Friday, August 15, 2025

ಓದಿಗೂ ವ್ಯಕ್ತಿತ್ವಕ್ಕೂ ಸಂಬಂಧವಿಲ್ಲ ಅಂತ ಹೇಳುವ ಎಮ್ಮೆ ತಮ್ಮಣ್ಣ 1966 (ಅಣ್ಣಾವ್ರ ಚಿತ್ರ ೭೬/೨೦೭)

 ಈ ರೀತಿಯ ಕಥೆ ಚಿತ್ರಕಥೆಯಲ್ಲಿ ರಾಜಕುಮಾರ್ ಅವರು ನೀರು ಕುಡಿದಷ್ಟು ಸಲೀಸಾಗಿ ಅಭಿನಯಿಸುವಷ್ಟು ಅವರ ಅಭಿನಯ ಪರಿಪೂರ್ಣವಾಗುತಿತ್ತು.. 

ಒಂದೇ ತರಹ ಏಳು ಜನ ಇರುತ್ತಾರೆ ಎನ್ನುತ್ತದೆ ನಾಣ್ಣುಡಿ ಹಾಗೆಯೇ ಎಮ್ಮೆ ತಮ್ಮಣ್ಣನನ್ನು ಹೋಲುವ ಅಥವ ಎಮ್ಮೆ ತಮ್ಮಣ್ಣನು ಇನ್ನೊಬನನ್ನು ಹೋಲುವ ಕಥಾವಳಿ ಈ ಚಿತ್ರದಲ್ಲಿದೆ. 


ಆರಂಭದಲ್ಲಿ ಹಳ್ಳಿಯ ಶೈಲಿಯ ಮಾತುಗಳನ್ನು ಆಡುತ್ತಾ.. ಕೆಲವೇ ದೃಶ್ಯಗಳಲ್ಲಿ ಪಟ್ಟಣದ ಶಿಸ್ತುಬದ್ಧ ನೆಡೆಯನ್ನು ತೋರುವ ರಾಜಕುಮಾರ್ ಪಾತ್ರ ಈ ಚಿತ್ರದ ವಿಶೇಷ.. ಪಟ್ಟಣದ ನಾಜೂಕತನ.. ಆ ವೇಷಭೂಷಣ, ಭಾಷ ಶೈಲಿ.. ಎಲ್ಲವನ್ನೂ ರೂಡಿಸಿಕೊಂಡು ಸಿದ್ಧವಾಗುವ ಇನ್ನೊಂದು ಪಾತ್ರವೂ ವಿಶೇಷ. 



ಹೀಗೆ ಒಂದೇ ಚಿತ್ರದಲ್ಲಿ ಇಬ್ಬರೂ ರಾಜಕುಮಾರ್ ಅವರನ್ನು ನೋಡುವ ಭಾಗ್ಯ ನಮ್ಮದು.. ಸತಿ ಶಕ್ತಿ ಚಿತ್ರದಲ್ಲಿ ದ್ವಿಪಾತ್ರ ಚಿತ್ರದುದ್ದಕ್ಕೂ ಇದೆ.. ಆದರೆ ಅದೊಂದು ಪೌರಾಣಿಕ ಹಿನ್ನೆಲೆಯ ಚಿತ್ರ.. ಮಲ್ಲಿ ಮದುವೆಯಲ್ಲಿ ಒಂದು ಅರೆ ಕ್ಷಣ ಬಂದು ಹೋಗುವ ಪಾತ್ರದೊಂದಿಗೆ ಅದು ದ್ವಿಪಾತ್ರದ ಚಿತ್ರ ಎನಿಸಿದರೂ, ಪೂರ್ಣ ಪ್ರಮಾಣದಲ್ಲಿ ದ್ವಿಪಾತ್ರದಲ್ಲಿ ಚಿತ್ರದುದ್ದಕ್ಕೂ ಆವರಿಸಿಕೊಂಡಿರುವುದು ಸಾಮಾಜಿಕ ಚಿತ್ರಗಳಲ್ಲಿ ಇದೆ ಮೊದಲು. 

ಪ್ರತಿಯೊಂದು ದೃಶ್ಯದಲ್ಲೂ ರಾಜಕುಮಾರ್ ಇದ್ದೆ ಇರುತ್ತಾರೆ ಅನ್ನುವಷ್ಟು ಶಕ್ತಿಶಾಲಿಯಾಗಿದೆ ಚಿತ್ರಕಥೆ. ಇದು ಎ ಕೆ ವೇಲನ್ ಅವರ ಕಥೆಯಾಧರಿಸಿ, ಪದ್ಮಿನಿ ಪಿಕ್ಟ್ಚರ್ಸ್ ಸಾಹಿತ್ಯ ವಿಭಾಗ ಹೆಣೆದ ಚಿತ್ರಕಥೆಯುಳ್ಳ ಈ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದು ಬಿ ಆರ್ ಪಂತುಲು. 

ಸಂಭಾಷಣೆ ಮತ್ತು ಗೀತೆಗಳ ಹೊಣೆ ಹೊತ್ತವರು ಜಿ ವಿ ಅಯ್ಯರ್ .. ಸಂಗೀತ ಟಿ ಜಿ ಲಿಂಗಪ್ಪ.. ಗಾಯನ ಪಿ ಬಿ ಶ್ರೀನಿವಾಸ್, ಎಸ್ ಜಾನಕಿ, ಬೆಂಗಳೂರು ಲತಾ, ಪಿ ನಾಗೇಶ್ವರ್ ರಾವ್ ಅವರದ್ದು.. ಛಾಯಾಗ್ರಹಣ ಪಿ ಎಲ್ ನಾಗಪ್ಪ .. 

ಉತ್ತಮ ತಾಂತ್ರಿಕತೆ ಹೊಂದಿದ ಈ ಚಿತ್ರ.. ದ್ವಿಪಾತ್ರಗಳ ದೃಶ್ಯಗಳನ್ನು ತಂತ್ರಜ್ಞಾನದ ಇತಿಮಿತಿಯಲ್ಲಿ ಸೊಗಸಾಗಿ ಚಿತ್ರೀಕರಿಸಿದ್ದಾರೆ 

> ನೀನಾರಿಗಾದೆಯೋ ಎಲೆ ಮಾನವ ಹರಿ ಹರಿ ಗೋವು ನಾನು 

> ಕೊಳಲನೂದಿ ಕುಣಿವ ಪ್ರಿಯನೇ ಬಾರೋ 

> ಎಮ್ಮೆ ಎಲ್ಲಾ ಎಲ್ಲಣ್ಣ ಎಮ್ಮೆ ತಮ್ಮಣ್ಣ 

> ಬೆಳ್ಳಿ ಹಕ್ಕಿ ಆಗುವ ಬೆಳ್ಳಿ ಮೋಡ ಏರುವ 

> ಕಣ್ಣೆರೆಡು ಕರೆಯುತಿದೆ 

> ಕತ್ತರಿಸು ಕತ್ತರಿಸು 

ಹೀಗೆ ಆರು ಹಾಡುಗಳಿವೆ.. ಮತ್ತು ಕಥೆಯನ್ನು ಮುಂದುವರೆಸುತ್ತವೆ 

ಮುಖ್ಯ ಖಳಪಾತ್ರದಲ್ಲಿ ಡಿಕ್ಕಿ ಮಾಧವರಾವ್ ಅದ್ಭುತ.. ಖಳನಾಯಕ ಎಂದರೆ ಕಿರುಚಾಡಬೇಕು.. ಹೋರಾಡಬೇಕು ಎನ್ನುವ ಯಾವುದೇ ಸೂತ್ರವೂ ಇಲ್ಲದೆ ಪಾತ್ರಕ್ಕೆ ಎಷ್ಟು ಕ್ರೌರ್ಯ ತುಂಬಾ ಬಹುದು ಎಂದು ತೋರಿಸಿದ್ದಾರೆ. 

ವಕೀಲನಾದರೇನು ಸಂಗೀತ ಪ್ರಿಯನೂ ಹಾಗೂ ಮಾನವೀಯತೆ ರೂಡಿಸಿಕೊಂಡು ಬರುತ್ತೇನೆ ಎನ್ನುವಂತಹ ವ್ಯಕ್ತಿತ್ವದ ಪಾತ್ರದಲ್ಲಿ ಬಿ ಆರ್ ಪಂತುಲು ನಟಿಸಿದ್ದಾರೆ. ಮನೆ ಆಧಾರವಾಗಿಟ್ಟು ಕೇಸಿನ ಫೀಸ್ ತಂದಿದ್ದೇನೆ ಎಂದಾಗ.. ಕಕ್ಷಿಧಾರನಿಗೆ ಬಯ್ದು ದುಡ್ಡು ಕೊಟ್ಟು ವಾಪಸ್ ಕಳಿಸುವ ದೃಶ್ಯ ಉತ್ತಮವಾಗಿದೆ. 


ಬರುವ ಕಕ್ಷಿಧಾರರಿಗೆ ಹೊಟ್ಟೆ ತುಂಬಾ ಊಟ ಬಡಿಸಿ ಕೋರ್ಟಿಗೆ ಹೋಗಿರಪ್ಪಾ ಎಂದು ಹೇಳುತ್ತಾ.. ಸಂಸಾರವನ್ನು ನೆಡೆಸುವ ಎಂ ವಿ ರಾಜಮ್ಮ .. ಜೊತೆಯಲ್ಲಿ ಭಾರತೀಯ ನಾರಿಯ ಸಂಸೃತಿ ಸಂಸ್ಕಾರವನ್ನು ಮಾತುಗಳಲ್ಲಿ ಹೇಳುವಷ್ಟು ಪರಿಣಾಮಕಾರಿಯಾಗಿ ಅವರ ಅಭಿನಯವೂ ಕೂಡ ಇದೆ. 


ನರಸಿಂಹರಾಜು ಚಿತ್ರದ ಅಗತ್ಯತೆಗೆ ಹಾಗೂ ಹಾಸ್ಯಕ್ಕೆ ಸೇತುವೆಯಾಗಿ ನಿಂತಿದ್ದಾರೆ


ಭಾರತಿ ಚಿತ್ರದ ಇನ್ನೊಂದು ಉತ್ತಮ ಅಂಶ.. ನಾಜೂಕಾಗಿ ಅಭಿನಯಿಸುತ್ತ ಸದಾ ಕ್ಯಾಮೆರಾ ಇಟ್ಟುಕೊಂಡು ಫೋಟೋ ತೆಗೆಯುವ ಪಾತ್ರ.. 


ಜಿ ವಿ ಲತಾದೇವಿ ಎರಡನೇ ನಾಯಕಿಯಾಗಿ ಮುದ್ದಾದ ಅಭಿನಯ ನೀಡಿದ್ದಾರೆ . 


ಉಳಿದ ಕೆಲವು ಪಾತ್ರಗಳಲ್ಲಿ ಸುಬ್ಬಣ್ಣ, ಕೃಷ್ಣಶಾಸ್ತ್ರಿ, ಕುಪ್ಪುಸ್ವಾಮಿ, ಅನಂತರಾಮ್ ಮಚ್ಚೇರಿ, ಗುಗ್ಗು, ಪಾಪಮ್ಮ ಜಯ ಕಥೆಯ ಮುಖ್ಯ ವಾಹಿನಿಯಲ್ಲಿ ತೇಲಿಬರುತ್ತಾರೆ. 






ಇದೊಂದು ಉತ್ತಮ ಸಾಮಾಜಿಕ ಚಿತ್ರ.. ರಾಜಕುಮಾರ್ ಅವರ ಅಭಿನಯ ಮಾಗುತ್ತಿದೆ ಮತ್ತೆ ಪಾತ್ರಕ್ಕೆ ತಕ್ಕ ಹಾಗೆ ತಮ್ಮನ್ನು ಒಗ್ಗಿಸಿಕೊಳ್ಳುವ ಕಲೆ ಪ್ರಬುದ್ಧವಾಗಿ ಬೆಳೆಯುತ್ತಿದೆ ಎಂದು ನಿರೂಪಿಸುವ ಚಿತ್ರವಿದು. 

No comments:

Post a Comment