Sunday, January 4, 2026

ಅಪ್ಪಳಿಸಿದ ಸಾಹಿತಿಯ ಕೃತಿ ಧೂಮಕೇತು 1968 (ಅಣ್ಣಾವ್ರ ಚಿತ್ರ ೧೦೧/೨೦೭)

ಅಚ್ಚರಿ ಎನಿಸಬಹುದು ಆದರೆ ನಿಜ.. ಸುಮಧುರ ಪದಪುಂಜಗಳಿಂದ ಮಧುರವಾದ ಗೀತೆಗಳನ್ನು ರಚಿಸಿದ ಸಾಹಿತಿ ಆರ್ ಎನ್  ಜಯಗೋಪಾಲ್ ಅವರು ಸಾಹಸ ಪ್ರಧಾನವಾದ ಚಿತ್ರ ನಿರ್ದೇಶಿಸಿದ್ದು ಅಚ್ಚರಿಯೇ ಹೌದು. 

ಚಿತ್ರಕಥೆ, ಸಂಭಾಷಣೆ, ಹಾಡುಗಳು ಮತ್ತು ನಿರ್ದೇಶನ ಅವರದ್ದೇ..ತಮ್ಮ ಮೊದಲ ಪ್ರಯತ್ನವನ್ನು ತಮ್ಮ ಪಿತ ಆರ್ ನಾಗೇಂದ್ರರಾಯರಿಗೆ ಅರ್ಪಿಸಿದ್ದಾರೆ. 


 


ಶ್ರೀ ಭಗವತಿ ಆರ್ಟ್ಸ್ ಪ್ರೊಡಕ್ಷನ್ಸ್ ಅವರ ಲಾಂಛನದಲ್ಲಿ ಅವರ ಕಥಾವಿಭಾಗದಿಂದ ರಚಿತವಾದ ಕತೆಯ ಆಧಾರಿತ ಚಿತ್ರ ಧೂಮಕೇತು.. 

ಸುಮಧುರ ಹಾಡುಗಳನ್ನು ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಎಲ್ ಆರ್ ಈಶ್ವರಿ ಹಾಡಿದ್ದಾರೆ. 

ಛಾಯಾಗ್ರಹಣ ನಿರ್ದೇಶಕರ ಸಹೋದರರಾದ ಆರ್ ಎನ್ ಕೆ ಪ್ರಸಾದ್

ಸಂಗೀತ ಟಿ ಜಿ ಲಿಂಗಪ್ಪ ಅವರದ್ದು 

ಇಲ್ಲಿ ನಾಯಕಿ ಉದಯಚಂದ್ರಿಕಾ ಅತೀ ಮುದ್ದಾಗಿ ಕಾಣುತ್ತಾರೆ. ಚಿತ್ರದ ಉದ್ದಕ್ಕೂ ಇರುತ್ತಾರೆ. 


ಧೂಮಕೇತುವಾಗಿ ಉದಯಕುಮಾರ್ ಅವರ ಅಭಿನಯ ಅತಿ ಅದ್ಭುತ.. ಅವರ ವೇಷಭೂಷಣ, ಆ ಗತ್ತು, ಆ  ಧ್ವನಿ, ಮುಖಾಭಿನಯ ಪರಿಣಾಮಕಾರಿಯಾಗಿ ಖಳನನ್ನು ತೆರೆಗೆ ತಂದಿದ್ದಾರೆ. 


ಅಶ್ವಥ್ ಪೊಲೀಸ್ ಅಧಿಕಾರಿಯಾಗಿ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ.. ಪ್ರಭಾವಿ ಪಾತ್ರ, ಪೊಲೀಸ್ ಅಧಿಕಾರಿಯ ಗತ್ತು ಸೊಗಸಾಗಿದೆ.. 


ನರಸಿಂಹರಾಜು ಅನೇಕಾನೇಕ ಯಂತ್ರೋಪಕರಣಗಳನ್ನು ಕಂಡು ಹಿಡಿದು ತಯಾರಿಸುವ ಹಾಸ್ಯ ಪಾತ್ರ.. ಸದ್ದಿಲ್ಲದೇ ನಾಯಕನಿಗೆ ಸಹಾಯ ಮಾಡುವ ಪಾತ್ರವದು.. ಅಲ್ಲಲ್ಲಿ ನಗಿಸುತ್ತಾರೆ. ಅಂತಿಮ ಹಣಾಹಣಿಯ ದೃಶ್ಯಗಳಲ್ಲಿ ನಗಿಸುತ್ತಾರೆ. 



ಖಳನ ಸಹಾಯಕನಾಗಿ ಶಕ್ತಿಪ್ರಸಾದ್, ನಾಗಪ್ಪ ಮೊದಲಾದವರು ಇದ್ದಾರೆ 



ಶೈಲಶ್ರೀ ಸಿಐಡಿ ಸಹಾಯಕಿಯಾಗಿ ಪಾತ್ರವಿದ್ದರೂ ಖಳನ  ಕಾಣಿಸಿಕೊಳ್ಳುವುದರಿಂದ ಆಕೆಯೂ ಖಳನಟಿ ಇರಬಹುದು ಎನಿಸುತ್ತದೆ.. ಆದರೆ ಒಂದು ಹಾಡು ಒಂದೆರಡು ದೃಶ್ಯಗಳಿಗೆ ಮಾತ್ರ ಸೀಮಿತವಾಗಿದೆ


ಉಳಿದಂತೆ ಸಂಪತ್, ಗಣಪತಿ ಭಟ್, ಪೊಲೀಸ್ ಇನ್ಸ್ಪೆಕ್ಟರ್ ಆಗಿ ರಂಗ ಇದ್ದಾರೆ 




 ಈ ಚಿತ್ರದ ಮುಖ್ಯ ಆಕರ್ಷಣೆ ಪ್ರಭಾತ್ ಸರ್ಕಸ್ ಅವರ ಕವಾಯುತಗಳು, ಕಸರತ್ತುಗಳು, ಪ್ರಾಣಿಗಳ ಆಟ ಸುಮಾರು ಇಪ್ಪತ್ತು ನಿಮಿಷಗಳ ದೃಶ್ಯಗಳು ಗಮನ ಸೆಳೆಯುತ್ತವೆ

ಮುಖ್ಯ ಪಾತ್ರದಲ್ಲಿ ರಾಜಕುಮಾರ್ ನಟನೆ ಸ್ಮರಣೀಯವಾಗಿದೆ. ಕಾರಣ ಮೊದಲ ಹಲವಾರು ದೃಶ್ಯಗಳಲ್ಲಿ ಜವಾಬ್ಧಾರಿ ಇಲ್ಲದೆ ಮೋಜು ಮಸ್ತಿಗಳಲ್ಲಿ ಸಮಯ ಕಳೆಯುವ ಪಾತ್ರ... ಅರೆ ರಾಜಕುಮಾರ್ ಅವರು ಹೀಗೂ ಇರಬಹುದೇ ಅನಿಸುತ್ತದೆ.  ತನ್ನ ಅಪ್ಪ ಕೆಲವು ತಪ್ಪು ನಿರ್ಧಾರಗಳಿಂದ ಸಾಲಗಳಲ್ಲಿ  ಮುಳುಗಿದ್ದಾರೆ ಎಂದು ತಿಳಿದಾಗ ಹತಾಶೆ ವ್ಯಕ್ತ ಪಡಿಸುವ ಅಭಿನಯ ಸೂಪರ್ ಇದೆ. 

ತಮ್ಮ  ದೊಡ್ಡಪ್ಪನ ಬಳಿ ಸಹಾಯ ಕೇಳಲು ಬಂದಾಗ ತನ್ನ ತಮ್ಮನ ಮಗನ ಬೇಜವಾಬ್ಧಾರಿತನದ ಬಗ್ಗೆ ಗೊತ್ತಿದ್ದ ಅವರು ನಿನಗೆ ಸಹಾಯ ಮಾಡಲಾರೆ .. ಆದರೂ ಸಹಾಯ ಮಾಡುವೆ ಅಂತ ಹೇಳಿದಾಗ ತನ್ನ ಪರಿಶ್ರಮದ ಬಲದಿಂದಲೇ ಮೇಲೆ ಬರುತ್ತೇನೆ ಎಂದು  ಹೇಳುವ ದೃಶ್ಯದಲ್ಲಿ ಇಷ್ಟವಾಗುತ್ತಾರೆ. 

ನೂರು ಚಿತ್ರಗಳನ್ನು ಮುಗಿಸಿದ ಮೇಲೆ ಚಿತ್ರವನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳುವ ಪರಿ ಕಾಣುತ್ತದೆ. ನೂರು ಚಿತ್ರಗಳ ನಟನಾಗಿ ಪೂರ್ಣಗೊಳಿಸಿದ ಮೇಲೆ ಅವರನ್ನು ನಟಸಾರ್ವಭೌಮ ಎಂಬ ಬಿರುದು ಅವರ ಹೆಸರಿನೊಂದಿಗೆ ಸೇರಿದೆ. 


Friday, January 2, 2026

ನೂರನೇ ಬಾಗಿಲು ಅದುವೇ ಭಾಗ್ಯದ ಬಾಗಿಲು 1968 (ಅಣ್ಣಾವ್ರ ಚಿತ್ರ ೧೦೦/೨೦೭)

ಕೆಲವೊಮ್ಮೆ ಆಗಿ ಬಿಡುತ್ತದೆ.. 

ಕೆಲವೊಂದನ್ನು ಮೊದಲೇ ಊಹಿಸಲಾಗದು 

ಕೆಲವು ಪೂರ್ವ ನಿರ್ಧರಿತವಾಗಿದ್ದರೂ ಕೈಗೂಡೋದಿಲ್ಲ 

ರಾಜಕುಮಾರ್ ಚರಿತ್ರಾರ್ಹ ನಟನಾಗಿದ್ದು ಕರುನಾಡ ಚಿತ್ರರಸಿಕರ ಪ್ರಪಂಚದಲ್ಲಿ ನೆಡೆದ ಒಂದು ವಿಸ್ಮಯ. ಬೇಡರ ಕಣ್ಣಪ್ಪ ಚಿತ್ರದಲ್ಲಿ ಆಯ್ಕೆಗೊಂಡಾಗ ಅವರಿಗೆ ನಂಬಿಕೆ ಇರಲಿಲ್ಲ ಚಿತ್ರರಂಗದಲ್ಲಿ ತಾನು ಇಷ್ಟು ದೂರ ಬರಬಹುದು ಎಂದು.. 

ಶತ ಚಿತ್ರಗಳ ನಾಯಕ ನಟ ಎಂಬ ಬಿರುದು ಹೊತ್ತ ರಾಜಕುಮಾರ್ ಅವರ ನೂರನೇ ಚಿತ್ರವೇ ಈ ಭಾಗ್ಯದ ಬಾಗಿಲು.. 


 


ಈ ಚಿತ್ರ ಅವರ ಹಿಂದಿನ ೯೯ ಚಿತ್ರಗಳಿಗಿಂತ ಭಿನ್ನವಾಗಿ ಆರಂಭವಾಗುತ್ತದೆ. ಇಲ್ಲಿ ಗಮನಿಸಬೇಕಾದ್ದು ತಾನು ಅಷ್ಟೊಂದು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ ಎಂಬ ಭಾವ ಕೊಂಚವೂ ಕಾಣ ಸಿಗದು.. ಹುಚ್ಚನಾಗಿ ಅಭಿನಯಿಸುವ ಆರಂಭದ ದೃಶ್ಯಗಳು.. ಮತ್ತೆ ಸಿನೆಮಾದ ಅಂತಿಮ ಹಂತದಲ್ಲಿ  ಎಲ್ಲವೂ ಬಿಡಿಬಿಡಿಯಾಗಿ ನಂತರ ಸುಖಾಂತ್ಯವಾಗೋದು ಈ ಚಿತ್ರದ ವಿಶೇಷತೆ.. 

ಹೌದು ಹಲವಾರು ಬಾರಿ ತುಂಬಾ ನಿರೀಕ್ಷಿತ ಚಿತ್ರಕಥೆಗಳು ದೃಶ್ಯ ಮಾಧ್ಯಮದಲ್ಲಿ ಹಾಗೆಯೆ ಮೂಡಿ ಬರಲು ಸಾಹಸ ಮಾಡುವುದುಂಟು.. 

ಈ ಚಿತ್ರ ನೋಡಿದಾಗ ಇದೆ ನೂರನೇ ಚಿತ್ರವಾಗಬೇಕಿತ್ತೇ ಅನಿಸೋದು ಸಹಜ.. ಆದರೆ ರಾಜಕುಮಾರ್ ಅವರ ತನ್ಮಯತೆ, ತನ್ನ ಕೆಲಸದ ಮೇಲೆ ತಾವಿಟ್ಟಿರುವ ಶ್ರದ್ಧೆ, ತಮ್ಮ ಮೇಲೆ ತಮಗಿರುವ ನಂಬಿಕೆ, ತನ್ನ ಕೆಲಸ ಅಭಿನಯಿಸೋದು.. ನಿರ್ದೇಶಕನೇ ಚಿತ್ರಗಳ ಕಪ್ತಾನ ಎನ್ನುವ ಅವರ ಸಿದ್ಧಾಂತ.. ಎಲ್ಲವೂ ಕಾಣಸಿಗುತ್ತದೆ. 

ಅಭಿನಯ, ಅಭಿನಯ, ಅಭಿನಯ.. ಇಷ್ಟೇ ಅವರ ಕಾರ್ಯ ಕ್ಷೇತ್ರ ಅನ್ನಿಸುವಂತೆ ಅವರ ಅಭಿನಯದ ಶಕ್ತಿ ಖುಷಿಕೊಡುತ್ತದೆ.. 

ದೊರೆ ಅವರ ಕಥೆಯನ್ನು ಚಿತ್ರಕತೆ ರಚಿಸಿ ನಿರ್ದೇಶಿಸುವ ಭಾಗ್ಯ ಒದಗಿದ್ದು ಕೆ ಎಸ್ ಎಲ್ ಸ್ವಾಮಿ ಅಥವ ರವಿ ಅವರಿಗೆ. 

ಬಿ ಎಚ್ ಜಯಣ್ಣ ನಿರ್ಮಾತೃ 

ಎಸ್ ಜೆ ಕೆ ಪ್ರೊಡಕ್ಷನ್ಸ್ ಲಾಂಛನ 

ಕೆ ಜಾನಕಿರಾಮ್ ಅವರ ಛಾಯಾಗ್ರಹಣ 

ವಿಜಯಭಾಸ್ಕರ್ ಅವರ ಸಂಗೀತ 

ಪಿ ಬಿ ಶ್ರೀನಿವಾಸ್, ಬಾಲಸುಬ್ರಹ್ಮಣ್ಯಂ , ಎಸ್ ಜಾನಕೀ ಅವರ ಗಾಯನ ಸುಧೆ 

ಈ ಮೈಲಿಗಲ್ಲಿನ ಸಿನಿಮಾದಲ್ಲಿ ರಾಜಕುಮಾರ್ ಅವರ ಜೊತೆಯಲ್ಲಿ ಬಾಲಕೃಷ್ಣ, ದ್ವಾರಕೀಶ್, ಅಶ್ವಥ್, ಬಿ ವಿಜಯಲಕ್ಷ್ಮಿ, ಬಿ ವಿ ರಾಧಾ, ಬಿ ಜಯ, ಜಯಶ್ರೀ, ಪಾಪಮ್ಮ, ತೂಗುದೀಪ ಶ್ರೀನಿವಾಸ್ ಮುಂತಾದವರಿದ್ದಾರೆ. 

ಹೆಸರಾಂತ  ನಾಯಕಿ ನಟಿ ಇಲ್ಲ.. ಹಿಂದೆ ತಮ್ಮ ಜೊತೆ ಅಭಿನಯಿಸಿದ ನಾಯಕಿಯರು ಇಲ್ಲ.. ಆದರೂ ಇದು ಅವರ ನೂರನೇ ಚಿತ್ರ ಎನ್ನುವ ಆಕರ್ಷಣೆಯೇ ಮುಖ್ಯವಾಗಿ ಮಿಕ್ಕ ವಿಷಯಗಳು ಗೌಣವಾಗಿವೆ.. 

ನಾಯಕನನ್ನು ವಿಜೃಂಭಿಸುವ "ನಾನೇ ರಾಜಕುಮಾರ.. " ಈ ಚಿತ್ರದ ಮುಖ್ಯ ಆಕರ್ಷಣೆ. 

ಕರುನಾಡಿನ ಕಟ್ಟ ಕಡೆಯ ಮಹಾರಾಜರು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಜಾತ್ರೆಯ ಸಂದರ್ಭದ ದೃಶ್ಯಗಳಲ್ಲಿ ಕಾಣುತ್ತಾರೆ. 



ಆಗಿನ ಕಾಲದ ಬೆಂಗಳೂರನ್ನು ನೋಡುವ ಸೌಭಾಗ್ಯ ಸಿಗುತ್ತದೆ.. ಈಗ ನೆನಪಾಗಿ ಉಳಿದಿರುವ ಭಾರತ್, ನಂದ, ಮಿನರ್ವ ಮೊದಲಾದ ಟಾಕೀಸುಗಳು ಕಾಣುತ್ತವೆ.. 






ರಾಜಕುಮಾರ್ ಅವರು ತಮ್ಮದೇ  ಚಿತ್ರದ ಪೋಸ್ಟರುಗಳನ್ನು ಅಂಟಿಸುವ, ತಮ್ಮದೇ ಹಿಂದಿನ ಚಿತ್ರಕ್ಕೆ ಟಿಕೇಟು ಪಡೆಯುವ ಸಲುವಾಗಿ ಸರತಿ ಸಾಲಿನಲ್ಲಿ ನಿಲ್ಲುವ  ದೃಶ್ಯಗಳು ವಿಶೇಷ..




 ಚಿತ್ರದ ಕೆಲವು ದೃಶ್ಯ ಚಿತ್ರಗಳು ನಿಮಗಾಗಿ 
















ಒಳ್ಳೆಯವರಿಗೆ ಅಣ್ಣ ರೌಡಿ ರಂಗಣ್ಣ 1968 (ಅಣ್ಣಾವ್ರ ಚಿತ್ರ ೯೯/೨೦೭)

ಶ್ರೀ ರಾಮ ಎಂಟರ್ಪ್ರೈಸಸ್ ಅವರ ರೌಡಿ ರಂಗಣ್ಣ.. ಇದೊಂದು  ಹಳ್ಳಿಯಲ್ಲಿ ನೆಡೆಯುವ ಕಥೆ. 

ಹಣವಂತರು ಬಡವರ ಮೇಲೆ ತೋರುವ ದರ್ಪ.. ಸಿಡಿದೆದ್ದು ಬೀಳುವ ಬಡವನ ಕೋಪ.. ಅದರ ಪರಿಣಾಮ, ನಂತರ ಸಿರಿವಂತರ ಸೋಲು.. ಸುಖಾಂತ್ಯ ಇಲ್ಲವೇ ಆಘಾತದ ಅಂತ್ಯ.. ಈ ಸಮೀಕರಣವನ್ನು ಒಳಗೊಂಡ ಚಿತ್ರವಿದು.. 

ಮತ್ತೊಮ್ಮೆ ರಾಜಕುಮಾರ್ ವಿಭಿನ್ನ ಪಾತ್ರದಲ್ಲಿ ಮಿಂಚುತ್ತಾರೆ.. ತಂಗಿಯ ಮೇಲಿನ ಪ್ರೀತಿ ಆತನನ್ನು ಯಾವುದೇ ಕಠಿಣ ನಿರ್ಧಾರಕ್ಕೆ ಒಳಪಡಿಸುತ್ತದೆ.. 

ರೈತನಾಗಿದ್ದವ ಬೆಳೆ ಬೆಳೆದು ಬಂದ ಹಣದಿಂದ.. ಸಾಹುಕಾರನ ಸಾಲ ತೀರಿಸು ಎಂದು ಹೇಳಿದ ತಂಗಿಯ ಮಾತನ್ನು ಬೇಡ ಎಂದು ಹೇಳಿ, ನಿನ್ನ ಮದುವೆ ಮುಖ್ಯ, ಸಾಲವನ್ನು ಇಂದು ನಾಳೆ ತೀರಿಸಬಹುದು, ಆದರೆ ಉತ್ತಮ ಬಾಳು ಮತ್ತೆ ಬಾರದು ಎಂದು ಉತ್ತಮ ಕುಟುಂಬದ ಜೊತೆ ಮದುವೆ ನಿಶ್ಚಯವಾಗಿ ಮದುವೆಯೂ ಆಗುವ ವೇಳೆಯಲ್ಲಿ ಆ ಸಿರಿವಂತ ತನ್ನ ದರ್ಪವನ್ನು ಚಲಾಯಿಸಿ ಮದುವೆ ಮುರಿಯುವುದು ಅಷ್ಟೇ ಅಲ್ಲದೆ, ಅಣ್ಣ ಸೆರೆವಾಸ ಅನುಭವಿಸಲು ಕಾರಣವಾಗುತ್ತಾನೆ.. 

ಇದರಿಂದ ಸಿಟ್ಟಾದವ ಸೆರೆಮನೆಯಿಂದ ಬಂದ ಮೇಲೆ ಸೇಡು ತೀರಿಸಿಕೊಳ್ಳಲು ಬಂದಾಗ, ಆತನ ತಂಗಿಯ ಜೀವನದಲ್ಲಿ ನೆಡೆದ ಅಚಾನಕ್ ತಿರುವುಗಳಿಂದ ಆ ಸಿರಿವಂತನ ಸೊಸೆಯಾಗಿರುತ್ತಾಳೆ.. ಆದರೆ ಇಲ್ಲಿ ನೆಡೆಯುವ ಒಂದು ಘಟನೆಯಿಂದ, ಆತನ ತಂಗಿ ಗಂಡನ ಮನೆಯಿಂದ ಹೊರಹೋಗುವಂತೆ ಆಗುತ್ತದೆ.. ಮತ್ತೆ ನಾಯಕನ ಹೋರಾಟ.. ತನ್ನ ತಂಗಿ ನಿರಪರಾಧಿ ಎಂದು ನಿರೂಪಿಸಿ, ತನ್ನ ಬಾಳಿಗೂ ಒಬ್ಬ ನಾಯಕಿ ಸಿಗುವುದರ ದೃಶ್ಯದಲ್ಲಿ ಚಿತ್ರ ಅಂತ್ಯ ಕಾಣುತ್ತದೆ.. 

ಇಲ್ಲಿ ರಾಜಕುಮಾರ್ ಅವರ ಬಗ್ಗೆ ಹೊಗಳಿಕೆ ಏನೆಂದರೆ.. ಅಷ್ಟೊಂದು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ತನ್ನ ಪಾತ್ರದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಚಿತ್ರ  ನಿರ್ಮಾಪಕರ ಹಿತ ಕಾಯುವುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ... 

ರಾಜಾಶಂಕರ್ ಮತ್ತು ಚಂದ್ರಕಲಾ ಅವರ ಪಾತ್ರವೇ ಪ್ರಧಾನ.. 

ಬಾಲಕೃಷ್ಣ ಮತ್ತು ರಮಾದೇವಿ ಚಿತ್ರದುದ್ದಕ್ಕೂ ಆವರಿಸಿಕೊಂಡಿದ್ದಾರೆ 

ಮನೆಯಾಳು ಪಾತ್ರದಲ್ಲಿ ರತ್ನಾಕರ್ ಚಿತ್ರದುದ್ದಕ್ಕೂ ಇರುತ್ತಾರೆ 

ಆದರೆ ರಾಜಕುಮಾರ್ ಪಾತ್ರ ಆರಂಭದ ಕೆಲವು ದೃಶ್ಯಗಳು ಮತ್ತೆ ಅವರ ಸೆರೆವಾಸ ಮತ್ತೆ ಅವರು ಬರೋದು ಸಿನಿಮಾದ ಸುಮಾರು ಅಂತಿಮ ದೃಶ್ಯಗಳಲ್ಲಿ.. ಆದರೆ ಅವರಿಗೆ ಸಿಗುವ ದೃಶ್ಯಗಳಲ್ಲಿ ರೋಷ, ಆಕ್ರೋಶ, ಸೇಡು, ಸಿಟ್ಟು, ದುಡುಕುತನ, ತಾಳ್ಮೆ, ಹಾಸ್ಯ, ಸಂಯಮ, ಕಿಲಾಡಿತನ ಎಲ್ಲವನ್ನೂ ತೋರಿಸುತ್ತಾರೆ.. 

ಅವರ ಅಭಿನಯದ ಸೊಗಸು ನೋಡುವುದೇ ಒಂದು ಅನುಭವ.. ತನ್ನ ಪಾತ್ರದ ಬಗ್ಗೆ ಯೋಚನೆ ಮಾಡುತ್ತಾ, ತನ್ನ ಪಾತ್ರವನ್ನು ಹೇಗೆ ಉತ್ತಮ ಪಡಿಸುವುದು, ಹಿಂದಿನ ಚಿತ್ರಗಳ ಅನುಭವ ಹೇಗೆ ತನ್ನನ್ನು ಉತ್ತಮ ನಟನನ್ನಾಗಿ ಮಾಡಲು ಸಹಕರಿಸುತ್ತಿದೆ.. ಅವರ ಅಭಿನಯದಲ್ಲಿ ಕಾಣುವುದು ಈ ತುಡಿತವೇ.. 

ಚಿತ್ರದ  ಉತ್ತರಾರ್ಧದಲ್ಲಿ ಮುದ್ದಾಗಿ ಸೂಟು ಬೂಟುಗಳಲ್ಲಿ ಕಾಣುವ ರಾಜಕುಮಾರ್ ಕಣ್ಣಿಗೆ ಹಬ್ಬ ಮೂಡಿಸುತ್ತಾರೆ .. 

ಇಲ್ಲಿ ಮತ್ತೆ ಬಾಲಣ್ಣ ಪಂಚಿಂಗ್ ಸಂಭಾಷಣೆಗಳಿಂದ ಮನಸೆಳೆಯುತ್ತಾರೆ.. ಸಾಧಾರಣ ಸಂಭಾಷಣೆಗೆ ಚಿನ್ನದ ಮೆರುಗು ಕೊಡುವ ಅವರ ಪ್ರತಿಭೆ ಮತ್ತೊಮ್ಮೆ ಅನಾವರಣಗೊಂಡಿದೆ 

"ನನಗೊತ್ತು ನೀನು ಹೇಗೆ ಹೇಳ್ತೀಯ ಅಂತ"

"ಮದುವೆಯಲ್ಲಿ ಹೆಣ್ಣನ್ನು ನೋಡೋಣ ಎಂದರೆ.. ಪುರೋಹಿತ ಅರ್ಜೆಂಟ್ ಮಾಡುತಿದ್ದ, ಒರೆಗಣ್ಣಲ್ಲಿ ನೋಡೋಣ ಎಂದರೆ ಹೋಮದ ಹೊಗೆ.. ಮಗು  ಹುಟ್ಟಿದ ಮೇಲೆಯೇ ನಿಮ್ಮಮ್ಮನ ಮುಖ ನೋಡಿದ್ದು"

"ಏ ರಂಗನ ತಂಗಿ"

"ಅಯ್ಯೋ ನಿನ್ನ ಮನೆ ಹಾಳಾಗ"

ಈ ರೀತಿಯ ಅನೇಕಾನೇಕ ಸಂಭಾಷಣೆಗಳು ನೋಡುಗರಲ್ಲಿ ಸೀಟಿ ಹೊಡೆಸುತ್ತದೆ. 

ಗಣಪತಿ ಭಟ್, ಈಶ್ವರಪ್ಪ, ಎಚ್ ಆರ್ ಶಾಸ್ತ್ರೀ, ಗುಗ್ಗು,ರತ್ನಾಕರ್, ರಮಾದೇವಿ ಇವರೆಲ್ಲಾ ಕಥೆಗೆ ಸಾತ್ ನೀಡಿದ್ದಾರೆ.. 

ಜಯಂತಿ ಇತ್ತ ನಾಯಕಿಯೂ ಅಲ್ಲ ಅತ್ತ ಅತಿಥಿ ನಟಿಯೂ ಅಲ್ಲ ಅನ್ನೋ ಹಾಗೆ ಇರುವ ಪಾತ್ರಕ್ಕೆ ಜೀವ  ತುಂಬಿದ್ದಾರೆ.. ಆ ಚೆಲುವು, ಆ ಸೊಬಗು, ಆ ಮಾತುಗಳು, ಜೇನು ದನಿ.. ಬಲು ಇಷ್ಟವಾಗುತ್ತದೆ.. 

ನರಸಿಂಹರಾಜು ಒಂದು ಪುಟ್ಟ ಪಾತ್ರದಲ್ಲಿ ಬಂದು ಹೋಗುತ್ತಾರೆ 

ಪಂಡರಿಬಾಯಿ ಧರಣಿಗೆ ಗಿರಿ ಭಾರವೇ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ 

ದಿನೇಶ್ ಪುಟ್ಟ ಖಳನ ಪಾತ್ರದಲ್ಲಿ ಆದರೆ ಚಿತ್ರಕ್ಕೆ ತಿರುವು ಕೊಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ 

ಅಂತಿಮ ದೃಶ್ಯದಲ್ಲಿ ಭಗವಾನ್ ಕಾಣಿಸಿಕೊಳ್ಳುತ್ತಾರೆ 

ಜೋಕರ್  ಶ್ಯಾಮ್, ಅಯ್ಯಂಗಾರ್, ಇಂದಿರಾ ಜಾರ್ಜ್, ಎಂ ಎನ್ ಲಕ್ಷ್ಮೀದೇವಿ ಪುಟ್ಟ ಪಾತ್ರಗಳಲ್ಲಿ ಬರುತ್ತಾರೆ. 

ಎ ಕೆ ವೇಲನ್ ಅವರ ಕಥೆಯನ್ನು ಬಿ ದೊರೈರಾಜ್ ಅವರ ಛಾಯಾಗ್ರಹಣ, ಸತ್ಯಂ ಅವರ ಸಂಗೀತ, ಚಿ ಉದಯಶಂಕರ್ ಅವರ ಸಂಭಾಷಣೆ ಮತ್ತು ಹಾಡುಗಳ ಸಹಕಾರದಿಂದ ಆರ್ ರಾಮಮೂರ್ತಿಯವರು ನಿರ್ದೇಶಿಸಿದ್ದಾರೆ. 

ಗಾಯನ ಪಡೆಯಲ್ಲಿ  ಪಿ ಬಿ ಶ್ರೀನಿವಾಸ್, ಬಾಲಸುಬ್ರಹ್ಮಣ್ಯಂ, ಪಿ ಸುಶೀಲ, ಎಸ್ ಜಾನಕೀ ಇದ್ದಾರೆ.