ನನ್ನ ಬಿಡಪ್ಪ ಶ್ರೀಕಾಂತಪ್ಪ.. ಪ್ರತಿ ದಿನ ಪ್ರತಿ ಕ್ಷಣ ನನ್ನ ನೆನಪಿಸಿಕೊಳ್ಳದೆ ಇರೋದಕ್ಕೆ ಆಗೋದೇ ಇಲ್ವಾ.. ನಿನ್ನ ಮಡದಿಯ ಜೊತೆ ಮಾತಾಡುವಾಗಲೂ ನಾನ್ ಆಲ್ಲಿರ್ತೀನಿ, ನಿನ್ನ ಬರಹಗಳಲ್ಲೂ ಅಲ್ಲಲ್ಲಿ ನಾ ಬರುತ್ತಲೇ ಇರುತ್ತೀನಿ.. ಅದ್ಯಾಕಪ್ಪ ನನ್ನ ಬಿಡೋಲ್ಲ..ನನ್ನ ಅದ್ಭುತ ಗೆಳೆಯ ಬಾಲಣ್ಣನ ಬಗ್ಗೆ ಬರೆಯೋದಿದೆ... ನನ್ನ ತಂದೆಯಂತಹ ಅಶ್ವಥ್ ಅವರ ಚಿತ್ರಗಳ ಬಗ್ಗೆ ಬರೆಯೋದಿದೆ. ನನ್ನ ಕೆಲವು ಚಿತ್ರಗಳಲ್ಲಿ ಅದ್ಭುತ ಅಭಿನಯ ನೀಡಿದ (ಮಯೂರ, ರಾಜ ನನ್ನ ರಾಜ, ಧ್ರುವತಾರೆ, ಎರಡು ಕನಸು.... ) ರಾಜಾನಂದ್ ಅವರ ಬಗ್ಗೆ ಬರೆಯೋದಿದೆ, ಕನ್ನಡದ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಚಿತ್ರ ಯಾತ್ರೆ ಮುಗಿಸಿದೆ, ಆದರೂ ಅವರ ಬಗ್ಗೆ ಬರೆಯೋದು ತುಂಬಾ ಇದೆ ನಿನಗೆ... ಇಷ್ಟೆಲ್ಲಾ ಬಿಟ್ಟು ನನ್ನ ಹಿಂದೆ ಮುಂದೆ ಓಡಾಡ್ತಾನೆ ಇದ್ದೀಯಲ್ಲ ಶ್ರೀ..
Saturday, April 24, 2021
ತಮ್ಮ ಇಷ್ಟವಾದ ನಟರ ಬಗ್ಗೆ ಅಣ್ಣಾವ್ರ ಮಾತುಗಳು ... ಅಣ್ಣಾವ್ರ ಜನುಮದಿನ (2021)
Monday, April 12, 2021
ಅಣ್ಣಾವ್ರು ಅಣ್ಣಾವ್ರು ಸರಳ ವಿರಳ ಮಾತುಗಳು .. ಪುಣ್ಯ ದಿನ - 2021
ಅಣ್ಣಾವ್ರೇ ನಿಮ್ಮಲ್ಲಿ ಒಂದು ಮಾತು ಕೇಳಬೇಕಿತ್ತು..
ಯಾಕಪ್ಪ ಶ್ರೀಕಾಂತ ಇವತ್ತು ಬಹಳ ತಡವಾಗಿದೆ.. ನಿನ್ನ ಬರಹವನ್ನು ಓದೋಕೆ ಅಂತ ನಾನು ಪಾರ್ವತಿ ಕಾದು ಕುಳಿತಿದ್ದೀವಿ.. !
ಅಣ್ಣಾವ್ರೇ ಇದು ದೊಡ್ಡ ಮಾತು.. ನನ್ನ ಬರಹ ನೀವು ಓದೋಕೆ ಕಾಯೋದು.. ಯಪ್ಪೋ.. ತಲೆ ಮೇಲೆ ಕೊಂಬು ಬೆಳೆಯುತ್ತೆ ಅಣ್ಣಾವ್ರೇ.. ನಿಮ್ಮ ಮೇಲಿನ ಅಭಿಮಾನ.. ನಿಮ್ಮ ಚಿತ್ರಗಳಿಂದ ನಾ ಕಲಿತ, ನಾ ಕಲಿಯುತ್ತಿರುವ ಪಾಠಗಳು ನನಗೆ ದಾರಿ ದೀವಿಗೆ ಆಗಿವೆ. ಅಂತಹ ಹಾದಿಯಲ್ಲಿ ನಾ ನೆಡೆಯಲು ಪ್ರಯತ್ನ ಪಡುತ್ತಿರುವಾಗ ನೀವು ನನ್ನ ಬರಹಕ್ಕೆ ಕಾಯುತ್ತಿರುವುದು ಎಂದಾಗ ಮೈ ಜುಮ್ ಎನ್ನಿಸುತ್ತದೆ..
ಮನದಲ್ಲಿ ನವಿರಾದ ಭಾವ ಇರುವಾಗ.. ಅಹಂ ಬರೋದಿಲ್ಲ ಕಣಪ್ಪ.. ಇರಲಿ ಅದೇನೋ ಮಾತು ಅಂದೆಯಲ್ಲ ಏನದು.. ?
ಅಣ್ಣಾವ್ರೇ ಇನ್ನೂರಕ್ಕೂ ಹೆಚ್ಚಿನ ಚಿತ್ರಗಳು, ಸಾವಿರಾರು ಹಾಡುಗಳು.. ಕೋಟಿ ಕೋಟಿ ಅಭಿಮಾನಿಗಳು.. ಅಲ್ಲಲ್ಲ ನಿಮ್ಮ ಭಾಷೆಯಲ್ಲಿ ಹೇಳೋದಾದರೆ ಅಭಿಮಾನಿ ದೇವರುಗಳು.. ನಿಮ್ಮ ಚಿತ್ರಗಳನ್ನು ನೋಡಿ ಬದುಕನ್ನು ಹಸನು ಮಾಡಿಕೊಂಡವರು.. ಇಂದಿಗೂ ನಿಮ್ಮನ್ನು ಆರಾಧ್ಯ ದೈವವಾಗಿ ಕಾಣುವವರು.. ದೇವರಂತೆ ನಿಮ್ಮನ್ನು ಪೂಜಿಸುವವರು.. ಹೀಗೆ ಸುಮಾರು ಐವತ್ತಕ್ಕೂ ಹೆಚ್ಚಿನ ವರ್ಷಗಳ ಆ ಅಭಿಮಾನದ ಸಾಗರದ ಅಲೆಗಳನ್ನು ಹೇಗೆ ನಿಭಾಯಿಸಿದಿರಿ.. ಎಲ್ಲೂ ನಿಮ್ಮ ಪಾತ್ರಗಳಲ್ಲಿಯೇ ಆಗಲಿ.. ನಿಮ್ಮ ಸಾಮಾಜಿಕ ನಡೆವಳಿಕೆಯಲ್ಲಾಗಲಿ, ಸಂಗೀತ ಕಾರ್ಯಕ್ರಮಗಳಲ್ಲಿ, ಸಂದರ್ಶನಗಳಲ್ಲಿ, ನಿಮ್ಮ ಸಹಕಲಾವಿದರ ಬಗ್ಗೆ ಮಾತಾಡುವಾಗ.. ಹೀಗೆ ಅನೇಕಾನೇಕ ಪ್ರಸಂಗಗಳಲ್ಲಿ ನಿಮ್ಮ ಮುಗ್ಧಮಾತುಗಳು , ನಿಮ್ಮ ಮುಗ್ಧ ಪ್ರೀತಿ ಎಂದಿಗೂ ಮರೆಯಾಗಿರಲಿಲ್ಲ.. ನಿಮ್ಮನ್ನು ಅಷ್ಟೆತ್ತರಕ್ಕೆ ಕೂರಿಸಿದ್ದರೂ, ಪ್ರತಿಯೊಬ್ಬ ಸಿನಿ ರಸಿಕರ ಮನದಲ್ಲಿ ಅನಭಿಷಿಕ್ತ ರಾಜನಾಗಿದ್ದರೂ ನಿಮ್ಮ ಸರಳತೆ ಮಾಯವಾಗಲಿಲ್ಲ.. ಇದರ ಬಗ್ಗೆ ಒಂದಷ್ಟು ಮಾತುಗಳನ್ನು ಹೇಳಿ ..ಇವತ್ತ್ಯಾಕೋ ನಿಮ್ಮ ಚಿತ್ರಗಳ ಬಗ್ಗೆ, ಅಭಿನಯದ ಬಗ್ಗೆ ಬಿಟ್ಟು ಬೇರೆ ಮಾತಾಡೋಣ ಅನ್ನಿಸುತ್ತಿದೆ.. !
ಶ್ರೀ.. ನಿನ್ನ ಹೀಗೆ ಕರೆಯಬಹುದಾ.. ಸುಮಾರು ವರ್ಷಗಳಿಂದ ನನ್ನ ಪುಣ್ಯದಿನದಂದು, ಹಾಗೂ ಜನುಮದಿನಕ್ಕೆ ಏನಾದರೂ ಹೊಸ ಹೊಸದಾಗಿ ಬರೆಯುತ್ತಲೇ ಇದ್ದೀಯ.. ನನ್ನ ಅಭಿನಯದ ಅಷ್ಟೂ ಚಿತ್ರಗಳ ಬಗ್ಗೆ ಬರೆಯೋಕೆ ಶುರು ಮಾಡಿದೀಯ.. ಹಾಗಾಗಿ ಆ ಸಲುಗೆಯಿಂದ ನಿನ್ನ ಶ್ರೀ ಅಂತ ಕರೆಯುತ್ತೇನೆ.. ಬೇಸರವಿಲ್ಲವೇ.. !
ಅಣ್ಣಾವ್ರೇ.. ನನ್ನ ಪ್ರೀತಿ ಮಾಡೋರು.. ನನ್ನ ಇಷ್ಟ ಪಡೋರು.. ನನ್ನ ಕರೆಯೋದೆ ಹಾಗೆ.. ಆ ಪಟ್ಟಿಯಲ್ಲಿ ನೀವು ಇದ್ದೀರಾ ಅನ್ನೋದನ್ನ ನೆನೆಸಿಕೊಂಡರೆ.. ಮೈ ಜುಮ್ ಅನ್ನಿಸುತ್ತದೆ.. ಹೇಳಿ ಅಣ್ಣಾವ್ರೇ.. !
ಶ್ರೀ.. ಬದುಕು ಒಂದು ಹೂವಿನ ಹಾಗೆ.. ನಗುವೇ ಆ ಸುಮದ ಪರಿಮಳವು.. ಅದೇ ಕಣ್ಣು ಚಿತ್ರದಲ್ಲಿ ಪಿ ಬಿ ಶ್ರೀನಿವಾಸ್ ಹಾಡಿದ ಸಾಲಿದು.. ಬಹುಶಃ ನಾ ಇದನ್ನೇ ಪಾಲಿಸಿಕೊಂಡುಬರುವಂತೆ ಆ ಭಗವಂತ ನನಗೆ ಆಜ್ಞೆ ಮಾಡಿದ ಅನ್ನಿಸುತ್ತೆ.. ಹಾಗೆ ಬದುಕಿದೆ.. ಹೂವಿನ ಆಯಸ್ಸು ಕಡಿಮೆ ಇರುತ್ತೆ.. ಆದರೆ ಅದರ ಜೀವನದ ಭಾಗದಲ್ಲಿ ಪರಿಮಳವನ್ನು ಸೂಸುತ್ತಿರುತ್ತದೆ.. ಅವರು ಇವರು ಅಂತಿಲ್ಲ.. ಆ ದೇವರು ಈ ದೇವರು ಅಂತಿಲ್ಲ .. ಎಲ್ಲರಿಗೂ ಸಲ್ಲುತ್ತದೆ.. ಮತ್ತೆ ಭಗವಂತ ಕೊಟ್ಟಿರುವ ಪರಿಮಳವನ್ನು, ಸೌಂದರ್ಯವನ್ನು ಧಾರೆಯೆರೆದು ತನ್ನ ಸುತ್ತ ಮುತ್ತಲ ತಾಣವನ್ನು, ಅದನ್ನು ತಾನು ಉಪಯೋಗಕ್ಕೆ ಬರುವ ತಾಣದ ಪಾವಿತ್ರತೆಯನ್ನು ಹೆಚ್ಚಿಸುವದಷ್ಟೇ ಅದರ ಕಾಯಕ.. ಅದನ್ನೇ ನಾನು ಪಾಲಿಸಬೇಕು ಎಂದು ನನ್ನ ಅಪ್ಪಾಜಿ ಹೇಳಿಕೊಟ್ಟಿದ್ದರು.. ಅವರೂ ಕೂಡ ಹಾಗೆ ಬದುಕಿದ್ದರು, ಅದನ್ನೇ ಪಾಲಿಸಬೇಕೆಂದು ಹೇಳಿದ್ದರು ಅಷ್ಟೇ.. ಅದೇ ಹಾದಿಯಲ್ಲಿ ನೆಡೆಯೋಕೆ ಪ್ರಯತ್ನ ಮಾಡಿದೆ ಅಷ್ಟೇ..
ಅಣ್ಣಾವ್ರೇ ಸರಳವಾದ ಮಾತು ನಿಮ್ಮದು.. ಹಾಗೆ ಸರಳವಾದ ಜೀವನ ಸೂತ್ರ.. ಆದರೆ ಇದನ್ನು ಅನುಸರಿಸುವುದು ಕಷ್ಟ ಅನಿಸೋದಿಲ್ವೇ..
ಇಲ್ಲಾ ಶ್ರೀ.. ಕಷ್ಟ ಹಾದಿಯನ್ನು ತುಳಿಯೋದರಲ್ಲಿಯೇ ಸಾಧನೆ ಇರೋದು.. ಇದನ್ನು ಮಾಸ್ಟರ್ ಪ್ಲಾನ್ ಅಂತಾರೆ.. ನನ್ನ ಚಿತ್ರ ನೀ ನನ್ನ ಗೆಲ್ಲಲಾರೆ .. ನೋಡಿದೆಯಾ ಚಿತ್ರದ ಹೆಸರು ನೀ ನನ್ನ ಗೆಲ್ಲಲಾರೆ ಅಂತಿದೆ.. ಅಂದರೆ ಭಗವಂತ ಹೇಳುತ್ತಿರುತ್ತಾನೆ.. ನೀ ನನ್ನ ಗೆಲ್ಲಲಾರೆ.. ನೀ ನಿನ್ನ ಮನವನ್ನು ಗೆದ್ದರೆ.. ನೀನು ನಿನ್ನನ್ನು ಗೆಲ್ಲಬಹುದು.. ಅಂತ.. ಅಷ್ಟೇ ಕಣಪ್ಪ.. ಹಾ.. ನೀ ನನ್ನ ಗೆಲ್ಲಲಾರೆ ಚಿತ್ರದಲ್ಲಿ ಅಂತಿಮ ದೃಶ್ಯಗಳಲ್ಲಿ ನನ್ನ ನೆಚ್ಚಿನ ಸಹನಟ.. ತೂಗುದೀಪ ಹೇಳುತ್ತಾರೆ.. "ನೋಡಿದೆಯಾ ನನ್ನ ಮಾಸ್ಟರ್ ಪ್ಲಾನ್ ಹೇಗಿದೆ" ಅಂತ.. ಆಗ ನಮ್ಮ ಚಿ ಉದಯಶಂಕರ್ ಬರೆದಿರುವ ಸಂಭಾಷಣೆ ತುಣುಕು ನೋಡು..
ಕಪ್ಪೆನ ನುಂಗೋಕೆ ಹಾವು ಕಾಯ್ತಾ ಇರುತ್ತಂತೆ
ಹಾವನ್ನು ತಿನ್ನೋಕೆ ಗರುಡ ಹಾರಾಡ್ತಾ ಇರುತ್ತಂತೆ
ಆ ಗರುಡನ ಮೇಲೆ ಒಬ್ಬ ಕೂತು ನೋಡ್ತಾ ಇರ್ತಾನಂತೆ... ಅವನದು ಮಾಸ್ಟರ್ ಕಣೋ.. ನಂದು ನಿಂದು ಅಲ್ಲ..
![]() |
| ಅವರ ಭಂಗಿಯನ್ನು .. ಸರಳ ಜೀವನವನ್ನು ಅನುಸರಿಸುವ ಒಂದು ಪ್ರಯತ್ನ |
![]() |
| ಅಣ್ಣಾವ್ರ ಗಾಜನೂರು ಮನೆಗೆ ಭೇಟಿ ಕೊಟ್ಟಾಗ.. ! |
Tuesday, December 1, 2020
ಪುಟ್ಟಣ್ಣ ಅನ್ನುವ ದೊಡ್ಡ ನಿರ್ದೇಶಕರ ದೊಡ್ಡಣ್ಣ ಅವರ ಜನುಮದಿನ!!!
"ಮಸಣದ ಹೂವು ಸಿನಿಮಾ ಮುಗಿಸಿದ್ದರೇ ಇನ್ನೊಂದಷ್ಟು ಸಿನಿಮಾ ತೆಗೆಯುವ ಆಸೆ ಇತ್ತು.. ಇನ್ನಷ್ಟು ಕಾದಂಬರಿಗಳನ್ನು ಕೊಡುವ ಮನಸ್ಸು ಇತ್ತು.. ಆದರೆ ಆ ಜಗನ್ಮಾತೆ ಪುಟ್ಟಣ್ಣ ಬಂದು ಬಿಡು ಅಂದಳು ಹೊರಟೆ ಬಿಟ್ಟೆ ಶ್ರೀ.. "
ಬೆಳಗಿನ ಜಾವ ಈ ಮಾತುಗಳು ನನ್ನ ಕಿವಿಯಲ್ಲಿ ಯಾರೋ ಹೇಳುತ್ತಿದ್ದಾರೆ ಅನ್ನುವ ಹಾಗೆ ಕನಸು..
ಅರೆ ಹೌದು ನನ್ನ ನೆಚ್ಚಿನ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರದ್ದೇ ಧ್ವನಿ.. ಅದೇ ಎಣ್ಣೆ ಹಾಕಿ ಬಾಚಿದ ಕಪ್ಪು ಬಿಳಿ ತಲೆಗೂದಲು.. ಹಣೆಯಲ್ಲಿ ವಿಭೂತಿ.. ಅದರ ಮಧ್ಯೆ ಕುಂಕುಮ.. ಆಗ ತಾನೇ ಸಂಧ್ಯಾವಂದನೆ ಮುಗಿಸಿ ಬಂದಿದ್ದರು..
ನನ್ನ ನೆಚ್ಚಿನ ವ್ಯಕ್ತಿಯನ್ನು ಬೆಳಿಗ್ಗೆಯೇ ನೋಡಿ ಖುಷಿಯೋ ಖುಷಿ. "ಪುಟ್ಟಣ್ಣ ಸರ್.. ನಿಮ್ಮ ಚಿತ್ರಗಳಿಂದ ಪ್ರಭಾವಕ್ಕೆ ಒಳಗಾದವನು ನಾನು. ನಿಮ್ಮ ಚಿತ್ರಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.. ನಿಮ್ಮ ಜೊತೆ ಒಂದಷ್ಟು ಮಾತಾಡಬೇಕಿತ್ತು.. "
"ಶ್ರೀ ಮಾತಾಡೋಣ.. ಈಗ ನೀನು ಸಂಧ್ಯಾವಂದನೆ ಮಾಡೋಕೆ ಹೊರಟಿದ್ದೀಯ... ನಾನು ಇಲ್ಲಿಯೇ ನಿನ್ನ ಮನೆಯ ಬಾಲ್ಕನ್ನಿಯಲಿ ಕುಳಿತು ನೀ ಬರೆದ ನನ್ನ ಇಪ್ಪತ್ತನಾಲ್ಕು ಚಿತ್ರಗಳ ಬ್ಲಾಗ್ ಓದುತ್ತಾ ಇರುತ್ತೇನೆ.. ಮೊದಲು ಸಂಧ್ಯಾವಂದನೆ ಮುಗಿಸು.. ಆ ಗಾಯತ್ರಿ ದೇವಿ ನಿನಗೆ ಒಳ್ಳೆಯದನ್ನೇ ಮಾಡುತಾಳೆ.. "
"ಸರಿ ಪುಟ್ಟಣ್ಣ ಸರ್.. "ಎಂದು ಹೇಳಿ ಸಂಧ್ಯಾವಂದನೆ ಮಾಡೋಕೆ ಕುಳಿತೆ..
ನಾ ಬರುವ ಹೊತ್ತಿಗೆ.. ಅವರು ಅಷ್ಟು ಲೇಖನಗಳನ್ನು ಓದಿದ್ದರು.. ಅವರ ಜನುಮದಿನ ಮತ್ತು ಲಾಗ್ ಔಟ್ ಆದ ದಿನಗಳ ಬಗ್ಗೆ ಬರೆದಿದ್ದ ಲೇಖನಗಳನ್ನು ಓದಿದ್ದರು..
"ಶ್ರೀ ಎಷ್ಟು ಚೆನ್ನಾಗಿ ಬರೆದಿದ್ದೀಯ.. ನನ್ನ ಚಿತ್ರಗಳನ್ನು ಉತ್ತಮವಾಗಿ ವಿಮರ್ಶೆ ಮಾಡಿದ್ದೀಯಾ.. ಧನ್ಯವಾದಗಳು"
"ಪುಟ್ಟಣ್ಣ ಸರ್.. ಅದು ದೊಡ್ಡ ಮಾತು.. ವಿಮರ್ಶೆ ಖಂಡಿತ ಅಲ್ಲ ಅನಿಸುತ್ತೆ.. ನಿಮ್ಮ ಚಿತ್ರಗಳನ್ನು ವಿಮರ್ಶೆ ಮಾಡಲು ಇಬ್ಬರಿಗೆ ಮಾತ್ರ ಸಾಧ್ಯ.. "
"ಹೌದಾ ಯಾರಪ್ಪ ಆ ಇಬ್ಬರು"
"ಒಬ್ಬರು ಜಗನ್ಮಾತೆ.. ಇನ್ನೊಬ್ಬರು ನೀವು... "
ಜೋರಾಗಿ ನಕ್ಕರು.... "ಸರಿ ಏನೋ ಮಾತಾಡಬೇಕು ಅಂದೆಯಲ್ಲ ಏನಪ್ಪಾ ಅದು.."
"ಪುಟ್ಟಣ್ಣ ಸರ್.. ನೀವು ಚಿತ್ರಗಳಿಗೆ ನೆಡೆಸುವ ತಯಾರಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ.. ನಾ ಮಾಡುವ ಕೆಲಸಗಳಲ್ಲಿಯೂ ಕೂಡ ಅದೇ ರೀತಿಯ ತಯಾರಿ ಮಾಡಿಕೊಳ್ಳಬೇಕು.. ಅದನ್ನು ಕಲಿತುಕೊಳ್ಳಬೇಕು ಎನ್ನುವ ಹಂಬಲ ದಯಮಾಡಿ ಅದರ ಬಗ್ಗೆ ಒಂದೆರಡು ಮಾತುಗಳನ್ನು ಹೇಳುತ್ತೀರಾ.."
"ಆಗಲಿ ಶ್ರೀ.. ನನ್ನ ಚಿತ್ರಗಳು ಅನ್ನೋದಕ್ಕಿಂತ.. ಕನ್ನಡ ಚಿತ್ರಗಳ ಬಗ್ಗೆ ನಿನಗಿರುವ ಅಭಿಮಾನಕ್ಕೆ ನಾ ನಮಸ್ಕರಿಸುತ್ತೇನೆ.. ಶ್ರೀ ಯಾವುದೇ ಚಿತ್ರ ಮಾಡಬೇಕು ಎನ್ನುವ ಮನಸ್ಸು ಬರೋದಕ್ಕೆ ನಾ ಸಿದ್ಧಗೊಳ್ಳುತ್ತಿದ್ದ ರೀತಿ ಹೀಗಿದೆ.. "
"ಮೊದಲು ನೀನು ಏನು ಮಾಡಬೇಕು ಎಂದು ನಿರ್ಧರಿಸು ನಿರ್ಧರಿಸದ ಮೇಲೆ ಮತ್ತೆ ಆ ನಿರ್ಧಾರದಲ್ಲಿ ಬದಲಾವಣೆ ತರಬೇಡ ನಿನ್ನ ತಲೆಯೊಳಗೆ ಆ ಯೋಜನೆ ಪೂರ್ಣ ಸಿದ್ಧವಾಗಬೇಕು ಒಮ್ಮೆ ಸಿದ್ಧವಾದ ಮೇಲೆ.. ಕಥಾವಸ್ತುವನ್ನು ಕೈಗೆತ್ತಿಕೊ ಅದರಲ್ಲಿನ ಒಳ್ಳೆಯ ಅಂಶಗಳನ್ನು ಪಟ್ಟಿ ಮಾಡಿಕೊಅದಕ್ಕೆ ಕಥಾರೂಪ ಕೊಡು.. ಕಥಾರೂಪಕ್ಕೆ ಚಿತ್ರಕತೆಯ ಚೌಕಟ್ಟು ಕೊಡು ಈ ನಿನ್ನ ತಲೆಯೊಳಗಿರುವ ಯೋಜನೆಗೆ ಒಂದು ಚೌಕಟ್ಟು ಸಿಕ್ಕ ಹಾಗೆ ಆಯ್ತು ಇನ್ನು ಮುಂದೆ ಮಾಡಬೇಕಿರುವುದು ಆ ಚೌಕಟ್ಟಿನೊಳಗೆ ಪಾತ್ರಗಳನ್ನು ಕೂರಿಸುವುದುಆ ಪಾತ್ರಗಳಿಗೆ ಸರಿಯಾದ ನಟ ನಟಿಯರನ್ನು ಆಯ್ಕೆ ಮಾಡಿಕೊ ನಂತರ ಬರುವುದು ಸಂಭಾಷಣೆ.. ಸಿನಿಮಾಗಳಿಗೆ ಹಾಡು ಬೇಕೇ ಹೊರತು.. ಹಾಡುಗಳಿಗೆ ಸಿನಿಮಾ ಅಲ್ಲ.. ಹಾಗಾಗಿ ಸನ್ನಿವೇಶವನ್ನು, ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಂತಹ ಹಾಡುಗಳನ್ನು ಸಿದ್ಧ ಮಾಡಿಕೊ .. ಅದಕ್ಕೆ ಸಂಗೀತ ನಿರ್ದೇಶಕರು, ಸಾಹಿತಿಗಳು ನಿನ್ನ ಕೈಗೆ ಕೈಯನ್ನುಜೋಡಿಸುತ್ತಾರೆ.. ಇಷ್ಟು ಆದ ಮೇಲೆ.. ಒಂದಷ್ಟು ಹೊತ್ತು, ದಿನಗಳನ್ನು ಬಿಟ್ಟು ಬಿಡು.. ಆ ದಿನಗಳಲ್ಲಿ ಪ್ರತಿ ದೃಶ್ಯಗಳನ್ನು ಚಿತ್ರಿಸುವ ರೀತಿ, ಸ್ಥಳ, ಹಗಲು, ಇರುಳು, ಮಳೆ, ಬಿಸಿಲು, ಚಳಿ ಇವನ್ನೆಲ್ಲ ಹೇಗೆ ಉಪಯೋಗಿಸಬೇಕು ಎನ್ನುವುದನ್ನು ಪಟ್ಟಿ ಮಾಡಿಕೊ..
ಈಗ ನಿನ್ನ ತಲೆಯೊಳಗೆ ಇಡೀ ಚಿತ್ರ ಸಿದ್ಧವಾಗಿದೆ.. ಇನ್ನು ಮಾಡಬೇಕಿರುವುದು ತಲೆಯೊಳಗಿರುವುದನ್ನು ಕ್ಯಾಮೆರಾದೊಳಗೆ ತರುವುದು.. ಇಷ್ಟು ಮಾಡಿದರೆ ನಿನ್ನ ಚಿತ್ರ ಗೆದ್ದಂತೆ..
ಇವಿಷ್ಟು ನನ್ನ ಬೆಳ್ಳಿಮೋಡ ದಿನದಿಂದ ಮಸಣದ ಹೂವಿನ ಅರ್ಧ ಚಿತ್ರದ ತನಕ ನಾ ಪಾಲಿಸಿಕೊಂಡು ಬಂದ ಜಗನ್ಮಾತೆ ಹೇಳಿಕೊಟ್ಟ ಪಾಠಗಳು.. ಒಂದು ಚೂರು ಬದಲಾವಣೆ ಮಾಡಿಕೊಳ್ಳಲಿಲ್ಲ.. ಕೆಲವು ಚಿತ್ರಗಳು ಗೆದ್ದವು.. ಕೆಲವು ಚಿತ್ರಗಳು ಬಿದ್ದವು.. ಆದರೆ ಚಿತ್ರರಸಿಕರಿಗೆ ನನ್ನ ಎಲ್ಲಾ ಚಿತ್ರಗಳು ರತ್ನಗಳಾಗಿ ಉಳಿದಿದ್ದು ಸೋಜಿಗ ಅನಿಸುತ್ತಿದೆ.. "
"ಪುಟ್ಟಣ್ಣ ಸರ್.. ಅದ್ಭುತ ಮಾತುಗಳು.. ನಿಮ್ಮ ಜಗನ್ಮಾತೆ ಹೇಳಿಕೊಟ್ಟಿದ್ದನ್ನು ಪಾಲಿಸಿ ಚಿತ್ರರತ್ನಗಳನ್ನು ಕೊಟ್ಟಿರಿ.. ನೀವು ಹೇಳಿದ ಚಿತ್ರ ತಯಾರಿಕೆಯ ಸಿದ್ಧತೆಗಳನ್ನೇ ನಾನು ನನ್ನ ಕೆಲಸಗಳು, ಯೋಜನೆಗಳು, ಮತ್ತು ಯೋಚನೆಗಳಿಗೆ ಹೊಂದಿಸಿಕೊಂಡು ಮುಂದುವರೆಯುತ್ತೇನೆ.. ನಿಮ್ಮ ಆಶೀರ್ವಾದವಿರಲಿ.. "
"ಶ್ರೀ.. ನಿನಗೆ ಖಂಡಿತ ಶುಭವಾಗುತ್ತೆ.. ನೆಡೆಯುವ ಹಾದಿ ನಮಗೆ ಸ್ಪಷ್ಟವಿದ್ದಾಗ ಗೆಲುವು, ಸೋಲು, ಜಯ, ಅಪಜಯಗಳ ಗೊಂದಲ ನಮ್ಮ ತಲೆಗೆ ತಟ್ಟುವುದೇ ಇಲ್ಲ.. ಜೊತೆಗೆ ಯಶಸ್ಸು ಸೋಲು ತಲೆಗೆ ಹೋಗದೆ.. ಅದರಿಂದ ಪಾಠ ಕಲಿಯುತ್ತ ಹೋದಾಗ ಜೀವನ ಆಗಸದಲ್ಲಿ ಸದಾ ಬೆಳ್ಳಿ ಮೋಡ ಇದ್ದೆ ಇರುತ್ತದೆ.. "
ಪ್ರವರ ಹೇಳಿ ಪುಟ್ಟಣ್ಣನವರಿಗೆ ನಮಸ್ಕರಿಸಿದೆ.. "ಶತಮಾನಂಭವತಿ ಶತಾಯುಹ್ ಪುರುಷಃ ಶತೇಂದ್ರಿ ಯೈ ಪ್ರತಿತಿಷ್ಠತಿ"
"ಶ್ರೀ ಶ್ರೀ.. ತಡವಾಗ್ತಿದೆ ಆಫೀಸಿಗೆ ಹೋಗೋಲ್ವ.. ಏಳಿ ಏಳಿ" ಅಂತ ಅಲುಗಾಡಿಸಿದಾಗ ಎಚ್ಚರ..
ಆಹಾ ಇಂತಹ ಸುಂದರ ಕನಸ್ಸು ನನಸಾಗಿದ್ದರೆ ಎಷ್ಟು ಚೆನ್ನಾ ಅನಿಸಿತ್ತು.. ಆದರೆ ನಿರ್ದೇಶಕರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಆಶೀರ್ವಾದ ಈ ಕರುನಾಡಿನ ಚಿತ್ರ ರಸಿಕರ ಮೇಲೆ ಸದಾ ಇರುತ್ತದೆ ಎನ್ನುವ ಮಾತು ಮನಸ್ಸಿಗೆ ಬಂದು ಸಮಾಧಾನ ಆಯ್ತು..
ಇಂದು ಪುಟ್ಟಣ್ಣವರು ಧರೆಗಿಳಿದ ದಿನ.. ಆ ಜಗನ್ಮಾತೆ ಕರುನಾಡಿಗೆ ಬಳುವಳಿಯಾಗಿ ಕೊಟ್ಟ ಅತಿ ದೊಡ್ಡ ವರ ಇವರು...
Thursday, October 22, 2020
ಜೀವನದ ಕಡಲಿನಲ್ಲಿ ತರಂಗಗಳ ಮೇಲಿನ ಸವಾರಿ ಜೀವನ ತರಂಗ (1963) (ಅಣ್ಣಾವ್ರ ಚಿತ್ರ ೩೯ / ೨೦೭)
ಜೀವನ ಒಂದು ಕಡಲು ಎನ್ನುವುದಾದರೆ ಅಲ್ಲಿ ಏಳುವ ತೆರೆಗಳು ಬದುಕಿನ ಘಟನೆಗಳು ಎನ್ನಬಹುದು.. ಕೆಲವೊಂದು ದೊಡ್ಡದಾದ ತೆರೆಗಳಾದರೆ ಕೆಲವು ಪುಟ್ಟದಾಗಿ ಎದ್ದು ಹಾಗೆ ಸಾಗಿಬಿಡುತ್ತವೆ..
ಸುಂದರ ಕುಟುಂಬದಲ್ಲಿ ಬೇಡದ ಒಂದು ಅಲೆ ಎದ್ದಾಗ ಬದುಕಿನ ದೋಣಿಯನ್ನು ದಿಕ್ಕು ತಪ್ಪಿಸಿ ಅನಾಹುತಕ್ಕೆ ಎಡೆಮಾಡಿಕೊಡುತ್ತದೆ ಎನ್ನುವ ಸಂದೇಶ ಸಾರುವ ಈ ಚಿತ್ರವೇ ಜೀವನ ತರಂಗ.
ಡಿಕ್ಕಿ ಮಾಧವರಾವ್, ಅಶ್ವಥ್ ಹಾಗೂ ರಾಜ್ ಕುಮಾರ್ ಅಣ್ಣ ತಮ್ಮಂದಿರು. ಅಶ್ವಥ್ ಪಟ್ಟಣದಲ್ಲಿ ವೈದ್ಯರಾಗಿ ಸ್ಥಿತಿವಂತರಾಗಿರುತ್ತಾರೆ.. ಅವರ ಸಹಾಯದ ಮೇಲೆ ಹಳ್ಳಿಯಲ್ಲಿನ ಅವರ ಅಣ್ಣನ ಕುಟುಂಬ ನಿಂತಿರುತ್ತದೆ.
ಆದರೆ ಅಶ್ವಥ್ ಅವರ ಹೆಂಡತಿ ಆದವಾನಿ ಲಕ್ಷ್ಮೀದೇವಿ ಈ ಸಂಸಾರದಲ್ಲಿ ಹುಳಿಹಿಂಡುವ ಕೆಲಸ ಮಾಡುತ್ತಾರೆ.. ಹಳ್ಳಿಯಿಂದ ಬಂದ ಯಾವ ಸಹಾಯ ಕೇಳುವ ಪತ್ರವನ್ನು ತನ್ನ ಪತಿರಾಯನಿಗೆ ಹೇಳದೆ ಮುಚ್ಚಿಡುತ್ತಾರೆ.
ಸಹಾಯವಿಲ್ಲದೆ ತಂಗಿ ಮದುವೆ ನಿಂತುಹೋಗುತ್ತದೆ.. ಅಣ್ಣನ ಕುಟುಂಬ ಮದುವೆಗೆ ಮಾಡಿದ್ದ ಸಾಲದ ಭಾದೆ ಹೆಚ್ಚಾಗಿ... ರಾಜಕುಮಾರ್ ಪಟ್ಟಣಕ್ಕೆ ಹೋಗಿ ಕೆಲಸ ಹುಡುಕಿಕೊಂಡು ತನ್ನ ಅಣ್ಣನ ಸಂಸಾರವನ್ನು ಎತ್ತಿಹಿಡಿಯುತ್ತಾರೆ. ಆದರೆ ಅಷ್ಟರಲ್ಲಿ ತಂಗಿ ಗೌರಿ ಮನೆ ಬಿಟ್ಟು ಹೋಗುತ್ತಾಳೆ..
ಇತ್ತ ಪಟ್ಟಣದಲ್ಲಿ ರಾಜಕುಮಾರ್ ಲೀಲಾವತಿ ಅವರ ಅಪ್ಪನ ಆಫೀಸಿನಲ್ಲಿ ಕೆಲಸ ಮಾಡಲು ಶುರುಮಾಡಿ, ಹಾಗೆ ಲೀಲಾವತಿ ಮತ್ತು ರಾಜಕುಮಾರ್ ಪ್ರೀತಿಸಲು ಶುರು ಮಾಡುತ್ತಾರೆ.
ಇತ್ತ ಗೌರಿಯ ಗಂಡ ಆಸ್ತಿಯ ದುರಾಸೆಯಿಂದ, ಬಾಲಕೃಷ್ಣನ ಸಹಾಯ ಪಡೆದು, ಲೀಲಾವತಿಯನ್ನು ಮದುವೆಯಾಗಿ ಆಸ್ತಿ ಹೊಡೆಯುವ ಉಪಾಯ ಮಾಡಿರುತ್ತಾರೆ..
ಆದರೆ ಭಗವಂತ ಎಲ್ಲಾ ಕೆಟ್ಟ ನೆಡೆಗೂ ಒಂದು ಇಟ್ಟಿರುತ್ತಾನೆ..
ಆದವಾನಿ ಲಕ್ಷ್ಮೀದೇವಿಯವರ ದುರ್ಗುಣದ ಕತೆಯನ್ನು ಅರಿತು .. ಹೆಂಡತಿಗೆ ಅಶ್ವಥ್ ಛೀಮಾರಿ ಹಾಕುತ್ತಾರೆ. ಬುದ್ದಿ ಬರುತ್ತದೆ..
ಗೌರಿ ತನ್ನ ಪತಿರಾಯನ ಬಗ್ಗೆ ಲೀಲಾವತಿಗೆ ಹೇಳಿ.. ಮದುವೆಯನ್ನು ನಿಲ್ಲಿಸುವ ಪ್ರಯತ್ನಕ್ಕೆ ಬಾಲಕೃಷ್ಣ ಮತ್ತು ರಾಜಾಶಂಕರ್ ಅಡ್ಡ ಬರುತ್ತಾರೆ.. ಈ ವಿಷಯ ರಾಜಕುಮಾರ್ ಅವರಿಗೆ ತಿಳಿದು ಎಲ್ಲವನ್ನೂ ಸರಿ ಮಾಡುತ್ತಾರೆ.
ಇಡೀ ಕತೆಯನ್ನು ಚಿತ್ರಕತೆ ರಚಿಸಿ ಸರಳವಾಗಿ ನಿರ್ದೇಶನ ಮಾಡಿದ್ದಾರೆ ನಿರ್ದೇಶಕ ಜಿ ಬಂಗಾರ್ ರಾಜ್.. ಸಂಭಾಷಣೆ ಹಾಗೂ ಹಾಡುಗಳ ಹೊಣೆಯನ್ನು ಎಸ್ ಕೆ ಕರೀಂಖಾನ್ ಹೊತ್ತಿದ್ದಾರೆ. ಪಿ ಬಿ ಶ್ರೀನಿವಾಸ್, ಎಸ್ ಜಾನಕಿ ಗಾಯನದ ಜವಾಬ್ಧಾರಿ ಹೊತ್ತಿದ್ದಾರೆ.
ಅಭಿನಯಿಸಿದ ಪ್ರತಿಕಲಾವಿದರು ಅತಿ ಪ್ರಶಂಸನೀಯ ನೀಡಿದ್ದಾರೆ.
ಡಿಕ್ಕಿ ಮಾಧವರಾವ್ ಅಣ್ಣನ ಪಾತ್ರದಲ್ಲಿ ದಯನೀಯ ಪರಿಸ್ಥಿತಿಯನ್ನು ನಿಭಾಯಿಸುವ ಪಾತ್ರ ಯಶಸ್ವಿಯಾಗಿದ್ದಾರೆ. ಆತನ ಮಡದಿಯಾಗಿ ಜಯಶ್ರೀ ಉತ್ತಮ ಅಭಿನಯ ನೀಡಿದ್ದಾರೆ. ಅವರ ತಮ್ಮನಾಗಿ ಅಶ್ವಥ್ ವೈದ್ಯರಾಗಿ ಅದಕ್ಕೆ ಬೇಕಾದ ಘನತೆ ತಂದುಕೊಟ್ಟಿದ್ದಾರೆ.
ದುರಾಸೆಯ ಪತಿರಾಯನಾಗಿ ಅಂತ್ಯದಲ್ಲಿ ತನ್ನ ತಪ್ಪು ತಿದ್ದಿಕೊಳ್ಳುವ ಪಾತ್ರದಲ್ಲಿ ರಾಜಾಶಂಕರ್ ಗಮನಸೆಳೆಯುತ್ತಾರೆ.
ಹಾಸ್ಯಕ್ಕೆ ನರಸಿಂಹರಾಜು ಇದ್ದಾರೆ .. ಅವರಿಗೆ ಜೊತೆಯಾಗಿ ಅಪ್ಪನ ಪಾತ್ರದಲ್ಲಿ ಬಾಲಕೃಷ್ಣ ಹಾಗೂ ತಾಯಿಯಾಗಿ ರಮಾದೇವಿ ತುಸು ಹಾಸ್ಯ ತುಂಬಿದ್ದಾರೆ. ಪೈಲ್ವಾನ್ ಪಾತ್ರದಲ್ಲಿ ನರಸಿಂಹರಾಜುವನ್ನು ಕಾಡುವ ಹನುಮಂತಾಚಾರ್ ಇಷ್ಟವಾಗುತ್ತಾರೆ.
ನಾಯಕಿಯಾಗಿ ಲೀಲಾವತಿ ಪ್ರೀತಿಯಿಂದ ಒಮ್ಮೆ ಕಂಡರೆ.. ಇನ್ನೊಮ್ಮೆ ಅಂತಸ್ತಿನ ಗತ್ತು ತೋರಿಸುತ್ತಾರೆ.
ಮನೆಮುರುಕಿಯ ಪಾತ್ರದಲ್ಲಿ ಆದವಾನಿ ಲಕ್ಷ್ಮೀದೇವಿ ಘಟವಾಣಿಯಾಗಿ ಅಭಿನಯಿಸಿದ್ದಾರೆ.
ಚಿತ್ರದ ನಾಯಕ ರಾಜಕುಮಾರ್ ಅವರ ಅಭಿನಯ ತುಂಬಾ ಸಹಜವಾಗಿದೆ. ಅಣ್ಣನ ಪ್ರೀತಿಯ ತಮ್ಮನಾಗಿ, ಮನೆಯ ಹೊಣೆಗಾರಿಕೆಯನ್ನು ಹೊತ್ತು ಹಳ್ಳಿಬಿಟ್ಟು ಪಟ್ಟಣಕ್ಕೆ ಬಂದಾಗ ಪಟ್ಟಣದ ನೆಡುವಳಿಕೆಯನ್ನು ಸೊಗಸಾಗಿ ಅಭಿನಯಿಸಿದ್ದಾರೆ. ತನ್ನ ಚಿಕ್ಕ ಅತ್ತಿಗೆ ಆದವಾನಿ ಲಕ್ಷ್ಮೀದೇವಿಯವರ ಹತ್ತಿರ ಕಿತ್ತಾಡುವಾಗಲೂ, ಅಣ್ಣ ಅಶ್ವಥ್ ಅವರ ಹತ್ತಿರ ನಿಷ್ಠುರವಾಗಿ ಮಾತಾಡುವಾಗಲೂ, ತನ್ನ ದೊಡ್ಡಣ್ಣ ಅತ್ತಿಗೆಯವರಿಗೆ ಸಮಾಧಾನ ಹೇಳುತ್ತಾ, ಮನೆಯ ಹೊಣೆಗಾರಿಕೆಯನ್ನು ನಾ ಹೊರುವೆ ನೀವು ಸಮಾಧಾನದಿಂದಿರಿ ಎಂದು ಸಾಂತ್ವನ ಹೇಳುವ ಪಾತ್ರ, ಮುರಿದುಬಿದ್ದು ಮದುವೆಯಿಂದ ನೊಂದಿರುವ ತಂಗಿಗೆ ಸಮಾಧಾನ ಹೇಳಿ ಪಟ್ಟಣಕ್ಕೆ ಹೊರಡುವಾಗ .. ಪಟ್ಟಣದಲ್ಲಿ ನರಸಿಂಹರಾಜು ಅವರ ಜೊತೆ ಸೇರಿಕೊಂಡು ಎಲ್ಲವನ್ನು ಸರಿ ಮಾಡುವ ಅಭಿನಯ.. ರಾಜಕುಮಾರ್ ಮನಸೆಳೆಯುತ್ತಾರೆ.
ಎಲ್ಲರ ಜೊತೆ ಅಭಿನಯಿಸುತ್ತಲೇ ತನ್ನ ವಿಶಿಷ್ಟ ಛಾಪು ಒತ್ತುವ ರಾಜಕುಮಾರ್ ಇಷ್ಟವಾಗುತ್ತಾರೆ.
ಈ ಚಿತ್ರದ ಕೆಲವು ತುಣುಕುಗಳು ನಿಮಗಾಗಿ..
Thursday, September 17, 2020
ಸದ್ದಿಲ್ಲದೇ ಮಾಡುವ ಕೆಲವು ಒಳ್ಳೆಯ ಕೆಲಸಗಳ ಸಿನಿಮಾ ಗೌರಿ (1963) (ಅಣ್ಣಾವ್ರ ಚಿತ್ರ ೩೮ / ೨೦೭)
ದೀಪ ಉರಿಯಲು ಗಾಳಿ ಬೇಕು.. ಹೆಚ್ಚಾದರೆ ಆರಿ ಹೋಗುತ್ತದೆ..
Thursday, July 30, 2020
ಬೆನ್ನಲ್ಲಿ ಬಿದ್ದವರನ್ನು ಕಾಪಾಡುವ ರತ್ನವೇ ಕನ್ಯಾರತ್ನ (1963) (ಅಣ್ಣಾವ್ರ ಚಿತ್ರ ೩೭ / ೨೦೭)
ಅಂತಹ ಚಿತ್ರಸರಣಿಯಲ್ಲಿ ಕಾಣಿಸಿದ್ದು ಕನ್ಯಾರತ್ನ.
ಡಿ ಬಿ ಎನ್ ಪ್ರೊಡಕ್ಷನ್ಸ್ ಅರ್ಥಾತ್ ಡಿ ಬಿ ನಾರಾಯಣ ಅವರ ನಿರ್ಮಾಣದಲ್ಲಿ ಮೂಡಿ ಬಂದ ಚಿತ್ರವನ್ನು ಜೆ ಡಿ ತೋಟಾನ್ ನಿರ್ದೇಶಿಸಿದ್ದಾರೆ.
ವಿಜಯನಾರಸಿಂಹ ಮತ್ತು ಚಿ ಸದಾಶಿವಯ್ಯ ಅವರ ರಚನೆಗೆ ಹಾಡುಗಳನ್ನು ಕಣಗಾಲ್ ಪ್ರಭಾಕರ್ ಶಾಸ್ತ್ರೀ, ಕು ರಾ ಸೀತಾರಾಮ ಶಾಸ್ತ್ರಿ, ಚಿ ಸದಾಶಿವಯ್ಯ ಮತ್ತು ವಿಜಯನಾರಸಿಂಹ ಅವರುಗಳು ರಚಿಸಿದ್ದಾರೆ.
ಸಂಗೀತ ಜಿ ಕೆ ವೆಂಕಟೇಶ್ ಅವರದ್ದು.. ಗಾಯನ ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಟಿ. ಎ ಮೋತಿ ಅವರುಗಳದ್ದು.
ಎಂ ಕೆ ರಾಜು ಅವರ ಛಾಯಾಗ್ರಹಣವಿದ್ದ ಈ ಚಿತ್ರ ಕಲಾವಿದರ ಸಶಕ್ತ ಅಭಿನಯದಿಂದ ನೋಡಿಸಿಕೊಂಡು ಹೋಗುತ್ತದೆ.
ಆಗಿನ ಕಾಲದಲ್ಲಿ ಹಳ್ಳಿಯಲ್ಲಿ ಓದೋಕೆ ಅವಕಾಶ ಹೆಚ್ಚು ಇರದ ಕಾರಣ, ಪಟ್ಟಣದಲ್ಲಿ ಓದುವುದು ಮಾಮೂಲು ಅಂತಹ ಕಾಲೇಜು ಓದುವ ಹುಡುಗನಾಗಿ ರಾಜ್ ಕುಮಾರ್ ಅವರ ಅಭಿನಯ ಲವಲವಿಕೆಯಿಂದ ಕೂಡಿದೆ. ಮನೆಯಲ್ಲಿ ಬಡತನವಿದ್ದರೂ ಅದನ್ನು ಲೆಕ್ಕಿಸದೆ, ಮನೆಯಿಂದ ಹಠಮಾಡಿ ದುಡ್ಡು ತರಿಸಿಕೊಂಡು, ಮೋಜು ಮಾಡುವ ಹುಡುಗನಾಗಿ ರಾಜ್ ಗಮನಸೆಳೆಯುತ್ತಾರೆ.
ಓದುವುದನ್ನು ಬಿಟ್ಟು, ಪ್ರೀತಿ ಮಾಡುತ್ತಾ, ನಾಯಕಿ ಲೀಲಾವತಿಯನ್ನು ಮದುವೆಯಾಗಳು ತಯಾರಾಗುತ್ತಾರೆ.
ಆದರೆ ಅವರ ತಾಯಿಗೆ ಇವರ ಮೋಜಿನ ವಿಚಾರ ಗೊತ್ತಾಗಿ, ಓದಿಗಾಗಿ ಮಾಡಿದ ಸಾಲವನ್ನು ತೀರಿಸುವ ಚಿಂತೆಯಿಂದಾಗಿ ಹಾಸಿಗೆ ಹಿಡಿದು ಅಸು ನೀಗಿದ ಮೇಲೆ, ರಾಜ್ ಕುಮಾರ್ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಓದುವುದರಲ್ಲಿ ಶ್ರದ್ಧೆ ತೋರಿಸಿಕೊಂಡು, ವಿದ್ಯಾವಂತನಾಗುತ್ತಾರೆ ಜೊತೆಗೆ ತಾವು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಅವರ ಅಕ್ಕ ಸಾಹುಕಾರ್ ಜಾನಕೀ ನೆರವಾಗುತ್ತಾರೆ..
ಮುಂದೆ, ಸುಂದರ ಅಕ್ಕ ತಮ್ಮನ ಬಾಂಧ್ಯವನ್ನು ಕೆಡಿಸಲು ಆಸ್ತಿಗಾಗಿ ಹೊಂಚು ಹಾಕಿ ಕಾದಿದ್ದ ರಮಾದೇವಿ, ತನ್ನ ತಮ್ಮನ ಮನೆಯಲ್ಲಿಯೇ ಉಳಿದಿದ್ದ ಸಾಹುಕಾರ್ ಜಾನಕಿಯನ್ನು ಮನೆಯಿಂದ ಹೊರಗೆ ಹಾಕಿ, ನಂತರ ತನ್ನ ಮೊದ್ದು ಮಗನಿಗೆ ಆಸ್ತಿ ಗಳಿಸಿಕೊಡುವ ಇರಾದೆಯಿಂದ ಮನೆಯಲ್ಲಿನ ಒಡವೆಗಳನ್ನು ಕದ್ದು, ಆ ತಪ್ಪನ್ನು ಸಾಹುಕಾರ್ ಜಾನಕಿಯ ಮೇಲೆ ಬರುವಂತೆ ಮಾಡಿ ಕಿರುಕುಳ ಕೊಡುತ್ತಾಳೆ.
ಆದರೆ ನಿಜಾಂಶ ಗೊತ್ತಾಗಿ, ರಾಜ್ ಕುಮಾರ್ ಅವರ ತಂದೆಯನ್ನು ಕೊಂದಿದ್ದವರಿಗೆ ಶಿಕ್ಷೆಯಾಗಿ, ಕಾನೂನಿನ ಸಮರದಲ್ಲಿ ಗೆದ್ದು, ತಮ್ಮ ಸಂಸಾರವನ್ನು ಮತ್ತೆ ಸುಖಾಂತ್ಯಕ್ಕೆ ತಂದು ನಿಲ್ಲಿಸುತ್ತಾರೆ.
ಈ ಇಡೀ ಕತೆಯಲ್ಲಿ ಬರುವ ಮುಖ್ಯ ಪಾತ್ರಗಳು ರಾಜ್ ಕುಮಾರ್, ಲೀಲಾವತಿ, ಬಾಲಕೃಷ್ಣ, ರಾಜಾಶಂಕರ್, ಸಾಹುಕಾರ್ ಜಾನಕೀ, ಡಿಕ್ಕಿ ಮಾಧವರಾವ್, ರತ್ನಾಕರ್, ಅಶ್ವಥ್ ನಾರಾಯಣ, ಜಯ, ಪಾಪಮ್ಮ.
ತಮ್ಮ ತಮ್ಮ ಪಾತ್ರಗಳಿಗೆ ಅನುಸಾರವಾಗಿ ಗಮನಸೆಳೆಯುವ ಅಭಿನಯ ನೀಡಿದ್ದಾರೆ.
ಹಾಡುಗಳ ಚಿತ್ರೀಕರಣ ಸೊಗಸಾಗಿದೆ. ಹಳೆಯ ಚಿತ್ರಗಳನ್ನು ನೋಡುವುದರ ಭಾಗ್ಯ ಅಂದರೆ, ಇಂದು ಅನೇಕ ತಾಣಗಳಲ್ಲಿ ಚಿತ್ರೀಕರಣ ನಿಷೇಧವಾಗಿರುವ ಅನೇಕ ತಾಣಗಳನ್ನು ನೋಡುವ ಸಂತಸ. ಅಚ್ಚುಕಟ್ಟಾಗಿ ಚಿತ್ರಿಸಿ, ಸರಳ ನೃತ್ಯಗಳನ್ನು ಆಯೋಜಿಸಿ, ಕಣ್ಣಿಗೆ, ಕಿವಿಗೆ ತಂಪೆನಿಸುವಂತೆ ಮೂಡಿಸುವ ಹಾಡುಗಳನ್ನು, ಅಬ್ಬರವಿಲ್ಲದ ವೇಷಭೂಷಣಗಳನ್ನು ನೋಡುವುದೇ ಒಂದು ಖುಷಿ.
ಈ ಚಿತ್ರದ ಹೆಸರಾದ ಹಾಡುಗಳಾದ :"ಬಿಂಕದ ಸಿಂಗಾರಿ", "ಸುವ್ವಿ ಸುವ್ವಿ ಸುವ್ವಾಲೆ", "ಮೈಸೂರ್ ದಸರಾ ಬೊಂಬೆ" ಗಮನಸೆಳೆಯುತ್ತವೆ.
ತಾನು ನೆನೆದು, ಮನೆಯನ್ನು ಬೆಳಗುವ ಪಾತ್ರದಲ್ಲಿ ಅಕ್ಕನಾಗಿ ಸಾಹುಕಾರ್ ಜಾನಕಿ ಸ್ಮರಣೀಯ ಅಭಿನಯ, ತಮ್ಮ ಸುಖವನ್ನು ಮರೆತು, ತಮ್ಮನ ಏಳಿಗೆಗಾಗಿ ಜೀವ ತೇಯುವ ಪಾತ್ರ ಇಷ್ಟವಾಗುತ್ತದೆ. ಕಷ್ಟ ಪಟ್ಟರೆ ಸುಖ ಸಿಗುತ್ತದೆ ಎನ್ನುವ ಹಾಗೆ ಅಂತ್ಯದಲ್ಲಿ ತಾನು ಪ್ರೀತಿಸಿದ್ದವರ ಜೊತೆ ಮದುವೆಯಾಗುವದರೊಂದಿಗೆ ಸಿನೆಮಾ ಸುಖಾಂತ್ಯ ಕಾಣುತ್ತದೆ.
ಜೀವನದಲ್ಲಿ ಕಷ್ಟ ನಷ್ಟಗಳು ಏನೇ ಬರಲಿ ಸಂತೋಷ ತುಂಬಾ ಸಂತೋಷ ಎನ್ನುತ್ತಾ, ಮಗಳಿಗೆ ತಿಳಿ ಹೇಳುವ ಪಾತ್ರದಲ್ಲಿ ಬಾಲಕೃಷ್ಣ ಮನಸೆಳೆಯುತ್ತಾರೆ.
ಉಳಿದ ಪೋಷಕ ಪಾತ್ರಗಳಲ್ಲಿ ರಾಜಾಶಂಕರ್, ಗುಗ್ಗು, ರತ್ನಾಕರ್, ಅಶ್ವಥ್ ನಾರಾಯಣ, ಪಾಪಮ್ಮ, ಜಯ ತಮ್ಮ ಛಾಪನ್ನು ಮೂಡಿಸುತ್ತಾರೆ.
ರಾಜ್ ಅವರ ವೇಷಭೂಷಣಗಳು, ಮಾತಿನ ಐಸಿರಿ, ಹಾಡುಗಳಲ್ಲಿನ ನೃತ್ಯ, ಭಾವಾಭಿನಯ ಇಷ್ಟವಾಗುತ್ತದೆ. ರಾಜ್ ಕುಮಾರ್ ಅಭಿನಯದ ರಾಜರಾಗಿ ಇಡುತ್ತಿರುವ ಹೆಜ್ಜೆಗಳು ದೃಢವಾಗುತ್ತ ಸಾಗುತ್ತಿರುವುದು ಅರಿವಾಗುತ್ತದೆ.
ಮತ್ತೆ ಮುಂದಿನ ಸಿನಿಮಾ.. ನಮ್ಮ ನಿಮ್ಮ ಜೊತೆ ನಮ್ಮ ನೆಚ್ಚಿನ ರಾಜ್ ಕುಮಾರ್ ಇದ್ದೆ ಇರುತ್ತಾರೆ.. ಸಿಗೋಣವೇ.. !
Monday, July 20, 2020
ನಿಸ್ವಾರ್ಥದ ದೀಪ ಸದಾ ಬೆಳಕನ್ನು ಪಸರಿಸುತ್ತದೆ - ನಂದಾದೀಪ (1963) (ಅಣ್ಣಾವ್ರ ಚಿತ್ರ ೩೬ / ೨೦೭)
ಒಂದು ಕೌಟುಂಬಿಕ ಕಥೆಯನ್ನು ವಾದಿರಾಜ್ ಬರೆದು ನಿರ್ಮಿಸಿದ್ದಾರೆ. ಶ್ರೀ ಭಾರತಿ ಚಿತ್ರದ ಲಾಂಛನದಲ್ಲಿ ಮೂಡಿಬಂದ ಚಿತ್ರವನ್ನು ಪ್ರಥಮ ಬಾರಿಗೆ ನಿರ್ದೇಶಕರಾಗಿರುವ ಎಂ ಆರ್ ವಿಠ್ಠಲ್ ಮೂಡಿಸಿದ್ದಾರೆ.
ಎಂ ವೆಂಕಟರಾಜು ಅವರ ಸುಮಧುರ ಸಂಗೀತದಲ್ಲಿ ಮೂಡಿರುವ ಹಾಡುಗಳು ಸೊಗಸಾಗಿವೆ.
ಕನಸೊಂದು ಕಂಡೆ ಕನ್ನಡ ಮಾತೆ.. ನಾಡು ನುಡಿಯ ಬಗ್ಗೆ ಬಣ್ಣಿಸುವ ಹಾಡಾಗಿದೆ
ನಲಿವ ಮನ ಒಂದೇ ದಿನ ಯುಗಳ ಗೀತೆಯಾಗಿ ಪ್ರೇಮಿಗಳ ಮನದಾಳದ ಹಾಡಾಗಿದೆ
ಒಂದು ಗೂಡಿದೆ - ವೇಗವಾದ ಸಂಗೀತ ಇರುವ ಹಾಡು
ಗಾಳಿ ಗೋಪುರ ನಿನ್ ಆಶಾತೀರಾ - ಹಿಂದಿನ ಘಟನೆ ನೆನೆದು ತನ್ನ ಬಗ್ಗೆಯೇ ಹೇಳಿಕೊಳ್ಳುವ ಗೀತೆ
ಯಾರಿಗೆ ಯಾರೋ ನಿನಗಿನ್ಯಾರೋ - ಹತಾಶೆಯ ಹಾಡಾಗಿದೆ
ನಾಡಿನಂದ ಈ ದೀಪಾವಳಿ - ಹಬ್ಬದ ವಿಶೇಷದ ಹಾಡಾಗಿ ಇಂದಿಗೂ ಜನಪ್ರಿಯ
ನ್ಯಾಯಕೆ ಕಣ್ಣಿಲ್ಲ ಪ್ರೀತಿಗೆ ಬೆಲೆಯಿಲ್ಲ - ವಿಷಾದದ ಹಾಡು
ಪಿಬಿ ಶ್ರೀನಿವಾಸ್, ನಾಗೇಂದ್ರಪ್ಪ, ಎಸ್ ಜಾನಕಿ, ಪಿ ಲೀಲಾ, ಜಿಕ್ಕಿ ಹಾಡಿದ್ದಾರೆ..
ಕಚಗುಳಿ ಇಡುವ ಸಂಭಾಷಣೆಗಳು ಇವೆ..
ನರಸಿಂಹ ರಾಜು ಮನೆಯ ಕಾರ್ ಡ್ರೈವರ್.. ಅವರ ಒಂದು ಸಂಭಾಷಣೆ
ತಾಳಿ ಇಲ್ಲದ ಮದುವೆ.. ಬ್ರೇಕ್ ಇಲ್ಲದ ಲಾರಿ ಇದ್ದಂಗೆ
ಡೈಲಾಗ್ ಮಾಸ್ಟರ್ ಎನ್ನಬಹುದಾದ ನೆಚ್ಚಿನ ಬಾಲಣ್ಣ ಒಂದೆರಡು ದೃಶ್ಯಗಳಲ್ಲಿ ಬಂದು ಹೋದರು ಮಾತುಗಳು ಇಷ್ಟವಾಗುತ್ತವೆ..
"ನಾನು ದಲ್ಲಾಳಿ ದಶಾವತಾರದ ಭೀಮಣ್ಣ... ನಂ ಕಂಪನಿ ಬಿಸಿನೆಸ್ ಮೆಣಸಿನಕಾಯಿಂದ ಹಿಡಿದು ಮನೆ ಮಠ ಹೊಲ ಗದ್ದೆ ಇದು ಇಹಲೋಕದ್ದು.. ಪತಿ ಪತ್ನಿಯರನ್ನು, ಗಂಡು ಹೆಣ್ಣನ್ನು ಸೇರಿಸೋದು.. ಇದು ಪರಲೋಕದ್ದು.".
"ಮಾತುಬಾರದ ಮಕ್ಕಳಿಗೆ ಅಕ್ಷರ ಕಲಿಸುವ ಪ್ರೈಮರಿ ಸ್ಕೂಲ್ ಮಾಸ್ಟರ ಪರಿಸ್ಥಿತಿ ಎಲ್ಲಿ ತನಕ ಸುಧಾರಿಸೊಲ್ವೊ.. ಅಲ್ಲಿವರೆಗೆ ದೇಶ ಸುಧಾರಿಸೋಲ್ಲ.. "
ಅದ್ಭುತ ಸಂಭಾಷಣೆ.. ಬಾಲಣ್ಣ ಅದನ್ನು ಹೇಳುವ ಪರಿ ಆಆಆಹಾ ...
ರಾಜ್ ಕುಮಾರ್ ಹರಿಣಿ ಒಬ್ಬರನ್ನೊಬ್ಬರು ಇಷ್ಟ ಪಡುತ್ತಾರೆ.. ಆದರೆ ಹಣದಾಸೆಯ ರಾಜ್ ಅವರ ಅಪ್ಪ ಈ ಮದುವೆಯನ್ನು ಒಪ್ಪೋದಿಲ್ಲ..
ಕಂಪನಿಯ ಯಜಮಾನ ಅಶ್ವಥ್ ಒಬ್ಬಂಟಿಯಾಗಿ ಒದ್ದಾಡುವಾಗ ಆತನ ಗೆಳೆಯನ ಸಲಹೆಯಂತೆ ಮದುವೆಗೆ ಒಪ್ಪುತ್ತಾರೆ
ಇತ್ತ ಹಳ್ಳಿಯಲ್ಲಿರುವ ಆತನ ಅಪ್ಪ.. ಮಗಳ ಓದಿಗೆ ಮಾಡಿದ ಸಾಲ ತೀರಿಸಲಾಗದೆ, ಒದ್ದಾಡುವಾಗ,
ಬಾಲಣ್ಣ ಹರಿಣಿಯನ್ನು ಅಶ್ವಥ್ ಜೊತೆಯಲ್ಲಿ ಮದುವೆ ಮಾಡಿಸಿ ಆಕೆಯ ಅಪ್ಪನಿಗೆ ಸಹಾಯ ಮಾಡುತ್ತಾರೆ.
ಆದರೆ ಅಪ್ಪ ಸೋರಟ್ ಅಶ್ವಥ್ ಇತ್ತ ಮಗಳ ಮನೆಗೂ ಹೋಗದೆ, ಊರಲ್ಲೂ ಇರದೇ ದೇಶಾಂತರ ಹೋಗುತ್ತಾರೆ..
ಇತ್ತ ಮದುವೆಯಾಗಿ ಜೀವನಕ್ಕೆ ಒಗ್ಗಿಕೊಳ್ಳುತ್ತಿರುವಾಗ.. ತನ್ನ ಪತಿರಾಯ ಮಗಳು ಲೀಲಾವತಿ ಗಂಡ ಉದಯಕುಮಾರ್ ಜೊತೆಯಲ್ಲಿ ದೇಶಕ್ಕೆ ಮರಳುತ್ತಾರೆ..
ತನ್ನ ತಂಗಿ ಎಂದು ಹೇಳಿಕೊಳ್ಳಲಾಗದೆ ಉದಯಕುಮಾರ್, ತನ್ನ ಅಣ್ಣ ಎಂದು ಹೇಳಿಕೊಳ್ಳಲಾಗದ ಹರಿಣಿ ಒದ್ದಾಡುತ್ತಾರೆ.. ಪರಸ್ಪರ ಮಾತಾಡುವಾಗ ಅವರ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಅಶ್ವಥ್ ಮತ್ತು ಲೀಲಾವತಿ ಹರಿಣಿಗೆ ಅವಮಾನ ಮಾಡುತ್ತಾರೆ.. ಇದರಿಂದ ಬೇಸತ್ತ ಹರಿಣಿ ಅಂತಿಮ ದೃಶ್ಯದಲ್ಲಿ ಅವರ ಹೆಸರಲ್ಲಿಯೇ ಕಟ್ಟಡ ನಿರ್ಮಾಣವಾಗುವ ಕ್ರಿಯೆಯಲ್ಲಿ ಮಾರಣಾಂತಿಕ ಪೆಟ್ಟಾಗುತ್ತದೆ. ... ಕಡೆಯ ದೃಶ್ಯದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡು ಲೀಲಾವತಿ ಮತ್ತು ಅಶ್ವಥ್ ಹರಿಣಿಯಲ್ಲಿ ಕ್ಷಮೆ ಕೇಳುತ್ತಾರೆ.. ನೆಮ್ಮದಿಯಿಂದ ಕೊನೆಯುಸಿರು ಎಳೆಯುತ್ತಾರೆ.. ನಂದಾದೀಪದಂತೆ ತನ್ನನ್ನೇ ಸುಟ್ಟುಕೊಂಡು ಬೆಳಕು ನೀಡುತ್ತಾರೆ..
ಸರಳ ಕತೆಯನ್ನು ಸಂಭಾಷಣೆ ಮತ್ತು ಹಾಡುಗಳ ಮೂಲಕ ಸಶಕ್ತವಾಗಿ ಕಟ್ಟಿಕೊಟ್ಟಿರುವ ಸೋರಟ್ ಅಶ್ವಥ್ ಈ ಚಿತ್ರದ ನಿಜವಾದ ಹೀರೋ..
ಬೇಡದ ಬದುಕನ್ನು ಬೇಸರದಿಂದ ಕಳೆಯುವಾಗಿನ ಅಭಿನಯ ಸೊಗಸಾಗಿದೆ.. ನಂತರ ವಾದಿರಾಜ್ ಅವರ ಸಹಾಯದಿಂದ ಒಂದು ಆಶ್ರಮ ಕಟ್ಟಿ ಬೆಳೆಸುವ ಪಾತ್ರವಾಗಿ ಅಭಿನಯ ಮನೋಜ್ಞವಾಗಿದೆ
ಆರಾಮಾಗಿ, ಲೀಲಾಜಾಲವಾಗಿ ಸಾಗುವ ಅವರ ಅಭಿನಯ... ಅರೆ ಎಷ್ಟು ಸುಲಭ ಈ ಅಭಿನಯ ಅನ್ನುವಂತೆ ಮಾಡಿದ್ದಾರೆ.. ರಾಜ್ ಕುಮಾರ್ ಮನಸೆಳೆಯುತ್ತಾರೆ.
ಕಥೆಯ ಓಟಕ್ಕೆ ಭಂಗ ತರದೇ ಹಾಸ್ಯ ದೃಶ್ಯಗಳು ಕತೆಗೆ ಪೂರಕವಾಗಿ ಸಾಗುತ್ತವೆ.. ನರಸಿಂಹರಾಜು, ಎಂ ಎನ್ ಲಕ್ಷ್ಮೀದೇವಿ ಮತ್ತು ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿರುವ ರತ್ನಾಕರ ಅವರ ಅಭಿನಯ ಕಚಗುಳಿ ಇಡುವ ಸಂಭಾಷಣೆಗಳು ಚೆನ್ನಾಗಿವೆ.
ಸಹನಟರಲ್ಲಿ, ಪೋಷಕ ಪಾತ್ರಗಳಲ್ಲಿ ರಾಮಚಂದ್ರ ಶಾಸ್ತ್ರೀ, ಜಯಶ್ರೀ, ವಾದಿರಾಜ್, ಹನುಮಂತ ಚಾರ್, ರಮಾದೇವಿ ಕಾಣಿಸಿಕೊಂಡಿದ್ದಾರೆ..
ಈ ಚಿತ್ರದಲ್ಲಿ ಕೆಲವು ತಾಂತ್ರಿಕ ಅಂಶಗಳು ಗಮನ ಸೆಳೆಯುತ್ತದೆ ಕಾರಣ ಛಾಯಾಗ್ರಾಹಕ ಟ್ರಿಕ್ ಶಾಟ್ ಸ್ಪೆಷಲಿಸ್ಟ್ ಆರ್ ಮಧು ಅವರ ಛಾಯಾಗ್ರಹಣ.
ಅಶ್ವಥ್ ಮತ್ತು ಅವರ ಗೆಳೆಯ ಮಾತಾಡುವ ಎರಡು ದೃಶ್ಯಗಳನ್ನು ಒಂದೇ ಫ್ರೇಮಿನಲ್ಲಿ ಕೂರಿಸುವ ಕೈಚಳಕ ಸೂಪರ್..
ಹಾಗೆ ಸೈಕಲ್ ಚಕ್ರದಲ್ಲಿ ರಾಜ್ ಮತ್ತು ವಾದಿರಾಜ್ ಅವರನ್ನು ತೋರಿಸುವ ದೃಶ್ಯ ಗಮನ ಸೆಳೆಯುತ್ತದೆ
ವಿರಾಮದ ದೃಶ್ಯವನ್ನು ರಾಜ್ ಕುಮಾರ್ ಅವರ ಕೈಯಿಂದ ಜಾರಿ ಹೋಗುವ ನೋಟುಗಳು ಮತ್ತು ಅದನ್ನು ವಿರಾಮ ಎಂಬ ಕನ್ನಡದ ಪದಗಳಲ್ಲಿ ತೋರಿಸುವುದು ವಿಶೇಷ..
ಒಂದು ಸರಳ ಕತೆಯನ್ನು ಮನಮುಟ್ಟುವ ಹಾಗೆ ಮೂಡಿಸಿರುವ ಜಾದೂ ನಿರ್ದೇಶಕರಿಂದ ಸಾಧ್ಯವಾಗಿದೆ.. !
ಮತ್ತೊಂದು ಚಿತ್ರ.. ಮತ್ತೊಂದು ಬರಹ.. ಸಿಗೋಣ ಅಲ್ಲವೇ !

























































