Thursday, March 5, 2026

ಕಣ್ಣ ಮುಂದೆ ಬಂದ ಇತಿಹಾಸದ ಪ್ರಸಿದ್ಧ ಪುರುಷ ಶ್ರೀ ಕೃಷ್ಣದೇವರಾಯ 19೭೦ (ಅಣ್ಣಾವ್ರ ಚಿತ್ರ ೧೧೬/೨೦೭)

ಕೆಲವನ್ನು ನಾವು ಆರಿಸಿಕೊಂಡು ಹೋಗುತ್ತೇವೆ.. 
ಕೆಲವು ನಮ್ಮನ್ನು ಆರಿಸಿಕೊಂಡು ಬರುತ್ತವೆ.. 

ರಾಜಕುಮಾರ್ ಒಂದು ಸಂದರ್ಶನದಲ್ಲಿ ಹೇಳಿದ ಮಾತು..  ... 
ರಾಜಕುಮಾರ್ ಅವರ ಚಿತ್ರಜೀವನದಲ್ಲಿ ಅಕ್ಷರಶಃ ಈ ಮಾತು ನಿಜ...

ದಕ್ಷಿಣ ಭಾರತವನ್ನು ಶ್ರೀಮಂತಗೊಳಿಸಿದ ಮೇರು ವ್ಯಕ್ತಿಗಳಲ್ಲಿ ಶ್ರೀ ಕೃಷ್ಣದೇವರಾಯರು ಒಬ್ಬರು.. ಇವರಿದ್ದ ಕಾಲಘಟ್ಟದಲ್ಲಿ ಶ್ರೀಮಂತಿಕೆ ಬರಿ ಸಂಪತ್ತಿನ ವಿಚಾರದಲ್ಲಿ ಮಾತ್ರವಲ್ಲದೆ ಶಿಲ್ಪಕಲೆ, ಆಡಳಿತದ ವೈಖರಿ, ಸಾಮಾಜಿಕ ಸುಧಾರಣೆಗಳು, ನಾಡ ಹಬ್ಬಗಳು, ಸಂಗೀತ, ಸಾಹಿತ್ಯ, ಸೇನೆ ಹೀಗೆ ಎಲ್ಲಾ ಪ್ರಾಕಾರಗಳಲ್ಲಿಯೂ ಈ ಕಾಲ ಸುವರ್ಣಯುಗವಾಗಿತ್ತು ಅಂತ ಇತಿಹಾಸಕಾರರು ಹೇಳುತ್ತಾರೆ. 

ನಮ್ಮ ಅದೃಷ್ಟವೆಂದರೆ, ಆ ಕಾಲಘಟ್ಟಕ್ಕೆ ನಮ್ಮ ಗಡಿಯಾರವನ್ನು ತಿರುಗಿಸಿಕೊಂಡು ಹೋಗಲು ಸಾಧ್ಯವಿಲ್ಲ.. ಆದರೆ ಈ ಕಾಲಘಟ್ಟವನ್ನೇ ನಮ್ಮ ಕಣ್ಣುಗಳ ಮುಂದೆ ತಂದು ನಿಲ್ಲಿಸುವ ಶಕ್ತಿ ಪದ್ಮಿನಿ ಪಿಕ್ಚರ್ಸ್ ಲಾಂಛನದಲ್ಲಿ ಚಿತ್ರಕತೆ, ನಿರ್ಮಾಣ, ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದ ಬಿ ಆರ್ ಪಂತುಲು ಮತ್ತು ತಂಡದವರಿಗಿತ್ತು.

ಅರಂಭದಲ್ಲಿ ಸಂಬಂಧ ಪಟ್ಟ ಮಹನೀಯರಿಗೆ ಕೃತಜ್ಞತೆ ಸಲ್ಲಿಸುವುದು.. ಚಿತ್ರದ ಇತಿಹಾಸ ಪುರುಷನ ಬಗ್ಗೆ ಒಂದು ಸಣ್ಣ ಪರಿಚಯ.. ಹೀಗೆ ಶುರುವಾಗುವ ಸಿನಿಮಾ ಸಿನಿ ರಸಿಕರನ್ನು ಹಿಡಿದಿಡಲು ಸಹಾಯ ಮಾಡಿತು





ಆ ಮಹಾನ್ ಕಥಾನಾಯಕನನ್ನು ರಾಜಕುಮಾರ್ ಎಂಬ ಶ್ರೀಕೃಷ್ಣದೇವರಾಯನ ಪಡಿಯಚ್ಚಿನಂತೆ ಇರುವ ...ಅಲ್ಲ ಅಲ್ಲ ಶ್ರೀಕೃಷ್ಣದೇವರಾಯರೇ ಧರೆಗಿಳಿದು ಬಂದರೂ, ಅವರೇ ಅಚ್ಚರಿ ಪಡುವಂತೆ ಪಾತ್ರದೊಳಗೆ ಹೊಕ್ಕಿದ್ದ ರಾಜಕುಮಾರ್ ಅವರನ್ನು ತೆರೆಯ ಮೇಲೆ ತಂದದ್ದು ಅವರ ಅದ್ಭುತ ಪ್ರತಿಭೆಗೆ ಸಾಕ್ಷಿಯಾಗಿತ್ತು.. 

ನಾವ್ಯಾರು ಆ ಮಹಾನ್ಅ ಕಥಾನಾಯಕನ್ನು ನೋಡಿಲ್ಲ ಅಂತ ಸುಳ್ಳು ಹೇಳುವ ಬದಲು.. ಶ್ರೀಕೃಷ್ಣದೇವರಾಯರನ್ನು ನಾವು ತೆರೆಯ ಮೇಲೆ ನೋಡಿದ್ದೇವೆ ಅಂತ ಎದೆ ತಟ್ಟಿಕೊಂಡು ಹೇಳಬಹುದು.. 





ಶ್ರೀಕೃಷ್ಣದೇವರಾಯನಾಗಿ - ರಾಜಕುಮಾರ್ , ಮತ್ತು ತಿಮ್ಮರಸು ಅವರಾಗಿ ಬಿ ಆರ್ ಪಂತುಲು.. ಉಳಿದ ಪಾತ್ರಗಳಲ್ಲಿ ನರಸಿಂಹರಾಜು, ಭಾರತಿ, ಜಯಂತಿ, ದಿನೇಶ್, ಹನುಮಂತಚಾರ್, ಆರ್ ನಾಗೇಂದ್ರರಾವ್, ನರಸಿಂಹರಾಜು, ಆರ್ ಎನ್ ಸುದರ್ಶನ್, ಎಂ ವಿ ರಾಜಮ್ಮ, ಮೈನಾವತಿ, ಚಿಂದೋಡಿ ಲೀಲಾ, ಜಯ ಶನಿಮಹಾದೇವಪ್ಪ, ಜೋಕರ್ ಶ್ಯಾಮ್ ಉಳಿದ ಕೆಲವು ಮುಖ್ಯ ಪಾತ್ರಗಳಲ್ಲಿದ್ದಾರೆ. 


















ಈ ಚಿತ್ರ ವಿಶೇಷ ಅನಿಸೋದು ಎರಡು ಕಾರಣಗಳಿಗೆ.. ಶ್ರೀ ಕೃಷ್ಣದೇವರಾಯ ಎಂದರೆ  ರಾಜಕುಮಾರ್, ರಾಜಕುಮಾರ್ ಎಂದರೆ ಶ್ರೀ ಕೃಷ್ಣದೇವರಾಯ ಎನ್ನುವಷ್ಟು ಕರಾರುವಾಕ್ ಪಾತ್ರ ಮೂಡಿಬಂದಿದೆ. 

ಎರಡು ಇತಿಹಾಸವನ್ನು ಹತ್ತಿರದಿಂದ ತೋರಿಸಿರುವ ಹಾಗೂ ಹೊರಾಂಗಣ ಒಳಾಂಗಣ, ಯುದ್ಧದ ಸನ್ನಿವೇಶಗಳು, ರಾಜದರ್ಬಾರ್, ಹಾಸ್ಯ ದೃಶ್ಯಗಳು, ಹಾಡುಗಳು, ಸಂಗೀತ ಎಲ್ಲವೂ ಒಂದಕ್ಕೊಂದು ಮಿಳಿತಗೊಂಡಿದೆ. 

ಒಂದು ಚಿತ್ರರತ್ನವಾಗಿ ನಮ್ಮ ಮುಂದೆ ನಿಂತಿರುವ ಈ ಚಿತ್ರವನ್ನು ನೋಡದಿರುವ ಚಲನಚಿತ್ರ ರಸಿಕರಿಲ್ಲ ಎನ್ನುವಷ್ಟು ಪ್ರಸಿದ್ಧಿ ಪಡೆದಿದೆ.. 

ಆ ರಾಜಗಾಂಭೀರ್ಯ ನೆಡೆ ನುಡಿ ಹಾವ ಭಾವ ರಣಕ್ಕೆ ಇಳಿದಾಗ ಮೂಡುವ ರೋಷಾವೇಶ, ಹಾಗೆಯೇ ಅರಮನೆಯಲ್ಲಿ ತನ್ನ ಪರಿವಾರದೊಂದಿಗೆ ಇರುವಾಗ ತೋರುವ ಯಜಮಾನತನ, ರಾಜಸಭೆಯಲ್ಲಿ ತೋರುವ ಗೌರವ, ಅದೇ ತನ್ನ ರಾಜ್ಯದ ಪಂಡಿತರಿಗೆ ಅವಮಾನ ಮಾಡಲು ಸಂಚು ಮಾಡಿಕೊಂಡು ಬಂದವರನ್ನು ನಿಭಾಯಿಸುವ ಕಲೆ..ಮಂತ್ರಿಗಳೊಂದಿಗೆ ಚರ್ಚಿಸುವಾಗ ತೋರುವ ರಾಜಕೀಯ ಮುತ್ಸದ್ದಿತನ ಎಲ್ಲವೂ ಶ್ರೀ ಕೃಷ್ಣದೇವರಾಯ ಅವರ ಆತ್ಮವೇ ಒಳ ಹೊಕ್ಕಿದಿಯೆನೋ ಎನ್ನುವಷ್ಟು ಕರಾರುವಾಕ್ಕಾಗಿ ನಿಭಾಯಿಸಿರುವ ಪಾತ್ರದ ಯಶಸ್ಸು ರಾಜಕುಮಾರ್ ಅವರಿಗೆ ಸಲ್ಲಬೇಕು.. 

ಈ ಪಾತ್ರವನ್ನು ಅಷ್ಟೇ ಗಟ್ಟಿಯಾಗಿ ನಿರೂಪಿಸಿ ನಿರ್ದೇಶನ ಮಾಡಿರುವುದು ಅಲ್ಲದೆ, ಶ್ರೀಕೃಷ್ಣದೇವರಾಯ ಅವರ ವಿಜಯನಗರ ಸಾಮ್ರಾಜ್ಯ ಉತ್ತುಂಗ ತಲುಪಲು ನೇರವಾದ ಇನ್ನೊಂದು ಬಲಾಢ್ಯ ಹೆಸರು ಮಂತ್ರಿ ತಿಮ್ಮರಸು ಅವರ ಪಾತ್ರ ಪೋಷಣೆಯಲ್ಲಿ ಬಿ ಆರ್ ಪಂತುಲು ಸೊಗಸಾಗಿ ಗೆದ್ದಿದ್ದಾರೆ. 

ಇಡೀ ಚಿತ್ರ ಇವರೆಡು ಪಾತ್ರಗಳ ಸುತ್ತಲೇ ಸುತ್ತುತ್ತದೆ ಎಂದರೆ ಅಚ್ಚರಿಯಿಲ್ಲ.. ನಿಜ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಗೆದ್ದಿರುವುದು ಹೆಮ್ಮೆಯ ಮಾತು

ಮಾತೃಹೃದಯಿಯಾಗಿ ಎಂ ವಿ ರಾಜಮ್ಮ ಅವರದ್ದು ಮರೆಯಲಾರದ ಅಭಿನಯ.. 

ಜಯಂತಿ ಮತ್ತು ಭಾರತಿ ಪಾತ್ರೋಚಿತ್ರ ಅಭಿನಯ 

ನರಸಿಂಹರಾಜು ತೆನಾಲಿ ರಾಮಕೃಷ್ಣನ ಕೆಲವು ಬುದ್ಧಿವಂತಿಕೆಯ ದೃಶ್ಯಗಳಲ್ಲಿ ಜೀವ ತುಂಬಿದ್ದಾರೆ ಅವರ ಪತ್ನಿಯಾಗಿ ಮೈನಾವತಿ.. ಅವರ ತಂದೆಯಾಗಿ ಎಚ್ ಆರ್ ರಾಮಚಂದ್ರಶಾಸ್ತ್ರಿ ಇದ್ದಾರೆ. 

ಪಂತುಲು ಅವರ ಆಸ್ಥಾನ ಸಂಗೀತ ಗಾರುಡಿಗ ಟಿ ಜಿ ಲಿಂಗಪ್ಪ ಸಂಗೀತದ ಮಾಧುರ್ಯದಿಂದ ಮಿಂಚಿದ್ದಾರೆ 

ಸಾಹಿತ್ಯಕ್ಕೆ ಕಣಗಾಲ್ ಪ್ರಭಾಕರ್ ಶಾಸ್ತ್ರೀ ಮತ್ತು ಆರ್ ಎನ್ ಜಯಗೋಪಾಲ್ ಅವರದ್ದು 

ಛಾಯಾಗ್ರಹಣ ಉಸ್ತುವಾರಿ ಎ ಷಣ್ಮುಗಂ ಅವರದ್ದು 

ಈ ರೀತಿಯ ಇತಿಹಾಸವನ್ನು ಮರುಸೃಷ್ಟಿ ಮಾಡುವ ಚಿತ್ರಗಳು ಆರಂಭ ಎಷ್ಟು ಕ್ರೂರತೆಯಿಂದ ಕೂಡಿ ನಂತರ ಅದರ ಉಚ್ಛ್ರಾಯ ಸ್ಥಿತಿ ತಲುಪಿ ನಂತರ ಮತ್ತೆ ಧಾರುಣವಾಗಿ ಅಂತ್ಯಗೊಳ್ಳುತ್ತದೆ. ಅಂತ್ಯ ಜೀರ್ಣಿಸಿಕೊಳ್ಳಲು ಆಗೋಲ್ಲ ಆದರೆ ಅದನ್ನು ಹೇಳದಿದ್ದರೆ ಪೂರ್ತಿ ಇತಿಹಾಸ ಹೇಳಿದಂತಾಗದು.. 

ಅದನ್ನೇ ಸೂಕ್ಷ್ಮವಾಗಿ ನಿರ್ದೇಶಕರು ಅಂತಿಮ ದೃಶ್ಯಗಳಲ್ಲಿ ಹೇಳಿದ್ದಾರೆ.. 

ಇದೊಂದು ಚಿತ್ರವಲ್ಲ. ಐತಿಹಾಸಿಕ ಚಿತ್ರ.. ಅದರಲ್ಲೂ ಪ್ರವರ್ಧಮಾನಕ್ಕೆ ಬಂದು ಕನ್ನಡ ಚಿತ್ರರಂಗವನ್ನು ಗಟ್ಟಿಯಾಗಿ ಬೇರೂರಲು ಕಾರಣೀಕರ್ತರಾದ ಹಲವು ಮಹನೀಯರ ಹೆಸರಲ್ಲಿ ರಾಜಕುಮಾರ್ ಅವರದ್ದು ಇರುವುದು ಮತ್ತು ರಾಜಕುಮಾರ್ ಚಿತ್ರಜೀವನದ ಮೊಟ್ಟಮೊದಲ ವರ್ಣ ಚಿತ್ರವೂ ಹೌದು. !