Monday, August 18, 2025

ಅಬ್ಬರಿಸುವ ರಾಜಕುಮಾರ್ - ಶ್ರೀ ಕನ್ನಿಕಾಪರಮೇಶ್ವರಿ ಕಥೆ 1966 (ಅಣ್ಣಾವ್ರ ಚಿತ್ರ ೭೮/೨೦೭)

ಸತಿಶಕ್ತಿ, ಮಹಿಶಾಸುರ ಮರ್ಧಿನಿ, ದಶಾವತಾರ ಹೀಗೆ ಕೆಲವು ಚಿತ್ರಗಳಲ್ಲಿ ಅಬ್ಬರಿಸಿದ ರಾಜಕುಮಾರ್ ಮಿಕ್ಕ ಪಾತ್ರಗಳು ಬಹುತೇಕ ಸೌಮ್ಯ ಪಾತ್ರಗಳೇ ಆಗಿದ್ದವು.. ಅವರೊಂದು ಸಂದರ್ಶನದಲ್ಲಿ ಹೇಳಿದಂತೆ, ಖಳಪಾತ್ರಗಳಲ್ಲಿ ಅಂದರೆ ರಾಕ್ಷಸ ಪಾತ್ರಗಳಲ್ಲಿ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಬಹಳ ಪ್ರಸಿದ್ದರು.. ತಮಗೂ ಆ ರೀತಿಯ ಪಾತ್ರಗಳನ್ನೂ ಹೆಚ್ಚು ಮಾಡಬೇಕೆಂದು ಅಸೆ ಅಂತ.. ಆದರೆ ಕರುನಾಡಿನ ಚಿತ್ರಾಭಿಮಾನಿಗಳು ರಾಜಕುಮಾರ್ ಅವರನ್ನು ದೈವ ಸ್ವರೂಪಿಯಾಗಿ ನೋಡುತ್ತಾ ತಮ್ಮ ಮನೆಮಗನನ್ನು ನೋಡಿಕೊಂಡಂತೆ ನೋಡುತ್ತಿದ್ದರು ಹಾಗಾಗಿ ಸೌಮ್ಯ ಪಾತ್ರಗಳು, ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂಥ ಪಾತ್ರಗಳೇ ಹೆಚ್ಚಾಗಿ ಹುಡುಕಿ ಕೊಂಡು ಬಂದಿದ್ದು ಎಂದಿದ್ದರು.. 

ಆದರೂ ಅವರ ಒಳಗಿನ ಆಸೆಗೆ ತಕ್ಕಂತೆ ಅಲ್ಲೊಂದು ಮನಸ್ಸಿಗೆ ಹುಮ್ಮಸ್ಸು ತುಂಬುವ ಪಾತ್ರಗಳು ಸಿಗುತ್ತಿದ್ದವು.. ಆ ರೀತಿಯ ಒಂದು ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ಅದನ್ನು ಪೂರ್ಣವಾಗಿ ಉಪಯೋಗಿಸಿಕೊಂಡು ಅಬ್ಬರಿಸಿದ್ದಾರೆ. 

ಆರಂಭದ ದೃಶ್ಯದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ ಪ್ರಸನ್ನನಾದ ಪರಮೇಶ್ವರ ಗಂಧರ್ವ ಚಿತ್ರಕಂಠನಿಗೆ ಮಾಯಾ ವಿದ್ಯೆ ಕರುಣಿಸುತ್ತಾನೆ. ಅದರ ಮುಂದಿನ ದೃಶ್ಯವೇ ತನ್ನ ಕಣ್ಣಿಗೆ ಕಾಣುವ ಸುಂದರಿಯನ್ನು  ಮೋಹಿಸುವ ದೃಶ್ಯ.. ಜೊತೆಯಲ್ಲಿ ಆಕೆಯನ್ನು ಮದುವೆಯಾಗುವ ಆತನ ಪ್ರಿಯಕರನಿಗೆ ತನ್ನ ಮಾಯಾ ಶಕ್ತಿಯನ್ನು ಉಪಯೋಗಿಸುವ ದೃಶ್ಯದಲ್ಲಿ ಅದ್ಭುತ ಅಭಿನಯ.. 

ನಂತರ ರಾಜ ವಿಷ್ಣುವರ್ಧನನಾಗಿ ಸೌಮ್ಯವಾಗಿ ಅಭಿನಯಿಸುವ ರಾಜಕುಮಾರ್ ಮುಂದಿನ ದೃಶ್ಯದಲ್ಲಿ ತನ್ನ ರಾಜ್ಯದ ಪ್ರಜೆ ಪರನಾರಿಯ ಮೋಹಕ್ಕೆ ಬಿದ್ದು ತನ್ನ ಪತ್ನಿಗೆ ಮೋಸ ಮಾಡಿದ್ದಾನೆ ಎಂದು ಗೊತ್ತಾದ ಮೇಲೆ ಆ ಪ್ರಜೆಗೆ ಆತನ ಮಡದಿಯಿಂದ ಚಾವಟಿ ಏಟು ಕೊಡುವಂತೆ ಆಜ್ಞಾಪಿಸುವ ದೃಶ್ಯದಲ್ಲಿ ಅವರ ಅಭಿನಯ ಸೊಗಸು. 


ನಂತರ ತನ್ನ ಸಾಮಂತ ರಾಜ್ಯಕ್ಕೆ ಹೋಗಿ ಅಲ್ಲಿ ವಾಸವಿಯನ್ನು ಕಂಡು ಆತನ ಮೋಹ ಕೆರಳುತ್ತದೆ.. ಅಲ್ಲಿಂದ ಅವರ ಅಭಿನಯ ಆಹಾ.. ರಾಜಕುಮಾರ್ ಅವರ ಅಭಿನಯದ ಹಂತಗಳು ಅರಿವಾಗುತ್ತಾ ಹೋಗುತ್ತದೆ.. ಅದೇ ಅಭಿನಯದ ಗಟ್ಟಿತನ ಅಂತಿಮ ದೃಶ್ಯದ ತನಕ ಅವರ ಅಬ್ಬರದ ಅಭಿನಯ ಖುಷಿಕೊಡುತ್ತದೆ. 

ಪೌರಾಣಿಕ ಕಥೆ ಎನ್ನಿ, ದೇವತಾ ಕಥೆ ಎನ್ನಿ, ಯಾವುದೇ ಆದರೂ ಕಥೆಯನ್ನು ಗಟ್ಟಿಯಾಗಿ ಹೆಣೆದು, ಚಿತ್ರಕಥೆ, ಸಂಭಾಷಣೆ,ಹಾಡುಗಳು, ನಿರ್ಮಾಣ, ನಿರ್ದೇಶನ ಎಲ್ಲವನ್ನೂ ಅದ್ಭುತವಾಗಿ ನಿಭಾಯಿಸಿರುವ ಶ್ರೇಯಸ್ಸು ಹುಣಸೂರು ಕೃಷ್ಣಮೂರ್ತಿಯವರಿಗೆ ಸಲ್ಲಬೇಕು.. 

ಎವರ್ ಗ್ರೀನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ ಚಿತ್ರವನ್ನು ಅದ್ಭುತವಾಗಿ ತೆರೆಕಾಣಿಸಲು ರಾಜಾರಾಂ ಛಾಯಾಗ್ರಹಣ, ರಾಜನ್ ನಾಗೇಂದ್ರ ಸಂಗೀತ ಸಾತ್ ಕೊಟ್ಟಿದೆ. 

ನಾಗೇಂದ್ರ ರಾವ್ - ಜಯಶ್ರೀ ದಂಪತಿಗಳಾಗಿ ತೆರೆಯ ಮೇಲೆ ಸೊಗಸಾಗಿ ಅಭಿನಯ ನೀಡಿದ್ದಾರೆ. 

ಅವರ ಮಕ್ಕಳಾಗಿ ಕಲ್ಪನಾ ಮತ್ತು ಬಿ. ಎಂ ವೆಂಕಟೇಶ್ ಚಿತ್ರಕಥೆಗೆ ಬೇಕಾದಂತೆ ನಟಿಸಿದ್ದಾರೆ. ಕಲ್ಪನಾ ತಾನೆಂತ ಅದ್ಭುತ ನಟಿ ಎಂದು ಚಿತ್ರದ ಅಂತಿಮ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. 



ರಾಮಚಂದ್ರ ಶಾಸ್ತ್ರೀ ರಾಜ್ಯದ ಗುರುಗಳಾಗಿ ಸಮಚಿತ್ತ ಅಭಿನಯ ನೀಡಿದ್ದಾರೆ. ಚಿತ್ರದ ಅಂತಿಮ ಹಂತದಲ್ಲಿ ಅವರಾಡುವ ಗಟ್ಟಿತನದ ಮಾತುಗಳು ಚಿತ್ರದ ವಿಶೇಷ. 





ಬಹಳ ಚಿತ್ರಗಳ ನಂತರ ಪಂಡರೀಬಾಯಿಯವರು ರಾಜಕುಮಾರ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ, 


ಚಿತ್ರದಲ್ಲಿ ಸೇನಾಧಿಪತಿಯಾಗಿ ಎಂ ಪಿ ಶಂಕರ್ ಸೌಮ್ಯವಾಗಿ ನಟಿಸಿದ್ದಾರೆ. ಹಿಂದಿನ ಹಲವಾರು ಚಿತ್ರಗಳಲ್ಲಿ ಖಳನಾಗಿ ಅಬ್ಬರಿಸಿದ್ದ ಶಂಕರ್ ಈ ಚಿತ್ರದಲ್ಲಿ ಸಹ್ಯವಾಗಿ ನಟಿಸಿರುವುದು ವಿಶೇಷ. 

ಹಾಸ್ಯದ ದೃಶ್ಯಗಳಲ್ಲಿ ನರಸಿಂಹರಾಜು, ದ್ವಾರಕೀಶ್, ರಮಾ, ರಮಾದೇವಿ ಕೆಲವು ದೃಶ್ಯಗಳಲ್ಲಿ ಹಾಸ್ಯ ಉಕ್ಕಿಸುವ ನಟನೆ ಮಾಡಿದ್ದಾರೆ. 



ಚಿತ್ರದ ಆರಂಭದ ಹೆಸರು ತೋರಿಸುವ ದೃಶ್ಯದಲ್ಲಿ ರಾಷ್ಟ್ರಧ್ಯಕ್ಷರು ಡಾ. ರಾಧಾಕೃಷ್ಣನ್ ಹೆಸರು ಅವರಿಗೆ ಗೌರವದ ಸಂಕೇತವಾಗಿ ತೋರಿಸಿದ್ದಾರೆ. 

ಈ ಚಿತ್ರದಲ್ಲಿ ಅನೇಕ ಹಾಡುಗಳಿವೆ ಅದರಲ್ಲಿ "ಕುಂತಲ್ಲಿ ಅವಳು ನಿಂತಲ್ಲಿ ಅವಳು" ಪಿಬಿಶ್ರೀನಿವಾಸ್ ಅವರ ಕಂಠ ಸಿರಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ. 

ಹುಣಸೂರು ಕೃಷ್ಣಮೂರ್ತಿ ಅವರ ಗಟ್ಟಿತನ, ಪೌರಾಣಿಕ ಚಿತ್ರಗಳನ್ನು ತೆರೆಗೆ ತರುವಲ್ಲಿ ಅವರ ಜಾಣ್ಮೆ, ಶಕ್ತಿ ಎಲ್ಲವೂ ಈ ಚಿತ್ರದಲ್ಲಿ ಮೂಡಿಬಂದಿದೆ 

Friday, August 15, 2025

ಕಾಣದ ಕಡಲಿನ ಮುತ್ತು ಮೋಹಿನಿ ಭಸ್ಮಾಸುರ 1966 (ಅಣ್ಣಾವ್ರ ಚಿತ್ರ ೭೭/೨೦೭)

ಕಡಲಲ್ಲಿ ಮುತ್ತನ್ನು ಆರಿಸುವಾಗ ಅನೇಕ ಬಾರಿ ಕೈಯಲ್ಲಿ ಸಿಕ್ಕ ಮುತ್ತನ್ನು ಕಪ್ಪೆ ಚಿಪ್ಪು ಅಂತಲೋ ಅಥವ ಕಲ್ಲು ಅಂತಾನೋ ಬಿಸಾಡಿ ನಂತರ ಅರೆ ಅದೇ ಮುತ್ತಾಗಿತ್ತು ಅನಿಸುವಂತೆ ಮಾಡುತ್ತದೆ.. ಪೇಚಾಡಿದರೂ ಮತ್ತೆ ಸಿಗುವುದು ಕಷ್ಟ ಸಾಧ್ಯ.. 

ಹಾಗೆಯೇ ಈ ಸಿನಿಮಾ ಕೂಡ ಅನೇಕ ಪ್ರಯತ್ನಗಳ ಬಳಿಕ ವಿಷಯ ಗೊತ್ತಾಗಿದ್ದು ಈ ಚಿತ್ರದ ತುಣುಕಾಗಲಿ ಚಿತ್ರವಾಗಲಿ ಎಲ್ಲೂ ಲಭ್ಯವಿಲ್ಲ ಎಂದು.. ಕಾರಣಗಳು ಹತ್ತಾರು ಆದರೆ ಈ ಚಿತ್ರವನ್ನು ನೋಡುವ ಭಾಗ್ಯ ನಮಗಿಲ್ಲ ಎನ್ನುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ.. 

ಇರಲಿ ಕೆಲವೊಮ್ಮೆ ಹಾಗಿತ್ತು ಹೀಗಿತ್ತು ಅನ್ನುವ ಕಲ್ಪನೆ ವಾಸ್ತವಕ್ಕಿಂತ ಖುಷಿ ಕೊಡುವುದು ಸಹಜ.. ಹಾಗೆ ಈ ಚಿತ್ರವೂ ಕೂಡ.. 

ಅನೇಕ ಸಂದರ್ಶಗಳನ್ನು ಈ ಚಿತ್ರ ಬಗ್ಗೆ ಕೇಳಿದಾಗ ನೋಡಿದಾಗ ತಿಳಿದದ್ದು ರಾಜಕುಮಾರ್ ಅವರ ಈ ಪೌರಾಣಿಕ ಚಿತ್ರದ ಅಭಿನಯ ಅಮೋಘವಾಗಿದೆ ಎಂದು.. ಹಿಂದಿನ ಎರಡು ತಲೆಮಾರಿನವರು ನೋಡಿದವರು ಹೇಳುವ ಮಾತಿದು.. 

ಇರಲಿ ಸಿಕ್ಕಷ್ಟೇ ಭಾಗ್ಯ. ಕೇಳಿದ್ದಷ್ಟೇ ಪುಣ್ಯ ಅನ್ನುವ ಮಾತಿನಂತೆ.. ರಾಜಕುಮಾರ್ ಅವರ ಈ ಚಿತ್ರ ಮರೀಚಿಕೆಯಾದರೂ ಅಂತಹ ಕಾಲಘಟ್ಟದಲ್ಲಿ ನಾವಿದ್ದೆವು ಅನ್ನುವುದೇ ನಮ್ಮ ಪುಣ್ಯ ಅಲ್ಲವೇ.. 


 

ಎಸ್ ಎಸ್ ವರ್ಮಾ ನಿರ್ದೇಶನವಿದ್ದ ಈ ಚಿತ್ರವನ್ನು ಟಿ ಮಾದರ್ ಹಾಗೂ ವಿ ಎಂ ಕುಪ್ಪಯ್ಯ ಚೆಟ್ಟಿಯಾರ್ ನಿರ್ಮಿಸಿದ್ದರು.  .. 

ಟಿ ಛಲಪತಿ ರಾವ್ ಅವರ ಸಂಗೀತ ನಿರ್ದೇಶನವಿದ್ದ ಈ ಚಿತ್ರದಲ್ಲಿ ರಾಜಕುಮಾರ್, ಲೀಲಾವತಿ ಉದಯಕುಮಾರ್, ಬಾಲಕೃಷ್ಣ ಅಭಿನಯಿಸಿದ್ದರು.   

ರಾಜಕುಮಾರ್ ಅವರು ಭಸ್ಮಾಸುರನಾಗಿ ಅಮೋಘ ಅಭಿನಯ ನೀಡಿದ್ದಾರೆ ಅಂತ ಓದಿದ್ದೆ 

ಹಾಗೆಯೇ ಉದಯಕುಮಾರ್ ಅವರ ಶಿವನ ಪಾತ್ರಧಾರಿ ಕೂಡ.. ಉದಯಕುಮಾರ್ ಶಿವನ ಪಾತ್ರದಲ್ಲಿ ಪ್ರಾಯಶಃ ಮೊದಲ ಬಾರಿಗೆ ಅಂತ ನನ್ನ ಅನಿಸಿಕೆ 

ಹಾಗೆಯೇ ಬಾಲಕೃಷ್ಣ ನಾರದನ ಪಾತ್ರದಲ್ಲಿ. 

ಒಂದು ವಿಶೇಷ ಚಿತ್ರವಿದು .. ಆದರೆ ನೋಡುವ ಅವಕಾಶವಿಲ್ಲ.. ಅದೇ ಬೇಸರ ಇರಲಿ.. ಇರಲಿ .. ನೋಡೋಣ ನಮ್ಮ ಜೀವಿತ ಕಾಲದಲ್ಲಿ ಸಾಧ್ಯ ಸಾಧ್ಯತೆಯ ಬಗ್ಗೆ..   ಆಶಾವಾದಿಯಾಗಿರೋಣ.. 

ಓದಿಗೂ ವ್ಯಕ್ತಿತ್ವಕ್ಕೂ ಸಂಬಂಧವಿಲ್ಲ ಅಂತ ಹೇಳುವ ಎಮ್ಮೆ ತಮ್ಮಣ್ಣ 1966 (ಅಣ್ಣಾವ್ರ ಚಿತ್ರ ೭೬/೨೦೭)

 ಈ ರೀತಿಯ ಕಥೆ ಚಿತ್ರಕಥೆಯಲ್ಲಿ ರಾಜಕುಮಾರ್ ಅವರು ನೀರು ಕುಡಿದಷ್ಟು ಸಲೀಸಾಗಿ ಅಭಿನಯಿಸುವಷ್ಟು ಅವರ ಅಭಿನಯ ಪರಿಪೂರ್ಣವಾಗುತಿತ್ತು.. 

ಒಂದೇ ತರಹ ಏಳು ಜನ ಇರುತ್ತಾರೆ ಎನ್ನುತ್ತದೆ ನಾಣ್ಣುಡಿ ಹಾಗೆಯೇ ಎಮ್ಮೆ ತಮ್ಮಣ್ಣನನ್ನು ಹೋಲುವ ಅಥವ ಎಮ್ಮೆ ತಮ್ಮಣ್ಣನು ಇನ್ನೊಬನನ್ನು ಹೋಲುವ ಕಥಾವಳಿ ಈ ಚಿತ್ರದಲ್ಲಿದೆ. 


ಆರಂಭದಲ್ಲಿ ಹಳ್ಳಿಯ ಶೈಲಿಯ ಮಾತುಗಳನ್ನು ಆಡುತ್ತಾ.. ಕೆಲವೇ ದೃಶ್ಯಗಳಲ್ಲಿ ಪಟ್ಟಣದ ಶಿಸ್ತುಬದ್ಧ ನೆಡೆಯನ್ನು ತೋರುವ ರಾಜಕುಮಾರ್ ಪಾತ್ರ ಈ ಚಿತ್ರದ ವಿಶೇಷ.. ಪಟ್ಟಣದ ನಾಜೂಕತನ.. ಆ ವೇಷಭೂಷಣ, ಭಾಷ ಶೈಲಿ.. ಎಲ್ಲವನ್ನೂ ರೂಡಿಸಿಕೊಂಡು ಸಿದ್ಧವಾಗುವ ಇನ್ನೊಂದು ಪಾತ್ರವೂ ವಿಶೇಷ. 



ಹೀಗೆ ಒಂದೇ ಚಿತ್ರದಲ್ಲಿ ಇಬ್ಬರೂ ರಾಜಕುಮಾರ್ ಅವರನ್ನು ನೋಡುವ ಭಾಗ್ಯ ನಮ್ಮದು.. ಸತಿ ಶಕ್ತಿ ಚಿತ್ರದಲ್ಲಿ ದ್ವಿಪಾತ್ರ ಚಿತ್ರದುದ್ದಕ್ಕೂ ಇದೆ.. ಆದರೆ ಅದೊಂದು ಪೌರಾಣಿಕ ಹಿನ್ನೆಲೆಯ ಚಿತ್ರ.. ಮಲ್ಲಿ ಮದುವೆಯಲ್ಲಿ ಒಂದು ಅರೆ ಕ್ಷಣ ಬಂದು ಹೋಗುವ ಪಾತ್ರದೊಂದಿಗೆ ಅದು ದ್ವಿಪಾತ್ರದ ಚಿತ್ರ ಎನಿಸಿದರೂ, ಪೂರ್ಣ ಪ್ರಮಾಣದಲ್ಲಿ ದ್ವಿಪಾತ್ರದಲ್ಲಿ ಚಿತ್ರದುದ್ದಕ್ಕೂ ಆವರಿಸಿಕೊಂಡಿರುವುದು ಸಾಮಾಜಿಕ ಚಿತ್ರಗಳಲ್ಲಿ ಇದೆ ಮೊದಲು. 

ಪ್ರತಿಯೊಂದು ದೃಶ್ಯದಲ್ಲೂ ರಾಜಕುಮಾರ್ ಇದ್ದೆ ಇರುತ್ತಾರೆ ಅನ್ನುವಷ್ಟು ಶಕ್ತಿಶಾಲಿಯಾಗಿದೆ ಚಿತ್ರಕಥೆ. ಇದು ಎ ಕೆ ವೇಲನ್ ಅವರ ಕಥೆಯಾಧರಿಸಿ, ಪದ್ಮಿನಿ ಪಿಕ್ಟ್ಚರ್ಸ್ ಸಾಹಿತ್ಯ ವಿಭಾಗ ಹೆಣೆದ ಚಿತ್ರಕಥೆಯುಳ್ಳ ಈ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದು ಬಿ ಆರ್ ಪಂತುಲು. 

ಸಂಭಾಷಣೆ ಮತ್ತು ಗೀತೆಗಳ ಹೊಣೆ ಹೊತ್ತವರು ಜಿ ವಿ ಅಯ್ಯರ್ .. ಸಂಗೀತ ಟಿ ಜಿ ಲಿಂಗಪ್ಪ.. ಗಾಯನ ಪಿ ಬಿ ಶ್ರೀನಿವಾಸ್, ಎಸ್ ಜಾನಕಿ, ಬೆಂಗಳೂರು ಲತಾ, ಪಿ ನಾಗೇಶ್ವರ್ ರಾವ್ ಅವರದ್ದು.. ಛಾಯಾಗ್ರಹಣ ಪಿ ಎಲ್ ನಾಗಪ್ಪ .. 

ಉತ್ತಮ ತಾಂತ್ರಿಕತೆ ಹೊಂದಿದ ಈ ಚಿತ್ರ.. ದ್ವಿಪಾತ್ರಗಳ ದೃಶ್ಯಗಳನ್ನು ತಂತ್ರಜ್ಞಾನದ ಇತಿಮಿತಿಯಲ್ಲಿ ಸೊಗಸಾಗಿ ಚಿತ್ರೀಕರಿಸಿದ್ದಾರೆ 

> ನೀನಾರಿಗಾದೆಯೋ ಎಲೆ ಮಾನವ ಹರಿ ಹರಿ ಗೋವು ನಾನು 

> ಕೊಳಲನೂದಿ ಕುಣಿವ ಪ್ರಿಯನೇ ಬಾರೋ 

> ಎಮ್ಮೆ ಎಲ್ಲಾ ಎಲ್ಲಣ್ಣ ಎಮ್ಮೆ ತಮ್ಮಣ್ಣ 

> ಬೆಳ್ಳಿ ಹಕ್ಕಿ ಆಗುವ ಬೆಳ್ಳಿ ಮೋಡ ಏರುವ 

> ಕಣ್ಣೆರೆಡು ಕರೆಯುತಿದೆ 

> ಕತ್ತರಿಸು ಕತ್ತರಿಸು 

ಹೀಗೆ ಆರು ಹಾಡುಗಳಿವೆ.. ಮತ್ತು ಕಥೆಯನ್ನು ಮುಂದುವರೆಸುತ್ತವೆ 

ಮುಖ್ಯ ಖಳಪಾತ್ರದಲ್ಲಿ ಡಿಕ್ಕಿ ಮಾಧವರಾವ್ ಅದ್ಭುತ.. ಖಳನಾಯಕ ಎಂದರೆ ಕಿರುಚಾಡಬೇಕು.. ಹೋರಾಡಬೇಕು ಎನ್ನುವ ಯಾವುದೇ ಸೂತ್ರವೂ ಇಲ್ಲದೆ ಪಾತ್ರಕ್ಕೆ ಎಷ್ಟು ಕ್ರೌರ್ಯ ತುಂಬಾ ಬಹುದು ಎಂದು ತೋರಿಸಿದ್ದಾರೆ. 

ವಕೀಲನಾದರೇನು ಸಂಗೀತ ಪ್ರಿಯನೂ ಹಾಗೂ ಮಾನವೀಯತೆ ರೂಡಿಸಿಕೊಂಡು ಬರುತ್ತೇನೆ ಎನ್ನುವಂತಹ ವ್ಯಕ್ತಿತ್ವದ ಪಾತ್ರದಲ್ಲಿ ಬಿ ಆರ್ ಪಂತುಲು ನಟಿಸಿದ್ದಾರೆ. ಮನೆ ಆಧಾರವಾಗಿಟ್ಟು ಕೇಸಿನ ಫೀಸ್ ತಂದಿದ್ದೇನೆ ಎಂದಾಗ.. ಕಕ್ಷಿಧಾರನಿಗೆ ಬಯ್ದು ದುಡ್ಡು ಕೊಟ್ಟು ವಾಪಸ್ ಕಳಿಸುವ ದೃಶ್ಯ ಉತ್ತಮವಾಗಿದೆ. 


ಬರುವ ಕಕ್ಷಿಧಾರರಿಗೆ ಹೊಟ್ಟೆ ತುಂಬಾ ಊಟ ಬಡಿಸಿ ಕೋರ್ಟಿಗೆ ಹೋಗಿರಪ್ಪಾ ಎಂದು ಹೇಳುತ್ತಾ.. ಸಂಸಾರವನ್ನು ನೆಡೆಸುವ ಎಂ ವಿ ರಾಜಮ್ಮ .. ಜೊತೆಯಲ್ಲಿ ಭಾರತೀಯ ನಾರಿಯ ಸಂಸೃತಿ ಸಂಸ್ಕಾರವನ್ನು ಮಾತುಗಳಲ್ಲಿ ಹೇಳುವಷ್ಟು ಪರಿಣಾಮಕಾರಿಯಾಗಿ ಅವರ ಅಭಿನಯವೂ ಕೂಡ ಇದೆ. 


ನರಸಿಂಹರಾಜು ಚಿತ್ರದ ಅಗತ್ಯತೆಗೆ ಹಾಗೂ ಹಾಸ್ಯಕ್ಕೆ ಸೇತುವೆಯಾಗಿ ನಿಂತಿದ್ದಾರೆ


ಭಾರತಿ ಚಿತ್ರದ ಇನ್ನೊಂದು ಉತ್ತಮ ಅಂಶ.. ನಾಜೂಕಾಗಿ ಅಭಿನಯಿಸುತ್ತ ಸದಾ ಕ್ಯಾಮೆರಾ ಇಟ್ಟುಕೊಂಡು ಫೋಟೋ ತೆಗೆಯುವ ಪಾತ್ರ.. 


ಜಿ ವಿ ಲತಾದೇವಿ ಎರಡನೇ ನಾಯಕಿಯಾಗಿ ಮುದ್ದಾದ ಅಭಿನಯ ನೀಡಿದ್ದಾರೆ . 


ಉಳಿದ ಕೆಲವು ಪಾತ್ರಗಳಲ್ಲಿ ಸುಬ್ಬಣ್ಣ, ಕೃಷ್ಣಶಾಸ್ತ್ರಿ, ಕುಪ್ಪುಸ್ವಾಮಿ, ಅನಂತರಾಮ್ ಮಚ್ಚೇರಿ, ಗುಗ್ಗು, ಪಾಪಮ್ಮ ಜಯ ಕಥೆಯ ಮುಖ್ಯ ವಾಹಿನಿಯಲ್ಲಿ ತೇಲಿಬರುತ್ತಾರೆ. 






ಇದೊಂದು ಉತ್ತಮ ಸಾಮಾಜಿಕ ಚಿತ್ರ.. ರಾಜಕುಮಾರ್ ಅವರ ಅಭಿನಯ ಮಾಗುತ್ತಿದೆ ಮತ್ತೆ ಪಾತ್ರಕ್ಕೆ ತಕ್ಕ ಹಾಗೆ ತಮ್ಮನ್ನು ಒಗ್ಗಿಸಿಕೊಳ್ಳುವ ಕಲೆ ಪ್ರಬುದ್ಧವಾಗಿ ಬೆಳೆಯುತ್ತಿದೆ ಎಂದು ನಿರೂಪಿಸುವ ಚಿತ್ರವಿದು. 

ಪಂಚತಂತ್ರ ಮೂಲದ ಮಧುಮಾಲತಿ 1966 (ಅಣ್ಣಾವ್ರ ಚಿತ್ರ ೭೫/೨೦೭)

ಪಂಚತಂತ್ರ ನಮ್ಮ ಭಾರತೀಯ ಕಥೆಗಳಿಗೆ ಅಗ್ರಮೂಲ ವಸ್ತುವಾಗಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಆ ಕಥೆಗಳನ್ನು ಭಿನ್ನ ವಿಭಿನ್ನವಾಗಿ ಅರ್ಥೈಸಿಕೊಂಡು, ಅದನ್ನು ಅಳವಡಿಸಿಕೊಂಡು ಹೆಣೆದ ಚಿತ್ರಕತೆಗಳೆಷ್ಟೋ ಎಣಿಕೆಗೆ ಬಾರದು. 

ಹಾಗೆಯೇ ಇನ್ನೊಂದು ಕಥಾಸರಣಿ ವಿಕ್ರಂ ಮತ್ತು ಬೇತಾಳನ ಕತೆಗಳು.. 

ಆ ಕಾಲದ ಅದ್ಭುತ ಕವಿ ಕಥೆಗಾರ ಭವಭೂತಿ ಅವರ ಮಾಲತಿಮಾಧವ ಕಥೆಯನ್ನು ಆಧರಿಸಿ ಹೆಣೆದ ಚಿತ್ರಕಥೆ ಈ ಚಿತ್ರದ ನಿರ್ದೇಶಕ ಎಸ್ ಕೆ ಎ ಚಾರಿ ಅವರದ್ದು. ಖುಷಿ ಪಡಬೇಕಾದ್ದು ಅಂದರೆ ಕಥೆ ತನ್ನದು ಎಂದು ಹಾಕಿಕೊಂಡಿದ್ದರು ಅದರ ಕೆಳಗೆ ಭವಭೂತಿ ಅವರ ಕಥೆಯಾಧಾರಿತ ಎಂದು ಹಾಕಿರೋದು ಸನ್ನೆಡತೆಯ ಪ್ರತೀಕ ಎಂದು ತೋರಿಸುತ್ತದೆ. 

ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಎಸ್ ಕೆ ಎ ಚಾರಿ ಅವರದ್ದು. ಎಂ ಸಂಪತ್ ಈ ಚಿತ್ರದ ನಿರ್ಮಾಪಕರು. ತ್ರಿಮೂರ್ತಿ ಫಿಲಂಸ್ ಲಾಂಛನದದಲ್ಲಿ, ಬಿ ದೊರೈರಾಜ್ ಛಾಯಾಗ್ರಹಣದಲ್ಲಿ, ಜಿ ಕೆ ವೆಂಕಟೇಶ್ ಅವರ ಸಂಗೀತ ಸಾರಥ್ಯದಲ್ಲಿ ಮಿಂದೆದ್ದ ಚಿತ್ರವಿದು. 

ಮಾನ ಮುಚ್ಚಿಕೊಳ್ಳುವುದಕ್ಕೆ ಸಹಾಯ ಮಾಡಿದವ ಒಬ್ಬ, ಮಾನವನ್ನು ಕಾಪಾಡಿದವ ಒಬ್ಬ, ಮಗುವಿನಂತೆ ಕಂಡವನೊಬ್ಬ.. ಹೀಗೆ ಮೂರು ಭಿನ್ನ ಮನೋದೃಷ್ಟಿಯಿಂದ ನೋಡಿದ ವ್ಯಕ್ತಿತ್ವವನ್ನು ಅಳೆದು ತೀರ್ಪು ನೀಡಿದ ವಿಕ್ರಮಾದಿತ್ಯ ಮಹಾರಾಜಾ ಪಾತ್ರದಲ್ಲಿ ಚಿತ್ರರಂಗದ ಭೀಷ್ಮ ಆರ್ ನಾಗೇಂದ್ರ ರಾವ್ ಅವರು. 


ಅಲ್ಪಾಯುಸ್ಸಿನ ಮಧುಮಾಲತಿ ಷೋಡಶ ವಯೋಮಾನದಲ್ಲಿ ಯೋಗ್ಯವರನಿಗೆ ಮದುವೆ ಮಾಡಿ ಕೊಟ್ಟರೆ ಆತನ ಪರಾಕ್ರಮದಿಂದ ಷೋಡಶ ವಯಸ್ಸಿನ ಕಂಟಕ ಕಳೆಯುವುದು ಎಂಬ ಗುರುಗಳ ಮಾತಿನಂತೆ ವ್ಯಾಪಾರೀ ಕೇಶವಗುಪ್ತ, ಆತನ ಮಡದಿ ಹಾಗು ಮಗ ಈ ಮೂವರಿಗೂ ಭಿನ್ನವಾದ ಅನುಭವ ಬಂದು ಮಧುಮಾಲತಿಯನ್ನು ರಕ್ಷಿಸಿದ್ದು ತಿಳಿದು ಆತನೇ ಸರಿಯಾದ ಜೋಡಿ ಎಂದು ಮೂವರು ನಿರ್ಧರಿಸುತ್ತಾರೆ. ಆದರೆ ಅವರಿಗೆ ತಿಳಿಯದ ವಿಷಯ ಎಂದರೆ ಆ ಮೂವರು ಗುಣಾತ್ಮರು ಒಂದೇ ಗುರುವಿನ ಬಳಿ ಶಿಕ್ಷಣ ಪಡೆದ ಜೀವದ ಗೆಳೆಯರು ಎಂದು. 

ಒಬ್ಬ ಜ್ಯೋತಿಶ್ಶಾಸ್ತ್ರದಲ್ಲಿ ನಿಪುಣ 

ಒಬ್ಬ ವೀರ ಪರಾಕ್ರಮಿ   

ಇನ್ನೊಬ್ಬ ಅಥರ್ವ ವಿದ್ಯೆ ಅಂದರೆ ಮಾಯಾಜಾಲದಲ್ಲಿ ನಿಷ್ಣಾತ. 

ಮಧುಮಾಲತಿಯನ್ನು ಮಂತ್ರವಾದಿಯಿಂದ ರಕ್ಷಿಸುವ ಘಟನೆಯಲ್ಲಿ ಜ್ಯೋತಿಷಿ ತಂದೆಯಂತೆ ಕಾಪಾಡುತ್ತಾನೆ  

ಮಾನಹಾನಿಯಿಂದ ಪರಾಕ್ರಮಿ ರಕ್ಷಣೆ ಮಾಡಿರುತ್ತಾನೆ 

ಮಗುನಂತೆ ತನ್ನ ತಾಯಿಯನ್ನು ರಕ್ಷಿಸುವ ಹಾಗೆ ಅಥರ್ವ ವಿದ್ಯೆ ಕಲಿತವನು ರಕ್ಷಿಸಿರುತ್ತಾನೆ. 

ಒಬ್ಬ ತಂದೆಯಂತೆ, ಒಬ್ಬ ಪತಿಯಂತೆ ಒಬ್ಬ ಮಗನಂತೆ ಕಾಪಾಡಿರುವುದರಿಂದ ಆ ವೀರಪರಾಕ್ರಮಿಯೇ ಕೈ ಹಿಡಿಯಬೇಕು ಎಂದು ತೀರ್ಪು ನೀಡುತ್ತಾರೆ ವಿರ್ಕ್ರಮಾದಿತ್ಯ ಮಹಾರಾಜ. 

ಒಬ್ಬರಿಗಿಂತ ಒಬ್ಬರು ಪೈಪೋಟಿ ನೀಡಿ ಅಭಿನಯಿಸಿರುವ ಚಿತ್ರವಿದು. 

ಜ್ಯೋತಿಷಿಯಾಗಿ ಅರುಣ್ ಕುಮಾರ್.. ಮುದ್ದಾದ ರೂಪು, ಭಾಷ ಸ್ಪಷ್ಟತೆ, ಅಭಿನಯ 


ವೀರಪರಾಕ್ರಮಿಯಾಗಿ ದಕ್ಷ ಅಭಿನಯ, ಹೋರಾಟಗಳಲ್ಲಿ ಅದ್ಭುತ ಚಾಣಾಕ್ಷತೆಯಿಂದ ಮಿಂಚುವ ರಾಜಕುಮಾರ್ 



ಅಂಗೀಕಾ ಅಭಿನಯಕ್ಕೆ ಸದಾ ಹೆಸರಾಗಿರುವ ಉದಯಕುಮಾರ್ ಇಲ್ಲಿಯೂ ಕೂಡ ಸಂಭಾಷಣೆ ಮತ್ತು ಮುಖಭಾವದಿಂದ ಮಿಂಚುತ್ತಾರೆ. 


ವ್ಯಾಪಾರಿ ಕೇಶವ ಗುಪ್ತನಾಗಿ ಅಶ್ವಥ್ ಅವರದ್ದು ಸೊಗಸಾದ ಅಭಿನಯ. ಮಗಳ ಭವಿಷ್ಯ, ಮಗಳ ಬದುಕು, ಆ ತಳಮಳ, ಹೇಗಾದರೂ ಸರಿ ಮಗಳ ಭವಿಷ್ಯ ಮುಖ್ಯ ಎಂದು ಹಪಹಪಿಸುವ ತಂದೆಯ ಪಾತ್ರದಲ್ಲಿ  ಸೊಗಸಾದ ಅಭಿನಯ. 


ಅಶ್ವಥ್ ಅವರಿಗೆ ತಕ್ಕಂತೆ ತಾಯಿಯಾಗಿ ಜಯಶ್ರೀ ಅಭಿನಯ ಕಳೆಕಟ್ಟುತ್ತದೆ 


ಮಧುಮಾಲತಿಯ ಅಣ್ಣನಾಗಿ ರಂಗ ಉತ್ತಮ ಪಾತ್ರಪೋಷಣೆಯಿಂದ ಇಷ್ಟವಾಗುತ್ತಾರೆ. 


ಮಂತ್ರವಾದಿಯಾಗಿ ಎಂ ಪಿ ಶಂಕರ್ ಅಬ್ಬರಿಸುತ್ತಾರೆ. ಆ ಗಹಗಹಿಸುವ ನಗು, ಕ್ರೂರತೆ, ತಾನು ಆಳಿದರು ತನ್ನ ಕಾರ್ಯ ಸಾಧನೆ ನಿಲ್ಲಬಾರದು ಎಂದು ಹೋರಾಡುವ ಅವರ ಪಾತ್ರ ಚಿತ್ರದುದ್ದಕ್ಕೂ ಸೊಗಸಾಗಿ ಮೂಡಿಬಂದಿದೆ. 


ಮಂತ್ರವಾದಿಯ ಜೀ ಹೂಜೂರ್ ಪಾತ್ರಧಾರಿ ಪ್ರಚಂಡನಾಗಿ ಕುಪ್ಪುಸ್ವಾಮಿ ಕಡೆಯ ದೃಶ್ಯದ ತನಕ ಕಾಡುತ್ತಾರೆ. 


ರಾಜಕುಮಾರಿಯೆಂದರೆ ಹೀಗೆ ಇರಬೇಕು ಎನ್ನುವ ಹಾಗೆ ಅಭಿನಯ ನೀಡಿರುವ ಭಾರತಿ ಈ ಚಿತ್ರದಲ್ಲಿ ಮೊದಲ ಬಾರಿಗೆ ರಾಜಕುಮಾರ್ ಅವರಿಗೆ ನಾಯಕಿಯಾಗಿದ್ದಾರೆ. 


ಎಲ್ಲರಿಗೂ ಆವಕಾಶವಿರುವಂತೆ ಚಿತ್ರಕತೆ ಹೆಣೆದು ನಿರ್ದೇಶಿಸಿರುವ ಈ ಚಿತ್ರದ ಹೆಚ್ಚುಗಾರಿಕೆ ಇದೆ. ಪ್ರತಿ ಪಾತ್ರವೂ ಹೆಚ್ಚು ಇಲ್ಲ ಕಡಿಮೆಯೂ ಇಲ್ಲ. ಮೂವರು ಮಿತ್ರರಿಗೂ ಅಭಿನಯಕ್ಕೆ ಸಮಾನ ಅವಕಾಶ. ಮೂವರು ಮುದ್ದಾಗಿ ಕಾಣುತ್ತಾರೆ. ಸಂಭಾಷಣೆ ಹೇಳುವ ವೈಖರಿ, ಆಂಗೀಕ ಅಭಿನಯ, ಹಾಡುಗಳಲ್ಲಿ ತೋರುವ ತನ್ಮಯತೆ ಎಲ್ಲೂ ಹೆಚ್ಚಿಲ್ಲ ಕಡಿಮೆ ಇಲ್ಲ. 

ರಾಜಕುಮಾರ್ ಅವರು ಈ ಚಿತ್ರದ ಹೊತ್ತಿಗೆ ಎಪ್ಪತ್ತನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಕೂಡ ತಮ್ಮ ಪಾತ್ರದ ಅಳತೆಯನ್ನು ಅರಿತು ಸಹ ಕಲಾವಿದರ ಜೊತೆಯಲ್ಲಿ ಮನೋಜ್ಞ ಅಭಿನಯ ನೀಡಿರುವುದು ಅವರ ವೃತ್ತಿಪರತೆಯನ್ನು ತೋರಿಸುತ್ತದೆ. 

ಎಲ್ಲರಂತೆಯೇ ನಾನು ಎನ್ನುವ ಮನೋಭಾವ ಅವರ ಎಲ್ಲಾ ಚಿತ್ರಗಳಲ್ಲಿಯೂ ಕಂಡು ಬರುತ್ತದೆ.. ಈ ಚಿತ್ರ ಕೂಡ ಅದಕ್ಕೆ ಹೊರತಲ್ಲ.  ಸಹನಾಯಕರ ಜೊತೆಗಿನ ಹೊಂದಾಣಿಕೆಯ ಅಭಿನಯ, ಅವರ ಜೊತೆ ಪೈಪೋಟಿಯಂತೆ ನಟನೆ... ಇದೆಲ್ಲದರ ಜೊತೆ ಮುದ್ದಾಗಿ ಕಾಣುವ ಅವರ ವೇಷಭೂಷಣ. ಅದಕ್ಕೆ ತಕ್ಕ ಗಾಂಭೀರ್ಯ.. ರಾಜಕುಮಾರ್ ಒಬ್ಬ ನಟರಲ್ಲ ಬದಲಿಗೆ ಮೆಲ್ಲನೆ ತಯಾರಾಗುತ್ತಿರುವ ಒಂದು ಅಭಿನಯದ ವಿಶ್ವಕೋಶ ಎಂದು ಸಾರಿ ಸಾರಿ ಹೇಳುತ್ತದೆ. 

Sunday, August 3, 2025

ಸಮಸ್ಯೆಗಳಿಗೆ ಕಿಲಾಡಿತನದ ಪರಿಹಾರ ತೋರಿಸುವ ಕಿಲಾಡಿರಂಗ 1966 (ಅಣ್ಣಾವ್ರ ಚಿತ್ರ ೭೪/೨೦೭)

 ಬಿ ಎಸ್ ರಂಗ ಅವರು ವಸಂತ್ ಪಿಚ್ಚರ್ ಲಾಂಛನದಲ್ಲಿ ನಿರ್ಮಿಸಿದ ಈ ಚಿತ್ರವನ್ನು ಚಿತ್ರರಂಗದ ಆರಂಭದ ದಿನಗಳಿಂದಲೂ ಒಂದಲ್ಲ ಒಂದು ರೀತಿ ತೊಡಗಿಸಿಕೊಂಡಿದ್ದ ಜಿ ವಿ ಅಯ್ಯರ್ ಅವರು. 

ಈ ಚಿತ್ರ Anthony Hope ಅವರ ಇಂಗ್ಲಿಷ್ ಕಾದಂಬರಿ The Prisoner of Zendaಯಿಂದ ಪ್ರೇರೇಪಿತ ಅಂತ ವಿಕಿಪೀಡಿಯ ಹೇಳುತ್ತದೆ. ಯು ಟ್ಯೂಬಿನಲ್ಲಿ ಸಿಗದೇ ಸಿಡಿ ಸಿಕ್ಕಿರದೆ ಸ್ವಲ್ಪ ತಡವಾಯಿತು.. ಆದರೆ ಕಳೆದ ತಿಂಗಳು ಯು ಟ್ಯೂಬಿನಲ್ಲಿ ಸಿಕ್ಕ ಕಾರಣ.. ಜೊತೆಯಲ್ಲಿ ಸುಮಾರು ದೃಶ್ಯಗಳು ಜಂಪ್ ಆಗಿರುವ ಕಾರಣ ಚಿತ್ರ ಶೀರ್ಷಿಕೆ ಸರಿಯಾಗಿ ಸಿಗಲಿಲ್ಲ. ಆದ್ದರಿಂದ ಈ ಚಿತ್ರಕತೆಗೆ ಕಾದಂಬರಿ ಆಧಾರಿತವಾಗಿದೆ ಎನ್ನುವ ವಿಷಯ ಗೊತ್ತಾಗಲಿಲ್ಲ. 



ಇರಲಿ ಜಗತ್ತಿನ ಕತೆಗಳು ಒಂದಲ್ಲ ಒಂದು ರೀತಿ ಹಲವಾರು ಕಡೆಯಿಂದ ಪ್ರೇರೇಪಿತವಾಗಿರೋದು ಸಹಜ..   ಜಿ ವಿ ಅಯ್ಯರ್, ಸದಾಶಿವ ಬ್ರಹ್ಮ ಮತ್ತು ಚಿ ಸದಾಶಿವಯ್ಯನವರ ಚಿತ್ರಕಥೆ ಹೊತ್ತು ಚಿತ್ರನಾಟಕ, ಸಂಭಾಷಣೆ ಮತ್ತು ನಿರ್ದೇಶನ ಹೊಣೆ ಹೊತ್ತವರು ಜಿ ವಿ ಅಯ್ಯರ್. 

ಜಿ ಕೆ ವೆಂಕಟೇಶ್ ಅವರ ಸಂಗೀತ, ಪಿಬಿ ಶ್ರೀನಿವಾಸ್, ಎಸ್ ಜಾನಕೀ, ಪೀಠಾಪುರಂ ನಾಗೇಶ್ವರ ರಾವ್, ಎಲ್ ಆರ್ ಈಶ್ವರಿ ಅವರ ಗಾಯನ.. ಬಿ ಎನ್ ಹರಿದಾಸ್ ಅವರ ಛಾಯಾಗ್ರಹ ಈ ಚಿತ್ರಕ್ಕಿದೆ. 

ರಾಜಕುಮಾರ್ ಅವರದ್ದು ದ್ವಿಪಾತ್ರ.. ಒಂದು ಪಾತ್ರ ರಾಜಕುವರನದ್ದು ಇನ್ನೊಂದು ಸಾಮಾನ್ಯ ಪ್ರಜೆ ಆದರೆ ಕಳ್ಳನ ಪಾತ್ರಧಾರಿ. ಅಧಿಕಾರ ದಾಹ ಹೆಚ್ಚಾದಾಗ ಅಪ್ಪ ಅಮ್ಮ ತಮ್ಮ ಬಂಧು ಬಳಗ ಯಾವುದು ಲೆಕ್ಕಕ್ಕೆ ಇರೋದಿಲ್ಲ. ಇದು ಸತ್ಯ ಎನ್ನುವ ಮಾತು ಈ ಚಿತ್ರದ ತಳಹದಿ. 

ರೋಗಪೀಡಿತ ರಾಜ ತನ್ನ ಮುಂದಿನ ಉತ್ತರಾಧಿಕಾರಿಯನ್ನಾಗಿ ತನ್ನ ಹಿರಿಯ ಹೆಂಡತಿಯ ಮಗ ಸಂಜಯನೇ ( ರಾಜಕುಮಾರ್)   ಆಗಬೇಕು ಎಂದು ರಾಜಾಜ್ಞೆ ಬರೆದಿರುತ್ತಾನೆ. ಆತನ ಕಿರಿಯ ರಾಣಿಯ ಮಗ ದುರ್ಜಯ (ಎಂ ಪಿ   ಶಂಕರ್) ಆತನೇ ಹಿರಿಯನಾಗಿದ್ದರೂ ಅಧಿಕಾರದ ಲಾಲಸೆ, ಪ್ರಜಾಪೀಡಕನಾಗಿದ್ದರಿಂದ ಆತ ರಾಜನಾಗಬಾರದು ಎಂದು ಈ ರೀತಿ ಮಾಡಿರುತ್ತಾನೆ. 

ಆದರೆ ಸಂಜಯನಿಗೆ ಅಧಿಕಾರ ಆಸೆಯಿರೋಲ್ಲ ಜೊತೆಯಲ್ಲಿ ತನ್ನ ಅಣ್ಣ ಅಧಿಕಾರಕ್ಕಾಗಿ ತನ್ನ ಅಪ್ಪ ಅಮ್ಮನನ್ನು ಮತ್ತೆ ತನ್ನನ್ನು ಪೀಡಿಸುತ್ತಾ ಇರೋದರಿಂದ.. ಅಧಿಕಾರದ ಆಸೆ ಬಿಟ್ಟು.. ಮದಿರೆಯಲ್ಲಿ ಆ ದುಃಖವನ್ನು ಮರೆಯಲು ಪ್ರಯತ್ನ ಮಾಡುತ್ತಿರುತ್ತಾನೆ.. 

ಅರಮನೆಗೆ ಅಚಾನಕಕ್ಕಾಗಿ ಬರುವ ಕಳ್ಳನ ಪಾತ್ರಧಾರಿಯ ಹೆಸರು ರಂಗ (ರಾಜಕುಮಾರ್ ಎರಡನೇ ಪಾತ್ರ) ನಿಗೆ ಸಂಜಯನನ್ನ ಮುಗಿಸಿ, ತಾನೇ ರಾಜನಾಗುವ ಷಡ್ಯಂತ್ರ ಮಾಡುವ ವಿಚಾರ ತಿಳಿದು.. ಸಂಜಯನನ್ನು ಈ ಷಡ್ಯಂತ್ರದಿಂದ ಕಾಪಾಡುವ ಪಣ ತೊಡುತ್ತಾನೆ.. ಅದೇ ಚಿತ್ರದ ಆಶಯ ಮತ್ತು ವಿಷಯವಾಗುತ್ತದೆ. 

ಈ ಹಾದಿಯಲ್ಲಿ ಮಂತ್ರಿ ತನ್ನ ಪ್ರಾಣವನ್ನು ಪಣವಾಗಿಟ್ಟು ಸಂಜಯನನ್ನು ರಕ್ಷಿಸುತ್ತಾರೆ.. ಸಂಜಯ ವೇಷಮರೆಸಿಕೊಂಡು ಹಳ್ಳಿಯಲ್ಲಿ ಸಾಮಾನ್ಯನಾಗಿ ವಾಸಿಸಲು ಶುರು ಮಾಡುತ್ತಾರೆ. 

ಇತ್ತ ವೇಷಧಾರಿ ರಂಗ .. ದುರ್ಜಯನ ಮಾತನ್ನು ಕೇಳುತ್ತಿದ್ದೇನೆ ಎಂದು ನಂಬಿಸುತ್ತಲೇ ದುರ್ಜನನ್ನು ಹಣಿಯಲು ಉಪಾಯ ಮಾಡುತ್ತಾನೆ.. ಕಡೆಯಲ್ಲಿ ರಂಗನ ಕಿಲಾಡಿತನದಿಂದ ಕಿಲಾಡಿರಂಗನಾಗಿ ಸಂಜಯನನ್ನು ಉಳಿಸಿ, ರಕ್ಷಿಸಿ, ರಾಜ್ಯವನ್ನು ರಕ್ಷಣೆ ಮಾಡಿ, ದುರ್ಜಯನ ಮರಣಕ್ಕೆ ಕಾರಣನಾಗುತ್ತಾನೆ. 

ಇದೊಂದು ಸರಳ ಕತೆ.. ಅಷ್ಟೇ ಸರಳವಾಗಿ ಚಿತ್ರಿಸಿದ್ದಾರೆ. ಅನವಶ್ಯಕ ದೃಶ್ಯಗಳಾಗಲಿ, ಹಾಡುಗಳಾಗಲಿ ಇಲ್ಲದೆ ನೇರವಾಗಿ ಕತೆ ಹೇಳುತ್ತಾ ಯಾವುದೇ ವಿಧವಾದ ತಿರುವುಗಳನ್ನು ಕೊಡದೆ.. ಸೀದಾ ಕತೆ ಹೇಳುತ್ತಾ ಅಂತ್ಯದತ್ತ ನೆಡೆಯುವುದು ಈ ಚಿತ್ರದ ವಿಶೇಷ. 

ಎರಡೂ ಪಾತ್ರಗಳಲ್ಲಿ ರಾಜಕುಮಾರ್ ಅವರ ಅಭಿನಯ ವಿಭಿನ್ನವಾಗಿದೆ. ರಾಜನಾಗಿ ಗತ್ತು ಗಾಂಭೀರ್ಯ ತೋರುವ.. ಮಾತುಗಳಲ್ಲಿ ತೂಕವಿಡುತ್ತಾ ಹಾಗೆಯೇ ಹಳ್ಳಿಗನಾಗಿ ನಿಂತಾಗ ಅದೇ ಮುಗ್ಧತೆ ತೋರುವ ಪಾತ್ರ ಒಂದು ಕಡೆ.. ಅದೇ ರಂಗನ ಪಾತ್ರದಲ್ಲಿ ಕಿಲಾಡಿತನ, ಗಟ್ಟಿತನ, ಧೈರ್ಯ, ಚಾಲಾಕಿತನ ಎಲ್ಲವನ್ನೂ ಸೇರಿಸಿಕೊಂಡಿದ್ದಾರೆ.. 

ಜಯಶ್ರೀ ಅಮ್ಮನಾಗಿ ಕೆಲವು ದೃಶ್ಯಗಳಲ್ಲಿ ಬಂದರೂ ತಾಯಿಮಮತೆಯ ತೋರುವ ದೃಶ್ಯಗಳಲ್ಲಿ ರಾಜಕುಮಾರ್ ಅವರ ಜೊತೆಯಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ 

ಚಿತ್ರದ ಮಧ್ಯದಲ್ಲಿಯೇ ಮರಣ ಹೊಂದುವ ಮಂತ್ರಿಯಾಗಿ ರಾಘವೇಂದ್ರರಾವ್ ಅವರ ಪಾತ್ರ ಪೋಷಣೆ ಚೆನ್ನಾಗಿದೆ. 

ಎಂ ಪಿ ಶಂಕರ್ ಖಳನಾಗಿ. ಅವರ ಪಾತ್ರಾಭಿನಯ ಸೊಗಸಾಗಿದೆ 

ಉಳಿದಂತೆ ನರಸಿಂಹರಾಜು, ಜಯಂತಿ, ಬಿವಿ ರಾಧಾ, ಬೆಂಗಳೂರು ನಾಗೇಶ್, ದಿನೇಶ್ ಪಾತ್ರಗಳು ಚಿತ್ರದ ವೇಗಕ್ಕೆ ಅನುಕೂಲವಾಗಿವೆ. 

ಇದೊಂದು ಸರಳ ಸಾಮಾಜಿಕ ಚಿತ್ರ...