ನ ಆಸೆಗಳು....  ಹುಚ್ಚುಗಳು ಹೀಗೆಯೇ ಇರುತ್ತವೆ). 

ಈ ಚಿತ್ರ ಹಲವಾರು ಕಾರಣಗಳಿಗೆ ಮನಸ್ಸಿಗೆ ನುಗ್ಗುತ್ತದೆ. 


ಉಪಾಸನೆ ಸೀತಾರಾಮ್ ಎಂದೇ ಹೆಸರಾದ ಸೀತಾರಾಮ್ ಅವರ ಮೃದು ಮಾತು ಚಿತ್ರದ್ದುದ್ದಕ್ಕು ಕಾಡುತ್ತದೆ. ತಾಯಿ, ಮಗು, ಶಾರದೆ ಎನ್ನುವಾಗ ಅವರ ಧ್ವನಿಯಲ್ಲಿ ಬರುವ ಕಂಪನ, ಮಧುರ ಮಿಡಿತ, ತುಡಿತ ಬಹಳ ಕಾಡುತ್ತದೆ. ಅತ್ಯಮೋಘ ಅಭಿನಯ ನೀಡಿರುವ ಅವರು ಚಿತ್ರದ ಯಶಸ್ಸಿನ ಬಹು ಪಾಲನ್ನು ಆಕ್ರಮಿಸಿಕೊಳ್ಳುತ್ತಾರೆ. ಶರೀರ ಶಾರೀರ ಎರಡರ ಅಭಿನಯ ಸೊಗಸಾಗಿದೆ. ಅವರ ಮತ್ತು ಆರತಿಯ ಜುಗಲಬಂದಿ ಬಹುವಾಗಿ ಇಷ್ಟಪಡುವ ಹಾಗೆ ಅಭಿನಯಿಸಿದ್ದಾರೆ.
"ವಾಣಿ"ಜಯರಾಂ ಅವರ ತುಂಟ ಧ್ವನಿ ಇನ್ನೊಂದು ರೀತಿಯಲ್ಲಿ ಕಾಡುತ್ತದೆ. "ಭಾವವೆಂಬ ಹೂವು ಅರಳಿ" ಈ ಹಾಡಿನಲ್ಲಿ ಅವರು "ಅರಳಿ" ಎನ್ನುವಾಗ ಅವರ ಧ್ವನಿ ಕೇಳಲೇ ಒಂದು ಹಿತ. ಚಿ ಉದಯಶಂಕರ್ ಅವರ ಸರಳ ಸಾಹಿತ್ಯಕ್ಕೆ ಚಂದದ ಮೆರುಗು ವಾಣಿಯಮ್ಮ ಅವರ ಗಾಯನ.   "ಭಾವಯ್ಯ ಭಾವಯ್ಯ"   ಎನ್ನುವ ಎರಡು ಬಗೆಯ ಭಿನ್ನ ಹಾಡುಗಳಲ್ಲಿ ಬರುವ ತುಂಟತನದ ಧ್ವನಿ, ಆ ತಮಾಷೆ ಬೀರುವ ಪದಗಳ ಜೋಡಣೆ, ಅದಕ್ಕೆ ಜೀವ ತುಂಬಿರುವ ಇವರ ಗಾಯನ ಸೊಗಸಾಗಿದೆ. ಎರಡು ಹಾಡನ್ನು ರಚಿಸಿರುವ ಆರ್ ಏನ್ ಜಯಗೋಪಾಲ್ ಅವರ ಸಾಹಿತ್ಯ ಮನಸ್ಸೆಳೆಯುವುದು ಹಾಸ್ಯ ಮಿಶ್ರಿತ ಪದಗಳ ಪುಂಜಗಳಿಂದ. 

ನೀವು ಹಾಡುತ್ತಾ ಇರಿ ನಾ ಬರುತ್ತೇನೆ ಎಂದು ಕಾದು ಹೇಳಿ..  ನಂತರ ಬಂದು..  ಮೂರು ಹಾಡುಗಳಲ್ಲಿ ಇಡಿ ಚಿತ್ರವನ್ನೇ ನುಂಗಿ ಬಿಡುವ ಅತ್ಯುತ್ತಮ ಗಾಯಕಿ ಜಾನಕಿಯಮ್ಮ ಮನಸ್ಸನ್ನೇ ಕದ್ದು ಬಿಡುತ್ತಾರೆ. "ಆಚಾರವಿಲ್ಲದ ನಾಲಿಗೆ" ಪುರಂದರದಾಸರ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಹಾಡುವ ಇವರು.. ಭಾರತದ ತುತ್ತ ತುದಿ ಕನ್ಯಾಕುಮಾರಿಯ ಬಗ್ಗೆ ವಿಜಯನಾರಸಿಂಹ ಅವರ "ಭಾರತ ಭೂಶಿರ ಮಂದಿರ ಸುಂದರಿ" ಸುಮಧುರ ಸಾಹಿತ್ಯವನ್ನು ಹಾಡುವಾಗ ಸಾಕ್ಷಾತ್ ಶಾರದೆಯೇ ಆಗಿ ಬಿಟ್ಟಿದ್ದಾರೆ. ಎರಡು ಹಾಡನ್ನು ಉಚ್ಹ ಸ್ಥಾಯಿಯಲ್ಲಿ ಹಾಡಿರುವ ಜಾನಕಿಯಮ್ಮ ಅಬ್ಬಬ್ಬ ಎನ್ನಿಸಿಬಿಡುತ್ತಾರೆ.  ಅಮೋಘ ಗಾಯನದ ಪ್ರತಿಭೆ ಜಾನಕಿಯಮ್ಮ ಅವರ ಧ್ವನಿಯಲ್ಲಿ ಜೋಗದ ಜಲಪಾತದ ರಭಸ, ಲಾಲಿತ್ಯ, ಮಧುರತೆ ಎಲ್ಲವೂ ಬಂದಿಯಾಗಿಬಿಟ್ಟಿವೆ. 

ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಬಿ ಕೆ ಸುಮಿತ್ರ ಅವರ "ಸಂಪಿಗೆ ಮರದ ಹಸಿರೆಲೆ ನಡುವೆ" ಗೀತೆ ಸರಳ ಸಾಹಿತ್ಯದಿಂದ ಗಮನ ಸೆಳೆಯುತ್ತದೆ. ಜೊತೆಯಲ್ಲಿ ಆರ್ ಏನ್ ಜಯಗೋಪಾಲ್ ಅವರು ಚಿಕ್ಕ ಚಿಕ್ಕ ಮಕ್ಕಳು ಉಲಿಯುವ ಪದಗಳನ್ನು ತಂದು ಜೋಡಿಸಿ ಹೆಣೆದಿರುವ ಈ ಹಾಡು ಇಷ್ಟವಾಗುತ್ತದೆ. 

ಆರತಿ ಗಂಧದ ಕೊರಡಿನ ಹಾಗೆ ಅಭಿನಯವನ್ನು ತೇಯ್ದು .. ಈ ಚಿತ್ರ ಗೆದ್ದರೆ ನಾ ಗೆಲ್ಲುವೆ ಎನ್ನುವಂತೆ ತಮ್ಮ ಅಭಿನಯದ  ಶಕ್ತಿಯನ್ನು ತೇಯ್ದು .. ಈ ಪಾತ್ರಕ್ಕೆ ಅಭಿನಯಿಸಲೆಂದೇ ನಾ ಹುಟ್ಟಿದ್ದೇನೆ ಎನ್ನುವಂತೆ ಛಲ ತುಂಬಿಕೊಂಡು ನಟಿಸಿದ್ದಾರೆ ,  ಅಲ್ಲ ಅಲ್ಲ ಆ ಪಾತ್ರವೇ ಆಗಿ ಹೋಗಿದ್ದಾರೆ. ಹಾಡುಗಳಲ್ಲಿ ಅವರು ತೋರುವ ಶ್ರದ್ಧೆ, ಸಂಭಾಷಣೆ ಹೇಳುವಾಗ ಅವರು ತೋರುವ ಚೈತನ್ಯ, ಕೆಲವೊಮ್ಮೆ ಮಾತೆ ಬೇಡ ಎನ್ನಿಸುವ ದೃಶ್ಯಗಳಲ್ಲಿ ಕಣ್ಣಲ್ಲೇ ತೋರುವ ಭಾವ (ತಂಗಿ ಮತ್ತು ಗಂಡನನ್ನು ಕೋಣೆಯ ಒಳಗೆ ಸೇರಿಸಿ.. ಬಾಗಿಲನ್ನು ಹಾಕಿ ಹೊರ ಬರುವ ದೃಶ್ಯದಲ್ಲಿ) ಆಹಾ ಆಹಾ ಹೇಳಿದಷ್ಟು ಸೊಗಸು. ಸಮುದ್ರದ ಅಲೆಗಳನ್ನು ನೋಡುವಾಗ ಒಂದು ಅಲೆ ಹೋದರೆ ಇನ್ನೊಂದು ಬರುವಂತೆ, ಒಂದು ದೃಶ್ಯದಲ್ಲಿ ಅಬ್ಬಾ ಎನ್ನಿಸುತ್ತ ಮುಂದಿನ ದೃಶ್ಯ ನೋಡಿದಾಗ ಅರೆ ಅರೆ ಇದು ಇನ್ನು ಸೊಗಸು ಅನ್ನಿಸುತ್ತದೆ. ಇಡಿ ಚಿತ್ರದಲ್ಲಿ ಸರಿ ಸುಮಾರು ಪ್ರತಿಯೊಂದು ದೃಶ್ಯದಲ್ಲಿ ಕಾಣಿಸಿಕೊಳ್ಳುವ ಆರತಿ ಅಭಿನಯ ಅವರ ಚಿತ್ರ ಜೀವನದಲ್ಲಿನ ಅತ್ಯುತ್ತಮ ಅಭಿನಯ ಎನ್ನುತ್ತೇನೆ.  (ರಂಗನಾಯಕಿ ಚಿತ್ರವಿದೆ!!!!)

ಚಿತ್ರಜ್ಯೋತಿ ಲಾಂಛನದಲ್ಲಿ ರಾಶಿ ಸಹೋದರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರ ದೇವಕಿ ಮೂರ್ತಿ ಎನ್ನುವವರ ಅದೇ ಹೆಸರಿನ ಕಥೆಯನ್ನು ಆಧರಿಸಿತ್ತು.  ಈ ಕಥೆಗೆ ಸಂಭಾಷಣೆಯ ಪೋಷಾಕು ತೊಡಿಸಿದವರು ನವರತ್ನರಾಂ ಅವರು. ಎಸ್ ವಿ ಶ್ರೀಕಾಂತ್ ಸುಂದರ ಭಾವುಕ ದೃಶ್ಯಗಳನ್ನು ಜೊತೆಯಲ್ಲಿ ಅದ್ಭುತ ಸ್ಥಳ ಕನ್ಯಾಕುಮಾರಿಯನ್ನು ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದಾರೆ. ಭಾರತ ಭೂಶಿರ ಹಾಡನ್ನು ಒಳಾಂಗಣದಲ್ಲಿ ಚಿತ್ರೀಕರಿಸಿ ಆರತಿಯವರ ಮುಖವನ್ನು ಹೊಳೆಯುವ ಪಾದರಸದಂತೆ, ಜೊತೆಯಲ್ಲಿ ಕ್ಯಾಮೆರ ಒಂದು ಚೂರು ಕದಲದೆ ಬರಿ ಮುಖವನ್ನು ತೋರಿಸುವ ಅದ್ಭುತ ಛಾಯಾಗ್ರಹಣ ಇವರದು. ಮತ್ತೆ ಭಾವುಕ ಸನ್ನಿವೇಶಗಳಿಗೆ ತಕ್ಕಂತೆ ಕ್ಯಾಮೆರ ಓಡಾಡುವ, ಇಲ್ಲವೇ ಸುತ್ತವ, ಇಲ್ಲವೇ ಜೋಕಾಲಿಯಂತೆ  ತೂಗುವ ವಿಭಿನ್ನ ತಂತ್ರ ಈ ಚಿತ್ರದಲ್ಲಿ ಮಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಕ್ರಿಯಾಶೀಲತೆಗೆ ಸಾಕ್ಷಿ. 

ಪುಟ್ಟಣ್ಣ ಅವರ ಜೀವದ ಗೆಳೆಯ ವಿಜಯಭಾಸ್ಕರ್ ಈ ಚಿತ್ರದ ಆತ್ಮ ಎನ್ನಲೇ ಬೇಕು. ಪ್ರತಿ ಹಾಡಿಗೂ ವಿಭಿನ್ನ ಸಂಗೀತ, ಜೊತೆಯಲ್ಲಿ ಚಿತ್ರದುದ್ದಕ್ಕೂ ಬರುವ ಹಿನ್ನೆಲೆ ವೀಣೆಯ ನಾದ ಶ್ಯಾಮಲಾ ಸ್ವಾಮೀ ಅವರದು. ವಿಜಯಭಾಸ್ಕರ ಅವರ ರಾಗ ಸಂಯೋಜನೆ ಅಮೋಘ ಅದ್ಭುತ ಎನ್ನಲೇ ಬೇಕು. ಭಾರತ ಭೂಶಿರ ಎಷ್ಟು ಬಾರಿ ಕೇಳಿದರೂ ಹೊಸದು ಎನ್ನಿಸಲು ಅವರ ಸಂಗೀತವೆ ಕಾರಣ. 

ಹೊಟ್ಟೆಕಿಚ್ಚಿನ ಗುರುವಾಗಿ ಮುಸುರಿ ನಗೆ ಮೀಟುತ್ತಾರೆ. ಅವರು ಬಂದು ಹೋಗುವ  ಐದಾರು ದೃಶ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಹೊರತಂದಿದ್ದಾರೆ.
 "ಗೊತ್ರಿ ನನಗೆ ಗೊತ್ರಿ ನೀವು ಹೀಗೆ ಹೇಳ್ತೀರಾ ಅಂತ ನನಗೆ ಗೊತ್ರಿ" 
"ಭಾರತದ ತಮಟೆ ವಾದ್ಯದಿಂದ ಹಿಡಿದು ಪರದೇಶದ ಪಿಯಾನೋ ತನಕ ಬರುತ್ತೆ ಕಣಯ್ಯಾ"
"ತಂಬೂರಿಗೆ ಕಮಾನ್ ಹಾಕೋದು ಇದ್ದೆ ಇದೆ ಕಣಯ್ಯಾ.. ಮೊದಲು ಪಿಟೀಲಿಗೆ ಕಮಾನು ಹಾಕು.. ಆಮೇಲೆ ತಂಬೂರಿಗೆ  ಕಮಾನು ಹಾಕಿ ಕಮಾಲ್ ನೋಡೋಣ"
ಹೀಗೆ ಚಿಕ್ಕ ಚಿಕ್ಕ ಮಾತುಗಳು ಅಂಗೀಕ ಅಭಿನಯದಿಂದ ಮನಸ್ಸು ಗೆಲ್ಲುತ್ತಾರೆ ಮುಸುರಿ ಕೃಷ್ಣಮೂರ್ತಿ. 

ಸದಾ ಒಲಾಡುತ್ತಲೇ, ಹಿಪ್ಪಿ ಕೂದಲು ಬಿಟ್ಟು ವಿಚಿತ್ರ ಅಭಿನಯ ಕೊಡುವ ಶಿವಾರಂ, ನಗೆ ಮೀಟುತ್ತಾರೆ.  ಪುಟ್ಟಣ್ಣ ಅವರ ಹಲವಾರು ಚಿತ್ರದಲ್ಲಿ  ಪಾತ್ರ ಮಾಡಿರುವ ಶಿವರಾಂ, ಪ್ರತಿ ಚಿತ್ರದಲ್ಲೂ ಏನಾದರೂ ಹೊಸ ತರಹ ಅಂಗೀಕ ಅಭಿನಯ, ಒಂದು ಪಂಚಿಂಗ್ ಸಂಭಾಷಣೆ ತರುತ್ತಾರೆ. ಅವರ ಹಾಸ್ಯಭರಿತ ಸಂಭಾಷಣೆ ಕೇಳುವುದೇ ಒಂದು ಮಜಾ.  ಇದರ ಒಂದು ಒಂದು ಝಲಕ್ "ಸಂಗೀತದಲ್ಲಿರುವ ಉತ್ತರಾದಿ, ದಕ್ಷಿಣಾದಿ, ಪೂರ್ವಾದಿ, ಪಶ್ಚಿಮಾದಿ, ಪಾಶ್ಚಾತ್ಯಾದಿ ಸಂಗೀತ ಪ್ರಕಾರಗಳನ್ನು ಕಲಸಿ, ಬೆರೆಸಿ, ಪ್ರೇಕ್ಷಕರನ್ನು ನಲಿಸಿ, ಕುಣಿಸಿ, ತಣಿಸಿ,ಬೆದರಿಸಿ ಸ್ಟನ್ ಮಾಡಬೇಕೆಂಬುದೇ ಈ ಶಂಕರಾಭರಣನ ಲೈಫ್ ಆಂಬಿಶನ್ "

ಸಂಗೀತದ ಎಲ್ಲಾ ಸಿದ್ಧ ಸೂತ್ರಗಳು ಗೊತ್ತು ಎಂದು ಜಂಬ ಕೊಚ್ಚುತ್ತಾ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವ ಅಶ್ವಥ್ ಅವರ ಅಭಿನಯ ಚಿತ್ರದ ಹೈ ಲೈಟ್.  ತುಂಬಾ ಗಂಭೀರ ಪಾತ್ರ ಮಾಡುವ ಅಶ್ವಥ್ ಹಾಸ್ಯ ಪಾತ್ರಗಳಲ್ಲೂ ನಾ ಗೆಲ್ಲಬಲ್ಲೆ ಎಂದು ತೋರುತ್ತಾರೆ. ನಾಗರಹಾವಿನ ಚಾಮಯ್ಯ ಮೇಷ್ಟ್ರು, ಶುಭಮಂಗಳದ ಉಬ್ಬಸದ ವೈದ್ಯರು, ಇಲ್ಲಿ ತಮಾಷೆ ಬೀರುವ ಸಂಗೀತದ ಆರಾಧಕ.... ಆಶಾ ಎಷ್ಟು ವಿಭಿನ್ನ ಅಭಿನಯದ ನಟರು ಇವರು.  ಪ್ರತಿಯೊಂದು ಸಂಭಾಷಣೆಯಲ್ಲೂ "ಬೇಕಾದ್ರೆ ನನ್ನ ಹೆಂಡತೀನ ಕೇಳಿ" ಮಾತು ಇಷ್ಟವಾಗುತ್ತದೆ. ಅಂತಿಮ ದೃಶ್ಯಗಳಲ್ಲಿ ತೊಳಲಾಡುವ ಅವರ ಅಭಿನಯ ನಿಜಕ್ಕೂ ಇಷ್ಟವಾಗುತ್ತದೆ. 

ಆದವಾನಿ ಲಕ್ಷ್ಮೀದೇವಿ, ಲೀಲಾವತಿ ತಮ್ಮ ಪಾತ್ರಗಳಲ್ಲಿ ಲೀನವಾಗಿದ್ದಾರೆ.. ಆದವಾನಿ ಲಕ್ಷ್ಮೀದೇವಿ ತಾಯಿ ಮಮತೆ ತೋರುವ ಕರುಣಾಮಯಿ ಆದರೆ, ಲೀಲಾವತಿ ಕೆಲವೊಮ್ಮೆ ಅಮ್ಮನ ಕರುಣಾಳು ಪಾತ್ರ, ಹಲವೆಡೆ ಅತ್ತೆ ಎನ್ನುವ ಗತ್ತು ಎರಡನ್ನು ಮಿಶ್ರಣಗೊಳಿಸಿರುವ ಅಭಿನಯ ತಾಕುತ್ತದೆ. 

ವೆಂಕಟರಾವ್ ತಲಗೇರಿ ಅಪ್ಪನ ಪಾತ್ರದಲ್ಲಿ ಛಾಪು ಒತ್ತುತ್ತಾರೆ, ಉದ್ವೇಗವಿಲ್ಲದ ನಿಧಾನ ರೀತಿಯ ಸಂಭಾಷಣೆ,ಆ ಧ್ವನಿ, ಅಪ್ಪ ಎನ್ನುವ ಜವಾಬ್ಧಾರಿಯ ಗುಣ ಮೈ ಎತ್ತಿದಂತೆ ಅಭಿನಯ ನೀಡಿದ್ದಾರೆ. ಅದರಲ್ಲೂ ಕಡೆಯಲ್ಲಿ ಸಂಗೀತದ ಗುರುಗಳಿಗೆ ಅವರ ಶಿಷ್ಯೆ ಕಚೇರಿ ಮಾಡಬಾರದೆಂದು ಹೇಳಿ ಎಂದು ಕೇಳಿಕೊಳ್ಳುವ ದೃಶ್ಯ ಸೂಪರ್. 

ಚಿಕ್ಕ ಚೊಕ್ಕ ಪಾತ್ರದಲ್ಲಿ ಎಂ ಏನ್ ಲಕ್ಷ್ಮೀದೇವಿ ಮತ್ತು ವಜ್ರಮುನಿ ಗಮನಸೆಳೆಯುತ್ತಾರೆ. 

ಇಡಿ ಚಿತ್ರ ಸಂಗೀತದ ರಥದ ಮೇಲೆ ಸಾಗುತ್ತದೆ. ವಿಜಯಭಾಸ್ಕರ್ ಅವರು ತಮ್ಮ ಛಾಯೆಯನ್ನು ಈ ಚಿತ್ರದಲ್ಲಿ ಒತ್ತಿಬಿಟ್ಟಿದ್ದಾರೆ. ಅವರ  ಸಂಗೀತವನ್ನು ಹೊರಗೆ ತೆಗೆದು ಈ ಚಿತ್ರವನ್ನು ನೋಡಿದರೆ ಬಹಳ ಸಪ್ಪೆ ಎನ್ನಿಸುತ್ತದೆ. ಆದರೆ ಸಂಗೀತ ಕಲಾವಿದರ ಅಭಿನಯವನ್ನು ನುಂಗದೆ, ಅವರ ಅಭಿನಯಕ್ಕೆ ಹೊಳಪು ಕೊಡುವ ರತ್ನವಾಗಿರುವುದು ವಿಶೇಷ. 

ಈ ಚಿತ್ರದಲ್ಲಿ ಸಂಗೀತವನ್ನು ಪ್ರಧಾನವಾಗಿ ಇಟ್ಟುಕೊಂಡು ರೂಪಿಸಿರುವ ಚಿತ್ರ. ಆರತಿಯೇ ಈ ಚಿತ್ರದ ಕೇಂದ್ರ ಬಿಂದು. ಅವರ ಸುತ್ತಲೇ ಇಡಿ ಚಿತ್ರ ಸುತ್ತುತ್ತದೆ.  ಬರುವ ಪಾತ್ರಗಳು ಅವರ ಸಂಗೀತದ ಆಸಕ್ತಿಯ ಬಗ್ಗೆ ಪುರಸ್ಕಾರ ಇಲ್ಲಾ ತಿರಸ್ಕಾರ  ತೋರುವಂತೆ ಅಭಿನಯಿಸಿವೆ. ರೇಡಿಯೋ ರಂಗಮ್ಮ, ಮುಸುರಿ, ವಜ್ರಮುನಿ, ಲಕ್ಷ್ಮೀದೇವಿ, ಕೊಂಚ ಹೊತ್ತು ಶಿವರಾಂ ಎಲ್ಲರೂ ಅವರ ಸಂಗೀತದ ಆಸಕ್ತಿಗೆ  ಬರೆ ಎಳೆಯುವಂತೆ ಮಾಡಿದರೆ, ಸೀತಾರಾಮ್, ವೆಂಕಟರಾವ್, ಲಕ್ಷ್ಮೀದೇವಿ, ಲೀಲಾವತಿ, ಅಶ್ವತ್, ಮತ್ತು ನಾಯಕನಾಗಿ ಅಭಿನಯಿಸಿರುವ ಗೋವಿಂದರಾವ್ ಮಣ್ಣೂರ್ ಮುದ್ದಾಗಿ ಕಾಣುವುದಷ್ಟೇ ಅಲ್ಲದೆ ಸಂಗೀತಕ್ಕೆ ಪ್ರೋತ್ಸಾಹ ಕೊಡುವಲ್ಲಿ ಗಮನ ಸೆಳೆಯುವ ಕೊಡುಗೆ ಕೊಟ್ಟಿದ್ದಾರೆ. 

ಸಂಗೀತವನ್ನು ವೃತ್ತ ಎಂದು ಭಾವಿಸಿ ಅದನ್ನು  ಚಿತ್ರಿಸಲು ಹೊರಟರೆ ಅಲ್ಲಿ ಕೇಂದ್ರ ಬಿಂದು ಆರತಿ, ಪರಿಧಿಯಲ್ಲಿ ಕಾಣುವ, ಬರುವ ಪಾತ್ರಗಳೇ ಮಿಕ್ಕವು. ಗುರು ಪಾತ್ರ ಮಾತ್ರ ಪರಿಧಿಯೊಳಗೆ ಬರುತ್ತಾರೆ ಹೊರತು ಮಿಕ್ಕವರೆಲ್ಲಾ ಪರಿಧಿಯ ಹೊರಗೆ ನಿಲ್ಲುತ್ತಾರೆ,. ಇಂಥಹ ಒಂದು ಅನುಭವ ಕೊಡುವ ಈ ಚಿತ್ರ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಲ್ಲಿ ಒಂದು ರತ್ನವಾಗಿ ನಿಲ್ಲಲು ಸಹಾಯ ಮಾಡಿವೆ. 

ಪುಟ್ಟಣ್ಣ ಕಣಗಾಲ್, ದೇವಕಿ ಮೂರ್ತಿಅವರ ಕಥೆಯನ್ನು ಅಚ್ಚುಕಟ್ಟಾಗಿ ಚಿತ್ರಕಥೆಗೆ ಅಳವಡಿಸಿಕೊಂಡು ಎಲ್ಲೂ ಬೇಸರಬಾರದಂತೆ, ಸಂಗೀತ ಬಲ್ಲವರೂ, ಬಾರದಿರುವವರು ಕೂಡ ನೋಡಿ ಮೆಚ್ಚಿ ತಲೆದೂಗುವಂತೆ ಚಿತ್ರಿಕರಿಸಿರುವುದು ಅವರ ಅದ್ಭುತ ಪ್ರತಿಬೆಗೆ ಸಾಕ್ಷಿ. 

೧. ಚಿತ್ರದ ಆರಂಭ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಯಾವಾಗಲು ವಿಶೇಷ, ಅಲ್ಲಿಯ ಚಿತ್ರದ ಸಂದೇಶದ ಒಂದು ಝಲಕ್ ಕೊಟ್ಟಿರುತ್ತಾರೆ.  ಸಂಗೀತ ಸಾಧಕರ ಚಿತ್ರಗಳ ಹಿನ್ನೆಲೆಯಲ್ಲಿ, ವಾದ್ಯಗಳ ಚಿತ್ರಗಳ ಜೊತೆಯಲ್ಲಿ ಆರಂಭವಾಗುವ ಟೈಟಲ್ ಕಾರ್ಡ್ ಗಮನ ಸೆಳೆಯುತ್ತದೆ. ಸಂಗೀತಕ್ಕೆ ತಮ್ಮನ್ನೇ ಅರ್ಪಿಸಿಕೊಂಡ ಮಹಾನ್ ಚೇತನಗಳ ದರ್ಶನ ಆರಂಭದಲ್ಲೇ ಮಾಡಿಸುತ್ತಾರೆ. 

೨. ಹಲವಾರು ದೃಶ್ಯಗಳಲ್ಲಿ, ಕಲಾವಿದರ ಅಭಿನಯದಲ್ಲಿ ತಳಮಳ, ಆತಂಕ, ಅನುಮಾನ, ಹುಯ್ದಾಟ ಇವನ್ನು ಚಿತ್ರಿಕರಿಸುವಾಗ ಕ್ಯಾಮೆರವನ್ನು ತೂಗಡಿಸಿ, ಅಲುಗಾಡಿಸಿ, ಇಲ್ಲವೇ ಅತ್ತಾ ಇತ್ತಾ ತೂರಾಡುವ ಶೈಲಿಯಲ್ಲಿ ಉಪಯೋಗಿಸಿದ್ದಾರೆ. ಕಲಾವಿದರ ಅಭಿನಯಕ್ಕೆ ಇನ್ನಷ್ಟು ಸಾಂಧ್ರತೆ ಹೆಚ್ಚಾಗಲು ಸಹಕಾರಿಯಾಗಿದೆ.  

೩. ಶಾರದೆಯ ಮದುವೆ ವಿಷಯ ಬಂದಾಗ.. ನೆರಳಿನಲ್ಲಿ ಅವಳ ವೀಣೆಯನ್ನು ಕಿತ್ತುಕೊಂಡು, ಅದನ್ನು ಬಿಸಾಡುವ ದೃಶ್ಯ, ಅವಳ ಮನಸ್ಸಲ್ಲೇ ನಡೆಯುತ್ತಿರುವ ತಳಮಳವನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಇದು ಅವರ ಜಾಣ್ಮೆಗೆ ಹಿಡಿದ ಕನ್ನಡಿ. ನೂರಾರು ಮಾತುಗಳಲ್ಲಿ ಹೇಳಬೇಕಾದ ದೃಶ್ಯವನ್ನು ಕೇವಲ ಕೆಲವೇ ಕ್ಷಣಗಳಲ್ಲಿ ತಲುಪಿಸುವ ಅವರ ಕ್ರಿಯಾಶೀಲತೆಗೆ ನಮನ. 

೪. ಸ್ವಾಮೀ ವಿವೇಕಾನಂದರ ಅಮರವಾಣಿಯ ಧ್ಯೋತಕವಾಗಿ ರೂಪಿಗೊಂಡಿರುವ ಕನ್ಯಾಕುಮಾರಿಯಲ್ಲಿನ ಅವರ ಸುಂದರ ದೇವಾಲಯದ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಿರುವುದು ಬಹಳ ಇಷ್ಟವಾಗುತ್ತದೆ. ಬಹುಶಃ ಈ ಚಿತ್ರವೇ ಮೊದಲು ಅಲ್ಲಿ ಚಿತ್ರೀಕರಣ ಮಾಡಿದ್ದು ಅನ್ನಿಸುತ್ತದೆ.

5. ಇಡಿ ಚಿತ್ರದಲ್ಲಿ ಒಂದು ಅಂಶ ಎದ್ದು ಕಾಣುತ್ತದೆ, ಆರಂಭದಿಂದಲೂ ತುಂಟಿ, ತರಲೆ ಮಾಡುವ ಪಾತ್ರದಲ್ಲಿ ಮೂಡಿಬರುವ ಶಾರದೆಯ ತಂಗಿ ಪಾತ್ರ (ಜಿ ವಿ ಶಾರದ) ಮದುವೆಯ ನಂತರ ಗಂಭೀರ ಪಾತ್ರಕ್ಕೆ ನುಗ್ಗುವುದು, ಹಾಗೆಯೇ ಅಶ್ವತ್ ಚಿತ್ರದುದ್ದಕ್ಕೂ ಶಾರದೆಯ ಪರವಾಗಿ ನಿಲ್ಲುವ ಅವರು ಕಡೆಯ ದೃಶ್ಯಗಳಲ್ಲಿ ಶಾರದೆಗೆ ವಿರುದ್ಧವಾಗಿ ನಿಲ್ಲುವುದು. ಇಂಥಹ ವೈರುಧ್ಯ ಪಾತ್ರಗಳಲ್ಲಿನ ಅಭಿನಯವನ್ನು ಹೊರತೆಗೆಯುವಲ್ಲಿ ಪುಟ್ಟಣ್ಣ ಅವರ ಯಾವಾಗಲು ಸಿದ್ಧ ಹಸ್ತರಾಗಿದ್ದರು.

೬." ಭಾರತ ಭೂಶಿರ ಮಂದಿರ ಸುಂದರಿ" ಹಾಡನ್ನು ಗುರುಗಳ ಮನೆಯಲ್ಲಿ ಚಿತ್ರೀಕರಿಸಿರುವ ಶೈಲಿ, ಆರತಿ ಮುಖವನ್ನು ಮಾತ್ರ ಸ್ಟಡಿ ಕ್ಯಾಮೆರಾದಲ್ಲಿ ತೋರಿಸಿ, ಅದನ್ನು ಕೇಳಲೆಂದು ಬಂದ ಮಂದಿಯನ್ನು ತೋರಿಸುವಾಗ ಆ ದೃಶ್ಯಗಳು ತೂಗಾಡುತ್ತ ಇರುವಂತೆ ಚಿತ್ರೀಕರಿಸಿದ್ದಾರೆ. ಸಂಗೀತದ ಶಕ್ತಿಯನ್ನು ತೋರಿಸುವ ಒಂದು ವಿಭಿನ್ನ ರೀತಿ. ರಾಮಚಂದ್ರ ಶಾಸ್ತ್ರೀ ಅವರು ಆ ಹಾಡಿನಲ್ಲಿ ಬಂದು ಹೋದರೂ ಅವರು ಹೇಳುವ ಮಾತು "ಅನಂತ ಶಾಸ್ತ್ರಿಗಳೇ ಹೃದಯ ಹಿಂಡುವ ನಿಮ್ಮ ಶಿಷ್ಯಳ ಸಂಗೀತ ಎಲ್ಲರ ಮನವನ್ನು ತಣಿಸಲಿ.. " ಇಷ್ಟವಾಗುತ್ತದೆ.

೭. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರ ಇಂದಿಗೂ ಸಂಗೀತಮಯ ಚಿತ್ರ ಎಂದಾಗ ಮೊದಲಿಗೆ ಬಂದು ನಿಲ್ಲುತ್ತದೆ.

ಉಪಾಸನೆ ಒಂದು ಚಿತ್ರರತ್ನವಾಗಿ ನಿಲ್ಲಲು ಎಲ್ಲರ ಪರಿಶ್ರಮದ ಅಗತ್ಯ ಇದೆ. ಇಡಿ ಚಿತ್ರವನ್ನು ಹೆಗಲಿಗೆ ಜೋತು ಹಾಕಿಕೊಂಡು ಚಿತ್ರಿಸಿರುವ ಪುಟ್ಟಣ್ಣ ಕಣಗಾಲ್ ಧ್ವನಿ ಎಂಬ ಒಂದು ಚಿಕ್ಕ ಸಂಗತಿಯನ್ನು ಇಟ್ಟುಕೊಂಡು ತಣ್ಣನೆ ಮಧುರ ಅನುಭವ ಕೊಡುವ ಚಿತ್ರವನ್ನಾಗಿ ಕೊಟ್ಟಿದ್ದಾರೆ. ಅದಕ್ಕೆ ನಮ್ಮ ಅದ್ಭುತ ನಿರ್ದೇಶಕರಿಗೆ ಒಂದು ಸಲಾಂ ಹೇಳೋಣ.. !!!

Tuesday, December 2, 2014

ಮಂಗಳಕರವಾದ ಶುಭಮಂಗಳ (1975)

ನೂಲಿನ ಉಂಡೆಯನ್ನು ನಿಧಾನವಾಗಿ ಬಿಡಿಸುತ್ತಾ ಹೋದಹಾಗೆ. ನೂಲಿನ ಉದ್ದವೂ ವಿಸ್ತರಿಸುತ್ತಾ ಹೋಗುತ್ತದೆ. ಹಾಗೆಯೇ ಒಂದು ಸಣ್ಣ ಎಳೆಯನ್ನು ನಿಧಾನವಾಗಿ ಹರಡುತ್ತಾ ಹೋದ ಹಾಗೆ ಅದರ ಹರಿವು ಅರಿವಾಗುತ್ತಾ ಹೋಗುತ್ತದೆ,

ಪುಟ್ಟಣ್ಣ ಕಣಗಾಲ್ ಕೂಡ ಹಾಗೆ.. ಒಂದು ಸಣ್ಣ ಛಲವನ್ನು ಹೊತ್ತು ಚಿತ್ರರಂಗಕ್ಕೆ ಬಂದರು. ಚಲನ ಚಿತ್ರದ ಎಲ್ಲಾ ಪ್ರಾಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರ ಫಲಿತಾಂಶ ಪ್ರತಿ ಚಿತ್ರದಲ್ಲಿಯೂ ಹೊಸ ವಿಷಯ, ಹೊಸ ಸಂದೇಶ, ಹೊಸ ಬಗೆಯ ತಾಣ, ಹೊಸ ಲಯ ಎಲ್ಲವೂ ಹೊಸದು

ಅವರ ಎಲ್ಲಾ ಚಿತ್ರಗಳನ್ನು ಸಾಲು ಸಾಲು ನಿಲ್ಲಿಸಿದರೆ ಒಂದಕ್ಕಿಂತ ಒಂದು ವಿಭಿನ್ನ., ಅದು ಅವರು ಕನ್ನಡಾಂಬೆಯ ಪೂಜೆಗೆ ಸಲ್ಲಿಸುವ ವಿವಿಧ ಪುಷ್ಪ ನಾಮಾವಳಿ,

ಇಂದು ಅವರ ಜನುಮದಿನ.. ಶುಭಾಪ್ರದವಾಗಿಯೇ ಇರುತ್ತದೆ ಎನ್ನುವುದಕ್ಕೆ ಅವರ ಶುಭಮಂಗಳ ಚಿತ್ರದ ಮೂಲಕ ಅವರ ಚರಣಕ್ಕೆ ಅರ್ಪಿಸುತ್ತಿರುವ ಈ ಮಾಲಿಕೆ ಸಾಕ್ಷಿ,

ಹುಟ್ಟು ಹಬ್ಬದ ಶುಭ ಕೋರುವ ಮೂಲಕ ಈ ಲೇಖನ ಮಾಲಿಕೆಯನ್ನು ಮುಂದುವರೆಸುತ್ತಿದ್ದೇನೆ... ಬನ್ನಿ ಕಡಲ ಕಿನಾರೆಯಲ್ಲಿ ಸ್ನೇಹದ ಕಡಲಲ್ಲಿ ಮೀಯೋಣ....


 ಶ್ರೀನಿಧಿ ಪ್ರೊಡಕ್ಷನ್ಸ್  ಲಾಂಛನದಲ್ಲಿ ತಯಾರಾದ ಈ ಚಿತ್ರ ತಯಾರಾದದ್ದು ಕರಾವಳಿಯ ಮಡಿಲಲ್ಲಿ. ಕರಾವಳಿಯ ಸುಂದರ ದೃಶ್ಯಗಳನ್ನು ಇಡಿ ಚಿತ್ರದಲ್ಲಿ ಕಾಡುವಂತೆ ಸೆರೆ ಹಿಡಿದಿರುವುದು ಛಾಯಾಗ್ರಾಹಕ ಎನ್ ಜಿ ರಾವ್.

ಸ್ನೇಹದ ಮಹತ್ವವನ್ನು ಸಾರುವ ಈ ಚಿತ್ರದ ಆರಂಭ ಸೊಗಸಾಗಿದೆ.  ಸ್ನೇಹದ ಉಗಮ ಯಾರಿಗೂ ಅರಿವಾಗುವುದಿಲ್ಲ. ಒಂದು ಸಣ್ಣ ನೋಟ, ಒಂದು ಸಣ್ಣ ನಗು, ಒಂದು ಸಣ್ಣ ಮುನಿಸು ಸ್ನೇಹಕ್ಕೆ ನಾಂದಿ ಹಾಡುತ್ತದೆ. ಹಾಗೆಯೇ ಚಿತ್ರದ ಆರಂಭ ಒಂದು ಸಣ್ಣ ಝರಿಯಿಂದ ಶುರುವಾಗಿ ಚಿತ್ರದ ಹೆಸರು ತಾರಾಗಣ ಎಲ್ಲವನ್ನು ತೋರಿಸುತ್ತಾ ಹೋಗುತ್ತಾರೆ. ಹಾಗೆ ಮುಂದುವರಿದಂತೆಯೇ ಝರಿ, ಸಣ್ಣ ತೊರೆಯಾಗುತ್ತದೆ, ನದಿಯಾಗುತ್ತದೆ, ಬೆಟ್ಟದಿಂದ ಧುಮುಕಿ ಜಲಪಾತವಾಗುತ್ತದೆ, ಕಣಿವೆಯಲ್ಲಿ ಹರಿಯುತ್ತದೆ, ಸಮುದ್ರ ಸೇರುತ್ತದೆ. ಸ್ನೇಹದ ಮಹತ್ವ ತೋರಿಸುವುದಕ್ಕಾಗಿ ಎಷ್ಟು ಸೊಗಸಾದ ವಿಧಾನ ಅನುಸರಿಸಿದ್ದಾರೆ ನಮ್ಮ ಪುಟ್ಟಣ್ಣ,

ಶ್ರೀಮತಿ ವಾಣಿಯವರ ಕಾದಂಬರಿಯ ಒಂದು ಎಳೆಯನ್ನು ಹಿಡಿದು ಈ ಚಿತ್ರವನ್ನು ಮಾಡಿದ್ದರೂ ಅದರ ಸಂಪೂರ್ಣ ಕಾಣಿಕೆ ಕಾದಂಬರಿಕಾರ್ತಿಗೆ ಅರ್ಪಿಸುವುದು ಅವರ ದೊಡ್ಡತನ ತೋರುತ್ತದೆ.

ಸಂಬಂಧಿಕರಾಗಿದ್ದರು ಸ್ನೇಹದ ಅಡಿಪಾಯದ ಮೇಲೆ ಅರಳುವ ನಾಯಕ ನಾಯಕಿಯ ಜೀವನ ಎಲ್ಲೋ ಹುಟ್ಟಿ, ಎಲ್ಲೋ ಹರಿದು, ಸ್ನೇಹದ ಸುಂದರ ಹಂತ ಮಿಲನದಲ್ಲಿ ನಿಲ್ಲುತ್ತದೆ. ಎಷ್ಟು ವಿವಿಧಬಗೆಯ ಯೋಚನೆ ಈ ಕಥಾ ಹಂದರದ್ದು.

ಒಂದು ಹೆಣ್ಣು ಮನಸ್ಸು ಹೇಗೆ ಭಾವನೆಗಳಿಗೆ ಅರಳುತ್ತದೆ, ರೋಷದ ಮಾತುಗಳಿಗೆ ಕೆರಳುತ್ತದೆ ಎನ್ನುವುದು ಚಿತ್ರದುದ್ದಕ್ಕೂ ನಾಯಕಿಯ ಎರಡು ಜಡೆಯಲ್ಲಿ ಬಿಂಭಿತವಾಗಿದೆ.

ಇಲ್ಲಿ ಪ್ರತಿಪಾತ್ರಗಳು ಅಭಿನಯಿಸಿಲ್ಲ ಬದಲಾಗಿ ನಟರೆ ಪಾತ್ರಗಳಾಗಿದ್ದಾರೆ,  ಪುಟ್ಟಣ್ಣ ಅವರು ಮತ್ತೆ ಕೆಲವೇ ನಟ ನಟಿಯರ ತಾರಾಗಣದಲ್ಲಿ ಈ ಚಿತ್ರವನ್ನು  ಚಿತ್ರಿಸಿದ್ದಾರೆ.

ಸಂಗೀತ ವಿಜಯಭಾಸ್ಕರ್ ಅವರ ಭದ್ರ ಕೋಟೆಯಲ್ಲಿ ನಿಂತರೆ, ಛಾಯಾಗ್ರಹಣ  ಎನ್ ಜಿ ರಾವ್ ಅವರ ಸಾರಥ್ಯಕ್ಕೆ ಸಿದ್ಧವಾಗಿರುತ್ತದೆ, ಸೊಗಸಾದ ಸಂಭಾಷಣೆಯ ಕತೃಗಳು ಹಾಸ್ಯ ಪಿತಾಮಹ ಬಿChi, ಜೊತೆಯಲ್ಲಿ ಯೋಗಾನರಸಿಂಹ ಮೂರ್ತಿ.

ತಂದೆಯ ಕೆಲವು  ರೋಷ ಸೇಡು ಹಠದ ಗುಣಗಳನ್ನು ಬಳುವಳಿಯಾಗಿ ಪಡೆದ ನಾಯಕಿ ತನ್ನ ಸ್ವಾಭಿಮಾನ, ಹಠ, ಛಲಕ್ಕೆ ಜೋತು ಬಿದ್ದು ಪಾತ್ರ ನಿರ್ವಹಿಸುತ್ತಾಳೆ. ಜೀವನದ ಕಡಲಿನಲ್ಲಿ ಸ್ನೇಹದ ತರಂಗಗಳು ಬಡಿದು ಬಡಿದು ಅವಳ ಸಿಟ್ಟು ರೋಷ ಹಠ ಇವನ್ನು ಕಮ್ಮಿ ಮಾಡುತ್ತಾ ಸ್ನೇಹದ ಸಂಕೋಲೆಗೆ ಶರಣಾಗುತ್ತಾಳೆ.

ಆರತಿ " ಹೇಮಾ"ಳನ್ನು ಆಲಂಗಿಸಿ ಮುದ್ದಾಡಿ ಅಪ್ಪಿಕೊಂಡು ಅವಳೊಳಗೆ ತೂರಿಕೊಂಡು ಬಿಟ್ಟಿದ್ದಾರೆ. ಇಡಿ ಚಿತ್ರದುದ್ದಕ್ಕೂ ಹೇಳುವ "ಪ್ರಭಾಕರ" ಶಬ್ದ ಅವರ ದನಿಯಲ್ಲೇ ಕೇಳಬೇಕು. ಪ್ರತಿ ದೃಶ್ಯದಲ್ಲೂ ಆವರಿಸಿಕೊಳ್ಳುತ್ತಾ ಹೋಗುವ ಅವರು.. ಅವರಿರಿರದೆ ಚಿತ್ರವಿಲ್ಲ ಎನ್ನುವಷ್ಟು ಕಾಡುತ್ತಾರೆ.

  • ಕಾರನ್ನು ಓದಿಸಿ ಪ್ರಭಾಕರನನ್ನು ಗೋಳು ಹುಯ್ದು ಕೊಳ್ಳುವ ದೃಶ್ಯ 
  • ಲೆಖ್ಖ ಲೆಖ್ಖ ಎನ್ನುತ್ತಾ ಪ್ರತಿ ಬಾರಿಯೂ ಗಲಾಟೆ ಮಾಡುವ ದೃಶ್ಯ 
  • ಇಷ್ಟು ದೊಡ್ಡ ಜಗತ್ತಲ್ಲಿ ನನಗೊಬ್ಬಳಿಗೆ ಜಾಗ ಇರೋಲ್ವೆ.. ಎನ್ನುವಾಗ ಹತಾಶೆ ಕಂಡರೂ ಸ್ವಲ್ಪ ಬಿಗುಮಾನ ಇರುವ ಮಾತುಗಳು 
  • ತಿಮ್ಮ, ಮೂಗ ನಮ್ಮ ಮನೆ ಆಳಲ್ಲ ನನ್ನ ಒಡಹುಟ್ಟಿದವರು ಎನ್ನುವ ಅವರ ಮಾತಿನ ಧಾಟಿ ಸೂಪರ್ 
  • ಕೆಲಸ ಸಿಕ್ಕಿ ಸಂಬಳ ತಂದು ಪ್ರಭಾಕರನನ್ನು ಛೇಡಿಸುವ ದೃಶ್ಯ "ಈ ಶತಮಾನದ ಮಾದರಿ ಹೆಣ್ಣು" ಹಾಡುತ್ತಾ ಪ್ರಭಾಕರನ ಬರುವಿಕೆಗೆ ಕಾಯುವ ಅಭಿನಯ 
  • ಪ್ರಭಾಕರನ ಸ್ನೇಹಕ್ಕೆ ಸೋತು ತನ್ನ ಕೊನೆಗೆ ಬಂದಾಗ ಅಪ್ಪನ ಭಾವ ಚಿತ್ರವನ್ನು ಮಡಚಿಟ್ಟು ಇಂಥಹ ಸ್ನೇಹಕ್ಕೆ ನಾ ಹೇಗಪ್ಪ ಸೋಲದಿರಲಿ ಎನ್ನುವಾಗ ಕಣ್ಣೀರಾಗುತ್ತೇವೆ
  • ಒಂದು ಸನ್ನಿವೇಶದಲ್ಲಿ ಪ್ರಭಾಕರ ಹೇಮಾಳ ಮೇಲೆ ಅನುಮಾನ ಪಟ್ಟು ಅವಮಾನಿಸಿದಾಗ. ಅಳುತ್ತಾ ಕೂತಾಗ .. ತಪ್ಪನ್ನು ಅರಿತ ಪ್ರಭಾಕರ ಕ್ಷಮೆ ಕೇಳುತ್ತಾ ಕಣ್ಣಲ್ಲಿ ನೀರು ತುಂಬಿ ಕೊಂಡಾಗ.. ಅಳುತ್ತ ಇದ್ದ ಹೇಮಾ, ತುಸು ಮುನಿಸಿನಲ್ಲಿ... ಸ್ವಲ್ಪವೇ ನಗುತ್ತಾ.. "ಅದ್ಯಾಕೋ ಪ್ರಭಾಕರ ಅಳ್ತೀಯ ಹೆಣ್ಣಿಗರಾಮ.. " ಈ ದೃಶ್ಯ ಸೂಪರ್. ಒಂದು ಕಡೆ ಅಳು, ಕೋಪ, ಸ್ನೇಹಿತನಿಗೆ ಬೇಸರವಾಯ್ತು ಎನ್ನುವ ಭಾವ ಎಲ್ಲವೂ ಮೇಳೈಸಿ ತೋರಿಸಿರುವ ಅವರ ಭಾವ ಸೂಪರ್ 
  •  ಪ್ರಭಾಕರನ ಮನೆ ತನ್ನ ಹೆಸರಿಗೆ ಇದೆ ಎಂದು ಗೊತ್ತಾದ ಮೇಲೆ.. ಪ್ರಭಾಕರ ಆ ಮನೆಯನ್ನು ಬಿಟ್ಟು ಹೋಗುತ್ತೇನೆ ಎಂದಾಗ.. ಇಲ್ಲೇ ಇರು ಎಂದು ಒತ್ತಾಯ ಮಾಡುತ್ತಾಳೆ... ಆಗ ಹೆಣ್ಣಾದ ನಿನಗೆ ಸ್ವಾಭಿಮಾನ ಇದೆ.. ಗಂಡಾದ ನನಗೆ ಸ್ವಾಭಿಮಾನ ಸತ್ತು ಹೋಗಿದೆಯ ಎಂದಾಗ ಕಪಾಳಕ್ಕೆ ಹೊಡೆಯುವ ಶಬ್ದ ಜೊತೆಯಲ್ಲಿ ಹೇಮಾಳ ಅಭಿನಯ. 
ಒಟ್ಟಿನಲ್ಲಿ ಇಡಿ ಚಿತ್ರವನ್ನು ತನ್ನ ಭುಜದ ಮೇಲೆ ಹೊತ್ತು ಸಾಗಿರುವ ಪರಿ ಆರತಿ ಹೇಮಾಳ ಪಾತ್ರವನ್ನು ಅಭಿನಯಿಸೋಕೆ ಜನ್ಮ ತಾಳಿದ್ದಾರೆ ಅನ್ನುವಷ್ಟು ಇಷ್ಟವಾಗುತ್ತಾರೆ. 

ಶ್ರೀನಾಥ್ ಪ್ರಭಾಕರನ ಪಾತ್ರದಲ್ಲಿ ಇಳಿದು ಬಿಟ್ಟಿದ್ದಾರೆ.. ನಾಯಕನಾಗಿ ಮೊದಲ ದೊಡ್ಡ ಚಿತ್ರ ಇದು. ನಂತರ ಪುಟ್ಟಣ್ಣ ಅವರ ಸುಮಾರು ಚಿತ್ರಗಳಲ್ಲಿ ಮಿನುಗಿದ್ದಾರೆ. ಹೇಮಾಳ ಜೊತೆಯಲ್ಲಿನ ಜಗಳ, ತಮಾಷೆ, ಸ್ನೇಹ ಎಲ್ಲವು ಸೂಪರ್. ಅವರ ಜೀವನದ ಒಂದು ಭಾಗವೇ ಆಗಿ ಹೋದ "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ" ಹಾಡು ಸುಂದರವಾಗಿದೆ. ಹೇಮಾಳ ಪ್ರತಿ ಸಂಭಾಷಣೆಗೂ ತಕ್ಕ ಪ್ರತಿಯುತ್ತರ ಕೊಡುತ್ತ ಹೋಗುವ ಅವರ ಪಾತ್ರದ ಹರಿವು ಇಷ್ಟವಾಗುತ್ತದೆ. ಸ್ನೇಹಕ್ಕೆ ಸ್ನೇಹದ ಮನಸ್ಸಿಗೆ ಮನಸೋಲುವ ಅಭಿನಯ ಸುಂದರವಾಗಿದೆ 


ತಿಮ್ಮನ ಪಾತ್ರದಲ್ಲಿ ನಟ ಶಿವರಾಂ ಕೆಲವೊಮ್ಮೆ ನಗಿಸುತ್ತಾರೆ, ಕೆಲವೊಮ್ಮೆ ಮನಸ್ಸಿಗೆ ತಾಕುತ್ತಾರೆ.. "ಹೇಮವ್ವ ಪ್ರಭಾಕರಪ್ಪ ನಿಮ್ಮನ್ನು ಬಚಾಯಿಸಿದರು.. ಎನ್ನುವಾಗ ಕಣ್ಣೀರು ತುಂಬಿಕೊಳ್ಳುತ್ತಾರೆ.. ಸೂರ್ಯಂಗೂ ಚಂದ್ರಂಗೂ ಹಾಡಿನಲ್ಲಿ ಹೇಮಾ ಮತ್ತು ಪ್ರಭಾಕರನನ್ನು ಸೇರಿಸಲು ಪಡುವ ಪಾಡು ಇಷ್ಟವಾಗುತ್ತದೆ. "ಸಮುದ್ರದಲ್ಲಿ ಈ ಪಾಟಿ ನೀರೈತೆ.. ಕುಡಿಯೋಕೆ ಒಂದು ನೀರು ಸಿಗುತ್ತಾ ಹೇಳಿ" ಎನ್ನುವಾಗ ತಿಮ್ಮ ಅನುಭವಿ ರೀತಿಯಲ್ಲಿ ಮಾತಾಡುತ್ತ ಹೋಗುವ ಪಾತ್ರ ಇಷ್ಟವಾದರೆ, ಮನೆಯ ಫೌಂಟನ್ ನಲ್ಲಿ ಸ್ನಾನ ಮಾಡುವಾಗ, ಊಟ ಮಾಡಿದಮೇಲೆ ಹಣ್ಣಿನ ತಟ್ಟೆಯನ್ನು ಎತ್ತಿಕೊಂಡು ಹೋಗುವಾಗ ನಗೆ ಉಕ್ಕಿಸುತ್ತಾರೆ.

ಮೂಗನ ಪಾತ್ರದಲ್ಲಿ ಅಂಬರೀಶ್.. ಅಬ್ಬಾ ಎನ್ನಿಸುತ್ತಾರೆ ಇಡಿ ಚಿತ್ರದಲ್ಲಿ ತಿಮ್ಮನ ನೆರಳಾಗೆ ಇರುವ ಈ ಪಾತ್ರ.. ಹೇಮಾ ಕೆಲಸ ಮಾಡುವ ಅಂಗಡಿಯಲ್ಲಿ ಆ ಅಂಗಡಿಯ ಯಜಮಾನರ ಮಕ್ಕಳು ಅವಳನ್ನು ಪೀಡಿಸಿದರು ಎಂದು ತಿಳಿದಾಗ ರೋಷ ವೇಷದಲ್ಲಿ ಬಂದು ತಿಮ್ಮನ ಕಣ್ಣೀರನ್ನು ಒರೆಸಿ ಅಂಗಡಿಗೆ ನುಗ್ಗಿ ಬಡಿಯುವ ದೃಶ್ಯ ಇಷ್ಟವಾಗುತ್ತದೆ. ಈ ದೃಶ್ಯದಲ್ಲಿ ಹೇಮಾ ತನ್ನ ಕಷ್ಟವನ್ನು ಹೇಳಿಕೊಳ್ಳಲು ಮೂಗನನ್ನು ಆರಿಸಿಕೊಳ್ಳುವುದು.. ಭಾವ ವ್ಯಕ್ತ ಪಡಿಸಿಕೊಳ್ಳೋಕೆ ಮಾತಲ್ಲ ಮುಖ್ಯ ಭಾವ ಮತ್ತು ಭಾವನೆ ಮುಖ್ಯ ಎಂದು ತೋರಿಸುತ್ತದೆ.  ಯಾಕೆ ಅಂದ್ರೆ ಈ ದೃಶ್ಯದಲ್ಲಿ ಮಾತು ಬರುವ ಎಲ್ಲರೂ ಹೇಮಾ ತಪ್ಪು ಮಾಡಿದ್ದಾಳೆ ಎಂದೇ ನಂಬಿರುತ್ತಾರೆ.. ಮೂಗ ಒಬ್ಬನೇ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುವುದು. ಪುಟ್ಟಣ್ಣ ಇಂಥಹ ಸಂಕೀರ್ಣ ಪಾತ್ರ ಸೃಷ್ಟಿಸುವುದರಲ್ಲಿ ಎತ್ತಿದ ಕೈ. ಅಂಬರೀಶ್ ಇಡಿ ಚಿತ್ರದಲ್ಲಿ ಇಷ್ಟವಾಗುತ್ತಾರೆ.

ಪುಟ್ಟಣ್ಣ ನವರ ನಾಗರಹಾವು ಚಿತ್ರದಲ್ಲಿ ಅಬ್ಬರಿಸಿದ್ದ ಚಾಮಯ್ಯ ಮೇಷ್ಟ್ರು ಈ ಚಿತ್ರದಲ್ಲಿ ಅಶ್ವತ್ ವೈದ್ಯರ ಚಿಕ್ಕ ಚೊಕ್ಕ ಪಾತ್ರದಲ್ಲಿ ಬಂದು ನಗಿಸುತ್ತಾರೆ. ಪುಟ್ಟಣ್ಣ ಅವರ ಚಿತ್ರಗಳನ್ನು ನಿರಾಕರಿಸಲು ಸಾಧ್ಯವೇ ಇಲ್ಲ ಎನ್ನುವ ಹಂತ ಅಶ್ವಥ್ ಅವರ ಚಿಕ್ಕ ಪಾತ್ರವನ್ನು ಒಪ್ಪಿಕೊಳ್ಳುವುದರ ಮೂಲಕ ತೋರಿಸುತ್ತಾರೆ .

ಆದ್ರೆ ರೀತಿಯಲ್ಲಿ ಸೀತಾರಾಂ ಚಿಕ್ಕ ಪಾತ್ರವಾದರೂ ಮುಂದೆ ಉಪಾಸನೆ ಚಿತ್ರದಲ್ಲಿ ಗಮನ ಸೆಳೆಯುವಂಥಹ ಅಭಿನಯ ನೀಡಿ ಮನಗೆಲ್ಲುತ್ತಾರೆ. ಹೀಗೆ ಕಲಾವಿದರಿಗೆ ಅವರ ಆಳವನ್ನು ತೋರಿಸುತ್ತಾ ಅವರ ಪ್ರತಿಭೆಯನ್ನು ಹೊರ ತೆಗೆಯುವ ಶಕ್ತಿ ಪುಟ್ಟಣ್ಣ ಅವರಿಗೆ ಕರಗತವಾಗಿತ್ತು.

ಈ ಚಿತ್ರದ ಹಾಡುಗಳು ಅಜರಾಮರ..

"ಈ ಶತಮಾನದ ಮಾದರಿ ಹೆಣ್ಣು" ವಾಣಿ ಜಯರಾಂ "ಹೆಣ್ಣು" ಎನ್ನುವ ಪದವನ್ನು ಉಲಿಯುವ ರೀತಿ ಸೂಪರ್. ವಿಜಯನಾರಸಿಂಹ ಅವರ ಸಾಹಿತ್ಯವನ್ನು ಎತ್ತರದ ಸ್ಥಾಯಿಯಲ್ಲಿ ಹಾದಿ ಮನ ಗೆದ್ದಿದ್ದಾರೆ ವಾಣಿ ಜಯರಾಂ.

"ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ" ಸ್ನೇಹದ ಮಹತ್ವ, ಬಾಲ್ಯದ ಹುಡುಗಾಟ ಎಲ್ಲವನ್ನು ಕಲಸಿ ಬರೆದಿರುವ ಚಿ ಉದಯಶಂಕರ್ ಸ್ನೇಹಕ್ಕೆ ಒಂದು ಹಾಡು ಎಂದಾಗ ಈ ಹಾಡೇ ನೆನಪಿಗೆ ಬರುವುದು. ಎಸ್ ಪಿ ಬಾಲಸುಬ್ರಮಣ್ಯಂ ಅವರು ಜೀವ ತುಂಬಿ ಹಾಡಿದ್ದಾರೆ. ಶ್ರೀನಾಥ್ ಅವರ ಅನೇಕ ಗೀತೆಗಳನ್ನು ಹಾಡಿರುವ ಇವರಿಬ್ಬರ ಸ್ನೇಹಕ್ಕೆ ಮುನ್ನುಡಿ ಈ ಹಾಡಾಯಿತು.

ಕನಸ್ಸಲ್ಲಿ ಕಂಡು ಬರುವ "ಶುಭ ಮಂಗಳ ಸುಮೂಹೂರ್ತವೆ" ವಾಣಿ ಜಯರಾಂ ಮತ್ತು ಪಿ ಬಿ ಶ್ರೀನಿವಾಸ್ ಗಮನಸೆಳೆಯುತ್ತಾರೆ. ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ ಸಾಹಿತ್ಯವನ್ನು ಅಷ್ಟೇ ಮುದ್ದಾಗಿ ಚಿತ್ರಿಸಿರುವ ಶೈಲಿ ಪಟಾಕಿ ಸಿಡಿಮದ್ದು ಇಲ್ಲದೆ ಬರಿ ಹೂಬಾಣಗಳ ಮಧ್ಯೆ ಸುಂದರವಾಗಿ ಮೂಡಿ ಬಂದಿದೆ.

ಮಲ್ಪೆಯ ಕಡಲ ತೀರದ "ಸೈಂಟ್ ಮೇರಿಸ್" ಸುಂದರ ದ್ವೀಪದಲ್ಲಿ ಚಿತ್ರಿಸಿರುವ ಹಾಡು "ನಾಕೊಂದ್ಲ ನಾಕು" ಎಂ ಎನ್ ವ್ಯಾಸರಾವ್ ಅವರ ತುಂಟ ಸಾಹಿತ್ಯ, ಜೊತೆಯಲ್ಲಿ ಪ್ರಕೃತಿಯ ವಿಹಂಗಮ ಬಣ್ಣನೆ ಇಷ್ಟವಾಗುತ್ತದೆ. ಎಸ್ ಪಿ ಬಾಲಸುಬ್ರಮಣ್ಯಂ ಮತ್ತೆ ತುಂಟ ತನದ ಈ ಹಾಡಿಗೆ ದನಿಯಾಗುತ್ತಾರೆ.

ಪುಟ್ಟಣ್ಣ ಅವರು ಪ್ರತಿಭೆಗಳನ್ನು ಹೇಗೆ ಹುಡುಕುತ್ತಿದ್ದರು ಎನ್ನುವುದಕ್ಕೆ ಉತ್ತಮ ಸಾಕ್ಷಿ "ಸೂರ್ಯಂಗೂ ಚಂದ್ರಂಗೂ" ಹಾಡು. ನಿರ್ದೇಶಕ ರವಿ ಅವರ ದಪ್ಪ ದನಿಯಲ್ಲಿ ಹಾಡಿಸಿರುವ ಈ ಹಾಡು ಇಷ್ಟವಾಗುವುದು ಅದರ ಸಾಹಿತ್ಯ, ಹಳ್ಳಿಯ ಶೈಲಿಯಲ್ಲಿಯೇ ಹಾಡಿರುವ ಬಗೆ, ಜೊತೆಯಲ್ಲಿ ಶಿವರಾಂ ಅವರ ಅಭಿನಯ. ಎಂ ಎನ್ ವ್ಯಾಸರಾವ್ ಅವರ ಅರ್ಥ ಗರ್ಭಿತ ಸಾಹಿತ್ಯ ಮನಗೆಲ್ಲುತ್ತದೆ.

ಇನ್ನೊಬ್ಬ ಸುಂದರ ನಟ ಆರ್ ನಾಗೇಂದ್ರ ರಾಯರ ಮಗ ಸುದರ್ಶನ್ ಅವರ ಸಿರಿ ಕಂಠ ದಲ್ಲಿ ಮೂಡಿರುವ ಗೀತೆ "ಹೂವೊಂದು ಬಳಿ ಬಂದು" ಹಾಡಿಗೆ ಒಂದು ಭಾವುಕ ಚೌಕಟ್ಟು ಒದಗಿಸುವಲ್ಲಿ ಈ ಹಾಡು ಗಾಯನ ತನ್ನ ಕಾಣಿಕೆ ಸಲ್ಲಿಸುತ್ತದೆ. ವಿಜಯನಾರಸಿಂಹ ಅವರ ಸುಂದರ ಪದಗಳ ಜಾದೂ ಶ್ರೀನಾಥ್ ಅವರ ಅಭಿನಯ ಈ ಹಾಡಿಗೆ ಮೆರುಗು ತಂದಿದೆ.

ಇಡಿ ಚಿತ್ರದಲ್ಲಿ ಸ್ನೇಹದ ಕಡಲಿನ ಮೇಲೆ ತೇಲಿಸುವಂತೆ ಅನುಭವ ಕೊಡುವ ಸಂಗೀತ ವಿಜಯಭಾಸ್ಕರ್ ಅವರದ್ದು. ಪ್ರತಿ ಹಾಡಿಗೂ ಪ್ರತಿ ಸನ್ನಿವೇಶಕ್ಕೂ ವಿಭಿನ್ನ ರೀತಿಯಲ್ಲಿ ಸಂಗೀತ ತುಂಬುತ್ತಾ ಜೀವ ತುಂಬುವ ಅವರ ಸಂಗೀತ ಈ ಚಿತ್ರದ ಉತ್ತಮ ಯಶಸ್ಸಿಗೆ ಕಾರಣವಾಗಿತ್ತು. ಅದ್ಭುತ ಗೆಳೆತನ ವಿಜಯಭಾಸ್ಕರ್, ಪುಟ್ಟಣ್ಣ ಮತ್ತು ವಿಜಯನಾರಸಿಂಹ ಅವರದ್ದು. ಈ ಗೆಳೆತನದ ಅಪಾರ ಶಕ್ತಿ ಈ ಚಿತ್ರದ ಯಶಸ್ಸಿಗೆ ದುಡಿದಿದೆ.

ಗುರುಗಳೇ ಇಂಥಹ ಸ್ನೇಹದ ಕಡಲಲ್ಲಿ ನಮ್ಮನ್ನು ತೇಲಿಸಿ ಸಾಗಿಸಿರುವ ಈ ಚಿತ್ರದ ನುಡಿ ನಮನದ ಜೊತೆಯಲ್ಲಿ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ನಿಮ್ಮ ಅಭಿಮಾನಿ ಬಳಗದ ಮೂಲಕ ಕೋರುತ್ತಿದ್ದೇವೆ.  ಶುಭಮಂಗಳಕರ ನೆನಪುಗಳೊಂದಿಗೆ ಮತ್ತೊಂದು ಚಿತ್ರದ ಜೊತೆಯಲ್ಲಿ ಬರುವೆ.






Monday, November 24, 2014

ಎಡವಿದರೆ ಕಲ್ಲು ಗುಡ್ಡವೇ.. ಎಡಕಲ್ಲು ಗುಡ್ಡದ ಮೇಲೆ (1973)

ಪುಟ್ಟಣ್ಣ ಯಾಕೆ ಇಷ್ಟ ಆಗ್ತಾರೆ.. ಕಾರಣ ಹುಡುಕುತ್ತಾ ಹೋದ ಹಾಗೆ ಶರಧಿಯಲ್ಲಿ ಕಪ್ಪೆ ಚಿಪ್ಪು ಹುಡುಕಿದ ಹಾಗೆ.. ಒಂದು ಸಿಕ್ಕಾಗ ಇನ್ನೊಂದು ಕಾಣುತ್ತದೆ. ಅರೆ ಇದು ಚೆನ್ನಾಗಿದೆ ಅಂತ ಇನ್ನೊಮ್ಮೆ ಕಣ್ಣರಳಿಸಿದರೆ ಇನ್ನೊಂದು ಸೊಗಸಾಗಿ ಕಾಣುತ್ತದೆ.

ಅವರ ಬೆಳ್ಳಿಮೋಡದಿಂದ ನಾಗರಹಾವು ಚಿತ್ರದವರೆಗೆ ಬರೆದ ನಂತರ ಹಿಂದೆ ತಿರುಗಿ ನೋಡಿದರೆ ಒಂದು ರೀತಿ ಸಂತೃಪ್ತಿ, ಮುಂದೆ  ಆನಿಸಿ ನೋಡಿದರೆ ಇನ್ನೊಂದು ಬಗೆಯ ರತ್ನಗಳು ಹೊಳೆಯುತ್ತಿವೆ.

ಭಾರತಿಸುತ ಅವರ ಸುಧಾ ವಾರಪತ್ರಿಕೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಅದೇ ಹೆಸರಿನ ಕಾದಂಬರಿಯನ್ನು ಚಿತ್ರಕಥೆ ಬರೆದು ನಿರ್ದೆಶಿಸಿದ್ದಾರೆ ಪುಟ್ಟಣ್ಣ ಕಣಗಾಲ್.

ಶ್ರೀಕಾಂತ್ & ಶ್ರೀಕಾಂತ್ ಎಂಟರ್ಪ್ರೈಸಸ್ ಲಾಂಛನದಲ್ಲಿ ತಯಾರಾದ ಈ ಚಿತ್ರ ೧೯೭೩  ತೆರೆಯನ್ನು ಅಲಂಕರಿಸಿತು. ಒಂದು ರೀತಿಯ ವಿಚಿತ್ರ ಅನ್ನಿಸುವಷ್ಟು ಕಥೆಗೆ ಹೂರಣ ತುಂಬಿ ನಟಿಸಿದ್ದು ಅಭಿನಯ ಶಾರದೆ ಜಯಂತಿ. ಪ್ರವರ್ಧಮಾನಕ್ಕೆ ಬರುತ್ತಿದ್ದ ಆರತಿ, ಎಡಕಲ್ಲು ಗುಡ್ಡ ಚಂದ್ರಶೇಖರ್ ಎಂದೇ ಖ್ಯಾತರಾಗಿದ್ದ ಚಂದ್ರು, ಶರಪಂಜರ, ನಾಗರಹಾವು ಚಿತ್ರಗಳಲ್ಲಿ ಚಮತ್ಕಾರಿ ಅಭಿನಯ ನೀಡಿ, ಜೊತೆಯಲ್ಲಿ ಗೆಜ್ಜೆ ಪೂಜೆ ಚಿತ್ರವನ್ನು ನಿರ್ಮಿಸಿದ್ದ ಶಿವರಾಂ ಮತ್ತು ಪೋಷಕ ಪಾತ್ರದಲ್ಲಿ ರಂಗ.

ಇಡಿ ಚಿತ್ರದಲ್ಲಿ ಆವರಿಸಿಕೊಂಡಿರುವುದು ಈ ಐದೇ ಮಂದಿ. ಇವರುಗಳನ್ನೇ ಕೇಂದ್ರವಾಗಿತ್ತು ಕೊಂಡು ಎಲ್ಲೂ ಬೇಸರ ತರಿಸದೇ ಚಿತ್ರವನ್ನು ಮಾಡಿ ಗೆದ್ದವರು ಪುಟ್ಟಣ್ಣ ಎಂಬ ಮಾಂತ್ರಿಕ ನಿರ್ದೇಶಕ.

ನರೇಂದ್ರ ಬಾಬು ಅವರ ಸಂಭಾಷಣೆ, ಎಸ್ ವಿ ಶ್ರೀಕಾಂತ್ ಅವರ ಛಾಯಾಗ್ರಹಣ, ಸಂಗೀತ ನಿಧಿ ಎಂ ರಂಗರಾವ್ ಇವರಿಂದ ಕೂಡಿದ ಈ ಚಿತ್ರಕ್ಕೆ ಸೊಗಸಾದ ಹಾಡುಗಳನ್ನು ಬರೆದವರು ಕಣಗಾಲ್ ಪ್ರಭಾಕರ್ ಶಾಸ್ತ್ರೀ, ವಿಜಯನಾರಸಿಂಹ, ಆರ್ ಎನ್ ಜಯಗೋಪಾಲ್, ನರೇಂದ್ರಬಾಬು.  ಹಾಡುಗಳಿಗೆ ದನಿಯಾದವರು ಪಿ ಸುಶೀಲ, ಎಸ್ ಪಿ ಬಾಲಸುಬ್ರಮಣ್ಯಂ, ಎಸ್ ಜಾನಕಿ.

ಈ ಚಿತ್ರ ಮನಸ್ಸೆಳೆಯುವುದು ಈ ಕಾರಣಗಳಿಂದ

೧. ಕಾಮ ಎಂಬ ಅರಿಷಡ್ವರ್ಗದ ಪ್ರಮುಖ  ವೈರಿಯನ್ನು ಕೇಂದ್ರ ಕಥಾ ವಸ್ತುವಾಗಿದ್ದರೂ ಇಡಿ ಪರಿವಾರ ಒಟ್ಟು ಕೂತು ನೋಡಬಹುದಾದ ಚಿತ್ರ ಮಾಡಿದ್ದು
೨. ಜಯಂತಿ ಆಗಲೇ ಪ್ರಸಿದ್ಧ ತಾರೆ ಎಂದು ಹೆಸರು ಮಾಡಿದ್ದರು, ಈ ರೀತಿಯ ಒಂದು ಸಂಕೀರ್ಣ ಪಾತ್ರವನ್ನು ಒಪ್ಪಿ ನಟಿಸಿದ್ದು
೩. ರಂಗ ಅವರ ಚಿತ್ರ ಜೀವನದಲ್ಲಿ ಒಂದು ವಿಭಿನ್ನ ಚಿತ್ರವಾಗಿ ಮೂಡಿ ಬಂದದ್ದು.
೪. ಪುಟ್ಟಣ್ಣ ಅವರು ಮೊದಲಬಾರಿಗೆ ಕರುನಾಡಿನಿಂದ ಒಂದು ಕಾಲನ್ನು ಹೊರಗೆ ಇತ್ತು ಕೇರಳದ ವೈನಾಡಿನಲ್ಲಿರುವ ಎಡಕಲ್ಲು ಗವಿಯಲ್ಲಿ ಕೆಲವು ಸನ್ನಿವೇಶಗಳನ್ನು ಚಿತ್ರಿಸಿದ್ದು.

ಚಿತ್ರದ ಹೆಸರು, ತಾರಾಗಣ, ತಾಂತ್ರಿಕ ವರ್ಗವನ್ನು ತೋರಿಸುವ ಜೊತೆಯಲ್ಲಿ ಅರಿಷಡ್ವರ್ಗಗಳ ಬಗ್ಗೆ ಕಿರು ಮಾತನ್ನು ಹೇಳಿ, ಜೊತೆಯಲ್ಲಿ ಪುರುಷ ಗೊಂಬೆಗಳನ್ನ ಪೂರಕವಾಗಿ ತೋರಿಸಿ ಚಿತ್ರದ ಆರಂಭದಲ್ಲೇ ತಾನು ಹೇಳ ಹೊರಟಿರುವ ಸಂದೇಶವನ್ನು ಸಾರಿ ಸಾರಿ ಹೇಳಿದ್ದಾರೆ.

ಕಾಮತುರಣಾಂ ನಲಜ್ಜಂ ನಭಯಂ ಇನ್ನು ಮೂಲಕ ಚಲನ ಚಿತ್ರ ಆರಂಭವಾಗುತ್ತದೆ.

"ವಿರಹ ನೂರು ನೂರು ತರಹ" ಹಾಡು ಸಾಹಿತ್ಯ, ಸಂಗೀತ ಮತ್ತು ಛಾಯಗ್ರಹಣದಿಂದ ಮನಗೆದ್ದರೆ. ಪಿ ಸುಶೀಲ ಮತ್ತು ಜಯಂತಿ ಪ್ರೇಕ್ಷಕರಿಗೆ ಹೇಳುತ್ತಾರೆ.. ಇರಿ ಸರ್ ನಮ್ಮ ಕಡೆಯೂ ಗಮನಿಸಿ ಅಂತ.
ಅದ್ಭುತ ಗಾಯನ ಸುಶೀಲಮ್ಮ ಅವರದಾದರೆ, ಅದಕ್ಕೆ ಪೈಪೋಟಿ ನೀಡುವಂತೆ ಜಯಂತಿ (ಇರಿ ಸ್ವಲ್ಪ ಸಮಯ ತಡೆದುಕೊಳ್ಳಿ ಲೇಖನದ ಮುಂದಿನ ಭಾಗದಲ್ಲಿ ಜಯಂತಿ ಅವರ ಬಗ್ಗೆ ಬರೆದಿದ್ದೇನೆ) ಅಭಿನಯದ ಮೂಲಕ ತೆರೆದಿಡುತ್ತಾರೆ. ವಿಜಯನಾರಸಿಂಹ ಅಕ್ಷರಶಃ ಪದಗಳ ಗಾರುಡಿಗ. ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲಾ ಎನ್ನುವಾಗ ಕೊಳದ ನೀರಲ್ಲಿ ಮೋಡವನ್ನು ತೋರಿಸಿ ನೀರಿನ ಅಲಗಾಡುವಿಕೆಯನ್ನು ಕದಡಿದ ಮನಸ್ಸಿಗೆ ಹೋಲಿಸಿರುವ ಸನ್ನಿವೇಶ ಒಂದು ಅದ್ಭುತ ಸಂಯೋಜನೆ.

ತಮ್ಮ ದೇಹದ ಬಯಕೆಯನ್ನು ತೋಡಿ ಕೊಂಡಾಗ ರಂಗ ಹೇಳುವ ನಿಜಾಂಶ..  ನಂತರ ಉರಿಯುತ್ತಿದ್ದ ಬೆಂಕಿಗೆ ಜಯಂತಿ ನೀರು ತಂದು ಸುರಿಯುವ ದೃಶ್ಯ ಸೂಪರ್.

ಅಡ್ಡ ಬಡ್ದ ಬೈಕ್ ಓಡಿಸುತ್ತಾ ಬರುವ ಚಂದ್ರು ಮೊದಲ ದೃಶ್ಯದಲ್ಲಿಯೇ ಆತನ ಗುಣವನ್ನು ತೋರಿಬಿಡುತ್ತಾರೆ. ರಸ್ತೆಯಲ್ಲಿ ಓಡಿಸದೇ ಸಿಕ್ಕ ಮೈದಾನದಲ್ಲಿ ಇಷ್ಟ ಬಂದಾ ಹಾಗೆ ಓಡಿಸುವ ಮೂಲಕ ತಾನು ಯಾರ ಹಂಗಿಗೂ ಸಿಗದ ಮನುಷ್ಯ ಎಂಬ ತರ್ಕವನ್ನು ತೋರಿಬಿಡುತ್ತಾರೆ. ವಿಚಿತ್ರ ವೇಷಭೂಷಣ, ಮಾತು ಮಾತಿಗೂ "ಇದೆ ಫಸ್ಟ್ ಟೈಮ್" ಎನ್ನುವ ಪದವನ್ನು ಸೇರಿಸೋದು, ಈ ಪಾತ್ರ ಒಂದು ವಿಭಿನ್ನವಾಗಿ ರೂಪುಗೊಳ್ಳಲು ಸಹಾಯ ಮಾಡಿದೆ.

"ಗುಂಡಿನ ಮತ್ತೆ ಗಮ್ಮತ್ತು ಅಳತೆ ಮೀರಿದರೆ ಆಪತ್ತು" ಎಸ್ ಪಿ  ಈ ಹಾಡನ್ನು ಪಕ್ಕ ಕುಡುಕರ ಶೈಲಿಯಲ್ಲಿಯೇ ಹಾಡಿದ್ದಾರೆ. ನರೇಂದ್ರ ಬಾಬು ಅವರ ಸಾಹಿತ್ಯಕ್ಕೆ ಅಚ್ಚುಕಟ್ಟಾದ ನಟನೆ ಶಿವರಾಂ ಅವರದು. ಇವರು ಪ್ರತಿ ಸಂಭಾಷಣೆಯಲ್ಲಿ "ಗಮ್ಮತ್ತು, ಲಿಮಿಟ್ ಎನ್ನುವ ಪದಗಳನ್ನು ಉಪಯೋಗಿಸುತ್ತಲೇ ಹೇಳುವ ಮಾತು "ನಾ ಹೇಳಿದ ಹಾಗೆ ಕೇಳು.. ಆದರೆ ನಾ ಮಾಡಿದಂತೆ ಮಾಡಬೇಡ"..  ಉಪದೇಶ ಯಾರು ಹೇಳುತ್ತಾರೆ ಅನ್ನೊಂದು ಮುಖ್ಯ ಅಲ್ಲಾ ಏನು ಹೇಳುತ್ತಾರೆ ಅನ್ನೊಂದು ಮುಖ್ಯ ಎಂದು ತೋರಿಸುತ್ತಾರೆ.

ಇವರಿಬ್ಬರು ರಂಗ ಅವರ ಮನೆಗೆ ಪರಿಚಯ ಆದ ಮೇಲೆ ಚಿತ್ರ ಶುರುವಾಗುತ್ತೆ.  ದೊಡ್ಡ ದೊಡ್ಡ ಬಂಗಲೆಯಲ್ಲಿ ಒಂಟಿ ತನ.. ,ಸಾಹುಕಾರನನ್ನು ಸಾಹುಕಾರರ ಹಾಗೆ ಮಾಡದೆ ಬಯಕೆಯಲ್ಲಿ ದಟ್ಟ ದರಿದ್ರ ಸ್ಥಿತಿಗೆ ತಳ್ಳುತ್ತದೆ ಅನ್ನುವ ಮಾರ್ಮಿಕ ಸಂದೇಶ . ಎಲ್ಲಾ ಇದೆ ಏನೂ ಇಲ್ಲ ಅನ್ನಿಸುವ ವಿಚಿತ್ರ ಸನ್ನಿವೇಶ.

ಮನೆಯ ಯಜಮಾನನಿಗೆ ಹೇಳದೆ ಮಾಡುವ ಕೆಲಸ ಜೀವನದ ದಾರಿಯನ್ನು  ಹೇಗೆ ತಪ್ಪಿಸುತ್ತದೆ ಎನ್ನುವುದಕ್ಕೆ ಚಂದ್ರು ಜೊತೆಯಲ್ಲಿ ಜಯಂತಿ ಎಡಕ್ಕಲ್ಲು ಗುಡ್ಡಕ್ಕೆ ಹೋಗುತ್ತಾ "ಸಂತೋಷ ಆಹಾ ಸಂಗೀತ" ಹಾಡಿನಲ್ಲಿ ಎಸ್ಪಿ ಮತ್ತು ಪಿ ಸುಶೀಲ ಅವರ ಹಾಡುಗಾರಿಕೆ ಮತ್ತು ವಿಜಯನಾರಸಿಂಹ ಅವರ ಸಾಹಿತ್ಯ ಗಮನ ಸೆಳೆಯುತ್ತದೆ.

ಚುಟುಕಾಗಿ ಎಡಕಲ್ಲು ಗುಡ್ಡವನ್ನು ತೋರಿಸುವ ಈ ಹಾಡಿನಲ್ಲಿ ಮತ್ತು ನಂತರದ ದೃಶ್ಯದಲ್ಲಿ ಸಾವಿರಾರು ವರ್ಷಗಳ ಹಿಂದೆ ಬಂಡೆಗಳಲ್ಲಿನ ಕೆತ್ತನೆ ಗಮನ ಸೆಳೆಯುತ್ತದೆ. ಮಾನವನ ಆದಿ ಕಾಲದಿಂದಲೂ ಈ ಕಾಮ ಎನ್ನುವ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಎನ್ನುವ ಮಾತು ನಿಜ ಅನ್ನಿಸುತ್ತದೆ.

ತಪ್ಪು ಹೆಜ್ಜೆ ಇಡಲು ಮುನ್ನುಗುವ ಆ ಕ್ಷಣವನ್ನು ಬಣ್ಣ ಬಣ್ಣಗಳ ಬೆಳಕಿನ ಸಹಾಯದಿಂದ ಬಿಂಬಿತವಾಗುವ ದೃಶ್ಯ ಅಮೋಘ ಕಲ್ಪನೆ. ಇಲ್ಲಿಯೂ ಕೂಡ ಅಶ್ಲೀಲ ಎನ್ನಿಸುವ ದೃಶ್ಯವನ್ನು ನಾಗರೀಕ ಪ್ರಜ್ಞೆಯಿಂದ ಬರಿ ಸಾಂಕೇತಿಕವಾಗಿ ಕಡಲಿನ ಅಲೆಗಳ ಅಬ್ಬರ, ಎಲೆಯಿಂದ ಜಿನುಗುವ ನೀರಿನ ಬಿಂದು ಹೀಗೆ ಸಾಂಕೇತಿಕವಾಗಿ ಚಿತ್ರೀಕರಿಸಿದ್ದಾರೆ.

ಜೀವನದ ಹಾದಿಯಲ್ಲಿ ತಪ್ಪು ಹೆಜ್ಜೆಯನ್ನಿಟ್ಟು ಬಂದ ಮೇಲೆ ತನ್ನ ಗಂಡನಿಗೆ ಆ ವಿಷಯ ಹೇಳಲಾಗದೆ ತೊಳಲಾಡುವ ದೃಶ್ಯವನ್ನು ಕ್ಯಾಮೆರ ನಿಧಾನವಾಗಿ ಓಲಾಡುತ್ತಾ ಜಯಂತಿಯ ಹಿಂದೆ ಹೋಗುವ ರೀತಿ ತೋರಿರುವುದು ಮತ್ತೊಮ್ಮೆ ಪುಟ್ಟಣ್ಣ ಅವರ ಹಿಡಿತ ನಿರ್ದೇಶಕರ ಸ್ಥಾನದ ಮೇಲೆ ಎಷ್ಟು ಉನ್ನತ ಮಟ್ಟದಲ್ಲಿದೆ ಎಂದು ತೋರಿಸುತ್ತದೆ.

ಊರಿನ ಮನೆಯಲ್ಲಿ ಸಂಸಾರದ ವಿಷಯವನ್ನು ರಂಗ ಅವರ ಬಳಿ ನ್ಯಾಯ ತೀರ್ಮಾನ ಮಾಡಲು ಬಂದಾಗ.. ಬಯಕೆಯನ್ನು ತೃಪ್ತಿ ಪಡಿಸದ ಗಂಡಿನ ಬಳಿ ಜೀವನ ಮಾಡುವುದು ವ್ಯರ್ಥ ಎಂದು ಊರಿನ ಜನರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಂಥಹ ಸಂದರ್ಭದಲ್ಲಿ ರಂಗ ತನ್ನ ಜೀವನವನ್ನು ತುಲನೆ ಮಾಡಿ.. ಜಯಂತಿ ತನ್ನ ಬಾಳಿನ ದೇವತೆ ಎಂದು ಅವಳ ತಲೆಯ ಮೇಲೆ ಹೂವನ್ನು ಹಾಕುತ್ತಾರೆ.  ತಾನು ನಿಜ ಎಂದು ನಂಬಿದ್ದ ನಂಬಿಕೆಗೆ ಬದ್ಧನಾಗಿ ಇರುವುದು ಮತ್ತು ತನ್ನ ಹೆಂಡತಿ ಹಾದಿ ತಪ್ಪಿರುವುದರ ಬಗ್ಗೆ ಸ್ವಲ್ಪವೂ ಅರಿವಿರದೆ ನಡೆದುಕೊಳ್ಳುವ ಈ ದೃಶ್ಯ ನಂಬಿದ ಸತ್ಯವೆ ಒಳ್ಳೆಯದು ಅನ್ನಿಸುತ್ತದೆ.

ಇವುಗಳ ಗಡಿಬಿಡಿಯ ಮಧ್ಯೆ ಬರುವ ಆರತಿ ಪಾತ್ರ ತುಂಬಾ ವಿಭಿನ್ನವಾಗಿ ಮೂಡಿ ಬಂದಿದೆ. ಜಯಂತಿ ಎಡವಿ ಬೀಳುವ ಪಾತ್ರದಲ್ಲಿ ಅಭಿನಯಿಸಿದ್ದರೆ.. ಆರತಿ ಎಡವಿ ಬಿದ್ದವರನ್ನು ತಡವಿ ಎತ್ತುವ ಪಾತ್ರದಲ್ಲಿ ಬಂದಿದ್ದಾರೆ. ಚಂದ್ರು ಆರತಿಯ ಮೇಲೆ ಕಣ್ಣು ಹಾಕಿದಾಗ ಬಗ್ಗದೆ ಚೇಡಿಸುತ್ತಾ ಸಾಗುವ "ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ" ಹಾಡು ಋತುವಿನ ಬದಲಾವಣೆಯಲ್ಲಿಯೂ ಬಯಕೆಗಳ ಪಾತ್ರ ಹಿರಿದು ಎಂದು ಹಾಡುತ್ತಾ ಹೋಗುತ್ತಾರೆ. ಎಸ್ ಜಾನಕಿಯಮ್ಮನವರ ಕೋಮಲ ಸ್ವರ ಆರ್ ಎನ್ ಜಯಗೋಪಾಲ್ ಅವರ ಸುಲಲಿತ ಸಾಹಿತ್ಯ, ಆರತಿಯ ಅವರ ಅಭಿನಯ ಈ ಹಾಡಿನ ಬೆಡಗು ಹೆಚ್ಚಿಸಿದೆ.

ಕೊಡವ ಸಂಸ್ಕೃತಿಯ ಮದುವೆಯ ಒಂದು ಚಿಕ್ಕ ಝಲಕ್ ಇಲ್ಲಿ ಮೂಡಿ ಬಂದಿದೆ. "ಯಾವೂರವ್ವ ಇವ ಯಾವೂರವ್ವ" ಹಾಡಿನಲ್ಲಿ ಕಣಗಾಲ್ ಪ್ರಭಾಕರ್ ಶಾಸ್ತಿ ಅವರ ಸಾಹಿತ್ಯದಲ್ಲಿ ಮಡಿಕೇರಿ ಸುತ್ತ ಮುತ್ತಲ ಅನೇಕ ಪೇಟೆ ಹಳ್ಳಿಗಳ ಹೆಸರುಗಳನ್ನ ತಂದು ಹಾಡಿನಲ್ಲಿ ಕೂರಿಸಿರುವುದು  ವಿಶೇಷ. ಜಾನಕಿಯಮ್ಮ ಅವರ ಕಂಠದಲ್ಲಿ, ಆರತಿಯವರ ವ್ಯಯ್ಯಾರದ ನೃತ್ಯವೇ ಸೊಗಸು.

ಎಡಕಲ್ಲು ಗುಡ್ಡಕ್ಕೆ ಚಂದ್ರು ಆರತಿಯನ್ನು ಕರೆದೊಯ್ದಾಗ ಅಲ್ಲಿ ಆರತಿ ತೋರುವ ಧೈರ್ಯ, ಮನಸ್ಥಿತಿ ಇಂದಿನ ಪೀಳಿಗೆಗೆ ಒಂದು ದಾರಿ ದೀಪ ಎನ್ನಿಸುತ್ತದೆ.  ಎಡವಲು ಅವಕಾಶ ಹೇರಳವಾಗಿದ್ದರೂ ಮನೋ ಬಲ ಸಿದ್ಧಿಸಿದ್ದಾಗ ಇಂಥಹ ಚಿಕ್ಕ ಚಿಕ್ಕ ಉನ್ಮಾದಗಳಿಗೆ ಬಲಿಯಾಗಲು ಸಾಧ್ಯವೇ ಇಲ್ಲ.

ತನ್ನ ಅಕ್ಕಳನ್ನು ಮರಳಿ ದಾರಿಗೆ ತರುವ ಪ್ರಯತ್ನ "ನಿಲ್ಲು ನಿಲ್ಲೇ ಪತಂಗ ಬೇಡ ಬೇಡ ಬೆಂಕಿಯ ಸಂಗ" ವಿಜಯನಾರಸಿಂಹ ಪದಗಳ ಮಹಲನ್ನೇ ಕಟ್ಟಿದ್ದಾರೆ. ಅದ್ಭುತ ಸಾಹಿತ್ಯ, ಅಮೋಘ ಗಾಯನ.  ಆರತಿಯವರ ಅಭಿನಯ, ಜಯಂತಿ ಅವರ ತೊಳಲಾಟ ಸೂಪರ್.

ಅಂತಿಮ ದೃಶ್ಯದಲ್ಲಿ ತನ್ನ ಎಲ್ಲಾ ಎಡವಿದ ಪ್ರಸಂಗಗಳನ್ನು ಜಯಂತಿ ತನ್ನ ಗಂಡನಿಗೆ ಹೇಳುತ್ತಾ ತಪ್ಪನ್ನು ಒಪ್ಪಿಕೊಳ್ಳುವಾಗ ಕ್ಯಾಮೆರ ಓಲಾಟ ಜಯಂತಿಯ ಮನಸ್ಥಿತಿಯನ್ನು ನಿಖರವಾಗಿ ಬಿಂಬಿಸುತ್ತದೆ. ಒಂದು ಚಿಕ್ಕ ಚಿಕ್ಕ ದೃಶ್ಯಗಳಲ್ಲಿ ಕೂಡ ಪುಟ್ಟಣ್ಣ ತೋರುತ್ತಿದ್ದ ಜಾದೂ ಗಮನಸೆಳೆಯುತ್ತದೆ.  ಜೊತೆಯಲ್ಲಿಯೇ ಸಂಸಾರದ ಗುಟ್ಟನ್ನು ಹೇಳುವೆ ಎಂದು ಬೆದರಿಸುವ ಚಂದ್ರು ಮನೆಗೆ ಬಂದಾಗ ಅವರ ನೆರಳನ್ನು ಭೂತಾಕಾರವಾಗಿ ದೊಡ್ಡದಾಗಿ ತೋರಿಸುವ ಮೂಲಕ ಬಯಕೆ ಚಿಕ್ಕ ಗಾತ್ರದಲ್ಲಿ ಬಂದರೂ ಅದು ಹೊತ್ತು ತರುವ ಸಮಸ್ಯೆ ಭೂತಾಕಾರವಾಗಿ ನಿಲ್ಲುತ್ತದೆ ಮತ್ತು ಕಾಡುತ್ತದೆ ಎಂದು ತೋರಿದ್ದಾರೆ. ಉತ್ತಮ ನೆರಳು ಬೆಳಕಿನ ಸಂಯೋಜನೆ.
*****
ಜಯಂತಿ ಈ ಚಿತ್ರದ ನಾಯಕಿ, ಕಣ್ಣಲ್ಲೇ ಅವರು ಕಾರುವ ಬಯಕೆಯ ಭಾವ, ನಾಜೂಕಿನ ಸನ್ನಿವೇಶಗಳಲ್ಲಿ ತನಗಿಂತಲೂ ಕಿರಿಯ ನಟ ಚಂದ್ರುವಿನ ಜೊತೆಯಲ್ಲಿನ ಅಭಿನಯ ವಾಹ್ ಎನ್ನಿಸುತ್ತದೆ. ಈ ಚಿತ್ರದುದ್ದಕ್ಕೂ ಕಣ್ಣುಗಳಿಗೆ ಕಾಡಿಗೆ ತುಸು ಹೆಚ್ಚಾಗಿಯೇ ಬಳಸಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎನ್ನುವ ಹಾಗೆ, ಈ ತೀಕ್ಷ್ಣ ಕಾಡಿಗೆ ಕಣ್ಣುಗಳು ಅವರ ಬಯಕೆ, ಮನಸ್ಥಿತಿ ಎಲ್ಲವನ್ನು ಸೂಚ್ಯವಾಗಿ ತೋರಿಸುತ್ತದೆ.

ವಿರಹ ನೂರು ನೂರು ತರಹ ಹಾಡಿನಲ್ಲಿ ಕಣ್ಣು ಮುಖದಲ್ಲೇ ವ್ಯಕ್ತ ಪಡಿಸುವ ಆ ಕಾಮದ ಬಯಕೆ, ಕೆಲವು ದೃಶ್ಯಗಳಲ್ಲಿ ಕಣ್ಣಲ್ಲೇ ಕಾರುವ ರೋಷ, ಜಿಗುಪ್ಸೆ, ತನ್ನ ತಂಗಿ ಆರತಿಯನ್ನು ಬಲೆಗೆ ಎಳೆದುಕೊಳ್ಳುತ್ತಿದ್ದಾನೆ ಎಂದು ಅರಿವಾದಾಗ ಅದನ್ನು ತಡೆಯಲು ಪ್ರಯತ್ನ ಪಡುವ ಅಭಿನಯ (ಅಡಿಗೆ ಮನೆಯ ಹತ್ತಿರ ಚಂದ್ರುವಿಗೆ ಹೋಗು ಎಂದು ಹೇಳುವ ದೃಶ್ಯ) ಅದ್ಭುತ.

ಆ ಧ್ವನಿ, ಆ ನೋಟ, ವೇಷ ಭೂಷಣ ಎಲ್ಲವನ್ನೂ ಸೇರಿಸಿಕೊಂಡು ನಿಖರವಾಗಿ ಜಯಂತಿ ಆ ಪಾತ್ರದೊಳಗೆ ನುಗ್ಗಿಬಿಟ್ಟಿದ್ದಾರೆ

ಆರತಿ ಉತ್ತರಾರ್ಧದಲ್ಲಿ ಬಂದರು ತಮ್ಮ ಪಾಲನ್ನು ಸರಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಮನೊಧೈರ್ಯಕ್ಕೆ ಇನ್ನೊಂದು ಹೆಸರಾಗುವ ಪಾತ್ರ ಅವರದು. ಪ್ರತಿ ಹಂತದಲ್ಲೂ ತಮ್ಮ ಇರುವಿಕೆಯನ್ನು ತೋರುವ ಅವರ ಅಭಿನಯ ಸೊಗಸಾಗಿದೆ.

ಪೋಷಕ ಪಾತ್ರದಲ್ಲಿ ಬರುವ ರಂಗ, ತೊಳಲಾಡುವ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ. ತನ್ನ ಹೆಂಡತಿ ಜಾರಿದ್ದಾಳೆ ಎಂದು ಅವಳೇ ತಪ್ಪನ್ನು ಒಪ್ಪಿಕೊಂಡಾಗ... ಪ್ರೇಮದ ಮೇಲೆ ಕಾಮ ಜಯ ಸಾಧಿಸಿದ ಹೊತ್ತು ಎಂದು ಹೇಳಿ ಇಡಿ ಸನ್ನಿವೇಶವನ್ನು ತಿಳಿಗೊಳಿಸುತ್ತಾರೆ.. ಕಡೆಗೆ ಕೇಳುವ ಪ್ರಶ್ನೆ ನಿನಗೆ ಬೇಕಿರುವುದು ಕಾಮವೋ ಪ್ರೇಮವೋ... ಅನ್ನುವಾಗ ಅವರ ಮುಖಭಾವ, ಅಭಿನಯ ಇಷ್ಟವಾಗುತ್ತದೆ.

ಚಂದ್ರು.. ಆಹಾ ಏನು ಹೇಳಲಿ ಈ ಪಾತ್ರದ ಬಗ್ಗೆ. ಇವರು ನಟಿಸಬೇಕಾಗಿದ್ದು ಘಟಾನುಘಟಿಗಳ ಮಧ್ಯೆ. ಅಷ್ಟರಲ್ಲಿಯೇ ಜಯಂತಿ, ಆರತಿ, ಶಿವರಾಂ, ರಂಗ ತಮ್ಮ ಛಾಪನ್ನು ಚಿತ್ರರಂಗದಲ್ಲಿ ಮೂಡಿಸಿದ್ದರು. ಅವರುಗಳ ಮಧ್ಯೆ ತುಂಟ ದಾರಿ ತಪ್ಪಿದ ಹುಡುಗನಾಗಿ ಅಭಿನಯಿಸುವುದು ಸವಾಲೇ ಸರಿ. ಜಯಂತಿಯ ಪಾತ್ರವನ್ನು ಮೋಹಿಸುವ ಸನ್ನಿವೇಶ, ರಂಗ ಅವರ ಬಳಿ ಕೂಗುತ ಮಾತಾಡುವ ಪರಿ, ಶಿವರಾಂ ಅವರನ್ನು ಬಯ್ದು ದೂರ ಅಟ್ಟುವ ದೃಶ್ಯ, ಆರತಿ ಜೊತೆಯಲ್ಲಿನ ಅಭಿನಯ ಎಲ್ಲವಕ್ಕೂ ಪಕ್ಕ ಪ್ಲೇ ಬಾಯ್ ರೂಪ ಕೊಟ್ಟಿದ್ದಾರೆ. ವೇಷಭೂಷಣಗಳು, ಮಾತಿನ ಚಟಾಕಿ "ಇದೆ ಫಸ್ಟ್ ಟೈಮ್" ಅವರ ಪಾತ್ರವನ್ನ ಇನ್ನಷ್ಟು ಸೊಗಸು ಮಾಡಿವೆ.

ಶಿವರಾಂ ಒಂದು ಚಿಕ್ಕ ಚಿಕ್ಕ ಪಾತ್ರವೇ ಆದರೂ.. ಗಮ್ಮತ್ತು, ನಿಯತ್ತು, ಲಿಮಿಟ್ ಈ ಪದಗಳಲ್ಲೇ ಅವರ ಸಂಭಾಷಣೆ ಆರಂಭ ಇಲ್ಲಾ ಮುಕ್ತಾಯ.. ತನ್ನ ವಯಸ್ಸಿಗೂ ಮೀರಿದ ಪಾತ್ರವಾದರೂ ಅಭಿನಯದಲ್ಲಿ ಗೆದ್ದಿದ್ದಾರೆ.

ಕಾಮ ಕ್ಷಣ ಮಾತ್ರ.. ಪ್ರೇಮ ಎಲ್ಲಾ ಸಮಯಕ್ಕೂ ಎನ್ನುವ ಸುಂದರ ನೀತಿಯನ್ನು ಹೇಳುತ್ತಾ ಜಾರಿ ಬಿದ್ದರೆ ಅದಕ್ಕೆ ಸಾವೇ ಗುರಿ ಎನ್ನುವುದನ್ನು ಜಯಂತಿ ಮತ್ತು ಚಂದ್ರುವಿನ ಪಾತ್ರದ ಅವಸಾನದಲ್ಲಿ ತೋರಿದ್ದಾರೆ. ಗಂಡ ಜಾರಿ ಹೋದ ಹೆಂಡತಿಯನ್ನು ಸ್ವೀಕರಿಸುತ್ತೇನೆ ಎಂದು ಹೇಳಿದರು.. ತಪ್ಪು ಮಾಡಿದ್ದಕ್ಕೆ ಸಾವೇ ಪ್ರಾಯಶ್ಚಿತ್ತ ಎಂದು ತನ್ನನ್ನೇ ಕೊನೆಗಾಳಿಸುವ ಆ ದೃಶ್ಯದಲ್ಲಿ ತಪ್ಪು ಮಾಡಬೇಡಿ. ಮಾಡಿದರೆ ಆ ನೊಂದು ಬೆಂದು ಬಾಳುವ ಬದಲು ಮರೆಯಾಗಿ ಹೋಗಿ ಎನ್ನುತ್ತದೆ ಸಂದೇಶ. ಈ ಮಾತುಗಳು ಚರ್ಚೆ ಒಳಪಡಬಹುದಾದರೂ ಆ ಕಾಲ ಘಟ್ಟದಲ್ಲಿ ಇದು ಒಂದು ಅಪರಾಧ ಎನ್ನುತ್ತಿದ್ದ ಕಾಲದಲ್ಲಿ ಈ ರೀತಿಯ ಅಂತ್ಯ ಈ ಚಿತ್ರದಲ್ಲಿ ಬಂದದ್ದು ಸರಿ ಅನ್ನಿಸುತ್ತದೆ.

ಒಂದು ಸುಂದರ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆ ಮೇಲೆ ತರುವುದು ಮತ್ತು ಅಲ್ಲಿ ವಿಚಿತ್ರ ಸನ್ನಿವೇಶಗಳನ್ನು ಕೂಡ ಎಲ್ಲರೂ ಕೂತು ನೋಡುವ ಹಾಗೆ ಹೆಣೆಯುವುದು ನಿರ್ದೇಶಕರ ತಾಕತ್ತು. ಅಂಥಹ ಒಂದು ಸವಾಲಿನಲ್ಲಿ ಗೆಜ್ಜೆ ಪೂಜೆ, ನಾಗರಹಾವು ಚಿತ್ರಗಳಲ್ಲಿ ಗೆದ್ದಿದ್ದ ಪುಟ್ಟಣ್ಣ ಅವರು ಈ ಚಿತ್ರದಲ್ಲಿ ತಮ್ಮ ನಿರ್ದೇಶಕರ ಶಕ್ತಿಯನ್ನು ಪರಿಣಾಮಕಾರಿ ನಿರೂಪಿಸಿದ್ದಾರೆ. ಒಂದು ವಯಸ್ಕರ ಚಿತ್ರ ಆಗಬಹುದಿದ್ದ ಈ ಕಥೆಯನ್ನು ಸುಲಲಿತವಾಗಿ ಬರಿ ಸಾಂಕೇತಿಕ ದೃಶ್ಯಗಳಲ್ಲಿ ಮಾತ್ರ ಆ ಭಾವವನ್ನು ತೋರಿಸಿ ಚಿತ್ರ ರೂಪಿಸಿರುವುದು "ಎಡಕಲ್ಲು ಗುಡ್ಡದ ಮೇಲೆ" ಚಿತ್ರ ಒಂದು ರತ್ನವಾಗಿ ಮಾರ್ಪಟ್ಟಿರುವುದಕ್ಕೆ ಸಾಕ್ಷಿ. ಪುಟ್ಟಣ್ಣ ಕಣಗಾಲ್ ಗುರುಗಳೇ ನಿಮಗೆ ನಮೋ ನಮಃ. 

Thursday, November 20, 2014

ಕಸ್ತೂರಿ ಕಪ್ಪು ಆದರೆ ನಿವಾಸದ ಯಜಮಾನನ ಮನಸ್ಸು ವರ್ಣಮಯ!! (1971)

ತೇನ್ ಸಿಂಗ್ ಗೌರಿಶಂಕರ ತುತ್ತ ತುದಿಯಲ್ಲಿ ನಿಂತಾಗ ಸಂಭ್ರಮದ ವಿಷಯವಾಗಿತ್ತು.. ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರಲೋಕಕ್ಕೆ ಪಾದ ಇಟ್ಟಾಗ ಸಂತಸವಿತ್ತು.. ಕಾರಣ ತಂತ್ರಜ್ಞಾನ, ಮನುಷ್ಯನ ಅಂಕೆ ಶಂಕೆಗಳು ಒಂದು ಹಂತದಲ್ಲಿ ತನ್ನ ಹತೋಟಿಯಲ್ಲಿದ್ದಾಗ.. ಹೌದು ಇವೆಲ್ಲ ನೆಡೆದು ಒಂದು ನಲವತ್ತು ವರ್ಷಗಳ ಮೇಲೆ ಆಯಿತು.

ಅಕ್ಕಿ ಒಂದು ಕೆ. ಜಿ. ಗೆ ಒಂದು ರೂಪಾಯಿಗಿಂತ ಕಮ್ಮಿ ಇದ್ದ ಕಾಲ.. ಇಂದು ಒಂದು ನೂರು ರೂಪಾಯಿಗೆ ಕೊಂಚ ಕಮ್ಮಿ ಇದೆ.. ಹಾಗೆ ಮಾನವನ ಆಸೆ, ದುರಾಸೆ, ಅಸೂಯೆ, ಸ್ವಾರ್ಥ ಮುಂಚೆಗಿಂತಲೂ ದುಪ್ಪಟ್ಟು ಆಗುತ್ತಲೇ ಇದೆ... ಕಮ್ಮಿಯಾಗುತ್ತಾ ಸಾಗಿದೆ ಜೀವನ ಮೌಲ್ಯಗಳು . 

ಇವೆಲ್ಲ ಮಾತು ಯಾಕೆ ಅಂದಿರಾ.. ಕಸ್ತೂರಿ ನಿವಾಸ ಚಿತ್ರದ ವರ್ಣಮಯ ರೂಪವನ್ನು ನೋಡಿ ಬಂದ ಮೇಲೆ ಅನ್ನಿಸಿದ ಮಾತುಗಳು. 

ಈ ಚಿತ್ರದ ಜೀವಾಳ ಉತ್ತರಾರ್ಧದಲ್ಲಿದೆ. ಅಣ್ಣಾವ್ರಿಗೆ ಗಡ್ಡ ಮೂಡಿ ಬಂದ ಮೇಲೆ ಅವರ ಅಭಿನಯ ವಾಹ್ ವಾಹ್ ಅನ್ನಿಸುತ್ತದೆ. 
ಸಂಭಾಷಣೆ ವೈಖರಿ, ಜೀವನದಲ್ಲಿ ಹಣಕಾಸಿನ ವಿಷಯದಲ್ಲಿ ಜಾರು ಹಾದಿಯಲ್ಲಿದ್ದರೂ ತಾ ನಂಬಿಕೊಂಡಿದ್ದ ಆದರ್ಶ, ಹಿರಿಯ ತಲೆಮಾರಿನವರು ಹಾಕಿಕೊಟ್ಟ ಸಂಸ್ಕಾರ ಇವುಗಳನ್ನು ಕಾಪಾಡಲು ಹೋರಾಡುವ ಪಾತ್ರದಲ್ಲಿ ಅಣ್ಣಾವ್ರು ತಲ್ಲೀನರಾಗಿ ಬಿಡುತ್ತಾರೆ. 

ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು..
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು 
ತಾನೇ ಉರಿದರು ದೀಪವು ಮನೆಗೆ ಬೆಳಕ ಕೊಡುವುದು 
ದೀಪ ಬೆಳಕ ಕೊಡುವುದು.. 

ಇಡಿ ಚಿತ್ರದ ಜೀವಾಳ ಈ ನಾಲ್ಕು ಸಾಲಿನಲ್ಲಿ ಬರೆದಿದ್ದಾರೆ ಸಾಹಿತ್ಯ ರತ್ನ ಚಿ ಉದಯಶಂಕರ್.. ಹಾಗೂ ಇಡಿ ಚಿತ್ರಕ್ಕೆ ತಳಹದಿ ಈ ಮೇಲಿನ ಸಾಲುಗಳು. 

ಈ ಸಾಲುಗಳಿಗೆ ಅಣ್ಣಾವ್ರ ಅಭಿನಯ ನೋಡಿಯೇ ಆನಂದ ಪಡಬೇಕು.. ಆ ಕುರುಚಲು ಗಡ್ಡ.. ಕಪ್ಪು ಕೋಟು ಪ್ಯಾಂಟು.. ಮೆಲ್ಲಗೆ ಹಾರುವ ಕೂದಲು.. ಮುಖದಲ್ಲಿ ಮಾಸದ ನಗೆ.. ಜೀವನದ ಕಷ್ಟಗಳು ಹಿಂಡಿ ಹಿಪ್ಪೆ ಮಾಡುತ್ತಿದ್ದರು ಕಣ್ಣಲ್ಲಿ ಹೊಳಪು .. ಮೊಗದಲ್ಲೂ ನಗು .. ಒಮ್ಮೆಲೇ ಹಾಗೆ ಜೀವನದ ಕಷ್ಟಗಳಿಗೆ ಸೆಟೆದು ನಿಂತಾಗ.. ಕಷ್ಟಗಳು ಸೆಟೆದು ನಮ್ಮಿಂದ ದೂರ ನಿಲ್ಲುತ್ತವೆ ಅನ್ನಿಸಿಬಿಟ್ಟಿತು. 



ಅಣ್ಣಾವ್ರ ಅಭಿನಯ ಕೆಲವು ಸೂಪರ್ ಸೂಪರ್ ಅನ್ನಿಸುವ ತುಣುಕುಗಳು 
  • ಮೇಲೆ ಹೇಳಿದ ಸನ್ನಿವೇಶ 
  • ಲೀಲಾ.. ತನ್ನ ಮದುವೆಯ ಬಗ್ಗೆ ವಿಷಯ ಹೇಳಿದಾಗ, ತನ್ನ ಆಸೆಗೆ ತಣ್ಣೀರು ಬಿತ್ತು ಎಂದು ಗೊತ್ತಾದ ಮೇಲೆ, ಮೆಟ್ಟಿಲು ಹತ್ತುತ್ತಾ ಮನೆ ಕೆಲಸದ ರಾಮಯ್ಯನಿಗೆ "ಪೂರ್ ಫೆಲೋ.. ಪೂರ್ ಫೆಲ್ಲೋ.. " ಅನ್ನುತ್ತಾ ಅರ್ಧ ನಗುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡು ಹೋಗುವ ದೃಶ್ಯ 
  • ಪ್ರಭು ಲೀಲಾ ನನ್ನಲ್ಲಿ ಏನೋ ಬೇಡಲು ಬಂದಿದ್ದಾಳೆ.. ನನ್ನ ಹತ್ತಿರ ಇರುವ ವಸ್ತುವನ್ನು ಮಾತ್ರ ಕೇಳಲಿ
  • ಕಸ್ತೂರಿ ನಿವಾಸದ ವಂಶದಲ್ಲಿ ಇದುವರೆಗೂ ಇಲ್ಲ ಎಂದು ಹೇಳಿಲ್ಲ.. ನನ್ನ ಬಾಯಲ್ಲಿ ಇಲ್ಲ ಎಂದು ಹೇಳಿಸಲು ನನ್ನನ್ನು ಬದುಕಿಸಿದ್ದೀಯ ಪ್ರಭು 
  • "ಆಡಿಸಿ ನೋಡು ಬೀಳಿಸಿ ನೋಡು" ಸಂತಸ ಮತ್ತು ದುಃಖದ ಎರಡು ಹಾಡಿಗೆ ಅಭಿನಯ.. ಅದರಲ್ಲೂ ದುಃಖದ ಛಾಯೆಯ ಗೀತೆಗೆ. ಕಣ್ಣೀರನ್ನು ಒರೆಸಿಕೊಳ್ಳುತ್ತಾ ನಡೆಯುತ್ತಾ ಸಾಗುವ ದೃಶ್ಯ ಮನಕಲಕುತ್ತದೆ. 
  • ಉಂಗುರ ತೆಗೆದು ಕೊಟ್ಟ ಮೇಲೆ ಅಶ್ವಥ್ ಹತ್ತಿರ ಬಂದು.. ಅದೃಶ್ಯ ಉಂಗುರದ ಹರಳಲ್ಲಿ ಇರೋಲ್ಲ.. ಅಂತ ಹೇಳಿ ಹಣೆಯ ಮೇಲೆ ಗೆರೆ ಎಳೆದು ತೋರಿಸುತ್ತಾರೆ. ಸೂಪರ್ ಸೂಪರ್ 

ಇನ್ನು ಕೆ ಎಸ್ ಅಶ್ವಥ್ ಈ ಚಿತ್ರಕ್ಕೆ ಬಂಗಾರದ ಕಳಸ.. ಅಷ್ಟೊತ್ತಿಗೆ ಅಪಾರ ಹೆಸರು ಗಳಿಸಿದ್ದ ಈ ನಟ ರತ್ನ.. ಮನೆ ಆಳಿನ ಪಾತ್ರದಲ್ಲಿ ವೈಭವಯುತ ನಟನೆ ನೀಡಿದ್ದಾರೆ.. 
  • ಅಣ್ಣಾವ್ರು ಲೀಲಾಳ ಹತ್ತಿರ ಫೋನಿನಲ್ಲಿ ಪ್ರೀತಿಯಿಂದ ಮಾತಾಡುವಾಗ ಅಶ್ವಥ್ ಕೊಡುವ ನೋಟ
  • ಬುದ್ಧಿ.. ಉಂಗುರ ತೆಗೆಯಬಾರದಿತ್ತು.. ಎಂದು ಕಳಕಳಿಯಾಗಿ ಹೇಳುವ ಮಾತು 
  • ಊಟ ಚೆನ್ನಾಗಿತ್ತು ಅಂತ ಹೇಳಿ ತಿಂದ್ರಲ್ಲವ್ವ.. ಅದೇ ಪಾರಿವಾಳ ಮಾರಿ ಬಂದ ಹಣದಲ್ಲಿ ಸಾಮಾನು ತಂದು ಮಾಡಿದ ಅಡಿಗೆ 
  • ಮನೆ ಕಸ್ಕಂಡ್ರಿ, ಆಸ್ತಿ ಕಸ್ಕಂಡ್ರಿ, ಅಂತಸ್ತು ಕಸ್ಕಂಡ್ರಿ, ಪದವಿ ಕಸ್ಕಂಡ್ರಿ.. ಕಡೆಗೆ ಪಾರಿವಾಳ ಕಸ್ಕಳಕ್ಕೂ ಬಂದ್ಬಿಟ್ರಿ.. ಹೊಗ್ರವ್ವ ಇನ್ನೇನು ಕಸಕಳಕ್ಕೆ ಬಂದ್ರಿ.. 
  • ಜೋರಾಗಿ ಕೈ ಮುಗಿದು .. "ಇಬ್ಬರೂ ಅನಾಥರನ್ನು ತಂದು ಸಾಕಿದ್ರು.. ನೀವು ಮತ್ತು ಚಂದ್ರಪ್ಪ.. ಇಬ್ಬರೂ ಸರಿಯಾಗಿ ಮಾಡಿದ್ರಿ"
  • ಅಣ್ಣಾವ್ರು ಪಾರಿವಾಳವನ್ನು ಹದ್ದಿನ ಮೇಲೆ ಛೂ ಬಿಡಲು ಹೋದಾಗ.. ಅವರನ್ನು ತಡೆದು ಹದ್ದಿಗೆ ಕಲ್ಲು ಹೊಡೆಯುತ್ತಾ ಹೇಳುವ ಸಂಭಾಷಣೆ 
  • ಚಿತ್ರದುದ್ದಕ್ಕೂ ಬೆನ್ನು ಬಾಗಿಸಿ ನಡೆಯುತ್ತಾ ಮನೋಜ್ಞ ಅಭಿನಯ ನೀಡಿದ್ದಾರೆ. ತನ್ನ ಧಣಿಯನ್ನು ನೆರಳಂತೆ ಕಡೆಯ ತನಕ ಕಾಯುವ ಪಾತ್ರ ನಿಜಕ್ಕೂ ಅದ್ಭುತ. 
ಬಾಲಣ್ಣ ತನ್ನ ವಿಚಿತ್ರ ಸಂಭಾಷಣೆ ಮೂಲಕ ತನ್ನ ಇರುವನ್ನು ತೋರುತ್ತಾರೆ.  ಪ್ರಾಸಬದ್ಧ ಮಾತುಗಳು, ಅಂಗೀಕ ಅಭಿನಯ, ಮುಖದ ಭಾವ .  ಚಿತ್ರದ ಮೊದಲರ್ಧದಲ್ಲಿ ಮಿಂಚುತ್ತಾರೆ. ಉತ್ತಾರಾರ್ಧದಲ್ಲಿ ಮೆಲ್ಲಗೆ ಚಂದ್ರುವನ್ನು ಎತ್ತಿ ಕಟ್ಟಲು ಉಪಾಯ ಮಾಡುವ ಪಾತ್ರದಲ್ಲಿ ಮಿನುಗುತ್ತಾರೆ. 

ಕಪ್ಪು ಬಿಳುಪಿನಲ್ಲಿ ಜಯಂತಿ ಹೊಳೆಯುತ್ತಾರೆ.. ಇನ್ನು ವರ್ಣ ಜಾಲದಲ್ಲಿ ಅಬ್ಬಾ ಎಷ್ಟು ಸುಂದರ.. ಅದ್ಭುತ ಕಂಗಳು, ಭಾವ ಉಕ್ಕಿಸುವ ನಟನೆ ಇಷ್ಟವಾಗುತ್ತಾರೆ, 
ಚಿಕ್ಕ ಚೊಕ್ಕ ಪಾತ್ರದಲ್ಲಿ.. ಒಂದು ಹಾಡಿಗೆ, ಒಂದು ದೃಶ್ಯಕ್ಕೆ ಬರುವ ಆರತಿ, "ನೀ ಬಂದು ನಿಂತಾಗ" ಹಾಡಿನಲ್ಲಿ ಎಲ್ಲರ ಮನದಲ್ಲಿ ಛಾಪು ಒತ್ತಿ ಬಿಟ್ಟಿದ್ದಾರೆ. 
ರಾಜಾಶಂಕರ್ ಆ ಕಾಲದ ಉತ್ತಮ ಪೋಷಕ ನಟ, ಸ್ಪುರದ್ರೂಪಿ, ದಟ್ಟ ಹುಬ್ಬುಗಳಿಂದ ಹೆಸರಾಗಿದ್ದ ಈತ, ಅಣ್ಣಾವ್ರ ಅನೇಕ ಚಿತ್ರಗಳಲ್ಲಿ ಕಾಯಂ ನಟ. ಉತ್ತಮ ಅಭಿನಯ ನೀಡಿದ್ದಾರೆ.. ಅದರಲ್ಲೂ ತನ್ನ ತಪ್ಪಿನ ಅರಿವಾಗಿ ಅಣ್ಣಾವ್ರ ಮುಂದೆ ಕ್ಷಮೆ ಕೇಳುವ ದೃಶ್ಯದಲ್ಲಿ ಮನಗೆಲ್ಲುತ್ತಾರೆ. 

ಕಪ್ಪು ಬಿಳುಪಿನ ಆ ಕಾಲದಲ್ಲಿ ಜನರ ಮನಸ್ಸು ನಿರ್ಮಲವಾಗಿತ್ತು, ಈ ರೀತಿಯ ಚಿತ್ರ, ನಾಯಕ ಉದಾರಿ, ಧರ್ಮ ನಿಷ್ಠ, ಇಂಥಹ ಉದಾತ್ತ ಪಾತ್ರಗಳಿಂದ ಕೂಡಿದ ನಾಯಕ, ಅಥವಾ ಕಥಾವಸ್ತು ಕಡಿಮೆ ಬರುತ್ತಿದ್ದ ಕಾಲದಲ್ಲಿ ಅಚಾನಕ್ ಈ ಚಿತ್ರ ಬಂದಾಗ ಪ್ರೇಕ್ಷಕರು ಹುಚ್ಚೆದ್ದು ನೋಡಿ ಸಂತಸ ಪಟ್ಟಿದ್ದರು. ಚಿತ್ರಕಥೆಯನ್ನು ತರ್ಕದ ಕತ್ತರಿಗೆ ಸಿಳುಕಿಸಿದಾಗ ಪೇಲವ ಅನ್ನಿಸಬಹುದು. ಹಾಗೆ ನೋಡಿದರೆ ಚಲನ ಚಿತ್ರಗಳೇ ಒಂದು ಭ್ರಮೆ, ಚಿತ್ರ ವಿಚಿತ್ರ ತರ್ಕಗಳಿಗೆ ಉತ್ತರಗಳೇ ಇಲ್ಲ. 

ಈ ತರ್ಕದ ತಲೆಯನ್ನು ತೆಗೆದಿಟ್ಟು ಉತ್ತಮ ಸಂಭಾಷಣೆ, ಸಾಹಿತ್ಯ, ಹಾಡುಗಳು, ಅಭಿನಯ, ಕಣ್ಣು ಕೋರೈಸುವ ಬಣ್ಣ ಬಣ್ಣದ ಪಾತ್ರಗಳು ತೆರೆಯ ಮೇಲೆ ಬಂದು ಮನ ಬೆಳಗುವುದನ್ನು ನೋಡಲು ಖಂಡಿತ ಚಿತ್ರ ಮಂದಿರಕ್ಕೆ ಹೋಗಲೇ ಬೇಕು. 



ಕೆ ಸಿ ಎನ್ ಕುಟುಂಬ ಕನ್ನಡ ಚಿತ್ರರಂಗದಲ್ಲಿ ಸಾಧನೆಯ ಶಿಖರವನ್ನೇ ಮೂಡಿಸಿದೆ. ಅಂಥಹ ಇನ್ನೊಂದು ಪ್ರಯತ್ನ ಕಸ್ತೂರಿ ನಿವಾಸದ ಕೃತಿಯನ್ನು ಬಣ್ಣದಲ್ಲಿ ಅದ್ದಿ ತೆಗೆದದ್ದು. ಒಂದು ಅದ್ಭುತ ಶ್ರಮ ಇಡಿ ಚಿತ್ರದ ಪ್ರತಿಯೊಂದು ಅಂಚಿನಲ್ಲೂ  ನೋಡಬಹುದು. ಆ ಕಾಲದ ವರ್ಣವನ್ನು ಗಮನದಲ್ಲಿಟ್ಟುಕೊಂಡು ತಯಾರಾದ ಈ ವರ್ಣಮಯ ಶ್ರಮ ಕೊಟ್ಟ ಹಣಕ್ಕೆ ಖಂಡಿತ ಮೋಸ ಮಾಡುವುದಿಲ್ಲ. 

ಹೋಗಿ ಬನ್ನಿ ಕನ್ನಡ ಚಿತ್ರಗಳ ಅಭಿಮಾನಿಗಳೇ.. ಕಸ್ತೂರಿ ಕಪ್ಪು ನಿಜ.. ಆದರೆ ಈ ಕಸ್ತೂರಿ ವರ್ಣಮಯ... !!!