Saturday, January 17, 2026

ಹಳ್ಳಿಯ ಬದುಕನ್ನು ತೋರಿಸುತ್ತಾ ಸಂದೇಶ ಕೊಡುವ ಮಣ್ಣಿನ ಮಗ - 1968 (ಅಣ್ಣಾವ್ರ ಚಿತ್ರ ೧೦೫/೨೦೭)

ಹಳ್ಳಿಯ ಜೀವನ.. ಅಲ್ಲಿನ ಮುಗ್ಧತೆ, ಕ್ರೌರ್ಯ, ಮೌಢ್ಯ, ದ್ವೇಷ, ಜಾಣತನ, ಪ್ರೀತಿಯನ್ನು ದುರುಪಯೋಗಪಡಿಸಿಕೊಳ್ಳುವ ಕ್ರೂರತೆ.. ಹಳ್ಳಿಯಲ್ಲಿ ಮುಗ್ಧ ಜನರನ್ನು ದಾರಿ ತಪ್ಪಿಸುವವರು, ಅದೇ ಜನಗಳನ್ನು ಸರಿದಾರಿಗೆ ತರುವ ಸಾಹಸ.. ಸಾಧಿಸಿ ಗುರಿ ಮುಟ್ಟುವ ಛಲ ಮತ್ತು ಅದನ್ನು ಮೆಟ್ಟಿ ನಿಲ್ಲುವ ಸಾಹಸೀ ಯಶಸ್ವೀ ಪ್ರಯತ್ನ. ಈ ರೀತಿಯ ಎಲ್ಲಾ ವಿಶೇಷಣಗಳನ್ನು ಅಳವಡಿಸಿಕೊಂಡು ಕಥೆ ಚಿತ್ರಕಥೆ ಸಂಭಾಷಣೆ ಹಾಡುಗಳು ಮತ್ತು ನಿರ್ದೇಶನ ಮಾಡಿರುವವರು ಗೀತಪ್ರಿಯ ಎಂಬ ನಾಮಾಂಕಿತರಾದ ಲಕ್ಷ್ಮಣರಾವ್ ಮೋಹಿತೆ. 

ಸುದರ್ಶನ್ ಮೂವೀಸ್ ಲಾಂಛನದಲ್ಲಿ ಎಂ ವಿ ವೆಂಕಟಾಚಲಂ ಮತ್ತು ಅಲೆಕ್ಸಾಂಡರ್ ನಿರ್ಮಾಣ.. 

ವಿ ಮನೋಹರ್ ಛಾಯಾಗ್ರಹಣ ಮತ್ತು ವಿಜಯಭಾಸ್ಕರ್ ಸಂಗೀತ. 

ಈ ಚಿತ್ರದ ಆರಂಭದಲ್ಲಿ,  ತಾರಾಗಣ, ತಾಂತ್ರಿಕ ವರ್ಗದ ಹೆಸರು ತೋರಿಸುತ್ತಾ  ಹಿನ್ನೆಲೆಯಲ್ಲಿ ಹಳ್ಳಿಯ ಗ್ರಾಮೀಣ ದೃಶ್ಯ ತೋರಿಸಿರುತ್ತಾರೆ.. ಹೆಸರು ಮುಗಿದ ಮೇಲೆ ಆ ದೃಶ್ಯದಿಂದಲೇ ಸಿನಿಮಾ ಆರಂಭವಾಗುತ್ತದೆ.. ನಾಯಕನ ಪ್ರವೇಶವಾಗುತ್ತದೆ. ಸಾಮಾನ್ಯವಾಗಿ ಇದುವರೆಗಿನ ಚಿತ್ರಗಳಲ್ಲಿ ಹಾಗೆ ಇರಲಿಲ್ಲ. ಇದೊಂದು ವಿಶೇಷ!

ಇದೇನು ಸಭ್ಯತೆ ಇದೇನು ಸಂಸ್ಕೃತಿ ಈ ಹಾಡಿನಲ್ಲಿ ಎಂದು ನೊಂದು ಕೇಳುತಿಹಳು ನಮ್ಮ ತಾಯಿ ಭಾರತಿ ಅಂತ  ಹಾಡಿದ ಮೇಲೆ ಸುಮಾರು ೨-೩ ಸೆಕೆಂಡುಗಳ ನಿಶ್ಯಬ್ಧ ಈ   ಹಾಡನ್ನು ಮೇಲೆತ್ತುತ್ತದೆ. ಪಿ ಸುಶೀಲ ಮೇಲಿನ ಸ್ಥಾಯಿಯಲ್ಲಿ ಹಾಡಿರುವ ಕೆಲವು ಸಾಲುಗಳು ಈ ಹಾಡಿಗೆ ಹೆಚ್ಚಿನ ಯಶಸ್ಸು ಕೊಡಲು ಸಹಕಾರಿಯಾಗುತ್ತದೆ. 

ಬದುಕುವ ಮಾರ್ಗವನ್ನು ತುಸು ಜೋರಾಗಿಯೇ ಹೇಳುವ "ಭಗವಂತ ಕೈಕೊಟ್ಟ" ಹಾಡು ಪಿ ಬಿ ಶ್ರೀನಿವಾಸ್ ಅವರ ಧ್ವನಿಯಲ್ಲಿ ಅಮರವಾಗಿದೆ. 

ಉಳಿದ ಕೆಲವು ಹಾಡುಗಳಿಗೆ ಎಸ್ ಜಾನಕೀ ಧ್ವನಿ ನೀಡಿದ್ದಾರೆ. 

ಹಳ್ಳಿಯಲ್ಲಿನ ಮುಗ್ಧತೆ, ನಾಜೂಕುತನವಿಲ್ಲದ ಪಾತ್ರಗಳು ನಾಗರೀಕರಣದಲ್ಲಿ ಮುಳುಗಿದ ಪಾತ್ರಗಳ ಜೊತೆ ಮಾತಾಡುವಾಗಲೂ ಅದೇ ತನ ಇದು ಈ ಚಿತ್ರದ ಸಂಭಾಷಣೆಗಳ ವಿಶೇಷತೆ. 

ಖಳನಾಯಕ ಕೇಡು ಮಾಡುತ್ತಲೇ ಇದ್ದರೂ, ಅಬ್ಬರವಿಲ್ಲ. ನರಿಯ ಹಾಗೆ ಚಾಣಕ್ಷತನ ತೋರುತ್ತಾನೆ.. ಅಬ್ಬರವಿಲ್ಲದೆಯೋ ಖಳನ ಪಾತ್ರ ಮಾಡಿಸಬಹುದು .. ಮತ್ತು ಖಳ ಈ ಚಿತ್ರದ ನಾಯಕನಿಗೆ  ಸಂಬಂಧಿಯಾಗಿದ್ದರಿಂದ ಕ್ರೂರತನವನ್ನು ಕಡಿಮೆ ಮಾಡಿ ಬರೀ ಮೆಲ್ಲನೆ ಬರಿ ದ್ವೇಷ ಹೆಚ್ಚುವ ಕೆಲಸ ಮಾಡುತ್ತಾನೆ. 

ನಾಯಕಿ ಮೃದುವಾಗಿ ಮಾತಾಡುತ್ತಾ ಜನರನ್ನು ಪ್ರಗತಿಯತ್ತ ಹೆಜ್ಜೆ ಹಾಕಿಸುವುದು.. ನಾಯಕನಿಗೂ ಸಹಕರಿಸುತ್ತ, ಊರಿನ ಮಂದಿಗೆ ಸರಿ ದಾರಿ ತೋರುವ, ತನ್ನ ಆಪ್ತ ಗೆಳತಿಯರು ನಗರೀಕರಣದತ್ತ ಮುಖ ಮಾಡಿದ್ದರೂ ಹಳ್ಳಿಯ ಕಡೆಗೆ ತನ್ನ ಗಮನ ಹರಿಸುವ ಪಾತ್ರದಲ್ಲಿ ಕಲ್ಪನಾ ಮೆಚ್ಚುಗೆಳಿಸುತ್ತಾರೆ.

ಶಾಂತಮ್ಮ, ಜಯ, ಅಶ್ವಥನಾರಾಯಣ್, ಹೆಚ್ ರಾಮಚಂದ್ರಶಾಸ್ತ್ರಿ, ಇಂದಿರಾದೇವಿ, ರೇಣುಕಾ , ಎಂ ಪಿ ಶಂಕರ್ ಮುಂತಾದ ಸಹನಟರ ಅಭಿನಯವಿದೆ. 

ನಾಯಕ ರಾಜಕುಮಾರ್ ಅವರಿಗೆ ನೀರು ಕುಡಿದಷ್ಟೇ  ಸಲೀಸು ಅಭಿನಯ. ಹಳ್ಳಿಜನರ ಮುಗ್ಧತೆ ಮೈಗೂಡಿಸಿಕೊಂಡು ಪಟ್ಟಣದ ಸಹವಾಸ ಕಂಡರೂ ಅದರ ಆಕರ್ಷಣೆಗೆ ಬೆರಗಾಗದೆ ಮತ್ತೆ ಹಳ್ಳಿಗೆ ಬಂದು, ಶ್ರಮವಹಿಸಿಕೊಂಡು ಮಾದರಿ ರೈತನಾಗುವ ಅಭಿನಯದಲ್ಲಿ ತಾವೇ ತಾವಾಗಿದ್ದಾರೆ. ಮಲ್ಲಣ್ಣ ಮೋಸ ಮಾಡುತ್ತಿದ್ದಾನೆ ಎಂದಾಗ ರೌದ್ರರೂಪ ತಾಳುವ ರಾಜಕುಮಾರ್ ನಾಯಕಿಯ ಜೊತೆ, ನಾಯಕಿಯ ಸಂಗಡಿಗರ ಜೊತೆ ಮಾತಾಡುವಾಗ ನಗೆಬುಗ್ಗೆ ಉಕ್ಕಿಸುತ್ತಾರೆ. ಈ ಚಿತ್ರದ ವಿಶೇಷತೆ ಬಾವಿ ತೊಡುವ ದೃಶ್ಯ.. ರಾಜಕುಮಾರ್ ಅವರು ಗಂಗವ್ವ ಬಂದ್ಲು ಗಂಗವ್ವ ಬಂದ್ಲು ಎನ್ನುವಾಗಿನ ಅವರ ಅಭಿನಯ ಅದ್ಭುತ. 


















Thursday, January 15, 2026

ಸುಳಿವಿನ ಎಳೆಯ ಹಿಡಿದು ಹೊರಟವರು ಯಾರು,ಎಲ್ಲಿಗೆ .. ಉತ್ತರ ಕೊಡುವ ಗೋವಾದಲ್ಲಿ ಸಿ ಐ ಡಿ 999 - 1968 (ಅಣ್ಣಾವ್ರ ಚಿತ್ರ ೧೦೪/೨೦೭)

ಶಿಲ್ಪಿ ಮೂರ್ತಿಯನ್ನು ಕೆತ್ತುವುದಕ್ಕೆ ಮೊದಲು ಶಿಲೆಯನ್ನು ಪರೀಕ್ಷೆ ಮಾಡುತ್ತಾರೆ.. ಅದೇ ರೀತಿ ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರದ ದಿಣ್ಣನ ಪಾತ್ರವನ್ನು ನೋಡಿದವರು ಈ ರೀತಿಯ ದೇಸಿಯ ಗೂಢಚಾರ ಅನೇಕಾನೇಕ ಉಪಕರಣಗಳನ್ನು ಆರಾಮಾಗಿ ಉಪಯೋಗಿಸುವ ಪಾತ್ರದಲ್ಲಿ ಬೆಳಗುತ್ತಾರೆ ಎಂದು ಊಹಿಸಿರಲಿಲ್ಲ.. ಆದರೆ ರಾಜಕುಮಾರ್ ಎಂಬ ಮೂರ್ತಿ ಆ ಶಿಲೆಯಲ್ಲಿ ಇತ್ತು.. ಅದನ್ನು ಅನೇಕ ನಿರ್ದೇಶಕರು ನಟರು ತಂತ್ರಜ್ಞರು ಆ ಮಹಾ ಯಜ್ಞದಲ್ಲಿ ಭಾಗಿಗಳಾಗಿದ್ದರು. 

ಜೇಡರಬಲೆಯ ಮುಂದಿನ ಗೂಢಚಾರ ಕಥಾನಕದ ಸರಣಿ ಗೋವಾದಲ್ಲಿ ಸಿ ಐ ಡಿ ೯೯೯ ಮುಂದುವರೆಯುತ್ತದೆ. ಮತ್ತೊಂದು ಎಳೆಯನ್ನು ಹಿಡಿದು ದೇಶದ್ರೋಹಿಗಳನ್ನು ಹಿಡಿದು ಸದೆಬಡಿಯುವುದು ಇಲ್ಲಿನ ಕಥಾನಕ. 


ರಾಜಕುಮಾರ್ ಅವರ ಅದ್ಭುತ ಪರಕಾಯ ಪ್ರವೇಶ ನೋಡೋದೇ ಒಂದು ಖುಷಿ. ಆರಂಭದ ದೃಶ್ಯದಲ್ಲಿ ಒಂದು ಗುಂಡಿ ಒತ್ತಿದರೆ ಸಾಕು ಓಡಾಡುವ ಮಂಚ, ತೆರೆದುಕೊಳ್ಳುವ ಬಾಗಿಲು, ಅದರಿಂದ ಒಳಬರುವ ಅವರ ಆಪ್ತ ಸಹಾಯಕರು, ಅತಿಥಿಗೆ ಕೂತುಕೊಳ್ಳಲು ಬರುವ ಕುರ್ಚಿ, ದೂರವಾಣಿ, ಪಿಸ್ತೂಲು, ಚಾಕು ಹೀಗೆ ಹತ್ತಾರು ಇಲೆಕ್ಟ್ರಾನಿಕ್ ಉಪಕರಣಗಳ ತೋರಿಸುವ ಚಿತ್ರದಲ್ಲಿ ರಾಜಕುಮಾರ್ ತಮ್ಮದೇ ರೀತಿಯ ಛಾಪು ಮೂಡಿಸುತ್ತಾರೆ. 

ಆ ಗತ್ತು, ಗಾಂಭೀರ್ಯ,ಆಂಗ್ಲ ಸಂಭಾಷಣೆಗಳನ್ನು ಹೇಳುವಾಗ ಇರಬೇಕಾದ ಭಾವ, ಆ ನಾಜೂಕುತನ, ಹೊಡೆದಾಟದಲ್ಲಿ ತೋರುವ ಚಾಕಚಕ್ಯತೆ ದೇಸಿ ಗೂಢಚಾರ ಇದ್ದರೇ ಹೀಗೆ ಇರುತ್ತಾರೆ ಎನ್ನುವಷ್ಟು ನಿಖರವಾಗಿದೆ ಅವರ ಅಭಿನಯ. 

ನವನಟಿಯಾಗಿ ಲಕ್ಷ್ಮಿ ಪಾತ್ರಕ್ಕೆ ಕೊಂಚ ಅವಕಾಶ ಕಡಿಮೆ, ಆದರೆ ಚಿತ್ರಕ್ಕೆ ಮುಖ್ಯವಾದ ಸುಳಿವು, ಹಾಗೂ ಅಂತಿಮ ದೃಶ್ಯಕ್ಕೆ ಅವರೇ ಮುಖ್ಯವಾದ ಕೊಂಡಿ. 

 ನರಸಿಂಹರಾಜು ಅವರ ಪಾತ್ರ ಮುಖ್ಯಪಾತ್ರಕ್ಕೆ ಸಹಕಾರ ನೀಡುವುದು 

ಶಕ್ತಿಪ್ರಸಾದ್ ಮತ್ತು ರಾಘವೇಂದ್ರರಾವ್ ಮುಖ್ಯ ಪಾತ್ರಗಳಾಗಿದ್ದಾರೆ. 

ಇಲ್ಲಿ ಕಥೆಯೇ ಸಿನೆಮಾವನ್ನು ತೂಗಿಸಿಕೊಂಡು ಹೋಗುವುದರಿಂದ ಪಾತ್ರಗಳು ಬರುತ್ತಲೇ ಇರುತ್ತವೆ.. ಕುತೂಹಲ ಮೂಡಿಸಿಕೊಂಡು ಸಾಗುವ ಚಿತ್ರವನ್ನು ರಾಜಕುಮಾರ್ ತಮ್ಮ ಹೆಗಲ ಮೇಲೆ ಹೊತ್ತು ಮೆರೆದಿದ್ದಾರೆ. 

ಅನುಪಂ ಮೂವೀಸ್ ಅವರ ತಯಾರಿಕೆಯಲ್ಲಿ ಬಿ ದೊರೈರಾಜ್ ಎಸ್ ಕೆ ಭಗವಾನ್ ಜೋಡಿ ಕಥೆ ಚಿತ್ರಕಥೆ ನಿರ್ಮಾಣ ನಿರ್ದೇಶನ ಮಾಡಿದ್ದಾರೆ. 

ಹಾಡುಗಳು ಆರ್ ಎನ್ ಜಯಗೋಪಾಲ್ 

ಛಾಯಾಗ್ರಹಣ ಬಿ ದೊರೈರಾಜ್ 

ಚಿತ್ರವನ್ನು ಆವರಿಸಿಕೊಂಡಿರುವುದು ರಾಜಕುಮಾರ್ ಅಭಿನಯ ಮತ್ತೊಂದು ಜಿ ಕೆ ವೆಂಕಟೇಶ್ ಅವರ ಸಂಗೀತ. 

ಬಾಂಡ್ ಮಾದರಿಯ ಸಂಗೀತವನ್ನು ಅಳವಡಿಸಿಕೊಂಡು ಅದ್ಭುತವಾಗಿ ಸಂಗೀತ ನೀಡಿದ್ದಾರೆ. ಗಿಟಾರ್ ನಾದವನ್ನು ಅವರು ಬಳಸಿರುವ ರೀತಿ ಅದ್ಭುತ. 











ಸಿಂಹದ ಬುದ್ಧಿಮತ್ತೆಯ ಸಿಂಹ ಸ್ವಪ್ನ 1968 (ಅಣ್ಣಾವ್ರ ಚಿತ್ರ ೧೦೩/೨೦೭)

ಬಹುಶಃ ಬಿಡುಗಡೆಗೆ ಮುಂಚೆ ಚಿತ್ರ ತಯಾರಿಕೆಯಲ್ಲಿ ತುಸು ಹೆಚ್ಚಿಗೆ ಸಮಯ ತೆಗೆದುಕೊಂಡಿರಬಹುದು  ಎನ್ನುವುದು ನನ್ನ ಊಹೆ.. ಕಾರಣ ಹಿಂದಿನ ಚಿತ್ರಗಳ ಪ್ರಿಂಟ್ ಚೆನ್ನಾಗಿದೆ .. ಈ ಚಿತ್ರ ಪ್ರಿಂಟ್ ತುಂಬಾ ಮಬ್ಬು.. ಮಬ್ಬು.. 

ರಾಜಕುಮಾರ್ ಮತ್ತು ಉದಯಕುಮಾರ್ ಇದ್ದಾರೆ ಎಂದರೆ ಅದು ಅಜೀವ ಗೆಳೆತನದ ಕಥೆ ಇರುತ್ತೆ ಇಲ್ಲವೇ ಜಿದ್ದಾಜಿದ್ದಿ ಹೊಡೆದಾಟ ಇರುತ್ತದೆ.. ಇಲ್ಲವೇ ಭಾವುಕತನದ ಪರಮಾವಧಿಯಲ್ಲಿ ಇಬ್ಬರೂ ನಲುಗಿರುವ ಚಿತ್ರಕತೆ ಇರುತ್ತದೆ.. 

ಈ ಚಿತ್ರ ಎರಡನೇ ವರ್ಗಕ್ಕೆ ಸೇರಿರೋದು.. ರಾಜ್ಯವನ್ನು ಕಬಳಿಸೋಕೆ ಅಂತ ಉದಯಕುಮಾರ್ ನಿಂತರೆ... ಅವರ ಪ್ರಯತ್ನವನ್ನು ನಿಗ್ರಹ ಮಾಡೋಕೆ ರಾಜಕುಮಾರ್ ನಿಲ್ಲುತ್ತಾರೆ.. 

 ಇಬ್ಬರದೂ ಸಮಬಲದ ಪಾತ್ರ.. ಚಿತ್ರದ ಅಂತಿಮ ದೃಶ್ಯದ ತನಕ ಇಬ್ಬರೂ ಸೋಲೋಲ್ಲ .. ಕಡೆಯಲ್ಲಿ ಖಳ ಸೋಲಲೇ ಬೇಕು ಒಳ್ಳೆಯತನ ಗೆಲ್ಲಲೇ ಬೇಕು ಅಲ್ಲವೇ.. 

ಅಣ್ಣ ತಮ್ಮಂದಿರು  ದೊಡ್ಡ ರಾಜ್ಯವನ್ನು ಇಬ್ಭಾಗ ಮಾಡಿಕೊಂಡು ಆಳುತ್ತಿದ್ದರೂ ತಮ್ಮನಿಗೆ ತೃಪ್ತಿಯಿಲ್ಲದೆ ಅಣ್ಣನ ರಾಜ್ಯವನ್ನು ಕಬಳಿಸಬೇಕು ಎಂದು ಕುಟಿಲೋಪಾಯವನ್ನು ತನ್ನ ಮಂತ್ರಿಯ ಜೊತೆ ಸೇರಿಕೊಂಡು ಮಾಡುತ್ತಿರುತ್ತಾನೆ.. ಆದರೆ ಮಂತ್ರಿಯ ದುರಾಲೋಚನೆಯೇ ಬೇರೆ, ರಾಜ್ಯ ಕಬಳಿಸದಮೇಲೆ, ರಾಜನನ್ನು ಮೂಲೆಗುಂಪು ಮಾಡಿ ತಾನೇ ಸರ್ವಾಧಿಕಾರಿಯಾಗುವುದು ಆತನ ಅಂತಿಮ ಯೋಜನೆ..  ಅದಕ್ಕೆ ತಕ್ಕ ಹಾಗೆ ಒಂದಲ್ಲ  ಒಂದು ಉಪಾಯ ಮಾಡುತ್ತಲೇ ಇರುತ್ತಾನೆ. 

ಆದರೆ ಅವನ ಯೋಜನೆಗಳನ್ನು ತಲೆಕೆಳಗು ಮಾಡೋಕೆ ರಾಜಕುಮಾರ್ ಪಾತ್ರ ಸದಾ ಹುಷಾರಾಗಿ ಕೆಲಸ ಮಾಡುತ್ತಲೇ ಇರುತ್ತಾರೆ 

ರಾಜಕುಮಾರ್ ಮತ್ತೆ ರಾಜಕುಮಾರನ ಪಾತ್ರ. ಅದಕ್ಕೆ ಬೇಕಾದ ಎಲ್ಲಾ ವಿಶೇಷತೆಗಳನ್ನು ಕೇಂದ್ರೀಕರಿಸಿಕೊಂಡು ಅಭಿನಯಿಸಿರುವ ಪಾತ್ರ.. ಕತ್ತಿವರಸೆ, ಕಾಳಗ, ಮಾತುಗಳು, ಹಾಡುಗಳು, ಹಾಸ್ಯ ಎಲ್ಲವೂ ಕರತಲಾಮಲಕವಾಗಿದೆ ಅವರ ಅಭಿನಯದಲ್ಲಿ. ಇಲ್ಲಿ ರಾಜ್ ಕುಮಾರ್ ಹಲವಾರು ರೂಪದಲ್ಲಿ ಕಾಣಿಸಿಕೊಳ್ಳುವುದು ಚಿತ್ರದ ವಿಶೇಷ. 








ಜಯಂತಿ ನಾಯಕಿಯಾದರೂ ಕಥೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿಲ್ಲ.. ಕಥೆಗೆ ಬರುವ ದೃಶ್ಯದಲ್ಲಿ ಅವರ ಅಭಿನಯ ಇಷ್ಟವಾಗುತ್ತದೆ ... 


ಡಿಕ್ಕಿಮಾಧವರಾವ್, ರಾಘವೇಂದ್ರರಾವ್ ಸಮಯೋಚಿತ ಅಭಿನಯ 


ದಿನೇಶ್, ರಮಾದೇವಿ, ನರಸಿಂಹರಾಜು, ಜ್ಯೋತಿಲಕ್ಷ್ಮಿ, ರತ್ನಾಕರ್, ಹನುಮಂತಾಚಾರ್, ಬಿವಿ ರಾಧ ಅವರಿಗೆ ಒಪ್ಪಿಸಿರುವ  ಪಾತ್ರಗಳಲ್ಲಿ ಬರುತ್ತಾರೆ 









ಇಲ್ಲಿ ನಿಜವಾಗಿಯೂ ಅಬ್ಬರಿಸುವುದು ಉದಯಕುಮಾರ್.. ಸ್ವಲ್ಪ ಹಾಸ್ಯಮಯವಾಗಿ ಅವರ ಮೇಕಪ್ ಕಂಡರೂ ಕೃತ್ರಿಮತೆ, ಕ್ರೂರತೆ, ಅಬ್ಬರ ಎಲ್ಲವೂ ಮೇಳೈಸಿದೆ. 

ಗೌರಿ ಆರ್ಟ್ಸ್ ಪ್ರೊಡಕ್ಷನ್ಸ್ ಅವರ ತಯಾರಿಕೆಯಲ್ಲಿ ಛಾಯಾಗ್ರಹಣ ಹಾಗೂ ನಿರ್ದೇಶನ ಡಬ್ಲ್ಯೂ ಆರ್ ಸುಬ್ಬರಾವ್ ಅವರದ್ದು, ನಿರ್ವಹಣೆ ಎಸ್ ಭಾವನಾರಾಯಣ್, ಸಂಗೀತ  ಜಿ ಕೆ ವೆಂಕಟೇಶ್, ಹಾಡುಗಳು ಚಿ ಉದಯಶಂಕರ್, ಗಾಯನದಲ್ಲಿ ಹಾಡುಗಾರರ ದಂಡೇ ಇದೆ. ಟಿ ಎಂ ಸೌಂದರ್ ರಾಜನ್, ಪಿ ಬಿ ಶ್ರೀನಿವಾಸ್, ಪೀಠಾಪುರಂ ನಾಗೇಶ್ವರ ರಾವ್, ಎಸ್ ಜಾನಕೀ ಇದ್ದಾರೆ. 

ಜಾನಪದ ಶೈಲಿಯ ಚಿತ್ರವಿದು. 

Monday, January 5, 2026

ತಾಯಿ ಹೃದಯದ ಭವ್ಯತೆ ... ಅಮ್ಮ 1968 (ಅಣ್ಣಾವ್ರ ಚಿತ್ರ ೧೦೨/೨೦೭)

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆಯ ತಳಹದಿಯ ಮೇಲೆ ಈ ಚಿತ್ರಕತೆ ರೂಪಿತವಾಗಿದೆ. ರಾಜಕುಮಾರ್ ಚಿತ್ರಗಳಲ್ಲಿ ತಾಯಿ ಪಾತ್ರಕ್ಕೆ ಹೆಚ್ಚಿನ ಮಹತ್ವ.. ಅವರ ಪಾತ್ರಗಳಲ್ಲಿಯೂ ಅದೇ ಸಿದ್ಧಾಂತ.. 


ಇಲ್ಲಿಯೂ ಕೂಡ ಅದಕ್ಕೆ ಹೊರತಿಲ್ಲ.. ತಾಯಿ ಎಂದರೆ ಅಪಾರ ಗೌರವ, ಪ್ರೀತಿ.. ಅದೇ ಮುನ್ನುಡಿಯಲ್ಲಿ ರಾಜಕುಮಾರ್ ಅವರ ಪಾತ್ರ ರೂಪಿತವಾಗಿದೆ. ಹಿನ್ನೆಲೆ ಅರಿಯದೆ ತಾಯಿ ತಂದೆಯ ಮೇಲೆ ವಿನಾಕಾರಣ ಕೋಪಗೊಳ್ಳುವ, ಕೂಗಾಡುವ ಪಾತ್ರದಲ್ಲಿ ರಾಜಕುಮಾರ್ ಪರಕಾಯ ಪ್ರವೇಶ ಮಾಡಿದ್ದಾರೆ. ಅಯ್ಯೋ ರಾಜಕುಮಾರ್ ಅವರು  ಹೀಗೆ ಮಾಡ್ತಾ ಇದ್ದಾರೆ ಅನ್ನಿಸುವಷ್ಟು ಅವರ ಅಭಿನಯ ಚಂದವಿದೆ. 

ಈ ರೀತಿಯ ಕಥಾವಸ್ತುವನ್ನು ರಾಜಕುಮಾರ್ ಆಯ್ಕೆ ಮಾಡಿಕೊಂಡಿರುವುದು ನಿಜವಾಗಿಯೂ ಸವಾಲೇ ಹೌದು. ಕಾರಣ ಅವರ ಚಿತ್ರಗಳು ಸದಾ ಅಪ್ಪ ಅಮ್ಮನನ್ನು ಗೌರವಿಸುವ ಪಾತ್ರ.. ಇದರಲ್ಲಿ ಅದಕ್ಕೆ ತದ್ವಿರುದ್ದ. ನಿಜ ಪರಿಸ್ಥಿತಿ ಅರಿಯುವ ತನಕ ಅವರ ಆರ್ಭಟ.. ನಂತರ ತೊಳಲಾಟ ಎರಡೂ ಕಡೆ ಅವರ ಅಭಿನಯ ಸೊಗಸೇ ಸೊಗಸು. ಯಶಸ್ವೀ ನಾಯಕ ಈ ರೀತಿಯ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ ಮತ್ತು ಪ್ರೇಕ್ಷಕ ಒಂದು ಕ್ಷಣ ಛೇ ಯಾಕೆ ಈ ರೀತಿಯ ಪಾತ್ರ ಮಾಡಿದ್ದಾರೆ ಅನಿಸುವಷ್ಟು ಪ್ರಭಾವಶಾಲಿಯಾಗಿದೆ. 

ಭಾರತಿ ನಾಯಕಿಯಾಗಿ ಗಮನ ಸೆಳೆಯುತ್ತಾರೆ. 

ನರಸಿಂಹರಾಜು ಮೈನಾವತಿ ಕೆಲವು ದೃಶ್ಯಗಳಲ್ಲಿ ಮೂಡಿ ಬಂದರು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ 

ಪಂಡರಿಬಾಯಿ ಮಾತೃಹೃದಯಿ ಪಾತ್ರದಲ್ಲಿ ಮನದಾಳಕ್ಕೆ ಇಳಿಯುತ್ತಾರೆ. ಮಗನ ಆರ್ಭಟವಾದ ಮಾತುಗಳನ್ನು ಕೇಳುತ್ತಾ ಕಣ್ಣಲ್ಲಿ ನೀರು ಬರುತ್ತಿದ್ದರೂ ಮಗನ ಮಾತುಗಳನ್ನು ಕೇಳಿ ಸಂತಸ  ಪಡುವ ದೃಶ್ಯ ಇಷ್ಟವಾಗುತ್ತಾರೆ. 

ಎಂ ವಿ ರಾಜಮ್ಮ ಮೊದಲಾರ್ಧದಲ್ಲಿ ಸಂಯಮದ ಪಾತ್ರವಾದರೆ, ಎರಡನೆಯ ಅರ್ಧದಲ್ಲಿ ಪತಿರಾಯನ ಪರವಾಗಿ ಮಾತಾಡುತ್ತಾ, ಸಾಕಿದ ಮಗನನ್ನು ದೂರ ಮಾಡಿಕೊಳ್ಳುವಂಥ ಮಾತಾಡುವ ಅಭಿನಯ ಸೊಗಸು. 

ಅಶ್ವಥ್ ಅಭಿನಯ ಸೊಗಸಾಗಿ ಸಾಗುತ್ತದೆ. 

ಪಾಪಮ್ಮ ಮತ್ತೆ ತಮ್ಮ ಹಳೆಯ ರೀತಿಯ ಪಾತ್ರದಲ್ಲಿ ಮಿಂಚುತ್ತಾರೆ. ಮಾತು ಮಾತಿಗೂ ಭಜ ಗೋವಿಂದಂ ಭಜ ಗೋವಿಂದಂ ಭಜಗೋವಿಂದಂ ಮೂಡಮಾತೆ ಎನ್ನುವ ಪಾಪಮ್ಮ ಅವರ ಅಭಿನಯ ನಗೆತರಿಸುತ್ತದೆ . 

ಅದರಲ್ಲೂ ನರಸಿಂಹರಾಜು, ಭಾರತಿ, ಅಶ್ವಥ್ ಅವರು ಭಜ ಗೋವಿಂದಂ ಭಜ ಗೋವಿಂದಂ ಅಂತ ಕುಣಿಯುವ ದೃಶ್ಯ ಸೂಪರ್. 

ಮುಖ್ಯ ಅತಿ ಮುಖ್ಯ ಪಾತ್ರದಲ್ಲಿ ಬಿ ಆರ್ ಪಂತುಲು ಅಭಿನಯ ಸಿನೆಮಾದುದ್ದಕ್ಕೂ ಸೂಪರ್ ಸೂಪರ್ ಅನಿಸುತ್ತದೆ. ಅಭಿನಯ, ನಿರ್ದೇಶನ ಎರಡೂ ವಿಭಾಗದಲ್ಲಿ ಅಂಕಗಳಿಸುತ್ತಾರೆ. ಆ ಸಂಯಮದ ನಟನೆ, ಭಾವ ಉಕ್ಕಿಸುವ ಪರಿ ಸೂಪರ್..

ಮತ್ತೊಮ್ಮೆ ಖಳಪಾತ್ರದಲ್ಲಿ ದಿನೇಶ್ ಗಮನಸೆಳೆಯುತ್ತಾರೆ. 
















ಹಾಡುಗಳು ಸೂಪರ್ ಆಗಿವೆ. 

ಪಿ ಬಿ ಶ್ರೀನಿವಾಸ್, ಎಂ ಬಾಲಮುರಳಿ ಕೃಷ್ಣ, ಎಲ್ ಆರ್ ಈಶ್ವರಿ, ಎಸ್ ಜಾನಕೀ, ಪಿ ನಾಗೇಶ್ವರ ರಾವ್, ಬೆಂಗಳೂರು ಲತಾ ಗಾಯನವಿದೆ

ಜಿ ಬಾಲಸುಬ್ರಮಣ್ಯಂ ಅವರ ಕಥೆಯನ್ನು ಪದ್ಮಿನಿ ಪಿಕ್ಚರ್ಸ್ ಕಥಾವಿಭಾಗ ವಿಸ್ತರಿಸಿದೆ. ಜಿ ವಿ ಅಯ್ಯರ್ ಅವರ ಸಂಭಾಷಣೆ, ಟಿ ಜಿ ಲಿಂಗಪ್ಪ ಅವರ ಸಂಗೀತ, ಎ ಷಣ್ಮುಗಂ ಅವರ ಛಾಯಾಗ್ರಹಣವಿದೆ. 

ನಿರ್ಮಾಣ ನಿರ್ದೇಶನ ತಮ್ಮದೇ ಚಿತ್ರ ಸಂಸ್ಥೆಯ ಲಾಂಛನದಲ್ಲಿ ಬಿ ಆರ್ ಪಂತುಲು ಅವರದ್ದು. 

ರೋಮಿಯೋ ಜೂಲಿಯೆಟ್, ಬಭೃವಾಹನ ನಾಟಕಗಳು ಸೊಗಸಾಗಿ ಅಳವಡಿಸಿದ್ದಾರೆ. ಎರಡೂ ನಾಟಕಗಳಲ್ಲಿ ರಾಜಕುಮಾರ್ ಅವರ ಅಭಿನಯ ಸೊಗಸಾಗಿದೆ.