Thursday, December 25, 2025

ಭಾರತದ ಸಿನಿ ಜಗತ್ತಿಗೆ ಬಲೆ ಬೀಸಿದ ಜೇಡರ ಬಲೆ 1968 (ಅಣ್ಣಾವ್ರ ಚಿತ್ರ ೯೨/೨೦೭)

ಕರುನಾಡಲ್ಲಿ ಏನಿಲ್ಲ ... ಅಂದರೆ ಎಲ್ಲಾ ಇದೆ ಎಂದು ಎದೆ ತಟ್ಟಿ ಹೇಳೋಕೆ ಬೇಕಾದಷ್ಟು ವಿಷಯಗಳಿವೆ ಅಂತಹ ವಿಷಯದಲ್ಲಿ ಇದು ಒಂದು.. 

 ಚಿತ್ರಜಗತ್ತು ಜೇಮ್ಸ್ ಬಾಂಡ್ ಸಿನಿಮಾಗಳಿಗೆ ಮಾರು ಹೋಗಿದ್ದ ಸಮಯ.. ಆ ಘಟ್ಟದಲ್ಲಿ ಕರುನಾಡು ಹಿಂದೆ ಇಲ್ಲ ಅಂತ ಮೂಡಿ ಬಂದಿದ್ದು ಈ ಜೇಡರ ಬಲೆ.. 



ದೇಸಿ ಮಾದರಿ ಜೇಮ್ಸ್ ಬಾಂಡ್ ಅವತರಿಸಿದ್ದು ಕರುನಾಡ ನೆಲದಲ್ಲಿ.. ಮುಂದೆ ಅನೇಕ ಸಾಹಸಗಳಿಗೆ ಈ ಚಿತ್ರ ಮುನ್ನುಡಿಯಾಗಿದ್ದು ವಿಶೇಷ. 

ಈ ಚಿತ್ರವನ್ನು ಗೂಢಚಾರಿಯ / ಬಾಂಡ್ಕ ಮಾದರಿಯ ಕತೆಗಳ ಕತೃ ಮ.  ರಾಮಮೂರ್ತಿ ಅವರಿಗೆ ಅರ್ಪಿಸಿದ್ದು ವಿಶೇಷ. 


ಸಿನಿಮಾ ವಲಯದಲ್ಲಿ ಒಟ್ಟಿಗೆ ಒಟ್ಟಿಗೆ ಭಿನ್ನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಮಾನ ಮನಸ್ಕರು ಒಟ್ಟಿಗೆಯಾಗಿದ್ದು ಈ ಚಿತ್ರದಿಂದ.. 

ಬಿ ದೊರೈರಾಜ್ ಛಾಯಾಗ್ರಹಣದಲ್ಲಿ ನಿಪುಣರು... ಎಸ್ ಕೆ ಭಗವಾನ್ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ವಿಭಾಗದಲ್ಲಿ ದುಡಿದವರು.. ಇವರಿಬ್ಬರು ದೊರೈರಾಜ್ ಭಗವಾನ್ ಅಂತ ಆಗಿ ಮುಂದೆ ದೊರೈ ಭಗವಾನ್ ಜೋಡಿಯಾಗಿ ಅನೇಕಾನೇಕ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದರು.. ಇದು ಅವರ ಮೊದಲ ಸ್ವತಂತ್ರ ಹೆಜ್ಜೆ.. 

ಇಲ್ಲಿಯ ತನಕ ಭಾವನಾತ್ಮಕ, ರೋಷಾವೇಶ, ಭಕ್ತಿಪೂರಕ, ಐತಿಹಾಸಿಕ ಚಿತ್ರಗಳಲ್ಲಿ ಮಿಂದಿದ್ದ ರಾಜಕುಮಾರ್ ಅವರು ಈ ಚಿತ್ರದಲ್ಲಿ ಮೈ ಕೊಡವಿಕೊಂಡು ಅಸಾಧಾರಣ ಗೂಢಚಾರಿಯಾಗಿ ಮಾರ್ಪಾಟಿದ್ದಾರೆ.. 

ಇಲೆಕ್ಟ್ರಾನಿಕ್ ಉಪಕರಣಗಳ ಉಪಯೋಗ, ತಿರುಗುತ್ತ ಇರುವ ಮಂಚ.. ಸ್ವಿಚ್ ಒತ್ತಿದರೆ ಫೋನ್ ಹತ್ತಿರಕ್ಕೆ ಇವರು ಹೋಗೋದು.. ಬಟ್ಟನ್ ಒತ್ತಿದರೆ ತೆರೆದು ಕೊಳ್ಳುವ ಬಾಗಿಲುಗಳು.. ಒಂದು ತಪ್ಪು ಹೆಜ್ಜೆ ಪಾತಾಳಕ್ಕೆ ಬೀಳಿಸುವ ನೆಲದಲ್ಲಿನ ಬಾಗಿಲುಗಳು.. ಹೀಗೆ ಹತ್ತಾರು ತಂತ್ರಗಳನ್ನು ಒಳಗೊಂಡ ದೃಶ್ಯಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದು ಮತ್ತು ಇದನ್ನೆಲ್ಲಾ ಸರ್ವೇ ಸಾಧಾರಣ ಅನ್ನುವಂತೆ ಉಪಯೋಗಿಸಿ ನಿಜವಾಗಿಯೂ ಗೂಢಚಾರಿಗಳು ಎಂದರೇ ಹೀಗೆ ಇರುತ್ತಾರೆ ಎಂದು ತೆರೆಯ ಮೇಲೆ ನೈಜವಾಗಿ ಅಭಿನಯಿಸಿದ್ದಾರೆ ರಾಜಕುಮಾರ್ ಅವರು. 


ಆ ಸೂಟುಬೂಟುಗಳಲ್ಲಿ ನೆಡೆಯುವಾಗ, ಹೊಡೆದಾಟದ ದೃಶ್ಯಗಳಲ್ಲಿ, ಜಾಣ್ಮೆಯಿಂದ, ಕಿಲಾಡಿತನದಿಂದ ಕಷ್ಟದ ಜಾಲಗಳಿಂದ ಹೊರ ಬರುವುದು, ಖಳನಾಯಕರೊಡನೆ ಸಂಯಮ ಕಳೆದುಕೊಳ್ಳದೆ ಸಂಭಾಷಿಸುವುದು ಹೊಸದು.. ಅದನ್ನು ದಿಟ್ಟವಾಗಿ ಅಳವಡಿಸಿಕೊಂಡು ಅಭಿನಯಿಸಿದ ಪರಿ ಕಣ್ಣಿಗೆ ಸೊಗಸು. 

ಇಡೀ  ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ನಿಲ್ಲಿಸಿದ್ದಾರೆ.. 

ಮತ್ತೊಮ್ಮೆ ರಾಜ್ ಕುಮಾರ್ ಅವರ ಚಿತ್ರದಲ್ಲಿ ಖಳನಾಗಿ ಉದಯಕುಮಾರ್ ಮತ್ತು ಅವರ ಜೊತೆಯಾಗಿ ಶಕ್ತಿಪ್ರಸಾದ್, ದಿನೇಶ್, ಎಂಪಿ ಶಂಕರ್ ಸೊಗಸಾದ ಅಭಿನಯ.. 





ಜಯಂತಿ ಮತ್ತು ಶೈಲಶ್ರೀ  ಸೆಳೆಯುತ್ತಾರೆ. ವಿಜಯಲಲಿತಾ ಒಂದು ನೃತ್ಯದ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ 





ನರಸಿಂಹರಾಜು ಗೂಢಚಾರಿಯ ಜೊತೆಗಾರನಾಗಿ ಇದ್ದಾರೆ.. ಅವರಿಗೆ ಜೊತೆಯಾಗಿ ಒಂದೆರಡು ದೃಶ್ಯಗಳಲ್ಲಿ ರಮಾ ಬರುತ್ತಾರೆ.. 


ಅಶ್ವಥ್ ಅತಿಥಿ ನಟ.. ಕೆಲವು ದೃಶ್ಯಗಳು ಆದರೆ ಇಷ್ಟವಾಗುತ್ತಾರೆ


ಈ ರೀತಿಯ ಬಾಂಡ್ ಮಾದರಿ ಚಿತ್ರಗಳಿಗೆ ಸಂಗೀತ ಬಹಳ ಮುಖ್ಯ.. ಜಿ ಕೆ ವೆಂಕಟೇಶ್ ಪಾಶ್ಚ್ಯಾತ್ಯ  ಅಳವಡಿಸಿಕೊಂಡು ದೇಶೀಯ ಮಾದರಿ.. ನಾಯಕಿಯನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋಗುವ ದೃಶ್ಯದಲ್ಲಿ ಹಿನ್ನೆಲೆ ಸಂಗೀತವನ್ನು ಅನುಸರಿಸುತ್ತಲೇ ಹಾಡಿನ ಸಂಗೀತ ಶುರುವಾಗೋದು ಅವರ ವಿಶಿಷ್ಟತೆ.. ಚಿತ್ರದ ಪೂರ್ತಿ ಇವರ ಸಂಗೀತ ಚಿತ್ರವನ್ನು ಹಿಡಿದಿಟ್ಟಿದೆ. 

ಕಥೆ ಚಿತ್ರನಾಟಕ ನಿರ್ದೇಶನ ದೊರೈರಾಜ್ ಭಗವಾನ್ ಅವರದ್ದು 
ಸಂಭಾಷಣೆ ಎಂ ನರೇಂದ್ರ ಬಾಬು ಹಾಗೂ ಭಗವಾನ್
ಸಾಹಿತ್ಯ ಆರ್ ಎನ್ ಜಯಗೋಪಾಲ್ 
ಗಾಯನ ಎಸ್  ಜಾನಕೀ ಮತ್ತು ಎಲ್ ಆರ್ ಈಶ್ವರಿ. 
ಈ ಚಿತ್ರದ ಇನ್ನೊಂದು ವಿಶೇಷತೆ ಎಂದರೆ ರಾಜಕುಮಾರ್ ಅವರ ಶಾರೀರ ಪಿ ಬಿ ಶ್ರೀನಿವಾಸ್ ಗಾಯನ ಇಲ್ಲದೆ ಇರುವುದು.. ಮತ್ತೆ ರಾಜಕುಮಾರ್ ಅವರಿಗೆ ಹಾಡೇ ಇಲ್ಲದಿರುವುದು 
ಮಂತ್ರಾಲಯ ಮೂವೀಸ್ ಅವರ ಚೊಚ್ಚಲ ಕಾಣಿಕೆ 
ಟಿ ಪಿ  ವೇಣುಗೋಪಾಲ್ ನಿರ್ಮಾಪಕರಾಗಿದ್ದಾರೆ. 

ದೇಸಿ ಗೂಢಚಾರಿಗಳ ಚಿತ್ರ ಸರಣಿಗೆ ಓಂಕಾರ ಹಾಕಿದ್ದು ಜೇಡರ ಬಲೆ.. 

Wednesday, December 24, 2025

ಕನ್ನಡದ ಕುಲ ತಿಲಕ ಪರಮೇಶ್ವರ ಇಮ್ಮಡಿ ಪುಲಿಕೇಶಿ 1967 (ಅಣ್ಣಾವ್ರ ಚಿತ್ರ ೯೧/೨೦೭)

ಈ ರೀತಿಯ ಚಿತ್ರಗಳನ್ನು ಮಾಡುವುದು ಸುಲಭವಲ್ಲ.. 

ಮೊದಲಿಗೆ ಅದಕ್ಕೆ ಬೇಕಾದ ಪೂರ್ವ ಸಿದ್ಧತೆ.. ಇತಿಹಾಸದ ಬಗ್ಗೆ ತೀವ್ರ ಜ್ಞಾನ, ಅದಕ್ಕೆ ಒಪ್ಪುವ ನಟ ನಟಿಯರು.. ಅದನ್ನು ನಿಭಾಯಿಸಬಹುದಾದ ತಂತ್ರಜ್ಞರು... ಅಗತ್ಯವಾದ ಸಂಗೀತ, ಸಾಹಿತ್ಯ, ಮತ್ತು ಸಂಭಾಷಣೆ ... .. ಮತ್ತೆ ಆ ಕಾಲವನ್ನು ಮರು ಸೃಷ್ಟಿಸುವ ಸೆಟ್ಟುಗಳು, ವೇಷಭೂಷಣಗಳು, ಇದಕ್ಕೆಲ್ಲ ಮಿಗಿಲಾಗಿ ಬಂಡವಾಳ ಹೂಡಬಲ್ಲ ನಿರ್ಮಾಪಕರು 

ಇಲ್ಲಿ ಎಲ್ಲವೂ ಮಿಳಿತವಾಗಿದೆ. 

ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ತಮ್ಮ ವೆಂಕಟೇಶ್ ಚಿತ್ರದ ಲಾಂಛನದಲ್ಲಿ ನಿರ್ಮಿಸಿದ ಚಿತ್ರವಿದು. ಪ್ರತಿಯೊಬ್ಬರಿಗೂ ಒಂದೊಂದು ಕನಸಿರುತ್ತವೆ, ಜಿ ಕೆ ವೆಂಕಟೇಶ್ ತಮ್ಮ ಕನಸನ್ನು ನನಸು ಮಾಡಿಕೊಂಡ ಚಿತ್ರವಿದು. 

ಜಿ ವಿ ಅಯ್ಯರ್ ಅವರ ಸಂಭಾಷಣೆ ಮತ್ತು ಚಿತ್ರಕತೆ.  

ಜಿ ಕೆ ವೆಂಕಟೇಶ್ ಅವರ ಸಂಗೀತ 

ಎನ್ ಸಿ ರಾಜನ್ ಅವರ ನಿರ್ದೇಶನ 

ಬಿ ದೊರೈರಾಜ್ ಮತ್ತು ರಾಜಾರಾಮ್ ಅವರ ಛಾಯಾಗ್ರಹಣ 

ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಪಿ ಸುಶೀಲ ಅವರ ಮಧುರ ಗಾಯನ 

ದೊಡ್ಡ ತಾರಾಗಣವೇ ಮೇಳೈಸಿದೆ 

ರಾಜಕುಮಾರ್, ಉದಯಕುಮಾರ್, ಸುದರ್ಶನ್, ಅಶ್ವಥ್, ಅರುಣ್ ಕುಮಾರ್, ರಾಮಚಂದ್ರ ಶಾಸ್ತ್ರೀ, ನರಸಿಂಹರಾಜು, ಶಕ್ತಿಪ್ರಸಾದ್, ಗಣಪತಿ ಭಟ್, ಜಯಂತಿ, ಕಲ್ಪನಾ, ಬಿ  ಜಯಮ್ಮ, ಎಂ ಎನ್ ಲಕ್ಷ್ಮೀದೇವಿ. 

ಇವರೆಲ್ಲರ ಜೊತೆಯಲ್ಲಿ  ನೂರನೇ ಚಿತ್ರದ ಸಂಭ್ರಮದಲ್ಲಿ ಬೀಗುತ್ತಿರುವ ಟಿ ಎನ್ ಬಾಲಕೃಷ್ಣ. ಶಕುನಿಯ ಅಂಶದ ಅದ್ಭುತ ಪಾತ್ರ ಇವರದ್ದು. ಅದನ್ನು ಅಷ್ಟೇ ಅದ್ಭುತವಾಗಿ ನಿಭಾಯಿಸಿದ್ದಾರೆ ಬಾಲಣ್ಣ. ಆ ಕುಟಿಲತೆ, ತಂತ್ರಗಾರಿಕೆ, ಮಾತಿನಲ್ಲಿ  ನಾಜೂಕುತನ, ಕೃತ್ರಿಮ ನಗೆ.. ಆಹಾ  ಬಾಲಣ್ಣ ಈ ಚಿತ್ರದ ನಿಜವಾದ ನಾಯಕ ಎಂದರೂ ಸರಿಯೇ.. 


ಆದರೆ ಆದರೆ 

ಇರಿ  ಇರಿ .. ಕನ್ನಡ ಬಾಂಧವರ ಬಳಿ ಇಮ್ಮಡಿ ಪುಲಿಕೇಶಿಯನ್ನು ನೋಡಿದ್ದೀರಾ ಅಂತ ಸ್ವತಃ ಪುಲಿಕೇಶಿಯೇ ಧರೆಗಿಳಿದು ಬಂದು ಕೇಳಿದರೆ ಎಲ್ಲರೂ ಹೇಳುವುದು ಹೌದು.. ನೋಡಿದ್ದೇವೆ ಅಂತ.. ಎಲ್ಲಿ ಎಂದರೆ ಇಮ್ಮಡಿ ಪುಲಿಕೇಶೀ ಚಿತ್ರದ ಪೋಸ್ಟರ್ ತೋರಿಸುತ್ತಾರೆ.. 


ನಿಜ ಇಮ್ಮಡಿ ಪುಲಿಕೇಶೀ ಹೀಗೆ ಇದ್ದಾರೇನೋ ಅನಿಸುವಂತೆ ಆವರಿಸಿಕೊಂಡಿದ್ದಾರೆ ರಾಜಕುಮಾರ್ ಅವರು. ಆ ಹೊಳಪಿನ ಮೊಗ, ಆಕರ್ಷಕ ತಲೆಗೂದಲು (ವಿಗ್.. ಆದರೂ ಎಷ್ಟು ಚೆನ್ನಾಗಿ ಒಪ್ಪುತ್ತದೆ) ಆಕರ್ಷಕ ಅಂಗ ಸೌಷ್ಟವ.. ಸಿನಿಮಾದ ಬಹುಭಾಗ ಆ ಪೋಷಾಕಿನಲ್ಲಿ ಕಾಣುವ ರಾಜಕುಮಾರ್ ಪುಲಿಕೇಶಿಯನ್ನೇ ಧರೆಗಿಳಿಸಿದ್ದಾರೆ. ಮುಂದೆ ಹಲವಾರು ಚಿತ್ರಗಳಲ್ಲಿ ಧರೆಗಿಳಿಸಿದ ಇತಿಹಾಸದ ನಾಯಕರು, ದೈವ ಪಾತ್ರಗಳು ರಾಜಕುಮಾರ್ ಅವರ ಸ್ವತ್ತು ಅನಿಸುವಂತೆ ಇದೆ. 

"ಅದರಲ್ಲೂ ದೇವಾಲಯದಲ್ಲಿ ಕತ್ತಿ ಹಿರಿದು ನಿಂತ ರೂಪ ಅಬ್ಬಬ್ಬಾ" (ಅಬ್ಬಬ್ಬಾ ಎನ್ನುವ ಪದ ಉಚ್ಚಾರಣೆ ಅವರ ಬಾಯಿಯಲ್ಲಿ ಕೇಳಬೇಕು... ಹತ್ತಾರು ಬಾರಿ ತಿರುಗಿಸಿ ತಿರುಗಿಸಿ ಆ ದೃಶ್ಯವನ್ನು ಈ ಅಬ್ಬಬ್ಬಾ ಅನ್ನುವ ಪದ ಕೇಳೋದಕ್ಕೆ ನೋಡಿದ್ದೀನಿ"


ಆರಂಭಿಕ ದೃಶ್ಯದಲ್ಲಿ ಕೀರ್ತಿ ಕಂಭವನ್ನು ಬೆನ್ನ ಮೇಲೆ ತಡೆಹಿಡಿದು ಕನ್ನಡ, ಕನ್ನಡಿಗರು, ಕನ್ನಡದ ಮಕ್ಕಳ ಬಗೆ ಆಡುವ ನುಡಿಗಳು ಅದ್ಭುತ.. ಇಡೀ  ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಕಡೆಯ ದೃಶ್ಯದಲ್ಲಿ ಆ ಕತ್ತಿ ಹಿರಿದು ನಿಂತ ದೃಶ್ಯ ಮೈ ಜುಮ್ ಎನ್ನಿಸುತ್ತದೆ. 





ಚಿತ್ರದ ಕೆಲವು  ತುಣುಕಿನ ದೃಶ್ಯಗಳು ನಿಮಗಾಗಿ 













ಅದ್ಭುತ ಚಿತ್ರವಿದು.. 

ಉದಯಕುಮಾರ್ ಮತ್ತೊಮ್ಮೆ ಇಲ್ಲಿ ಖಳ ಮಿಶ್ರಿತ ಉಪನಾಯಕನ ಪಾತ್ರ ಮಾಡಿದ್ದಾರೆ. ಗೂನು ಬೆನ್ನಿನ ಪಾತ್ರ.. ಅಷ್ಟೇ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ.ಆ ಸಂಭಾಷಣೆಯ ವೈಖರಿ, ಗೂನು ಬೆನ್ನಿನ ಆಂಗೀಕ ಅಭಿನಯ.. ವಾಹ್.. 

ಉಳಿದಂತೆ ಜಯಂತಿ, ಕಲ್ಪನಾ, ಅಶ್ವಥ್, ರಾಮಚಂದ್ರ ಶಾಸ್ತ್ರೀ ಮತ್ತು ಉಳಿದ ನಟರಾದ ಅಶ್ವಥ್, ಸುದರ್ಶನ್, ಅರುಣ್ ಕುಮಾರ್, ನರಸಿಂಹಾಜು, ಮುಂತಾದವರು ಉತ್ತಮ ಅಭಿನಯ ನೀಡಿದ್ದಾರೆ.. 

ರಾಜಕುಮಾರ್ ಅವರು ಪುಲಿಕೇಶಿಯನ್ನೇ ಧರೆಗೆ ತಂದಿರುವುದು  ಈ ಚಿತ್ರದ ವಿಶೇಷ!


Monday, December 22, 2025

ಹಠ ಹಠ ಹಠದ ಸುಳಿ ಇದೇ ಚಕ್ರ ತೀರ್ಥ 1967 (ಅಣ್ಣಾವ್ರ ಚಿತ್ರ ೯೦/೨೦೭)

ಇಬ್ಬರು ಗಂಡಸರ ಹಠ ಸಂಸಾರದ ಸುಖಶಾಂತಿಯನ್ನೇ ಸುಟ್ಟು ಹಾಕುತ್ತದೆ , 
ಒಬ್ಬರ ಹಠ ದುಡ್ಡಿದೆ ಎನ್ನುವ ಅಮಲು.. 
ಇನ್ನೊಬ್ಬರ ಹಠ ದುಡ್ಡು ಹಣ ಸಂಪಾದನೆ ಮಾಡಬೇಕು ಎನ್ನುವುದು 
ಈ ಇಬ್ಬರ ಹಠದ ಸುಳಿಯಲ್ಲಿ ಸಿಲುಕಿ ಸಂಸಾರ ನಾಶವಾಗುವುದೇ ಚಕ್ರತೀರ್ಥದ ತಿರುಳು. 
ಚಿತ್ರದ ಆರಂಭದಲ್ಲಿ ಚಿತ್ರದ ಆಶಯವನ್ನು ಸ್ವತಃ ಕಾದಂಬರಿ ಕತೃ ಶ್ರೀ ತ ರಾ ಸು ಅವರೇ ಪರದೆಯ ಮೇಲೆ ಬಂದು ಹೇಳುವುದು.. ತಾನು ಬರೆದ ಕಾದಂಬರಿಯನ್ನು ಸಿನೆಮಾಕ್ಕೆ ಕೊಂಚ ಬದಲಿಸಿಕೊಂಡು ಸಹನೀಯವಾಗಿಸಿರೋದು ಅಂತ ಹೇಳಿ ಚಿತ್ರಕ್ಕೆ ಚಾಲನೆ ನೀಡುತ್ತಾರೆ. 


ಶ್ರೀ ತ ರಾ ಸು 
















ಉದಯಕುಮಾರ್  ಅವರಿಗೂ ಕಾದಂಬರಿ ಕತೃ ತ ರಾ ಸುಬ್ಬರಾವ್ ಅವರಿಗೂ ಏನೋ ಪೂರ್ವಜನ್ಮದ ನಂಟು ಅನ್ನಿಸುತ್ತೆ, ಅವರ ಚಂದವಳ್ಳಿ ತೋಟ ಚಿತ್ರದಲ್ಲಿ ಉದಯಕುಮಾರ್ ಅಬ್ಬರದ ನಟನೆ, ಈ ಚಿತ್ರದಲ್ಲೂ ಹಾಗೆ..ನಾಯಕ, ನಾಯಕಿ, ಸಹನಟರನ್ನು  ತಿಂದು ಹಾಕಿದ್ದಾರೆ ಅಭಿನಯದಲ್ಲಿ. 

ಈ ಚಿತ್ರದ ನಿಜವಾದ ನಾಯಕ ಉದಯಕುಮಾರ್ ಅವರು. ಆ ಮಟ್ಟಕ್ಕೆ ಅಭಿನಯದಲ್ಲಿ ರಾಕ್ಷಸರಾಗಿದ್ದರೆ. ಹಣದಾಸೆ, ಅಧಿಕಾರದ ದರ್ಪ, ಬಂಧು ಬಳಗವನ್ನೆಲ್ಲ ಹಣದ ಆಧಾರದಲ್ಲಿ ತುಲನೆ ಮಾಡೋದು. ಅಬ್ಬರದ ಸಂಭಾಷಣೆ, ಆ ದರ್ಪ, ತಮ್ಮ ದಪ್ಪ ಶರೀರವನ್ನು ಅಭಿನಯಕ್ಕೆ ಒಗ್ಗಿಸಿಕೊಂಡಿರುವುದು ಉದಯಕುಮಾರ್ ಅವರ ವಿಶಿಷ್ಟತೆ. 

ರಾಜಕುಮಾರ್ ಅವರು ಉದಯಕುಮಾರ್ ಅವರ ಅಳಿಯನ ಪಾತ್ರ.. ಬಡತನ, ಸ್ವಾಭಿಮಾನ, ಅಸಹಾಯಕತೆ, ಹಠ. ಗೆಲ್ಲಬೇಕು ಎನ್ನುವ ಛಲ ಎಲ್ಲವನ್ನು ಮೇಳೈಸಿಕೊಂಡು ಅಭಿನಯಿಸಿದ್ದಾರೆ. ಮಡದಿಯೊಂದಿಗೆ ಪ್ರೀತಿಯ ಹಾಡು, ಮಧುರ ಸಂಭಾಷಣೆ.. ಹಾಗೆ ಮಾತಾಡಿಕೊಂಡು ಅವರ ಮಾವ ಉದಯಕುಮಾರ್ ಅವರ  ಮಾತು ಬಂದಾಗ ಕ್ಷುದ್ರರಾಗೋದು... ಆ ಅಭಿನಯ ನೋಡೋದು ಒಂದು ಪುಣ್ಯ. 

ಜಯಂತಿ ಇಲ್ಲಿ ದ್ವಿಪಾತ್ರ ಅಭಿನಯ.. ಎರಡೂ ಪಾತ್ರಗಳಲ್ಲಿ ಸಹಜಾಭಿನಯ.. ಮುದ್ದಾಗಿ ಕಾಣೋದಷ್ಟೇ ಅಲ್ಲದೆ  ಮಾತುಗಳು ತೂಕಬದ್ಧವಾಗಿದೆ. 

ಜಯಶ್ರೀ ತಾಯಿಯ ಪಾತ್ರದಲ್ಲಿ ಮಮತಾಮಯಿ.. ತನ್ನ ಪತಿರಾಯನ ದರ್ಪವನ್ನು ಸಹಿಸಿಕೊಳ್ಳುತ್ತಾ, ಸಾಯುವ ಅಂಚಿನಲ್ಲಿ ಮಗಳನ್ನು ನೋಡುವ ಹಂಬಲದ  ದೃಶ್ಯ ಕಣ್ಣಿಗೆ ಕಟ್ಟುತ್ತದೆ. 

ಬಿ ಎಂ ವೆಂಕಟೇಶ್ ಸಂಯಮದ ಪಾತ್ರೋಚಿತ ಅಭಿನಯ 

ಬಾಲಣ್ಣ ಇಲ್ಲಿ ನಗಿಸುತ್ತಾರೆ. 
ಇದು ನನ್ನ ಮಾತಲ್ಲ ಸಾಕ್ಷಾತ್ ಧನ್ವಂತ್ರಿ ಮಾತು.. 
ಬ್ರಹ್ಮ ಬರೆದದ್ದಲ್ಲ ಇದು ನನ್ನ ಬರಹ.. 

ಹೀಗೆ ಹತ್ತಾರು ಚುಟುಕು ಸಂಭಾಷಣೆಯಿಂದ ಭಾವತೀವ್ರತೆಯಿಂದ ಕೂಡಿರುವ ಸಿನಿಮಾದಲ್ಲಿ ನಗಿಸುತ್ತಾರೆ. 

ಕಥೆ : ತ ರಾ ಸುಬ್ಬಾರಾಯರ ಅದೇ ಹೆಸರಿನ ಕಾದಂಬರಿ 
ಚಿತ್ರಕಥೆ ಮತ್ತು ಸಂಭಾಷಣೆ - ತ ರಾ ಸು 
ಹಾಡುಗಳು : ತ ರಾ ಸು, ದ ರಾ ಬೇಂದ್ರೆ, ಆರ್ ಎನ್ ಜಯಗೋಪಾಲ್ 
ಗಾಯಕರು : ಪಿ ಬಿ ಶ್ರೀನಿವಾಸ್, ಪಿ ನಾಗೇಶ್ವರ ರಾವ್, ಎಸ್ ಜಾನಕೀ, ಎಲ್ ಆರ್ ಈಶ್ವರಿ, ಬಿ ಕೆ ಸುಮಿತ್ರಾ, ಬೆಂಗಳೂರು ಲತಾ, 
ಛಾಯಾಗ್ರಹಣ : ಆರ್ ಚಿಟ್ಟಿಬಾಬು 

ಹಾಡುಗಳು ಸುಮಧುರವಾಗಿವೆ 

ಟೈಟಲ್ ಸಾಂಗ್ .. ಇದೆ ಚಕ್ರತೀರ್ಥ 
ಓಡಿ ಬಾ ನಾ ಓಡುವೆ 
ನಿನ್ನ ರೂಪ ಕಣ್ಣಲಿ 
ಕುಣಿಯೋಣುಬಾರ 

ಮುಂತಾದ ಹಾಡುಗಳು ಮೆಲುಕು ಹಾಕುವಂತಿವೆ!

ಭಗವತಿ ಪ್ರೋಡಕ್ಷನ್ಸ್ ಅವರ ಲಾಂಛನ.. ಪೆಕೇಟಿ ಶಿವರಾಂ ಅವರ ನಿರ್ದೇಶನ.. 





Sunday, December 21, 2025

ನಂಬಿಕೆ.. ಔಷಧಿ.. ಮತ್ತು ಸಾಮಾಜಿಕ ಕಳಕಳಿ - ಬಂಗಾರದ ಹೂವು 1967 (ಅಣ್ಣಾವ್ರ ಚಿತ್ರ ೮೯/೨೦೭)

ರಾಜನ್ ನಾಗೇಂದ್ರ ಅವರ ಸಂಗೀತ ಇಂದಿಗೂ ಸುಮಧುರ 

ಡೂ ಡೂ ಬಸವಣ್ಣ - ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ 
ಆ ಮೊಗವು ಎಂಥ ಮೊಗವು - ಪಿ ಬಿ ಶ್ರೀನಿವಾಸ್ 
ಓಡುವ ನದಿ ಸಾಗರವ ಸೇರಲೇ ಬೇಕು - ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ 
ಮದುವೆ ಮದುವೆ - ಎಸ್ ಜಾನಕೀ 
ಓದಿ ಓದಿ ಮರುಳಾದ ಕೂಚುಭಟ್ಟ - ಎಸ್ ಜಾನಕೀ 
ನೀ ನೆಡೆವ ಹಾದಿಯಲ್ಲಿ - ಪಿ ಸುಶೀಲ 

ಎಲ್ಲಾ ಹಾಡುಗಳು ಸುಮಧುರವಾಗಿವೆ.. ಚಿತ್ರೀಕರಣವೂ ಮಧುರವಾಗಿದೆ. 

ಹಾಡುಗಳನ್ನು ರಚಿಸಿರುವ ಚಿ ಉದಯಶಂಕರ್ ಹಾಗೂ ವಿಜಯನಾರಸಿಂಹ ಅವರಿಗೆ ಹಾಡುಗಳ ಯಶಸ್ಸಿನ ಶ್ರೇಯಸ್ಸು ಸಂಗೀತ ನಿರ್ದೇಶಕ ಜೋಡಿಯ ಜೊತೆಗೆ ಸಲ್ಲುತ್ತದೆ. 

ಬಿ ಎನ್ ಹರಿದಾಸ್ ಅವರ ಛಾಯಾಗ್ರಹಣದಲ್ಲಿ ನಟ ನಟಿಯರು ಮುದ್ದಾಗಿ ಕಾಣುತ್ತಾರೆ. ನೆರಳು ಬೆಳಕಿನ ವ್ಯವಸ್ಥೆಯನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. 

ಅರ್ಥಪೂರ್ಣ ಸಂಭಾಷಣೆ ಚಿ ಉದಯಶಂಕರ್ ಅವರಿಂದ. 

ತಮ್ಮದೇ ಕಿರುನಾಟಕ "ಅಭಾಗಿನಿ"ಯನ್ನು ಕಥಾನಾಟಕ ರಚಿಸಿ ನಿರ್ಮಿಸಿ ನಿರ್ದೇಶಿಸಿರುವುದು ಬಿ ಎ ಅರಸ ಕುಮಾರ್.. ತಮ್ಮದೇ ರಚಿತವಾದ ಕಥಾವಸ್ತುವನ್ನು ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. 

ಚಿತ್ರದ ಆರಂಭದಲ್ಲಿ ತಮ್ಮ ಕೃತಜ್ಞತೆ ಅರ್ಪಿಸಿರುವುದು ವಿಶೇಷ, 

ಈ ಚಿತ್ರ ರಾಷ್ಟ್ರಪ್ರಶಸ್ತಿಗೂ ಭಾಜನವಾಗಿದ್ದು ವಿಶೇಷ. ಸಾಂಕ್ರಾಮಿಕ ರೋಗ, ಪೂರ್ವ ಜನ್ಮದ ಪಾಪದ ಫಲ, ಸಾಯಿಸೋಕೆ ಬಂದಿರುವ ಖಾಯಿಲೆ ಹೀಗೆ ಹತ್ತಾರು ನಂಬಿಕೆಗಳ ಮೂಲವಾದ ಕುಷ್ಠರೋಗದ ಬಗ್ಗೆ ಸಂದೇಶ ಇರುವ ಚಿತ್ರವಿದು. ಆರಂಭದಲ್ಲಿ ಗುರುತಿಸಿ ತಕ್ಕ ಚಿಕಿತ್ಸೆ ಪಡೆದರೆ ಖಂಡಿತ ಗುಣವಾಗುವ ಖಾಯಿಲೆ ಇದು. ಮತ್ತೆ ಇದನ್ನು ಸಾಂಕ್ರಾಮಿಕ ರೋಗವೆಂದು, ಇಂಥಹವರನ್ನು ಸಮಾಜದಿಂದ ದೂರ ಇರಿಸಬೇಕು ಎನ್ನುವ ಸಮಾಜದ ಒಂದು ವರ್ಗದ ನಂಬಿಕೆಯನ್ನು ಮುರಿದು, ಅವರಿಗೂ ಬದುಕಲು ಹಕ್ಕಿದೆ, ಅವರನ್ನು ಮಾನವೀಯತೆಯಿಂದ ನೋಡಿಕೊಂಡಾಗ ಗುಣಪಡಿಸಲು ಸಾಧ್ಯ ಮತ್ತೆ ರೋಗಿಗೆ ತಾನು ಬದುಕಬಲ್ಲೆ ಎಂಬ ಭರವಸೆಯನ್ನು ಕೊಡುವುದು ಅವರ ಸುತ್ತಲೂ ಇರುವವರ ಧರ್ಮ ಎಂದು ಸಾರುವ ಚಿತ್ರವಿದು. 

ರಾಜಕುಮಾರ್ ಸಾಮಾನ್ಯವಾಗಿ ತಾಯಿಯ ಪಾತ್ರದೆದುರು ಜೋರಾಗಿ ಮಾತನಾಡೋಲ್ಲ.. ಅವರ ಸಿನಿಮಾ ತಾಯಿ ಪಂಡರಿಬಾಯಿ ಇಂದಿಗೂ ಮಕ್ಕಳ ಆಶಯಕ್ಕೆ ವಿರುದ್ಧ ಮಾತಾಡೋಲ್ಲ ಅಂತ ಸಂಯಮ ಕಾಯ್ದುಕೊಂಡು ಬಂದಿರುವ ನಟ ನಟಿಯರು ಇವರಿಬ್ಬರು. ಆದರೆ ಈ ಚಿತ್ರದಲ್ಲಿ ಕೊಂಚ ಬದಲಾವಣೆ, ತನ್ನ ಅಣ್ಣನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹಠ ಮಾಡುವ ಪಾತ್ರ.. ತಾನು ಮಾತು ಕೊಟ್ಟ ಹುಡುಗಿಯ ಮನೆಯವರನ್ನು ಕಾಪಾಡುವ ಸಲುವಾಗಿ ತಾಯಿಯ ಇಚ್ಚೆಗೆ ವಿರುದ್ಧವಾಗಿ ಮಾತಾಡುವ ಪಾತ್ರ.. ಆದರೆ ಕಡೆಯಲ್ಲಿ ಇಬ್ಬರೂ ತಮ್ಮ ತಮ್ಮ ವಿಚಾರಗಳನ್ನು ಬದಲಿಸಿಕೊಳ್ಳುತ್ತಾರೆ ಮತ್ತೆ ಚಿತ್ರ ಸುಖಾಂತ್ಯವಾಗುತ್ತದೆ. 

ರಾಜಕುಮಾರ್ ಮತ್ತೊಮ್ಮೆ ಅಮೋಘ ಅಭಿನಯ ನೀಡಿದ್ದಾರೆ. ಇತ್ತ ಸ್ನೇಹಿತನ ಮನೆ, ಇಚ್ಛೆ ಪಟ್ಟ ಹುಡುಗಿ, ತನ್ನನ್ನು ಸಾಕಿ ಸಲಹಿದ ತಾಯಿ, ಜೊತೆಯಲ್ಲಿ ಬೆಳೆದ ತನ್ನ ಮಾವನ ಮಗಳ ಪ್ರೀತಿ ಹೀಗೆ ಎಲ್ಲವನ್ನೂ ಸಮಾಧಾನದಿಂದ ನಿಭಾಯಿಸುವ ಪರಿ ಇಷ್ಟವಾಗುತ್ತದೆ. 

ಸಂಯಮದ ಅಭಿನಯ.. ಕೆಲವು ದೃಶ್ಯಗಳಲ್ಲಿ ಮನಮಿಡಿಯುವಂತೆ ಅಭಿನಯಿಸಿದ್ದಾರೆ.. ಗೊಂದಲಗಳು, ತಾಕಲಾಟಗಳು ಇವುಗಳನ್ನು ಸಮರ್ಥವಾಗಿ ಅಭಿನಯಿಸಿರುವ ರಾಜಕುಮಾರ್ ಮಾಮೂಲಿನಂತೆ ಆ ಪಾತ್ರಕ್ಕಿ ತಾವಾಗಿದ್ದಾರೆ. 

ನಾಯಕಿಯಾಗಿ ಕಲ್ಪನಾ ಸಂಯಮದ ಅಭಿನಯ.. ನಾಯಕನಿಗೆ ತಾನು ಮದುವೆಯಾಗಲು ಸಿದ್ಧವಿಲ್ಲ ಎಂದು ಹೇಳುವಾಗಿನ ತಳಮಳವನ್ನು ಸೊಗಸಾಗಿ ಅಭಿನಯಿಸಿದ್ದಾರೆ. ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು ಹಾಡಿನ ಸಾಲಿನಲ್ಲಿ ಅವರ ಅವರ ಅಭಿನಯ ಸೊಗಸು. 

ಉದಕುಮಾರ್ ಅವರ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲವಾದರೂ, ನಾಯಕನ ಜೊತೆಯಲ್ಲಿನ ದೃಶ್ಯಗಳು ಮನಮುಟ್ಟುತ್ತವೆ. ತನ್ನ ತಂಗಿಗೆ ಬಂದ ಖಾಯಿಲೆಯನ್ನು ಕಡೆಗಣಿಸಿ ಜೊತೆಯಾಗುತ್ತೇನೆ ಎಂಬ ನಾಯಕನ ಮಾತಿಗೆ ಕಂಬನಿ ಮಿಡಿಯುವ ದೃಶ್ಯ ಇಷ್ಟವಾಗುತ್ತದೆ. 

ಪಂಡರಿಬಾಯಿ ಅವರದ್ದು ಮಾತೃ ಹೃದಯದ ಅಭಿನಯ.. 

ಶೈಲಶ್ರೀ ಇಲ್ಲಿ ಮಿಂಚುತ್ತಾರೆ.. ತಮ್ಮ ಆಸೆಗೆ ವಿರುದ್ಧವಾಗಿ ನೆಡೆಯುತ್ತಿದೆ ಎಂದು ಗೊತ್ತಾಗಿ ಅದರ ದುಃಖವನ್ನು ನುಂಗುತ್ತಾ, ನಾಯಕನಿಗೆ ಸಮಾಧಾನ ಪಡಿಸುವ ಹಾಗೂ ತನ್ನ ಅತ್ತೆಯನ್ನು ಒಪ್ಪಿಸುವ ಅಭಿನಯ ಸೊಗಸು. 

ಉಳಿದಂತೆ ಹಾಸ್ಯಕ್ಕಾಗಿ ಬಾಲಣ್ಣ ಮತ್ತು ನರಸಿಂಹರಾಜು ಇದ್ದಾರೆ. ಸಮಾಜದ ಒಂದು ವರ್ಗ ತಮ್ಮ ಅನುಕೂಲಕ್ಕಾಗಿ ತಮ್ಮ ಹಿತಕ್ಕಾಗಿ ವ್ಯಕ್ತಿಗಳ. ಮನೆಯ ಸಂತೋಷವನ್ನು, ನೆಮ್ಮದಿಯನ್ನು ಹೇಗೆ ಬಲಿ ಹಾಕುತ್ತಾರೆ ಎನ್ನುವುದು ಬಾಲಣ್ಣ ಅವರ ಅಭಿನಯದಲ್ಲಿ ತೋರುತ್ತಾರೆ. ಮಾತು ಮಾತಿಗೂ "ಇದಪ್ಪ ವರಸೆ" ಎಂದು ಹೇಳುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಪಾತ್ರ. 

ನರಸಿಂಹರಾಜು ಗುರುವಿಗೆ ತಿರು ಮಂತ್ರ ಹಾಕುವ ಮತ್ತು ಗುರುವಿನ ಆಶಯಕ್ಕೆ ವಿರುದ್ಧವಾಗಿ ನೆಡೆಯುವ ಪಾತ್ರ ಅಲ್ಲಲ್ಲಿ ನಗಿಸುತ್ತಾರೆ. 

ಹಿಂದಿನ ಕೆಲವು ಚಿತ್ರಗಳಲ್ಲಿ ಅಬ್ಬರಿಸಿದ್ದ ದಿನೇಶ್ ಇಲ್ಲಿ ಒಂದು ದೃಶ್ಯದಲ್ಲಿ ಬಂದು ಹೋಗುತ್ತಾರೆ. 

ಸಾಮಾಜಿಕ ಕಳಕಳಿಯ ಈ ಚಿತ್ರ ರಾಜಕುಮಾರ್ ಅವರ ಸಾಮಾಜಿಕ ಚಿಂತನೆಯ ಚಿತ್ರಗಳಲ್ಲಿ ಇದು ಒಂದು.